ಬುಧವಾರ, ಮಾರ್ಚ್ 30, 2016

ಕೊಚ್ಚುವ, ಕೊಲ್ಲುವ, ಸುಡುವ ಈ ಕಾಲದಲ್ಲೂ...

ಬದುಕು ಅಪ್ಪನಂತೆ. ತಲೆ ನೇವರಿಸಿ ಮುದ್ದು ಮಾಡದೆ, ಲಾಲಿ ಹಾಡುತ್ತಾ ತಟ್ಟಿ ಮಲಗಿಸದೆ, ತಬ್ಬಿ ಕಣ್ಣೀರಿಡದೆ, ಪ್ರೈಜ್ ತಗೊಂಡಾಗೆಲ್ಲಾ ಪ್ರಶಂಸಿಸದೆ, ಒಂದು ನಿರ್ದಿಷ್ಟ ಅಂತರ ಕಾಯ್ದುಕೊಂಡೇ ಪಾಠ ಕಲಿಸುತ್ತದೆ, ಅಪರಿಚಿತರನ್ನು ಪರಿಚಿತರನ್ನಾಗಿಸುತ್ತದೆ. ಅದು ಕ್ಷಣ ಹೊತ್ತಿದ್ದು, ಮತ್ತೆ ಮರೆಯುವಂತಹ ಪರಿಚವಲ್ಲ. ತೋಳಮೇಲಿನ ಮಚ್ಚೆಯಂತೆ ಜೀವನ ಪೂರ್ತಿ ಕಾಡುವ, ಕಾಡಿಸುವ, ಬಿಟ್ಟೂ ಬಿಡದೆ ನೆನಪಾಗಿ ಉಳಿಯುವಂತಹ ಪರಿಚಯಗಳು. ಬದುಕಿನ ಪರಿಚಯಗಳಿಗೆ ಕ್ರಮಸಂಖ್ಯೆ, ಪುಟ ಸಂಖ್ಯೆ, ಪರಿವಿಡಿ, ಮುನ್ನುಡಿ, ಶಬ್ದಾರ್ಥ, ಆಮೇಲೊಂದಿಷ್ಟು ಪ್ರಶ್ನೆಗಳು... ಊಹೂಂ, ಯಾವುವೂ ಇರುವುದಿಲ್ಲ. ಅದು ಆಕಸ್ಮಿಕವಾಗಿ ಯಾರನ್ನೋ ಪರಿಚಯಿಸಿ ಅಷ್ಟೇ ಅನಿರೀಕ್ಷಿತವಾಗಿ ಒಂದು ಸಣ್ಣ ಸುಳಿವೂ ಕೊಡದಂತೆ ನಮ್ಮ ಜೀವನದಿಂದ ನಿರ್ಗಮಿಸುವಂತೆ ಮಾಡಿಬಿಡುತ್ತದೆ. ಆದ್ರೆ ಬದುಕು ಪರಿಚಯಿಸುವ ಕೆಲ ಪರಿಚಯಗಳು ಕೆಲವೇ ಗಂಟೆ ಅಥವಾ ನಿಮಿಷಗಳದಾಗಿದ್ದರೂ ಅದು ಕಾಡುವ ಪರಿ, ಉಳಿಸುವ ನೆನಪುಗಳು ಅನಂತ, ಅಪರಿಮಿತ.

ನಾನೀಗ ನಿಮಗೆ ಹೇಳಹೊರಟಿರುವುದೂ ಅನೀರಿಕ್ಷಿತವಾಗಿ ಭೇಟಿಯಾಗಿ, ಒಂದಿಷ್ಟು ನೆನಪುಗಳನ್ನು ಉಳಿಸಿ , ಅಷ್ಟೇ ಅನಿರೀಕ್ಷಿತವಾಗಿ ಬದುಕಿಂದ ಎದ್ದು ಹೋದ ಹಿರಿಯರೊಬ್ಬರ ಕುರಿತು. ಅವು ಪದವಿ ತರಗತಿಯ ಮೊದಲ ದಿನಗಳು. ಒಂದಿಡೀ ಸೆಮಿಸ್ಟರ್ ಹೊಸ ಪ್ರಪಂಚ, ಹೊಸ ಸ್ನೇಹ, ಹೊಸ ಸಂಬಂಧ, ಆಟ, ಹುಡುಗಾಟ, ಕಾಡು ಹರಟೆಗಳಲ್ಲೇ ಕಳೆದುಹೋಗಿತ್ತು. ಪರೀಕ್ಷೆಗೆ ಇನ್ನೇನು ಎರಡು ದಿನಗಳು ಉಳಿದಿವೆ ಅನ್ನುವಷ್ಟಾಗುವಾಗಲೇ ಪ್ರಯೋಗಾಲಯದ ಕೆಲಸಗಳು ಇನ್ನೂ ಮುಗಿದಿಲ್ಲ, ಸಬ್ಮಿಟ್ ಮಾಡಬೇಕಾದ ರೆಕಾರ್ಡ್ ಇನ್ನೂ ಸಿದ್ಧವಾಗಿಲ್ಲ ಅನ್ನುವುದು ತಿಳಿದದ್ದು. ಪರೀಕ್ಷೆಗಳಿಗೆ ಕೂರಬೇಕೆಂದರೆ ರೆಕಾರ್ಡ್ ಸಬ್ಮಿಟ್ ಮಾಡಲೇಬೇಕಿತ್ತು. ಸರಿ, ನಮ್ಮ ನಮ್ಮಲ್ಲೇ ಕೆಲಸ ಹಂಚಿಕೊಂಡು, ಒಂದೇ ದಿನದಲ್ಲಿ ಎಲ್ಲಾ ಕೆಲ್ಸ ಮುಗಿಸಿ, ಬೈಡಿಂಗ್ ಗೆಂದು ಕೊಡಲೇಬೇಕೆಂದು, ಅವುಡುಗಚ್ಚಿ ಕುಳಿತು, ಇಲ್ಲದ ಗಂಭೀರತೆಯನ್ನು ನಮ್ಮೊಳಗೆ ಆವಾಹಿಸಿಕೊಂಡು, ಬಾರದ ಔಟ್ ಪುಟ್, ಎರರ್ ತೋರಿಸುವ ಪ್ರೋಗ್ರಾಂ ಗಳನ್ನು ಬಯ್ಯುತ್ತಾ, ಅಂತೂ ಇಂತೂ ರೆಕಾರ್ಡ್ ಕೆಲಸ ಮುಗಿಸಿ, ಬೈಂಡಿಂಗ್ ಗೆಂದು ಕೊಟ್ಟು ಲ್ಯಾಬಿಂದ ಹೊರಬರುವಾಗ ಸರಿಯಾಗಿ ಆರು ಗಂಟೆ.

ಕಾಲೇಜಿಂದ ನಮ್ಮೂರಿಗೆ ಬರಲು ಎರಡು ಬಸ್ ಗಳನ್ನು ಮಧ್ಯದಲ್ಲಿ ಬದಲಾಯಿಸಬೇಕಿತ್ತು. ಅದೇಕೋ ಅವತ್ತು ಒಂದು ಬಸ್ ಬೇಗನೇ ಬಂದು ನಾನು ಆರೂವರೆ ಆಗುವಷ್ಟರಲ್ಲಿ ಮತ್ತೊಂದು ಬಸ್ ಸ್ಟಾಂಡ್ ಗೆ ತಲುಪಿಬಿಟ್ಟೆ. ಆದ್ರೆ ಇನ್ನೊಂದು ಬಸ್ ಗಾಗಿ ಎಷ್ಟು ಕಾದರೂ ಬರಲೇ ಇಲ್ಲ. ಸಮಯ ಸುಮ್ಮನೆ ಓಡುತ್ತಲೇ ಇತ್ತು. ಕೈಲಿದ್ದ ಮೊಬೈಲ್ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗಿತ್ತು. ಅದು ಬೇರೆ ರಂಝಾನ್ ತಿಂಗಳು. ಇಫ್ತಾರ್ ಸಮಯಕ್ಕಾಗುವಾಗಾದರೂ ಮನೆ ತಪುಪದಿದ್ದರೆ ಅಮ್ಮ ಗಾಬರಿ ಬಿದ್ದು ಬಿಡುತ್ತಾರೆ. ಮೇಲಾಗಿ ನಮ್ಮೂರಿಂದ ನಮ್ಮ ಕಾಲೇಜ್ ಗೆ ಹೋಗುವವಳು ನಾನೊಬ್ಬಳೇ ಇದ್ದುದ್ದರಿಂದ ಇನ್ಯಾರಿಂದಾದರೂ ಕೇಳಿ ತಿಳ್ಕೊಳ್ಳುವುದೂ ಸಾಧ್ಯ ಇರ್ಲಿಲ್ಲ. ಬಸ್ ಬೇಗ ಬರ್ಲಿ ಅಂತ ಪ್ರಾರ್ಥಿಸುವುದನ್ನು ಬಿಟ್ರೆ ನನಗಿನ್ಯಾವ ದಾರಿಯೂ ಉಳಿದಿರ್ಲಿಲ್ಲ.

ಒಂದಿಷ್ಟು ಹೊತ್ತು ಕಾದನಂತರ ಬಸ್ ಬಂತು, ಹತ್ತಿ ಕುಳಿತು, ಒಂದು ಮೆಸೇಜ್ ಮಾಡುವಷ್ಟಾದರೂ ಚಾರ್ಜ್ ಉಳಿದಿದ್ದರೆ... ಅನ್ನುವ ಆಸೆಬುರುಕತನದಿಂದ ಮೊಬೈಲ್ ಆನ್ ಮಾಡೋಕೆ ಪ್ರಯತ್ನಿಸಿ, ಅದು ಆಗುವುದಿಲ್ಲ ಅನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿ, ಎನೂ ಮಾಡಲಾಗದ ಅಸಹಾಯಕತೆಯಲ್ಲಿ ಧುಮುಗುಡುತ್ತಾ ಇರಬೇಕಾದರೆ, ಬಸ್ ಹೊರಟೇಬಿಟ್ಟಿತು. ತುಸು ರಿಲಾಕ್ಸ್ ಅನ್ನಿಸಿ ಇನ್ನೇನು ಸೀಟಿಗೆ ಒರಗಬೇಕು ಅನುವಷ್ಟರಲ್ಲಿ, ಬಸ್ ಒಮ್ಮೆಲೇ ನಿಂತಂತಾಯಿತು. ಕಂಡಕ್ಟರ್ ಇಳಿದು ಚೆಕ್ ಮಾಡಿ ನನಗರ್ಥವಾಗದ ಯಾವುದೋ ತಾಂತ್ರಿಕ ದೋಷವಾಗಿದೆ ಅಂತ ಡ್ರೈವರ್ ಗಂದು, ಪ್ರಯಾಣಿಕರನ್ನು ಉದ್ದೇಶಿಸಿ, ಈ ಬಸ್ ಮುಂದೆ ಹೋಗುವುದಿಲ್ಲ, ಇನ್ನೊಂದು ಬಸ್ ವ್ಯವಸ್ಥೆ ಮಾಡಿಕೊಡುತ್ತೇವೆ, ಅಲ್ಲಿಯವರೆಗೆ ಕಾಯಲೇಬೇಕು ಅಂದರು.

ನನ್ನ ಪರಿಸ್ಥಿತಿಗೆ ನನ್ನನ್ನೇ ಹಳಿದುಕೊಳ್ಳುತ್ತಾ, ನಡೆದಾದರೂ ಮನೆಗೆ ತಲುಪಬಹುದಾ ಅಂದುಕೊಳ್ಳುತ್ತಾ ಬಸ್ಸಿಂದ ಇಳಿದು ನೋಡಿದ್ರೆ, ಊಹೂಂ ನಡೆದು ತಲುಪಲಾಗದಷ್ಟು ದೂರದಲ್ಲಿ ಬಸ್ ಕೆಟ್ಟು ನಿಂತಿತ್ತು. ಮತ್ತೊಂದಿಷ್ಟು ಹೊತ್ತು ಅಲ್ಲಿ ಸುಮ್ಮನೆ ಕಾಲಹರಣ ಮಾಡಿ, ಏನು ಮಾಡಬೇಕೆಂದು ತೋಚದೆ ಅತ್ತಿತ್ತ ನೋಡುತ್ತಿರಬೇಕಾದರೆ ಮತ್ತೊಂದು ಬಸ್ ಬಂತು.

ಇನ್ನಾದರೂ ಮನೆ ತಲುಪಬಹುದಲ್ಲಾ ಅಂತ ನಿರಾಳವಾಗಿ, ಬಸ್ ಹತ್ತಿ ಕುಳಿತುಕೊಳ್ಳುವಷ್ಟರಲ್ಲಿ ಮಕ್ಕದ ಮಸೀದಿಯಿಂದ ಬಾಂಗ್ ಕೇಳಿಸಿತು. ಮತ್ತೆ ಅಮ್ಮನ ನೆನಪಾಗಿ ದಿಗಿಲು ಕಾಡತೊಡಗಿತು. ಎರಡು ಸೆಕೆಂಡ್ ಮಾತಾಡುವಷ್ಟಾದರೂ ಚಾರ್ಜ್ ಉಳಿದಿದ್ದರೆ ಅನ್ನುವ ’ರೆ’ ಸಾಮ್ರಾಜ್ಯದಲ್ಲಿ ವಿಹರಿಸುತ್ತಾ ಅಕ್ಕ ಪಕ್ಕ ಕಣ್ಣಾಡಿಸಿದೆ. ನನ್ನ ಹೊರತುಪಡಿಸಿ, ಪ್ರಯಾಣಿಕರು ಅಂತ ಬಸ್ಸಲ್ಲಿದ್ದುದು ಐವರು ಮಾತ್ರ. ಒಬ್ಬರೂ ಪರಿಚಯಸ್ಥರಿರಲಿಲ್ಲ.

ಮಸೀದಿ ಮಿನಾರದಿಂದ ಬಾಂಗ್ ಮೊಳಗುತ್ತಿತ್ತು. ನೇಸರ ಅದಾಗಲೇ ಪೂರ್ತಿ ಮರೆಯಾಗಿಬಿಟ್ಟಿದ್ದ. ಹೊರಗಿನ ಮ್ಲಾನ ಮುಸ್ಸಂಜೆಯ ವಿಷಣ್ಣತೆ ನನ್ನೊಳಗೂ ಆವರಿಸುತ್ತಿದೆಯೇನೋ ಅನಿಸತೊಡಗಿತು. ಅಷ್ಟರಲ್ಲಿ "ಮನೆಗೆ ಕಾಲ್ ಮಾಡೋಕಿತ್ತಾ?" ಅನ್ನುವ ಪ್ರಶ್ನೆಯೊಂದಿಗೆ, ಕಣ್ಣಮುಂದೆ ಮೊಬೈಲ್ ಹಿಡಿದು ಹಿರಿಯೊಬ್ಬರು ನಿಂತಿದ್ದರು. ತಲೆ ಎತ್ತಿ ನೋಡಿದೆ, ಅರ್ಧ ತೋಳಿನ ಅಚ್ಛ ಬಿಳಿ ಶರ್ಟ್, ಅಷ್ಟೇ ಬಿಳುಪಾಗಿದ್ದ ಧೋತಿ, ಕೊರಳಲ್ಲೊಂದು ರುದ್ರಾಕ್ಷಿ (ಅಥವಾ ಅದು ರುದ್ರಾಕ್ಷಿಯೇ ಅಂತ ನಾನಂದುಕೊಂಡಿದ್ದೆ) ಸರ, ಕೂದಲ ತುದಿಯಿಂದ ಹುಬ್ಬುಗಳ ಮಧ್ಯಕ್ಕೆ ಎಳೆದ ಕೆಂಪು ನಾಮ, ಕಣ್ಣಲ್ಲಿ ಸಾತ್ವಿಕ ಕಳೆ... ನನಗಾಗ ಹೆಚ್ಚಿನದೇನನ್ನೂ ಯೋಚಿಸುವಷ್ಟು ಸಮಯ ಇರಲಿಲ್ಲ.

ಮೊಬೈಲ್ ಇಸ್ಕೊಂಡು ಅಮ್ಮನಿಗೊಂದು ಫೋನ್ ಮಾಡಿ "ರೆಕಾರ್ಡ್ ಆಗಿರ್ಲಿಲ್ಲ, ಹಾಗಾಗಿ ಕಾಲೇಜಿಂದ ಹೊರಡುವಾಗ ಸ್ವಲ್ಪ ಲೇಟಾಯ್ತು, ಈಗ ಬಸ್ಸಲ್ಲಿದ್ದೇನೆ, ಇನ್ನೇನು ಇಪ್ಪತೈದು ನಿಮಿಷಗಳಲ್ಲಿ ಮನೆ ತಲುಪಿಬಿಡುತ್ತೇನೆ" ಅಂತ ಒಂದೇ ಉಸಿರಿಗೆ ಹೇಳಿ ಕಾಲ್ ಕಟ್ ಮಾಡಿ ಆ ಹಿರಿಯರಿಗೆ ಒಂದು ಥ್ಯಾಂಕ್ಸ್ ನೊಂದಿಗೆ ಫೋನ್ ಮರಳಿಸಿದೆ. ಮನೆ ತಲುಪಿದ ಮೇಲೆ ಜವಾಬ್ದಾರಿಗಳ ಬಗ್ಗೆ ಅಮ್ಮ ನೀಡುವ ಉಪನ್ಯಾಸ ಕೇಳೋದಕ್ಕೆ ಅದಾಗಲೇ ನಾನು ಮಾನಸಿಕ ತಯಾರಿ ಮಾಡಿಕೊಳ್ಳತೊಡಗಲಾರಂಭಿಸಿಯಾಗಿತ್ತು.

ಮತ್ತೊಂದೆರಡು ನಿಮಿಷ ಕಳೆಯುವಷ್ಟರಲ್ಲಿ ಅದೇ ಹಿರಿಯರು ಎರಡು ಹೋಳು ಸೇಬು, ಒಂದು ಬಾಟಲಿ ನೀರು, ಮತ್ತೊಂದು ಖರ್ಜೂರದೊಂದಿಗೆ ಮತ್ತೆ ನನ್ನ ಮುಂದೆ ಬಂತು ನಿಂತು  "ಈಗಾಗ್ಲೆ ಬಾಂಗ್ ಆಗಿದೆ, ಇಫ್ತಾರ್ ಸಮಯವೂ ಆಗಿಹೋಗಿದೆ, ಬಹುಶಃ ನೀನೂ ಉಪವಾಸಿಗಳೇ, ಇವಿಷ್ಟನ್ನೂ ತೆಗೆದುಕೊಂಡು ಇವತ್ತಿನ ಇಫ್ತಾರನ್ನು ಪ್ಪೊರೈಸಿಬಿಡು" ಅಂದರು. ನನಗೆ ಒಂದು ಕಡೆ ಅಚ್ಚರಿ, ಇನ್ನೊಂದು ಕಡೆಯಿಂದ ಅನುಮಾನ ಕಾಡತೊಡಗಿತು. ತೆಗೆದುಕೊಳ್ಳಬೇಕೋ ಬೇಡವೋ ಅನ್ನುವ ಸಂಘರ್ಷದಲ್ಲಿ ನಾನಿದ್ದೆ. ನಿರಾಕರಿಸಿದರೆ ಅವರ ಹಿರಿಯತನವನ್ನು ಅಗೌರವಿಸಿದಂತಾಗುತ್ತದೆ, ಹಾಗಂತ ಸ್ವೀಕರಿಸೋಕೆ ಅವರೇನು ನನ್ನ ಪರಿಚಯಸ್ಥರಲ್ಲ.

ಏನು ಮಾಡಬೇಕೆಂದು ತೋಚದೆ ನಾನು ಸುಮ್ಮನೆ ಕುಳಿತೆ, ಅವರೇ ಮೊದಲು ಖರ್ಜೂರ ನನ್ನ ಕೈಗಿತ್ತು ತಿನ್ನು ಅಂದರು, ಏನೂ ಮಾಡಲಾಗದೆ ನಾನು ನಿಧಾನವಾಗಿ ಖರ್ಜೂರ ಬಾಯಿಗಿಟ್ಟೆ, ಮತ್ತೆ ಅವರೇ ನೀರನ್ನೂ, ಸೇಬನ್ನೂ ಕೊಟ್ಟು ಮುಖ ತಿರುಗಿಸಿ ಕೂತು ಬಿಟ್ಟರು. ಅಷ್ಟು ಹೊತ್ತಿಗಾಗುವಾಗ ಅವರ ಮೇಲೆ ನನಗಿದ್ದ ಅನುಮಾನಗಳು ನಿಧಾನವಾಗಿ ಕರಗಲಾರಂಭಿಸಿತ್ತು.

ಮತ್ತೆ ಬಾಟಲ್ ಅವರ ಕೈಗೆ ಮರಳಿಸುತ್ತಾ ನಾನು "ಥ್ಯಾಂಕ್ಯೂ ಅಂಕಲ್, ನಿಮ್ಮ ಉಪಯೋಗಕ್ಕೆ ಅಂತ ತಂದಿದ್ದುದನ್ನು ನನ್ಗೆ ಕೊಟ್ರಲ್ಲಾ, ನೀವು ಒಳ್ಳೆಯತನಕ್ಕೆ ಏನನ್ನಬೇಕೋ" ತಿಳಿಯುತ್ತಿಲ್ಲ ಅಂದೆ. ಅವರು "ಅಂತಹ ದೊಡ್ಡ ಮಾತೆಲ್ಲಾ ಬೇಡ, ಇದು ಒಳ್ಳೆಯತನವಲ್ಲ, ನನ್ನ ಮನಸ್ಸಮಾಧಾನಕ್ಕಾಗಿ ಮಾಡುತ್ತಿರುವ ಕೆಲಸವಷ್ಟೆ. ಸರಿಯಾಗಿ ಐದು ವರ್ಷಗಳ ಹಿಂದೆ ಇಂಥದ್ದೇ ಒಂದು ರಂಝಾನ್ ತಿಂಗಳಲ್ಲಿ ಎದೆಯುದ್ದಕ್ಕೆ ಬೆಳೆದಿದ್ದ ಮಗನನ್ನು ಒಂದು ಆಕ್ಸಿಡೆಂಟ್ ನಲ್ಲಿ ಕಳೆದುಕೊಂಡು ಬಿಟ್ಟೆ. ನನಗಾದ ನೋವು, ಸಂಕಟಗಳನ್ನೆಲ್ಲಾ ಮರೆಯಲು ಅವತ್ತಿಂದ ಪ್ರತಿ ವರ್ಷ ರಂಝಾನ್ ತಿಂಗಳಲ್ಲಿ ಮನೆಯಿಂದ ಹೊರಡುವಾಗೆಲ್ಲಾ ಒಂದು ಖರ್ಜೂರ, ಸೇಬು ಮತ್ತು ನೀರಿನ ಬಾಟಲಿನೊಂದಿಗೆ ಹೊರಡುತೊಡಗಿದೆ. ಹೀಗೆ ನಿನ್ನಂತೆ ಬಸ್ಸಲ್ಲಿ, ಬಸ್ ಸ್ಟ್ಯಾಂಡಲ್ಲಿ ಯಾವುಯಾವುದೋ ಕಾರಣಗಳಿಂದ ಬಾಕಿಯಾಗುವವರು ಸಿಕ್ಕರೆ ಕೊಟ್ಟುಬಿಡುತ್ತೇನೆ. ಇಫ್ತಾರ್ ಮುಗಿಸಿದ ತೃಪ್ತಿ ಅವರದಾದರೆ, ಅವರ ತೃಪ್ತಿಯಲ್ಲಿ ನಾನೂ ಪಾಲುದಾರನಾದೆನಲ್ಲಾ ಅನ್ನುವ ಖುಷಿ ನನಗೆ. ಸತ್ತು ಬೂದಿಯಾದ ಮಗನ ಆತ್ಮ ಅಲ್ಲೆಲ್ಲೋ ನಳನಳಿಸುತ್ತಿರುತ್ತದೆ ಅನ್ನುವ ನಂಬಿಕೆ ನನ್ನದು, ಅಷ್ಟೆ" ಅಂದು ಮತ್ತೆ ಮೌನವಾದರು.

ಪರಸ್ಪರರನ್ನು ಅನುಮಾನಿಸುವ, ಕೊಚ್ಚುವ, ಕೊಲ್ಲುವ, ಸುಡುವ, ನಡುಬೀದಿಯಲ್ಲಿ ಬೆತ್ತಲಾಗಿಸುವ, ಧರ್ಮದ ಹೆಸರಿನಲ್ಲಿ ರಕ್ತದೋಕುಳಿಯಾಡುವ ಈ ಕಾಲದಲ್ಲೂ ಮಾನವ ಸಹಜ ಬಾಂಧವ್ಯಗಳು, ವಿಶ್ವ ಮಾನವನಾಗಿ ಹುಟ್ಟುವ ಮನುಷ್ಯನ ಸಹಜ ಅನುಭೂತಿಗಳು, ಮಾನವನಿಷ್ಠ ಸಂವೇದನೆಗಳು ಇಂತಹವರ ಹೃದಯದಲ್ಲಿ ಇನ್ನೂ ಉಸಿರಾಡುತ್ತಿವೆಯಲ್ಲಾ ಅನಿಸಿತು. ’ಅಂಕಲ್, ನಿಮ್ಮ ಹೆಸರು, ಊರು?’ ಅಂತ ಒಮ್ಮೆ ಕೇಳಹೊರಟೆ, ಮರುಕ್ಷಣ ಮನಸ್ಸು ’ಒಳ್ಳೆಯತನಕ್ಕೆ ವಿಳಾಸವಿಲ್ಲ, ಅದು ಹೆಸರು, ಊರು, ಕೇರಿ, ವಿಶೇಷಣಗಳ ಹಂಗಿಲ್ಲದೆ ಅರಳಿ ಸುತ್ತ ಹಗುರ ಸುಗಂಧ ಹಬ್ಬುವ ಹೂವಿನಂತೆ’ ಅಂದಿತು. ಅಷ್ಟು ಹೊತ್ತಿಗಾಗುವಾಗಾಗಲೇ ನಾನು ಇಳಿಯುವ ಸ್ಟಾಪ್ ಬಂತು. ಅವರಿಗೆ ಕೈ ಬೀಸಿ ಇಳಿದು, ಕತ್ತಲಲ್ಲೇ ತಡವರಿಸುತ್ತಾ ಮನೆ ತಲುಪಿ ಕಾಲಿಂಗ್ ಬೆಲ್ ಒತ್ತಿದೆ. ಅಮ್ಮ ಬಾಗಿಲು ತೆರೆದು "ಇಫ್ತಾರ್ ರೆಡಿಮಾಡಿಟ್ಟಿದ್ದೇನೆ, ಹೋಗಿ ಉಪವಾಸ ತೊರೆದುಬಿಡು" ಎಂದರು. ನಾನು "ಆಗ್ಲೇ ಬಸ್ಸಲ್ಲಿ ತೊರೆದಾಯ್ತು" ಅಂದೆ. ಅಮ್ಮ "ಬಸ್ಸಲ್ಲಾ?" ಪ್ರಶ್ನಿಸಿದರು. "ಹೂಂ, ತಾಯಿ ಮನಸ್ಸಿನ ಹಿರಿಯೊಬ್ಬರು ಬದುಕಲ್ಲಿ ಎಂದೂ ಮರೆಯಲಾಗದಂತಹ ಇಫ್ತಾರ್ ಆಯೋಜಿಸಿದ್ದರು" ಎಂದು ಒಳಸರಿದೆ. ಅಮ್ಮ ನನ್ನ ನೋಡುತ್ತಾ ನಿಂತರು.

ಸುಮ್ಮನೆ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ