ಸೋಮವಾರ, ಜನವರಿ 8, 2018

DOs ಮತ್ತು DONTs ಗಳ ಮಧ್ಯೆ ಅನಾಥ 'ಅಳು'.

ಹದಿನೆಂಟು ಚಿಲ್ಲರೆ ವರ್ಷಗಳನ್ನು ಅಮ್ಮನ ಮಡಿಲಲ್ಲಿ, ಅಪ್ಪನ ಆಶ್ರಯದಲ್ಲಿ, ಸಂಬಂಧಗಳ ಸುತ್ತ ಕಳೆದ ಹುಡುಗನೊಬ್ಬನ ಕಣ್ಣುಗಳು, ಉನ್ನತ ವಿದ್ಯಾಭ್ಯಾಸಕ್ಕೆಂದೋ,  ಕೆಲಸಕ್ಕೆಂದೋ ಮನೆಯಿಂದ ಹೊರಟಾಗ ತುಂಬಿ ಬರುತ್ತವೆ. ಅದು ಕೆಲ ದಿನಗಳ ಮಟ್ಟಿಗಾದರೂ ಎಲ್ಲರನ್ನೂ, ಎಲ್ಲವನ್ನೂ ತೊರೆದು ಬದುಕಬೇಕಲ್ಲಾ ಅನ್ನುವ ನೋವು ಕಾಡುವಾಗಿನ ಸಹಜ ಕಣ್ಣೀರು.

ಗೆಳೆಯನಂತಿರುವ ಚಿಕ್ಕಪ್ಪ ಹೆಗಲು ತಟ್ಟಿ "ಯಾಕೋ ಹುಡುಗಿಯರ ತರಹ ಅಳುತ್ತೀಯಾ?" ಎಂದು ಪ್ರಶ್ನಿಸುತ್ತಾರೆ. ಹಾಗೆ ಕೇಳುವಾಗ ಅವರ ಧ್ವನಿಯೂ ಗದ್ಗದಿತವಾಗಿತ್ತು ಅನ್ನುವುದು ಬೇರೆ ವಿಷಯ. ಆದರೆ ಹುಡುಗ ಕಣ್ಣೀರು ಒರೆಸಿಕೊಂಡು ಬಲವಂತದ ನಗು ಬೀರುತ್ತಾನೆ. 

ಅಷ್ಟರ ಮಟ್ಟಿಗೆ ನಾವು 'ಅಳು'ವನ್ನು ಹುಡುಗಿಯರದಷ್ಟೇ ಹಕ್ಕು ಅಥವಾ ಹುಡುಗಿಯರ ಅನಿವಾರ್ಯತೆಯೇನೋ ಎಂಬಂತೆ ಬಿಂಬಿಸಿದ್ದೇವೆ. ಅಷ್ಟೇಕೆ 'ನಗುವ ಹೆಂಗಸನ್ನೂ ಅಳುವ ಗಂಡಸನ್ನೂ ನಂಬಬೇಡ' ಅನ್ನುವ ಗಾದೆ ಮಾತು ನಮ್ಮಲ್ಲಿ ತಲೆ ತಲಾಂತರದಿಂದಲೂ ಚಾಲ್ತಿಯಲ್ಲಿದೆ. ಮತ್ತದಕ್ಕೆ ನಮ್ಮ ದೇಹ, ಮನಸ್ಸು, ಹೃದಯ ಎಷ್ಟು ಟ್ಯೂನ್ ಆಗಿ ಬಿಟ್ಟಿದೆಯೆಂದರೆ, ವ್ಯತಿರಿಕ್ತವಾಗಿ ಏನಾದರೂ ನಡೆದು ಬಿಟ್ಟರೆ ನಮಗದು ತೀರಾ ಅಸಹಜ ಅನಿಸಿಬಿಡುತ್ತದೆ.

ಮನುಷ್ಯ ಸಂಘಜೀವಿ, ಅವನು ಯಾವತ್ತೂ ಏಕಾಂಗಿಯಾಗಿ ಬದುಕಲಾರ. ಈ ಸಮಾಜದೊಂದಿಗೆ ಅವನಿಗೆ ಭಾವನಾತ್ಮಕ ಕೊಡು ಕೊಳ್ಳುವಿಕೆ ಇದ್ದರಷ್ಟೇ ಅವನ ಬದುಕು ಸರಾಗ. ಎಲ್ಲಾ ನಿಜಾನೇ, ಆದರೆ ಸಹಜಾತಿಸಹಜ ಭಾವ ಪ್ರಕಟನೆಗಳಿಗೂ ಹೀಗೆ DOs ಮತ್ತು DONTs ಗಳ ಪ್ರತಿಬಂಧಕ ವಿಧಿಸಿದರೆ ಹೇಗೆ?

ಕಾಡುವ ನೋವಿಗೆ, ಜೊತೆಯಾಗುವ ಸಂಕಟಗಳಿಗೆ, ಅಹಿತ ಸಂದರ್ಭಗಳಿಗೆ, ಭಾವೋತ್ಕರ್ಷಗಳಿಗೆ ಹೆಣ್ಣು ಗಂಡೆಂಬ ಬೇಧವಿಲ್ಲ. ಅದು ಸರ್ವವ್ಯಾಪಿ, ಸರ್ವಾಂತರ್ಯಾಮಿ. ಮತ್ತೇಕೆ ಗಂಡಸು ಅತ್ತ ಕೂಡಲೇ ಪ್ರಳಯವಾಯಿತೇನೋ ಎಂಬಂತೆ ವರ್ತಿಸುವುದು?

ನೋವಾದಗಷ್ಟೇ ಕಣ್ಣೀರು ಹರಿಯುತ್ತದೆ ಅನ್ನುವುದು ಶುದ್ಧ ಮೌಢ್ಯ. ಹಾಗೆ ಭಾವಿಸಿಕೊಂಡವರು ಒಮ್ಮೆ , ಒಲಿಂಪಿಕ್ ಪದಕ  ವಿಜೇತರ ಕಣ್ಣಲ್ಲಿ ತುಳುಕುವ ಕಣ್ಣೀರನ್ನೊಮ್ಮೆ ಮಾತಾಡಿಸಿ ನೋಡಬೇಕು. ಅದು ಸಾಧನೆಯ ಸಂಭ್ರಮವನ್ನೂ, ಅದರ ಹಿಂದಿನ ಪರಿಶ್ರಮವನ್ನೂ, ಅಖಂಡ ಬದ್ಧತೆಯನ್ನೂ, ಹಲವು ಸುಖಗಳ ತ್ಯಾಗದ ಕಥೆಗಳನ್ನೂ ಎಷ್ಟು ಸಾದ್ಯಂತವಾಗಿ ವಿವರಿಸುತ್ತದೆ ಅಂದರೆ, ನಗು-ಅಳುವಿನ ಬಗೆಗಿನ ಸರ್ವ ಪೂರ್ವಾಗ್ರಹಗಳನ್ನು ನಿವಾಳಿಸಿ ಎಸೆದು ಬಿಡುತ್ತದೆ.

ಕಣ್ಣೀರಿಗೂ ಅದೆಷ್ಟು ತರಹೇವಾರಿ ಕಾರಣಗಳಿರುತ್ತವೆ! ನೋವಿನ ಕಣ್ಣೀರು, ಯಾರನ್ನೋ/ಯಾವುದನ್ನೋ ಕಳೆದುಕೊಂಡಾಗಿನ ಕಣ್ಣೀರು, ಅವಮಾನದ ಕಣ್ಣೀರು, ತಿರಸ್ಕಾರದ ಕಣ್ಣೀರು, ಖುಶಿಯ ಕಣ್ಣೀರು, ಸಾಧನೆಯ ಕಣ್ಣೀರು... ಹೃದಯದಲ್ಲಿ ಮಿಡಿಯುವ ಪ್ರತಿ ನೋವು, ನಲಿವು ಸಹಜವಾಗಿ ವ್ಯಕ್ತವಾಗುವುದು ಕಣ್ಣ ಕೊಳಗಳಲ್ಲಿ. ಅದು ಕದಡಿದರೆ ಪ್ರತೀ ಬಿಂಬವೂ ಅಸ್ಪಷ್ಟ.

ನಗುವಿನಷ್ಟೇ ಸಹಜ ಪ್ರತಿಕ್ರಿಯೆ 'ಅಳು'. ಅದನ್ನು ಅದುಮಿಡುವುದರಲ್ಲಿ, ತಡೆಹಿಡಿಯುವುದರಲ್ಲಿ, ಅವಮಾನವೆಂದು ಭಾವಿಸಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಭಾವಗಳೆಂಬ ತಾಯಿ ಬೇರು ಟಿಸಿಲೊಡೆದಾಗ ನಗುವೆಂಬ ಮಗು ಕಣ್ಣು ಬಿಟ್ಟರೆ ನಿರ್ಮಲವಾಗಿ ನಕ್ಕುಬಿಡಿ, ಅಳುವೆಂಬ ಕೂಸು ಹುಟ್ಟಿದರೆ... ಆಗಲೂ ಒಮ್ಮೆ ಮನಸಾರೆ ಅತ್ತುಬಿಡಿ.

ಶನಿವಾರ, ಜನವರಿ 6, 2018

ಎರಡೇ ನಿಮಿಷದ ಮ್ಯಾಗಿ ಮತ್ತು ಧಾವಂತದ ಬದುಕು.

ಸರಿಯಾಗಿ ಇಪ್ಪತ್ತೈದು ತುಂಬೋದಕ್ಕೇ ಇನ್ನೂ ಆರು ತಿಂಗಳಿವೆ ಈಗ್ಲೇ ತುಂಬಾ defeat ಆದ ಭಾವ', ತೀರಾ ಮೂವತ್ತು ಆಗುವುದಕ್ಕಿಂತ ಮುನ್ನವೇ ಎಲ್ಲಾ ಮುಗಿದು ಹೋದ ಸ್ಥಿತಿ', 'ಕೆಲಸ ಗಿಟ್ಟಿಸಿ ಒಂದು ವರ್ಷ ಆಗುವಷ್ಟರಲ್ಲೇ ಬದುಕು ನೀರಸ ಅನ್ನಿಸೋಕೆ ಶುರುವಾಗಿದೆ', 'ಬಿಡಿ, ಏನೇ ಮಾಡಿದ್ರೂ ಜೀವನ ಇದ್ದಲ್ಲೇ ಇರುತ್ತದೆ'. ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಅಷ್ಟೇಕೆ? ನಾವೇ ಹಲವು ಬಾರಿ ಹೀಗೆ ಮಾತಾಡಿರುತ್ತೇವೆ. ದುರಂತ ಅಂದ್ರೆ ಹೀಗೆ ಮಾತನಾಡುವವರಲ್ಲಿ ಹೆಚ್ಚಿನವರು ಈಗಷ್ಟೇ ಬದುಕು ನೋಡಲು ಆರಂಭಿಸಿದ ಹುಡುಗ/ಗಿಯಾಗಿರುತ್ತಾರೆ.

ಯಾಕೆ ಹೀಗಾಗುತ್ತಿದೆ? ಬದುಕೇಕೆ ಅಷ್ಟು ಬೇಗ ನೀರಸ ಅನಿಸೋಕೆ ಶುರುವಾಗುತ್ತದೆ? ಧಾವಂತದ ಬದುಕು, ವಿಪರೀತದ ಓಡಾಟ, ಅನಾರೋಗ್ಯಕರ ಪೈಪೋಟಿ, ಸಲ್ಲದ ಸ್ಪರ್ಧೆ ನಮ್ಮನ್ನು ಹೈರಾಣಾಗಿಸಿವೆಯಾ? ಅಥವಾ ಬದುಕಿನ ಆಳದಲ್ಲೆಲ್ಲೋ ನಡೆಯುತ್ತಿರುವ ಪಲ್ಲಟಗಳು, ತಲ್ಲಣಗಳು, ಸಂಘರ್ಷಗಳು ನಮ್ಮ ಯೋಚನಾಕ್ರಮವನ್ನು ನೇರವಾಗಿ ಪ್ರಭಾವಿಸುತ್ತಿವೆಯಾ? ಸುತ್ತಲಿನ ಕೌತುಕುಗಳಿಗೆ, ಪ್ರಕೃತಿಯ ಸಣ್ಣ ಪುಟ್ಟ ಆಗುಹೋಗುಗಳಿಗೆ ತೆರೆದುಕೊಳ್ಳದ ಮನಸ್ಸು ನಿಧಾನವಾಗಿ ಕುತೂಹಲಗಳನ್ನೆಲ್ಲಾ ಕಳೆದುಕೊಂಡು ಮೂರು ಮತ್ತೊಂದು ಎಂಬಂತೆ ಯಂತ್ರವಾಗಿ ಮಾರ್ಪಾಡಾಗುತ್ತಿದೆಯಾ?

ಇತ್ತೀಚೆಗಷ್ಟೇ ನೌಕರಿ ಗಿಟ್ಟಿಸಿಕೊಂಡ ಹುಡುಗ, ಮೊನ್ನೆ ಮೊನ್ನೆಯೆಂಬಂತೆ ಸಂಭ್ರಮದಿಂದ 22ರ birthday ಆಚರಿಸಿಕೊಂಡ ಹುಡುಗಿ ಬದುಕು ಪ್ರಾರಂಭವಾಗುವ ಮುನ್ನವೇ ವೈರಾಗ್ಯದ ಮಾತುಗಳನ್ನಾಡುವಾಗ ಕಸಿವಿಸಿಯಾಗುತ್ತದೆ. ಎರಡೇ ನಿಮಿಷಗಳಲ್ಲಿ ತಯಾರಾಗಬಲ್ಲಂತಹ ಅಥವಾ ಹಾಗೆ ಬಿಂಬಿಸಲ್ಪಟ್ಟಂತಹ ಮ್ಯಾಗಿಯಷ್ಟೇ ಆತುರದ, ಯಾವುದಕ್ಕೂ ಸಮಯವಿಲ್ಲದ ಬದುಕು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿದೆ?

ಅದೇ ಒಮ್ಮೆ ಆಸ್ಪತ್ರೆಗಳ ಅದರಲ್ಲೂ ಹೃದಯ, ಕಿಡ್ನಿ, ಕ್ಯಾನ್ಸರ್ ಚಿಕಿತ್ಸಲಾಯಗಳತ್ತ ಕಣ್ಣು ಹಾಯಿಸಿ ನೋಡಿ. ಅಲ್ಲಿ ಜೀವಂತಿಕೆ ತುಂಬಿ ತುಳುಕುತ್ತಿರುತ್ತದೆ. ಭರಿಸಲಾಗದ ನೋವು, ಕಿತ್ತು ತಿನ್ನುವ ಸಂಕಟ, ಸಣ್ಣದಾಗಿ ಹೊರಳಿಕೊಳ್ಳಲೂ ಸಾಧ್ಯವಾಗದಂಥ ಯಾತನೆ ಕಾಡುತ್ತಿದ್ದರೂ ಬದುಕಿನ ಬಗೆಗಿನ ನಿರೀಕ್ಷೆ, ಬದುಕಬೇಕೆನ್ನುವ ತುಡಿತ ಅವರಲ್ಲಿ ಸತ್ತಿರುವುದಿಲ್ಲ. ಮಾತಿಗೆ ಕೂತರೆ, ಮಾಡಿ ಮುಗಿಸಬೇಕಾದ ಕೆಲಸಗಳು, ಭೇಟಿ ನೀಡಬೇಕಾಗಿರುವ ಸ್ಥಳಗಳು, ಓದಬೇಕಿರುವ ಪುಸ್ತಕಗಳ ಪಟ್ಟಿಯನ್ನೇ ಮುಂದಿಡುತ್ತಾರೆ.

ಹೃದಯ ಶಸ್ತ್ರಚಿಕಿತ್ಸೆ ನಡೆದ ಸುಸ್ತಿನ್ನೂ ಆರುವ ಮುಂಚೆಯೇ ಮೊಮ್ಮಗುವನ್ನು ಮುದ್ದಾಡುವ ತಾತ, ಉಸಿರಾಡಲೇ ಕಷ್ಟವಾಗುತ್ತಿದ್ದರೂ ಮುಂದಿನ ಬದುಕಿನ ಬಗ್ಗೆ ಮಾತಾಡುವ ಕೃಶದೇಹಿ ಅಜ್ಜಿ, ಬದುಕಿಡೀ ಹೋರಾಡಿದರೂ ದಣಿದಿಲ್ಲವೇನೋ ಎಂದೇ ತೋರುವ ಕ್ಯಾನ್ಸರ್ ಪೇಷಂಟ್, ಅಕಾಲದಲ್ಲಿ ಕೈಯೋ ಕಾಲೋ ಕಳೆದುಕೊಂಡ ನೋವಲ್ಲೂ ನಿರಮ್ಮಳವಾಗಿ ನಗುವ ಮಧುಮೇಹ ರೋಗಿ ನಮ್ಮ ಮುಂದೆ ಬೇರೆಯದೇ ಲೋಕವನ್ನು ತೆರೆದಿಡುತ್ತಾರೆ.

ನಿಜಕ್ಕೂ ಅವರಲ್ಲಿ ಅಂತಹಾ ಜೀವನೋತ್ಸಾಹ ಹೇಗೆ ಉಕ್ಕುತ್ತದೆ? ಬದುಕಲೇಬೇಕೆಂಬ ಉತ್ಕಟತೆ ಎಲ್ಲಿಂದ ಮೊಳಕೆಯೊಡೆಯುತ್ತದೆ? ಗೋರಿಯ ನೆತ್ತಿಯ ಮೇಲಿಂದಲೂ ಬದುಕು ಕಟ್ಟಿಕೊಳ್ಳಬಲ್ಲೆ ಅನ್ನುವ ಅದಮ್ಯ ಜೀವನ ಪ್ರೀತಿಯ ಮೂಲ ಸೆಲೆ ಯಾವುದು? ಬದುಕು ಪ್ರತಿ ಕ್ಷಣದ ಅಚ್ಚರಿ ಎಂಬಂತೆ ಹೇಗೆ ಬದುಕುತ್ತಾರೆ? ತೀರಾ ಸಾವಿನ ಸನಿಹಕ್ಕೆ ಹೋಗಿ ಬದುಕಿಗೆ ಮರಳಿದ ಅನುಭವವೇ ಅವರನ್ನು ಜೀವನ್ಮುಖಿಯಾಗಿಸುತ್ತವೆಯಾ? ಅಥವಾ ಹುಟ್ಟು, ಹೋರಾಟ, ಬದುಕು, ಸಾವು ಅದರಾಚೆಗಿನ ನೋವು ನಲಿವು ಎಲ್ಲಾ ಮೀರಿದ ನಿಸ್ತಂತು ಭಾವವೊಂದು ಅವರನ್ನು ಮತ್ತೆ ಮತ್ತೆ ಬದುಕಿನ ಅಂಗಳಕ್ಕೆ ಎಳೆದು ತರುತ್ತದಾ?

ಅವರನ್ನೆಂದೂ ಈ ಸ್ಯಾಚುರೇಷನ್, ಬದುಕು ಸಾಕೆನ್ನುವ ಭಾವ, ಜೀವನ ತೀರಾ ಸಪ್ಪೆ ಅನ್ನುವುದೆಲ್ಲಾ ಕಾಡಿಯೇ ಇಲ್ವಾ? ಊಹೂಂ, ಹಾಗೇನಿಲ್ಲ. ಆದರೆ ಅವರಿಗೆ ಎಲ್ಲವನ್ನೂ ಮೀರಿ ಬದುಕು ಮುಂದೆ ಸಾಗುತ್ತದೆ ಅನ್ನುವ ನಂಬಿಕೆ ಇತ್ತು, ಎರಡು ದಿನದ ನಿರಾಶೆ ಒಂದಿಡೀ ಬದುಕನ್ನು ಆಪೋಶನ ತೆಗೆದುಕೊಳ್ಳಲು ಬಿಡಬಾರದು ಅನ್ನುವ ವಿವೇಚನೆ ಇತ್ತು. 'ಸಾಕು ಬಿಡು, ಈ ಬದುಕು' ಅನ್ನುವ ಹಳಹಳಿಕೆ ಮನಸ್ಸಲ್ಲಿ ಬೇರೂರುವ ಸೂಚನೆ ಸಿಕ್ಕ ಕೂಡಲೇ ಹೊಸ ಹುರುಪಿನಿಂದ ಮತ್ತೆ ತಮ್ಮ ಕೆಲಸಗಳಲ್ಲಿ ಮೈ ಮರೆಯುತ್ತಿದ್ದರು. ಪ್ರತಿ ದಿನವೂ, ಪ್ರತಿ ಕ್ಷಣವೂ ಒಂದು ಹೊಸ ಅನುಭವವನ್ನು, ವಿಸ್ತಾರವನ್ನು ಬದುಕಿಗೆ ಕಟ್ಟಿಕೊಡುತ್ತದೆ ಅನ್ನುವ ಸರಳ ಸತ್ಯವನ್ನು ಮನಗಂಡಿದ್ದರು.

ಒಂದು ಪ್ರೇಮ ವೈಫಲ್ಯಕ್ಕೆ, ಮತ್ತೊಂದು ವಿಶ್ವಾಸದ್ರೋಹಕ್ಕೆ, ಕಳೆದುಕೊಂಡ ನೌಕರಿಗಾಗಿ, ಮುರಿದುಬಿದ್ದ ಸಂಬಂಧಕ್ಕಾಗಿ ಬದುಕನ್ನೇ ಮುಗಿಸಹೊರಡುವವರು ಈಗ ಮನಗಾಣಬೇಕಿರುವುದು ಇದೇ ಸತ್ಯವನ್ನು. ಬದುಕು ಮ್ಯಾಗಿಯಂತೆ ಎರಡೇ ನಿಮಿಷಗಳಲ್ಲಿ ತಯಾರಾಗುವಂಥದ್ದಲ್ಲ, ಅದು ರೂಪುಗೊಳ್ಳಲು ಪ್ರತಿ ದಿನದ ಶ್ರದ್ಧೆಯನ್ನು, ಕಸುವನ್ನು ಬೇಡುತ್ತದೆ.

ಬುಧವಾರ, ಜನವರಿ 3, 2018

ಹೌ ಬ್ರೇವ್ ಶಿ ಈಸ್!

ಬೆಟ್ಟವೇ ಕುಸಿದು ತಲೆ ಮೇಲೆ ಬಿದ್ರೂ ಬಲಮೊಣಗೈ ನೆಲಕ್ಕೂರಿ ಎಡಗೈಯಿಂದ ಬೆಟ್ಟ ಸರಿಸಿ ಈಚೆ ಬಂದೇನು ಅನ್ನುವಷ್ಟು ಆತ್ಮವಿಶ್ವಾಸ. ಎಂತಹಾ ಕಗ್ಗಾಡಲ್ಲೂ ಒಬ್ಬಳೇ ಇರಬಲ್ಲೆ ಎಂಬ ಧೈರ್ಯ. ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುವುದೆಂದರೆ ಎಲ್ಲಿಲ್ಲದ ಖುಶಿ. ಎದುರಿಗಿರುವವರ ಕಣ್ಣಲ್ಲಿ 'how brave she is!' ಅನ್ನುವ ಒಂದು ಮೆಚ್ಚುಗೆ ಇರಬೇಕು ಅಷ್ಟೆ. 

ಕೆಲವು ಹುಡುಗಿಯರು ಇರುವುದೇ ಹೀಗೆ. ಅಪಾರ ಆತ್ಮವಿಶ್ವಾಸ, ಎಲ್ಲವನ್ನೂ ಎದುರಿಸಬಲ್ಲೆನೆಂಬ ಕಿಚ್ಚು. ಅವರೆಂದೂ ಯಾರ ಮುಂದೆಯೂ ಕಣ್ಣೀರುಗೆರೆದಿರುವುದಿಲ್ಲ, ಬದುಕಿನ ಬಗ್ಗೆ complaint ಗೊಣಗಿರುವುದಿಲ್ಲ. ಕಷ್ಟ ಬಂದಾಗ 'ನನಗೇ ಏಕೆ ಹೀಗಾಯಿತು' ಎಂದು ಹಳಹಳಿಸುವುದಿಲ್ಲ. ಹತ್ತು ಮಂದಿಯ ಗುಂಪಿನಲ್ಲಿದ್ದರೂ ಪ್ರತ್ಯೇಕ ಅಸ್ತಿತ್ವ ಕಾಪಾಡಿಕೊಂಡು ಬಂದಿರುತ್ತಾರೆ. ಎಲ್ಲರನ್ನೂ ತನ್ನತ್ತ ಸೆಳೆಯುವ ಒಂದು ಶಕ್ತಿ ಅವರಲ್ಲಿರುತ್ತದೆ. ಯಾವುದೇ ಕಾರಣಕ್ಕೂ ಎದೆಗುಂದಲಾರೆ ಎನ್ನುವ ಹಠ, ಎಲ್ಲಕ್ಕೂ ಮುನ್ನುಗ್ಗುವ ಛಾತಿ, ಒಂದು ಅಭೂತಪೂರ್ವ ನಾಯಕತ್ವ ಗುಣ, ತನ್ನ ನಿರ್ಭಯ ಮಾತಿನಿಂದಲೇ ಎಲ್ಲರ ಗಮನ ಸೆಳೆಯುವ ಕಲೆ ಅವರಿಗೆ ಒಲಿದಿರುತ್ತದೆ, ಅಥವಾ ಅವರ ವ್ಯಕ್ತಿತ್ವವೇ ಹಾಗಿರುತ್ತದೆ. ಅಂತಹ ಹುಡುಗಿಯರನ್ನು ಸಮಾಜ 'ಬ್ರೇವ್ ಗರ್ಲ್' ಎಂದೇ ಕರೆಯುತ್ತದೆ.

ಆದರೆ ಹೀಗೆ ದಿಟ್ಟ ಹುಡುಗಿ ಅನ್ನಿಸಿಕೊಳ್ಳುವುದು ಸುಲಭವೇನಲ್ಲ. ತೀರಾ ಕಣ್ಣೀರು ನುಗ್ಗಿ ಬರುವಾಗಲೂ ತುಟಿ ಕಚ್ಚಿ ಸಹಿಸಿಕೊಳ್ಳಬೇಕು, ಅದೆಷ್ಟೇ ನೋವು ತನ್ನನ್ನು ಕೊರೆಯುತ್ತಿದ್ದರೂ ನಗುವಿನ ಮುಖವಾಡ ಹಾಕಿಕೊಳ್ಳಬೇಕು, ಸಮಸ್ಯೆಗಳ ಮಧ್ಯೆ ಬೇಯುತ್ತಿರುವಾಗಲೂ ಏನೂ ನಡೆದೇ ಇಲ್ಲವೆಂಬಂತೆ ನಡೆದುಕೊಳ್ಳಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನೋವಾದಾಗ ಅಳುವ, ದುಃಖ ತೋಡಿಕೊಳ್ಳುವ ಯಾವ ಸ್ವಾತಂತ್ರ್ಯವೂ ಅವರಿಗಿರುವುದಿಲ್ಲ. ಒಂದರ್ಥದಲ್ಲಿ ಬ್ರೇವ್ ಗರ್ಲ್ ಅನ್ನಿಸಿಕೊಳ್ಳುವ ಭರದಲ್ಲಿ ತನ್ನತನವನ್ನೇ ಕಳೆದುಕೊಂಡು ಬದುಕುತ್ತಾರೆ. ಯಾರದೋ ನೋವು, ಯಾರದೋ ಸಂಕಟಗಳಿಗೆ ಧ್ವನಿಯಾಗುತ್ತಾ ತನ್ನ ಬೇಕು ಬೇಡಗಳಿಗೆಲ್ಲಾ ಮೌನವಾಗಿ ಸಮಾಧಿ ಕಟ್ಟುತ್ತಾರೆ. ಹಾಗಂತ ಅಂತಹವರು ಸದಾ ನಾಟಕವಾಡುತ್ತಿರುತ್ತಾರೆ ಅಂತಲ್ಲ.

ಬಾಲ್ಯದಲ್ಲಿ ಕೇಳಿದ ಯಾವುದೋ ಕಥೆ ಅಥವಾ ನೋಡಿದ ಯಾವುದೋ ಘಟನೆ, ಅಳುವುದು ಹೇಡಿತನ ಎಂಬ ಭಾವನೆ ಬೆಳೆಯುವಂತೆ ಮಾಡಿರುತ್ತದೆ. ಹಲವು ಬಾರಿ ಪೋಷಕರೇ ಎಳೆಯ ಮಕ್ಕಳ ಮನಸ್ಸಿನಲ್ಲಿ ಅಂಥದ್ದೊಂದು ಕಲ್ಪನೆಯ ಬೀಜ ಬಿತ್ತುತ್ತಾರೆ. ಕೆಲವೊಮ್ಮೆ ತಾನು ಹೇಡಿ ಅಂತ ಸಮಾಜ ಮಾತಾಡಿಕೊಳ್ಳಬಾರದು ಅನ್ನುವ ಭಾವವೇ ಬಲಿತು 'ಬ್ರೇವ್ ಗರ್ಲ್' ಅನ್ನಿಸಿಕೊಳ್ಳಲೇಬೇಕು ಎಂಬ ಹಂತದವರೆಗೆ ತಂದು ನಿಲ್ಲಿಸುವುದೂ ಇದೆ.

ಹಾಗೆ ಒಮ್ಮೆ ಅನ್ನಿಸಿಕೊಂಡಮೇಲೆ ಶುರುವಾಗುವುತ್ತದೆ ನೋಡಿ ಆ ಪಟ್ಟವನ್ನು ಉಳಿಸಿಕೊಳ್ಳುವ ಹೋರಾಟ. ಅನ್ನಿಸಿದ್ದನ್ನು ಮಾಡಲಾಗದ ಅಸಹಾಯಕತೆ, ತನ್ನ ಭಾವನೆಗಳನ್ನು ಮುಕ್ತವಾಗಿ ತೆರೆದಿಡಲಾರದ ಬಿಗುವು , ಸದಾ ನಗುವಿನ ಮುಖವಾಡ ಧರಿಸಿರಲೇಬೇಕಾದ ಅನಿವಾರ್ಯತೆ, ಎಲ್ಲಾ ನೋವುಗಳನ್ನು ತನ್ನೊಳಗೇ ಹೊತ್ತುಕೊಳ್ಳಬೇಕಾದ ಅನಿವಾರಣೀಯತೆ, ಎಲ್ಲಾ ಅಳುಕುಗಳನ್ನೂ ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಮಾನಸಿಕ ಒತ್ತಡವನ್ನು ಸೃಷ್ಟಿಬಿಡಿಸುತ್ತದೆ. ಸದಾ ನಗುವ ಹುಡುಗಿಯ ಮನದ ನವಿರು ಭಾವಗಳು ಗೊತ್ತೇ ಆಗದಂತೆ ಸಾಯತೊಡಗುತ್ತದೆ. ಕೊನೆಗೊಂದು ದಿನ, ಎಲ್ಲಾ ಒತ್ತಡ, ಖಿನ್ನತೆಗಳು ಒಳಗೊಳಗೇ ಕುದಿದು ಸ್ಪೋಟವಾಗುತ್ತದೆ. ಅಲ್ಲಿಗೆ ಆ ಹುಡುಗಿಯ ಸ್ವಾಭಿಮಾನ ಮುಂದೆಂದೂ ಚೇತರಿಸಿಕೊಳ್ಳಲಾಗದಷ್ಟು ಘಾಸಿಗೊಳ್ಳುತ್ತದೆ.

ಹಾಗಂತ ಬ್ರೇವ್ ಗರ್ಲ್ ಆಗಿರುವುದೇ ತಪ್ಪು ಅಂತಲ್ಲ. ಸುಖಾ ಸುಮ್ಮನೆ ಸೋಲೊಪ್ಪುವುದು, ಪ್ರಯತ್ನವನ್ನೇ ಪಡದೆ ಕೈಚೆಲ್ಲುವುದು, 'ತನ್ನಿಂದಾಗದು' ಅನ್ನುವ ಭಾವನೆಯನ್ನು ಬೆಳೆಸಿಕೊಳ್ಳುವುದು, ವಿಪರೀತ ಕೀಳರಿಮೆಯಿಂದ ನರಳುವುದು... ಎಲ್ಲಾ ತಪ್ಪೇ. ಬದುಕನ್ನು ಎದುರಿಸುವ ಧೈರ್ಯ, ಸಮಸ್ಯೆಗಳನ್ನು ಪರಿಹರಿಸುವ ಛಾತಿ, ಸ್ವತಂತ್ರ ಯೋಚನಾಕ್ರಮವನ್ನು ಪ್ರತೀ ಹುಡುಗಿಯೂ ಬೆಳೆಸಿಕೊಳ್ಳಲೇಬೇಕು. ಆದರೆ   ಶರಣಾಗತಿಯೊಂದೇ ಬದುಕಲ್ಲ ಅನ್ನುವುದು ಎಷ್ಟು ನಿಜವೋ, ಪ್ರತಿ ಸಂದರ್ಭದಲ್ಲೂ ಗೆಲುವು ನಮ್ಮದಾಗಬೇಕು ಅಂತ ಬಯಸಲೂಬಾರದು ಅನ್ನುವುದೂ ಅಷ್ಟೇ ನಿಜ.

ಮಂಗಳವಾರ, ಜನವರಿ 2, 2018

ಚೇತನ್ ಭಗತ್ ಎಂಬ ಲೇಖಕನೂ, ಅಡುಗೆ ಮನೆಯ ಗಂಡಸರೂ..

"ಭಾರತೀಯ ಪೋಷಕರು ಅದೇಕೆ ತಮ್ಮ ಗಂಡು ಮಕ್ಕಳನ್ನು ಅಷ್ಟೊಂದು ದ್ವೇಷಿಸುತ್ತಾರೆ ಅನ್ನುವ ಸಂಗತಿ ನನ್ನನ್ನು ಸದಾ ಚಕಿತಗೊಳಿಸುತ್ತದೆ. ಒಂದು ಹೊತ್ತಿನ ಅನ್ನ ಬೇಯಿಸುವುದು ಬಿಡಿ, ತಮಗಾಗಿ ಒಂದು ಕಪ್ ಚಹಾವನ್ನು ಅವರು ತಯಾರಿಸಲಾರರು. ಮನೆ ಸ್ವಚ್ಛ ಮಾಡುವ, ಬಟ್ಟೆ ಒಗೆಯುವ ಮಾತು ಹಾಗಿರಲಿ ತಮ್ಮನ್ನು ತಾವೇ ಒಪ್ಪವಾಗಿ ಇಟ್ಟುಕೊಳ್ಳಲಾರರು ನಮ್ಮ ಗಂಡಸರು. ಇನ್ನೊಬ್ಬರ ಕರುಣೆಯಲ್ಲೇ ಬದುಕಬೇಕಾದ ಅನಿವಾರ್ಯತೆ ಅವರದು. ಸಣ್ಣದೊಂದು ಟ್ರಿಪ್ ಹೊರಡಬೇಕಿದ್ದರೂ ಪತ್ನಿ  ಬ್ಯಾಗ್ ಪ್ಯಾಕ್ ಮಾಡಿಕೊಡಬೇಕಾದ ಸ್ಥಿತಿ ಇದೆ ನಮ್ಮಲ್ಲಿ. ಒಂದಿಡೀ ಪೀಳಿಗೆಯ ಭಾರತೀಯ ಗಂಡಸರನ್ನು  ಅವರಷ್ಟಕ್ಕೇ ಬಿಟ್ಟುಬಿಟ್ಟರೆ ಬದುಕುವುದೇ ಅಕ್ಷರಶಃ ಕಷ್ಟ ಅನ್ನುವ ಪರಿಸ್ಥಿತಿ ಇದೆ.

ಪೋಷಕರು ತಮ್ಮೆಲ್ಲಾ ಮಕ್ಕಳನ್ನು ಸಮಾನವಾಗಿ ಪ್ರೀತಿಸುತ್ತಾರೆ ಅನ್ನುವುದು ನನ್ನ ಯೋಚನೆಯಾಗಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ಅವರು ತಮ್ಮ ಹೆಣ್ಣುಮಕ್ಕಳಿಗೆ ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಬದುಕುವುದನ್ನು ಹೇಳಿಕೊಡುತ್ತಾರೆ. ಆದರೆ ಗಂಡುಮಕ್ಕಳನ್ನು ಪರಾವಲಂಬಿಗಳಾಗಿಯೇ ಬೆಳೆಸುತ್ತಾರೆ."

ಹಾಗಂತ ಚೇತನ್ ಭಗತ್ ತಮ್ಮ ಫೇಸ್ಬುಕ್ ಗೋಡೆಯಲ್ಲಿ ಬರೆದುಕೊಂಡ ಕೂಡಲೇ ಪರವಿರೋಧದ ಚರ್ಚೆಗಳು ಶುರುವಾದವು. ಸತ್ಯಾಸತ್ಯತೆ ಚರ್ಚೆ ಆಗಬೇಕಾದಲ್ಲಿ, ಎಂದಿನಂತೆ ಚೇತನ್ ಅವರನ್ನು ಇಷ್ಟಪಡುವವರ ಮತ್ತು ಇಷ್ಟಪಡದವರ ಮಧ್ಯ ಅಕಾರಣ ವಾಗ್ಯುದ್ಧ ಆರಂಭವಾಯಿತು. (ಬಿಡಿ, ಬಹುತೇಕ ಎಫ್.ಬಿ ಪೋಸ್ಟ್ ಗಳ ಹಣೆಬರಹವೇ ಇದು. ಕಾಳನ್ನೂ ಸಾರಾಸಗಟಾಗಿ ತಿರಸ್ಕರಿಸುವ ಮತ್ತು ಜೊಳ್ಳನ್ನೂ ವಿವೇಚನಾರಹಿತವಾಗಿ ಪುರಸ್ಕರಿಸುವ ಮನಸ್ಥಿತಿಯ ಎರಡು ವರ್ಗ ಇರುವವರೆಗೂ ಇದು ಹೀಗೆಯೇ ಮುಂದುವರಿಯುತ್ತದೆ.)

ಎಲ್ಲಾ ಚರ್ಚೆಗಳಾಚೆ ನಿಜಕ್ಕೂ ನಾವಿಲ್ಲಿ ಯೋಚಿಸಬೇಕಾಗಿರುವುದು ಅವರ ಮಾತಿನಲ್ಲಿ, ಕಾಳಜಿಯಲ್ಲಿ ಎಷ್ಟು ಹುರುಳಿದೆ ಅನ್ನುವುದರ ಬಗ್ಗೆ. ನಮ್ಮ ಗಂಡು ಮಕ್ಕಳನ್ನು ಅಡುಗೆ ಮನೆಯೊಳಗೆ ಬಿಟ್ಟರೆ ಯಾವುದೂ ಅರ್ಥವಾಗದ ಅಯೋಮಯ ಸ್ಥಿತಿಗೆ ಒಳಗಾಗುತ್ತಾರಾ? ಸ್ಟವ್ ಹೇಗೆ ಹೊತ್ತಿಸಬೇಕು, ಟೀ/ಕಾಫಿ ಹೇಗೆ ತಯಾರಿಸಬೇಕು ಅನ್ನುವಷ್ಟರ ಕನಿಷ್ಠಜ್ಞಾನವೂ ಅವರಿಗಿಲ್ವಾ? ನಮ್ಮ ಪೋಷಕರು ಅಡುಗೆ ಮನೆಯ ಎ,ಬಿ,ಸಿ,ಡಿಯೂ ಅರ್ಥವಾಗದಂತೆ ಗಂಡು ಮಕ್ಕಳನ್ನು ಬೆಳೆಸಿದ್ದಾರಾ? 

ಹೀಗೆಂದು ಪ್ರಶ್ನಿಸಿದರೆ, ಬಹುಶಃ ಉತ್ತರ 'ಹಾಗೇನಿಲ್ಲ' ಅನ್ನುವುದೇ ಆಗಿರುತ್ತದೆ. ಸುಮಾರು 10-15 ವರ್ಷಗಳಷ್ಟು ಹಿಂದಕ್ಕೆ ಹೋದರೆ ಟೀ/ಕಾಫಿ, ಅಡುಗೆ ಮಾಡಿಕೊಳ್ಳುವುದು ಬಿಡಿ, ಅಡುಗೆಮನೆಯೊಳಗೆ ಗಂಡಸರು ಪ್ರವೇಶಿಸುವುದೇ ಅವಮಾನ ಅಂದುಕೊಂಡಿದ್ದರು. 'ಉದ್ಯೋಗಂ ಪುರುಷ ಲಕ್ಷಣಂ' ಅನ್ನುವುದು ಶತಾಯಗತಾಯ ಜಾರಿಯಲ್ಲಿರಲೇಬೇಕು ಅಂತ ಬಯಸುತ್ತಿದ್ದ ಕಾಲಘಟ್ಟವದು. ಹೋಟೆಲ್, ಮದುವೆ ಮನೆ, ಛತ್ರ ಅಂತೆಲ್ಲಾ ರುಚಿರುಚಿಯಾಗಿ ಅಡುಗೆ ಮಾಡಿ ಬಡಿಸುತ್ತಿದ್ದ ಗಂಡಸರೂ ಮನೆಯಲ್ಲಿ ಒಂದು ಲೋಟ ಎತ್ತಿ ಆಚೀಚೆ ಇಡುತ್ತಿರಲಿಲ್ಲ. ಅಡುಗೆಮನೆಯ ಆಗುಹೋಗು, ಕಾರುಬಾರು, ಅನ್ನದ ಜೊತೆ ಜೊತೆಗೇ ಬೇಯುತ್ತಿದ್ದ ಅಡುಗೆ ಮನೆ ರಾಜಕಾರಣ, ಹೊಗೆಯಾಡುವ ಮತ್ಸರಗಳೆಲ್ಲಾ ಮಹಿಳೆಯರಿಗಷ್ಟೇ ಸೀಮಿತವಾಗಿತ್ತು. ಚೇತನ್ ಭಗತ್ ರ ಪೋಸ್ಟ್ ಆ ಕಾಲಕ್ಕೆ ಪ್ರತಿಶತ ನೂರರಷ್ಟು ಒಪ್ಪುತ್ತದೆ.

ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಹೆಣ್ಣು ದುಡಿಯಲೆಂದು ಹೊರಗೆ ಕಾಲಿಟ್ಟಕೂಡಲೇ ಮನೆಯ ಸಮೀಕರಣಗಳೆಲ್ಲಾ ಬದಲಾದವು. ಅಡುಗೆ ಮನೆಗೆ ಹೊಂದಿಕೊಳ್ಳುವ ನಿರ್ಬಂಧಕ್ಕೆ ಗಂಡಸರೂ ಒಳಗಾದರು. ಕಾಲದ ಬೇಡಿಕೆಯೋ ಅಥವಾ ಬದುಕಿನ ಅನಿವಾರ್ಯತೆಯೋ, ಒಟ್ಟಿನಲ್ಲಿ ಈ ಬದಲಾವಣೆಯನ್ನು ಸಮಾಜವೂ ಒಪ್ಪಿಕೊಂಡಿತು.

ವರ್ಷವಿಡೀ ನಡೆಯುತ್ತಿದ್ದ ಕೃಷಿ ಚಟುವಟಿಕೆಗಳು, ಅವಿಭಕ್ತ ಕುಟುಂಬದ ಒಗ್ಗಟ್ಟು, ಮನೆ ಪೂರ್ತಿ ತುಂಬಿಕೊಂಡಿರುತ್ತಿದ್ದ ಹೆಂಗಸರ ಕಲರವ, ತೋಟ-ಗದ್ದೆ ಅಂತ ಮಾತ್ರ ಸೀಮಿತವಾಗಿದ್ದ ಬದುಕು, ಊರ ತಂಟೆ-ತಕರಾರುಗಳು, ನ್ಯಾಯ ಪಂಚಾಯತಿಕೆಗಳು ಅಡುಗೆ ಮನೆಯ ಕಡೆ ತಲೆಹಾಕಲೂ ಅವಕಾಶ ಮಾಡಿಕೊಡುತ್ತಿರಲಿಲ್ಲ ಅನ್ನುವುದೂ ಸತ್ಯ. ಯಾವಾಗ ಮನೆ ಮಂದಿ ಬದುಕು ಅರಸಿಕೊಂಡು ಪಟ್ಟಣ ಸೇರಲಾರಂಭಿಸಿದರೋ, ಕೃಷಿ ಜೀವನೋಪಾಯ ಅಲ್ಲ ಅನಿಸಲಾರಂಭಿಸಿತೋ, ಅವಿಭಕ್ತ ಕುಟುಂಬಗಳು ಅಪರೂಪವಾಗತೊಡಗಿತೋ ಗಂಡಸರೂ ಸಣ್ಣ ಪುಟ್ಟದಾಗಿ ಅಡುಗೆ ಮಾಡುವುದನ್ನು ಕಲಿತುಕೊಂಡರು. ಅಥವಾ ಹೊರ ದೇಶದಲ್ಲಿ, ಹೊರ ಊರಿನಲ್ಲಿ ದುಡಿಯಬೇಕಾದ ಅನಿವಾರ್ಯತೆಯಿಂದಾಗಿ ಬದುಕು ಎಲ್ಲವನ್ನೂ ಕಲಿಸಿತು.

ಇನ್ನು ಗಂಡಸರು ಮನೆ ಒಪ್ಪವಾಗಿ ಇಡಲಾರರು ಅನ್ನುವವರು ಬ್ಯಾಚುಲರ್ ಗಳ ರೂಮನ್ನೊಮ್ಮೆ ನೋಡಬೇಕು. ಅಲ್ಲಲ್ಲಿ ರಾಶಿ ಬಿದ್ದಿರುವ ಒಗೆಯದ ಬಟ್ಟೆಗಳು, ಮೂಲೆಯಲ್ಲಿನ ರಾಶಿ ಕಸಗಳು, ಪ್ರಿಯಕರನನ್ನು ಭೇಟಿಯಾಗ ಬಂದವಳು ಅವನು ಸ್ನಾನ ಮುಗಿಸಿ ಬರುವಷ್ಟರಲ್ಲಿ ರೂಮ್ ಕ್ಲೀನ್ ಮಾಡಿರೋದು (ಆತ ಸ್ನಾನಕ್ಕೆ ಹೋದಾಗ ರೂಂ ಬಾಗಿಲು ತೆರೆಯುವುದ್ಯಾರೆಂದು ನಿರ್ದೇಶಕರಿಗಷ್ಟೇ ಗೊತ್ತು.) ನೋಡಿ ಅವನಿಗೆ ತಾಯಿಯ ನೆನಪಾಗಿ ಭಾವುಕನಾಗಿ ಅವಳನ್ನು ತಬ್ಬಿಕೊಳ್ಳೋದೆಲ್ಲಾ ಈಗ ಹಳೆ ಸಿನಿಮಾಗಳಲ್ಲಿ ಮಾತ್ರ ಕಾಣಸಿಗುವ ಸೀನ್.

ಈಗಿನ ಬ್ಯಾಚುಲರ್ ಗಳ ರೂಮಿನ ಗೋಡೆಯನ್ನು ಅಲಂಕರಿಸಿರುವ ತೈಲ ಚಿತ್ರ, ತನ್ನ ಮೆಚ್ವಿನ ನಟನದೋ, ನಟಿಯದೋ, ಆಟಗಾರನದೋ ಪಟ, ಒಂದು ಟೇಬಲ್, ಅದರ ಮೇಲೊಂದು ಚಂದನೆಯ ಲ್ಯಾಂಪ್, ಎಲ್ಲಕ್ಕೂ ಕಲಶವಿಟ್ಟಂತಿರುವ ಪೆನ್ ಸ್ಟಾಂಡ್, ಒಪ್ಪವಾಗಿ ಜೋಡಿಸಿರುವ ಅಡುಗೆ ಮನೆಯ ಸಾಮಾಗ್ರಿಗಳು ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ. ಅಲ್ಲಿಗೆ, ಗಂಡಸರಿಗೆ ಮನೆ ಚೆನ್ನಾಗಿಟ್ಟುಕೊಳ್ಳಲು ಬರುವುದಿಲ್ಲ ಅನ್ನುವ ವಾದವೂ ಬಿದ್ದುಹೋಗುತ್ತದೆ.

ಎಲ್ಲಾ ನಿಜ. ಆದರೆ ಈ ಎಲ್ಲಾ ಬದಲಾವಣೆಗಳು, ಪರಿವರ್ತನೆಗಳು ಮನಃಪೂರ್ವಕವಾಗಿ ಆಗಿರುವುದಾ? ಅಡುಗೆ ಮನೆ ಪ್ರವೇಶಿಸಿದ/ಸುವ ಗಂಡಸರು, ಮನೆಯ ಹೆಣ್ಣುಮಕ್ಕಳ ಕೆಲಸಗಳನ್ನು ತೀರಾ ಹಗುರವಾಗಿ ಪರಿಗಣಿಸುವುದು ನಿಂತು ಹೋಗಿದಾ? 'ಅವಳಾ ಬಿಡು ಮನೆಯಲ್ಲಿದ್ದಾಳೆ' ಅನ್ನುವ ತಾತ್ಸಾರ ಕೊನೆಯಾಗಿದಾ? ಗಳಿಕೆಯೊಂದೇ ಮಾಡುವ ಕೆಲಸದ ಮಾನದಂಡವಲ್ಲ ಅನ್ನುವ ಭಾವನೆ ಹುಟ್ಟಿದೆಯಾ? ಮನೆಯ ಗಂಡಸರು ಅಡುಗೆ ಮಾಡುವುದು ಅವಮಾನವಲ್ಲ, ಒಂದೊಳ್ಳೆಯ ಶಿಷ್ಟಾಚಾರ ಎಂಬ ಅರಿವು ಮೂಡಿದೆಯಾ? ಮನೆ ವಾರ್ತೆ ನೋಡಿಕೊಳ್ಳುವುದೂ ಒಂದು ಕ್ರಿಯೇಟಿವಿಟಿ ಅನ್ನುವುದನ್ನು ನಾವು ಒಪ್ಪಿಕೊಂಡಿದ್ದೇವಾ?

ಒಮ್ಮೆ ನಮ್ಮನ್ನೇ ಕೇಳಿಕೊಳ್ಳಬೇಕು.