ಮಂಗಳವಾರ, ಫೆಬ್ರವರಿ 23, 2016

ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ...

ಅತ್ತ ಉರಿಬಿಸಿಲೂ ಅಲ್ಲದ ಇತ್ತ ತೀವ್ರ ಚಳಿಯೂ ಅಲ್ಲದ ಫೆಬ್ರವರಿ ತಿಂಗಳು. ಅದ್ಯಾವುದೋ ಒಂದು ಮನೆಯ ಜೋಕಾಲಿಯಲ್ಲಿ ಜೀಕುತ್ತಾ ಆಗಾಗ ಕತ್ತುಹೊರಳಿಸಿ ದಾರಿಯತ್ತ ನೋಡುವ ಹೂ ಮನಸಿನ ಹುಡುಗಿ. ಅವಳ ಕಣ್ಣಿನ ಕಣ ಕಣದಲ್ಲೂ ಇನ್ನೂ ಬರಲಿಲ್ಲವೇಕೆ ಅನ್ನುವ ಪ್ರಶ್ನೆ. ಬಾನಂಚು ಕೆಂಪಾದಷ್ಟೂ ಅವಳೆದೆ ಢವಢವ. ಕೈಯಲ್ಲಿದ್ದ ಪುಸ್ತಕದೊಳಗಿನ ಪತ್ರ ಯಾಕೋ ಅಣಕವಾಡುತ್ತಿದೆ ಅಂತನಿಸಲಾರಂಭಿಸುತ್ತದೆ. ಅಷ್ಟರಲ್ಲೇ 'ಕಿರ್ರ್' ಎಂದು ಮನೆಯ ಗೇಟ್ ತೆರೆಯುವ ಸದ್ದು. ಅವನ ತಂಗಿಯೋ, ಪಕ್ಕದ ಮನೆಯವಳೋ ಪುಟ್ಟದೊಂದು ಪತ್ರ,  ಒಂದು ಗ್ರೀಟಿಂಗ್ ಕಾರ್ಡ್ ಮತ್ತೊಂದು ನಗುವ ಗುಲಾಬಿ ಹೂವು... ಆಚೀಚೆ ನೋಡಿ ಯಾರೂ ನೋಡುತ್ತಿಲ್ಲ ಎಂದು ಖಾತ್ರಿ ಪಡಿಸಿಕೊಂಡು ಇವಳ ಕೈಗಿತ್ತು,  ಇವಳ ಕೈಯಲ್ಲಿನ ಪತ್ರವನ್ನು ಮೆಲ್ಲನೆ ತನ್ನ ಕೈಗೆ ತೆಗೆದುಕೊಂಡು ಮಾಯವಾಗುತ್ತಾಳೆ.

ಇತ್ತ ಹುಡುಗಿ ಅದೇ ಜೋಕಾಲಿಯಲ್ಲಿ ಜೀಕುತ್ತಾ ಹೂವನ್ನು ಮುಡಿಯಲೋ ಬೇಡವೋ ಅನ್ನುವ ಕನ್‍ಫ್ಯೂಸನ್‍ನಲ್ಲಿ ತುಟಿಗೊತ್ತಿ ಮಡಿಲಲ್ಲಿಟ್ಟುಕೊಂಡು ಗ್ರೀಟಿಂಗ್ ಕಾರ್ಡ್‌ನ ಮೇಲೆ ಕೈಯಾಡಿಸುತ್ತಾಳೆ. ಅವನ ಜೊತೆ ಬಾಳಬೇಕೆಂಬ ಅವಳ ಅಷ್ಟೂ ಬಣ್ಣಬಣ್ಣದ ಕನಸುಗಳ ನುಣುಪು ಅಂಗೈ ಮೇಲೆ ನರ್ತಿಸಲಾರಂಭಿಸುತ್ತವೆ. ಪತ್ರ ಬಿಚ್ಚಿದರೆ ಮುಗಿದೇ ಹೋಯಿತು, ಎಳೆಯ ಪಾರಿಜಾತ ಹೂವಿನ ಎಸಳೊಂದು ನಾಚಿ ಕಣ್ಣುಮುಚ್ಚಿ ಧರೆಯ ತಬ್ಬಿಕೊಂಡಂತಹಾ ನಾಜೂಕು. ಜೋಕಾಲಿಯ ಜೋಡಿ ಹಗ್ಗಗಳು ಧನ್ಯೋಸ್ಮಿ!

ಅಲ್ಲಿ ಹತ್ತು ಗಾವುದ ದೂರದ ಆ ಮನೆಯಲ್ಲಿ ಹುಡುಗ ಶತಪಥ ಹಾಕುತ್ತಾನೆ. ಯಾರದೋ ದಾರಿ ಕಾಯುತ್ತಿರುವಂತೆ ನಿಮಿಷಕ್ಕೆ ಅರುವತ್ತು ಬಾರಿ ತಲೆ ಎತ್ತಿ ಸುತ್ತ ದಿಟ್ಟಿಸುತ್ತಾನೆ. ತಾನು ಕಳುಹಿಸಿದ ಉಡುಗೊರೆ ಎಲ್ಲಿ ದಪ್ಪ ಮೀಸೆಯ ಅವಳಣ್ಣನ ಕೈಗೆ ಸಿಕ್ಕಿಬಿಡುತ್ತದೋ ಎಂದು ಸುಳ್ಳೇ ಸುಳ್ಳು ಕಲ್ಪಿಸಿಕೊಂಡು ಭಯಪಟ್ಟುಕೊಳ್ಳುತ್ತಾನೆ. ಪಲ್ಸ್ ರೇಟ್ ಅವನಿಗೇ ಕೇಳಿಸುವಷ್ಟು ಏರುತ್ತದೆ. ಅಷ್ಟರಲ್ಲಿ ಅವಳ ಮನೆಗೆ ಹೋಗಿದ್ದ ತಂಗಿ ಓಡೋಡಿ ಬಂದು ಪತ್ರ ಕೈಗಿಟ್ಟು ಕಣ್ಣು ಹೊಡೆಯುತ್ತಾಳೆ. ಅವನಿಗೀಗ ತಂಗಿಯೇ ಮೇಘದೂತೆ. ಉಜ್ಜಯಿನಿಯಿಂದ ಸ್ವತಃ ಕಾಳಿದಾಸನೇ ಬರೆದ ಪ್ರೇಮ ಕಾವ್ಯ ಹೊತ್ತು ತಂದವಳು ಅನ್ನುವ ಭಾವ. ತಂಗಿ 'ಹುಷಾರಣ್ಣಾ' ಅಂದು ಒಳಸರಿಯುತ್ತಾಳೆ.

ಹುಡುಗ ಅವಳ ಅಂಗೈ ಬೆವರಿನಿಂದ ತುಸು ಒದ್ದೆಯಾದ ಪತ್ರದ ಮೇಲೊಂದು ಹೂಮುತ್ತನ್ನಿಟ್ಟು ಮೆಲ್ಲನೆ ಬಿಡಿಸುತ್ತಾನೆ. ಅವಳ ದುಂಡು ಅಕ್ಷರಗಳಲ್ಲಿ ಅವಳೇ ಮೈದಾಳಿದ್ದಾನೇನೋ ಅನ್ನುವಷ್ಟು ಮೈಮರೆಯುತ್ತಾನೆ. ಈ ಪತ್ರ ಮುಗಿಯದಿರಲಿ ಭಗವಂತಾ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಿರುತ್ತಾನೆ. ಆದರೂ ಪತ್ರ ಮುಗಿಯುತ್ತದೆ.  ಕೊನೆಯಲ್ಲಿ ಆಕೆ ಬರೆದ 'ಅಲ್ಲಿ ದೂರದಲ್ಲಿ ನಿಂತು ನನ್ನ ಕೋಣೆಯ ಕಿಟಕಿಯೆಡೆ ಇಣುಕುವ ಚಂದ್ರನನ್ನು ಕಿಟಕಿಯೊಳಗೆ ತೂರದಂತೆ ನಿರ್ಬಂಧಿಸಿದ್ದೇನೆ. ನಿನಗೆಂದು ಆಸ್ಥೆಯಿಂದ ಎತ್ತಿಟ್ಟ ಅಷ್ಟೂ ಪ್ರೀತಿಯಲ್ಲಿ ಅವನು ಪಾಲು ಕೇಳುತ್ತಾನೇನೋ ಅನ್ನುವ ಭಯ ನನಗೆ ' ಎನ್ನುವ ಸಾಲನ್ನು ನೂರು ಬಾರಿ ಓದುತ್ತಾನೆ. ಆ ರಾತ್ರಿಯಿಡೀ ಅವನೆದೆಯ ಕವಲುಗಳಲ್ಲಿ ಸಹಸ್ರ ಸಂಭ್ರಮ ಜೋಕಾಲಿಯಾಡುತ್ತದೆ. ಅಲ್ಲವಳ ಕದಪುಗಳನ್ನು ಅನುರಾಗವೊಂದು ಅವುಚಿಕೊಳ್ಳುತ್ತದೆ. ಪಾರಿಜಾತ ಸುಮ್ಮನೆ ನಗುತ್ತದೆ, ಚಂದ್ರನಿಗೂ ಹೊಟ್ಟೆಕಿಚ್ಚು.

ತುಂಬಾ ಹಿಂದೆ ಹೋಗಬೇಕಂತೇನಿಲ್ಲ. ಕೇವಲ ನಾಲ್ಕು - ಐದು ವರ್ಷಗಳ ಹಿಂದೆ ಫೆಬ್ರವರಿ ಹದಿನಾಲ್ಕೆಂದರೆ ಇಷ್ಟು ಮತ್ತು ಇಷ್ಟು ಮಾತ್ರ ಆಗಿತ್ತು.  ಪ್ರತೀ ಪ್ರೇಮಿಯೆದೆಯಲ್ಲೂ ಪರಿಜಾತ ಅರಳುತ್ತಿತ್ತು. ಪ್ರತೀ ಪ್ರೇಮಿಯ ಮನೆಯ ಜೋಕಾಲಿಗೂ ಜೀವ ಜಿಗಿತುಕೊಂಡು ಬಿಡುತ್ತಿತ್ತು. ಆಗೆಲ್ಲಾ ಇಷ್ಟೊಂದು ಅಪ್ಲಿಕೇಷನ್‍ಗಳ ಆಪ್ಶನ್ ಇರಲಿಲ್ಲ.  Happy Valentine's day ಅನ್ನುವ ಶುಷ್ಕ ಮೆಸೇಜ್‍ಗಳೂ ಇರಲಿಲ್ಲ.  ಗೂಗಲ್‍ನಲ್ಲಿ ಪ್ರೇಮಿಗಳ ದಿನದ ರೆಡಿಮೇಡ್ ಶುಭಾಶಯಗಳು ಬಿಕರಿಗೆ ಇರಲೇ ಇಲ್ಲ.  ಎಲ್ಲಕ್ಕಿಂತ ಹೆಚ್ಚಾಗಿ ಅದೆಲ್ಲಿಂದಲೋ ಕದ್ದು, ಕಾಪಿ ಮಾಡಿ ತನ್ನವರಿಗೆ ಶುಭಾಶಯ ಕೋರಬೇಕಾದ ದರಿದ್ರತನ ಯಾವ ಪ್ರೇಮಿಗೂ ಇರಲಿಲ್ಲ. ಸಾವಿರ ಶತಮಾನಗಳ ಇತಿಹಾಸ ಇರುವ ಈ ದೇಶದ ಸಂಸ್ಕೃತಿ ನಮ್ಮಿಂದ ರಕ್ಷಿಸಲ್ಪಡಬೇಕಾದಷ್ಟು ಜಾಳುಜಾಳಾಗಿಲ್ಲ ಅನ್ನುವ ಕನಿಷ್ಠ ಪ್ರಜ್ಞೆ ಇಲ್ಲದ ಬಲಪಂಥದವರೂ, ಅವರು ವಿರೋಧಿಸಿದ್ದೆನ್ನೆಲ್ಲಾ ಮಾಡಲೇಬೇಕು ಅನ್ನುವ ವಿಚಿತ್ರ ಮನಸ್ಥಿತಿ ಇರುವ ಎಡಪಂಥೀಯರೂ ಇರಲಿಲ್ಲ.

ಪ್ರೀತಿಯ ಆ ತಪನೆ, ದೂರದಲ್ಲಿದ್ದುಕೊಂಡೇ ಪಡುವ ಖುಶಿ, ಕಾಯುವಿಕೆ, ವಿರಹ, ಬೆಳದಿಂಗಳ ಕವಿತೆ... ಎಲ್ಲವನ್ನೂ 4G ಸ್ಪೀಡಿನ ಅಪ್ಲಿಕೇಷನ್‍ಗಳು ಕಸಿದುಕೊಂಡುಬಿಟ್ಟಿವೆ. ಅಲ್ಲೆಲ್ಲೋ ಫೇಸ್‍ಬುಕ್‍ನ ಯಾವುದೋ ಪೇಜ್‍ನಲ್ಲಿ ಅವನು ಅಪ್ಡೇಟ್ ಮಾಡಿದ ಸ್ಟೇಟಸ್‍ಗೆ ಇವಳು ಲೈಕ್ ಕೊಡುತ್ತಾಳೆ.  ರಾತ್ರಿ ಮೆಸೆಂಜರ್‍ನಲ್ಲಿ ಹಾಯ್, ಹಲೋದಿಂದ ಆರಂಭವಾಗಿ ಮಾತು ಪ್ರೀತಿಯವರೆಗೆ ಬಂದು ನಿಲ್ಲುತ್ತದೆ.  ಮರುದಿನ ಮತ್ತಿನ್ಯಾವುದೋ ಒಂದು ಕಾಫೀ ಡೇಯಲ್ಲಿ ಎದುರಾ-ಎದುರು ಕೂತು ಕೋಲ್ಡ್ ಕಾಫಿ ಹೀರುತ್ತಾರೆ. ಅಲ್ಲಿಂದೆದ್ದು ಮಲ್ಟಿಪ್ಲೆಕ್ಸ್‌ವೊಂದರಲ್ಲಿ ಸಿನಿಮಾ ನೋಡಿ, ಅಲ್ಲಿಂದ ಮತ್ಯಾವುದೋ ಮಾಲ್‍ಗೆ ಭೇಟಿಕೊಟ್ಟು ಬೇಕಾದ್ದು,  ಬೇಡವಾದ್ದು ಎಲ್ಲಾ ಕೊಂಡು, ನಮ್ಮಿಬ್ಬರ ಟೇಸ್ಟ್ ಎಷ್ಟು ಸೇಮ್ ಅಲ್ವಾ ಅಂತ ಸುಳ್ಳೇ ಸುಳ್ಳು ಸಂಭ್ರಮಿಸಿ ಮನೆಗೆ ಮರಳುತ್ತಾರೆ. ರಾತ್ರಿ 'I'm in love with you' ಎಂದು ವಾಟ್ಸಾಪ್ ಮಾಡಿ ಜೊತೆಗೊಂದು ಗುಲಾಬಿ ಹೂವಿನ ಚಿತ್ರ ಕಳುಹಿಸುತ್ತಾರೆ. ಅಲ್ಲಿಂದಾಚೆ ಇಬ್ಬರೂ ತಾವು ಅಮರ ಪ್ರೇಮಿಗಳೆಂಬ ಅಪ್ಪಟ ಸುಳ್ಳನ್ನು ಸತ್ಯಸ್ಯ ಸತ್ಯ ಎಂಬಂತೆ ನಂಬುತ್ತಾರೆ.

ಒಂದಿಷ್ಟು ದಿನಗಳ ವೀಕೆಂಡ್ ಪಾರ್ಟಿ, ಲಾಂಗ್ ಡ್ರೈವ್‍ಗಳ ನಂತರ 4G ಸ್ಪೀಡ್ ಕಳೆದುಕೊಳ್ಳುತ್ತದೆ. ಸಂಬಂಧದ ವೀಣೆಯ ತಂತಿ ಸಡಿಲವಾಗುತ್ತದೆ. ಅವಳ ಪೋಟೋಗೆ ಅದ್ಯಾರೋ ಕಮೆಂಟಿಸಿದ 'awesome ' ಅನ್ನುವ ಕಮೆಂಟ್ ಇವನ ತಲೆಕೆಡಿಸುತ್ತದೆ. ಇವನ ಸ್ಟೇಟಸ್‍ಗೆ ಮತ್ಯಾವುದೋ ಹುಡುಗಿ ಬರೆದ ಮಾರುದ್ದದ ಕಮೆಂಟ್ ಅವಳ ನಿದ್ದೆಗೆಡಿಸುತ್ತದೆ. ಅವನು ವಿಪರೀತ ಪೊಸ್ಸೆಸಿವ್ ಅಂತ ಇವಳಿಗೂ, ಇವಳು ಮಹಾನ್ ಜಗಳಗಂಟಿ ಅಂತ ಅವನಿಗೂ ಅನಿಸಲಾರಂಭಿಸುತ್ತದೆ. ರಿಲೇಷನ್‍ಶಿಪ್ ಸ್ಟೇಟಸ್, 'ಇನ್ ಕಾಂಪ್ಲಿಕೇಷನ್ ' ಎಂದು ಬದಲಾಗುತ್ತದೆ. ಬೆಂಕಿಗೆ ತುಪ್ಪ ಸುರಿಯುವ ಫ್ರೆಂಡ್ಸ್ ನಿನ್ನಾಯ್ಕೆಯೇ ಸರಿ ಇಲ್ಲ ಎಂದು ಪದೇ ಪದೇ ಕುಯ್ಯತೊಡಗುತ್ತಾರೆ. ಪ್ರೀತಿ ಹುಟ್ಟಿದ ಅದೇ ವಾಟ್ಸಾಪ್‍ನಲ್ಲಿ 'lets breakup ' ಅನ್ನುವ ಮೆಸೇಜ್ ರವಾನೆಯಾಗುತ್ತದೆ. ಸಡಿಲಾಗಿದ್ದ ವೀಣೆಯ ತಂತಿ ಖಿಲ್ಲನೆ ತುಂಡಾಗುತ್ತದೆ.

ಇಬ್ಬರೂ ಒಂದಿಷ್ಟು ದಿನಗಳ ಕಾಲ ಭಗ್ನ ಪ್ರೇಮದ ಸ್ಟೇಟಸ್ ಬರೆದುಕೊಂಡು, ಪರೋಕ್ಷವಾಗಿ ಒಬ್ಬರನೊಬ್ಬರು ಜರೆಯುತ್ತಾ, ಕೆಲವೊಮ್ಮೆ ತಾನು ಮೂವ್ ಆನ್ ಆಗಿದ್ದೇನೆಂದು ಮತ್ತೊಬ್ಬರನ್ನು ನಂಬಿಸಲು ಸರ್ಕಸ್ ಮಾಡುತ್ತಾ, ವಿರಹಿಗಳು ಅನ್ನುವ ಟ್ಯಾಗ್‍ಲೈನ್ ಹಚ್ಚಿಸಿಕೊಂಡು ಓಡಾಡುತ್ತಾರೆ. ಮತ್ತೊಂದಿಷ್ಟು ದಿನಗಳ ನಂತರ ಎಲ್ಲವೂ ಸರಿ ಹೋಗುತ್ತದೆ.  ಅಥವಾ ಸರಿ ಹೋಗಿದೆ ಅಂದುಕೊಂಡು ಸತ್ತಿರೋ ಬೇರಿಗೆ ಮತ್ತೆ ನೀರು ಹನಿಸಲು ಮುಂದಾಗುತ್ತಾರೆ. ಎರಡೂವರೆ ಅಕ್ಷರಗಳ ಪ್ರೀತಿ ಒದ್ದಾಡುತ್ತಿರುತ್ತದೆ, ಜೀವ ಸುಮ್ಮನೆ ನೋಯುತ್ತಿರುತ್ತದೆ, ಬದುಕು ಗೊತ್ತೇ ಆಗದಂತೆ ಒಣಗುತ್ತಿರುತ್ತದೆ, ನಿನ್ನೆಗಳು ನಾಳೆಗಳ ನಿರ್ಮಲತೆಯನ್ನು ಕಬಳಿಸುತ್ತದೆ

ಊಹೂಂ, ಹಾಗಾಗಬಾರದು ನೋಡಿ. ನಿನ್ನೆಯ ಪ್ರತಿ ಕ್ಷಣಗಳು ನಾಳೆಯ ಕನ್ನಡಿಯ ಸ್ಪಷ್ಟ ಪ್ರತಿಬಿಂಬವಾಗಬೇಕು, ಹೀರಿದ ಕಾಫಿಯ ಪ್ರತಿಯೊಂದು ಸಿಪ್ಪಿನಲ್ಲೂ ಪ್ರೀತಿ ನಳನಳಿಸುತ್ತಿರಬೇಕು, ಇಟ್ಟ ಪ್ರತಿ ಹೆಜ್ಜೆಯ ನೆನಪು ಜೀವನ ಪೂರ್ತಿ ನವಿರು ಪ್ರೇಮ ಕಾವ್ಯದಂತೆ ಬದುಕಿನ ಒನಪನ್ನು ಕಾಯುತ್ತಿರಬೇಕು, ಒಂದು ಹಗಲು ಕಳೆಯುವಷ್ಟರಲ್ಲಿ ಮಾಡಿದ ಜಗಳದ ಅಷ್ಟೂ ಕುರುಹುಗಳು ಅಳಿದು ಹೋಗಬೇಕು.  ಮತ್ತು ಹೀಗೆಲ್ಲಾ ಆಗಬೇಕೆಂದರೆ, ಪ್ರೀತಿಯಲ್ಲಿ ದುಡುಕಿರಬಾರದು. ಪರಸ್ಪರರ ಭಿನ್ನತೆಯನ್ನು ಒಪ್ಪಿಕೊಳ್ಳುವ ವಿಶಾಲ ಮನೋಭಾವವಿರಬೇಕು, ಸಹನೆ ಇರಬೇಕು.

ಇಷ್ಟಿದ್ದರೆ ಸಾಕು, 'ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ...' ಎಂದು ಪ್ರೀತಿ ಹಾಡತೊಡಗುತ್ತದೆ. ಮತ್ತೆ ಮತ್ತೆ ಮಳೆ ಹುಯ್ಯುತ್ತದೆ, ಜೀವ ಹಸಿರಾಗುತ್ತದೆ.

ಬುಧವಾರ, ಫೆಬ್ರವರಿ 10, 2016

ರತ್ನಕ್ಕಳ ಪರಿವಾಳದ ಕಥೆ ಮತ್ತು ರೋಹಿತ್ ವೇಮುಲ

ಅದಿನ್ನೂ ಅಕ್ಷರಗಳ ಪರಿಚಯವಾಗಿ ಪುಸ್ತಕ ಪ್ರಪಂಚದೊಳಗೆ ಸಣ್ಣದಾಗಿ ಕುತೂಹಲ ಬೆಳೆಸಿಕೊಳ್ಳುತ್ತಿದ್ದ ವಯಸ್ಸಷ್ಟೆ. ಬಾಲಮಂಗಳ, ಚಂದಮಾಮಗಳೇ ನಮ್ಮ ಪಾಲಿನ ಪವಿತ್ರ ಗ್ರಂಥಗಳಾಗ. ಕಥೆಗಳ ಅದ್ಭುತ ಲೋಕ ನಮ್ಮಿದಿರು ತೆರೆದುಕೊಳ್ಳುತ್ತಿದ್ದರೆ, ಎಲ್ಲೋ ದೂರದಲ್ಲಿ ನಮಗರಿಯದ ಪ್ರಪಂಚವೊಂದಿದೆ, ಅಲ್ಲಿ ಡಿಂಗ ಲಂಬೋದರ, ಪಕ್ರು , ಚಂದಮಾಮದ ಚೆಂದದ ರಾಜಕುಮಾರ, ಚಂಪಕದ ಪರಮಾದ್ಭುತ ಚಂಪಕ ವನವಿದೆ ಅನ್ನುವ ಕಲ್ಪನೆಗಳೆಲ್ಲಾ ಮೊಳಕೆಯೊಡೆಯುತ್ತಿದ್ದ ಕಾಲ.

ಅಂತಹ ಬದುಕು ನಿಧಾನವಾಗಿ ಹರಳುಗಟ್ಟುವ ಕಾಲದಲ್ಲಿ ನಮ್ಮನೆಗೆ ತೋಟದ ಕೆಲಸಕ್ಕೆಂದು ಬರುತ್ತಿದ್ದ ಅದ್ಭುತ ಮಹಿಳೆಯೇ ರತ್ನಕ್ಕ. ಆಕೆ ಎಲ್ಲರಂತೆ ವಾರದ ಎಲ್ಲಾ ದಿನ ಬರುತ್ತಿರಲಿಲ್ಲ, ಶನಿವಾರ ಗಂಟೆ ಏಳಾಗುತ್ತಿದ್ದಂತೆ ಹಿತ್ತಲ ಕಡೆ ಬಂದು 'ಅಕ್ಕಾ' ಎಂದು ಕೂಗುತ್ತಿದ್ದಳು. ಆಕೆ ಬಂದಳೆಂದರೆ, ಅಮ್ಮನಿಗೆ ವಿಪರೀತ ಸಂಭ್ರಮ. ತನ್ನನ್ನು ಹೊರತು ಪಡಿಸಿ ಇನ್ನೊಂದು ಹೆಣ್ಣು ಜೀವವಿಲ್ಲದ ಮನೆಯಲ್ಲಿ ಮತ್ತೊಂದು ಕೈಯ ಬಳೆಗಳ ಸದ್ದು ಆಲಿಸಬಹುದಲ್ವಾ ಅನ್ನುವ ಖುಶಿಯದು. ಆಕೆ ಶನಿವಾರ ಮನೆಗೆ ಬಂದರೆ ಮತ್ತೆ ಹೋಗುತ್ತಿದ್ದುದು ಭಾನುವಾರ ಮುಸ್ಸಂಜೆಯೇ. ಅಲ್ಲಿಯವರೆಗೆ ಅಮ್ಮನ ಮತ್ತು ರತ್ನಕ್ಕನ ಭರಪೂರ ಮಾತುಕತೆಗೆ ಮನೆಯ ಗೋಡೆ, ಬಾಗಿಲುಗಳೇ ಸಾಕ್ಷಿ.

ಆದರೆ ರತ್ನಕ್ಕ ಮಾತು ಶುರುವಿಟ್ಟುಕೊಳ್ಳುತ್ತಿದ್ದಂತೆ ಅಮ್ಮ ನನ್ನ ಕೈಗೊಂದು ಬಾಲಮಂಗಳವೋ ಇಲ್ಲ ಚಂದಮಾಮವನ್ನೋ ಕೊಟ್ಟು ಬಲವಂತವಾಗಿ ಸಾಗಹಾಕುತ್ತಿದ್ದರು. ಯಾಕೆಂದರೆ ಆಕೆ ಬಳಸುತ್ತಿದ್ದ ಕೆಲವು 'ಗೌರವ ಪೂರ್ವಕ' ಪದಗಳು ನನ್ನ ಕಿವಿಗೆ ಬಿದ್ದು, ನಾನದನ್ನು ಮತ್ತೆಲ್ಲಾದರೂ ಬಳಸಿಬಿಟ್ಟೇನು ಅನ್ನುವ ಹಿಂಜರಿಕೆ ಅಮ್ಮನಿಗಿತ್ತು. ಹಿಂದೊಮ್ಮೆ ಹಾಗೇ ಕೇಳಿಸಿಕೊಂಡ 'ವಿಶೇಷ ಪದ'ಗಳನ್ನು ನಾನು ಬಳಸಿ ಅಮ್ಮ ಅಜ್ಜನಿಂದ ಬೈಸಿಕೊಂಡಿದ್ದರು. ಆಮೇಲೆಲ್ಲಾ ಅಮ್ಮ ರತ್ನಕ್ಕನ ಜೊತೆ ಮಾತನಾಡಬೇಕಾದರೆ ನನ್ನ ದೂರ ಕಳುಹಿಸುತ್ತಿದ್ದರು.

ಆದರೆ ನನಗದೆಲ್ಲಾ ಅರ್ಥವಾಗುವ ವಯಸ್ಸಲ್ಲ. ನನಗೆ ರತ್ನಕ್ಕ ಎಂದರೆ ಆ ಕಾಲದಲ್ಲಿ ಅಲ್ಲಾವುದ್ದೀನನ ಅದ್ಭುತ ದೀಪದಂತೆ. ಮೊಗೆದಷ್ಟೂ ಮುಗಿಯದ ಜಾನಪದ ಕಥೆಗಳ ಸಂಗ್ರಹ. ಆಕೆ ಹಿತ್ತಲ ಬಾಗಿಲಲ್ಲಿ ನಿಂತು 'ಅಕ್ಕಾ' ಅನ್ನುತ್ತಿದ್ದಂತೆ ನಾನು 'ರತ್ತಕ್ಕಾ' ಅನ್ನುತ್ತಾ ಆಕೆಯೆಡೆ ಓಡುತ್ತಿದ್ದೆ. ಆಕೆ ನನ್ನನ್ನು ಮಡಿಲಲ್ಲಿ ಕೂರಿಸಿ 'ರತ್ತಕ್ಕ ಅಲ್ಲ, ರತ್ನಕ್ಕ. ಎಲ್ಲಿ ಹೇಳು ರ..ತ್...ನ...ಕ್ಕಾ' ಅನ್ನುತ್ತಿದ್ದರೆ, ನಾನು ಬಿಡಿಬಿಡಿಯಾಗಿ ರ ತ್ ನ ಕ್ಕ ಅಂದರೂ ಒಟ್ಟಿಗೆ ಹೇಳುವಾಗ ರತ್ತಕ್ಕನೇ ಆಗುತ್ತಿತ್ತು. ಆಗೆಲ್ಲಾ ಆಕೆ ಕೆನ್ನೆ ಹಿಂಡಿ ತಲೆ ಮೇಲೊಂದು ಮೊಟಕಿ ಸುಮ್ಮನೆ ನಗುತ್ತಿದ್ದಳು.

ತಲೆ ಬಾಚಿಸಿಕೊಳ್ಳುವುದೆಂದರೆ ಆಟ ಆಡುವ ಅಮೂಲ್ಯ ಸಮಯವನ್ನು ವ್ಯರ್ಥವಾಗಿ ಕಳೆಯುವುದು ಅಂತ ತುಂಬಾ ದೃಢವಾಗಿ ನಂಬಿದ್ದ ಸಮಯವದು. ಅಮ್ಮ ತಲೆಬಾಚಲು ಬಂದರೆ, ಬಾಚಣಿಗೆ ಮೊಂಡಾಗಿದೆ ಅಂತಲೋ, ಎಣ್ಣೆ ಜಾಸ್ತಿ ಆಯ್ತು (ಕೆಲವೊಮ್ಮೆ ಕಡಿಮೆ ಆಯ್ತು)ಅಂತಲೋ, ತಲೆ ನೋವಾಗುತ್ತಿದೆ ಅಂತಲೋ ನೂರೆಂಟು ಕಾರಣ ಹೇಳಿ ಅಮ್ಮನನ್ನು ಹೈರಾಣಾಗಿಸುತ್ತಿದ್ದೆ. ರತ್ನಕ್ಕ ಮನೆಯಲ್ಲಿದ್ದರೆ ಅಮ್ಮ ನನ್ನನ್ನು ಅವರ ಕೈಗೊಪ್ಪಿಸಿ ಹಾಯಾಗಿರುತ್ತಿದ್ದರು.

ಆಕೆ ನನ್ನನ್ನು ಪಕ್ಕ ಕೂರಿಸಿಕೊಂಡು ಕಥೆ ಹೇಳುತ್ತಾ ತಲೆ ಬಾಚುತ್ತಿದ್ದರು. ಮತ್ತು ಆ ಕಾರಣಕ್ಕಾಗಿಯೇ ನನಗವರು ತುಂಬಾ ಅದ್ಭುತ ಅಂತ ಅನ್ನಿಸಿಬಿಡುತ್ತಿದ್ದುದು. ಅವತ್ತವರು ನನಗೆ ಹೇಳಿದ ಕಥೆಗಳಲ್ಲಿ ಒಂದನ್ನು ಹೆಕ್ಕಿ ನಿಮಗೂ ಹೇಳುತ್ತೇನೆ ಕೇಳಿ.

ಒಂದೂರಲ್ಲಿ ಬಿಳಿ ಪಾರಿವಾಳಗಳ ಒಂದು ಪುಟ್ಟ ಹಿಂಡಿತ್ತಂತೆ. ಕತ್ತಿನ ಸುತ್ತ ನೀಲಿ ಗರಿಗಳಿದ್ದ, ಉದ್ದ ಬಾಲವಿದ್ದ ಪರಿವಾಳ ಆ ಹಿಂಡಿನ ನಾಯಕ. ಹಿಂಡಿನಲ್ಲಿದ್ದ ಪ್ರತಿ ಪಾರಿವಾಳಕ್ಕೂ ನಾಯಕನೆಂದರೆ ಅಪಾರ ಗೌರವ. ಹಾಗೆಯೇ ನೀಲಿಗರಿಗಳ ಪಾರಿವಾಳಕ್ಕೆ ಇತರ ಪರಿವಾಳಗಳೆಂದರೆ ಅಮೋಘ ಪ್ರೀತಿ. ಸ್ವಚ್ಛಂದವಾಗಿ ಹಾರಾಡುತ್ತಾ, ತಾವಿರುವಲ್ಲೆಲ್ಲಾ ಆ ಪರಿವಾಳಗಳು ಖುಶಿ ಹಂಚುತ್ತಿದ್ದವು.

ನಮ್ಮಂತಹ ಮನುಷ್ಯರು ಗೂಡಲ್ಲಿ ಬಂಧಿಸಿಟ್ಟ ಹಕ್ಕಿಗಳಿಗೆ ಸಾಂತ್ವನ ಹೇಳುತ್ತಾ, ರೆಕ್ಕೆ ಮುರಿದ ಹಕ್ಕಿಗಳಿಗೆ ಶುಶ್ರೂಶೆ ಮಾಡುತ್ತಾ, ಹಾರಲು ಮರೆತ ಹಕ್ಕಿಗಳಿಗೆ ಹಾರಲು ಕಲಿಸುತ್ತಾ ಯಾರನ್ನೂ ದ್ವೇಷಿಸದೆ, ಎಲ್ಲರನ್ನೂ ಪ್ರೀತಿಸುತ್ತಾ, ಒಂದೇ ಒಂದು ಕಾಳು ಆಹಾರ ಸಿಕ್ಕರೂ ಹಿಂಡಿನ ಎಲ್ಲಾ ಪರಿವಾಳಗಳಿಗೂ ಹಂಚಿ ತಿನ್ನುತ್ತಾ ಬದುಕುತ್ತಿದ್ದವು.

ಒಂದು ದಿನ ಆ ಹಿಂಡಿನ ಪರಿವಾಳವೊಂದು ಹಾಡುತ್ತಾ ಆಕಾಶದೆತ್ತರಕ್ಕೆ ಹಾರುತ್ತಿದ್ದಾಗ ನೆಲದಲ್ಲಿ ಬಿದ್ದು ಚಡಪಡಿಸುತ್ತಿದ್ದ ಹದ್ದೊಂದು ಅದರ ಕಣ್ಣಿಗೆ ಬಿತ್ತು. ತನ್ನ ಬಳಗವನ್ನೆಲ್ಲಾ ಕರೆದು ಅದಕ್ಕೆ ಚಿಕಿತ್ಸೆ ಆರಂಭಿಸಿಯೇ ಬಿಟ್ಟಿತು. ಒಂದು ಪಾರಿವಾಳ ಎಲ್ಲಿಂದಲೋ ಎಲೆಯನ್ನು ಹುಡುಕಿ ತಂದರೆ, ಮತ್ತೊಂದು ಅದನ್ನು ತನ್ನ ಕೊಕ್ಕಿನಲ್ಲೇ ಜಜ್ಜತೊಡಗಿತು. ಮಗದೊಂದು ಮತ್ತೆಲ್ಲಿಂದಲೋ ನೀರು ಹುಡುಕಿ ತಂತು, ಮತ್ತಿನ್ನೊಂದು ಹದ್ದಿನ ರೆಕ್ಕೆಗಳನ್ನು ಮೃದುವಾಗಿ ನೇವರಿಸತೊಡಗಿತು... ಹೀಗೆ ಎಲ್ಲಾ ಪರಿವಾಳಗಳು ಹದ್ದಿನ ಶುಶ್ರೂಶೆ ಮಾಡುತ್ತಿದ್ದರೆ, ನೀಲಿ ಗರಿಗಳ ನಾಯಕ ಪರಿವಾಳ ದೂರ ನಿಂತು ತನ್ನ ಪರಿವಾರದ ಒಳ್ಳೆಯತನವನ್ನು ಕಣ್ತುಂಬಿಕೊಳ್ಳುತ್ತಿತ್ತು.

ಹಾಗೂ ಹೀಗೂ ಹದ್ದು ಕಣ್ತೆರೆಯಿತು. ಪಾರಿವಾಳಗಳೆಲ್ಲಾ ಖುಶಿಯಿಂದ ಚಪ್ಪಾಳೆ ತಟ್ಟುತ್ತಾ ಮತ್ತೆ ಆಕಾಶಕ್ಕೇರಲು ರೆಕ್ಕೆ ಕೊಡವಿಕೊಂಡವು. ಅಷ್ಟರಲ್ಲಿ ಹದ್ದು, ನನ್ನ ಜೀವ ಉಳಿಸಿದ ನೀವುಗಳು ನನ್ನ ಪಾಲಿಗೆ ದೇವರಾದ್ರಿ. ಕಣ್ಣಿಗೊತ್ತಿಕೊಂಡು ನಿಮ್ಮ ಪೂಜಿಸೋಣ ಅಂದರೆ ನೀವದನ್ನು ಒಪ್ಪಲಾರಿರಿ. ಕೊನೆಪಕ್ಷ ನಿಮ್ಮ ಜೊತೆಗಾದರೂ ಇರಲು ಅವಕಾಶ ಕೊಡಿ ಅಂದಿತು.

ಪಾರಿವಾಳಗಳೆಲ್ಲಾ ನಾಯಕನ ತೀರ್ಮಾನವೇನು ಎಂಬಂತೆ ಅದರತ್ತ ನೋಡಿದವು. ಒಂದೆರಡು ಕ್ಷಣ ಯೋಚಿಸಿ ಸ್ವಲ್ಪ ಅನುಮಾನ ಮೂಡಿದರೂ, ಸ್ನೇಹ ಬಯಸಿ ಬಂದವರನ್ನು ದೂರ ತಳ್ಳಬಾರದು ಎಂದು ಜೊತೆಗಿರಲು ಒಪ್ಪಿಗೆ ಕೊಟ್ಟಿತು.

ಅಂದಿನಿಂದ ಬಿಳಿ ಪಾರಿವಾಳಗಳ ಹಿಂಡಿಗೆ ಹದ್ದೂ ಸೇರಿಕೊಂಡಿತು. ಕೆಲವೇ ದಿನಗಳಲ್ಲಿ ಎಲ್ಲರ ವಿಶ್ವಾಸವನ್ನು ಗಳಿಸಿಕೊಂಡಿತು. ಮೊದ ಮೊದಲು ಅನುಮಾನ ಪಟ್ಟರೂ ನಿಧಾನವಾಗಿ ನೀಲಿ ಗರಿಗಳ ಪಾರಿವಾಳಕ್ಕೂ  ಹದ್ದಿನ ಮೇಲೆ ನಂಬಿಕೆ ಮೂಡತೊಡಗಿತು.

ಇದನ್ನೇ ಕಾಯುತ್ತಿದ್ದಂತೆ ಹದ್ದು ಮೆಲ್ಲಮೆಲ್ಲನೆ ತನ್ನ ನೀಚತನ ತೋರಿಸಲಾರಂಭಿಸಿತು. ಮೊದಲಿಗೆ, ಒಗ್ಗಟ್ಟಿನಿಂದಿದ್ದ ಪರಿವಾಳಗಳ ಮಧ್ಯೆಯೇ ಒಡಕು ಮೂಡಿಸಿತು. ಖುಶಿ ಖುಶಿಯಾಗಿದ್ದ ಪಾರಿವಾಳಗಳ ಹಿಂಡನ್ನು ಎರಡು ಗುಂಪು ಮಾಡಿಬಿಟ್ಟು ಎರಡರ ನಡುವೆ ಕಿಚ್ಚು ಹಚ್ಚಿತು. ಒಂದಾಗಿದ್ದ ಪರಿವಾಳಗಳು ಕಿತ್ತಾಟ ಶುರುವಿಟ್ಟುಕೊಂಡವು. ದಿನೇದಿನೇ ಪಾರಿವಾಳಗಳ ನಡುವಿನ ಜಗಳ ಏರುತ್ತಾ ಹೋಯಿತು. ಇಷ್ಟಾದರೂ ಅವಕ್ಕೆ ತನ್ನ ನಾಯಕನ ಮೇಲಿದ್ದ ಗೌರವ, ನಂಬಿಕೆ ಕಡಿಮೆಯಾಗಿರಲಿಲ್ಲ.

ಇದನ್ನು ಸಹಿಸದ ಹದ್ದು, ಮೊದಲು ಆ ಪರಿವಾಳವನ್ನು ಮುಗಿಸಿಬಿಡಬೇಕು ಎಂದು ಯೋಚಿಸಿತು. ಮತ್ತು ಎರಡೂ ಗುಂಪುಗಳಿಂದ ಒಂದೊಂದು ಪಾರಿವಾಳವನ್ನು ಕೊಂದು ತಿಂದು, ಎರಡೂ ಗುಂಪುಗಳು ಪರಸ್ಪರ ಜಗಳವಾಡುವಂತೆ ಮಾಡಿತು. ಅಷ್ಟೇ ಅಲ್ಲ ತಿಂದ ಮುಳ್ಳುಗಳನ್ನು ಯಾರಿಗೂ ಗೊತ್ತಾಗದಂತೆ ಮಲಗಿದ್ದ ನಾಯಕನ ಕಾಲಡಿ ತಂದಿಟ್ಟಿತು.

ಆ ಪರಿವಾಳ ನಿದ್ದೆಯಿಂದ ಏಳುವಾಗ ತನ್ನ ಪ್ರೀತಿಯ ಪರಿವಾರ  ಭೀಕರವಾಗಿ ಜಗಳವಾಡುತ್ತಾ ಪರಸ್ಪರರನ್ನು ತನ್ನ ಕೊಕ್ಕಿನಿಂದ ತಿವಿಯುತ್ತಿದುದ್ದನ್ನು ನೋಡಿ ಜಗಳ ನಿಲ್ಲಿಸಬೇಕೆಂದು ಹೊರಟಿತು. ಅಷ್ಟರಲ್ಲಿ ಅದನ್ನು  ತಡೆದ ಹದ್ದು, ಈ ಜಗಳಕ್ಕೆಲ್ಲಾ ನೀವೇ ಕಾರಣ, ನೀವು ಪಾರಿವಾಳಗಳನ್ನು ಕೊಂದು ತಿಂದುದರಿಂದ ಅವು ಜಗಳವಾಡುತ್ತಿವೆ ಅಂದಿತು. ಆ ನೀಲಿ ಗರಿಯ ಪರಿವಾಳ ತಾನು ಯಾರನ್ನೂ ಕೊಂದಿಲ್ಲ ಅಂದಾಗ ಹದ್ದು ಕಾಲಡಿಯತ್ತ ತೋರಿಸಿ ಮತ್ತೆ ಈ ಎಲುಬುಗಳು ಇಲ್ಲಿಗೆ ಹೇಗೆ ಬಂತು ಎಂದು ಪ್ರಶ್ನಿಸಿತು.

ಆಗ ಪರಿವಾಳವೂ ಗೊಂದಲದಲ್ಲಿ ಬಿತ್ತು. ತಾನು ತಿಂದೇ ಇಲ್ಲ ಎಂದು ಗೊತ್ತಿದ್ದರೂ ಕಣ್ಣೆದುರಿನ ಸತ್ಯ ಮತ್ಯಾವುದೋ ಕಥೆಯನ್ನು ಹೇಳುತ್ತಿತ್ತು.  ಈ ಗೊಂದಲವನ್ನೇ ಉಪಯೋಗಿಸಿಕೊಂಡು ಹದ್ದು ಕೊನೆಗೂ ಅದು ತಾನೇ ಕೊಂದಿರುವುದು ಎಂದು ನಂಬುವಂತೆ ಮಾಡಿತು. ನಾನು ನಂಬಿದ, ಆಚರಿಸಿದ ತತ್ವ ಸಿದ್ಧಾಂತಗಳು ತನ್ನ ಕಣ್ಣೆದುರೇ ಚೆಲ್ಲಾಪಿಲ್ಲಿಯಾಗಿಬಿಟ್ಟಿತಲ್ಲಾ ಅನ್ನುವ ನೋವಲ್ಲಿ ಆ ಪರಿವಾಳ ಬೆಂಕಿಗೆ ಹಾರಿ ತನ್ನನ್ನು ತಾನೇ ಸುಟ್ಟುಕೊಂಡಿತು. ಇತ್ತ ಹದ್ದು ಉಳಿದ ಪಾರಿವಾಳಗಳ ಬಳಿ ಬಂದು ನಿಮ್ಮ ಕಲಹದಿಂದ ಮನನೊಂದು ಅದು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಮತ್ತೊಂದು ಕಥೆ ಕಟ್ಟಿತು. ತಮ್ಮ ನಾಯಕನನ್ನು ಅಷ್ಟೊಂದು ಪ್ರೀತಿಸುತ್ತಿದ್ದ ಪಾರಿವಾಳಗಳು ತಮ್ಮಿಂದಾಗಿ ಅದು ಆತ್ಮಹತ್ಯೆ ಮಾಡಿಕೊಂಡಿತಲ್ಲಾ ಅನ್ನುವ ನೋವಲ್ಲಿ ಒಂದೊಂದು ಪಾರಿವಾಳಗಳು ಒಂದೊಂದು ಕಡೆ ಚದುರಿ ಹೋಯಿತು. ಮತ್ತೆಂದೂ ಅವು ಖುಶಿ ಹಂಚಲೇ ಇಲ್ಲ, ರೆಕ್ಕೆ ಮುರಿದ ಹಕ್ಕಿಗಳಿಗೆ ಹಾರಲು ಕಲಿಸಲೇ ಇಲ್ಲ. ಇತ್ತ ಹದ್ದು ಮತ್ತೆಲ್ಲಾದರೂ ಅಂತಹ ಪಾರಿವಾಳಗಳ ಹಿಂಡು ಇದೆಯಾ ಎಂದು ಹುಡುಕುತ್ತಾ ಹಾರಿಹೋಯಿತು.

ಇಲ್ಲಿಗೆ ಕಥೆ ಮುಗಿಯುತ್ತದೆ. ಆದರೆ ಯಾಕೋ ನನಗೆ ರೋಹಿತ್‌ ವೇಮುಲ ನ ಆತ್ಮಹತ್ಯೆ ಮತ್ತು ಅದರ ನಂತರದ ಕುತ್ಸಿತ ಮನಸ್ಸುಗಳ ಪ್ರತಿಕ್ರಿಯೆಗಳನ್ನು ಗಮನಿಸುವಾಗ ರತ್ನಕ್ಕ ಹಾಗೂ ಆಕೆಯ ಬಿಳಿ ಪಾರಿವಾಳಗಳು ಮತ್ತು ಹದ್ದಿನ ಕಥೆ ನೆನಪಾಯಿತು. ನಿಮ್ಮೊಂದಿಗೂ ಹಂಚಿಕೊಳ್ಳಬೇಕೆನಿಸಿತು, ಅಷ್ಟೇ.

ಗುರುವಾರ, ಫೆಬ್ರವರಿ 4, 2016

ನಮ್ಮನ್ನು ಹೆಣ್ಣು-ಗಂಡು ಎಂದು ಗುರುತಿಸಿಕೊಳ್ಳುವ ಮುನ್ನ , ಬನ್ನಿ ನಾವು ಮನುಷ್ಯರಾಗೋಣ...

ಈಗ್ಗೆ ಎರಡು ದಿನಗಳ ಹಿಂದೆ, ಕಸಿನ್ ಸಿಸ್ಟರ್ ಮದುವೆಗೆ ಶಾಪಿಂಗ್ ಮಾಡಿದ ಡ್ರೆಸ್ ಗಳ ಮಣಭಾರದ ಬ್ಯಾಗನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಇನ್ನೂ ನರ್ಸರಿಯಲ್ಲಿ ಓದುತ್ತಿರುವ ಅಕ್ಕನ ಮಗಳ ಕೈಹಿಡಿದು, ರಣಬಿಸಿಲಲ್ಲಿ ಬೆವರುತ್ತಾ, ಬಾರದ ಮಳೆಗೆ ಮನಸ್ಸಲ್ಲೇ ಬೈಯ್ಯುತ್ತಾ, ತೂರಾಡುತ್ತಾ ಬಂದ ಸರಕಾರೀ ಬಸ್ ಗೆ ಹತ್ತಿ ಉಸ್ಸಪ್ಪಾ ಎಂದು ಕುಳಿತು ಮಡಿಲಲ್ಲಿ ಮಗುವನ್ನೂ ಕುಳ್ಳಿರಿಸಿ ಕಿಟಕಿ ಕಡೆ ಮುಖ ಮಾಡ್ಬೇಕು ಅನ್ನುವಷ್ಟರಲ್ಲಿ ಬಸ್ಸಿನ ಕೊನೆ ಸೀಟಲ್ಲಿ ಗಲಾಟೆ ಕೇಳಿಸಿತು.

ಕತ್ತು ತಿರುಗಿಸಿ ನೋಡಿದಾಗ ಸಭ್ಯರು ಅನ್ನಿಸಿಕೊಂಡಿರುವ, ನಾಗರಿಕರು ಅನ್ನಿಸಿಕೊಂಡಿರುವ, ಮುಖ್ಯವಾಹಿನಿಯ ಸತ್ಪ್ರಜೆಗಳು ಅನ್ನಿಸಿಕೊಂಡಿರುವ ಒಂದ್ಹತ್ತು ಜನರ ಗುಂಪು ಅಸಭ್ಯವಾಗಿ, ಅಶ್ಲೀಲವಾಗಿ ಕಿರುಚುತ್ತಿತ್ತು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಡಿಕ್ಷನರಿಯಲ್ಲಿ ಇಲ್ಲದ ಪದಗಳನ್ನೂ ಉಪಯೋಗಿಸಿ ಬಯ್ಯುತ್ತಾ, ಅವಹೇಳನ ಮಾಡುತ್ತಾ ಗಹಗಹಿಸಿ ನಗುತ್ತಿದ್ದರು.

ಆಗಿದ್ದಿಷ್ಟೆ... ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಗೆ ಭಿಕ್ಷೆ ಬೇಡಲೆಂದು, ತಮ್ಮ ವಿಚಿತ್ರ ಮ್ಯಾನರಿಸಂನಿಂದಲೇ ಹಣ ಕೇಳುವ, ಮುಖದ ಪೂರ್ತಿ ಕ್ರೀಂ ಪೌಡರ್ ಹಚ್ಚಿಕೊಂಡಿದ್ದ ಮಂಗಳ ಮುಖಿಯೊಬ್ಬರು  ಪ್ರವೇಶಿಸಿದ್ದರು. ಅಷ್ಟಕ್ಕೇ ನಮ್ಮ ನಾಗರಿಕ ಬಂಧುಗಳಲ್ಲಿದ್ದ ಮತ್ತೊಬ್ಬರನ್ನು ನೋಯಿಸುವ, ಹೀಯಾಳಿಸುವ, ನಿಂದಿಸುವ ಪೈಶಾಚಿಕ ಮನೋವೃತ್ತಿ ಕುರುಡು ಕುರುಡಾಗಿ ಕುಣಿಯಲಾರಂಭಿಸಿತ್ತು.



ಒಬ್ಬ ವ್ಯಕ್ತಿಯನ್ನು ಒಂದು ಸಣ್ಣ ಗುಂಪೇ ರೇಗಿಸುತ್ತಿದ್ದುದನ್ನು ನೋಡಿಯೂ ನನ್ನನ್ನೂ ಸೇರಿಸಿ ಇಡೀ ಬಸ್ಸು ಮೌನವಾಗಿತ್ತು. ಆದ್ರೆ ನನ್ನ ಮಡಿಲಲ್ಲಿದ್ದ ಮಗು ನನಗೆ ಮತ್ತಷ್ಟು ಆತುಕೊಂಡು "ದೀದಿ, ಆ ಆಂಟಿಗ್ ಎಂದಿಗ್ ಎಲ್ಲಾರುಂ ಪರೆಯಿಡೆ? ಆಂಟಿ ಎಂದ್ರೆ ತಪ್ಪಾಕಿಡ್?" (ಅಕ್ಕಾ, ಆ ಆಂಟಿಗ್ಯಾಕೆ ಎಲ್ರೂ ಬೈತಿದ್ದಾರೆ? ಆಂಟಿ ಏನು ತಪ್ಪು ಮಾಡಿದ್ದಾರೆ?) ಅಂತ ಕೇಳಿತು. ತಪ್ಪು ಮಾಡಿದವರಷ್ಟೇ ಬೈಸಿಕೊಳ್ಳಲು ಅರ್ಹರು ಅನ್ನುವ ಮಗುವಿಗಿದ್ದ ಸೂಕ್ಷ್ಮ ತಿಳುವಳಿಕೆಯ ಮುಂದೆ ಯಾಕೋ ನನ್ನ ಓದು, ಬರಹಗಳೆಲ್ಲವೂ ಜಾಳು ಜಾಳು ಅನಿಸಿತು.

ಗಾಢವಾಗಿ ಬಳಿದ ಲಿಪ್ಸ್ಟಿಕ್, ನಾಜೂಕಿಲ್ಲದ ನಡಿಗೆ, ತೋಳಿಲ್ಲದ ರವಿಕೆ, ಕೈಯಲ್ಲೊಂದು ಪುಟ್ಟ ವ್ಯಾನಿಟ್ ಬ್ಯಾಗ್, ಏನನ್ನೋ ಜಗಿಯುತ್ತಿರುವಂತೆ ಪ್ರತಿಕ್ಷಣ ಕದಲುವ ಕೆನ್ನೆ, ಕಣ್ಣಿನ ಪೂರ್ತಿ ತಿರಸ್ಕಾರದ ನೋವು... ಇವಿಷ್ಟನ್ನು ಅವಾಹಿಸಿಕೊಂಡಿರುವ ವ್ಯಕ್ತಿಯನ್ನು ಅದೆಲ್ಲೇ ಕಂಡರೂ ಮನಸ್ಸು ತಟ್ಟನೆ ಅವರು ಮಂಗಳಮುಖಿ ಅನ್ನುವ ನಿರ್ಧಾರಕ್ಕೆ ಬಂದುಬಿಡುತ್ತದೆ ಮತ್ತು ಬಹುತೇಕ ಸಂದರ್ಭಗಳಲ್ಲಿ ಅದು ನಿಜವೂ ಆಗಿರುತ್ತದೆ.

ಗಂಡು ಮತ್ತು ಹೆಣ್ಣು ಎಂಬ ಎರಡೇ ವ್ಯವಸ್ಥೆಗಳಿಗೆ ಒಗ್ಗಿಕೊಂಡು ಸಮಾಜವನ್ನು ರೂಪಿಸಿಕೊಂಡಿರುವ ನಾವು ಮಂಗಳಮುಖಿಯರ ಬಗ್ಗೆ ಮಾತನಾಡುವಾಗೆಲ್ಲಾ ಅವರ ಅಸಭ್ಯ ನಡವಳಿಕೆ,  ಕುಹುಕ ಮಾತು,  ಅಶ್ಲೀಲ ಹಾವಭಾವ, ಭಿಕ್ಷಾಟನೆಗಳ ಕುರಿತಾಗಿಯೇ ಹೆಚ್ಚು ಚರ್ಚಿಸುತ್ತೇವೆ. ಆದರೆ ಅವರ ಅಂತಹ ನಡವಳಿಕೆಗಳಿಗೆ ಕಾರಣಗಳೇನು ಅನ್ನುವುದನ್ನು ಮಾತ್ರ ನಮ್ಮ ನಾಗರಿಕ ಸಮಾಜ ಅರಿತುಕೊಳ್ಳುವ ಗೋಜಿಗೇ ಹೋಗುವುದಿಲ್ಲ.

ಬಹುತೇಕ ಮಂಗಳಮುಖಿಯರು ಗಂಡಾಗಿ ಹುಟ್ಟಿ ಹೆಣ್ಣಿನ ಸಂವೇದನೆಗಳನ್ನು ಹೊಂದಿರುವವರು. ತಾನು ಅತ್ತ ಗಂಡೂ ಅಲ್ಲ, ಇತ್ತ ಹೆಣ್ಣೂ ಅಲ್ಲ ಅನ್ನುವುದು ಸಂಪೂರ್ಣವಾಗಿ ಅರ್ಥವಾಗುವ ಹೊತ್ತಿಗಾಗುವಾಗಲೇ ಕುಟುಂಬ, ಸಮಾಜ ಅವರನ್ನು ತಮ್ಮಿಂದ ದೂರಮಾಡಿರುತ್ತದೆ. ಆ ಅವಮಾನ, ತಾತ್ಸಾರಗಳನ್ನು ಮೆಟ್ಟಿನಿಲ್ಲಲು ಒಂದು ಹಂತದವರೆಗಿನ ಕ್ರೌರ್ಯವನ್ನು ಅವರು ಮೈಗೂಡಿಸಲೂಬಹುದು. ಅದು ಅವರಿಗಾಗುತ್ತಿರುವ ಅನ್ಯಾಯದ ವಿರುದ್ಧದ  ಪ್ರತಿಭಟನೆಯೇ ಹೊರತು ಕ್ರೌರ್ಯವೆಸಗಲೇ ಬೇಕು ಅನ್ನುವ ಮನಸ್ಥಿತಿಯಿಂದ ಹುಟ್ಟಿದ ನಡವಳಿಕೆಯಲ್ಲ. ತೀರಾ ಇತ್ತೀಚಿನವರೆಗೂ ಸಾಮಾನ್ಯ ಮನುಷ್ಯರು ಅನುಭವಿಸುವ ಅಂದರೆ ವೋಟರ್ ಐಡಿ, ರೇಷನ್ ಕಾರ್ಡ್ ಗಳಂತಹ ಯಾವ ಸೌಲಭ್ಯಗಳೂ ಅನುಭವಿಸಲು ಅವರು ಅನರ್ಹರೆಂದೇ ಪರಿಗಣಿಸಲಾಗಿತ್ತು. ಅಷ್ಟೇಕೆ ಅವರನ್ನು ಮನುಷ್ಯರೆಂದು ಪರಿಗಣಿಸದ ಮನಸ್ಥಿತಿ ಇರುವ ಒಂದು ಬಹುದೊಡ್ಡ  ಸಮೂಹ ಈಗಲೂ ನಮ್ಮ ಮಧ್ಯೆ ಇದೆ.

ಹಾಗೆ ನೋಡುವುದಾದರೆ, ಮನುಷ್ಯನ ದೇಹ ರಚನೆಯೇ ಒಂದು ಅದ್ಭುತ. ಅದು ಯಾವ ಅನಾಟಮಿಗೂ, ಯಾರ ವಿಕಾಸವಾದಕ್ಕೂ ಸಂಪೂರ್ಣವಾಗಿ ದಕ್ಕದ ವಿಸ್ಮಯ. ವಿಜ್ಞಾನದ ಪ್ರಕಾರ ಶಕ್ತಿಗೆ ಕ್ಷಯವಿಲ್ಲ, ಅದು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತನೆ ಹೊಂದಬಹುದೇ ಹೊರತು ಸಂಪೂರ್ಣವಾಗಿ ಯಾವತ್ತೂ ನಾಶಹೊಂದಲಾರದು. ಹಾಗಿದ್ದರೆ ಏಕಾಣು ಬ್ಯಾಕ್ಟೀರಿಯಾ ಹಂತಹಂತವಾಗಿ ವಿಕಾಸವಾಗಿ, ಹಲವು ರೂಪಗಳನ್ನು ಪಡೆದು ಕೊನೆಗೆ ಈಗಿರುವ ಮಾನವ ರೂಪದಲ್ಲಿ ಬಂದು ನಿಂತು ವಿಕಾಸದ ಮಜಲು ಒಂದು ಹಂತಕ್ಕೆ ಪೂರ್ಣಗೊಂಡಿದೆ ಎಂದು ಪ್ರತಿಪಾದಿಸುವ ವಿಕಾಸವಾದದಲ್ಲಿ ಜೀವ ವಿಕಾಸಕ್ಕಿಂತ ಮೊದಲಿದ್ದ ಮೊದಲ ಆ ಏಕಾಣು ಬ್ಯಾಕ್ಟೀರಿಯಾಕ್ಕೆ ಸಾವು ಇರಲಿಲ್ಲವೇ? ಅನ್ನುವ ಪ್ರಶ್ನೆಗೆ ಉತ್ತರವಿಲ್ಲ.

ಹೀಗಿದ್ದರೂ ನಾವು ದೇಹ ರಚನೆಯ ಭಿನ್ನತೆಯನ್ನೇ ಆಧಾರವಾಗಿಟ್ಟುಕೊಂಡು ತಮ್ಮದಲ್ಲದ ತಪ್ಪಿಗಾಗಿ ಮಂಗಳಮುಖಿಯರನ್ನು ಅವಮಾನಿಸುವುದು, ತುಚ್ಛವಾಗಿ ಕಾಣುವುದು ಎಷ್ಟು ಸರಿ? ದೇಹರಚನೆಯಲ್ಲಿ ಭಿನ್ನತೆ ಇದ್ದ ಮಾತ್ರಕ್ಕೆ ಅವರು ಭಾವನೆಗಳೇ ಇಲ್ಲದ ಕಲ್ಲುಗಳು ಅಂತೇಕೆ ನಾವು ಭಾವಿಸಬೇಕು? ನಮ್ಮಂತೆಯೇ ಇಲ್ಲಿ ಅವರಿಗೂ ಬದುಕುವ ಹಕ್ಕಿದೆ ಅನ್ನುವುದನ್ನು ಯಾಕೆ ಅರ್ಥ ಮಾಡಿಕೊಳ್ಳಲಾರೆವು?

ಯಾಕೆಂದರೆ ’ಮುಟ್ಟದಿರುವುದು’ ಮತ್ತು ’ಮುಟ್ಟಿಸದಿರುವುದು’ ಶತಶತಮಾನಗಳಿಂದಲೂ ನಮ್ಮ ಜೀನ್ ಗಳಲ್ಲಿ ಹರಿದು ಬಂದು ಇನ್ನೂ ಅಸ್ತಿತ್ವ ಉಳಿಸಿಕೊಂಡಿರುವ ಒಂದು ವಿನಾಶಕಾರೀ ಬಹು ಅಣು ಬ್ಯಾಕ್ಟೀರಿಯಾ. ಅದೆಷ್ಟೇ ಪ್ರಗತಿಪರರು ಅನ್ನಿಸಿಕೊಂಡರೂ, ವೇದಿಕೆ ಕಟ್ಟಿ ಸಮಾನತೆ, ಸಹಬಾಳ್ವೆಗಳ ಬಗ್ಗೆ ಉರುಹೊಡೆದು ಭಾಷಣ ಮಾಡಿದರೂ ಆಳದಲ್ಲಿನ್ನೂ ನಾವು ಸಿಂಬಿ ಸುತ್ತಿ ಮಲಗಿರುವ ’ಉಚ್ಛ-ನೀಚ’ ಭಾವನೆಗಳ ಘಟಸರ್ಪವನ್ನು ಪೋಷಿಸುತ್ತಲೇ ಇದ್ದೇವೆ. ನಮ್ಮ ’ಉತ್ತಮಿಕೆ’ಯ ಅಹಂಗಳನ್ನು ತಣಿಸಲು ಮತ್ಯಾರನ್ನೋ ನೀಚರನ್ನಾಗಿಸಿ ಮಾನಸಿಕ ದಿವಾಳಿತನಕ್ಕೆ ಅಡಿಗಲ್ಲು ಹಾಕುತ್ತಾ ಭ್ರಮೆಗಳ ಮೇಲೆ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುತ್ತೇವೆ. ಸಾಮಾಜಿಕ ಜವಾಬ್ದಾರಿ, ಕಾಳಜಿಯ ಪ್ರಶ್ನೆ ಬಂದಾಗೆಲ್ಲಾ ಮತ್ತೊಬ್ಬರತ್ತ ಕೈ ತೋರಿಸಿ ನಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತೇವೆ. ಈ ನುಣುಚಿಕೊಳ್ಳುವಿಕೆಯಿಂದಾಗಿಯೇ ಎಲ್ಲರಿಗೂ ಸಮಬಾಳು, ಸಮಪಾಲು ಅನ್ನುವ ತತ್ವದಡಿ ಆರ್ದ್ರವಾಗಿ, ಹೃದ್ಯವಾಗಿ ರೂಪುಗೊಳ್ಳಬೇಕಾಗಿದ್ದ ಸಮಾಜದ ಪರಿಕಲ್ಪನೆ ಜಾಳುಜಾಳಾಗಿ ಕ್ರೌರ್ಯ, ಆಕ್ರಮಣಗಳೇ ವಿಜೃಂಭಿಸುತ್ತಿರುವುದು.

ತರತಮದ ಮೆಟ್ಟಿಲಮೇಲೆ ಮಂಗಳಮುಖಿಯರನ್ನೇ ಜಮಖಾನೆಯನ್ನಾಗಿಸಿ ನಿಂತು ನಮ್ಮನ್ನು ನಾವು ಹೆಣ್ಣು-ಗಂಡು ಎಂದು ಗುರುತಿಸುವ ಮುನ್ನ , ಬನ್ನಿ ನಾವು ಮನುಷ್ಯರಾಗೋಣ...