ಗುರುವಾರ, ಏಪ್ರಿಲ್ 25, 2019

ಕಡಲು ನೋಡಲು ಹೋದವಳು ಕಥೆ ಕೇಳಿಸಿಕೊಂಡು ಬಂದೆ.

ಪ್ರತಿ ಬಾರಿ ಕಡಲಿಗೆ ಮುಖಾಮುಖಿಯಾದಾಗೆಲ್ಲಾ, ಈ ಕಡಲು ಮತ್ತು ನಾನು ಯಾವುದೋ‌ ಜನ್ಮದಲ್ಲಿ ದಾಯಾದಿಗಳಾಗಿದ್ದಿರಬಹುದು, ಅದಕ್ಕೇ ಈಗ ನನ್ನ ಮೆದುಳಿನ ಯಾವುದೋ ಒಂದು ಕೋಶದಲ್ಲಿ ಅಡಗಿರುವ ಅಷ್ಟೂ ವಿಷಾದಗಳನ್ನು ಕಡಲಿಗೆ, ಮೊರೆವ ಅಲೆಗಳಿಗೆ ಕೇಳಿಸಬೇಕು ಅನ್ನುವ ಹುಕಿ ಆಗಾಗ ನನ್ನೊಳಗೆ ಹುಟ್ಟಿಕೊಳ್ಳುವುದು ಅಂತ ನನಗೆ ಅನ್ನಿಸುತ್ತದೆ. ‌ಮರುಕ್ಷಣ ಹೀಗೆ ಕಡಲಿನೊಂದಿಗೆ ಖುಶಿಯನ್ನೂ, ನಲಿವನ್ನೂ, ಸಂಕಟವನ್ನೂ, ಕೆಲವು ವಿಯೋಗಗಳನ್ನೂ ಹಂಚಿಕೊಳ್ಳುವವರು ಎಷ್ಟು ಮಂದಿ ಇರಬಹುದು? ಅವರೆಲ್ಲರೂ ಯಾವುದೋ ಜನ್ಮದಲ್ಲಿ ದಾಯಾದಿಗಳಾಗಿದ್ದರೆ, ನಿಜಾರ್ಥದಲ್ಲಿ ಕಡಲು ದೊಡ್ಡ ಕುಟುಂಬಸ್ಥನೇ ಇರಬೇಕು ಅನ್ನಿಸಿ ನಗು ಬರುತ್ತದೆ.

ಕಡಲು ನಾನು ಮಾತಾಡುವುದನ್ನು ಕೇಳಿಸಿಕೊಳ್ಳುತ್ತದೋ ಬಿಡುತ್ತದೋ, ಅದು ಪಾಠ ಕಲಿಸುತ್ತದೋ ಇಲ್ಲವೋ, ಆದರೆ ಕಡಲಿನಲ್ಲೊಂದು ಹಿತವಾದ ಮೌನ ಇದ್ದೇ ಇದೆ. ಅದು ಸುಮ್ಮನೆ ಕೇಳಿಸದು, ಶಬ್ಧಗಳ ಸಂತಯೊಳಗೆ ಕಳೆದುಹೋಗದ ಮನಸ್ಸನ್ನಿಟ್ಟುಕೊಂಡು ಕಡಲ ಮೌನವನ್ನು ಆಲಿಸದರೆ ಮಾತ್ರ ಕೇಳಿಸಬಲ್ಲುದು. ಕಡಲಷ್ಟೇ ಅಲ್ಲ, ಅದರ ತೀರ, ರಸ್ತೆಗೂಡುವಲ್ಲಿ ಪುಟ್ಟದಾಗಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು, ಅವರ ಮಾತು, ಕಥೆ , ಬದುಕೂ ಒಂದು ಅಚ್ಚರಿಯೇ. ಹಾಗೆ ನೋಡುವುದಾದರೆ ದಡದ ಒಂದೊಂದು ಮರಳಿನ ಕಣಗಳೂ ಹೊಸ ಹೊಸ ಕಥೆಗಳನ್ನು ಹೇಳುತ್ತವೆಯೇನೋ ಅನಿಸುತ್ತದೆ.

ಹೀಗೆ ಕಡಲ ತಡಿಯ ಅಚ್ಚರಿಯನ್ನು ಬೆಚ್ಚಗೆ ಮಡಿಲಲ್ಲಿ ಕೂರಿಸಿ ಮೈದಡವಿದರೆ, ಟೀ, ಕಾಫಿ, ಸ್ವೀಟ್ ಕಾರ್ನ್, ಚರುಮುರಿಗಳ ಪುಟ್ಟ ಸ್ಟಾಲ್ ಇಟ್ಟುಕೊಂಡಿರುವ ಇಳಿವಯಸ್ಸಿನ ದಂಪತಿ ಕಣ್ಣಿಗೆ ಬೀಳುತ್ತಾರೆ. ಎಂಥಾ ಜೀವನೋತ್ಸಾಹ ಅವರದ್ದು! ಸದಾ ಬ್ಯುಸಿಯಾಗಿರುವ, ಅಷ್ಟು ಬ್ಯುಸಿಯ ಮಧ್ಯೆಯೂ ಯಾರ ಮೇಲೂ ಸಿಡುಕದ, ಎಲ್ಲವನ್ನೂ ನಗುತ್ತಲೇ ಸಂಭಾಳಿಸುವ ಅವರನ್ನು ನೋಡುವುದೇ ಒಂದು ಹಬ್ಬ. ಕಣ್ಣ ಮೇಲೊಂದು ಕನ್ನಡಕ, ಕಾಸಗಲದ ಕುಂಕುಮ, ಕಿವಿಯ ಪಕ್ಕದಲ್ಲಿ ಸ್ವಲ್ಪವೇ ಸ್ವಲ್ಪ ಹಚ್ಚಿಕೊಂಡ ಪ್ರಸಾದ, ಮುಕ್ಕಾಗದ ಹತ್ತಿ ಸೀರೆ, ಮುಖದ ಪೂರ್ತಿ ನಗು... ಇವು ಆ ಅಜ್ಜಿಯ ಅಲಂಕಾರವಾದರೆ ತಿಳಿ ಬಣ್ಣದ ಅಂಗಿ, ಒಂದು ಪಂಚೆ ಮತ್ತು ಆಗಾಗ ಕೈ ಒರೆಸಿಕೊಳ್ಳಲು ಹೆಗಲ ಮೇಲೆ ಒಂದು ಶುಭ್ರ  ಬೈರಾಸು... ಇಷ್ಟು ಅಜ್ಜನ ವೇಷ ಭೂಷಣ. ನೀವೆಂದಾದರೂ ನಮ್ಮೂರಿನ ಬೀಚ್ ಗೆ ಬಂದರೆ ಇಡೀ ಕಡಲಿನ ಸೌಂದರ್ಯಕ್ಕೆ ಪುಟವಿಟ್ಟಂತೆ ಕಾಣುವ ಇವರನ್ನು ಭೇಟಿಯಾಗದೆ ವಾಪಾಸಾಗಬಾರದು.

ಅವರು ತಯಾರಿಸುವ ಮಸಾಲೆ ಟೀಯಂತೂ ಅದ್ಭುತ. ಒಮ್ಮೆ ಕುಡಿದರೆ ಮತ್ತೆ ಮತ್ತೆ ಕುಡಿಯಬೇಕೆನ್ನುವ ತಪನೆ ಹುಟ್ಟುಹಾಕುತ್ತದದು. ಆದರೆ ಈ ವಯಸ್ಸಿನಲ್ಲಿ ಯಾವ ಅನಿವಾರ್ಯತೆ ಅವರನ್ನು ಹೀಗೆ ದುಡಿಯಲು ಪ್ರೇರೇಪಿಸುತ್ತಿದೆ ಅಂತ ಹಲವು ಬಾರಿ ನಾನು ಯೋಚಿಸಿದ್ದಿದೆ. ಕೆಲವೊಮ್ಮೆ ಟೀ ಕುಡಿಯುವ ನೆಪದಲ್ಲಿ ಎಲ್ಲಾ ಕೇಳಿಬಿಡಬೇಕು ಅಂದುಕೊಂಡದ್ದೂ ಇದೆ. ಆದರೆ ಅಲ್ಲಿರುವ ಜನಜಂಗುಳಿ, ವ್ಯಾಪಾರದ ಭರಾಟೆ, ಅವರಿಬ್ಬರ ಕಾರ್ಯತತ್ಪರತೆ ನೋಡಿ ಏನೂ ಕೇಳಲಾಗದೆ ಹಿಂದಿರುತ್ತೇನೆ. ಮೇಲಾಗಿ ನನ್ನ ಅನುಮಾನಗಳಿಗೆಲ್ಲಾ ಅವರು ಉತ್ತರಿಸುತ್ತಾರೆ ಎನ್ನುವ ಯಾವ ನಂಬಿಕೆಯೂ ನನಗಿರಲಿಲ್ಲ‌. ಹಿಂದೊಮ್ಮೆ ಹೀಗೆ ಯಾರನ್ನೋ ಅವರ ಬದುಕಿನ ಬಗ್ಗೆ ಕೇಳಿ ಬಯ್ಯಿಸಿಕೊಂಡ ಅನುಭವವೂ ಇತ್ತು. ಹಾಗಾಗಿ ಯಾವ ಉಸಾಬರಿಯೂ ಬೇಡವೆಂದು ಸುಮ್ಮನಾಗುತ್ತಿದ್ದೆ. 

ಆದರೆ ಪ್ರತಿ ಬಾರಿ ಅವರನ್ನು ನೋಡಿದಾಗೆಲ್ಲಾ ನನ್ನ ಮೆದುಳು ಪ್ರಶ್ನೆಗಳ ಗೀಜುಗದ ಗೂಡಾಗಿಬಿಡುತ್ತಿತ್ತು. ಎಷ್ಟು ಬಿಡಿಸಲೆತ್ನಿಸಿದ್ದರೂ ಬಿಡಿಸಿಕೊಳ್ಳುತ್ತಿರಲಿಲ್ಲ. ಮುಪ್ಪಿನಲ್ಲೂ ಯಾರ ಮುಂದೆಯೂ ಕೈಯೊಡ್ಡಲಾರೆ ಅನ್ನುವ ಸ್ವಾಭಿಮಾನ ಅವರನ್ನು ಈ ವಯಸ್ಸಿನಲ್ಲೂ ದುಡಿಸುತ್ತಿದೆಯಾ? ಅಥವಾ ಎಲ್ಲಾ ಮುಗಿದ ಮೇಲೆ ಮಕ್ಕಳು ಅವರಿಬ್ಬರನ್ನೂ ಮನೆಯಿಂದ ಹೊರಹಾಕಿದ್ದಾರೋ? ರಸ್ತೆಗೆಂದೋ, ರೈಲ್ವೇ ಟ್ರಾಕಿಗೆಂದೋ ಕಸಿದುಕೊಂಡ ಭೂಮಿ ಅವರನ್ನು ರಸ್ತೆಯಲ್ಲಿ ನಿಲ್ಲಿಸಿತಾ? ಊರಿಂದ, ಕುಟುಂಬದಿಂದ ಬಹಿಷ್ಕೃತರೋ? ಇಡೀ ಬದುಕನ್ನು ವಿಲಾಸದಿಂದ ಕಳೆದವರು ಈಗ ಕೈ ಖಾಲಿ  ಮಾಡಿಕೊಂಡು ಕಳೆದುಕೊಂಡದ್ದನ್ನೇನಾದರೂ ಹುಡುಕುತ್ತಿದ್ದಾರಾ?  ಅಂದರೆ ಹುಡುಕಾಟ ಎನ್ನುವುದು ಕಳೆದುಕೊಂಡಿರುವುದಕ್ಕಷ್ಟೇ ಅನ್ವಯಿಸುವಂಥದ್ದಾ? ಹೊಸದಾಗಿ ಯಾವುದನ್ನೂ ಹುಡುಕಬಾರದಾ? ಬದುಕಿನ ಸಂಧ್ಯಾಕಾಲದಲ್ಲಿ ಮನಸ್ಸಿಗಿಷ್ಟವಾಗುವ ಹೊಸ ಸಾಹಸವಾ ಇದು?  ಅಥವಾ ಹೀಗೆಲ್ಲಾ ಯೋಚಿಸುತ್ತಿರುವ ನನ್ನ ಯೋಚನಾ ಕ್ರಮವೇ ತಪ್ಪಾ? ಅವರನ್ನು ಕೇಳಬೇಕು, ಮಾತಾಡಿಸಬೇಕು ಅನ್ನುವ ಇಂಗಿತ ತಪ್ಪಾ? ಊಹೂಂ, ಒಂದೂ ಗೊತ್ತಾಗದೆ ತಲೆ ಕೊಡವಿಕೊಳ್ಳುತ್ತೇನೆ. ಮತ್ತು ಹಾಗೆ ಕೊಡವಿಕೊಂಡಾಗೆಲ್ಲಾ ಮತ್ತಷ್ಟು ಪ್ರಶ್ನೆಗಳು ಕಾಡುತ್ತವೆ. ನಾನು, ಬದುಕು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸುತ್ತಾ ಕೂತರೆ, ಬದುಕು ಪ್ರಶ್ನೆಯನ್ನೇ ಬದಲಿಸಿಬಿಡುತ್ತದೆ ಅನ್ನುವ ತತ್ವಾಜ್ಞಾನಕ್ಕೆ ಜೋತು ಬಿದ್ದು ತಾತ್ಕಾಲಿಕ ಸಮಾಧಾನ ಪಟ್ಟುಕೊಳ್ಳುತ್ತೇನೆ.

ಪ್ರಶ್ನೆಗಳಿಗೆ ಉತ್ತರಿಸಲಾಗುವುದಿಲ್ಲ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದಿಲ್ಲ ಎಂದಾದಾಗೆಲ್ಲಾ ತತ್ವಜ್ಞಾನದ ನೆರಳಿನಡಿ ಅಡಿಗಿಕೊಳ್ಳುವ ಮನುಷ್ಯ ಸ್ವಭಾವದ ಮೂಲ ಹುಡುಕುತ್ತಾ ಹೋದರೆ ಭೂತ, ವರ್ತಮಾನಗಳೊಂದಿಗೆ ಭವಿಷ್ಯವೂ ಡೋಲಾಯಮಾನವಾಗಿಬಿಡಬಹುದು. ಇರಲಿ, ಮೊನ್ನೆ ಹೊಂಬಣ್ಣ ತಬ್ಬಿದ ಸಂಜೆಯೊಂದರಲ್ಲಿ, ನಾನೀಗ ಬದುಕುತ್ತಿರುವ ಬದುಕು ನನ್ನದಲ್ಲ ಅಂತ ದಿಢೀರ್ ಜ್ಞಾನೋದಯ ಆದಂತಾಯಿತು. ಹಾಗಿದ್ದರೆ ಈಗ ನಾನು ಬದುಕುತ್ತಿರುವ ಬದುಕು ಯಾರದು? ಇದು ನನ್ನದಲ್ಲದೇ ಹೋಗಿದ್ದರೆ ಇದರ ಅಸಲೀ ಹಕ್ಕುದಾರರು ಯಾರು? ನನ್ನ ಬದುಕನ್ನು ಯಾರು ಬದುಕುತ್ತಿದ್ದಾರೆ? ಹಾಗೆ ಬದುಕುತ್ತಿರುವವರು ಖುಶಿಯಾಗಿದ್ದಾರಾ? ಅಥವಾ ಯಾವುದೋ ಬಿಸಿಲ್ಗುದುರೆಯೊಂದರ ಬೆನ್ನು ಹತ್ತಿ ಅವರದೇ ಬದುಕಿಗಾಗಿ ಅಲೆಯುತ್ತಿದ್ದಾರಾ? ಹೀಗೆಲ್ಲಾ ಬದುಕು ಎಕ್ಸ್ ಛೇಂಜ್ ಆಫರ್ ನಷ್ಟು ಸುಲಭವಾಗಿ ಅದಲುಬದಲಾಗಲು ಸಾಧ್ಯವೇ? ಅಂತೆಲ್ಲಾ ಯೋಚನೆಗೆ ಇಟ್ಟುಕೊಂಡಿತು. ನನ್ನ ಗೊಂದಲಗಳನ್ನೂ, ಅನುಮಾನಗಳನ್ನೂ ಕಡಲಿನ ಅಲೆಗಳಿಗೆ ಕೇಳಿಸಿ ಸಮಾಧಾನ ಪಡೆದುಕೊಳ್ಳಬೇಕೆಂದು ಅನ್ನಿಸಿ ಒಂಟಿಯಾಗಿ ತೀರದ ಕಡೆ ನಡೆದೆ. ನಾಲ್ಕು ಹೆಜ್ಜೆ ಇಟ್ಟರೆ ಕಡಲು, ನಲವತ್ತು ಹೆಜ್ಜೆ ಇಟ್ಟರೆ ಸಾವು... ಹೆಜ್ಜೆಗಳ ಮತ್ತು ಪ್ರಶ್ನೆಗಳ ನಡುವೆ ಜೀಕುವ ಜೋಕಾಲಿ ಬದುಕು. ಕಡಲ ಮರಳು ಮತ್ತು ಟಾರು ರಸ್ತೆ ಸೇರುವ ಸ್ವರ್ಗದ ಬಾಗಿಲಿನಂತಹ ಸ್ಥಳದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿರುವ ದೇವತೆಗಳಂತಹ ಅಜ್ಜ, ಅಜ್ಜಿ. ಅವರ ಮಸಾಲೆ ಟೀಯ ಘಮ ಮೂಗಿಗೆ ಅಡರುತ್ತಿದ್ದಂತೆ ನನ್ನ ಗೊಂದಲಗಳೆಲ್ಲಾ ಮರೆತೇ ಹೋದವು.

ಹೇಗೆ ಮಾತು ಶುರು ಹಚ್ಚಬೇಕೆಂದು ಅರ್ಥವಾಗದೆ ಅವರ ಮುಂದೆ ಎರಡು ಕ್ಷಣ ಸುಮ್ಮನೆ ನಿಂತು "ಮಸಾಲಾ ಟೀ" ಅಂದೆ. ನಗುನಗುತ್ತಲೇ ಟೀ ಕಾಸಿಕೊಟ್ಟರು. ನಾನು‌ ಟೀ ಹೀರುವ ನೆಪದಲ್ಲಿ ಅಲ್ಲೇ ನಿಂತು, "ನೀವು ಇಲ್ಲಿಯವರೇನಾ ಅಜ್ಜಿ?" ತೀರಾ ಸಾಮಾನ್ಯವೆಂಬಂತೆ ಕೇಳಿದೆ. ಅಜ್ಜ ಊಹೂಂ ಎಂದು ತಲೆಯಾಡಿಸಿದರು.

ಆದರೆ ಅಜ್ಜಿ ಮಾತ್ರ ನಿಧಾನವಾಗಿ ತಮ್ಮ ವೃತ್ತಾಂತ ತೆರೆದಿಡಲು‌ ಪ್ರಾರಂಭಿಸಿದರು. ಮಾತಿನ ಮಧ್ಯೆ ಮಧ್ಯೆ ತುಳು ಪದಗಳನ್ನು ಅನಾಯಾಸವಾಗಿ ಬೆರೆಸುತ್ತಿದ್ದ ಅವರ ವಿಶಿಷ್ಟ ಕನ್ನಡಕ್ಕೆ ಮನ ಸೋಲುತ್ತಲೇ, ಕೈಯಲ್ಲಿ ಹಿಡಿದಿದ್ದ ಕಪ್ ಗೆ ಮತ್ತೆ ಮತ್ತೆ ಟೀ ಸುರಿದುಕೊಳ್ಳುತ್ತಾ ನಾನು ಅವರ ಮಾತಿಗೆ ಕಿವಿಯಾದೆ.

ಅವರ ಮಾತಿನಲ್ಲಿ ಕಥೆ ಕೇಳುವುದೇ ಚೆಂದ. ಕಡಲು ನೋಡಲು ಬಂದವಳು ಕಥೆ ಕೇಳುತ್ತಿದ್ದಾಳಲ್ಲಾ ಅನ್ನುವ ಖುಶಿಗೆ ಅಜ್ಜಿ ಮತ್ತಷ್ಟು ಕಳೆಕಳೆಯಾಗಿ "ಇಲ್ಲ ಮಾರೈತಿ, ನಾವು ಈ ಊರಿನವರಲ್ಲ. ಊರಿನವರಲ್ಲ ಅಂದ್ರೆ ಪೂರ್ತಿ ಈ ಊರಿನವರಲ್ಲ ಅಂತಲ್ಲ‌. ಪಾಪ ಮದುವೆ ಆಗಿ ಇಲ್ಲಿಗೆ ಬಂದವಳು ನೀನು, ನಿಂಗೆ ಉಡುಪಿ ಗೊತ್ತಿರ್ಲಿಕ್ಕಿಲ್ಲ, ಕೃಷ್ಣ ಮಠ ಇದ್ಯಲ್ಲಾ ಅದೇ ನಮ್ಮೂರು. ಮೊದ್ಲು ನಾವು ಅಲ್ಲೇ ಇದ್ವಿ. ಇಬ್ಬರು ಗಂಡು ಮಕ್ಕಳು. ಹೊಲ, ತೋಟ ಅಂತ ಬೆಳೆಯುತ್ತಾ ಬೆಳೆದದ್ದನ್ನು ತಿನ್ನುತ್ತಾ ಹಾಯಾಗಿಯೇ ಇದ್ದೆವು‌. ಆಗ ನಮ್ಮ ಜಿಲ್ಲೆಗೆ ಉಡುಪಿ ಅಂತ ಹೆಸರೂ ಇರ್ಲಿಲ್ಲ, ದಕ್ಷಿಣ ಕನ್ನಡ ವಿಭಜನೆ ಆಗಿರ್ಲಿಲ್ಲ. ಉಡುಪಿ ಮಂಗಳೂರು ಒಂದೇ ಆಗಿತ್ತು. ತಕ್ಕ ಮಟ್ಟಿಗೆ ಅನುಕೂಲಸ್ಥರೇ. ಆದ್ರೆ ನಾಲ್ಕು ತಲೆಮಾರಿಗೆ ಆಗುವಷ್ಟೇನೂ ಕೂಡಿಟ್ಟಿರಲಿಲ್ಲ. ಆದ್ರೆ ಉಣ್ಣೋಕೆ, ಉಡೋಕೆ ಏನು ಕಮ್ಮಿ ಇರ್ಲಿಲ್ಲ. ಹೊಲ, ಗದ್ದೆ, ತೋಟ ಜೊತೆಗೆ ಒಂದಿಷ್ಟು ದನ ಕರುಗಳು. ಬದುಕು ಹಾಯಾಗಿತ್ತು.

ಆಗ ನಮ್ಮೂರಲ್ಲಿ ನಾನೇ ಸುಂದರಿ. ಎಷ್ಟು ಮಂದಿ ನನ್ನ ಮದಿಮೆಯಾಗುದಕ್ಕೆ ಸಾಲುಗಟ್ಟಿ ನಿಂತಿದ್ರು ಗೊತ್ತಾ? ನಾನೆಷ್ಟು ವರಗಳನ್ನು ತಿರಸ್ಕರಿಸಿದ್ದೇನೆ ಗೊತ್ತಾ? " ಎಂದು ಸ್ವಲ್ಪ ನಾಚಿಕೆಯಿಂದ ಮತ್ತು ಹೆಚ್ಚೇ ಹೆಮ್ಮೆಯಿಂದ ಅಜ್ಜನತ್ತ ಕಣ್ಣು ಮಿಟುಕಿಸಿ ಮತ್ತೆ ಕಥೆ ಮುಂದುವರಿಸಿದರು‌. "ತರಹೇವಾರಿ ವಧುಪರೀಕ್ಷೆಗಳು ನಡೆಯುತ್ತಿದ್ದ ಕಾಲದಲ್ಲಿ ವರ ಪರೀಕ್ಷೆ ನಡೆಸಿದ ಜಾಣೆ ನಾನು.‌ಒಂದ್ಸಲ ಏನಾಯ್ತು ಗೊತ್ತಾ? ಒಬ್ಬ ಘಟವಾನಿ ಹೆಂಗ್ಸು, ಪಾಪದ ಮಗಳು ಮತ್ತು ಆ ಹೆಂಗ್ಸಿನ ಮಗ ನನ್ನ ವಧುಪರೀಕ್ಷೆಗೆ ಬಂದಿದ್ದರು. ಆ ಹೊತ್ತಿಗಾಗುವಾಗ ನಾನು ನಿರಾಕರಿಸಿದ್ದ ವರಗಳ ಪಟ್ಟಿ ಉದ್ದವಾಗಿಯೇ ಇತ್ತು. ಅಪ್ಪ- ಅಮ್ಮನಿಗೆ ಮಗಳೆಲ್ಲಿ ಮದುವೆಯಾಗದೇ ಉಳಿದುಬಿಡುತ್ತಾಳೇನೋ ಅನ್ನುವ ಭಯ ಒಳಗೊಳಗೇ ಕಾಡಲು ಶುರುವಾಗಿತ್ತು. ನನ್ನದೇ ವಯಸ್ಸಿನ ಸಂಬಂಧಿ ಹೆಣ್ಣು ಮಕ್ಕಳು, ಅಕ್ಕಪಕ್ಕದ ಮನೆಯವರು ಆಗಲೇ ಕಂಕುಳಲ್ಲೊಂದು, ಕೈಯಲ್ಲೊಂದು ಮಗು ಹಿಡಿದು ತಿರುಗುತ್ತಿದ್ದರು. ಅವರಿವರ ಮಾತುಗಳು ಬೇರೆ ಅವರ ಎದೆ ಚುಚ್ಚುತ್ತಿತ್ತು. ಹಾಗಾಗಿ ಅಮ್ಮ, ಈ ಮದುವೆ ನಡೆಯಲೇಬೇಕು, ಏನೂ ಅಪದ್ಧ ಮಾತನಾಡಬಾರದು ಎಂದು ಮೊದಲೇ ತಾಕೀತು ಮಾಡಿದ್ದರು. ಅಮ್ಮನಿಗೆ ಹೆದರಿ ನಾನೂ ಸುಮ್ಮನಿದ್ದೆ. ಕೋಡುಬಳೆ ಕೊಟ್ಟು ತಿನ್ನಲು ಹೇಳುವುದೇನು, ಹತ್ತು ಹೆಜ್ಜೆ ನಡೆಯಿಸಿ ನೋಡುವುದೇನು, ಹಾಡಿಸುವುದೇನು, ಅಡುಗೆಯಲ್ಲಿ ತಪ್ಪುಗಳೆಷ್ಟಿವೆ ಎಂದು ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸುವುದೇನು? ನಾನು ಸಹಿಸುವಷ್ಟು ಸಹಿಸಿಕೊಂಡೆ, ಆದರೆ ಎಲ್ಲಾ ಮುಗಿದು ಹೊರಡಬೇಕು ಅನ್ನುವಷ್ಟರಲ್ಲಿ ನನಗೇನೋ ಉಪಕಾರ ಮಾಡುತ್ತಿದ್ದೇವೆ ಅನ್ನುವ ಧಾಟಿಯಲ್ಲಿ ನಿಮ್ಮ ಮಗಳ ಮೂಗು ಸ್ವಲ್ಪ ಗಿಡ್ಡ, ಇರಲಿ ಪರವಾಗಿಲ್ಲ ನಾವು ಮದುವೆ ಮಾಡಿಸಲು ತಯಾರು, ಆದರೆ ವರಪೂಜೆ ಸಾಂಗವಾಗಿ ನಡೆಯಬೇಕು, ನಮಗೆ ಬರಬೇಕಾದ್ದೆಲ್ಲಾ ಬರಲೇಬೇಕು ಎಂದರು. ಅಷ್ಟು ಹೊತ್ತು ಎಲ್ಲಾ ಸಹಿಸಿಕೊಂಡಿದ್ದ ನಾನು ನಿಮ್ಮ ಮಗನೂ ಬೇಡ, ಈ ಮದುವೆಯೂ ಬೇಡ ಎಂದೆ.

ದುರ್ನಾದ ತೆಗೆದುಕೊಂಡಂತೆ ಅವರು ಎಷ್ಟು ಅಹಂಕಾರದ ಹುಡುಗಿ ಈಕೆ, ನಮಗೇ ಅವಮಾನ ಮಾಡುತ್ತಾಳಲ್ಲಾ, ಇರಲಿ ಇವಳಿಗೆ ಹೇಗೆ ಮದುವೆಯಾಗುತ್ತೆ ಅಂತ ನಾನೂ ನೋಡುತ್ತೇನೆ ಎಂದು ಶಾಪ ಹಾಕುತ್ತಾ, ನಿಟಿಕೆ ಮುರಿಯುತ್ತಾ ಹೊರಟು ಹೋದರು.

ಈ ಸುದ್ದಿ ಊರಿಡೀ ಹಬ್ಬಿತು. ಇನ್ನು ಇವಳಿಗೆ ಮದುವೆ ಆದಂತೆಯೇ ಎಂದು ಊರು, ಕೇರಿ ಮಾತಾಡಿಕೊಳ್ಳತೊಡಗಿತು. ಅಪ್ಪ ಅಮ್ಮನೂ ಕುಸಿದು ಕುಳಿತರು. ನಾನು ಮಾತ್ರ ಏನೂ ನಡೆದೇ ಇಲ್ಲವೆನ್ನುವಷ್ಟು ಆರಾಮವಾಗಿದ್ದೆ. ಆಗ ನೋಡು ನನ್ನ ಬದುಕಲ್ಲಿ ಬಂದದ್ದು ಇವರು. ದೂರದಲ್ಲಿ ನನಗೆ ಅತ್ತೆಯ ಮಗ ಆಗಬೇಕು. ಆದ್ರೆ ಋಣಾನುಬಂಧ ನಮ್ಮನ್ನು ಒಂದುಗೂಡಿಸಿತ್ತು. ಪಾಪದ ಅತ್ತೆ, ಮಗು ಮನಸ್ಸಿನ ಮಾವ ನನ್ನನ್ನು ಸೊಸೆಯಾಗಿ, ಮಗಳಾಗಿ ನೋಡಿಕೊಂಡರು.

ತೋಟದಲ್ಲಿ ಕೆಲಸ ಮಾಡುತ್ತಾ, ಹೊಲ ಉಳುತ್ತಾ, ಹಾಲು ಕರೆಯುತ್ತಾ ಆರಾಮವಾಗಿ ಇದ್ದೆವು. ಈಗ ನೀನು ಚಹಾ ಕುಡಿಯುತ್ತಿ ಅಲ್ವಾ ಹಾಗೆಯೇ ಆಗಲೂ ನನ್ನ ಚಹಾಕ್ಕೆ ತುಂಬಾ ಬೇಡಿಕೆ ಇತ್ತು. ನಮ್ಮ ಮನೆಯಿಂದ ಎರಡು ಮೈಲು ದೂರ ಇದ್ದ ಮಸೀದಿಯ ಗುರುಗಳು ನನ್ನ ಚಹಾಕ್ಕೋಸ್ಕರ ಮನೆಯ ವರೆಗೆ ಬರುತ್ತಿದ್ದರು ಅಂದರೆ ನೀನೇ ಲೆಕ್ಕ ಹಾಕು ನನ್ನ ಚಹಾ ಎಷ್ಟು ಜನಪ್ರಿಯ ಆಗಿದ್ದಿರಬಹುದು ಎಂದು. 

ಆಮೇಲೆ ಮಕ್ಕಳು, ಮರಿ ಅಂತ ಸಂಸಾರ ದೊಡ್ಡದಾಯಿತು. ಮಕ್ಕಳಿಬ್ಬರೂ ಓದಿ , ಮದುವೆಯಾಗಿ ಪಟ್ಟಣ ಸೇರಿದರು. ಅತ್ತೆ, ಮಾವ ತೀರಿಕೊಂಡರು. ನನ್ನ ಅಪ್ಪ ಅಮ್ಮನೂ ತೀರಿಕೊಂಡರು. ಅವರೆಲ್ಲರ ಸಮಾಧಿಯನ್ನು ನಮ್ಮ ಹೊಲದಲ್ಲೇ ಕಟ್ಟಿದ್ದೇವೆ ನಾವು. ನಮಗೂ ವಯಸ್ಸಾಯ್ತು. ಹಾಲು ಕರೆಯುವುದು, ಹೊಲ ಉಳುವುದು ಇವೆಲ್ಲಾ ಕ್ರಮೇಣ ನಿಂತು ಹೋಯಿತು. ಗದ್ದೆ ಕೆಲಸಕ್ಕೆ, ಹಟ್ಟಿ ಕೆಲಸಕ್ಕೆ ಯಾರನ್ನಾದರೂ ನೇಮಿಸೋಣ ಅಂದ್ರೆ ಈ ಕಾಲದಲ್ಲಿ ಸಾಧ್ಯ ಇಲ್ಲ. ಕೊನೆಗೆ ಏನೂ ಮಾಡೋಕೆ ಆಗದೆ ಸಮಾಧಿ ಇರುವ ಜಾಗದ ಹತ್ತಿರ ನಾವು ಸತ್ತಾಗ ನಮ್ಮ ಸಮಾಧಿ ಮಾಡಲೂ ಒಂದಿಷ್ಟು ಜಾಗ ಉಳಿಸಿ ಉಳಿದೆಲ್ಲವನ್ನೂ ಮಾರಿ ನಮಗೆ ಅಂತ ಸ್ವಲ್ಪ ಉಳಿಸಿಕೊಂಡು ಉಳಿದ ದುಡ್ಡನ್ನೆಲ್ಲಾ ಇಬ್ಬರೂ ಮಕ್ಕಳಿಗೆ ಸಮನಾಗಿ ಹಂಚಿ ನಾವು ಈ ಊರಲ್ಲಿ ಬಂದು ನೆಲೆಸಿದೆವು. ಟೀ ಸ್ಟಾಲಿನ ವ್ಯಾಪಾರದಿಂದಾಗಿ ಮೂರು ಹೊತ್ತಿನ ತುತ್ತಿಗೆ ಯಾವ ತಾತ್ವಾರವೂ ಇಲ್ಲ. ಇಂದೋ ನಾಳೆಯೋ ಬಿದ್ದು ಹೋಗುವ ಮರ, ಹೆಚ್ಚಿನದೇನೋ ಬೇಕಾಗಿಲ್ಲ. ಮಕ್ಕಳೂ ವರ್ಷಕ್ಕೆ ಮೂರೋ ನಾಲ್ಕೋ ಬಾರಿ ಬಂದು ನೋಡಿಕೊಂಡು ಹೋಗುತ್ತಾರೆ. ಖಾಯಿಲೆ ಕಸಾಲೆ ಅಂತ ಬಂದರೆ ದುಡ್ಡು ಕಳುಹಿಸುತ್ತಾರೆ" ಎಂದು ಮಾತು ಮುಗಿಸಿದರು, ನಾನು  ಕಪ್ ಮುಂದೊಡ್ಡಿ ಮತ್ತೊಂದಿಷ್ಟು ಟೀ ಸುರುವಿಕೊಂಡೆ.

ನಾನು ಊಹಿಸಿಕೊಂಡದ್ದು ಸರಿಯಾಗಿಯೇ ಇದೆ ಅನ್ನುವ ಹಮ್ಮಿಗೋ ಅಥವಾ ನಿಜಕ್ಕೂ ಅವರ ಮೇಲಿನ ಕಾಳಜಿಗೋ ಗೊತ್ತಿಲ್ಲ, "ರೆಕ್ಕೆ ಬಲಿತ ಮೇಲೆ ಯಾವ ಹಕ್ಕಿಗೂ ಗೂಡು, ತುತ್ತು ನೆನಪಾಗುದಿಲ್ಲ ಅಲ್ವಾ?" ಅಂದೆ. ಅಜ್ಜಿಗೆ ಅದೆಲ್ಲಿತ್ತೋ ಸಿಟ್ಟು, "ಯಾಕೆ ತಾಯಿ ಹೀಗೆ ಮಾತಾಡ್ತಿದ್ಯಾ? ನಮ್ಮ ಮಕ್ಕಳೇನು ನಮ್ಮನ್ನು ದೂರ ಮಾಡಿಲ್ಲ. ಬದುಕಿರುವಷ್ಟು ದಿನ ನಮ್ಮ ಅನ್ನ ನಾವೇ ದುಡಿದು ಉಣ್ಣುವುದರಲ್ಲಿ ತಪ್ಪೇನಿದೆ? ದೇವರು ಯಾವ ಅಗುಳಿನ ಮೇಲೆ ಯಾರ ಹೆಸರು ಬರೆದಿದ್ದಾನೋ ಅದಷ್ಟೇ ದಕ್ಕುತ್ತವೆ, ಉಳಿದದ್ದೆಲ್ಲಾ ಬೆರಳುಗಳೆಡೆಯಿಂದ ಸೋರಿ ಹೋಗಲೇಬೇಕು. ಮಕ್ಕಳ ಬದುಕಿನ ಋಣ ಪೇಟೆಯಲ್ಲಿದೆ, ಆ ಋಣವನ್ನು ಅಲ್ಲೇ ತೀರಿಸಬೇಕು, ತೀರಿಸುತ್ತಿದ್ದಾರೆ. ಎಷ್ಟು ಬಾರಿ ಪೇಟೆಗೆ ಹೋದರೂ ಆ ಜನಜಂಗುಳಿ, ಹಗಲಿಗೂ ರಾತ್ರಿಗೂ ವ್ಯತ್ಯಾಸವೇ ಉಳಿಯದ ಧಾವಂತ, ಅಪರಿಚಿತತೆ ನಮಗೆ ಒಗ್ಗಲೇ ಇಲ್ಲ. ಹಾಗಾಗಿ ನಾವು ಮತ್ತೆ ಮತ್ತೆ ಇದೇ ಮಣ್ಣಿನ ಕಡೆ ಮರಳುತ್ತೇವೆ. ಹಾಗಂತ ಮಕ್ಕಳು ಕೆಲಸ, ಕಾರ್ಯ, ಹೆಂಡತಿ, ಸಂಸಾರ ಎಲ್ಲಾ ಬಿಟ್ಟು ಬಂದು ಇಲ್ಲಿ ಇರೋಕಾಗುತ್ತಾ? ಹಾಗೆ ಇರುತ್ತೇನೆ ಎಂದುಕೊಂಡು ಬಂದರೂ ಈ ಮಣ್ಣು, ಇಲ್ಲಿನ ಬದುಕು ಅವರ ಕೈ ಹಿಡಿಯುತ್ತಾ? ನೋಡೋಕೆ ಓದಿದವರ ತರ ಕಾಣುತ್ತಿಯಾ, ಹೆತ್ತವರಿಂದ ದೂರ ಇರುವ ಎಲ್ಲಾ ಮಕ್ಕಳು ಅವರನ್ನು ತಿರಸ್ಕರಿಸಿ ತಮ್ಮದೇ ಬದುಕು ಕಟ್ಟಿಕೊಂಡಿದ್ದಾರೆ ಅಂತ ಯಾಕೆ ಯೋಚಿಸ್ತೀಯಾ? " ಕೇಳಿದರು.

ಕಪ್ ನಲ್ಲಿದ್ದ ಬಿಸಿ ಚಹಾ ಕೈ ಮೇಲೆ ತುಳುಕಿ ಚರ್ರೆಂದಿತು. ಭೋರ್ಗರೆಯುತ್ತಿದ್ದ ಕಡಲು ಒಮ್ಮೆ ಮೌನವಾದೆಂತೆನಿಸಿತು, ಮರುಕ್ಷಣ ಛಿಲ್ಲೆಂದು ನಕ್ಕಂತಾಯಿತು. ನನ್ನ ಯೋಚನೆಗೆ ನಾಚಿಕೆ ಪಟ್ಟುಕೊಳ್ಳುತ್ತಾ ಕಡಲಿಗೆ ಬೆನ್ನು ತಿರುಗಿಸಿ ಮನೆಯ ದಾರಿ ಹಿಡಿದೆ, ಬೆನ್ನ ಹಿಂದೆ ಉಳಿದ ಹೆಜ್ಜೆಗಳನ್ನೂ, ಸಣ್ಣ ಯೋಚನೆಗಳನ್ನೂ ಕಡಲೀಗ ಅಳಿಸಿರಬಹುದು...

('ಕೆಂಡಸಂಪಿಗೆ'ಯ ಪಾಕ್ಷಿಕ ಅಂಕಣಕ್ಕೆ ಬರೆದ ಲೇಖನ)

ಪ್ರೀತಿ, ಮದುವೆ ಮತ್ತು ಜೀನ್ಸ್ ಪ್ಯಾಂಟ್ ಅಕ್ಕನ ಬದುಕು.

ಆಕೆ ನನಗಿಂತ ಹತ್ತೋ ಹನ್ನೆರಡೋ ವರ್ಷಗಳಿಗೆ ದೊಡ್ಡವರು. ಕುರ್ತಾ, ನೀಲಿ ಜೀನ್ಸ್, ಮುಖ ತುಂಬಾ ತುಂಟ ನಗು, ಎಕ್ಸ್ಪ್ರೆಸಿವ್ ಕಣ್ಣುಗಳು, ಬಗಲಲ್ಲೊಂದು ಕಪ್ಪು ಬ್ಯಾಗ್... ಅವರ ಪ್ರತಿದಿನದ ವೇಷ. ಆ ಬ್ಯಾಗೊಳಗೆ ಏನೆಲ್ಲಾ ಇರಬಹುದು ಅನ್ನುವ ಕೆಟ್ಟ ಕುತೂಹಲ ನನಗೆ.  ಆ ಬಗ್ಗೆ ಕೇಳಿದಾಗೆಲ್ಲಾ ಅವರು ವೈದೇಹಿಯವರ 'ನೋಡಬಾರದು ಚೀಲದೊಳಗನು' ಪದ್ಯವನ್ನು ರಾಗವಾಗಿ ಹಾಡುತ್ತಾರೆ. ನಾನು ಗಪ್ ಚುಪ್. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಊರೂರು ತಿರುಗುವ ಅವರ ಸ್ವಂತ ಊರು ಯಾವುದು? ಗೊತ್ತಿಲ್ಲ, ಈ ಬಗ್ಗೆ ಇನ್ನೂ ಕೇಳೇ ಇಲ್ಲ.

'ಹತ್ತು ಮಾರು ದೂರದಲ್ಲಿ ಹಾಜರಿ ಹಾಕಿ ಹೋಗುವ ಮೊನೋಪಾಸ್, ಒಂದೊಂದಾಗಿ ಬಿಳಿಯಾಗುತ್ತಿರುವ ಬೈತಲೆಯ ಎಡಭಾಗದ ಕೂದಲುಗಳು, ಆಗೊಮ್ಮೆ ಈಗೊಮ್ಮೆ ಕಾಡಿ ಹೋಗುವ ಮಂಡಿನೋವು, ಪರ್ಮನೆಂಟ್ ನೆಂಟ ಬಿ‌.ಪಿ.... ಯಾಕೋ ಇವೆಲ್ಲಾ ಸೇರಿ ಈ ಜೀನ್ಸ್, ಬಾಬ್ ಕಟ್, ನಿಮಗೆ ಸರಿಯಾಗಿ ಹೊಂದುತ್ತಿಲ್ಲ. ಯಾಕೆ ನೀವು ಸೀರೆ, ಸಲ್ವಾರ್ ತೊಡಬಾರದು? ಹೆಚ್ಚು ಪ್ರಯಾಣ ಮಾಡ್ಬೇಡಿ, ಎಣ್ಣೆ ತುಪ್ಪ ಸೇವನೆ ಕಡಿಮೆ ಮಾಡಿ, ಉಪ್ಪು ಸಕ್ಕರೆ ಹಿತಮಿತವಾಗಿರಲಿ 'ಅಂತ ನಾನು ಆಗಾಗ ಅವರಿಗೆ ಉಚಿತ ಸಲಹೆ ಕೊಡುತ್ತಿರುತ್ತೇನೆ. ಆಗೆಲ್ಲಾ ಅವರು ನನ್ನನ್ನು ಕೆಕ್ಕರಿಸಿ ನೋಡಿ, ತಲೆಗೆರಡು ಮೊಟಕಿ " ಈಗ್ಲೇ ನನ್ನ ಮುದುಕಿ ಮಾಡ್ಬಿಡುವ ಪ್ಲಾನ್ ಏನಾದ್ರೂ ಇದ್ಯಾ? ನಾನಿನ್ನೂ ಚಿಕ್ಕವಳು,  ಇನ್ನೆಷ್ಟು ಊರು ನೋಡೋದಿದೆ, ಎಷ್ಟು ಪುಸ್ತಕ ಓದೋದಿದೆ, ಎಣ್ಣೆ ತುಪ್ಪ ಬಿಡೋದ್ಯಾಕೆ? ಪೂರ್ತಿ ಊಟಾನೇ ಬಿಟ್ಬಿಡ್ತೇನೆ, ನಂಗೆ ಬುದ್ಧಿ ಹೇಳೋಕೆ ಬಂದ್ಳು, ಮೊದ್ಲು ಮೈಯಲ್ಲಿ ಒಂದು ನೂರು ಗ್ರಾಂ ಆದ್ರೂ ಮಾಂಸ ಬೆಳೆಸ್ಕೋ" ಎಂದು ತಿವಿಯುತ್ತಾರೆ. ನಾನು ಇನ್ನೇನಾದ್ರೂ ಹೇಳ್ತೇನೆ, ಅವರು ಮತ್ತಿನ್ನೇನಾದರೂ. ಮಾತು ಜಗಳದಲ್ಲಿ ಕೊನೆಯಾಗುತ್ತದೆ. 

ಹಾಗೆ ಹೇಳುವುದಾದರೆ, ನಾವಿಬ್ಬರು ಸಂಧಿಸಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ.  ಈಗ್ಗೆ ಎರಡು-ಮೂರು ವರ್ಷಗಳ ಹಿಂದೆ ಒಂದು ದಿನ, ಎಕ್ಸಾಂ ಬರೆದು ಬಸ್ ಹತ್ತಿದ್ದೆ. ಪರೀಕ್ಷೆ ಮುಗಿದ ನಿರಾಳತೆ, ಹಿಂದಿನ ರಾತ್ರಿ ಕಳೆದ ನಿದ್ರೆ, ನಿಧಾನವಾಗಿ ಓಡುತ್ತಿದ್ದ ಗವರ್ನಮೆಂಟ್ ಬಸ್, ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಜೋಗುಳದಂತಹಾ ಹಾಡು... ಎಲ್ಲಾ ಕಲಸುಮೇಲೋಗರವಾಗಿಯಾವಾಗ ಜೊಂಪು ಹತ್ತಿತ್ತೋ ತಿಳಿಯದು. ಕಣ್ಣು ಬಿಟ್ಟು ನೋಡುವಾಗ ಬಸ್ ಯಾವುದೋ ಊರಲ್ಲಿ ನಿಂತಿತ್ತು. ಆಚೀಚೆ ದೃಷ್ಟಿ ಹಾಯಿಸಿದೆ. ಟಿಕೆಟ್ ಚೆಕ್ ಮಾಡುವವರು ಗಂಭೀರವಾಗಿ ಎಲ್ಲರ ಟಿಕೆಟ್ ಪರಿಶೀಲಿಸುತ್ತಿದ್ದರು. ನಾನು ಸ್ಟೂಡೆಂಟ್ ಪಾಸ್ ಹೊಂದಿದ್ದವಳು. ದಂಡ ಕಟ್ಟುವಷ್ಟು ದುಡ್ಡು ಪರ್ಸಲ್ಲಿ ಇರಲಿಲ್ಲ. ಬ್ಯಾಗಿನ ಮೂಲೆ ಮೂಲೆ ತಡಕಾಡಿದರೂ ಒಂದು ರೂಪಾಯಿಯೂ ಸಿಗದು ಅನ್ನುವುದು ಗೊತ್ತಿದ್ದರೂ ಸಿಗುತ್ತೇನೋ ಅನ್ನುವ ಆಶಾಭಾವನೆಯಲ್ಲಿ ಹುಡುಕತೊಡಗಿದೆ. ಯಾವೂರು ತಲುಪಿದ್ದೇನೆ ಎಂದು ತಿಳಿದುಕೊಳ್ಳೋಣವೆಂದರೆ ಅಲ್ಲಿ ಯಾವ ಬೋರ್ಡೂ ಇರಲಿಲ್ಲ . ಅಸಹಾಯಕತೆಯಿಂದ ಆಚೀಚೆ ನೋಡುವುದು ಬಿಟ್ಟರೆ ನನಗಾಗ ಇನ್ಯಾವ ದಾರಿಯೂ ಉಳಿದಿರಲಿಲ್ಲ.

ಹೇಳದಿರಲೂ ಆಗದ, ಹೇಳಿಕೊಳ್ಳಲೂ ಆಗದ ಮುಜುಗರದ ಸ್ಥಿತಿಯಲ್ಲಿಯೇ ಇರಬೇಕಾದರೆ 'ಟಿಕೆಟ್' ಅನ್ನುವ ಗಡಸು ಧ್ವನಿ ಹಿಂದಿನಿಂದ ಕೇಳಿ ಬಂದಿತ್ತು.  ನಾನು ಬೆಬ್ಬೆಬ್ಬೆ ಎಂದು ತೊದಲುವ ಮುನ್ನವೇ ಪಕ್ಕದ ಸೀಟಲ್ಲಿದ್ದ ಮಹಿಳೆ ' ಒಂದ್ನಿಮಿಷ ಮುಂಚೆಯಷ್ಟೇ ಈ ಹುಡುಗಿ ಬಸ್ ಹತ್ತಿದ್ಳು. ಇಲ್ಲಿರೋ ರಷ್ ಗೆ ಕಂಡಕ್ಟರ್ ಗೆ ಈ ಕಡೆ ಬರುವುದಕ್ಕೆ ಸಾಧ್ಯವಾಗಿಯೇ ಇಲ್ಲ. ಹೇಗೋ ಕಷ್ಟಪಟ್ಟು ಬರುವಷ್ಟರಲ್ಲಿ ನೀವು ಬಸ್ ಹತ್ತಿಬಿಟ್ರಿ. ಟಿಕೆಟ್ ಮಾಡುವುದಾದ್ರೂ ಹೇಗೆ?" ಅಂದರು. " ಇಂಥವೆಲ್ಲಾ ನಾನು ನನ್ನ ಸರ್ವಿಸಲ್ಲಿ ಎಷ್ಟು ನೋಡಿದ್ದೇನೆ. ಒಂದೋ ಟಿಕೆಟ್ ತೋರಿಸಿ, ಇಲ್ಲಾ ದಂಡ ಕಟ್ಟಿ" ಅಂತ ದಬಾಯಿಸಿದರು. " ನೀವು ಏನೇನೋ ನೋಡಿರ್ಬಹುದು. We respect it. ಬಟ್ ಇವಳು ಈಗಷ್ಟೇ ಬಸ್ ಹತ್ತಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಹೇಗೆ ಫೈನ್ ಕಟ್ಟಿಸ್ತೀರಿ ಅಂತ ನಾವೂ ನೋಡ್ತೇವೆ" ಅಂತ ಪಕ್ಕದಲ್ಲಿದ್ದವರನ್ನೂ ಸೇರಿಸಿಕೊಂಡರು. ಬುರ್ಖಾದಾರಿ ನಾನು ಮತ್ತು ಹಣೆಯ ಮಧ್ಯೆ ಪುಟ್ಟ ಕಪ್ಪು ಬೊಟ್ಟು ಇಟ್ಟುಕೊಂಡಿದ್ದ ಅವರು... ಇಬ್ಬರ ಮಧ್ಯೆ ಯಾವ ಬಾದರಾಯಣ ಸಂಬಂಧವೂ ಇರಲಾರದು, ಸುಳ್ಳು ಹೇಳಿ ನನ್ನ ರಕ್ಷಿಸಲು ಯಾವ ಕಾರಣವೂ ಇರಲಾರದು ಎಂದು ಅನಿಸಿತೋ ಏನೋ, ನಮ್ಮನ್ನು ಬಿಟ್ಟು ಮುಂದೆ ಹೋದರು.

ಚೆಕ್ಕಿಂಗ್ ಮುಗಿದು ಅವರು ಇಳಿದಂತೆ ನಾನು ಮುಂದಿನ ನಿಲ್ದಾಣಕ್ಕೆ ಟಿಕೆಟ್ ಮಾಡಿಸಿ ಕೃತಜ್ಞತಾ ಭಾವದಿಂದ ಒಮ್ಮೆ ಅವರತ್ತ ನೋಡಿದೆ. ತಾನೇನೂ ಮಾಡಿಯೇ ಇಲ್ಲವೇನೋ ಎಂಬಂತೆ ಕಿಟಕಿ ಹೊರಗೆ ದಿಟ್ಟಿಸುತ್ತಾ ಕೂತಿದ್ದರು.  ಶೂನ್ಯದೊಳಗೆ ಯಾವ ಕಾಣ್ಕೆಯಿತ್ತೋ ಗೊತ್ತಿಲ್ಲ, ಮೆತ್ತಗೆ 'ತ್ಯಾಂಕ್ಸ್' ಎಂದೆ. ಹೊರಗಿನಿಂದ ದೃಷ್ಟಿ ತಪ್ಪಿಸಿದ ಅವರು "ಇರ್ಲಿ ಬಿಡು, ಇನ್ಮುಂದೆ ಹೀಗೆಲ್ಲಾ ಬಸ್ಸಲ್ಲಿ ನಿದ್ರೆ ಹೋಗ್ಬೇಡ. ಬಸ್ ಪಾಸ್ ಇದ್ರೂ ಕೈಯಲ್ಲಿ ಸ್ವಲ್ಪ ಎಕ್ಸ್‌ಟ್ರಾ ದುಡ್ಡು ಇಟ್ಕೊಂಡಿರಬೇಕು. ಇಂತಹ ಪರಿಸ್ಥಿತಿಗಳಲ್ಲಿ ಉಪಯೋಗಕ್ಕೆ ಬರುತ್ತವೆ" ಅಂದ್ರು. ನನ್ನ ಬೇಜವಾಬ್ದಾರಿತನಕ್ಕೆ ನನಗೇ ನಾಚಿಕೆಯೆನಿಸಿತು. ಅವರು ಮೂಗಿನ ಮೇಲಿನಿಂದ ಒಮ್ಮೆ ಕನ್ನಡಕ ತೆಗೆದು ಸ್ವಚ್ಛ ಬಟ್ಟೆಯಿಂದ ಒರೆಸಿ ಸ್ವಸ್ಥಾನದಲ್ಲಿಟ್ಟರು. ಅಷ್ಟರಲ್ಲಿ ಮುಂದಿನ ಸ್ಟಾಪ್ ಬಂತು. ನಾನು "ಬರ್ತೇನೆ, ಮತ್ತೊಮ್ಮೆ ತ್ಯಾಂಕ್ಸ್" ಎಂದು ಇಳಿಯಲು ಎದ್ದು ನಿಂತೆ. ಅವರು  "ನಾನೂ ಇಲ್ಲೇ ಇಳಿಯುವವಳು, ಸ್ವಲ್ಪ ಈ ಬ್ಯಾಗ್ ಎತ್ತಿಕೋ" ಸ್ವಲ್ಪವೂ ಸಂಕೋಚವಿಲ್ಲ ಎಂಬಂತೆ ಹೇಳಿ ನನ್ನ ಹಿಂದೆಯೇ ಬಸ್ಸಿಳಿದರು. ಅವರ ಬ್ಯಾಗ್ ಅವರಿಗೇ ಒಪ್ಪಿಸಿ ಹೊರಡಬೇಕೆನ್ನುವಷ್ಟರಲ್ಲಿ ಒಂದು ಚೀಟಿಯಲ್ಲಿ ಫೋನ್ ನಂಬರ್ ಬರೆದು ನನ್ನ ಕೈಗೆ ತುರುಕಿ "ಫೋನ್ ಮಾಡ್ತಿರು" ಎಂದು ತಿರುಗಿ ನೋಡದೆ ಹೊರಟು ಹೋದರು. ನಾನು ಮತ್ತೆ ತಲೆಯಾಡಿಸಿದೆ. ರಸ್ತೆಯ ಪಕ್ಕದಲ್ಲಿದ್ದ ಸಂಪಿಗೆ ಮರದಿಂದ ಹೂವೊಂದು ತೊಟ್ಟು ಕಳಚಿ ಬಿತ್ತು. ಹೆಕ್ಕಲೋ ಬೇಡವೋ ಎಂಬ ಗೊಂದಲದಲ್ಲಿ ಇರಬೇಕಾದರೆ ನಮ್ಮೂರಿಗೆ ಹೋಗುವ ಬಸ್ ಬಂತು. ಹತ್ತಿ ಮತ್ತದೇ ಕಿಟಕಿ ಪಕ್ಕದ ಸೀಟಲ್ಲಿ ಕೂತು ಅವರ ಬಗ್ಗೆ ಯೋಚಿಸುತ್ತಲೇ ಮನೆ ತಲುಪಿದೆ. 

ಅನಂತರ ಕೆಲವು ದಿನಗಳ ಕಾಲ ಅವರ ಹ್ಯಾಂಗೋವರ್ ನಲ್ಲೇ ಇದ್ದೆ. ಆಮೇಲೆ ಯಾವ ದಿನ, ಯಾವ ಕ್ಷಣ ಅವರು ಮರೆತುಹೋದರೋ ಗೊತ್ತಿಲ್ಲ. ಉಪಕಾರ ಪಡೆದುಕೊಳ್ಳುವುದು, ಒಂದೆರಡು ದಿನ ಆ ನೆನಪಲ್ಲೇ ಕಳೆಯುವುದು ಆಮೇಲೆ ಏನೂ ನಡೆದೇ ಇಲ್ಲವೇನೋ ಎಂಬಂತೆ ಎಲ್ಲವನ್ನೂ ವಿಸ್ಮ್ರತಿಯ ಮರೆಯೊಳಕ್ಕೆ ತಳ್ಳಿಬಿಡುವುದು ನನ್ನಂತಹ ಮನುಷ್ಯರ ಹುಟ್ಟುಗುಣವೇನೋ. ಆದರೆ ಬದುಕಿನ ನಿರ್ಣಯ ಬೇರೆಯದೇ ಇತ್ತು. 


ಮತ್ತೊಂದು ಗಡಿಬಿಡಿಯ ಬೆಳಗ್ಗೆ ಅರ್ಧ ದೋಸೆ ತಿಂದು ಅಮ್ಮನಿಂದ ಬೈಸಿಕೊಳ್ಳುತ್ತಲೇ ಹೊರಟು ನಿಲ್ದಾಣ ತಲುಪಿ ಇನ್ನೂ ಉಸಿರು ಬಿಡುವ ಮುನ್ನವೇ ಬಂದ ಬಸ್ ಹತ್ತಿ ಕುಳಿತವಳಿಗೆ ಹಿಂದಿನ ಸೀಟಿನಲ್ಲಿ ಅದೇ ಮಹಿಳೆಯನ್ನು ಕಂಡಂತಾಗಿ ಒಮ್ಮೆ ದಿಕ್ಕೇ ತೋಚದಂತಾಯಿತು. ಕರೆ ಮಾಡದ ಗಿಲ್ಟ್, ಹೇಗೆ ಮಾತಾಡಿಸಲಿ ಅನ್ನುವ ಗೊಂದಲ, ಯಾವ ಕಾರಣ ಕೊಡಲಿ ಅನ್ನುವ ಪೇಚಾಟ, ಮುಖ ಮುಚ್ಚಿಕೊಳ್ಳಲೇ ಅನ್ನುವ ಅನುಮಾನ ಇವೆಲ್ಲದರ ಮಧ್ಯೆ ಮೆಲ್ಲನೆ ಅವರತ್ತ ನೋಡಿದ್ದೆ. ನನ್ನ ಕಂಡ ಕೂಡಲೇ ಹತ್ತಿರ ಕರೆದು ಪಕ್ಕದ ಸೀಟಲ್ಲೇ ಕೂರಿಸಿಕೊಂಡರು.

ನಾನು ಏನು ಮಾತಾಡಬೇಕೆಂದು ಗೊತ್ತಾಗದೆ ತಬ್ಬಿಬ್ಬಾಗಿ ಅವರ ಮುಖ ನೋಡುತ್ತಿದ್ದರೆ ಅವರು ಮಾತ್ರ ಯಾವುದರ ಪರಿವೆಯೂ ಇಲ್ಲದಂತೆ ಮಾತಿಗೆ ಶುರು ಹಚ್ಚಿಕೊಂಡಿದ್ದರು. ಅವರು, ಅವರ ಹೆಸರು, ಹವ್ಯಾಸ, ತಿರುಗಾಟದ ಹುಚ್ಚು ಇವೆಲ್ಲಾ ಮಾತಾಡುತ್ತಿದ್ದರೆ ನನಗೇಕೋ ನನ್ನ ಬಗ್ಗೆಯೇ ನಾಚಿಕೆಯೆನಿಸಿತು. ಇಷ್ಟು ಶುದ್ಧ ಹೃದಯದ ಮಹಿಳೆಯೊಂದಿಗೆ ಸಂಬಂಧ ಉಳಿಸಿಕೊಳ್ಳಲಾಗದ ನಾನು ಎಂತಹ ಮೂರ್ಖಳಾಗಿರಬೇಕು ಅನಿಸುತ್ತಿತ್ತು. ಹೇಳಬೇಕು ಅಂದುಕೊಂಡಿದ್ದ ಸುಳ್ಳು ಗಂಟಲನ್ನು ಮೀರಿ ಆಚೆ ಬರುತ್ತಲೇ ಇರಲಿಲ್ಲ. ಕೊನೆಗೆ ಇನ್ನೇನು ಇಳಿದೇ ಬಿಡುತ್ತೇನೆ ಎಂದಾಗುವಾಗ ಇದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ "ಅಕ್ಕಾ, ಫೋನ್ ಮಾಡೋಕೆ ಆಗಿಲ್ಲ. ಹಾಗಂತ ತುಂಬಾ ಬ್ಯುಸಿಯಾಗಿದ್ದೆ, ತುಂಬಾ ಕೆಲಸ ಇತ್ತು  ಅಂತೇನಲ್ಲ, ಬಹುಶಃ ನಿಮಷ್ಟು ಶುದ್ಧ ಮನಸ್ಸಿನವಳು ನಾನಲ್ಲ." ಎಂದು ತೊದಲಿದೆ. ಅಮ್ಮನ ಸೆರಗಿನ ಮರೆಯಿಂದ ಮೆಲ್ಲನೆ ಇಣುಕಿ ತುಂಟತನದಿಂದ ಮಗುವೊಂದು ನಗುವಂತೆ ಹಗುರವಾಗಿ ನಕ್ಕರು. ನಾನು ಅವರ ನಗು ತುಂಬಿಕೊಂಡು ಬಸ್ ಇಳಿದೆ.

ಅಲ್ಲಿಂದ ಮುಂದೆ ನಮ್ಮದು ಸಮೃದ್ಧ ಸಂಬಂಧ. ಮಾತುಕತೆ, ಹರಟೆ, ನಗು, ಸಂಭ್ರಮ, ಖುಶಿ ಹಂಚಿಕೊಂಡಷ್ಟೇ ಸಹಜವಾಗಿ ನೋವು, ದುಃಖ, ಸಂಕಟ, ನಿರಾಸೆಗಳನ್ನೂ ಹಂಚಿಕೊಳ್ಳುತ್ತೇವೆ. ಒಣ ಪ್ರತಿಷ್ಠೆ, ತೋರಿಕೆಯ ಸುಖ, ಹುಸಿ ಫಾರ್ಮಾಲಿಟೀಸ್ ನಮ್ಮ ಮಧ್ಯೆ ಬಂದೇ ಇಲ್ಲ. ಅಕ್ಷರಶಃ ಒಡಹುಟ್ಟಿದ ಸಹೋದರಿಯರಂತೆ ಕಿತ್ತಾಡುತ್ತೇವೆ, ಮರುಕ್ಷಣ ಒಂದಾಗುತ್ತೇವೆ. ನನ್ನ ಮುಟ್ಟಿನ ನೋವಿಗೆ ಆಕೆ ಅಕ್ಕರೆಯ ಮುಲಾಮು, ಅವರ ಒಂಟಿ ಜೀವನಕ್ಕೆ ನಾನು ಸಂಜೆಯ ಹಾಡು. ನನ್ನ ಕಥೆಗಳ, ಕವಿತೆಗಳ ಕಟು ವಿಮರ್ಶಕಿ ಆಕೆ, ಆಕೆಯ ಬದುಕಿನ ಒಂದು ಪುಟ್ಟ ಕವಿತೆ ನಾನು.

ಮದುವೆಗೆಂದು ನಾನು ತಯಾರಾಗಿ ನಿಂತಾಗ ಒಲವಿನ ದೀವಿಗೆ ಹಿಡಿದು ನನ್ನ ಗಲ್ಲ ಹಿಡಿದೆತ್ತಿ "ಈ ಸಂಬಂಧ ನಿನಗೆ ಪೂರ್ತಿ ಒಪ್ಪಿಗೆಯೇನೇ?"ಎಂದು ಕೇಳಿದ್ದರು. ಆಗಷ್ಟೇ ನಿಖಾಹ್  ಗಾಗಿ ನನ್ನ ಒಪ್ಪಿಗೆ ಕೇಳಲು ಬಂದಿದ್ದ ಅಪ್ಪ ನಾನು "ಹೂಂ" ಅಂದಮೇಲೆ ಬಾಗಿಲ ಕಡೆ ನಡೆದಿದ್ದರು. ನಮ್ಮ ಮಾತು ಕೇಳಿ ಒಮ್ಮೆ ತಿರುಗಿ ನೋಡಿ ಮುಂದಡಿಯಿಟ್ಟರು. ಅಪ್ಪನ ಕಣ್ಣಲ್ಲೂ ನೀರು ಗಿರಿಗಿಟ್ಲೆಯಾಡುತ್ತಿತ್ತಾ? ಗೊತ್ತಿಲ್ಲ, ಈ ಅಕ್ಕ ಮಾತ್ರ ಕಣ್ಣ ಪೂರ್ತಿ ನೀರು ತುಂಬಿಕೊಂಡು ಬಾತ್ ರೂಂ ಹೊಕ್ಕರು. ನನ್ನ ಮದುವೆ ದಿನದ ಮತ್ತೊಂದು ವಿಶೇಷತೆಯೆಂದರೆ ಅವರು ಸೀರೆ ಉಟ್ಟದ್ದು.

ಸದಾ ಜೀನ್ಸ್ ಧರಿಸುವ ಅವರನ್ನು ಅವತ್ತು ಸೀರೆಯಲ್ಲಿ ನೋಡಿದ್ದೇ ಒಂದು ಹಬ್ಬ. ಮಣಭಾರದ ಲೆಹಂಗಾ ಧರಿಸಿ ನಾನು ಪಡಬಾರದ ಕಷ್ಟ ಪಡುತ್ತಿದ್ದರೆ ಆಕೆ ತುಂಬಾ ಸಲೀಸಾಗಿ ಮದುವೆ ಛತ್ರದ ತುಂಬಾ ಸೀರೆಯಲ್ಲೇ ಓಡಾಡುತ್ತಿದ್ದರು. ಅವರನ್ನು ನೋಡುವಾಗೆಲ್ಲಾ ನನಗೆ 'ಇವರು ಎಲ್ಲಾ ಕಾಲಕ್ಕೂ ಎಲ್ಲಾ ಧಿರಿಸಿಗೂ ಸಲ್ಲುವವರೇನೋ' ಅಂತ ಅನ್ನಿಸುತ್ತಿತ್ತು. ಆದರೆ ಅವರ ಬದುಕಿನೊಳಕ್ಕೆ ಒಂದು ಆಕಸ್ಮಿಕ ತಿರುವಿನಲ್ಲಿ ಪ್ರವೇಶ ಪಡೆದ ನಾನು ಎಲ್ಲಿ ಮದುವೆಯ ನಂತರ ಕಳೆದುಹೋಗಿಬಿಡುತ್ತೇನೇನೋ ಅನ್ನುವ ದುಗುಡ, ಮದುವೆಯ ನಂತರದ ನನ್ನ ಬದುಕು ಹೇಗಿರತ್ತದೋ ಅನ್ನುವ ಆತಂಕ, ಸದಾ ಓದು ಬರಹಗಳಲ್ಲೇ ಕಾಲ ಕಳೆದ ನಾನು ಹೊಸ ಬದುಕನ್ನು ನಿಭಾಯಿಸಿಯೇನಾ ಅನ್ನುವ ಅನುಮಾನ, ಗಂಡನ ಮನೆಯವರು ಹೇಗಿರುತ್ತಾರೋ ಅನ್ನುವ ಗುಮಾನಿ ಎಲ್ಲಾ ಅವರ ಕಣ್ಣಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಯಾರಿಗೆ ಗೊತ್ತು, ಕಳೆದು ಹೋದ ಅವರ ಬದುಕಿನ ಚಿತ್ರಣ ಒಮ್ಮೆ ಅವರ ಕಣ್ಣೆದುರು ಬಂದಿರಲೂಬಹುದು, ಬೇರಿನ ವರೆಗೆ ಅಲ್ಲಾಡಿಸರಲೂಬಹುದು. ಆದರೆ ನಿಖಾಹ್, ಅದರಾಚೆಗಿನ ಸಂಪ್ರದಾಯಗಳೆಲ್ಲಾ ಮುಗಿದು ನಾನು ಗಂಡನ ಮನೆಗೆ ಹೊರಟು ನಿಂತಾಗ ಮಾತ್ರ ತೀರಾ ನಿರ್ಲಿಪ್ತೆಯಂತೆ ಬಂದು ಶೇಕ್ ಹ್ಯಾಂಡ್ ಮಾಡಿ ಹೊರಟುಹೋದರು. ಬದುಕಿನ ಯಾವ ಕ್ಷಣ ಅವರಿಗೆ ನಿರ್ಲಿಪ್ತತೆಯನ್ನು ಕಲಿಸಿತ್ತೋ ಗೊತ್ತಿಲ್ಲ, ಬೇಕಾದಾಗೆಲ್ಲಾ ಅದನ್ನು ಧರಿಸಿ ಮುಗುಮ್ಮಾಗಿ ಇದ್ದುಬಿಡುತ್ತಿದ್ದರು.

ಇಂತಿಪ್ಪ ಅಕ್ಕ, ಮೊನ್ನೆ ಒಂದು ವಾರ ಕಾಣೆಯಾಗಿದ್ದರು. ಫೋನ್, ವಾಟ್ಸಾಪ್, ಇನ್ಸ್ಟಾಗ್ರಾಂ ಎಲ್ಲೂ ಪತ್ತೆಯೇ ಇರಲಿಲ್ಲ. ಅಸ್ಸಾಂನ ಅದ್ಯಾವುದೋ ಹಳ್ಳಿಯೊಂದಕ್ಕೆ ಹೋಗಿಬರುತ್ತೇನೆ ಅಂತ ಹೇಳಿಹೋದವರ ಮತ್ತೆ ಕಾಲ್ ಗೆ ಸಿಕ್ಕಿರಲಿಲ್ಲ. ಆ ಅನ್ಯಮನಸ್ಕತೆಯಲ್ಲೇ ಪುಸ್ತಕದ ರಾಶಿಯಿಂದ ಕೈಗೆ ಸಿಕ್ಕಿದ ಪುಸ್ತಕವೊಂದನ್ನು ತೆರೆದು ಓದುತ್ತಾ ಕೂತಿದ್ದೆ, ಮಗ್ರಿಬಿನ ಸೂರ್ಯ ತನ್ನ ಅರ್ಧ ಬಣ್ಣ ಕಳೆದುಕೊಂಡಿದ್ದ. ಅಷ್ಟರಲ್ಲಿ ಫೋನ್ ರಿಂಗಾಯಿತು, ಯಾರದೋ ನಂಬರ್, ರಿಸೀವ್ ಮಾಡಿದ್ರೆ ಆ ಕಡೆಯಿಂದ ಅಕ್ಕನ ಧ್ವನಿ‌. ನನಗೆ ಹೋದ ಜೀವ ಬಂದಂತಾಯಿತು‌. ಅವರ ಧ್ವನಿ ಕೇಳಿದ ಕೂಡಲೇ ಅಷ್ಟರವರೆಗೆ ಅವರ ಮೇಲಿದ್ದ ಕೋಪ, ಸಿಟ್ಟು, ಆಕ್ರೋಶ ಕರಗಿಹೋಯಿತು.

"ಇದ್ಯಾರ ನಂಬರ್? ಎಲ್ಲಿದ್ದೀರಾ? ಇಷ್ಟು ದಿನ ಎಲ್ಲಿದ್ರಿ?" ನನ್ನದು ಕ್ಷೇಮ ಸಮಾಚಾರದ ಪ್ರಶ್ನೆ. ಆಕಡೆಯಿಂದ ಆಕೆ ಖಿಲ್ಲನೆ ನಕ್ಕಳು. ನನಗೆ ಮತ್ತೆ ಸಿಟ್ಟು ಬಂತು. "ಸಮಾಧಾನ, ನಾನು ಅಸ್ಸಾಂನಲ್ಲೇ ಇದ್ದೇನೆ. ಇದು ಗೆಳೆಯನೊಬ್ಬನ ನಂಬರ್, ನನ್ನ ಫೋನ್ ಕಳೆದುಹೋಗಿದೆ" ಅಂದರು. ನಾನು "ಯಾವಾಗ ರಿಟರ್ನ್? " ನನ್ನದು ಅಮಾಯಕ ಪ್ರಶ್ನೆ. "ಸದ್ಯಕ್ಕಿಲ್ಲ, ಬರ್ಬೇಕು ಅನ್ನಿಸಿದಾಗ ಬರ್ತೇನೆ" ಮತ್ತೆ ಅವರಿಂದ ಕೀಟಲೆಯ ನಗು‌. ಈಗ ನಾನೂ ಕೀಟಲೆ ಮಾಡುವ ಮೂಡ್ ಗೆ ಬಂದಿದ್ದೆ. "ಏನು, ಅಲ್ಲೇ ಸಟ್ಲ್ ಆಗುವ ಪ್ಲಾನ್ ಇದ್ಯಾ?" ಕೇಳಿದೆ. "ಹೂಂ ಆಗ್ತೇನೇನೋ, ಗೊತ್ತಿಲ್ಲ" ಎಂದರು. ನಾನು ಮತ್ತೆ ಕಿಚಾಯಿಸುವಂತೆ "ಬಾಯ್ ಫ್ರೆಂಡ್ ಏನಾದ್ರೂ ಮಾಡ್ಕೊಂಡ್ರಾ ಹೇಗೆ? ಯಾರು ಆ ಬಕ್ರಾ?" ಎಂದು ಕೇಳಿದೆ. ಮೆತ್ತಗೆ "ಹೂಂ ಕಣೇ" ಅಂದು ಮೌನವಾದ್ರು. ಈಗ ಮಾತ್ರ ನನಗೆಲ್ಲಾ ಅಯೋಮಯ.

ಅವರ ಧ್ವನಿಯಲ್ಲಿದ್ದ ಖಚಿತತೆ ನಿಜವನ್ನೇ ಹೇಳುತ್ತಿದ್ದಾರೆ ಅಂತ ಅನ್ನುತ್ತಿತ್ತು ಆದರೆ ಕೀಟಲೆ ಮಾಡುತ್ತಿದ್ದಾರೇನೋ ಅನ್ನುವ ಸಣ್ಣ ಅನುಮಾನ ನನಗೆ. ಒಂದೆರಡು ಕ್ಷಣ ತಡೆದು "ನಿಜಾನಾ?" ಅಂತ ಕೇಳಿದೆ. ಆ ಹೊತ್ತಿಗಾಗುವಾಗ ಅವರು ಸಹಜ ಸ್ಥಿತಿಗೆ ಬಂದಿದ್ದರು."ಮತ್ತೆ ಸುಳ್ಳಾ? ನಾನು ಪ್ರೀತಿಸ್ಬಾರ್ದಾ? ಅಥವಾ ಈ ವಯಸ್ಸಿನಲ್ಲಿ ಪ್ರೀತಿಸ್ಬಾರ್ದು ಅಂತಾನಾ? ಬಿಡಮ್ಮಾ ನನಗೆ ಅಂತಹ ವಯಸ್ಸೇನೂ ಆಗಿಲ್ಲ. ನಿನ್ನ ಪಕ್ಕ ನಿಂತ್ರೆ ನಾನು ನಿನ್ನ ತಂಗಿ ತರ ಕಾಣಿಸ್ತೇನೆ. ಬೇಕಿದ್ರೆ ನಿನ್ನ ಗಂಡನನ್ನು ಕೇಳು" ಅಂದ್ರು. ಈಗ ನನಗೆ ಈಕೆ ನಿಜವನ್ನೇ ಹೇಳ್ತಿದ್ದಾರೆ ಅನ್ನುವುದು ಖಚಿತವಾಯಿತು.

"ಯಾವೂರು?" ಕೇಳಿದೆ. "ಕನ್ನಡಿಗನೇ ಕಣೇ ಗುಲ್ಡೂ" ಮತ್ತೆ ರೇಗಿದರು. "ಯಾವಾಗ ಮದುವೆ?" ಅಂತ ಕೇಳಿದೆ. "ಮದುವೇನಾ? ಯಾರು ಮದುವೆ ಆಗ್ತಿದ್ದಾರೆ?" ಆ ಕಡೆಯಿಂದ ಗಂಭೀರ ಮರುಪ್ರಶ್ನೆ. ನನಗೆ ಮತ್ತೆ ಗೊಂದಲ ಶುರುವಾಯಿತು. "ಮತ್ತೆ?" ನನ್ನದು ಸಂದೇಹದ ಪ್ರಶ್ನೆ. "ಮದುವೆ ಅಂತೇನಿಲ್ಲ, ಪ್ರೀತಿ ಇರುವಷ್ಟು ದಿನ ಒಟ್ಟಿಗಿರುತ್ತೇವೆ. ಅವನ ಕಣ್ಣಿನಲ್ಲಿ ನನ್ನ ಬಿಂಬ, ನನ್ನ ಕಣ್ಣಿನಲ್ಲಿ ಅವನ ಬಿಂಬ ಮರೆಯಾದ ಕ್ಷಣ ಇಬ್ಬರೂ ಒಬ್ಬರಿಗೊಬ್ಬರ ಬದುಕಿನಿಂದ ಎದ್ದುಹೋಗುತ್ತೇವೆ." ಅಂದರು.ನನ್ನದು ಮತ್ತೆ ಮೌನ. "ಯಾಕೋ ನಿನ್ಹತ್ರ ಹೇಳ್ಕೊಳ್ಬೇಕು ಅನ್ನಿಸಿತು, ಹೇಳಿದೆ. ಸ್ವೀಕರಿಸುವುದು ಬಿಡುವುದು ನಿನ್ನಿಷ್ಟ. ನಾನು ನಾಳೆ ಫೋನ್ ಮತ್ತೆ ಮಾಡುತ್ತೇನೆ" ಎಂದು ಕರೆ ಕಟ್ ಮಾಡಿದರು.

ನಾನು ಆ ನಂಬರನ್ನು 'ಅಕ್ಕನ ಪ್ರೀತಿ' ಎಂದು ಸೇವ್ ಮಾಡ್ಕೊಂಡೆ. ಮಗ್ರಿಬಿನ ಮಬ್ಬುಬೆಳಕಲ್ಲಿ ಪಕ್ಕದ ಗದ್ದೆಯಲ್ಲಿ ಪೈರೊಂದು ಬಾಗಿ ಹಿತವಾಗಿ ಭೂಮಿಯೆದೆಯನ್ನು ಸ್ಪರ್ಶಿಸಿದಂತಾಯಿತು. ಅದ್ಯಾವ ಹೊತ್ತಲ್ಲಿ ಗಂಡ ಬಂದು ಪಕ್ಕ ನಿಂತಿದ್ದರೋ ಗೊತ್ತಿಲ್ಲ, ನಾನೂ ಹಗುರವಾಗಿ ಅವರೆದೆಗೆ ಒರಗಿಕೊಂಡೆ. ಅಲ್ಲೇ ಪಕ್ಕದಲ್ಲಿದ್ದ ಪಾರಿಜಾತ ನಾಚಿಕೊಂಡಿತಾ? ಗೊತ್ತಿಲ್ಲ.