ಬುಧವಾರ, ಡಿಸೆಂಬರ್ 28, 2016

ಬದುಕು ಕಳೆಕಟ್ಟುವುದು ಕತ್ತಲು ಬೆಳಕುಗಳ ಅಸ್ಪಷ್ಟ ನೆರಳಿನಲ್ಲೇನೋ?

ಬೆಳಕಿನ ಮರಣದ ಮರುಘಳಿಗೆಯೇ ಕತ್ತಲು ಹುಟ್ಟಿಕೊಳ್ಳುತ್ತದೆ. ನೀವೇನೋ ಅದು ಕತ್ತಲಲ್ಲ, ಮಬ್ಬುಗತ್ತಲು ಅನ್ನುತ್ತೀರೇನೋ? ಆದರೆ, ಮಬ್ಬುಗತ್ತಲೂ ಕತ್ತಲೇ ಅಲ್ಲವೇ? ಇಷ್ಟಕ್ಕೂ ನಾನು ಕತ್ತಲಿಗಿಂತಲೂ ಹೆಚ್ಚು ಭಯ್ಪಟ್ಟುಕೊಳ್ಳುವುದು ಮಬ್ಬುಗತ್ತಲಿಗೇ. ಮುಸ್ಸಂಜೆಯಾಗುತ್ತಿದ್ದಂತೆ ಅದರ ಮ್ಲಾನತೆ ಎಲ್ಲಿ ನನ್ನೊಳಗೂ ಆವರಿಸುತ್ತದೇನೋ ಅನ್ನುವ ದಿಗಿಲಿಗೆ ಬಿದ್ದುಬಿಡುತ್ತೇನೆ. ಎಲ್ಲಿ ಕತ್ತಲಿನ ಉನ್ಮತ್ತತೆ ಬೆಳಕನ್ನು ಇಡಿಇಡಿಯಾಗಿ ನುಂಗಿಬಿಡುತ್ತದೋ ಅನ್ನುವ ಭಯವದು.

ಕತ್ತಲು-ಬೆಳಕಿನ ನಡುವಿರುವುದು ಒಂದು ಕ್ಷಣದ ಒಂದು ಪುಟ್ಟ ಭಾಗವಷ್ಟೆ. ಕತ್ತಲೆಂಬ ವಿಪ್ಲವಕ್ಕೆ ಮುಖಾಮುಖಿಯಾದಾಗೆಲ್ಲಾ ನನ್ನ ಕಾಡುವುದು ನಿರ್ಮಲ ಬಾಲ್ಯ ಮತ್ತದರ ಒಡಲಲ್ಲಿ ಸಿಂಬಿ ಸುತ್ತಿ ಮಲಗಿರುವ ಅಜ್ಜನ ಮರಣವೆಂಬ ಕರಾಳ ಕಾರ್ಕೋಟ.

ನಾಡ ಹೆಂಚಿನ ಸಂದುಗಳಿಂದ ಮನೆಯೊಳಗೆ ತೂರಿ ಬರುತ್ತಿದ್ದ ಬಿಸಿಲುಕೋಲು, ಅದರ ಪೂರ್ತಿ ನರ್ತಿಸುತ್ತಿದ್ದ ಧೂಳಕಣಗಳು, ಮನೆ ಎದುರಿಗಿದ್ದ ಎರಡು ಬೃಹತ್ ಗಾತ್ರದ ಹಲಸಿನ ಮರ, ಬೇಲಿ ತುಂಬಾ ಅರಳುತ್ತಿದ್ದ ಕಾಗದದ ಹೂವು, ಛಾವಣಿಯಲ್ಲಿ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿ,  ಹೆಸರು ಗೊತ್ತಿಲ್ಲದ ಒಂದಿಷ್ಟು ಹಕ್ಕಿಗಳು, ಸದಾ ಸೋಜಿಗವನ್ನುಂಟು ಮಾಡುತ್ತಿದ್ದ ಅಳಿಲು, ಕಲ್ಪಿಸಿಕೊಂಡಷ್ಟೂ ಹಿಗ್ಗುತ್ತಿದ್ದ ಆಕಾಶದ ವಿಶಾಲತೆ, ಕಪಾಟಿನ ಪೂರ್ತಿ ತುಂಬಿಕೊಂಡಿದ್ದ ಅಜ್ಜನ ದಪ್ಪ-ದಪ್ಪ ಪುಸ್ತಕಗಳು, ಪಕ್ಕದಲ್ಲಿದ್ದ ಸ್ಟ್ಯಾಂಡ್ನಲ್ಲಿ ಅಚ್ಚುಕಟ್ಟಾಗಿ ಜೋಡಿಸಿಡುತ್ತಿದ್ದ ಉದಯವಾಣಿ, ಸುಧಾ, ಮಯೂರ, ತುಷಾರ, ಕರ್ಮವೀರ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳು, ಆಗಾಗ ಅಜ್ಜ-ಅಜ್ಜಿಯ ಮಧ್ಯೆ ಸುಧಾ ಶ್ರೇಷ್ಠವೆಂದೋ ಇಲ್ಲ ಕರ್ಮವೀರ ಶ್ರೇಷ್ಠವೆಂದೋ ನಡೆಯುತ್ತಿದ್ದ ಹುಸಿ ಜಗಳಗಳು, ಆರು ತಿಂಗಳುಗಳಿಗೊಮ್ಮೆ ಊರಿಗೆ ಬರುತ್ತಿದ್ದ ಮಾವ ಅಷ್ಟೂ ತಿಂಗಳುಗಳ ಸುಧಾವನ್ನು ಒಂದೆರಡು ದಿನಗಳಲ್ಲಿ ಓದಿ ಮುಗಿಸಲು ಪಡುತ್ತಿದ್ದ ಪರಿಪಾಡಲು, ಇನ್ನೂ ಶಾಲೆಗೆ ಹೋಗಲು ಪ್ರಾರಂಭಿಸುವ ಮುನ್ನವೇ ಅಜ್ಜ ಮಾಡಿಸಿದ್ದ ಅಕ್ಷರ ಪರಿಚಯ, ಹೇಳುತ್ತಿದ್ದ ನೀತಿ ಕಥೆಗಳು, ಇಸ್ಲಾಮಿಕ್ ಚರಿತ್ರೆಯ ತುಣುಕುಗಳು, ಪೌರಾಣಿಕ ಕಥೆಗಳು, ನನ್ನ ಮತ್ತು ಅಣ್ಣನ ಹುಡುಗು ಪ್ರಶ್ನೆಗಳಿಗೆ, ನಮ್ಮ ಅರಿವಿನ ಮಟ್ಟಕ್ಕೆ ಇಳಿದು ಉತ್ತರಿಸುತ್ತಿದ್ದ ಅವರ ತಾಳ್ಮೆ, ಮುಸ್ಸಂಜೆಯಾಗುತ್ತಿದ್ದಂತೆ ಅಚ್ಛ ಬಿಳಿ ಶರ್ಟ್ , ಅಷ್ಟೇ ಬಿಳಿಯ ಲುಂಗಿ, ತಲೆಗೊಂದು ಗಾಂಧಿ ಟೋಪಿ ಧರಿಸಿಕೊಂಡು ಮಸೀದಿಗೆ ಹೋಗುತ್ತಿದ್ದ ಅವರ ಠೀವಿ... ಇವೆಲ್ಲಾ ನನ್ನಲ್ಲಿ ಪ್ರಪಂಚ ಅರಿಯುವ ಮುನ್ನವೇ ಒಂದು ವಿಸ್ಮಯವನ್ನು ಹುಟ್ಟು ಹಾಕಿತ್ತು.

ಮುಂದೆ ಶಾಲೆ, ಮದ್ರಸಗಳಿಗೆ ಹೋಗಲು ಶುರು ಮಾಡಿದಂತೆ ನನ್ನೊಳಗೆ ತೆರೆದುಕೊಂಡದ್ದು ಮತ್ತೊಂದು ಪ್ರಪಂಚದ ವಿಸ್ಮಯ. ಅದೊಂದು ಹಲವು ಸಂಸ್ಕೃತಿ, ಭಾಷೆ, ವಿಭಿನ್ನ ಪರಿಸರಗಳ ಕಲಸುಮೋಲೋಗರ ಅನಿಸುತ್ತಿತ್ತು. ನಮ್ಮಂತೆ ಅವರಿಲ್ಲ ಅಥವಾ ಅವರಂತೆ ನಾವಿಲ್ಲ ಅನ್ನುವ ಕಲ್ಪನೆ ಮೊದಲು ಮೊಳಕೆಯೊಡೆದದ್ದೇ ಶಾಲೆ ಮತ್ತು ಮದ್ರಸಗಳಲ್ಲಿ. ಅಷ್ಟೂ ದಿನಗಳು ಮುದ್ದು ಮಾಡಿಸಿ ಮಾತ್ರ ಗೊತ್ತಿದ್ದ ನಮಗೆ, ಬರೆಯದ ಕಾಪಿ, ಮಾಡದ ಹೋಮ್‍ವರ್ಕ್‍ಗಳಿಗೆ, ಬಾರದ ಮಗ್ಗಿ, ಕಂಠಪಾಠ ಮಾಡದ ಸ್ತೋತ್ರಗಳಿಗಾಗಿ ಶಿಕ್ಷೆ ಇದೆ ಅನ್ನುವುದು ತಿಳಿದಾಗ ಆದ ಅಚ್ಚರಿ ಅಷ್ಟಿಷ್ಟಲ್ಲ.

ಇನ್ನು ಮಳೆಗಾಲದಲ್ಲಿ ಸಂಜೆಯಾಗುತ್ತಿದ್ದಂತೆ ಸುರಿಯುತ್ತಿದ್ದ ಜಿಟಿಜಿಟಿ ಮಳೆ, ಆ ಮಳೆಯಲ್ಲಿ ನೆನೆಯೋ ಸಂಭ್ರಮ, ಮಳೆಗೋಸ್ಕರ ಅಂತಾನೇ ಅಜ್ಜಿ ಎತ್ತಿಡುತ್ತಿದ್ದ ಹಪ್ಪಳ-ಸಂಡಿಗೆ, ಆಗಿನ್ನೂ  SSLC  ಓದ್ತಿದ್ದ ಚಿಕ್ಕಮ್ಮನಿಗೂ ನನಗೂ ಆಗುತ್ತಿದ್ದ ಜಗಳ, ಬಾಲಮಂಗಳದ ಕಥೆಯನ್ನೂ ಓದದೆ ಕೇವಲ ಚಿತ್ರ ಮಾತ್ರ ನೋಡಿ ರಾತ್ರಿಯಾಗುತ್ತಿದ್ದಂತೆ ಕಥೆ ಹೇಳೆಂದು ಪೀಡಿಸುತ್ತಿದ್ದ ಅಣ್ಣ... ಇವುಗಳದ್ದೆಲ್ಲಾ ಒಂದು ತೂಕವಾದರೆ ಮಣ್ಣಿನ ಸೆಳೆತವಿದ್ದ ಆಟಗಳದೇ ಒಂದು ತೂಕ.

ನನ್ನ ಓರಗೆಯ ಹುಡುಗಿಯರೆಲ್ಲಾ ಗೊಂಬೆಗೆ ಫ್ರಾಕ್ ತೊಡಿಸಿ, ಕಪ್ಪು ಸ್ಕೆಚ್ ಪೆನ್ನಿಂದ ಗಲ್ಲದ ಮೇಲೊಂದು ಬೊಟ್ಟಿಟ್ಟು, ಹೂವು ಮುಡಿಸಿ ಸಂಭ್ರಮಿಸುತ್ತಿರುವಾಗ ನಾನು ಮಾತ್ರ ನನಗಿಂತ ದೊಡ್ಡ ಬ್ಯಾಟ್ ಹಿಡಿದು, ಅಡಕೆ ಮರದ ಹಾಳೆಯನ್ನು ಪ್ಯಾಡ್ ಮಾಡಿಕೊಂಡು ಅಂಗಳಕ್ಕಿಳಿದು ಕ್ರಿಕೆಟ್ ಆಡುತ್ತಿದ್ದೆ. ಮನೆಯವರ ಕಣ್ಣು ತಪ್ಪಿಸಿ ಬೇಲಿ ದಾಟಿ ಹೋಗಿ ಅಲ್ಲಿದ್ದ ಪೇರಳೆ ಮರ ಹತ್ತಿ ಹಣ್ಣು ಕೀಳುತ್ತಿದ್ದೆ. ಒಮ್ಮೆ ಯೂಸುಫಾಕನ ಸೈಕಲ್ ಅಂಗಡಿಯಿಂದ (ಮುಂದೆ ಅವರು ಕೋಮುಗಲಭೆಯಲ್ಲಿ ಕೊಲೆಯಾಗಿ ಹೋದ್ರು, ಮನುಷ್ಯ ಮನಸ್ಸಿನ ದಿವಾಳಿತನಕ್ಕೆ ಸಾಕ್ಷಿಯೇನೋ ಎಂಬಂತೆ ಅವರು ಕೊಲೆಯಾದ ಮರುದಿನವೇ ಕೆಲವು ರಾಕ್ಷಸರು ಅವರ ಅಂಗಡಿಗೆ ಹೋಗಿ ಅಲ್ಲಿದ್ದ ಸೈಕಲ್‍ಗಳನ್ನು ಹೊತ್ತುಕೊಂಡು ಹೋಗಿದ್ದರು) ಬಾಡಿಗೆಗೆ ಸೈಕಲ್ ಕಲಿಯಲೆಂದು ತಂದು, ಆಮೇಲೆ ಅವರಿಗೆ ಕೊಡೋಕೆ ಹಣ ಇಲ್ಲದೆ ಒಂದು ದೊಡ್ಡ ರಾದ್ಧಾಂತವೇ ಆಗಿಹೋಗಿತ್ತು. ನನ್ನ ಗೆಳತಿಯರೆಲ್ಲಾ ಉಷಾ ನವರತ್ನರಾವ್, ಸಾಯಿಸುತೆ ಅವರನ್ನು ಓದುತ್ತಿದ್ದಾಗ ನಾನು ರಾಕೆಟ್ ಸೈನ್ಸ್ ಬೆನ್ನು ಬಿದ್ದಿದ್ದೆ, ಲೆನಿನ್, ಚಿಗುವೆರಾರನ್ನು ಓದುತ್ತಿದ್ದೆ. ಆಗೆಲ್ಲಾ ಅಜ್ಜಿ ನನ್ನ ಕೂರಿಸಿಕೊಂಡು ಗಂಟೆಗಟ್ಟಲೆ ಬುದ್ಧಿ ಹೇಳುತ್ತಿದ್ದರು, ಮರ ಹತ್ತೋದು, ಗುಡ್ಡ ತಿರುಗುವುದು ಇವೆಲ್ಲಾ ಹುಡುಗಿಯರಿಗೆ ಹೇಳಿ ಮಾಡಿಸಿದ್ದಲ್ಲ ಅನ್ನುತ್ತಿದ್ದರು. ಕಥೆ, ಕವನ, ಓದು, ಬರಹ ಅಂತೆಲ್ಲಾ  ಆಸಕ್ತಿ ತೋರಿದಾಗಲೂ ಅಷ್ಟೆ, ಅಜ್ಜಿ ಇವೆಲ್ಲಾ ಬೇಡ, ಮುಂದೆ ನಿನಗೇ ಕಷ್ಟ ಆಗುತ್ತೆ ಅಂತ ಅನ್ನುತ್ತಿದ್ದರು.ಆದರೆ ಅಜ್ಜನದು ಮಾತ್ರ ನನ್ನ ಹುಚ್ಚಾಟಗಳಿಗೆಲ್ಲಾ ಮೌನಮುದ್ರೆ. ಕೆಲವೊಮ್ಮೆ ಅಜ್ಜಿ ಬಳಿ ಅವಳು ಅವಳಿಷ್ಟದಂತೆ ಬದುಕಲಿ ಬಿಡು ಅನ್ನುತ್ತಿದ್ದುದೂ ಇದೆ. ನಾನಾದರೂ ಅಷ್ಟೆ, ಬೆಳಗ್ಗಿನಿಂದ ರಾತ್ರಿಯವರೆಗೂ ಅವರ ಹಿಂದೆ ಮುಂದೆ ಸುತ್ತುತ್ತಾ, ಅವರು ಹಾರೆ-ಪಿಕಾಸಿ ಹಿಡಿದು ತೆಂಗಿನ ಮರದ ಬುಡ ಬಿಡಿಸುವಾಗೆಲ್ಲಾ, ನಾನೇನೋ ಅವರಿಗೆ ದೊಡ್ಡ ಉಪಕಾರ ಮಾಡುತ್ತಿದ್ದೇನೆ ಅನ್ನುವ ಭ್ರಮೆಯಲ್ಲಿ ಫೋಸ್ ಕೊಡ್ತಿದ್ದೆ. ಈಗ ಕೂತು ಬಾಲ್ಯದ ಅಷ್ಟೂ ನೆನಪುಗಳನ್ನು ಕೆದಕಿ ನೋಡಿದರೆ, ನನ್ನ ಕಣ್ಣಮುಂದೆ ಬರುವುದು ಅಜ್ಜ ಮತ್ತು ಅಣ್ಣನೊಂದಿಗಿನ ಒಡನಾಟಗಳೇ. ಒಂದರ್ಥದಲ್ಲಿ ನನ್ನ ಬಾಲ್ಯವನ್ನು ಚೆಂದಗಾಣಿಸಿದ್ದೇ ಅವರಿಬ್ಬರು.

ಆದರೆ, ಎಲ್ಲಾ ಒಳ್ಳೆಯದಕ್ಕೂ ಒಂದು ಅಂತ್ಯವಿದೆ ಅನ್ನುವಂತೆ, ಒಂದು ಶುಕ್ರವಾರ, ಬೆಳಗ್ಗಿನ ಜಾವ ಮಸೀದಿ ಮಿನಾರದಿಂದ ಬಾಂಗ್ ಮೊಳಗುತ್ತಿದ್ದಂತೆ, ಅವರು ಎದೆ ಹಿಡಿದು ಕೂತು ಬಿಟ್ಟರು. ಆವತ್ತಿನವರೆಗೆ ಆಸ್ಪತ್ರೆಯ ಹೆಸರು ಹೇಳಿದರೇ ಸಿಡಿಮಿಡಿಗುಡುತ್ತಿದ್ದ ಅಜ್ಜ, ಅವತ್ತು ಮಾತ್ರ ಮಾವನನ್ನು ಕರೆದು, ನನ್ನ ಅಡ್ಮಿಟ್ ಮಾಡಿಸೋ ಅಂದರು. ನಾನು ನಿದ್ದೆಯಿಂದೆದ್ದು ಕಣ್ಣು ಕಣ್ಣು ಬಿಡುತ್ತಿದ್ದರೆ, ಅಣ್ಣ ಇನ್ನೂ ಮಲಗೇ ಇದ್ದ. ತೀರಾ ಆಂಬ್ಯುಲೆನ್ಸ್ ಹತ್ತುವ ಮುನ್ನ ಅವರು, ಮಕ್ಕಳಿಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳಿ ಎಂದು ಮಾವ ಮತ್ತು ಅಜ್ಜಿಗೆ ಹೇಳಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಆಂಬ್ಯುಲೆನ್ಸ್ ಹೊರಡುತ್ತಿದ್ದಂತೆ ನಾನೂ, ಅಣ್ಣ ಇಬ್ರೂ ಹಲಸಿನ ಮರದಡಿಯಲ್ಲಿ ಕೂತು ಅವರ ಬರವನ್ನೇ ನಿರೀಕ್ಷಿಸುತ್ತಿದ್ದೆವು, ಆದರೆ ಬಂದದ್ದು ಮಾತ್ರ ಅವರ ಮರಣದ ವಾರ್ತೆ. ಫೋನೆತ್ತಿದ ಚಿಕ್ಕಮ್ಮ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳುತ್ತಾ ಅಜ್ಜಿಗೂ ವಿಷಯ ತಿಳಿಸಿದರು, ಹೇಳಲೋ ಬೇಡವೋ ಎಂಬಂತೆ ನಮ್ಮನ್ನೂ ಕರೆದು ಸೂಕ್ಷ್ಮವಾಗಿ ಹೇಳಿ ಒಳಸರಿದರು. ಆಗಿನ್ನೂ ಮಕ್ಕಳೇ ಆಗಿದ್ದ ನಮಗೆ ಸಾವೆಂದರೆ ಎಂತಹ ದಿಗ್ಬ್ರಾಂತಿ ಅನ್ನುವುದು ಪೂರ್ತಿಯಾಗಿ ಅರ್ಥವಾಗಿರಲಿಲ್ಲ. ಆದರೆ ಅರ್ಥ ಆದಾಗ ನನ್ನ ಮಟ್ಟಿಗಂತೂ ಕಾಲ ಪೂರ್ತಿ ಸ್ಥಂಭಿಸಿತ್ತು. ಆಡಿಸುತ್ತಿದ್ದ ಸೂತ್ರಧಾರ ತೊಗಲು ಗೊಂಬೆನಾ ವೇದಿಕೆಯಲ್ಲೇ ಬಿಟ್ಟು ನಿರ್ಗಮಿಸಿದ ಹಾಗಾಗಿತ್ತು ನನ್ನ ಸ್ಥಿತಿ. ಸುತ್ತಲಿನ ಪ್ರಪಂಚದೊಂದಿಗಿನ ಸಂವಹನವನ್ನೇ ಕಡಿದುಕೊಂಡೆ,  ಅಮ್ಮ, ಅಪ್ಪ, ಅಣ್ಣ, ಮಾವಂದಿರು ಎಲ್ಲರೂ ಇದ್ದರೂ ನಾನು ಅನಾಥಳಾಗಿದ್ದೇನೆ ಅನ್ನುವ ಭಾವ ಪದೇ ಪದೇ ಕಾಡುತ್ತಿತ್ತು. ಬದುಕಲ್ಲಿ ಮೊದಲ ಬಾರಿ ಅಭೇದ್ಯ ಕತ್ತಲಿಗೆ ಮುಖಾಮುಖಿಯಾದೆ.

ಇವೆಲ್ಲಾ ಆಗಿ ಹೋಗಿ ಭರಪೂರ ಹದಿನೇಳು ವರ್ಷಗಳೇ ಕಳೆದುಹೋಗಿವೆ. ಈ ಹದಿನೇಳು ವರ್ಷಗಳಲ್ಲಿ ಅವರು ನೆನಪಾಗದ ದಿನಗಳೇ ಇಲ್ಲವೇನೋ? ನನ್ನ ಪ್ರತಿ ಗೆಲುವಲ್ಲೂ, ಪ್ರತೀ ಸೋಲಲ್ಲೂ ಅವರಿದ್ದಾರೆ ಅಂತಾನೇ ಅನ್ನಿಸುತ್ತದೆ ನನಗೆ. ಅವರೊಂದಿಗೆ ನಾನು ಕಳೆದದ್ದು ನನ್ನ ಬದುಕಿನ ಒಂದು ಪುಟ್ಟ ಅವಧಿಯನ್ನಷ್ಟೆ. ಆದ್ರೆ ಅಷ್ಟು ಖುಶಿಯ, ಅಷ್ಟು ಅರ್ಥವತ್ತಾದ ದಿನಗಳನ್ನು ಮತ್ಯಾರ ಜೊತೆಯೂ ಮತ್ತೆಂದೂ ಕಳೆದಿಲ್ಲ. ಅವರು ನನಗೆ ನೀಡಿದ ಕಂಫರ್ಟ್ ಭಾವವನ್ನು ಮತ್ತೆ ನನಗೆ ನೀಡಲು ಮತ್ಯಾರಿಂದಲೂ ಸಾಧ್ಯವಾಗಿಲ್ಲ. ಬಹುಶಃ ಇನ್ನು ಮುಂದಕ್ಕೂ ಯಾರಿಗೂ ಸಾಧ್ಯವಾಗದು ಕೂಡ.

ಈಗೀಗ ಕತ್ತಲೇ ಬೆಳಕಿನ ಬಾಗಿಲು ಅನ್ನುವುದು ಅರ್ಥವಾಗುತ್ತಿದೆ.  ಬದುಕಿನ ಅತ್ಯುತ್ತಮ ಪಾಠಗಳನ್ನು ಕತ್ತಲು ಕಲಿಸಿದಂತೆ ಯಾವ ಬೆಳಕೂ ಕಲಿಸದು ಅನ್ನುವುದು ಅನುಭವಕ್ಕೆ ಬರುತ್ತಿದೆ. ಬೆಳಕು-ಕತ್ತಲುಗಳ ಅಸ್ಪಷ್ಟ ನೆರಳಿನಲ್ಲೇ ಬದುಕು ಕಳೆಕಟ್ಟುವುದೇನೋ ಅನ್ನಿಸುತ್ತ್ತದೆ. ಮರುಕ್ಷಣವೇ "ಕತ್ತಲಿನಿಂದ ಬೆಳಕಿಗೆ, ಬೆಳಕಿನಿಂದ ಕತ್ತಲೆಗೆ ಹೊಂದಿಕೊಳ್ಳಲು ಕಣ್ಣಿಗೆ ಸಮಯ ಬೇಕು" ಅನ್ನುವ ಕವಿವಾಣಿ ನೆನಪಿಗೆ ಬರುತ್ತದೆ. ಹೌದಲ್ವಾ ? ಕತ್ತಲಿಗೆ ಹೊಂದಿಕೊಂಡ ಕಣ್ಣು ಒಂದಿಷ್ಟು ಸಮಯದ ಬಳಿಕವಷ್ಟೇ ಬೆಳಕಿಗೆ ಹೊಂದಿಕೊಳ್ಳುತ್ತದೆ, ಹಾಗೆಯೇ ಬೆಳಕಿಗೆ ಹೊಂದಿಕೊಂಡ ಕಣ್ಣು ಕತ್ತಲೆಗೆ ಹೊಂದಿಕೊಳ್ಳಬೇಕಿದ್ದರೂ ಒಂದಿಷ್ಟು ಸಮಯ ಬೇಡುತ್ತದೆ. ಅದು ಬೆಳಕಿನ ಮಿತಿಯೂ ಹೌದು, ಕತ್ತಲಿನ ಮಿತಿಯೂ ಹೌದು ಮತ್ತು ಇವೆಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮ ದೃಷ್ಟಿಯ ಮಿತಿಯೂ ಹೌದು.

ಶುಕ್ರವಾರ, ಡಿಸೆಂಬರ್ 23, 2016

ಆಯ್ಕೆ ಮಾತ್ರ ನಮ್ಮದೇ.

ಬದುಕು ಕೆಲವೊಮ್ಮೆ ನಿತ್ತರಿಸಿಕೊಳ್ಳಲಾಗದಂತಹ ಏಟುಕೊಟ್ಟು ಕೈತಟ್ಟಿ ನಗುತ್ತಿರುತ್ತದೆ. ನಿನ್ನೆಯವರೆಗೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಅಕಾರಣ ಹೊರದಬ್ಬಲ್ಪಟ್ಟಿರುತ್ತೇವೆ, ಪ್ರಾಣಮಿತ್ರ ಅನ್ನಿಸಿಕೊಂಡವರು ಸುಖಾಸುಮ್ಮನೆ ಮುಖ ತಿರುವಿಕೊಂಡು ನಮ್ಮ ಬದುಕಿನಿಂದ ಎದ್ದು ನಡೆದುಬಿಡುತ್ತಾರೆ, ಉಸಿರಿಗಂಟಿಕೊಂಡಿದ್ದ ಪ್ರೇಮಿ ಸಣ್ಣದೊಂದು ಸುಳಿವೂ ಕೊಡದೆ ತೊರೆದುಬಿಟ್ಟಿರುತ್ತಾನೆ/ಳೆ. ಯಾವ್‍ಯಾವುದೋ ಕಾರಣಕ್ಕೆ ಅಪ್ಪ ಅಮ್ಮ ಮುನಿಸಿಕೊಂಡಿರುತ್ತಾರೆ. ಆಗೆಲ್ಲಾ ಈ ಜೀವನ ಸಾಕು, 'ಅದೇನೋ' ಆಗಬೇಕಾಗಿದ್ದ ನಾನು ಅದಾಗದೇ 'ಇನ್ನೇನೋ' ಆಗಿರುವುದಕ್ಕೇ ಹೀಗಾಗ್ತಿದೆ. ಇವೆಲ್ಲವನ್ನೂ ತೊರೆದು ಯಾರೂ ಇಲ್ಲದ ಒಂಟಿ ದ್ವೀಪದಲ್ಲಿ ಒಬ್ಬಂಟಿಯಾಗಿ ಬದುಕು ಕಳೆಯಬೇಕು ಅಂತೆಲ್ಲಾ ಅನ್ನಿಸತೊಡಗುತ್ತದೆ. ಕಣ್ಣಿಂದ ಜಾರುವ ಒಂದೊಂದು ಹನಿಯೂ ನೂರು ನಿರಾಸೆಯ ಕಥೆಗಳನ್ನು ಹೇಳಲಾರಂಭಿಸುತ್ತವೆ.

ನಿಜ ತಾನೇ?  ನಮ್ಮ-ನಿಮ್ಮೆಲ್ಲರ ಬದುಕಲ್ಲೂ ಇಂತಹ ಒಂದು ಸಂದರ್ಭ ಬಂದೇ ಬರುತ್ತದೆ. ಮಾತಲ್ಲಿ ವಿವರಿಸಲಾಗದ ವಿಷಣ್ಣತೆಯೊಂದು ಮೈಮನ ಪೂರ್ತಿ ಆವರಿಸಿದಂತಹ ಭಾವ ಕಾಡುತ್ತದೆ. ಎಲ್ಲಿ ಕತ್ತಲಿನ ಉನ್ಮತ್ತತೆ ಬದುಕಿನ ಅಷ್ಟೂ ಬೆಳಗುಗಳನ್ನು ಇಡಿ ಇಡಿಯಾಗಿ ನುಂಗಿಬಿಡುತ್ತದೋ ಅನ್ನುವಷ್ಟು ಉದ್ವಿಗ್ನರಾಗುತ್ತೇವೆ. ನಿನ್ನೆಯ ಸುಖವನ್ನೂ, ಇಂದಿನ ನೀರವತೆಯನ್ನೂ ಹೋಲಿಸಿ ನೋಡಿ ಈ ಜೀವನ ಇನ್ಯಾವತ್ತೂ ಹಳಿಗೆ ಮರಳುವುದೇ ಇಲ್ಲವೇನೋ ಅಂತೆಲ್ಲಾ ಅಂದುಕೊಳ್ಳುತ್ತಾ ನಿಟ್ಟುಸಿರು ಬಿಡುತ್ತೇವೆ. ಮನ ಅರಳಿಸುತ್ತಿದ್ದ ಹಸಿರು, ಪರಮ ಪ್ರಿಯ ಏಕಾಂತ, ಹಿತವಾದ ಕವಿತೆ, ನವಿರು ಕಥೆಗಳು, ದಟ್ಟ ಮೌನ, ಸಾಂದ್ರ ನಿಶ್ಯಬ್ದ ಎಲ್ಲಾ ನೀರಸವೆನಿಸತೊಡಗುತ್ತದೆ. ಅದಕ್ಕೆ ಇಂಬುಕೊಡುವಂತೆ,  ಕೆಲಸವನ್ನು ನಂಬಿ ತೆಗೆದ ಬ್ಯಾಂಕ್‌ ಲೋನ್, ಗೆಳೆಯ/ತಿಯೊಂದಿಗೆ ಕಳೆದ ಮಧುರ ಕ್ಷಣಗಳು, ಪ್ರೇಮಿಯ ಜತೆ ಕಂಡ ಕನಸುಗಳೆಲ್ಲಾ  ದಾಂಗುಢಿಯಿಟ್ಟು ಚದುರಿದ ಮನವನ್ನು ಮತ್ತಷ್ಟು ಕದಡಿಬಿಡುತ್ತದೆ.

ಇಂತಹ ಸಂದರ್ಭಗಳಲ್ಲಿ ನಾವು-ನೀವೆಲ್ಲರೂ ಒಂದು ಸಾಮಾನ್ಯ ತಪ್ಪು ಮಾಡಿಬಿಡುತ್ತೇವೆ. ಅಂಗಳದಲ್ಲಿ ಮೂಲೆಯಲ್ಲೊಂದು ಈಸಿ ಛೇರ್ ಹಾಕಿ ಕೂತೋ, ಮರದಡಿಯಲ್ಲಿ ಟವೆಲ್ ಹಾಸಿ ಕೂತೋ, ಧೋ ಎಂದು ಸುರಿವ ಮಳೆಯಲ್ಲಿ ನೆನೆಯುತ್ತಲೋ, ಕಣ್ಣಿಗೆ ಕಾಣದಷ್ಟು ತೆಳುವಾಗಿ ಹರಡಿರುವ ಮಂಜಿಗೆ ಮೈಯೊಡ್ಡಿಯೋ, ಬಿರುಬಿಸಿಲಲ್ಲಿ ಬೆವರುತ್ತಲೋ, ಹಿಂದೆ ಯಾವತ್ತೋ ನಾವು ಮಾಡಿರುವ ಒಳ್ಳೆಯ ಕೆಲಸಗಳನ್ನು ಪಟ್ಟಿ ಮಾಡಿ, ಇಷ್ಟೆಲ್ಲಾ ಒಳ್ಳೆಯದನ್ನು ಮಾಡಿರುವ ನನಗೇಕೆ ಹೀಗಾಯಿತು? ನನ್ನ ಬದುಕೇಕೆ ಹಳಿ ತಪ್ಪಿತು? ಅಂತೆಲ್ಲಾ ಹಳಹಳಿಸತೊಡಗುತ್ತೇವೆ.

ಆ ಪಟ್ಟಿಯಲ್ಲಿ ಊರ ಪ್ರೈಮರಿ ಸ್ಕೂಲ್‍ಗೆ ಹೋಗ್ತಿದ್ದಾಗ ನೀರಿನಲ್ಲಿ ಮುಳುಗುತ್ತಿದ್ದ ಇರುವೆಯ ಪ್ರಾಣ ರಕ್ಷಿಸಿದ್ದಲ್ಲಿಂದ ಪ್ರಾರಂಭವಾಗಿ  ಪಕ್ಕದ ಬೆಂಚಲ್ಲಿ ಕೂರುತ್ತಿದ್ದವಳ ಕಾಲೇಜ್ ಫೀ ಪೇ ಮಾಡಿದ್ದು, ಗೆಳೆಯನ ಅಮ್ಮ ಆಸ್ಪತ್ರೆಯಲ್ಲಿದ್ದಾಗ ಅಲ್ಲೇ ರಾತ್ರಿ ಕಳೆದದ್ದು, ತುಂಬಿ ತುಳುಕಾಡುತ್ತಿದ್ದ ಬಸ್‍ನಲ್ಲಿ ಹಿರಿಯೊಬ್ಬರಿಗೆ ಸೀಟ್ ಬಿಟ್ಟುಕೊಟ್ಟದ್ದು, ರಸ್ತೆಯಲ್ಲಿ ನಡೆಯಲು ಕಷ್ಟಪಡುತ್ತಿದ್ದ ಗರ್ಭಿಣಿಯೊಬ್ಬರನ್ನು ಆಟೋ ಹತ್ತಿಸಿ ಮನೆಗೆ ಕಳುಹಿಸಿಕೊಟ್ಟದ್ದು, ಆಸೆ ಕಂಗಳಿಂದ ಅಂಗಡಿಯ ಎದುರು ತೂಗು ಹಾಕಿದ್ದ ಬ್ರೆಡ್ ನೋಡುತ್ತಿದ್ದ ಹುಡುಗನಿಗೆ ಒಂದಿಡೀ ಪ್ಯಾಕ್ ಬ್ರೆಡ್ ಕೊಡಿಸಿದ್ದು, ಸಿಗ್ನಲ್‍ನಲ್ಲಿ ನಿಂತಾಗೆಲ್ಲಾ ತನ್ನಲ್ಲಾಗಲೇ ಅವತ್ತಿನ ಪತ್ರಿಕೆಯಿದ್ದರೂ ಪೇಪರ್ ಮಾರುವ ಹುಡುಗ/ಗಿಗೆ ಒಂದಿಷ್ಟಾದರೂ ಉಪಯೋಗವಾಗಲಿ ಎಂದು ಪತ್ರಿಕೆ ಕೊಂಡದ್ದು, ಅದ್ಯಾರೋ ತನ್ನದಲ್ಲದ ಗ್ರೂಪಿನ ರಕ್ತ ಬೇಕು ಅಂದಾಗ ಎಲ್ಲೆಲ್ಲೋ ಅಲೆದು ಹೊಂದಿಸಿ ಕೊಟ್ಟದ್ದು ಅನ್ನುವವರೆಗೆ ತನ್ನ ಒಳ್ಳೆಯತನಗಳ ಸಾಲು ಸಾಲೇ ಇರುತ್ತದೆ.

ಆದರೆ ಹಾಗೆ ಪಟ್ಟಿ ಮಾಡುವಾಗೆಲ್ಲಾ ನಾವು ಬದುಕು ಎಲ್ಲಾ ತರ್ಕಗಳನ್ನೂ ಮೀರಿದ ಸತ್ಯ,  ಗಣಿತದ ಯಾವ ಫಾರ್ಮುಲಾಗಳಿಗೂ ನಿಲುಕದ ವಾಸ್ತವ ಅನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಮರೆತುಬಿಡುತ್ತೇವೆ. ಹಿಂದೆ ಯಾವತ್ತೋ ಒಳ್ಳೆಯದು ಮಾಡಿದ್ದೇನೆ, ಈಗ ನನಗೆ ಒಳ್ಳೆಯದೇ ಆಗಬೇಕಲ್ಲವೇ ಅನ್ನುವ ತತ್ವಗಳಾವುವೂ ಬದುಕಿಗೆ ಅನ್ವಯಿಸಲ್ಲ. ನಿನ್ನೆಯ ಒಳ್ಳೆಯತನ, ಹೆಮ್ಮೆಯಿಂದ ಹೇಳಿಕೊಳ್ಳುವ  ಎಕ್ಸ್‌ಪೀರಿಯೆನ್ಸ್ ಯಾವುದನ್ನೂ ಅದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇವತ್ತಿನ ಕ್ರಿಯೆಗೆ ನಮ್ಮ ಪ್ರತಿಕ್ರಿಯೆಯೇನು? ಎಷ್ಟು ಪಕ್ವವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ ಅನ್ನುವುದಷ್ಟೇ ಬದುಕಿಗೆ ಮುಖ್ಯವಾಗುತ್ತದೆ.

ಇಷ್ಟಕ್ಕೂ ಹಿಂದೆ ಯಾರಿಗೋ ಯಾವುದೋ ಒಳ್ಳೆಯದು ಮಾಡಿದಾಗ, ಮುಂದೆ ಯಾವತ್ತೋ ಒಂದಿನ ಈ ಒಳ್ಳೆಯದರ ಪ್ರತಿಫಲವೆಂಬಂತೆ ನನಗೆ ಒಳ್ಳೆಯದೇ ಆಗುತ್ತದೆ ಅನ್ನುವ ಯಾವ ಸ್ವಾರ್ಥವೂ ಇದ್ದಿರುವುದಿಲ್ಲ. ಆ ಕ್ಷಣಕ್ಕೆ ನಮ್ಮಲ್ಲೊಂದು ಒಳ್ಳೆಯ ಮನಸ್ಸಿತ್ತು. ಇರುವೆಗೋ, ಗೆಳೆಯನಿಗೋ, ಗೆಳತಿಗೋ ಒಳ್ಳೆಯದಾಗಲಿ ಅನ್ನುವ ಶ್ರದ್ಧೆಯಿತ್ತು . ಎಲ್ಲಕ್ಕಿಂತ ಹೆಚ್ಚಾಗಿ ಆಗಿನ ಪರಿಸ್ಥಿತಿಗೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸುವ, ಮತ್ತೊಬ್ಬರಿಗೆ ತನ್ನಿಂದ ಒಂದಿನಿತಾದರೂ ಸಹಾಯವಾಗುವುದಾದರೆ ಆಗಲಿ ಎಂದು ನಮ್ಮೊಳಗಿನ ಸಂಸ್ಕಾರ ನಮ್ಮನ್ನು ಬಡಿದೆಬ್ಬಿಸಿರುತ್ತದೆಯಷ್ಟೇ ಹೊರತು ಪಡಿಸಿ ಮುಂದೆ ಯಾವತ್ತಾದರೂ ನನಗೆ ಇದರಿಂದ ಒಳ್ಳೆಯದಾಗುತ್ತದೆ ಅನ್ನುವ ವ್ಯಾವಹಾರಿಕತೆಯಂತೂ ಖಂಡಿತಾ ಇದ್ದಿರುವುದಿಲ್ಲ.

ಅದನ್ನೂ ಮೀರಿ ನಮಗೆ ಒಳ್ಳೆಯದೇ ಆಗಬೇಕು ಅಂತಿದ್ದರೆ,  ಪರಿಸ್ಥಿತಿಯ ಆಳಕ್ಕೆ ಹೊಕ್ಕು, ನಮ್ಮಿಂದಾದ ತಪ್ಪೇನು? ಏನನ್ನು ಮಾಡಿದರೆ ತಪ್ಪನ್ನು ಸರಿಪಡಿಸಬಹುದು? ಈಗಿರುವ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಅಂತೆಲ್ಲಾ ಆತ್ಮವಿಮರ್ಶೆ ಮಾಡಲೇಬೇಕಾಗುತ್ತದೆ. ಇಷ್ಟೆಲ್ಲಾ ಒಳ್ಳೆಯದು ಮಾಡಿದ ನನಗೇಕೆ ಹೀಗಾಯ್ತು ಎಂದು ಹಲುಬುತ್ತಾ ಕೂರುವುದಕ್ಕಿಂತ ಹೀಗೆ ಆತ್ಮವಿಮರ್ಶೆ ಮಾಡಿ ಬದುಕು ಒಡ್ಡಿದ ಸವಾಲುಗಳಿಗೆ ಸಮರ್ಥವಾಗಿ ಅಭಿಮುಖಿಯಾಗುವುದು ಸಾವಿರ ಪಾಲು ಉತ್ತಮ.

ಆದರೆ ನಿನ್ನೆಯ ಕನವರಿಕೆಯಲ್ಲೇ ಹಳಹಳಿಸುತ್ತಿರಬೇಕಾ ಅಥವಾ ನಾಳೆಗಳಿಗಾಗಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾ? ಆಯ್ಕೆ ಮಾತ್ರ ನಮ್ಮದೇ.

ಸೋಮವಾರ, ಡಿಸೆಂಬರ್ 19, 2016

ಅಂತಹ ವಿದ್ಯೆ ನನಗೂ ಕಲಿಸಿಕೊಡಿ.

'ದುಃಖ ಹಂಚಿಕೊಂಡಷ್ಟು ಕಡಿಮೆಯಾಗುತ್ತದೆ, ಸುಖ ಹಂಚಿಕೊಂಡಷ್ಟು ಹೆಚ್ಚಾಗುತ್ತದೆ’ ಅನ್ನುವ ಗಾದೆಯೇ ಇರಬಹುದು, ’ಓಪನ್ ಅಪ್’ ಆಗು ಅನ್ನುವ ಈ ಜಮಾನದ ಮಾತೇ ಇರಬಹುದು ಅಥವಾ ’ಬದುಕು ತೆರೆದ ಪುಸ್ತಕದಂತಿರಬೇಕು’ ಅನ್ನುವ ಉಕ್ತಿಯೇ ಇರಬಹುದು... ಎಲ್ಲವೂ ಕೊನೆಗೆ ಹೇಳುವುದೊಂದೇ, ’ನಿನ್ನ ಮನದ ಭಾವನೆಗಳೆಲ್ಲವನ್ನೂ ಹಂಚಿಕೊಂಡು ಹಗುರಾಗು...’

ಆದರೆ ಹಾಗೆ ಎಲ್ಲವನ್ನೂ ಹಂಚಿಕೊಂಡು ಬೆತ್ತಲಾಗುವುದು, ಯಾವ ಪರದೆಯೂ ಇಲ್ಲದೆ ಓಪನ್ ಅಪ್ ಆಗುವುದು, ತೀರಾ ತೆರೆದಿಟ್ಟ ಪುಸ್ತಕದಂತೆ ಬದುಕುವುದು ಮನುಷ್ಯ ಮಾತ್ರರಾದವರಿಂದ ಸಾಧ್ಯಾನಾ? ಅದೂ ಒಳ ಮನಸ್ಸು ಮತ್ತು ಹೊರ ಮನಸ್ಸೆಂದು ನಮ್ಮದೇ ಮನದೊಳಗೆ ಒಂದು ಸೂಕ್ಷ್ಮ ತೆರೆಯಿರುವಾಗ, ಮತ್ತೊಬ್ಬರ ಬಳಿ ಅವರೆಷ್ಟೇ ಆಪ್ತರಾಗಿದ್ದರೂ , ಬಟಾಬಯಲಾಗುವುದು ಸಾಧ್ಯಾನಾ?

ಗೆಳತಿಯಂತಿರುವ ತಾಯಿಯ ಮುಂದೆಯೂ ಹೇಳಿಕೊಳ್ಳಲಾರದ ಕೆಲವು ಸತ್ಯಗಳಿರುತ್ತವೆ, ಗೆಳೆಯನಿಗಿಂತಲೂ ಹೆಚ್ಚು ಆತ್ಮೀಯನಾಗಿರುವ ಅಪ್ಪನಲ್ಲೂ ಹೇಳಿಕೊಳ್ಳಲಾರದ ಒಂದಿಷ್ಟು ವಿಷಯಗಳಿರುತ್ತವೆ, ನಮ್ಮ ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತ ಅಣ್ಣನ ಬಳಿಯೂ, ಆತ್ಮ ಸಖಿಯಂತಿರುವ ಅಕ್ಕನ ಬಳಿಯೂ ಮಾತನಾಡಲು ಸಾಧ್ಯವಿಲ್ಲದಂತಹ ಕೆಲವು ಸಂಗತಿಗಳಿರುತ್ತವೆ, ಆಪ್ತ ಸ್ನೇಹಿತರು ಅನ್ನಿಸಿಕೊಂಡವರ ಜೊತೆಯೂ ಹಂಚಿಕೊಳ್ಳಲಾಗದ ವಿಚಾರಗಳಿರುತ್ತವೆ, ಜೀವಕ್ಕಿಂತ ಹೆಚ್ಚು ಪ್ರೀತಿಸುವ ಪ್ರೇಮಿ ಇದ್ದರೂ ಕೆಲವು ವಿಷಯಗಳು ಅಜ್ಞಾತವಾಗಿಯೇ ಉಳಿದುಬಿಡುತ್ತವೆ, ಜೀವನ ಪೂರ್ತಿ ಗಂಡ ಊಟ ಮಾಡಿದ ಎಂಜಲು ತಟ್ಟೆಯಲ್ಲೇ ಊಟ ಮುಗಿಸುವ ಪರಮ ಪತಿವ್ರತೆಯ ಮನದ ಮೂಲೆಯಲ್ಲಿ ಅಳಿದು ಹೋದ ಹಳೆ ಪ್ರೀತಿಯೊಂದು ಗೂಡುಕಟ್ಟಿರಬಹುದು, ಹೆಂಡತಿಯೇ ನನ್ನಿಷ್ಟ ದೇವತೆ ಎಂದು ತಿಳಿದುಕೊಂಡಿರುವ ಪತಿಯ ಮನಸ್ಸಲ್ಲೂ ಹಳೆ ಪ್ರೇಯಸಿಯ ಒಗರೊಗರು ನೆನಪುಗಳಿರಬಹುದು.

ಅವನ್ನೆಲ್ಲಾ ಹಂಚಿಕೊಳ್ಳುವುದಾದರೂ ಹೇಗೆ? ಇಷ್ಟಕ್ಕೂ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳುವುದೆಂದರೆ ಅಂತರಂಗದ ಸಂಪೂರ್ಣ ಅನಾವರಣವಲ್ಲವೇ? ನಮ್ಮಂತರಂಗವನ್ನು ನಮಗೇ ಸ್ಪರ್ಶಿಸಲು, ತಿಳಿದುಕೊಳ್ಳಲು, ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ ಅಂದಮೇಲೆ, ಇನ್ನೊಬ್ಬರ ಮುಂದೆ ಹರಡಿಡುವುದಾದರೂ ಹೇಗೆ? ಹಾಗೆ ಎಲ್ಲಾ ಮಿತಿಗಳನ್ನೂ ಮೀರಿ ಅರ್ಥೈಸ ಹೊರಟಾಗೆಲ್ಲಾ ಅಂತರಂಗವೆಂಬ ಬಿಸಿಲ ಕೋಟೆ ಮತ್ತಷ್ಟು ಸಂಕೀರ್ಣವಾಗಿ ನಮ್ಮ ಹುಡುಕಾಟದ ಮೂಲ ಉದ್ದೇಶವೇ ಮರೆತು ಹೋಗುತ್ತದೆ. ಮತ್ತೆಲ್ಲಿ ಬಂತು ಭಾವನೆಗಳ ಬಿಚ್ಚಿಡುವಿಕೆ?

ಸರಿ, ಇಷ್ಟೆಲ್ಲಾ ಆದಮೇಲೂ ಹಂಚಿಕೊಳ್ಳಲೇಬೇಕು ಎಂದು ನಿರ್ಧರಿಸಿಕೊಂಡು ಮಾತು ಶುರುವಿಟ್ಟುಕೊಂಡರೂ ಎಲ್ಲಾ ಭಾವಗಳು ಹೊರಬರುತ್ತವೆ ಅಂದುಕೊಂಡರೆ, ಅದೂ ಇಲ್ಲ. ಅದು ಎಂತಹ ಪರಮ ಭಾವುಕ ಕ್ಷಣದಲ್ಲೇ ಆದರೂ ಆಳಾಂತರಾಳದ ಭಾವವೊಂದು ಮಾತಾಗಿ ಹೊರಬರುವಾಗ ಅದು ಅರ್ಧ ಸತ್ಯ ಮಾತ್ರ ಆಗಿರುತ್ತದೆ ಅಷ್ಟೆ. ಕಾಡಿದ ನೋವು, ಕಾಡುವ ಸಂಕಟ, ನಲ್ಮೆಯ ನಿನ್ನೆಗಳು, ನೀರಸ ಇಂದು, ಅನಿಶ್ಚಿತ ನಾಳೆಗಳು, ಸಣ್ಣ ಅಸಹನೆ, ವ್ಯಕ್ತಪಡಿಸಲಾಗದ ಬೇಸರ ಇವಕ್ಕೆಲ್ಲಾ ಮಾತಿನ ಚೌಕಟ್ಟು ಹಾಕಲೆತ್ನಿಸಿದರೂ ಕೆಲವು ಸೂಕ್ಷ್ಮ ಸತ್ಯಗಳು ಹಾಗೇ ಒಳಗೆ ಉಳಿದುಬಿಡುತ್ತವೆ.

ಇನ್ನೂ ಕೆಲವೊಮ್ಮೆ, ಗಂಟೆಗಟ್ಟಲೆ ಮಾತನಾಡುತ್ತಾ ಕುಳಿತರೂ, ನೂರಾರು ವಿಷಯಗಳು ಮಾತಿನ ಮಧ್ಯೆ ಬಂದು ಹೋದರೂ, ಹೇಳಲೇಬೇಕಿದ್ದ, ಹಂಚಿ ಹಗುರಾಗಲೆ ಬೇಕಿದ್ದ ಒಂದು ಮಾತು ಮಾತ್ರ ತುಟಿ ಮೀರಿ ಹೊರ ಬರುವುದೇ ಇಲ್ಲ. ಯಾವುದೋ ಅಗೋಚರೆತೆಯೊಂದು ಅದೊಂದು ವಿಷಯದ ಸತ್ವನ್ನೆಲ್ಲಾ ತನ್ನೊಳಗೆ ಬಚ್ಚಿಟ್ಟುಕೊಳ್ಳಬಯಸುತ್ತಿದೆಯೇನೋ ಅನ್ನಿಸಿಬಿಡುತ್ತದೆ. ಮತ್ತೂ ಕೆಲವೊಮ್ಮೆ ಅಂತರಂಗದ ಮಾತುಗಳನ್ನು ಎದುರಿಗಿರುವವರು ಅದೆಷ್ಟೇ ಆಪ್ತರಾಗಿದ್ದರೂ ಅರುಹಲಾಗದೆ ಸುಮ್ಮನಾಗುತ್ತೇವೆ. ಅದು ಆ ವ್ಯಕ್ತಿಯ ಮೇಲೆ ನಂಬಿಕೆ ಇಲ್ಲದೆಯೋ ಅಥವಾ ಭಾವಗಳ ಏರುಪೇರಿನ ಹಿಂದಿನ ನಿಜದ ಕಾರಣಗಳು ಗೊತ್ತಿಲ್ಲದೆಯೋ ಅಲ್ಲ. ಅಲ್ಲಿ ಭಾವ ಪ್ರಪಂಚದ ತಳಮಳಗಳನ್ನು, ತಲ್ಲಣಗಳನ್ನು, ಕೋಲಾಹಲಗಳನ್ನು. ಅಲ್ಲೋಲಕಲ್ಲೋಲಗಳನ್ನು ಸರಿಯಾಗಿ ವ್ಯಕ್ತಪಡಿಸಲು ಪದ ಪ್ರಪಂಚದ ಅಷ್ಟೂ ಪದಗಳು ಸಾಲದು ಅನಿಸಿಬಿಟ್ಟಿರುತ್ತದೆ ಅಷ್ಟೆ. ಬಹುಶಃ ಮಾತು ಸತ್ತು ಮೌನ ವಿಜೃಂಭಿಸುವುದು ಇಂತಹ ಗಳಿಗೆಗಳಲ್ಲೇ.

ಹೀಗೆ, ಎಲ್ಲ ಭಾವಗಳನ್ನು ಹಂಚಿಕೊಂಡು ಬರಿದಾಗುವುದು ಅಂದಾಗೆಲ್ಲಾ ನನಗೆ ಆ ಮಾತಿನಲ್ಲೇ ಎಲ್ಲೋ ಅಪ್ರಾಮಾಣಿಕತೆಯ ಸಣ್ಣ ಎಳೆಯೊಂದು ಕಂಡಂತಾಗುತ್ತದೆ. ಪೂರ್ತಿ ತೆರೆದುಕೊಳ್ಳಲು ಯಾರಿಂದಲೂ ಸಾಧ್ಯವೇ ಇಲ್ಲ ಅನ್ನಿಸತೊಡಗುತ್ತದೆ. ಇಲ್ಲ, ಹಾಗೇನಿಲ್ಲ ತೀರಾ ತೆರೆದಿಟ್ಟ ಪುಸ್ತಕದಂತೆ ಬದುಕಲೂಬಹುದು ಅಂತ ನೀವನ್ನುವುದಾದರೆ, ಸರಿ, ಅಂತಹ ವಿದ್ಯೆಯ ನನಗೂ ಸ್ವಲ್ಪ ಕಲಿಸಿಕೊಡಿ. ಒಳಗೆ ಹುದುಗಿಸಿಟ್ಟ ಭರಿಸಲಾಗದ ಕೆಲ ಸತ್ಯಗಳ ಭಾರ ಇಳಿಸಿ ಒಂದಿಷ್ಟು ದಿನಗಳ ಕಾಲ ನನಗೂ ನಿರಾಳವಾಗಿ ಬದುಕಬೇಕಿದೆ.   

ಶನಿವಾರ, ಡಿಸೆಂಬರ್ 17, 2016

ಪ್ರೀತಿಯೇ ಕ್ರಾಂತಿ

ಮುಡಿದ ಮಲ್ಲಿಗೆಯ
ಒಳಗಿಂದೆಲ್ಲಿಂದಲೋ
ದುಂಬಿಯ ಝೇಂಕಾರದ ಸದ್ದು
ರಾತ್ರಿಯೆಂದರೆ ಮೌನವಷ್ಟೇ
ಅಂದವರಾರು?

ಗೋಧೂಳಿ ಸಮಯದಲಿ
ಬಾಗಿ ನಿಂತ ಪೈರು ಹಿತವಾಗಿ
ಭೂಮಿಯ ಸ್ಪರ್ಶಿಸಿದೆ
ಧ್ಯಾನವೆಂದರೆ ನಿಶಬ್ದವಷ್ಟೇ ಅಂದರೆ
ಅಂಗೀಕರಿಸುವುದು ಹೇಗೆ?

ಈಗಷ್ಟೇ ನುಡಿಸಿಟ್ಟ
ವೀಣೆಯ ತಂತಿಯಲ್ಲೊಂದು
ಸಣ್ಣ ಕಂಪನ
ಕಡು ಮೋಹ ಪಾಪವೆಂದರೆ
ನಂಬುವುದಾದರೂ ಹೇಗೆ?

ಮುಗಿಲ ಪಿಸುಗುಡುವಿಕೆಯ
ಬಸಿದುಕೊಂಡ ಕಡಲು
ಭೋರ್ಗರೆಯುತ್ತದೆ
ಚಲನೆಯೇ ಬದುಕು ಎಂದರೆ
ಒಪ್ಪುವುದು ಹೇಗೆ?

ತಕರಾರಿರುವುದು ನನಗೆ
ಕವಿತೆಯ ಬಗೆಗಲ್ಲ. ಬಿಡಿ,
ಅದು ನಾನು ಬದುಕಿರುವ ಕುರುಹು
ಪ್ರೀತಿ ಕ್ರಾಂತಿಯ ಮತ್ತೊಂದು ಮಗ್ಗುಲು
ಅಂದರೆ ಹೇಗೆ ಅನುಮೋದಿಸಲಿ?

ಬರಡು ಎದೆಯಲಿ ಒಲುಮೆ ಚಿಮ್ಮಿಸುವ
ಪ್ರೀತಿಯೇ ಕ್ರಾಂತಿಯಲ್ಲವೇ?

ಭಾನುವಾರ, ಅಕ್ಟೋಬರ್ 16, 2016

ಪ್ರೇಮಕೆ ಶರಣು

ಈಗೀಗ ಆಳ ಗಾಯಗಳೂ
ತೀರದ ಖುಶಿ ಕೊಡುತ್ತಿವೆ ಸಖ

ಇರುಳ ಅಪರಿಮಿತ ನಶೆಯಲಿ
ಇಷ್ಡಿಷ್ಟೇ ಉರಿದು ಕರಗುವ
ಮೇಣದ ಬತ್ತಿ
ಅಹಂಕಾರ ಅಂತರ್ಧಾನವಾಗಿಸುವ
ಪಾಠ ಕಲಿಸುತ್ತಿದೆ

ಮೌನ ಗರ್ಭದ ಬಟ್ಟಲಲ್ಲೂ
ಮಾತು ಉದಯಿಸುತ್ತಿದೆ
ಕತ್ತಿನ ಮೇಲೂರಿದ ಹಲ್ಲಿನ ಗುರುತು
ದಿನ ಪೂರ್ತಿ ಮತ್ತಲಿರುಸುವಾಗೆಲ್ಲಾ
ಬದುಕಿಗೆ ಮತ್ತೆ ಗರಿಗೆದರುವ ಹಂಬಲ

ಪ್ರೀತಿ ಪವಿತ್ರವೆಂದಷ್ಟೇ ತಿಳಿದಿತ್ತು
ಅದರಾಚೆಗಿನ ಹೊಳಹುಗಳು
ಈಗಷ್ಟೇ ದಕ್ಕುತ್ತಿವೆ
ಕಡಲಿನಿನ್ನೊಂದು ತೀರಕ್ಕೀಗ
ಹತ್ತೇ ಗಾವುದ ದೂರ

ಬಹುಶಃ ಇದನ್ನೇ ಏನೋ
ಬದುಕು ಬೆತ್ತಲಾಗಲು ಪ್ರೇಮಕೆ ಶರಣೆನ್ನಬೇಕನ್ನುವುದು

ಸೋಮವಾರ, ಆಗಸ್ಟ್ 8, 2016

ಹೂ ಮಾರುವ ಹುಡುಗಿ

ಮಲ್ಲಿಗೆ ಬಿರಿವ ಸದ್ದಿಗೆ
ಸದ್ದಾಗದೆ ನಗುತ್ತಾಳೆ
ಹೂ ಮಾರುವ ಹುಡುಗಿ

ಮೋಟು ಗೋಡೆಯ
ಮುರಿದ ಮನೆಯ
ಒಳಗೊಂದು ಸಣ್ಣ ಬಿಕ್ಕಳಿಕೆ

ತಂಗಿಗೊಂದು ಫ್ರಿಲ್ಲಿನ ಫ್ರಾಕು
ತಮ್ಮನಿಗೊಂದು ಗಾಳಿಪಟ
ಬೊಗಸೆಯಷ್ಟೇ ಇರುವ ಕನಸದು

ಗುಡಿ ದರ್ಗಾ ಚರ್ಚು ಊರು ಕೇರಿ
ಟಾರಿಲ್ಲದ ಹಾದಿಯ ಬೆಂಜರುಗಲ್ಲುಗಳ
ರುದ್ರ ನರ್ತನ ಅವಳ ಬರಿಗಾಲ ಮೇಲೆ

ಹಸಿರು ಶಾಲು, ಉದ್ದ ನಾಮ, ಬಿಳಿ ನಿಲುವಂಗಿಯ
ಮಂದಿಯ ದಾಟಿ ಹೋಗುವಾಗೆಲ್ಲಾ
ಹೂವು ಮುಳ್ಳಾಗುತ್ತದೆ, ಬುಟ್ಟಿ  ಭಾರ ಭಾರ

ಸಂಜೆಯಾಗುತ್ತಿದ್ದಂತೆ ಕನಸಿದ
ನುಣುಪಿಗಾಗಿ ಬುಟ್ಟಿಯೊಳಗೆ
ಕೈಯಾಡಿಸಿದರೆ ಘೋರ ನಿರಾಸೆ

ಸಂಚಿಯ ತಳದ ಇಷ್ಟೇ ಇಷ್ಟು
ನಾಣ್ಯಗಳು ಅವಳ ಬೊಗಸೆಯಷ್ಟರ
ಕನಸನು ಲೇವಡಿ ಮಾಡುತ್ತದೆ

ಮುರಿದ ಮನೆಯ ಮೋಟು
ಗೋಡೆಯೊಳಗಿನ ಬಿಕ್ಕಳಿಕೆ
ಗಂಟಲೊಳಗೆ ಮತ್ತೆ ಮತ್ತೆ ಹುದುಗುತ್ತದೆ

ನಾನು ಪದ ಕುಟ್ಟುತ್ತೇನೆ
ಕವನ ಕಟ್ಟುತ್ತೇನೆ ಮತ್ತೆ
ಅವಳ ಮನೆಯ ಚಾವಡಿಯಿಂದ
ಎದ್ದು ಹೋಗುತ್ತೇನೆ

ಅವಳಂತಹ ಮತ್ತೊಬ್ಬ ಹುಡುಗಿಯ
ಬದುಕಿಗಾಗಿ ಅರಸುತ್ತೇನೆ
ಮತ್ತೆ ಕವಿತೆ ಮೈದಾಳುತ್ತದೆ

ನೀವು ನನ್ನ ಹೊಗಳುತ್ತೀರಿ
ಸಂವೇದನಾಶೀಲೆ ಅನ್ನುತ್ತೀರಿ
ನಾನು ಉಬ್ಬುತ್ತೇನೆ, ಉಬ್ಬುತ್ತಲೇ ಹೋಗುತ್ತೇನೆ

ಕೊನೆಗೊಂದು ದಿನ,
ಟಪ್ಪೆಂದು ಒಡೆದು  ಸತ್ತು ಹೋಗುತ್ತೇನೆ
ಹೂ ಮಾರುವ ಹುಡುಗಿಯ
ಬುಟ್ಟಿಯೊಳಗಿನ ಹೂವು
ಛಿಲ್ಲನೆ ನಗುತ್ತದೆ

ಅವನೆಂದರೆ...

ಅವನೆಂದರೆ...
ಕಣ್ಣ ಕೊನೆಯ ಹನಿಗೂ
ಬೆರಳ ತುದಿಗೂ ಇರುವ
ಅವಿಚ್ಛಿನ್ನ ನಂಟು

ಅವನೆಂದರೆ...
ಮುಗಿಲೆದೆಯ ಬಿರಿದು
ಸುರಿವ ಮೊದಲ ಮಳೆಗೂ
ತೆರೆವ ಮಣ್ಣಿನ ಘಮಕ್ಕೂ
ಇರುವ ಐಚ್ಛಿಕ ಬಂಧ

ಅವನೆಂದರೆ...
ತೊರೆಯ ಚಾಂಚಲ್ಯಕ್ಕೂ
ಶರಧಿಯ ಗೂಢತೆಗೂ
ಇರುವ ತೀಕ್ಷ್ಣ ಭೇದ

ಅವನೆಂದರೆ...
ಅಂಗೈ ತೊಗಲಿಗೂ
ಕಂದು ಮಚ್ಛೆಗೂ
ನಡುವಿನ ನಿರ್ವಾಣ

ಅವನೆಂದರೆ...
ಪದಗಳಾಗೆವೆಂದು ರಚ್ಚೆ ಹಿಡಿವ
ನನ್ನ ಭಾವಗಳಿಗೂ
ಸರಾಗವಾಗಿ ಮೈದಾಳುವ
ಕವಿತೆಗಳಿಗೂ
ನಡುವಣ ತೂಗುಸೇತುವೆ

ಅವನೆಂದರೆ...
ನಾನು ನನ್ನೊಳಗಿರುವಾಗಿನ
ಅಹಂಕಾರಕ್ಕೂ
ನಾನು ಅವನೊಳಗಿರುವಾಗಿನ
ಪರಾರ್ಥತೆಗೂ
ನಡುವಿನ ಪ್ರಖರ ಪ್ರಭೆ

ಅವನೆಂದರೆ...
ನಾನೆಂಬ ಪ್ರಕ್ಷುಬ್ಧತೆಗೂ
ಅವನ ನಾನೆಂಬ ನಿರ್ಮಲತೆಗೂ
ಮಧ್ಯೆ ಇರುವ ಅಗಾಧ ಕಂದಕ

ಗುರುವಾರ, ಆಗಸ್ಟ್ 4, 2016

ಸಂಜೆ ಮಲ್ಲಿಗೆ

ಸಂಜೆ ಮಲ್ಲಿಗೆಯ ಕಂಪು
ಮೆತ್ತನೆ ಅಡರುತ್ತಿದ್ದಂತೆ
ಇಲ್ಲೆಲ್ಲೋ ನೀನಿದ್ದಿ ಅನ್ನುವ ಭಾವ
ಮತ್ತೆ ಮೊಳಕೆಯೊಡೆಯುತ್ತದೆ

ಮಲ್ಲಿಗೆಗೇನು ಗೊತ್ತು ನನ್ನ ವಿರಹ
ಅದರ ಪಾಡಿಗದು ಅರಳುತ್ತದೆ
ಸುತ್ತಲೂ ಘಮ್ಮೆನ್ನುತ್ತದೆ
ಪಶ್ಚಿಮದ ಪೂರ್ತಿ ರಂಗಿನ ಚಿತ್ತಾರ

ನಾನು ಮತ್ತೆ ಎಂದೂ ದಕ್ಕದ
ನಿನ್ನ ಹುಡುಕಲಾರಂಭಿಸುತ್ತೇನೆ
ಬಿರಿಯದೆ ಉದುರಿದ
ನಿನ್ನೆಯ ಅಂಕುರಗಳಲಿ

ನೀರು ಬತ್ತಿದ ನದಿಯಲಿ
ಹಾಯಿ ದೋಣಿ ನಡೆಸುವ
ಎಂದೂ ನನಸಾಗಲಾರದ
ಹುಚ್ಚು ಕನಸು ನನ್ನದು

ನದಿ ಎಂದಾದರೂ ತುಂಬೀತೇನೋ
ನನ್ನ ಮೇಲೆ ದಯೆ ತೋರಿ
ನಿನ್ನ ಕಾಯುವ ಕಪಟ ಹಾದಿಯ
ಕಲ್ಲು ಮುಳ್ಳುಗಳಿಗೆಲ್ಲಿದೆ ಕರುಣೆ

ಈ ಮುಸ್ಸಂಜೆಯ ವಿಷಣ್ಣತೆಯಲಿ
ಅರೆಬೆಂದ ಕನಸುಗಳ ಕಮಟು
ಎದೆಯ ಕುಲುಮೆಯೊಳಗೆ
ಕುದಿದು ಆವಿಯಾಗುವಾಗೆಲ್ಲಾ

ಕೈ ಹಿಡಿಯುವುದು, ಹೆಗಲಾಗುವುದು
ಎಂದೂ ತೀರದ ಅಕ್ಷರಗಳು
ಮತ್ತು ಒಂದಿಷ್ಟು ಕವಿತೆಗಳು
ಮಾತ್ರ.

ರೋಹಿಂಗ್ಯಾ ತತ್ತರಿಸುತ್ತಿದೆ..

ಅಮ್ಮ ಬೆಳೆಸಿದ ಸಾಸಿವೆ ಗಿಡ
ಬುಡ ಸಮೇತ ಕಿತ್ತು ಬಿದ್ದಿದೆ
ರೋಹಿಂಗ್ಯಾ ತತ್ತರಿಸುತ್ತಿದೆ
ಬುದ್ಧನ ಕಣ್ಣಲ್ಲೂ ತೆಳು ನೀರು

ಕಾಳರಿಸಿ ನೆಲಕ್ಕಿಳಿದ ಹಕ್ಕಿಯ
ರೆಕ್ಕೆ ಕಳಚಿ ಬಿದ್ದಿದೆ ಇಲ್ಲಿ
ಭೀತಿಗೆ ಸಿಕ್ಕ ಹಸುಳೆಯ
ಆಕ್ರಂದನ ಮುಗಿಲು ಮುಟ್ಟಿದೆ ಅಲ್ಲಿ

ನೀರು ಕುದಿಯುತ್ತಿದೆ ಅನ್ನದ ಪಾತ್ರೆಯಲಿ
ಸೋರುವ ಮನೆಯ ಮಾಡಿನಡಿಯಲಿ
ಸುತ್ತ ಬೆಂಕಿ ಹಬ್ಬಿದರೂ
ಬದುಕು ಬೇಯುತ್ತಿಲ್ಲ; ಉರಿಯುತ್ತಿದೆ

ಮರಣ ಮೃದಂಗದ ರುದ್ರ ನಾದದಲಿ
ಬೇರು ಸಂಧಿಸಿದೆ ರಕ್ತ ಕಾಲುವೆಯ
ಬ್ರಹ್ಮಾಂಡಕ್ಕೆಲ್ಲಾ ಗಾಢ ನಿದ್ದೆ
ಶಾಂತಿದೂತರಿಗೂ ಜಾಣ ಕುರುಡು

ದೇಶ ಭಾಷೆ ಧರ್ಮ ಬಣ್ಣಗಳ
ಮೀರಿ ಜೀವವೆಂದರೆ ಜೀವವಷ್ಟೆ
ಬಡಿತ ಮಿಡಿತಗಳಲ್ಲೂ ಭಿನ್ನತೆಯಿಲ್ಲ
ಉಸಿರಿನ ಲಯ ಏರಿಳಿತಗಳೂ ಒಂದೇ

ಕ್ರೌರ್ಯಮುಖೀ ಅಹಂಕಾರದ ಆಕ್ರಮಣಶೀಲತೆಗೆ
ಕರಗುವ ಮರುಗುವ ಮನಸ್ಸುಗಳೇ
ಗುಟುಕು ಕರುಣೆಗಾಗಿ ಯಾಚಿಸುವವರ
ಬಗೆಗೂ ಹಿಡಿಯಷ್ಟು ದಯೆಯಿರಲಿ.

ಬುಧವಾರ, ಆಗಸ್ಟ್ 3, 2016

ಕನಸುಗಳ ಬಿಕರಿ...

ನನ್ನದೆಯ ಬಗೆದು
ಕನಸುಗಳ ಬಿಕರಿಗಿಟ್ಟಿದ್ದೇನೆ
ಹೆಚ್ಚೇನಿಲ್ಲ; ಸಗಟು ದರವಷ್ಟೆ

ಅಲ್ಲಲ್ಲಿ ರಕ್ತದ ಕಲೆ
ಬೆವರಿನ ಕಮಟಿದೆ
ಅಸಹ್ಯಿಸಿಕೊಳ್ಳದಿರಿ

ಉಕ್ಕಿದ ಲಾವಾರಸಗಳು
ಸಿಡಿದ ಜ್ವಾಲಾಮುಖಿಗಳು
ಒಂದಿಷ್ಟು ವ್ರುಣಗಳ ಉಳಿಸಿವೆ

ಇರಲಿ ಬಿಡಿ, ಬಿಸಿಲಿಗಿಟ್ಟರೆ
ಒಣಗಿ ಸುಕ್ಕಾಗಿ ಕಲೆಯೂ
ಉಳಿಯದಂತೆ ಮಾಯವಾಗುತ್ತದೆ

ಬನ್ನಿ ಕನಸ
ಕೊಲ್ಲುವವರೇ, ಕೊಳ್ಳುವವರೇ
ನಾನೀಗ ಶಾಂತ ಸಮುದ್ರ

ಲಾವಾರಸವಿಲ್ಲ, ಜ್ವಾಲಾಮುಖಿಯಿಲ್ಲ
ಆತ್ಮಗ್ಲಾನಿಯ ಎಳೆಯೂ ಇಲ್ಲ
ಒಂದು ನಿರ್ಲಿಪ್ತತೆಯಷ್ಟೇ

ಸೋಮವಾರ, ಆಗಸ್ಟ್ 1, 2016

ಕಣ್ಣ ಚಿಟ್ಟೆಯ ರೆಕ್ಕೆ

ಇಲ್ಲೇ ಮೂಲೆಯಲ್ಲಿ
ಸುರುಳಿ ಸುತ್ತಿಟ್ಟ
ಬೊಚ್ಚು ಬಾಯಿಯ ನಿಷ್ಕಳಂಕ
ನಗುವೊಂದು ಕಾಣೆಯಾಗಿದೆ

ನಿನ್ನೆ ಮೊನ್ನೆಯಷ್ಟೆ ನನ್ನ
ಮನದ ಜೋಳಿಗೆಯಲಿ
ಬೆಚ್ಚಗಿತ್ತು
ಕಚಗುಳಿಯಿಡುತ್ತಿತ್ತು

ಇಂದಿಲ್ಲವೆನ್ನುವ ನಿಚ್ಚಳ ದಿಟದಲಿ
ನಿನ್ನೆ ಮೊನ್ನೆ ನಾಳೆಗಳೆಲ್ಲಾ
ಬರಿ ಕಲ್ಪನೆ ಕನವರಿಕೆಗಳ
ಮಿಥ್ಯ ಮಾಲೆಯಾಗುತ್ತಿವೆ

ಪಟ ಪಟ ಬಡಿಯುತ್ತಿದ್ದ
ಕಣ್ಣ ಚಿಟ್ಟೆಯ ರೆಕ್ಕೆಯೀಗ
ಕಳಚಿಬಿದ್ದಿದೆ
ಹನಿ ರಕ್ತದಲಿ ಬ್ರಹ್ಮಾಂಡ ನೋವು

ಖಾಲಿ ಜೋಳಿಗೆಯ ಇಂಚಿಂಚಲೂ
ನೀವು ತುಂಬಿರುವ ತಿರಸ್ಕಾರ
ಪಕ್ಕೆಲುಬಿನ ಪಕ್ಕದಲೇ ಹರಿದು
ಹೃದಯ ಸೇರಿದೆ

ತುಡಿತ ಮಿಡಿತವೊಂದೂ
ಸಂವೇದನೆ ಉಳಿಸಿಕೊಂಡಿಲ್ಲ
ನಿಷ್ಕ್ರಿಯ ಗುಂಡಿಗೆಯ ಆಲಾಪವ
ಒಮ್ಮೆ ಆಲಿಸಿ ನೋಡಿ

ಇರುವ ರಕ್ತವ ಬಸಿದು
ಉರಿವ ಉಸಿರನು ಬಿಗಿಹಿಡಿದು
ನಿಮಗೆ, ನಿಮ್ಮ ತಿರಸ್ಕಾರಕೆ
ಕೃತಜ್ಞತೆ ಅರ್ಪಿಸುತಿದೆ
ಆಲಿಸಿ ಧನ್ಯರಾಗಿ

ಶನಿವಾರ, ಜುಲೈ 30, 2016

ಕುದಿವ ಮೌನ.

ಕುದಿವ ಮೌನದ ತುದಿಗೆ
ಪದಗಳ ಪೋಣಿಸಿ
ಮೈದಾಳಿದ ಕವಿತೆಯೊಂದು
ಬೀದಿಬದಿಯಲಿ ಹೆಣವಾಗಿ ಮಲಗಿದೆ

ಕನಸ ಕಸಿದ ಮನಸಲೀಗ
ಕೋಟಿ ಸಂಭ್ರಮದಲೆಗಳ ಅಬ್ಬರ
ಕವನ ಕಟ್ಟುವ ಕೈಗಳು
ನಿಶ್ಚಲ, ನಿಶ್ಚೇಟಿತ

ಉಸುಕಿನ ದಿಣ್ಣೆಯ ಮೇಲೆ
ಸತ್ತಂತೆ ಮಲಗಿದ
ಮೊಸಳೆಯ ತುಟಿಯಂಚಲಿ
ಹಸಿ ರಕ್ತದ ಕಲೆ

ಇನ್ನಷ್ಟೇ ಅರಳಬೇಕಿದ್ದ ಮೊಗ್ಗನ್ನು
ಕಾಲಡಿಯಲಿ ಹಿಸುಕಿ ಕೊಂದ
ಪುಣ್ಯಾತ್ಮರ ಕಣ್ಣಲ್ಲಿನ್ನೂ
ಸ್ವರ್ಗ ಸುಖದ ಕಿಚ್ಚು ಆರಿಲ್ಲ

ಎಲ್ಲಾ ಸಂಭ್ರಮ, ನಾಟಕ
ಸುಖದ ನರಳಿಕೆ ಮೀರಿ
ಕಟುಕರೆದೆಯ ಪಾಪವ ನೋಡಿ
ಮಗುವೊಂದು ಕೈ ತಟ್ಟಿ ನಗುತಿದೆ

ಸತ್ತ ಕವಿತೆ ಮತ್ತೆ ಜೀವಪಡೆದಿದೆ
ಆ ಪುಟ್ಟ ಪಾದಗಳಲಿ; ಧೂಳ ಕಣಗಳಲಿ
ಕವಿತೆ ಧರಿಸಿದ ಹಸುಳೆ
ಸುಮ್ಮನೆ ನಡೆಯುತಿದೆ ಅನೂಹ್ಯತೆಯೆಡೆಗೆ.

ಶುಕ್ರವಾರ, ಜುಲೈ 29, 2016

ಮಧುರ ಸಂಬಂಧವೊಂದು ಉಳಿಯುತ್ತದೆ ಅಂತಾದರೆ ವಿನೀತರಾಗುವುದರಲ್ಲಿ ತಪ್ಪೇನಿದೆ?

ಒಮ್ಮೊಮ್ಮೆ ಹೀಗಾಗುತ್ತದೆ ನೋಡಿ...
ತುಂಬಾ ಹಚ್ಚಿಕೊಂಡ ಗೆಳೆಯ/ತಿ ಸಣ್ಣದಾಗಿ ನಮ್ಮನ್ನು ಅವಾಯ್ಡ್ ಮಾಡುತ್ತಿದ್ದಾರೆ ಅನಿಸಿಬಿಡುತ್ತದೆ. ಒಂದೆರಡು ದಿನ ಕಾದು ನಿಧಾನವಾಗಿ ಮಾತಾಡಿಸೋಣ ಅಂದರೆ ಕೈಗೆ ಸಿಗುವುದೇ ಇಲ್ಲ. ಹೋಗಲಿ ಫೋನ್‍ನಲ್ಲಾದರೂ ಮಾತಾಡೋಣ ಅಂದುಕೊಂಡು ಕರೆ ಮಾಡಿದರೆ ಅದನ್ನೂ ಸ್ವೀಕರಿಸುವುದಿಲ್ಲ. ವಾಟ್ಸಾಪ್ ಮೆಸೇಜ್‍ಗಳಿಗೂ, ಎಫ್.ಬಿ ಕಮೆಂಟ್‍ಗಳಿಗೂ, ಈ-ಮೈಲ್‍ಗಳಿಗೂ ಸರಿಯಾದ ಉತ್ತರವಿಲ್ಲ.

ಹೀಗಾದಾಗೆಲ್ಲಾ, ಎಷ್ಟೇ ಬೇಡ ಬೇಡ ಅಂದರೂ ಮನಸ್ಸು ಅಳುಕಿಗೆ ಬಿದ್ದು ಬಿಡುತ್ತದೆ. ಯಾಕೆ ಹೀಗೆ ಅವಾಯ್ಡ್ ಮಾಡುತ್ತಿದ್ದಾರೆ ಅನ್ನುವ ಪ್ರಶ್ನೆಗೆ ಸುಳಿಗೆ ಬಿದ್ದು ಚಡಪಡಿಸತೊಡಗುತ್ತದೆ. ಪದೇ ಪದೇ ಆ ಗೆಳೆಯ/ತಿಯ ಜೊತೆಗಿದ್ದ ಮಧುರ ಸಂಬಂಧವನ್ನೂ, ಅದು ಈಗಿಲ್ಲ ಅನ್ನುವ ಕೊರಗನ್ನೂ ಹಚ್ಚಿಕೊಂಡು ಹಳಹಳಿಸತೊಡಗುತ್ತದೆ. ಆ ಕಡೆ ಇರುವವರ ಮನಸ್ಥಿತಿ, ಪರಿಸ್ಥಿತಿ ಯಾವುದನ್ನೂ ವಿವೇಚಿಸದೆ ನಾಲ್ಕು ಜನರ ಬಳಿ ಅದರ ಬಗ್ಗೆ ಮಾತಾಡಿಯೂ ಬಿಡುತ್ತೇವೆ.

ಆಮೇಲೆ, ಒಂದಿಷ್ಟು ದಿನಗಳ ಕಾಲ ನಮ್ಮಿಂದೇನಾದರೂ ತಪ್ಪಾಗಿರಬಹುದಾ? ಅವನ/ಳ ಬಗ್ಗೆ ಆಡಬಾರದ ಮಾತು ಆಡಿದ್ದೀನಾ? ವೃಥಾ ನಾಲಗೆ ಹರಿಯಬಿಟ್ಟು ಅವನ/ಳನ್ನೇನಾದರೂ ನೋಯಿಸಿದ್ದೇನಾ? ಹಾಸ್ಯ ಮಾಡಲು ಹೋಗಿ ಅದು ಎಲ್ಲರೆದುರು ಅಪಹಾಸ್ಯವಾಗಿದೆಯಾ? ನನ್ನೊಬ್ಬನಲ್ಲಿ ಹಂಚಿಕೊಂಡ ವಿಷಯವನ್ನು ಇನ್ನಾರದೋ ಕಿವಿಗೆ ಹಾಕಿದ್ದೇನಾ? ಅನ್ನುವ ಪ್ರಶ್ನೆಗಳನ್ನೆಲ್ಲಾ ನಮಗೆ ನಾವೇ ಹಾಕಿಕೊಂಡು, ಇಲ್ಲ ಅಂತಹದ್ದೇನೂ ಮಾಡೇ ಇಲ್ಲ ಎಂದು ನಮ್ಮ ನಾವೇ ಸಮಾಧಾನಿಸಿಕೊಳ್ಳುತ್ತೇವೆ.

ಈ ಹಂತದಲ್ಲಿ, ನಮ್ಮದೇನೂ ತಪ್ಪಿಲ್ಲ ಅಂದಮೇಲೆ, ನಾನೇಕೆ ಅವನ/ಳ ಬೆನ್ನು ಹತ್ತಿ ಕಾಡಿಸಿ, ಪೀಡಿಸಿ ಮಾತಾಡಬೇಕು? ಅವನಿ/ಳಿಗೆ ಬೇಕಿಲ್ಲದ ಸಂಬಂಧ ನನಗೇಕೆ ಬೇಕು? ಅನ್ನುವ ಪುಟ್ಟ ಅಹಂ ತಲೆಯೆತ್ತುತ್ತದೆ. ಆ ಕಡೆಯ ನಿರಂತರ ಅವಾಯ್ಡೆನ್ಸ್ ಆ ಅಹಂಗೆ ತುಪ್ಪ ಸುರಿಯುತ್ತದೆ. ಬೆಂಕಿ ಭಗ್ಗನೆ ಹತ್ತಿಕೊಂಡು ಉರಿಯತೊಡಗುತ್ತದೆ. ನಮಗೇ ಗೊತ್ತಾಗದಂತೆ ಅವರ ಬಗ್ಗೆ ಒಂದು ಉಡಾಫೆ ಬೆಳೆದು ಬಿಡುತ್ತದೆ. ಬೇಕಿದ್ದರೆ ಅವನೇ/ಳೇ ಬಂದು ಮಾತಾಡಿಸಲಿ ಅಂದುಕೊಂಡು ಸುಮ್ಮನಾಗುತ್ತೇವೆ.

ಆ ಕಡೆ ಅವನ/ಳ ಕಿವಿಗೆ, ನಾವು ಇನ್ಯಾರ ಜೊತೆಗೋ ಮಾತಾಡುತ್ತಾ, ವಿನಾಕಾರಣ ನನ್ನ ಅವಾಯ್ಡ್ ಮಾಡುತ್ತಿದ್ದಾರೆ ಅಂತ ಹೇಳಿರುವುದೇ ಮತ್ತೊಂದಿಷ್ಟು ಉಪ್ಪು ಖಾರಗಳೊಂದಿಗೆ ಬಿದ್ದಿರುತ್ತದೆ. ಏನನ್ನೂ ಹೇಳಲಾಗದ, ಕೇಳಲಾಗದ ಮನಸ್ಥಿತಿಯಲ್ಲಿ ಒಂದಿಷ್ಟು ಮೌನವಾಗಿದ್ದುದನ್ನೇ ಅವಾಯ್ಡೆನ್ಸ್ ಅಂದುಕೊಂಡು ಅದನ್ನು ಮೂರನೆಯವರ ಬಳಿ ಹಂಚಿಕೊಳ್ಳೋದೇನಿತ್ತು? ನನ್ನ ಮೇಲೆ ನಿಜಕ್ಕೂ ಅಷ್ಟೊಂದು ಕಾಳಜಿ ಇರುವುದಾದರೆ ನನ್ನನ್ನೇ ಕೇಳಬಹುದಿತ್ತಲ್ಲಾ? ಅಷ್ಟೂ ಬೇಕೆನಿಸಿದರೆ, ನಿಜಕ್ಕೂ ನನ್ನ ಫ್ರೆಂಡೇ ಆಗಿದ್ದರೆ ಅವರೇ ಬಂದು ಮಾತಾಡಿಸಲಿ ಅನ್ನುವ ಸೆಡವಿಗೆ ಅವರೂ ಬಿದ್ದು ಬಿಡುತ್ತಾರೆ.

ಪರಿಣಾಮ, ಮಧುರ ಸಂಬಂಧವೊಂದರ ಅಕಾಲ ಮೃತ್ಯು. ಅಹಮಿಕೆಯ ಕೋಟೆಯೊಳಗೆ ಬಂಧಿಯಾಗಿ ಇಷ್ಟು ಪ್ರೀತಿ, ಅಷ್ಟೂ ಸ್ನೇಹ,  ಹಿಡಿಯಷ್ಟರ ಒಲವು ಉಸಿರಾಡಲಾಗದೆ ವಿಲವಿಲ ಒದ್ದಾಡತೊಡಗುತ್ತವೆ. ಒಣ ಪ್ರತಿಷ್ಠೆ ಸಾವಿರದೊಂದು ಸಂಬಂಧವನ್ನು ಮಾತಿಲ್ಲದೆ ಸಾಯಿಸಿಬಿಡುತ್ತದೆ.

ಆಗಲೇ ವಾಟ್ಸಾಪ್ ಗ್ರೂಪ್‍ಗಳು ಅದಲು ಬದಲಾಗುವುದು. ಆಗಲೇ ಫೇಸ್‍ಬುಕ್‍ನ ಪ್ರತೀ ಸ್ಟೇಟಸ್‍ನಲ್ಲೂ ಕೊಂಕು ಕಾಣಿಸತೊಡಗುವುದು. ಈಕಡೆ ಇರುವವನು/ಳು ತನ್ನಿಂದ ಅವರಿಗಾದ ಉಪಕಾರಗಳ ಪಟ್ಟಿ ತಯಾರಿಸಿಕೊಂಡು ಬೊಂಬಡ ಬಜಾಯಿಸುವುದು, ಆಕಡೆ ಇರುವವನು ಅವನಿ/ಳಿಗೋಸ್ಕರ ತಾನು ಮಾಡಿದ ತ್ಯಾಗಗಳ ಕುರಿತು ಹೇಳಲಾರಂಭಿಸುವುದು. ತೀರಾ ವೈಯಕ್ತಿಕ ಮಟ್ಟಕ್ಕಿಳಿದು ಪರಸ್ಪರರ ಮೇಲೆ ಕೆಸರೆರಚಿಕೊಳ್ಳುವುದು, ಸಾರ್ವಜನಿಕವಾಗಿ ಕಿತ್ತಾಡಿಕೊಂಡು ಮನಸ್ಸನ್ನು ಅಶಾಂತಿ, ಗೊಂದಲಗಳ ಗೂಡಾಗಿಸಿಕೊಳ್ಳುವುದು.

ಅಹಮಿಕೆಯ, ಸಲ್ಲದ ಪ್ರತಿಷ್ಠೆಯ ಕೈಗೆ ಬುದ್ದಿ ಕೊಟ್ಟಾಗೆಲ್ಲಾ ಆಗುವುದಿಷ್ಟೇ. ನಮ್ಮನ್ನೂ ಸೇರಿಸಿ, ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ ಅನ್ನುವ ಸಣ್ಣ ಸತ್ಯವನ್ನು ಅರಿತುಕೊಂಡು, ಗೆಳೆಯ/ತಿಯನ್ನೋ ಎದುರಾ ಎದುರು ಕೂರಿಸಿಕೊಂಡು ಮಾತಾಡಿ ಸಮಸ್ಯೆ ಬಗೆಹರಿಸಿಕೊಂಡರೆ ಸಂಬಂಧವೂ ಉಳಿಯುತ್ತದೆ, ಮನಶ್ಯಾಂತಿಯೂ ಹಾಳಾಗುವುದಿಲ್ಲ. ಇಷ್ಟಾಗಿಯೂ ಆತ/ಕೆ ನಿಮ್ಮ ಮಾತು ಕೇಳಲು ತಯಾರಿಲ್ಲ ಅಂದರೆ, ಸುಮ್ಮನೆ ಕೈಕಟ್ಟಿ ನಿಂತು ಒಂದು sorry ಹೇಳಿಬಿಡಿ. ಮತ್ತೂ ಅದೇ ಸೆಡವಿನಲ್ಲಿದ್ದರೆ ಮತ್ತೊಮ್ಮೆ  sorry ಕೇಳಿ. ಮತ್ತೂ ಕನ್ವಿನ್ಸ್ ಆಗದಿದ್ದರೆ ನಿನ್ನೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಬೇಕಿದ್ದರೆ ನಾನು ಮತ್ತಷ್ಟು ವಿನಮ್ರನಾಗಬೇಕು ಅಂತಿದ್ದರೆ ಅದಕ್ಕೂ ಸಿದ್ಧ ಅಂದುಬಿಡಿ. ನಿಮ್ಮ ಒಳ್ಳೆಯತನದ ಮುಂದೆ, ನಿಸ್ಪೃಹತೆಯ ಮುಂದೆ, ನಿರ್ವಾಜ್ಯ ಸ್ನೇಹದ ಮುಂದೆ, ಅದು ಎಂತಹ ಅಹಂಕಾರವೇ ಆದರೂ ಪೊರೆ ಕಳಚಿ ಬಿದ್ದೇ ಬಿಡುತ್ತದೆ, ಬೀಳಲೇ ಬೇಕು.

ಇಷ್ಟಕ್ಕೂ, ಮಧುರ ಸಂಬಂಧವೊಂದು ಉಳಿಯುತ್ತದೆ ಅಂತಾದರೆ, ಒಂದು sorry ಕೇಳುವುದರಲ್ಲಿ, ವಿನೀತರಾಗುವುದರಲ್ಲಿ ತಪ್ಪೇನಿದೆ, ಅಲ್ಲವೇ? 

ಭಾನುವಾರ, ಜುಲೈ 24, 2016

ಹೊಸ ಜೀವ ಸಂಚಾರ

ಬಲಗೆನ್ನೆಯ ಮೇಲಿನ
ಕಂಡೂ ಕಾಣದಂತಿರುವ
ಪುಟ್ಟ ಮಚ್ಚೆ ಏನನ್ನೋ
ಬೇಡುತ್ತಿರುವಂತಿದೆ ಎಂದನಾತ

ಒಂದಿಷ್ಟು ಯೋಚಿಸಿ, ತಲೆಕೆರೆದು
ಮಲಗಿದವಳಿಗೋ ಗಾಢ ನಿದ್ದೆ
ಮುಗಿಯದ ಕನಸಿನ ಪೂರ್ತಿ
ಮುಗಿಲು ಬಿರಿವ ಮಳೆಯ ಸದ್ದು

ಅಲ್ಲಿ ಅವನ ಕಣ್ಣಲಿ
ಮಚ್ಚೆಯ ಮೇಲೊಮ್ಮೆ
ಬೆಚ್ಚನೆಯ ಅಂಗೈ ಸವರಿ
ಪುಟ್ಟ ಬೊಟ್ಟಿಟ್ಟ ಕನಸು

ಕನಸಿಗೂ ನನಸಿಗೂ ಎಷ್ಟು ಹೊತ್ತು?
ಕೂಡಿಸಿ ಕಳೆದು ಗುಣಿಸೋ
ಲೆಕ್ಕ ಬಾರದವಳ ಪೇಚಾಟ
ಕಂಡು ಕನ್ನಡಿಗೂ ಹುಸಿನಗು

ಕಿವಿಯ ಪಕ್ಕದಲಿ ಕದಪುಗಳ
ಅವುಚಿಕೊಂಡಿರುವ ತುಂಟ
ಮುಂಗುರುಳು ಅವಳ
ತುದಿ ಮೂಗನು ತೀಡಿದಂತೆಲ್ಲಾ

ಮಚ್ಚೆಯ ಜೀವಾತ್ಮದೊಳಗೆ
ಅವನ ಬಿಸಿಯುಸಿರ ಸ್ಪರ್ಶದ ತವಕ
ಅಲ್ಲವನ ಪ್ರತಿ ನರನಾಡಿಯಲೂ
ಹೊಸ ಜೀವಸಂಚಾರದ ಪುಳಕ.

ಶುಕ್ರವಾರ, ಜುಲೈ 15, 2016

ಗೋಡೆ



ಮೌನದ ಮುದ್ರೆ ಹೊತ್ತ
ನಿಸ್ತೇಜ ಗೋಡೆಯ ಅಂಚಿನ
ಸುಮ್ಮನೆ ನಗುವ ಸ್ತಬ್ಧಚಿತ್ರ
ಆಗೊಮ್ಮೆ ಈಗೊಮ್ಮೆ ಕದಲುತ್ತಿರುತ್ತದೆ

ಸುರಿವ ಮಳೆಗೆ ಮುಖವೊಡ್ಡಿ
ಜಗದ ಅರೆಕೊರೆಗಳಿಗೆ ಸ್ಪಂದಿಸುವ
ಆ ಹೃನ್ಮನಸಿಗೂ ಒಮೊಮ್ಮೆ
ಕತ್ತಲು ಕವಿಯುತ್ತದೆ

ನಿಶ್ಚಲ ಸಂಜೆಯ ದೀರ್ಘ ಮೌನಕ್ಕೆ
ಚಿತ್ರದ ಜೀವಝರಿಯೂ
ಜುಮ್ಮೆನ್ನುತ್ತದೆ
ಸುತ್ತೆಲ್ಲಾ ಗಾಢ ಅಂಧಕಾರ

ಆ ಕತ್ತಲ ಅಸ್ತಿತ್ವದಾಚೆಗೂ
ನಕ್ಷತ್ರದ ಮಡಿಲಿನಲಿ
ಅರಳುವ ಹಾಲ್ಬೆಳಕ ಕೂಸಿನ
ಕನಸಿಗೆ ಕಾಳಿರುಳೂ ಮಬ್ಬಾಗುತ್ತದೆ

ಅಷ್ಟಿಷ್ಟು ಮಿಂಚಿ ಅಲ್ಲೆಲ್ಲೋ ಹೊಳೆದು
ನಿಶೆಯ ಜಡವನು ತೊಳೆವ
ಮಿಂಚು ಹುಳುವಿನ
ಬದುಕಿನೊಂದಿಗಿನ ತೀವ್ರ ಹಂಬಲಕೆ

ಎದೆಯ ದುಗುಡವ ಮರೆತು
ಉದ್ವಿಗ್ನ ಆತ್ಮಕೆ
ಒಂದಿಷ್ಟು ಭರವಸೆ ತುಂಬಿ
ಸ್ತಬ್ಧಚಿತ್ರ ಮತ್ತೆ ನಗುತ್ತದೆ

ನಿಸ್ತೇಜ ಗೋಡೆಯ ಮೊಗದಲೂ
ಕಿರು ಮಂದಹಾಸ.

ಭಾನುವಾರ, ಜುಲೈ 10, 2016

ಯಾಕುಂದೇದು ತುಷಾರ ಹಾರ ಧವಳಾ...


ಹಂಡೆಯೊಲೆಗೆ ಒಡ್ಡಿದ ತುಸು ಹಸಿಯಾಗಿಯೇ ಇದ್ದ ಕಟ್ಟಿಗೆ ’ಸರ್ರ್’ ಎಂದು ಸದ್ದು ಮಾಡುತ್ತಾ ಉರಿಯುತ್ತಿತ್ತು. ತನ್ನನ್ನೇ ಬೆಂಕಿಗೊಡ್ಡುತ್ತಾ ಮನೆ ಮಂದಿಗೆಲ್ಲಾ ದಿನಪೂರ್ತಿ ಬಿಸಿ ನೀರು ಒದಗಿಸುವ ಹಂಡೆಯೆಂದರೆ ಪೂಜಾಳಿಗೆ ಬಾಲ್ಯದಿಂದಲೇ ಅದೇನೋ ವಿಚಿತ್ರ ಆಕರ್ಷಣೆ. ಪೂರ್ತಿ ಕಪ್ಪಾಗಿರುವ ಅದರ ತಳ, ಸದಾ ಬೆಂಕಿಯುಗುಳುವ ಕಟ್ಟಿಗೆ, ಮುಟ್ಟಿದರೆ ಕೈ ಸುಟ್ಟು ಹೋಗುವಷ್ಟು ಬಿಸಿ ಇರುವ ಅದರ ಮುಚ್ಚಳ, ಹಬೆಯಾಡುವ ನೀರು... ಇವೆಲ್ಲಾ ಮೊದಲಿನಿಂದಲೂ ಅವಳಲ್ಲಿ ಒಂದು ವಿಲಕ್ಷಣ ಆಸಕ್ತಿಯನ್ನು ಹುಟ್ಟುಹಾಕುತ್ತಿತ್ತು. ಈಗಲೂ ಅಷ್ಟೆ ರಜೆಗೆಂದು ಹಾಸ್ಟೆಲಿನಿಂದ ಊರಿಗೆ ಬಂದಾಗಲೆಲ್ಲಾ ಅವಳು ನೀರೊಲೆಯ ಮುಂದೆ ಕೂತು ಉರಿವ ಒಲೆಯನ್ನೂ, ನಿಗಿ ನಿಗಿ ಕೆಂಡವನ್ನೂ, ಹೊಳೆವ ಬೆಳಕನ್ನೂ, ಮತ್ತದೇ ಹಂಡೆಯನ್ನು ನೋಡುತ್ತಾ ಮೈ ಕಾಸಿಕೊಳ್ಳುತ್ತಿದ್ದಳು.

ಇಂದೂ ಅಷ್ಟೇ, ಮಾಗಿಯ ಚಳಿಯ ಸ್ತಬ್ಧ ಮುಂಜಾವಿನಲ್ಲಿ, ಮಂಜು ಮುಸುಕಿದ ಆಕಾಶವನ್ನೂ, ಇನ್ನೂ ಕಣ್ಣು ಬಿಡದ ಸೂರ್ಯನನ್ನೂ, ಇಬ್ಬನಿ ತಬ್ಬಿದ ಹಾದಿಯ ವಿಹಂಗಮತೆಯನ್ನೂ ಕಣ್ಣಿನ ಪೂರ್ತಿ ತುಂಬಿಕೊಂಡು ಕುಳಿತಿದ್ದಳು. ಅಮ್ಮ ಆಗಷ್ಟೇ ದೇವರ ಮನೆಯಲ್ಲಿ ಕೂತು ’ಯಾಕುಂದೇದು ತುಷಾರ ಹಾರ ಧವಳಾ’  ಶುರುವಿಟ್ಟುಕೊಂಡಿದ್ದರು. ಅಮ್ಮನ ಸುಪ್ರಭಾತದ ಸ್ವರವನ್ನೂ ಮೀರಿಸುವಂತೆ  ’ಅಮ್ಮೋರೇ’ ಎಂದು ಕರೆಯುವುದು ಕೇಳಿಸಿತು. ಅತ್ತ ತಿರುಗಿದ ಪೂಜಾಳ ಹೊಗೆ ತುಂಬಿದ ಕಣ್ಣುಗಳಿಗೆ ಕೆಲಸದಾಳು ನಂಜಪ್ಪ ತನ್ನ ಹರಕು ಪಂಚೆಯನ್ನು ಮಂಡಿಗಿಂತಲೂ ಮೇಲಕ್ಕೆ ಎತ್ತಿ ಕಟ್ಟಿ, ಹಿಮ್ಮಡಿ ಪೂರ್ತಿ ಸವೆದು ಹೋದ ಚಪ್ಪಲಿ ಧರಿಸಿ ಹಿತ್ತಲಿನಿಂದ ಮಾರು ದೂರ ನಿಂತಿರುವುದು ಕಾಣಿಸಿತು. ಸಣ್ಣದಾದ ಅಸಹನೆಯೊಂದು ಅವಳ ಮನಸ್ಸಲ್ಲಿ ಹಾದು ಹೋಯಿತು.

ಮರುಕ್ಷಣ ಮೊಬೈಲ್  ರಿಂಗಣಿಸತೊಡಗಿತು. ಆ ಕಡೆಯಿಂದ ವಾರಪತ್ರಿಕೆಯ ಸಂಪಾದಕರು ’ಮೇಡಂ, ವಿಶೇಷಾಂಕದ ಕಥೆ ನಿನ್ನೆಯೇ ತಲುಪಬೇಕಿತ್ತು, ಆದ್ರೆ ಇನ್ನೂ ತಲುಪಿಲ್ಲವಲ್ಲಾ’ ಅಂದರು. ಪೂಜಾ ತಡವರಿಸುತ್ತಲೇ ’ಇವತ್ತು ಸಂಜೆ ತಲುಪುತ್ತೆ ಸರ್’ ಅಂತಂದು ಕರೆ ಕಟ್ ಮಾಡಿ ನಾನಿನ್ನೂ ಕಥೆ ಬರೆದೇ ಇಲ್ಲ, ಇನ್ನು ಸಂಪಾದಕರಿಗೆ ತಲುಪಿಸುವುದಾದರೂ ಹೇಗೆ? ಕಳೆದ ವರ್ಷವಷ್ಟೇ ಉತ್ತಮ ಯುವ ಕಥೆಗಾರ್ತಿ ಪ್ರಶಸ್ತಿ ಪಡೆದಿದ್ದೆ, ಈಗ ಕಥೆಗೆ ವಸ್ತು ಹೊಳೆದಿಲ್ಲ ಎಂದರೆ ನನ್ನ ಪ್ರತಿಷ್ಟೆ ಏನಾಗಬೇಕು ಎಂದು ಯೋಚಿಸುತ್ತಾ ಕುಳಿತಳು.

ಕಳೆದೆರಡು ವಾರಗಳಿಂದಲೂ ಹೀಗೆಯೇ. ಏನನ್ನೂ ಬರೆಯಲಾಗುತ್ತಿಲ್ಲ, ಅದೆಷ್ಟೇ ಯೋಚಿಸಿದರೂ ಏನೂ ಹೊಳೆಯುತ್ತಿಲ್ಲ. ಅದೇ ಕಿಟಕಿ, ಅದೇ ಆಕಾಶ, ಅದೇ ಸದ್ದು ಗದ್ದಲ, ಉದ್ದಕ್ಕೆ ಮಲಗಿಕೊಂಡಿರೋ ರಸ್ತೆ, ಮಾಸಲು ಜನ, ಬೀಡಾಡಿ ದನಗಳು ಥೂ! ಎಲ್ಲಾದರೂ ಪ್ರಶಾಂತ ಜಾಗಕ್ಕೆ ಹೋದರೆ ಕಥೆ ಹೊಳೆದೀತೇನೋ ಅನ್ನಿಸಿ ಚಪ್ಪಲಿ ಮೆಟ್ಟಿ ’ ಅಮ್ಮಾ, ದೇವಸ್ಥಾನಕ್ಕೆ ಹೋಗಿ ಬರುತ್ತೇನೆ’ ಅಂತಂದು ಮನೆಯಿಂದ ಹೊರಗಡಿಯಿಟ್ಟವಳು, ಏನು ಬರೆಯಲಿ? ಹೇಗೆ ಬರೆಯಲಿ? ಎಲ್ಲಿಂದ ಶುರು ಮಾಡಲಿ ಎಂದೆಲ್ಲಾ ಯೋಚಿಸುತ್ತಲೇ ಶಿವ ಮಂದಿರ ತಲುಪಿದಳು.

ಅಲ್ಲಿ ಮತ್ತದೇ ಜನಜಂಗುಳಿ, ಅದೇ ಧಾವಂತ. ಪ್ರಸಾದಕ್ಕಾಗಿ ಆಸೆ ಕಣ್ಣಿಂದ ಕಾಯುತ್ತಾ ಕುಳಿತ ಬಸುರಿ, ಅಲ್ಲೇ ಪಕ್ಕದಲ್ಲಿ ಜಾರುತ್ತಿದ್ದ ಚೆಡ್ಡಿಯನ್ನು ಮತ್ತೆ ಮತ್ತೆ ಮೇಲಕ್ಕೆಳೆದುಕೊಳ್ಳುತ್ತಾ ಭಿಕ್ಷೆ ಬೇಡುವ ಹುಡುಗ, ಮಗುವನ್ನು ಕಂಕುಳಲ್ಲೆತ್ತಿಕೊಂಡು ಆರ್ದ್ರ ನೋಟ ಬೀರುವ ಪುಟ್ಟ ಬಾಲಕಿ, ಭಕ್ತರು ಕೊಡುವ ಪುಡಿಗಾಸಿಗಾಗಿ ಮುಂದೆ ನೋಡುತ್ತಾ ಚಪ್ಪಲಿ ಕಾಯುತ್ತಿದ್ದ ಮುದುಕ... ಪೂಜಾಳಿಗೆ ಅಸಹ್ಯ ಹೊಟ್ಟೆಯಾಳದಿಂದ ಎದ್ದು ಬಂತು. ನಾನೇನೋ ಇಲ್ಲಿ ಕಥೆ ಹುಡುಕಲೆಂದು ಬಂದೆ. ಆದ್ರೆ ಇಲ್ಲಿ ನೋಡಿದರೆ, ದೇವರಿಗೇ ಶಾಂತಿಯಿಲ್ಲ ಎಂಬಂತಾಗಿದೆ,  ಇಂತಹವರಿಂದಲೇ ಮಂದಿರದ ಸೌಂದರ್ಯ ಹಾಳಾಗುವುತ್ತಿರುವುದು ಅಂದುಕೊಳ್ಳುತ್ತಾ ಚಪ್ಪಲಿ ಕಳಚಿಟ್ಟು ದೇವಸ್ಥಾನದ ಒಳಹೊಕ್ಕು ದೇವರ ಪ್ರತಿಮೆಯ ಮುಂದೆ ನಿಂತು ಕೈ ಮುಗಿದಳು. ಮೆಟ್ಟಿಲಿಳಿಯುವಾಗ ’ಅರೆ! ಹೌದಲ್ಲಾ, ಇಲ್ಲೇ ಯಾರನ್ನಾದರೂ ಮಾತನಾಡಿಸಿದರೆ ಕಥೆ ಸಿಗಲೂಬಹುದು. ಆದರೆ ಮಾತನಾಡಿಸುವುದಾದರೂ ಯಾರನ್ನು? ಅವರ ಬಟ್ಟೆ, ವೇಷಗಳನ್ನು ನೋಡುವಾಗಲೇ ವಾಕರಿಕೆ ಬರುತ್ತದೆ. ಇನ್ನು ಕೂತು ಕಥೆ ಕೇಳುವುದಾದರೂ ಹೇಗೆ? ಆದರೆ ತನಗೀಗ ಕಥೆ ಅನಿವಾರ್ಯ. ಸ್ವಲ್ಪ ಕಷ್ಟವಾದರೂ ಸರಿ, ಅಡ್ಜಸ್ಟ್ ಮಾಡಿಕೊಳ್ಳೋಣ’ ಅಂದುಕೊಳ್ಳುತ್ತಾ ಸುತ್ತ ದೃಷ್ಟಿಸಿದಳು. ಇದ್ದುದರಲ್ಲೇ ಚಪ್ಪಲಿ ಕಾಯುವ ಮುದುಕನೇ ವಾಸಿ ಅನ್ನಿಸಿ ಪೂಜಾ ಆ ಮುದುಕನ ಬಳಿ ಬಂದು ಕೂತು ನಿಧಾನವಾಗಿ ಮಾತಿಗೆಳೆದಳು. ಮೊದ ಮೊದಲು ಅವರು ಇವಳ ಕಡೆ ಗಮನವನ್ನೇ ಕೊಡದಿದ್ದರೂ ನಂತರ ತನ್ನ ಮೌನದ ಚಿಪ್ಪೊಡೆದು ಕಥೆ ಹೇಳಲು ಶುರುವಿಟ್ಟುಕೊಂಡರು.

" ಆರು ಹೆಣ್ಣು ಮಕ್ಕಳ ನಂತರ ಹರಕೆಯ ಫಲವಾಗಿ ಮನೆಗೆ ಏಳನೇ ಮಗುವಾಗಿ ಹುಟ್ಟಿದವನು ನಾನು.ಹುಟ್ಟುತ್ತಲೇ ಅಕ್ಕಂದಿರ ರೂಪದಲ್ಲಿ ಆರು ಅಮ್ಮಂದಿರ ಪಡೆದ ಅದೃಷ್ಟವಂತ. ನಮ್ಮವ್ವಂಗೆ ಮಗ ’ಓದು ಬರ ಕಲ್ತು ದೊಡ್ಮನ್ಸ’ ಆಗ್ಲಿ ಅನ್ನುವ ಆಸೆ. ನಾನೋ ನಾಲ್ಕರಲ್ಲೇ ನಾಲ್ಕು ಬಾರಿ ಡುಮ್ಕಿ ಹೊಡೆಯುವಷ್ಟು ಬುದ್ಧಿವಂತ. ’ಗೇಯ್ದು ತಿನ್ನೋ ಕಾಲ ಮುಗ್ದೋಗಿ ಬೋ ವರ್ಸ ಆಯ್ತು ಕಣ್ ಮಗಾ, ಅದ್ನೇ ನಂಬ್ಕೊಂಡು ನಾವು ಗೆದ್ಲು ಹತ್ತಿದ್ದು ಸಾಕು, ನೀನಾದ್ರೂ ನಾಲ್ಕಕ್ಸರ ಕಲ್ತು ದೊಡ್ಡೋನಾಗು’ ಅಂತ ಆಗಾಗ ಹೇಳುತ್ತಲೇ ಇದ್ದಳು. ಅದರ ಫಲವೇನೋ ಎಂಬಂತೆ ಅಂತೂ ಇಂತೂ ಊರಿಗೊಬ್ಬನೇ ಆಗಿ ಏಳನೇ ಕ್ಲಾಸ್ ಪಾಸಾಗಿ ಪಕ್ಕದೂರಿನ ಹೈಸ್ಕೂಲ್ ಸೇರಿಕೊಂಡೆ. ಹೊಸ ಊರು, ಹೊಸ ಪರಿಚಯ, ಹೊಸ ಗೆಳೆತನ ನನ್ನಲ್ಲಿ ಬದಲಾವಣೆಯ ಗಾಳಿ ಬೀಸಿತ್ತೋ ಏನೋ, ಡುಮ್ಕಿ ಹೊಡೆಯುವ ಚಾಳಿ ಬಿಟ್ಟು ಮೂರೇ ವರ್ಷದಲ್ಲಿ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಕಾಲಿಟ್ಟೆ.

ಅಷ್ಟು ಹೊತ್ತಿಗಾಗುವಾಗ ಅಪ್ಪ, ಅಕ್ಕಂದಿರ ಮದುವೆ ಬಾಣಂತನ ಅಂತೆಲ್ಲಾ ಕೈ ಖಾಲಿ ಮಾಡಿಕೊಂಡಿದ್ದ. ಅಪ್ಪನ ಬಳಿ ಮುಂದಿನ ಓದಿಗಾಗಿ ದುಡ್ಡು ಕೇಳುವಂತಿರಲಿಲ್ಲ. ಕೇಳಿದರೂ ಕೊಡಲು ಅವನಲ್ಲೇನೂ ಉಳಿದಿರಲಿಲ್ಲ. ಆದ್ರೆ ಅವ್ವನಿಗೆ ನನ್ನ 'ದೊಡ್ಮನ್ಸ' ಮಾಡುವ ಆಸೆ ಇನ್ನೂ ಕಮರಿರಲಿಲ್ಲ. ಅವರಿವರ ಕೈಕಾಲು ಹಿಡಿದು, ಕಾಡಿ ಬೇಡಿ, ಅಪ್ಪನ ಕಣ್ಣು ತಪ್ಪಿಸಿ ಕಾಳು ಕಡ್ಡಿ ಮಾರಿ ನನಗೆ ಹಣ ಹೊಂದಿಸಿ ಕೊಡುತ್ತಿದ್ದಳು.  ಇಷ್ಟಾದರೂ ಪದವಿಯ ಹೊತ್ತಿಗಾಗುವಾಗ ಅಮ್ಮ ಕೊಡುತ್ತಿದ್ದ ದುಡ್ಡು ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗುತ್ತಿತ್ತಷ್ಟೆ. ಹಾಗಾಗಿ ನನ್ನ ಅಲ್ಪ ಖರ್ಚನ್ನು ತೂಗಿಸಿಕೊಳ್ಳಲು ದುಡಿಮೆ ಅನಿವಾರ್ಯವಾಯಿತು. ಕಾಲೇಜು ಪಕ್ಕದಲ್ಲಿದ್ದ ದಿನಸಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಹಗಲು ಓದು, ರಾತ್ರಿ ದುಡಿಮೆ. ಅಂತೂ ಮೂರು ವರ್ಷಗಳ ಬಳಿಕ ಇಡೀ ಊರಿಗೆ ಡಿಗ್ರಿ ಪಡೆದ ಮೊದಲಿಗನಾಗಿ ಪದವಿಯೊಂದಿಗೆ ಊರು ಸೇರಿದೆ.

ಊರ ತಲೆಬಾಗಿಲಲ್ಲೇ ಅವ್ವ 'ದೊಡ್ಮನ್ಸ' ಆಗಿದ್ದ ಮಗನನ್ನು ಆರತಿ ಎತ್ತಿ ಸ್ವಾಗತಿಸಿದ್ದಳು. ಊರ ಪೂರ್ತಿ ಹಬ್ಬದ ವಾತಾವರಣ.ನಾನು ನಾಲ್ಕು ಸಲ ಡುಮ್ಕಿ ಹೊಡೆದ ಪ್ರೈಮರಿ ಶಾಲೆಯಲ್ಲಿ ನನಗೆ ಸನ್ಮಾನವೂ ಆಯ್ತು. ಅವ್ವ ಹೊಸ ಹುಟ್ಟು ಪಡೆದಂತೆ ನನ್ನ ಪದವಿಯ ಬಗ್ಗೆ ಊರಿಡೀ ಡಂಗುರ ಸಾರುತ್ತಲೇ ಇದ್ದಳು. ಆದರೆ ಇವೆಲ್ಲಾ ಮೂರುದಿನಗಳ ಸಂಭ್ರಮ, ಮಗ ಊರಿಗ ಆಗುತ್ತಿದ್ದಂತೆ ಈ ಸಂಭ್ರಮವೂ ಹಳತಾಗುತ್ತದೆ ಅನ್ನುವ ಸತ್ಯ ಗೊತ್ತಿದ್ದುದರಿಂದಲೋ ಏನೋ ಅಪ್ಪ ಮಾತ್ರ ನನಗೆ ಮದುವೆ ಮಾಡುವ ಲೆಕ್ಕಾಚಾರದಲ್ಲಿದ್ದ.

ಅವ್ವ ಆಗಲೂ ' ನೀ ಇವನ್ನೆಲ್ಲಾ ಅಚ್ಕೊಂಡು ಬ್ಯಾಸ್ರ ಮಾಡ್ಕೋಬೇಡ ಕಣ್ ಮಗಾ' ಎಂದು ನನ್ನ ಮತ್ತೆ ಓದೋಕೆ ಕಳುಹಿಸಿದ್ದಳು. ಹಗಲಿನ ಓದು, ರಾತ್ರಿಯ ದುಡಿತ ಅಂತೆಲ್ಲಾ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಸ್ನಾತಕೋತ್ತರ ಪದವಿಯೂ ಮುಗಿದೇ ಹೋಯಿತು.  ನನ್ನ ಅದೃಷ್ಟವೇನೋ ಎಂಬಂತೆ ಓದಿದ ಕಾಲೇಜಲ್ಲೇ ಉಪನ್ಯಾಸಕ ಹುದ್ದೆಯನ್ನೂ ಗಿಟ್ಟಿಸಿಕೊಂಡೆ. ಕೆಲಸಕ್ಕಿದ್ದ ಅಂಗಡಿಯವರು ಮಗಳನ್ನೇ ಪ್ರೀತಿಸಿ ಎಲ್ಲರ ಸಮ್ಮುಖದಲ್ಲಿ ಮದುವೆಯೂ ಆದೆ.

ಹೆಂಡತಿಯೇನೋ ಒಳ್ಳೆಯವಳೇ. ಆದ್ರೆ ಮದುವೆಯಾಗಿ ಊರಲ್ಲಿದ್ದ ನನ್ನನ್ನು ಬೆಂಗಳೂರಿನ ತಳಕುಬಳುಕು ಸೆಳೆಯತೊಡಗಿತ್ತು. ಕೆಲಸದ ನೆಪ ಹೇಳಿ ಅಪ್ಪನನ್ನು ಒಪ್ಪಿಸಿ ಮತ್ತೆ ಬೆಂಗಳೂರಿಗೆ ಹೊರಡುವ ತಯಾರಿ ನಡೆಸಿದೆ. ಅವ್ವ, ಮಗ ಸೊಸೆಯನ್ನು ಬಾಯ್ತುಂಬಾ ಹರಸಿ ಕಳುಹಿಸಿಕೊಟ್ಟಳು.

ಬೆಂಗಳೂರಿಗೆ ಹೋದಮೇಲೆ ಮತ್ತೆ ಅವ್ವ, ಅಪ್ಪ ನೆನಪಾಗಾಲಾರಂಭಿಸಿದರು. ಅವರು ಪಟ್ಟ ಕಷ್ಟ, ಅನುಭವಿಸಿದ ಅವಮಾನಗಳು ಮತ್ತೆ ಮತ್ತೆ ಕಾಡಲಾರಂಭಿಸಿದವು. ಒಂದು ಭಾನುವಾರ ಅವರಿಬ್ಬರನ್ನೂ ಕರೆದೊಯ್ಯಲು ಮತ್ತೆ ಊರಿಗೆ ಬಂದು ಬಲವಂತವಾಗಿ ಅವರಿಬ್ಬರನ್ನು ಬೆಂಗಳೂರಿನ ಕಾರು ಹತ್ತಿಸಿದೆ.

ಆದರೆ ತಲೆ ಎತ್ತಿದಷ್ಟೂ ಎತ್ತರಕ್ಕಿರುವ ಕಟ್ಟಡಗಳು, ಹಡಗಿನಂತಹ ಕಾರುಗಳು, ತಮ್ಮೂರಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೂ ಸೇರದಷ್ಟು ಜನ ಇಲ್ಲಿ ಪ್ರತಿದಿನ ನೆರೆಯುತ್ತಾರೆ ಅನ್ನುವ ಅಚ್ಚರಿ, ಈ ಊರು ನಿದ್ರಿಸುವುದೇ ಇಲ್ಲವೇ ಅನ್ನುವ ಬೆರಗುಗಳೆಲ್ಲವೂ ನಿಧಾನವಾಗಿ ನೀರಸವೆನಿಸತೊಡಗಿ ಇಬ್ಬರಿಗೂ ದಿನ ಬೆಳಗಾದರೆ ಕೂಗುತ್ತಿದ್ದ ಕೋಳಿ, ಕುಣಿಕೆ ಬಿಚ್ಚಿದ ಕೂಡಲೇ ಕೆಚ್ಚಲಿಗೆ ಬಾಯಿ ಹಾಕುತ್ತಿದ್ದ ಕರು, ಅಕ್ಕ ಪಕ್ಕದ ಮನೆಯವರೊಂದಿಗೆ ಆಡುತ್ತಿದ್ದ ಜಗಳ, ಇಡೀ ಊರ ವಿಷಯ ಚರ್ಚೆಯಾಗುತ್ತಿದ್ದ ತಮ್ಮ ಹೊಲಗಳು ನೆನಪಾಗತೊಡಗಿ ಮತ್ತೆ ಊರಿಗೆ ಹೊರಡುತ್ತೇವೆ ಎಂದು ಪಟ್ಟುಹಿಡಿದು ಕೂತರು. ನಾನು ಗತ್ಯಂತರವಿಲ್ಲದೆ ಅವರನ್ನು ಕಳುಹಿಸಿಕೊಟ್ಟೆ. ಅದಾಗಿ ಎರಡೇ ತಿಂಗಳಲ್ಲಿ ಇಬ್ಬರೂ ಗದ್ದೆಯ ಬದುವಿನಲ್ಲಿ ಹರಿದಾಡುತ್ತಿದ್ದ ಹಾವು ಕಚ್ಚಿ ಸತ್ತು ಹೋದರು. ಅಂತ್ಯ ಸಂಸ್ಕಾರ ಮುಗಿಸಿ ಮತ್ತೆ ಬೆಂಗಳೂರಿಗೆ ಬಂದ ನಂತರ ಊರಿನ ಸಂಬಂಧ ಸಂಪೂರ್ಣ ಕಡಿದೇ ಹೋಯಿತು. ಮುಂದೆ ಊರು ನೆನಪಾದದ್ದು ನಾನು ರಿಟೈರ್ ಆದಮೇಲಷ್ಟೇ.

ಅತ್ತ ಕಾಲೇಜಿಗೂ ಹೋಗಲಾಗದೆ, ಇತ್ತ ಮನೆಯಲ್ಲೂ ಇರಲಾಗದಿದ್ದಾಗ ಮತ್ತೆ ಹುಟ್ಟಿದೂರು ಕಾಡತೊಡಗಿ ಒಂದು ಮುಂಜಾವು ಹೆಂಡತಿ ಮಕ್ಕಳನ್ನು ಕರೆದುಕೊಂಡು ಊರ ದಾರಿ ಹಿಡಿದೆ. ಆದರೆ ಆ ಇಪ್ಪತ್ತೈದು ವರ್ಷಗಳ ಕಾಲದ ಹರಿವಿನಲ್ಲಿ ನನ್ನೂರು ಪೂರ್ತಿ  ಬದಲಾಗಿತ್ತು. ರಾತ್ರಿಯಾದರೂ ಖಾಲಿಯಾಗದಿರುತ್ತಿದ್ದ ಯಲ್ಲಮ್ಮನ ಗುಡಿಯ ಮುಂದಿನ ಅರಳಿಕಟ್ಟೆ ಹಾಡು ಹಗಲಲ್ಲೇ ಬಿಕೋ ಅನ್ನುತ್ತಿತ್ತು. ಅಪರಿಚಿತರನ್ನು ಕ್ಷಣಮಾತ್ರದಲ್ಲಿ ತನ್ನವರನ್ನಾಗಿಸುತ್ತಿದ್ದ ನನ್ನೂರಿನ ಜನರು ನನ್ನ ನೋಡುತ್ತಿದ್ದಂತೆ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚುತ್ತಿದ್ದರು. ಊರಿಡೀ ಅವ್ಯಕ್ತ ಭೀತಿಯೊಂದು ಮನೆ ಮಾಡಿದೆಯೇನೋ ಎಂದು ಅನಿಸುತ್ತಿತ್ತು. ಸದಾ ಗಿಜಿಗುಟ್ಟುತ್ತಿದ್ದ ಊರ ಸಂತೆಯಲ್ಲೂ ಸ್ಮಶಾನ ಮೌನ. ಬಯಸೀ ಬಯಸಿ ಊರಿಗೆ ಬಂದರೆ, ಇಲ್ಲಿ ನಾನು ಕಾಣುತ್ತಿರುವುದಾದರೂ ಏನು ಅನ್ನುವ ಗೊಂದಲಕ್ಕೆ ಬಿದ್ದು ಮನೆ ತಲುಪಿ ಇನ್ನೇನು ಬೀಗ ತೆರೆದು ಒಳಗೆ ಕಾಲಿಡಬೇಕು ಅನ್ನುವಷ್ಟರಲ್ಲಿ ಮನೆಯೊಳಗೆ ಏನೋ ಸದ್ದಾದಂತೆ ಅನ್ನಿಸಿತು. ಅಂಜುತ್ತಲೇ ಒಳಗಡಿಯಿಟ್ಟರೆ, ಅಲ್ಲಿದ್ದ ಪಾತ್ರೆ ಪರಡಿಗಳು, ಬಳಸಿ ಬಿಸಾಕಿದ್ದ ಸೋಪ್ ತೀರಾ ಇತ್ತೀಚಿನವರೆಗೂ ಮನುಷ್ಯ ವಾಸವಿದ್ದ ಸ್ಪಷ್ಟ ಕುರುಹನ್ನ್ನು ನೀಡಿತು.

ಒಂದು ಕ್ಷಣ ಭಯವಾದರೂ ನನ್ನವ್ವ ಅಪ್ಪ ಬಾಳಿ ಬದುಕಿದ ಊರಿದು, ಅಕ್ಕಂದಿರು ಬದುಕುತ್ತಿರುವ ಊರಿದು ಅನ್ನುವ ಅಭಿಮಾನದಲ್ಲಿ ಎಲ್ಲಾ ಭಯಗಳು ತೂರಿಹೋದವು. ಊರಲ್ಲಿ ಯಾವುದೋ ಒಂದು ಅಸ್ಪಷ್ಟ ಭೀತಿಯ ಛಾಯೆಯಿದೆ ಎಂದೆನಿಸಿದರೂ ಮೊದಲ ಕೆಲ ದಿನಗಳು ಮನೆಯಲ್ಲೇನೂ ವಿಶೇಷ ಘಟಿಸಲಿಲ್ಲ. ನಾನೂ ಅವೆಲ್ಲಾ ನನ್ನ ಭ್ರಮೆ ಇರಬಹುದೇನೋ ಅಂದುಕೊಂಡು ಸುಮ್ಮನಾದೆ. ಮೇಲಾಗಿ ಅಕ್ಕಂದಿರನ್ನು ಇನ್ನೇನು ನೋಡೇಬಿಡುತ್ತೇನೆ ಅನ್ನುವ ಖುಶಿಯಲ್ಲಿ ಇದ್ದ ಅಲ್ಪ ಸ್ವಲ್ಪ ಅನುಮಾನಗಳು ಕೊಚ್ಚಿಹೋದವು.

ಆದರೆ ಒಂದಿಷ್ಟು ದಿನಗಳು ಕಳೆಯುತ್ತಿದ್ದಂತೆ ಹಳೆ ಗೆಳೆಯರು, ಊರ ತುಂಬಾ ನಕ್ಸಲರು ತುಂಬಿಕೊಂಡದ್ದನ್ನೂ, ಜನವಾಸವಿಲ್ಲದೆ ಪಾಳು ಬಿದ್ದಿದ್ದ ನನ್ನ ಮನೆಯೇ ಅವರ ಕಾರ್ಯಸ್ಥಾನವಾಗಿತ್ತು ಅನ್ನುವುದನ್ನೂ ನಿಧಾನವಾಗಿ ಬಾಯಿಬಿಟ್ಟರು. ಮಾತ್ರವಲ್ಲ ನನ್ನ ಹಿರಿಯಕ್ಕನ ಮಗನೂ ಅವರ ಪಾಳಯ ಸೇರಿಕೊಂಡಿದ್ದಾನೆ ಅನ್ನುವ ಕಟುಸತ್ಯವನ್ನೂ ತಿಳಿಸಿದರು. ಆ ಕ್ಷಣಕ್ಕೆ ನನಗೆ ಭೂಮಿಯೇ ಬಾಯಿ ತೆರೆದು ನನ್ನನ್ನು ನುಂಗಬಾರದೇ ಅನ್ನಿಸುತ್ತಿತ್ತು. ಮುಂದೇನು ಮಾಡಬೇಕು ಅನ್ನುವುದೇ ತೋಚಲಿಲ್ಲ. ಬೆಂಗಳೂರಿನ ಬದುಕಿನ ಧಾವಂತದಿಂದ ತಪ್ಪಿಸಿಕೊಳ್ಳಲು ಊರಿಗೆ ಬಂದರೆ ಅಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕುವಂತಹ ಸ್ಥಿತಿ ಎದುರಾಗಿತ್ತು. ನಗರದಲ್ಲಿ ಹುಟ್ಟಿ ಬೆಳೆದ ಹೆಂಡತಿ ಮಕ್ಕಳು ನನ್ನ ಹಳ್ಳಿಗಿನ್ನೂ ಹೊಂದಿಕೊಳ್ಳಲು ಕಷ್ಟಪಡುತ್ತಲೇ ಇದ್ದರು. ಅದರ ಮಧ್ಯೆ ಈ ವಿಚಾರವನ್ನೂ ಹೇಳಿದರೆ ಮತ್ತಷ್ಟು ಭಯಪಟ್ಟುಕೊಳ್ಳುತ್ತಾರೆ ಅಂತಂದುಕೊಂಡು ಅವರಿಂದ ವಿಷಯ ಮುಚ್ಚಿಟ್ಟೆ. ಆದ್ರೆ ಏನಾದರೂ ಮಾಡಲೇಬೇಕಿತ್ತು, ಮೇಲಾಗಿ ಸೋದರಳಿಯನನ್ನು ಮತ್ತೆ ಮುಖ್ಯವಾಹಿನಿಗೆ ಕರೆತಂದು ಈ ಹಿಂಸಾಚಾರಗಳಿಂದ ಅವನನ್ನು ವಿಮುಖನಾಗಿಸಲೇಬೇಕಿತ್ತು.

ಸರಿ, ಆದದ್ದಾಗಲಿ ಎಂದು ಅವನನ್ನು ಹುಡುಕುತ್ತಾ ಹೊರಟೆ. ಯಾರ ಬಳಿ ಅವರ ಬಗ್ಗೆ ವಿಚಾರಿಸಿದರೂ ನಮಗೇನೂ ಗೊತ್ತಿಲ್ಲ ಅನ್ನುವ ಸಿದ್ಧ ಉತ್ತರವೇ ಸಿಗುತ್ತಿತ್ತು. ಅಂತೂ ಇಂತೂ ಕಷ್ಟಪಟ್ಟು ಕಾಡಿನ ಒಂದು ಮೂಲೆಯಲ್ಲಿ ಅವನನ್ನು ಕಂಡುಹಿಡಿದೆ. ಬೆನ್ನಲ್ಲಿ ಮಣಭಾರದ ಬ್ಯಾಗ್, ಬಗಲಲ್ಲಿ ಕೋವಿ, ಕಣ್ಣಲ್ಲಿ ಕ್ರಾಂತಿಯ ಕಿಚ್ಚು, ಮನುಷ್ಯತ್ವವನ್ನೇ ತಿಂದು ತೇಗುವಂತಹ ಗಾಂಭೀರ್ಯ. ಮಾತೆತ್ತಿದರೆ ಲೆನಿನ್, ಚಿಗುವೆರಾ, ಮಾರ್ಕ್ಸ್ ಎಂದೆಲ್ಲಾ ದೊಡ್ಡವರ ಮಾತುಗಳನ್ನು ತನಗೆ ಬೇಕಾದಂತೆ ತಪ್ಪು ತಪ್ಪಾಗಿ ಹೇಳುತ್ತಿದ್ದ. ಈ ದೇಶ ಉದ್ಧಾರವಾಗಬೇಕಾದರೆ ರಕ್ತಕ್ರಾಂತಿ ಆಗಲೇಬೇಕು ಅನ್ನುತ್ತಿದ್ದ. ಹಳ್ಳಿಯ ಏನೂ ಅರಿಯದ ಮುಗ್ಧನೊಬ್ಬನನ್ನು ಬ್ರೈನ್?ವಾಶ್ ಈ ಪರಿ ಬದಲಾಯಿಸಿಬಿಡುತ್ತಾದಾ? ಮನೆಯ ಅಂಗಳದಲ್ಲಿ ಸಕ್ಕರೆ ಚೆಲ್ಲಿ ಇರುವೆಯೂ ಬದುಕಿಕೊಳ್ಳಲಿ ಬಿಡಿ ಅನ್ನುತ್ತಿದ್ದವನ ಬಾಯಲ್ಲಿ ಈಗ ರಕ್ತ ಕ್ರಾಂತಿಯ ಮಾತು! ಎಂತಹ ವೈಚಿತ್ರ್ಯವಲ್ಲವೇ ಅಂತ ಅನ್ನಿಸುತ್ತಿದ್ದಂತೆ ಅವನು,  'ಹೌದೂ ಈಟ್ ದಿನ ಇಲ್ಲದ್ ನಂಟು ಇದ್ಕಿಂದಗ್ಗೆ ಈಗ್ ನೆನಕೊಂಡ್ ಬರೋ ಅಕ್ಕಿಗತ್ತೇನು? ಮನೆಯಾಗೇನಾದ್ರೂ ಕ್ಯಾಮಿತ್ತಾ?' ಎಂದು ವ್ಯಂಗ್ಯವಾಗಿ ಕೇಳಿದ. ಏನೊಂದೂ ಉತ್ತರಿಸದೆ ನಾನು ಸುಮ್ಮನೆ ಅವನನ್ನೇ ನೋಡುತ್ತಾ ನಿಂತೆ. ಅವನವ್ವ ಬಯ್ಯುತ್ತಿದ್ದರೂ ಇವನನ್ನೇ ಅಲ್ಲವೇ ನಾನು ಮೊದಲ ಸೋದರಳಿಯ ಎಂದು ವಿಪರೀತ ಮುದ್ದು ಮಾಡುತ್ತಿದ್ದುದು? ಇವನಾದರೂ ಅಷ್ಟೆ ಅವನ ಅಪ್ಪನಿಗಿಂತಲೂ ಹೆಚ್ಚಾಗಿ ನನ್ನನ್ನೇ ಹಚ್ಚಿಕೊಂಡಿದ್ದ. ಈಗ ತನಗೂ ಅವನಿಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಮಾತಾನಾಡುತ್ತಿದ್ದಾನೆ. ನಾನು ಅವನ ಪಕ್ಕ ಕೂತು ಗಲ್ಲ ಹಿಡಿದೆತ್ತಿ, ’ಇವೆಲ್ಲಾ ಬುಟ್ಬುಡು ಮಗಾ, ಬಾ ಮನೆಗೆ ಹೋಗೋಣ’ಅಂದೆ. ಅವನು ಮತ್ತಷ್ಟು ಕೊಸರಿಕೊಳ್ಳುತ್ತಾ ನನ್ನಿಂದ ದೂರ ಸರಿದು, ಮತ್ತೆ ಕ್ರಾಂತಿ, ನ್ಯಾಯ ಅಂತೆಲ್ಲಾ ಬಡಬಡಿಸತೊಡಗಿದ. ಇನ್ನಿವನಲ್ಲಿ ಮಾತನಾಡಿ ಪ್ರಯೋಜನವಿಲ್ಲವೆಂದರಿತು, ಇವನ ಅವ್ವನ ಮೂಲಕವಾದರೂ ಇವನನ್ನು ಸರಿದಾರಿಗೆ ತರಲು ಪ್ರಯತ್ನಿಸೋಣ ಅಂದುಕೊಂಡು, ’ಹೋಗ್ಲಿ ಬುಡು. ಅಕ್ಕಯ್ಯ ಎಲ್ಲಿ?’ ಅಂತ ಕೇಳಿದೆ. ಅವನು ಮುಖ ತಿರುಗಿಸಿ, ’ಎರಡು ವರ್ಷಗಳ ಹಿಂದೆ ಅವ್ವ, ಚಿಗವ್ವಂದಿರು ಪೊಲೀಸ್ ಕಾರ್ಯಾಚರಣೆಯಲ್ಲಿ ಸತ್ತೋದ್ರು’ ಅಂತಂದು ನಡೆದುಹೋದ. ಕ್ರಾಂತಿಯ ಬಗ್ಗೆ ಮಾತನಾಡುತ್ತಿದ್ದವನ ಕಣ್ಣಲ್ಲೂ ನೀರು ಗಿರಿಗಿಟ್ಲೆಯಾಡುತ್ತಿತ್ತಾ? ನಿಲ್ಲಿಸಿ ನೋಡುವಷ್ಟು ಧೈರ್ಯ ನನಗಿರಲಿಲ್ಲ.

ತೀರಾ ಎದೆಯೊಳಗೆ ಕೈ ಹಾಕಿ ಹೃದಯವನ್ನು ಹಿಂಡಿ ಮಧ್ಯರಸ್ತೆಯಲ್ಲಿ ಬಿಸುಟಿ ಹೋದಂಥಾ ಯಾತನೆ. ಅಂತ್ಯಸಂಸ್ಕಾರದಂದು ಮೃತದೇಹದ ಮೇಲೆ ಬಿದ್ದು ಅತ್ತು ಕರೆಯುತ್ತಿದ್ದ, ನಾನು ಚಿಕ್ಕವನಿದ್ದಾಗ ಹೆಗಲ ಮೇಲೆ ಕೂರಿಸಿ ಮೆರವಣಿಗೆ ಮಾಡುತ್ತಿದ್ದ, ಅವ್ವನಿಗೆ ಗೊತ್ತಾಗದಂತೆ ಸಾಸಿವೆ ಡಬ್ಬದಲ್ಲಿದ್ದ ಐದೋ ಹತ್ತೋ ಪೈಸೆಯನ್ನು ನನಗೆ ಕದ್ದು ಮುಚ್ಚಿ ಕೊಡುತ್ತಿದ್ದ, ನಾನು ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದಾಗೆಲ್ಲಾ ಗೋಡಂಬಿಯ ಆಸೆ ತೋರಿಸಿ ನನ್ನ ಶಾಲೆಗೆ ಕಳುಹಿಸುತ್ತಿದ್ದ ಅಕ್ಕಂದಿರ ಮುಖವನ್ನು ನೆನಪಿಸಿಕೊಳ್ಳಲು ಅದೆಷ್ಟೇ ಪ್ರಯತ್ನಪಟ್ಟರೂ ರಕ್ತದ ಮಡುವಲ್ಲಿ ಬಿದ್ದು ಅವರು ಒದ್ದಾಡಿರಬಹುದಾದ ಚಿತ್ರ ಮರೆಯಾಗುತ್ತಲೇ ಇರಲಿಲ್ಲ. ತಪ್ಪೆಲ್ಲಾ ನನ್ನದೇ, ಅವ್ವ-ಅಪ್ಪ ಹೋದನಂತರ ಈ ಊರಿನ ಕಡೆಗೆ ತಲೆಹಾಕದೇ ತಪ್ಪು ಮಾಡಿಬಿಟ್ಟೆ ಅನ್ನುವ ಅಪರಾಧೀ ಭಾವ ನನ್ನ ಕಾಡತೊಡಗಿ ಕೊನೆಯ ಪ್ರಯತ್ನವೆಂಬಂತೆ ಕೆಲದಿನಗಳಲ್ಲೇ ಮತ್ತೆ ಅವನ ಜಾಡು ಹಿಡಿದು ಹೊರಟೆ. ಅವನೊಬ್ಬನನ್ನಾದರೂ ಈ ನರಕದಿಂದ ಮುಕ್ತಗೊಳಿಸಿ ನಾನು ಮತ್ತೆ ಸಂಸಾರ ಸಮೇತನಾಗಿ ಬೆಂಗಳೂರಿಗೆ ಹೋಗಿಬಿಡೋಣ ಅಂದುಕೊಂಡೆ. ಮೇಲಾಗಿ  ಸಾಯಿಸುವಂತಹ ಯಾವ ತಪ್ಪನ್ನು ಅಕ್ಕಂದಿರು ಮಾಡಿದ್ದರು ಅನ್ನುವುದನ್ನೂ ನನಗೆ ತಿಳಿದುಕೊಳ್ಳಬೇಕಿತ್ತು. ಆದ್ರೆ ಅವನು ನನ್ನ ಯಾವ ಪ್ರಶ್ನೆಗಳಿಗೂ ಉತ್ತರಿಸಲು ತಯಾರಿರಲಿಲ್ಲ. ಇವಕ್ಕೆಲ್ಲಾ ನೀನೇ ಕಾರಣ ಅನ್ನುವ ಸ್ಪಷ್ಟ ತಿರಸ್ಕಾರ ಅವನ ಕಣ್ಣುಗಳಲ್ಲಿ ಎದ್ದು ಕಾಣುತ್ತಿತ್ತು. ಇವನಿನ್ನು ಹಿಂದಿರುಗಿ ಬರಲಾರದಷ್ಟು ಮುಂದುವರಿದಿದ್ದಾನೆ ಅನ್ನಿಸಿ ಅಲ್ಲಿಂದ ಹಿಂದಿರುಗಿ ಬಂದೆ. ತೀರಾ ಕಾಡು ದಾಟುವ ಮುನ್ನ ಹಿಂದಿನಿಂದ ಓಡಿ ಬಂದು ’ ಮಾವ ಈ ಊರಾಗೆ ಯಾವ್ ಹೊತ್ತಲ್ಲಿ ಏನ್ ಆಗ್ತಾದೋ ಹೇಳಕೊ ಆಗೋಲ್ಲ, ಇಲ್ಲಿಂದ ಹೊಳ್ಳಿ ಹೋಗಿ ನೀನಾದ್ರೂ ಬದ್ಕೊ’  ಅಂದ. ನಾನು ’ ನಮ್ಮ ಜೋಡಿ ನೀನೂ ಬರ್ತಿ ಅಂಥಾದ್ರೆ ಊರು ಬಿಟ್ಟ್ ಹೋಗ್ತೇವೆ. ಇಲ್ಲ್ದಿದ್ದರೆ ಅದೇನಾಗುತ್ತೈತೋ ಆಗ್ಲಿ, ನಾವಿಲ್ಲೆ ಇರ್ತೀವಿ’ ಅಂದೆ. ಅವನು ನಿರ್ಲಿಪ್ತನಂತೆ ’ನಿಮ್ಮಿಷ್ಟ’ ಅಂತಂದು ಬೆನ್ನು ತಿರುಗಿಸಿ ನಡೆಯತೊಡಗಿದ. ಅವನ ನಿರ್ವಿಕಾರದಲ್ಲೂ ತನ್ನವರು ಅನ್ನುವ ಆರ್ದ್ರತೆಯಿತ್ತಾ? ಗೊತ್ತಿಲ್ಲ.

ಅರಗಿಸಿಕೊಳ್ಳಲಾಗದ ಸತ್ಯವನ್ನು ಅರಗಿಸಿಕೊಳ್ಳಲೆತ್ನಿಸುತ್ತಾ ಮನೆ ತಲುಪಿದೆ. ಮನೆಯ ಮನೆಯ ಮೂಲೆ ಮೂಲೆಯಲ್ಲಿಯೂ ಅಕ್ಕಂದಿರ ನರಳಾಟ, ಚೀರಾಟ ಕೇಳಿಸುತ್ತಿದೆ ಅನಿಸುತಿತ್ತು. ನನಗೊತ್ತಿರುವ ಸತ್ಯವನ್ನು ಹೆಂಡತಿ ಮಕ್ಕಳ ಜೊತೆ ಹಂಚಿಕೊಳ್ಳಲಾರದ ಸಂಧಿಗ್ಧತೆ. ಕೊನೇಪಕ್ಷ ಇವರನ್ನಾದರೂ ಉಳಿಸಿಕೊಳ್ಳೋಣ ಅನ್ನಿಸಿ ಪತ್ನಿಯ ಬಳಿ ’ಸಾಮಾನೆಲ್ಲಾ ಪ್ಯಾಕ್ ಮಾಡು, ಈ ಊರು ನನಗೀಗ ಸರಿಬರುತ್ತಿಲ್ಲ, ನಾವು ನಾಳೆ ಬೆಂಗಳೂರಿಗೆ ಹಿಂದಿರುಗೋಣ’ ಅಂದೆ. ಆಕೆ ಇವೆಲ್ಲಾ ಏನು ಎಂಬಂತೆ ನನ್ನತ್ತ ನೋಡಿದಳು. ನಾನು ಮುಖ ತಿರುಗಿಸಿ ಗೋಡೆಯ ಮೇಲಿದ್ದ ಅಪ್ಪನ ಫೋಟೋವನ್ನೊಮ್ಮೆ, ಅವ್ವನ ಫೋಟೋವನ್ನೊಮ್ಮೆ ನೋಡಿ ಕೈ ಮುಗಿದೆ.

ರಾತ್ರಿಯ ವಿಚಿತ್ರ ತಳಮಳ ಮುಗಿದು ಬೆಳಗಾಯ್ತು, ಇನ್ನೇನು ಎಲ್ಲಾ ತಯಾರಿ ಮುಗಿಸಿ ಹೊರಡಬೇಕು ಅನ್ನುವಷ್ಟರಲ್ಲಿ ಬಾಗಿಲು ಬಡಿದ ಸದ್ದಾಯಿತು, ಅದರ ಬೆನ್ನಹಿಂದೆಯೇ ’ದಫ್ ದಫ್’ ಅಂತ ಬೂಟುಗಾಲುಗಳ ಸದ್ದೂ ಕೇಳಿಸಿತು. ನಾನು ಬಾಗಿಲ ಬಳಿ ತಲುಪುವ ಮುನ್ನವೇ ಕೋವಿಧಾರಿ ಯುವಕರ ಗುಂಪೊಂದು ಮನೆಯೊಳಗೆ ಪ್ರವೇಶಿಸಿ ಒಳಗಿನಿಂದ ಚಿಲಕ ಹಾಕಿಕೊಂಡರು. ಹೊರಗೆ ಮನೆಯ ಸುತ್ತಲೂ ಪೊಲೀಸರು. ಏನೊಂದೂ ಅರ್ಥವಾಗದ ಹೆಂಡತಿ ಮತ್ತು ನನ್ನಿಬ್ಬರು ಮಕ್ಕಳು ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟರು. ಹೊರಗಿಂದ ಶರಣಾಗತಿಗೆ ಕರೆಕೊಡುತ್ತಿದ್ದರೆ, ಒಳಗಿಂದ ಗ್ರೆನೇಡ್ ಸಿಡಿಸುವ ಬೆದರಿಕೆ ಒಡ್ಡುತ್ತಿದ್ದರು. ಏನೂ ಮಾಡಲಾಗದ ಅಸಹಾಯಕತೆಯಲ್ಲಿ ನಾನು ಕೈ ಚೆಲ್ಲಿ ಕುಳಿತಿದ್ದೆ.

ಎರಡೂ ಕಡೆಗಳ ಅಹಂಗಳ ಮೇಲಾಟದಲ್ಲಿ ಮನುಷ್ಯತ್ವ ಇಂಚಿಂಚಾಗಿ ಸಾಯುತ್ತಿತ್ತು. ಆ ಕಡೆ ಇರುವವರು ಮೊದಲು ಫೈರಿಂಗ್ ಮಾಡಿದರೋ ಅಥವಾ ಈ ಕಡೆ ಇರುವವರೇ ಮಾಡಿದರೋ ನನಗೊತ್ತಿಲ್ಲ, ಆದ್ರೆ ಮಾನವೀಯತೆಯ ಬೇಟೆಗೆ ಎರಡೂ ಕಡೆಯವರು ಟೊಂಕ ಕಟ್ಟಿದ್ದರು. ಆ ಕಾಳಗದಲ್ಲಿ ನನ್ನವರು ಅನ್ನಿಸಿಕೊಂಡವರನ್ನೆಲ್ಲಾ ಕಳೆದುಕೊಂಡೆ. ಯಾವ ಊರಿಗೆ ನೆಮ್ಮದಿಯನ್ನು ಅರಸಿಕೊಂಡು ಹೋಗಿದ್ದೆನೋ ಅದೇ ಊರು ನನ್ನ ಸರ್ವಸ್ವವನ್ನೂ ನನ್ನಿಂದ ಕಿತ್ತುಕೊಂಡಿತ್ತು. ಅಲ್ಲಿ ಅದೆಷ್ಟು ಜೀವ ಧರೆಗುರುಳಿತೋ ಗೊತ್ತಿಲ್ಲ, ಅದೆಷ್ಟು ರಕ್ತ ನೆಲ ಸೇರಿತೋ ಗೊತ್ತಿಲ್ಲ. ಆದ್ರೆ ಇಡೀ ಮನೆಯಲ್ಲಿ ಜೀವ ಅಂತ ಉಳಿದುದು ನನ್ನದು ಮಾತ್ರ. ವಿಧಿಗೆ, ಕಾಲವೆಂಬ ಕಠೋರ ಹಣೆಬರಕ್ಕೆ ನನ್ನ ಮೇಲೆ ಅದೆಷ್ಟು ದಿನಗಳ ಸಿಟ್ಟಿತ್ತೋ ಏನೋ, ಅಕ್ಷರಶಃ ಜಮಖಾನೆಯ ಮೇಲೆ ನಡೆದುಬಂದಂತೆ ಶವಗಳನ್ನು ದಾಟಿ ಬಂದ ಪೊಲೀಸರು ನನಗೆ ನಕ್ಸಲನೆಂಬ ಹಣೆಪಟ್ಟಿ ಕಟ್ಟಿ ಕೈತೋಳ ತೊಡಿಸಿದರು.

ನಾನು ಏನೊಂದೂ ಮಾತಾಡದೆ ಅವರ ಹಿಂದೆ ಕುರಿಯಂತೆ ನಡೆದು ಹೋದೆ. ವಕೀಲರನ್ನು ನೇಮಿಸಿ ಹೋರಾಡುವ ಶಕ್ತಿಯಾಗಲಿ, ಚೈತನ್ಯವಾಗಲಿ ನನ್ನಲ್ಲಿ ಉಳಿದಿರಲಿಲ್ಲ. ಇಷ್ಟಕ್ಕೂ ನನ್ನವರೆಲ್ಲರನ್ನೂ ಕಳೆದುಕೊಂಡ ಮೇಲೆ ನಾನು ಯಾರಿಗಾಗಿ ಹೋರಾಡಬೇಕಿತ್ತು? ಯಾರಿಗಾಗಿ ಬದುಕಬೇಕಿತ್ತು? ಇವೆಲ್ಲವನ್ನೂ ಮೀರಿ ನಾನು ಸಮಾಜದ್ರೋಹಿ ಕೆಲಸ ಮಾಡಿಲ್ಲವೆಂದರೆ ಅದನ್ನು ನಂಬುವವರಾದರೂ ಯಾರಿದ್ದರು? ಎಲ್ಲಾ ಕಳೆದುಕೊಂಡು ಅಕ್ಷರಶಃ ಅನಾಥನಾದ ಮೇಲೆ ನನ್ನ ನಿರಪರಾಧಿತನವನ್ನು ಸಾಬೀತುಪಡಿಸಿ ನಾನು ಏನನ್ನು ಪಡಕೊಳ್ಳುವುದಿತ್ತು? ನಾನು ಮಾತಿದ್ದೂ ಮೂಗನಾದೆ. ಪೊಲೀಸರು ಕೊಡುತ್ತಿದ್ದ ಯಮಯಾತನೆಗಳನ್ನೆಲ್ಲಾ ಸುಮ್ಮನೆ ಸಹಿಸಿಕೊಳ್ಳುತ್ತಿದ್ದೆ. ಹೊರ ಪ್ರಪಂಚದಿಂದ ಸಂಪೂರ್ಣ ದೂರವೇ ಉಳಿದುಬಿಟ್ಟೆ. ನನ್ನವರು ಇಲ್ಲವೆಂದಾದಮೇಲೆ ನನ್ನ ಯಾರೂ ಬಿಡಿಸಿಕೊಂಡು ಹೋಗಲಾರರು ಅಂದುಕೊಂಡು ಒಂದು ರೀತಿಯಲ್ಲಿ ನೆಮ್ಮದಿಯಾಗಿಯೇ ಇದ್ದೆ. ಆದ್ರೆ ವಿಧಿಗೆಲ್ಲಿದೆ ದಯೆ? ಅದೇನು ಕಾರಣವೋ ಏನೋ ಗೊತ್ತಿಲ್ಲ, ಒಂದು ಬೆಳ್ಳಂಬೆಳಗ್ಗೆ ನನ್ನ ಜೈಲಿನಿಂದ ಬಿಡುಗಡೆ ಮಾಡಿದರು. ನಾನು ಮತ್ತೆ ಕುರಿಯಂತೆ ತಲೆತಗ್ಗಿಸಿ ಹೊರ ಪ್ರಪಂಚಕ್ಕೆ ಬಂದೆ. ಜೈಲಲ್ಲಿರುವಾಗ ಕನಿಷ್ಠಪಕ್ಷ ಊಟವಾದರೂ ನನಗೆ ದೊರಕುತ್ತಿತ್ತು. ಆದರೆ ಹೊರಗಡೆ ಅದಕ್ಕೂ ಸಂಚಾಕಾರ ಬಂದಿತ್ತು. ದುಡಿಯುವ ಆಸಕ್ತಿ, ಸಾಮರ್ಥ್ಯ ಎರಡೂ ನನ್ನಲಿರಲಿಲ್ಲ. ನಾನು ದುಡಿಯುತ್ತೇನೆ ಅಂದರೂ ಒಂಟಿ ಕಾಲಿನ ಕುಂಟನಿಗೆ ಕೆಲಸ ಕೊಡುವವರಾರು? ಹಾಗೆಂದು ಭಿಕ್ಷೆ ಬೇಡಿ ತಿನ್ನುವುದು ನನ್ನ ಜಾಯಮಾನಕ್ಕೆ ಒಗ್ಗಲೇ ಇಲ್ಲ. ಹಾಗಾಗಿ ಅಲೆಯುತ್ತಾ ಅಲೆಯುತ್ತಾ ಇಲ್ಲಿ ಬಂದು ಈ ದೇವಸ್ಥಾನದಲ್ಲಿ ಭಕ್ತರು ಒಳಕ್ಕೆ ಬಿಟ್ಟು ಹೋದ ಚಪ್ಪಲಿ ಕಾಯುತ್ತಾ ಅವರು ಕೊಟ್ಟ ದುಡ್ಡನ್ನು ಪಡೆದು ಇರುವಷ್ಟು ದಿನ ಬದುಕುತ್ತೇನೆ. ಒಂದು ಹೊತ್ತಿನ ಊಟಕ್ಕೆ, ಒಂದು ಕಟ್ಟು ಬೀಡಿಗೆ ನನಗದು ಸಾಕಾಗುತ್ತದೆ. ಆದರೆ ಇಲ್ಲಿ ಬಂದು ಇಷ್ಟು ವರ್ಷವಾದ ಮೇಲೆ ಇದೇ ಮೊದಲ ಬಾರಿ ನಾನು ನನ್ನ ಕಥೆಯನ್ನು ಒಬ್ಬರ ಮುಂದೆ ಬಿಚ್ಚಿಟ್ಟಿದ್ದೇನೆ ಅನ್ನುತ್ತಾ ಕಿವಿಯ ಮೇಲಿದ್ದ ಮೋಟು ಬೀಡಿ ತೆಗೆದು ಬೆಂಕಿ ಹಚ್ಚಿ ತುಟಿಗಿಟ್ಟುಕೊಂಡ.

ಕಥೆ ಸಿಕ್ಕ ಖುಶಿಯಲ್ಲಿ ಪೂಜಾ ಧಿಗ್ಗನೆ ಎದ್ದು ಬೇಗ ಬೇಗನೇ ಹೆಜ್ಜೆ ಹಾಕುತ್ತಾ ಮನೆ ತಲುಪಿ ಕಥೆ ಬರೆದು ಮೈಲ್ ಮಾಡಿ ಲ್ಯಾಪ್?ಟಾಪ್ ಮುಚ್ಚಿ  ಒಂದು ನಿಡಿದಾದ ಉಸಿರುಬಿಟ್ಟು ಸಂತೃಪ್ತಿಯಿಂದ ಕಣ್ಣು ಮುಚ್ಚಿದಳು.

ಹಿಂದಿನಿಂದ ಬಂದ ಅಮ್ಮ ಮೆಲ್ಲನೆ ತಲೆ ನೇವರಿಸುತ್ತಾ ’ಕಥೆಗೆ ವಿಷಯ ಸಿಕ್ತಾ ಮಗಳೇ?’ ಎಂದು ಪ್ರಶ್ನಿಸಿದರು. ಪೂಜಾ 'ಕಥೆ ಬರೆದೂ ಆಯ್ತು, ಕಳುಹಿಸಿಯೂ ಆಯ್ತು' ಅಂದು ಮಂದಿರದಲ್ಲಿ ನಡೆದ ಘಟನೆಯನ್ನು ಸವಿಸ್ತಾರವಾಗಿ ತಿಳಿಸಿದಳು.  ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಅಮ್ಮ ತುಸು ಹೊತ್ತು ಸುಮ್ಮನೆ ಕೂತು, ಮತ್ತೆ ಅವಳನ್ನು 'ಸರಿ ಅವರಿಗೆ ನೀನೇನು ಕೊಟ್ಟೆ?' ಎಂದು ಪ್ರಶ್ನಿಸಿದರು. ಪೂಜಾ 'ಇಲ್ಲಮ್ಮ, ಕಥೆ ಸಿಕ್ಕ ಖುಶಿಯಲ್ಲಿ ಅವನಿಗೇನಾದರೂ ಕೊಡಬೇಕು ಅನ್ನುವುದೇ ಮರೆತುಹೋಗಿತ್ತು, ಆದ್ರೆ ದಾರಿಯಲ್ಲಿ ಬರ್ತಾ ಬರಿಗಾಲಿಗೆ ಚುಚ್ಚಿದ ಮುಳ್ಳು ಚಪ್ಪಲಿ ಅಲ್ಲೇ ಬಿಟ್ಟು ಬಂದ ಸಂಗತಿಯನ್ನು ನೆನಪಿಸಿತು. ಹಿಂದುರುಗಿ ಹೋದರೆ ಕಥೆ ಬರೆಯುವ ಈ ಅದ್ಭುತ ಮೂಡು ಹಾಳಾಗಬಹುದೆಂದು ನಿನ್ನೆಯಷ್ಟೇ ಖರೀದಿಸಿದ ಚಪ್ಪಲಿಯನ್ನೂ ನಾಳೆ ಸಿಕ್ಕೀತು ಅಂದುಕೊಂಡು ಮುಳ್ಳನ್ನೂ ಲೆಕ್ಕಿಸದೆ ಬಂದೆ. ಇನ್ನು ಇಂದೋ ನಾಳೆಯೋ ಸಾಯಬಹುದಾದ ಮುದುಕನಿಗೆ ಏನಾದರೂ ಕೊಡಬೇಕೆಂದು ಹಿಂದಿರುಗಿ ಹೋಗುವುದೆಲ್ಲಿಂದ ಬಂತು?' ಎಂದು ಮರು ಪ್ರಶ್ನಿಸಿದಳು.

ಅಮ್ಮ ತಟ್ಟನೆ ಕೈ  ಕೊಡವಿ ’ನೀನೇನೋ ಅವರ ಬದುಕನ್ನು ಕಥೆಯಾಗಿಸಿ ಒಂದಿಷ್ಟು ಹೆಸರು ಸಂಪಾದಿಸುತ್ತಿ. ಆದ್ರೆ ಅದರಿಂದ ಅವರ ಬದುಕೇನೂ ಸುಧಾರಣೆಯಾಗುವುದಿಲ್ಲ. ಕಳೆದುಹೋದ ಸಂಬಂಧಗಳೂ, ಜೀವಗಳೂ ಮತ್ತೆ ಅವರಿಗೆ ದೊರೆಯುವುದಿಲ್ಲ. ಇರಲಿ, ಅವನ್ನೆಲ್ಲಾ ಬಿಟ್ಬಿಡೋಣ. ಅವರ ಕಥೆಗಲ್ಲ, ಕನಿಷ್ಠ ಶ್ರಮಕ್ಕಾದರೂ ಮೌಲ್ಯ ಕಲ್ಪಿಸಬೇಕು ಎಂದು ನಿನಗನಿಸಲಿಲ್ಲ. ನಿನ್ನ ಕಥೆ ಬರೆಯುವ ಮೂಡ್ ಹಾಳಾಗಬಾರದೆಂದು, ಕಳೆದ ವರ್ಷವಷ್ಟೇ ಪಡೆದ ಪ್ರಶಸ್ತಿಯ ಪ್ರತಿಷ್ಟೆ ಮುಕ್ಕಾಗಬಾರದೆಂದು ಮತ್ತೆ  ಹಿಂದಿರುಗಿ ಅವರತ್ತ ನೋಡದೆ ನಿಷ್ಕರುಣೆಯಿಂದ ಬಂದವಳು ನೀನು. ಮುಂದೆ ಯಾವತ್ತಾದರೂ ಒಂದಿನ ಸಂವೇದನೆ, ಸೂಕ್ಷ್ಮತೆ, ಅನುಭಾವಗಳ ಬಗ್ಗೆ ಬರೆಯುವಾಗೆಲ್ಲಾ ನಿನ್ನ ಆತ್ಮಸಾಕ್ಷಿಯಿಂದ ಎದ್ದು ಬಂದ ಅವೇ ಅಕ್ಷರಗಳು ಇವನ್ನೆಲ್ಲಾ ಬರೆಯುವ ಯೋಗ್ಯತೆ ನಿನಗೆಲ್ಲಿದೆ ಎಂದು ಪ್ರಶ್ನಿಸಿದರೆ ಆಗೇನು ಮಾಡುತ್ತಿ? ಬದುಕು ಒಂದು ಹಂತದಲ್ಲಿ ಯಾವುದೋ ಒಂದು ವಿಚಿತ್ರ ತಿರುವಿನಲ್ಲಿ ನಿನ್ನ ನಿಲ್ಲಿಸಿ ಭೂತದ ಅಷ್ಟೂ ಅಪರಾಧಗಳಿಗೆ, ಸ್ವಾರ್ಥಪರತೆಗೆ, ನಿಷ್ಕರುಣೀ ಮನಸತ್ವಕ್ಕೆ ಕಂದಾಯ ಕಟ್ಟಿಸುತ್ತದೆ. ಆಗೆಲ್ಲಾ ಬದುಕಿನ ಪ್ರಾಮಾಣಿಕ ಪ್ರಶ್ನೆಗಳಿಗೆ, ಸವಾಲುಗಳಿಗೆ ನೀನು ಸುಳ್ಳು ಸಮಜಾಯಿಷಿಗಳಿಲ್ಲದ ನೇರ ಉತ್ತರ ಕೊಡಲೇಬೇಕಾಗುತ್ತದೆ... ಅಮ್ಮ ಹೇಳುತ್ತಲೇ ಇದ್ದರು.

ಅಮ್ಮನ ಅಂತಃಕರಣದ ಕುಲುಮೆಯಲ್ಲಿ ಕಥೆಗಾರ್ತಿಯ ಅಂತರಂಗ ನಿಧಾನವಾಗಿ ಕುದಿಯಲಾರಂಭಿಸಿತು. ಯಾವುದೋ ಟ್ರಾನ್ಸ್?ಗೊಳಗಾದಂತೆ ಎದ್ದ ಪೂಜಾ , ಅಮ್ಮನ ಕರೆಯನ್ನೂ ಮೀರಿ ಮತ್ತದೇ ದೇವಸ್ಥಾನದತ್ತ ಓಡಲಾರಂಭಿಸಿದಳು. ಈ ಬಾರಿ ಅವಳೊಳಗೆ ಯಾವ ಗೊಂದಲಗಳೂ ಇರಲಿಲ್ಲ. ಓಡಿ ಓಡಿ ದೇವಸ್ಥಾನ ತಲುಪಿದ ಪೂಜಾ, ಅದೇ ಚಪ್ಪಲಿ ಸ್ಟ್ಯಾಂಡ್?ಗಾಗಿ, ಮುದುಕನಿಗಾಗಿ ಅತ್ತ ಇತ್ತ ಕಣ್ಣಾಡಿಸಿದಳು. ಚಪ್ಪಲಿ ಕಾಯುವ ಮುದುಕ ಅಲ್ಲೇ ನೆಲದ ಮೇಲೆ ತಲೆ ಇಟ್ಟು ಮಲಗಿದ್ದ. ಅವನ ಬಾಯಿಯಿಂದ ಇಳಿದ ಜೊಲ್ಲು ನಿಧಾನವಾಗಿ ನೆಲ ಸೇರುತ್ತಿತ್ತು. ಯಾವ ಅಸಹ್ಯವೂ ಇಲ್ಲದೆ ಪೂಜಾ ತಾನು ಧರಿಸಿದ್ದ ಚೂಡಿದಾರ್?ನ ವೇಲ್?ನಿಂದಲೇ ಅವನ ಜೊಲ್ಲೊರೆಸಿ, ತಲೆ ನೇವರಿಸುತ್ತಾ 'ತಾತಾ' ಎಂದು ಕರೆದಳು, ಅವನ ತಲೆ ಸುಮ್ಮನೆ ಹೊರಳಿಬಿತ್ತು. ಒಂದು ಹನಿ ನೀರು ಕಣ್ಣಿಂದ ಜಾರಿಬಿದ್ದು ಅವನ ಕೆನ್ನೆಯ ಮೇಲೆ ಹರಿದು ಅಲ್ಲೇ ಅನಾಥವಾಗಿ ಬಿದ್ದಿದ್ದ ಅವಳದೇ ಚಪ್ಪಲಿಯ ಮೇಲಿದ್ದ ಧೂಳಿನೊಳಗೆ ಇಂಗಿ ಹೋಯಿತು.

(ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿತ ಕಥೆ)

ಬುಧವಾರ, ಜೂನ್ 15, 2016

ಸಂತೆ

ಹೀಗೆ,
ಸಂತೆಯಲ್ಲಿ, ಗದ್ದಲದಲ್ಲಿ
ಕಳೆದುಹೋದಾಗೆಲ್ಲಾ
ನಿಶಬ್ಧ ತಾಕುತ್ತಿರುತ್ತದೆ
ಭಾವಬಿಗಿತಗಳಿಗೆಲ್ಲಾ ಸ್ಪಷ್ಟ ಹರಿವು

ನಿನ್ನೆ ಕೇಳಿದ್ದು
ಮೊನ್ನೆ ಕಂಡಿದ್ದು
ಇಂದಿಲ್ಲೇ ದಕ್ಕಿದ್ದು
ಮುಗಿಯದ ಕಥೆಗಳಿಗೆಲ್ಲಾ
ಒಂದು ಸಣ್ಣ ತಿರುವು

ಗೋರಿಯ ನೆತ್ತಿಯೊಳಗಿಂದಲೂ
ಉಕ್ಕುವ ಕೊನೆಯಿಲ್ಲದ
ಯಥೇಚ್ಛ ಜೀವನಪ್ರೀತಿ
ಒಂದಿಷ್ಟು ಅಚ್ಚರಿ ಬೆರಗುಗಳಿಗೆ
ಕಾರಣವಾಗುತ್ತದೆ

ಯಾವ ಮೂಲದಿಂದ ಜೀವ ಜೀಕುತ್ತದೋ
ಯಾವ ಕೋನದಲ್ಲಿ ಪ್ರೀತಿ ಹರಿಯುತ್ತದೋ
ಯಾವ ನೆನಪುಗಳಿಗೆ ಎಷ್ಟು ಉಮ್ಮಳಿಕೆಯೋ
ಶಬ್ಧದ ಒಡಲಾಳದ ನಿಶಬ್ಧದಷ್ಟೇ
ಅಸಂಕಲ್ಪಿತ, ಅಯೋಮಯ.

ಶನಿವಾರ, ಜೂನ್ 11, 2016

ಮತ್ತೆ ನೋಡು...

ಅದೆಷ್ಟು ಬಾರಿ ಛಾಯಾಚಿತ್ರವ
ನೋಡಿ ನಿನ್ನ ನೀ ನೋಯಿಸಿಕೊಳ್ಳುತ್ತೀಯಾ?
ಬೇಡ ಬಿಟ್ಟು ಬಿಡು ಈ ದ್ವಂದ್ವವ
ಮತ್ತೆ ಮತ್ತೆ ಛಿದ್ರವಾಗುವ ಆಸೆಯೇತಕೆ?

ಸಲ್ಲದ ಆಸೆಯ ಸುಟ್ಟು
ಸುಮ್ಮನೆ ನಿರಮ್ಮಳವಾಗಿಬಿಡು
ಎಂದೂ ದಕ್ಕದ ನವ್ಯ ಕಾವ್ಯವ
ಅಂತರಗಕ್ಕಿಳಿಸುವ ಹುಕಿ ಏತಕೆ?

ಸ್ತಬ್ಧ ಕಾಳಿರುಳಿನ ದುರ್ಭರ
ಕ್ಷಣಗಳನು ಒಮ್ಮೆ ಭರಿಸಿಬಿಡು
ಕಣ್ಣ ಹನಿಯ ಇಂಗಿಸಿ
ಮಳೆ ಹನಿಸುವ ಹುಚ್ಚು ಕನಸೇತಕೆ?

ಕೂಡುವ ಮುನ್ನವೇ ಕವಲೊಡೆದ ನಿಸ್ತೇಜ
ಹಾದಿಯ ಒಂದುಗೂಡಿಸುವ ಹಂಬಲ ಬಿಡು
ಹರಿಯದ ನದಿಗೆ ವಿಶಾಲ ಶರಧಿಯ
ಸೇರುವ ಹುಸಿ ಕನವರಿಕೆಯೇತಕೆ?

ಕತ್ತಲ ಬೆರಳುಗಳು ಉತ್ಖನನ
ಮಾಡಿದರಷ್ಟೇ ಜಗಕೆ ಬೆಳಕು
ಕಂಬಳಿ ಹುಳವೂ ರೂಪಾಂತರಗೊಂಡು
ಪಟಪಟ ರೆಕ್ಕೆ ಬಡಿವ ಚಿಟ್ಟೆಯಾಗುತ್ತದೆ

ನೀನಾಗಲಾರೆ ಬಾನೆತ್ತರಕ್ಕೆಹಾರಲಾರೆ
ಅನ್ನೋ ನಿರಾಸೆಯ ಬಿಡು
ಭರವಸೆಯ ಬೆನ್ನು ಹತ್ತಿ
ಒಮ್ಮೆ ರೆಕ್ಕೆ ಕೊಡವಿಬಿಡು

ಮತ್ತೆ ನೋಡು,
ನೀನಾಕಾಶದಲ್ಲಿ, ಜಗ ನಿನ್ನ ಪದತಲದಲ್ಲಿ

ಶುಕ್ರವಾರ, ಜೂನ್ 10, 2016

ಹೀಗೇಕೆ ಮನಸ್ಸು ಬಿಸಿಲುಗುದುರೆಯ ಬೆನ್ನು ಹತ್ತುತ್ತದೆ?

ಅಂಕಣ ಬರೆಯಲು ಕುಳಿತರೆ ಅರ್ಧ ಬರೆದಿಟ್ಟ ಕಥೆ ಕೈ ಹಿಡಿದು ಜಗ್ಗುತ್ತದೆ, ನಿನ್ನೆ ರಾತ್ರಿಯ ಯಾವುದೋ ಒಂದು ಕ್ಷಣದಲ್ಲಿ ಮನಸ್ಸೊಳಗೆ ಮೂಡಿದ ಕವನದ ಸಾಲೊಂದು ಮತ್ತೆ ಪ್ರತಿಧ್ವನಿಸುತ್ತದೆ, ಇನ್ನೇನು ಅದನ್ನೇ ಕೈಗೆತ್ತಿಕೊಳ್ಳೋಣ ಅನ್ನುವಷ್ಟರಲ್ಲಿ ಮುಂದಿನ ತಿಂಗಳು ಬರ್ತ್‍ಡೇ ಆಚರಿಸಿಕೊಳ್ಳಲಿರುವ ಗೆಳತಿಗಾಗಿ ಸಿದ್ಧಪಡಿಸಬೇಕಿರುವ ಶುಭಾಶಯ ಪತ್ರ ನೆನಪಾಗುತ್ತದೆ, ತಟ್ಟನೆ ಸಮಾನ ಮನಸ್ಕ ಸ್ನೇಹಿತರೊಬ್ಬರು ನಿನ್ನ ಅಭಿಪ್ರಾಯ ತಿಳಿಸು ಎಂದು ಕಳುಹಿಸಿದ ಬರಹಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಅನ್ನುವ ವಿಚಾರ ನೆನಪಿಗೆ ಬರುತ್ತದೆ, ಅಷ್ಟರಲ್ಲೇ ಮನಸ್ಸು ಮತ್ತೆ, ಬರೆಯದ ಅಂಕಣದ ಕಡೆಗೇ ವಾಲುತ್ತದೆ.

ಹೀಗೇಕೆ ಮನಸ್ಸು ಕೆಲವೊಮ್ಮೆ ಬಿಸಿಲುಗುದುರೆಯ ಬೆನ್ನು ಹತ್ತುತ್ತದೆ? ಎಲ್ಲಾ ಕೆಲಸಗಳನ್ನೂ ಮಾಡಲೆಂದು ಹೊರಟು ಏನನ್ನೂ ಮಾಡಲಾಗದೆ ಕೈ ಚೆಲ್ಲಿ ಕುಳಿತುಕೊಳುತ್ತದೆ? ಕಣ್ಣೆದುರಿಗಿನ ಗುರಿ ನಿಚ್ಚಳವಾಗಿದ್ದರೂ ಅದರತ್ತ ತಲುಪಲಾಗದೆ ಒದ್ದಾಡಿಬಿಡುತ್ತದೆ?  ಸೇರಬೇಕಾದ ಗಮ್ಯಕ್ಕಿಂತ ಒಂದೇ ಹೆಜ್ಜೆ ಹಿಂದಿದ್ದರೂ ಯಾಕೆ ಮುಂದಡಿಯಿಡದೆ ಸುಮ್ಮನಿರುತ್ತದೆ? ಕೈಯಳತೆಯಲ್ಲೇ ಇರುವ ಇರಾದೆಯನ್ನು ಪೂರೈಸಲಾಗದೆ ಕೈ ಕಟ್ಟಿ ಕುಳಿತುಕೊಳ್ಳುತ್ತದೆ?

ಇದು ಕೇವಲ ಬರವಣಿಗೆಯೊಂದಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಎಲ್ಲರ ಬದುಕಿನ ಪ್ರತಿ ಆಯಾಮದಲ್ಲೂ ಮನಸ್ಸು ಇಂತಹದ್ದೊಂದು ಎಡೆಬಿಡಂಗಿ ಸ್ಥಿತಿಗೆ ಇಳಿದುಬಿಡುತ್ತದೆ. ನಾಳೆ ಗಣಿತ ಪರೀಕ್ಷೆ ಇಟ್ಟುಕೊಂಡು , ಇವತ್ತು ವಿಜ್ಞಾನದ ಮೇಲೆ ಒಂದು, ಇಂಗ್ಲಿಷಿನ ಮೇಲೆ ಮತ್ತೊಂದು ಕೈ ಇಟ್ಟು ಯಾವುದನ್ನೂ ಓದಲಾಗದ ಎಸ್.ಎಸ್.ಎಲ್.ಸಿ ಹುಡುಗನ ಮನಸ್ಥಿತಿಯಲ್ಲೂ, ಮಧ್ಯಾಹ್ನದ ಅಡುಗೆಗಿನ್ನೂ ತರಕಾರಿ ಕತ್ತರಿಸದೆ, ರಾತ್ರಿ ಊಟಕ್ಕೆ, ನಾಳೆ ಬೆಳಗ್ಗಿನ ತಿಂಡಿಗೆ ಏನು ಮಾಡಲಿ ಎಂದು ಚಿಂತಿಸುತ್ತಿರುವ ಗೃಹಣಿಯ ಮನಸ್ಥಿತಿಯಲ್ಲೂ, ಇನ್ನೆರಡು ದಿನಕ್ಕೆ ಒಪ್ಪಿಸಲೇಬೇಕಾಗಿರುವ ಪ್ರೊಜೆಕ್ಟನ್ನು ಮುಂದಿಟ್ಟುಕೊಂಡು, ಮುಂದಿನ ವರ್ಷ ಕೈಗೆತ್ತಿಕೊಳ್ಳಬೇಕಾಗಿರುವ ಪ್ರೊಜೆಕ್ಟಿನ ಕೋಡ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಸಾಫ್ಟ್‌ವೇರ್ ಉದ್ಯೋಗಿಯ ಮನಸ್ಥಿತಿಯಲ್ಲೂ, ಈ ವಾರದ ಕೊನೆಗೆ ಸಿಲೆಬಸ್ ಮುಗಿಸಲೇಬೇಕಾಗಿರುವ ಒತ್ತಡದಲ್ಲಿದ್ದೂ, ಮುಂದಿನ ಸೆಮಿಸ್ಟರ್ ಬಗ್ಗೆ ಯೋಚಿಸತೊಡಗುವ ಲೆಕ್ಚರರ್ ಮನಸ್ಥಿತಿಯಲ್ಲೂ... ಮನೆ ಮಾಡಿಕೊಂಡಿರುವುದು ಇದೇ ಎಡೆಬಿಡಂಗಿತನ.

ನಾವು ಈ ಎಡೆಬಿಡಂಗಿತನಕ್ಕೆ, ಕ್ರಿಯೇಟಿವಿಟಿಯ ಒಂದು ಭಾಗ ಅಂತಲೋ, ಇಲ್ಲ ಓದುವ ಹುಮ್ಮಸ್ಸು ಅಂತಲೋ, ಜವಾಬ್ದಾರಿತನದ ಚರಮ ಸೀಮೆ ಅಂತಲೋ, ದೂರಾಲೋಚನೆ ಅಂತಲೋ, ಮುಂದಿನ ದಿನಗಳಿಗಾಗಿ ಮಾಡಿಕೊಳ್ಳುವ ದಿವ್ಯ ಸಿದ್ಧತೆ ಅಂತಲೋ ಬಗೆ ಬಗೆಯ ಸುಂದರ ಹೆಸರಿಟ್ಟುಕೊಂಡರೂ, ಅವೆಲ್ಲಾ ಶುದ್ಧ ಸುಳ್ಳು ಅನ್ನುವುದು ಮನಸ್ಸಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಯಾವ ಕ್ರಿಯೇಟಿವಿಟಿಯ ಭಾಗವಾಗಿಯೂ ಒಂದು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೊಂದರತ್ತ ಮನಸ್ಸು ಛಂಗನೆ ಹಾರಿಬಿಡುವುದಿಲ್ಲ ಅನ್ನುವುದು ತುಂಬಾ ಹಿಂದೆಯೇ ಸ್ಪಷ್ಟವಾಗಿ ಸಾಬೀತಾಗಿರುತ್ತದೆ. ಬದುಕಿನ ಯಾವ ಸಾಂಪ್ರದಾಯಿಕ, ಅಸಾಂಪ್ರದಾಯಿಕ ಮೂಲಗಳನ್ನು ಕೆದಕಿದರೂ ಅದು ಪಾಸಿಟಿವಿಟಿಯೆಂದು ಅನ್ನಿಸಿಕೊಳ್ಳುವುದೇ ಇಲ್ಲ.

ಇಷ್ಟಿದ್ದರೂ ಮನಸ್ಸು ಕೆಲವೊಮ್ಮೆ ಜಿದ್ದಿಗೆ ಬಿದ್ದಂತೆ ಮಾಡುತ್ತಿರೋ ಕೆಲಸದಿಂದ ತಪ್ಪಿಸಿಕೊಳ್ಳಲು, ವಿನಾಕಾರಣ ಮತ್ತೊಂದರತ್ತ ಹೊರಳಿಕೊಳ್ಳಲು ನೂರು ಕಳ್ಳ ನೆಪಗಳನ್ನು, ಅನಗತ್ಯದ ಕಾರಣಗಳನ್ನು, ಅನುಪಯುಕ್ತ ಸಬೂಬುಗಳನ್ನು, ಅಸಮಂಜಸ ನಿಮಿತ್ತಗಳನ್ನು ಒಡ್ಡುತ್ತವೆ. ಮತ್ತವುಗಳನ್ನು ತುಂಬಾ ಶಕ್ತಿಯುತವಾಗಿ ಸಮರ್ಥಿಸಿಕೊಳ್ಳುತ್ತದೆ ಕೂಡ.

ಹೀಗೆ ಮನಸ್ಸು ಕಳ್ಳ ನೆವಗಳಿಗೆ ಬಿದ್ದು ಮಾಡಬೇಕಿರುವ ಕೆಲಸದಿಂದ ತಪ್ಪಿಸಿಕೊಳ್ಳಲು, ಹೊತ್ತಿರುವ ಜವಾಬ್ದಾರಿಗಳಿಂದ ನುಣುಚಿಕೊಳ್ಳಲಾರಂಭಿಸಿದಾಗೆಲ್ಲಾ, ಅದರ ತಲೆ ಮೇಲೊಂದು ಮೊಟಕಿ, ಅಸಂಬದ್ಧ ರೇಜಿಗೆಗಳನ್ನು ಜಾಡಿಸಿ ಒದ್ದು, ಮನಸ್ಸನ್ನು ಮತ್ತೆ ಎಬ್ಬಿಸಿ ನಡೆದು, ನಡೆಯಿಸಬೇಕು. ದಣಿದರೆಷ್ಟೇ ಊಟ ರುಚಿಸುತ್ತದೆ ಅನ್ನುವ ಸತ್ಯವನ್ನು ಸಾದ್ಯಂತವಾಗಿ ಮನಗಾಣಿಸಬೇಕು. ಆಗ ಮನಸ್ಸು ಮತ್ತೆ ಪುಟಿದೇಳುತ್ತದೆ, ರೆಕ್ಕೆ ಕೊಡವಿಕೊಂಡು ಜಗದಗಲ ಹಾರುತ್ತದೆ.

ಗುರುವಾರ, ಮೇ 19, 2016

ಪದೇ ಪದೇ ಮನಸ್ಸಾಕ್ಷಿಯ ಮುಂದೆ ಮಂಡಿಯೂರುವಂತಾಗಬಾರದಲ್ಲವೇ?

ಅವೇನೂ ಅಂತಹ ತಲೆ ಹೋಗುವಂತಹಾ ತಪ್ಪುಗಳಾಗಿರುವುದಿಲ್ಲ. ಆ ಒಂದು ಸಣ್ಣ ಮಟ್ಟಿಗಿನ ವಂಚನೆಯಿಂದ ಯಾರ ಬದುಕೂ ಪೂರ್ತಿ ನಾಮಾವಶೇಷ ಆಗಿರುವುದಿಲ್ಲ. ಅದು ನಂಬಿಕೆ ದ್ರೋಹ ಅಂತಾಗಲೀ, ವಿಶ್ವಾಸಘಾತುಕತನ ಅಂತಾಗಲೀ ಎಲ್ಲೂ ದಾಖಲಾಗಿರುವುದೂ ಇಲ್ಲ. ಅಸಲಿಗೆ ಅಂತದ್ದೊಂದು ತಪ್ಪು ನಮ್ಮಿಂದ ಸಂಭವಿಸಿಬಿಟ್ಟಿದೆ ಅನ್ನುವುದು ನಮ್ಮಹೊರತು ಪಡಿಸಿ ಇನ್ಯಾರ ಅರಿವಿಗೂ ಬಂದಿರುವುದಿಲ್ಲ. ಅಷ್ಟರಮಟ್ಟಿಗಿನ ಕ್ಷುಲ್ಲಕ ತಪ್ಪದು. ಇಷ್ಟಾದರೂ ಬದುಕು, ಯಾವುದೋ ತಿರುವಿನಲ್ಲಿ ನಮ್ಮ ನಿಲ್ಲಿಸಿ ಬಿಟ್ಟು "ಹೀಗೇಕೆ ಮಾಡಿದೆ?" ಅಂತ ಕೇಳಿಯೇ ಕೇಳುತ್ತದೆ.

ತಪ್ಪಿಸಿಕೊಳ್ಳಲಾಗದ ಪ್ರಶ್ನೆಯದು. ಅಪ್ಪ ಪ್ರಶ್ನಿಸುವಾಗೆಲ್ಲಾ ಹಾರಿಕೆಯ ಉತ್ತರ ಕೊಡಬಹುದು, ಅಮ್ಮನ ಪ್ರಶ್ನೆಗಳಿಗೂ ಉತ್ತರಿಸಬಹುದು, ಆಪ್ತ ಸ್ನೇಹಿತರೆನಿಸಿಕೊಂದವರ ಕಣ್ಣನ್ನೂ ತಪ್ಪಿಸಿ ಓಡಾಡಬಹುದು, ಸಂಗಾತಿಗಳ ಪ್ರಶ್ನೆಗೂ ಸುಳ್ಳು ಉತ್ತರ ನೀಡಬಹುದು, ಗುರುಗಳೆನಿಸಿಕೊಂಡವರ ಪ್ರಶ್ನೆಗಳಿಗೂ ನಿರ್ಲಿಪ್ತರಾಗಿ ಇದ್ದುಬಿಡಬಹುದು. ಆದ್ರೆ ಬದುಕಿನ ಪ್ರಶ್ನೆಗಳಿಗೆ...? ಊಹೂಂ, ಅಲ್ಲಿ ಹಾರಿಕೆ, ಕಣ್ಣು ತಪ್ಪಿಸುವುದು, ಸಮಜಾಯಿಕೆ ನೀಡುವುದು, ನಿರ್ಲಿಪ್ತರಾಗುವುದು, ನಿರ್ಲಕ್ಷ್ಯತನ ಯಾವುದೂ ಉಪಯೋಗಕ್ಕೆ ಬರುವುದಿಲ್ಲ. ಅದು ಆಗಿರೋ ತಪ್ಪುಗಳಿಗೆ, ಮಾಡಿರೋ ಮೋಸಗಳಿಗೆ, ವಂಚನೆಗಳಿಗೆ ನೇರ ಮತ್ತು ಪ್ರಾಮಾಣಿಕ ಉತ್ತರ ಬಯಸುತ್ತದೆ. ಅದೆಷ್ಟೇ ಅಲವತ್ತುಕೊಂಡರೂ, ತಪ್ಪಿಸಿಕೊಂಡರೂ ಬದುಕಿನ ಪ್ರಶ್ನೆಗಳಿಗೆ ತಪ್ಪಿಲ್ಲದೆ, ತಪ್ಪಾಗದಂತೆ ಪ್ರಾಮಾಣಿಕವಾಗಿ ಉತ್ತರಿಸಲೇಬೇಕಾಗುತ್ತದೆ.

ತುಂಬು ನಂಬಿಕೆಯಿಂದ ಆಪ್ತರಾರೋ ಈ-ಮೈಲ್ ಪಾಸ್‍ವರ್ಡ್ ಕೊಟ್ಟಿರುತ್ತಾರೆ. ನಾವೆಂದೂ ಅವರ ಖಾಸಗೀ ಮೈಲ್‍ಗಳನ್ನು ಓದಲಾರೆವು ಅನ್ನುವ ವಿಶ್ವಾಸವದು. ಆದ್ರೆ ಯಾವುದೋ ಒಂದು ಕ್ಷಣದ ಪ್ರಲೋಭನೆಗೆ ಒಳಗಾಗಿ ಅವರ ಇನ್‍ಬಾಕ್ಸ್‌ನಲ್ಲಿ ಏನೇನಿದೆ ಎಂದು ತಡಕಾಡಿ ಬಿಡುತ್ತೇವೆ. ಅಲ್ಲಿ ನಮಗೆ ಬೇಕಾದ್ದು, ಬೇಡವಾದ್ದು ಏನೂ ಸಿಕ್ಕಿಲ್ಲ ಅಂದಮೇಲೆ ಸೈನ್‍ಔಟ್ ಮಾಡಿ ಸುಮ್ಮನಾಗುತ್ತೇವೆ. ಮೈಲ್ ತಡಕಾಡುತ್ತಿದ್ದ ಅಷ್ಟೂ ಹೊತ್ತು ಕಾಡದ ಆತ್ಮಸಾಕ್ಷಿ ಈಗ ಧುತ್ತೆಂದು ಪ್ರತ್ಯಕ್ಷವಾಗಿಬಿಡುತ್ತದೆ.

ಇದು ಕೇವಲ ಈ-ಮೈಲ್ ಪಾಸ್‍ವರ್ಡ್ ಅಂತಲ್ಲ. ಕೆಲವೊಮ್ಮೆ ನಿನಗೆ ಮಾತ್ರ ಗೊತ್ತಿರಲಿ ಅಂತ ಹೇಳಿದ ಅತ್ಯಾಪ್ತರ ಬದುಕಿನ ಗುಟ್ಟನ್ನು ಇನ್ಯಾರದೋ ಜೊತೆ ಹಂಚಿಕೊಳ್ಳುತ್ತೆವೆ. ತುಂಬಾ ಚೊಕ್ಕಟ ಅಂತನ್ನಿಸಿಕೊಂಡಿರುವ ಸಂಸಾರದ ಮಧ್ಯೆ ಇದ್ದೂ ಮತ್ತೊಂದು ನಿರುಪದ್ರವೀ ಸಂಬಂಧದೆಡೆ ಕೈ ಚಾಚುತ್ತೇವೆ, ಅದೂ ಸಂಸಾರದೊಳಗಿನವರಿಗೆ ಒಂದು ಚಿಕ್ಕ ಸುಳಿವೂ ಬಿಟ್ಟುಕೊಡದೆ. ಪ್ರಾಣ ಸ್ನೇಹಿತರು ಬಗಲ್ಲಲ್ಲಿರುವಾಗಲೇ ಅವರ ಬಗೆಗಿನ ಗೌಪ್ಯ ಸಂಗತಿಯನ್ನು ಮತ್ಯಾರಿಗೋ ತಲುಪಿಸಿರುತ್ತೇವೆ. ಜೀವಕ್ಕಿಂತ ಹೆಚ್ಚು ಪ್ರೀತಿಸೋ ಪ್ರೇಮಿಯ ಪಕ್ಕದಲ್ಲೇ ಕೂತು ಒಂದು ಅನುಪಯುಕ್ತ ಸುಳ್ಳು ಹೇಳಿರುತ್ತೇವೆ, ನಂಬಿಕೆಯ ಇನ್ನೊಂದು ಹೆಸರೇ ನಾವು ಅನ್ನುವಷ್ಟು ನಮ್ಮನ್ನು ನಂಬಿಕೊಂಡಿರುವ ಅಪ್ಪ-ಅಮ್ಮನನ್ನೇ ಸಣ್ಣದಾಗಿ ವಂಚಿಸಿರುತ್ತೇವೆ. ಹಾಗೆ ವಂಚಿಸುವಾಗ, ಸುಳ್ಳು ಹೇಳುವಾಗ, ತಪ್ಪು ಮಾಡುವಾಗೆಲ್ಲಾ ನಮಗೆ ಏನೂ ಅನಿಸಿರುವುದೂ ಇಲ್ಲ.

ಇಷ್ಟಕ್ಕೂ, ಇಂತಹ ಎಲ್ಲಾ ಸಂದರ್ಭಗಳಲ್ಲೂ ತಪ್ಪು ಮಾಡಬೇಕೆನ್ನುವ ಉದ್ದೇಶವಾಗಲಿ, ವಂಚಿಸುವ ಇರಾದೆಯಾಗಲೀ ಇರುವುದೇ ಇಲ್ಲ. ಆ ಕ್ಷಣಕ್ಕೆ ಮನಸ್ಸು ಅನಗ್ಯತದ ಆಸಕ್ತಿಗೆ, ಒಳಗೇನಿರಬಹುದು ಅನ್ನುವ ಚಪಲಕ್ಕೆ, ಅವರ ಬಗ್ಗೆ ನನಗಿಷ್ಟೆಲ್ಲಾ ಗೊತ್ತು ಅನ್ನುವುದನ್ನು ಮೂರನೆಯವರಿಗೆ ಗೊತ್ತು ಪಡಿಸಬೇಕು ಅನ್ನುವ ವಿಚಿತ್ರ ತೆವಲಿಗೆ, ಅಪ್ಪ-ಅಮ್ಮನಿಗಿಂತ ನಾವೇನು ಕಡಿಮೆ ತಿಳುವಳಿಕೆ ಇರುವವರಲ್ಲ ಅನ್ನುವ ಅಹಮ್ಮಿಗೆ ಬಿದ್ದು ಬಿಡುತ್ತದೆ. ಆಗಲೇ ಮನಸ್ಸು ಸಣ್ಣ ಪುಟ್ಟ ಎಲ್ಲೆ ಮೀರ ಬಯಸುವುದು.

ನಿಜ, ಅವೆಲ್ಲಾ ಗಹನವಾದ ತಪ್ಪುಗಳಾಗಿರುವುದಿಲ್ಲ, ಅಥವಾ ಆ ತಪ್ಪುಗಳಿಂದ ಯಾರ ಬದುಕೂ, ಯಾವ ಸಂಬಂಧಗಳೂ ಮೂರಾಬಟ್ಟೆಯಾಗಿರುವುದಿಲ್ಲ. ಆದರೆ, ಒಂದು ಸಣ್ಣ ಸುಳ್ಳಿನಿಂದ ಪ್ರಪಂಚವೇನೂ ಮುಳುಗಿ ಹೋಗುವುದಿಲ್ಲ ಅನ್ನುವುದು ಎಷ್ಟು ಸತ್ಯವೋ, ಒಂದು ಸಣ್ಣ ಸತ್ಯದಿಂದ ಮನುಷ್ಯನ ಮಾನಸ ಪ್ರಪಂಚ ವಿಸ್ತರಿಸುತ್ತಾ ಹೋಗುತ್ತದೆ ಅನ್ನುವುದೂ ಅಷ್ಟೇ ಸತ್ಯ. ಇಷ್ಟಕ್ಕೂ ಬದುಕಿಗೆ, ಮನಸ್ಸಾಕ್ಷಿಗೆ ಮುಖ್ಯವೆನಿಸುವುದು, ಪ್ರಶ್ನಿಸಬೇಕೆನಿಸುವುದು ತಪ್ಪುಗಳಷ್ಟನ್ನೇ ಹೊರತು ಅದರ ಗಹನತೆಯನ್ನಲ್ಲ.

ಬದುಕು ನಮ್ಮನ್ನೆಂದೂ ಪ್ರಶ್ನಿಸಲೇಬಾರದು, ಅಷ್ಟು ವ್ಯವಸ್ಥಿತವಾಗಿ, ಚೊಕ್ಕಟವಾಗಿ, ಅನ್ನದಲ್ಲಿ ಒಂದೇ ಒಂದು ಕಲ್ಲೂ ಸಿಗದಂತೆ ಬದುಕುತ್ತೇನೆ ಅಂದುಕೊಳ್ಳುವುದು, ಹಾಗೆಯೇ ಅವುಡುಗಚ್ಚಿ, ಪ್ರತಿಕ್ಷಣ ಪರಮ ಜಾಗರೂಕತೆಯಿಂದ ಬದುಕಲು ಪ್ರಯತ್ನಿಸುವುದು ಎರಡೂ ದೂರದಲ್ಲೆಲ್ಲೋ ಆಕಾಶ ಭೂಮಿಯನ್ನು ಸ್ಪರ್ಶಿಸುತ್ತದೆ ಎಂದು ಭಾವಿಸಿಕೊಳ್ಳುವಷ್ಟೇ ಅವಾಸ್ತವಿಕ. ಅಂತಹ ನಿರ್ಧಾರಗಳು ನಮ್ಮ ಬದುಕನ್ನು ಮತ್ತೊಂದು ಭ್ರಮಾದೀನ ಸ್ಥಿತಿಯಲ್ಲಿರಿಸುವುದನ್ನು ಹೊರತು ಪಡಿಸಿ ಇನ್ನೇನನ್ನೂ ಮಾಡದು. ಹಾಗೆಂದು, ಬದುಕಿನ ನ್ಯಾಯಯುತ ಪ್ರಶ್ನೆಗಳಿಗೆ ಉತ್ತರಿಸಲಾಗದೆ  ಪದೇ ಪದೇ ಮನಸ್ಸಾಕ್ಷಿಯ ಮುಂದೆ ತಲೆ ತಗ್ಗಿಸಿ ಮಂಡಿಯೂರುವ ಪರಿಸ್ಥಿತಿಯೂ ಎದುರಾಗಬಾರದು ಅಲ್ಲವೇ?

ಮಂಗಳವಾರ, ಮೇ 17, 2016

ಒಳ್ಳೆಯವರಾಗಿರುವುದು ಅಂದ್ರೇನು?

'ಅವನು/ಳು ತುಂಬಾ ಒಳ್ಳೆಯವನು/ಳು' ಅಂತೆಲ್ಲಾ ನಾವು ಯಾರದೋ ಬಗ್ಗೆ ಮಾತಾಡುತ್ತಿರುತ್ತೇವೆ. ಅಂತಹವರು, 'ದೇಹೀ' ಎಂದು ಕೈ ಚಾಚಿದ ಯಾರಿಗೂ ಯಾವತ್ತೂ ಇಲ್ಲ ಅನ್ನುವುದಿಲ್ಲ, ಒಂದೇ ಒಂದು ಕ್ಷಣಕ್ಕೂ ಯಾರ ಮೇಲೂ ಸಿಟ್ಟಾಗುವುದಿಲ್ಲ, ದ್ವೇಷ ಅನ್ನುವ ಭಾವನೆಯನ್ನೇ ತನ್ನತ್ತ ಸುಳಿಯಲೂ ಬಿಡುವುದಿಲ್ಲ‌, ಮಧ್ಯ ರಾತ್ರಿ ಎಬ್ಬಿಸಿ ಸಹಾಯ ಕೇಳಿದರೂ ಮುಖಕ್ಕೆ ತಣ್ಣೀರು ಚಿಮುಕಿಸಿ ಉಟ್ಟ ಬಟ್ಟೆಯಲ್ಲೇ ಸಹಾಯಕ್ಕೆಂದು ಧಾವಿಸುತ್ತಾರೆ, ತನ್ನಿಂದ ತಪ್ಪೇ ಆಗದಿದ್ದರೂ ಕೈ ಮುಗಿದು ಕ್ಷಮೆ ಕೇಳುತ್ತಾರೆ, ತನ್ನನ್ನು ನೋಯಿಸಿದವರನ್ನೂ ತುಂಬಾ ಸುಲಭವಾಗಿಯೇ ಕ್ಷಮಿಸುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರೆಲ್ಲಾ 'ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಪ್ರೀತಿಸುತ್ತಾರೆ' ಎಂಬಂತಿರುತ್ತಾರೆ ಅಥವಾ ಹಾಗಂದುಕೊಂಡು ತಮ್ಮನ್ನೇ ಮೋಸಮಾಡಿಕೊಳ್ಳುತ್ತಿರುತ್ತಾರೆ.

ಆದರೆ ನಿಜಕ್ಕೂ ಒಳ್ಳೆಯತನವೆಂದರೇನು? ಒಳ್ಳೆಯವರಾಗಿರುವುದು ಅಂದ್ರೇನು? ಒಳ್ಳೆಯತನದ ಅಳತೆಗೋಲುಗಳಾವುವು? ಒಳ್ಳೆಯದನ್ನೂ ಕೆಟ್ಟದನ್ನೂ ಅಳೆಯುವ ಮಾನದಂಡ ಯಾವುದು? ಈ ಯಾವ ಪ್ರಶ್ನೆಗಳಿಗೂ 'ಇದಮಿತ್ಥಂ' ಅನ್ನುವ ಯಾವ ಉತ್ತರವೂ ದೊರೆಯುವುದಿಲ್ಲ.

ಪ್ರತಿ ಬಾರಿ ಮನುಷ್ಯ ದೇವರಾಗಹೊರಟಾಗೆಲ್ಲಾ ಅವನ ಸಹಜತೆ ಕಳೆದುಕೊಳ್ಳುತ್ತಾನೆ. ಅರಿಷಡ್ವರ್ಗಗಳನ್ನು ಗೆಲ್ಲುತ್ತೇನೆ ಅನ್ನುವ ಅಹಂನಲ್ಲಿ, ಭ್ರಮೆಯಲ್ಲಿ ತನ್ನನ್ನು ತಾನೇ ಸೋಲಿಸಿಕೊಳ್ಳುತ್ತಿರುತ್ತಾನೆ. ಪ್ರತಿಕ್ಷಣವೂ ಸ್ಥಿತಪ್ರಜ್ಞನಾಗಿಯೇ ಇರುತ್ತೇನೆ ಅನ್ನುವ ಹುಂಬತನದಲ್ಲಿ ಆ ಕ್ಷಣದ ಅಚ್ಚರಿಗಳನ್ನು, ಆನಂದಗಳನ್ನು ತನಗರಿವಿಲ್ಲದೇ ಕಳೆದುಕೊಳ್ಳುತ್ತಿರುತ್ತಾನೆ.

ಪ್ರಪಂಚದ ದೃಷ್ಟಿಯಲ್ಲಿ ತೀರಾ 'ಒಳ್ಳೆಯವರು' ಅನ್ನಿಸಿಕೊಂಡವರು, 'ಯಾರ ಮನಸ್ಸನ್ನೂ ಒಂದು ಕ್ಷಣಕ್ಕೂ ನೋಯಿಸದವರು', 'ಸಮಚಿತ್ತರು' ಅಂತೆಲ್ಲಾ ಅನ್ನಿಸಿಕೊಂಡವರಿರುತ್ತಾರಲ್ಲಾ ಅಂತಹವರ ಅಂತರಂಗಕ್ಕೊಮ್ಮೆ ಇಳಿದು ನೋಡಬೇಕು. ಮೇಲೆ ಮೇಲೆ ಎಲ್ಲಾ ಸರಳವಾಗಿದೆ, ಸುಲಲಿತವಾಗಿದೆ ಎಂದೇ ಅನಿಸುತ್ತದೆ. ಗಳಿಸಿದ ಸ್ನೇಹ, ಪ್ರೀತಿ, ಉಳಿಸಿಕೊಂಡ ಸಂಬಂಧ, ಎಂದೂ ಕುಸಿದು ಹೋಗಲಾರರು ಅನ್ನುವಂತಹ ಗಟ್ಟಿ ವ್ಯಕ್ತಿತ್ವ, ಸುಲಭವಾಗಿ ಸೋಲದ ಆತ್ಮವಿಶ್ವಾಸ... ಇವೆಲ್ಲವನ್ನು ಮೀರಿಯೂ ಹೇಳಿಕೊಳ್ಳಲಾಗದ ಅಸಹಾಯಕತೆ, ಒಂದು ಪುಟ್ಟ ಅಭದ್ರತೆ, ಯಾವಾಗ ಏನಾಗುತ್ತದೋ ಅನ್ನುವ ಅನುಮಾನ, ಒಳ್ಳೆಯತನದ ಪೊರೆ ಎಲ್ಲಿ ಕಳಚಿಬೀಳುತ್ತದೋ ಅನ್ನುವ ದಿಗಿಲು ಸದಾ ಕಾಡುತ್ತಿರುತ್ತದೆ.

ಆ ದಿಗಿಲೇ, ಅನುಮಾನವೇ, ಅಭದ್ರತೆಯೇ, ಅಸಹಾಯಕತೆಯೇ ಬದುಕಿನ ಪುಟ್ಟ ಪುಟ್ಟ ಖುಶಿಗಳನ್ನು, ಕೆಲವು ಉತ್ಕಟ ಸಂಭ್ರಮಗಳನ್ನು ಅನುಭವಿಸಲು, ತುಂಟತನದ ಪರಮಸೀಮೆಗಳನ್ನು ತಡವುವಲ್ಲಿ ತೊಡರುಗಾಲಾಗುತ್ತದೆ. ಕೊನೆಗೊಂದು ದಿನ ಬದುಕಿನೊಂದಿಗಿನ ಬಯಕೆಗಳೆಲ್ಲಾ ಸತ್ತು ತೋರಿಕೆಯ ನಗುವಿನ ನೀರಸ ದಿನಚರಿಯಾಗಿಬಿಡುತ್ತದೆ ಜೀವನ.

ಹಾಗೆಂದ ಮಾತ್ರಕ್ಕೆ ಬದುಕು ಬರಿ ಸ್ವಾರ್ಥಭರಿತವಾಗಿರಬೇಕು, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬಾರದು, ತನ್ನ ಖುಶಿಯೊಂದೇ ಬದುಕಿನ ಪರಮ ಗುರಿಯಾಗಿರಬೇಕು ಎಂದಲ್ಲ. ಹೊರಡಲು ಇನ್ನೂ ಅರ್ಧ ಗಂಟೆ ಇರುವ ಬಸ್ಸಿನಲ್ಲಿ ಕೂತು ತೂಕಡಿಸುತ್ತಿರುವಾಗ ಕೋಲೂರುತ್ತಾ ಅದ್ಯಾವುದೋ ಮನಕಲುಕುವ ಹಾಡು ಹಾಡುತ್ತಾ ಭಿಕ್ಷೆಗೆ ಬಂದ ಅದ್ಭುತ ಕಂಠದ ಅಂಧನ ಮೈ ದಡವಿ ಮನೆಗೆ ಕರೆತಂದು ಅಕ್ಕರೆಯಿಂದ ಊಟ ಹಾಕಿ ಅವನಲ್ಲಿನ ಪ್ರತಿಭೆಗೆ, ಕಂಠಕ್ಕೆ ಒಂದು ವೇದಿಕೆ ಒದಗಿಸಿ ಅವನ ಬದುಕಿಗೆ ದಾರಿ ದೀಪವಾಗುವುದು ಒಳ್ಳೆಯತನ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಣ್ಣಿನ ಶಸ್ತ್ರಕ್ರಿಯೆ ಮಾಡಿಸಿ ಅವನಿಗೆ ದೃಷ್ಟಿ ಕೊಡಿಸುವುದೂ ಒಳ್ಳೆಯತನವೇ. ಆದರೆ ಬಸ್ ಸ್ಟಾಂಡಿನಲ್ಲಿ, ನಿಂತ ನಿಲುವಿನಲ್ಲೇ ತನ್ನದೇ ಒಂದು ಕಣ್ಣನ್ನು ಕಿತ್ತು ಅವನಿಗೆ ಕೊಡುವುದಿದೆಯಲ್ಲಾ ಅದು ಶುದ್ಧ ಅವಿವೇಕ ಮತ್ತು ಅತಿರೇಕ.

ಇಷ್ಟಕ್ಕೂ ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಪ್ರೀತಿಸಲು, ಪೊರೆಯಲು ದೇವನೊಬ್ಬನಿಂದ ಮಾತ್ರ ಸಾಧ್ಯ. ಈ ಸಣ್ಣ ಅರಿವನ್ನೂ ಮೀರಿ ಮನುಷ್ಯ ಮಾತ್ರನಾದವನೊಬ್ಬ ತಾನು ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಪ್ರೀತಿಸುತ್ತೇನೆ ಅನ್ನುತ್ತಿರುತ್ತಾನೆ, ಅಂದುಕೊಳ್ಳುತ್ತಿರುತ್ತಾನೆ ಅಂದರೆ ಅವನೊಬ್ಬ ಅಪ್ರಾಮಾಣಿಕ ಅಷ್ಟೇ.

ಮತ್ತು ಅಷ್ಟು ಮಾತ್ರ.

ಶನಿವಾರ, ಮೇ 14, 2016

ನಿರ್ಧಾರಕ್ಕೆ ಬರುವ ಮುನ್ನ ಒಂದಿಷ್ಟಾದರೂ ಯೋಚಿಸಿ.

ಬೆಳ್ಳಂಬೆಳಗ್ಗೆ ಎದ್ದು, ಕಣ್ಣುಜ್ಜಿಕೊಳ್ಳುತ್ತಾ ಮೊಬೈಲ್ ಸ್ಪರ್ಶಿಸಿದರೆ, ಇನ್‍ಬಾಕ್ಸ್ ಒಳಗೊಂದು ಮೆಸೇಜ್ ಬೆಚ್ಚನೆ ಕೂತಿತ್ತು. ತೆರೆದು ನೋಡಿದ್ರೆ, 'ಹುಡುಗನೊಬ್ಬ ಪ್ರೀತಿಸುತ್ತಿದ್ದರೆ ಅದು ಸಂಬಂಧಪಟ್ಟ ಹುಡುಗಿಯನ್ನು ಹೊರತು ಪಡಿಸಿ ಉಳಿದೆಲ್ಲರಿಗೂ ತಿಳಿದಿರುತ್ತದೆ. ಹಾಗೆಯೇ ಹುಡುಗಿಯೊಬ್ಬಳು ಪ್ರೀತಿಸುತ್ತಿದ್ದರೆ ಅದು ಅವಳೊಬ್ಬಳನ್ನು ಹೊರತುಪಡಿಸಿ ಇನ್ಯಾರಿಗೂ ತಿಳಿಯುವುದಿಲ್ಲ' ಅಂತಿತ್ತು. ಓದಿದಾಕ್ಷಣ ಫನ್ನಿ ಅಂತ ಅನ್ನಿಸಿದರೂ ತುಸು ಹೊತ್ತು ಕಳೆದ ನಂತರ, ಅರೆ ಹೌದಲ್ವಾ? ಅಂತ ಅನಿಸತೊಡಗಿತು.

ಹಲವು ಸಂದರ್ಭಗಳಲ್ಲಿ,  ಪಕ್ಕದ ಬೆಂಚಲ್ಲಿ ಕೂರೋ ಹುಡುಗಿಯೋ, ಇಲ್ಲ ಎದುರು ಮನೆ ಅಂಕಲ್ ಮಗಳೋ, ಅತ್ತಿಗೆಯ ತಂಗಿಯೋ, ತಂಗಿಯ ಗೆಳತಿ, ಸೋದರತ್ತೆಯ ದೊಡ್ಡಣ್ಣನ ಮಗಳು, ದಿನಾ ವಾಕಿಂಗ್‍ಗೆ ಜೊತೆಯಾಗೋ ಹುಡುಗಿ,  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಸಮಾನ ಅಭಿರುಚಿಯ ಹೆಣ್ಣು ಮಗಳು... ಮುಂತಾದವರೆಲ್ಲಾ ನಿಮ್ಮನ್ನು ಅಂದರೆ ಹುಡುಗರನ್ನು ತುಂಬಾ ಆತ್ಮೀಯವಾಗಿ ಮಾತಾಡಿಸುತ್ತಾರೆ, ಹತ್ತಿರವಿದ್ದರೆ ಹೆಗಲ ಮೇಲೊಂದು ಕೈ ಇಟ್ಟುಕೊಂಡೇ ಹರಟುತ್ತಾರೆ, ವಿಪರೀತ ಅನ್ನುವಷ್ಟು ಹಚ್ಚಿಕೊಳ್ಳುತ್ತಾರೆ.

ನೀವು ಮಧ್ಯ ರಾತ್ರಿ ಕರೆ ಮಾಡಿದರೂ ಅದನ್ನು ನಿದ್ದೆಗಣ್ಣಿನಲ್ಲೇ ಅಟೆಂಡ್ ಮಾಡುತ್ತಾರೆ, ನಂಗೊಂದು ಹೆಲ್ಪ್ ಆಗ್ಬೇಕಿತ್ತು ಕಣೇ ಅಂದ್ರೆ ತಮ್ಮ ಜೀವ ಒತ್ತೆ ಇಟ್ಟಾದರೂ ಸಹಾಯ ಮಾಡೋಕೆ ಸಿದ್ಧರಾಗುತ್ತಾರೆ, ನನ್ ಹುಡುಗಿ ನಂಗೆ ಮೋಸ ಮಾಡಿದ್ಳು ಕಣೇ ಅಂದ್ರೆ ನಿಮ್ಮ ಹತ್ತಿರ ಕೂತು ಹೋಗ್ಲಿ ಬಿಡೋ, ಅವಳಿಗೆ ನಿನ್ನ ಪಡಕೊಳ್ಳುವ ಯೋಗ್ಯತೆ ಇಲ್ಲ ಬಿಡು ಎಂದು ಸಮಾಧಾನಿಸುತ್ತಾಳೆ, ಯಾಕೋ ಕ್ಲಾಸ್ ಬೋರಾಗ್ತಿದೆ ಬಂಕ್ ಮಾಡ್ತೀನಿ ಅಂದ್ರೆ ನೀನಿಲ್ದಿರೋ ಕ್ಲಾಸಲ್ಲಿ ಕೂರೋಕೆ ನಂಗೂ ಬೋರ್, ನಾನು ಬರ್ತೀನಿ ಇರು ಅಂತಾಳೆ. ಅಪ್ಪಿತಪ್ಪಿ ಏನಾದ್ರೂ ’ಈ ಲೈಫ್ ಬೇಜಾರಾಗೋಗಿದೆ’ ಅಂತ ರಾತ್ರಿ ಮಲಗೋ ಮುನ್ನ ವಾಟ್ಸಾಪ್ ಸ್ಟೇಟಸ್ ಹಾಕೊಂಡ್ರೆ ಪ್ರಪಂಚಾನೇ ಅಲ್ಲೋಲಕಲ್ಲೋಲ ಆಯ್ತೇನೋ ಎಂಬಂತೆ ಆಕ್ಷಣಾನೇ ಕರೆ ಮಾಡಿ ಬೆಳಕು ಹರಿಯುವವರೆಗೂ ನಿಮ್ಮನ್ನು ಎಂಗೇಜಲ್ಲಿರಿಸುತ್ತಾಳೆ, ನೀವು ಕೇಳದೇನೇ ನಿಮ್ಮ ಅಸೈನ್‍ಮೆಂಟ್ ಬರೆದಿಡ್ತಾಳೆ, ಅಪ್ಪನ ಜೊತೆ ಶಾಪಿಂಗ್ ಹೋದ್ರೂ ಅಲ್ಲಿಂದಲೇ ಫೋನ್ ಹಚ್ಚಿ ಯಾವ ಕಲರ್ ಡ್ರೆಸ್ ತಗೋಬೇಕು ಹೇಳೋ ಅಂತ ನಿಮ್ಮ ತಲೆ ತಿನ್ನುತ್ತಾಳೆ, ಒಂದೇ ಒಂದು ದಿನ ಸಿಗದೇ ಇದ್ರೂ ಇಷ್ಟಗಲ ಕಣ್ಣರಳಿಸಿ ನಿನ್ನೆ ಎಲ್ಲಿ ಸಾಯೋಕೆ ಹೋಗಿದ್ದೆ ಅಂತ ಕೇಳ್ತಾಳೆ ಅಥವಾ ಮೂತಿನಾ ಇಷ್ಟುದ್ದ ಮಾಡ್ಕೊಂಡು ನಿನ್ನ ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಾ ಅಂತ ಪ್ರಶ್ನಿಸ್ತಾಳೆ. ನೀನಿಲ್ದೇ ನನ್ನ ಬದುಕು ಇನ್‍ಕಂಪ್ಲೀಟ್ ಕಣೋ ಎಂದು ಸಾವಿರ ಬಾರಿ ಹೇಳಿರುತ್ತಾಳೆ ಮತ್ತು ಹಾಗೆ ನಡ್ಕೊಂಡಿರುತ್ತಾಳೆ ಕೂಡ.

ಅದರೆ ಹುಡುಗರಾ, ನೀವಂದುಕೊಂಡಿರುವಂತೆ ಅದು ಪ್ರೀತಿಯಾಗಿರುವುದಿಲ್ಲ. ಅಲ್ಲಿ ನಿಮ್ಮನ್ನು ಜೀವನಸಂಗಾತಿಯಾಗಿ ಪಡೆದುಕೊಳ್ಳಬೇಕು ಅನ್ನುವ ಆಸೆ ಇರುವುದಿಲ್ಲ. ಅವಳು ನಿಮ್ಮನ್ನೆಂದೂ ಪ್ರೇಮಿಯಾಗಿ ಕಲ್ಪಿಸಿಕೊಂಡಿರುವುದಿಲ್ಲ. ಅಲ್ಲಿರುವುದು ಶುದ್ಧಾನುಶುದ್ಧ ಸ್ನೇಹ ಮಾತ್ರ. ಅವನು ನನ್ನ ಜೀವದ ಗೆಳೆಯ ಅನ್ನುವ ನಿಷ್ಕಳಂಕ ಭಾವ ಮಾತ್ರ. ನನ್ನ ಪ್ರತಿ ಸೋಲಲ್ಲೂ, ಪ್ರತಿ ಗೆಲುವಲ್ಲೂ ನನ್ನೀ ಗೆಳೆಯನಿರುತ್ತಾನೆ ಅನ್ನುವ ಭರವಸೆಯದು. ನನ್ನ ಪ್ರತೀ ನಲಿವನ್ನೂ, ಪ್ರತಿ ಸೋಲನ್ನೂ ಹಂಚಿಕೊಳ್ಳೋಕೆ ಒಂದು ಜೀವವಿದೆ ಅನ್ನುವ ನಂಬಿಕೆಯದು.

ನೀವು ನೊಂದಾಗ ಎಲ್ಲೇ ಇದ್ದರೂ ಓಡೋಡಿ ಬಂದು ನಿಮ್ಮನ್ನವಳು ಸಮಾಧಾನಿಸುತ್ತಾಳೆ ಅಂದರೆ ಅದು ಪ್ರೇಮವಲ್ಲ, ಅವಳ ಒಳ್ಳೆಯತನ. ಪ್ರತೀ ಹೆಣ್ಣು ಹುಟ್ತುತ್ತಲೇ ತಾಯಿಯಾಗಿಯೇ ಹುಟ್ಟುತ್ತಾಳಂತೆ. ಮಗಳಾಗಿ, ತಂಗಿಯಾಗಿ, ಅಕ್ಕನಾಗಿ, ಅತ್ತಿಗೆಯಾಗಿ, ಗೆಳತಿಯಾಗಿ ಕೊನೆಗೆ ಪ್ರೇಮಿಯಾಗಿ ಕೂಡ ಆಕೆ ನಿಭಾಯಿಸುವುದು, ನಿರ್ವಹಿಸುವುದು ತಾಯ್ತನದ ವಿವಿಧ ಮಜಲುಗಳನ್ನೇ, ವಿವಿಧ ಪದರುಗಳನ್ನೇ. ಇಲ್ಲೂ ಅಷ್ಟೆ, ನೀವು ನೊಂದಿದ್ದೀರಿ ಅಂದಾಕ್ಷಣ ಅವಳಲ್ಲಿ ಒಳಗೆಲ್ಲೋ ಸುಪ್ತವಾಗಿದ್ದ ತಾಯ್ತನ ಜಾಗೃತವಾಗುತ್ತದೆ. ಅದರಿಂದಾಗೇ ಆಕೆ ನಿಮ್ಮ ಬಳಿ ಓಡಿ ಬರುತ್ತಾಳೆ, ಎಷ್ಟು ಸಾಧ್ಯವೋ ಅಷ್ಟೂ ಕಂಫರ್ಟ್ ಫೀಲ್ ಕೊಡೋಕೆ ಪ್ರಯತ್ನಿಸುತ್ತಾಳೆ. ಹಾಗೆ ಕೊಡೋಕೆ ಆಗದೇ ಇದ್ದಾಗೆಲ್ಲಾ ತಾನು ಈ ಸಂಬಂಧವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೇನೋ ಅನ್ನುವ ತೊಳಲಾಟಕ್ಕೆ ಬಿದ್ದುಬಿಡುತ್ತಾಳೆ.

ಅದನ್ನೇ, ಆ ಒಳ್ಳೆಯತನವನ್ನೇ ನೀವು ಪ್ರೀತಿ ಅಂದುಕೊಳ್ಳುತ್ತೀರಿ. ನೀನಿಲ್ಲದೇ ನನ್ನ ಬದುಕು ಇನ್‍ಕಂಪ್ಲೀಟ್ ಕಣೋ ಅಂದಿರುವುದನ್ನೇ ಪ್ರೇಮದ ತೀವ್ರತೆಯೆಂದು ಪರಿಗಣಿಸುತ್ತೀರಿ. ಒಂದೇ ಒಂದು ಕ್ಷಣಕ್ಕೂ ಅದು ಆಕೆಯ ಸ್ನೆಹದ ಆಳ, ನಿರ್ಮಲತೆ ಅಂತ ನಿಮಗನಿಸುವುದೇ ಇಲ್ಲ. ಅವಳನ್ನು ಒಂದು ಮಾತೂ ಕೇಳದೇ, ನಿಮಗೆ ನೀವೇ ಪ್ರೀತಿಸುತ್ತಿರುವುದಕ್ಕೇ ಇಷ್ಟೊಂದು ಕಾಳಜಿ ತೋರುತ್ತಿದ್ದಾಳೆ ಎಂದು ನಿರ್ಧರಿಸಿಬಿಡುತ್ತೀರಿ.

ಸರಿ, ಹಾಗೆ ನಿರ್ಧರಿಸಿದ ಮೇಲಾದರೂ, ನಿಮ್ಮ ಅಷ್ಟೊಂದು ಹಚ್ಚಿಕೊಂಡ ಹುಡುಗಿಯ ಹತ್ತಿರ ಕೂತು, ಆತ್ಮೀಯತೆಯಿಂದ, ನನಗೇನೋ ನೀನು ನನ್ನ ಪ್ರೀತಿಸುತಿದ್ದಿ ಅನ್ನಿಸುತ್ತದೆ, ನೀನೇನು ಹೇಳುತ್ತಿ ಎಂದು ಕೇಳುವುದೋ, ಇಲ್ಲ ನಮ್ಮಿಬ್ಬರ ಸ್ನೇಹವನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೊಯ್ದು ಸಂಗಾತಿಗಳಾಗೋಣ ಅಂತಲೋ ಹೇಳುತ್ತೀರೇನೋ ಅಂದರೆ ಅದೂ ಇಲ್ಲ. ಹಾಗೇನೂ ಮಾಡದೆ, ಮುಂಜಾವಿನ್ನೂ ಕಣ್ಣುಬಿಡುವ ಮುನ್ನವೇ ಅವಳು ಕಳುಹಿಸಿದ್ದ  good morning  ಮೆಸೇಜನ್ನೋ ಅಥವಾ ಗೆಳತಿಯರ ಜೊತೆಗೆ ಟ್ರಿಪ್ ಹೋದಾಗ ಬಿಡುವು ಮಾಡಿಕೊಂಡು ಕಳುಹಿಸಿದ miss you  ಮೆಸೇಜನ್ನೋ ಆಧಾರವಾಗಿಟ್ಟುಕೊಂಡು, ಅವಳೊಬ್ಬಳನ್ನು ಹೊರತುಪಡಿಸಿ ಊರಿಡೀ ಅವಳು ನನ್ನ ಪ್ರೀತಿಸುತ್ತಿದ್ದಾಳೆ ಅಂತ ಡಂಗುರ ಸಾರಿಕೊಂಡು ಬರುತ್ತೀರಿ.

ಒಂದಿಷ್ಟು ದಿನಗಳ ಕಾಲ ನಿಮ್ಮ ಡಂಗುರ ಗುಟ್ಟಾಗಿಯೇ ಉಳಿದಿರುತ್ತದೆ. ಆಮೇಲೊಂದಿನ ಮೂರನೆಯವರ ಮೂಲಕ ಅದು ಅವಳ ಕಿವಿ ತಲುಪುತ್ತದೆ. ಮೊದಮೊದಲು ತಮಾಷೆ ಇರಬಹುದೇನೋ ಅಂದುಕೊಂಡು ಅವಳೂ ಸುಮ್ಮನಿರುತ್ತಾಳೆ. ಆಮೇಲೆ, ಇಲ್ಲವೇ ಇಲ್ಲ, ನಮ್ಮ ಸ್ನೇಹವನ್ನು ಕೆಡಿಸಲು ನೀವೆ ಇಲ್ಲಸಲ್ಲದ ಕಥೆ ಕಟ್ಟುತ್ತಿದ್ದೀರಿ ಎಂದು ವಾದಿಸುತ್ತಾಳೆ. ಮತ್ತೂ ಅವರು ಸುಮ್ಮನಾಗದಿದ್ದರೆ, ನನ್ ಫ್ರೆಂಡ್ ಹಾಗೆಲ್ಲಾ ಹೇಳಿರಲ್ಲ ಅನ್ನುವುದನ್ನು ಜಗತ್ತಿಗೇ ಸಾಬೀತು ಪಡಿಸಬೇಕು ಅನ್ನುವ ಹಠಕ್ಕೆ ಬಿದ್ದು ಬಿಡುತ್ತಾಳೆ. ಆಗಲೇ ಎಲ್ಲರೆದುರು ನಿಮ್ಮ ಕರೆದು, ಇವರೆಲ್ಲಾ ನಿನ್ನ ಬಗ್ಗೆ ಏನೇನೋ ಕಥೆ ಕಟ್ಟಿ ಹೇಳುತ್ತಿದ್ದಾರೆ, ಅವನ್ನೆಲ್ಲಾ ಒಮ್ಮೆ ನಿರಾಕರಿಸಿಬಿಡು ಅನ್ನುವುದು. ನೀವಾಗ ಅದನ್ನು ನಿರಾಕರಿಸಲಾಗದೆ, ಪೆಕರು ಪೆಕರಾಗಿ ಅವರಂದಿರುವುದೆಲ್ಲಾ ನಿಜ ಕಣೇ, ನೀನೂ ನನ್ನ ಪ್ರೀತಿಸುತ್ತಿದ್ದಿ ಅಂತ ನಾನಂದುಕೊಂಡಿದ್ದೆ ಎಂದು ಒಗರೊಗಾದ ಧ್ವನಿಯಲ್ಲಿ ಹೇಳಿ ತಲೆ ತಗ್ಗಿಸಿ ನಿಂತುಬಿಡುತ್ತೀರಿ.

ಅಲ್ಲಿಗೆ, ನಿಮ್ಮ ಮೇಲೆ, ಸ್ನೇಹದ ಮೇಲೆ, ಆಕೆಗಿದ್ದ ಅಖಂಡ ನಂಬಿಕೆ ಸಂಪೂರ್ಣ ಕುಸಿದುಬಿಡುತ್ತದೆ. ನೀವಾಕೆಯನ್ನು ಪ್ರೀತಿಸಿದಿರಿ ಅನ್ನುವುದಕ್ಕಿಂತಲೂ ಯಾರೋ ಮೂರನೆಯವರ ಮುಖಾಂತರ ಅದನ್ನುr ತಿಳಿದುಕೊಳ್ಳುವಂತಾಯಿತಲ್ಲಾ ಅನ್ನುವುದವಳನ್ನು ಹೆಚ್ಚು ಭಾದಿಸತೊಡಗುತ್ತದೆ. ಇವೆಲ್ಲದರ ತಾಯಿ ಬೇರು ಅಪನಂಬಿಕೆ ಅನಿಸತೊಡಗುತ್ತದೆ. ಯಾವ ಸಂಬಂಧವನ್ನು  ಕಣ್ಣರೆಪ್ಪೆಯೊಳಗಿತ್ತು ಕಾಯ್ದಿದ್ದಳೋ ಅದೇ ಸಂಬಂಧದಿಂದ ಹೊರಬರಲು ಮನಸು ಚಡಪಡಿಸತೊಡಗುತ್ತದೆ. ಅಲ್ಲಿಂದಾಚೆ ನೀವು ಎಷ್ಟೇ ವಿವರಣೆ ಕೊಟ್ಟರೂ, ಸಮಜಾಯಿಷಿ ನೀಡಿದರೂ ಅದನ್ನು ಅವಳು ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಳ್ಳುವುದು ಬಿಡಿ, ನಿಮ್ಮ ವಿವರಣೆಗಳನ್ನು, ಸಮಜಾಯಿಷಿಗಳನ್ನು ಕೇಳಿಸಿಕೊಳ್ಳಲೇ ತಯಾರಿರುವುದಿಲ್ಲ. ಪರಿಣಾಮ, ಮಧುರ ಸಂಬಂಧವೊಂದು ಅಕಾಲಕ್ಕೇ ಆತ್ಮಹತ್ಯೆ ಮಾಡಿಬಿಡುತ್ತದೆ.

ಹೀಗೆ, ಬದುಕಿನ ಹಲವು ಸಂಭ್ರಮದ ಘಳಿಗೆಗಳನ್ನು, ನೋವಿನ ಕ್ಷಣಗಳನ್ನು ಹಂಚಿಕೊಂt ಸಂಬಂಧವೊಂದು ಏಕಾಏಕಿ ಕೈಬಿಟ್ಟುಹೋಗುತ್ತದಲ್ಲಾ, ಅದನ್ನು ಭರಿಸುವುದು, ಆ ಕಳೆದುಕೊಂಡ ನೋವಿನೊಂದಿಗೇ ಜೀವನ ಪೂರ್ತಿ ಏಗುವುದು ಅಷ್ಟೊಂದು ಸುಲಭವಲ್ಲ. ಬದುಕಿನ ಪ್ರತಿ ಕ್ಷಣಾನೂ ಆ ಸಂಬಂಧದ ಮಧುರ ನೆನಪುಗಳು ಮತ್ತು ಅದು ಈಗ ಜೀವಂತವಾಗಿಲ್ಲ ಅನ್ನುವ ನಿರಾಸೆ ಕಾಡುತ್ತಲೇ ಇರುತ್ತದೆ. ಹಾಗಾಗಬಾರದು ಅಂತಿದ್ದರೆ,  ಸಂಬಂಧಗಳ ಬಗ್ಗೆ ಒಂದು ನಿರ್ಧಾರಕ್ಕೆ ಬರುವ ಮುನ್ನ, ನೂರು ಮಂದಿಯ ಮುಂದೆ ಒಂದು ಮಾತು ಆಡುವ ಮುನ್ನ ದಯವಿಟ್ಟು ಒಂದಿಷ್ಟಾದರೂ ಯೋಚಿಸಿ...

ಸಂಜೆ ಮುಗಿಲಿನ ಹಾಡು


ಎದೆಯ ಪಕ್ಕದಲಿ ಹರಿವ
ನದಿಯಲೀಗ ನೂರು ಪುಳಕ
ಸ್ವಪ್ನ ಲೋಕದ ಜರೂರತ್ತಿಗೆಲ್ಲಾ
ಸುಸ್ಪಷ್ಟ ಹಾಸುಗಲ್ಲು

ಎಲ್ಲೋ ಕಟ್ಟಿದ ಮೋಡ
ಇಲ್ಲಿ ಸುರಿದ ಮಳೆ
ಮತ್ತೆಲ್ಲೋ ಬೀಸಿದ ಗಾಳಿ
ಗರಿಕೆಯ ಗರ್ಭದಲ್ಲೂ ಖುಶಿಯ ಹೊನಲು

ಸಂಜೆ ಮುಗಿಲಿನ ಹಾಡಲೊಳಗೀಗ
ರಾಗ ತಾಳಗಳಾಚೆಗಿನ ಭಾವಸಂಭ್ರಮ
ಕೆನೆಗಟ್ಟಿದ ಹಾಲಿನ ಪ್ರತಿ ಕಣಕೂ
ಬಿದಿಗೆ ಚಂದ್ರಬಿಂಬದ ಬೆರಗು

ಬಂಡಾಯ ಪದ್ಯದಂತರಂಗದಲೂ
ನವಿರು ಪ್ರೇಮ ಸ್ಫುರಣೆ
ಪ್ರೀತಿ ಅಜರಾಮರ ಎಂದ ಕವಿಯೀಗ
ಹೊಸ ಪುಕ್ಕ ಕಟ್ಟಿಕೊಂಡ ಹಕ್ಕಿ

ನೆರಳು ನೀರಾಗುವ ಸುಸಮಯದಿ
ಕನಸುಗಳಿಗೆ ನವ ಜೀವ ಪ್ರಾಪ್ತಿ
ತೆರೆ ಮರೆಯ ಕವಿತೆಗೂ
ನವಿಲಾದ ಜಯೋತ್ಕರ್ಷ.

ಬುಧವಾರ, ಮೇ 11, 2016

ಇವೆಲ್ಲಾ ನಿನಗೆ ಮೂರು ವರ್ಷಕ್ಕೂ ಮುಂಚೆಯೇ ಗೊತ್ತಿತ್ತಾ?

ಮೊನ್ನೆ ಜೀವದ ಗೆಳತಿ ವಾಸ್ತವ್ಯವಿರುವ ಪಿ.ಜಿಯ ಪಕ್ಕದಲ್ಲಿರುವ ಮರದ ಕೆಳಗೆ ಕೂತು ಮಾತನಾಡುತ್ತಿದ್ದಾಗ ನಾನು ಅಪ್ಪಟ ತತ್ವಜ್ಞಾನಿಯ ಶೈಲಿಯಲ್ಲಿ "ಕಾಲ ಅದೆಷ್ಟು ಬೇಗ ಬದಲಾಗಿಬಿಡ್ತಲ್ವಾ?" ಅಂದೆ. ಯಾವತ್ತೂ ನನ್ನ ಇಂತಹ ಮಾತುಗಳಿಗೆಲ್ಲಾ ತಲೆಕೆಡಿಸಿಕೊಳ್ಳದ ಅವಳು ಅವತ್ತು ಮಾತ್ರ "ಬದಲಾಗಿರುವುದು ಕಾಲವಲ್ಲ, ನಮ್ಮ ಮನಸ್ಥಿತಿಗಳು ಅಷ್ಟೇ" ಅಂತಂದು ಮೌನವಾದಳು. ಸಾಫ್ಟ್ವೇರ್, ಟೀಂ ವರ್ಕ್, ನೈಟ್ ಶಿಫ್ಟ್ ಅಂತೆಲ್ಲಾ ಮಾತ್ರ ಮಾತಾಡುತ್ತಿದ್ದ ಹುಡುಗಿಯ ಬಾಯಲ್ಲಿ ಇವತ್ತೇಕೆ 'ಮನಸ್ಥಿತಿ'ಯ ಮಾತು ಪ್ರಸ್ತಾಪವಾಯಿತು ಅಂತ ಅಚ್ಚರಿಗೊಳ್ಳುತ್ತಾ ಅವಳತ್ತ ನೋಡಿದೆ. ಅವಳು ನನ್ನ ಅವಳ ಕೋಣೆಯೊಳಗೆ ಕರಕೊಂಡು ಹೋಗಿ, ಕೆಂಪು ಬಣ್ಣದ ಹೊದಿಕೆಯಲ್ಲಿ ಸುತ್ತಿಟ್ಟ, ಈಗ ತಾನೇ ಬರೆದಂತಿದ್ದ, ಶುದ್ಧಾನುಶುದ್ಧ ಕೈ ಬರಹದ ಪತ್ರ ಕೈಗಿಟ್ಟಳು. ಓದುತ್ತಾ ಹೋದಂತೆ ಆ ಎರಡು ಜೀವಗಳ ಪ್ರೀತಿ, ಬದುಕು, ಮುನಿಸು, ನೋವು, ವಿರಹ ನನ್ನ ಕಣ್ಣ ಚಕ್ರತೀರ್ಥದಲ್ಲಿ ಕದಲತೊಡಗಿದವು. ನಾನು ಓದಿ ಮುಗಿಸುವಷ್ಟರಲ್ಲಿ ಅವಳು "ನನ್ನ ನೋವ ಮರೆಯಲು ಇದನ್ನು ಬರೆದೆನಷ್ಟೇ, ಪೋಸ್ಟ್ ಮಾಡುವ ಯಾವ ಆಸಕ್ತಿಯೂ ನನಗಿಲ್ಲ" ಅಂತಂದು ಎತ್ತಲೋ ನೋಡುತ್ತಾ ನಿಂತಳು. ಹಲವು ವರ್ಷಗಳ ಒಡನಾಟದಿಂದ ಇನ್ನಿವಳ ಮಾತಾಡಿಸಿ ಅರ್ಥವಿಲ್ಲ ಅನ್ನುವುದು ಗೊತ್ತಾಗಿರುವುದರಿಂದ ಅದನ್ನು ಹಾಗೇ ಎತ್ತಿಕೊಂಡು ಮನೆಗೆ ಬಂದಿದ್ದೆ. ಈಗ ಅದೇ ಪತ್ರವನ್ನು ಟೈಪಿಸಿ (ಅವಳ ಒಪ್ಪಿಗೆಯ ಮೇರೆಗೆ) ನಿಮ್ಮುಂದೆ ಇಟ್ಟಿದ್ದೇನೆ, ಇನ್ನು ನೀವುಂಟು ನಿಮ್ಮ ಅಕ್ಕರೆಯ ಅಕ್ಷರಗಳುಂಟು...

ಪ್ರಿಯ ಶಿಶಿರ್,

ಈ ಅಕಾಲದ ಬಿಸಿಲಲ್ಲಿ, ಸಂಬಂಧಗಳೇ ಇಲ್ಲದ ಪಿ.ಜಿಯ ಟೆರೇಸ್ ಮೇಲೆ ನಿಂತು, ಉದ್ದಕ್ಕೆ ಚಾಚಿಕೊಂಡಿರುವ ರಸ್ತೆಯನ್ನು ದಿಟ್ಟಿಸುವಾಗೆಲ್ಲಾ ಆಕಸ್ಮಿಕ ಸ್ಪರ್ಶದ ಬಿಸುಪಿಗೆ ನಾಚುವ ಈಗಷ್ಟೇ ಪ್ರೀತಿಸಲು ಶುರು ಹಚ್ಚಿಕೊಂಡಿರುವ ಜೋಡಿಗಳು ಕಣ್ಣಿಗೆ ಬೀಳುತ್ತಾರೆ. ಆಗೆಲ್ಲಾ ಮುಂಜಾನೆಯ ಗರ್ಭದಲ್ಲಿ ಹುಟ್ಟಿ ಬಯಲು ತು೦ಬಾ ಹರಡಿ ಮನುಷ್ಯನ ಬೆನ್ನು ಮೂಳೆ ಕೂಡ ನಡುಗಿಸಿ ಹಾಕುತ್ತಿದ್ದ ಅದ್ಭುತ ಡಿಸೆ೦ಬರ್ ಚಳಿಯಲಿ ನೀನೇ ಕೊಡಿಸಿದ ತಿಳಿ ಆಕಾಶ ನೀಲಿ ಬಣ್ಣದ ಸ್ವೆಟರ್‍ನೊಳಗೆ ಮುದುಡಿಕೊ೦ಡು ಸಣ್ಣಗೆ ಕ೦ಪಿಸುತ್ತಾ ಹೂವಿನ ಗಿಡಗಳಿಗೆ ನೀರೆರೆಯುತ್ತಾ ಮನಸ ತು೦ಬಾ ನಿನ್ನ ಪ್ರೀತಿಯ ನಾದಕ್ಕೆ ತಲೆದೂಗುತ್ತಿದ್ದ, ಎಳೆ ಸೂರ್ಯ ಕಿರಣ ಮೈಯ ಸೋಕುತ್ತಿದ್ದರೆ ನಿನ್ನದೇ ಸ್ಪರ್ಶದ ಆಪ್ಯಾಯತೆಯ ಅನುಭವಿಸುತ್ತಿದ್ದ, ಎಲೆ-ಹೂವಿನ ಮೇಲೆ ಬಿ೦ಕದಿ೦ದ ಕುಳಿತಿರೋ ಮ೦ಜಹನಿಗಳು ಮುತ್ತ೦ತೆ ಪ್ರತಿಫಲಿಸುತಿರಲು ನಿನ್ನ ಕಣ್ಣೇ ಇಬ್ಬನಿಯಾಗಿ ನನ್ನ ಕೆಣಕುತಿವೆ ಅಂತ ಅನ್ನಿಸುತ್ತಿದ್ದ ಆ ದಿನಗಳು ತಪ್ಪದೇ ನೆನಪಾಗುತ್ತವೆ.

ಎಷ್ಟೊಂದು ಚೆನ್ನಾಗಿದ್ದವು ಕಣೋ ಆ ದಿನಗಳು. ಅದೆಷ್ಟೊಂದು ಪ್ರೀತಿಸುತ್ತಿದ್ದೆ? ನನ್ನ ಎಷ್ಟೊಂದು ಕ್ರಿಯೆಗಳಲ್ಲಿ ನೀನಿದ್ದೆ? ನಿನ್ನ ಎಷ್ಟೊಂದು ಪ್ರತಿಕ್ರಿಯೆಗಳಲ್ಲಿ ನಾನಿದ್ದೆ? ಬದುಕಿನ ಪ್ರತಿ ಕುತರ್ಕಗಳನ್ನು ದಾಟುವಾಗಲೂ ನಾನು ನೀನಾಗಿದ್ದೆ, ನೀನು ನಾನಾಗಿದ್ದೆ. ನಿನ್ನ ಮುಖದ ಕಳವಳಿಕೆಗಳು ಕತ್ತಲಲ್ಲಿ ಬದಲಾದರೂ ನನಗದು ತಟ್ಟನೆ ಗೋಚರವಾಗುತಿತ್ತು. ನಾನು ಕನಸಲ್ಲಿ ಸಣ್ಣಗೆ ಚೀರಿದರೂ ನಿನ್ನೆದೆಯ ನರಗಳು ಧಿಮ್ಮನೆ ಕದಲುತ್ತಿದ್ದವು.

ನೀನೆಂದರೆ ಕುರುಡುಗತ್ತಲಿಲ್ಲಿ ದೇದೀಪ್ಯಮಾನವಾಗಿ  ಉರಿಯುತ್ತಿದ್ದ ಪ್ರಣತಿ, ಮುಸ್ಸಂಜೆಯಾಗುತ್ತಿದ್ದಂತೆ ನನ್ನೊಳಗೆ ಮಿಡಿಯುತ್ತಿದ್ದ ಮೌನವೀಣೆ. ಕುವೆಂಪು ಭಾವಗೀತೆ ಕೇಳಿ ನಾನ್ನು ಹನಿಗಣ್ಣಾಗುತ್ತಿದ್ದಾಗಲೆಲ್ಲಾ ನೀನು ನೆತ್ತಿ ಸವರಿ ’ಬದುಕಲು ಕಲಿ ಹುಡುಗಿ’ ಅನ್ನುತ್ತಿದ್ದಾಗ ನಾನು ನಿನ್ನ ಮಡಿಲಲ್ಲಿ ಮಗುವಾಗುತ್ತಿದ್ದೆ. ನನ್ನ ಹುಡುಗ ಎಷ್ಟೊಂದು ಬುದ್ಧಿವಂತನಲ್ಲಾ ಎಂದು ಅಚ್ಚರಿ ಪಡುತಿದ್ದೆ, ಸಂಭ್ರಮಿಸುತ್ತಿದ್ದೆ.

ನಿನ್ನ ಮಾತು, ತುಟಿಯ ತಿರುವಲಿ ಮಾತ್ರ ತೇಲಿಸುತ್ತಿದ್ದ ಸಣ್ಣ ನಗು, ಕುರುಚಲು ಗಡ್ಡ, ಗಂಭೀರ ಕಣ್ಣುಗಳು, ಕುಡಿನೋಟ, ಅಪರೂಪಕ್ಕೊಮ್ಮೆ ಆಡುತ್ತಿದ್ದ ಕಪಿಚೇಷ್ಟೆ, ನನ್ನಂತಹ ಹುಟ್ಟು ತರಲೆಯನ್ನೂ ಸಂಭಾಳಿಸುತ್ತಿದ್ದ ನಿನ್ನ ತಾಳ್ಮೆ, ನೀ ಗುಣುಗುತ್ತಿದ್ದ ಹಾಡುಗಳು, ತೋಳಮೇಲಿನ ಹುಟ್ಟು ಮಚ್ಚೆ... ಊಹೂಂ, ಇವ್ಯಾವುವೂ ಭವಿಷ್ಯದಲ್ಲಿ ಒಂದು ಕರಾಳ ಸ್ವಪ್ನವಾಗಿ ನನ್ನ ಕಾಡುತ್ತದೆ ಅಂತ ನಾನಂದುಕೊಂಡಿರಲೇ ಇಲ್ಲ.

ನಾನು ಪ್ರತಿ ರಾತ್ರಿ ಕಣ್ಣುಮುಚ್ಚುವ ಮುನ್ನ, ನಿನ್ನ ಸುಂದರ ನಾಳೆಗಿರಲಿ ಅಂತ ಒಂದಿಷ್ಟು ಕನಸುಗಳನ್ನು ಎತ್ತಿಟ್ಟುಕೊಳ್ಳುತ್ತಿದ್ದೆ. ಅವೆಲ್ಲಾ ಕೇವಲ ನಿನ್ನ ಹಾಗೂ ನನ್ನನ್ನು ಮಾತ್ರ ಒಳಗೊಂಡ ಕನಸುಗಳಾಗಿದ್ದವು. ಅದು ಬಟ್ಟಬಯಲಲಿ ನಿನ್ನ ಹಿನ್ನಲೆಗಳು, ಭೂತಕಾಲಗಳು ಯಾವುವೂ ಇಲ್ಲದೆ ನಿನ್ನ ಜೊತೆ ಬದುಕು ಕಟ್ಟಿಕೊಳ್ಳುವ ಅಗಾಧ ಕನಸಾಗಿತ್ತು. ನಿನ್ನ ಕೇವಲ ನೀನಾಗಿಯೇ ಸ್ವೀಕರಿಸುವ, ನನ್ನೊಳಗೆ ಆಹ್ವಾನಿಸುವ, ನನ್ನದೆಲ್ಲವ ನಿನಗೆ ಧಾರೆಯೆರೆದುಕೊಡುವ, ನಿನ್ನ ಖುಶಿಯಲ್ಲಿ ನಾ ಸಂಭ್ರಮಿಸುವ, ನಿನ್ನ ಅಷ್ಟೂ ನೋವುಗಳನ್ನು ನನ್ನೊಳಗೆ ಇಳಿಸಿಕೊಳ್ಳುವ, ಜೀವನ ಪೂರ್ತಿ ನಿನ್ನನ್ನು ಒಲವ ಅಮೃತ ಸುಧೆಯಲಿ ತೇಲಿಸಿಬಿಡುವ ಅನನ್ಯ ಕನಸಾಗಿತ್ತು.

ಆದ್ರೆ ಏನೋ ಮಾಡಿಬಿಟ್ಟೆ ನೀನು? ನನ್ನ ಆ ಒಂದು ಸಾವಿರದ ತೊಂಬತ್ತೈದು ದಿನಗಳ (ಸರಿಯಾಗಿ ಲೆಕ್ಕ ಹಾಕುವುದಾದರೆ  ಒಂದು ಸಾವಿರದ ತೊಂಬತ್ತಾರು ದಿನಗಳು, ಅದರಲ್ಲಿ ಒಂದು ಅಧಿಕವರ್ಷವಿತ್ತು ನೋಡು) ಕನಸುಗಳನ್ನು ಅಥವಾ ನಿನ್ನ ಬದುಕಿನ ಮೂರು ವರ್ಷಗಳ ಕನಸನ್ನು ಕೇವಲ ಒಂದು ಘಳಿಗೆಯಲ್ಲಿ ನಿರ್ನಾಮ ಮಾಡಿಬಿಟ್ಟೆಯಲ್ಲೋ?

ಅವತ್ತು ಎಂದಿನಂತೆ, ದೇವಸ್ಥಾನಕ್ಕೆ ಒಮ್ಮೆ ಬರುತ್ತೀಯಾ ಅಂತ ನೀನು ಕೇಳಿದಾಗ, ನಿನ್ನೊಡನೆ ಮಾತ್ರ ಕಳೆಯುವಂತಹ ಕೆಲವು ಸಂಭ್ರಮದ ಕ್ಷಣಗಳನ್ನು ಇದಿರುಗೊಳ್ಳಲು ಸಿದ್ಧಳಾಗಿ, ಒಂದು ಬುತ್ತಿಯ ಪೂರ್ತಿ ನೀನು ಇಷ್ಟಪಟ್ಟು ತಿನ್ನುತ್ತಿದ್ದ ಕೇಸರಿಬಾತ್ ತುಂಬಿಕೊಂಡು ಬಂದಿದ್ದೆ. ನೀನು ಬರುವವರೆಗೂ ಕಲ್ಯಾಣಿಯ ಮೆಟ್ಟಿಲ ಮೇಲೆ ಕೂತು, ತಂದಿದ್ದ ಕೇಸರಿಬಾತನ್ನು ಇಷ್ಟೇಇಷ್ಟು ಮೀನುಗಳಿಗೆ ಎಸೆಯುತ್ತಿದ್ದೆ. ನೀನು ಬಂದ ಕೂಡಲೇ ಎಂದಿನಂತೆ ನಿನ್ನ ಕೊರಳಿಗೆ ಜೋತು ಬಿದ್ದಿದ್ದೆ. ನಿನಗೆ ಒಂದೊಂದು ಕೈತುತ್ತೀಯುವಾಗಲೂ ನಾನು ಆಸ್ಥೆಯಿಂದ ನಿನ್ನ ಪ್ರೀತಿಯಲ್ಲಿ ಕರಗಿ ಹೋಗುತ್ತಿದ್ದೆ.

ಆಗಲೇ ಅಲ್ಲವೇ ನೀನು ದೂರಾಗುವ ಮಾತಾಡಿದ್ದು? ಆಗಲೇ ಅಲ್ಲವೇ ನಾನು ನಿನ್ನ ಕಣ್ಣೊಳಗೇನಾದರೂ ನನ್ನ ಛೇಡಿಸುವ ಕುರುಹು ಇದೆಯಾ ಎಂದು ಇಣುಕಿ ನೋಡಿದ್ದು? ಆಗಲೆ ಅಲ್ಲವೇ ಎಲ್ಲಿಂದಲೋ ತೂರಿ ಬಂದ ಕಲ್ಲೊಂದು ಕಲ್ಯಾಣಿಯ ನೀರನ್ನು ಕದಡಿದ್ದು? ಆಗಲೇ ಅಲ್ಲವೇ ನೀರಲ್ಲಿನ ನಮ್ಮ ಪ್ರತಿಬಿಂಬ ಕದಲಿದ್ದು? ಆಗಲೆ ಅಲ್ಲವೇ ಆಳದಲ್ಲೆಲ್ಲೋ ಈಜುತ್ತಿದ್ದ ಮೀನೊಂದು ಸತ್ತು ತೇಲತೊಡಗಿದ್ದು? ಆಗಲೆ ಅಲ್ಲವೇ ನಾನು ಇವೆಲ್ಲಾ ರಾತ್ರಿ ಕಾಣುವ ಕೆಟ್ಟ ಕನಸೇನೋ ಎಂಬಂತೆ ನನ್ನ ಮತ್ತೆ ಮತ್ತೆ ಜಿಗುಟಿ ನೊಡಿದ್ದು? ನಿನ್ನ ಕಣ್ಣುಗಳಲ್ಲಿ ಆಗಲೂ ಇದ್ದದ್ದು ಶುದ್ಧ ಪ್ರಾಕ್ಟಿಕಾಲಿಟಿ ಮಾತ್ರ. ಈಗಲಾದರೂ ಹೇಳು ಶಿಶಿರ್, ಇವೆಲ್ಲಾ ನಿನಗೆ ಆ ಮೂರು ವರ್ಷಗಳ ಮುನ್ನವೇ ಗೊತ್ತಿತ್ತಾ? ಗೊತ್ತಿದ್ದೂ ಗೊತ್ತಿದ್ದೂ ನನ್ನ ಬದುಕಿನೊಳಕ್ಕೆ ಬಂದೆಯಾ?

ನೀನು ದೂರಾಗುವ ಮಾತಂದ ಮರುಕ್ಷಣವೇ ನನ್ನಿಂದ ದೂರ ದೂರ ಸರಿಯತೊಡಗಿದೆ. ನಾನು ಅದೇ ಕಲ್ಯಾಣಿಯ ಮೆಟ್ಟಿಲ ಮೇಲೆ ಕೂತು ಸುಮ್ಮನೆ ನಿನ್ನ ನೋಡುತ್ತಲೇ ಇದ್ದೆ. ನಿಜ ಹೇಳಲಾ? ಆ ಕ್ಷಣದಲ್ಲಿ ನನಗೆ ಸತ್ತ ಮೀನನ್ನು ನೀರಿಂದ ತೆಗೆದು ಹೊರಗೆಸೆಯಲಾ ಇಲ್ಲ ನನ್ನ ತೊರೆಯದಿರೆಂದು ನಿನ್ನ ಬೇಡಿಕೊಳ್ಳಲಾ ಅನ್ನುವುದೇ ಅರ್ಥವಾಗಿರಲಿಲ್ಲ. ಆದ್ರೆ, ಮನಸ್ಸು ಇದೆಲ್ಲಾ ಸುಳ್ಳು, ನನ್ನ ಶಿಶಿರ್ ಮತ್ತೆ ಬರುತ್ತಾನೆ ಅಂತ ಮತ್ತೆ ಮತ್ತೆ ಹೇಳುತ್ತಲೇ ಇತ್ತು. ಕೊನೆಪಕ್ಷ ನನ್ನ ತಲೆ ಸವರಿ ಕ್ಷಮಿಸು ಪುಟ್ಟಾ ಅಂತಾದರೂ ಅನ್ನುತ್ತಿಯೇನೋ ಅಂತಂದುಕೊಂಡಿದ್ದೆ. ಊಹೂಂ, ನೀನು ಅದ್ಯಾವುದನ್ನೂ ಮಾಡದೆ ನನಗೆ ಬೆನ್ನು ಹಾಕಿ ನಡೆಯತೊಡಗಿದೆ. ಆಗ ನಿನ್ನ ಕಣ್ಣಲ್ಲೂ ನೀರು ಗಿರಿಗಿಟ್ಲೆಯಾಡುತ್ತಿತ್ತಾ...? ಗೊತ್ತಿಲ್ಲ.

ಆದ್ರೆ ಯಾವಾಗ ನೀನು ನನ್ನ ಬದುಕಿನೊಳಕ್ಕೆ ಮತ್ತೆ ಬರಲಾರೆ ಅನ್ನುವುದು ಖಾತ್ರಿಯಾಯಿತೋ, ಆ ಕ್ಷಣದಲ್ಲೇ ನಿನ್ನ ಮನಸ್ಥಿತಿ, ಯೋಚನೆ, ನಿರ್ಧಾರಗಳ ಬಗ್ಗೆ ಒಂದು ಮಾತೂ ಆಡದೆ, ನಿನ್ನ ಹೋಗಗೊಡಬೇಕು ಅಂತ ತೀರ್ಮಾನಿಸಿಬಿಟ್ಟೆ. ನನ್ನೆಲ್ಲಾ ನೋವುಗಳನ್ನು ಬದುಕಿನ ಮುಂದೆ ಒತ್ತೆ ಇಟ್ಟು ಅವುಡುಗಚ್ಚಿ ಎಲ್ಲವನ್ನೂ ಸಹಿಸಿಕೊಳ್ಳಬೇಕು ಅಂತ ನಿರ್ಧರಿಸಿಕೊಂಡೆ. ನಿನಗಾಗಿ ರಚ್ಚೆ ಹಿಡಿದು ಅಳುವುದರಿಂದ ಪ್ರೀತಿ ಮತ್ತಷ್ಟು ಸಾಂದ್ರವಾಗುತ್ತದೆ ಅನ್ನುವುದು ಅರ್ಥವಾಗುತ್ತಿದ್ದಂತೆ ನನ್ನ ಕಣ್ಣೀರಿಗೂ ಬಲವಂತದ ಕಟ್ಟೆ ಕಟ್ಟಿಬಿಟ್ಟೆ.

ಅಲ್ಲಿಂದಾಚೆ, ನಿನ್ನೆಡೆಗೆ ನನಗಿದ್ದ ಪ್ರೀತಿ ಅಹಂಕಾರದೆಡೆ ಹೊರಳಿಕೊಂಡಿತು, ದಗ್ಧ ಕನಸುಗಳ ಜಾಗದಲ್ಲಿ ಸ್ವಪ್ರತಿಷ್ಠೆ ಮೆರೆಯೊತೊಡಗಿತು, ಭಾವುಕತೆಯ ಜೀವಂತ ಸಮಾಧಿ ಮಾಡಿ ಅದರ ಮೇಲೆ ನಿರ್ಭಾವುಕತೆಯ ಚಪ್ಪಡಿ ಕಲ್ಲು ಎಳೆದು ವಿಜೃಂಭಿಸತೊಡಗಿದೆ, ಕುವೆಂಪು ಮರೆತೇ ಹೋದರು, ಕಲ್ಯಾಣಿ ಅಪ್ರಸ್ತುತವಾಯಿತು. ನನಗಾದ ನೋವಿನಿಂದಾಗಿ ನಾನು ಬದುಕಿನ ಬಗ್ಗೆ ಮತ್ತಷ್ಟು ಸೂಕ್ಷ್ಮತೆ ಬೆಳೆಸಿಕೊಳ್ಳುತ್ತಿದ್ದೇನೆ ಅನ್ನುವ ಭ್ರಮೆಯಲ್ಲಿ ಕಠೋರಳಾಗುತ್ತಾ ಹೋದೆ. ಕೊನೆಗೆ ನನ್ನೊಳಗಿನ ನನ್ನನ್ನು ಕೊಂದುಕೊಂಡು ಕಾರ್ಪೋರೇಟ್ ಜಗತ್ತು ಬಯಸುವ ಒಬ್ಬ ಅಪ್ಪಟ ಯಂತ್ರಮಾನವಳಾದೆ. ಈಗಿರುವ ಮೆಘನಾ, ಅವತ್ತು ಊರಾಚಿನ ಗುಡ್ದದಂಚಿನ ಮುಗಿಲುಗಳಿಗೆ ಕಥೆ ಹೇಳೆಂದು ದುಂಬಾಲು  ಬೀಳುತ್ತಿದ್ದ ಮೇಘನಾ ಅಲ್ಲವೇ ಅಲ್ಲ. ಅಂದು ನೀನನ್ನುತ್ತಿದಂತೆ ನಾನೀಗ ಬದುಕಲು ಕಲಿತಿದ್ದೇನೆ, ಆದ್ರೆ ಇದು ನನ್ನ ಬದುಕು ಅಲ್ಲವೇ ಅಲ್ಲ. ನೋವಿಗೆ -ನಲಿವಿಗೆ ಅತೀತವಾಗಿರುವ ಬದುಕು ನನ್ನದು ಅಂತ ನಾನೂ ಅಹಂಕಾರ ಪಟ್ಟುಕೊಳ್ಳತೊಡಗಿದಾಗಲೇ ನನ್ನೆದೆಯ ನವಿರುಭಾವಗಳೆಲ್ಲವೂ ಆತ್ಮಹತ್ಯೆ ಮಾಡಿಕೊಂಡವು. ಮುರಿದ ಮನಸನ್ನು ತಹಬಂದಿಗೆ  ತಂದಿದ್ದೇನೆ ಅನ್ನುವ ಅಖಂಡ ಭ್ರಮೆಯಲ್ಲಿ ನಾನು ಉರಿದು ಬೂದಿಯಾಗಿದ್ದೇನೆ.

ನಿನಗಿವೆಲ್ಲಾ ಕಾಡುತ್ತವೋ, ಅಸಲಿಗೆ ನಿನ್ನ ಸ್ಮೃತಿ ಪಟಲದ ಒಂದು ಮೂಲೆಯಲ್ಲಾದರೂ ನಾನಿದ್ದೇನೋ ಇಲ್ಲವೋ ಗೊತ್ತಿಲ್ಲ. ಇಷ್ಟೊಂದು ವರ್ಷಗಳ ನಂತರ ಮತ್ತೆ ಪತ್ರ ಬರೆದಿದ್ದೇನೆ ಅಂದರೆ, ಇದು ಖಂಡಿತಾ ನಿನ್ನ ಡಿಸ್ಟರ್ಬ್ ಮಾಡಲಂತೂ ಅಲ್ಲ. ಇಷ್ಟು ವರ್ಷಗಳ ನಂತರ ಮೊದಲ ಬಾರಿ ಮಬ್ಬುಗತ್ತಲೆಯ ಓಡಿಸಲೆಂದು ಹಚ್ಚಿಟ್ಟ ಹಣತೆಯ ಎಣ್ಣೆಯಲಿ ನಿನ್ನ ಪ್ರತಿಬಂಬ ಕಂಡಂತಾಯಿತು. ಸಂತಸದ ಎಳೆ ಮನಸ್ಸಿನ ಪೂರ್ತಿ ತುಂಬಿಕೊಳ್ಳುವ ಮೊದಲೇ ಹಳೆ ಗಾಯ ಮತ್ತೆ ತಿವಿಯತೊಡಗಿತು. ಬೇಡ, ನೀನು ಮತ್ತೆ ನನ್ನ ಮನಸಿನೊಳಕ್ಕೆ, ಬದುಕಿನೊಳಕ್ಕೆ ಬರುವುದೇ ಬೇಡ. ನಿನ್ನ ಅನುಕಂಪದ ಕಂಬನಿಗಳು ನನ್ನೆದೆಯ ಮತ್ತೆ ತೋಯಿಸುವುದೂ ಬೇಡ. ನಾನು ಶಾಪಗ್ರಸ್ಥ ಅಹಲ್ಯೆಯಂತೆ ಬದುಕುತ್ತೇನೆ, ಸಾಕು.

ಇಂತಿ ನಿನ್ನವಳಲ್ಲದ
ಮೇಘನಾ

ಭಾನುವಾರ, ಏಪ್ರಿಲ್ 24, 2016

ಕಾವ್ಯ ಸೃಷ್ಟಿ

ಏಕಕೋಶದಿಂದ ಬಹುಕೋಶ
ಸರೀಸೃಪ ಸಸ್ತನಿ
ಮಂಗನಿಂದ ಮಾನವ
ಡಾರ್ವಿನ್ ವಾದ ಮಕಾಡೆ ಮಲಗಿದೆ
ಕಾವ್ಯ ಸೃಷ್ಟಿಯ ಮುಂದೆ

ಆದಿಗೆ ನಿಯಮವಿಲ್ಲ
ಅಂತ್ಯಕ್ಕೂ ಷರತ್ತಿಲ್ಲ
ವಿಕಾಸಕ್ಕೆ ಕಟ್ಟುಪಾಡುಗಳೇ ಇಲ್ಲ
ಅಬ್ಬರದ ಭಾವದಲೆಗಳೊಂದೇ
ಕಾವ್ಯ ಸೃಷ್ಟಿಯ ಮೂಲಧಾತು

ಹೊಳೆವ ಚುಕ್ಕಿ, ಹರಿದ ದಳ
ನಿರಭ್ರ ಬೆಳಕು, ಕಾಳಿರುಳು
ಒಂದು ಸೊನ್ನೆ ಮತ್ತೊಂದು ಅನಂತ
ಮೋಟುಗೋಡೆಯ ಬಣ್ಣಗೇಡಿ ಚಿತ್ರ
ಎಲ್ಲಾ ಕಾವ್ಯ ಸೃಷ್ಟಿಯಲಿ ಮಣ್ಣು ಗಾರೆಗಳೇ

ತಡೆಯಿರದ ಮಾತು, ದೀರ್ಘ ಮೌನ
ಹುಳ ತಿಂದ ಎಲೆಯ ಅಂಚು
ಹರಿಯದ ನೀರಿನೊಳು ಕಟ್ಟಿದ ಪಾಚಿ
ಗೋಡೆ ಗೋಡೆಯ ನಡುವಿನ ಜೇಡನ ಬಲೆ
ಕಾವ್ಯ ಸೃಷ್ಟಿಯ ಕುಸುರಿಗಿಲ್ಲ ತಡೆ

ದೃಶ್ಯ ಅದೃಶ್ಯ, ಸ್ಮೃತಿ ವಿಸ್ಮೃತಿ
ಚಲ ನಿಶ್ಚಲ, ಬಿಂಬ ಪ್ರತಿಬಿಂಬ
ಆಕಾರ ನಿರಾಕಾರ, ಮೂರ್ತ ಅಮೂರ್ತ
ಜಗದ ಎಲ್ಲ ಸ್ಪರ್ಶ್ಯ ಅಸ್ಪರ್ಶ್ಯಗಳು
ಅಳಿದಮೇಲೂ ಉಳಿಯುವುದೊಂದೇ- ಕಾವ್ಯ

ಗುರುವಾರ, ಏಪ್ರಿಲ್ 7, 2016

ಆ ಸಂಬಂಧಕ್ಕೊಂದು ಗೌರವದ ತೆರೆಯೆಳೆದು ಮುಂದೆ ಸಾಗೋಣ.

ಬಹುಶಃ ಮನುಷ್ಯನ ಬದುಕಿನ ಕದನ, ಪ್ರತಿ ವೀರ್ಯಾಣು ಅಂಡಾಣುವನ್ನು ಸೇರಲು ನಡೆಸುವ ಸಮರದಿಂದಲೇ ಪ್ರಾರಂಭವಾಗುತ್ತದೆ. ಹಾಗಾಗಿಯೇ ಕೋಟ್ಯಾಂತರ ವೀರ್ಯಾಣುಗಳು ಗರ್ಭಕೋಶದ ಸುತ್ತ ಪರಸ್ಪರ ಯುದ್ಧ ಮಾಡುತ್ತಾ, ಗಮ್ಯ ಸೇರಿದ ಮೇಲೆ ಅಲ್ಲೂ ಒಂದಿಷ್ಟು ಹೋರಾಟ ನಡೆದ ಮೇಲೆ ಕೇವಲ ಒಂದು ಅಣುವಷ್ಟೆ ಅಂಡಾಣುವನ್ನು ಸೇರಿ ಭ್ರೂಣವಾಗುತ್ತದೆ. ಆ ಭ್ರೂಣ ವಿಕಸಿಸಿ, ತಾಯ ಗರ್ಭದಿಂದ ಗರ್ಭಚೀಲವನ್ನು ಒಡೆದು ಹೊರಬಂದಾಗಿನಿಂದಲೇ ಈ ಪ್ರಪಂಚದೊಂದಿಗಿನ ಮನುಷ್ಯನ ಸಂಬಂಧಕ್ಕೆ ಅಧಿಕೃತ ಚಾಲನೆ ದೊರಕಿಬಿಡುತ್ತದೆ. ಪ್ರತಿ ಮನುಷ್ಯನ ಹುಟ್ಟು ತನ್ನ ಜೊತೆ ಜೊತೆಗೆ ಸಂಬಂಧಗಳ ಹುಟ್ಟಿಗೂ ಕಾರಣವಾಗುತ್ತದೆ. ಸಂಬಂಧಗಳಿಲ್ಲದೆ ಮನುಷ್ಯನಿಗೆ ಸ್ವತಂತ್ರ ಅಸ್ತಿತ್ವವೇ ಇಲ್ಲವೇನೋ ಅನ್ನಿಸುವಷ್ಟರಮಟ್ಟಿಗೆ ಅವು ಅವನ ಜೀವನವನ್ನು ಪ್ರಭಾವಿಸುತ್ತವೆ.

ಹುಟ್ಟಿದ ತಕ್ಷಣ ಬೆಸೆಯುವ ಸಂಬಂಧಗಳಲ್ಲಿ ಆಯ್ಕೆಯ ಅವಕಾಶವಿರುವುದಿಲ್ಲ. ತಾಯಿಯೊಂದಿಗಿನ ಸಂಬಂಧ ಹುಟ್ಟಿಗಿಂತಲೂ ಮೊದಲೇ ಬೆಸೆದುಗೊಂಡಿದ್ದರೆ, ತಂದೆ, ಅಣ್ಣ, ಅಕ್ಕ, ಅಜ್ಜಿ, ಅಜ್ಜ... ಮುಂತಾದ ಸಂಬಂಧಗಳು ಮಗು ಇನ್ನೂ ಸರಿಯಾಗಿ ಕಣ್ಣು ಬಿಡುವ ಮುನ್ನವೇ, ಮುಷ್ಟಿ ಬಿಡಿಸಿಕೊಳ್ಳುವ ಮುನ್ನವೇ ಬೆಸೆದುಬಿಡುತ್ತವೆ. ಮುಂದೆ ಇವೇ ಸಂಬಂಧಗಳು, ಮತ್ತು ಅವು ನೀಡುವ ಸಂಸ್ಕಾರಗಳು ಆ ಮನುಷ್ಯನ ಸಮಾಜದ ಜೊತೆಗಿನ ಕೊಡುಕೊಳ್ಳುವಿಕೆಯನ್ನು, ನಡತೆಗಳನ್ನು ನಿರ್ಧರಿಸುತ್ತವೆ.

ಮನೆಯಾಚೆ ಕಾಲಿಡಲು ಕಲಿತಕೂಡಲೇ ಮಗು, ತನಗೆ ಹಿತವಾಗುವಂತೆ ತನ್ನದೇ ವಲಯಗಳೊಳಗೆ ತನ್ನಾಯ್ಕೆಯ ಸಂಬಂಧಗಳನ್ನು ಸೃಷ್ಟಿಸುತ್ತಾ ಸಾಗುತ್ತದೆ. ತಾನು ಬದುಕು ಕಟ್ಟಿಕೊಳ್ಳುವ ಪ್ರತಿ ಕ್ಷೇತ್ರದಲ್ಲಿಯೂ, ತನ್ನ ಬದುಕು ಹರಡಿಕೊಳ್ಳುವ ಪ್ರತಿ ಪರಿಸರದಲ್ಲೂ ಸಂಬಂಧಗಳಿಗೆ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಶಿಲನ್ಯಾಸ ನೆರವೇರಿಸುತ್ತಾ, ಇನ್ನು ಕೆಲವೊಮ್ಮೆ ತಾನು ಕಟ್ಟಿದ ಸಂಬಂಧವನ್ನು ತಾನೇ ಕೆಡವುತ್ತಾ ಮುಂದುವರಿಯುತ್ತಿರುತ್ತದೆ.

ಬದುಕು ವಿಸ್ತಾರವಾದಂತೆ, ಅವಶ್ಯಕತೆಗಳು ಬೆಳೆದಂತೆ, ಬೆಳಗಾಗೆದ್ದು ಮನೆ ಮುಂದೆ ಪೇಪರ್ ಹಾಕುವ ಹುಡುಗ, ಪಕ್ಕದ್ಮನೆ ಆಂಟಿ, ಎದುರು ಮನೆ ಅಂಕಲ್, ಒಟ್ಟಿಗೆ ಆಡಿ ಬೆಳೆದ ಗೆಳೆಯ, ತನ್ನ ಗಲ್ಲಿಯ ಮೂಲೆಯ ಮರದಡಿಯಲ್ಲಿ ಕೂತು ಹೂವು ಮಾರುವ ಹೆಣ್ಣುಮಗಳು, ದಿನಾ ಪ್ರಯಾಣ ಮಾಡುವ ಬಸ್ಸಿನ ಡ್ರೈವರ್, ಚಿಲ್ಲರೆಗಾಗಿ ಜಗಳ ಕಾಯುವ ಕಂಡಕ್ಟರ್, ಪ್ರತಿ ಚುನಾವಣೆ ಸಂದರ್ಭದಲ್ಲೂ ಹಲ್ಲು ಗಿಂಜುತ್ತ ವೋಟ್ ಕೇಳಲು ಬರುವ ರಾಜಕಾರಣಿ, ಅವನ ಒಂದಿಷ್ಟು ಹಿಂಬಾಲಕರು, ಅಂಕಗಣಿತದಿಂದ ಬದುಕಿನ ಗಣಿತದವರೆಗೂ ಕಲಿಸಿದ, ನಿರ್ದೇಶಿಸಿದ ಗುರುಗಳು, ಹೊಟ್ಟೆ ನೋವೆಂದಾಗ ಪುಟ್ಟ ಸರ್ಜರಿ ಮಾಡಿ ನೋವಿಂದ ರಿಲೀಫ್ ಒದಗಿಸಿಕೊಟ್ಟ ದಪ್ಪ ಕನ್ನಡಕದ ಡಾಕ್ಟರ್... ಹೀಗೆ ಸಂಬಂಧಗಳ ಪಟ್ಟಿ ಅಗಾಧವಾಗುತ್ತಾ ಹೋಗುತ್ತದೆ. ಮತ್ತು ಆ ಅಗಾಧತೆಯೇ ಎಣೆಯಿಲ್ಲದ ಸಹನೆ, ಒಂದಿಷ್ಟು ಪ್ರೀತಿ, ನಿಭಾಯಿಸಿಕೊಳ್ಳುವ ಜಾಣತನ ಎಲ್ಲವನ್ನೂ ಬೇಡತೊಡಗುತ್ತದೆ.

ಇನ್ನು, ಮನೆಯೊಳಗಿನ ಅಥವಾ ಮನೆಯಾಚಿಗಿನ ಅಷ್ಟೂ ಸಂಬಂಧಗಳು, ಅದರ ಸುತ್ತ ಹಬ್ಬಿಕೊಂಡಿರುವ ನವಿರು ಭಾವಗಳು, ಅದರಾಳದ ತಲ್ಲಣಗಳು, ಅವು ನೀಡುವ ಭರವಸೆಗಳು ಅಷ್ಟೇಕೆ ಪ್ರಪಂಚದ ಅಸ್ತಿತ್ವವೇ ನಿಂತಿರುವುದು ನಂಬಿಕೆಯೆಂಬ ತಿಳಿಯಾದ ಒರತೆಯ ಮೇಲೆ. ಒಮ್ಮೆ ಆ ತಿಳಿ ಒರತೆಗೆ ಒಂದೇ ಒಂದು ಹನಿ ಹಾಲಾಹಲ ಬಿದ್ದುಬಿಟ್ಟರೆ ಸಾಕು ಎಲ್ಲವೂ ಅಲ್ಲೋಲಕಲ್ಲೋಲವಾಗಿಬಿಡುತ್ತದೆ. ಹುಟ್ಟುತ್ತಲೇ ಜತೆಯಾದ ರಕ್ತ ಸಂಬಂಧಗಳು, ಏಳೇಳು ಜನ್ಮಗಳಲ್ಲೂ ಜೊತೆಯಿರುತ್ತೇವೆ ಅಂತ ಆಣೆ ಪ್ರಮಾಣ ಮಾಡಿಸಿಕೊಂಡ ಪ್ರೀತಿ, ಗಳಸ್ಯ ಕಂಠಸ್ಯ ಎಂಬಂತಿದ್ದ ಸ್ನೇಹ, ಪೇಪರ್ ಹುಡುಗನ ಜೊತೆಗಿನ ವ್ಯಾವಹಾರಿಕ ಸಂಬಂಧ ಎಲ್ಲವೂ ಆಕ್ಷಣದಲ್ಲಿ ಮುರಿದು ಬೀಳುತ್ತವೆ. ಹಲವು ಬಾರಿ ದೇಶ ದೇಶಗಳೊಳಗಿನ ದ್ವೇಷಕ್ಕೂ, ಮಹಾಯುದ್ಧಗಳಿಗೂ, ಅನಗತ್ಯದ ರಕ್ತಪಾತಗಳಿಗೂ ನಂಬಿಕೆ ದ್ರೋಹವೇ ಕಾರಣವಾಗಿರುವುದೂ ಇದೆ.

ಒಂದು  ಬಾರಿ, ಕೇವಲ ಒಂದು ಬಾರಿ ನಂಬಿಕೆ ದ್ರೋಹದ ಬೀಜ ಅಂಕುರವಾಗಿ ದ್ವೇಷ ಉದ್ಭವವಾದರೆ ಸಾಕು ಆವರೆಗಿನ ಎಲ್ಲಾ ಬಾಂಧವ್ಯಗಳು, ಮಧುರ ಸಾಂಗತ್ಯಗಳು ಆತ್ಮಹತ್ಯೆ ಮಾಡಿಕೊಂಡು ಬಿಡುತ್ತವೆ. ಆಗೆಲ್ಲಾ ನಾವೂ ಮನಸು ಕೆಡಿಸಿಕೊಂಡು, ನಮ್ಮ ಸುತ್ತಲಿರುವವರ ಮನಸೂ ಕೆಡಿಸುವುದಕ್ಕಿಂತ ಆ ದ್ರೋಹವನ್ನೂ ಮೀರಿ ಸಂಬಂಧ ಮುಂದುವರೆಸೋಕೆ ಸಾಧ್ಯಾನಾ? ಹಾಗೊಂದು ವೇಳೆ ಮುಂದುವರೆಸಿದರೆ ನಮ್ಮಿಂದ ಆ ಸಂಬಂಧ ನ್ಯಾಯ ಸಲ್ಲಿಸೋಕೆ ಸಾಧ್ಯಾನಾ? ಅಂತ ತಣ್ಣಗೆ ಯೋಚಿಸಿ ಸಂಬಂಧವನ್ನು ಉಳಿಸಿಕೊಳ್ಳೋಕೆ ಪ್ರಯತ್ನಿಸುವುದು ಜಾಣತನ. ಇಲ್ಲ, ಅದು ಸಾಧ್ಯವೇ ಇಲ್ಲ ಅಂತ ಪ್ರಾಮಾಣಿಕವಾಗಿ ಅನಿಸಿದರೆ  ಹಾದಿ ಬೀದಿ ರಂಪ ಮಾಡದೇ, ಶರಂಪರ ಜಗಳವಾಡದೇ, ಮೂರನೇಯವರ ಬಳಿ ತನಗಾದ ಮೋಸದ ಬಗ್ಗೆ ಅಳವತ್ತುಕೊಳ್ಳದೆ, ಆ ಸಂಬಂಧಕ್ಕೊಂದು ಗೌರವದ ತೆರೆಯೆಳೆದು ಮುಂದೆ ಸಾಗೋಣ. ಏನಂತೀರಿ?

ಕಾಡುವ ಪ್ರೇಮಕೆ ಕಾಡದ ಮರ

ಒಂದಿಷ್ಟು ಕಟ್ಟಿಗೆಯ ರಾಶಿ
ಹಾಕಿದ್ದೇನೆ ನೋಡು ಶಾಕುಂತಲೆ
ಶ್ರೀಗಂಧದ ತುಂಡುಗಳಲ್ಲ
ಅಡ್ಡಾದಿಡ್ಡಿ ಬೆಳೆದ
ಶುದ್ಧ ಕಾಡು ಮರಗಳು

ದಶದಿಕ್ಕುಗಳಿಗೂ ಚಂದನದ
ಪರಿಮಳ ಹೊಮ್ಮಬೇಕಿಲ್ಲ
ಯಾರ ನಾಸಿಕವೂ ಅರಳಬೇಕಿಲ್ಲ
ಒಂದು ವ್ಯರ್ಥ ಪ್ರೇಮಕಥೆಯ
ಸುಡಬೇಕಿದೆ ಅಷ್ಟೆ

ಮಾಡಿದ ಆಣೆ ಪ್ರಮಾಣ
ಇತ್ತ ಬೆಚ್ಚನೆಯ ಭರವಸೆಯ
ಮರೆತು ಹಾಯಾಗಿರುವವನ ಹಾದಿಯ
ಕಾಯುತ್ತಾ ಕೂತಿದ್ದಾಳೆ ಇಲ್ಲೊಬ್ಬ ಹುಡುಗಿ
ನದಿ ದಂಡೆಯ ಮೇಲೆ ಕಾಲು ಚಾಚಿ

ಮೀನ ಗರ್ಭ ಸೀಳಿ ಹೊಳೆವ
ಉಂಗುರ ಬಂದು ಅವಳೆದೆಯ
ಸಂಭ್ರಮಕ್ಕೆ ಜೊತೆಯಾಗುತ್ತದೆಂಬ
ನಿರೀಕ್ಷೆ ಇರಲೂಬಹುದೇನೋ
ಗೊತ್ತಿಲ್ಲ; ನನಗವಳ ಬದುಕು ಮುಖ್ಯ

ನಿನಗಾದರೂ ಪ್ರೀತಿಯ ಸಾಕ್ಷಿಗೆ
ರಾಜಮುದ್ರೆಯ ಉಂಗುರವಿತ್ತು ಶಾಕುಂತಲೆ
ಅವಳದೋ? ಸಾಕ್ಷಿಯಿಲ್ಲದ ಪ್ರೀತಿ
ಅರ್ಥವಿಲ್ಲದ ನಿರೀಕ್ಷೆ
ಸಾಬೀತುಪಡಿಸಲಾಗದ ಒಲವು

ನನಗೀಗ ತುರ್ತಾಗಿ ಅವಳ
ಬಹು ಅವಧಿಯ ಭ್ರಮೆಯನು ಒಡೆಯಬೇಕಿದೆ
ನಿನ್ನೆಗಳಲೇ ಹುದುಗಿರುವ ಅವಳನು
ಇಂದಿಗೆ ಎಳೆದು ತಂದು ನಿರ್ಮಲ
ನಾಳೆಗಳಿಗೆ ಮುಖಾಮುಖಿಯಾಗಲು ಸಜ್ಜಾಗಿಸಬೇಕಿದೆ

ಬುಧವಾರ, ಏಪ್ರಿಲ್ 6, 2016

ಹಾಸಿಗೆ ಇದ್ದಷ್ಟೇ ಏಕೆ ಕಾಲು ಚಾಚಬೇಕು?

'ಈ ಕೆಳಗಿನ ಗಾದೆ ಮಾತನ್ನು ವಿಸ್ತರಿಸಿ ಬರೆಯಿರಿ'.
ಹಾಗಂತ ಪ್ರಶ್ನೆ ಪತ್ರಿಕೆಯಲ್ಲಿ  ದಪ್ಪ ಅಕ್ಷರದಲ್ಲಿ ಅಚ್ಚಾಗಿ ಬಂದ ಪ್ರಶ್ನೆಗೆ ಎಲ್ಲಿಂದೆಲ್ಲಿಗೋ ಸಂಬಂಧ ಕಲ್ಪಿಸಿ ನಾವೆಲ್ಲಾ ಉತ್ತರ ಬರೆದವರೇ. ಊರ ಅರಳಿಕಟ್ಟೆಯಡಿಯಲ್ಲಿ ಅನುಭವಕ್ಕೆ ದಕ್ಕಿಯೋ, ಮಾತಿನ ಮಧ್ಯೆ ನುಸುಳಿಯೋ ಹುಟ್ಟಿದ ಗಾದೆ ಮಾತಿಗೆ ಅದೆಲ್ಲೋ ದೂರದ ಅಮೇರಿಕಾದ ಶ್ವೇತಭವನದಲ್ಲಿ ಕಾಲಮೇಲೆ ಕಾಲು ಹಾಕಿ ಕುಳಿತ ಬಿಲ್ ಕ್ಲಿಂಟನ್‍ನ್ನು ಲಿಂಕಿಸಿ, ಎರಡು ಸಮಾಂತರ ರೇಖೆಗಳನ್ನು ಶೂನ್ಯದಲ್ಲಿ ಛೇದಿಸಿ ಎರಡೂ ಒಂದೇ ಎಂದು ಸಾಧಿಸಿದವರು ಅಥವಾ ಪ್ರಶ್ನೆಪತ್ರಿಕೆಯ ಭಾಷೆಯಲ್ಲೇ ಹೇಳುವುದಾದರೆ ವಿಸ್ತರಿಸಿ ಬರೆದವರು ನಾವು.

'ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳ್' ಎಂದು ಆದಿಕವಿ ಪಂಪನಿಂದ ಹೊಗಳಿಸಿಕೊಂಡ ಒಂದು ಭವ್ಯತಲೆಮಾರಿನ ಹಿರೀಕರು ತಮ್ಮ ಅನುಭವದಿಂದ ಮಥಿಸಿ ತೆಗೆದ ನವನೀತಗಳೇ ಈ ಗಾದೆಗಳು. ಉದಾತ್ತ ಜೀವನ ಮೌಲ್ಯಗಳನ್ನು ಕೇವಲ ಒಂದು ಸಾಲಿನಲ್ಲಿ ಹೇಳಿಬಿಡುವ ಇವುಗಳು ಒಂದು ರೀತಿಯಲ್ಲಿ ನಮ್ಮ ಅತ್ಯುಚ್ಛ ಜನಪದ ಸಾಹಿತ್ಯಕ್ಕೆ, ಅದರ ಆಳದಲ್ಲಿನ ಸಾಂದ್ರ ಜೀವಾನನುಭವಕ್ಕೆ ಹಿಡಿಯುವ ಕೈಗನ್ನಡಿಗಳು.

ಇರಲಿ, ನಾನಿಲ್ಲಿ ಪ್ರಸ್ತಾಪಿಸಹೊರಟಿದ್ದ ಅಸಲಿ ವಿಷಯ ಅದಲ್ಲ. ನಿಜಕ್ಕೂ ನನ್ನ ತಕರಾರಿರುವುದೇ 'ಹಾಸಿಗೆ ಇದ್ದಷ್ಟೇ ಕಾಲು ಚಾಚು' ಅನ್ನುವ ಗಾದೆಯ ಬಗ್ಗೆ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಅಲ್ಪತೃಪ್ತರಾಗುವುದಕ್ಕಿಂತ ಕಾಲಿರುವಷ್ಟು ಅಥವಾ ಕಾಲನ್ನೂ ಮೀರಿ ಹಾಸಿಗೆ ಹೊಲಿಸಿಕೊಳ್ಳಬಹುದಲ್ಲಾ?

ಹಾಸಿಗೆಯ ಗಾದೆಗೆ ಜೋತು ಬಿದ್ದ ಪ್ರತಿ ಮನುಷ್ಯ ತನ್ನ ಸುತ್ತ ಒಂದು ಕೋಟೆ ಕಟ್ಟಿಕೊಂಡು ಆ ಕೋಟೆಯೊಳಗೆ ತನ್ನನ್ನು ತಾನು safe ಅಂದುಕೊಂಡು ಬದುಕುತ್ತಿರುತ್ತಾನೆ. ಕೋಟೆಯ ಹೊರಗಡೆ ಒಂದಿಂಚು ಕಾಲಿಟ್ಟರೂ ಎಲ್ಲಿ ತನ್ನ ಬದುಕಿನ ಆಯ ತಪ್ಪಿಬಿಡುತ್ತದೋ ಅನ್ನುವ ಭಯಕ್ಕೆ ಬಿದ್ದುಬಿಡುತ್ತಾನೆ. ಪರಿಣಾಮ, ತಾವು ಕಟ್ಟಿಕೊಂಡ ಕಂಫರ್ಟ್ ಝೋನ್‍‍ನೊಳಗೆ ತಮ್ಮನ್ನು ಬಂಧಿಸಿಕೊಂಡು 'ಸುಖೀ' ಅನ್ನುವ ಭ್ರಮೆಯನ್ನು ಪ್ರತಿದಿನ ನವೀಕರಿಸುತ್ತಲೇ ಹೋಗುತ್ತಾನೆ.

ದಿನಾ ಬೆಳಗಾದ್ರೆ, ಅದೇ ಸ್ನಾನ, ಅದೇ ತಿಂಡಿ, ಅದೇ ಸಿಟಿ ಬಸ್, ಅದೇ ಧಾವಂತ, ಅದೇ ಆಫೀಸ್, ಮತ್ತೆ ಮಧ್ಯಾಹ್ನದ ಊಟ, ಒಂದಿಷ್ಟು ಹೊತ್ತು ವಿರಾಮ, ಮತ್ತೆ ಕಂಪ್ಯೂಟರ್, ಸಂಜೆಗೆ ಮತ್ತದೇ ಸಿಟಿ ಬಸ್, ಕಂಡಕ್ಟರ್ ಜೊತೆಗಿನ ವೃಥಾ ಜಗಳ, ಟೀ, ರಾತ್ರಿಯೂಟ, ಮತ್ತೆ ಬೆಳಗು, ಕೆಲವು ಅಲ್ಪತನಗಳು... ಹೀಗೆ ಬದುಕಿನ ಹಲವು ಅಮೂಲ್ಯ, ಮತ್ತೊಮ್ಮೆ ಹಿಂದಿರುಗಿ ಬರಲಾರದ ದಿನಗಳು ಅದೇ ಹಾಸಿಗೆಯಲ್ಲಿ ಕಾಲು ಚಾಚೋಕಾಗದೆ ಮುದುರಿಕೊಂಡು ಮಲಗಿಬಿಡುತ್ತವೆ. ಅಲ್ಲಿ ಹೊಸತನಕ್ಕೆ, ಹೊಸ ಅನುಭವಗಳಿಗೆ, ಹೊಸ ಸಂವೇದನೆಗಳಿಗೆ ಜಾಗವೇ ಇರುವುದಿಲ್ಲ.

ನೀವು ಗಮನಿಸಿರಲೂಬಹುದು, ಕೆಲವರು ಇನ್ನೂ ಮೂವತ್ತೈದು ದಾಟುವ ಮುನ್ನವೇ 'ಬದುಕು ಬೋರ್ ಕಣ್ರೀ' ಅಂತ ಗೊಣಗುತ್ತಿರುತ್ತಾರೆ. ನೀವೇನಾದ್ರೂ 'ಹೊಸತನ್ನು ಪ್ರಯತ್ನಿಸಿ' ಅಂತ ಸಲಹೆ ಕೊಡೋಕೆ ಹೋದ್ರೆ ನಿಮ್ಮ ಮುಖಕ್ಕೆ ರಾಚುವಂತೆ 'ನಾನು ನೆಮ್ಮದಿಯಾಗಿದ್ದೇನೆ, ಬಿಡಿ' ಅಂತಂದು ದೂರ್ವಾಸ ಮುನಿಯ ದೂರದ ಸಂಬಂಧಿಯೇನೋ ಎಂಬಂತೆ ಎದ್ದುಹೋಗುತ್ತಾರೆ. ಅಸಲಿಗೆ ಹಾಸಿಗೆ ಇದ್ದಷ್ಟೇ ಕಾಲುಚಾಚುವವರ ಕೆಟಗರಿಯ ಮೊದಲ ಸಾಲಲ್ಲಿ ಇರುವವರೇ ಅವರು.

ನಿಜ, ಬದುಕಲ್ಲಿ ಅನಗತ್ಯದ ಅಪಾಯ ಮೇಲೆಳೆದುಕೊಳ್ಳಬಾರದು. ಒಂದು ಪುಟ್ಟ ಬೆಟ್ಟ ಹತ್ತಲಾಗದವರು ಎವರೆಸ್ಟ್ ಏರುತ್ತೇನೆಂದು ಹೊರಡುವುದು, ಅಥವಾ ಆಪದ್ಧನವೆಂದು ಕೂಡಿಟ್ಟ ಬ್ಯಾಂಕ್ ಬ್ಯಾಲೆನ್ಸನ್ನು ಸುರಿದು ಒಂದು ಅಸಂಬದ್ಧ ಸಿನಿಮಾ ನಿರ್ಮಿಸುವುದು, ಇನ್ನೂ ಕಾಲೇಜು ಮಟ್ಟದಲ್ಲಿ ಆಡುತ್ತಿರುವ ಹುಡುಗ ಇನ್ನೆರಡೇ ದಿನಗಳಲ್ಲಿ ರಾಷ್ಟ್ರೀಯ ತಂಡ ಸೇರಿ ಸೆಂಚುರಿ ಬಾರಿಸುತ್ತೇನೆ ಅಂತಂದುಕೊಳ್ಳುವುದು, ಕೈಕಾಲು ನಡುಗೋ ವಯಸ್ಸಲ್ಲಿ ಹೊಸದಾಗಿ ಗಿಟಾರ್ ಕಲಿಯೋಕೆ ಹೋಗಿ ಒಂದೇ ದಿನದಲ್ಲಿ ರಾಕ್ ಸ್ಟಾರ್ ಆಗುತ್ತೇನೆ ಅಂದುಕೊಳ್ಳುವುದು ಎಲ್ಲಾ ಅವಿವೇಕ ಮತ್ತು ಮೂರ್ಖತನಗಳೇ. ಆದರೆ calculated risk ತೆಗೆದುಕೊಳ್ಳುವಲ್ಲೂ, ತೀರಾ ಸಾಮಾನ್ಯ ಅನ್ನುವಂತಹ ಅಪಾಯಗಳನ್ನು ಕೈಗೆತ್ತಿಕೊಳ್ಳುವಲ್ಲೂ ಹಾಸಿಗೆಯ ಉದ್ದ, ಅಗಲ ಅಳೆಯುವುದು ಎಷ್ಟು ಸರಿ?

ಒಂದಂತೂ ನಿಜ, ಹೊಸ ಅನುಭವದ ಜ್ಞಾತ-ಅಜ್ಞಾತ ಮಗ್ಗುಲುಗಳನ್ನು, ಸ್ಪಷ್ಟ-ಅಸ್ಪಷ್ಟ ಅರಿವುಗಳನ್ನು, ಸುಪ್ತ-ಜಾಗೃತ ಪದರುಗಳನ್ನು, ಕೂಡಿಕೊಂಡ-ಕವಲೊಡೆದ ದಾರಿಗಳನ್ನು, ಆರೋಹಣ-ಅವರೋಹಣಗಳ ವಿವಿಧ ಮುಖಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಹಾಸಿಗೆ ಮೀರಿ ಕಾಲುಚಾಚಲೇ ಬೇಕು. ಹಾಗೆ ಚಾಚಿದಾಗೆಲ್ಲಾ, ಮಹಾ ಎಂದರೆ ಒಂದಿಷ್ಟು ಬಿಸಿ ಅಥವಾ ತಣ್ಣನೆಯ ಅನುಭವವಾಗಬಹುದು ಅಷ್ಟೇ. ಅದೂ ಆಗಿ ಬಿಡಲಿ, ಯಾಕೆಂದರೆ ಬದುಕು ಪಕ್ವವಾಗುವುದು ಅಂತಹ ಅನುಭವಗಳಿಂದಲೇ. ಅಲ್ಲವೇ?

ಸೋಮವಾರ, ಏಪ್ರಿಲ್ 4, 2016

ಬದುಕು ಕಟ್ಟಿಕೊಟ್ಟ ಅವಳನ್ನು ಅವನೇಕೆ ದೂರ ಸರಿಸಿದ?

ಬಹುಶಃ ನಾವೆಲ್ಲರೂ ಸಿಂಡ್ರೆಲ್ಲಾ ಕಥೆ ಓದಿ/ಕೇಳಿ, ಅವಳಿಗಾಗಿ ಮರುಗುತ್ತಾ, ಅವಳ ಚಿಕ್ಕಮ್ಮನನ್ನು ನಖಶಿಖಾಂತ ದ್ವೇಷಿಸುತ್ತಾ ಬೆಳೆದವರೇ. ಮಲತಾಯಿಯೆಂದರೆ ಹೆಣ್ಣಿನ ರೂಪದ ರಾಕ್ಷಸಿ ಮತ್ತು ಒಳ್ಳೆಯತನಕ್ಕೆ ಕೊನೆಗಾದರೂ ಜಯ ಇದ್ದೇ ಇರುತ್ತದೆ ಅನ್ನುವ ಕಲ್ಪನೆ ಮೊಳಕೆಯೂಡೆಯಲು ಕಾರಣ ಸಿಂಡ್ರೆಲ್ಲಾ ಮತ್ತು ಅಂತಹ  happy ending fairy taleಗಳೇ. ಆದ್ರೆ ನಾನಿಲ್ಲಿ ನಿಮಗೆ ಹೇಳಹೊರಟಿರುವುದು ಸಿಂಡ್ರೆಲ್ಲಾ ಕಥೆಗೆ ತೀರಾ ವ್ಯತಿರಿಕ್ತವಾದ ಕಥೆ.

ನಮ್ಮೂರಿನ ಪಕ್ಕದ ಊರಿದೆಯಲ್ವಾ, ಅದರ ಪಕ್ಕದ ಊರಲ್ಲಿ ಜಾತಿಗಳ ಹಂಗಿಲ್ಲದೆ, ಅಂಧ ಧರ್ಮಾಭಿಮಾನವಿಲ್ಲದೆ, ಕೇವಲ ಮನುಷ್ಯತ್ವವನ್ನು ಮಾತ್ರ ಆದರಿಸುವ ಒಬ್ಬ ಅಪ್ಪಟ ಕರಾವಳಿ ಮಣ್ಣಿನ ಮಗನಿದ್ದಾರೆ. ಅವರ ಮನೆಯ ನಾಲ್ಕೂ ಸುತ್ತಲೂ ಭತ್ತದ ಗದ್ದೆ, ಗದ್ದೆಯ ಮಧ್ಯದಲ್ಲೊಂದು ಕೆರೆ, ತುಸು ಹಿಂದಕ್ಕೆ ಬಂದರೆ ಮನೆ ಹಿತ್ತಲಿಗೆ ಅಂಟಿಕೊಂಡಂತೆ ಕೊಟ್ಟಿಗೆ, ಅಲ್ಲಿ ಸಹಬಾಳ್ವೆ ನಡೆಸುವ ಆಡುಗಳು ಮತ್ತು ದನಗಳು, ಅದರ ಹೊರಗೆ ಗೂಟಕ್ಕೆ ಕಟ್ಟಿರುವ ಕಪ್ಪು ನಾಯಿ... ಆ ಮನೆಯಲ್ಲೊಬ್ಬ ಹಾಲುಮನಸ್ಸಿನ ಬೊಗಸೆ ಕಂಗಳ ಮುದ್ದು ರಾಜಕುಮಾರಿ. ಮನೆಯ ಅಟ್ಟದಲ್ಲಿಟ್ಟ ಭತ್ತದ ಮೂಟೆಗಳನ್ನು ಇಲಿಗಳು ತಿಂದು ಹಾಳುಮಾಡುತ್ತವೆ ಎಂದು ಅವಳಪ್ಪ ಇಲಿ ಬೋಣು ತಂದಿಟ್ರೆ ಮೂತಿ ಉದ್ದ ಮಾಡ್ಕೊಂಡು ಉಪವಾಸ ಸತ್ಯಾಗ್ರಹ ಮಾಡುವಷ್ಟು ಮುಗ್ಧೆ ಆಕೆ. ಇಲಿ ಬೋಣಿಂದ ನಿಂಗೇನಮ್ಮ ಕಷ್ಟ ಅಂತ ಕೇಳಿದ್ರೆ, ಆ ಬೋಣಲ್ಲೇನಾದ್ರೂ ಅಮ್ಮ ಇಲಿ ಸಿಕ್ಕಿಹಾಕಿಕೊಂಡು ಸತ್ತುಹೋದ್ರೆ ಮರಿ ಇಲಿಗಳೆಲ್ಲಾ ಅನಾಥವಾಗಿಬಿಡುತ್ತಲ್ಲಾ ಅನ್ನುತ್ತಿದ್ದಳವಳು.

ಹೀಗಿದ್ದ ನಮ್ಮ ರಾಜಕುಮಾರಿ ಇನ್ನೂ ಪದವಿ ಓದ್ತಿರ್‍ಬೇಕಾದ್ರೆ ದಸರೆ ರಜೆಗೆಂದು ಮೈಸೂರಲ್ಲಿದ್ದ ಗೆಳತಿ ಮನೆಗೆ ಹೋದ್ಳು. ಅಲ್ಲಿ ದಸರೆ ನೋಡಿದ್ಳೋ, ಬಿಟ್ಳೋ ಗೊತ್ತಿಲ್ಲ. ಆದ್ರೆ ಪಕ್ಕದ ಮನೆಯಲ್ಲಿದ್ದ ಹತ್ತು ವರ್ಷದ ತಾಯಿಯಿಲ್ಲದ ಮಗು ಅವಿನಾಶನನ್ನು ವಿಪರೀತ ಅನ್ನುವಷ್ಟು ಹಚ್ಚಿಕೊಂಡುಬಿಟ್ಳು.

ಅಲ್ಲಿಂದ ಊರಿಗೆ ಬಂದವ್ಳೇ, ತಾನು ಮದುವೆ ಅಂತ ಆಗುವುದಾದರೆ ಅವನಪ್ಪನನ್ನು ಮಾತ್ರ ಅಂತ ತನ್ನ ತೀರ್ಮಾನ ಹೇಳ್ಬಿಟ್ಳು. ಅಪ್ಪ-ಅಮ್ಮ ಅವಳನ್ನು ಎಷ್ಟೇ ಕೇಳಿಕೊಂಡರೂ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂತ ಖಡಾಖಂಡಿತವಾಗಿ ನಿಂತಳು. ಎಂದೂ ಬಯ್ಯದ ಅಪ್ಪ ಎರಡೇಟು ಹೊಡೆದು ಬುದ್ಧಿ ಹೇಳೋಕೆ ಪ್ರಯತ್ನಿಸಿದ್ರು, ಅಮ್ಮ ಕಣ್ಣೇರು ಹಾಕುತ್ತಾ ಮೂಲೆ ಸೇರಿದ್ರು. ಕೊನೆಗೆ ಅವಳ ಮೈಸೂರಿನ ಗೆಳತಿಯನ್ನು ಕರೆಸಿ ಬುದ್ಧಿ ಹೇಳಿಸಿದ್ದೂ ಆಯಿತು. ಊಹೂಂ, ಅವಳು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇರಲೇ ಇಲ್ಲ.

ನೀನೇನೇ ತಿಪ್ಪರಲಾಗ ಹಾಕಿದ್ರೂ ಈ ಮದುವೆಯನ್ನು ಒಪ್ಪಿಕೊಳ್ಳೋಕೆ ಸಾಧ್ಯಾನೇ ಇಲ್ಲ ಅಂತ ಅಪ್ಪನೂ ಖಡಾಖಂಡಿತವಾಗಿ ನಿಂತ್ರು. ನಮ್ಮ ರಾಜಕುಮಾರಿ ಆದರ್ಶದ ಅಮಲಲ್ಲೋ ಅಥವಾ ಆ ಮಗುವಿನ ಮೇಲಿನ ಅವಳ ಸಹಜ ಅಂತಃಕರಣದಿಂದಲೋ ಹೇಳದೆ ಕೇಳದೆ ಒಂದು ರಾತ್ರಿ ಮನೆಬಿಟ್ಟು ಹೊರಟು ಹೋದಳು. ಹದಿನಾರಂಕದ ಆ ಮನೆಯ ಪೂರ್ತಿ ಸ್ಮಶಾನ ಮೌನ, ಆಗೊಮ್ಮೆ ಈಗೊಮ್ಮೆ ಬಿಕ್ಕಳಿಸುವ ಶಬ್ಧವೊಂದನ್ನು ಬಿಟ್ಟರೆ ಅಲ್ಲಿ ಇನ್ನಾವ ಸದ್ದಿಗೂ ಜಾಗವೇ ಇರ್ಲಿಲ್ಲ. ತನ್ನ ಒಡತಿಯ ವಿದಾಯವನ್ನು ಸಹಿಸಲಾರದ ಆಡು, ದನಗಳೂ ’ಅಂಬಾ’ ಅನ್ನುವುದನ್ನೇ ಮರೆತುಬಿಟ್ಟವು.

ಆಯ್ತಲ್ಲಾ, ಮನೆ ಬಿಟ್ಟು ಹೋದ್ಳು ಅಂದ್ನಲ್ಲಾ, ಹಾಗೆ ಹೋದವಳು ತನ್ನ ಗೆಳತಿಯ ಮನೆಗೂ ಹೋಗದೆ, ಅವಿನಾಶನ ಮನೆಗೇ ಹೊಗಿ, ಅವನಪ್ಪನ ಬಳಿ "ನೋಡಿ, ನಾನು ಮನೆಬಿಟ್ಟು ಬಂದಿದ್ದೇನೆ, ನಾಳೆ ಬೆಳಗ್ಗೆ ಎಲ್ಲಾದರೂ ಸರಿ ನಮ್ಮ ಮದುವೆ ಆಗ್ಲೇಬೇಕು" ಅಂದಳು. ಅವರಿಗೆ ನಿಜಕ್ಕೂ ಇವಳ ಮದುವೆಯಾಗುವ ಮನಸ್ಸಿತ್ತೋ ಇಲ್ವೋ ಗೊತ್ತಿಲ್ಲ, ಮರುದಿನ ಬೆಳಗ್ಗೆ ಆಗುತ್ತಿದ್ದಂತೆ ದೇವಸ್ಥಾನವೊಂದರಲ್ಲಿ ಹಾರ ಬದಲಾಯಿಸಿಕೊಂಡರು. ಅಲ್ಲಿಗೆ ವಿದ್ಯುಕ್ತವಾಗಿ ಆಕೆ ಅವಿನಾಶನ ತಾಯಿಯಾಗಿಬಿಟ್ಳು, ಅಂದರೆ ನಮ್ಮ ಸಿಂಡ್ರೆಲ್ಲಾ ಕಥೆಯಲ್ಲಿರುವಂತೆ ಚಿಕ್ಕಮ್ಮನಾದಳು.

ಆದ್ರೆ ಸಿಂಡ್ರೆಲ್ಲಾಳ ಚಿಕ್ಕಮ್ಮನಂತೆ ಮಲತಾಯಿಯಾಗದೆ, ಮಮತಾಮಯಿಯಾದಳು. ಮದುವೆಯ ಮೊದಲ ರಾತ್ರಿಯೇ ಗಂಡನ ಬಳಿ ’ ಅವಿನಾಶ ತಾನೇ ತಾನಾಗಿ ತಮ್ಮನೋ/ತಂಗಿಯೋ ಬೇಕು ಅನ್ನುವವವರೆಗೂ ನಮಗೆ ಮಕ್ಕಳಾಗೋದೇ ಬೇಡ’ ಅಂದ್ಳು. ಅವರೂ ಒಪ್ಪಿಕೊಂಡರು. ಆದ್ರೆ ಯಾವುದೂ ಅಲ್ಲಿ ಅವಳಂದುಕೊಂಡಂತೆ ಇರಲಿಲ್ಲ. ತನ್ನ ತಾಯಿಯ ಸ್ಥಾನದಲ್ಲಿ ಇನ್ಯಾರೋ ಬಂದಿರುವುದನ್ನು ಸಹಿಸಿಕೊಳ್ಳಲು ಅವಿನಾಶ ಸಿದ್ಧನಿರಲಿಲ್ಲ. ಮೊದಮೊದಲು ಅವಳ ಜೊತೆ ಜಗಳವಾಡಲು ಪ್ರಯತ್ನಿಸುತ್ತಾ, ಅಸಹಕಾರ ಚಳವಳಿ ಮಾಡಿ, ತಂದೆಯ ಬಳಿ ಅವಳ ದೂರು ಹೇಳಿ ಮನೆಯಿಂದ ಓಡಿಸಲು ಪ್ರಯತ್ನಪಟ್ಟ. ಅದ್ಯಾವುದೂ ಫಲಕಾರಿಯಾಗಲಿಲ್ಲ ಅಂತಾದಮೇಲೆ ಒಂದುದಿನ ಮೈ ಪೂರ್ತಿ ಬಾಸುಂಡೆ ಬರುವ ಹಾಗೆ ತಾನೇ ಅಪ್ಪನ ಬೆಲ್ಟಲ್ಲಿ ಹೊಡೆದುಕೊಂಡು, ಅಪ್ಪ ಬಂದಾಗ ಇದೆಲ್ಲಾ ಅಮ್ಮನೇ ಮಾಡಿದ್ದು ಅಂತ ಕಣ್ಣೀರಿಟ್ಟ.

ಅವನ ಕಣ್ಣೀರಿಗೆ ಕರಗಿದ ಅಪ್ಪ, ಹಿಂದು ಮುಂದು ಯೋಚಿಸದೆ, ಅವಳನ್ನು ಚೆನ್ನಾಗಿ ದಬಾಯಿಸಿಬಿಟ್ಟ. ಅಷ್ಟೂ ಸಾಲದೆಂಬಂತೆ ಎರಡೇಟು ಹೊಡೆದೂಬಿಟ್ಟ. ಇನ್ನೇನು ಚಿಕ್ಕಮ್ಮ ಇದೆಲ್ಲಾ ನಾನೇ ಮಾಡಿದ್ದು ಅಂತ ಅಂದುಬಿಡುತ್ತಾಳೇನೋ ಅಂತ ಭಯಪಡುತ್ತಿರಬೇಕಾದರೆ ನಮ್ಮ ರಾಜಕುಮಾರಿ ಮನೆಬಿಟ್ಟು ಬಂದನಂತರ ಮೊದಲಸಲ ಅಪ್ಪ ಅಮ್ಮನನ್ನು ನೆನೆಸಿಕೊಂಡಳು. ಅದೆಷ್ಟು ಮುದ್ದಿನಿಂದ, ಪ್ರೀತಿಯಿಂದ ನನ್ನ ಬೆಳೆಸಿದ್ದರಲ್ಲಾ ಅಂದುಕೊಂಡಳು. ಅಪ್ಪ-ಅಮ್ಮನ ಪ್ರೀತಿ, ಮಮತೆ ವಾತ್ಸಲ್ಯ ನೆನಪಾಗುತ್ತಲೆ ಅವಿನಾಶನ ಬಗೆಗೆ ಅವಳಿಗಿದ್ದ ಪ್ರೀತಿ ಮತ್ತಷ್ಟು ಸಾಂದ್ರವಾಯಿತು. ಗಂಡ ಬಯ್ಯುತ್ತಿದ್ದರೂ ಅವಳು ಎಲ್ಲವನ್ನೂ ತುಟಿಕಚ್ಚಿ ಸಹಿಸಿಕೊಂಡಳು.

ಆ ರಾತ್ರಿ ಮೊದಲ ಬಾರಿ ಅವಳ ಬಗ್ಗೆ ಅವಿನಾಶನಿಗೆ ಕನಿಕರ ಮೂಡಿತು. ತಾನು ಅಂದುಕೊಂಡಷ್ಟು ಆಕೆ ಕೆಟ್ಟವಳಲ್ಲ ಅನಿಸತೊಡಗಿತು. ದಿನ ಕಳೆದಂತೆ ಅವನ ಹಠ, ಕೋಪ, ಸಿಟ್ಟು, ಸೆಡವು ಕಡಿಮೆಯಾಗುತ್ತಾ ಬಂತು. ಒಂದಿನ ಪೂರ್ತಿಯಾಗಿ ಅವನು ಅವಳನ್ನು ಅಮ್ಮನೆಂದು ಒಪ್ಪಿಕೊಂಡ. ತಾನು ಇದುವರೆಗೆ ಮಾಡಿದ ತಪ್ಪುಗಳನ್ನೆಲ್ಲಾ ಅವನೆದೇ ಭಾಷೆಯಲ್ಲಿ ಅಪ್ಪನೆದುರು ಒಪ್ಪಿಕೊಂಡು ಕ್ಷಮೆ ಕೇಳಿದ. ಅವಳ ಕಣ್ಣಂಚಲ್ಲಿ ತೆಳುವಾಗಿ ನೀರು ಹರಡಿಕೊಂಡು ಸಾರ್ಥಕಭಾವ ಸೆರೆಯಾಗತೊಡಗಿತು, ಇತ್ತ ಊರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರು ಹಗ್ಗ ಬಿಚ್ಚಿಸಿಕೊಂಡು ಅಮ್ಮನ ಕೆಚ್ಚಲಿಗೆ ಬಾಯಿಹಾಕಿತು.

ಇಷ್ಟಾಗುವಾಗಾಗಲೇ ಅವಳ ಅಪ್ಪ ಅಮ್ಮನಿಗೂ ಅವಳ ಮೇಲಿದ್ದ ಕೋಪ ಕರಗಿ ಅವಳನ್ನು ಯಾವಾಗೊಮ್ಮೆ ಕಾಣುತ್ತೇವೆಯೋ ಅನಿಸತೊಡಗಿತ್ತು. ಮಗ ತನ್ನನ್ನು ಅಮ್ಮನೆಂದು ಒಪ್ಪಿಕೊಂಡಮೇಲೆ ಇವಳಿಗೂ ಅಪ್ಪ-ಅಮ್ಮ, ಅವರ ಪ್ರೀತಿ, ತಾನು ಅವರಿಗೆ ಕೊಟ್ಟ ನೊವು ಬಹುವಾಗಿ ಕಾಡತೊಡಗಿತು. ಅಪರಾಧಿ ಪ್ರಜ್ಞೆ ಅವಳೊಳಗೆ ಬೆಳೆಯತೊಡಗಿದಂತೆ ಗಂಡನನ್ನೂ, ಮಗನನ್ನು ಕರೆದುಕೊಂಡು ಮತ್ತೆ ಊರಿಗೆ ಬಂದು ಅಪ್ಪನ ಮುಂದೆ ತಲೆ ಬಗ್ಗಿಸಿ ನಿಂತಳು. ಮೊದಮೊದಲು ಅಪ್ಪ ಬಿಗುಮಾನ ತೋರಿದರೂ, ಇಲ್ಲದ ಕೋಪವನ್ನು ಪ್ರದರ್ಶಿಸಿದರೂ, ಅವಳು ಬಂದು ಇನ್ನೂ ಪೂರ್ತಿ ಇಪ್ಪತ್ತನಾಲ್ಕು ತಾಸು ಕಳೆಯುವ ಮುನ್ನವೇ ಅವಳನ್ನು ಮತ್ತೆ ಒಪ್ಪಿಕೊಂಡರು. ಆಕೆ ತುಸು ಪ್ರೌಢವಾಗಿದ್ದಳು ಅನ್ನುವುದನ್ನು ಬಿಟ್ಟರೆ ಇನ್ನಾವ ಮಹತ್ತರ ಬದಲಾವಣೆಯೂ ಅವಳಲ್ಲಿ ಆಗಿರಲೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವಳ ಮುಗ್ಧತೆಯಿನ್ನೂ ಉಳಿದುಕೊಂಡಿತ್ತು.

ಅಪ್ಪ-ಅಮ್ಮನೂ ಒಪ್ಪಿಕೊಂಡಮೇಲೆ ಇನ್ನಾವ ನೋವೂ ಉಳಿದಿಲ್ಲ ಎಂಬಂತೆ ಅವಳು ತವರೂರಿನ ಇಂಚು ಇಂಚನ್ನೂ ಮಗನಿಗೆ ಪರಿಚಯಿಸಿದಳು, ಗೆಳತಿಯರ ಬಳಿ ಮೈಸೂರಿನ ಬಗ್ಗೆ ತುಸು ಹೆಚ್ಚೇ ಅನ್ನುವಷ್ಟು ಹೇಳಿಕೊಂಡಳು, ತಾನು ಕೈಯಾರೆ ಹುಲ್ಲು ತಿನ್ನಿಸುತ್ತಿದ್ದ ಆಡಿನ ಮರಿ ಅದೆಷ್ಟು ಬೇಗ ಬೆಳೆದು ದೊಡ್ಡದಾಗಿದೆಯಲ್ಲಾ ಎಂದು ಅಚ್ವರಿಪಟ್ಟಳು, ಮನೆಬಿಟ್ಟು ಹೋಗುವಾಗ ಇನ್ನೂ ಕಣ್ಣುಬಿಟ್ಟಿಲ್ಲದ ಕರುವಿಗೆ ಅದೆಷ್ಟು ಉದ್ದದ ಕೊಂಬು ಬೆಳೆದುಬಿಟ್ಟಿದೆಯಲ್ಲಾ ಎಂದು ಮುಟ್ಟಿ ಮುಟ್ಟಿ ನೋಡಿಕೊಂಡಳು, ಇಷ್ಟು ತಿಂಗಳುಗಳು ಕಳೆದರೂ ಮನೆಯ ನಾಯಿಗೆ ನನ್ನ ಪರಿಚಯ ಮರೆತು ಹೋಗಿಲ್ಲವಲ್ಲಾ ಎಂದು ಸಂತಸ ಪಟ್ಟಳು, ಬಾಗಿದ ಪೈರಿನ ಮಧ್ಯೆ ತಾನೂ ಓಡಿ, ಮಗನನ್ನೂ ಓಡಿಸಿ ದಣಿದಳು, ತಿಳಿನೀರ ಕೊಳದಲ್ಲಿ ಕಾಲು ಇಳಿಬಿಟ್ಟು ಮೀನುಗಳಿಂದ ಕಚ್ಚಿಸಿಕೊಂಡಳು. ಕೊನೆಗೊಂದು ದಿನ ಅಪ್ಪ ಅಮ್ಮನಿಗೆ ವಿದಾಯ ಹೇಳಿ ಮತ್ತೆ ಮೈಸೂರ ಬಸ್ ಹತ್ತಿ, ಕಣ್ಣು ಒರೆಸಿಕೊಳ್ಳುತ್ತಲೇ ಹುಟ್ಟಿದೂರಿಗೆ 'ಬಾಯ್' ಅಂದು ಕಿಟಕಿ ಪಕ್ಕದ ಸೀಟಿಗೆ ಒರಗಿ ಕೂತಳು. ಆ ಹದಿನಾರಂಕದ ಮನೆಯಲ್ಲಿ ಮತ್ತೆ ಸಂಭ್ರಮ, ನಗು ಮೊದಲಿಟ್ಟಿತು.

ಇಷ್ಟೇನಾ...? ಅನ್ನುತ್ತಿದ್ದೀರೇನೋ ನೀವು... ಇಷ್ಟೇ ಆಗಿದ್ದರೆ, ಖಂಡಿತಾ ಇದನ್ನು ಬರೆಯಬೇಕಿರಲಿಲ್ಲ. ಆ ನಂತರ ನಡೆದ ಘಟನೆಗಳು, ತಿರುವುಗಳು ಪದೇ ಪದೇ ಬದುಕಿನ ಅನೂಹ್ಯತೆಯನ್ನು ವಿಡಂಬಿಸುತ್ತಾ ಎಲ್ಲಕ್ಕೂ ಅತೀತವಾದ ಕೆಲವು ಪ್ರಶ್ನೆಗಳನ್ನು ಉಳಿಸಿರುವುದಕ್ಕೇ ಇದನ್ನು ಬರೆಯಬೇಕಾಯಿತು. ಬದುಕು ಕೆಲವೊಮ್ಮೆ ಎಂತಹ ಪ್ರಶ್ನೆ ಕೇಳಿಬಿಡುತ್ತದೆಂದರೆ ಯಾವ googleಗೂ ಉತ್ತರ ಕೊಡಲಾಗದೆ ಸ್ಥಬ್ಧವಾಗುತ್ತದೆ. ನಮ್ಮ ರಾಜಕುಮಾರಿಯ ಬದುಕಲ್ಲಿ ಆಗಿರುವುದೂ ಅದೇ.

ಅವಿನಾಶ ಬೆಳೆಯುತ್ತ ಬಂದಂತೆ ಅಮ್ಮನ ಬಗ್ಗೆ ಪ್ರೀತಿ, ಆದರ, ಅಭಿಮಾನ ಹೆಚ್ಚುತ್ತಾ ಹೋಯಿತು. ಅಮ್ಮನೆಂದರೆ ವಾತ್ಸಲ್ಯ, ಅಮ್ಮನೆಂದರೆ ಸಲುಗೆ... ಸ್ನಾನಕ್ಕೆ ಗೀಸರ್ ಆನ್ ಮಾಡುವಲ್ಲಿಂದ ಕಾಲೇಜ್ ಯುನಿಫಾರ್ಮ್‌ಗೆ ಇಸ್ತ್ರಿ ಹಾಕುವಲ್ಲಿಯವರೆಗೂ ಅಮ್ಮ ಅಮ್ಮ ಅಮ್ಮ... ತನ್ನ ಬದುಕಿಗೆ ಹಣತೆಯಾಗಿ ಬಂದವಳ ಕಣ್ಣಲ್ಲಿನ ಬೆಳಕು ಆರಬಾರದೆಂದು ಸದಾ ಶ್ರಮಿಸುತ್ತಿದ್ದ. ಹುಟ್ಟುತ್ತಲೇ ಜತೆಯಾಗಿದ್ದ ಅಪ್ಪನಿಗಿಂತಲೂ ಕೈ ಹಿಡಿದು ನಡೆಸಿದ ಅಮ್ಮನೇ ಅಚ್ಚುಮೆಚ್ಚೆನಿಸುತ್ತಿತ್ತವನಿಗೆ. ಅವಳಿಗೂ ಅಷ್ಟೆ, ಅವನ ಪ್ರೀತಿಯ ಪರಾಕಾಷ್ಠೆಯ ಮುಂದೆ ಇನ್ನೊಂದು ಮಗು ಬೇಕು ಅಂತ ಅನಿಸಲೇ ಇಲ್ಲ.

ತೆರೆದಿಟ್ಟ ಗಾಳಿಗೆ ಹಳೆಗಾಯ ಆರಿಹೋಗಿ ಬದುಕು ಪಕ್ವವಾಗುತ್ತಿತ್ತು. ಊರಲ್ಲಿ ಅಪ್ಪ ಅಮ್ಮನೂ ಮಗಳು ಸಂತೋಷವಾಗಿದ್ದಾಳಲ್ಲಾ ಅನ್ನುವ ಖುಶಿಯಲ್ಲಿ ಬದುಕುತ್ತಿದ್ದರು. ಹೀಗಿರುವಾಗ ಆ ಸಂತೋಷಕ್ಕೆಲ್ಲಾ ಕೊನೆ ಅನ್ನುವಂತೆ ಒಂದು ದಿನ ಅವಿನಾಶ ಅಮ್ಮನನ್ನು ಬೈಕಿನ ಹಿಂದೆ ಕೂರಿಸಿಕೊಂಡು ಯಾವುದೋ ಸಿಗ್ನಲ್ ಜಂಪ್ ಮಾಡುವಾಗ ಆಯ ತಪ್ಪಿ ಬಿದ್ದು ಬಿಟ್ಟ, ಹಿಂದಿಂದ ಬಂದ ಲಾರಿ ಅವನ ಮೇಲಿಂದ ಹಾದುಹೋಯಿತು. ಅಷ್ಟೇ, ಅವನು ಸ್ಥಳದಲ್ಲೇ ಪ್ರಾಣ ಬಿಟ್ಟ. ನಮ್ಮ ರಾಜಕುಮಾರಿಯ ಬದುಕು ಸ್ಥಬ್ಧವಾಯಿತು. ಮಾತಿಲ್ಲ, ಕಥೆಯಿಲ್ಲ, ಆಕೆ ಸಂಪೂರ್ಣವಾಗಿ ಮೌನವಾಗಿಬಿಟ್ಟಳು. ಮಾತು-ಕಥೆ ಬಿಡಿ, ಅವಿನಾಶನನ್ನು ಅಷ್ಟೊಂದು ಪ್ರೀತಿಸುತ್ತಿದ್ದವಳು ಅವನಿಗೋಸ್ಕರ ಒಂದು ಹನಿ ಕಣ್ಣೀರನ್ನೂ ಸುರಿಸಲಿಲ್ಲ. ಅವಳ ಗಂಡ ಅವನ ಚಿತಾಭಸ್ಮವನ್ನು ಅವಳ ಮುಂದೆ ಇಟ್ಟಾಗಲೂ ಆಕೆಯದೂ ಅದೇ ದಟ್ಟ ಮೌನ.

ಇತ್ತ ಊರಿಗೇ ಊರೇ ಅವಳಿಗೋಸ್ಕರ ಮರುಗಿತು. ಅವಳ ಅಪ್ಪ ಅಮ್ಮ ಮೈಸೂರಿಗೆ ಹೋಗಿ ಅವಳನ್ನು ಮಾತಾನಾಡಿಸಲು ಪ್ರಯತ್ನಪಟ್ಟರು. ಊಹೂಂ, ಅವಳು ಮೌನ ಮುರಿಯಲೇ ಇಲ್ಲ.

ಇಷ್ಟಕ್ಕಾದರೂ ಬದುಕಿನ ವೈಚಿತ್ರಗಳು ಮುಗಿಯಿತಾ ಅಂದುಕೊಂಡರೆ..? ಇಲ್ಲ, ಅದಿನ್ನೂ ಆರಂಭವಾಗಿತ್ತಷ್ಟೇ. ಅವಿನಾಶ ಸತ್ತ ನಂತರ ಅವಳು ಗಂಡನ ಮನೆಯಲ್ಲಿ ಆರು ತಿಂಗಳುಗಳಷ್ಟು ಇದ್ದಳಷ್ಟೇ, ಆಮೇಲೆ ಅದೇನಾಯ್ತೋ ಗೊತ್ತಿಲ್ಲ, ಒಂದಿನ ಊರಿಗೆ ಬಂದವನೇ, ಏನನ್ನೂ ಹೇಳದೆ, ಏನನ್ನೂ ಕೇಳದೆ ಅವಳನ್ನಿಲ್ಲೇ ಬಿಟ್ಟುಹೋದ. ಆ ಮನೆಯಲ್ಲಿ ಮತ್ತೆ ಸೂತಕದ ಛಾಯೆ.

ಊರವರು ಬಾಯಿಗೆ ಬಂದಂತೆ ಮಾತಾಡಿದರು, ಇವಳ ನಡತೆಯ ಬಗ್ಗೆ ಕೆಟ್ಟ ಕೆಟ್ಟದಾಗಿ ಹರಟೆಹೊಡೆಯತೊಡಗಿದರು, ಕೆಲವರಂತೂ ಅವಳಿಗೂ ಅವಿನಾಶನಿಗೂ ಇಲ್ಲದ ಸಂಬಂಧ ಕಟ್ಟಿ ತಮ್ಮ ವಿಕೃತಿಯನ್ನು ತೀರಿಸಿಕೊಂಡರು. ಇಷ್ಟಾದರೂ ಆಕೆ ಏನೂ ಮಾತಾಡಲೇ ಇಲ್ಲ. ಅವಳ ಮೌನದ ಕೋಟೆಯೊಳಗೆ ಯಾರಿಗೂ ಪ್ರವೇಶ ಕೊಡಲೇ ಇಲ್ಲ.

ಹೀಗಿರುವಾಗಲೇ ಒಂದು ದಿನ ಯಾರೋ ಅವಿನಾಶನ ಬಗ್ಗೆ ಮಾತನಾಡುತ್ತಾ ಅವನದು ಹೀನ ಜಾತಕ, ಅದಕ್ಕೇ ಹುಟ್ಟಿ ಕೆಲವರ್ಷಗಳಲ್ಲಿ ಹೆತ್ತಮ್ಮನನ್ನು ಕಳೆದುಕೊಂಡ, ಮತ್ತೂ ಕೆಲವರ್ಷಗಳಲ್ಲಿ ಬೆಳೆಸಿದ ಅಮ್ಮನ ಮಾತನ್ನೇ ಕಿತ್ತುಕೊಂಡ ಅಂದರು. ಅಷ್ಟೂ ತಿಂಗಳುಗಳಿಂದ ಮೌನಗೌರಿಯಾಗಿದ್ದ ನಮ್ಮ ರಾಜಕುಮಾರಿ ಸಿಡಿದುಬಿದ್ದಳು. ಅವಿನಾಶನ ಬಗ್ಗೆ ಕೆಟ್ಟದಾಗಿ ಒಂದೇ ಒಂದು ಮಾತಾಡಿದ್ರೂ ನಾನು ಸುಮ್ಮನಿರಲ್ಲ ಅಂದಳು, ಅಷ್ಟೂ ದಿನಗಳಿಂದ ಹಿಡಿದಿಟ್ಟುಕೊಂಡ ಅವಳ ಭಾವನೆಗಳೆಲ್ಲಾ ಕೋಡಿ ಕೋಡಿಯಾಗಿ ಹರಿಯತೊಡಗಿತು.

ಅಲ್ಲಿಂದಾಚೆ ಒಂದಿಷ್ಟು ಪದಗಳನ್ನು ಹೆಕ್ಕಿ ಮತ್ತೆ ಮಾತಾಡತೊಡಗಿದಳು. ಆದರೆ ಅವಳ ಹುಡುಗಾಟ, ತುಂಟಾಟ, ಮುದ್ದು, ಪ್ರಕೃತಿಯೊಂದಿನ ಒಡನಾಟ ಇವಕ್ಕೆಲ್ಲಾ ಶಾಶ್ವತ ಪೂರ್ಣವಿರಾಮ ಹಾಕಿಬಿಟ್ಟಳು. ಇವತ್ತಿಗೂ ಅಷ್ಟೆ, ಅವಳ ಗಂಡನ ಬಗ್ಗೆ ಪ್ರಶ್ನಿಸಿದಾಗೆಲ್ಲಾ ಆಕೆ, ಹಿಂದೊಮ್ಮೆ ತಾನು ದ್ವೇಷಿಸುತ್ತಿದ್ದ ಅದೇ ಇಲಿ ಬೋಣನ್ನು ಹಿಡಿದು ನಿರ್ಭಾವುಕವಾಗಿ ಅಟ್ಟ ಹತ್ತುತ್ತಾಳೆ, ಅಷ್ಟೆ.

ಆದ್ರೆ, ಎಲ್ಲರನ್ನೂ, ಎಲ್ಲವನ್ನೂ ಎದುರಿಸಿ ತನಗೆ ಬದುಕು ಕಟ್ಟಿಕೊಟ್ಟ ಅವಳನ್ನು ಅವನೇಕೆ ದೂರ ಸರಿಸಿದ...? ಈ ಕ್ಷಣದವರೆಗೂ ನನಗರ್ಥ ಆಗಿಲ್ಲ.

ಗುರುವಾರ, ಮಾರ್ಚ್ 31, 2016

ಈ ಆರ್ದ್ರ ಭಾವಕ್ಕೆ ಸಾವಿಲ್ಲ.

ಇನ್ನೂ ಒಂದು ಕೈ ಮುಸುಕು ಮುಸುಕು ಬಣ್ಣದ, ಅಕ್ಷರಗಳು ಮಬ್ಬಾಗಿರುವ ಪತ್ರಗಳ ಕಟ್ಟಿನ ಮೇಲಿದೆ. ಅಂಗೈ ಪೂರ್ತಿ ನವಿರು ನೆನಪಿನ ಹುಡಿ. ಮನಸ್ಸಿನ ತುಂಬಾ  nostalogia ಗಳ ಕಲರವ. ಮೆದುಳಿನ ಪದರು ಪದರುಗಳಲ್ಲೂ ಒಂದು ಕಾಲಘಟ್ಟದ ಸ್ಥೂಲ ಚಿತ್ರಣ ತಣ್ಣಗೆ ಕದಲುತ್ತಿದೆ. ಪ್ರಪಂಚದ ಅಷ್ಟೂ ಮಧುರ ಅನುಭೂತಿಗಳು ನನ್ನೊಳಗೆ ಆವಿರ್ಭವಿಸಿ ನಾನೆಲ್ಲೋ ಗಾಳಿಯಲ್ಲಿ ತುಂಬಾ ಹಗುರಾಗಿ ತೇಲುತ್ತಿದ್ದೇನೇನೋ ಅನ್ನುವ ಭಾವ. ಅದೆಷ್ಟು ಹೊತ್ತಿಂದ ಹೀಗೆ ಪತ್ರಗಳ ಮೇಲೆ ಕೈಯಿಟ್ಟು ಒಂದು ಅನಿವರ್ಚನೀಯತೆಯನ್ನು ಅನುಭವಿಸುತ್ತಿದ್ದೇನೋ ನನಗೇ ಗೊತ್ತಿಲ್ಲ.

ಪತ್ರಗಳಿಗೆ, ಕೈ ಬರಹಗಳಿಗಿರುವ ಅಸಲೀ ತಾಕತ್ತೇ ಅದು. ಅದೆಷ್ಟು ವರ್ಷ ಕಳೆದ ಮೇಲೆ ಓದಿಕೊಂಡರೂ ಅವು ನಮ್ಮಲ್ಲೊಂದು ಆರ್ದ್ರ, ಆಪ್ತ ಭಾವವನ್ನು ಹುಟ್ಟಿಸುತ್ತವೆ. ಪತ್ರ ಬರೆದವರು ಇಲ್ಲೆಲ್ಲೋ ಇದ್ದರೇನೋ ಅನ್ನುವ ಮಧುರ ಅನುಭೂತಿಯನ್ನು ಸೃಷ್ಟಿಸುತ್ತದೆ. ಯಾಕೆಂದರೆ ಪತ್ರ ಬರೆಯುವಾಗ ಬರೆಯುವವನ ಮನಸ್ಥಿತಿಯಲ್ಲಿ ಏನು ಬರೆಯಬೇಕು, ಹೇಗೆ ಬರೆಯಬೇಕು ಅನ್ನುವ ಸ್ಪಷ್ಟ ಕಲ್ಪನೆಗಳಿರುತ್ತವೆ. ಪತ್ರ ಬರೆಯುವುದಕ್ಕಾಗಿಯೇ ಆತ ಒಂದು ಸಿದ್ಧತೆಯನ್ನು ಮಾಡಿಕೊಂಡಿರುತ್ತಾನೆ. ಆ ಸಿದ್ಧತೆಯೇ ಪತ್ರದ ಆಪ್ತತೆಯನ್ನು ವರ್ಷಗಟ್ಟಲೆ ಕಾಪಿಟ್ಟುಕೊಳ್ಳುವುದು.

ಈಗ ನನ್ನ ಕೈಯಲ್ಲಿರುವ ಪತ್ರಗಳು ಸರಿ ಸುಮಾರು ಮೂವತ್ತು ವರ್ಷಗಳಷ್ಟು ಹಿಂದಿನವು ಅಂದರೆ  1984-85 ರ ಆಸುಪಾಸಿನವು. ಅವಿನ್ನೂ ಅಮ್ಮನ ತಾರುಣ್ಯದ ದಿನಗಳು, ಬಹುಶಃ ಆಗಷ್ಟೇ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟಿದ್ದರು. ’ಪ್ರೀತಿಯ ಮಗಳೇ’ ಅಂತ ಪ್ರಾರಂಭವಾಗುವ ಪತ್ರದ ಪೂರ್ತಿ ತುಂಬಿರುವುದು ಅಮ್ಮನೆಡೆಗೆ ಅಜ್ಜನಿಗಿರುವ ವಾತ್ಸಲ್ಯ ಮತ್ತು ಅಂತ:ಕರಣಗಳೇ. ಗಂಡನ ಮನೆಯಲ್ಲಿ ಹೇಗೆ ನಡ್ಕೊಳ್ಳಬೇಕು ಅಂತ ಎಲ್ಲೂ ನೇರವಾಗಿ ವಿವರಿಸದಿದ್ದರೂ ಪ್ರತಿ ಪತ್ರದ ಆಂತರ್ಯದಲ್ಲಿ ಸುತ್ತಿ ಬಳಸಿ ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಒಂದು ಪುಟ್ಟ ಸಂದೇಶ ಇದ್ದೇ ಇದೆ. ಅತ್ತೆ, ಮಾವ, ನಾದಿನಿಯರು, ಮೈದುನಂದಿರು, ಓರಗಿತ್ತಿ ಹೀಗೆ ತುಂಬಿದ ಸಂಸಾರಕ್ಕೆ ಸೊಸೆಯಾಗಿ ಹೋದ ಮಗಳ ನಡೆ-ನುಡಿಯಲ್ಲಿ ಇರಬೇಕಾದ ನಾಜೂಕುತನ, ಹೊಂದಾಣಿಕೆಯ ಬದುಕಲ್ಲಿರುವ ಖುಶಿ, ತವರು ಮನೆಯೆಂಬ comfort zone ನಿಂದ ಹೊರಬಂದಾಗಾಗುವ ಸಹಜ ಚಡಪಡಿಕೆಗಳನ್ನು ಮೀರುವ ಬಗೆ, ನಾಲ್ಕು-ಐದು ಸಾಲುಗಳ ಪುಟ್ಟ ಪುಟ್ಟ ಝೆನ್ ಕಥೆಗಳು... ಹೀಗೆ ಅಕ್ಷರಗಳಲ್ಲೇ ಜೀವ, ಜೀವನ ಎರಡೂ ತುಂಬಿ ಕಳಿಸಿದಂತಿವೆ ಈ ಪತ್ರಗಳು. ಇನ್ನು ಅಮ್ಮ ಮೊದಲ ಬಾರಿ ಗರ್ಭಧರಿಸಿದಾಗಿನ ಪತ್ರಗಳ ತೂಕವೇ ಬೇರೆ. ಅವು ಹಾಲು ಕುಡಿ ಎಂಬಲ್ಲಿಂದ ಒಳ್ಳೆಯ ಪುಸ್ತಕಗಳನ್ನು ಓದು ಅನ್ನುವವರೆಗಿನ ಅತೀವ ಕಾಳಜಿ, ಇನ್ನೂ ಹುಟ್ಟದ ಮಗುವಿನ ಬಗ್ಗೆ ಅಜ್ಜ ನೇಯ್ದಿರಬಹುದಾದ ಕನಸಿನ ಕುಲಾವಿ, ಗರ್ಭಿಣಿ ಎಂದು ಗೊತ್ತಾದಮೇಲೂ ನೀನು ತವರಿಗೆ ಬಂದಿಲ್ಲ ಅನ್ನುವ ಹುಸಿಮುನಿಸು, ಮೊದಲ ಮೊಮ್ಮಗುವಿನ ನಿರೀಕ್ಷೆಯಲ್ಲಿ ಮನೆಯಲ್ಲಿ ಆರಂಭವಾಗಿರುವ ಸಿದ್ಧತೆ, ಹೊಟ್ಟೆಯಲ್ಲೊಂದು ಜೀವವಿದೆ ಅನ್ನುವುದನ್ನು ನೆನಪಿಟ್ಟುಕೊಂಡು ಇನ್ನಾದರೂ ಹತ್ತುವುದು-ಇಳಿಯುವುದನ್ನು ಕಡಿಮೆ ಮಾಡು ಅನ್ನುವ ಗದರಿಕೆಗಳ ಜೀವಂತ ಪ್ರತಿನಿಧಿಯಂತಿದೆ. ಉಳಿದಂತೆ ಮಾವನಿಗೆ ಪ್ರಮೋಷನ್ ಸಿಕ್ಕಿರುವುದು, ಚಿಕ್ಕಮ್ಮ ಋತುಮತಿಯಾಗಿರುವುದು, ಮನೆಯ ಕಪ್ಪು ಬೆಕ್ಕು ನಾಲ್ಕು ಮರಿ ಹಾಕಿರುವುದು, ಕೊಟ್ಟಿಗೆಯ ಮೂಲೆಯಲ್ಲಿ ಕಟ್ಟುವ ದನದ ಕಾಲಿಗೆ ಊರಿನ ಪೋಲಿ ಹುಡುಗರು ಕಲ್ಲೆಸೆದಿರುವುದು, ಮನೆಯ ಹಂಚು ಬದಲಾಯಿಸಿದ್ದು, ಪೆನ್ಷನ್ ಐವತ್ತು ರೂಪಾಯಿಗಳಷ್ಟು ಏರಿಕೆಯಾಗಿರುವುದು, ಪಂಚಾಯತ್ ಚುನಾವಣೆಯಲ್ಲಿ ಶಿಕ್ಷಿತರು ಆರಿಸಿ ಬಂದದ್ದು, ಊರ ಲೈಬ್ರೆರಿಯಲ್ಲಿ ಹೊಸ ಪುಸ್ತಕ ಬಂದಿರುವುದು, ಇನ್ನೂ ಓದಬೇಕಾಗಿರುವ ಅಬ್ರಹಾಂ ಲಿಂಕನ್ ನ ಜೀವನ ಚರಿತ್ರೆ... ಹೀಗೆ ಅಲ್ಲಿ ಉಲ್ಲೇಖವಾಗದ ವಿಷಯಗಳೇ ಇಲ್ಲ ಅನ್ನಬಹುದೇನೋ! ಅವನ್ನೆಲ್ಲಾ ಓದಿ ಸುಮ್ಮನೆ ಕಣ್ಣು ಮುಚ್ಚಿ ಕುಳಿತಾಗ, ನಾನು ಒಮ್ಮೆಯೂ ನೋಡಿಲ್ಲದ, ನೊಡಲಾಗದ ಕಾಲಘಟ್ಟದಲ್ಲೊಮ್ಮೆ ತಿರುಗಿ ಬಂದಂತಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಹಿಡಿದಿಟ್ಟುಕೊಂಡದ್ದು ಆ ಪತ್ರಗಳಲ್ಲಿನ ಆಪ್ತತೆ ಮತ್ತು ಆರ್ದ್ರತೆ. ಅಸಂಘಟಿತ ಬದುಕು ಅದೆಷ್ಟು ಅರ್ಥಪೂರ್ಣವಾಗಿ ದಾಖಲಿಸಲ್ಪಟ್ಟಿದೆಯಲ್ಲಾ ಅನ್ನುವ ಅಚ್ಚರಿ. ಪತ್ರಗಳು ಬದುಕನ್ನು ಈ ಪರಿ ಬಂಧಿಸಿಟ್ಟ, ಪ್ರಭಾವಿಸಿದ್ದ ಕಾಲದಲ್ಲಿ ನಾನಿನ್ನೂ ಹುಟ್ಟಿರಲಿಲ್ಲವಲ್ಲಾ ಅನ್ನುವ ಪುಟ್ಟ ಅಸೊಯೆ.

ಎಲ್ಲಿ ಹೋಯ್ತು ಆ ಆತ್ಮೀಯತೆ? ಆರ್ದ್ರತೆ? ಸಲಿಗೆ? ಇನ್ನೇನು ಪತ್ರ ಬಂದೇ ಬಿಡುತ್ತದೆ ಅನ್ನುವ ಕಾತುರತೆ? ಅಂಚೆಯಣ್ಣನ ಸೈಕಲ್ ಗಂಟೆಯ ಸದ್ದು ಕೇಳಿಸಿದಾಗೆಲ್ಲಾ ಗೇಟಿನ ಬಳಿ ಓಡಿ ಹೋಗಿ "ಅಣ್ಣಾ, ಪತ್ರ ಇದೆಯಾ?" ಅಂತ ಕೇಳುವ ತನ್ನವರೆಡೆಗಿನ ನಿರ್ಮಲ ಕಾಳಜಿಗಳು? ಪತ್ರ ಬರೆಯುವಾಗಿನ ಪ್ರೀತಿ, ಸ್ನೇಹ, ಹಸಿ ಹಸಿ ಪ್ರೇಮ? ಪತ್ರ ತಲುಪಿದ ಕೂಡಲೇ ಆ ಕಡೆ ಇರುವವರು ಪಡಬಹುದಾದ ಸಂಭ್ರಮದ ರಮ್ಯ ಕಲ್ಪನೆ? ಕಲ್ಪನೆಗಳಿಗಷ್ಟೇ ದಕ್ಕಬಹುದಾದ ಅನೂಹ್ಯತೆ? ಇನ್‍ಲ್ಯಾಂಡ್ ಲೆಟರ್‌ನ ಸಂದುಗೊಂದುಗಳಲ್ಲೂ ಬರೆದು ಪತ್ರದ ಪೂರ್ತಿ ಅಕ್ಷರ ತುಂಬುವ ಖುಶಿ? ವರ್ಷಗಟ್ಟಲೆ ಉಳಿದುಕೊಳ್ಳುವ ಮಾಧುರ‍್ಯತೆ? ಪ್ರತಿ fullstopನ ನಂತರ ಹೊಸದಾಗಿ ಆರಂಭವಾಗುವ ವಾಕ್ಯಗಳಂತೆ ಹೊಸತನಗಳಿಗೆ ಬದುಕು ತೆರೆದುಕೊಳ್ಳುವ ಪ್ರಕ್ರಿಯೆ?

Phone, email, SMS, mobile, whtasapp...ಮುಂತಾದವುಗಳು ನಮ್ಮಿಂದ ಪತ್ರ ಬರೆಯುವ ಸಂಸ್ಕೃತಿಯನ್ನು ಕಿತ್ತುಕೊಂಡಿವೆ ಅಂತ ನಾವೇನೋ ಸುಲಭವಾಗಿ ಅನ್ನುತ್ತೇವೆ. ಆದ್ರೆ ಅವೆಲ್ಲಾ ನಮ್ಮ ಭಾವಶೂನ್ಯತೆಗಳನ್ನು ಮುಚ್ಚಿ ಹಾಕಲು ನಾವು ಮುಂದಿಡುವ ನೆಪಗಳಷ್ಟೆ. ಈ ಧಾವಂತದ ಜೀವನದಲ್ಲಿ ಎಲ್ಲರನ್ನೂ, ಎಲ್ಲವನ್ನೂ ಯಾಂತ್ರೀಕೃತವನ್ನಾಗಿಸಿದ ನಮ್ಮಲ್ಲೀಗ ಇಲ್ಲದಿರುವುದು, ಪತ್ರ ಬರೆಯಲು ಬೇಕಾಗಿರುವ ತನ್ಮಯತೆ, ಅದನ್ನು ತಲುಪಿಸುವಲ್ಲಿನ ತಾದಾತ್ಮ್ಯತೆ, ಪ್ರತಿಪತ್ರದ ನಿರೀಕ್ಷಣೆ ಬೇಡುವ ತಾಳ್ಮೆ... ಇವೇ ಮುಂತಾದ ಸಹಜ ಭಾವುಕ ಅಭಿವ್ಯಕ್ತಿಗಳು. ನಾವೀಗ ಕಳೆದುಕೊಂಡಿರುವುದು, ಪತ್ರಗಳ ಮುಖೇನ ಇದಿರುಗೊಳ್ಳುವ ಸಂಭ್ರಮದ ಗಳಿಗೆಗಳನ್ನು ಹಾಗೇ ಇಡಿಇಡಿಯಾಗಿ ಹೃದಯದೊಳಕ್ಕೆ ಇಳಿಸಿಕೊಳ್ಳುವ ಅನನ್ಯ ಕಲೆಗಾರಿಕೆಯನ್ನು. 

ಈಗಾಗಲೇ ಕಾಲದ ಹರಿವಿನೊಂದಿಗೆ ಟೆಲಿಗ್ರಾಂ ಕೊನೆಯುಸಿರೆಳೆದಿದೆ. ನಮ್ಮ ಅಜ್ಜ, ಅಜ್ಜಿ, ಅಪ್ಪ, ಅಮ್ಮನ ಜತೆಗೆ ಕರುಳುಬಳ್ಳಿಗಳಿರುವ ಪತ್ರವೂ ಇನ್ನೊಂದಿಷ್ಟು ವರ್ಷಗಳ ನಂತರ ಅಸುನೀಗದಿರಬಾರದೆಂದರೆ ಕನಿಷ್ಠಪಕ್ಷ ವರ್ಷಕ್ಕೊಂದೆರಡು ಬಾರಿಯಾದರೂ ನಮ್ಮಾಪ್ತರಿಗೆ ಪತ್ರ  ಬರೆಯುವ ಪ್ರಯತ್ನಮಾಡೋಣ. ಯಾರಿಗೆ ಗೊತ್ತು ಕಳೆದು ಹೋದ ಸಂಬಂಧಗಳ ಮಾಧುರ್ಯಗಳು ಮತ್ತೆ ದಕ್ಕಲೂಬಹುದು.

ಬುಧವಾರ, ಮಾರ್ಚ್ 30, 2016

ಕೊಚ್ಚುವ, ಕೊಲ್ಲುವ, ಸುಡುವ ಈ ಕಾಲದಲ್ಲೂ...

ಬದುಕು ಅಪ್ಪನಂತೆ. ತಲೆ ನೇವರಿಸಿ ಮುದ್ದು ಮಾಡದೆ, ಲಾಲಿ ಹಾಡುತ್ತಾ ತಟ್ಟಿ ಮಲಗಿಸದೆ, ತಬ್ಬಿ ಕಣ್ಣೀರಿಡದೆ, ಪ್ರೈಜ್ ತಗೊಂಡಾಗೆಲ್ಲಾ ಪ್ರಶಂಸಿಸದೆ, ಒಂದು ನಿರ್ದಿಷ್ಟ ಅಂತರ ಕಾಯ್ದುಕೊಂಡೇ ಪಾಠ ಕಲಿಸುತ್ತದೆ, ಅಪರಿಚಿತರನ್ನು ಪರಿಚಿತರನ್ನಾಗಿಸುತ್ತದೆ. ಅದು ಕ್ಷಣ ಹೊತ್ತಿದ್ದು, ಮತ್ತೆ ಮರೆಯುವಂತಹ ಪರಿಚವಲ್ಲ. ತೋಳಮೇಲಿನ ಮಚ್ಚೆಯಂತೆ ಜೀವನ ಪೂರ್ತಿ ಕಾಡುವ, ಕಾಡಿಸುವ, ಬಿಟ್ಟೂ ಬಿಡದೆ ನೆನಪಾಗಿ ಉಳಿಯುವಂತಹ ಪರಿಚಯಗಳು. ಬದುಕಿನ ಪರಿಚಯಗಳಿಗೆ ಕ್ರಮಸಂಖ್ಯೆ, ಪುಟ ಸಂಖ್ಯೆ, ಪರಿವಿಡಿ, ಮುನ್ನುಡಿ, ಶಬ್ದಾರ್ಥ, ಆಮೇಲೊಂದಿಷ್ಟು ಪ್ರಶ್ನೆಗಳು... ಊಹೂಂ, ಯಾವುವೂ ಇರುವುದಿಲ್ಲ. ಅದು ಆಕಸ್ಮಿಕವಾಗಿ ಯಾರನ್ನೋ ಪರಿಚಯಿಸಿ ಅಷ್ಟೇ ಅನಿರೀಕ್ಷಿತವಾಗಿ ಒಂದು ಸಣ್ಣ ಸುಳಿವೂ ಕೊಡದಂತೆ ನಮ್ಮ ಜೀವನದಿಂದ ನಿರ್ಗಮಿಸುವಂತೆ ಮಾಡಿಬಿಡುತ್ತದೆ. ಆದ್ರೆ ಬದುಕು ಪರಿಚಯಿಸುವ ಕೆಲ ಪರಿಚಯಗಳು ಕೆಲವೇ ಗಂಟೆ ಅಥವಾ ನಿಮಿಷಗಳದಾಗಿದ್ದರೂ ಅದು ಕಾಡುವ ಪರಿ, ಉಳಿಸುವ ನೆನಪುಗಳು ಅನಂತ, ಅಪರಿಮಿತ.

ನಾನೀಗ ನಿಮಗೆ ಹೇಳಹೊರಟಿರುವುದೂ ಅನೀರಿಕ್ಷಿತವಾಗಿ ಭೇಟಿಯಾಗಿ, ಒಂದಿಷ್ಟು ನೆನಪುಗಳನ್ನು ಉಳಿಸಿ , ಅಷ್ಟೇ ಅನಿರೀಕ್ಷಿತವಾಗಿ ಬದುಕಿಂದ ಎದ್ದು ಹೋದ ಹಿರಿಯರೊಬ್ಬರ ಕುರಿತು. ಅವು ಪದವಿ ತರಗತಿಯ ಮೊದಲ ದಿನಗಳು. ಒಂದಿಡೀ ಸೆಮಿಸ್ಟರ್ ಹೊಸ ಪ್ರಪಂಚ, ಹೊಸ ಸ್ನೇಹ, ಹೊಸ ಸಂಬಂಧ, ಆಟ, ಹುಡುಗಾಟ, ಕಾಡು ಹರಟೆಗಳಲ್ಲೇ ಕಳೆದುಹೋಗಿತ್ತು. ಪರೀಕ್ಷೆಗೆ ಇನ್ನೇನು ಎರಡು ದಿನಗಳು ಉಳಿದಿವೆ ಅನ್ನುವಷ್ಟಾಗುವಾಗಲೇ ಪ್ರಯೋಗಾಲಯದ ಕೆಲಸಗಳು ಇನ್ನೂ ಮುಗಿದಿಲ್ಲ, ಸಬ್ಮಿಟ್ ಮಾಡಬೇಕಾದ ರೆಕಾರ್ಡ್ ಇನ್ನೂ ಸಿದ್ಧವಾಗಿಲ್ಲ ಅನ್ನುವುದು ತಿಳಿದದ್ದು. ಪರೀಕ್ಷೆಗಳಿಗೆ ಕೂರಬೇಕೆಂದರೆ ರೆಕಾರ್ಡ್ ಸಬ್ಮಿಟ್ ಮಾಡಲೇಬೇಕಿತ್ತು. ಸರಿ, ನಮ್ಮ ನಮ್ಮಲ್ಲೇ ಕೆಲಸ ಹಂಚಿಕೊಂಡು, ಒಂದೇ ದಿನದಲ್ಲಿ ಎಲ್ಲಾ ಕೆಲ್ಸ ಮುಗಿಸಿ, ಬೈಡಿಂಗ್ ಗೆಂದು ಕೊಡಲೇಬೇಕೆಂದು, ಅವುಡುಗಚ್ಚಿ ಕುಳಿತು, ಇಲ್ಲದ ಗಂಭೀರತೆಯನ್ನು ನಮ್ಮೊಳಗೆ ಆವಾಹಿಸಿಕೊಂಡು, ಬಾರದ ಔಟ್ ಪುಟ್, ಎರರ್ ತೋರಿಸುವ ಪ್ರೋಗ್ರಾಂ ಗಳನ್ನು ಬಯ್ಯುತ್ತಾ, ಅಂತೂ ಇಂತೂ ರೆಕಾರ್ಡ್ ಕೆಲಸ ಮುಗಿಸಿ, ಬೈಂಡಿಂಗ್ ಗೆಂದು ಕೊಟ್ಟು ಲ್ಯಾಬಿಂದ ಹೊರಬರುವಾಗ ಸರಿಯಾಗಿ ಆರು ಗಂಟೆ.

ಕಾಲೇಜಿಂದ ನಮ್ಮೂರಿಗೆ ಬರಲು ಎರಡು ಬಸ್ ಗಳನ್ನು ಮಧ್ಯದಲ್ಲಿ ಬದಲಾಯಿಸಬೇಕಿತ್ತು. ಅದೇಕೋ ಅವತ್ತು ಒಂದು ಬಸ್ ಬೇಗನೇ ಬಂದು ನಾನು ಆರೂವರೆ ಆಗುವಷ್ಟರಲ್ಲಿ ಮತ್ತೊಂದು ಬಸ್ ಸ್ಟಾಂಡ್ ಗೆ ತಲುಪಿಬಿಟ್ಟೆ. ಆದ್ರೆ ಇನ್ನೊಂದು ಬಸ್ ಗಾಗಿ ಎಷ್ಟು ಕಾದರೂ ಬರಲೇ ಇಲ್ಲ. ಸಮಯ ಸುಮ್ಮನೆ ಓಡುತ್ತಲೇ ಇತ್ತು. ಕೈಲಿದ್ದ ಮೊಬೈಲ್ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗಿತ್ತು. ಅದು ಬೇರೆ ರಂಝಾನ್ ತಿಂಗಳು. ಇಫ್ತಾರ್ ಸಮಯಕ್ಕಾಗುವಾಗಾದರೂ ಮನೆ ತಪುಪದಿದ್ದರೆ ಅಮ್ಮ ಗಾಬರಿ ಬಿದ್ದು ಬಿಡುತ್ತಾರೆ. ಮೇಲಾಗಿ ನಮ್ಮೂರಿಂದ ನಮ್ಮ ಕಾಲೇಜ್ ಗೆ ಹೋಗುವವಳು ನಾನೊಬ್ಬಳೇ ಇದ್ದುದ್ದರಿಂದ ಇನ್ಯಾರಿಂದಾದರೂ ಕೇಳಿ ತಿಳ್ಕೊಳ್ಳುವುದೂ ಸಾಧ್ಯ ಇರ್ಲಿಲ್ಲ. ಬಸ್ ಬೇಗ ಬರ್ಲಿ ಅಂತ ಪ್ರಾರ್ಥಿಸುವುದನ್ನು ಬಿಟ್ರೆ ನನಗಿನ್ಯಾವ ದಾರಿಯೂ ಉಳಿದಿರ್ಲಿಲ್ಲ.

ಒಂದಿಷ್ಟು ಹೊತ್ತು ಕಾದನಂತರ ಬಸ್ ಬಂತು, ಹತ್ತಿ ಕುಳಿತು, ಒಂದು ಮೆಸೇಜ್ ಮಾಡುವಷ್ಟಾದರೂ ಚಾರ್ಜ್ ಉಳಿದಿದ್ದರೆ... ಅನ್ನುವ ಆಸೆಬುರುಕತನದಿಂದ ಮೊಬೈಲ್ ಆನ್ ಮಾಡೋಕೆ ಪ್ರಯತ್ನಿಸಿ, ಅದು ಆಗುವುದಿಲ್ಲ ಅನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿ, ಎನೂ ಮಾಡಲಾಗದ ಅಸಹಾಯಕತೆಯಲ್ಲಿ ಧುಮುಗುಡುತ್ತಾ ಇರಬೇಕಾದರೆ, ಬಸ್ ಹೊರಟೇಬಿಟ್ಟಿತು. ತುಸು ರಿಲಾಕ್ಸ್ ಅನ್ನಿಸಿ ಇನ್ನೇನು ಸೀಟಿಗೆ ಒರಗಬೇಕು ಅನುವಷ್ಟರಲ್ಲಿ, ಬಸ್ ಒಮ್ಮೆಲೇ ನಿಂತಂತಾಯಿತು. ಕಂಡಕ್ಟರ್ ಇಳಿದು ಚೆಕ್ ಮಾಡಿ ನನಗರ್ಥವಾಗದ ಯಾವುದೋ ತಾಂತ್ರಿಕ ದೋಷವಾಗಿದೆ ಅಂತ ಡ್ರೈವರ್ ಗಂದು, ಪ್ರಯಾಣಿಕರನ್ನು ಉದ್ದೇಶಿಸಿ, ಈ ಬಸ್ ಮುಂದೆ ಹೋಗುವುದಿಲ್ಲ, ಇನ್ನೊಂದು ಬಸ್ ವ್ಯವಸ್ಥೆ ಮಾಡಿಕೊಡುತ್ತೇವೆ, ಅಲ್ಲಿಯವರೆಗೆ ಕಾಯಲೇಬೇಕು ಅಂದರು.

ನನ್ನ ಪರಿಸ್ಥಿತಿಗೆ ನನ್ನನ್ನೇ ಹಳಿದುಕೊಳ್ಳುತ್ತಾ, ನಡೆದಾದರೂ ಮನೆಗೆ ತಲುಪಬಹುದಾ ಅಂದುಕೊಳ್ಳುತ್ತಾ ಬಸ್ಸಿಂದ ಇಳಿದು ನೋಡಿದ್ರೆ, ಊಹೂಂ ನಡೆದು ತಲುಪಲಾಗದಷ್ಟು ದೂರದಲ್ಲಿ ಬಸ್ ಕೆಟ್ಟು ನಿಂತಿತ್ತು. ಮತ್ತೊಂದಿಷ್ಟು ಹೊತ್ತು ಅಲ್ಲಿ ಸುಮ್ಮನೆ ಕಾಲಹರಣ ಮಾಡಿ, ಏನು ಮಾಡಬೇಕೆಂದು ತೋಚದೆ ಅತ್ತಿತ್ತ ನೋಡುತ್ತಿರಬೇಕಾದರೆ ಮತ್ತೊಂದು ಬಸ್ ಬಂತು.

ಇನ್ನಾದರೂ ಮನೆ ತಲುಪಬಹುದಲ್ಲಾ ಅಂತ ನಿರಾಳವಾಗಿ, ಬಸ್ ಹತ್ತಿ ಕುಳಿತುಕೊಳ್ಳುವಷ್ಟರಲ್ಲಿ ಮಕ್ಕದ ಮಸೀದಿಯಿಂದ ಬಾಂಗ್ ಕೇಳಿಸಿತು. ಮತ್ತೆ ಅಮ್ಮನ ನೆನಪಾಗಿ ದಿಗಿಲು ಕಾಡತೊಡಗಿತು. ಎರಡು ಸೆಕೆಂಡ್ ಮಾತಾಡುವಷ್ಟಾದರೂ ಚಾರ್ಜ್ ಉಳಿದಿದ್ದರೆ ಅನ್ನುವ ’ರೆ’ ಸಾಮ್ರಾಜ್ಯದಲ್ಲಿ ವಿಹರಿಸುತ್ತಾ ಅಕ್ಕ ಪಕ್ಕ ಕಣ್ಣಾಡಿಸಿದೆ. ನನ್ನ ಹೊರತುಪಡಿಸಿ, ಪ್ರಯಾಣಿಕರು ಅಂತ ಬಸ್ಸಲ್ಲಿದ್ದುದು ಐವರು ಮಾತ್ರ. ಒಬ್ಬರೂ ಪರಿಚಯಸ್ಥರಿರಲಿಲ್ಲ.

ಮಸೀದಿ ಮಿನಾರದಿಂದ ಬಾಂಗ್ ಮೊಳಗುತ್ತಿತ್ತು. ನೇಸರ ಅದಾಗಲೇ ಪೂರ್ತಿ ಮರೆಯಾಗಿಬಿಟ್ಟಿದ್ದ. ಹೊರಗಿನ ಮ್ಲಾನ ಮುಸ್ಸಂಜೆಯ ವಿಷಣ್ಣತೆ ನನ್ನೊಳಗೂ ಆವರಿಸುತ್ತಿದೆಯೇನೋ ಅನಿಸತೊಡಗಿತು. ಅಷ್ಟರಲ್ಲಿ "ಮನೆಗೆ ಕಾಲ್ ಮಾಡೋಕಿತ್ತಾ?" ಅನ್ನುವ ಪ್ರಶ್ನೆಯೊಂದಿಗೆ, ಕಣ್ಣಮುಂದೆ ಮೊಬೈಲ್ ಹಿಡಿದು ಹಿರಿಯೊಬ್ಬರು ನಿಂತಿದ್ದರು. ತಲೆ ಎತ್ತಿ ನೋಡಿದೆ, ಅರ್ಧ ತೋಳಿನ ಅಚ್ಛ ಬಿಳಿ ಶರ್ಟ್, ಅಷ್ಟೇ ಬಿಳುಪಾಗಿದ್ದ ಧೋತಿ, ಕೊರಳಲ್ಲೊಂದು ರುದ್ರಾಕ್ಷಿ (ಅಥವಾ ಅದು ರುದ್ರಾಕ್ಷಿಯೇ ಅಂತ ನಾನಂದುಕೊಂಡಿದ್ದೆ) ಸರ, ಕೂದಲ ತುದಿಯಿಂದ ಹುಬ್ಬುಗಳ ಮಧ್ಯಕ್ಕೆ ಎಳೆದ ಕೆಂಪು ನಾಮ, ಕಣ್ಣಲ್ಲಿ ಸಾತ್ವಿಕ ಕಳೆ... ನನಗಾಗ ಹೆಚ್ಚಿನದೇನನ್ನೂ ಯೋಚಿಸುವಷ್ಟು ಸಮಯ ಇರಲಿಲ್ಲ.

ಮೊಬೈಲ್ ಇಸ್ಕೊಂಡು ಅಮ್ಮನಿಗೊಂದು ಫೋನ್ ಮಾಡಿ "ರೆಕಾರ್ಡ್ ಆಗಿರ್ಲಿಲ್ಲ, ಹಾಗಾಗಿ ಕಾಲೇಜಿಂದ ಹೊರಡುವಾಗ ಸ್ವಲ್ಪ ಲೇಟಾಯ್ತು, ಈಗ ಬಸ್ಸಲ್ಲಿದ್ದೇನೆ, ಇನ್ನೇನು ಇಪ್ಪತೈದು ನಿಮಿಷಗಳಲ್ಲಿ ಮನೆ ತಲುಪಿಬಿಡುತ್ತೇನೆ" ಅಂತ ಒಂದೇ ಉಸಿರಿಗೆ ಹೇಳಿ ಕಾಲ್ ಕಟ್ ಮಾಡಿ ಆ ಹಿರಿಯರಿಗೆ ಒಂದು ಥ್ಯಾಂಕ್ಸ್ ನೊಂದಿಗೆ ಫೋನ್ ಮರಳಿಸಿದೆ. ಮನೆ ತಲುಪಿದ ಮೇಲೆ ಜವಾಬ್ದಾರಿಗಳ ಬಗ್ಗೆ ಅಮ್ಮ ನೀಡುವ ಉಪನ್ಯಾಸ ಕೇಳೋದಕ್ಕೆ ಅದಾಗಲೇ ನಾನು ಮಾನಸಿಕ ತಯಾರಿ ಮಾಡಿಕೊಳ್ಳತೊಡಗಲಾರಂಭಿಸಿಯಾಗಿತ್ತು.

ಮತ್ತೊಂದೆರಡು ನಿಮಿಷ ಕಳೆಯುವಷ್ಟರಲ್ಲಿ ಅದೇ ಹಿರಿಯರು ಎರಡು ಹೋಳು ಸೇಬು, ಒಂದು ಬಾಟಲಿ ನೀರು, ಮತ್ತೊಂದು ಖರ್ಜೂರದೊಂದಿಗೆ ಮತ್ತೆ ನನ್ನ ಮುಂದೆ ಬಂತು ನಿಂತು  "ಈಗಾಗ್ಲೆ ಬಾಂಗ್ ಆಗಿದೆ, ಇಫ್ತಾರ್ ಸಮಯವೂ ಆಗಿಹೋಗಿದೆ, ಬಹುಶಃ ನೀನೂ ಉಪವಾಸಿಗಳೇ, ಇವಿಷ್ಟನ್ನೂ ತೆಗೆದುಕೊಂಡು ಇವತ್ತಿನ ಇಫ್ತಾರನ್ನು ಪ್ಪೊರೈಸಿಬಿಡು" ಅಂದರು. ನನಗೆ ಒಂದು ಕಡೆ ಅಚ್ಚರಿ, ಇನ್ನೊಂದು ಕಡೆಯಿಂದ ಅನುಮಾನ ಕಾಡತೊಡಗಿತು. ತೆಗೆದುಕೊಳ್ಳಬೇಕೋ ಬೇಡವೋ ಅನ್ನುವ ಸಂಘರ್ಷದಲ್ಲಿ ನಾನಿದ್ದೆ. ನಿರಾಕರಿಸಿದರೆ ಅವರ ಹಿರಿಯತನವನ್ನು ಅಗೌರವಿಸಿದಂತಾಗುತ್ತದೆ, ಹಾಗಂತ ಸ್ವೀಕರಿಸೋಕೆ ಅವರೇನು ನನ್ನ ಪರಿಚಯಸ್ಥರಲ್ಲ.

ಏನು ಮಾಡಬೇಕೆಂದು ತೋಚದೆ ನಾನು ಸುಮ್ಮನೆ ಕುಳಿತೆ, ಅವರೇ ಮೊದಲು ಖರ್ಜೂರ ನನ್ನ ಕೈಗಿತ್ತು ತಿನ್ನು ಅಂದರು, ಏನೂ ಮಾಡಲಾಗದೆ ನಾನು ನಿಧಾನವಾಗಿ ಖರ್ಜೂರ ಬಾಯಿಗಿಟ್ಟೆ, ಮತ್ತೆ ಅವರೇ ನೀರನ್ನೂ, ಸೇಬನ್ನೂ ಕೊಟ್ಟು ಮುಖ ತಿರುಗಿಸಿ ಕೂತು ಬಿಟ್ಟರು. ಅಷ್ಟು ಹೊತ್ತಿಗಾಗುವಾಗ ಅವರ ಮೇಲೆ ನನಗಿದ್ದ ಅನುಮಾನಗಳು ನಿಧಾನವಾಗಿ ಕರಗಲಾರಂಭಿಸಿತ್ತು.

ಮತ್ತೆ ಬಾಟಲ್ ಅವರ ಕೈಗೆ ಮರಳಿಸುತ್ತಾ ನಾನು "ಥ್ಯಾಂಕ್ಯೂ ಅಂಕಲ್, ನಿಮ್ಮ ಉಪಯೋಗಕ್ಕೆ ಅಂತ ತಂದಿದ್ದುದನ್ನು ನನ್ಗೆ ಕೊಟ್ರಲ್ಲಾ, ನೀವು ಒಳ್ಳೆಯತನಕ್ಕೆ ಏನನ್ನಬೇಕೋ" ತಿಳಿಯುತ್ತಿಲ್ಲ ಅಂದೆ. ಅವರು "ಅಂತಹ ದೊಡ್ಡ ಮಾತೆಲ್ಲಾ ಬೇಡ, ಇದು ಒಳ್ಳೆಯತನವಲ್ಲ, ನನ್ನ ಮನಸ್ಸಮಾಧಾನಕ್ಕಾಗಿ ಮಾಡುತ್ತಿರುವ ಕೆಲಸವಷ್ಟೆ. ಸರಿಯಾಗಿ ಐದು ವರ್ಷಗಳ ಹಿಂದೆ ಇಂಥದ್ದೇ ಒಂದು ರಂಝಾನ್ ತಿಂಗಳಲ್ಲಿ ಎದೆಯುದ್ದಕ್ಕೆ ಬೆಳೆದಿದ್ದ ಮಗನನ್ನು ಒಂದು ಆಕ್ಸಿಡೆಂಟ್ ನಲ್ಲಿ ಕಳೆದುಕೊಂಡು ಬಿಟ್ಟೆ. ನನಗಾದ ನೋವು, ಸಂಕಟಗಳನ್ನೆಲ್ಲಾ ಮರೆಯಲು ಅವತ್ತಿಂದ ಪ್ರತಿ ವರ್ಷ ರಂಝಾನ್ ತಿಂಗಳಲ್ಲಿ ಮನೆಯಿಂದ ಹೊರಡುವಾಗೆಲ್ಲಾ ಒಂದು ಖರ್ಜೂರ, ಸೇಬು ಮತ್ತು ನೀರಿನ ಬಾಟಲಿನೊಂದಿಗೆ ಹೊರಡುತೊಡಗಿದೆ. ಹೀಗೆ ನಿನ್ನಂತೆ ಬಸ್ಸಲ್ಲಿ, ಬಸ್ ಸ್ಟ್ಯಾಂಡಲ್ಲಿ ಯಾವುಯಾವುದೋ ಕಾರಣಗಳಿಂದ ಬಾಕಿಯಾಗುವವರು ಸಿಕ್ಕರೆ ಕೊಟ್ಟುಬಿಡುತ್ತೇನೆ. ಇಫ್ತಾರ್ ಮುಗಿಸಿದ ತೃಪ್ತಿ ಅವರದಾದರೆ, ಅವರ ತೃಪ್ತಿಯಲ್ಲಿ ನಾನೂ ಪಾಲುದಾರನಾದೆನಲ್ಲಾ ಅನ್ನುವ ಖುಷಿ ನನಗೆ. ಸತ್ತು ಬೂದಿಯಾದ ಮಗನ ಆತ್ಮ ಅಲ್ಲೆಲ್ಲೋ ನಳನಳಿಸುತ್ತಿರುತ್ತದೆ ಅನ್ನುವ ನಂಬಿಕೆ ನನ್ನದು, ಅಷ್ಟೆ" ಅಂದು ಮತ್ತೆ ಮೌನವಾದರು.

ಪರಸ್ಪರರನ್ನು ಅನುಮಾನಿಸುವ, ಕೊಚ್ಚುವ, ಕೊಲ್ಲುವ, ಸುಡುವ, ನಡುಬೀದಿಯಲ್ಲಿ ಬೆತ್ತಲಾಗಿಸುವ, ಧರ್ಮದ ಹೆಸರಿನಲ್ಲಿ ರಕ್ತದೋಕುಳಿಯಾಡುವ ಈ ಕಾಲದಲ್ಲೂ ಮಾನವ ಸಹಜ ಬಾಂಧವ್ಯಗಳು, ವಿಶ್ವ ಮಾನವನಾಗಿ ಹುಟ್ಟುವ ಮನುಷ್ಯನ ಸಹಜ ಅನುಭೂತಿಗಳು, ಮಾನವನಿಷ್ಠ ಸಂವೇದನೆಗಳು ಇಂತಹವರ ಹೃದಯದಲ್ಲಿ ಇನ್ನೂ ಉಸಿರಾಡುತ್ತಿವೆಯಲ್ಲಾ ಅನಿಸಿತು. ’ಅಂಕಲ್, ನಿಮ್ಮ ಹೆಸರು, ಊರು?’ ಅಂತ ಒಮ್ಮೆ ಕೇಳಹೊರಟೆ, ಮರುಕ್ಷಣ ಮನಸ್ಸು ’ಒಳ್ಳೆಯತನಕ್ಕೆ ವಿಳಾಸವಿಲ್ಲ, ಅದು ಹೆಸರು, ಊರು, ಕೇರಿ, ವಿಶೇಷಣಗಳ ಹಂಗಿಲ್ಲದೆ ಅರಳಿ ಸುತ್ತ ಹಗುರ ಸುಗಂಧ ಹಬ್ಬುವ ಹೂವಿನಂತೆ’ ಅಂದಿತು. ಅಷ್ಟು ಹೊತ್ತಿಗಾಗುವಾಗಾಗಲೇ ನಾನು ಇಳಿಯುವ ಸ್ಟಾಪ್ ಬಂತು. ಅವರಿಗೆ ಕೈ ಬೀಸಿ ಇಳಿದು, ಕತ್ತಲಲ್ಲೇ ತಡವರಿಸುತ್ತಾ ಮನೆ ತಲುಪಿ ಕಾಲಿಂಗ್ ಬೆಲ್ ಒತ್ತಿದೆ. ಅಮ್ಮ ಬಾಗಿಲು ತೆರೆದು "ಇಫ್ತಾರ್ ರೆಡಿಮಾಡಿಟ್ಟಿದ್ದೇನೆ, ಹೋಗಿ ಉಪವಾಸ ತೊರೆದುಬಿಡು" ಎಂದರು. ನಾನು "ಆಗ್ಲೇ ಬಸ್ಸಲ್ಲಿ ತೊರೆದಾಯ್ತು" ಅಂದೆ. ಅಮ್ಮ "ಬಸ್ಸಲ್ಲಾ?" ಪ್ರಶ್ನಿಸಿದರು. "ಹೂಂ, ತಾಯಿ ಮನಸ್ಸಿನ ಹಿರಿಯೊಬ್ಬರು ಬದುಕಲ್ಲಿ ಎಂದೂ ಮರೆಯಲಾಗದಂತಹ ಇಫ್ತಾರ್ ಆಯೋಜಿಸಿದ್ದರು" ಎಂದು ಒಳಸರಿದೆ. ಅಮ್ಮ ನನ್ನ ನೋಡುತ್ತಾ ನಿಂತರು.

ಸುಮ್ಮನೆ....

ಮಂಗಳವಾರ, ಫೆಬ್ರವರಿ 23, 2016

ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ...

ಅತ್ತ ಉರಿಬಿಸಿಲೂ ಅಲ್ಲದ ಇತ್ತ ತೀವ್ರ ಚಳಿಯೂ ಅಲ್ಲದ ಫೆಬ್ರವರಿ ತಿಂಗಳು. ಅದ್ಯಾವುದೋ ಒಂದು ಮನೆಯ ಜೋಕಾಲಿಯಲ್ಲಿ ಜೀಕುತ್ತಾ ಆಗಾಗ ಕತ್ತುಹೊರಳಿಸಿ ದಾರಿಯತ್ತ ನೋಡುವ ಹೂ ಮನಸಿನ ಹುಡುಗಿ. ಅವಳ ಕಣ್ಣಿನ ಕಣ ಕಣದಲ್ಲೂ ಇನ್ನೂ ಬರಲಿಲ್ಲವೇಕೆ ಅನ್ನುವ ಪ್ರಶ್ನೆ. ಬಾನಂಚು ಕೆಂಪಾದಷ್ಟೂ ಅವಳೆದೆ ಢವಢವ. ಕೈಯಲ್ಲಿದ್ದ ಪುಸ್ತಕದೊಳಗಿನ ಪತ್ರ ಯಾಕೋ ಅಣಕವಾಡುತ್ತಿದೆ ಅಂತನಿಸಲಾರಂಭಿಸುತ್ತದೆ. ಅಷ್ಟರಲ್ಲೇ 'ಕಿರ್ರ್' ಎಂದು ಮನೆಯ ಗೇಟ್ ತೆರೆಯುವ ಸದ್ದು. ಅವನ ತಂಗಿಯೋ, ಪಕ್ಕದ ಮನೆಯವಳೋ ಪುಟ್ಟದೊಂದು ಪತ್ರ,  ಒಂದು ಗ್ರೀಟಿಂಗ್ ಕಾರ್ಡ್ ಮತ್ತೊಂದು ನಗುವ ಗುಲಾಬಿ ಹೂವು... ಆಚೀಚೆ ನೋಡಿ ಯಾರೂ ನೋಡುತ್ತಿಲ್ಲ ಎಂದು ಖಾತ್ರಿ ಪಡಿಸಿಕೊಂಡು ಇವಳ ಕೈಗಿತ್ತು,  ಇವಳ ಕೈಯಲ್ಲಿನ ಪತ್ರವನ್ನು ಮೆಲ್ಲನೆ ತನ್ನ ಕೈಗೆ ತೆಗೆದುಕೊಂಡು ಮಾಯವಾಗುತ್ತಾಳೆ.

ಇತ್ತ ಹುಡುಗಿ ಅದೇ ಜೋಕಾಲಿಯಲ್ಲಿ ಜೀಕುತ್ತಾ ಹೂವನ್ನು ಮುಡಿಯಲೋ ಬೇಡವೋ ಅನ್ನುವ ಕನ್‍ಫ್ಯೂಸನ್‍ನಲ್ಲಿ ತುಟಿಗೊತ್ತಿ ಮಡಿಲಲ್ಲಿಟ್ಟುಕೊಂಡು ಗ್ರೀಟಿಂಗ್ ಕಾರ್ಡ್‌ನ ಮೇಲೆ ಕೈಯಾಡಿಸುತ್ತಾಳೆ. ಅವನ ಜೊತೆ ಬಾಳಬೇಕೆಂಬ ಅವಳ ಅಷ್ಟೂ ಬಣ್ಣಬಣ್ಣದ ಕನಸುಗಳ ನುಣುಪು ಅಂಗೈ ಮೇಲೆ ನರ್ತಿಸಲಾರಂಭಿಸುತ್ತವೆ. ಪತ್ರ ಬಿಚ್ಚಿದರೆ ಮುಗಿದೇ ಹೋಯಿತು, ಎಳೆಯ ಪಾರಿಜಾತ ಹೂವಿನ ಎಸಳೊಂದು ನಾಚಿ ಕಣ್ಣುಮುಚ್ಚಿ ಧರೆಯ ತಬ್ಬಿಕೊಂಡಂತಹಾ ನಾಜೂಕು. ಜೋಕಾಲಿಯ ಜೋಡಿ ಹಗ್ಗಗಳು ಧನ್ಯೋಸ್ಮಿ!

ಅಲ್ಲಿ ಹತ್ತು ಗಾವುದ ದೂರದ ಆ ಮನೆಯಲ್ಲಿ ಹುಡುಗ ಶತಪಥ ಹಾಕುತ್ತಾನೆ. ಯಾರದೋ ದಾರಿ ಕಾಯುತ್ತಿರುವಂತೆ ನಿಮಿಷಕ್ಕೆ ಅರುವತ್ತು ಬಾರಿ ತಲೆ ಎತ್ತಿ ಸುತ್ತ ದಿಟ್ಟಿಸುತ್ತಾನೆ. ತಾನು ಕಳುಹಿಸಿದ ಉಡುಗೊರೆ ಎಲ್ಲಿ ದಪ್ಪ ಮೀಸೆಯ ಅವಳಣ್ಣನ ಕೈಗೆ ಸಿಕ್ಕಿಬಿಡುತ್ತದೋ ಎಂದು ಸುಳ್ಳೇ ಸುಳ್ಳು ಕಲ್ಪಿಸಿಕೊಂಡು ಭಯಪಟ್ಟುಕೊಳ್ಳುತ್ತಾನೆ. ಪಲ್ಸ್ ರೇಟ್ ಅವನಿಗೇ ಕೇಳಿಸುವಷ್ಟು ಏರುತ್ತದೆ. ಅಷ್ಟರಲ್ಲಿ ಅವಳ ಮನೆಗೆ ಹೋಗಿದ್ದ ತಂಗಿ ಓಡೋಡಿ ಬಂದು ಪತ್ರ ಕೈಗಿಟ್ಟು ಕಣ್ಣು ಹೊಡೆಯುತ್ತಾಳೆ. ಅವನಿಗೀಗ ತಂಗಿಯೇ ಮೇಘದೂತೆ. ಉಜ್ಜಯಿನಿಯಿಂದ ಸ್ವತಃ ಕಾಳಿದಾಸನೇ ಬರೆದ ಪ್ರೇಮ ಕಾವ್ಯ ಹೊತ್ತು ತಂದವಳು ಅನ್ನುವ ಭಾವ. ತಂಗಿ 'ಹುಷಾರಣ್ಣಾ' ಅಂದು ಒಳಸರಿಯುತ್ತಾಳೆ.

ಹುಡುಗ ಅವಳ ಅಂಗೈ ಬೆವರಿನಿಂದ ತುಸು ಒದ್ದೆಯಾದ ಪತ್ರದ ಮೇಲೊಂದು ಹೂಮುತ್ತನ್ನಿಟ್ಟು ಮೆಲ್ಲನೆ ಬಿಡಿಸುತ್ತಾನೆ. ಅವಳ ದುಂಡು ಅಕ್ಷರಗಳಲ್ಲಿ ಅವಳೇ ಮೈದಾಳಿದ್ದಾನೇನೋ ಅನ್ನುವಷ್ಟು ಮೈಮರೆಯುತ್ತಾನೆ. ಈ ಪತ್ರ ಮುಗಿಯದಿರಲಿ ಭಗವಂತಾ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಿರುತ್ತಾನೆ. ಆದರೂ ಪತ್ರ ಮುಗಿಯುತ್ತದೆ.  ಕೊನೆಯಲ್ಲಿ ಆಕೆ ಬರೆದ 'ಅಲ್ಲಿ ದೂರದಲ್ಲಿ ನಿಂತು ನನ್ನ ಕೋಣೆಯ ಕಿಟಕಿಯೆಡೆ ಇಣುಕುವ ಚಂದ್ರನನ್ನು ಕಿಟಕಿಯೊಳಗೆ ತೂರದಂತೆ ನಿರ್ಬಂಧಿಸಿದ್ದೇನೆ. ನಿನಗೆಂದು ಆಸ್ಥೆಯಿಂದ ಎತ್ತಿಟ್ಟ ಅಷ್ಟೂ ಪ್ರೀತಿಯಲ್ಲಿ ಅವನು ಪಾಲು ಕೇಳುತ್ತಾನೇನೋ ಅನ್ನುವ ಭಯ ನನಗೆ ' ಎನ್ನುವ ಸಾಲನ್ನು ನೂರು ಬಾರಿ ಓದುತ್ತಾನೆ. ಆ ರಾತ್ರಿಯಿಡೀ ಅವನೆದೆಯ ಕವಲುಗಳಲ್ಲಿ ಸಹಸ್ರ ಸಂಭ್ರಮ ಜೋಕಾಲಿಯಾಡುತ್ತದೆ. ಅಲ್ಲವಳ ಕದಪುಗಳನ್ನು ಅನುರಾಗವೊಂದು ಅವುಚಿಕೊಳ್ಳುತ್ತದೆ. ಪಾರಿಜಾತ ಸುಮ್ಮನೆ ನಗುತ್ತದೆ, ಚಂದ್ರನಿಗೂ ಹೊಟ್ಟೆಕಿಚ್ಚು.

ತುಂಬಾ ಹಿಂದೆ ಹೋಗಬೇಕಂತೇನಿಲ್ಲ. ಕೇವಲ ನಾಲ್ಕು - ಐದು ವರ್ಷಗಳ ಹಿಂದೆ ಫೆಬ್ರವರಿ ಹದಿನಾಲ್ಕೆಂದರೆ ಇಷ್ಟು ಮತ್ತು ಇಷ್ಟು ಮಾತ್ರ ಆಗಿತ್ತು.  ಪ್ರತೀ ಪ್ರೇಮಿಯೆದೆಯಲ್ಲೂ ಪರಿಜಾತ ಅರಳುತ್ತಿತ್ತು. ಪ್ರತೀ ಪ್ರೇಮಿಯ ಮನೆಯ ಜೋಕಾಲಿಗೂ ಜೀವ ಜಿಗಿತುಕೊಂಡು ಬಿಡುತ್ತಿತ್ತು. ಆಗೆಲ್ಲಾ ಇಷ್ಟೊಂದು ಅಪ್ಲಿಕೇಷನ್‍ಗಳ ಆಪ್ಶನ್ ಇರಲಿಲ್ಲ.  Happy Valentine's day ಅನ್ನುವ ಶುಷ್ಕ ಮೆಸೇಜ್‍ಗಳೂ ಇರಲಿಲ್ಲ.  ಗೂಗಲ್‍ನಲ್ಲಿ ಪ್ರೇಮಿಗಳ ದಿನದ ರೆಡಿಮೇಡ್ ಶುಭಾಶಯಗಳು ಬಿಕರಿಗೆ ಇರಲೇ ಇಲ್ಲ.  ಎಲ್ಲಕ್ಕಿಂತ ಹೆಚ್ಚಾಗಿ ಅದೆಲ್ಲಿಂದಲೋ ಕದ್ದು, ಕಾಪಿ ಮಾಡಿ ತನ್ನವರಿಗೆ ಶುಭಾಶಯ ಕೋರಬೇಕಾದ ದರಿದ್ರತನ ಯಾವ ಪ್ರೇಮಿಗೂ ಇರಲಿಲ್ಲ. ಸಾವಿರ ಶತಮಾನಗಳ ಇತಿಹಾಸ ಇರುವ ಈ ದೇಶದ ಸಂಸ್ಕೃತಿ ನಮ್ಮಿಂದ ರಕ್ಷಿಸಲ್ಪಡಬೇಕಾದಷ್ಟು ಜಾಳುಜಾಳಾಗಿಲ್ಲ ಅನ್ನುವ ಕನಿಷ್ಠ ಪ್ರಜ್ಞೆ ಇಲ್ಲದ ಬಲಪಂಥದವರೂ, ಅವರು ವಿರೋಧಿಸಿದ್ದೆನ್ನೆಲ್ಲಾ ಮಾಡಲೇಬೇಕು ಅನ್ನುವ ವಿಚಿತ್ರ ಮನಸ್ಥಿತಿ ಇರುವ ಎಡಪಂಥೀಯರೂ ಇರಲಿಲ್ಲ.

ಪ್ರೀತಿಯ ಆ ತಪನೆ, ದೂರದಲ್ಲಿದ್ದುಕೊಂಡೇ ಪಡುವ ಖುಶಿ, ಕಾಯುವಿಕೆ, ವಿರಹ, ಬೆಳದಿಂಗಳ ಕವಿತೆ... ಎಲ್ಲವನ್ನೂ 4G ಸ್ಪೀಡಿನ ಅಪ್ಲಿಕೇಷನ್‍ಗಳು ಕಸಿದುಕೊಂಡುಬಿಟ್ಟಿವೆ. ಅಲ್ಲೆಲ್ಲೋ ಫೇಸ್‍ಬುಕ್‍ನ ಯಾವುದೋ ಪೇಜ್‍ನಲ್ಲಿ ಅವನು ಅಪ್ಡೇಟ್ ಮಾಡಿದ ಸ್ಟೇಟಸ್‍ಗೆ ಇವಳು ಲೈಕ್ ಕೊಡುತ್ತಾಳೆ.  ರಾತ್ರಿ ಮೆಸೆಂಜರ್‍ನಲ್ಲಿ ಹಾಯ್, ಹಲೋದಿಂದ ಆರಂಭವಾಗಿ ಮಾತು ಪ್ರೀತಿಯವರೆಗೆ ಬಂದು ನಿಲ್ಲುತ್ತದೆ.  ಮರುದಿನ ಮತ್ತಿನ್ಯಾವುದೋ ಒಂದು ಕಾಫೀ ಡೇಯಲ್ಲಿ ಎದುರಾ-ಎದುರು ಕೂತು ಕೋಲ್ಡ್ ಕಾಫಿ ಹೀರುತ್ತಾರೆ. ಅಲ್ಲಿಂದೆದ್ದು ಮಲ್ಟಿಪ್ಲೆಕ್ಸ್‌ವೊಂದರಲ್ಲಿ ಸಿನಿಮಾ ನೋಡಿ, ಅಲ್ಲಿಂದ ಮತ್ಯಾವುದೋ ಮಾಲ್‍ಗೆ ಭೇಟಿಕೊಟ್ಟು ಬೇಕಾದ್ದು,  ಬೇಡವಾದ್ದು ಎಲ್ಲಾ ಕೊಂಡು, ನಮ್ಮಿಬ್ಬರ ಟೇಸ್ಟ್ ಎಷ್ಟು ಸೇಮ್ ಅಲ್ವಾ ಅಂತ ಸುಳ್ಳೇ ಸುಳ್ಳು ಸಂಭ್ರಮಿಸಿ ಮನೆಗೆ ಮರಳುತ್ತಾರೆ. ರಾತ್ರಿ 'I'm in love with you' ಎಂದು ವಾಟ್ಸಾಪ್ ಮಾಡಿ ಜೊತೆಗೊಂದು ಗುಲಾಬಿ ಹೂವಿನ ಚಿತ್ರ ಕಳುಹಿಸುತ್ತಾರೆ. ಅಲ್ಲಿಂದಾಚೆ ಇಬ್ಬರೂ ತಾವು ಅಮರ ಪ್ರೇಮಿಗಳೆಂಬ ಅಪ್ಪಟ ಸುಳ್ಳನ್ನು ಸತ್ಯಸ್ಯ ಸತ್ಯ ಎಂಬಂತೆ ನಂಬುತ್ತಾರೆ.

ಒಂದಿಷ್ಟು ದಿನಗಳ ವೀಕೆಂಡ್ ಪಾರ್ಟಿ, ಲಾಂಗ್ ಡ್ರೈವ್‍ಗಳ ನಂತರ 4G ಸ್ಪೀಡ್ ಕಳೆದುಕೊಳ್ಳುತ್ತದೆ. ಸಂಬಂಧದ ವೀಣೆಯ ತಂತಿ ಸಡಿಲವಾಗುತ್ತದೆ. ಅವಳ ಪೋಟೋಗೆ ಅದ್ಯಾರೋ ಕಮೆಂಟಿಸಿದ 'awesome ' ಅನ್ನುವ ಕಮೆಂಟ್ ಇವನ ತಲೆಕೆಡಿಸುತ್ತದೆ. ಇವನ ಸ್ಟೇಟಸ್‍ಗೆ ಮತ್ಯಾವುದೋ ಹುಡುಗಿ ಬರೆದ ಮಾರುದ್ದದ ಕಮೆಂಟ್ ಅವಳ ನಿದ್ದೆಗೆಡಿಸುತ್ತದೆ. ಅವನು ವಿಪರೀತ ಪೊಸ್ಸೆಸಿವ್ ಅಂತ ಇವಳಿಗೂ, ಇವಳು ಮಹಾನ್ ಜಗಳಗಂಟಿ ಅಂತ ಅವನಿಗೂ ಅನಿಸಲಾರಂಭಿಸುತ್ತದೆ. ರಿಲೇಷನ್‍ಶಿಪ್ ಸ್ಟೇಟಸ್, 'ಇನ್ ಕಾಂಪ್ಲಿಕೇಷನ್ ' ಎಂದು ಬದಲಾಗುತ್ತದೆ. ಬೆಂಕಿಗೆ ತುಪ್ಪ ಸುರಿಯುವ ಫ್ರೆಂಡ್ಸ್ ನಿನ್ನಾಯ್ಕೆಯೇ ಸರಿ ಇಲ್ಲ ಎಂದು ಪದೇ ಪದೇ ಕುಯ್ಯತೊಡಗುತ್ತಾರೆ. ಪ್ರೀತಿ ಹುಟ್ಟಿದ ಅದೇ ವಾಟ್ಸಾಪ್‍ನಲ್ಲಿ 'lets breakup ' ಅನ್ನುವ ಮೆಸೇಜ್ ರವಾನೆಯಾಗುತ್ತದೆ. ಸಡಿಲಾಗಿದ್ದ ವೀಣೆಯ ತಂತಿ ಖಿಲ್ಲನೆ ತುಂಡಾಗುತ್ತದೆ.

ಇಬ್ಬರೂ ಒಂದಿಷ್ಟು ದಿನಗಳ ಕಾಲ ಭಗ್ನ ಪ್ರೇಮದ ಸ್ಟೇಟಸ್ ಬರೆದುಕೊಂಡು, ಪರೋಕ್ಷವಾಗಿ ಒಬ್ಬರನೊಬ್ಬರು ಜರೆಯುತ್ತಾ, ಕೆಲವೊಮ್ಮೆ ತಾನು ಮೂವ್ ಆನ್ ಆಗಿದ್ದೇನೆಂದು ಮತ್ತೊಬ್ಬರನ್ನು ನಂಬಿಸಲು ಸರ್ಕಸ್ ಮಾಡುತ್ತಾ, ವಿರಹಿಗಳು ಅನ್ನುವ ಟ್ಯಾಗ್‍ಲೈನ್ ಹಚ್ಚಿಸಿಕೊಂಡು ಓಡಾಡುತ್ತಾರೆ. ಮತ್ತೊಂದಿಷ್ಟು ದಿನಗಳ ನಂತರ ಎಲ್ಲವೂ ಸರಿ ಹೋಗುತ್ತದೆ.  ಅಥವಾ ಸರಿ ಹೋಗಿದೆ ಅಂದುಕೊಂಡು ಸತ್ತಿರೋ ಬೇರಿಗೆ ಮತ್ತೆ ನೀರು ಹನಿಸಲು ಮುಂದಾಗುತ್ತಾರೆ. ಎರಡೂವರೆ ಅಕ್ಷರಗಳ ಪ್ರೀತಿ ಒದ್ದಾಡುತ್ತಿರುತ್ತದೆ, ಜೀವ ಸುಮ್ಮನೆ ನೋಯುತ್ತಿರುತ್ತದೆ, ಬದುಕು ಗೊತ್ತೇ ಆಗದಂತೆ ಒಣಗುತ್ತಿರುತ್ತದೆ, ನಿನ್ನೆಗಳು ನಾಳೆಗಳ ನಿರ್ಮಲತೆಯನ್ನು ಕಬಳಿಸುತ್ತದೆ

ಊಹೂಂ, ಹಾಗಾಗಬಾರದು ನೋಡಿ. ನಿನ್ನೆಯ ಪ್ರತಿ ಕ್ಷಣಗಳು ನಾಳೆಯ ಕನ್ನಡಿಯ ಸ್ಪಷ್ಟ ಪ್ರತಿಬಿಂಬವಾಗಬೇಕು, ಹೀರಿದ ಕಾಫಿಯ ಪ್ರತಿಯೊಂದು ಸಿಪ್ಪಿನಲ್ಲೂ ಪ್ರೀತಿ ನಳನಳಿಸುತ್ತಿರಬೇಕು, ಇಟ್ಟ ಪ್ರತಿ ಹೆಜ್ಜೆಯ ನೆನಪು ಜೀವನ ಪೂರ್ತಿ ನವಿರು ಪ್ರೇಮ ಕಾವ್ಯದಂತೆ ಬದುಕಿನ ಒನಪನ್ನು ಕಾಯುತ್ತಿರಬೇಕು, ಒಂದು ಹಗಲು ಕಳೆಯುವಷ್ಟರಲ್ಲಿ ಮಾಡಿದ ಜಗಳದ ಅಷ್ಟೂ ಕುರುಹುಗಳು ಅಳಿದು ಹೋಗಬೇಕು.  ಮತ್ತು ಹೀಗೆಲ್ಲಾ ಆಗಬೇಕೆಂದರೆ, ಪ್ರೀತಿಯಲ್ಲಿ ದುಡುಕಿರಬಾರದು. ಪರಸ್ಪರರ ಭಿನ್ನತೆಯನ್ನು ಒಪ್ಪಿಕೊಳ್ಳುವ ವಿಶಾಲ ಮನೋಭಾವವಿರಬೇಕು, ಸಹನೆ ಇರಬೇಕು.

ಇಷ್ಟಿದ್ದರೆ ಸಾಕು, 'ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ...' ಎಂದು ಪ್ರೀತಿ ಹಾಡತೊಡಗುತ್ತದೆ. ಮತ್ತೆ ಮತ್ತೆ ಮಳೆ ಹುಯ್ಯುತ್ತದೆ, ಜೀವ ಹಸಿರಾಗುತ್ತದೆ.