ಬುಧವಾರ, ಡಿಸೆಂಬರ್ 28, 2016

ಬದುಕು ಕಳೆಕಟ್ಟುವುದು ಕತ್ತಲು ಬೆಳಕುಗಳ ಅಸ್ಪಷ್ಟ ನೆರಳಿನಲ್ಲೇನೋ?

ಬೆಳಕಿನ ಮರಣದ ಮರುಘಳಿಗೆಯೇ ಕತ್ತಲು ಹುಟ್ಟಿಕೊಳ್ಳುತ್ತದೆ. ನೀವೇನೋ ಅದು ಕತ್ತಲಲ್ಲ, ಮಬ್ಬುಗತ್ತಲು ಅನ್ನುತ್ತೀರೇನೋ? ಆದರೆ, ಮಬ್ಬುಗತ್ತಲೂ ಕತ್ತಲೇ ಅಲ್ಲವೇ? ಇಷ್ಟಕ್ಕೂ ನಾನು ಕತ್ತಲಿಗಿಂತಲೂ ಹೆಚ್ಚು ಭಯ್ಪಟ್ಟುಕೊಳ್ಳುವುದು ಮಬ್ಬುಗತ್ತಲಿಗೇ. ಮುಸ್ಸಂಜೆಯಾಗುತ್ತಿದ್ದಂತೆ ಅದರ ಮ್ಲಾನತೆ ಎಲ್ಲಿ ನನ್ನೊಳಗೂ ಆವರಿಸುತ್ತದೇನೋ ಅನ್ನುವ ದಿಗಿಲಿಗೆ ಬಿದ್ದುಬಿಡುತ್ತೇನೆ. ಎಲ್ಲಿ ಕತ್ತಲಿನ ಉನ್ಮತ್ತತೆ ಬೆಳಕನ್ನು ಇಡಿಇಡಿಯಾಗಿ ನುಂಗಿಬಿಡುತ್ತದೋ ಅನ್ನುವ ಭಯವದು.

ಕತ್ತಲು-ಬೆಳಕಿನ ನಡುವಿರುವುದು ಒಂದು ಕ್ಷಣದ ಒಂದು ಪುಟ್ಟ ಭಾಗವಷ್ಟೆ. ಕತ್ತಲೆಂಬ ವಿಪ್ಲವಕ್ಕೆ ಮುಖಾಮುಖಿಯಾದಾಗೆಲ್ಲಾ ನನ್ನ ಕಾಡುವುದು ನಿರ್ಮಲ ಬಾಲ್ಯ ಮತ್ತದರ ಒಡಲಲ್ಲಿ ಸಿಂಬಿ ಸುತ್ತಿ ಮಲಗಿರುವ ಅಜ್ಜನ ಮರಣವೆಂಬ ಕರಾಳ ಕಾರ್ಕೋಟ.

ನಾಡ ಹೆಂಚಿನ ಸಂದುಗಳಿಂದ ಮನೆಯೊಳಗೆ ತೂರಿ ಬರುತ್ತಿದ್ದ ಬಿಸಿಲುಕೋಲು, ಅದರ ಪೂರ್ತಿ ನರ್ತಿಸುತ್ತಿದ್ದ ಧೂಳಕಣಗಳು, ಮನೆ ಎದುರಿಗಿದ್ದ ಎರಡು ಬೃಹತ್ ಗಾತ್ರದ ಹಲಸಿನ ಮರ, ಬೇಲಿ ತುಂಬಾ ಅರಳುತ್ತಿದ್ದ ಕಾಗದದ ಹೂವು, ಛಾವಣಿಯಲ್ಲಿ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿ,  ಹೆಸರು ಗೊತ್ತಿಲ್ಲದ ಒಂದಿಷ್ಟು ಹಕ್ಕಿಗಳು, ಸದಾ ಸೋಜಿಗವನ್ನುಂಟು ಮಾಡುತ್ತಿದ್ದ ಅಳಿಲು, ಕಲ್ಪಿಸಿಕೊಂಡಷ್ಟೂ ಹಿಗ್ಗುತ್ತಿದ್ದ ಆಕಾಶದ ವಿಶಾಲತೆ, ಕಪಾಟಿನ ಪೂರ್ತಿ ತುಂಬಿಕೊಂಡಿದ್ದ ಅಜ್ಜನ ದಪ್ಪ-ದಪ್ಪ ಪುಸ್ತಕಗಳು, ಪಕ್ಕದಲ್ಲಿದ್ದ ಸ್ಟ್ಯಾಂಡ್ನಲ್ಲಿ ಅಚ್ಚುಕಟ್ಟಾಗಿ ಜೋಡಿಸಿಡುತ್ತಿದ್ದ ಉದಯವಾಣಿ, ಸುಧಾ, ಮಯೂರ, ತುಷಾರ, ಕರ್ಮವೀರ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳು, ಆಗಾಗ ಅಜ್ಜ-ಅಜ್ಜಿಯ ಮಧ್ಯೆ ಸುಧಾ ಶ್ರೇಷ್ಠವೆಂದೋ ಇಲ್ಲ ಕರ್ಮವೀರ ಶ್ರೇಷ್ಠವೆಂದೋ ನಡೆಯುತ್ತಿದ್ದ ಹುಸಿ ಜಗಳಗಳು, ಆರು ತಿಂಗಳುಗಳಿಗೊಮ್ಮೆ ಊರಿಗೆ ಬರುತ್ತಿದ್ದ ಮಾವ ಅಷ್ಟೂ ತಿಂಗಳುಗಳ ಸುಧಾವನ್ನು ಒಂದೆರಡು ದಿನಗಳಲ್ಲಿ ಓದಿ ಮುಗಿಸಲು ಪಡುತ್ತಿದ್ದ ಪರಿಪಾಡಲು, ಇನ್ನೂ ಶಾಲೆಗೆ ಹೋಗಲು ಪ್ರಾರಂಭಿಸುವ ಮುನ್ನವೇ ಅಜ್ಜ ಮಾಡಿಸಿದ್ದ ಅಕ್ಷರ ಪರಿಚಯ, ಹೇಳುತ್ತಿದ್ದ ನೀತಿ ಕಥೆಗಳು, ಇಸ್ಲಾಮಿಕ್ ಚರಿತ್ರೆಯ ತುಣುಕುಗಳು, ಪೌರಾಣಿಕ ಕಥೆಗಳು, ನನ್ನ ಮತ್ತು ಅಣ್ಣನ ಹುಡುಗು ಪ್ರಶ್ನೆಗಳಿಗೆ, ನಮ್ಮ ಅರಿವಿನ ಮಟ್ಟಕ್ಕೆ ಇಳಿದು ಉತ್ತರಿಸುತ್ತಿದ್ದ ಅವರ ತಾಳ್ಮೆ, ಮುಸ್ಸಂಜೆಯಾಗುತ್ತಿದ್ದಂತೆ ಅಚ್ಛ ಬಿಳಿ ಶರ್ಟ್ , ಅಷ್ಟೇ ಬಿಳಿಯ ಲುಂಗಿ, ತಲೆಗೊಂದು ಗಾಂಧಿ ಟೋಪಿ ಧರಿಸಿಕೊಂಡು ಮಸೀದಿಗೆ ಹೋಗುತ್ತಿದ್ದ ಅವರ ಠೀವಿ... ಇವೆಲ್ಲಾ ನನ್ನಲ್ಲಿ ಪ್ರಪಂಚ ಅರಿಯುವ ಮುನ್ನವೇ ಒಂದು ವಿಸ್ಮಯವನ್ನು ಹುಟ್ಟು ಹಾಕಿತ್ತು.

ಮುಂದೆ ಶಾಲೆ, ಮದ್ರಸಗಳಿಗೆ ಹೋಗಲು ಶುರು ಮಾಡಿದಂತೆ ನನ್ನೊಳಗೆ ತೆರೆದುಕೊಂಡದ್ದು ಮತ್ತೊಂದು ಪ್ರಪಂಚದ ವಿಸ್ಮಯ. ಅದೊಂದು ಹಲವು ಸಂಸ್ಕೃತಿ, ಭಾಷೆ, ವಿಭಿನ್ನ ಪರಿಸರಗಳ ಕಲಸುಮೋಲೋಗರ ಅನಿಸುತ್ತಿತ್ತು. ನಮ್ಮಂತೆ ಅವರಿಲ್ಲ ಅಥವಾ ಅವರಂತೆ ನಾವಿಲ್ಲ ಅನ್ನುವ ಕಲ್ಪನೆ ಮೊದಲು ಮೊಳಕೆಯೊಡೆದದ್ದೇ ಶಾಲೆ ಮತ್ತು ಮದ್ರಸಗಳಲ್ಲಿ. ಅಷ್ಟೂ ದಿನಗಳು ಮುದ್ದು ಮಾಡಿಸಿ ಮಾತ್ರ ಗೊತ್ತಿದ್ದ ನಮಗೆ, ಬರೆಯದ ಕಾಪಿ, ಮಾಡದ ಹೋಮ್‍ವರ್ಕ್‍ಗಳಿಗೆ, ಬಾರದ ಮಗ್ಗಿ, ಕಂಠಪಾಠ ಮಾಡದ ಸ್ತೋತ್ರಗಳಿಗಾಗಿ ಶಿಕ್ಷೆ ಇದೆ ಅನ್ನುವುದು ತಿಳಿದಾಗ ಆದ ಅಚ್ಚರಿ ಅಷ್ಟಿಷ್ಟಲ್ಲ.

ಇನ್ನು ಮಳೆಗಾಲದಲ್ಲಿ ಸಂಜೆಯಾಗುತ್ತಿದ್ದಂತೆ ಸುರಿಯುತ್ತಿದ್ದ ಜಿಟಿಜಿಟಿ ಮಳೆ, ಆ ಮಳೆಯಲ್ಲಿ ನೆನೆಯೋ ಸಂಭ್ರಮ, ಮಳೆಗೋಸ್ಕರ ಅಂತಾನೇ ಅಜ್ಜಿ ಎತ್ತಿಡುತ್ತಿದ್ದ ಹಪ್ಪಳ-ಸಂಡಿಗೆ, ಆಗಿನ್ನೂ  SSLC  ಓದ್ತಿದ್ದ ಚಿಕ್ಕಮ್ಮನಿಗೂ ನನಗೂ ಆಗುತ್ತಿದ್ದ ಜಗಳ, ಬಾಲಮಂಗಳದ ಕಥೆಯನ್ನೂ ಓದದೆ ಕೇವಲ ಚಿತ್ರ ಮಾತ್ರ ನೋಡಿ ರಾತ್ರಿಯಾಗುತ್ತಿದ್ದಂತೆ ಕಥೆ ಹೇಳೆಂದು ಪೀಡಿಸುತ್ತಿದ್ದ ಅಣ್ಣ... ಇವುಗಳದ್ದೆಲ್ಲಾ ಒಂದು ತೂಕವಾದರೆ ಮಣ್ಣಿನ ಸೆಳೆತವಿದ್ದ ಆಟಗಳದೇ ಒಂದು ತೂಕ.

ನನ್ನ ಓರಗೆಯ ಹುಡುಗಿಯರೆಲ್ಲಾ ಗೊಂಬೆಗೆ ಫ್ರಾಕ್ ತೊಡಿಸಿ, ಕಪ್ಪು ಸ್ಕೆಚ್ ಪೆನ್ನಿಂದ ಗಲ್ಲದ ಮೇಲೊಂದು ಬೊಟ್ಟಿಟ್ಟು, ಹೂವು ಮುಡಿಸಿ ಸಂಭ್ರಮಿಸುತ್ತಿರುವಾಗ ನಾನು ಮಾತ್ರ ನನಗಿಂತ ದೊಡ್ಡ ಬ್ಯಾಟ್ ಹಿಡಿದು, ಅಡಕೆ ಮರದ ಹಾಳೆಯನ್ನು ಪ್ಯಾಡ್ ಮಾಡಿಕೊಂಡು ಅಂಗಳಕ್ಕಿಳಿದು ಕ್ರಿಕೆಟ್ ಆಡುತ್ತಿದ್ದೆ. ಮನೆಯವರ ಕಣ್ಣು ತಪ್ಪಿಸಿ ಬೇಲಿ ದಾಟಿ ಹೋಗಿ ಅಲ್ಲಿದ್ದ ಪೇರಳೆ ಮರ ಹತ್ತಿ ಹಣ್ಣು ಕೀಳುತ್ತಿದ್ದೆ. ಒಮ್ಮೆ ಯೂಸುಫಾಕನ ಸೈಕಲ್ ಅಂಗಡಿಯಿಂದ (ಮುಂದೆ ಅವರು ಕೋಮುಗಲಭೆಯಲ್ಲಿ ಕೊಲೆಯಾಗಿ ಹೋದ್ರು, ಮನುಷ್ಯ ಮನಸ್ಸಿನ ದಿವಾಳಿತನಕ್ಕೆ ಸಾಕ್ಷಿಯೇನೋ ಎಂಬಂತೆ ಅವರು ಕೊಲೆಯಾದ ಮರುದಿನವೇ ಕೆಲವು ರಾಕ್ಷಸರು ಅವರ ಅಂಗಡಿಗೆ ಹೋಗಿ ಅಲ್ಲಿದ್ದ ಸೈಕಲ್‍ಗಳನ್ನು ಹೊತ್ತುಕೊಂಡು ಹೋಗಿದ್ದರು) ಬಾಡಿಗೆಗೆ ಸೈಕಲ್ ಕಲಿಯಲೆಂದು ತಂದು, ಆಮೇಲೆ ಅವರಿಗೆ ಕೊಡೋಕೆ ಹಣ ಇಲ್ಲದೆ ಒಂದು ದೊಡ್ಡ ರಾದ್ಧಾಂತವೇ ಆಗಿಹೋಗಿತ್ತು. ನನ್ನ ಗೆಳತಿಯರೆಲ್ಲಾ ಉಷಾ ನವರತ್ನರಾವ್, ಸಾಯಿಸುತೆ ಅವರನ್ನು ಓದುತ್ತಿದ್ದಾಗ ನಾನು ರಾಕೆಟ್ ಸೈನ್ಸ್ ಬೆನ್ನು ಬಿದ್ದಿದ್ದೆ, ಲೆನಿನ್, ಚಿಗುವೆರಾರನ್ನು ಓದುತ್ತಿದ್ದೆ. ಆಗೆಲ್ಲಾ ಅಜ್ಜಿ ನನ್ನ ಕೂರಿಸಿಕೊಂಡು ಗಂಟೆಗಟ್ಟಲೆ ಬುದ್ಧಿ ಹೇಳುತ್ತಿದ್ದರು, ಮರ ಹತ್ತೋದು, ಗುಡ್ಡ ತಿರುಗುವುದು ಇವೆಲ್ಲಾ ಹುಡುಗಿಯರಿಗೆ ಹೇಳಿ ಮಾಡಿಸಿದ್ದಲ್ಲ ಅನ್ನುತ್ತಿದ್ದರು. ಕಥೆ, ಕವನ, ಓದು, ಬರಹ ಅಂತೆಲ್ಲಾ  ಆಸಕ್ತಿ ತೋರಿದಾಗಲೂ ಅಷ್ಟೆ, ಅಜ್ಜಿ ಇವೆಲ್ಲಾ ಬೇಡ, ಮುಂದೆ ನಿನಗೇ ಕಷ್ಟ ಆಗುತ್ತೆ ಅಂತ ಅನ್ನುತ್ತಿದ್ದರು.ಆದರೆ ಅಜ್ಜನದು ಮಾತ್ರ ನನ್ನ ಹುಚ್ಚಾಟಗಳಿಗೆಲ್ಲಾ ಮೌನಮುದ್ರೆ. ಕೆಲವೊಮ್ಮೆ ಅಜ್ಜಿ ಬಳಿ ಅವಳು ಅವಳಿಷ್ಟದಂತೆ ಬದುಕಲಿ ಬಿಡು ಅನ್ನುತ್ತಿದ್ದುದೂ ಇದೆ. ನಾನಾದರೂ ಅಷ್ಟೆ, ಬೆಳಗ್ಗಿನಿಂದ ರಾತ್ರಿಯವರೆಗೂ ಅವರ ಹಿಂದೆ ಮುಂದೆ ಸುತ್ತುತ್ತಾ, ಅವರು ಹಾರೆ-ಪಿಕಾಸಿ ಹಿಡಿದು ತೆಂಗಿನ ಮರದ ಬುಡ ಬಿಡಿಸುವಾಗೆಲ್ಲಾ, ನಾನೇನೋ ಅವರಿಗೆ ದೊಡ್ಡ ಉಪಕಾರ ಮಾಡುತ್ತಿದ್ದೇನೆ ಅನ್ನುವ ಭ್ರಮೆಯಲ್ಲಿ ಫೋಸ್ ಕೊಡ್ತಿದ್ದೆ. ಈಗ ಕೂತು ಬಾಲ್ಯದ ಅಷ್ಟೂ ನೆನಪುಗಳನ್ನು ಕೆದಕಿ ನೋಡಿದರೆ, ನನ್ನ ಕಣ್ಣಮುಂದೆ ಬರುವುದು ಅಜ್ಜ ಮತ್ತು ಅಣ್ಣನೊಂದಿಗಿನ ಒಡನಾಟಗಳೇ. ಒಂದರ್ಥದಲ್ಲಿ ನನ್ನ ಬಾಲ್ಯವನ್ನು ಚೆಂದಗಾಣಿಸಿದ್ದೇ ಅವರಿಬ್ಬರು.

ಆದರೆ, ಎಲ್ಲಾ ಒಳ್ಳೆಯದಕ್ಕೂ ಒಂದು ಅಂತ್ಯವಿದೆ ಅನ್ನುವಂತೆ, ಒಂದು ಶುಕ್ರವಾರ, ಬೆಳಗ್ಗಿನ ಜಾವ ಮಸೀದಿ ಮಿನಾರದಿಂದ ಬಾಂಗ್ ಮೊಳಗುತ್ತಿದ್ದಂತೆ, ಅವರು ಎದೆ ಹಿಡಿದು ಕೂತು ಬಿಟ್ಟರು. ಆವತ್ತಿನವರೆಗೆ ಆಸ್ಪತ್ರೆಯ ಹೆಸರು ಹೇಳಿದರೇ ಸಿಡಿಮಿಡಿಗುಡುತ್ತಿದ್ದ ಅಜ್ಜ, ಅವತ್ತು ಮಾತ್ರ ಮಾವನನ್ನು ಕರೆದು, ನನ್ನ ಅಡ್ಮಿಟ್ ಮಾಡಿಸೋ ಅಂದರು. ನಾನು ನಿದ್ದೆಯಿಂದೆದ್ದು ಕಣ್ಣು ಕಣ್ಣು ಬಿಡುತ್ತಿದ್ದರೆ, ಅಣ್ಣ ಇನ್ನೂ ಮಲಗೇ ಇದ್ದ. ತೀರಾ ಆಂಬ್ಯುಲೆನ್ಸ್ ಹತ್ತುವ ಮುನ್ನ ಅವರು, ಮಕ್ಕಳಿಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳಿ ಎಂದು ಮಾವ ಮತ್ತು ಅಜ್ಜಿಗೆ ಹೇಳಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಆಂಬ್ಯುಲೆನ್ಸ್ ಹೊರಡುತ್ತಿದ್ದಂತೆ ನಾನೂ, ಅಣ್ಣ ಇಬ್ರೂ ಹಲಸಿನ ಮರದಡಿಯಲ್ಲಿ ಕೂತು ಅವರ ಬರವನ್ನೇ ನಿರೀಕ್ಷಿಸುತ್ತಿದ್ದೆವು, ಆದರೆ ಬಂದದ್ದು ಮಾತ್ರ ಅವರ ಮರಣದ ವಾರ್ತೆ. ಫೋನೆತ್ತಿದ ಚಿಕ್ಕಮ್ಮ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳುತ್ತಾ ಅಜ್ಜಿಗೂ ವಿಷಯ ತಿಳಿಸಿದರು, ಹೇಳಲೋ ಬೇಡವೋ ಎಂಬಂತೆ ನಮ್ಮನ್ನೂ ಕರೆದು ಸೂಕ್ಷ್ಮವಾಗಿ ಹೇಳಿ ಒಳಸರಿದರು. ಆಗಿನ್ನೂ ಮಕ್ಕಳೇ ಆಗಿದ್ದ ನಮಗೆ ಸಾವೆಂದರೆ ಎಂತಹ ದಿಗ್ಬ್ರಾಂತಿ ಅನ್ನುವುದು ಪೂರ್ತಿಯಾಗಿ ಅರ್ಥವಾಗಿರಲಿಲ್ಲ. ಆದರೆ ಅರ್ಥ ಆದಾಗ ನನ್ನ ಮಟ್ಟಿಗಂತೂ ಕಾಲ ಪೂರ್ತಿ ಸ್ಥಂಭಿಸಿತ್ತು. ಆಡಿಸುತ್ತಿದ್ದ ಸೂತ್ರಧಾರ ತೊಗಲು ಗೊಂಬೆನಾ ವೇದಿಕೆಯಲ್ಲೇ ಬಿಟ್ಟು ನಿರ್ಗಮಿಸಿದ ಹಾಗಾಗಿತ್ತು ನನ್ನ ಸ್ಥಿತಿ. ಸುತ್ತಲಿನ ಪ್ರಪಂಚದೊಂದಿಗಿನ ಸಂವಹನವನ್ನೇ ಕಡಿದುಕೊಂಡೆ,  ಅಮ್ಮ, ಅಪ್ಪ, ಅಣ್ಣ, ಮಾವಂದಿರು ಎಲ್ಲರೂ ಇದ್ದರೂ ನಾನು ಅನಾಥಳಾಗಿದ್ದೇನೆ ಅನ್ನುವ ಭಾವ ಪದೇ ಪದೇ ಕಾಡುತ್ತಿತ್ತು. ಬದುಕಲ್ಲಿ ಮೊದಲ ಬಾರಿ ಅಭೇದ್ಯ ಕತ್ತಲಿಗೆ ಮುಖಾಮುಖಿಯಾದೆ.

ಇವೆಲ್ಲಾ ಆಗಿ ಹೋಗಿ ಭರಪೂರ ಹದಿನೇಳು ವರ್ಷಗಳೇ ಕಳೆದುಹೋಗಿವೆ. ಈ ಹದಿನೇಳು ವರ್ಷಗಳಲ್ಲಿ ಅವರು ನೆನಪಾಗದ ದಿನಗಳೇ ಇಲ್ಲವೇನೋ? ನನ್ನ ಪ್ರತಿ ಗೆಲುವಲ್ಲೂ, ಪ್ರತೀ ಸೋಲಲ್ಲೂ ಅವರಿದ್ದಾರೆ ಅಂತಾನೇ ಅನ್ನಿಸುತ್ತದೆ ನನಗೆ. ಅವರೊಂದಿಗೆ ನಾನು ಕಳೆದದ್ದು ನನ್ನ ಬದುಕಿನ ಒಂದು ಪುಟ್ಟ ಅವಧಿಯನ್ನಷ್ಟೆ. ಆದ್ರೆ ಅಷ್ಟು ಖುಶಿಯ, ಅಷ್ಟು ಅರ್ಥವತ್ತಾದ ದಿನಗಳನ್ನು ಮತ್ಯಾರ ಜೊತೆಯೂ ಮತ್ತೆಂದೂ ಕಳೆದಿಲ್ಲ. ಅವರು ನನಗೆ ನೀಡಿದ ಕಂಫರ್ಟ್ ಭಾವವನ್ನು ಮತ್ತೆ ನನಗೆ ನೀಡಲು ಮತ್ಯಾರಿಂದಲೂ ಸಾಧ್ಯವಾಗಿಲ್ಲ. ಬಹುಶಃ ಇನ್ನು ಮುಂದಕ್ಕೂ ಯಾರಿಗೂ ಸಾಧ್ಯವಾಗದು ಕೂಡ.

ಈಗೀಗ ಕತ್ತಲೇ ಬೆಳಕಿನ ಬಾಗಿಲು ಅನ್ನುವುದು ಅರ್ಥವಾಗುತ್ತಿದೆ.  ಬದುಕಿನ ಅತ್ಯುತ್ತಮ ಪಾಠಗಳನ್ನು ಕತ್ತಲು ಕಲಿಸಿದಂತೆ ಯಾವ ಬೆಳಕೂ ಕಲಿಸದು ಅನ್ನುವುದು ಅನುಭವಕ್ಕೆ ಬರುತ್ತಿದೆ. ಬೆಳಕು-ಕತ್ತಲುಗಳ ಅಸ್ಪಷ್ಟ ನೆರಳಿನಲ್ಲೇ ಬದುಕು ಕಳೆಕಟ್ಟುವುದೇನೋ ಅನ್ನಿಸುತ್ತ್ತದೆ. ಮರುಕ್ಷಣವೇ "ಕತ್ತಲಿನಿಂದ ಬೆಳಕಿಗೆ, ಬೆಳಕಿನಿಂದ ಕತ್ತಲೆಗೆ ಹೊಂದಿಕೊಳ್ಳಲು ಕಣ್ಣಿಗೆ ಸಮಯ ಬೇಕು" ಅನ್ನುವ ಕವಿವಾಣಿ ನೆನಪಿಗೆ ಬರುತ್ತದೆ. ಹೌದಲ್ವಾ ? ಕತ್ತಲಿಗೆ ಹೊಂದಿಕೊಂಡ ಕಣ್ಣು ಒಂದಿಷ್ಟು ಸಮಯದ ಬಳಿಕವಷ್ಟೇ ಬೆಳಕಿಗೆ ಹೊಂದಿಕೊಳ್ಳುತ್ತದೆ, ಹಾಗೆಯೇ ಬೆಳಕಿಗೆ ಹೊಂದಿಕೊಂಡ ಕಣ್ಣು ಕತ್ತಲೆಗೆ ಹೊಂದಿಕೊಳ್ಳಬೇಕಿದ್ದರೂ ಒಂದಿಷ್ಟು ಸಮಯ ಬೇಡುತ್ತದೆ. ಅದು ಬೆಳಕಿನ ಮಿತಿಯೂ ಹೌದು, ಕತ್ತಲಿನ ಮಿತಿಯೂ ಹೌದು ಮತ್ತು ಇವೆಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮ ದೃಷ್ಟಿಯ ಮಿತಿಯೂ ಹೌದು.

ಶುಕ್ರವಾರ, ಡಿಸೆಂಬರ್ 23, 2016

ಆಯ್ಕೆ ಮಾತ್ರ ನಮ್ಮದೇ.

ಬದುಕು ಕೆಲವೊಮ್ಮೆ ನಿತ್ತರಿಸಿಕೊಳ್ಳಲಾಗದಂತಹ ಏಟುಕೊಟ್ಟು ಕೈತಟ್ಟಿ ನಗುತ್ತಿರುತ್ತದೆ. ನಿನ್ನೆಯವರೆಗೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಅಕಾರಣ ಹೊರದಬ್ಬಲ್ಪಟ್ಟಿರುತ್ತೇವೆ, ಪ್ರಾಣಮಿತ್ರ ಅನ್ನಿಸಿಕೊಂಡವರು ಸುಖಾಸುಮ್ಮನೆ ಮುಖ ತಿರುವಿಕೊಂಡು ನಮ್ಮ ಬದುಕಿನಿಂದ ಎದ್ದು ನಡೆದುಬಿಡುತ್ತಾರೆ, ಉಸಿರಿಗಂಟಿಕೊಂಡಿದ್ದ ಪ್ರೇಮಿ ಸಣ್ಣದೊಂದು ಸುಳಿವೂ ಕೊಡದೆ ತೊರೆದುಬಿಟ್ಟಿರುತ್ತಾನೆ/ಳೆ. ಯಾವ್‍ಯಾವುದೋ ಕಾರಣಕ್ಕೆ ಅಪ್ಪ ಅಮ್ಮ ಮುನಿಸಿಕೊಂಡಿರುತ್ತಾರೆ. ಆಗೆಲ್ಲಾ ಈ ಜೀವನ ಸಾಕು, 'ಅದೇನೋ' ಆಗಬೇಕಾಗಿದ್ದ ನಾನು ಅದಾಗದೇ 'ಇನ್ನೇನೋ' ಆಗಿರುವುದಕ್ಕೇ ಹೀಗಾಗ್ತಿದೆ. ಇವೆಲ್ಲವನ್ನೂ ತೊರೆದು ಯಾರೂ ಇಲ್ಲದ ಒಂಟಿ ದ್ವೀಪದಲ್ಲಿ ಒಬ್ಬಂಟಿಯಾಗಿ ಬದುಕು ಕಳೆಯಬೇಕು ಅಂತೆಲ್ಲಾ ಅನ್ನಿಸತೊಡಗುತ್ತದೆ. ಕಣ್ಣಿಂದ ಜಾರುವ ಒಂದೊಂದು ಹನಿಯೂ ನೂರು ನಿರಾಸೆಯ ಕಥೆಗಳನ್ನು ಹೇಳಲಾರಂಭಿಸುತ್ತವೆ.

ನಿಜ ತಾನೇ?  ನಮ್ಮ-ನಿಮ್ಮೆಲ್ಲರ ಬದುಕಲ್ಲೂ ಇಂತಹ ಒಂದು ಸಂದರ್ಭ ಬಂದೇ ಬರುತ್ತದೆ. ಮಾತಲ್ಲಿ ವಿವರಿಸಲಾಗದ ವಿಷಣ್ಣತೆಯೊಂದು ಮೈಮನ ಪೂರ್ತಿ ಆವರಿಸಿದಂತಹ ಭಾವ ಕಾಡುತ್ತದೆ. ಎಲ್ಲಿ ಕತ್ತಲಿನ ಉನ್ಮತ್ತತೆ ಬದುಕಿನ ಅಷ್ಟೂ ಬೆಳಗುಗಳನ್ನು ಇಡಿ ಇಡಿಯಾಗಿ ನುಂಗಿಬಿಡುತ್ತದೋ ಅನ್ನುವಷ್ಟು ಉದ್ವಿಗ್ನರಾಗುತ್ತೇವೆ. ನಿನ್ನೆಯ ಸುಖವನ್ನೂ, ಇಂದಿನ ನೀರವತೆಯನ್ನೂ ಹೋಲಿಸಿ ನೋಡಿ ಈ ಜೀವನ ಇನ್ಯಾವತ್ತೂ ಹಳಿಗೆ ಮರಳುವುದೇ ಇಲ್ಲವೇನೋ ಅಂತೆಲ್ಲಾ ಅಂದುಕೊಳ್ಳುತ್ತಾ ನಿಟ್ಟುಸಿರು ಬಿಡುತ್ತೇವೆ. ಮನ ಅರಳಿಸುತ್ತಿದ್ದ ಹಸಿರು, ಪರಮ ಪ್ರಿಯ ಏಕಾಂತ, ಹಿತವಾದ ಕವಿತೆ, ನವಿರು ಕಥೆಗಳು, ದಟ್ಟ ಮೌನ, ಸಾಂದ್ರ ನಿಶ್ಯಬ್ದ ಎಲ್ಲಾ ನೀರಸವೆನಿಸತೊಡಗುತ್ತದೆ. ಅದಕ್ಕೆ ಇಂಬುಕೊಡುವಂತೆ,  ಕೆಲಸವನ್ನು ನಂಬಿ ತೆಗೆದ ಬ್ಯಾಂಕ್‌ ಲೋನ್, ಗೆಳೆಯ/ತಿಯೊಂದಿಗೆ ಕಳೆದ ಮಧುರ ಕ್ಷಣಗಳು, ಪ್ರೇಮಿಯ ಜತೆ ಕಂಡ ಕನಸುಗಳೆಲ್ಲಾ  ದಾಂಗುಢಿಯಿಟ್ಟು ಚದುರಿದ ಮನವನ್ನು ಮತ್ತಷ್ಟು ಕದಡಿಬಿಡುತ್ತದೆ.

ಇಂತಹ ಸಂದರ್ಭಗಳಲ್ಲಿ ನಾವು-ನೀವೆಲ್ಲರೂ ಒಂದು ಸಾಮಾನ್ಯ ತಪ್ಪು ಮಾಡಿಬಿಡುತ್ತೇವೆ. ಅಂಗಳದಲ್ಲಿ ಮೂಲೆಯಲ್ಲೊಂದು ಈಸಿ ಛೇರ್ ಹಾಕಿ ಕೂತೋ, ಮರದಡಿಯಲ್ಲಿ ಟವೆಲ್ ಹಾಸಿ ಕೂತೋ, ಧೋ ಎಂದು ಸುರಿವ ಮಳೆಯಲ್ಲಿ ನೆನೆಯುತ್ತಲೋ, ಕಣ್ಣಿಗೆ ಕಾಣದಷ್ಟು ತೆಳುವಾಗಿ ಹರಡಿರುವ ಮಂಜಿಗೆ ಮೈಯೊಡ್ಡಿಯೋ, ಬಿರುಬಿಸಿಲಲ್ಲಿ ಬೆವರುತ್ತಲೋ, ಹಿಂದೆ ಯಾವತ್ತೋ ನಾವು ಮಾಡಿರುವ ಒಳ್ಳೆಯ ಕೆಲಸಗಳನ್ನು ಪಟ್ಟಿ ಮಾಡಿ, ಇಷ್ಟೆಲ್ಲಾ ಒಳ್ಳೆಯದನ್ನು ಮಾಡಿರುವ ನನಗೇಕೆ ಹೀಗಾಯಿತು? ನನ್ನ ಬದುಕೇಕೆ ಹಳಿ ತಪ್ಪಿತು? ಅಂತೆಲ್ಲಾ ಹಳಹಳಿಸತೊಡಗುತ್ತೇವೆ.

ಆ ಪಟ್ಟಿಯಲ್ಲಿ ಊರ ಪ್ರೈಮರಿ ಸ್ಕೂಲ್‍ಗೆ ಹೋಗ್ತಿದ್ದಾಗ ನೀರಿನಲ್ಲಿ ಮುಳುಗುತ್ತಿದ್ದ ಇರುವೆಯ ಪ್ರಾಣ ರಕ್ಷಿಸಿದ್ದಲ್ಲಿಂದ ಪ್ರಾರಂಭವಾಗಿ  ಪಕ್ಕದ ಬೆಂಚಲ್ಲಿ ಕೂರುತ್ತಿದ್ದವಳ ಕಾಲೇಜ್ ಫೀ ಪೇ ಮಾಡಿದ್ದು, ಗೆಳೆಯನ ಅಮ್ಮ ಆಸ್ಪತ್ರೆಯಲ್ಲಿದ್ದಾಗ ಅಲ್ಲೇ ರಾತ್ರಿ ಕಳೆದದ್ದು, ತುಂಬಿ ತುಳುಕಾಡುತ್ತಿದ್ದ ಬಸ್‍ನಲ್ಲಿ ಹಿರಿಯೊಬ್ಬರಿಗೆ ಸೀಟ್ ಬಿಟ್ಟುಕೊಟ್ಟದ್ದು, ರಸ್ತೆಯಲ್ಲಿ ನಡೆಯಲು ಕಷ್ಟಪಡುತ್ತಿದ್ದ ಗರ್ಭಿಣಿಯೊಬ್ಬರನ್ನು ಆಟೋ ಹತ್ತಿಸಿ ಮನೆಗೆ ಕಳುಹಿಸಿಕೊಟ್ಟದ್ದು, ಆಸೆ ಕಂಗಳಿಂದ ಅಂಗಡಿಯ ಎದುರು ತೂಗು ಹಾಕಿದ್ದ ಬ್ರೆಡ್ ನೋಡುತ್ತಿದ್ದ ಹುಡುಗನಿಗೆ ಒಂದಿಡೀ ಪ್ಯಾಕ್ ಬ್ರೆಡ್ ಕೊಡಿಸಿದ್ದು, ಸಿಗ್ನಲ್‍ನಲ್ಲಿ ನಿಂತಾಗೆಲ್ಲಾ ತನ್ನಲ್ಲಾಗಲೇ ಅವತ್ತಿನ ಪತ್ರಿಕೆಯಿದ್ದರೂ ಪೇಪರ್ ಮಾರುವ ಹುಡುಗ/ಗಿಗೆ ಒಂದಿಷ್ಟಾದರೂ ಉಪಯೋಗವಾಗಲಿ ಎಂದು ಪತ್ರಿಕೆ ಕೊಂಡದ್ದು, ಅದ್ಯಾರೋ ತನ್ನದಲ್ಲದ ಗ್ರೂಪಿನ ರಕ್ತ ಬೇಕು ಅಂದಾಗ ಎಲ್ಲೆಲ್ಲೋ ಅಲೆದು ಹೊಂದಿಸಿ ಕೊಟ್ಟದ್ದು ಅನ್ನುವವರೆಗೆ ತನ್ನ ಒಳ್ಳೆಯತನಗಳ ಸಾಲು ಸಾಲೇ ಇರುತ್ತದೆ.

ಆದರೆ ಹಾಗೆ ಪಟ್ಟಿ ಮಾಡುವಾಗೆಲ್ಲಾ ನಾವು ಬದುಕು ಎಲ್ಲಾ ತರ್ಕಗಳನ್ನೂ ಮೀರಿದ ಸತ್ಯ,  ಗಣಿತದ ಯಾವ ಫಾರ್ಮುಲಾಗಳಿಗೂ ನಿಲುಕದ ವಾಸ್ತವ ಅನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಮರೆತುಬಿಡುತ್ತೇವೆ. ಹಿಂದೆ ಯಾವತ್ತೋ ಒಳ್ಳೆಯದು ಮಾಡಿದ್ದೇನೆ, ಈಗ ನನಗೆ ಒಳ್ಳೆಯದೇ ಆಗಬೇಕಲ್ಲವೇ ಅನ್ನುವ ತತ್ವಗಳಾವುವೂ ಬದುಕಿಗೆ ಅನ್ವಯಿಸಲ್ಲ. ನಿನ್ನೆಯ ಒಳ್ಳೆಯತನ, ಹೆಮ್ಮೆಯಿಂದ ಹೇಳಿಕೊಳ್ಳುವ  ಎಕ್ಸ್‌ಪೀರಿಯೆನ್ಸ್ ಯಾವುದನ್ನೂ ಅದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇವತ್ತಿನ ಕ್ರಿಯೆಗೆ ನಮ್ಮ ಪ್ರತಿಕ್ರಿಯೆಯೇನು? ಎಷ್ಟು ಪಕ್ವವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ ಅನ್ನುವುದಷ್ಟೇ ಬದುಕಿಗೆ ಮುಖ್ಯವಾಗುತ್ತದೆ.

ಇಷ್ಟಕ್ಕೂ ಹಿಂದೆ ಯಾರಿಗೋ ಯಾವುದೋ ಒಳ್ಳೆಯದು ಮಾಡಿದಾಗ, ಮುಂದೆ ಯಾವತ್ತೋ ಒಂದಿನ ಈ ಒಳ್ಳೆಯದರ ಪ್ರತಿಫಲವೆಂಬಂತೆ ನನಗೆ ಒಳ್ಳೆಯದೇ ಆಗುತ್ತದೆ ಅನ್ನುವ ಯಾವ ಸ್ವಾರ್ಥವೂ ಇದ್ದಿರುವುದಿಲ್ಲ. ಆ ಕ್ಷಣಕ್ಕೆ ನಮ್ಮಲ್ಲೊಂದು ಒಳ್ಳೆಯ ಮನಸ್ಸಿತ್ತು. ಇರುವೆಗೋ, ಗೆಳೆಯನಿಗೋ, ಗೆಳತಿಗೋ ಒಳ್ಳೆಯದಾಗಲಿ ಅನ್ನುವ ಶ್ರದ್ಧೆಯಿತ್ತು . ಎಲ್ಲಕ್ಕಿಂತ ಹೆಚ್ಚಾಗಿ ಆಗಿನ ಪರಿಸ್ಥಿತಿಗೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸುವ, ಮತ್ತೊಬ್ಬರಿಗೆ ತನ್ನಿಂದ ಒಂದಿನಿತಾದರೂ ಸಹಾಯವಾಗುವುದಾದರೆ ಆಗಲಿ ಎಂದು ನಮ್ಮೊಳಗಿನ ಸಂಸ್ಕಾರ ನಮ್ಮನ್ನು ಬಡಿದೆಬ್ಬಿಸಿರುತ್ತದೆಯಷ್ಟೇ ಹೊರತು ಪಡಿಸಿ ಮುಂದೆ ಯಾವತ್ತಾದರೂ ನನಗೆ ಇದರಿಂದ ಒಳ್ಳೆಯದಾಗುತ್ತದೆ ಅನ್ನುವ ವ್ಯಾವಹಾರಿಕತೆಯಂತೂ ಖಂಡಿತಾ ಇದ್ದಿರುವುದಿಲ್ಲ.

ಅದನ್ನೂ ಮೀರಿ ನಮಗೆ ಒಳ್ಳೆಯದೇ ಆಗಬೇಕು ಅಂತಿದ್ದರೆ,  ಪರಿಸ್ಥಿತಿಯ ಆಳಕ್ಕೆ ಹೊಕ್ಕು, ನಮ್ಮಿಂದಾದ ತಪ್ಪೇನು? ಏನನ್ನು ಮಾಡಿದರೆ ತಪ್ಪನ್ನು ಸರಿಪಡಿಸಬಹುದು? ಈಗಿರುವ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಅಂತೆಲ್ಲಾ ಆತ್ಮವಿಮರ್ಶೆ ಮಾಡಲೇಬೇಕಾಗುತ್ತದೆ. ಇಷ್ಟೆಲ್ಲಾ ಒಳ್ಳೆಯದು ಮಾಡಿದ ನನಗೇಕೆ ಹೀಗಾಯ್ತು ಎಂದು ಹಲುಬುತ್ತಾ ಕೂರುವುದಕ್ಕಿಂತ ಹೀಗೆ ಆತ್ಮವಿಮರ್ಶೆ ಮಾಡಿ ಬದುಕು ಒಡ್ಡಿದ ಸವಾಲುಗಳಿಗೆ ಸಮರ್ಥವಾಗಿ ಅಭಿಮುಖಿಯಾಗುವುದು ಸಾವಿರ ಪಾಲು ಉತ್ತಮ.

ಆದರೆ ನಿನ್ನೆಯ ಕನವರಿಕೆಯಲ್ಲೇ ಹಳಹಳಿಸುತ್ತಿರಬೇಕಾ ಅಥವಾ ನಾಳೆಗಳಿಗಾಗಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾ? ಆಯ್ಕೆ ಮಾತ್ರ ನಮ್ಮದೇ.

ಸೋಮವಾರ, ಡಿಸೆಂಬರ್ 19, 2016

ಅಂತಹ ವಿದ್ಯೆ ನನಗೂ ಕಲಿಸಿಕೊಡಿ.

'ದುಃಖ ಹಂಚಿಕೊಂಡಷ್ಟು ಕಡಿಮೆಯಾಗುತ್ತದೆ, ಸುಖ ಹಂಚಿಕೊಂಡಷ್ಟು ಹೆಚ್ಚಾಗುತ್ತದೆ’ ಅನ್ನುವ ಗಾದೆಯೇ ಇರಬಹುದು, ’ಓಪನ್ ಅಪ್’ ಆಗು ಅನ್ನುವ ಈ ಜಮಾನದ ಮಾತೇ ಇರಬಹುದು ಅಥವಾ ’ಬದುಕು ತೆರೆದ ಪುಸ್ತಕದಂತಿರಬೇಕು’ ಅನ್ನುವ ಉಕ್ತಿಯೇ ಇರಬಹುದು... ಎಲ್ಲವೂ ಕೊನೆಗೆ ಹೇಳುವುದೊಂದೇ, ’ನಿನ್ನ ಮನದ ಭಾವನೆಗಳೆಲ್ಲವನ್ನೂ ಹಂಚಿಕೊಂಡು ಹಗುರಾಗು...’

ಆದರೆ ಹಾಗೆ ಎಲ್ಲವನ್ನೂ ಹಂಚಿಕೊಂಡು ಬೆತ್ತಲಾಗುವುದು, ಯಾವ ಪರದೆಯೂ ಇಲ್ಲದೆ ಓಪನ್ ಅಪ್ ಆಗುವುದು, ತೀರಾ ತೆರೆದಿಟ್ಟ ಪುಸ್ತಕದಂತೆ ಬದುಕುವುದು ಮನುಷ್ಯ ಮಾತ್ರರಾದವರಿಂದ ಸಾಧ್ಯಾನಾ? ಅದೂ ಒಳ ಮನಸ್ಸು ಮತ್ತು ಹೊರ ಮನಸ್ಸೆಂದು ನಮ್ಮದೇ ಮನದೊಳಗೆ ಒಂದು ಸೂಕ್ಷ್ಮ ತೆರೆಯಿರುವಾಗ, ಮತ್ತೊಬ್ಬರ ಬಳಿ ಅವರೆಷ್ಟೇ ಆಪ್ತರಾಗಿದ್ದರೂ , ಬಟಾಬಯಲಾಗುವುದು ಸಾಧ್ಯಾನಾ?

ಗೆಳತಿಯಂತಿರುವ ತಾಯಿಯ ಮುಂದೆಯೂ ಹೇಳಿಕೊಳ್ಳಲಾರದ ಕೆಲವು ಸತ್ಯಗಳಿರುತ್ತವೆ, ಗೆಳೆಯನಿಗಿಂತಲೂ ಹೆಚ್ಚು ಆತ್ಮೀಯನಾಗಿರುವ ಅಪ್ಪನಲ್ಲೂ ಹೇಳಿಕೊಳ್ಳಲಾರದ ಒಂದಿಷ್ಟು ವಿಷಯಗಳಿರುತ್ತವೆ, ನಮ್ಮ ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತ ಅಣ್ಣನ ಬಳಿಯೂ, ಆತ್ಮ ಸಖಿಯಂತಿರುವ ಅಕ್ಕನ ಬಳಿಯೂ ಮಾತನಾಡಲು ಸಾಧ್ಯವಿಲ್ಲದಂತಹ ಕೆಲವು ಸಂಗತಿಗಳಿರುತ್ತವೆ, ಆಪ್ತ ಸ್ನೇಹಿತರು ಅನ್ನಿಸಿಕೊಂಡವರ ಜೊತೆಯೂ ಹಂಚಿಕೊಳ್ಳಲಾಗದ ವಿಚಾರಗಳಿರುತ್ತವೆ, ಜೀವಕ್ಕಿಂತ ಹೆಚ್ಚು ಪ್ರೀತಿಸುವ ಪ್ರೇಮಿ ಇದ್ದರೂ ಕೆಲವು ವಿಷಯಗಳು ಅಜ್ಞಾತವಾಗಿಯೇ ಉಳಿದುಬಿಡುತ್ತವೆ, ಜೀವನ ಪೂರ್ತಿ ಗಂಡ ಊಟ ಮಾಡಿದ ಎಂಜಲು ತಟ್ಟೆಯಲ್ಲೇ ಊಟ ಮುಗಿಸುವ ಪರಮ ಪತಿವ್ರತೆಯ ಮನದ ಮೂಲೆಯಲ್ಲಿ ಅಳಿದು ಹೋದ ಹಳೆ ಪ್ರೀತಿಯೊಂದು ಗೂಡುಕಟ್ಟಿರಬಹುದು, ಹೆಂಡತಿಯೇ ನನ್ನಿಷ್ಟ ದೇವತೆ ಎಂದು ತಿಳಿದುಕೊಂಡಿರುವ ಪತಿಯ ಮನಸ್ಸಲ್ಲೂ ಹಳೆ ಪ್ರೇಯಸಿಯ ಒಗರೊಗರು ನೆನಪುಗಳಿರಬಹುದು.

ಅವನ್ನೆಲ್ಲಾ ಹಂಚಿಕೊಳ್ಳುವುದಾದರೂ ಹೇಗೆ? ಇಷ್ಟಕ್ಕೂ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳುವುದೆಂದರೆ ಅಂತರಂಗದ ಸಂಪೂರ್ಣ ಅನಾವರಣವಲ್ಲವೇ? ನಮ್ಮಂತರಂಗವನ್ನು ನಮಗೇ ಸ್ಪರ್ಶಿಸಲು, ತಿಳಿದುಕೊಳ್ಳಲು, ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ ಅಂದಮೇಲೆ, ಇನ್ನೊಬ್ಬರ ಮುಂದೆ ಹರಡಿಡುವುದಾದರೂ ಹೇಗೆ? ಹಾಗೆ ಎಲ್ಲಾ ಮಿತಿಗಳನ್ನೂ ಮೀರಿ ಅರ್ಥೈಸ ಹೊರಟಾಗೆಲ್ಲಾ ಅಂತರಂಗವೆಂಬ ಬಿಸಿಲ ಕೋಟೆ ಮತ್ತಷ್ಟು ಸಂಕೀರ್ಣವಾಗಿ ನಮ್ಮ ಹುಡುಕಾಟದ ಮೂಲ ಉದ್ದೇಶವೇ ಮರೆತು ಹೋಗುತ್ತದೆ. ಮತ್ತೆಲ್ಲಿ ಬಂತು ಭಾವನೆಗಳ ಬಿಚ್ಚಿಡುವಿಕೆ?

ಸರಿ, ಇಷ್ಟೆಲ್ಲಾ ಆದಮೇಲೂ ಹಂಚಿಕೊಳ್ಳಲೇಬೇಕು ಎಂದು ನಿರ್ಧರಿಸಿಕೊಂಡು ಮಾತು ಶುರುವಿಟ್ಟುಕೊಂಡರೂ ಎಲ್ಲಾ ಭಾವಗಳು ಹೊರಬರುತ್ತವೆ ಅಂದುಕೊಂಡರೆ, ಅದೂ ಇಲ್ಲ. ಅದು ಎಂತಹ ಪರಮ ಭಾವುಕ ಕ್ಷಣದಲ್ಲೇ ಆದರೂ ಆಳಾಂತರಾಳದ ಭಾವವೊಂದು ಮಾತಾಗಿ ಹೊರಬರುವಾಗ ಅದು ಅರ್ಧ ಸತ್ಯ ಮಾತ್ರ ಆಗಿರುತ್ತದೆ ಅಷ್ಟೆ. ಕಾಡಿದ ನೋವು, ಕಾಡುವ ಸಂಕಟ, ನಲ್ಮೆಯ ನಿನ್ನೆಗಳು, ನೀರಸ ಇಂದು, ಅನಿಶ್ಚಿತ ನಾಳೆಗಳು, ಸಣ್ಣ ಅಸಹನೆ, ವ್ಯಕ್ತಪಡಿಸಲಾಗದ ಬೇಸರ ಇವಕ್ಕೆಲ್ಲಾ ಮಾತಿನ ಚೌಕಟ್ಟು ಹಾಕಲೆತ್ನಿಸಿದರೂ ಕೆಲವು ಸೂಕ್ಷ್ಮ ಸತ್ಯಗಳು ಹಾಗೇ ಒಳಗೆ ಉಳಿದುಬಿಡುತ್ತವೆ.

ಇನ್ನೂ ಕೆಲವೊಮ್ಮೆ, ಗಂಟೆಗಟ್ಟಲೆ ಮಾತನಾಡುತ್ತಾ ಕುಳಿತರೂ, ನೂರಾರು ವಿಷಯಗಳು ಮಾತಿನ ಮಧ್ಯೆ ಬಂದು ಹೋದರೂ, ಹೇಳಲೇಬೇಕಿದ್ದ, ಹಂಚಿ ಹಗುರಾಗಲೆ ಬೇಕಿದ್ದ ಒಂದು ಮಾತು ಮಾತ್ರ ತುಟಿ ಮೀರಿ ಹೊರ ಬರುವುದೇ ಇಲ್ಲ. ಯಾವುದೋ ಅಗೋಚರೆತೆಯೊಂದು ಅದೊಂದು ವಿಷಯದ ಸತ್ವನ್ನೆಲ್ಲಾ ತನ್ನೊಳಗೆ ಬಚ್ಚಿಟ್ಟುಕೊಳ್ಳಬಯಸುತ್ತಿದೆಯೇನೋ ಅನ್ನಿಸಿಬಿಡುತ್ತದೆ. ಮತ್ತೂ ಕೆಲವೊಮ್ಮೆ ಅಂತರಂಗದ ಮಾತುಗಳನ್ನು ಎದುರಿಗಿರುವವರು ಅದೆಷ್ಟೇ ಆಪ್ತರಾಗಿದ್ದರೂ ಅರುಹಲಾಗದೆ ಸುಮ್ಮನಾಗುತ್ತೇವೆ. ಅದು ಆ ವ್ಯಕ್ತಿಯ ಮೇಲೆ ನಂಬಿಕೆ ಇಲ್ಲದೆಯೋ ಅಥವಾ ಭಾವಗಳ ಏರುಪೇರಿನ ಹಿಂದಿನ ನಿಜದ ಕಾರಣಗಳು ಗೊತ್ತಿಲ್ಲದೆಯೋ ಅಲ್ಲ. ಅಲ್ಲಿ ಭಾವ ಪ್ರಪಂಚದ ತಳಮಳಗಳನ್ನು, ತಲ್ಲಣಗಳನ್ನು, ಕೋಲಾಹಲಗಳನ್ನು. ಅಲ್ಲೋಲಕಲ್ಲೋಲಗಳನ್ನು ಸರಿಯಾಗಿ ವ್ಯಕ್ತಪಡಿಸಲು ಪದ ಪ್ರಪಂಚದ ಅಷ್ಟೂ ಪದಗಳು ಸಾಲದು ಅನಿಸಿಬಿಟ್ಟಿರುತ್ತದೆ ಅಷ್ಟೆ. ಬಹುಶಃ ಮಾತು ಸತ್ತು ಮೌನ ವಿಜೃಂಭಿಸುವುದು ಇಂತಹ ಗಳಿಗೆಗಳಲ್ಲೇ.

ಹೀಗೆ, ಎಲ್ಲ ಭಾವಗಳನ್ನು ಹಂಚಿಕೊಂಡು ಬರಿದಾಗುವುದು ಅಂದಾಗೆಲ್ಲಾ ನನಗೆ ಆ ಮಾತಿನಲ್ಲೇ ಎಲ್ಲೋ ಅಪ್ರಾಮಾಣಿಕತೆಯ ಸಣ್ಣ ಎಳೆಯೊಂದು ಕಂಡಂತಾಗುತ್ತದೆ. ಪೂರ್ತಿ ತೆರೆದುಕೊಳ್ಳಲು ಯಾರಿಂದಲೂ ಸಾಧ್ಯವೇ ಇಲ್ಲ ಅನ್ನಿಸತೊಡಗುತ್ತದೆ. ಇಲ್ಲ, ಹಾಗೇನಿಲ್ಲ ತೀರಾ ತೆರೆದಿಟ್ಟ ಪುಸ್ತಕದಂತೆ ಬದುಕಲೂಬಹುದು ಅಂತ ನೀವನ್ನುವುದಾದರೆ, ಸರಿ, ಅಂತಹ ವಿದ್ಯೆಯ ನನಗೂ ಸ್ವಲ್ಪ ಕಲಿಸಿಕೊಡಿ. ಒಳಗೆ ಹುದುಗಿಸಿಟ್ಟ ಭರಿಸಲಾಗದ ಕೆಲ ಸತ್ಯಗಳ ಭಾರ ಇಳಿಸಿ ಒಂದಿಷ್ಟು ದಿನಗಳ ಕಾಲ ನನಗೂ ನಿರಾಳವಾಗಿ ಬದುಕಬೇಕಿದೆ.   

ಶನಿವಾರ, ಡಿಸೆಂಬರ್ 17, 2016

ಪ್ರೀತಿಯೇ ಕ್ರಾಂತಿ

ಮುಡಿದ ಮಲ್ಲಿಗೆಯ
ಒಳಗಿಂದೆಲ್ಲಿಂದಲೋ
ದುಂಬಿಯ ಝೇಂಕಾರದ ಸದ್ದು
ರಾತ್ರಿಯೆಂದರೆ ಮೌನವಷ್ಟೇ
ಅಂದವರಾರು?

ಗೋಧೂಳಿ ಸಮಯದಲಿ
ಬಾಗಿ ನಿಂತ ಪೈರು ಹಿತವಾಗಿ
ಭೂಮಿಯ ಸ್ಪರ್ಶಿಸಿದೆ
ಧ್ಯಾನವೆಂದರೆ ನಿಶಬ್ದವಷ್ಟೇ ಅಂದರೆ
ಅಂಗೀಕರಿಸುವುದು ಹೇಗೆ?

ಈಗಷ್ಟೇ ನುಡಿಸಿಟ್ಟ
ವೀಣೆಯ ತಂತಿಯಲ್ಲೊಂದು
ಸಣ್ಣ ಕಂಪನ
ಕಡು ಮೋಹ ಪಾಪವೆಂದರೆ
ನಂಬುವುದಾದರೂ ಹೇಗೆ?

ಮುಗಿಲ ಪಿಸುಗುಡುವಿಕೆಯ
ಬಸಿದುಕೊಂಡ ಕಡಲು
ಭೋರ್ಗರೆಯುತ್ತದೆ
ಚಲನೆಯೇ ಬದುಕು ಎಂದರೆ
ಒಪ್ಪುವುದು ಹೇಗೆ?

ತಕರಾರಿರುವುದು ನನಗೆ
ಕವಿತೆಯ ಬಗೆಗಲ್ಲ. ಬಿಡಿ,
ಅದು ನಾನು ಬದುಕಿರುವ ಕುರುಹು
ಪ್ರೀತಿ ಕ್ರಾಂತಿಯ ಮತ್ತೊಂದು ಮಗ್ಗುಲು
ಅಂದರೆ ಹೇಗೆ ಅನುಮೋದಿಸಲಿ?

ಬರಡು ಎದೆಯಲಿ ಒಲುಮೆ ಚಿಮ್ಮಿಸುವ
ಪ್ರೀತಿಯೇ ಕ್ರಾಂತಿಯಲ್ಲವೇ?