ಗುರುವಾರ, ಮೇ 19, 2016

ಪದೇ ಪದೇ ಮನಸ್ಸಾಕ್ಷಿಯ ಮುಂದೆ ಮಂಡಿಯೂರುವಂತಾಗಬಾರದಲ್ಲವೇ?

ಅವೇನೂ ಅಂತಹ ತಲೆ ಹೋಗುವಂತಹಾ ತಪ್ಪುಗಳಾಗಿರುವುದಿಲ್ಲ. ಆ ಒಂದು ಸಣ್ಣ ಮಟ್ಟಿಗಿನ ವಂಚನೆಯಿಂದ ಯಾರ ಬದುಕೂ ಪೂರ್ತಿ ನಾಮಾವಶೇಷ ಆಗಿರುವುದಿಲ್ಲ. ಅದು ನಂಬಿಕೆ ದ್ರೋಹ ಅಂತಾಗಲೀ, ವಿಶ್ವಾಸಘಾತುಕತನ ಅಂತಾಗಲೀ ಎಲ್ಲೂ ದಾಖಲಾಗಿರುವುದೂ ಇಲ್ಲ. ಅಸಲಿಗೆ ಅಂತದ್ದೊಂದು ತಪ್ಪು ನಮ್ಮಿಂದ ಸಂಭವಿಸಿಬಿಟ್ಟಿದೆ ಅನ್ನುವುದು ನಮ್ಮಹೊರತು ಪಡಿಸಿ ಇನ್ಯಾರ ಅರಿವಿಗೂ ಬಂದಿರುವುದಿಲ್ಲ. ಅಷ್ಟರಮಟ್ಟಿಗಿನ ಕ್ಷುಲ್ಲಕ ತಪ್ಪದು. ಇಷ್ಟಾದರೂ ಬದುಕು, ಯಾವುದೋ ತಿರುವಿನಲ್ಲಿ ನಮ್ಮ ನಿಲ್ಲಿಸಿ ಬಿಟ್ಟು "ಹೀಗೇಕೆ ಮಾಡಿದೆ?" ಅಂತ ಕೇಳಿಯೇ ಕೇಳುತ್ತದೆ.

ತಪ್ಪಿಸಿಕೊಳ್ಳಲಾಗದ ಪ್ರಶ್ನೆಯದು. ಅಪ್ಪ ಪ್ರಶ್ನಿಸುವಾಗೆಲ್ಲಾ ಹಾರಿಕೆಯ ಉತ್ತರ ಕೊಡಬಹುದು, ಅಮ್ಮನ ಪ್ರಶ್ನೆಗಳಿಗೂ ಉತ್ತರಿಸಬಹುದು, ಆಪ್ತ ಸ್ನೇಹಿತರೆನಿಸಿಕೊಂದವರ ಕಣ್ಣನ್ನೂ ತಪ್ಪಿಸಿ ಓಡಾಡಬಹುದು, ಸಂಗಾತಿಗಳ ಪ್ರಶ್ನೆಗೂ ಸುಳ್ಳು ಉತ್ತರ ನೀಡಬಹುದು, ಗುರುಗಳೆನಿಸಿಕೊಂಡವರ ಪ್ರಶ್ನೆಗಳಿಗೂ ನಿರ್ಲಿಪ್ತರಾಗಿ ಇದ್ದುಬಿಡಬಹುದು. ಆದ್ರೆ ಬದುಕಿನ ಪ್ರಶ್ನೆಗಳಿಗೆ...? ಊಹೂಂ, ಅಲ್ಲಿ ಹಾರಿಕೆ, ಕಣ್ಣು ತಪ್ಪಿಸುವುದು, ಸಮಜಾಯಿಕೆ ನೀಡುವುದು, ನಿರ್ಲಿಪ್ತರಾಗುವುದು, ನಿರ್ಲಕ್ಷ್ಯತನ ಯಾವುದೂ ಉಪಯೋಗಕ್ಕೆ ಬರುವುದಿಲ್ಲ. ಅದು ಆಗಿರೋ ತಪ್ಪುಗಳಿಗೆ, ಮಾಡಿರೋ ಮೋಸಗಳಿಗೆ, ವಂಚನೆಗಳಿಗೆ ನೇರ ಮತ್ತು ಪ್ರಾಮಾಣಿಕ ಉತ್ತರ ಬಯಸುತ್ತದೆ. ಅದೆಷ್ಟೇ ಅಲವತ್ತುಕೊಂಡರೂ, ತಪ್ಪಿಸಿಕೊಂಡರೂ ಬದುಕಿನ ಪ್ರಶ್ನೆಗಳಿಗೆ ತಪ್ಪಿಲ್ಲದೆ, ತಪ್ಪಾಗದಂತೆ ಪ್ರಾಮಾಣಿಕವಾಗಿ ಉತ್ತರಿಸಲೇಬೇಕಾಗುತ್ತದೆ.

ತುಂಬು ನಂಬಿಕೆಯಿಂದ ಆಪ್ತರಾರೋ ಈ-ಮೈಲ್ ಪಾಸ್‍ವರ್ಡ್ ಕೊಟ್ಟಿರುತ್ತಾರೆ. ನಾವೆಂದೂ ಅವರ ಖಾಸಗೀ ಮೈಲ್‍ಗಳನ್ನು ಓದಲಾರೆವು ಅನ್ನುವ ವಿಶ್ವಾಸವದು. ಆದ್ರೆ ಯಾವುದೋ ಒಂದು ಕ್ಷಣದ ಪ್ರಲೋಭನೆಗೆ ಒಳಗಾಗಿ ಅವರ ಇನ್‍ಬಾಕ್ಸ್‌ನಲ್ಲಿ ಏನೇನಿದೆ ಎಂದು ತಡಕಾಡಿ ಬಿಡುತ್ತೇವೆ. ಅಲ್ಲಿ ನಮಗೆ ಬೇಕಾದ್ದು, ಬೇಡವಾದ್ದು ಏನೂ ಸಿಕ್ಕಿಲ್ಲ ಅಂದಮೇಲೆ ಸೈನ್‍ಔಟ್ ಮಾಡಿ ಸುಮ್ಮನಾಗುತ್ತೇವೆ. ಮೈಲ್ ತಡಕಾಡುತ್ತಿದ್ದ ಅಷ್ಟೂ ಹೊತ್ತು ಕಾಡದ ಆತ್ಮಸಾಕ್ಷಿ ಈಗ ಧುತ್ತೆಂದು ಪ್ರತ್ಯಕ್ಷವಾಗಿಬಿಡುತ್ತದೆ.

ಇದು ಕೇವಲ ಈ-ಮೈಲ್ ಪಾಸ್‍ವರ್ಡ್ ಅಂತಲ್ಲ. ಕೆಲವೊಮ್ಮೆ ನಿನಗೆ ಮಾತ್ರ ಗೊತ್ತಿರಲಿ ಅಂತ ಹೇಳಿದ ಅತ್ಯಾಪ್ತರ ಬದುಕಿನ ಗುಟ್ಟನ್ನು ಇನ್ಯಾರದೋ ಜೊತೆ ಹಂಚಿಕೊಳ್ಳುತ್ತೆವೆ. ತುಂಬಾ ಚೊಕ್ಕಟ ಅಂತನ್ನಿಸಿಕೊಂಡಿರುವ ಸಂಸಾರದ ಮಧ್ಯೆ ಇದ್ದೂ ಮತ್ತೊಂದು ನಿರುಪದ್ರವೀ ಸಂಬಂಧದೆಡೆ ಕೈ ಚಾಚುತ್ತೇವೆ, ಅದೂ ಸಂಸಾರದೊಳಗಿನವರಿಗೆ ಒಂದು ಚಿಕ್ಕ ಸುಳಿವೂ ಬಿಟ್ಟುಕೊಡದೆ. ಪ್ರಾಣ ಸ್ನೇಹಿತರು ಬಗಲ್ಲಲ್ಲಿರುವಾಗಲೇ ಅವರ ಬಗೆಗಿನ ಗೌಪ್ಯ ಸಂಗತಿಯನ್ನು ಮತ್ಯಾರಿಗೋ ತಲುಪಿಸಿರುತ್ತೇವೆ. ಜೀವಕ್ಕಿಂತ ಹೆಚ್ಚು ಪ್ರೀತಿಸೋ ಪ್ರೇಮಿಯ ಪಕ್ಕದಲ್ಲೇ ಕೂತು ಒಂದು ಅನುಪಯುಕ್ತ ಸುಳ್ಳು ಹೇಳಿರುತ್ತೇವೆ, ನಂಬಿಕೆಯ ಇನ್ನೊಂದು ಹೆಸರೇ ನಾವು ಅನ್ನುವಷ್ಟು ನಮ್ಮನ್ನು ನಂಬಿಕೊಂಡಿರುವ ಅಪ್ಪ-ಅಮ್ಮನನ್ನೇ ಸಣ್ಣದಾಗಿ ವಂಚಿಸಿರುತ್ತೇವೆ. ಹಾಗೆ ವಂಚಿಸುವಾಗ, ಸುಳ್ಳು ಹೇಳುವಾಗ, ತಪ್ಪು ಮಾಡುವಾಗೆಲ್ಲಾ ನಮಗೆ ಏನೂ ಅನಿಸಿರುವುದೂ ಇಲ್ಲ.

ಇಷ್ಟಕ್ಕೂ, ಇಂತಹ ಎಲ್ಲಾ ಸಂದರ್ಭಗಳಲ್ಲೂ ತಪ್ಪು ಮಾಡಬೇಕೆನ್ನುವ ಉದ್ದೇಶವಾಗಲಿ, ವಂಚಿಸುವ ಇರಾದೆಯಾಗಲೀ ಇರುವುದೇ ಇಲ್ಲ. ಆ ಕ್ಷಣಕ್ಕೆ ಮನಸ್ಸು ಅನಗ್ಯತದ ಆಸಕ್ತಿಗೆ, ಒಳಗೇನಿರಬಹುದು ಅನ್ನುವ ಚಪಲಕ್ಕೆ, ಅವರ ಬಗ್ಗೆ ನನಗಿಷ್ಟೆಲ್ಲಾ ಗೊತ್ತು ಅನ್ನುವುದನ್ನು ಮೂರನೆಯವರಿಗೆ ಗೊತ್ತು ಪಡಿಸಬೇಕು ಅನ್ನುವ ವಿಚಿತ್ರ ತೆವಲಿಗೆ, ಅಪ್ಪ-ಅಮ್ಮನಿಗಿಂತ ನಾವೇನು ಕಡಿಮೆ ತಿಳುವಳಿಕೆ ಇರುವವರಲ್ಲ ಅನ್ನುವ ಅಹಮ್ಮಿಗೆ ಬಿದ್ದು ಬಿಡುತ್ತದೆ. ಆಗಲೇ ಮನಸ್ಸು ಸಣ್ಣ ಪುಟ್ಟ ಎಲ್ಲೆ ಮೀರ ಬಯಸುವುದು.

ನಿಜ, ಅವೆಲ್ಲಾ ಗಹನವಾದ ತಪ್ಪುಗಳಾಗಿರುವುದಿಲ್ಲ, ಅಥವಾ ಆ ತಪ್ಪುಗಳಿಂದ ಯಾರ ಬದುಕೂ, ಯಾವ ಸಂಬಂಧಗಳೂ ಮೂರಾಬಟ್ಟೆಯಾಗಿರುವುದಿಲ್ಲ. ಆದರೆ, ಒಂದು ಸಣ್ಣ ಸುಳ್ಳಿನಿಂದ ಪ್ರಪಂಚವೇನೂ ಮುಳುಗಿ ಹೋಗುವುದಿಲ್ಲ ಅನ್ನುವುದು ಎಷ್ಟು ಸತ್ಯವೋ, ಒಂದು ಸಣ್ಣ ಸತ್ಯದಿಂದ ಮನುಷ್ಯನ ಮಾನಸ ಪ್ರಪಂಚ ವಿಸ್ತರಿಸುತ್ತಾ ಹೋಗುತ್ತದೆ ಅನ್ನುವುದೂ ಅಷ್ಟೇ ಸತ್ಯ. ಇಷ್ಟಕ್ಕೂ ಬದುಕಿಗೆ, ಮನಸ್ಸಾಕ್ಷಿಗೆ ಮುಖ್ಯವೆನಿಸುವುದು, ಪ್ರಶ್ನಿಸಬೇಕೆನಿಸುವುದು ತಪ್ಪುಗಳಷ್ಟನ್ನೇ ಹೊರತು ಅದರ ಗಹನತೆಯನ್ನಲ್ಲ.

ಬದುಕು ನಮ್ಮನ್ನೆಂದೂ ಪ್ರಶ್ನಿಸಲೇಬಾರದು, ಅಷ್ಟು ವ್ಯವಸ್ಥಿತವಾಗಿ, ಚೊಕ್ಕಟವಾಗಿ, ಅನ್ನದಲ್ಲಿ ಒಂದೇ ಒಂದು ಕಲ್ಲೂ ಸಿಗದಂತೆ ಬದುಕುತ್ತೇನೆ ಅಂದುಕೊಳ್ಳುವುದು, ಹಾಗೆಯೇ ಅವುಡುಗಚ್ಚಿ, ಪ್ರತಿಕ್ಷಣ ಪರಮ ಜಾಗರೂಕತೆಯಿಂದ ಬದುಕಲು ಪ್ರಯತ್ನಿಸುವುದು ಎರಡೂ ದೂರದಲ್ಲೆಲ್ಲೋ ಆಕಾಶ ಭೂಮಿಯನ್ನು ಸ್ಪರ್ಶಿಸುತ್ತದೆ ಎಂದು ಭಾವಿಸಿಕೊಳ್ಳುವಷ್ಟೇ ಅವಾಸ್ತವಿಕ. ಅಂತಹ ನಿರ್ಧಾರಗಳು ನಮ್ಮ ಬದುಕನ್ನು ಮತ್ತೊಂದು ಭ್ರಮಾದೀನ ಸ್ಥಿತಿಯಲ್ಲಿರಿಸುವುದನ್ನು ಹೊರತು ಪಡಿಸಿ ಇನ್ನೇನನ್ನೂ ಮಾಡದು. ಹಾಗೆಂದು, ಬದುಕಿನ ನ್ಯಾಯಯುತ ಪ್ರಶ್ನೆಗಳಿಗೆ ಉತ್ತರಿಸಲಾಗದೆ  ಪದೇ ಪದೇ ಮನಸ್ಸಾಕ್ಷಿಯ ಮುಂದೆ ತಲೆ ತಗ್ಗಿಸಿ ಮಂಡಿಯೂರುವ ಪರಿಸ್ಥಿತಿಯೂ ಎದುರಾಗಬಾರದು ಅಲ್ಲವೇ?

ಮಂಗಳವಾರ, ಮೇ 17, 2016

ಒಳ್ಳೆಯವರಾಗಿರುವುದು ಅಂದ್ರೇನು?

'ಅವನು/ಳು ತುಂಬಾ ಒಳ್ಳೆಯವನು/ಳು' ಅಂತೆಲ್ಲಾ ನಾವು ಯಾರದೋ ಬಗ್ಗೆ ಮಾತಾಡುತ್ತಿರುತ್ತೇವೆ. ಅಂತಹವರು, 'ದೇಹೀ' ಎಂದು ಕೈ ಚಾಚಿದ ಯಾರಿಗೂ ಯಾವತ್ತೂ ಇಲ್ಲ ಅನ್ನುವುದಿಲ್ಲ, ಒಂದೇ ಒಂದು ಕ್ಷಣಕ್ಕೂ ಯಾರ ಮೇಲೂ ಸಿಟ್ಟಾಗುವುದಿಲ್ಲ, ದ್ವೇಷ ಅನ್ನುವ ಭಾವನೆಯನ್ನೇ ತನ್ನತ್ತ ಸುಳಿಯಲೂ ಬಿಡುವುದಿಲ್ಲ‌, ಮಧ್ಯ ರಾತ್ರಿ ಎಬ್ಬಿಸಿ ಸಹಾಯ ಕೇಳಿದರೂ ಮುಖಕ್ಕೆ ತಣ್ಣೀರು ಚಿಮುಕಿಸಿ ಉಟ್ಟ ಬಟ್ಟೆಯಲ್ಲೇ ಸಹಾಯಕ್ಕೆಂದು ಧಾವಿಸುತ್ತಾರೆ, ತನ್ನಿಂದ ತಪ್ಪೇ ಆಗದಿದ್ದರೂ ಕೈ ಮುಗಿದು ಕ್ಷಮೆ ಕೇಳುತ್ತಾರೆ, ತನ್ನನ್ನು ನೋಯಿಸಿದವರನ್ನೂ ತುಂಬಾ ಸುಲಭವಾಗಿಯೇ ಕ್ಷಮಿಸುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರೆಲ್ಲಾ 'ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಪ್ರೀತಿಸುತ್ತಾರೆ' ಎಂಬಂತಿರುತ್ತಾರೆ ಅಥವಾ ಹಾಗಂದುಕೊಂಡು ತಮ್ಮನ್ನೇ ಮೋಸಮಾಡಿಕೊಳ್ಳುತ್ತಿರುತ್ತಾರೆ.

ಆದರೆ ನಿಜಕ್ಕೂ ಒಳ್ಳೆಯತನವೆಂದರೇನು? ಒಳ್ಳೆಯವರಾಗಿರುವುದು ಅಂದ್ರೇನು? ಒಳ್ಳೆಯತನದ ಅಳತೆಗೋಲುಗಳಾವುವು? ಒಳ್ಳೆಯದನ್ನೂ ಕೆಟ್ಟದನ್ನೂ ಅಳೆಯುವ ಮಾನದಂಡ ಯಾವುದು? ಈ ಯಾವ ಪ್ರಶ್ನೆಗಳಿಗೂ 'ಇದಮಿತ್ಥಂ' ಅನ್ನುವ ಯಾವ ಉತ್ತರವೂ ದೊರೆಯುವುದಿಲ್ಲ.

ಪ್ರತಿ ಬಾರಿ ಮನುಷ್ಯ ದೇವರಾಗಹೊರಟಾಗೆಲ್ಲಾ ಅವನ ಸಹಜತೆ ಕಳೆದುಕೊಳ್ಳುತ್ತಾನೆ. ಅರಿಷಡ್ವರ್ಗಗಳನ್ನು ಗೆಲ್ಲುತ್ತೇನೆ ಅನ್ನುವ ಅಹಂನಲ್ಲಿ, ಭ್ರಮೆಯಲ್ಲಿ ತನ್ನನ್ನು ತಾನೇ ಸೋಲಿಸಿಕೊಳ್ಳುತ್ತಿರುತ್ತಾನೆ. ಪ್ರತಿಕ್ಷಣವೂ ಸ್ಥಿತಪ್ರಜ್ಞನಾಗಿಯೇ ಇರುತ್ತೇನೆ ಅನ್ನುವ ಹುಂಬತನದಲ್ಲಿ ಆ ಕ್ಷಣದ ಅಚ್ಚರಿಗಳನ್ನು, ಆನಂದಗಳನ್ನು ತನಗರಿವಿಲ್ಲದೇ ಕಳೆದುಕೊಳ್ಳುತ್ತಿರುತ್ತಾನೆ.

ಪ್ರಪಂಚದ ದೃಷ್ಟಿಯಲ್ಲಿ ತೀರಾ 'ಒಳ್ಳೆಯವರು' ಅನ್ನಿಸಿಕೊಂಡವರು, 'ಯಾರ ಮನಸ್ಸನ್ನೂ ಒಂದು ಕ್ಷಣಕ್ಕೂ ನೋಯಿಸದವರು', 'ಸಮಚಿತ್ತರು' ಅಂತೆಲ್ಲಾ ಅನ್ನಿಸಿಕೊಂಡವರಿರುತ್ತಾರಲ್ಲಾ ಅಂತಹವರ ಅಂತರಂಗಕ್ಕೊಮ್ಮೆ ಇಳಿದು ನೋಡಬೇಕು. ಮೇಲೆ ಮೇಲೆ ಎಲ್ಲಾ ಸರಳವಾಗಿದೆ, ಸುಲಲಿತವಾಗಿದೆ ಎಂದೇ ಅನಿಸುತ್ತದೆ. ಗಳಿಸಿದ ಸ್ನೇಹ, ಪ್ರೀತಿ, ಉಳಿಸಿಕೊಂಡ ಸಂಬಂಧ, ಎಂದೂ ಕುಸಿದು ಹೋಗಲಾರರು ಅನ್ನುವಂತಹ ಗಟ್ಟಿ ವ್ಯಕ್ತಿತ್ವ, ಸುಲಭವಾಗಿ ಸೋಲದ ಆತ್ಮವಿಶ್ವಾಸ... ಇವೆಲ್ಲವನ್ನು ಮೀರಿಯೂ ಹೇಳಿಕೊಳ್ಳಲಾಗದ ಅಸಹಾಯಕತೆ, ಒಂದು ಪುಟ್ಟ ಅಭದ್ರತೆ, ಯಾವಾಗ ಏನಾಗುತ್ತದೋ ಅನ್ನುವ ಅನುಮಾನ, ಒಳ್ಳೆಯತನದ ಪೊರೆ ಎಲ್ಲಿ ಕಳಚಿಬೀಳುತ್ತದೋ ಅನ್ನುವ ದಿಗಿಲು ಸದಾ ಕಾಡುತ್ತಿರುತ್ತದೆ.

ಆ ದಿಗಿಲೇ, ಅನುಮಾನವೇ, ಅಭದ್ರತೆಯೇ, ಅಸಹಾಯಕತೆಯೇ ಬದುಕಿನ ಪುಟ್ಟ ಪುಟ್ಟ ಖುಶಿಗಳನ್ನು, ಕೆಲವು ಉತ್ಕಟ ಸಂಭ್ರಮಗಳನ್ನು ಅನುಭವಿಸಲು, ತುಂಟತನದ ಪರಮಸೀಮೆಗಳನ್ನು ತಡವುವಲ್ಲಿ ತೊಡರುಗಾಲಾಗುತ್ತದೆ. ಕೊನೆಗೊಂದು ದಿನ ಬದುಕಿನೊಂದಿಗಿನ ಬಯಕೆಗಳೆಲ್ಲಾ ಸತ್ತು ತೋರಿಕೆಯ ನಗುವಿನ ನೀರಸ ದಿನಚರಿಯಾಗಿಬಿಡುತ್ತದೆ ಜೀವನ.

ಹಾಗೆಂದ ಮಾತ್ರಕ್ಕೆ ಬದುಕು ಬರಿ ಸ್ವಾರ್ಥಭರಿತವಾಗಿರಬೇಕು, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬಾರದು, ತನ್ನ ಖುಶಿಯೊಂದೇ ಬದುಕಿನ ಪರಮ ಗುರಿಯಾಗಿರಬೇಕು ಎಂದಲ್ಲ. ಹೊರಡಲು ಇನ್ನೂ ಅರ್ಧ ಗಂಟೆ ಇರುವ ಬಸ್ಸಿನಲ್ಲಿ ಕೂತು ತೂಕಡಿಸುತ್ತಿರುವಾಗ ಕೋಲೂರುತ್ತಾ ಅದ್ಯಾವುದೋ ಮನಕಲುಕುವ ಹಾಡು ಹಾಡುತ್ತಾ ಭಿಕ್ಷೆಗೆ ಬಂದ ಅದ್ಭುತ ಕಂಠದ ಅಂಧನ ಮೈ ದಡವಿ ಮನೆಗೆ ಕರೆತಂದು ಅಕ್ಕರೆಯಿಂದ ಊಟ ಹಾಕಿ ಅವನಲ್ಲಿನ ಪ್ರತಿಭೆಗೆ, ಕಂಠಕ್ಕೆ ಒಂದು ವೇದಿಕೆ ಒದಗಿಸಿ ಅವನ ಬದುಕಿಗೆ ದಾರಿ ದೀಪವಾಗುವುದು ಒಳ್ಳೆಯತನ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಣ್ಣಿನ ಶಸ್ತ್ರಕ್ರಿಯೆ ಮಾಡಿಸಿ ಅವನಿಗೆ ದೃಷ್ಟಿ ಕೊಡಿಸುವುದೂ ಒಳ್ಳೆಯತನವೇ. ಆದರೆ ಬಸ್ ಸ್ಟಾಂಡಿನಲ್ಲಿ, ನಿಂತ ನಿಲುವಿನಲ್ಲೇ ತನ್ನದೇ ಒಂದು ಕಣ್ಣನ್ನು ಕಿತ್ತು ಅವನಿಗೆ ಕೊಡುವುದಿದೆಯಲ್ಲಾ ಅದು ಶುದ್ಧ ಅವಿವೇಕ ಮತ್ತು ಅತಿರೇಕ.

ಇಷ್ಟಕ್ಕೂ ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಪ್ರೀತಿಸಲು, ಪೊರೆಯಲು ದೇವನೊಬ್ಬನಿಂದ ಮಾತ್ರ ಸಾಧ್ಯ. ಈ ಸಣ್ಣ ಅರಿವನ್ನೂ ಮೀರಿ ಮನುಷ್ಯ ಮಾತ್ರನಾದವನೊಬ್ಬ ತಾನು ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಪ್ರೀತಿಸುತ್ತೇನೆ ಅನ್ನುತ್ತಿರುತ್ತಾನೆ, ಅಂದುಕೊಳ್ಳುತ್ತಿರುತ್ತಾನೆ ಅಂದರೆ ಅವನೊಬ್ಬ ಅಪ್ರಾಮಾಣಿಕ ಅಷ್ಟೇ.

ಮತ್ತು ಅಷ್ಟು ಮಾತ್ರ.

ಶನಿವಾರ, ಮೇ 14, 2016

ನಿರ್ಧಾರಕ್ಕೆ ಬರುವ ಮುನ್ನ ಒಂದಿಷ್ಟಾದರೂ ಯೋಚಿಸಿ.

ಬೆಳ್ಳಂಬೆಳಗ್ಗೆ ಎದ್ದು, ಕಣ್ಣುಜ್ಜಿಕೊಳ್ಳುತ್ತಾ ಮೊಬೈಲ್ ಸ್ಪರ್ಶಿಸಿದರೆ, ಇನ್‍ಬಾಕ್ಸ್ ಒಳಗೊಂದು ಮೆಸೇಜ್ ಬೆಚ್ಚನೆ ಕೂತಿತ್ತು. ತೆರೆದು ನೋಡಿದ್ರೆ, 'ಹುಡುಗನೊಬ್ಬ ಪ್ರೀತಿಸುತ್ತಿದ್ದರೆ ಅದು ಸಂಬಂಧಪಟ್ಟ ಹುಡುಗಿಯನ್ನು ಹೊರತು ಪಡಿಸಿ ಉಳಿದೆಲ್ಲರಿಗೂ ತಿಳಿದಿರುತ್ತದೆ. ಹಾಗೆಯೇ ಹುಡುಗಿಯೊಬ್ಬಳು ಪ್ರೀತಿಸುತ್ತಿದ್ದರೆ ಅದು ಅವಳೊಬ್ಬಳನ್ನು ಹೊರತುಪಡಿಸಿ ಇನ್ಯಾರಿಗೂ ತಿಳಿಯುವುದಿಲ್ಲ' ಅಂತಿತ್ತು. ಓದಿದಾಕ್ಷಣ ಫನ್ನಿ ಅಂತ ಅನ್ನಿಸಿದರೂ ತುಸು ಹೊತ್ತು ಕಳೆದ ನಂತರ, ಅರೆ ಹೌದಲ್ವಾ? ಅಂತ ಅನಿಸತೊಡಗಿತು.

ಹಲವು ಸಂದರ್ಭಗಳಲ್ಲಿ,  ಪಕ್ಕದ ಬೆಂಚಲ್ಲಿ ಕೂರೋ ಹುಡುಗಿಯೋ, ಇಲ್ಲ ಎದುರು ಮನೆ ಅಂಕಲ್ ಮಗಳೋ, ಅತ್ತಿಗೆಯ ತಂಗಿಯೋ, ತಂಗಿಯ ಗೆಳತಿ, ಸೋದರತ್ತೆಯ ದೊಡ್ಡಣ್ಣನ ಮಗಳು, ದಿನಾ ವಾಕಿಂಗ್‍ಗೆ ಜೊತೆಯಾಗೋ ಹುಡುಗಿ,  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಸಮಾನ ಅಭಿರುಚಿಯ ಹೆಣ್ಣು ಮಗಳು... ಮುಂತಾದವರೆಲ್ಲಾ ನಿಮ್ಮನ್ನು ಅಂದರೆ ಹುಡುಗರನ್ನು ತುಂಬಾ ಆತ್ಮೀಯವಾಗಿ ಮಾತಾಡಿಸುತ್ತಾರೆ, ಹತ್ತಿರವಿದ್ದರೆ ಹೆಗಲ ಮೇಲೊಂದು ಕೈ ಇಟ್ಟುಕೊಂಡೇ ಹರಟುತ್ತಾರೆ, ವಿಪರೀತ ಅನ್ನುವಷ್ಟು ಹಚ್ಚಿಕೊಳ್ಳುತ್ತಾರೆ.

ನೀವು ಮಧ್ಯ ರಾತ್ರಿ ಕರೆ ಮಾಡಿದರೂ ಅದನ್ನು ನಿದ್ದೆಗಣ್ಣಿನಲ್ಲೇ ಅಟೆಂಡ್ ಮಾಡುತ್ತಾರೆ, ನಂಗೊಂದು ಹೆಲ್ಪ್ ಆಗ್ಬೇಕಿತ್ತು ಕಣೇ ಅಂದ್ರೆ ತಮ್ಮ ಜೀವ ಒತ್ತೆ ಇಟ್ಟಾದರೂ ಸಹಾಯ ಮಾಡೋಕೆ ಸಿದ್ಧರಾಗುತ್ತಾರೆ, ನನ್ ಹುಡುಗಿ ನಂಗೆ ಮೋಸ ಮಾಡಿದ್ಳು ಕಣೇ ಅಂದ್ರೆ ನಿಮ್ಮ ಹತ್ತಿರ ಕೂತು ಹೋಗ್ಲಿ ಬಿಡೋ, ಅವಳಿಗೆ ನಿನ್ನ ಪಡಕೊಳ್ಳುವ ಯೋಗ್ಯತೆ ಇಲ್ಲ ಬಿಡು ಎಂದು ಸಮಾಧಾನಿಸುತ್ತಾಳೆ, ಯಾಕೋ ಕ್ಲಾಸ್ ಬೋರಾಗ್ತಿದೆ ಬಂಕ್ ಮಾಡ್ತೀನಿ ಅಂದ್ರೆ ನೀನಿಲ್ದಿರೋ ಕ್ಲಾಸಲ್ಲಿ ಕೂರೋಕೆ ನಂಗೂ ಬೋರ್, ನಾನು ಬರ್ತೀನಿ ಇರು ಅಂತಾಳೆ. ಅಪ್ಪಿತಪ್ಪಿ ಏನಾದ್ರೂ ’ಈ ಲೈಫ್ ಬೇಜಾರಾಗೋಗಿದೆ’ ಅಂತ ರಾತ್ರಿ ಮಲಗೋ ಮುನ್ನ ವಾಟ್ಸಾಪ್ ಸ್ಟೇಟಸ್ ಹಾಕೊಂಡ್ರೆ ಪ್ರಪಂಚಾನೇ ಅಲ್ಲೋಲಕಲ್ಲೋಲ ಆಯ್ತೇನೋ ಎಂಬಂತೆ ಆಕ್ಷಣಾನೇ ಕರೆ ಮಾಡಿ ಬೆಳಕು ಹರಿಯುವವರೆಗೂ ನಿಮ್ಮನ್ನು ಎಂಗೇಜಲ್ಲಿರಿಸುತ್ತಾಳೆ, ನೀವು ಕೇಳದೇನೇ ನಿಮ್ಮ ಅಸೈನ್‍ಮೆಂಟ್ ಬರೆದಿಡ್ತಾಳೆ, ಅಪ್ಪನ ಜೊತೆ ಶಾಪಿಂಗ್ ಹೋದ್ರೂ ಅಲ್ಲಿಂದಲೇ ಫೋನ್ ಹಚ್ಚಿ ಯಾವ ಕಲರ್ ಡ್ರೆಸ್ ತಗೋಬೇಕು ಹೇಳೋ ಅಂತ ನಿಮ್ಮ ತಲೆ ತಿನ್ನುತ್ತಾಳೆ, ಒಂದೇ ಒಂದು ದಿನ ಸಿಗದೇ ಇದ್ರೂ ಇಷ್ಟಗಲ ಕಣ್ಣರಳಿಸಿ ನಿನ್ನೆ ಎಲ್ಲಿ ಸಾಯೋಕೆ ಹೋಗಿದ್ದೆ ಅಂತ ಕೇಳ್ತಾಳೆ ಅಥವಾ ಮೂತಿನಾ ಇಷ್ಟುದ್ದ ಮಾಡ್ಕೊಂಡು ನಿನ್ನ ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಾ ಅಂತ ಪ್ರಶ್ನಿಸ್ತಾಳೆ. ನೀನಿಲ್ದೇ ನನ್ನ ಬದುಕು ಇನ್‍ಕಂಪ್ಲೀಟ್ ಕಣೋ ಎಂದು ಸಾವಿರ ಬಾರಿ ಹೇಳಿರುತ್ತಾಳೆ ಮತ್ತು ಹಾಗೆ ನಡ್ಕೊಂಡಿರುತ್ತಾಳೆ ಕೂಡ.

ಅದರೆ ಹುಡುಗರಾ, ನೀವಂದುಕೊಂಡಿರುವಂತೆ ಅದು ಪ್ರೀತಿಯಾಗಿರುವುದಿಲ್ಲ. ಅಲ್ಲಿ ನಿಮ್ಮನ್ನು ಜೀವನಸಂಗಾತಿಯಾಗಿ ಪಡೆದುಕೊಳ್ಳಬೇಕು ಅನ್ನುವ ಆಸೆ ಇರುವುದಿಲ್ಲ. ಅವಳು ನಿಮ್ಮನ್ನೆಂದೂ ಪ್ರೇಮಿಯಾಗಿ ಕಲ್ಪಿಸಿಕೊಂಡಿರುವುದಿಲ್ಲ. ಅಲ್ಲಿರುವುದು ಶುದ್ಧಾನುಶುದ್ಧ ಸ್ನೇಹ ಮಾತ್ರ. ಅವನು ನನ್ನ ಜೀವದ ಗೆಳೆಯ ಅನ್ನುವ ನಿಷ್ಕಳಂಕ ಭಾವ ಮಾತ್ರ. ನನ್ನ ಪ್ರತಿ ಸೋಲಲ್ಲೂ, ಪ್ರತಿ ಗೆಲುವಲ್ಲೂ ನನ್ನೀ ಗೆಳೆಯನಿರುತ್ತಾನೆ ಅನ್ನುವ ಭರವಸೆಯದು. ನನ್ನ ಪ್ರತೀ ನಲಿವನ್ನೂ, ಪ್ರತಿ ಸೋಲನ್ನೂ ಹಂಚಿಕೊಳ್ಳೋಕೆ ಒಂದು ಜೀವವಿದೆ ಅನ್ನುವ ನಂಬಿಕೆಯದು.

ನೀವು ನೊಂದಾಗ ಎಲ್ಲೇ ಇದ್ದರೂ ಓಡೋಡಿ ಬಂದು ನಿಮ್ಮನ್ನವಳು ಸಮಾಧಾನಿಸುತ್ತಾಳೆ ಅಂದರೆ ಅದು ಪ್ರೇಮವಲ್ಲ, ಅವಳ ಒಳ್ಳೆಯತನ. ಪ್ರತೀ ಹೆಣ್ಣು ಹುಟ್ತುತ್ತಲೇ ತಾಯಿಯಾಗಿಯೇ ಹುಟ್ಟುತ್ತಾಳಂತೆ. ಮಗಳಾಗಿ, ತಂಗಿಯಾಗಿ, ಅಕ್ಕನಾಗಿ, ಅತ್ತಿಗೆಯಾಗಿ, ಗೆಳತಿಯಾಗಿ ಕೊನೆಗೆ ಪ್ರೇಮಿಯಾಗಿ ಕೂಡ ಆಕೆ ನಿಭಾಯಿಸುವುದು, ನಿರ್ವಹಿಸುವುದು ತಾಯ್ತನದ ವಿವಿಧ ಮಜಲುಗಳನ್ನೇ, ವಿವಿಧ ಪದರುಗಳನ್ನೇ. ಇಲ್ಲೂ ಅಷ್ಟೆ, ನೀವು ನೊಂದಿದ್ದೀರಿ ಅಂದಾಕ್ಷಣ ಅವಳಲ್ಲಿ ಒಳಗೆಲ್ಲೋ ಸುಪ್ತವಾಗಿದ್ದ ತಾಯ್ತನ ಜಾಗೃತವಾಗುತ್ತದೆ. ಅದರಿಂದಾಗೇ ಆಕೆ ನಿಮ್ಮ ಬಳಿ ಓಡಿ ಬರುತ್ತಾಳೆ, ಎಷ್ಟು ಸಾಧ್ಯವೋ ಅಷ್ಟೂ ಕಂಫರ್ಟ್ ಫೀಲ್ ಕೊಡೋಕೆ ಪ್ರಯತ್ನಿಸುತ್ತಾಳೆ. ಹಾಗೆ ಕೊಡೋಕೆ ಆಗದೇ ಇದ್ದಾಗೆಲ್ಲಾ ತಾನು ಈ ಸಂಬಂಧವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೇನೋ ಅನ್ನುವ ತೊಳಲಾಟಕ್ಕೆ ಬಿದ್ದುಬಿಡುತ್ತಾಳೆ.

ಅದನ್ನೇ, ಆ ಒಳ್ಳೆಯತನವನ್ನೇ ನೀವು ಪ್ರೀತಿ ಅಂದುಕೊಳ್ಳುತ್ತೀರಿ. ನೀನಿಲ್ಲದೇ ನನ್ನ ಬದುಕು ಇನ್‍ಕಂಪ್ಲೀಟ್ ಕಣೋ ಅಂದಿರುವುದನ್ನೇ ಪ್ರೇಮದ ತೀವ್ರತೆಯೆಂದು ಪರಿಗಣಿಸುತ್ತೀರಿ. ಒಂದೇ ಒಂದು ಕ್ಷಣಕ್ಕೂ ಅದು ಆಕೆಯ ಸ್ನೆಹದ ಆಳ, ನಿರ್ಮಲತೆ ಅಂತ ನಿಮಗನಿಸುವುದೇ ಇಲ್ಲ. ಅವಳನ್ನು ಒಂದು ಮಾತೂ ಕೇಳದೇ, ನಿಮಗೆ ನೀವೇ ಪ್ರೀತಿಸುತ್ತಿರುವುದಕ್ಕೇ ಇಷ್ಟೊಂದು ಕಾಳಜಿ ತೋರುತ್ತಿದ್ದಾಳೆ ಎಂದು ನಿರ್ಧರಿಸಿಬಿಡುತ್ತೀರಿ.

ಸರಿ, ಹಾಗೆ ನಿರ್ಧರಿಸಿದ ಮೇಲಾದರೂ, ನಿಮ್ಮ ಅಷ್ಟೊಂದು ಹಚ್ಚಿಕೊಂಡ ಹುಡುಗಿಯ ಹತ್ತಿರ ಕೂತು, ಆತ್ಮೀಯತೆಯಿಂದ, ನನಗೇನೋ ನೀನು ನನ್ನ ಪ್ರೀತಿಸುತಿದ್ದಿ ಅನ್ನಿಸುತ್ತದೆ, ನೀನೇನು ಹೇಳುತ್ತಿ ಎಂದು ಕೇಳುವುದೋ, ಇಲ್ಲ ನಮ್ಮಿಬ್ಬರ ಸ್ನೇಹವನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೊಯ್ದು ಸಂಗಾತಿಗಳಾಗೋಣ ಅಂತಲೋ ಹೇಳುತ್ತೀರೇನೋ ಅಂದರೆ ಅದೂ ಇಲ್ಲ. ಹಾಗೇನೂ ಮಾಡದೆ, ಮುಂಜಾವಿನ್ನೂ ಕಣ್ಣುಬಿಡುವ ಮುನ್ನವೇ ಅವಳು ಕಳುಹಿಸಿದ್ದ  good morning  ಮೆಸೇಜನ್ನೋ ಅಥವಾ ಗೆಳತಿಯರ ಜೊತೆಗೆ ಟ್ರಿಪ್ ಹೋದಾಗ ಬಿಡುವು ಮಾಡಿಕೊಂಡು ಕಳುಹಿಸಿದ miss you  ಮೆಸೇಜನ್ನೋ ಆಧಾರವಾಗಿಟ್ಟುಕೊಂಡು, ಅವಳೊಬ್ಬಳನ್ನು ಹೊರತುಪಡಿಸಿ ಊರಿಡೀ ಅವಳು ನನ್ನ ಪ್ರೀತಿಸುತ್ತಿದ್ದಾಳೆ ಅಂತ ಡಂಗುರ ಸಾರಿಕೊಂಡು ಬರುತ್ತೀರಿ.

ಒಂದಿಷ್ಟು ದಿನಗಳ ಕಾಲ ನಿಮ್ಮ ಡಂಗುರ ಗುಟ್ಟಾಗಿಯೇ ಉಳಿದಿರುತ್ತದೆ. ಆಮೇಲೊಂದಿನ ಮೂರನೆಯವರ ಮೂಲಕ ಅದು ಅವಳ ಕಿವಿ ತಲುಪುತ್ತದೆ. ಮೊದಮೊದಲು ತಮಾಷೆ ಇರಬಹುದೇನೋ ಅಂದುಕೊಂಡು ಅವಳೂ ಸುಮ್ಮನಿರುತ್ತಾಳೆ. ಆಮೇಲೆ, ಇಲ್ಲವೇ ಇಲ್ಲ, ನಮ್ಮ ಸ್ನೇಹವನ್ನು ಕೆಡಿಸಲು ನೀವೆ ಇಲ್ಲಸಲ್ಲದ ಕಥೆ ಕಟ್ಟುತ್ತಿದ್ದೀರಿ ಎಂದು ವಾದಿಸುತ್ತಾಳೆ. ಮತ್ತೂ ಅವರು ಸುಮ್ಮನಾಗದಿದ್ದರೆ, ನನ್ ಫ್ರೆಂಡ್ ಹಾಗೆಲ್ಲಾ ಹೇಳಿರಲ್ಲ ಅನ್ನುವುದನ್ನು ಜಗತ್ತಿಗೇ ಸಾಬೀತು ಪಡಿಸಬೇಕು ಅನ್ನುವ ಹಠಕ್ಕೆ ಬಿದ್ದು ಬಿಡುತ್ತಾಳೆ. ಆಗಲೇ ಎಲ್ಲರೆದುರು ನಿಮ್ಮ ಕರೆದು, ಇವರೆಲ್ಲಾ ನಿನ್ನ ಬಗ್ಗೆ ಏನೇನೋ ಕಥೆ ಕಟ್ಟಿ ಹೇಳುತ್ತಿದ್ದಾರೆ, ಅವನ್ನೆಲ್ಲಾ ಒಮ್ಮೆ ನಿರಾಕರಿಸಿಬಿಡು ಅನ್ನುವುದು. ನೀವಾಗ ಅದನ್ನು ನಿರಾಕರಿಸಲಾಗದೆ, ಪೆಕರು ಪೆಕರಾಗಿ ಅವರಂದಿರುವುದೆಲ್ಲಾ ನಿಜ ಕಣೇ, ನೀನೂ ನನ್ನ ಪ್ರೀತಿಸುತ್ತಿದ್ದಿ ಅಂತ ನಾನಂದುಕೊಂಡಿದ್ದೆ ಎಂದು ಒಗರೊಗಾದ ಧ್ವನಿಯಲ್ಲಿ ಹೇಳಿ ತಲೆ ತಗ್ಗಿಸಿ ನಿಂತುಬಿಡುತ್ತೀರಿ.

ಅಲ್ಲಿಗೆ, ನಿಮ್ಮ ಮೇಲೆ, ಸ್ನೇಹದ ಮೇಲೆ, ಆಕೆಗಿದ್ದ ಅಖಂಡ ನಂಬಿಕೆ ಸಂಪೂರ್ಣ ಕುಸಿದುಬಿಡುತ್ತದೆ. ನೀವಾಕೆಯನ್ನು ಪ್ರೀತಿಸಿದಿರಿ ಅನ್ನುವುದಕ್ಕಿಂತಲೂ ಯಾರೋ ಮೂರನೆಯವರ ಮುಖಾಂತರ ಅದನ್ನುr ತಿಳಿದುಕೊಳ್ಳುವಂತಾಯಿತಲ್ಲಾ ಅನ್ನುವುದವಳನ್ನು ಹೆಚ್ಚು ಭಾದಿಸತೊಡಗುತ್ತದೆ. ಇವೆಲ್ಲದರ ತಾಯಿ ಬೇರು ಅಪನಂಬಿಕೆ ಅನಿಸತೊಡಗುತ್ತದೆ. ಯಾವ ಸಂಬಂಧವನ್ನು  ಕಣ್ಣರೆಪ್ಪೆಯೊಳಗಿತ್ತು ಕಾಯ್ದಿದ್ದಳೋ ಅದೇ ಸಂಬಂಧದಿಂದ ಹೊರಬರಲು ಮನಸು ಚಡಪಡಿಸತೊಡಗುತ್ತದೆ. ಅಲ್ಲಿಂದಾಚೆ ನೀವು ಎಷ್ಟೇ ವಿವರಣೆ ಕೊಟ್ಟರೂ, ಸಮಜಾಯಿಷಿ ನೀಡಿದರೂ ಅದನ್ನು ಅವಳು ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಳ್ಳುವುದು ಬಿಡಿ, ನಿಮ್ಮ ವಿವರಣೆಗಳನ್ನು, ಸಮಜಾಯಿಷಿಗಳನ್ನು ಕೇಳಿಸಿಕೊಳ್ಳಲೇ ತಯಾರಿರುವುದಿಲ್ಲ. ಪರಿಣಾಮ, ಮಧುರ ಸಂಬಂಧವೊಂದು ಅಕಾಲಕ್ಕೇ ಆತ್ಮಹತ್ಯೆ ಮಾಡಿಬಿಡುತ್ತದೆ.

ಹೀಗೆ, ಬದುಕಿನ ಹಲವು ಸಂಭ್ರಮದ ಘಳಿಗೆಗಳನ್ನು, ನೋವಿನ ಕ್ಷಣಗಳನ್ನು ಹಂಚಿಕೊಂt ಸಂಬಂಧವೊಂದು ಏಕಾಏಕಿ ಕೈಬಿಟ್ಟುಹೋಗುತ್ತದಲ್ಲಾ, ಅದನ್ನು ಭರಿಸುವುದು, ಆ ಕಳೆದುಕೊಂಡ ನೋವಿನೊಂದಿಗೇ ಜೀವನ ಪೂರ್ತಿ ಏಗುವುದು ಅಷ್ಟೊಂದು ಸುಲಭವಲ್ಲ. ಬದುಕಿನ ಪ್ರತಿ ಕ್ಷಣಾನೂ ಆ ಸಂಬಂಧದ ಮಧುರ ನೆನಪುಗಳು ಮತ್ತು ಅದು ಈಗ ಜೀವಂತವಾಗಿಲ್ಲ ಅನ್ನುವ ನಿರಾಸೆ ಕಾಡುತ್ತಲೇ ಇರುತ್ತದೆ. ಹಾಗಾಗಬಾರದು ಅಂತಿದ್ದರೆ,  ಸಂಬಂಧಗಳ ಬಗ್ಗೆ ಒಂದು ನಿರ್ಧಾರಕ್ಕೆ ಬರುವ ಮುನ್ನ, ನೂರು ಮಂದಿಯ ಮುಂದೆ ಒಂದು ಮಾತು ಆಡುವ ಮುನ್ನ ದಯವಿಟ್ಟು ಒಂದಿಷ್ಟಾದರೂ ಯೋಚಿಸಿ...

ಸಂಜೆ ಮುಗಿಲಿನ ಹಾಡು


ಎದೆಯ ಪಕ್ಕದಲಿ ಹರಿವ
ನದಿಯಲೀಗ ನೂರು ಪುಳಕ
ಸ್ವಪ್ನ ಲೋಕದ ಜರೂರತ್ತಿಗೆಲ್ಲಾ
ಸುಸ್ಪಷ್ಟ ಹಾಸುಗಲ್ಲು

ಎಲ್ಲೋ ಕಟ್ಟಿದ ಮೋಡ
ಇಲ್ಲಿ ಸುರಿದ ಮಳೆ
ಮತ್ತೆಲ್ಲೋ ಬೀಸಿದ ಗಾಳಿ
ಗರಿಕೆಯ ಗರ್ಭದಲ್ಲೂ ಖುಶಿಯ ಹೊನಲು

ಸಂಜೆ ಮುಗಿಲಿನ ಹಾಡಲೊಳಗೀಗ
ರಾಗ ತಾಳಗಳಾಚೆಗಿನ ಭಾವಸಂಭ್ರಮ
ಕೆನೆಗಟ್ಟಿದ ಹಾಲಿನ ಪ್ರತಿ ಕಣಕೂ
ಬಿದಿಗೆ ಚಂದ್ರಬಿಂಬದ ಬೆರಗು

ಬಂಡಾಯ ಪದ್ಯದಂತರಂಗದಲೂ
ನವಿರು ಪ್ರೇಮ ಸ್ಫುರಣೆ
ಪ್ರೀತಿ ಅಜರಾಮರ ಎಂದ ಕವಿಯೀಗ
ಹೊಸ ಪುಕ್ಕ ಕಟ್ಟಿಕೊಂಡ ಹಕ್ಕಿ

ನೆರಳು ನೀರಾಗುವ ಸುಸಮಯದಿ
ಕನಸುಗಳಿಗೆ ನವ ಜೀವ ಪ್ರಾಪ್ತಿ
ತೆರೆ ಮರೆಯ ಕವಿತೆಗೂ
ನವಿಲಾದ ಜಯೋತ್ಕರ್ಷ.

ಬುಧವಾರ, ಮೇ 11, 2016

ಇವೆಲ್ಲಾ ನಿನಗೆ ಮೂರು ವರ್ಷಕ್ಕೂ ಮುಂಚೆಯೇ ಗೊತ್ತಿತ್ತಾ?

ಮೊನ್ನೆ ಜೀವದ ಗೆಳತಿ ವಾಸ್ತವ್ಯವಿರುವ ಪಿ.ಜಿಯ ಪಕ್ಕದಲ್ಲಿರುವ ಮರದ ಕೆಳಗೆ ಕೂತು ಮಾತನಾಡುತ್ತಿದ್ದಾಗ ನಾನು ಅಪ್ಪಟ ತತ್ವಜ್ಞಾನಿಯ ಶೈಲಿಯಲ್ಲಿ "ಕಾಲ ಅದೆಷ್ಟು ಬೇಗ ಬದಲಾಗಿಬಿಡ್ತಲ್ವಾ?" ಅಂದೆ. ಯಾವತ್ತೂ ನನ್ನ ಇಂತಹ ಮಾತುಗಳಿಗೆಲ್ಲಾ ತಲೆಕೆಡಿಸಿಕೊಳ್ಳದ ಅವಳು ಅವತ್ತು ಮಾತ್ರ "ಬದಲಾಗಿರುವುದು ಕಾಲವಲ್ಲ, ನಮ್ಮ ಮನಸ್ಥಿತಿಗಳು ಅಷ್ಟೇ" ಅಂತಂದು ಮೌನವಾದಳು. ಸಾಫ್ಟ್ವೇರ್, ಟೀಂ ವರ್ಕ್, ನೈಟ್ ಶಿಫ್ಟ್ ಅಂತೆಲ್ಲಾ ಮಾತ್ರ ಮಾತಾಡುತ್ತಿದ್ದ ಹುಡುಗಿಯ ಬಾಯಲ್ಲಿ ಇವತ್ತೇಕೆ 'ಮನಸ್ಥಿತಿ'ಯ ಮಾತು ಪ್ರಸ್ತಾಪವಾಯಿತು ಅಂತ ಅಚ್ಚರಿಗೊಳ್ಳುತ್ತಾ ಅವಳತ್ತ ನೋಡಿದೆ. ಅವಳು ನನ್ನ ಅವಳ ಕೋಣೆಯೊಳಗೆ ಕರಕೊಂಡು ಹೋಗಿ, ಕೆಂಪು ಬಣ್ಣದ ಹೊದಿಕೆಯಲ್ಲಿ ಸುತ್ತಿಟ್ಟ, ಈಗ ತಾನೇ ಬರೆದಂತಿದ್ದ, ಶುದ್ಧಾನುಶುದ್ಧ ಕೈ ಬರಹದ ಪತ್ರ ಕೈಗಿಟ್ಟಳು. ಓದುತ್ತಾ ಹೋದಂತೆ ಆ ಎರಡು ಜೀವಗಳ ಪ್ರೀತಿ, ಬದುಕು, ಮುನಿಸು, ನೋವು, ವಿರಹ ನನ್ನ ಕಣ್ಣ ಚಕ್ರತೀರ್ಥದಲ್ಲಿ ಕದಲತೊಡಗಿದವು. ನಾನು ಓದಿ ಮುಗಿಸುವಷ್ಟರಲ್ಲಿ ಅವಳು "ನನ್ನ ನೋವ ಮರೆಯಲು ಇದನ್ನು ಬರೆದೆನಷ್ಟೇ, ಪೋಸ್ಟ್ ಮಾಡುವ ಯಾವ ಆಸಕ್ತಿಯೂ ನನಗಿಲ್ಲ" ಅಂತಂದು ಎತ್ತಲೋ ನೋಡುತ್ತಾ ನಿಂತಳು. ಹಲವು ವರ್ಷಗಳ ಒಡನಾಟದಿಂದ ಇನ್ನಿವಳ ಮಾತಾಡಿಸಿ ಅರ್ಥವಿಲ್ಲ ಅನ್ನುವುದು ಗೊತ್ತಾಗಿರುವುದರಿಂದ ಅದನ್ನು ಹಾಗೇ ಎತ್ತಿಕೊಂಡು ಮನೆಗೆ ಬಂದಿದ್ದೆ. ಈಗ ಅದೇ ಪತ್ರವನ್ನು ಟೈಪಿಸಿ (ಅವಳ ಒಪ್ಪಿಗೆಯ ಮೇರೆಗೆ) ನಿಮ್ಮುಂದೆ ಇಟ್ಟಿದ್ದೇನೆ, ಇನ್ನು ನೀವುಂಟು ನಿಮ್ಮ ಅಕ್ಕರೆಯ ಅಕ್ಷರಗಳುಂಟು...

ಪ್ರಿಯ ಶಿಶಿರ್,

ಈ ಅಕಾಲದ ಬಿಸಿಲಲ್ಲಿ, ಸಂಬಂಧಗಳೇ ಇಲ್ಲದ ಪಿ.ಜಿಯ ಟೆರೇಸ್ ಮೇಲೆ ನಿಂತು, ಉದ್ದಕ್ಕೆ ಚಾಚಿಕೊಂಡಿರುವ ರಸ್ತೆಯನ್ನು ದಿಟ್ಟಿಸುವಾಗೆಲ್ಲಾ ಆಕಸ್ಮಿಕ ಸ್ಪರ್ಶದ ಬಿಸುಪಿಗೆ ನಾಚುವ ಈಗಷ್ಟೇ ಪ್ರೀತಿಸಲು ಶುರು ಹಚ್ಚಿಕೊಂಡಿರುವ ಜೋಡಿಗಳು ಕಣ್ಣಿಗೆ ಬೀಳುತ್ತಾರೆ. ಆಗೆಲ್ಲಾ ಮುಂಜಾನೆಯ ಗರ್ಭದಲ್ಲಿ ಹುಟ್ಟಿ ಬಯಲು ತು೦ಬಾ ಹರಡಿ ಮನುಷ್ಯನ ಬೆನ್ನು ಮೂಳೆ ಕೂಡ ನಡುಗಿಸಿ ಹಾಕುತ್ತಿದ್ದ ಅದ್ಭುತ ಡಿಸೆ೦ಬರ್ ಚಳಿಯಲಿ ನೀನೇ ಕೊಡಿಸಿದ ತಿಳಿ ಆಕಾಶ ನೀಲಿ ಬಣ್ಣದ ಸ್ವೆಟರ್‍ನೊಳಗೆ ಮುದುಡಿಕೊ೦ಡು ಸಣ್ಣಗೆ ಕ೦ಪಿಸುತ್ತಾ ಹೂವಿನ ಗಿಡಗಳಿಗೆ ನೀರೆರೆಯುತ್ತಾ ಮನಸ ತು೦ಬಾ ನಿನ್ನ ಪ್ರೀತಿಯ ನಾದಕ್ಕೆ ತಲೆದೂಗುತ್ತಿದ್ದ, ಎಳೆ ಸೂರ್ಯ ಕಿರಣ ಮೈಯ ಸೋಕುತ್ತಿದ್ದರೆ ನಿನ್ನದೇ ಸ್ಪರ್ಶದ ಆಪ್ಯಾಯತೆಯ ಅನುಭವಿಸುತ್ತಿದ್ದ, ಎಲೆ-ಹೂವಿನ ಮೇಲೆ ಬಿ೦ಕದಿ೦ದ ಕುಳಿತಿರೋ ಮ೦ಜಹನಿಗಳು ಮುತ್ತ೦ತೆ ಪ್ರತಿಫಲಿಸುತಿರಲು ನಿನ್ನ ಕಣ್ಣೇ ಇಬ್ಬನಿಯಾಗಿ ನನ್ನ ಕೆಣಕುತಿವೆ ಅಂತ ಅನ್ನಿಸುತ್ತಿದ್ದ ಆ ದಿನಗಳು ತಪ್ಪದೇ ನೆನಪಾಗುತ್ತವೆ.

ಎಷ್ಟೊಂದು ಚೆನ್ನಾಗಿದ್ದವು ಕಣೋ ಆ ದಿನಗಳು. ಅದೆಷ್ಟೊಂದು ಪ್ರೀತಿಸುತ್ತಿದ್ದೆ? ನನ್ನ ಎಷ್ಟೊಂದು ಕ್ರಿಯೆಗಳಲ್ಲಿ ನೀನಿದ್ದೆ? ನಿನ್ನ ಎಷ್ಟೊಂದು ಪ್ರತಿಕ್ರಿಯೆಗಳಲ್ಲಿ ನಾನಿದ್ದೆ? ಬದುಕಿನ ಪ್ರತಿ ಕುತರ್ಕಗಳನ್ನು ದಾಟುವಾಗಲೂ ನಾನು ನೀನಾಗಿದ್ದೆ, ನೀನು ನಾನಾಗಿದ್ದೆ. ನಿನ್ನ ಮುಖದ ಕಳವಳಿಕೆಗಳು ಕತ್ತಲಲ್ಲಿ ಬದಲಾದರೂ ನನಗದು ತಟ್ಟನೆ ಗೋಚರವಾಗುತಿತ್ತು. ನಾನು ಕನಸಲ್ಲಿ ಸಣ್ಣಗೆ ಚೀರಿದರೂ ನಿನ್ನೆದೆಯ ನರಗಳು ಧಿಮ್ಮನೆ ಕದಲುತ್ತಿದ್ದವು.

ನೀನೆಂದರೆ ಕುರುಡುಗತ್ತಲಿಲ್ಲಿ ದೇದೀಪ್ಯಮಾನವಾಗಿ  ಉರಿಯುತ್ತಿದ್ದ ಪ್ರಣತಿ, ಮುಸ್ಸಂಜೆಯಾಗುತ್ತಿದ್ದಂತೆ ನನ್ನೊಳಗೆ ಮಿಡಿಯುತ್ತಿದ್ದ ಮೌನವೀಣೆ. ಕುವೆಂಪು ಭಾವಗೀತೆ ಕೇಳಿ ನಾನ್ನು ಹನಿಗಣ್ಣಾಗುತ್ತಿದ್ದಾಗಲೆಲ್ಲಾ ನೀನು ನೆತ್ತಿ ಸವರಿ ’ಬದುಕಲು ಕಲಿ ಹುಡುಗಿ’ ಅನ್ನುತ್ತಿದ್ದಾಗ ನಾನು ನಿನ್ನ ಮಡಿಲಲ್ಲಿ ಮಗುವಾಗುತ್ತಿದ್ದೆ. ನನ್ನ ಹುಡುಗ ಎಷ್ಟೊಂದು ಬುದ್ಧಿವಂತನಲ್ಲಾ ಎಂದು ಅಚ್ಚರಿ ಪಡುತಿದ್ದೆ, ಸಂಭ್ರಮಿಸುತ್ತಿದ್ದೆ.

ನಿನ್ನ ಮಾತು, ತುಟಿಯ ತಿರುವಲಿ ಮಾತ್ರ ತೇಲಿಸುತ್ತಿದ್ದ ಸಣ್ಣ ನಗು, ಕುರುಚಲು ಗಡ್ಡ, ಗಂಭೀರ ಕಣ್ಣುಗಳು, ಕುಡಿನೋಟ, ಅಪರೂಪಕ್ಕೊಮ್ಮೆ ಆಡುತ್ತಿದ್ದ ಕಪಿಚೇಷ್ಟೆ, ನನ್ನಂತಹ ಹುಟ್ಟು ತರಲೆಯನ್ನೂ ಸಂಭಾಳಿಸುತ್ತಿದ್ದ ನಿನ್ನ ತಾಳ್ಮೆ, ನೀ ಗುಣುಗುತ್ತಿದ್ದ ಹಾಡುಗಳು, ತೋಳಮೇಲಿನ ಹುಟ್ಟು ಮಚ್ಚೆ... ಊಹೂಂ, ಇವ್ಯಾವುವೂ ಭವಿಷ್ಯದಲ್ಲಿ ಒಂದು ಕರಾಳ ಸ್ವಪ್ನವಾಗಿ ನನ್ನ ಕಾಡುತ್ತದೆ ಅಂತ ನಾನಂದುಕೊಂಡಿರಲೇ ಇಲ್ಲ.

ನಾನು ಪ್ರತಿ ರಾತ್ರಿ ಕಣ್ಣುಮುಚ್ಚುವ ಮುನ್ನ, ನಿನ್ನ ಸುಂದರ ನಾಳೆಗಿರಲಿ ಅಂತ ಒಂದಿಷ್ಟು ಕನಸುಗಳನ್ನು ಎತ್ತಿಟ್ಟುಕೊಳ್ಳುತ್ತಿದ್ದೆ. ಅವೆಲ್ಲಾ ಕೇವಲ ನಿನ್ನ ಹಾಗೂ ನನ್ನನ್ನು ಮಾತ್ರ ಒಳಗೊಂಡ ಕನಸುಗಳಾಗಿದ್ದವು. ಅದು ಬಟ್ಟಬಯಲಲಿ ನಿನ್ನ ಹಿನ್ನಲೆಗಳು, ಭೂತಕಾಲಗಳು ಯಾವುವೂ ಇಲ್ಲದೆ ನಿನ್ನ ಜೊತೆ ಬದುಕು ಕಟ್ಟಿಕೊಳ್ಳುವ ಅಗಾಧ ಕನಸಾಗಿತ್ತು. ನಿನ್ನ ಕೇವಲ ನೀನಾಗಿಯೇ ಸ್ವೀಕರಿಸುವ, ನನ್ನೊಳಗೆ ಆಹ್ವಾನಿಸುವ, ನನ್ನದೆಲ್ಲವ ನಿನಗೆ ಧಾರೆಯೆರೆದುಕೊಡುವ, ನಿನ್ನ ಖುಶಿಯಲ್ಲಿ ನಾ ಸಂಭ್ರಮಿಸುವ, ನಿನ್ನ ಅಷ್ಟೂ ನೋವುಗಳನ್ನು ನನ್ನೊಳಗೆ ಇಳಿಸಿಕೊಳ್ಳುವ, ಜೀವನ ಪೂರ್ತಿ ನಿನ್ನನ್ನು ಒಲವ ಅಮೃತ ಸುಧೆಯಲಿ ತೇಲಿಸಿಬಿಡುವ ಅನನ್ಯ ಕನಸಾಗಿತ್ತು.

ಆದ್ರೆ ಏನೋ ಮಾಡಿಬಿಟ್ಟೆ ನೀನು? ನನ್ನ ಆ ಒಂದು ಸಾವಿರದ ತೊಂಬತ್ತೈದು ದಿನಗಳ (ಸರಿಯಾಗಿ ಲೆಕ್ಕ ಹಾಕುವುದಾದರೆ  ಒಂದು ಸಾವಿರದ ತೊಂಬತ್ತಾರು ದಿನಗಳು, ಅದರಲ್ಲಿ ಒಂದು ಅಧಿಕವರ್ಷವಿತ್ತು ನೋಡು) ಕನಸುಗಳನ್ನು ಅಥವಾ ನಿನ್ನ ಬದುಕಿನ ಮೂರು ವರ್ಷಗಳ ಕನಸನ್ನು ಕೇವಲ ಒಂದು ಘಳಿಗೆಯಲ್ಲಿ ನಿರ್ನಾಮ ಮಾಡಿಬಿಟ್ಟೆಯಲ್ಲೋ?

ಅವತ್ತು ಎಂದಿನಂತೆ, ದೇವಸ್ಥಾನಕ್ಕೆ ಒಮ್ಮೆ ಬರುತ್ತೀಯಾ ಅಂತ ನೀನು ಕೇಳಿದಾಗ, ನಿನ್ನೊಡನೆ ಮಾತ್ರ ಕಳೆಯುವಂತಹ ಕೆಲವು ಸಂಭ್ರಮದ ಕ್ಷಣಗಳನ್ನು ಇದಿರುಗೊಳ್ಳಲು ಸಿದ್ಧಳಾಗಿ, ಒಂದು ಬುತ್ತಿಯ ಪೂರ್ತಿ ನೀನು ಇಷ್ಟಪಟ್ಟು ತಿನ್ನುತ್ತಿದ್ದ ಕೇಸರಿಬಾತ್ ತುಂಬಿಕೊಂಡು ಬಂದಿದ್ದೆ. ನೀನು ಬರುವವರೆಗೂ ಕಲ್ಯಾಣಿಯ ಮೆಟ್ಟಿಲ ಮೇಲೆ ಕೂತು, ತಂದಿದ್ದ ಕೇಸರಿಬಾತನ್ನು ಇಷ್ಟೇಇಷ್ಟು ಮೀನುಗಳಿಗೆ ಎಸೆಯುತ್ತಿದ್ದೆ. ನೀನು ಬಂದ ಕೂಡಲೇ ಎಂದಿನಂತೆ ನಿನ್ನ ಕೊರಳಿಗೆ ಜೋತು ಬಿದ್ದಿದ್ದೆ. ನಿನಗೆ ಒಂದೊಂದು ಕೈತುತ್ತೀಯುವಾಗಲೂ ನಾನು ಆಸ್ಥೆಯಿಂದ ನಿನ್ನ ಪ್ರೀತಿಯಲ್ಲಿ ಕರಗಿ ಹೋಗುತ್ತಿದ್ದೆ.

ಆಗಲೇ ಅಲ್ಲವೇ ನೀನು ದೂರಾಗುವ ಮಾತಾಡಿದ್ದು? ಆಗಲೇ ಅಲ್ಲವೇ ನಾನು ನಿನ್ನ ಕಣ್ಣೊಳಗೇನಾದರೂ ನನ್ನ ಛೇಡಿಸುವ ಕುರುಹು ಇದೆಯಾ ಎಂದು ಇಣುಕಿ ನೋಡಿದ್ದು? ಆಗಲೆ ಅಲ್ಲವೇ ಎಲ್ಲಿಂದಲೋ ತೂರಿ ಬಂದ ಕಲ್ಲೊಂದು ಕಲ್ಯಾಣಿಯ ನೀರನ್ನು ಕದಡಿದ್ದು? ಆಗಲೇ ಅಲ್ಲವೇ ನೀರಲ್ಲಿನ ನಮ್ಮ ಪ್ರತಿಬಿಂಬ ಕದಲಿದ್ದು? ಆಗಲೆ ಅಲ್ಲವೇ ಆಳದಲ್ಲೆಲ್ಲೋ ಈಜುತ್ತಿದ್ದ ಮೀನೊಂದು ಸತ್ತು ತೇಲತೊಡಗಿದ್ದು? ಆಗಲೆ ಅಲ್ಲವೇ ನಾನು ಇವೆಲ್ಲಾ ರಾತ್ರಿ ಕಾಣುವ ಕೆಟ್ಟ ಕನಸೇನೋ ಎಂಬಂತೆ ನನ್ನ ಮತ್ತೆ ಮತ್ತೆ ಜಿಗುಟಿ ನೊಡಿದ್ದು? ನಿನ್ನ ಕಣ್ಣುಗಳಲ್ಲಿ ಆಗಲೂ ಇದ್ದದ್ದು ಶುದ್ಧ ಪ್ರಾಕ್ಟಿಕಾಲಿಟಿ ಮಾತ್ರ. ಈಗಲಾದರೂ ಹೇಳು ಶಿಶಿರ್, ಇವೆಲ್ಲಾ ನಿನಗೆ ಆ ಮೂರು ವರ್ಷಗಳ ಮುನ್ನವೇ ಗೊತ್ತಿತ್ತಾ? ಗೊತ್ತಿದ್ದೂ ಗೊತ್ತಿದ್ದೂ ನನ್ನ ಬದುಕಿನೊಳಕ್ಕೆ ಬಂದೆಯಾ?

ನೀನು ದೂರಾಗುವ ಮಾತಂದ ಮರುಕ್ಷಣವೇ ನನ್ನಿಂದ ದೂರ ದೂರ ಸರಿಯತೊಡಗಿದೆ. ನಾನು ಅದೇ ಕಲ್ಯಾಣಿಯ ಮೆಟ್ಟಿಲ ಮೇಲೆ ಕೂತು ಸುಮ್ಮನೆ ನಿನ್ನ ನೋಡುತ್ತಲೇ ಇದ್ದೆ. ನಿಜ ಹೇಳಲಾ? ಆ ಕ್ಷಣದಲ್ಲಿ ನನಗೆ ಸತ್ತ ಮೀನನ್ನು ನೀರಿಂದ ತೆಗೆದು ಹೊರಗೆಸೆಯಲಾ ಇಲ್ಲ ನನ್ನ ತೊರೆಯದಿರೆಂದು ನಿನ್ನ ಬೇಡಿಕೊಳ್ಳಲಾ ಅನ್ನುವುದೇ ಅರ್ಥವಾಗಿರಲಿಲ್ಲ. ಆದ್ರೆ, ಮನಸ್ಸು ಇದೆಲ್ಲಾ ಸುಳ್ಳು, ನನ್ನ ಶಿಶಿರ್ ಮತ್ತೆ ಬರುತ್ತಾನೆ ಅಂತ ಮತ್ತೆ ಮತ್ತೆ ಹೇಳುತ್ತಲೇ ಇತ್ತು. ಕೊನೆಪಕ್ಷ ನನ್ನ ತಲೆ ಸವರಿ ಕ್ಷಮಿಸು ಪುಟ್ಟಾ ಅಂತಾದರೂ ಅನ್ನುತ್ತಿಯೇನೋ ಅಂತಂದುಕೊಂಡಿದ್ದೆ. ಊಹೂಂ, ನೀನು ಅದ್ಯಾವುದನ್ನೂ ಮಾಡದೆ ನನಗೆ ಬೆನ್ನು ಹಾಕಿ ನಡೆಯತೊಡಗಿದೆ. ಆಗ ನಿನ್ನ ಕಣ್ಣಲ್ಲೂ ನೀರು ಗಿರಿಗಿಟ್ಲೆಯಾಡುತ್ತಿತ್ತಾ...? ಗೊತ್ತಿಲ್ಲ.

ಆದ್ರೆ ಯಾವಾಗ ನೀನು ನನ್ನ ಬದುಕಿನೊಳಕ್ಕೆ ಮತ್ತೆ ಬರಲಾರೆ ಅನ್ನುವುದು ಖಾತ್ರಿಯಾಯಿತೋ, ಆ ಕ್ಷಣದಲ್ಲೇ ನಿನ್ನ ಮನಸ್ಥಿತಿ, ಯೋಚನೆ, ನಿರ್ಧಾರಗಳ ಬಗ್ಗೆ ಒಂದು ಮಾತೂ ಆಡದೆ, ನಿನ್ನ ಹೋಗಗೊಡಬೇಕು ಅಂತ ತೀರ್ಮಾನಿಸಿಬಿಟ್ಟೆ. ನನ್ನೆಲ್ಲಾ ನೋವುಗಳನ್ನು ಬದುಕಿನ ಮುಂದೆ ಒತ್ತೆ ಇಟ್ಟು ಅವುಡುಗಚ್ಚಿ ಎಲ್ಲವನ್ನೂ ಸಹಿಸಿಕೊಳ್ಳಬೇಕು ಅಂತ ನಿರ್ಧರಿಸಿಕೊಂಡೆ. ನಿನಗಾಗಿ ರಚ್ಚೆ ಹಿಡಿದು ಅಳುವುದರಿಂದ ಪ್ರೀತಿ ಮತ್ತಷ್ಟು ಸಾಂದ್ರವಾಗುತ್ತದೆ ಅನ್ನುವುದು ಅರ್ಥವಾಗುತ್ತಿದ್ದಂತೆ ನನ್ನ ಕಣ್ಣೀರಿಗೂ ಬಲವಂತದ ಕಟ್ಟೆ ಕಟ್ಟಿಬಿಟ್ಟೆ.

ಅಲ್ಲಿಂದಾಚೆ, ನಿನ್ನೆಡೆಗೆ ನನಗಿದ್ದ ಪ್ರೀತಿ ಅಹಂಕಾರದೆಡೆ ಹೊರಳಿಕೊಂಡಿತು, ದಗ್ಧ ಕನಸುಗಳ ಜಾಗದಲ್ಲಿ ಸ್ವಪ್ರತಿಷ್ಠೆ ಮೆರೆಯೊತೊಡಗಿತು, ಭಾವುಕತೆಯ ಜೀವಂತ ಸಮಾಧಿ ಮಾಡಿ ಅದರ ಮೇಲೆ ನಿರ್ಭಾವುಕತೆಯ ಚಪ್ಪಡಿ ಕಲ್ಲು ಎಳೆದು ವಿಜೃಂಭಿಸತೊಡಗಿದೆ, ಕುವೆಂಪು ಮರೆತೇ ಹೋದರು, ಕಲ್ಯಾಣಿ ಅಪ್ರಸ್ತುತವಾಯಿತು. ನನಗಾದ ನೋವಿನಿಂದಾಗಿ ನಾನು ಬದುಕಿನ ಬಗ್ಗೆ ಮತ್ತಷ್ಟು ಸೂಕ್ಷ್ಮತೆ ಬೆಳೆಸಿಕೊಳ್ಳುತ್ತಿದ್ದೇನೆ ಅನ್ನುವ ಭ್ರಮೆಯಲ್ಲಿ ಕಠೋರಳಾಗುತ್ತಾ ಹೋದೆ. ಕೊನೆಗೆ ನನ್ನೊಳಗಿನ ನನ್ನನ್ನು ಕೊಂದುಕೊಂಡು ಕಾರ್ಪೋರೇಟ್ ಜಗತ್ತು ಬಯಸುವ ಒಬ್ಬ ಅಪ್ಪಟ ಯಂತ್ರಮಾನವಳಾದೆ. ಈಗಿರುವ ಮೆಘನಾ, ಅವತ್ತು ಊರಾಚಿನ ಗುಡ್ದದಂಚಿನ ಮುಗಿಲುಗಳಿಗೆ ಕಥೆ ಹೇಳೆಂದು ದುಂಬಾಲು  ಬೀಳುತ್ತಿದ್ದ ಮೇಘನಾ ಅಲ್ಲವೇ ಅಲ್ಲ. ಅಂದು ನೀನನ್ನುತ್ತಿದಂತೆ ನಾನೀಗ ಬದುಕಲು ಕಲಿತಿದ್ದೇನೆ, ಆದ್ರೆ ಇದು ನನ್ನ ಬದುಕು ಅಲ್ಲವೇ ಅಲ್ಲ. ನೋವಿಗೆ -ನಲಿವಿಗೆ ಅತೀತವಾಗಿರುವ ಬದುಕು ನನ್ನದು ಅಂತ ನಾನೂ ಅಹಂಕಾರ ಪಟ್ಟುಕೊಳ್ಳತೊಡಗಿದಾಗಲೇ ನನ್ನೆದೆಯ ನವಿರುಭಾವಗಳೆಲ್ಲವೂ ಆತ್ಮಹತ್ಯೆ ಮಾಡಿಕೊಂಡವು. ಮುರಿದ ಮನಸನ್ನು ತಹಬಂದಿಗೆ  ತಂದಿದ್ದೇನೆ ಅನ್ನುವ ಅಖಂಡ ಭ್ರಮೆಯಲ್ಲಿ ನಾನು ಉರಿದು ಬೂದಿಯಾಗಿದ್ದೇನೆ.

ನಿನಗಿವೆಲ್ಲಾ ಕಾಡುತ್ತವೋ, ಅಸಲಿಗೆ ನಿನ್ನ ಸ್ಮೃತಿ ಪಟಲದ ಒಂದು ಮೂಲೆಯಲ್ಲಾದರೂ ನಾನಿದ್ದೇನೋ ಇಲ್ಲವೋ ಗೊತ್ತಿಲ್ಲ. ಇಷ್ಟೊಂದು ವರ್ಷಗಳ ನಂತರ ಮತ್ತೆ ಪತ್ರ ಬರೆದಿದ್ದೇನೆ ಅಂದರೆ, ಇದು ಖಂಡಿತಾ ನಿನ್ನ ಡಿಸ್ಟರ್ಬ್ ಮಾಡಲಂತೂ ಅಲ್ಲ. ಇಷ್ಟು ವರ್ಷಗಳ ನಂತರ ಮೊದಲ ಬಾರಿ ಮಬ್ಬುಗತ್ತಲೆಯ ಓಡಿಸಲೆಂದು ಹಚ್ಚಿಟ್ಟ ಹಣತೆಯ ಎಣ್ಣೆಯಲಿ ನಿನ್ನ ಪ್ರತಿಬಂಬ ಕಂಡಂತಾಯಿತು. ಸಂತಸದ ಎಳೆ ಮನಸ್ಸಿನ ಪೂರ್ತಿ ತುಂಬಿಕೊಳ್ಳುವ ಮೊದಲೇ ಹಳೆ ಗಾಯ ಮತ್ತೆ ತಿವಿಯತೊಡಗಿತು. ಬೇಡ, ನೀನು ಮತ್ತೆ ನನ್ನ ಮನಸಿನೊಳಕ್ಕೆ, ಬದುಕಿನೊಳಕ್ಕೆ ಬರುವುದೇ ಬೇಡ. ನಿನ್ನ ಅನುಕಂಪದ ಕಂಬನಿಗಳು ನನ್ನೆದೆಯ ಮತ್ತೆ ತೋಯಿಸುವುದೂ ಬೇಡ. ನಾನು ಶಾಪಗ್ರಸ್ಥ ಅಹಲ್ಯೆಯಂತೆ ಬದುಕುತ್ತೇನೆ, ಸಾಕು.

ಇಂತಿ ನಿನ್ನವಳಲ್ಲದ
ಮೇಘನಾ