ಗುರುವಾರ, ಡಿಸೆಂಬರ್ 28, 2017

ಬುದ್ಧನಿಂದ ಅಂಗುಲಿಮಾಲನವರೆಗೆ

ಹಿಂಸೆಯಿಂದ ಅಹಿಂಸೆಯತ್ತ ಹೊರಳಲು, ತಾನೇ ಸೃಷ್ಟಿಸಿಕೊಂಡ ಅಹಮ್ಮಿನ ಕೋಟೆಯಿಂದ ಹೊರಬರಲು, ಬದುಕಿನ ಎಲ್ಲಾ ಲಕ್ಸುರಿಗಳೂ ಕ್ಷುಲ್ಲಕ ಅನಿಸಲು, ತಾನು-ತನ್ನದು-ತನ್ನವರು ಅನ್ನುವ ಭ್ರಮೆಗಳೆಲ್ಲಾ ಕಳಚಿ ಬೀಳಲು ಅನಾಥ ಭಾವವೊಂದೇ ಸಾಕಾಗುತ್ತದೆ.

ಸಿದ್ದಾರ್ಥ ಬುದ್ದನಾಗಲು ಕಾರಣವಾದದ್ದು, ಬಾಹುಬಲಿ ರಾಜ್ಯ ತೊರೆಯಲು ಕಾರಣವಾದದ್ದೂ ಈ ಅನಾಥ ಭಾವವೇ. ಜ್ಞಾನೋದಯ, ಬೋಧಿ ವೃಕ್ಷ, ವೈರಾಗ್ಯ ಇವೆಲ್ಲಾ ಶಬ್ಧವೈಭವಗಳಷ್ಟೇ. ನಿಜಕ್ಕೂ ಮನುಷ್ಯ ಆತ್ಮವಿಮರ್ಶೆ ಮಾಡಿಕೊಂಡಷ್ಟು, ಒಂಟಿತನದ ಸಂಕಟವನ್ನು ಅನುಭವಿಸಿದಷ್ಟು , ಯಾವುದೂ ಶಾಶ್ವತವಲ್ಲ ಅನ್ನುವ ಭಾವ ಗಟ್ಟಿಯಾದಷ್ಟು, ಬದುಕಿನ ಬರ್ಬರತೆಯನ್ನೂ ಎಂಜಾಯ್ ಮಾಡುವಷ್ಟು ಪಕ್ವವಾದಂತೆ ಅವನ ಮನಸ್ಸು ಸೂಕ್ಷ್ಮವಾಗುತ್ತಾ ಹೋಗುತ್ತದೆ, ಸುತ್ತಲಿನ ಪ್ರತೀ ಕ್ರಿಯೆಗಳಿಗೂ ಸ್ಪಂದಿಸುತ್ತಾ ಹೋಗುತ್ತಾನೆ. ಕಣ್ಣೆದುರಿಗೆ ವಿಲ ವಿಲ ಒದ್ದಾಡುತ್ತಾ ಗುಬ್ಬಿ ಮರಿಯೊಂದು ಪ್ರಾಣ ಬಿಟ್ಟಾಗ ಎಷ್ಟು ನೋವಾಗುತ್ತೋ ಅದೇ ತೀವ್ರತೆಯನ್ನು ಕೋಳಿ ಮರಿ ಸತ್ತಾಗಲೂ ಅನುಭವಿಸುತ್ತಾನೆ. ಆಗ ಅವನೊಳಗೇ ಒಂದು ಬೋಧಿ ವೃಕ್ಷ ಚಿಗುರುತ್ತದೆ, ಅರಿವಿನ ಜ್ಞಾನ ತನ್ನಿಂತಾನಾಗಿಯೇ ಹಬ್ಬಿಕೊಳ್ಳುತ್ತದೆ. ಬಹುಶಃ ಬುದ್ಧನಿಗೂ, ಬಾಹುಬಲಿಗೂ ಕೊನೆಗೆ ಅಂಗುಲಿ ಮಾಲನಿಗೂ ಆದದ್ದು ಇದೇ ಇರಬೇಕು.

ಧ್ಯಾನವೆಂಬುವುದು ಹಿಮಾಲಯ ಏರಿ ಯಾವುದೋ ವೃಕ್ಷದಡಿಯಲ್ಲಿ ವರ್ಷಗಟ್ಟಲೆ ಕಣ್ಣು ಮುಚ್ಚಿ ಕೂತು ಒಳಗಿನ ಆಗುಹೋಗುಗಳನ್ನು ಅರಿತುಕೊಳ್ಳುವುದಷ್ಟೇ ಅಲ್ಲ. ಅದು ನಮ್ಮ ಪ್ರತೀ ಕ್ರಿಯೆಗಳ ಬಳಿಕ ಉಳಿದು ಬಿಡುವ ಒಂದು ಕ್ಷಣದ ನಿಶಬ್ದ. ದಿನದ ಯಾವುದೋ ಒಂದು ತಿರುವಿನಲ್ಲಿ ಸುಮ್ಮನೆ ಕಾಡುವ ಚಣ ಹೊತ್ತಿನ ಮೌನ. ಎರಡು ನಿಡಿದಾದ ಉಸಿರಿನ ಮಧ್ಯೆ ಕಣ್ಣು ಬಿಡುವ ಪುಟ್ಟ ನೀರವತೆ. ಶಬ್ದಗಳ ಸಂತೆಯೊಳಗೂ ಹುಟ್ಟುವ ಶಾಂತತೆ.  ಜಗತ್ತಿನ ಮಹಾನುಭಾವರೆಲ್ಲರ ಭಾವಗಳು ಪರಿಪಕ್ವವಾದದ್ದು ಇಂತಹ ಕೆಲವು ನೀರವ, ನಿಶಬ್ದ,  ಮೌನ ಮತ್ತು ಶಾಂತತೆಯಲ್ಲೇ.  ಕಣ್ಣಿಗೆ ಕಾಣದ ಮಾನವತಾ ಲೋಕದ ಅರಿವು ಒಳಗಣ್ಣುಗಳಲ್ಲಿ ಪ್ರತಿಬಿಂಬಿಸುವುದು ಇಂತಹ ಕ್ಷಣಗಳಲ್ಲೇ.

ಎಲ್ಲಾ ಇದ್ದೂ ಯಾವುದೂ ತನ್ನದಲ್ಲ ಅನ್ನುವ ಭಾವ ಬಲಿತಂತೆ ಮನುಷ್ಯನ ಅಹಂಕಾರ ಇಂಚು ಇಂಚಾಗಿ ಸಾಯತೊಡಗುತ್ತದೆ. ಕೊನೆಗೊಂದು ದಿನ ಎಲ್ಲಾ ಅಹಂ, ಸಿಟ್ಟು, ಸೆಡವು, ಅನಗತ್ಯದ ಆವೇಶ ಎಲ್ಲಾ ಖಾಲಿಯಾಗುತ್ತದೆ. ಆಗವನು ನಿಜಾರ್ಥದಲ್ಲಿ ಮನುಷ್ಯನಾಗುತ್ತಾನೆ, ಬುದ್ಧ ಅರಮನೆ ತೊರೆದು ಹೊರಟದ್ದೂ ಎಲ್ಲಾ ಬರಿದಾದ ಒಂದು ಸಂಧಿಕಾಲದಲ್ಲೇ. ರೋಗ, ಮುಪ್ಪು, ಸಾವು ಇವೆಲ್ಲಾ ಬರೀ ನೆಪಗಳಷ್ಟೇ.

ಹಾಗೆ ಬರಿದಾಗಲು, ಖಾಲಿಯಾಗಲು ಬೇಕಾಗಿರುವುದು ಬೋಧಿವೃಕ್ಷವಲ್ಲ, ಇತರರೂ ತಮ್ಮಂತೆಯೇ ಅನ್ನುವ ಸಣ್ಣ ಅರಿವು. ಆ ಅರಿವು ಎಲ್ಲರಲ್ಲೂ ಮೂಡಬೇಕಾಗಿರುವುದು, ಎಲ್ಲರನ್ನೂ ಒಳಗೊಳ್ಳಬೇಕಾಗಿರುವುದು ಈ ಹೊತ್ತು ಜಗತ್ತು ಬಯಸುತ್ತಿರುವ ತುರ್ತು.

ಎಲ್ಲರನ್ನೂ ಅಂದರೆ, ಬುದ್ಧನ ಅನುಯಾಯಿ ಅನ್ನುತ್ತಲೇ ಅಮಾಯಕರ ಮಾರಣ ಹೋಮ ನಡೆಸುತ್ತಿರುವ ಮಯನ್ಮಾರಿಗರನ್ನೂ, ಪ್ರವಾದಿಯವರ ಸಂದೇಶ ಪಾಲಿಸುತ್ತೇನೆ ಅನ್ನುತ್ತಲೇ ರಕ್ತಕಾಲುವೆ ಹರಿಸುವ ಹಿಂಸಾಪ್ರಶುಗಳನ್ನೂ, ಗುರುನಾನಕರ ಕರುಣೆ ಮರೆತ ಅವರ ಶಿಷ್ಯರನ್ನೂ, ಏಸುವಿನ ಹಿಂಬಾಲಕರಾಗಿದ್ದೂ ದ್ವೇಷ ಹರಡುವವರನ್ನು, ಕೃಷ್ಣನ ಭಕ್ತರೆನ್ನುತ್ತಲೇ ಮುಗ್ಧರ ಪ್ರಾಣ ಬಲಿಪಡೆಯುವವರನ್ನು ...  ಎಲ್ಲರನ್ನೂ ಒಳಗೊಳ್ಳಬೇಕು.

ಆಗಷ್ಟೇ ಪ್ರತಿ ಅಂಗುಲಿಮಾಲನಲ್ಲೂ ಗುಪ್ತವಾಗಿ ಪ್ರವಹಿಸುವ ಬುದ್ದರು ಪ್ರಕಟಗೊಳ್ಳಲು ಸಾಧ್ಯ.

ಬುಧವಾರ, ಡಿಸೆಂಬರ್ 13, 2017

ಪ್ರತೀ ರಾಜಕುಮಾರಿಯ ಬದುಕೂ ಬೆಳಗಲಿ.

ಹಾಡು, ಹಸೆ, ರಂಗೋಲಿ, ಓದು , ಮನೆ ಮುಂದಿನ ಗಾರ್ಡನ್, ಬಾಲ್ಕನಿಯ ಮೂಲೆಯಲ್ಲಿನ ಗುಬ್ಬಚ್ಚಿ ಗೂಡು, ಮೋಡದ ಮರೆಯ ಸೂರ್ಯ ಇವೆಷ್ಟೇ ಪ್ರಪಂಚ ಅಂದುಕೊಂಡಿದ್ದ ಅವಳ ಬದುಕು ನಾಳೆ ಬೆಳಗಾಗುವ ಹೊತ್ತಿಗೆ ಬದಲಾಗಲಿದೆ. ಹಗಲುಗನಸು, ಹುಸಿಮುನಿಸು, ಕೀಟಲೆ, ಅಧಿಕಪ್ರಸಂಗಿತನ ಇಷ್ಟಕ್ಕೇ ಸೀಮಿತವಾಗಿದ್ದ ಅವಳ ಜಗತ್ತು ನಾಳೆ ಆಗುವಷ್ಟರಲ್ಲಿ ಬದಲಾಗಲಿದೆ.  ಕನ್ನಡಿಯ ಮುಂದೆ ನಿಂತಿರುವವಳ ಕಣ್ಣುಗಳಲ್ಲೀಗ ನೂರು ಕನಸು, ರೆಪ್ಪೆಗಳೊಳಗೆ ಸುಳ್ಳೇ ಸುಳ್ಳು ಆತಂಕ. ಇಡೀ ರಾತ್ರಿ ಸುರಿದ ಮಳೆಗೆ ಹಸನಾದ ಒದ್ದೆ ಮಣ್ಣಿನ ಕಂಪು ಅವಳನ್ನೊಮ್ಮೆ ಬಳಸಿ ಅಲ್ಲೇ ಅಂತರ್ಧಾನವಾಯಿತು. ನಾಳೆ ಹಸೆಯೇರುವವಳ ಮುಂದೀಗ ನೆನಪುಗಳ ರಾಶಿ.

ಮನೆ ಪಕ್ಕದ ಚಿಲ್ಟೆ ಪಲ್ಟೆಗಳನ್ನೆಲ್ಲಾ ಸೇರಿಸಿ ಕಾಡಿಗೆ ಅಣಬೆ ಹೆಕ್ಕಲು ಹೋದದ್ದು, ಒಂದಿಡೀ ದಿನವನ್ನು ನದಿ ತೀರದಲ್ಲಿ ನವಿಲುಗರಿ ಹುಡುಕುತ್ತಾ ಕಳೆದದ್ದು, ಹರಿವ ತೊರೆಯ ಮುಂದೆ ಹೊಂಬಣ್ಣದ ಮೀನಿಗಾಗಿ ಗಂಟೆಗಟ್ಟಲೆ ಕಾದು ಕೂತದ್ದು, ಮಣ ಭಾರದ ಕಿರೀಟ, ಸುತ್ತಿದಷ್ಟೂ ಮುಗಿಯದ ಸೀರೆ ಉಟ್ಟುಕೊಂಡು ಶಾಲೆಯ ವೇದಿಕೆಯಲ್ಲಿ ರಾಣಿ ಅಬ್ಬಕ್ಕನಾಗಿ ಅಬ್ಬರಿಸಿದ್ದು, ಉದ್ದ ಲಂಗಕ್ಕಾಗಿ ಅಪ್ಪನ ಜೊತೆ ಜಗಳ ಮಾಡಿದ್ದು,  ಮಂಡಿ ಮೇಲಾದ ತರಚು ಗಾಯವನ್ನು ಅಮ್ಮನಿಂದ ಮುಚ್ಚಿಡಲು ಪಟ್ಟ ಪರಿಪಾಡಲು... ಎಲ್ಲಾ ನಿನ್ನೆ ಮೊನ್ನೆ ನಡೆದದ್ದೇನೋ ಅನ್ನುವಷ್ಟು ಹಸಿರಾಗಿರುವಾಗಲೇ ಅವಳ ಮುಂದೆ ಈಗ ರಾಜಕುಮಾರನೊಬ್ಬ ಬಿಳಿ ಕುದುರೆ ಏರಿ ಬರುವ ಕನಸು, ಅಥವಾ ಬರಲೇಬೇಕಾದ ಅನಿವಾರ್ಯತೆ.

ಶಾಲೆ, ಕಾಲೇಜು, ಓದು, ಬದುಕಿನ ಅನಿವಾರ್ಯತೆಗಳು, ಅಗತ್ಯದ ಹೊಂದಾಣಿಕೆ, ಅಥವಾ ಇನ್ಯಾವುದೇ ಚೆಂದದ ಹೆಸರಿಟ್ಟರೂ ಒಂದು ದಿನ ಎಲ್ಲರೂ ತಮ್ಮಲ್ಲಿನ ಮುಗ್ಧತೆಯನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಹಾಡಿ, ಕುಣಿದು, ನಲಿದ ದಿನಗಳು ಬರಿ ನೆನಪಾಗಿಯೇ ಉಳಿದುಬಿಡುತ್ತವೆ. ಬಹುಶಃ ದೊಡ್ಡವರಾಗುವ, ಬದುಕುವ ಪ್ರಕ್ರಿಯೆಗೆ ನಾವು ತೆರಬೇಕಾಗಿರುವ ಬಹುದೊಡ್ಡ ಬೆಲೆ ಮುಗ್ಧತೆಯನ್ನು ಕಳೆದುಕೊಳ್ಳುವುದೇ ಆಗಿದೆ.

ಮನೆ, ಸುತ್ತಲಿನ ಪ್ರಕೃತಿ, ಅದರ ಚೈತನ್ಯ, ಅದು ಉಕ್ಕಿಸುವ ಹುಮ್ಮಸ್ಸು ಒಂದು ರೀತಿಯಲ್ಲಿ ಪ್ರತಿಯೊಬ್ಬರ ಬದುಕಲ್ಲೂ ಪ್ರಭಾವ ಬೀರಿದಂತೆ, ಹಾಸ್ಟೆಲ್, ಪಿ.ಜಿ ಗಳು ಮತ್ತೊಂದು ರೀತಿಯ ಪ್ರಭಾವ ಉಳಿಸಿಬಿಡುತ್ತದೆ. ಅದರಲ್ಲೂ ಹುಡುಗಿಯರ ಹಾಸ್ಟೆಲ್, ಪಿ.ಜಿಗಳೆಂದರೆ ಅದೊಂದು ಕಲರ್ಫುಲ್ ಲೋಕ.

ರಾಶಿ ರಾಶಿ ಗೊಂದಲಗಳು, ಸಣ್ಣ ಮಟ್ಟಿಗಿನ ಅಸೂಯೆ, ತಣ್ಣಗೆ ಹೊಗೆಯಾಡುವ ಮತ್ಸರ, ಗೋಡೆಗಳಿಗೂ ಗೊತ್ತಾಗದಂತೆ ಹುಟ್ಟಿಕೊಳ್ಳುವ ಗಾಸಿಪ್ ಗಳು, ಅದು ಸರಿಯಿಲ್ಲ, ಇದು ಸರಿಯಾಗಿಲ್ಲ ಎಂದೆಲ್ಲಾ ಗೊಣಗುವ ಮನಸ್ಸುಗಳು, ಮೂರ್ಹೊತ್ತೂ ಕನ್ನಡಿಗೆ ಅಂಟಿಕೊಂಡಿರುವ ಜೀವಗಳು, ಆಗಾಗ ಕಣ್ಣಕೊಳವ ಕದಡುವ ಕಾಡಿಗೆ, ಕಣ್ಣು ಒಂದಿಷ್ಟು ದೊಡ್ಡದಾಗಿದ್ದಿದ್ದರೆ, ಮೂಗು ತುಸು ನೀಳವಾಗಿದ್ದಿದ್ದರೆ, ಸ್ವಲ್ಪ ಬೆಳ್ಳಗಿದ್ದಿದ್ದರೆ... ಗಳಂತಹ 'ರೆ' ಸಾಮ್ರಾಜ್ಯದ ಹಳಹಳಿಕೆಗಳು, ಇವೆಲ್ಲದರ ನಡುವೆ 'ಮೊದಲಿನಂತೆ ಸ್ವಚ್ಛಂದವಾಗಿ ಇರಲಾಗುತ್ತಿಲ್ಲ, ನಾನು ಇನ್ಯಾರದೋ ಬದುಕನ್ನು ಬದುಕುತ್ತಿದ್ದೇನೆ' ಅನ್ನುವ ಕೊರಗು ಅವಳ ಮನಸ್ಸನ್ನು ಒಡೆದ ಕನ್ನಡಿಯಾಗಿಸುತ್ತದೆ; ಮುಟ್ಟಿದಲ್ಲೆಲ್ಲಾ ಸೂಕ್ಷ್ಮ ಗೀರುಗಳು.

ಕಾಣದ ನೋವು, ಹತಾಶೆಗಳನ್ನು ಪಿ.ಜಿಯ ಹೊಸ್ತಿಲೊಳಗೆ ಹೂತಿಡಬೇಕಾದ ಅಸಹಾಯಕತೆಯ ಮಧ್ಯೆಯೇ ಒಂದು ದಿನ ಅಪ್ಪನೋ, ಅಮ್ಮನೋ ಕರೆ ಮಾಡಿ ನಾಳೆ ವರಪರೀಕ್ಷೆಗೆ ರೆಡಿಯಾಗು ಅನ್ನುತ್ತಾರೆ. ಅವಳೂ ತನ್ನ ಹೊಯ್ದಾಟಗಳನ್ನೆಲ್ಲಾ ಮುಚ್ಚಿಟ್ಟು, ಸೀರೆ ಉಟ್ಟು, ಮಲ್ಲಿಗೆ ಮುಡಿದು ರೆಡಿಯಾಗುತ್ತಾಳೆ. ಹುಡುಗ ಒಪ್ಪಿ, ಅವಳಿಗೂ ಇಷ್ಟವಾದರೆ ಭಾವನದಿಯ ಹರಿವು ಸರಾಗ. ಒಪ್ಪದಿದ್ದರೆ ಮತ್ತೊಂದು ಪರೀಕ್ಷೆವರೆಗೂ ಅದೇ ಹೊಯ್ದಾಟ. ಕೆಲವೊಮ್ಮೆ ಯಾರದೋ ಒತ್ತಾಯಕ್ಕೆ ಕಟ್ಟುಬಿದ್ದು ಇಷ್ಟವಿಲ್ಲದ ಹುಡುಗನ‌ ಕೈ ಹಿಡಿಯಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗುತ್ತದೆ. ಆಗಲೇ ಅವಳ ಮನದ ಕನ್ನಡಿಯ ಗೀರು ಸ್ಪಷ್ಟವಾಗುವುದು, ಅವಳೆದೆಯ ನದಿ ಸದ್ದಿಲ್ಲದೆ ಬತ್ತಿ ಹೋಗುವುದು.

ಎಲ್ಲಾ ನೋವುಗಳ ಮೀರಿ ಜಗತ್ತನ್ನು ಚೆಂದಗಾಣಿಸುತ್ತೇನೆಂದು ಹೊರಡುವ ಪ್ರತಿ ಹೆಣ್ಣುಮಗಳ ಮನಸ್ಸೂ ಮದುವೆಯ ಹೊಸ್ತಿಲಲ್ಲೊಮ್ಮೆ ಗೊಂದಲಕ್ಕೆ ಬಿದ್ದು ಬಿಡುತ್ತದೆ. ಅದು 'ಅಡುಗೆ ಬರಲ್ಲ' ಅನ್ನುವಲ್ಲಿಂದ ಹಿಡಿದು, 'ಪರಿಚಯವಿರದವರ ಮಧ್ಯ ಹೇಗಪ್ಪಾ ಬದುಕಲಿ?' ಅನ್ನುವವರೆಗಿನ ಹಿಂಜರಿಕೆ. 'ಮನೆಯವರನ್ನೆಲ್ಲಾ ಬಿಟ್ಟು ಹೇಗಿರಲಿ?' ಎಂಬಲ್ಲಿಂದ 'ಎಲ್ಲಿ, ಏನು ಮಾತಾಡಿದರೆ ತಪ್ಪಾಗಿಬಿಡುತ್ತೋ' ಎಂಬಲ್ಲಿವರೆಗಿನ ಕಳವಳ. 'ಹವ್ಯಾಸಗಳನ್ನೆಲ್ಲಾ ಬಿಡಬೇಕಾಗುತ್ತದೇನೋ?' ಅಂತನ್ನುವಲ್ಲಿಂದ 'ಅಡುಗೆ ಮನೆಗಷ್ಟೇ ಸೀಮಿತವಾಗಿಬಿಡುತ್ತೇನೇನೋ?' ಅಂತನ್ನುವವರೆಗಿನ ದಿಗಿಲು. ಸರ್ವ ಆತಂಕ, ಹಿಂಜರಿಕೆ, ದಿಗಿಲು, ಕಳವಳಗಳ ಮೀರಿ, ಎಲ್ಲಾ ಬಂಧಗಳನ್ನು ತೊರೆದು, ಎಲ್ಲಾ ನೆನಪುಗಳನ್ನು ಕಟ್ಟಿಹಾಕಿ ಮತ್ತೊಂದು ಮನೆ ಬೆಳಗ  ಹೊರಡುವ ಪ್ರತಿ ಮನೆಯ ರಾಜಕುಮಾರಿಯ ಬದುಕೂ ಬೆಳಗಲಿ.

ಮಂಗಳವಾರ, ಡಿಸೆಂಬರ್ 12, 2017

ಕತ್ತಲಿದ್ದರೇ ಬೆಳಕಿಗೆ ಅಸ್ತಿತ್ವ; ಬೆಳಕಿದ್ದರೆ ಮಾತ್ರ ಕತ್ತಲೆಗೆ ತೂಕ

ಕತ್ತಲಿನ ಗರ್ಭದಿಂದಲೇ ಬೆಳಕಿನ ಹುಟ್ಟು, ಬೆಳಕಿನ ಗರ್ಭಕುಸುಮದಿಂದಲೇ ಕತ್ತಲಿನ ಉಗಮ. ಅವೆರಡೂ ವಿರುದ್ಧ ಪದಗಳಲ್ಲ. ಒಂದೇ ಸ್ಥಿತಿಯ ಒಂದಕ್ಕೊಂದು ಪೂರಕವಾದ ಎರಡು ಧ್ರುವಗಳು. ಕತ್ತಲು ಅಜ್ಞಾನ, ಬೆಳಕು ಜ್ಞಾನ ಅನ್ನುವುದೆಲ್ಲಾ ಮನುಷ್ಯನ ಅಲ್ಪ ತಿಳುವಳಿಕೆಗಳಷ್ಟೇ. ಅವನ ಅರಿವು, ತಿಳುವಳಿಕೆ ಗಾಢವಾದಷ್ಟು, ಆಳವಾದಷ್ಟು ಅವನು ಕತ್ತಲಲ್ಲಿ ಬೆಳಕನ್ನೂ, ಬೆಳಕಲ್ಲಿ ಕತ್ತಲನ್ನೂ ಕಾಣಬಲ್ಲ. ಇಷ್ಟಕ್ಕೂ 'ಕಾಣ್ಕೆ' ಅನ್ನುವುದೇ ಅಂತರಂಗದ ಅರಿವಲ್ಲವೇ?

'ತಮಸೋಮ ಜ್ಯೋತಿರ್ಗಮಯ' ಅನ್ನುವುದನ್ನು ಶಿಶು ವಿಹಾರದಲ್ಲೇ ಕೇಳುತ್ತಾ ಬೆಳೆದವರು ನಾವು. ಅಷ್ಟೇಕೆ? 'ಕರುಣಾಳು ಬಾ ಬೆಳಕೇ ಮುಸುಕಿದೀ ಮಬ್ಬಿನಲಿ...' ಅನ್ನುವ ಹಾಡನ್ನು ಕೇಳದ, ಹಾಡದ ಕನ್ನಡದ ಮನಸ್ಸುಗಳೇ ಇಲ್ಲವೇನೋ? ಬೆಳಕೆಂದರೆ ನಮಗೆ ಅಷ್ಟು ಸಂಭ್ರಮ, ಅದು ಭವ್ಯತೆಯ ಸಂಕೇತ. ನಮ್ಮ ಪಾಲಿಗದು ಎಲ್ಲವನ್ನೂ ಒಳಗೊಳ್ಳುವ ಜಗದ ಮೂಲ ಸೆಲೆ.

ಬೆಳಕಿಲ್ಲದಿದ್ದರೆ ಪ್ರಕೃತಿಯ ರಮಣೀಯತೆ, ರೌದ್ರತೆ, ವಿಹಂಗಮತೆ, ಸೌಂದರ್ಯ, ಹಸಿರು ಯಾವುದೂ ಯಾರ ಅರಿವಿಗೂ ನಿಲುಕುತ್ತಿರಲಿಲ್ಲ. ಗುಡಿಸಲಿನ ಸೂರನು ಹೊದೆಯ ಬೆಳಕು, ಅರಮನೆಯ ಛಾವಣಿಯನ್ನೂ ಹೊದೆಸುತ್ತದೆ. ಮಗುವ ತೂಗುವ ತೊಟ್ಟಿಲು, ಅಜ್ಜನ ಕೋಲು, ಅಜ್ಜಿಯ ಸುಕ್ಕುಗಟ್ಟಿದ ಮುಖ, ಪೇಪರ್ ಮಾರುವ ಹುಡುಗನ ಹಣೆ, ಪಾತ್ರೆ ತಿಕ್ಕುವ ಹುಡುಗಿಯ ಕೈಬಳೆ, ತರಕಾರಿ ಗಾಡಿಯವನ ಸಂತೃಪ್ತ ಕಣ್ಣು... ಹೀಗೆ ಬೆಳಕು ಆವರಿಸಿಕೊಳ್ಳದ, ತನ್ನನು ಆವಾಹಿಸಿಕೊಳ್ಳದ ಪ್ರದೇಶವೇ ಇಲ್ಲವೇನೋ?

ಹಾಗಿದ್ದರೆ ಬೆಳಕೆಂದರೆ ಇಷ್ಟೇನಾ? ಊಹೂಂ, ಅಲ್ಲ. ಕತ್ತಲಿನ ಗರ್ಭಪಾತ್ರೆಯಿಂದ ಹೊರಳುವ ಬೆಳಕು ಒಂದು ಮಗ್ಗುಲಾಗುವಷ್ಟರಲ್ಲಿ ಜಗವಿಡೀ ವ್ಯಾಪಿಸಿ, ಎಲ್ಲವನ್ನೂ ಬೆತ್ತಲಾಗಿಸುವುದೇ ಒಂದು ಚೆಂದ. ಬಹುಶಃ ಆ ಸೌಂದರ್ಯವನ್ನು ಪ್ರಪಂಚದ ಯಾವ ಭಾಷೆಯೂ ವಿವರಿಸಲಾರದೇನೋ. ಅಥವಾ ಯಾವ ಭಾಷೆಗೂ ಆ ಸೌಂದರ್ಯವನ್ನು ದಕ್ಕಿಸಿ, ವಿವರಿಸುವಷ್ಟು ಸಾಮರ್ಥ್ಯ ಇಲ್ಲವೇನೋ?

ನೀವೇ ಹೇಳಿ, ಹಂಚಿನ ಸಂದಿಯಿಂದ ಇಳಿದು ನೆಲವ ತಬ್ಬುವ ಬಿಸಿಲ ಕೋಲಿನ ಸೌಂದರ್ಯವನ್ನಾಗಲೀ, ಪಾರಿಜಾತ ದಳದ ಮೇಲಿನ ಹನಿಯಲಿ ಪ್ರತಿಫಲಿಸುವ ಬೆಳಕಿನ ಅನನ್ಯತೆಯನ್ನಾಗಲೀ, ಚಂದಿರನ ಶೀತಲತೆಯನ್ನಾಗಲೀ , ಅದು ಇದ್ದಂತೆಯೇ ಇಡಿ ಇಡಿಯಾಗಿ ವಿವರಿಸುವ ಭಾಷೆಯೊಂದಾದರೂ ಈ ಜಗದಲ್ಲಿರಬಹುದೇ;  ಮೌನವನ್ನು ಹೊರತುಪಡಿಸಿ?

ಅದಕ್ಕೇ, ಬೆಳಕೆಂದರೆ ಅದು ಧ್ಯಾನಸ್ಥ ಮನದ ಮೂಲೆಯಲ್ಲಿ ಚಕ್ಕಳ-ಮಕ್ಕಳ ಹಾಕಿ ಕುಳಿತುಕೊಂಡಿರುವ ಮೌನವೇನೋ ಅಂತ ಆಗಾಗ ನನಗನ್ನಿಸುತ್ತಿರುತ್ತದೆ. ಹಾಗಿದ್ದರೆ ಕತ್ತಲು? ಅದು ಶಬ್ದವೇ? ನಿಶಬ್ದವೇ? ಅಜ್ಞಾನವೇ? ಸಾವೇ?

ಅಲ್ಲ, ಕತ್ತಲೆಂಬುವುದು ಹುಟ್ಟಿನ ಗರ್ಭಕೋಶ, ಹಲವು ನಿಜದ ಕಥೆಗಳ ಭ್ರೂಣ.

ಕೆಲವೊಮ್ಮೆ ಕತ್ತಲೆಂದರೆ ಏಕಾಂತ. ಅದು ಬುದ್ಧನ ಧ್ಯಾನದಷ್ಟೇ ಗಾಢ... ಪ್ರಪಂಚದ ಪ್ರತಿಯೊಂದು ಚರಾಚರಗಳೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದೇ ಕತ್ತಲೆಂಬ ಅನನ್ಯತೆಯ ಮೂಲಕ.

ಇನ್ನೂ ಕೆಲವೊಮ್ಮೆ ಕತ್ತಲೆಂದರೆ ಕರುಣೆ ಕೂಡ. ಎಲ್ಲಾ ಸತ್ಯಗಳನ್ನೂ ಬಿಡುಬೀಸಾಗಿ ಬಿಚ್ಚಿಡುವ ಬೆಳಕಿನ ಕ್ರೌರ್ಯಕ್ಕಿಂತ, ಸುಳ್ಳೇ ಆದರೂ, ಭ್ರಮೆಯೇ ಆದರೂ ಕಟುಸತ್ಯಗಳನ್ನು ಕಣ್ಣಿಂದ ದೂರವಿರಿಸುವ ಕತ್ತಲಿನ ಭ್ರಾಮಕ ಸಹನೂಭೂತಿಯೇ ಆಪ್ತವಾಗುತ್ತದೆ.
ಮತ್ತೂ ಕೆಲವೊಮ್ಮೆ ಕತ್ತಲೆಂದರೆ ಪ್ರೀತಿಯ ದರ್ಶಕ. ಪ್ರೀತಿಯ ಚರಮ ಸೀಮೆಗಳ ಸ್ಪರ್ಶ ಸಾಧ್ಯವಾಗೋದು ಕತ್ತಲಲ್ಲಿ ಮಾತ್ರ ಅಥವಾ ಸಾಧ್ಯವಾಗಿಸುವುದು ಕತ್ತಲು ಮಾತ್ರ. ಇನ್ನೊಂದಿಷ್ಟು ಸಮಯಗಳಲ್ಲಿ ಕತ್ತಲೆಂದರೆ ಒಂದು ಹನಿ ಮೋಹ. ಕತ್ತಿನ ಸೆರೆಯಲ್ಲೆಲ್ಲೋ ಸಾಂದ್ರವಾಗಿ ಇನ್ನೇನು ಹರಿಯಬೇಕು ಅನ್ನುವಷ್ಟರಲ್ಲಿ ಮತ್ತಿನ್ನೊಂದಿಷ್ಟು ಹೊತ್ತು ಇದ್ದುಬಿಡಬೇಕು ಅನ್ನುವ ಆಸೆ ಹುಟ್ಟಿಸುವ ಬಿಂಕ. ಮತ್ತೂ ಕೆಲವೊಮ್ಮೆ ಕತ್ತಲೆಂದರೆ ಯಾವ ಅಕ್ಷರಗಳಿಗೂ, ಪದಗಳಿಗೂ, ವ್ಯಾಖ್ಯೆಗಳಿಗೂ ನಿಲುಕದ ಅನಂತತೆ. ಇನ್ನೂ ಕೆಲವೊಮ್ಮೆ ಕತ್ತಲೆಂದರೆ ಅಪಧಮನಿ ಅಭಿದಮನಿಗಳ ಅಸ್ಪಷ್ಟ ತಿರುವುಗಳಲ್ಲಿ ಚಿಗೊರೊಡೆದ ಕನಸುಗಳು ಬಲಿತು ದೇಹವಿಡೀ ಹಬ್ಬುವ ವಿಹಂಗಮ ಸಮಯ.

ಕತ್ತಲನ್ನುವುದೇ ಪರಿಪೂರ್ಣತೆ. ಗಣಿತದ ' ಇನ್ಫಿನಿಟಿ' ಅನ್ನುವ ಪರಿಕಲ್ಪನೆ ಇದೆಯಲ್ಲಾ ಅದರಷ್ಟೇ ಅಗಾಧ. ಎಷ್ಟು ಕಳೆದರೂ, ಎಷ್ಟು ಕೂಡಿದರೂ ವ್ಯತ್ಯಾಸವೇನೂ ಆಗದು. ಅಲ್ಲಿ ಕೂಡುವ, ಕಳೆಯುವ ಲೆಕ್ಕಾಚಾರಗಳೆಲ್ಲವೂ ವ್ಯರ್ಥ; ಕತ್ತಲಿದ್ದರೇ ಬೆಳಕಿಗೆ ಅಸ್ತಿತ್ವ, ಬೆಳಕಿದ್ದರೆ ಮಾತ್ರ ಕತ್ತಲೆಗೆ ತೂಕ ಅನ್ನುವ ಅರಿವನ್ನು ಹೊರತುಪಡಿಸಿ.

ಭಾನುವಾರ, ಡಿಸೆಂಬರ್ 10, 2017

ಬಾ ಕುಳಿತುಕೋ

ಸಖೀಗೀತದ ಸಖಿಯರಿಗೆಲ್ಲಾ
ದೀರ್ಘ ರಜೆ

ಬಾ ಕುಳಿತುಕೋ
ಹಾಸು ಸಿದ್ಧವಾಗಿದೆ
ಒಂದು ಪಗಡೆಯಾಡೋಣ

ಇರು, ಅವಸರ ಬೇಡ
ಇಷ್ಟಿಷ್ಟೇ ಬೆಳಗುವ
ಹಣತೆಗೆ ಎಣ್ಣೆ ಹೊಯ್ಯುತ್ತೇನೆ

ದಣಿದ ಹಣೆಯ ಬೆವರನು
ಬೆರಳ ತುದಿಯಿಂದ ಕೊಡೆಯುವ
ಸುಖವ ಕಲಿಸಬೇಕಿದೆ ನಿನಗೆ

ತಂಗಾಳಿ ಸೋಕಿ ಹಗುರಾದ
ಸಂಪಿಗೆಯ ಮೆಲ್ಲುಸಿರ ಕೇಳು.
ಏನು ಕೇಳಿಸದೆ?
ಉಸಿರಿಗೆ ಉಸಿರ ದಾಟಿಸು ಒಮ್ಮೆ

ಚೆದುರಿದ ಹುಬ್ಬುಗಳ ತೀಡಬೇಕಿಲ್ಲ
ಪಾದಗಳ ಹೊಸೆದು ತನುವ ತಾಕಿ
ಹೊತ್ತು ಹರಿಯುವವರೆಗೆ ಹೀಗೆ
ಕುಳಿತಿರು ಸಾಕು.

ಶನಿವಾರ, ಡಿಸೆಂಬರ್ 9, 2017

'ಓದುಗ ದೊರೆ'ಗೆ ಮೋಸ ಮಾಡಿದ ಬರಹ ಮಾಂತ್ರಿಕ.

ಅದು 2003. ನಾನಿನ್ನೂ ಆಗ ಹೈಸ್ಕೂಲ್ ಹುಡುಗಿ. ಬದುಕಿನ ಅಂಗಳದೊಳಕ್ಕೆ 'ಹರೆಯ' ಕಳ್ಳ ಹೆಜ್ಜೆಯಿಟ್ಟು ಪ್ರವೇಶಿಸುತ್ತಿತ್ತಷ್ಟೆ. ಕಪ್ಪು ಬಿಳುಪು ಕನಸುಗಳಿಗೆಲ್ಲಾ ಹರೆಯದ ರಂಗು. ಎಳೆ ಬಿಸಿಲು, ಅರಳುತ್ತಿರುವ ಪಾರಿಜಾತ, ಜಾಜಿ ಮಲ್ಲಿಗೆ, ಇಬ್ಬನಿ, ಹೊಂಬಣ್ಣದ ಧೂಳು, ಬಾಗಿ ನಿಂತ ಪೈರು, ಹಸುವಿನ ಗೊರಸು ಹೀಗೆ ಎಲ್ಲದರಲ್ಲೂ ಕಾವ್ಯ ಕಾಣಿಸುತ್ತಿತ್ತು.

ಇಂತಹ ಕಂಬಳಿ ಹುಳ ಚಿಟ್ಟೆಯಾಗಿ ರೂಪಾಂತರವಾಗುವ ಸಮಯದಲ್ಲಿ ನನಗೆ ಸಿಕ್ಕಿದ್ದು ' ಓ ಮನಸೇ' ಪಾಕ್ಷಿಕ, ಅದರ ಜೊತೆಜೊತೆಗೆ 'ರವಿ ಬೆಳಗೆರೆ' ಎಂಬ ಅಕ್ಷರ ಮಾಂತ್ರಿಕ. ಆ ಪುಸ್ತಕದ ಪ್ರತಿ ಅಕ್ಷರಗಳೂ ಕಂಠಪಾಠ ಆಗುವಷ್ಟು ಬಾರಿ ಅದನ್ನು ಓದುತ್ತಿದ್ದೆ. ಪ್ರತಿ ಬಾರಿ ಓದಿದಾಗಲೂ ಅದೆಷ್ಟು ಚೆನ್ನಾಗಿ ಬರೆಯುತ್ತಾರಲ್ಲಾ ಎಂಬ ಬೆರಗಿಗೆ ಬಿದ್ದು ಬಿಡುತ್ತದೆ. ಅದೇ ಸಮಯದಲ್ಲಿ 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟವಾಗುತ್ತಿದ್ದ ಅವರ 'ಸೂರ್ಯ ಶಿಕಾರಿ' ಅಂಕಣ ಓದಬೇಕೆಂದು ಸೂರ್ಯ ಹುಟ್ಟುವ ಮೊದಲೇ ಎದ್ದು ಕೂರುತ್ತಿದ್ದೆ.

ಹೀಗೆ ರವಿ ಬೆಳಗೆರೆಯೆಂಬ ಅದ್ಭುತ ಶೈಲಿಯ ‌ಬರಹಗಾರನ ಪ್ರತಿ ಅಕ್ಷರಗಳು ನನ್ನೊಳಗೆ ಇಳಿಯುತ್ತಿದ್ದಾಗ ನನ್ನ ಪುಸ್ತಕ ಪ್ರಪಂಚವನ್ನು ಹೊಕ್ಕ ಪುಸ್ತಕವೇ 'ಹೇಳಿ ಹೋಗು ಕಾರಣ'. ಅದುವರೆಗೆ ಕನ್ನಡದ ಕೆಲವು 'ಕ್ಲಾಸಿಕ್' ಪುಸ್ತಕಗಳನ್ನಷ್ಟೇ ಓದಿದ್ದ ನನ್ನ ಮುಂದೆ ಮತ್ತೊಂದು ಪ್ರಪಂಚವೇ ತೆರೆದುಕೊಂಡಂತಾಗಿತ್ತು.

ಅದೆಷ್ಟು ಚೆನ್ನಾಗಿ ಸಂಬಂಧಗಳ ಬಗ್ಗೆ, ಪ್ರೀತಿಯ ಬಗ್ಗೆ ಬರೆಯುತ್ತಾರಲ್ಲಾ ಅಂತ ಅಂದುಕೊಳ್ಳುವಾಗ ಮತ್ತೆ ನನ್ನ ಪುಸ್ತಕ ಸಂಗ್ರಹಕ್ಕೆ ಸೇರಿದ್ದು 'ಮಾಂಡೋವಿ'. ಹರೆಯದಲ್ಲಿ ಪ್ರೀತಿಸಿದ ಹುಡುಗಿಯನ್ನು ಜೀವನದ ಸಂಧ್ಯಾಕಾಲದಲ್ಲಿ ಸಂಗಾತಿಯಾಗಿ ಪಡೆದುಕೊಂಡ ಅದ್ಭುತ ಪ್ರೇಮದ ಬಗೆಗಿನ ಅತ್ಯದ್ಭುತ ಪುಸ್ತಕವದು. ಅವರೇ ಮುನ್ನುಡಿಯಲ್ಲಿ ಅಂದಂತೆ ಕೈ ಇಟ್ಟಲ್ಲೆಲ್ಲಾ ಪ್ರೇಮದ ಹುಡಿ ಅಂಟಿಕೊಳ್ಳುತ್ತಿತ್ತು.

'ನೀ ಹಿಂಗ ನೋಡಬೇಡ ನನ್ನ' 'ಅಮ್ಮ ಸಿಕ್ಕಿದ್ಳು', 'ಬಾಟಂ ಐಟಂ', 'ಖಾಸ್ ಬಾತ್' ಹೀಗೆ ಬೆಳಗೆರೆ ಎಂಬ ಹೆಸರು ಹೊತ್ತು ಬರುತ್ತಿದ್ದ ಎಲ್ಲಾ ಪುಸ್ತಕಗಳನ್ನು ಜಿದ್ದಿಗೆ ಬಿದ್ದಂತೆ ಓದತೊಡಗಿದೆ. ಈ ನಡುವೆ ಬದುಕು ಮಾಗಿತು, ಕಳ್ಳ ಹೆಜ್ಜೆಯಿಟ್ಟು ಬರುತ್ತಿದ್ದ ಹರೆಯ ನನ್ನ ಸಂಪೂರ್ಣ ಆವರಿಸಿಕೊಂಡಿತು. ಹೈಸ್ಕೂಲ್ ನಿಂದ ಡಿಗ್ರಿಯವರೆಗಿನ ಪಯಣದಲ್ಲಿ ನಿರಂತರವಾಗಿ ನನ್ನ ಜೊತೆಗಿದ್ದ ಬೆಳಗೆರೆ ಪುಸ್ತಕಗಳು ಯಾಕೋ ಹೇಳಿದ್ದನ್ನೇ ಹೇಳುತ್ತಿವೆ ಅನಿಸತೊಡಗಿತು. ಅದಾಗ್ಯೂ ಗುರುಗಳು, ಕೆಲ ಸ್ನೇಹಿತರು ಅವರ ವೈಯಕ್ತಿಕ ಬದುಕಿನ ಅಪಸವ್ಯಗಳ ಬಗ್ಗೆ ಮಾತಾಡುವಾಗೆಲ್ಲಾ ನಾನು 'ಅದು ಅವರ ವೈಯಕ್ತಿಕ ಬದುಕು, ನನಗೂ ಅವರ ಖಾಸಗಿ ಜೀವನಕ್ಕೂ ಯಾವ ಸಂಬಂಧವೂ ಇಲ್ಲ, ನನ್ನೇದೇನಿದ್ದರೂ ಪುಸ್ತಕ ಪ್ರೀತಿ' ಅಂತ ಬಲವಾಗಿಯೇ ವಾದ ಮಂಡಿಸುತ್ತಿದ್ದೆ.

ಆದರೆ ಆ ಹೊತ್ತಿಗಾಗುವಾಗಾಗಲೇ ಕ್ಲಾಸಿಕ್ ಕೃತಿಗಳ ಮತ್ತು ಜನಪ್ರಿಯ ಪುಸ್ತಕಗಳ ನಡುವಿನ ವ್ಯತ್ಯಾಸ ತುಂಬಾ ಸ್ಪಷ್ಟವಾಗಿ ಅರ್ಥವಾಗಿತ್ತು. ಗಟ್ಟಿ ಚಿಂತನೆ, ಅಧ್ಯಯನ ಶೀಲತೆ, ಆಳದ ಜ್ಞಾನ ಇವ್ಯಾವುದೂ ಬೆಳಗೆರೆ ಬರಹಕ್ಕೆ ದಕ್ಕಿಸಿಕೊಳ್ಳಲಾಗದು ಅನ್ನುವ ಸತ್ಯ ಅರ್ಥವಾಗಿತ್ತು. ಹರೆಯದ ಭಾವೋದ್ವೇಗ, ಮಾಟ-ಮಂತ್ರ, ಸರ್ಪಸಂಬಂಧಗಳ ರೋಚಕತೆ, ಪ್ರೇಮಿಯ ನೋವು, ಸಂಬಂಧಗಳನ್ನು ಕಳೆದುಕೊಂಡಾಗಿನ ಸಂಕಟ, ಅವಾಸ್ತವ ಆಪ್ತತೆ, ಹಸಿ ಹಸಿ ಕ್ರೌರ್ಯ.... ಇದಾರಾಚೆಗೆ ಬೆಳಗೆರೆ ಬರಹಗಳು ಒಂದು ದೊಡ್ಡ ಶೂನ್ಯವಷ್ಟೇ ಅಂತ ಅನಿಸತೊಡಗಿತು. ಅಲ್ಲಿಗೆ ಬೆಳಗೆರೆ ಪುಸ್ತಕಗಳನ್ನು ಓದುವುದನ್ನೇ ನಿಲ್ಲಿಸಿಬಿಟ್ಟೆ. ಇಷ್ಟಾಗಿಯೂ ಅವರ ಅಂಕಣಗಳನ್ನು (ಕೊಂಡು ಓದದ್ದಿದರೂ) ಓದುವ ಹವ್ಯಾಸ ನಿಂತಿರಲಿಲ್ಲ. ಆದರೆ ಯಾವಾಗ ಆತ್ಮರತಿ ಮಿತಿ ಮೀರಿತೋ ಆಗಲೇ ಅವರ ಅಂಕಣಳನ್ನು ಓದುವುದನ್ನೂ ನಿಲ್ಲಿಸಿಬಿಟ್ಟೆ.

ಈಗ್ಗೆ ಕೆಲವು ಸಮಯಗಳಿಂದ ಅವರ ಯಾವ ಬರಹವನ್ನೂ ಓದಿಲ್ಲ, ಓದಬೇಕೆಂದು ಅನಿಸಿಯೂ ಇಲ್ಲ. ಆದರೆ ಒಂದಿಷ್ಟು ವರ್ಷಗಳ ಕಾಲ ನನ್ನನ್ನು ಅವರ ಬರಹಗಳು ಎಂಗೇಜ್ ಆಗಿಸಿದ್ದವು. (ಸೂಕ್ಷ್ಮವಾಗಿ ಗಮನಿಸಿದರೆ, ನನ್ನ ಬರಹಗಳಲ್ಲೂ ಅವರ ಶೈಲಿಯ ಪ್ರಭಾವ ಕಾಣುತ್ತದೆ.) ಈಗ ತಿರುಗಿ ನೋಡಿದರೆ, ಭಾಷೆಯ ಬಳಕೆಯಲ್ಲಿ ಅವರಿಗಿದ್ದ ನೈಪುಣ್ಯತೆಯನ್ನು ಹೊರತುಪಡಿಸಿ ಇನ್ಯಾವ ವಿಚಾರವೂ ಕಾಡುವುದಿಲ್ಲ.

ಲಂಕೇಶರು ಕನ್ನಡದ ಮಣ್ಣಲ್ಲಿ ಬಿತ್ತಿ ಹೋದ 'ಟ್ಯಾಬ್ಲಾಯ್ಡ್' ಸಂಸ್ಕೃತಿಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಬಲ್ಲ ಎಲ್ಲಾ ಛಾತಿ ಹಾಗೂ ಅವಕಾಶವಿದ್ದ ಬೆಳಗೆರೆಯವರು ಅತಿರೇಕದ, ಅತಿರಂಜನೀಯತೆಯ, ಅತಿ ಭಾವುಕತೆಯ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡು, ಟ್ಯಾಬ್ಲಾಯ್ಡ್ ಗಳೆಂದರೆ ವಿಕ್ಷಿಪ್ತತೆಯ ಅನಾವರಣವಷ್ಟೇ ಅನ್ನುವ ಅರ್ಥಕ್ಕೆ ಸೀಮಿತಗೊಳಿಸಿದರು.

ಇವತ್ತು ಆ ಸೀಮಿತತೆಯೇ ಅವರನ್ನು ನಿಲ್ಲಬಾರದ ಜಾಗದಲ್ಲಿ ನಿಲ್ಲಿಸಿದೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು. ಅವರದೇ ಮಾತಿನಲ್ಲಿ ಹೇಳುವುದಾದರೆ 'ಎಸಗಿದ ತಪ್ಪುಗಳಿಗೆಲ್ಲಾ ಬದುಕು ಕಡ್ಡಾಯವಾಗಿ ಕಂದಾಯ ಕಟ್ಟಿಸಿಕೊಳ್ಳುತ್ತದೆ'.

ಶುಕ್ರವಾರ, ನವೆಂಬರ್ 17, 2017

ನಾಕುತಂತಿಯ ತುಡಿತ

ಹೀಗೆ ಕಿಟಕಿ ಸರಳಿಗೆ
ಹಬ್ಬಿದ ಮಾತ್ರಕೆ
ನೀನೇನು ಪರಮಪ್ರಿಯೆ
ಆಗಿಬಿಡುವುದಿಲ್ಲ

ಹೇ ಜಾಜಿ ತಾಳು,
ಇಲ್ಲಿ ಸ್ವಲ್ಪ ಕೇಳಿಸಿಕೋ
ವಿರಹುದುರಿಯಲಿ ಕನಲುವಾಗಷ್ಟೆ
ನಿನ್ನ ನೆನಪೆನಗೆ

ಅದರಾಚೆ ಅವನ ಬೆವರ
ಘಮವೇ ಹಿತ
ತಣ್ಣನೆಯ ಇರುಳ ಕೊರೆವ ಚಳಿಯಲಿ
ನಿನ್ನ ಎಂದಾದರೂ ಬಯಸಿದ್ದಿದೆಯೇ?

ನೋಡು, ಇಳಿಯ ಬಿಟ್ಟಿರುವ ಪರದೆಯ
ಹಿಂದೀಗ ಸರ್ವ ಸ್ವತಂತ್ರೆ ನಾನು
ಚಂದ್ರ ತಾರೆಯರೂ ನನ್ನ
ಏಕಾಂತವ ಭಗ್ನಗೊಳಿಸಲಾರರು

ಮತ್ತೆ ಕಿಟಕಿಯೊಳಗೆ ಹೊರಳಬೇಡ ಜಾಜಿ
ಬಿಚ್ಚಿಟ್ಟ ಕಾಲ್ಗೆಜ್ಜೆಯ ನೂಪುರದೊಳಗೀಗ
ನಾಕುತಂತಿಯ ತುಡಿತ
ಉಶ್! ಸದ್ದು ಬೇಡ

ಯಾವ ಗಾಳಿಗೆ ಯಾವ ಗಂಧವೋ
ಒಲವಿಂದ ಶೃತಿಗೊಂಡ ವೀಣೆಗೀಗ
ನದಿಯೊಂದು ಕಡಲ ಸೇರಿದಂತೆ
ನಿಶಬ್ಧದಲಿ ಲೀನವಾಗಬೇಕಿದೆ

ಅಷ್ಟೆ.

ಮಂಗಳವಾರ, ನವೆಂಬರ್ 14, 2017

ದೊಡ್ಡವರೇ, ಒಂದಿಷ್ಟು ಯೋಚಿಸಿ

'ಮಕ್ಕಳಾಟವು ಚಂದ
ಮತ್ತೆ ಯೌವನ ಚಂದ
ಮುಪ್ಪಿನಲಿ ಚಂದ ನರೆಗಡ್ಡ
ಜಗದೊಳಗೆ ಎತ್ತ ನೋಡಿದರೂ ನಗು ಚಂದ'
ಅನ್ನುವ ಜನಪದ ಹಾಡು ತೀರಾ ಸರಳವಾಗಿ ಮತ್ತು ಸುಲಭಗ್ರಾಹ್ಯವಾಗಿ ಯಾವ ಯಾವ ಕಾಲದಲ್ಲಿ ಯಾವುದು ಚಂದ ಎನ್ನುವುದನ್ನು ಹೇಳುತ್ತದೆ. ಎಲ್ಲಾ ಚಂದಗಳ ಮಧ್ಯೆ ಮತ್ತೆ ಮತ್ತೆ ಕಾಡುವುದು ಬಾಲ್ಯ. ಸರಿರಾತ್ರಿ ಎಬ್ಬಿಸಿ ಸಮೀಕ್ಷೆ ನಡೆಸಿದರೂ ಬಹುಶಃ ಬಾಲ್ಯ ಮತ್ತೆ ಬೇಕು ಅನ್ನದವರು ಸಿಗಲಾರರೇನೋ? ಅಷ್ಟರ ಮಟ್ಟಿಗೆ ನಾವು ಬಾಲ್ಯವನ್ನು ಪ್ರೀತಿಸುತ್ತೇವೆ.

ಜಗತ್ತಿನ ಆಗು ಹೋಗುಗಳು, ಮೋಸ, ಅನ್ಯಾಯ, ವಂಚನೆ, ಬೂಟಾಟಿಕೆ...ಇವ್ಯಾವುವೂ ಅರಿಯದ ವಯಸ್ಸದು. ಆಟ, ತಿರುಗಾಟ, ಚೇಷ್ಟೆ, ಜೊತೆಗೊಂದಿಷ್ಟು ಬದುಕಿನ ಪಾಠ... ಎಷ್ಟು ಚೆನ್ನಾಗಿತ್ತು ಆ ಬದುಕು.

ನಮ್ಮ ಬಾಲ್ಯದಲ್ಲಿ ಮನೆಯಷ್ಟೇ ಆಪ್ತ ವಾತಾವರಣ ಸಿಗುತ್ತಿದ್ದುದು ಶಾಲೆಯಲ್ಲಿ. ಈಗಿನಂತೆ ಮಣ ಭಾರದ ಬ್ಯಾಗ್, ಮಾಡಿದಷ್ಟೂ ಮುಗಿಯದ ಹೋಂವರ್ಕ್, ವರ್ಷಪೂರ್ತಿ ಮಾಡಬೇಕಾಗಿರುವ ಪ್ರೊಜೆಕ್ಟ್ ಇವ್ಯಾವುದರ ಕಾಟವೂ ಇರಲಿಲ್ಲ. ಇದ್ದ ಒಂದೇ ಯುನಿಫಾರ್ಮ್ ಅನ್ನು ಅಂದಂದೇ ಒಗೆದು ವಾರ ಪೂರ್ತಿ ಬಳಸುವ ಜಾಣ್ಮೆ, ಮಾವಿನ ಮರದಡಿ ಕೂತು ಉಣ್ಣುತ್ತಿದ್ದ ಮಧ್ಯಾಹ್ನದ ಬುತ್ತಿಯೂಟ, ಹಳೆಯ ನೋಟ್ ಪುಸ್ತಕಗಳಲ್ಲಿ ಉಳಿದ ಹಾಳೆಗಳನ್ನು ಹರಿದು ಮಾಡುತ್ತಿದ್ದ ರಫ್ ಪುಸ್ತಕ, ಊರಿನ ಎಲ್ಲಾ ಮಕ್ಕಳು ಗುಂಪಾಗಿ ಮೈಲಿಗಟ್ಟಲೆ ನಡೆದು ಶಾಲೆ ಸೇರುತ್ತಿದ್ದುದು, ಶಾಲೆಯ ಆಶೋಕ ಮರ, ಆಳ ಬಾವಿ, ವಿಶಾಲವಾದ ಆಟದ ಮೈದಾನ ಮುಂತಾದವುಗಳನ್ನು, ಅವು ನಮ್ಮ ಇಡೀ ಬದುಕನ್ನು ಹೇಗೆ ಪ್ರೇರಿಪಿಸಿದೆ ಎಂಬುವುದನ್ನು ವಿವರಿಸುತ್ತಾ ಕೂತರೆ ಈವತ್ತಿನ ಕಾನ್ವೆಂಟ್ ಕಂದಮ್ಮಗಳಿಗೆ ಏನೂ ಅರ್ಥವಾಗದು.

ಇನ್ನು ಶಾಲೆಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳ ಕಥೆಗಳು ವರ್ಣಿಸಲಸದಳ. ಒಂದರ್ಥದಲ್ಲಿ ನಮ್ಮ ಇಡೀ ಶಾಲಾ ಜೀವನಕ್ಕೆ ಸಂಭ್ರಮದ ಬಣ್ಣ ತುಂಬಿದ್ದೇ ಆ ಹಬ್ಬಗಳು. ಅದರಲ್ಲೂ ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತಿದ್ದ 'ಮಕ್ಕಳ ದಿನಾಚರಣೆ'ಯಂತೂ ನಮ್ಮ ಪಾಲಿಗೆ ರಾಜ ಹಬ್ಬ.

ಅದು, 'ಕಾಂಗ್ರೆಸ್'ನ ನೆಹರೂ, 'ನಾಸ್ತಿಕ' ಭಗತ್ ಸಿಂಗ್, 'ಹಿಂದೂ' ತಿಲಕ್, 'ಮುಸ್ಲಿಂ' ಮೌಲಾನಾ ಆಜಾದ್, 'ಕ್ರಿಶ್ಚಿಯನ್' ಅನಿಬೆಸೆಂಟ್, 'ಉತ್ತರ'ದ ರಾಣಿ ಲಕ್ಷ್ಮೀಬಾಯಿ, 'ದಕ್ಷಿಣ'ದ ರಾಣಿ ಚೆನ್ನಮ್ಮ... ಇವೆಲ್ಲಾ ಅರಿವಿದ್ದ ವಯಸ್ಸಲ್ಲ, ಅಥವಾ ಆ ಹೊತ್ತಿನ ಪಠ್ಯ ಪುಸ್ತಕಗಳು ಎಳೆ ಮನಸ್ಸುಗಳ ತುಂಬಾ ಇಂತಹ ವಿಷ ತುಂಬುತ್ತಿರಲಿಲ್ಲವೇನೋ? ಆವತ್ತು ನಮ್ಮ ಪಾಲಿಗೆ ಅವರೆಲ್ಲಾ ಈ ದೇಶಕ್ಕಾಗಿ ದುಡಿದ ಮಹಾಪುರುಷರಷ್ಟೇ.

ಭಾಷಣ, ಹಾಡುಗಾರಿಕೆ, ಆಟೋಟಗಳು, ಪ್ರಬಂಧ ರಚನೆ, ಚಿತ್ರ ರಚನೆ ಮುಂತಾದ ಅನೇಕ ಸ್ಪರ್ಧೆಗಳಿದ್ದರೂ ನಮಗೆ ಹೆಚ್ಚು ಆಕರ್ಷಣೀಯ ಅನಿಸುತ್ತಿದ್ದುದು ಛದ್ಮವೇಷ ಸ್ಪರ್ಧೆ. ಮೇಷ್ಟ್ರ ನೆಹರೂ ವರ್ಣನೆಯಲ್ಲಿ, ಪಾಠ ಪುಸ್ತಕದಲ್ಲಿ, ಅಥವಾ ಬಾಲಮಂಗಳದಲ್ಲಿ ಪ್ರಕಟವಾಗುತ್ತಿದ್ದ ಕಥೆಗಳಲ್ಲಿ ನೆಹರೂ ಬಗ್ಗೆ ಓದಿ, ಕೇಳಿ ತಿಳಿದಿದ್ದ ನಮಗೆ ಅವರ ಬಗೆಗೊಂದು ಸ್ಪಷ್ಟ ಇಮೇಜ್ ಮನಸ್ಸಿನಲ್ಲಿ ರೂಪುಗೊಂಡಿತ್ತು. ಅದೇ ಇಮೇಜ್ ಛದ್ಮವೇಷವಾಗಿ ವೇದಿಕೆ ಮೇಲೂ ಬರುತ್ತಿತ್ತು.

ಅವರು ಧರಿಸುತ್ತಿದ್ದಂತಹುದೇ ನಿಲುವಂಗಿ, ಕಿಸೆಯಲ್ಲೊಂದು ಗುಲಾಬಿ ಹೂವು (ಗುಲಾಬಿ ಸಿಗದಿದ್ದರೆ ಕೆಂಪು ದಾಸವಾಳವೂ ನಡೆಯುತ್ತಿತ್ತು.) , ಗಣಿತದ ನೋಟ್ ಪುಸ್ತಕದ ಮಧ್ಯದ ಹಾಳೆ ಹರಿದು ಮಾಡುತ್ತಿದ್ದ ಟೋಪಿ ಧರಿಸಿಬಿಟ್ಟರೆ ನಮ್ಮ ನೆಹರೂ ಗೆಟಪ್ ಸುಸಂಪನ್ನ. ನಮ್ಮ ಬುದ್ಧಿವಂತಿಕೆಯ, ಅರಿವಿನ ಮಟ್ಟಕ್ಕಂತೂ ಆವತ್ತು ನಾವೇ ನೆಹರೂ, ನಾವೇ ಚಾಚಾ. ಆಮೇಲೆ ನಿಧಾನವಾಗಿ ನಡೆದುಕೊಂಡು ಸ್ಟೇಜ್ ಮೇಲೆ ಬಂದು ಸಭೆಯತ್ತ ಒಮ್ಮೆ ಕೈ ಬೀಸಿದರೆ ಯಾವುದೋ ಅರಿಯದ ಹೆಮ್ಮೆಯ ಭಾವವೊಂದು ಮೈಮನಸ್ಸಿನ ಪೂರ್ತಿ ತುಂಬಿಕೊಂಡು ಬಿಡುತ್ತಿತ್ತು. ಅಪ್ಪಿ ತಪ್ಪಿ ಛದ್ಮವೇಷಕ್ಕೆ ಬಹುಮಾನ ಬಂದರೆ ಅದರ ಗತ್ತೇ ಬೇರೆ.

ಆದರೆ ಈ ಎಲ್ಲಾ ನಾಸ್ಟಾಲ್ಜಿಕ್ ಹಳಹಳಿಕೆ ಮಧ್ಯೆಯೂ ನಾವು ನಮ್ಮಷ್ಟೇ ಚೆಂದದ ಅಥವಾ ಅದಕ್ಕಿಂತಲೂ ಉತ್ತಮವಾದ ಬಾಲ್ಯವನ್ನು ನಮ್ಮ ಮಕ್ಕಳಿಗೆ ಒದಗಿಸಿದ್ದೇವೆಯೇ? ಮಕ್ಕಳ ಆಟವನ್ನು ಕಣ್ತುಂಬಿಕೊಳ್ಳುತ್ತಾ ಅವರೊಂದಿಗೆ ನಾವೂ ಮಕ್ಕಳಾಗುತ್ತೇವಾ? ಅಸಲಿಗೆ ಓದು, ಟ್ಯೂಷನ್, ಮತ್ಯಾವುದೋ ಕ್ಲಾಸ್ ಗಳ ಮೂಲಕ ಮಕ್ಕಳನ್ನು 'ಸೂಪರ್‌ ಕಿಡ್' ಮಾಡಿಬಿಡುವ ಭರದಲ್ಲಿ, ಭ್ರಮೆಯಲ್ಲಿ ವರಿಗೆ ಆಟ ಆಡಲು ಸಮಯವನ್ನಾದರೂ ಕೊಟ್ಟಿದ್ದೇವಾ? ಮಕ್ಕಳಿಗೆ ಅಂತ ದಿನದ ಒಂದಿಷ್ಟು ನಿಮಿಷಗಳನ್ನು ಎತ್ತಿಟ್ಟಿದ್ದೇವಾ? ಟಿ.ವಿ, ನ್ಯೂಸ್, ಕ್ರಿಕೆಟ್, ಧಾರವಾಹಿ, ಕೆಲಸ, ಅನಗತ್ಯದ ಸೈದ್ದಾಂತಿಕ ಚರ್ಚೆ ಇವರಲ್ಲವುಗಳ ಮಧ್ಯೆ ಮಕ್ಕಳ ಇರುವು ನಮ್ಮ ಗಮನಕ್ಕೂ ಬಾರದಂತೆ ಕಳೆದುಹೋಗುತ್ತಿದೆಯಾ?ಒಮ್ಮೆ ತಣ್ಣಗೆ ಕೂತು ಯೋಚಿಸಿ. ನಾಳೆ ಆತ್ಮಸಾಕ್ಷಿಯ ಮುಂದೆ ಮಂಡಿಯೂರುವಂತಾಗಬಾರದು ಅಂದರೆ ನಾವಿವತ್ತು ಎಚ್ಚೆತ್ತುಕೊಳ್ಳಬೇಕು, ನಮ್ಮನ್ನೇ ತಿದ್ದಿಕೊಳ್ಳಬೇಕು.

ಇವತ್ತು ಮಕ್ಕಳ ದಿನಾಚರಣೆ ಆಚರಿಸಿಕೊಳ್ಳುವ ಎಲ್ಲಾ ಮುದ್ದು ಮಕ್ಕಳಿಗೂ, ಮಗು ಮನಸ್ಸಿನ ದೊಡ್ಡವರಿಗೂ ಮಕ್ಕಳ ದಿನಾಚರಣೆಯ ಶುಭಾಶಯ.

ಸೋಮವಾರ, ನವೆಂಬರ್ 13, 2017

ಕವಿ ಶೈಲ

ಇಳಿ ಸಂಜೆಯ ಸೂರ್ಯ ನಿಚ್ಛಳವಾಗಿ ನಗುತ್ತಿದ್ದ. ಬಾಲ್ಕನಿಯ ಹೊಸ್ತಿಲ ಮೇಲೆ ಬಿದ್ದ ಬಿಸಿಲು ಕೋಲು ಸುಮ್ಮನೆ ಹೊಯ್ದಾಡುತ್ತಿತ್ತು. ಮೊಬೈಲ್ ಎತ್ತಿಕೊಂಡು ಬಾಲ್ಕನಿಗೆ ಬಂದ ಸಮೀರ, ತನ್ನ ಭಾವೀ ಪತಿ ಸಾದಿಕ್ ಜೊತೆ ಮಾತಾಡುತ್ತಾ, "ಸಂಜೆ ಮುಗಿಲಿನ ಭಾವ ಕಿರಣಗಳಲ್ಲಿ ಮೀಯುತ್ತಿದ್ದೇನೆ. ನೀವೀಗ ಜೊತೆಗಿರಬೇಕಿತ್ತು" ಅಂದಳು. ಅವನು "ಈ ಕವಿತೆ-ಗಿವಿತೆಗಳೆಲ್ಲಾ ನನಗೆ ಅರ್ಥ ಆಗುವುದಿಲ್ಲ, ಅರ್ಥ ಮಾಡಿಕೊಳ್ಳುವ ಆಸಕ್ತಿಯೂ ಇಲ್ಲ. ಅವೆಲ್ಲಾ ನಿನಗೇ ಇರಲಿ" ಅಂದ. ಅವನ ಧ್ವನಿಯಲ್ಲಿದ್ದ ಶುದ್ಧ ಪ್ರಾಕ್ಟಿಕಾಲಿಟಿಗೆ ಅವಳ ನವಿರು ಭಾವಗಳು ಒಮ್ಮೆ ಅಲ್ಲಾಡಿಬಿಟ್ಟವು.

ಹಾಗೆ ನೋಡುವುದಾದರೆ ಇದೇನೂ ಮೊದಲಲ್ಲ. ಎಂಗೇಜ್ಮೆಂಟ್ ದಿನಾನೇ ಓದಿನ ಬಗೆಗಿನ ಅವನ ಅನಾಸಕ್ತಿ ಅವಳಿಗೆ ತಿಳಿದುಬಿಟ್ಟಿತ್ತು. ತಾನು ಇಷ್ಟೊಂದು ಪ್ರೀತಿಸುವ ಸಾಹಿತ್ಯವನ್ನು ಅವನು ಬೋರಿಂಗ್ ಅಂದಾಗ ಅವಳು ಧರೆಗಿಳಿದುಬಿಟ್ಟಿದ್ದಳು. ಆದರೆ ಅಪ್ಪ ನೋಡಿದ ಸಂಬಂಧ ಒಲ್ಲೆ ಎನ್ನಲಾಗದೆ ಒಪ್ಪಿಕೊಂಡಿದ್ದಳು. ಅಂದಿನಿಂದಲೂ ಪುಸ್ತಕ ಪ್ರೀತಿಯೆಡೆಗೆ ಅವನನ್ನು ಸೆಳೆಯುವ ಅವಳ ಪ್ರಯತ್ನ ಜಾರಿಯಲ್ಲೇ ಇತ್ತು.

ಆದರೆ ಈಗೀಗ ಒಪ್ಪಿ ತಪ್ಪು ಮಾಡಿದೆನೇನೋ ಅಂತೆಲ್ಲಾ ಬಲವಾಗಿ ಅನ್ನಿಸಲಾರಂಭಿಸಿತ್ತು. ಓದದ ವ್ಯಕ್ತಿಯ ಜೊತೆ ಜೀವನ ಪೂರ್ತಿ ಹೇಗೆ ಏಗಲಿ ಅಂತ ಯೋಚಿಸುತ್ತಿದ್ದಳು. ಅದನ್ನೇ ನಿನ್ನೆ ಅಪ್ಪನ ಬಳಿಯೂ ಹೇಳಿದ್ದಳು. ಅಪ್ಪ ಅವಳ ತಲೆ ನೇವರಿಸುತ್ತಾ "ಓದದವನೂ ಚೆನ್ನಾಗಿ ಬದುಕುತ್ತಾನೆ ಮಗೂ. ಅದಕ್ಕಿಂತ ಹೆಚ್ಚಾಗಿ ನನ್ನ ಮಗಳಿಗೆ ಚಂದದ ಒಂದು ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾನೆ ಅನ್ನುವ ವಿಶ್ವಾಸ ನನ್ನದು. ಇಷ್ಟಕ್ಕೂ ಅವನೇನೂ ನಿನ್ನಿಷ್ಟಗಳಿಗೆ ಅಡ್ಡಿಯಾಗಿಲ್ಲ. ಅವನದು ಪ್ರಾಕ್ಟಿಕಲ್ ಬದುಕು ಅಷ್ಟೆ. ಆದರೆ ನಿನಗೆ ಈ ಸಂಬಂಧ ಇಷ್ಟವಿಲ್ಲದಿದ್ದರೆ ಬೇಡ, ಬಿಟ್ಟುಬಿಡೋಣ. ನಿನ್ನ ಸಂಪೂರ್ಣ ಒಪ್ಪಿಗೆಯಿಲ್ಲದೆ ನಾವು ಮುಂದುವರಿಯುವುದಿಲ್ಲ. ಇವತ್ತಿನವರೆಗೂ ನಿನ್ನೆಲ್ಲಾ ನಿರ್ಧಾರಗಳನ್ನು ಗೌರವಿಸಿದ ಹಾಗೆಯೇ ಈ ನಿರ್ಧಾರವನ್ನೂ ಒಪ್ಪಿಕೊಂಡು ಗೌರವಿಸುತ್ತೇನೆ. ಆದರೆ ಆತುರ ಬೇಡ. ಸಾವಧಾನದಿಂದ ಯೋಚಿಸು. ಬೇಕಿದ್ದರೆ ಒಮ್ಮೆ ಹೊರಗೆಲ್ಲಾದರೂ ಹೋಗಿ ಬಾ" ಅಂದಿದ್ದರು.

ಅಪ್ಪನ ಮಾತನ್ನು ಒಪ್ಪಿಕೊಳ್ಳಲೂ ಆಗದೆ, ಪೂರ್ತಿ ತಿರಸ್ಕರಿಸಲೂ ಆಗದೆ ತುಮುಲವೊಂದು ಅವಳೊಳಗೆ ಮಗ್ಗುಲು ಬದಲಾಯಿಸುತ್ತಿತ್ತು. ಈಗಷ್ಟೇ ಕರೆ ಮಾಡಿದ ಅವನು ಕವಿತೆಯ ಬಗೆಗಿನ ತನ್ನ ನಿರಾಸಕ್ತಿಯನ್ನು ವ್ಯಕ್ತಪಡಿಸಿದಾಗ ಮತ್ತೆ ಯೋಚನೆಗೆ ಬಿದ್ದಳು.

ಸಂಜೆ ಸತ್ತು ಆಗಲೇ ಕತ್ತಲೆ ಹುಟ್ಟಿಕೊಳ್ಳಲಾರಂಭಿಸಿತ್ತು. ಯೋಚನೆಗಳಲ್ಲಿ ಮೈಮರೆತವಳನ್ನು ಒಮ್ಮೆ ಬೀಪ್ ಆಗಿ ಸುಮ್ಮನಾದ ಮೊಬೈಲ್ ಎಚ್ಚರಿಸಿತು. ನೋಟಿಫಿಕೇಷನ್,  ಫೇಸ್ಬುಕ್ ಗೆಳೆಯನ ಮೆಸೇಜ್ ತೋರಿಸುತ್ತಿತ್ತು. ಸಮೀರ ಅವನ ಮೆಸೇಜ್ ಅನ್ನು ನಿರ್ಲಕ್ಷಿಸಿ ಗಲ್ಲಕ್ಕೆ ಕೈ ಹೊತ್ತು ಮತ್ತೆ ಯೋಚನೆಗಳಲ್ಲಿ ಮುಳುಗಿ ಹೋದಳು. ಮತ್ತೆ ಮೊಬೈಲೆ ಬೀಪ್ ಆಯ್ತು, ತೆರೆದು ನೋಡಿದರೆ ಅದೇ ಫೇಸ್ಬುಕ್ ಗೆಳೆಯ ರಫಿಯ ಮೆಸೇಜ್.

"ಯಾಕೆ ಗೆಳತಿ ಈ ಮೌನ? ಅದೆಷ್ಟು ಅಕ್ಷರಗಳು ನಿನ್ನ ಮಾತು ಕೇಳಲು ಕಾದು ಕುಳಿತಿವೆ ನೋಡು" ಅಂತಿತ್ತು. ಅವಳು "ಕತ್ತಲು ಹುಟ್ಟುತ್ತಿದೆ. ಈ ಮೌನ ಹಿತವಾಗಿದೆ. ತನ್ನ ಗಡಿ ದಾಟಿದ ಮೇಲೆ ಮಾತೂ ಮೌನಕ್ಕೆ ಶರಣಾಗಲೇಬೇಕಲ್ಲವೇ?" ಎಂದು ಟೈಪಿಸಿದಳು. ಆ ಕಡೆಯಿಂದ ಅವನು "ಕತ್ತಲೆಗೇಕೆ ಭಯ? ನೀನೇ ಬೆಳಕಿನ ಒಂದು ಪುಟ್ಟ ಕವಿತೆ" ಎಂದು ಮಾರುತ್ತರಿಸಿದ. "ಕತ್ತಲಿಗೆ ಬೆಳಕನುಣ್ಣಿಸುವ ಹುಂಬತನ ನನ್ನಲ್ಲಿಲ್ಲ. ಕತ್ತಲಾದರೂ ಅಷ್ಟೆ, ಬೆಳಕಾದರೂ ಅಷ್ಟೆ, ಅವೆರಡನ್ನೂ ಇರುವಷ್ಟೇ ಸಹಜವಾಗಿ ಸ್ವೀಕರಿಸುತ್ತೇನೆ" ಅಂದಳು. "ನೋಡು ನೀನಿಷ್ಟವಾಗುವುದೇ ಇದಕ್ಕೆ. ಅದೆಷ್ಟು ಚೆನ್ನಾಗಿ ಬರೆಯುತ್ತಿಯಾ! ನಿನ್ನ ಪ್ರತೀ ಅಕ್ಷರಗಳಲ್ಲೂ ನನಗೆ ಉಕ್ಕಿ ಹರಿಯುವ ಜೀವನ ಪ್ರೀತಿ ಕಾಣಿಸುತ್ತದೆ. ನೀ ಹೀಗೆಯೇ ಬರೆಯುತ್ತಿದ್ದರೆ ನಾನು ಜೀವನ ಪೂರ್ತಿ ನಿನ್ನನ್ನೇ ಓದುತ್ತಾ ಕುಳಿತುಬಿಡುತ್ತೇನೆ " ಅಂದ. ಅವಳು "ಹೊಗಳಿಕೆಯ ಹೊನ್ನ ಶೂಲಕ್ಕೆ ಏರಿಸಬೇಡ. ನಾನೀಗಾಗಲೇ ಗೊಂದಲ್ದಲ್ಲಿದ್ದೇನೆ " ಅಂದಳು. "ನಿಶ್ಚಿತಾರ್ಥ ಮುಗಿಸಿಕೊಂಡು ಮದುವೆ ಮುಂದೆ ನೋಡುತ್ತಿರುವ ಹೆಣ್ಣಿಗೇನು ಗೊಂದಲ? ಒಂದು ನಿಡಿದಾದ ಉಸಿರುಬಿಟ್ಟು ಕಣ್ಣು ಮುಚ್ಚಿ ಅವನನ್ನೊಮ್ಮೆ ನೆನೆಸಿಕೋ, ಕಣ್ಣು ತೆರೆಯುವಷ್ಟರಲ್ಲಿ ಒಂದು ಚಂದದ ಪ್ರೇಮ ಕಾವ್ಯ ನಿನ್ನೊಳಗೆ ಮೂಡಿರುತ್ತದೆ" ಅಂದ. ಅವಳು, ನನ್ನ ಎದೆಗುದಿಗಳು ನಿನಗೆ ಅರ್ಥವಾಗದು ಅಂತ ಅಂದುಕೊಳ್ಳುತ್ತಾ "ನಾ ಬರ್ಲಾ?" ಕೇಳಿದಳು. ಅವನು "ಹುಮ್ ಹೋಗು, ಮತ್ತೆ ಬರುವಾಗ ನಿನ್ನ ಅಣು ಅಣುವಿನೊಳಗೂ ಹರಡಿಕೊಂಡಿರುವ ಕವಿತೆಗಳ ಹೆಕ್ಕಿ ತಾ. ನಾನು ಈ ಸಂಪಿಗೆ ಮರದಡಿಯಲ್ಲಿ ಕಾಯುತ್ತಿರುತ್ತೇನೆ" ಅಂದ. ಅವಳೊಂದು ಶುಷ್ಕ ನಗುವಿನ ಇಮೋಜಿ ಕಳುಹಿಸಿ ಸುಮ್ಮನಾದಳು.

ತಿಂಗಳ ಹಿಂದೆಯಷ್ಟೇ ಫೇಸ್‍ಬುಕ್‍ನ ತೇಜಸ್ವಿ ಬರಹಗಳ ಚರ್ಚೆಯೊಂದರಲ್ಲಿ ಸಮೀರಾಳಿಗೆ ರಫಿಯ ಪರಿಚಯವಾಗಿತ್ತು. ಅವನ ಬರವಣಿಗೆಯ ಶೈಲಿ, ಭಾಷಾ ಶುದ್ಧತೆ ಅವಳ ಅಚ್ಚರಿಗೆ ಕಾರಣವಾಗಿದ್ದರೆ, ಅವಳ ನಿರ್ಭಿಡತೆ ಅವನಲ್ಲೊಂದು ಕುತೂಹಲವನ್ನು ಹುಟ್ಟು ಹಾಕಿತ್ತು. ಅಲ್ಲಿಂದಾಚೆ ಇಬ್ಬರೂ ತಮಗರಿಯದೇ ಆತ್ಮೀಯರಾದರು. ಬಹುಶಃ ಈ ಒಂದು ತಿಂಗಳಲ್ಲಿಅವರು ಚರ್ಚಿಸದ ವಿಷಯವೇ ಇಲ್ಲವೇನೋ? ಈಗ ಅವಳ ತೇಜಸ್ವಿ ಅವನಿಗೆ ಮತ್ತು ಅವನ ಲಂಕೇಶ್ ಇವಳಿಗೆ ಪರಮಪ್ರಿಯರಾಗಿದ್ದರು. ಅವನ ಮಾತುಗಳಲ್ಲಿ ಆಗಾಗ ಇಣುಕುತ್ತಿದ್ದ ಅವಳ ಬಗೆಗಿನ ಆಸಕ್ತಿ, ವಿಶೇಷ ಆಸ್ಥೆ, ಅತಿ ಹೊಗಳಿಕೆಗಳು ಅವಳಿಗೆ, ಇವನೇನಾದರೂ ತನ್ನನ್ನು ಪ್ರೀತಿಸುತ್ತಿರಬಹುದೇ ಅಂತ ಅನ್ನಿಸುವಂತೆ ಮಾಡುತ್ತಿತ್ತು. ಅವೆಲ್ಲಕ್ಕೂ ಇಂಬು ಕೊಡುವಂತೆ ಒಂದು ವಾರದ ಹಿಂದೆಯಷ್ಟೇ "ಮದುವೆಯಾಗಬೇಕು, ಕವಿ ಮನಸ್ಸಿನ ಹೆಣ್ಣು ಬೇಕು" ಅಂತ ಸ್ಟೇಟಸ್ ಅಪ್ಡೇಟ್ ಮಾಡಿದ್ದ. ಆ ಬಗ್ಗೆಯೆಲ್ಲಾ ಅವಳು ಯಾವತ್ತೂ ಹೆಚ್ಚು ಯೋಚಿಸಿದವಳೇ ಅಲ್ಲ. ಆದರೆ ಇವತ್ತು ಮಾತ್ರ ’ಅರೆ! ನಾನ್ಯಾಕೆ ರಫಿಯನ್ನೇ ಮದುವೆಯಾಗಬಾರದು?’ ಅನ್ನುವ ಯೋಚನೆಯೊಂದು ಅವಳ ಮನದಲ್ಲಿ ಕ್ಷಣ ಕಾಲ ನಿಂತು ಹೋಯಿತು.

’ಹೌದಲ್ವಾ? ಈ ಬಗ್ಗೆ ನಾನು ಯೋಚಿಸಿರಲೇ ಇಲ್ಲ. ನನಗಿಷ್ಟು ಆತ್ಮೀಯ, ಸಮಾನ ಮನಸ್ಕ, ಮೇಲಾಗಿ ಸಭ್ಯ. ನಾನೇಕೆ ಇವನ ಮುಂದೆ ವಿವಾಹ ಪ್ರಸ್ತಾಪ ಇಡಬಾರದು ಅನ್ನಿಸಿ, "ನಾಳೆ ಕವಿ ಶೈಲಕ್ಕೆ ಹೋಗುತ್ತಿದ್ದೇನೆ. ಒಮ್ಮೆ  ಭೇಟಿಯಾಗೋಣವೇ? ನಿನ್ನೊಂದಿಗೆ ಒಂದಿಷ್ಟು ವಿಷಯಗಳನ್ನು ಚರ್ಚಿಸಬೇಕಿದೆ" ಎಂದು ಸಂದೇಶ ಕಳುಹಿಸಿಸಿದಳು. ಮರುಕ್ಷಣ ಅತ್ತಲಿಂದ " ಆಕಾಶ ದಿಟ್ಟಿಸುತ್ತಾ ಇನ್ನೂ ಬಾರದ ನಿನ್ನ ಕವಿತೆಗಳನ್ನು ಕಾಯುತ್ತಿದ್ದೆ. ಈಗ ನಿನ್ನಿಂದ ಭೇಟಿಯ ಆಫರ್! ದೇವನಿಗೊಂದು ಕೃತಜ್ಞತೆ ಸಲ್ಲಿಸೋಣವೆಂದು ಮೇಲೆ ನೋಡಿದರೆ ಮತ್ಸರದಿಂದ ನಕ್ಷತ್ರಗಳೆಲ್ಲಾ ಮಾಯವಾದವು. ಈಗ ಖಾಲಿ ಆಕಾಶದ ತುಂಬಾ ನಿನ್ನ ಪ್ರತಿಬಿಂಬ. ನಾಳೆ ನೀ ಬರುವ ಮುಂಚೆಯೇ ನಿನಗಾಗಿ ಕಾಯುತ್ತಿರುತ್ತೇನೆ. ನಾನೀಗ ಸಂತೃಪ್ತ" ಎಂದು ಮರುತ್ತರಿಸಿದ. ಯಾವುದೋ ಅರಿಯದ ಭಾವವೊಂದು ಅವಳನ್ನು ಬಳಸಿ ಅಲ್ಲೆ ಅಂತರ್ಧಾನವಾಯಿತು. ದೂರದಲ್ಲೆಲ್ಲೋ ಬಾಗಿ ನಿಂತ ಪೈರೊಂದು ಹಿತಾವಾಗಿ ಭೂಮಿಯನ್ನು ಸ್ಪರ್ಶಿಸಿದಂತಾಯಿತು.

ಆ ರಾತ್ರಿ ಪೂರ್ತಿ ಅವಳ ಕಣ್ಣಿನ ಕಪ್ಪು ಬಿಳುಪಿ ಕನಸುಗಳೆಲ್ಲಾ ಬಣ್ಣ ಪಡೆದುಕೊಂಡಿದ್ದವು. ಚಿತ್ರಕಾರನೊಬ್ಬ ತನ್ನ ಕುಂಚದಿಂದ ಆಕಾಶದ ಪೂರ್ತಿ ಚಿತ್ತಾರ ಬಿಡಿಸುತ್ತಿದ್ದ.

ಮರುದಿನ ಬೇಗ ಎದ್ದು ರೆಡಿಯಾಗಿ, ಎಂದಿಗಿಂತಲೂ ನಾಜೂಕಾಗಿ ಅಲಂಕಾರ ಮುಗಿಸಿ ತನ್ನ ಪ್ರೀತಿಯ ಕೈನಿ ಹತ್ತಿ ಕವಿಶೈಲಕ್ಕೆ ಹೊರಟಳು. ದಾರಿ ಮಧ್ಯೆ ಇಳಿದು ಅವನಿಗಂತಲೇ ಲಂಕೇಶರ ನೀಲು ಕವಿತೆಗಳ ಸಂಗ್ರಹವೊಂದನ್ನು ಕೊಂಡು ಮತ್ತೆ ಲಗುಬಗೆಯಿಂದ ಹೊರಟಳು.




ಕವಿಶೈಲ ತಲುಪುವ ಹೊತ್ತಿಗಾಗುವಾಗಲೇ ರಫಿ, ಅಚ್ಚ ಬಿಳಿ ಗುಲಾಭಿ ಹೂವಿನ ಬೊಕ್ಕೆ ಹಿಡಿದು ಶುಭ್ರವಾಗಿ ನಗುತ್ತಾ ನಿಂತಿದ್ದ. ಹಿಂದೆ ಒಮ್ಮೆಯೂ ಭೇಟಿಯಾಗದ, ತನ್ನದೊಂದು ಪಟವನ್ನೂ ನೋಡಿರದ ನನ್ನನ್ನು ಹೇಗೆ ಕಂಡುಹಿಡಿದ ಎಂದು ಅಚ್ಚರಿಪಡುತ್ತಲೇ ಅವನನ್ನು ಕೇಳಿದಳು. ಅವನು "ಬಿಡು ಗೆಳತೀ, ನೋಡಬೇಕೆಂದಿಲ್ಲ. ನಿನ್ನಿರುವಿಕೆಯೇ ಈ ಗಾಳಿಯಲ್ಲಿ ಕವಿತೆಯ ಘಮವನ್ನು ಹೊತ್ತು ತಂದಿದೆ" ಅಂದ. ಭಾವುಕಳಾದ ಸಮೀರಾ ಸುಮ್ಮನೆ ನಡೆಯತೊಡಗಿದಳು. ಯಾವ ತಲ್ಲಣವು ಯಾವ ರೂಪ ತಾಳುತ್ತದೋ ಅನ್ನುವ ಆತಂಕವೊಂದು ಸುಮ್ಮನೆ ಹೊಯ್ದಾಡುತ್ತಲೇ ಇತ್ತು.

ಮತ್ತೆ ಮೌನ ಮುರಿದ ರಫಿ " ಮಾತಾಡು ಸಮೀರಾ, ನೀ ಹೀಗೆ ಮೌನವಾಗಿದ್ದರೆ ನನಗೇನೂ ತಿಳಿಯುವುದಿಲ್ಲ. ನಿನ್ನ ಮೌನವನ್ನು ತಲುಪುವ ದಾರಿ ನನಗೆ ಗೊತ್ತಿಲ್ಲ" ಅಂದ. ಸಮೀರಾ "ಶ್! ಸುಮ್ಮನಿರು. ನಿನ್ನ ಮಾತು ಮುಗಿದ ಮೇಲೆ ಉಳಿಯುವ ಮೌನವನ್ನು ಹೆಕ್ಕುವ ಕಾಯಕವಷ್ಟೇ ನನ್ನದು. ನನ್ನ ಮಾತಾಡಿಸಬೇಡ" ಎಂದು ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕೂತು ಮಧುರ ಭಾವದಲ್ಲಿ ಕಳೆದು ಹೋದಳು.

ತುಸು ಹೊತ್ತು ಕಳೆದ ಮೇಲೆ ಅವಳು "ಹೇಳು ರಫಿ, ನೀನೇನೋ ಹೇಳುತ್ತಿದ್ದಿಯಲ್ಲಾ?" ಅಂದಳು. ಅವನು " ಊಹೂಂ ಕಣೆ, ಹೀಗೆ ಸುಮ್ಮನಿರಲು ನನ್ನಿಂದ ಸಾಧ್ಯವೇ ಇಲ್ಲ. ನೀನು ಬರೆಯುತ್ತಿರಬೇಕು ಇಲ್ಲ ಮಾತಾಡುತ್ತಿರಬೇಕು. ನಾನಿಡೀ ಬದುಕನ್ನು ನಿನ್ನ ಕವಿತೆಗಳನ್ನು ಕೇಳುತ್ತಲೇ, ಓದುತ್ತಲೇ ಇರಬೇಕು" ಅಂದ.

"ನನ್ನ ಪ್ರೀತಿಸುತ್ತೀಯಾ?" ಅವಳದು ನೇರ ಪ್ರಶ್ನೆ. ಒಂದಿಷ್ಟೂ ಗಲಿಬಿಲಿಗೊಳ್ಳದ ಆತ "ಅಫ್‍ಕೋರ್ಸ್, ಅದರಲ್ಲಿ ಕೇಳೋದೇನಿದೆ? ನಿನ್ನ ಅಕ್ಷರ ಪ್ರೀತಿ, ಹುಚ್ಚುತನ, ಬದುಕನ್ನು ಸ್ವೀಕರಿಸುವ ರೀತಿ ಎಲ್ಲವೂ ನನಗಿಷ್ಟ. ಈ ಜೀವ ಇರುವವರೆಗೂ ನಿನ್ನ ಪ್ರೀತಿಸುತ್ತಲೇ ಇರುತ್ತೇನೆ" ಅಂದ.

ಒಂದು ಕ್ಷಣ ತಡೆದ ಸಮೀರಾ ಮತ್ತೆ ಕೇಳಿದಳು "ನನ್ನ ಮದುವೆಯಾಗುತ್ತೀಯಾ? ಮನೆಯಲ್ಲಿ ಮಾತಾಡಲಾ?". ಅವನ ಮಾತು ನಿಂತಿತು. ಗಂಟಲ ಪಸೆ ಆರಿತೆಂಬಂತೆ ಒಮ್ಮೆ ಕೆಮ್ಮಿ ಗಂಟಲು ಸರಿಪಡಿಸಿಕೊಂಡು ಎತ್ತಲೋ ನೋಡುತ್ತಾ "ಆದರೆ ನೀನೀಗಾಗಲೇ ನಿಶ್ಚಿತಾರ್ಥ ಆಗಿರುವ ಹುಡುಗಿ, ನನ್ನ ಮದುವೆ ಆಗುವುದಾದರೂ ಹೇಗೆ?" ಎಂದು ಕೇಳಿದ. ಅವಳು " ನಾನು ಅಪ್ಪನೊಂದಿಗೆ ಮಾತಾಡಿ ಎಲ್ಲ ಸರಿ ಮಾಡುತ್ತೇನೆ, ಪ್ರಶ್ನೆ ಅದಲ್ಲ. ನೀನು ನನ್ನ ಮದುವೆಯಾಗೋಕೆ ಸಿದ್ಧನಿದ್ದೀಯಾ ಅನ್ನುವುದಷ್ಟೇ ನನಗೆ ಬೇಕಿರುವುದು" ಅಂದಳು. "ವೆಲ್ ಸಮೀರಾ, ನಿನ್ನ ಬರಹ. ಮಾತು, ಕವಿತೆಗಳೆಲ್ಲಾ ನನಗಿಷ್ಟವೇ. ನಿನ್ನನ್ನು ನಾನು ಪ್ರೀತಿಸುತ್ತೇನೆ ಅನ್ನುವುದು ನಿಜವೇ. ಆದರೆ, ಮದುವೆಯ ವಿಷಯಕ್ಕೆ ಬಂದಾಗ, ತನ್ನ ಎಲ್ಲಾ ಹವ್ಯಾಸಗಳಿಗೆ ಪೂರ್ಣ ವಿರಾಮ ಹಾಕಿ ಅಚ್ಚುಕಟ್ಟಾಗಿ ಸಂಸಾರ ನಡೆಸಿಕೊಂಡು ಹೋಗುವವರಿಗಷ್ಟೆ ನನ್ನ ಆದ್ಯತೆ. ಕಥೆ-ಕವಿತೆ ಬರೆಯುತ್ತಾ ಕೂತರೆ ನಾಳೆ ನನ್ನ ಕುಟುಂಬವನ್ನು ನೋಡಿಕೊಳ್ಳುವವರು ಯಾರು?" ಎಂದು ಕೇಳಿದ. ದಿಗ್ಭ್ರಮೆಗೊಳಗಾದ ಸಮೀರ "ಮತ್ತೆ, ಫೇಸ್‍ಬುಕ್‍ನಲ್ಲಿ ಕವಿ ಮನಸ್ಸಿನ ಹುಡುಗಿ ಬೇಕು ಅಂತ ಸ್ಟೇಟಸ್ ಹಾಕಿಕೊಂಡಿದ್ದಿಯಲ್ಲಾ ಅದೇನು?" ಅಂತ ಪ್ರಶ್ನಿಸಿದಳು. ಅವನು "ಸಮೀರಾ, ಇವೆಲ್ಲಾ ನಿನಗೆ ಗೊತ್ತಿಲ್ಲದಿರುವುದೇನಲ್ಲ. ಅದು ಫೇಸ್‍ಬುಕ್ ಆದರ್ಶ ಅಷ್ಟೆ. ಅದನ್ನೆಲ್ಲಾ ಬದುಕಿಗೆ ಅನ್ವಯಿಸುವುದಕ್ಕಾಗುತ್ತಾ? ಮೇಲಾಗಿ ಬರೆದಂತೆ ಬದುಕಬೇಕು ಅನ್ನುವ ನಿಯಮವೇನೂ ಇಲ್ವಲ್ಲಾ?" ಎಂದು ಮರು ಪ್ರಶ್ನಿಸಿದ.

ಬದುಕಿಗೊಂದು, ಫೇಸ್‍ಬುಕ್‍ಗೊಂದು, ಇನ್ನಾವುದೋ ಅಪ್ಲಿಕೇಷನ್‍ಗೆ ಮತ್ತೊಂದು ಅಂತೆಲ್ಲಾ ಆದರ್ಶಗಳಲ್ಲೂ ವೆರೈಟಿಗಳು ಇವೆಯಾ ಎಂಬ ಯೋಚನೆಯೇ ಅವಳ ಹೃದಯದಲ್ಲಿ ವಿಷಣ್ಣತೆಯೊಂದನ್ನು ಹುಟ್ಟು ಹಾಕಿತು. "ಬರೆದಂತೆಯೇ ಬದುಕುತ್ತಾರೆ ಅನ್ನುವ ನನ್ನ ಸುಂದರ ಭ್ರಮೆಯನ್ನು ಒಡೆದು ಹಾಕಿರುವುದಕ್ಕೆ ತ್ಯಾಂಕ್ಸ್ ಹೇಳಬೇಕಾ ಇಲ್ಲ ಹಾಗೆ ಬದುಕಬೇಕಿಲ್ಲ ಅನ್ನುವ ಬದುಕಿನ ಅತಿದೊಡ್ಡ ಪ್ರಾಕ್ಟಿಕಾಲಿಟಿಯನ್ನು ಕಲಿಸಿರುವುದಕ್ಕೆ ತ್ಯಾಂಕ್ಸ್ ಹೇಳಬೇಕಾ ಅನ್ನುವುದು ನನಗರ್ಥವಾಗುತ್ತಿಲ್ಲ ರಫಿ" ಅನ್ನುತ್ತಾ ಅವನ ಹೆಗಲುತಟ್ಟಿ ಕೂತಲ್ಲಿಂದ ಎದ್ದಳು. ಅಷ್ಟರಲ್ಲಿ ಫೋನ್ ರಿಂಗಣಿಸಿತು. ನೋಡಿದರೆ ಸಾದಿಕ್. "ನೀನು ಕವಿ ಶೈಲಕ್ಕೆ ಹೋಗಿದ್ದಿ ಅಂತ ಅಪ್ಪ ಹೇಳಿದ್ರು. ಆ ಜಾಗ ನಿನಗೆಷ್ಟು ಮಹತ್ವಪೂರ್ಣ ಅನ್ನುವುದು ನನಗೊತ್ತು. ಇವತ್ತಿಡೀ ನಾನು ನಿನಗೆ ಕರೆ ಮಾಡುವುದಿಲ್ಲ. ರಿಲಾಕ್ಸ್ ಆಗಿರು, ಖುಶಿ ಆಗಿರು" ಎಂದು ಅವಳ ಉತ್ತರಕ್ಕೂ ಕಾಯದೆ ಫೋನ್ ಇಟ್ಟ.

ಎಂತಹ ಮೂರ್ಖತನದ ಕೆಲಸ ಮಾಡುತ್ತಿದ್ದೆ. ಬರೆಯದವನೂ ಚೆನ್ನಾಗಿಯೇ ಬದುಕುತ್ತಾನೆ ಅನ್ನುವ ಅಪ್ಪನ ಮಾತಿನಲ್ಲಿ ಎಷ್ಟು ಸತ್ಯ ಇದೆ. ಇಂಥದ್ದೊಂದು ಸರಳ ಸಂಗತಿ ನನಗೇಕೆ ಅರ್ಥ ಆಗದೇ ಹೋಯಿತು? ಸಾಹಿತ್ಯದೆಡೆಗಿನ ತನ್ನ ಅನಾಸಕ್ತಿಯನ್ನು ತಿಳಿಸುವಾಗಲೂ ಅವನ ಧ್ವನಿಯಲ್ಲಿದ್ದ ಪ್ರಾಮಾಣಿಕತೆ ನನಗೇಕೆ ತಿಳಿಯದೇ ಹೋಯಿತು? ಅಂತೆಲ್ಲಾ ಯೋಚಿಸುತ್ತಾ ಸಮೀರಾ ಅಪ್ಪನಿಗೆ ಕರೆ ಮಾಡಿ "ಅಪ್ಪಾ, ಕುವೆಂಪಜ್ಜ ನನಗೆ ಸ್ಪಷ್ಟ ದಾರಿಯನ್ನೇ ತೋರಿಸಿದರು. ಈ ಸಂಬಂಧ ನನಗೆ ಸಂಪೂರ್ಣ ಒಪ್ಪಿಗೆ" ಎಂದು ಡಿಸ್‍ಕನೆಕ್ಟ್ ಮಾಡಿ, ಹಾಗೆಯೇ ಗೇಟಿನ ಬಳಿ ನಿಲ್ಲಿಸಿದ್ದ ಕೈನಿ ಹತ್ತಿ "ತ್ಯಾಂಕ್ಸ್ ಫಾರ್ ದಿ ಬ್ಯೂಟಿಫುಲ್ ರೋಸಸ್" ಅನ್ನುತ್ತಾ ರಫಿಯತ್ತ ಕೈ ಬೀಸಿ ಕೈನಿ ಸ್ಟಾರ್ಟ್ ಮಾಡಿದಳು. ವ್ಯಾನಿಟಿ ಬ್ಯಾಗಿನೊಳಗೆ ಭದ್ರವಾಗಿದ್ದ ಲಂಕೇಶರ 'ನೀಲು' ಯಾಕೋ ಒಮ್ಮೆ ನಿರ್ಮಲವಾಗಿ ನಕ್ಕಂತಾಯಿತು.

(ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿತ)


ಶನಿವಾರ, ಜುಲೈ 15, 2017

ಸೋಲು.

ಧೋ ಎಂದು ಸುರಿದ ಮಳೆಗೆ
ಹಸನಾದ ನೆಲದ ಒದ್ದೆಯ
ಕುರಿತು ಬರೆಯುವಾಗೆಲ್ಲಾ
ನಾನು ಸಂಪೂರ್ಣ ಸೋಲುತ್ತೇನೆ

ಹಾಗೆ ಹೇಳುವುದಾದರೆ, ಇದೇನು ಹೊಸತಲ್ಲ
ಸೋಲುವುದು ನನಗೀಗ ಅಭ್ಯಾಸವಾಗಿಬಿಟ್ಟಿದೆ

ಬಣ್ಣ ಬಣ್ಣದ ಗೊಂಬೆ ಮಾರುವ
ಹುಡುಗನ ಕಣ್ಣಿನ ಬಣ್ಣಗೇಡಿ
ಕನಸನ್ನು ಚಿತ್ರಿಸುವಾಗಲೂ
ನಾನು ಸೋತಿದ್ದೇನೆ

ವೃದ್ಧಾಶ್ರಮದ ಗೋಡೆಗೆ ಒರಗಿ ನಿಂತ
ಅಜ್ಜಿಯ ಕಣ್ಣಂಚಲ್ಲಿ ಹರಿದುಹೋದ
ಹನಿಯ ಲೆಕ್ಕವಿಡುವಲ್ಲೂ
ನಾನು ಸೋತಿದ್ದೇನೆ

ಕಲ್ಲು ತೂರುವವರ ಮತ್ತು
ಜೀಪಿಗೆ ಕಟ್ಟಿ ಎಳೆದೊಯ್ಯುವವರ
ಕ್ರೌರ್ಯವನ್ನು ಅಕ್ಷರಕ್ಕಿಳಿಸುವಾಗಲೂ
ಸೋತು ತಡವರಿಸಿದ್ದಿದೆ

ಸಿರಿಯಾ, ಇಥಿಯೋಪಿಯಾ, ಪ್ಯಾಲೆಸ್ತೀನ್,
ಪಕ್ಕದ ಬಾಂಗ್ಲಾ, ಲಂಕೆಯ ತಮಿಳರು
ನಿರಾಶ್ರಿತ ಪಂಡಿತರು, ಸದಾ ದೇಶಭಕ್ತಿಯ
ಸಾಕ್ಷಿ ಒದಗಿಸಲೇಬೇಕಾದ ಮುಹಮ್ಮದನ
ಬಗ್ಗೆ ಬರೆಯುವಾಗಲೂ ನಾನು ಸೋತಿದ್ದೇನೆ

ಇರಲಿ, ಸೋಲೆಂಬುವುದು ಮದ್ಯದಂತೆ
ಮೊದಲು ಒಗರೊಗರಾದರೂ
ಅಭ್ಯಾಸವಾಗಿಬಿಟ್ಟರೆ ಎಂತಹ
ದೇಹಕ್ಕೂ ಒಗ್ಗಿಬಿಡುತ್ತದೆ

ಅಷ್ಟೇಕೆ, ಧರ್ಮಾಗಳಾಚೆಗೆ ಸಾವೊಂದು
ಶೂನ್ಯತೆಯ ಹುಟ್ಟಿಸದ ಈ ಹೊತ್ತಲ್ಲೂ
ರಮ್ಯ ಕವಿತೆಯ ಬರೆಯ ಹೊರಟದ್ದೂ ಒಂದು ಸೋಲೇ
ನಿರ್ಲಜ್ಜ ಮನಸು ಆ ಸೋಲಿಗೂ
ಹೇಗೆ ಒಗ್ಗಿಕೊಂಡಿದೆ ನೋಡಿ

ಗೋಡೆಗಳ ಕೆಡವಿ, ಬರಿ ಮನುಷ್ಯತ್ವವ
ಬಯಲಲಿ ಉಳಿಸುವ ಕನಸೊಂದು
ಇನ್ನೂ ಉಸಿರಾಡುತ್ತಿದೆ
ಅದಾದರೂ ಸೋಲದಿರಲಿ, ಸಾಯದಿರಲಿ.

ಮಂಗಳವಾರ, ಜುಲೈ 11, 2017

ಲಂಕೇಶರ ಸುತ್ತಮುತ್ತ.

"ಎಂಥ ಅಪ್ಪನಿಗೆ ಎಂಥಾ ಮಗ", "ಹುಲಿ ಹೊಟ್ಟೆಯಲ್ಲಿ ನರಿ ಹುಟ್ಟಿದೆ", " ಅಧಿಕಾರದಾಸೆಯ ಮುಂದೆ ಅಪ್ಪನ ಆದರ್ಶಗಳೂ ಲೆಕ್ಕಕ್ಕಿಲ್ಲ"... ಹೀಗೆ ಕಳೆದೆರಡು ದಿನಗಳಿಂದ ಪುಂಖಾನುಪುಂಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಾದದಿಂದಲೋ, ಸಂಕಟದಿಂದಲೋ, ಹೇವರಿಕೆಯಿಂದಲೋ, ಪ್ರೀತಿಯಿಂದಲೋ, ದ್ವೇಷದಿಂದಲೋ, ಅಸಹನೆಯಿಂದಲೋ ಪೋಸ್ಟ್ ಗಳು, ಹೇಳಿಕೆಗಳು ಹರಿದಾಡುತ್ತಿವೆ.

ಯಾವಾಗ ಇಂದ್ರಜಿತ್ ಲಂಕೇಶರು ವೇದಿಕೆಯೊಂದರಲ್ಲಿ ತಾನು ಯಡಿಯೂರಪ್ಪನವತ ಹಿಂಬಾಲಕನಾಗುತ್ತೇನೆ ಅಂದರೋ, ಮಾಧ್ಯಮಗಳಲ್ಲಿ ಯಾವಾಗ ಆ ಸುದ್ದಿ ರೆಕ್ಕೆ-ಪುಕ್ಕಗಳೊಂದಿಗೆ ಪ್ರಸಾರವಾಯಿತೋ, ಆ ಕ್ಷಣದಲ್ಲೇ ಜಾಲತಾಣಗಳಲ್ಲಿ ಸಣ್ಣ ಕಂಪನವೆದ್ದುಬಿಟ್ಟಿತ್ತು. ಇಂದ್ರಜಿತರ ವಿರುದ್ಧವಾಗಿ ಮತ್ತು ಪರವಾಗಿ ಒಂದೆರಡು ಪೋಸ್ಟ್ಗ್ ಗಳು ಬರುತ್ತಿದ್ದಂತೆ ಆ ಸಣ್ಣ ಕಂಪನವೇ ಭೂಕಂಪವೇನೋ ಎಂಬಂತೆ ಬಿಂಬಿಸಲ್ಪಟ್ಟಿತು. ಇವತ್ತಿಗಾಗುವಾಗ ಫೇಸ್ ಬುಕ್, ವಾಟ್ಸಾಪ್ ಅಂತ ಎಲ್ಲಾ ಗೋಡೆಗಳಲ್ಲೂ ಅವರೇ ರಾರಾಜಿಸುತ್ತಿದ್ದಾರೆ.

ಬಹುಶಃ ನಾವು ಭಾರತೀಯರ ಮನಸ್ಥಿತಿಯೇ ಹೀಗೆಯೇ ಏನೋ? ವೈಭವೀಕರಿಸಿ ತಲೆಯ ಮೇಲೆ ಹೊತ್ತುಕೊಂಡು ತಿರುಗಲು ಅಥವಾ ಹಿಗ್ಗಾಮುಗ್ಗ ಬೈದು ನಮ್ಮೊಳಗಿನ ದುರ್ಬಲತೆಯನ್ನು ಮುಚ್ಚಿಟ್ಟುಕೊಳ್ಳಲು ಸದಾ ಒಂದು ಮಾಧ್ಯಮವನ್ನು ಬಯಸುತ್ತಿರುತ್ತೇವೆ. ಅದು ಮೋದಿ, ಟ್ರಂಪ್, ಪುತಿನ್, ಅರ್ನಬ್, ಬರ್ಖಾ ದತ್, ಯಡಿಯೂರಪ್ಪ, ಸಿದ್ಧರಾಮಯ್ಯ, ಇಂದ್ರಜಿತ್ ಅಷ್ಟೇಕೆ ಆಚೆ ಬೀದಿಯ ಮೂವತ್ತೈದರ ವಿಧವೆ... ಯಾರೂ ಆಗಿರಬಹುದು. ನಮ್ಮ ಆಡಿಕೊಳ್ಳುವ ಚಪಲಕ್ಕೊಬ್ಬ ಮನುಷ್ಯ ಬೇಕಷ್ಟೆ.

ಇಷ್ಟಕ್ಕೂ ಇಂದ್ರಜಿತರೇನು ಮಾಡಬಾರದ್ದನ್ನು ಮಾಡಿಲ್ಲ. ಒಂದು ವೇದಿಕೆಯ ಮೇಲೆ ನಿಂತು ಯಡಿಯೂರಪ್ಪರವರನ್ನು ತಮ್ಮ ನಾಯಕರೆಂದರು ಅಷ್ಟೆ. ಅದು ಅವರ ವೈಯಕ್ತಿಕ ನಿಲುವು. ಅಥವಾ ಅಧಿಕಾರದಾಸೆಗೇ ಹಾಗಂದರು ಅಂತಲೇ ಅಂದುಕೊಂಡರೂ, ಅದೂ ಅವರ ವೈಯಕ್ತಿಕ ಬಯಕೆಯೇ. ಯಾರ ವೈಯಕ್ತಿಕ ನಿಲುವುಗಳನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ದುರಂತವೆಂದರೆ, ಅವರು ಇದೇ ಮಾತುಗಳನ್ನು ಸಿದ್ಧರಾಮಯ್ಯನವರ ಬಗ್ಗೆ ಆಡಿದ್ದರೆ ಹೊತ್ತು ತಿರುಗುವವರ ಮತ್ತು ವಿರೋಧಿಸುವವರ ಪಾತ್ರ ಅದಲು ಬದಲಾಗಿರುತ್ತಿತ್ತು ಅಷ್ಟೆ.  ಒಬ್ಬ ಮನುಷ್ಯನ ಸಾವು, ಧರ್ಮಗಳಾಚೆಗೆ ನಮ್ಮಲ್ಲಿ ಒಂದು ಶೂನ್ಯತೆಯನ್ನು, ವಿಷಾದವನ್ನು ಹುಟ್ಟು ಹಾಕದ ಈ ವಿಷಮ ಪರಿಸ್ಥಿತಿಯಲ್ಲ್ಲೂ ಪರ-ವಿರೋಧದ ರಾಜಕೀಯ ತೀರಾ ಅಸಹ್ಯವೆನಿಸುತ್ತದೆ.

ಇಷ್ಟಕ್ಕೂ ಅವರು ಲಂಕೇಶರ ಉತ್ತರಾಧಿಕಾರಿ, ತಂದೆಯ ಆದರ್ಶಗಳನ್ನೆಲ್ಲಾ ಪಾಲಿಸಬೇಕು, ಅವರಂತೆಯೇ ಬದುಕಬೇಕು ಅಂತೆಲ್ಲಾ ನಾವೇಕೆ ಬಯಸಬೇಕು? ಇಂದ್ರಜಿತ್, ಲಂಕೇಶರ biological ವಾರಸ್ದಾರರಷ್ಟೇ, ಅವರ ವಿಚಾರಗಳ, ವಿವೇಕದ ವಾರಸುದಾರರಲ್ಲ.

ಲಂಕೇಶರೆಂದರೆ, ಒಂದಿಡೀ ತಲೆಮಾರಿಗೆ ರಾಜಕೀಯ ಪ್ರಜ್ಣೆಯನ್ನೂ, ಸಾಂಸ್ಕೃತಿಕ ಪ್ರಜ್ಞೆಯನ್ನೂ, ಕರ್ನಾಟಕ ಪ್ರಜ್ಞೆಯನ್ನೂ ಸದ್ದಿಲ್ಲದೆ ದಾಟಿಸಿದವರು. ಇನ್ನೊಂದು ತಲೆಮಾರಿನವರ ಪ್ರಜ್ಞೆಯಲ್ಲಿ, ತಮ್ಮ ಬರಹ, ಬದುಕಿನ ಮೂಲಕವೇ ಮೊಗೆದಷ್ಟೂ ಮುಗಿಯದ ಬೆರಗಾಗಿ, ಅಚ್ಚರಿಯಾಗಿ ಪ್ರತಿ ಕ್ಷಣ ಹುಟ್ಟುತ್ತಲೇ ಇರುವವರು. ಅವರ 'ಅವ್ವ' ಪದ್ಯ ನಮ್ಮೆಲ್ಲರ ತಾಯಿಯನ್ನು ಪ್ರತಿನಿಧಿಸುವ ಒಂದು ಅಮರ ಕಾವ್ಯ. ನಾಲ್ಕೇ ನಾಲ್ಕು ಸಾಲುಗಳಲ್ಲಿ ಕಲೆ, ಸಾಹಿತ್ಯ, ರಾಜಕೀಯ, ಇತಿಹಾಸ, ಪುರಾಣ, ಪ್ರೇಮ, ಕಾಮ, ವ್ಯಂಗ್ಯ, ವಿಡಂಬನೆ, ಹಾಸ್ಯ ಎಲ್ಲವನ್ನೂ ಕಟ್ಟಿಕೊಟ್ಟ ಅವರ 'ನೀಲು' ಕವಿತೆಗಳಂತೂ ಅತ್ಯದ್ಭುತ. ಲಂಕೇಶ್ ಎಂಬ ಸಾಕ್ಷೀಪ್ರಜ್ಞೆಯನ್ನು, ನಮ್ಮೊಳಗಿನ ಜಾಗೃತಿಯನ್ನು ಅವರ ಮಕ್ಕಳ ಹೇಳಿಕೆ, ನಿಲುವು, ಬದುಕಿನ ಕನ್ನಡಕದ ಮೂಲಕ ನೋಡುವುದೇ ಮೂರ್ಖತನ.

ಹೀಗಿದ್ದೂ, ಮಗ ತಂದೆಯಂತೆಯೇ ಇರಬೇಕು ಅನ್ನುವ ಸಿದ್ಧ ಸೂತ್ರಕ್ಕೆ ನಾವು ಕಟ್ಟು ಬೀಳುತ್ತೇವೆ ಅನ್ನುವುದಾದರೆ ಲಂಕೇಶರಂತಹ ಪರಮ ಗುರು ಈ ನಾಡಿಗೆ ದಕ್ಕುತ್ತಲೇ ಇರಲಿಲ್ಲ, ಕನ್ನಡ ಸಾಹಿತ್ಯ ಹೊಸದೊಂದು ಹಾದಿಗೆ ಹೊರಳುತ್ತಲೇ ಇರಲಿಲ್ಲ. ಯಾಕೆಂದರೆ ಅವರ ತಂದೆಯಂತೆ ಅವರೂ ಶಿವಮೊಗ್ಗದ ಹಳ್ಳಿಯೊಂದರ ರೈತನಾಗಿ ಯಾರಿಗೂ ಗೊತ್ತಿಲ್ಲದೆ ಬದುಕಿ, ಯಾರಿಗೂ ಗೊತ್ತಾಗದಂತೆ ಸತ್ತೂ ಹೋಗಬೇಕಿತ್ತು. ಹಾಗಾಗದಿರುವುದಕ್ಕೆ ಕಾರಣ, ಅವರ ಸ್ವತಂತ್ರ ನಿಲುವು ಹಾಗೂ ಯೋಚನೆಗಳೇ ಆಗಿವೆ. ಕೆಲವೊಮ್ಮೆ ಬಣ್ಣ, ಇನ್ನೂ ಕೆಲವೊಮ್ಮೆ ಎತ್ತರಗಳಷ್ಟೇ ವಂಶ ಪಾರಂಪರ್ಯವಾಗಿ ಬಂದಿರುತ್ತದೆ ವಿನಃ ಪ್ರಜ್ಞಾವಂತಿಕೆ, ವಿವೇಕ ಮತ್ತು ಚಿಂತನಾಶೀಲತೆಯಲ್ಲ ಅನ್ನುವ ಸಣ್ಣ ಸತ್ಯವನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ರಾಜಕೀಯ ಸಿದ್ಧಾಂತದ ಆಯ್ಕೆ ಮತ್ತು ಅನುಸರಿಸುವಿಕೆ ವ್ಯಕ್ತಿಯೊಬ್ಬನ ವೈಯಕ್ತಿಕ ಇಚ್ಛೆಯ ವಿಚಾರ. ಅದಕ್ಕೆ ಮೂಗು ತೂರಿಸುವುದಾಗಲೀ, ಸಲಹೆ ಕೊಡುವುದಾಗಲೀ ಮಾಡುವ ಯಾವ ಅರ್ಹತೆಯೂ ಮೂರನೇಯವನಿಗಿಲ್ಲ. ಹಾಗೆ ಪ್ರಶ್ನಿಸುವುದು, ತಪ್ಪೆಂದು ವಾದಿಸುವುದು ನಮ್ಮಂತಹ ಪ್ರಜಾಪ್ರಭುತ್ವ ದೇಶದ ಆರೋಗ್ಯಕ್ಕೆ ಒಳ್ಳೆಯದೂ ಅಲ್ಲ. ಇಂದ್ರಜಿತ್ ರ ಹೇಳಿಕೆಯಲ್ಲಿ ಸೈದ್ಧಾಂತಿಕ, ರಾಜಕೀಯ, ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಸಮರ್ಥವಾಗಿ, ತರ್ಕಬದ್ಧವಾಗಿ ವಿರೋಧಿಸಲಿ. ಆದರೆ ಅಪ್ಪನಂತೆ ಮಗನಿರಬೇಕು ಅಂತ ಬಯಸುವುದು ಮತ್ತು ಹಾಗಿರದಿರುವುದಕ್ಕೆ ನಿಂದಿಸುವುದು ಸರ್ವಥಾ ಸರಿಯಲ್ಲ ಮತ್ತು ತೀರಾ ಅಪ್ರಬುದ್ಧ. ರಾಜಕೀಯ ನಿಲುವೆಂಬುವುದು ವ್ಯಕ್ತಿಯೊಬ್ಬನ ಸ್ವಂತ ಅಭಿಪ್ರಾಯಗಳ ಮೇಲೆ ಅವಲಂಬಿಸಿರಬೇಕು. ಅದು ಲಂಕೇಶರ ಮಕ್ಕಳಾದರೂ ಅಷ್ಟೆ, ರಾಜ್ ಕುಮಾರ್ ರ ಮಕ್ಕಳಾದರೂ ಅಷ್ಟೇ, ನಾವಾದರೂ ಅಷ್ಟೆ, ನಮ್ಮ ಮಕ್ಕಳಾದರೂ ಅಷ್ಟೆ.

ಶುಕ್ರವಾರ, ಮೇ 19, 2017

ಕಾಫಿ, ಹಕ್ಕಿ, ಚಿಟ್ಟೆ ಇತ್ಯಾದಿ...

ಒಂದು ದೊಡ್ಡ ಮಗ್ ನ ಪೂರ್ತಿ ಕಾಫಿ ತುಂಬಿಕೊಂಡು, ಬಾಲ್ಕನಿಯ ಮೂಲೆಯಲ್ಲಿ ಕಾಫಿಯ ಹಬೆಯಲ್ಲಿನ ಪರಿಮಳವನ್ನು ಆಸ್ವಾದಿಸುತ್ತಾ ಬೆಳ್ಳಂಬೆಳಗನ್ನು ನನ್ನೊಳಗೆ ಇಷ್ಟಿಷ್ಟಾಗಿ ಸುರುವಿಕೊಳ್ಳುವುದು ನನ್ನಿಷ್ಟದ ಹವ್ಯಾಸಗಳಲ್ಲೊಂದು. ಆ ಹೊತ್ತಿನಲ್ಲಿ ಕಾಫಿಯೊಂದಿಗೆ 'ಕರ್ವಾಲೋ' ಕೂಡ ಇದ್ದರೆ ನನ್ನ ಕಲ್ಪನಾ ಜಗತ್ತಿನ ಸರ್ವ ಬೇರುಗಳೂ ಅನೂಹ್ಯವಾದ ಯಾವುದೋ ಒಂದನ್ನು ಪಡೆದುಕೊಳ್ಳಲಿದ್ದೇನೇನೋ ಅನ್ನುವಂತೆ ಸನ್ನದ್ಧಗೊಂಡುಬಿಡುತ್ತವೆ.

ಅರ್ಧ ರಾತ್ರಿಯಲ್ಲಿ ಸುರಿವ ಮಳೆಗೂ ಬೊಗಸೆಯೊಡ್ಡಿ ರುಚಿ ನೋಡುವ ನನಗೆ ಮೊದಲಿನಿಂದಲೂ ಬಾಲ್ಕನಿಯೆಂದರೆ ಒಂದು ವಿಚಿತ್ರ ಆಕರ್ಷಣೆ. ಅಷ್ಟುದ್ದ ಮೈ ಹರವಿ ಬಿದ್ದಿರುವ ನೀಲಾಗಸವನ್ನೂ, ಅದರ ಪೂರ್ತಿ ಹರಡಿಕೊಂಡಿರುವ ನಕ್ಷತ್ರಗಳನ್ನೂ,  ಯಾವುದೋ ಊರಿನ ಕಡಲಿನ ಕನಲಿಕೆಗೆ ಕೊಸರಾಡುತ್ತಿರುವಂತೆ ಕಾಣುವ ಚಂದ್ರನನ್ನೂ ಚೌಕಟ್ಟಿಲ್ಲದೆ ನೋಡುವುದೆಂದರೆ ನನಗೊಂಥರಾ ಹಬ್ಬ.

ಇಂದೂ ಅಷ್ಟೇ, ಕಾಫಿಯ ಮಗ್ ನೊಂದಿಗೆ ಬಾಲ್ಕನಿಯ ಒಂದು ಮೂಲೆಯಲ್ಲಿ ಹೋಗಿ ನಿಂತಾಗ ಪಕ್ಕದ ಹುಣಸೇ ಮರದಲ್ಲಿದ್ದ ಎರಡು ಹಕ್ಕಿಗಳಲ್ಲಿ ಒಂದು ಹಕ್ಕಿ ತಲೆ ಬಗ್ಗಿಸಿ ಏನನ್ನೋ ಹುಡುಕುತ್ತಿತ್ತು. ಪಕ್ಕದಲ್ಲಿದ್ದ ಮತ್ತೊಂದು ಹಕ್ಕಿಯದೋ ಅನ್ಯಮನಸ್ಕತೆ.

ನಿಜಕ್ಕೂ ಅದು ಏನನ್ನು ಹುಡುಕುತ್ತಿತ್ತು? ಹಾಗೆ ಹುಡುಕಲು ಏನನ್ನಾದರೂ ಕಳೆದುಕೊಂಡಿತ್ತಾ? ಆ ಹುಡುಕಾಟಕ್ಕೂ ಮತ್ತೊಂದು ಹಕ್ಕಿಯ ಅನ್ಯಮನಸ್ಕತೆಗೂ ಏನಾದರೂ ಸಂಬಂಧವಿದೆಯಾ?

ಮನುಷ್ಯರಂತೆ ಇಂದಿಗೂ ಇರಲಿ, ನಾಳೆಗೂ ಇರಲಿ, ನನಗೂ ಇರಲಿ, ಮುಂದಿನ ಹತ್ತು ತಲೆಮಾರುಗಳಿಗೂ ಇರಲಿ ಅಂತೆಲ್ಲಾ ಸ್ವಾರ್ಥಪರವಾಗಿ ಚಿಂತಿಸದ ಹಕ್ಕಿಗಳು ನಿಜಕ್ಕೂ ಕಳೆದುಕೊಂಡದ್ದನ್ನು ಹುಡುಕಲು ಸಾಧ್ಯವೇ?ಅಥವಾ ಕಳೆದುಕೊಂಡರಷ್ಟೇ ಹುಡುಕಬೇಕು, ಹುಡುಕಾಟವೆನ್ನುವುದು ಹೊಸದಕ್ಕೆ ಯಾವುದಕ್ಕೂ ಅನ್ವಯಿಸಲಾರದು ಅನ್ನುವ ನನ್ನ ಯೋಚನಾ ಕ್ರಮವೇ ತಪ್ಪೇನೋ?

ಊಹೂಂ, ಒಂದೂ ಗೊತ್ತಾಗದೇ ತಲೆಕೊಡವಿ, ಅತ್ತ ಕಡೆ ಕತ್ತು ಹೊರಳಿಸಿದೆ. ಎಣಿಸಿ ನೋಡಿದರೆ ಒಂದು ನೂರು ಬಣ್ಣಗಳನ್ನಾದರೂ ತನ್ನ ಮೇಲೆ ಹೊತ್ತುಕೊಂಡಿರುವ ಚಿಟ್ಟೆಯೊಂದು, ತನಗೂ ಮಕರಂದಕ್ಕೂ ಯಾವುದೋ ದಾಖಲಾಗದ ಒಪ್ಪಂದವಿದೆಯೇನೋ ಅನ್ನುವಂತೆ ಹೂವಿನ ಮೇಲೆ ಕುಳಿತು ಮೌನರಾಗ ಹಾಡತೊಡಗಿತು. ಏನನ್ನೋ ಹುಡುಕಾಡುತ್ತಿದ್ದ, ಅಥವಾ ಹಾಗಂತ ನಾನಂದುಕೊಂಡಿದ್ದ ಹಕ್ಕಿ ಹುಣಸೇ ಮರದಿಂದ ಹಾರಿ ಹೋಯಿತು. ಆ ಸದ್ದಿಗೆ ಪ್ರತಿಕ್ರಿಯೆಯೇನೋ ಎಂಬಂತೆ ಚಿಟ್ಟೆಯೂ ಒಮ್ಮೆ ಪಟಪಟನೇ ರೆಕ್ಕೆ ಬಡಿಯಿತು. ಯಾರಿಗೆ ಗೊತ್ತು? ಹೂವಿನೆದೆಯಲ್ಲೂ ಒಂದು ಸಣ್ಣ ಕಂಪನ ಉಂಟಾಗಿರಲೂಬಹುದು.

ಗುರುವಾರ, ಮಾರ್ಚ್ 30, 2017

ಅಜ್ಜ

ಹೀಗೆ ಒಂದು ಸಂಜೆ ಅಜ್ಜ
ನನ್ನೊಳಗೆ ಬರಹದ
ಬೀಜ ಬಿತ್ತಿದ್ದ

ಬಹುಶಃ ಅದು ಮೊದಲು
ಅವನಲ್ಲಿ ಹುಟ್ಟಿದ
ಕನಸಾಗಿರಬೇಕು
ಸದ್ದಿಲ್ಲದೆ ನನಗೆ ದಾಟಿಸಿ ಬಿಟ್ಟಿದ್ದ

ನಾ ಸುಮ್ಮನೆ ಪುಸ್ತಕ
ಕೈಗೆತ್ತಿದಾಗೆಲ್ಲಾ ಅವನ
ಕಣ್ಣು ಅಕಾರಣ ಹೊಳೆಯುತ್ತಿತ್ತು
ಒಂದು ಸ್ಪಷ್ಟ ಕನಸು ಆಗಲೇ
ರೂಪುಗೊಂಡಿರಲೂ ಬಹುದು

ಅವನ ಧೀಮಂತ ನಿಲುವು
ನನಗಿನ್ನೂ ನೆನಪಿದೆ
ಎಷ್ಟು ಬಾರಿ ಬೆರಗಾದದ್ದಿದೆಯೋ
ಅಷ್ಟೂ ಬಾರಿ ಅವನು
ಆಶ್ಚರ್ಯಸೂಚಕ ಚಿಹ್ನೆಯಾಗಿಯೇ
ಉಳಿದುಬಿಡುತ್ತಿದ್ದ

ಇಷ್ಟೇ ಇದ್ದ ಕರಗಳ ಮಧ್ಯೆ
ಪುಸ್ತಕವಿಟ್ಟಾಗಲೇ ಅಕ್ಷರಗಳೊಂದಿ‌ನ
ಅವನ ಜೀವ ಪ್ರಜ್ಞೆ
ನನ್ನೊಳಗೆ ಸಂಚಲಾರಭಿಸಿತ್ತು
ಈಗೇನಿದ್ದರೂ ಅದರ ಪುನರ್ನವೀಕರಣ ಅಷ್ಟೆ
ಒಮ್ಮೊಮ್ಮೆ ಸರಳ, ಸುಲಭ
ಇನ್ನೂ ಕೆಲವೊಮ್ಮೆ ಜಟಿಲ, ಸಂಕೀರ್ಣ

ನಿಜ, ನನ್ನ ಯಾವ ಕವಿತೆಗೂ
ಅವನನ್ನು ಸಂಪೂರ್ಣ ದಕ್ಕಿಸಿಕೊಳ್ಳಲಾಗದು
ಅವನ ಮಾತು, ಮೌನ
ಚರ್ಯೆ, ಬದುಕಿನ ಕುರುಹು
ಕೊನೆಗೊಂದು ಕಣ್ಣೋಟವಾದರೂ
ಕವಿತೆಯ ಪರಿಧಿಯೊಳಗೆ ಬಂದರೆ
ಅವ ಬಿತ್ತಿದ ಬೀಜ
ಭೋದಿ ವೃಕ್ಷವಾಯಿತೆಂದು ಸಂತಸಿಸುತ್ತೇನೆ.

ಬುಧವಾರ, ಮಾರ್ಚ್ 29, 2017

ಋತು

ಅಲ್ಲೆಲ್ಲೋ ಇಟ್ಟು ಮರೆತ
ಬೀಜವೊಂದು ಮೊಳಕೆಯೊಡೆದಾಗ
ಎದೆಯೊಳಗೊಂದು ಸಂಕಟದ
ಮುಳ್ಳು ಚಳ್ಳೆನ್ನುತ್ತದೆ

ಸಂಭ್ರಮದಿಂದ ರಜಸ್ಸನು
ಹಿಂದೊಮ್ಮೆ ಇದಿರುಗೊಳ್ಳುತ್ತಿದ್ದುದು
ಸುಳ್ಳೇ ಸುಳ್ಳೇನೋ?

ಕಿಬ್ಬೊಟೆಯಾಳದ ಹಸಿ ಹಸಿ
ನೋವನ್ನೂ ಹೆಣ್ತನದ ಹೆಮ್ಮೆಯಂತೆ
ಸ್ವೀಕರಿಸಿದ್ದೂ ನೆನಪೇ ಈಗ

ಅರ್ಥವಿಲ್ಲದ ಭಾವದೇರಿಳಿತಗಳು
ಸುಮ್ಮನೆ ಹುಟ್ಟುವ ಯಮಯಾತನೆ
ಎಲ್ಲಾ ನಗುತ್ತಾ ಸಹಿಸಿದ್ದೂ ನಿಜವೆನಿಸುವುದಿಲ್ಲ

ಮ್ಲಾನ ಸಂಜೆಯ ಬೇಗುದಿಗಳನ್ನೆಲ್ಲಾ
ಎದೆಯೊಳಗಿಳಿಸಿಕೊಂಡು ಪ್ರತಿ
ಋತು ತಿರುಗಿಬಿದ್ದಂತೆ ಹರಿವ ನದಿ
ಕಡಲಿನಾಸರೆಯೂ ಬೇಡವೆಂಬಂತೆ
ಮೌನವಾಗುತ್ತದೆ

ಮತ್ತೆ ಎಣಿಕೆ ಶುರುವಾದಂತೆ
ಜೀವ ಭವ ಪಡೆಯುತ್ತದೆಂಬ
ನಂಬಿಕೆಯ ನದಿಯ ಹರಿವು ಸರಾಗ
ಮತ್ತೊಂದು ಋತು ತಿರುಗಿ ಬೀಳುವವರೆಗೆ

ಸೋಮವಾರ, ಮಾರ್ಚ್ 6, 2017

ಮತ್ತೆ ಬೇಕು ಒಂದು ಏಕಾಂತ.

ಮತ್ತೆ ಬೇಕು ಏಕಾಂತ
ಬಿಸಿಲ ಕೋಲಿನ ಧೂಳ ಕಣಗಳ
ಮುಷ್ಟಿಯಲಿ ಬಂಧಿಸಲೆತ್ನಿಸುವ
ನಿರ್ಮಲ ಸುಖ

ಸಂಜೆಗೆಂಪು ಹೆಪ್ಪುಗಟ್ಟಿದ ಹೊತ್ತಲ್ಲಿ
ಗುರಿಯಿರದೆ ಸಾಗುವ ಮೋಡಗಳ
ನಿಲ್ಲಿಸಿ ಮಾತಾಡಿಸಿ ಬೀಳ್ಕೊಡಬೇಕು
ಮತ್ತೆ ಬೇಕು ಏಕಾಂತ

ಆಕಾಶದ ಅಂಗಳದ ತುಂಬಾ
ಹರಡಿರುವ ನಕ್ಷತ್ರಗಳ
ಬೆರಳುಗಳಲಿ ಎಣಿಸಬೇಕು
ಮತ್ತೆ ಬೇಕು ಏಕಾಂತ

ಸ್ತಬ್ಧ ರಾತ್ರಿಯಲಿ ಎದ್ದು ಕೂತು
ಉದ್ದಕ್ಕೆ ಹರಡಿರುವ ಕತ್ತಲಿನ
ಗರ್ಭ ಸೀಳಬೇಕು
ಮತ್ತೆ ಬೇಕು ಏಕಾಂತ

ಮಿನುಗುವ ಮಿಂಚುಹುಳದ
ಜಾಡರಸಿ ಹಗಲಿಡೀ ಅಲೆದು
ಹುಚ್ಚುತನಕೆ ಬೇಸ್ತು ಬೀಳಬೇಕು
ಮತ್ತೆ ಬೇಕು ಏಕಾಂತ

ತಪ್ತ ಹೃದಯಕ್ಕೊಂದು ಅನುಸಂಧಾನ
ಸಮಯದ ಸಬೂಬಿಗೊಂದು ವಿರಾಮ
ನನ್ನಲಿ ನಾ ಏಕೀಭವಿಸಬೇಕು
ಹೌದು, ಮತ್ತೆ ಬೇಕು ಒಂದು ಏಕಾಂತ.

ಶನಿವಾರ, ಫೆಬ್ರವರಿ 18, 2017

ಒಳ್ಳೆಯವರಾಗಿರುವುದು ಅಂದ್ರೇನು?

'ಅವನು/ಳು ತುಂಬಾ ಒಳ್ಳೆಯವನು/ಳು' ಅಂತೆಲ್ಲಾ ನಾವು ಯಾರದೋ ಬಗ್ಗೆ ಮಾತಾಡುತ್ತಿರುತ್ತೇವೆ. ಅಂತಹವರು, 'ದೇಹೀ' ಎಂದು ಕೈ ಚಾಚಿದ ಯಾರಿಗೂ ಯಾವತ್ತೂ ಇಲ್ಲ ಅನ್ನುವುದಿಲ್ಲ, ಒಂದೇ ಒಂದು ಕ್ಷಣಕ್ಕೂ ಯಾರ ಮೇಲೂ ಸಿಟ್ಟಾಗುವುದಿಲ್ಲ, ದ್ವೇಷ ಅನ್ನುವ ಭಾವನೆಯನ್ನೇ ತನ್ನತ್ತ ಸುಳಿಯಲೂ ಬಿಡುವುದಿಲ್ಲ‌, ಮಧ್ಯ ರಾತ್ರಿ ಎಬ್ಬಿಸಿ ಸಹಾಯ ಕೇಳಿದರೂ ಮುಖಕ್ಕೆ ತಣ್ಣೀರು ಚಿಮುಕಿಸಿ ಉಟ್ಟ ಬಟ್ಟೆಯಲ್ಲೇ ಸಹಾಯಕ್ಕೆಂದು ಧಾವಿಸುತ್ತಾರೆ, ತನ್ನಿಂದ ತಪ್ಪೇ ಆಗದಿದ್ದರೂ ಕೈ ಮುಗಿದು ಕ್ಷಮೆ ಕೇಳುತ್ತಾರೆ, ತನ್ನನ್ನು ನೋಯಿಸಿದವರನ್ನೂ ತುಂಬಾ ಸುಲಭವಾಗಿಯೇ ಕ್ಷಮಿಸುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರೆಲ್ಲಾ 'ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಪ್ರೀತಿಸುತ್ತಾರೆ' ಎಂಬಂತಿರುತ್ತಾರೆ ಅಥವಾ ಹಾಗಂದುಕೊಂಡು ತಮ್ಮನ್ನೇ ಮೋಸಮಾಡಿಕೊಳ್ಳುತ್ತಿರುತ್ತಾರೆ.

ಆದರೆ ನಿಜಕ್ಕೂ ಒಳ್ಳೆಯತನವೆಂದರೇನು? ಒಳ್ಳೆಯವರಾಗಿರುವುದು ಅಂದ್ರೇನು? ಒಳ್ಳೆಯತನದ ಮಾನದಂಡಗಳಾವುವು? ಒಳ್ಳೆಯದನ್ನೂ ಕೆಟ್ಟದನ್ನೂ ಅಳೆಯುವ ಮಾನದಂಡ ಯಾವುದು? ಈ ಯಾವ ಪ್ರಶ್ನೆಗಳಿಗೂ 'ಇದಮಿತ್ಥಂ' ಅನ್ನುವ ಯಾವ ಉತ್ತರವೂ ದೊರೆಯುವುದಿಲ್ಲ.

ಪ್ರತಿ ಬಾರಿ ಮನುಷ್ಯ ದೇವರಾಗಹೊರಟಾಗೆಲ್ಲಾ ಅವನ ಸಹಜತೆ ಕಳೆದುಕೊಳ್ಳುತ್ತಾನೆ. ಅರಿಷಡ್ವರ್ಗಗಳನ್ನು ಗೆಲ್ಲುತ್ತೇನೆ ಅನ್ನುವ ಅಹಂನಲ್ಲಿ, ಭ್ರಮೆಯಲ್ಲಿ ತನ್ನನ್ನು ತಾನೇ ಸೋಲಿಸಿಕೊಳ್ಳುತ್ತಿರುತ್ತಾನೆ. ಪ್ರತಿಕ್ಷಣವೂ ಸ್ಥಿತಪ್ರಜ್ಞನಾಗಿಯೇ ಇರುತ್ತೇನೆ ಅನ್ನುವ ಹುಂಬತನದಲ್ಲಿ ಆ ಕ್ಷಣದ ಅಚ್ಚರಿಗಳನ್ನು, ಆನಂದಗಳನ್ನು ತನಗರಿವಿಲ್ಲದೇ ಕಳೆದುಕೊಳ್ಳುತ್ತಿರುತ್ತಾನೆ.

ಪ್ರಪಂಚದ ದೃಷ್ಟಿಯಲ್ಲಿ ತೀರಾ 'ಒಳ್ಳೆಯವರು' ಅನ್ನಿಸಿಕೊಂಡವರು, 'ಯಾರ ಮನಸ್ಸನ್ನೂ ಒಂದು ಕ್ಷಣಕ್ಕೂ ನೋಯಿಸದವರು', 'ಸಮಚಿತ್ತರು' ಅಂತೆಲ್ಲಾ ಅನ್ನಿಸಿಕೊಂಡವರಿರುತ್ತಾರಲ್ಲಾ ಅಂತಹವರ ಅಂತರಂಗಕ್ಕೊಮ್ಮೆ ಇಳಿದು ನೋಡಬೇಕು. ಮೇಲೆ ಮೇಲೆ ಎಲ್ಲಾ ಸರಳವಾಗಿದೆ, ಸುಲಲಿತವಾಗಿದೆ ಎಂದೇ ಅನಿಸುತ್ತದೆ. ಗಳಿಸಿದ ಸ್ನೇಹ, ಪ್ರೀತಿ, ಉಳಿಸಿಕೊಂಡ ಸಂಬಂಧ, ಎಂದೂ ಕುಸಿದು ಹೋಗಲಾರರು ಅನ್ನುವಂತಹ ಗಟ್ಟಿ ವ್ಯಕ್ತಿತ್ವ, ಸುಲಭವಾಗಿ ಸೋಲದ ಆತ್ಮವಿಶ್ವಾಸ... ಇವೆಲ್ಲವನ್ನು ಮೀರಿಯೂ ಹೇಳಿಕೊಳ್ಳಲಾಗದ ಅಸಹಾಯಕತೆ, ಒಂದು ಪುಟ್ಟ ಅಭದ್ರತೆ, ಯಾವಾಗ ಏನಾಗುತ್ತದೋ ಅನ್ನುವ ಅನುಮಾನ, ಒಳ್ಳೆಯತನದ ಪೊರೆ ಎಲ್ಲಿ ಕಳಚಿಬೀಳುತ್ತದೋ ಅನ್ನುವ ದಿಗಿಲು ಸದಾ ಕಾಡುತ್ತಿರುತ್ತದೆ.

ಆ ದಿಗಿಲೇ, ಅನುಮಾನವೇ, ಅಭದ್ರತೆಯೇ, ಅಸಹಾಯಕತೆಯೇ ಬದುಕಿನ ಪುಟ್ಟ ಪುಟ್ಟ ಖುಶಿಗಳನ್ನು, ಕೆಲವು ಉತ್ಕಟ ಸಂಭ್ರಮಗಳನ್ನು ಅನುಭವಿಸಲು, ತುಂಟತನದ ಪರಮಸೀಮೆಗಳನ್ನು ತಡವುವಲ್ಲಿ ತೊಡರುಗಾಲಾಗುತ್ತದೆ. ಕೊನೆಗೊಂದು ದಿನ ಬದುಕಿನೊಂದಿಗಿನ ಬಯಕೆಗಳೆಲ್ಲಾ ಸತ್ತು ತೋರಿಕೆಯ ನಗುವಿನ ನೀರಸ ದಿನಚರಿಯಾಗಿಬಿಡುತ್ತದೆ ಜೀವನ.

ಹಾಗೆಂದ ಮಾತ್ರಕ್ಕೆ ಬದುಕು ಬರಿ ಸ್ವಾರ್ಥಭರಿತವಾಗಿರಬೇಕು, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬಾರದು, ತನ್ನ ಖುಶಿಯೊಂದೇ ಬದುಕಿನ ಪರಮ ಗುರಿಯಾಗಿರಬೇಕು ಎಂದಲ್ಲ. ಹೊರಡಲು ಇನ್ನೂ ಅರ್ಧ ಗಂಟೆ ಇರುವ ಬಸ್ಸಿನಲ್ಲಿ ಕೂತು ತೂಕಡಿಸುತ್ತಿರುವಾಗ ಕೋಲೂರುತ್ತಾ ಅದ್ಯಾವುದೋ ಮನಕಲುಕುವ ಹಾಡು ಹಾಡುತ್ತಾ ಭಿಕ್ಷೆಗೆ ಬಂದ ಅದ್ಭುತ ಕಂಠದ ಅಂಧನ ಮೈ ದಡವಿ ಮನೆಗೆ ಕರೆತಂದು ಅಕ್ಕರೆಯಿಂದ ಊಟ ಹಾಕಿ ಅವನಲ್ಲಿನ ಪ್ರತಿಭೆಗೆ, ಕಂಠಕ್ಕೆ ಒಂದು ವೇದಿಕೆ ಒದಗಿಸಿ ಅವನ ಬದುಕಿಗೆ ದಾರಿ ದೀಪವಾಗುವುದು ಒಳ್ಳೆಯತನ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಣ್ಣಿನ ಶಸ್ತ್ರಕ್ರಿಯೆ ಮಾಡಿಸಿ ಅವನಿಗೆ ದೃಷ್ಟಿ ಕೊಡಿಸುವುದೂ ಒಳ್ಳೆಯತನವೇ. ಆದರೆ ಬಸ್ ಸ್ಟಾಂಡಿನಲ್ಲಿ, ನಿಂತ ನಿಲುವಿನಲ್ಲೇ ತನ್ನದೇ ಒಂದು ಕಣ್ಣನ್ನು ಕಿತ್ತು ಅವನಿಗೆ ಕೊಡುವುದಿದೆಯಲ್ಲಾ ಅದು ಶುದ್ಧ ಅವಿವೇಕ ಮತ್ತು ಅತಿರೇಕ.

ಇಷ್ಟಕ್ಕೂ ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಪ್ರೀತಿಸಲು, ಪೊರೆಯಲು ದೇವನೊಬ್ಬನಿಂದ ಮಾತ್ರ ಸಾಧ್ಯ. ಈ ಸಣ್ಣ ಅರಿವನ್ನೂ ಮೀರಿ ಮನುಷ್ಯ ಮಾತ್ರನಾದವನೊಬ್ಬ ತಾನು ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಪ್ರೀತಿಸುತ್ತೇನೆ ಅನ್ನುತ್ತಿರುತ್ತಾನೆ, ಅಂದುಕೊಳ್ಳುತ್ತಿರುತ್ತಾನೆ ಅಂದರೆ ಅವನೊಬ್ಬ ಅಪ್ರಾಮಾಣಿಕ ಅಷ್ಟೇ.

ಮತ್ತು ಅಷ್ಟು ಮಾತ್ರ.

ಬುಧವಾರ, ಫೆಬ್ರವರಿ 8, 2017

ಹೃದಯಸ್ಪರ್ಶಿ ಸಂವೇದನೆಗಳು ಮತ್ತೆಂದೂ ಸಹಜತೆಯತ್ತ ಮರಳದಷ್ಟು ಡಿಜಿಟಲೀಕರಣವಾಗಿಬಿಟ್ಟಿದೆಯೇನೋ...?

ಸೂರ್ಯ ಇನ್ನೂ ಪೂರ್ತಿ ನೆತ್ತಿಗೇರಿರಲಿಲ್ಲ. ಹಬೆಯಾಡುವ ಕಾಫಿ ಕಪ್ಪನ್ನು ಕೈಯಲ್ಲಿ ಹಿಡಿದು ಒಂದೊಂದೇ ಸಿಪ್ ಹೀರುತ್ತಾ ಇವತ್ತಿನ ದಿನಪತ್ರಿಕೆ ಓದುತ್ತಿದ್ದೆ. ಅಷ್ಟರಲ್ಲಿ ರಿಂಗಣಿಸಿದ ಮೊಬೈಲ್ ಗೆಳತಿಯೋರ್ವಳ ಹೆಸರನ್ನು ತೋರಿಸುತ್ತಿತ್ತು. ಇನ್ನೂ ಪೇಪರ್ ಓದಿ ಮುಗಿಸಿಲ್ಲದ ನಾನು ಎತ್ತಲೋ ಬೇಡವೋ ಅನ್ನುವ ಅನ್ಯಮನಸ್ಕತೆಯಲ್ಲೇ ರಿಸೀವ್ ಮಾಡಿದೆ. ಆ ಕಡೆಯಿಂದ ಗಡಸು ಧ್ವನಿಯೊಂದು ' "ನಾನು ನಿನ್ ಫ್ರೆಂಡ್ ಹಸ್ಬೆಂಡ್ ಮಾತಾಡ್ತಿದೀನಿ, ಅವ್ಳು ಇವತ್ತು ಸೂಸೈಡ್ ಅಟೆಮ್ಪ್‌ಟ್ ಮಾಡಿದ್ದಾಳೆ, ನಿಂಗೇನಾದ್ರೂ ವಿಷಯ ಗೊತ್ತಿರಬಹುದಾ ಅಂತ ಫೋನ್ ಮಾಡಿದೆ" ಅಂದಿತು. ಗಡಬಡಿಸಿ ಎದ್ದು ನಿಂತು, ತಾನು ಕನಸು ಕಾಣುತ್ತಿಲ್ಲ ಎಂದು ಕನ್‍ಫರ್ಮ್ ಮಾಡಿಕೊಳ್ಳುತ್ತಾ ಎಡ ಕಿವಿಯಿಂದ ಬಲಕಿವಿಗೆ ಫೋನನ್ನು ವರ್ಗಾಯಿಸಿ ಮತ್ತೊಮ್ಮ ಕೇಳಿದೆ. ಆ ಕಡೆಯಿಂದ ಮತ್ತದೇ ಉತ್ತರ. ಕೈಯಲ್ಲಿದ್ದ ಕಾಫಿ, ಕಪ್‍ನಿಂದ ತುಳುಕಿ ಕೈ ಮೇಲೆ ಬಿತ್ತು.

ಒಂದು ಕ್ಷಣ ಏನು ಮಾಡಬೇಕೆಂದೇ ತೋಚಲಿಲ್ಲ. ಆಕೆ ನನ್ನ ಅತ್ಯಾಪ್ತ ಸ್ನೇಹಿತೆ ಅಲ್ಲದಿದ್ದರೂ ಕನಿಷ್ಠ ತಿಂಗಳಿಗೆ ಎರಡು ಬಾರಿಯಾದರೂ ಚಾಟ್ ಮಾಡುವಷ್ಟು ಆತ್ಮೀಯತೆ ನಮ್ಮಲ್ಲಿತ್ತು. ಈಗ ಇದ್ದಕ್ಕಿದ್ದಂತೆ ಆತ್ಮಹತ್ಯೆ ಯತ್ನ ಅಂದರೆ ನನಗೇನಾಗಿರಬೇಡ? ಸೂಕ್ಷ್ಮವಾಗಿ ಮನೆಯಲ್ಲಿ ವಿಷಯ ತಿಳಿಸಿ, ಅವಳು ದಾಖಲಾಗಿರುವ ಆಸ್ಪತ್ರೆಗೆ ಹೊರಟೆ. ದಾರಿ ಮಧ್ಯೆ ಮತ್ತೊಂದಿಬ್ಬರು ಗೆಳತಿಯರಿಗೂ ವಿಷಯ ತಿಳಿಸಿದೆ.

ಕಾಲೇಜಿನ ಪೂರ್ತಿ ಗಟ್ಟಿಗಿತ್ತಿ ಅನ್ನುವ ಹೆಸರು ಗಳಿಸಿದ್ದವಳು ಈಗ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಪ್ರಯತ್ನಿಸಲು ಕಾರಣವಾದರೂ ಏನಿದ್ದೀತು ಅನ್ನುವುದು ಇನ್ನೂ ನನ್ನರವಿಗೆ ನಿಲುಕಿರಲಿಲ್ಲ. ಅಷ್ಟು ಸುಲಭವಾಗಿ ಸಾವಿಗೆ ಶರಣೆನ್ನುವಷ್ಟು ದುರ್ಬಲೆಯಲ್ಲವೇ ಅಲ್ಲ ಅವಳು. ಹಿಂದೊಮ್ಮೆ ಕಾಲೇಜ್ ಇಲೆಕ್ಷನ್ ನಡೆದಾಗ ಅಷ್ಟೂ ರಾಜಕೀಯ ಪಟ್ಟುಗಳನ್ನು ಅರೆದು ಕುಡಿದವಳಂತೆ ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದಳು. ತನ್ನ ಚುಡಾಯಿಸುತ್ತಿದ್ದವರನ್ನು ರಸ್ತೆ ಮಧ್ಯೆಯೇ ನಿಲ್ಲಿಸಿ ಗದರಿಸುವಷ್ಟು ಬೋಲ್ಡ್. ಬದುಕಿಗೆ ಬೆನ್ನು ತಿರುಗಿಸಿ ಓಡುವಂತಹ ವಿಷಮ ಮನಸ್ಥಿತಿಗೆ ಆಕೆ ತಲುಪಬೇಕಿದ್ದರೆ ಅಂತದ್ದೇನಾಯಿತು ಅವಳ ಜೀವನದಲ್ಲಿ ಅಂತೆಲ್ಲಾ ಯೋಚಿಸುತ್ತಿದ್ದಂತೆ ನಾನು ಆಸ್ಪತ್ರೆ ತಲುಪಿದೆ.

ಕೌಂಟರ್‍ನಲ್ಲಿ ವಿಚಾರಿಸಿ ಅವಳು ದಾಖಲಾಗಿದ್ದ ಕೋಣೆಯತ್ತ ಹೋದರೆ ಅಮ್ಮ ಐ.ಸಿ.ಯುನತ್ತ ಕೈ ತೋರಿದರು. ಪಕ್ಕದಲ್ಲೇ ಅಪ್ಪ ತಲೆ ತಗ್ಗಿಸಿ ಕೂತಿದ್ದರು. ಅಲ್ಲಿದ್ದು ಏನು ಮಾಡಬೇಕೆಂದು ತೋಚದೆ ಐ.ಸಿ.ಯು ಹತ್ರ ಬಂದೆ. ಅಲ್ಲಿ ಅವಳ ಗಂಡ ಆಕಾಶವೇ ತಲೆ ಮೇಲೆ ಬಿದ್ದಂತೆ ಕುಳಿತಿದ್ದರು. ಆ ಪರಿಸ್ಥಿತಿಯಲ್ಲಿ ಅವರನ್ನು ಮಾತಾಡಿಸುವುದೋ ಬೇಡವೋ ಅನ್ನುವ ಇಬ್ಬಂದಿತನದಲ್ಲೇ ಅವರನ್ನು ಸಮೀಪಿಸಿ 'ಅಣ್ಣಾ, ಆಗಿರುವುದಾದರೂ ಏನು' ಎಂದು ಕೇಳಿದೆ.
ಮೊದ ಮೊದಲು ಅವರೂ ಹೇಳಲೋ ಬೇಡವೋ ಎಂಬಂತೆ ಹಿಂದೆ ಮುಂದೆ ನೋಡಿದರು. ಆಮೇಲೆ ಅವರಿಗೂ ಎದೆಮೇಲಿನ ಭಾರ ಇಳಿಸಬೇಕೆಂದರೆ ಯಾರ ಜೊತೆಗಾದರೂ ಮಾತಾಡಲೇಬೇಕು ಅಂತ ಅನಿಸಿತೋ ಏನೋ. ನಿಧಾನವಾಗಿ ಬಾಯ್ಬಿಟ್ಟರು.

ಸಂಸಾರದ ಬಂಡಿ ಸಾಗಿಸಲು ಇಬ್ಬರೂ ದುಡಿಯಬೇಕಾದ ಜರೂರತ್ತಿರುವ ಈ ಕಾಲದ ದಂಪತಿಗಳವರು. ಇಬ್ಬರೂ ಸಾಫ್ಟವೇರ್ ಉದ್ಯೋಗಿಗಳು. ಕೆಲಸದ ಒತ್ತಡ ಇಬ್ಬರ ಮೇಲೂ ಸಮಪ್ರಮಾಣದಲ್ಲೇ ಇತ್ತು. ಹಾಗಾಗಿ ಒಂದು ದಿನ ಗಂಡ, ಇನ್ನೊಂದು ದಿನ ಹೆಂಡತಿ ಎಂಬಂತೆ ಮನೆಕೆಲಸವನ್ನು ಹಂಚಿಕೊಂಡಿದ್ದರು. ನಿನ್ನೆ ಅಡುಗೆ ಪೂರ್ತಿ ನನ್ನ ಗೆಳತಿಯ ಪಾಳಿ. ಅದ್ಯಾಕೋ ಏನೋ ಬ್ರೇಕ್‍ಫಾಸ್ಟ್ ಮಾಡುವಲ್ಲಿ, ಪಕ್ಕದಲ್ಲೇ ಇದ್ದ ಅಂಗಡಿಯಿಂದ ಬ್ರೆಡ್ ಜಾಮ್ ತರಿಸಿ ತಾನೂ ತಿಂದು ಗಂಡನಿಗೂ ಎತ್ತಿಟ್ಟು ಆಫೀಸಿಗೆ ಹೋಗಿದ್ದಳು. ಅವಳು ಆ ಕಡೆ ಹೋದಂತೆ ಇವರು ಎದ್ದು ಸ್ನಾನ ಮುಗಿಸಿ ತಿಂಡಿಗೆಂದು ಕೂತರೆ, ತಟ್ಟೆಯೊಳಗಿನ ಬ್ರೆಡ್ ನೋಡಿ ಸಿಟ್ಟು ನೆತ್ತಿಗೇರಿ ತಟ್ಟೆಯನ್ನು ಎತ್ತಿ ಒಗೆದು, ಅದೇ ಆವೇಶದಲ್ಲಿ ಅವಳಿಗೆ 'hell with your bloody breakfast' ಎಂದು ಮೆಸೇಜ್ ಕುಟ್ಟಿದ್ದರು. ಅಷ್ಟಕ್ಕೇ ಸುಮ್ಮನಾಗದೇ ಅಡುಗೆ ಮನೆಯ ಅಷ್ಟೂ ಪಾತ್ರೆಗಳನ್ನು ಎತ್ತಿ ಬಿಸಾಕಿದ್ದರು.

ರಾತ್ರಿ ಕೆಲಸ ಮುಗಿಸಿ ಧುಮುಗುಟ್ಟುತ್ತಲೇ ಬಂದ ಅವಳು ಮನೆಯ ದುರವಸ್ಥೆಯನ್ನು ನೋಡಿ ಸ್ಪೋಟಿಸಿಬಿಟ್ಟಳು. ಒಂದು ಕಡೆಯಲ್ಲಿ ತಾನು ಮೇಲೇರದಂತೆ ಕಾಲೆಳೆಯುವ ಸಹೋದ್ಯೋಗಿಗಳು, ಇನ್ನೊಂದು ಕಡೆ ಬಾಸ್ ಕಿರಿಕಿರಿ, ಮತ್ತೊಂದೆಡೆ ಅಂದುಕೊಂಡದ್ದನ್ನು ಸಾಧಿಸಲಾಗುತ್ತಿಲ್ಲ ಅನ್ನುವ ಅಸಹನೆ, ಇತ್ತ ದಿನದಿನಕ್ಕೂ ಕುರುಕ್ಷೇತ್ರವಾಗುತ್ತಿರುವ ಮನೆ. ಅಡುಗೆ, ಕ್ಲೀನಿಂಗ್ ಅಂತ ಎರಡು ದಿನಗಳಿಗೊಮ್ಮೆಯಾದರೂ ಮನೆಯಲ್ಲಿ ಕೋಲಾಹಲ ನಡೆಯುತ್ತಲೇ ಇತ್ತು. ಒಂದೆಡೆ ವೃತ್ತಿ ಬದುಕಿನ ಒತ್ತಡ, ಇನ್ನೊಂದೆಡೆ ವೈಯಕ್ತಿಕ ಬದುಕಿನ ಏರು ಪೇರು ಎರಡನ್ನೂ ನಿಭಾಯಿಸಲಾಗದೆ ತಾನು ಸೋಲುತ್ತಿದ್ದೇನೇನೋ ಅನ್ನಿಸಿ ಎಂದೂ ಸೋಲೊಪ್ಪಿಕೊಳ್ಳಲು ಸಿದ್ಧಳಿಲ್ಲದ ಆಕೆ ಬದುಕೇ ಬೇಡ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಳು. ಅದರ ನೇರ ಪರಿಣಾಮವೇ ಈ ಆತ್ಮಹತ್ಯೆ ಯತ್ನ.

ಆದರೆ ಇಷ್ಟೆಲ್ಲಾ ಯೋಚಿಸಿದರೂ, ನನಗೆಲ್ಲೋ ಇಡೀ ಕಥೆಯಲ್ಲಿ ಕೊಸರು ಕಾಣಿಸುತ್ತಿತ್ತು. ಕೇವಲ ಒಂದು ಮೆಸೇಜ್‍ಗೆ, ಮನೆ ಅಸ್ತವ್ಯಸ್ತವಾಗಿದೆ ಅನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲೆಯಲ್ಲವಲ್ಲ ಅವಳು ಅಂತ ಅನ್ನಿಸುತ್ತಿತ್ತು. ಮತ್ತೂ ಒಂದಿಷ್ಟು ಕೆದಕಿದಾಗ ಅವರು "ಮೆಸೇಜ್ ಮಾತ್ರ ಮಾಡಿದ್ದಲ್ಲ, ಕೆಲಸ ಮುಗಿಸಿ ಬರುವಾಗ ನಾನು ಸ್ವಲ್ಪ ಕುಡಿದಿದ್ಧೆ. ಅಲ್ಲಲ್ಲಿ ಬಿದ್ದಿದ್ದ ಪಾತ್ರೆಗಳನ್ನು, ಚೆಲ್ಲಾಪಿಲ್ಲಿಯಾಗಿದ್ದ ಮನೆಯ ಅಷ್ಟೂ ವಸ್ತುಗಳನ್ನು ಇದ್ದಲ್ಲೇ ಬಿಟ್ಟು ಆಕೆ ತನ್ನ ಲ್ಯಾಪ್‍ಟಾಪ್ ಬಿಡಿಸಿ ಕೂತಿದ್ದಳು. ಬೆಳಗ್ಗಿನ ಅರೆಹೊಟ್ಟೆಯ ಸಿಟ್ಟು ಬೇರೆ ನನ್ನೊಳಗಿತ್ತು. ಅತ್ತಿತ್ತ ನೋಡದೆ ಅವಳ ಮಡಿಲಲ್ಲಿದ್ದ ಲ್ಯಾಪ್‍ಟಾಪನ್ನು ಕುಕ್ಕಿಬಿಟ್ಟೆ. ಅಷ್ಟು ಮಾತ್ರ ಅಲ್ಲದೆ, ನಿನ್ನ ಹೊರತು ಪಡಿಸಿ ಇನ್ಯಾರನ್ನೇ ಮದುವೆ ಆಗಿದ್ರೂ ನಾನು ಸುಖವಾಗಿರುತ್ತಿದ್ದೆ. ಆದ್ರೆ ನನ್ನ ಹಣೆಬರಹದಲ್ಲಿ ಸುಖ ಪಡುವ ಯೋಗವೇ ಬರೆದಿಲ್ಲ ಅಂದ್ರೆ ಯಾರು ಏನು ಮಾಡೋಕೆ ಆಗುತ್ತೆ? ಅಪ್ಪ ಅಮ್ಮನ ಮಾತು ಕೇಳ್ದೆ ತಪ್ಪು ಮಾಡ್ಬಿಟ್ಟೆ ಅಂತಂದು ರೂಮಿನ ಬಾಗಿಲು ಹಾಕಿ ಮಲಗಿದ್ದೆ. ಅದ್ಯಾವ ಹೊತ್ತಿನಲ್ಲಿ ಆಕೆ ಮನೆ ಬಿಟ್ಟು ಊರಿಗೆ ಬಂದ್ಳೋ ಗೊತ್ತಿಲ್ಲ. ನಾನು ಮಾಡಿದ್ದು ತಪ್ಪು ಎಂದು ಗೊತ್ತಾಗುವಾಗ, ಕುಡಿದಿದ್ದರ ಅಮಲು ಇಳಿಯುವಾಗ ಆಕೆ ಮನೆಯಲ್ಲಿರಲಿಲ್ಲ. ಮುಂದೇನು ಅಂತ ಯೋಚಿಸುತ್ತಾ ಕುಳಿತಿದ್ದಾಗ ಮಾವ ಕರೆ ಮಾಡಿ ಇಲ್ಲಿವಳು ನಿದ್ರೆ ಮಾತ್ರೆ ಕುಡಿದ ವಿಷಯ ತಿಳಿಸಿದರು. ತಕ್ಷಣವೇ ಹೊರಟು ಬಂದೆ" ಎಂದು ಮತ್ತೆ ಮೌನವಾದರು.

ಐದು ವರ್ಷಗಳ ಕಾಲ ಪ್ರೀತಿಸಿ, ಪರಸ್ಪರರನ್ನು ಅರ್ಥ ಮಾಡಿಕೊಂಡು ಅಥವಾ ಹಾಗೆಂದು ಭ್ರಮಿಸಿ, ಕೇವಲ ಆರು ತಿಂಗಳುಗಳ ಹಿಂದೆಯಷ್ಟೇ ಮನೆಯವರನ್ನು ಕಾಡಿ ಬೇಡಿ, ಅದು ಆಗದೇ ಇದ್ದಾಗ ಎದುರಿಸಿ, ಬೆದರಿಸಿ ಮದುವೆಯಾಗಿದ್ದವರವರು. ಪ್ರೀತಿ ಮತ್ತು ಮದುವೆಯ ಸಂಕ್ರಮಣ ಕಾಲದಲ್ಲಿ ಆಕೆ, ಕೃಷ್ಣನ ಕೊಳಲಿಗೆ ತಾನೇ ನೇಯ್ದ ಕುಚ್ಚು ಕಟ್ಟುವ ರಾಧೆಯಷ್ಟೇ ಮಧುರವಾಗಿ "ದುರ್ಬೀನು ಹಾಕಿ ಹುಡುಕಿದರೂ ಇವನಿಗಿಂತ ಒಳ್ಳೆಯ ಗಂಡ ಸಿಗಲಾರ" ಅನ್ನುತ್ತಿದ್ದಳು. ಅವರಾದರೂ ಅಷ್ಟೆ, "ಇವಳಿಗಿಂತ ಮೀರೆಯಿಲ್ಲ" ಎಂದು ಸಿಹಿ ಸಿಹಿಯಾಗಿ ಕೊಂಡಾಡುತ್ತಿದ್ದರು. ಆದರೆ ಮದುವೆಯಾದ ಆರು ತಿಂಗಳಲ್ಲಿ ಈ ಪರಿ ಬದಲಾವಣೆ! ಅದೂ ಒಬ್ಬರನೊಬ್ಬರನ್ನು ಭರಿಸಲಾಗದಷ್ಟು ಬದುಕು ದುರ್ಭರವಾಗಿಬಿಡ್ತಾ?

ಯಾಕೋ ನನಗೆ ತಕ್ಷಣ ನೆನಪಿಗೆ ಬಂದದ್ದು, ಅದ್ಯಾವುದೋ ಊರಿನಿಂದ ಬದುಕು ಕಟ್ಟಿಕೊಳ್ಳಲೆಂದು ಇಲ್ಲಿಗೆ ಬಂದು ಮಡಕೆ ಮಾಡಿ, ಮಾರಿ ಜೀವಿಸುವ ಕುಂಬಾರ ಕುಟುಂಬ. ಪ್ರತಿ ತಿಂಗಳ ಕೊನೆಯ ಭಾನುವಾರ ಮನೆಮನೆಗೆ ಮಡಕೆ ಮಾರಲೆಂದು ಬರುವ ಮುನಿಯಮ್ಮ, ಮಡಕೆ ಕೊಂಡರೂ, ಕೊಳ್ಳದಿದ್ದರೂ ಎಲೆ ಅಡಕೆ ಮೆಲ್ಲುತ್ತಾ ಒಂದೆರಡು ನಿಮಿಷವಾದರೂ ಮಾತಿಗೆ ಕೂರುತ್ತಾರೆ. ಊಟ ಆಯ್ತಾ? ಊಟ ಮಾಡ್ತೀರಾ? ಅಂತ ಪ್ರತಿ ಸಲ ಕೇಳುವಾಗ್ಲೂ 'ಇಲ್ರವ್ವ, ಗಂಜಿಗೆ ನೀರು ಇಟ್ಬಿಟ್ಟು ಬಂದಿದ್ದೀನಿ, ನಾ ವೋಗೋದ್ರೊಳಗೆ ಸಾರು ಮಾಡಿಡ್ತಾನೆ. ವೋಗಿ ಒಟ್ಗೆ ಉಣ್ತೀವಿ' ಅಂತ ಅನ್ನುತ್ತಾರೆ. ಆಗೆಲ್ಲಾ ನನಗೆ, ಟಿ.ವಿ.ಸ್ಟುಡಿಯೋಗಳಲ್ಲಿ ನಡೆಯುವ ಅತಿರೇಕದ ಸಮಾನತೆಯ ಚರ್ಚೆ, ಸ್ತ್ರೀ ಸ್ವಾತಂತ್ರ್ಯದ ಬಗೆಗಿನ ವಾದಗಳು, ನಗ್ನತೆಯೇ ಸ್ವಾತಂತ್ರ್ಯದ ಪರಮಾವಧಿ ಎಂದು ಸಾರುವ ದೀಪಿಕಾಳ ಮೈ ಚಾಯ್ಸ್... ಇವ್ಯಾವೂ ಗೊತ್ತೇ ಇಲ್ಲದ ಈ ಮುನಿಯಮ್ಮ ನಮ್ಮೆಲ್ಲರಿಗಿಂತಲೂ ಹೆಚ್ಚು ಸ್ವಾಭಿಮಾನಿ ಮತ್ತು ಸ್ವತಂತ್ರ ವ್ಯಕ್ತಿತ್ವ ಇರುವವಳು ಅನಿಸುತ್ತದೆ. ತಾನು ಸ್ವತಂತ್ರೆ ಅಂತ ಅನ್ನುತ್ತಲೇ ತನ್ನೊಳಗಿನ ಅಷ್ಟೂ ಅಸಹಾಯಕತೆಗಳನ್ನು ಸೋಗಿನ ಮುಖವಾಡದೊಳಗೆ ಮುಚ್ಚಿಟ್ಟು ಬದುಕುವ ನಮ್ಮಂತವರಿಗಿಂತ ಇದ್ದುದನ್ನು ಇದ್ದಂತೆ ಹೇಳಬಲ್ಲ ಛಾತಿ ಇರುವ ಆಕೆಯೇ ಹೆಚ್ಚು ಪ್ರಾಮಾಣಿಕಳು ಅಂತ ಅನಿಸುತ್ತದೆ.

ಈಗ ಅರ್ಧ ಗಂಟೆಯ ಮುಂಚೆಯಷ್ಟೇ ಐ.ಸಿ.ಯುನಿಂದ ಹೊರಬಂದ ಡಾಕ್ಟರ್ she is alright ಅಂದ್ರು. ಅವಳನ್ನೀಗ ನೋಡಬಹುದಾ ಸರ್ ಎಂದು ಕೇಳುವಷ್ಟರಲ್ಲಿ ಕೈಲಿದ್ದ ಮೊಬೈಲ್ ವೈಬ್ರೇಟ್ ಆಗಿತ್ತು.  ನನ್ನ ಟ್ಯಾಗ್ ಮಾಡಿದ್ದ ಯಾರದೋ ಫೇಸ್‍ಬುಕ್ ಅಪ್ಡೇಟ್‍ಗೆ ಮತ್ತಿನ್ಯಾರೋ ಕಮೆಂಟಿಸಿದ್ದರು. ಆ ಹೊತ್ತಲ್ಲೂ ಕಣ್ಣು ಮೊಬೈಲ‍ನಲ್ಲೇ ಕೀಲಿಬಿಟ್ಟಿತು. ನೋಡಿದರೆ ಇದೇ ಗೆಳತಿ ಮೂರು ದಿನಗಳ ಹಿಂದೆಯಷ್ಟೇ ಯಾವುದೋ ಹಿಲ್‍ಸ್ಟೇಷನ್‍ನಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿ 'Life is so beautiful' ಎಂದು ಸ್ಟೇಟಸ್ ಬರೆದುಕೊಂಡಿದ್ದಳು. ಇಲ್ಲೀಗ ಅದೇ ಬ್ಯೂಟಿಫುಲ್ ಲೈಫ್ ಐ.ಸಿ.ಯು ಒಳಗಡೆ ಒದ್ದಾಡುತ್ತಿದೆ.

ತಾನು 'ಪರಮ ಸುಖಿ' ಅನ್ನುವ ಅಪ್ಪಟ ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಜಗತ್ತಿಗೇ ಸಾರಬೇಕಾದ ಅನಿವಾರ್ಯತೆ ಸೃಷ್ಟಿಸಿರುವ ಸೋಶಿಯಲ್ ಮೀಡಿಯಾಗಳ ವರ್ಚುವಲ್ ಜಗತ್ತು ಮತ್ತು ಅಣತಿ ದೂರದಿಂದಷ್ಟೇ ಸಾವಿನಿಂದ ತಪ್ಪಿಸಿಕೊಂಡ ಗೆಳತಿ ಐ.ಸಿ.ಯು ಒಳಗಡೆ. ಎಲ್ಲಕ್ಕಿಂತ ಮುಖ್ಯವಾಗಿ ವರ್ಚುವಲ್ ಜಗತ್ತಿನ ನಿಷ್ಠುರತೆ, ಕಠೋರತೆಯ ಕುರಿತು ಮಾತಾಡುತ್ತಲೇ ಇದೇ ಆಸ್ಪತ್ರೆಯ ನಿರ್ಜನ ಕಾರಿಡಾರಲ್ಲಿ ಕೂತು ಅಂಕಣಕ್ಕಾಗಿ ಟೈಪಿಸುತ್ತಿರುವ ನಾನು... ಹೃದಯಸ್ಪರ್ಶಿ ಸಂವೇದನೆಗಳು ಮತ್ತೆಂದೂ ಸಹಜತೆಯತ್ತ ಮರಳದಷ್ಟು ಡಿಜಿಟಲೀಕರಣವಾಗಿಬಿಟ್ಟಿದೆಯೇನೋ...?