ಭಾನುವಾರ, ಏಪ್ರಿಲ್ 24, 2016

ಕಾವ್ಯ ಸೃಷ್ಟಿ

ಏಕಕೋಶದಿಂದ ಬಹುಕೋಶ
ಸರೀಸೃಪ ಸಸ್ತನಿ
ಮಂಗನಿಂದ ಮಾನವ
ಡಾರ್ವಿನ್ ವಾದ ಮಕಾಡೆ ಮಲಗಿದೆ
ಕಾವ್ಯ ಸೃಷ್ಟಿಯ ಮುಂದೆ

ಆದಿಗೆ ನಿಯಮವಿಲ್ಲ
ಅಂತ್ಯಕ್ಕೂ ಷರತ್ತಿಲ್ಲ
ವಿಕಾಸಕ್ಕೆ ಕಟ್ಟುಪಾಡುಗಳೇ ಇಲ್ಲ
ಅಬ್ಬರದ ಭಾವದಲೆಗಳೊಂದೇ
ಕಾವ್ಯ ಸೃಷ್ಟಿಯ ಮೂಲಧಾತು

ಹೊಳೆವ ಚುಕ್ಕಿ, ಹರಿದ ದಳ
ನಿರಭ್ರ ಬೆಳಕು, ಕಾಳಿರುಳು
ಒಂದು ಸೊನ್ನೆ ಮತ್ತೊಂದು ಅನಂತ
ಮೋಟುಗೋಡೆಯ ಬಣ್ಣಗೇಡಿ ಚಿತ್ರ
ಎಲ್ಲಾ ಕಾವ್ಯ ಸೃಷ್ಟಿಯಲಿ ಮಣ್ಣು ಗಾರೆಗಳೇ

ತಡೆಯಿರದ ಮಾತು, ದೀರ್ಘ ಮೌನ
ಹುಳ ತಿಂದ ಎಲೆಯ ಅಂಚು
ಹರಿಯದ ನೀರಿನೊಳು ಕಟ್ಟಿದ ಪಾಚಿ
ಗೋಡೆ ಗೋಡೆಯ ನಡುವಿನ ಜೇಡನ ಬಲೆ
ಕಾವ್ಯ ಸೃಷ್ಟಿಯ ಕುಸುರಿಗಿಲ್ಲ ತಡೆ

ದೃಶ್ಯ ಅದೃಶ್ಯ, ಸ್ಮೃತಿ ವಿಸ್ಮೃತಿ
ಚಲ ನಿಶ್ಚಲ, ಬಿಂಬ ಪ್ರತಿಬಿಂಬ
ಆಕಾರ ನಿರಾಕಾರ, ಮೂರ್ತ ಅಮೂರ್ತ
ಜಗದ ಎಲ್ಲ ಸ್ಪರ್ಶ್ಯ ಅಸ್ಪರ್ಶ್ಯಗಳು
ಅಳಿದಮೇಲೂ ಉಳಿಯುವುದೊಂದೇ- ಕಾವ್ಯ

ಗುರುವಾರ, ಏಪ್ರಿಲ್ 7, 2016

ಆ ಸಂಬಂಧಕ್ಕೊಂದು ಗೌರವದ ತೆರೆಯೆಳೆದು ಮುಂದೆ ಸಾಗೋಣ.

ಬಹುಶಃ ಮನುಷ್ಯನ ಬದುಕಿನ ಕದನ, ಪ್ರತಿ ವೀರ್ಯಾಣು ಅಂಡಾಣುವನ್ನು ಸೇರಲು ನಡೆಸುವ ಸಮರದಿಂದಲೇ ಪ್ರಾರಂಭವಾಗುತ್ತದೆ. ಹಾಗಾಗಿಯೇ ಕೋಟ್ಯಾಂತರ ವೀರ್ಯಾಣುಗಳು ಗರ್ಭಕೋಶದ ಸುತ್ತ ಪರಸ್ಪರ ಯುದ್ಧ ಮಾಡುತ್ತಾ, ಗಮ್ಯ ಸೇರಿದ ಮೇಲೆ ಅಲ್ಲೂ ಒಂದಿಷ್ಟು ಹೋರಾಟ ನಡೆದ ಮೇಲೆ ಕೇವಲ ಒಂದು ಅಣುವಷ್ಟೆ ಅಂಡಾಣುವನ್ನು ಸೇರಿ ಭ್ರೂಣವಾಗುತ್ತದೆ. ಆ ಭ್ರೂಣ ವಿಕಸಿಸಿ, ತಾಯ ಗರ್ಭದಿಂದ ಗರ್ಭಚೀಲವನ್ನು ಒಡೆದು ಹೊರಬಂದಾಗಿನಿಂದಲೇ ಈ ಪ್ರಪಂಚದೊಂದಿಗಿನ ಮನುಷ್ಯನ ಸಂಬಂಧಕ್ಕೆ ಅಧಿಕೃತ ಚಾಲನೆ ದೊರಕಿಬಿಡುತ್ತದೆ. ಪ್ರತಿ ಮನುಷ್ಯನ ಹುಟ್ಟು ತನ್ನ ಜೊತೆ ಜೊತೆಗೆ ಸಂಬಂಧಗಳ ಹುಟ್ಟಿಗೂ ಕಾರಣವಾಗುತ್ತದೆ. ಸಂಬಂಧಗಳಿಲ್ಲದೆ ಮನುಷ್ಯನಿಗೆ ಸ್ವತಂತ್ರ ಅಸ್ತಿತ್ವವೇ ಇಲ್ಲವೇನೋ ಅನ್ನಿಸುವಷ್ಟರಮಟ್ಟಿಗೆ ಅವು ಅವನ ಜೀವನವನ್ನು ಪ್ರಭಾವಿಸುತ್ತವೆ.

ಹುಟ್ಟಿದ ತಕ್ಷಣ ಬೆಸೆಯುವ ಸಂಬಂಧಗಳಲ್ಲಿ ಆಯ್ಕೆಯ ಅವಕಾಶವಿರುವುದಿಲ್ಲ. ತಾಯಿಯೊಂದಿಗಿನ ಸಂಬಂಧ ಹುಟ್ಟಿಗಿಂತಲೂ ಮೊದಲೇ ಬೆಸೆದುಗೊಂಡಿದ್ದರೆ, ತಂದೆ, ಅಣ್ಣ, ಅಕ್ಕ, ಅಜ್ಜಿ, ಅಜ್ಜ... ಮುಂತಾದ ಸಂಬಂಧಗಳು ಮಗು ಇನ್ನೂ ಸರಿಯಾಗಿ ಕಣ್ಣು ಬಿಡುವ ಮುನ್ನವೇ, ಮುಷ್ಟಿ ಬಿಡಿಸಿಕೊಳ್ಳುವ ಮುನ್ನವೇ ಬೆಸೆದುಬಿಡುತ್ತವೆ. ಮುಂದೆ ಇವೇ ಸಂಬಂಧಗಳು, ಮತ್ತು ಅವು ನೀಡುವ ಸಂಸ್ಕಾರಗಳು ಆ ಮನುಷ್ಯನ ಸಮಾಜದ ಜೊತೆಗಿನ ಕೊಡುಕೊಳ್ಳುವಿಕೆಯನ್ನು, ನಡತೆಗಳನ್ನು ನಿರ್ಧರಿಸುತ್ತವೆ.

ಮನೆಯಾಚೆ ಕಾಲಿಡಲು ಕಲಿತಕೂಡಲೇ ಮಗು, ತನಗೆ ಹಿತವಾಗುವಂತೆ ತನ್ನದೇ ವಲಯಗಳೊಳಗೆ ತನ್ನಾಯ್ಕೆಯ ಸಂಬಂಧಗಳನ್ನು ಸೃಷ್ಟಿಸುತ್ತಾ ಸಾಗುತ್ತದೆ. ತಾನು ಬದುಕು ಕಟ್ಟಿಕೊಳ್ಳುವ ಪ್ರತಿ ಕ್ಷೇತ್ರದಲ್ಲಿಯೂ, ತನ್ನ ಬದುಕು ಹರಡಿಕೊಳ್ಳುವ ಪ್ರತಿ ಪರಿಸರದಲ್ಲೂ ಸಂಬಂಧಗಳಿಗೆ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಶಿಲನ್ಯಾಸ ನೆರವೇರಿಸುತ್ತಾ, ಇನ್ನು ಕೆಲವೊಮ್ಮೆ ತಾನು ಕಟ್ಟಿದ ಸಂಬಂಧವನ್ನು ತಾನೇ ಕೆಡವುತ್ತಾ ಮುಂದುವರಿಯುತ್ತಿರುತ್ತದೆ.

ಬದುಕು ವಿಸ್ತಾರವಾದಂತೆ, ಅವಶ್ಯಕತೆಗಳು ಬೆಳೆದಂತೆ, ಬೆಳಗಾಗೆದ್ದು ಮನೆ ಮುಂದೆ ಪೇಪರ್ ಹಾಕುವ ಹುಡುಗ, ಪಕ್ಕದ್ಮನೆ ಆಂಟಿ, ಎದುರು ಮನೆ ಅಂಕಲ್, ಒಟ್ಟಿಗೆ ಆಡಿ ಬೆಳೆದ ಗೆಳೆಯ, ತನ್ನ ಗಲ್ಲಿಯ ಮೂಲೆಯ ಮರದಡಿಯಲ್ಲಿ ಕೂತು ಹೂವು ಮಾರುವ ಹೆಣ್ಣುಮಗಳು, ದಿನಾ ಪ್ರಯಾಣ ಮಾಡುವ ಬಸ್ಸಿನ ಡ್ರೈವರ್, ಚಿಲ್ಲರೆಗಾಗಿ ಜಗಳ ಕಾಯುವ ಕಂಡಕ್ಟರ್, ಪ್ರತಿ ಚುನಾವಣೆ ಸಂದರ್ಭದಲ್ಲೂ ಹಲ್ಲು ಗಿಂಜುತ್ತ ವೋಟ್ ಕೇಳಲು ಬರುವ ರಾಜಕಾರಣಿ, ಅವನ ಒಂದಿಷ್ಟು ಹಿಂಬಾಲಕರು, ಅಂಕಗಣಿತದಿಂದ ಬದುಕಿನ ಗಣಿತದವರೆಗೂ ಕಲಿಸಿದ, ನಿರ್ದೇಶಿಸಿದ ಗುರುಗಳು, ಹೊಟ್ಟೆ ನೋವೆಂದಾಗ ಪುಟ್ಟ ಸರ್ಜರಿ ಮಾಡಿ ನೋವಿಂದ ರಿಲೀಫ್ ಒದಗಿಸಿಕೊಟ್ಟ ದಪ್ಪ ಕನ್ನಡಕದ ಡಾಕ್ಟರ್... ಹೀಗೆ ಸಂಬಂಧಗಳ ಪಟ್ಟಿ ಅಗಾಧವಾಗುತ್ತಾ ಹೋಗುತ್ತದೆ. ಮತ್ತು ಆ ಅಗಾಧತೆಯೇ ಎಣೆಯಿಲ್ಲದ ಸಹನೆ, ಒಂದಿಷ್ಟು ಪ್ರೀತಿ, ನಿಭಾಯಿಸಿಕೊಳ್ಳುವ ಜಾಣತನ ಎಲ್ಲವನ್ನೂ ಬೇಡತೊಡಗುತ್ತದೆ.

ಇನ್ನು, ಮನೆಯೊಳಗಿನ ಅಥವಾ ಮನೆಯಾಚಿಗಿನ ಅಷ್ಟೂ ಸಂಬಂಧಗಳು, ಅದರ ಸುತ್ತ ಹಬ್ಬಿಕೊಂಡಿರುವ ನವಿರು ಭಾವಗಳು, ಅದರಾಳದ ತಲ್ಲಣಗಳು, ಅವು ನೀಡುವ ಭರವಸೆಗಳು ಅಷ್ಟೇಕೆ ಪ್ರಪಂಚದ ಅಸ್ತಿತ್ವವೇ ನಿಂತಿರುವುದು ನಂಬಿಕೆಯೆಂಬ ತಿಳಿಯಾದ ಒರತೆಯ ಮೇಲೆ. ಒಮ್ಮೆ ಆ ತಿಳಿ ಒರತೆಗೆ ಒಂದೇ ಒಂದು ಹನಿ ಹಾಲಾಹಲ ಬಿದ್ದುಬಿಟ್ಟರೆ ಸಾಕು ಎಲ್ಲವೂ ಅಲ್ಲೋಲಕಲ್ಲೋಲವಾಗಿಬಿಡುತ್ತದೆ. ಹುಟ್ಟುತ್ತಲೇ ಜತೆಯಾದ ರಕ್ತ ಸಂಬಂಧಗಳು, ಏಳೇಳು ಜನ್ಮಗಳಲ್ಲೂ ಜೊತೆಯಿರುತ್ತೇವೆ ಅಂತ ಆಣೆ ಪ್ರಮಾಣ ಮಾಡಿಸಿಕೊಂಡ ಪ್ರೀತಿ, ಗಳಸ್ಯ ಕಂಠಸ್ಯ ಎಂಬಂತಿದ್ದ ಸ್ನೇಹ, ಪೇಪರ್ ಹುಡುಗನ ಜೊತೆಗಿನ ವ್ಯಾವಹಾರಿಕ ಸಂಬಂಧ ಎಲ್ಲವೂ ಆಕ್ಷಣದಲ್ಲಿ ಮುರಿದು ಬೀಳುತ್ತವೆ. ಹಲವು ಬಾರಿ ದೇಶ ದೇಶಗಳೊಳಗಿನ ದ್ವೇಷಕ್ಕೂ, ಮಹಾಯುದ್ಧಗಳಿಗೂ, ಅನಗತ್ಯದ ರಕ್ತಪಾತಗಳಿಗೂ ನಂಬಿಕೆ ದ್ರೋಹವೇ ಕಾರಣವಾಗಿರುವುದೂ ಇದೆ.

ಒಂದು  ಬಾರಿ, ಕೇವಲ ಒಂದು ಬಾರಿ ನಂಬಿಕೆ ದ್ರೋಹದ ಬೀಜ ಅಂಕುರವಾಗಿ ದ್ವೇಷ ಉದ್ಭವವಾದರೆ ಸಾಕು ಆವರೆಗಿನ ಎಲ್ಲಾ ಬಾಂಧವ್ಯಗಳು, ಮಧುರ ಸಾಂಗತ್ಯಗಳು ಆತ್ಮಹತ್ಯೆ ಮಾಡಿಕೊಂಡು ಬಿಡುತ್ತವೆ. ಆಗೆಲ್ಲಾ ನಾವೂ ಮನಸು ಕೆಡಿಸಿಕೊಂಡು, ನಮ್ಮ ಸುತ್ತಲಿರುವವರ ಮನಸೂ ಕೆಡಿಸುವುದಕ್ಕಿಂತ ಆ ದ್ರೋಹವನ್ನೂ ಮೀರಿ ಸಂಬಂಧ ಮುಂದುವರೆಸೋಕೆ ಸಾಧ್ಯಾನಾ? ಹಾಗೊಂದು ವೇಳೆ ಮುಂದುವರೆಸಿದರೆ ನಮ್ಮಿಂದ ಆ ಸಂಬಂಧ ನ್ಯಾಯ ಸಲ್ಲಿಸೋಕೆ ಸಾಧ್ಯಾನಾ? ಅಂತ ತಣ್ಣಗೆ ಯೋಚಿಸಿ ಸಂಬಂಧವನ್ನು ಉಳಿಸಿಕೊಳ್ಳೋಕೆ ಪ್ರಯತ್ನಿಸುವುದು ಜಾಣತನ. ಇಲ್ಲ, ಅದು ಸಾಧ್ಯವೇ ಇಲ್ಲ ಅಂತ ಪ್ರಾಮಾಣಿಕವಾಗಿ ಅನಿಸಿದರೆ  ಹಾದಿ ಬೀದಿ ರಂಪ ಮಾಡದೇ, ಶರಂಪರ ಜಗಳವಾಡದೇ, ಮೂರನೇಯವರ ಬಳಿ ತನಗಾದ ಮೋಸದ ಬಗ್ಗೆ ಅಳವತ್ತುಕೊಳ್ಳದೆ, ಆ ಸಂಬಂಧಕ್ಕೊಂದು ಗೌರವದ ತೆರೆಯೆಳೆದು ಮುಂದೆ ಸಾಗೋಣ. ಏನಂತೀರಿ?

ಕಾಡುವ ಪ್ರೇಮಕೆ ಕಾಡದ ಮರ

ಒಂದಿಷ್ಟು ಕಟ್ಟಿಗೆಯ ರಾಶಿ
ಹಾಕಿದ್ದೇನೆ ನೋಡು ಶಾಕುಂತಲೆ
ಶ್ರೀಗಂಧದ ತುಂಡುಗಳಲ್ಲ
ಅಡ್ಡಾದಿಡ್ಡಿ ಬೆಳೆದ
ಶುದ್ಧ ಕಾಡು ಮರಗಳು

ದಶದಿಕ್ಕುಗಳಿಗೂ ಚಂದನದ
ಪರಿಮಳ ಹೊಮ್ಮಬೇಕಿಲ್ಲ
ಯಾರ ನಾಸಿಕವೂ ಅರಳಬೇಕಿಲ್ಲ
ಒಂದು ವ್ಯರ್ಥ ಪ್ರೇಮಕಥೆಯ
ಸುಡಬೇಕಿದೆ ಅಷ್ಟೆ

ಮಾಡಿದ ಆಣೆ ಪ್ರಮಾಣ
ಇತ್ತ ಬೆಚ್ಚನೆಯ ಭರವಸೆಯ
ಮರೆತು ಹಾಯಾಗಿರುವವನ ಹಾದಿಯ
ಕಾಯುತ್ತಾ ಕೂತಿದ್ದಾಳೆ ಇಲ್ಲೊಬ್ಬ ಹುಡುಗಿ
ನದಿ ದಂಡೆಯ ಮೇಲೆ ಕಾಲು ಚಾಚಿ

ಮೀನ ಗರ್ಭ ಸೀಳಿ ಹೊಳೆವ
ಉಂಗುರ ಬಂದು ಅವಳೆದೆಯ
ಸಂಭ್ರಮಕ್ಕೆ ಜೊತೆಯಾಗುತ್ತದೆಂಬ
ನಿರೀಕ್ಷೆ ಇರಲೂಬಹುದೇನೋ
ಗೊತ್ತಿಲ್ಲ; ನನಗವಳ ಬದುಕು ಮುಖ್ಯ

ನಿನಗಾದರೂ ಪ್ರೀತಿಯ ಸಾಕ್ಷಿಗೆ
ರಾಜಮುದ್ರೆಯ ಉಂಗುರವಿತ್ತು ಶಾಕುಂತಲೆ
ಅವಳದೋ? ಸಾಕ್ಷಿಯಿಲ್ಲದ ಪ್ರೀತಿ
ಅರ್ಥವಿಲ್ಲದ ನಿರೀಕ್ಷೆ
ಸಾಬೀತುಪಡಿಸಲಾಗದ ಒಲವು

ನನಗೀಗ ತುರ್ತಾಗಿ ಅವಳ
ಬಹು ಅವಧಿಯ ಭ್ರಮೆಯನು ಒಡೆಯಬೇಕಿದೆ
ನಿನ್ನೆಗಳಲೇ ಹುದುಗಿರುವ ಅವಳನು
ಇಂದಿಗೆ ಎಳೆದು ತಂದು ನಿರ್ಮಲ
ನಾಳೆಗಳಿಗೆ ಮುಖಾಮುಖಿಯಾಗಲು ಸಜ್ಜಾಗಿಸಬೇಕಿದೆ

ಬುಧವಾರ, ಏಪ್ರಿಲ್ 6, 2016

ಹಾಸಿಗೆ ಇದ್ದಷ್ಟೇ ಏಕೆ ಕಾಲು ಚಾಚಬೇಕು?

'ಈ ಕೆಳಗಿನ ಗಾದೆ ಮಾತನ್ನು ವಿಸ್ತರಿಸಿ ಬರೆಯಿರಿ'.
ಹಾಗಂತ ಪ್ರಶ್ನೆ ಪತ್ರಿಕೆಯಲ್ಲಿ  ದಪ್ಪ ಅಕ್ಷರದಲ್ಲಿ ಅಚ್ಚಾಗಿ ಬಂದ ಪ್ರಶ್ನೆಗೆ ಎಲ್ಲಿಂದೆಲ್ಲಿಗೋ ಸಂಬಂಧ ಕಲ್ಪಿಸಿ ನಾವೆಲ್ಲಾ ಉತ್ತರ ಬರೆದವರೇ. ಊರ ಅರಳಿಕಟ್ಟೆಯಡಿಯಲ್ಲಿ ಅನುಭವಕ್ಕೆ ದಕ್ಕಿಯೋ, ಮಾತಿನ ಮಧ್ಯೆ ನುಸುಳಿಯೋ ಹುಟ್ಟಿದ ಗಾದೆ ಮಾತಿಗೆ ಅದೆಲ್ಲೋ ದೂರದ ಅಮೇರಿಕಾದ ಶ್ವೇತಭವನದಲ್ಲಿ ಕಾಲಮೇಲೆ ಕಾಲು ಹಾಕಿ ಕುಳಿತ ಬಿಲ್ ಕ್ಲಿಂಟನ್‍ನ್ನು ಲಿಂಕಿಸಿ, ಎರಡು ಸಮಾಂತರ ರೇಖೆಗಳನ್ನು ಶೂನ್ಯದಲ್ಲಿ ಛೇದಿಸಿ ಎರಡೂ ಒಂದೇ ಎಂದು ಸಾಧಿಸಿದವರು ಅಥವಾ ಪ್ರಶ್ನೆಪತ್ರಿಕೆಯ ಭಾಷೆಯಲ್ಲೇ ಹೇಳುವುದಾದರೆ ವಿಸ್ತರಿಸಿ ಬರೆದವರು ನಾವು.

'ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳ್' ಎಂದು ಆದಿಕವಿ ಪಂಪನಿಂದ ಹೊಗಳಿಸಿಕೊಂಡ ಒಂದು ಭವ್ಯತಲೆಮಾರಿನ ಹಿರೀಕರು ತಮ್ಮ ಅನುಭವದಿಂದ ಮಥಿಸಿ ತೆಗೆದ ನವನೀತಗಳೇ ಈ ಗಾದೆಗಳು. ಉದಾತ್ತ ಜೀವನ ಮೌಲ್ಯಗಳನ್ನು ಕೇವಲ ಒಂದು ಸಾಲಿನಲ್ಲಿ ಹೇಳಿಬಿಡುವ ಇವುಗಳು ಒಂದು ರೀತಿಯಲ್ಲಿ ನಮ್ಮ ಅತ್ಯುಚ್ಛ ಜನಪದ ಸಾಹಿತ್ಯಕ್ಕೆ, ಅದರ ಆಳದಲ್ಲಿನ ಸಾಂದ್ರ ಜೀವಾನನುಭವಕ್ಕೆ ಹಿಡಿಯುವ ಕೈಗನ್ನಡಿಗಳು.

ಇರಲಿ, ನಾನಿಲ್ಲಿ ಪ್ರಸ್ತಾಪಿಸಹೊರಟಿದ್ದ ಅಸಲಿ ವಿಷಯ ಅದಲ್ಲ. ನಿಜಕ್ಕೂ ನನ್ನ ತಕರಾರಿರುವುದೇ 'ಹಾಸಿಗೆ ಇದ್ದಷ್ಟೇ ಕಾಲು ಚಾಚು' ಅನ್ನುವ ಗಾದೆಯ ಬಗ್ಗೆ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಅಲ್ಪತೃಪ್ತರಾಗುವುದಕ್ಕಿಂತ ಕಾಲಿರುವಷ್ಟು ಅಥವಾ ಕಾಲನ್ನೂ ಮೀರಿ ಹಾಸಿಗೆ ಹೊಲಿಸಿಕೊಳ್ಳಬಹುದಲ್ಲಾ?

ಹಾಸಿಗೆಯ ಗಾದೆಗೆ ಜೋತು ಬಿದ್ದ ಪ್ರತಿ ಮನುಷ್ಯ ತನ್ನ ಸುತ್ತ ಒಂದು ಕೋಟೆ ಕಟ್ಟಿಕೊಂಡು ಆ ಕೋಟೆಯೊಳಗೆ ತನ್ನನ್ನು ತಾನು safe ಅಂದುಕೊಂಡು ಬದುಕುತ್ತಿರುತ್ತಾನೆ. ಕೋಟೆಯ ಹೊರಗಡೆ ಒಂದಿಂಚು ಕಾಲಿಟ್ಟರೂ ಎಲ್ಲಿ ತನ್ನ ಬದುಕಿನ ಆಯ ತಪ್ಪಿಬಿಡುತ್ತದೋ ಅನ್ನುವ ಭಯಕ್ಕೆ ಬಿದ್ದುಬಿಡುತ್ತಾನೆ. ಪರಿಣಾಮ, ತಾವು ಕಟ್ಟಿಕೊಂಡ ಕಂಫರ್ಟ್ ಝೋನ್‍‍ನೊಳಗೆ ತಮ್ಮನ್ನು ಬಂಧಿಸಿಕೊಂಡು 'ಸುಖೀ' ಅನ್ನುವ ಭ್ರಮೆಯನ್ನು ಪ್ರತಿದಿನ ನವೀಕರಿಸುತ್ತಲೇ ಹೋಗುತ್ತಾನೆ.

ದಿನಾ ಬೆಳಗಾದ್ರೆ, ಅದೇ ಸ್ನಾನ, ಅದೇ ತಿಂಡಿ, ಅದೇ ಸಿಟಿ ಬಸ್, ಅದೇ ಧಾವಂತ, ಅದೇ ಆಫೀಸ್, ಮತ್ತೆ ಮಧ್ಯಾಹ್ನದ ಊಟ, ಒಂದಿಷ್ಟು ಹೊತ್ತು ವಿರಾಮ, ಮತ್ತೆ ಕಂಪ್ಯೂಟರ್, ಸಂಜೆಗೆ ಮತ್ತದೇ ಸಿಟಿ ಬಸ್, ಕಂಡಕ್ಟರ್ ಜೊತೆಗಿನ ವೃಥಾ ಜಗಳ, ಟೀ, ರಾತ್ರಿಯೂಟ, ಮತ್ತೆ ಬೆಳಗು, ಕೆಲವು ಅಲ್ಪತನಗಳು... ಹೀಗೆ ಬದುಕಿನ ಹಲವು ಅಮೂಲ್ಯ, ಮತ್ತೊಮ್ಮೆ ಹಿಂದಿರುಗಿ ಬರಲಾರದ ದಿನಗಳು ಅದೇ ಹಾಸಿಗೆಯಲ್ಲಿ ಕಾಲು ಚಾಚೋಕಾಗದೆ ಮುದುರಿಕೊಂಡು ಮಲಗಿಬಿಡುತ್ತವೆ. ಅಲ್ಲಿ ಹೊಸತನಕ್ಕೆ, ಹೊಸ ಅನುಭವಗಳಿಗೆ, ಹೊಸ ಸಂವೇದನೆಗಳಿಗೆ ಜಾಗವೇ ಇರುವುದಿಲ್ಲ.

ನೀವು ಗಮನಿಸಿರಲೂಬಹುದು, ಕೆಲವರು ಇನ್ನೂ ಮೂವತ್ತೈದು ದಾಟುವ ಮುನ್ನವೇ 'ಬದುಕು ಬೋರ್ ಕಣ್ರೀ' ಅಂತ ಗೊಣಗುತ್ತಿರುತ್ತಾರೆ. ನೀವೇನಾದ್ರೂ 'ಹೊಸತನ್ನು ಪ್ರಯತ್ನಿಸಿ' ಅಂತ ಸಲಹೆ ಕೊಡೋಕೆ ಹೋದ್ರೆ ನಿಮ್ಮ ಮುಖಕ್ಕೆ ರಾಚುವಂತೆ 'ನಾನು ನೆಮ್ಮದಿಯಾಗಿದ್ದೇನೆ, ಬಿಡಿ' ಅಂತಂದು ದೂರ್ವಾಸ ಮುನಿಯ ದೂರದ ಸಂಬಂಧಿಯೇನೋ ಎಂಬಂತೆ ಎದ್ದುಹೋಗುತ್ತಾರೆ. ಅಸಲಿಗೆ ಹಾಸಿಗೆ ಇದ್ದಷ್ಟೇ ಕಾಲುಚಾಚುವವರ ಕೆಟಗರಿಯ ಮೊದಲ ಸಾಲಲ್ಲಿ ಇರುವವರೇ ಅವರು.

ನಿಜ, ಬದುಕಲ್ಲಿ ಅನಗತ್ಯದ ಅಪಾಯ ಮೇಲೆಳೆದುಕೊಳ್ಳಬಾರದು. ಒಂದು ಪುಟ್ಟ ಬೆಟ್ಟ ಹತ್ತಲಾಗದವರು ಎವರೆಸ್ಟ್ ಏರುತ್ತೇನೆಂದು ಹೊರಡುವುದು, ಅಥವಾ ಆಪದ್ಧನವೆಂದು ಕೂಡಿಟ್ಟ ಬ್ಯಾಂಕ್ ಬ್ಯಾಲೆನ್ಸನ್ನು ಸುರಿದು ಒಂದು ಅಸಂಬದ್ಧ ಸಿನಿಮಾ ನಿರ್ಮಿಸುವುದು, ಇನ್ನೂ ಕಾಲೇಜು ಮಟ್ಟದಲ್ಲಿ ಆಡುತ್ತಿರುವ ಹುಡುಗ ಇನ್ನೆರಡೇ ದಿನಗಳಲ್ಲಿ ರಾಷ್ಟ್ರೀಯ ತಂಡ ಸೇರಿ ಸೆಂಚುರಿ ಬಾರಿಸುತ್ತೇನೆ ಅಂತಂದುಕೊಳ್ಳುವುದು, ಕೈಕಾಲು ನಡುಗೋ ವಯಸ್ಸಲ್ಲಿ ಹೊಸದಾಗಿ ಗಿಟಾರ್ ಕಲಿಯೋಕೆ ಹೋಗಿ ಒಂದೇ ದಿನದಲ್ಲಿ ರಾಕ್ ಸ್ಟಾರ್ ಆಗುತ್ತೇನೆ ಅಂದುಕೊಳ್ಳುವುದು ಎಲ್ಲಾ ಅವಿವೇಕ ಮತ್ತು ಮೂರ್ಖತನಗಳೇ. ಆದರೆ calculated risk ತೆಗೆದುಕೊಳ್ಳುವಲ್ಲೂ, ತೀರಾ ಸಾಮಾನ್ಯ ಅನ್ನುವಂತಹ ಅಪಾಯಗಳನ್ನು ಕೈಗೆತ್ತಿಕೊಳ್ಳುವಲ್ಲೂ ಹಾಸಿಗೆಯ ಉದ್ದ, ಅಗಲ ಅಳೆಯುವುದು ಎಷ್ಟು ಸರಿ?

ಒಂದಂತೂ ನಿಜ, ಹೊಸ ಅನುಭವದ ಜ್ಞಾತ-ಅಜ್ಞಾತ ಮಗ್ಗುಲುಗಳನ್ನು, ಸ್ಪಷ್ಟ-ಅಸ್ಪಷ್ಟ ಅರಿವುಗಳನ್ನು, ಸುಪ್ತ-ಜಾಗೃತ ಪದರುಗಳನ್ನು, ಕೂಡಿಕೊಂಡ-ಕವಲೊಡೆದ ದಾರಿಗಳನ್ನು, ಆರೋಹಣ-ಅವರೋಹಣಗಳ ವಿವಿಧ ಮುಖಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಹಾಸಿಗೆ ಮೀರಿ ಕಾಲುಚಾಚಲೇ ಬೇಕು. ಹಾಗೆ ಚಾಚಿದಾಗೆಲ್ಲಾ, ಮಹಾ ಎಂದರೆ ಒಂದಿಷ್ಟು ಬಿಸಿ ಅಥವಾ ತಣ್ಣನೆಯ ಅನುಭವವಾಗಬಹುದು ಅಷ್ಟೇ. ಅದೂ ಆಗಿ ಬಿಡಲಿ, ಯಾಕೆಂದರೆ ಬದುಕು ಪಕ್ವವಾಗುವುದು ಅಂತಹ ಅನುಭವಗಳಿಂದಲೇ. ಅಲ್ಲವೇ?

ಸೋಮವಾರ, ಏಪ್ರಿಲ್ 4, 2016

ಬದುಕು ಕಟ್ಟಿಕೊಟ್ಟ ಅವಳನ್ನು ಅವನೇಕೆ ದೂರ ಸರಿಸಿದ?

ಬಹುಶಃ ನಾವೆಲ್ಲರೂ ಸಿಂಡ್ರೆಲ್ಲಾ ಕಥೆ ಓದಿ/ಕೇಳಿ, ಅವಳಿಗಾಗಿ ಮರುಗುತ್ತಾ, ಅವಳ ಚಿಕ್ಕಮ್ಮನನ್ನು ನಖಶಿಖಾಂತ ದ್ವೇಷಿಸುತ್ತಾ ಬೆಳೆದವರೇ. ಮಲತಾಯಿಯೆಂದರೆ ಹೆಣ್ಣಿನ ರೂಪದ ರಾಕ್ಷಸಿ ಮತ್ತು ಒಳ್ಳೆಯತನಕ್ಕೆ ಕೊನೆಗಾದರೂ ಜಯ ಇದ್ದೇ ಇರುತ್ತದೆ ಅನ್ನುವ ಕಲ್ಪನೆ ಮೊಳಕೆಯೂಡೆಯಲು ಕಾರಣ ಸಿಂಡ್ರೆಲ್ಲಾ ಮತ್ತು ಅಂತಹ  happy ending fairy taleಗಳೇ. ಆದ್ರೆ ನಾನಿಲ್ಲಿ ನಿಮಗೆ ಹೇಳಹೊರಟಿರುವುದು ಸಿಂಡ್ರೆಲ್ಲಾ ಕಥೆಗೆ ತೀರಾ ವ್ಯತಿರಿಕ್ತವಾದ ಕಥೆ.

ನಮ್ಮೂರಿನ ಪಕ್ಕದ ಊರಿದೆಯಲ್ವಾ, ಅದರ ಪಕ್ಕದ ಊರಲ್ಲಿ ಜಾತಿಗಳ ಹಂಗಿಲ್ಲದೆ, ಅಂಧ ಧರ್ಮಾಭಿಮಾನವಿಲ್ಲದೆ, ಕೇವಲ ಮನುಷ್ಯತ್ವವನ್ನು ಮಾತ್ರ ಆದರಿಸುವ ಒಬ್ಬ ಅಪ್ಪಟ ಕರಾವಳಿ ಮಣ್ಣಿನ ಮಗನಿದ್ದಾರೆ. ಅವರ ಮನೆಯ ನಾಲ್ಕೂ ಸುತ್ತಲೂ ಭತ್ತದ ಗದ್ದೆ, ಗದ್ದೆಯ ಮಧ್ಯದಲ್ಲೊಂದು ಕೆರೆ, ತುಸು ಹಿಂದಕ್ಕೆ ಬಂದರೆ ಮನೆ ಹಿತ್ತಲಿಗೆ ಅಂಟಿಕೊಂಡಂತೆ ಕೊಟ್ಟಿಗೆ, ಅಲ್ಲಿ ಸಹಬಾಳ್ವೆ ನಡೆಸುವ ಆಡುಗಳು ಮತ್ತು ದನಗಳು, ಅದರ ಹೊರಗೆ ಗೂಟಕ್ಕೆ ಕಟ್ಟಿರುವ ಕಪ್ಪು ನಾಯಿ... ಆ ಮನೆಯಲ್ಲೊಬ್ಬ ಹಾಲುಮನಸ್ಸಿನ ಬೊಗಸೆ ಕಂಗಳ ಮುದ್ದು ರಾಜಕುಮಾರಿ. ಮನೆಯ ಅಟ್ಟದಲ್ಲಿಟ್ಟ ಭತ್ತದ ಮೂಟೆಗಳನ್ನು ಇಲಿಗಳು ತಿಂದು ಹಾಳುಮಾಡುತ್ತವೆ ಎಂದು ಅವಳಪ್ಪ ಇಲಿ ಬೋಣು ತಂದಿಟ್ರೆ ಮೂತಿ ಉದ್ದ ಮಾಡ್ಕೊಂಡು ಉಪವಾಸ ಸತ್ಯಾಗ್ರಹ ಮಾಡುವಷ್ಟು ಮುಗ್ಧೆ ಆಕೆ. ಇಲಿ ಬೋಣಿಂದ ನಿಂಗೇನಮ್ಮ ಕಷ್ಟ ಅಂತ ಕೇಳಿದ್ರೆ, ಆ ಬೋಣಲ್ಲೇನಾದ್ರೂ ಅಮ್ಮ ಇಲಿ ಸಿಕ್ಕಿಹಾಕಿಕೊಂಡು ಸತ್ತುಹೋದ್ರೆ ಮರಿ ಇಲಿಗಳೆಲ್ಲಾ ಅನಾಥವಾಗಿಬಿಡುತ್ತಲ್ಲಾ ಅನ್ನುತ್ತಿದ್ದಳವಳು.

ಹೀಗಿದ್ದ ನಮ್ಮ ರಾಜಕುಮಾರಿ ಇನ್ನೂ ಪದವಿ ಓದ್ತಿರ್‍ಬೇಕಾದ್ರೆ ದಸರೆ ರಜೆಗೆಂದು ಮೈಸೂರಲ್ಲಿದ್ದ ಗೆಳತಿ ಮನೆಗೆ ಹೋದ್ಳು. ಅಲ್ಲಿ ದಸರೆ ನೋಡಿದ್ಳೋ, ಬಿಟ್ಳೋ ಗೊತ್ತಿಲ್ಲ. ಆದ್ರೆ ಪಕ್ಕದ ಮನೆಯಲ್ಲಿದ್ದ ಹತ್ತು ವರ್ಷದ ತಾಯಿಯಿಲ್ಲದ ಮಗು ಅವಿನಾಶನನ್ನು ವಿಪರೀತ ಅನ್ನುವಷ್ಟು ಹಚ್ಚಿಕೊಂಡುಬಿಟ್ಳು.

ಅಲ್ಲಿಂದ ಊರಿಗೆ ಬಂದವ್ಳೇ, ತಾನು ಮದುವೆ ಅಂತ ಆಗುವುದಾದರೆ ಅವನಪ್ಪನನ್ನು ಮಾತ್ರ ಅಂತ ತನ್ನ ತೀರ್ಮಾನ ಹೇಳ್ಬಿಟ್ಳು. ಅಪ್ಪ-ಅಮ್ಮ ಅವಳನ್ನು ಎಷ್ಟೇ ಕೇಳಿಕೊಂಡರೂ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂತ ಖಡಾಖಂಡಿತವಾಗಿ ನಿಂತಳು. ಎಂದೂ ಬಯ್ಯದ ಅಪ್ಪ ಎರಡೇಟು ಹೊಡೆದು ಬುದ್ಧಿ ಹೇಳೋಕೆ ಪ್ರಯತ್ನಿಸಿದ್ರು, ಅಮ್ಮ ಕಣ್ಣೇರು ಹಾಕುತ್ತಾ ಮೂಲೆ ಸೇರಿದ್ರು. ಕೊನೆಗೆ ಅವಳ ಮೈಸೂರಿನ ಗೆಳತಿಯನ್ನು ಕರೆಸಿ ಬುದ್ಧಿ ಹೇಳಿಸಿದ್ದೂ ಆಯಿತು. ಊಹೂಂ, ಅವಳು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇರಲೇ ಇಲ್ಲ.

ನೀನೇನೇ ತಿಪ್ಪರಲಾಗ ಹಾಕಿದ್ರೂ ಈ ಮದುವೆಯನ್ನು ಒಪ್ಪಿಕೊಳ್ಳೋಕೆ ಸಾಧ್ಯಾನೇ ಇಲ್ಲ ಅಂತ ಅಪ್ಪನೂ ಖಡಾಖಂಡಿತವಾಗಿ ನಿಂತ್ರು. ನಮ್ಮ ರಾಜಕುಮಾರಿ ಆದರ್ಶದ ಅಮಲಲ್ಲೋ ಅಥವಾ ಆ ಮಗುವಿನ ಮೇಲಿನ ಅವಳ ಸಹಜ ಅಂತಃಕರಣದಿಂದಲೋ ಹೇಳದೆ ಕೇಳದೆ ಒಂದು ರಾತ್ರಿ ಮನೆಬಿಟ್ಟು ಹೊರಟು ಹೋದಳು. ಹದಿನಾರಂಕದ ಆ ಮನೆಯ ಪೂರ್ತಿ ಸ್ಮಶಾನ ಮೌನ, ಆಗೊಮ್ಮೆ ಈಗೊಮ್ಮೆ ಬಿಕ್ಕಳಿಸುವ ಶಬ್ಧವೊಂದನ್ನು ಬಿಟ್ಟರೆ ಅಲ್ಲಿ ಇನ್ನಾವ ಸದ್ದಿಗೂ ಜಾಗವೇ ಇರ್ಲಿಲ್ಲ. ತನ್ನ ಒಡತಿಯ ವಿದಾಯವನ್ನು ಸಹಿಸಲಾರದ ಆಡು, ದನಗಳೂ ’ಅಂಬಾ’ ಅನ್ನುವುದನ್ನೇ ಮರೆತುಬಿಟ್ಟವು.

ಆಯ್ತಲ್ಲಾ, ಮನೆ ಬಿಟ್ಟು ಹೋದ್ಳು ಅಂದ್ನಲ್ಲಾ, ಹಾಗೆ ಹೋದವಳು ತನ್ನ ಗೆಳತಿಯ ಮನೆಗೂ ಹೋಗದೆ, ಅವಿನಾಶನ ಮನೆಗೇ ಹೊಗಿ, ಅವನಪ್ಪನ ಬಳಿ "ನೋಡಿ, ನಾನು ಮನೆಬಿಟ್ಟು ಬಂದಿದ್ದೇನೆ, ನಾಳೆ ಬೆಳಗ್ಗೆ ಎಲ್ಲಾದರೂ ಸರಿ ನಮ್ಮ ಮದುವೆ ಆಗ್ಲೇಬೇಕು" ಅಂದಳು. ಅವರಿಗೆ ನಿಜಕ್ಕೂ ಇವಳ ಮದುವೆಯಾಗುವ ಮನಸ್ಸಿತ್ತೋ ಇಲ್ವೋ ಗೊತ್ತಿಲ್ಲ, ಮರುದಿನ ಬೆಳಗ್ಗೆ ಆಗುತ್ತಿದ್ದಂತೆ ದೇವಸ್ಥಾನವೊಂದರಲ್ಲಿ ಹಾರ ಬದಲಾಯಿಸಿಕೊಂಡರು. ಅಲ್ಲಿಗೆ ವಿದ್ಯುಕ್ತವಾಗಿ ಆಕೆ ಅವಿನಾಶನ ತಾಯಿಯಾಗಿಬಿಟ್ಳು, ಅಂದರೆ ನಮ್ಮ ಸಿಂಡ್ರೆಲ್ಲಾ ಕಥೆಯಲ್ಲಿರುವಂತೆ ಚಿಕ್ಕಮ್ಮನಾದಳು.

ಆದ್ರೆ ಸಿಂಡ್ರೆಲ್ಲಾಳ ಚಿಕ್ಕಮ್ಮನಂತೆ ಮಲತಾಯಿಯಾಗದೆ, ಮಮತಾಮಯಿಯಾದಳು. ಮದುವೆಯ ಮೊದಲ ರಾತ್ರಿಯೇ ಗಂಡನ ಬಳಿ ’ ಅವಿನಾಶ ತಾನೇ ತಾನಾಗಿ ತಮ್ಮನೋ/ತಂಗಿಯೋ ಬೇಕು ಅನ್ನುವವವರೆಗೂ ನಮಗೆ ಮಕ್ಕಳಾಗೋದೇ ಬೇಡ’ ಅಂದ್ಳು. ಅವರೂ ಒಪ್ಪಿಕೊಂಡರು. ಆದ್ರೆ ಯಾವುದೂ ಅಲ್ಲಿ ಅವಳಂದುಕೊಂಡಂತೆ ಇರಲಿಲ್ಲ. ತನ್ನ ತಾಯಿಯ ಸ್ಥಾನದಲ್ಲಿ ಇನ್ಯಾರೋ ಬಂದಿರುವುದನ್ನು ಸಹಿಸಿಕೊಳ್ಳಲು ಅವಿನಾಶ ಸಿದ್ಧನಿರಲಿಲ್ಲ. ಮೊದಮೊದಲು ಅವಳ ಜೊತೆ ಜಗಳವಾಡಲು ಪ್ರಯತ್ನಿಸುತ್ತಾ, ಅಸಹಕಾರ ಚಳವಳಿ ಮಾಡಿ, ತಂದೆಯ ಬಳಿ ಅವಳ ದೂರು ಹೇಳಿ ಮನೆಯಿಂದ ಓಡಿಸಲು ಪ್ರಯತ್ನಪಟ್ಟ. ಅದ್ಯಾವುದೂ ಫಲಕಾರಿಯಾಗಲಿಲ್ಲ ಅಂತಾದಮೇಲೆ ಒಂದುದಿನ ಮೈ ಪೂರ್ತಿ ಬಾಸುಂಡೆ ಬರುವ ಹಾಗೆ ತಾನೇ ಅಪ್ಪನ ಬೆಲ್ಟಲ್ಲಿ ಹೊಡೆದುಕೊಂಡು, ಅಪ್ಪ ಬಂದಾಗ ಇದೆಲ್ಲಾ ಅಮ್ಮನೇ ಮಾಡಿದ್ದು ಅಂತ ಕಣ್ಣೀರಿಟ್ಟ.

ಅವನ ಕಣ್ಣೀರಿಗೆ ಕರಗಿದ ಅಪ್ಪ, ಹಿಂದು ಮುಂದು ಯೋಚಿಸದೆ, ಅವಳನ್ನು ಚೆನ್ನಾಗಿ ದಬಾಯಿಸಿಬಿಟ್ಟ. ಅಷ್ಟೂ ಸಾಲದೆಂಬಂತೆ ಎರಡೇಟು ಹೊಡೆದೂಬಿಟ್ಟ. ಇನ್ನೇನು ಚಿಕ್ಕಮ್ಮ ಇದೆಲ್ಲಾ ನಾನೇ ಮಾಡಿದ್ದು ಅಂತ ಅಂದುಬಿಡುತ್ತಾಳೇನೋ ಅಂತ ಭಯಪಡುತ್ತಿರಬೇಕಾದರೆ ನಮ್ಮ ರಾಜಕುಮಾರಿ ಮನೆಬಿಟ್ಟು ಬಂದನಂತರ ಮೊದಲಸಲ ಅಪ್ಪ ಅಮ್ಮನನ್ನು ನೆನೆಸಿಕೊಂಡಳು. ಅದೆಷ್ಟು ಮುದ್ದಿನಿಂದ, ಪ್ರೀತಿಯಿಂದ ನನ್ನ ಬೆಳೆಸಿದ್ದರಲ್ಲಾ ಅಂದುಕೊಂಡಳು. ಅಪ್ಪ-ಅಮ್ಮನ ಪ್ರೀತಿ, ಮಮತೆ ವಾತ್ಸಲ್ಯ ನೆನಪಾಗುತ್ತಲೆ ಅವಿನಾಶನ ಬಗೆಗೆ ಅವಳಿಗಿದ್ದ ಪ್ರೀತಿ ಮತ್ತಷ್ಟು ಸಾಂದ್ರವಾಯಿತು. ಗಂಡ ಬಯ್ಯುತ್ತಿದ್ದರೂ ಅವಳು ಎಲ್ಲವನ್ನೂ ತುಟಿಕಚ್ಚಿ ಸಹಿಸಿಕೊಂಡಳು.

ಆ ರಾತ್ರಿ ಮೊದಲ ಬಾರಿ ಅವಳ ಬಗ್ಗೆ ಅವಿನಾಶನಿಗೆ ಕನಿಕರ ಮೂಡಿತು. ತಾನು ಅಂದುಕೊಂಡಷ್ಟು ಆಕೆ ಕೆಟ್ಟವಳಲ್ಲ ಅನಿಸತೊಡಗಿತು. ದಿನ ಕಳೆದಂತೆ ಅವನ ಹಠ, ಕೋಪ, ಸಿಟ್ಟು, ಸೆಡವು ಕಡಿಮೆಯಾಗುತ್ತಾ ಬಂತು. ಒಂದಿನ ಪೂರ್ತಿಯಾಗಿ ಅವನು ಅವಳನ್ನು ಅಮ್ಮನೆಂದು ಒಪ್ಪಿಕೊಂಡ. ತಾನು ಇದುವರೆಗೆ ಮಾಡಿದ ತಪ್ಪುಗಳನ್ನೆಲ್ಲಾ ಅವನೆದೇ ಭಾಷೆಯಲ್ಲಿ ಅಪ್ಪನೆದುರು ಒಪ್ಪಿಕೊಂಡು ಕ್ಷಮೆ ಕೇಳಿದ. ಅವಳ ಕಣ್ಣಂಚಲ್ಲಿ ತೆಳುವಾಗಿ ನೀರು ಹರಡಿಕೊಂಡು ಸಾರ್ಥಕಭಾವ ಸೆರೆಯಾಗತೊಡಗಿತು, ಇತ್ತ ಊರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರು ಹಗ್ಗ ಬಿಚ್ಚಿಸಿಕೊಂಡು ಅಮ್ಮನ ಕೆಚ್ಚಲಿಗೆ ಬಾಯಿಹಾಕಿತು.

ಇಷ್ಟಾಗುವಾಗಾಗಲೇ ಅವಳ ಅಪ್ಪ ಅಮ್ಮನಿಗೂ ಅವಳ ಮೇಲಿದ್ದ ಕೋಪ ಕರಗಿ ಅವಳನ್ನು ಯಾವಾಗೊಮ್ಮೆ ಕಾಣುತ್ತೇವೆಯೋ ಅನಿಸತೊಡಗಿತ್ತು. ಮಗ ತನ್ನನ್ನು ಅಮ್ಮನೆಂದು ಒಪ್ಪಿಕೊಂಡಮೇಲೆ ಇವಳಿಗೂ ಅಪ್ಪ-ಅಮ್ಮ, ಅವರ ಪ್ರೀತಿ, ತಾನು ಅವರಿಗೆ ಕೊಟ್ಟ ನೊವು ಬಹುವಾಗಿ ಕಾಡತೊಡಗಿತು. ಅಪರಾಧಿ ಪ್ರಜ್ಞೆ ಅವಳೊಳಗೆ ಬೆಳೆಯತೊಡಗಿದಂತೆ ಗಂಡನನ್ನೂ, ಮಗನನ್ನು ಕರೆದುಕೊಂಡು ಮತ್ತೆ ಊರಿಗೆ ಬಂದು ಅಪ್ಪನ ಮುಂದೆ ತಲೆ ಬಗ್ಗಿಸಿ ನಿಂತಳು. ಮೊದಮೊದಲು ಅಪ್ಪ ಬಿಗುಮಾನ ತೋರಿದರೂ, ಇಲ್ಲದ ಕೋಪವನ್ನು ಪ್ರದರ್ಶಿಸಿದರೂ, ಅವಳು ಬಂದು ಇನ್ನೂ ಪೂರ್ತಿ ಇಪ್ಪತ್ತನಾಲ್ಕು ತಾಸು ಕಳೆಯುವ ಮುನ್ನವೇ ಅವಳನ್ನು ಮತ್ತೆ ಒಪ್ಪಿಕೊಂಡರು. ಆಕೆ ತುಸು ಪ್ರೌಢವಾಗಿದ್ದಳು ಅನ್ನುವುದನ್ನು ಬಿಟ್ಟರೆ ಇನ್ನಾವ ಮಹತ್ತರ ಬದಲಾವಣೆಯೂ ಅವಳಲ್ಲಿ ಆಗಿರಲೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವಳ ಮುಗ್ಧತೆಯಿನ್ನೂ ಉಳಿದುಕೊಂಡಿತ್ತು.

ಅಪ್ಪ-ಅಮ್ಮನೂ ಒಪ್ಪಿಕೊಂಡಮೇಲೆ ಇನ್ನಾವ ನೋವೂ ಉಳಿದಿಲ್ಲ ಎಂಬಂತೆ ಅವಳು ತವರೂರಿನ ಇಂಚು ಇಂಚನ್ನೂ ಮಗನಿಗೆ ಪರಿಚಯಿಸಿದಳು, ಗೆಳತಿಯರ ಬಳಿ ಮೈಸೂರಿನ ಬಗ್ಗೆ ತುಸು ಹೆಚ್ಚೇ ಅನ್ನುವಷ್ಟು ಹೇಳಿಕೊಂಡಳು, ತಾನು ಕೈಯಾರೆ ಹುಲ್ಲು ತಿನ್ನಿಸುತ್ತಿದ್ದ ಆಡಿನ ಮರಿ ಅದೆಷ್ಟು ಬೇಗ ಬೆಳೆದು ದೊಡ್ಡದಾಗಿದೆಯಲ್ಲಾ ಎಂದು ಅಚ್ವರಿಪಟ್ಟಳು, ಮನೆಬಿಟ್ಟು ಹೋಗುವಾಗ ಇನ್ನೂ ಕಣ್ಣುಬಿಟ್ಟಿಲ್ಲದ ಕರುವಿಗೆ ಅದೆಷ್ಟು ಉದ್ದದ ಕೊಂಬು ಬೆಳೆದುಬಿಟ್ಟಿದೆಯಲ್ಲಾ ಎಂದು ಮುಟ್ಟಿ ಮುಟ್ಟಿ ನೋಡಿಕೊಂಡಳು, ಇಷ್ಟು ತಿಂಗಳುಗಳು ಕಳೆದರೂ ಮನೆಯ ನಾಯಿಗೆ ನನ್ನ ಪರಿಚಯ ಮರೆತು ಹೋಗಿಲ್ಲವಲ್ಲಾ ಎಂದು ಸಂತಸ ಪಟ್ಟಳು, ಬಾಗಿದ ಪೈರಿನ ಮಧ್ಯೆ ತಾನೂ ಓಡಿ, ಮಗನನ್ನೂ ಓಡಿಸಿ ದಣಿದಳು, ತಿಳಿನೀರ ಕೊಳದಲ್ಲಿ ಕಾಲು ಇಳಿಬಿಟ್ಟು ಮೀನುಗಳಿಂದ ಕಚ್ಚಿಸಿಕೊಂಡಳು. ಕೊನೆಗೊಂದು ದಿನ ಅಪ್ಪ ಅಮ್ಮನಿಗೆ ವಿದಾಯ ಹೇಳಿ ಮತ್ತೆ ಮೈಸೂರ ಬಸ್ ಹತ್ತಿ, ಕಣ್ಣು ಒರೆಸಿಕೊಳ್ಳುತ್ತಲೇ ಹುಟ್ಟಿದೂರಿಗೆ 'ಬಾಯ್' ಅಂದು ಕಿಟಕಿ ಪಕ್ಕದ ಸೀಟಿಗೆ ಒರಗಿ ಕೂತಳು. ಆ ಹದಿನಾರಂಕದ ಮನೆಯಲ್ಲಿ ಮತ್ತೆ ಸಂಭ್ರಮ, ನಗು ಮೊದಲಿಟ್ಟಿತು.

ಇಷ್ಟೇನಾ...? ಅನ್ನುತ್ತಿದ್ದೀರೇನೋ ನೀವು... ಇಷ್ಟೇ ಆಗಿದ್ದರೆ, ಖಂಡಿತಾ ಇದನ್ನು ಬರೆಯಬೇಕಿರಲಿಲ್ಲ. ಆ ನಂತರ ನಡೆದ ಘಟನೆಗಳು, ತಿರುವುಗಳು ಪದೇ ಪದೇ ಬದುಕಿನ ಅನೂಹ್ಯತೆಯನ್ನು ವಿಡಂಬಿಸುತ್ತಾ ಎಲ್ಲಕ್ಕೂ ಅತೀತವಾದ ಕೆಲವು ಪ್ರಶ್ನೆಗಳನ್ನು ಉಳಿಸಿರುವುದಕ್ಕೇ ಇದನ್ನು ಬರೆಯಬೇಕಾಯಿತು. ಬದುಕು ಕೆಲವೊಮ್ಮೆ ಎಂತಹ ಪ್ರಶ್ನೆ ಕೇಳಿಬಿಡುತ್ತದೆಂದರೆ ಯಾವ googleಗೂ ಉತ್ತರ ಕೊಡಲಾಗದೆ ಸ್ಥಬ್ಧವಾಗುತ್ತದೆ. ನಮ್ಮ ರಾಜಕುಮಾರಿಯ ಬದುಕಲ್ಲಿ ಆಗಿರುವುದೂ ಅದೇ.

ಅವಿನಾಶ ಬೆಳೆಯುತ್ತ ಬಂದಂತೆ ಅಮ್ಮನ ಬಗ್ಗೆ ಪ್ರೀತಿ, ಆದರ, ಅಭಿಮಾನ ಹೆಚ್ಚುತ್ತಾ ಹೋಯಿತು. ಅಮ್ಮನೆಂದರೆ ವಾತ್ಸಲ್ಯ, ಅಮ್ಮನೆಂದರೆ ಸಲುಗೆ... ಸ್ನಾನಕ್ಕೆ ಗೀಸರ್ ಆನ್ ಮಾಡುವಲ್ಲಿಂದ ಕಾಲೇಜ್ ಯುನಿಫಾರ್ಮ್‌ಗೆ ಇಸ್ತ್ರಿ ಹಾಕುವಲ್ಲಿಯವರೆಗೂ ಅಮ್ಮ ಅಮ್ಮ ಅಮ್ಮ... ತನ್ನ ಬದುಕಿಗೆ ಹಣತೆಯಾಗಿ ಬಂದವಳ ಕಣ್ಣಲ್ಲಿನ ಬೆಳಕು ಆರಬಾರದೆಂದು ಸದಾ ಶ್ರಮಿಸುತ್ತಿದ್ದ. ಹುಟ್ಟುತ್ತಲೇ ಜತೆಯಾಗಿದ್ದ ಅಪ್ಪನಿಗಿಂತಲೂ ಕೈ ಹಿಡಿದು ನಡೆಸಿದ ಅಮ್ಮನೇ ಅಚ್ಚುಮೆಚ್ಚೆನಿಸುತ್ತಿತ್ತವನಿಗೆ. ಅವಳಿಗೂ ಅಷ್ಟೆ, ಅವನ ಪ್ರೀತಿಯ ಪರಾಕಾಷ್ಠೆಯ ಮುಂದೆ ಇನ್ನೊಂದು ಮಗು ಬೇಕು ಅಂತ ಅನಿಸಲೇ ಇಲ್ಲ.

ತೆರೆದಿಟ್ಟ ಗಾಳಿಗೆ ಹಳೆಗಾಯ ಆರಿಹೋಗಿ ಬದುಕು ಪಕ್ವವಾಗುತ್ತಿತ್ತು. ಊರಲ್ಲಿ ಅಪ್ಪ ಅಮ್ಮನೂ ಮಗಳು ಸಂತೋಷವಾಗಿದ್ದಾಳಲ್ಲಾ ಅನ್ನುವ ಖುಶಿಯಲ್ಲಿ ಬದುಕುತ್ತಿದ್ದರು. ಹೀಗಿರುವಾಗ ಆ ಸಂತೋಷಕ್ಕೆಲ್ಲಾ ಕೊನೆ ಅನ್ನುವಂತೆ ಒಂದು ದಿನ ಅವಿನಾಶ ಅಮ್ಮನನ್ನು ಬೈಕಿನ ಹಿಂದೆ ಕೂರಿಸಿಕೊಂಡು ಯಾವುದೋ ಸಿಗ್ನಲ್ ಜಂಪ್ ಮಾಡುವಾಗ ಆಯ ತಪ್ಪಿ ಬಿದ್ದು ಬಿಟ್ಟ, ಹಿಂದಿಂದ ಬಂದ ಲಾರಿ ಅವನ ಮೇಲಿಂದ ಹಾದುಹೋಯಿತು. ಅಷ್ಟೇ, ಅವನು ಸ್ಥಳದಲ್ಲೇ ಪ್ರಾಣ ಬಿಟ್ಟ. ನಮ್ಮ ರಾಜಕುಮಾರಿಯ ಬದುಕು ಸ್ಥಬ್ಧವಾಯಿತು. ಮಾತಿಲ್ಲ, ಕಥೆಯಿಲ್ಲ, ಆಕೆ ಸಂಪೂರ್ಣವಾಗಿ ಮೌನವಾಗಿಬಿಟ್ಟಳು. ಮಾತು-ಕಥೆ ಬಿಡಿ, ಅವಿನಾಶನನ್ನು ಅಷ್ಟೊಂದು ಪ್ರೀತಿಸುತ್ತಿದ್ದವಳು ಅವನಿಗೋಸ್ಕರ ಒಂದು ಹನಿ ಕಣ್ಣೀರನ್ನೂ ಸುರಿಸಲಿಲ್ಲ. ಅವಳ ಗಂಡ ಅವನ ಚಿತಾಭಸ್ಮವನ್ನು ಅವಳ ಮುಂದೆ ಇಟ್ಟಾಗಲೂ ಆಕೆಯದೂ ಅದೇ ದಟ್ಟ ಮೌನ.

ಇತ್ತ ಊರಿಗೇ ಊರೇ ಅವಳಿಗೋಸ್ಕರ ಮರುಗಿತು. ಅವಳ ಅಪ್ಪ ಅಮ್ಮ ಮೈಸೂರಿಗೆ ಹೋಗಿ ಅವಳನ್ನು ಮಾತಾನಾಡಿಸಲು ಪ್ರಯತ್ನಪಟ್ಟರು. ಊಹೂಂ, ಅವಳು ಮೌನ ಮುರಿಯಲೇ ಇಲ್ಲ.

ಇಷ್ಟಕ್ಕಾದರೂ ಬದುಕಿನ ವೈಚಿತ್ರಗಳು ಮುಗಿಯಿತಾ ಅಂದುಕೊಂಡರೆ..? ಇಲ್ಲ, ಅದಿನ್ನೂ ಆರಂಭವಾಗಿತ್ತಷ್ಟೇ. ಅವಿನಾಶ ಸತ್ತ ನಂತರ ಅವಳು ಗಂಡನ ಮನೆಯಲ್ಲಿ ಆರು ತಿಂಗಳುಗಳಷ್ಟು ಇದ್ದಳಷ್ಟೇ, ಆಮೇಲೆ ಅದೇನಾಯ್ತೋ ಗೊತ್ತಿಲ್ಲ, ಒಂದಿನ ಊರಿಗೆ ಬಂದವನೇ, ಏನನ್ನೂ ಹೇಳದೆ, ಏನನ್ನೂ ಕೇಳದೆ ಅವಳನ್ನಿಲ್ಲೇ ಬಿಟ್ಟುಹೋದ. ಆ ಮನೆಯಲ್ಲಿ ಮತ್ತೆ ಸೂತಕದ ಛಾಯೆ.

ಊರವರು ಬಾಯಿಗೆ ಬಂದಂತೆ ಮಾತಾಡಿದರು, ಇವಳ ನಡತೆಯ ಬಗ್ಗೆ ಕೆಟ್ಟ ಕೆಟ್ಟದಾಗಿ ಹರಟೆಹೊಡೆಯತೊಡಗಿದರು, ಕೆಲವರಂತೂ ಅವಳಿಗೂ ಅವಿನಾಶನಿಗೂ ಇಲ್ಲದ ಸಂಬಂಧ ಕಟ್ಟಿ ತಮ್ಮ ವಿಕೃತಿಯನ್ನು ತೀರಿಸಿಕೊಂಡರು. ಇಷ್ಟಾದರೂ ಆಕೆ ಏನೂ ಮಾತಾಡಲೇ ಇಲ್ಲ. ಅವಳ ಮೌನದ ಕೋಟೆಯೊಳಗೆ ಯಾರಿಗೂ ಪ್ರವೇಶ ಕೊಡಲೇ ಇಲ್ಲ.

ಹೀಗಿರುವಾಗಲೇ ಒಂದು ದಿನ ಯಾರೋ ಅವಿನಾಶನ ಬಗ್ಗೆ ಮಾತನಾಡುತ್ತಾ ಅವನದು ಹೀನ ಜಾತಕ, ಅದಕ್ಕೇ ಹುಟ್ಟಿ ಕೆಲವರ್ಷಗಳಲ್ಲಿ ಹೆತ್ತಮ್ಮನನ್ನು ಕಳೆದುಕೊಂಡ, ಮತ್ತೂ ಕೆಲವರ್ಷಗಳಲ್ಲಿ ಬೆಳೆಸಿದ ಅಮ್ಮನ ಮಾತನ್ನೇ ಕಿತ್ತುಕೊಂಡ ಅಂದರು. ಅಷ್ಟೂ ತಿಂಗಳುಗಳಿಂದ ಮೌನಗೌರಿಯಾಗಿದ್ದ ನಮ್ಮ ರಾಜಕುಮಾರಿ ಸಿಡಿದುಬಿದ್ದಳು. ಅವಿನಾಶನ ಬಗ್ಗೆ ಕೆಟ್ಟದಾಗಿ ಒಂದೇ ಒಂದು ಮಾತಾಡಿದ್ರೂ ನಾನು ಸುಮ್ಮನಿರಲ್ಲ ಅಂದಳು, ಅಷ್ಟೂ ದಿನಗಳಿಂದ ಹಿಡಿದಿಟ್ಟುಕೊಂಡ ಅವಳ ಭಾವನೆಗಳೆಲ್ಲಾ ಕೋಡಿ ಕೋಡಿಯಾಗಿ ಹರಿಯತೊಡಗಿತು.

ಅಲ್ಲಿಂದಾಚೆ ಒಂದಿಷ್ಟು ಪದಗಳನ್ನು ಹೆಕ್ಕಿ ಮತ್ತೆ ಮಾತಾಡತೊಡಗಿದಳು. ಆದರೆ ಅವಳ ಹುಡುಗಾಟ, ತುಂಟಾಟ, ಮುದ್ದು, ಪ್ರಕೃತಿಯೊಂದಿನ ಒಡನಾಟ ಇವಕ್ಕೆಲ್ಲಾ ಶಾಶ್ವತ ಪೂರ್ಣವಿರಾಮ ಹಾಕಿಬಿಟ್ಟಳು. ಇವತ್ತಿಗೂ ಅಷ್ಟೆ, ಅವಳ ಗಂಡನ ಬಗ್ಗೆ ಪ್ರಶ್ನಿಸಿದಾಗೆಲ್ಲಾ ಆಕೆ, ಹಿಂದೊಮ್ಮೆ ತಾನು ದ್ವೇಷಿಸುತ್ತಿದ್ದ ಅದೇ ಇಲಿ ಬೋಣನ್ನು ಹಿಡಿದು ನಿರ್ಭಾವುಕವಾಗಿ ಅಟ್ಟ ಹತ್ತುತ್ತಾಳೆ, ಅಷ್ಟೆ.

ಆದ್ರೆ, ಎಲ್ಲರನ್ನೂ, ಎಲ್ಲವನ್ನೂ ಎದುರಿಸಿ ತನಗೆ ಬದುಕು ಕಟ್ಟಿಕೊಟ್ಟ ಅವಳನ್ನು ಅವನೇಕೆ ದೂರ ಸರಿಸಿದ...? ಈ ಕ್ಷಣದವರೆಗೂ ನನಗರ್ಥ ಆಗಿಲ್ಲ.