ಬುಧವಾರ, ಮಾರ್ಚ್ 29, 2017

ಋತು

ಅಲ್ಲೆಲ್ಲೋ ಇಟ್ಟು ಮರೆತ
ಬೀಜವೊಂದು ಮೊಳಕೆಯೊಡೆದಾಗ
ಎದೆಯೊಳಗೊಂದು ಸಂಕಟದ
ಮುಳ್ಳು ಚಳ್ಳೆನ್ನುತ್ತದೆ

ಸಂಭ್ರಮದಿಂದ ರಜಸ್ಸನು
ಹಿಂದೊಮ್ಮೆ ಇದಿರುಗೊಳ್ಳುತ್ತಿದ್ದುದು
ಸುಳ್ಳೇ ಸುಳ್ಳೇನೋ?

ಕಿಬ್ಬೊಟೆಯಾಳದ ಹಸಿ ಹಸಿ
ನೋವನ್ನೂ ಹೆಣ್ತನದ ಹೆಮ್ಮೆಯಂತೆ
ಸ್ವೀಕರಿಸಿದ್ದೂ ನೆನಪೇ ಈಗ

ಅರ್ಥವಿಲ್ಲದ ಭಾವದೇರಿಳಿತಗಳು
ಸುಮ್ಮನೆ ಹುಟ್ಟುವ ಯಮಯಾತನೆ
ಎಲ್ಲಾ ನಗುತ್ತಾ ಸಹಿಸಿದ್ದೂ ನಿಜವೆನಿಸುವುದಿಲ್ಲ

ಮ್ಲಾನ ಸಂಜೆಯ ಬೇಗುದಿಗಳನ್ನೆಲ್ಲಾ
ಎದೆಯೊಳಗಿಳಿಸಿಕೊಂಡು ಪ್ರತಿ
ಋತು ತಿರುಗಿಬಿದ್ದಂತೆ ಹರಿವ ನದಿ
ಕಡಲಿನಾಸರೆಯೂ ಬೇಡವೆಂಬಂತೆ
ಮೌನವಾಗುತ್ತದೆ

ಮತ್ತೆ ಎಣಿಕೆ ಶುರುವಾದಂತೆ
ಜೀವ ಭವ ಪಡೆಯುತ್ತದೆಂಬ
ನಂಬಿಕೆಯ ನದಿಯ ಹರಿವು ಸರಾಗ
ಮತ್ತೊಂದು ಋತು ತಿರುಗಿ ಬೀಳುವವರೆಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ