ಬುಧವಾರ, ಡಿಸೆಂಬರ್ 30, 2015

ಕಾರಣವಿಲ್ಲದ ಈ ಇಷ್ಟವಾಗದಿರುವಿಕೆಗೆ ಏನು ಕಾರಣ?

ಕೆಲವೊಮ್ಮೆ ನಾವು ನೀವೆಲ್ಲರೂ ಕರಾರುವಕ್ಕಾಗಿ ಹೀಗೇ ಆಡಿಬಿಡುತ್ತೇವೆ...

ಪಂದ್ಯ ಮುಗಿಯಲು ಒಂದೇ ಒಂದು ಓವರ್ ಬಾಕಿ ಇರುತ್ತದೆ. ನಮ್ಮವರ ಗೆಲುವಿಗೆ ಬೇಕಾಗಿರುವುದು 8 ರನ್. ಎದುರಾಳಿ ಬೌಲರ್ ಡೇಲ್ ಸ್ಟೈನ್. ಕ್ರೀಸಲ್ಲಿರುವುದು ಕ್ಯಾಪ್ಟನ್ ಕೂಲ್, ಮತ್ತೊಂದು ಕಡೆ ಆರ್.ಅಶ್ವಿನ್. ಮೊದಲ ಬಾಲ್ ಗೆ ಎರಡು ರನ್. ಈಗುಳಿದಿರುವುದು ಐದೇ ಬಾಲ್. ಎರಡನೇ ಬಾಲ್ ವೇಸ್ಟ್ ಆಯ್ತು, ನೋಡ ನೋಡುತ್ತಿದ್ದಂತೆಯೇ ಮೂರನೆಯದೂ ವೇಸ್ಟ್. ತುದಿ ಬೆರಳಲ್ಲಿ ನೆಲ ಕೆರೆಯುತ್ತಾ ಒಂದು ಸಣ್ಣ ಅಸಹನೆ ಮತ್ತು ಚಡಪಡಿಕೆಯೊಂದಿಗೆ ಖುರ್ಚಿಗಂಟಿಕೊಂಡು ಕುಳಿತ ನಾವು ಒಮ್ಮೆ ಸಣ್ಣಗೆ ಕದಲುತ್ತೇವೆ. ನಾಲ್ಕನೆಯದೂ ವೇಸ್ಟ್. ಈಗ ಎರಡು ಬಾಲ್ ಗಳಲ್ಲಿ 6 ರನ್ ಬೇಕೇ ಬೇಕು. ಅಸಹನೆ ಸಿಡಿಮಿಡಿಗೆ ತಿರುಗುತ್ತದೆ. ಐದನೇ ಬಾಲ್ ಗೆ ಧೋನಿ ಬ್ಯಾಟನ್ನು ಗರಗರನೇ ತಿರುಗಿಸುತ್ತಾ ಹೆಲಿಕಾಫ್ಟರ್ ಶಾಟ್ ನೊಂದಿಗೆ ಬಾಲನ್ನು ಬೌಂಡರಿ ಗೆರೆಯಾಚೆ ದಾಟಿಸಿಬಿಡುತ್ತಾನೆ. ಅಂಪೈರ್ ಸಿಕ್ಸರ್ ಎಂದು ಕೈ ಎತ್ತುತ್ತಿದ್ದಂತೆ ಗೆಲುವು ಅಧಿಕೃತವಾಗಿ ಘೋಷಣೆಯಾಗಿಬಿಡುತ್ತದೆ. ಮನಸ್ಸು ’Waw! What a shot’ ಅಂತ ಉದ್ಗರಿಸುತ್ತದೆ. ಮರುಕ್ಷಣಾನೇ ’ಇದರಪ್ಪನಂತಹ ಸಿಕ್ಸರ್ ನಮ್ಮ ಗಂಗೂಲಿ ಬಾರಿಸುತ್ತಿರಲಿಲ್ಲವೇ? ಬಾಲ್ ಸ್ಟೇಡಿಯಂ ದಾಟಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಗಾಜಿಗೆ ಬಡಿದು ಗಾಜು ಪುಡಿಯಾಗುತ್ತಿತ್ತು ಅನ್ನುವುದೇನು ಸಾಮಾನ್ಯ ವಿಷಯವೇ? ಇಷ್ಟಕ್ಕೂ ಗ್ಲೆನ್ ಮೆಕ್ ಗ್ರಾಥ್ ನಂತಹ ಬೌಲರ್ ಗಳಾಗಲೀ, ಜಾಂಟಿ ರೋಡ್ಸ್ ನಂತಹ ಫೀಲ್ಡರ್ ಗಳಾಗಲೀ ಈಗೆಲ್ಲಿದ್ದಾರೆ? ಸಮರ್ಥ ಎದುರಾಳಿಗಳಿಲ್ಲದಿದ್ದರೆ ಒಂದಲ್ಲ ಎಲ್ಲಾ ಮ್ಯಾಚ್ ಗಳನ್ನು ಗೆದ್ದು ಬಿಡಬಹುದು’ ಅಂತ ವಿತಂಡವಾದ ಮಾಡಿ ಮೊದಲು ಉದ್ಗರಿಸಿದ್ದ ಉದ್ಗಾರವನ್ನೇ ನಿವಾಳಿಸಿ ಎಸೆದು ಬಿಡುತ್ತದೆ.

ಪೂರ್ವಾಗ್ರಹಗಳನ್ನು ಬಿಟ್ಟು ಅವಲೋಕಿಸಿದರೆ ಮೆಕ್ ಗ್ರಾಥ್ ಗೂ ಡೇಲ್ ಸ್ಟೈನ್ ಗೂ ಮತ್ತು ಜಾಂಟಿ ರೋಡ್ಸ್ ಗೂ ಮೈಕಲ್ ಕ್ಲರ್ಕ್ ಗೂ ಅಂತಹ ವ್ಯತ್ಯಾಸವೇನೂ ಇಲ್ಲ ಅನ್ನುವುದು ವೇದ್ಯವಾಗುತ್ತದೆ. ಪವರ್ ಪ್ಲೇ ಐದು ಓವರ್ ಗಳಷ್ಟು ಹೆಚ್ಚಿದೆ ಅನ್ನುವುದನ್ನು ಬಿಟ್ಟರೆ ಆಟದ ನಿಯಮಗಳಲ್ಲೂ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಮತ್ತದು ತುಂಬಾ ಸ್ಪಷ್ಟವಾಗಿ ಮನಸಿಗೂ ಗೊತ್ತಿರುತ್ತದೆ. ಆದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಿರುವುದಿಲ್ಲ. ರಾಶಿ ರಾಶಿ ಸಾಕ್ಷಿಗಳನ್ನು ತಂದು ಕಣ್ಣೆದುರು ಗುಡ್ಡೆ ಹಾಕಿದರೂ ಅದರತ್ತ ಒಮ್ಮೆಯೂ ದೃಷ್ಟಿ ಹರಿಸದೆ ’ಅವನೇನು ಮಹಾ?’ ಅನ್ನುವ ವಾದಕ್ಕೆ ಜೋತುಬಿದ್ದು ಬಿಡುತ್ತದೆ.

ಹಾಗಂತ ಅವನ ಬಗ್ಗೆ ದ್ವೇಷವೇನೂ ಇರುವುದಿಲ್ಲ. ಆಳದಲ್ಲೆಲ್ಲೋ ಅಭಿಮಾನ ಬೆರೆತ ಹೆಮ್ಮೆಯೂ ಇರಬಹುದು. ಆದರೆ ಅದನ್ನೆಂದೂ ನಾವು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಅದು ಒಂಥರಾ ಪ್ರೀತಿಗೂ-ದ್ವೇಷಕ್ಕೂ ಮೀರಿದ ಭಾವ. ಅವನಿಂದ ನಮಗೆ ಯಾವ ತೊಂದರೆಯೂ ಆಗಿರುವುದಿಲ್ಲ, ಅಥವಾ ನಮ್ಮಿಂದ ಅವರೇನೂ ಕಿತ್ತುಕೊಂಡಿರುವುದೂ ಇಲ್ಲ. ಕೆಲವೊಮ್ಮೆ ನಮ್ಮ ಅಸ್ತಿತ್ವದ ಅರಿವೂ ಅವರಿಗಿರುವುದಿಲ್ಲ. ಇಷ್ಟಿದ್ದರೂ ಅವರು ನಮಗಿಷ್ಟವಲ್ಲ. ಯಾಕೆ? ಗೊತ್ತಿಲ್ಲ.

ಇದು ಕೇವಲ ಒಬ್ಬ ಧೋನಿ ಮತ್ತೊಬ್ಬ ಸೌರವ್ ಮಾತ್ರ ಅಂತಲ್ಲ. ಅಮೀರ್-ಶಾರುಖ್, ಪೇಸ್-ಭೂಪತಿ,  ಸೈನಾ-ಜ್ವಾಲಾ, ಫೆಡರರ್- ನಡಾಲ್, ಮೆಸ್ಸಿ-ಡೊನಾಲ್ಡೋ, ಧ್ಯಾನ್ ಚಂದ್- ಬಲ್ಬೀರ್ ಸಿಂಗ್, ತೇಜಸ್ವಿ-ಲಂಕೇಶ್, ಕುವೆಂಪು-ಬೇಂದ್ರೆ, ಆರ್ಯಭಟ- ಬ್ರಹ್ಮಗುಪ್ತ, ಸ್ಟಾಲಿನ್-ಲೆನಿನ್ ಹೀಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೈತ್ಯ ಸಾಧನೆ ಮಾಡಿದ ಇಬ್ಬರಲ್ಲಿ ಒಬ್ಬರನ್ನು  ಮನಸ್ಸು ಮುಕ್ತವಾಗಿ ಇಷ್ಟಪಡುತ್ತದೆ, for no reason. ಮತ್ತೊಬ್ಬರನ್ನು ಅದೇನೇ ಆದರೂ ಇಷ್ಟಪಡುವುದಿಲ್ಲ, once again for no reason. ಇಲ್ಲಿ ವೃತ್ತಿ, ಹೆಸರು ಬೇರೆ ಬೇರೆಯಾಗಿರಬಹುದಷ್ಟೆ, ಆದರೆ ನಮ್ಮ ಅರ್ಥೈಸುವಿಕೆವೆಯ ಪರಿಧಿಯ ಆಚೆಗಿರುವ ಮನಸಿನ ವ್ಯಾಪಾರ ಒಂದೇ ತರ.

ಈ ವೈರುಧ್ಯ ಇಷ್ಟಕ್ಕೇ ಸೀಮಿತವಲ್ಲ. ಗಮನಿಸಿ ನೋಡಿ, ಕೆಲವೊಮ್ಮೆ ನೀವು ಕಾಲೇಜಲ್ಲೋ, ಪಾರ್ಕಲ್ಲೋ, ಆಫೀಸಲ್ಲೋ ಅಥವಾ ಯಾವುದೋ ಹೋಟೆಲಲ್ಲೋ ಗೆಳೆಯನ ಜೊತೆ ಹರಟೆ ಹೊಡೆಯುತ್ತಲೋ, ಹಲವು ದಿನಗಳಿಂದ ಎದೆಯೊಳಗೆ ಬಚ್ಚಿಟ್ಟುಕೊಂದ ನೋವನ್ನು ಹಂಚಿ ಹಗುರಾಗುತ್ತಲೋ ಇರುತ್ತೀರಿ. ತೀರಾ ಅನಿರೀಕ್ಷಿತವಾಗಿ ಅಪರಿಚಿತನೊಬ್ಬ ಅಲ್ಲಿಗೆ ಬರುತ್ತಾನೆ. ಆತ ನಿಮ್ಮ ಗೆಳೆಯನ ಗೆಳೆಯನೋ, ಸಂಬಂಧಿಯೋ, ಅಣ್ಣನೋ, ತಮ್ಮನೋ, ಭಾವನೋ, ಸಹೋದ್ಯೋಗಿಯೋ ಆಗಿರುತ್ತಾನೆ. ಒಂದೆರಡು ನಿಮಿಷಗಳ ಮಟ್ಟಿಗೆ ನಿಮ್ಮ ಗೆಳೆಯನ ಜೊತೆ ಮಾತನಾಡಿ ಆತ ಹೊರಟು ಹೋಗುತ್ತಾನೆ. ಅದ್ಯಾಕೋ ಗೊತ್ತಿಲ್ಲ, ನಿಮ್ಮಲ್ಲೊಂದು ಸಣ್ಣದಾದ
ಅಸಹನೆ ಹುಟ್ಟಿಕೊಳ್ಳುತ್ತದೆ, ವಿನಾಕಾರಣ ಅವನ ಬಗ್ಗೆ ಒಂದು ತಾತ್ಸಾರ ಮೊಳಕೆಯೊಡೆಯುತ್ತದೆ. ಅವನ ಬಗ್ಗೆ ನಿಮಗೇನೂ ದ್ವೇಷವಿರುವುದಿಲ್ಲ, ಯಾವ ದಿಕ್ಕಿನಿಂದ ನೋಡಿದರೂ ನಿಮಗೂ ಅವನಿಗೂ ಯಾವ ಬಾದರಾಯಣ ಸಂಬಂಧವೂ ಇರುವುದಿಲ್ಲ.  ಅಸಲಿಗೆ ಹಿಂದೆಂದೂ ಅವನನ್ನು ನೀವು ನೋಡಿಯೇ ಇರುವುದಿಲ್ಲ ಮತ್ತು ಮುಂದೆಂದೂ ಅವನನ್ನು ಮತ್ತೆ ಭೇಟಿಯಾಗಬೇಕಾದ ಸಂಭವವೂ ಬರುವುದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅವನ ನಡೆ-ನುಡಿ, ಭಾಷೆ-ಭಾವನೆ, ರೀತಿ ರಿವಾಜುಗಳಲ್ಲಿ ಒಂದಿನಿತೂ ತಪ್ಪು ಕಂಡುಹಿಡಿಯಲಾರಿರಿ. ಇಷ್ಟಿದ್ದರೂ ಆತ ನಿಮ್ಮೊಳಗೆ ಒಂದು ಅಸಹನೆ, ತಿರಸ್ಕಾರ, ತಾತ್ಸಾರ, ಅವ್ಯಕ್ತ ಕಿರಿಕಿರಿಯನ್ನು ಹುಟ್ಟುಹಾಕುತ್ತಾನೆ.

ಕಾರಣವಿಲ್ಲದ ಈ ’ಇಷ್ಟವಾಗದಿರುವಿಕೆಗೆ’ science ಇನ್ನೂ ಸರಿಯಾದ ವ್ಯಾಖ್ಯೆ ಕೊಟ್ಟಿಲ್ಲ, ಸಿಗ್ಮಂಡ್ ಫ್ರಾಯ್ಡ್ ನಂತಹ ಮಹಾ ಮನಶಾಸ್ತ್ರಜ್ಞರಿಗೂ ಈ ವಿಕರ್ಷಣೆಗಿರುವ ಅಸಲಿ ಕಾರಣ ಕಂಡುಹಿಡಿಯಲಾಗಿಲ್ಲ, ನ್ಯಾನೋ ಟೆಕ್ನಾಲಜಿಗೂ ನಿಲುಕದ ಸಂಗತಿಯಿದು. ಇಂಗ್ಲಿಷ್ ಬಲ್ಲ ಕೆಲವರು ಇದನ್ನು body chemistry ಅನ್ನುತ್ತಾರೆ. ಹಾಗಂತ Biologyಯಲ್ಲೋ, Chemistryಯಲ್ಲೋ ಈ ವೈಪರೀತ್ಯಕ್ಕೆ ಕಾರಣ ಹುಡುಕಹೋದರೆ ಅಲ್ಲಿಯೂ ನಿರಾಶೆಯ ಹೊರತು ಇನ್ನೇನೂ ದಕ್ಕದು.  ಕೆಲವು ಅತಿ ಬುದ್ಧಿವಂತರು ಜನ್ಮ ಜನ್ಮಾಂತರಗಳಷ್ಟು ಹಿಂದಕ್ಕೆ ಚಲಿಸಿ ಹಿಂದಿನ ಯಾವುದೋ ಒಂದು ಜನ್ಮದಲ್ಲಿ ಇಬ್ಬರ ಮಧ್ಯೆ ಇದ್ದ ಶತ್ರುತ್ವ ಹೀಗೆ ಪ್ರಕಟವಾಗಿದೆ ಅನ್ನುತ್ತಾರೆ. ಆದ್ರೆ ನಿಜಕ್ಕೂ ಮನಸ್ಸಿನ ಈ ವಿರೋಧಾಭಾಸಕ್ಕೆ ಕಾರಣವೇನು? ಅದು ಸುಪ್ತ ಮನಸ್ಸಿನ ವಿಹ್ವಲತೆಯೇ? ಒಳಗೆಲ್ಲೋ ಬೀಡು ಬಿಟ್ಟಿರುವ ಅಭದ್ರತಾ ಭಾವನೆಯ ಇನ್ನೊಂದು ರೂಪವೇ? ಅಥವಾ ಮತ್ಸರವೇ? ಅಥವಾ ಇವೆಲ್ಲವೂ ಒಟ್ಟುಗೂಡಿದ ಒಂದು ಸ್ಥಿತಿಯೇ? ನನಗೊತ್ತಿಲ್ಲ.

ನಿಮಗೇನಾದರೂ ಗೊತ್ತಿದ್ದರೆ ನನಗೂ ಹೇಳಿಬಿಡಿ...

ಬುಧವಾರ, ಡಿಸೆಂಬರ್ 2, 2015

ಅಳುವ ಈ ದಿಟ್ಟ ಹುಡುಗಿ ನಿಮ್ಮದೇ ಮನೆ ಮಗಳಾಗಿರಬಹುದು...

ಅದೊಂದು ಕಾಲೇಜ್ ವಾರ್ಷಿಕೋತ್ಸವ ಸಮಾರಂಭ. ಅಲ್ಲೊಬ್ಬ ಹುಡುಗಿ. ಹೆಸರು...? ಕೌಸಲ್ಯಾ, ಕೌಸರ್, ಕ್ಯಾಟ್ಲಿನ್   ಅಥವಾ ಇನ್ನಾವುದೋ ಒಂದು. ನಿಮಗಿಷ್ಟ ಬಂದ ಹೆಸರು ಇಟ್ಕೊಳ್ಳಿ. ಗೆಳತಿಯರ ಒತ್ತಡ ತಾಳಲಾರದೆ ಮೊದಲ ಬಾರಿ ಸೀರೆ ಉಟ್ಟು, ತನ್ನ ಸ್ವಭಾವಕ್ಕೆ ಒಗ್ಗಿ ಬರದ ಹೈಹೀಲ್ಡ್ ಚಪ್ಪಲಿ ಮೆಟ್ಟಿದ್ದಳು. ಕೈಗೊಮ್ಮೆ, ಕಾಲಿಗೊಮ್ಮೆ ತೊಡರಿಕೊಳ್ಳುತ್ತಿದ್ದ ಸೀರೆಯನ್ನು ಮನಸ್ಸಲ್ಲೇ ಶಪಿಸುತ್ತಾ ಪದೇ ಪದೇ ತನ್ನ ಗೆಳತಿಯ ಬಳಿ "ಇದನ್ನು ಬಿಚ್ಚಿ ಹಾಕಿ ಚೂಡಿದಾರ್ ಹಾಕ್ಕೊಳ್ಳಾ?" ಅಂತ ಕೇಳುತ್ತಿದ್ದಳು.  ಅವಳ ಗೆಳತಿ ಅವಳಷ್ಟೇ ಮುನಿಯುತ್ತಾ "ಇದೊಂದಿನ ಅಡ್ಜಸ್ಟ್ ಮಾಡ್ಕೊಳ್ಳೇ ಮಾರಾಯ್ತಿ" ಅನ್ನುತ್ತಾ ಅವಳನ್ನು ಸುಮ್ಮನಿರಿಸಲು ಪ್ರಯತ್ನಿಸುತ್ತಿದ್ದಳು. ಅಷ್ಟರಲ್ಲಿ ಸಮಾರಂಭದ ಅತಿಥಿಗಳ ಪಟ್ಟಿಯಲ್ಲಿದ್ದ ಹಿರಿಯರೊಬ್ಬರು ವೇದಿಕೆ ಹತ್ತಲು ಕಷ್ಟಪಡುತ್ತಿದ್ದುದು ನಮ್ಮ ಕಥಾನಾಯಕಿಯ ಕಣ್ಣಿಗೆ ಬಿತ್ತು. ತಾನು ಸೀರೆ ಉಟ್ಟಿದ್ದೇನೆ ಅನ್ನುವುದನ್ನೂ ಮರೆತು ಆಕೆ ಸ್ಟೇಜ್ ಬಳಿ ಓಡಿ ಹೋಗಿ, ಅವರ ಕೈಹಿಡಿದು ವೇದಿಕೆ ಹತ್ತಿಸಿ ಖುರ್ಚಿಯಲ್ಲಿ ಕೂರಿಸಿದಳು. ಇನ್ನೇನು ವೇದಿಕೆ ಇಳಿಯಬೇಕು ಅನ್ನುವಷ್ಟರಲ್ಲಿ ಯಾಕೋ ಅವರಿಗೊಮ್ಮೆ ನಮಸ್ಕರಿಸಬೇಕು ಅನ್ನಿಸಿ ಮತ್ತೆ ಹಿಂದಿರುಗಿ ಬಂದು ಕೈ ಜೋಡಿಸಿದಳು. ಆ ಹಿರಿಯರು "ಹತ್ತು ಗಂಡು ಮಕ್ಕಳನ್ನು ಹೆತ್ತು ಸುಖವಾಗಿ ಬಾಳು ತಾಯಿ" ಅಂದರು. ಜೋಡಿಸಿದ್ದ ಕೈಯನ್ನು ಇಳಿಸಿ " ಯಾಕೆ ಅಂಕಲ್, ಹೆಣ್ಣು ಮಗೂನ ಹೆತ್ರೆ ಸುಖವಾಗಿರೋಕೆ ಆಗಲ್ವಾ?" ಅಂತ ಪ್ರಶ್ನಿಸಿದಳು. ಒಮ್ಮೆ ಗಲಿಬಿಲಿಗೊಂಡ ಅವರು "ನೀನು ಸ್ತ್ರೀವಾದಿಯಾ?" ಅಂತ ಮತ್ತೆ ಪ್ರಶ್ನಿಸಿದರು. ಇವಳು " ಇಲ್ಲ, ನಾನು ಮಾನವತಾವಾದಿ" ಅಂತಂದು ಸ್ಟೇಜ್ ಇಳಿದಳು. ಅವಳ ದಿಟ್ಟತೆಗೆ, ಹೆಣ್ಣಿಂದ ಅಸುಖ ಅನ್ನುವ ವಿವೇಚನಾರಹಿತ ಯೋಚನೆಯ ಹಿಂದಿರುವ ಮನಸ್ಥಿತಿಯ ಬಗ್ಗೆ ಅವಳಿಗಿರುವ ಸೂಕ್ಷ್ಮ ಅಸಹನೆಗೆ ಅವತ್ತು ಇಡೀ ವೇದಿಕೆ ತಲೆದೂಗಿತ್ತು.

ಹೀಗಿದ್ದ ಆ ಹುಡುಗಿ ಒಂದಿನ, ಕಾಲೇಜ್ ಪಕ್ಕದಲ್ಲಿರುವ ಕಾಲು ದಾರಿಯಲ್ಲಿ ನಡೆದು ಬರುವ ಜೂನಿಯರ್ ಹುಡುಗಿಯೊಬ್ಬಳನ್ನು ಚುಡಾಯಿಸಿದ ಅನ್ನುವ ಕಾರಣಕ್ಕಾಗಿ ಸ್ಟುಡೆಂಟ್ ಸೆಕ್ರೆಟರಿಗೆ ಇಡೀ ಕಾಲೇಜಿನ ಮುಂದೆ ಚೆನ್ನಾಗಿ ಝಾಡಿಸಿದಳು. ಆ ಹುಡುಗನೋ...? ಅವಕಾಶ ಸಿಕ್ಕಾಗೆಲ್ಲಾ ಪರಮ ಸಂಭಾವಿತನಂತೆ ಫೋಸ್ ಕೊಡುತ್ತಾ, ಆತ್ಮರತಿಗಾಗಿ ಒಂದಿಷ್ಟು ಹುಡುಗರ ಗ್ಯಾಂಗ್ ಕಟ್ಟಿಕೊಂಡು, ತನ್ನಲ್ಲಿ ಇಲ್ಲದಿರುವ ಗುಣಗಳು ಇದೆಯೆಂದು ಮತ್ತೊಬ್ಬರನ್ನು ನಂಬಿಸುತ್ತಾ ಕಾಲ ಕಳೆಯುತ್ತಿದ್ದ ಧೂರ್ತ. ಹೈಸ್ಕೂಲಿನಿಂದಲೂ ಅವನದೇ ಶಾಲೆಯಲ್ಲಿ ಓದಿದ ಆ ಹುಡುಗಿಗೆ ಅವನ ಧೂರ್ತತನದ ಬಗ್ಗೆ ಚೆನ್ನಾಗಿ ಗೊತ್ತಿದ್ದುದರಿಂದ ಆಕೆ ಇವಳನ್ನು ತಡೆಯಲು ತುಂಬಾ ಪ್ರಯತ್ನಪಟ್ಟಳು. ಆದ್ರೆ ನಮ್ಮ ಈ ಕಥಾನಾಯಕಿ ಅದ್ಯಾವುದನ್ನೂ ಲೆಕ್ಕಿಸದೆ ಎಲ್ಲರ ಮುಂದೆ ಅವನ ಮುಖದ ನೀರಿಳಿಸಿದ್ದಳು. ಆತನೂ ಅಷ್ಟೆ, ತಪ್ಪು ಒಪ್ಪಿಕೊಳ್ಳುವವನಂತೆ ತಲೆ ತಗ್ಗಿಸಿ "sorry sister" ಅಂದು ತನ್ನ ಬೈಕ್ ಸ್ಟಾರ್ಟ್ ಮಾಡಿ ಮನೆಗೆ ಮರಳಿದ್ದ. ಅಲ್ಲಿಗೆ ಎಲ್ಲವೂ ಮುಗಿಯಿತೆಂದು ಎಲ್ಲರೂ ಭಾವಿಸಿದ್ದರು.

ಆದ್ರೆ ಅದು ಅಷ್ಟಕ್ಕೆ ಮುಗಿದಿರಲಿಲ್ಲ. ಮರುದಿನ ಆಕೆ ಕಾಲೇಜಿಗೆ ಬರುವ ಹೊತ್ತಿಗೆ, ಬ್ಲ್ಯಾಕ್ ಬೋರ್ಡ್, ಟಾಯ್ಲೆಟ್ ಗೋಡೆ, ಪ್ರಯೋಗಾಲಯ, ಕ್ಯಾಂಪಸ್ ನ ಮರಗಳು, ಕ್ಲಾಸ್ ರೂಮ್ ಕಾರ್ನರ್ ಅಂತ ಸಿಕ್ಕ ಸಿಕ್ಕಲ್ಲೆಲ್ಲಾ ಅವಳ ಬಗ್ಗೆ, ಅವಳ ನಡತೆಯ ಬಗ್ಗೆ, ಅವಳಿಗೂ ಅವಳ ಮೆಚ್ಚಿನ ಸರ್ ಗೂ ಇಲ್ಲದ ಸಂಬಂಧ ಕಲ್ಪಿಸಿ ಅಸಹ್ಯವಾಗಿ ಯಾರೋ ಗೀಚಿ ಬಿಟ್ಟಿದ್ದರು. ಹಿಂದಿನ ದಿನ ನಡೆದುದರ ಪರಿಣಾಮವಿದು ಅನ್ನುವುದು ಅರ್ಥವಾಗಲು ಆಕೆಗೆ ಹೆಚ್ಚು ಸಮಯವೇನೂ ಹಿಡಿಯಲಿಲ್ಲ. ಆದ್ರೆ ಇಂಥವರದೇ ಕೆಲಸವೆಂದು ಬೊಟ್ಟು ಮಾಡಿ ತೋರಿಸಲು ಆಕೆಯ ಬಳಿ ಯಾವುದೇ ಸಾಕ್ಷಿಗಳಿರಲಿಲ್ಲ.

ಇಷ್ಟಾದರೂ ಆಕೆ ಧೃತಿಗೆಡಲಿಲ್ಲ. ಎಲ್ಲಾ ಮುಗಿದೇ ಹೋಯಿತು ಎಂಬಂತೆ ಅಳುತ್ತಾ ಕೂರಲಿಲ್ಲ. ಇಷ್ಟೆಲ್ಲಾ ಆಗಿದ್ದು ನನ್ನಿಂದಲೇ ಅಂತ ಅಳುತ್ತಿದ್ದ ಜೂನಿಯರ್ ಹುಡುಗಿಯ ಬಳಿ ಹೋಗಿ "ಬರ್ದಿರೋದು ನನ್ನ ಬಗ್ಗೆ, ನಾನೇ ಆರಾಮವಾಗಿರುವಾಗ ನೀನೇಕೆ ಸುಮ್ಮನೆ ತಪ್ಪೆಲ್ಲಾ ನಿನ್ನದು ಅನ್ನುವಂತೆ ಅಳ್ತಿದ್ದಿಯಾ? Be a brave girl" ಅಂದು ಬೆನ್ನು ತಟ್ಟಿ ಎದ್ದು ಹೋಗಿ ಪ್ರತಿ ಗೋಡೆ, ಕಾರ್ನರ್, ಮರಗಳ ಮೇಲಿದ್ದ ಬರಹಗಳನ್ನು ಒಂದಕ್ಷರಾನೂ ಬಿಡದೆ ಓದಿ, ಏನೂ ಆಗೇ ಇಲ್ಲವೆಂಬಂತೆ ನಸುನಗುತ್ತಾ ಕ್ಲಾಸಿಗೆ ನಡೆದುಬಂದಳು. ಸದಾ ಆತ್ಮವಿಶ್ವಾಸದಿಂದಿರುವ ಈ ಹುಡುಗಿಯ ಕಣ್ಣಲ್ಲಿ ಇವತ್ತಾದರೂ ಹನಿ ಜಿನುಗಿರಬಹುದಾ ಅಂತ ಅವಲೋಕಿಸಿದರೆ, ಊಹೂಂ, ಅಲ್ಲಿ ನೀರ ಪಸೆಯೂ ಇರಲಿಲ್ಲ. ಅವಳು ಎಂದಿಗಿಂತಲೂ ತುಸು ಹೆಚ್ಚೇ ಅನ್ನುವಷ್ಟು ದೃಢವಾಗಿದ್ದಳು.

ಅಷ್ಟೇ ಅಲ್ಲ, ಬ್ರೇಕ್ ಆಗುತ್ತಿದ್ದಂತೆ ಸ್ಟಾಫ್ ರೂಮಿಗೆ ಹೋಗಿ, ತಲೆ ಮೇಲೆ ಕೈ ಹೊತ್ತು ಕುಳಿತ ತನ್ನ ಉಪನ್ಯಾಸಕರನ್ನು ಕುರಿತು " ಯಾರೋ ಅವಿವೇಕಿಗಳು ಏನೋ ಗೀಚಿದ್ರು ಅಂತ ನೀವ್ಯಾಕೆ ಸರ್ ತಲೆಕೆಡಿಸ್ಕೋತೀರಾ? ಅವ್ರೆಲ್ಲಾ ಮುಂದೆ ನಿಂತು ಹೋರಾಡೋಕೆ ಧೈರ್ಯವಿಲ್ಲದ ಹೇಡಿಗಳು. ಅಂಥವರಿಗೆ ನಾವ್ಯಾಕೆ ಬೆಲೆ ಕೊಡ್ಬೇಕು?" ಅಂದಳು. ತನ್ನ ಇಮೇಜ್ಗಿಂತಲೂ ಅವಳೇನು ಮಾಡಿಕೊಳ್ಳುತ್ತಾಳೋ ಅಂತ ಹೆದರಿದ್ದ ಅವರು ಇವಳ ಮಾತು ಕೇಳಿ "ನಿಂಗೇನೂ ಅನ್ನಿಸುವುದೇ ಇಲ್ವಾ? ಸಮಾಜ ನಿನ್ನ ಬಗ್ಗೆ ಏನೇನೋ ಮಾತಾಡಿಬಿಡುತ್ತೆ ಅಂತ ಭಯವಾಗುವುದಿಲ್ವಾ?" ಅಂತ ಕೇಳಿದರು. ಅವಳು "ನನ್ನ ಆತ್ಮಶುದ್ಧಿಯ ಬಗ್ಗೆ ನಂಗೆ ಅನುಮಾನಗಳೇ ಇಲ್ಲದಿರುವಾಗ ಯಾರೋ ಏನೋ ಅಂದ ಮಾತ್ರಕ್ಕೆ ನಾನೇಕೆ ಭಯಪಟ್ಟುಕೊಳ್ಳಬೇಕು? ನಂಗೆ ಯಾಕಾದ್ರೂ ಏನೇನೋ ಅನ್ನಿಸಬೇಕು?" ಅಂತ ಮರು ಪ್ರಶ್ನಿಸಿದಳು. ಮತ್ತು ಆ ಮೂಲಕವೇ ತಾನೇನೂ ಮಾಡಿಕೊಳ್ಳುವುದಿಲ್ಲ ಅಲ್ಲಿದ್ದ ಎಲ್ಲರಿಗೂ ಪರೋಕ್ಷವಾಗಿ ತಿಳಿಸಿ ಹೊರಬಂದಳು.

ಇತ್ತ, ಇನ್ನೇನು ಅಳುತ್ತಾಳೆ, ರಂಪ ಮಾಡುತ್ತಾಳೆ, ’ನನ್ನಿಂದ ತಪ್ಪಾಯ್ತು, ಕ್ಷಮಿಸಿ’ ಅಂತ ನಮ್ಮ ಮುಂದೆ ನಿಂತು ಗೋಗರೆಯುತ್ತಾಳೆ, ಗೋಡೆಯ ಮೇಲಿನ ಅಷ್ಟೂ ಬರಹಗಳನ್ನು ಅಳಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಾಳೆ ಅಂತೆಲ್ಲಾ ಮನಸ್ಸಲ್ಲೇ ಮಂಡಿಗೆ ಮೆಲ್ಲುತ್ತಿದ್ದವರಿಗೆ, ಹಾಗೇನೂ ಆಗದೆ, ಆಕೆ ಆ ಘಟನೆಗೂ ನನಗೂ ಸಂಬಧವೇ ಇಲ್ಲ ಅನ್ನುವಂತೆ ನಡೆದುಕೊಂಡದ್ದು ನುಂಗಲಾರದ ತುತ್ತಾಗಿತ್ತು. ಅವಳ ರೇಗಿಸಬೇಕೆಂದುಕೊಂಡಿದ್ದ, ತಮ್ಮ ಅಹಂಕಾರದ ಮುಂದೆ ಅವಳನ್ನು ಮಂಡಿಯೂರಿಸಬೇಕೆಂದು ಕೊಂಡಿದ್ದ, ಇನ್ನೆಂದೂ ಅವಳು ನಮ್ಮನ್ನು ಪ್ರಶ್ನಿಸಿದಂತೆ ಮಾಡಬೇಕು ಅಂದುಕೊಂಡಿದ್ದ ಯಾವ ಅವಕಾಶಗಳನ್ನು ಆಕೆ ಅವರಿಗೆ ಒದಗಿಸಿರಲಿಲ್ಲ. ಅತ್ಯಂತ ಪ್ರಬುದ್ಧವಾಗಿ ಪರಿಸ್ಥಿತಿಯನ್ನು ನಿರ್ವಹಿಸಿದ ಅವಳು ’ನಿಮ್ಮ ಅಹಂಕಾರಕ್ಕೆ ತಲೆಬಾಗುವಷ್ಟು ದುರ್ಬಲ ವ್ಯಕ್ತಿತ್ವವಲ್ಲ ನನ್ನದು’ ಅನ್ನುವ ಸಂದೇಶವನ್ನು ತನ್ನ ಉದಾಸೀನತೆಯ ಮೂಲಕವೇ ರವಾನಿಸಿದ್ದಳು.

ಆದ್ರೆ ಇನ್ನೇನು ಅವತ್ತಿನ ಕೊನೆಯ ಅವಧಿ ಮುಗಿಯಲು ಹತ್ತು ನಿಮಿಷಗಳಿವೆ ಅನ್ನುವಾಗ ಕಾಲೇಜ್ ಮ್ಯಾನೇಜರ್ ಅವಳನ್ನು ತನ್ನ ಛೇಂಬರ್ ಗೆ ಕರೆಸಿಕೊಂಡು "ನೋಡಮ್ಮಾ, ಪೊಲೀಸ್, ಕೇಸು, ಕೋರ್ಟ್, ಕಛೇರಿ ಅಂತೆಲ್ಲಾ ಹೋದ್ರೆ ಕಾಲೇಜಿನ ಪ್ರತಿಷ್ಠೆಗೆ ಕುಂದು. ಹಾಗಾಗಿ ಈ ಪ್ರಕರಣ ಠಾಣೆ ಮೆಟ್ಟಿಲು ಹತ್ತುವುದು ಬೇಡ. ನಾವೇ ಆಂತರಿಕ ತನಿಖೆ ಮಾಡಿ ತಪ್ಪಿತಸ್ಥರನ್ನು ಡಿಬಾರ್ ಮಾಡುತ್ತೇವೆ" ಅಂತ ಅವಳು ಠಾಣೆಯ ಮೆಟ್ಟಿಲು ಹತ್ತಬಾರದೆಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಕಾಲೇಜಿನ ಪ್ರತಿಷ್ಠೆಗೋಸ್ಕರ ಒಬ್ಬ ಹೆಣ್ಣಿನ , ಅದೂ ತನ್ನದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಮಾನವನ್ನೂ ಪಣಕ್ಕಿಡಲು ಸಿದ್ಧವಿರುವ ಅವರ ವ್ಯಾಪಾರೀ ಮನೋವೃತ್ತಿಯ ಬಗ್ಗೆ ಹೊಟ್ಟೆಯಾಳದಿಂದ ಎದ್ದು ಬಂದ ಅಸಹ್ಯವನ್ನು ಸಾಧ್ಯವಾದಷ್ಟು ಅದುಮಿಡಲು ಪ್ರಯತ್ನಿಸುತ್ತಾ " ಆಂತರಿಕ ತನಿಖೆಗಳೆಂಬ ನಾಟಕಗಳೇ ಬೇಡ ಸರ್. ನನ್ನ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಮೂಲಕ ಅವರನ್ನು ಪ್ರಶ್ನಿಸುವ ಮನಸ್ಥಿತಿ ಇರುವವರೇ ಇಲ್ಲವಾಗಬೇಕು ಅನ್ನುವುದೇ ಅವರ ಉದ್ದೇಶವಾಗಿತ್ತು. ಅದೇ ಅವರಿಂದ ಸಾಧ್ಯವಾಗಿಲ್ಲ ಅಂದಮೇಲೆ ನಾನೇಕೆ ಹೊಲಸನ್ನು ಮೈಮೇಲೆ ಎರಚಿಕೊಳ್ಳುವ ಅಸಹ್ಯ ಮಾಡಿಕೊಳ್ಳಲಿ? ಆದ್ರೆ ಸರ್, ಹೀಗೆ ಹೆಣ್ಣೊಬ್ಬಳ ನಡತೆಯ ಬಗ್ಗೆ ಹೀಗೆಲ್ಲಾ ಗೀಚಿ ತಮ್ಮ ಮನಸ್ಸಿನ ವಿಕೃತಿ ಹೊರಹಾಕಿದವರ ಬಗ್ಗೆ ಒಂದು ಮಾತೂ ಆಡದೆ ಕಾಲೇಜಿನ ಪ್ರತಿಷ್ಠೆ ಅಂತ ನನಗೇ ಎಚ್ಚರಿಕೆ ನೀಡುತ್ತಿದ್ದೀರಲ್ಲಾ? ಒಂದು ವೇಳೆ ಇದೇ ರೀತಿ ನಿಮ್ಮ ಮನೆಯಲ್ಲೊಬ್ಬರ ಬಗ್ಗೆ ಹೀಗೆ ಯಾರೋ ಸಾರ್ವಜನಿಕವಾಗಿ ಕೆಸರೆರೆಚಿದರೆ ಆಗಲೂ ನೀವು ಇಷ್ಟೇ ನಿಷ್ಠುರವಾಗಿ ಮಾತಾಡುತ್ತಿದ್ದಿರಾ?" ಎಂದು ಪ್ರಶ್ನಿಸಿ ಅವರ ಛೇಂಬರ್ ನಿಂದ ಹೊರಗಡಿಯಿಟ್ಟಳು.

ಹಾಗೆ ಬಂದವಳು ಕಾಲೇಜು ನಿರ್ಮಾನುಷ್ಯವಾಗಿದೆ ಅನ್ನುವುದನ್ನು ಖಚಿತಪಡಿಸಿಕೊಂಡು ಅಲ್ಲೇ ಇದ್ದ ಲೇಡೀಸ್ ರೂಮ್ ಹೊಕ್ಕು ಒಳಗಿಂದ ಅಗುಳಿ ಹಾಕಿ ಬೋರಿಟ್ಟು ಅಳತೊಡಗಿದಳು. ಬೆಳಗ್ಗಿನಿಂದ ತಡೆಹಿಡಿದುಕೊಂಡಿದ್ದ ಕಣ್ಣೀರು ಬಿರುಸು ಭರಿಸಲಾಗದೆ ಇನ್ನು ಸಾಧ್ಯವೇ ಇಲ್ಲ ಎಂಬಂತೆ ಎರಡೂ ಕಣ್ಣುಗಳಿಂದ ದಳದಳನೆ ಉರುಳತೊಡಗಿತು. ಇಡೀ ಕಾಲೇಜಲ್ಲಿ brave girl ಅಂತ ಅನ್ನಿಸಿಕೊಂಡವಳು ’ತನ್ನನ್ನು ಸಾಂತ್ವನಿಸಲು ಹೆಗಲೊಂದು ಇರುತ್ತಿದ್ದರೆ...?’ ಅಂತ ಒಂಟಿಯಾಗಿ ಹಂಬಲಿಸತೊಡಗಿದಳು. ’ಇಷ್ಟು ದೊಡ್ಡ ಪ್ರಪಂಚದಲ್ಲಿ ನಾನು ಎಷ್ಟೊಂದು ಒಂಟಿ, ಕೆಲವರ ಪಾಲಿಗೆ ನಾನು "ಅವಳಾ? ಸಹಿಸ್ಕೋತಾಳೆ ಬಿಡು" ಅನ್ನುವ ನಿರ್ಲಕ್ಷ್ಯ, ಇನ್ನು ಕೆಲವರ ಪಾಲಿಗೆ "ಎಲ್ಲವನ್ನೂ ಎದುರಿಸುವ ಧೈರ್ಯ ದೇವರು ಅವಳಿಗೆ ನೀಡಿದ್ದಾನೆ, ನಮಗೇಕೆ ಅವಳ ಉಸಾಬರಿ?" ಅನ್ನುವ ಮತ್ಸರ. ಆದ್ರೆ ನನಗೇನು ಬೇಕು ಅನ್ನುವುದನ್ನು ಕೇಳುವ ಒಂದು ಜೀವವೂ ನನ್ನ ಜೊತೆಗಿಲ್ಲ. ಅಳಬೇಕೆನಿಸಿದಾಗೆಲ್ಲಾ ಅಳಲಾಗದ, ಏನೇ ಆದರೂ ಏನೂ ಆಗಿಲ್ಲವಂಬತೇ ಇರಬೇಕಾದ ನನ್ನ ಅಸಹಾಯಕತೆ, ಧೈರ್ಯ, ಸ್ಥೈರ್ಯ, ಬುದ್ಧಿವಂತಿಕೆಗಳಂತಹ ದೊಡ್ಡ ದೊಡ್ದ ಮಾತುಗಳಾಚೆ ನಾನೂ ಮನುಷ್ಯಳೇ, ಎಲ್ಲರಂತೆ ನನಗೂ ನೋವಾಗುತ್ತದೆ, ನನ್ನೊಳಗೂ ವಿಷಾದಗಳಿವೆ ಅನ್ನುವ ಸತ್ಯ ಯಾರೂ ಅರ್ಥಮಾಡಿಕೊಳ್ಳುವುದೇ ಇಲ್ಲ’ ಅಂತೆಲ್ಲಾ ಅವಳಿಗೆ ಅನ್ನಿಸತೊಡಗಿತು. ಮರುಕ್ಷಣ, ’ಹೀಗೆಲ್ಲಾ ಒಂಟಿಯಾಗಿ ಕೂತು ಅತ್ತರೆ ನನ್ನೆಲ್ಲಾ ಸಮಸ್ಯೆಗಳು ಬಗೆಹರಿಯುತ್ತಾ? ಹೀಗೆ ಆತ್ಮವಿಶ್ವಾಸ ಕಳ್ಕೊಂಡು ಮೂಲೆ ಸೇರಿ ಅತ್ರೆ ನಗುವವರ ಮುಂದೆ ಎಡವಿ ಬಿದ್ದಂತಾಗುದಿಲ್ಲವೇ? ಇಷ್ಟಕ್ಕೂ ನಾನು ತಪ್ಪು ಮಾಡಿಲ್ಲ ಅಂದಮೇಲೆ ಅಳುವುದಾದರೂ ಯಾಕೆ? ಕೇವಲ ಗೋಡೆಯ ಮೇಲಿನ ಬರಹ ನನ್ನ ಸ್ಥಿರತೆಯನ್ನೇ ಕದಡಿ ಹಾಕುವಷ್ಟು ಶಕ್ತಿಯುತವಾಗಿದೆಯೇ?  ಅಂದ್ರೆ ಸಣ್ಣದೊಂದು ಸವಾಲನ್ನು ಎದುರಿಸಲಾರದಷ್ಟು ನನ್ನ ಆಂತರ್ಯ ಬಲಹೀನವಾಗಿದೆಯಾ? ಅಥವಾ ಇವತ್ತಿನ ಘಟನೆಯ negative waves  ನನ್ನ ಮೇಲೆ ಈ ರೀತಿ ಪ್ರಭಾವ ಬೀರುತ್ತಿದೆಯೇ? ಇಲ್ಲ, ಹಾಗಾಗಬಿಡಕೂಡದು, ಯಾವ ಕಾರಣಕ್ಕೂ ನನ್ನ ವ್ಯಕ್ತಿತ್ವ ದುರ್ಬಲವಾಗಬಾರದು’ ಅಂತಂದುಕೊಂಡು ಕಣ್ಣೀರು ಒರೆಸಿ ಮತ್ತೆ ಹಳೆ ಆತ್ಮವಿಶ್ವಾಸದಿಂದ ಕೋಣೆಯಿಂದ ಹೊರಬಂದಳು. ಕ್ಲಾಸ್ ರೂಮಿಗೆ ಹೋಗಿ ತನ್ನ ಬ್ಯಾಗ್ ಎತ್ತಿಕೊಂಡು, ಗೋಡೆ ಬರಹಗಳನ್ನು ಅಳಿಸಲು ಪೈಂಟರ್ ಗಳಿಗೆ ನಿರ್ದೇಶನ ನೀಡುತ್ತಿದ್ದ ಕಾಲೇಜ್ ಕ್ಲರ್ಕ್ ಬಳಿ ಹೋಗಿ "ಅಣ್ಣಾ, ಅರ್ಜೆಂಟೇನೂ ಇಲ್ಲ, ನಿಧಾನಕ್ಕೆ ಮಾಡಿ ಸಾಕು. ತುಂಬಾ ಹೊತ್ತಾಯ್ತು. ನಿಮ್ಮನೆಯಲ್ಲಿ ನಿಮಗೋಸ್ಕರ ಕಾಯುವವವರನ್ನು ಇನ್ನೂ ಕಾಯಿಸಬೇಡಿ. ಮನೆಗೆ ಹೋಗಿ" ಅಂತಂದು ಮುಗಳ್ನಗೆ ಬೀರಿ ಅಲ್ಲಿಂದ ಹೊರಟು ಹೋದಳು.  

Now, my dear readers.... ಇಷ್ಟು ಓದಿಯಾದ ಮೇಲೆ ನಿಮ್ಮಲ್ಲಿ ಕೆಲವರಿಗಾದರೂ 'ಅರೆ! ಆ ಹುಡುಗಿಯಂಥವರು ಇಲ್ಲೇ ಎಲ್ಲೋ ಇದ್ದಾರಲ್ಲಾ' ಅಂತನ್ನಿಸಿರಬಹುದು. ಹಾಗೆ ಅನ್ನಿಸಿದ್ದೇ ಆದಲ್ಲಿ ಬನ್ನಿ, ಒಂದೆರಡು ನಿಮಿಷ ಕೂತು ಮಾತಾಡೋಣ, ಜೊತೆಗೆ ಒಂದು ಕಪ್ ಟೀ/ಕಾಫಿ ಇರಲಿ ಅಂತಂದರೂ ನನ್ನದೇನೂ ಅಭ್ಯಂತರವಿಲ್ಲ.

ನಿಜ ನಮ್ಮ, ನಿಮ್ಮೆಲ್ಲರ ನಡುವೆ 'ದಿಟ್ಟೆ' ಅಂತನ್ನಿಸಿಕೊಂಡು ಬದುಕುತ್ತಿರುವ ಹುಡುಗಿಯರಿರುತ್ತಾರೆ . ತಾನುಂಟು, ಮೂರು ಲೋಕವುಂಟು ಎಂಬಂತಿರುತ್ತಾರೆ ಅವರು. ತುಂಬಾ ದೂರವೇನೂ ಹೋಗಬೇಕಿಲ್ಲ, 'ಆಕೆ' ನಮ್ಮದೇ ಮನೆ ಮಗಳಾಗಿರಬಹುದು, ನಮ್ಮ ಸ್ನೇಹಿತನ/ತೆಯ ತಂಗಿಯೋ ಅಕ್ಕನೋ ಆಗಿರಬಹುದು, ನಮ್ಮ ಕಣ್ಣೆದುರಲ್ಲೇ ಬೆಳೆದ ಪಕ್ಕದ ಮನೆಯ ಪುಟಾಣಿಯಾಗಿರಬಹುದು ಇಲ್ಲ ನಮ್ಮ ಪತ್ನಿಯೋ,ಗೆಳತಿಯೋ, ಪ್ರೇಯಸಿಯೋ, ನಾದಿನಿಯೋ, ಅತ್ತಿಗೆಯೋ, ಅಮ್ಮನೋ,  ಸಂಬಂಧಿಕಳೋ ಆಗಿರಬಹುದು. ಆಕೆ ಎಲ್ಲವನ್ನೂ, ಎಲ್ಲರನ್ನೂ ಎದುರಿಸುತ್ತಾಳೆ, ಸಹಿಸಿಕೊಳ್ಳುತ್ತಾಳೆ ಅಂದ್ರೆ ಅವಳಿಗೆ ಭಾವನೆಗಳೇ ಇಲ್ಲ, ನೋವಾಗುವುದೇ ಇಲ್ಲ ಎಂದರ್ಥವಲ್ಲ. ಬದಲಾಗಿ ಆಕೆ ನೋವಲ್ಲೂ ನಗುತ್ತಾಳೆ,  ತಾನಗಾಗುವ ನೋವು ತನ್ನವರ ಕಣ್ಣಲ್ಲಿ ನೀರು ತರಿಸಬಾರದು ಎಂದು ತನ್ನ ನೋವನ್ನು ಬಚ್ಚಿಟ್ಟುಕೊಳ್ಳುತ್ತಾಳೆ ಎಂದರ್ಥ. ಎಂತಹ ಧೀಶಕ್ತಿ ಇರುವ ಹುಡುಗಿಯಾದರೂ ಕೆಲವೊಮ್ಮೆ ಮತ್ತೊಬ್ಬರ ಆಸರೆಗಾಗಿ ಕೈ ಚಾಚುತ್ತಾಳೆ, ಒಂದು ಪುಟ್ಟ ಕಂಫರ್ಟ್ ಗಾಗಿ ಹಂಬಲಿಸುತ್ತಾಳೆ. ಆಗ 'ನಿನ್ನ ಯೂಸ್ಲೆಸ್ ಧೈರ್ಯ ಈಗೆಲ್ಲಿ ಹೋಯಿತು?' ಅಂತ ಹಂಗಿಸದಿರೋಣ. ಅವಳ ಮನಸ್ಥಿತಿಯನ್ನು ಅರ್ಥಮಾಡ್ಕೊಂಡು ಅವಳು ಬಯಸುವ ಆಸರೆ, ಕಂಫರ್ಟ್ ಕೊಡಲು ಪ್ರಯತ್ನಿಸೋಣ, ಅದು ಸಾಧ್ಯವಾಗದಿದ್ದರೆ ಅವಳನ್ನು ಅವಳಷ್ಟಕ್ಕೆ ಬಿಟ್ಟುಬಿಡುವ. ತನ್ನನ್ನು ತಾನೇ ಸಂಭಾಳಿಸಿಕೊಳ್ಳುತ್ತಾಳವಳು. ಅದು ಬಿಟ್ಟು ಹಂಗಿಸಿ, ರೇಗಿಸಿ 'ಅವಳತನ'ದ ಹತ್ಯೆ ಮಾಡಹೊರಡುವುದು ಬೇಡ. ಹಾಂ! ಕೊನೆಯದಾಗಿ ಮತ್ತೊಂದು ಮಾತು, ನಮ್ಮ ನಡುವೆ ಇರುವ ಇಂತಹ 'ದಿಟ್ಟ ಹುಡುಗಿ'ಯರು ಕಣ್ಣೆದುರಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಹೊರಟರೆ 'ನಿನಗೇಕೆ ಊರ ಉಸಾಬರಿ' ಅಂತಂದು ಅವಳ ಸದುದ್ದೇಶದ ಪ್ರಯತ್ನಕ್ಕೆ ತಣ್ಣೀರೆರಚಿ ಅವಳ ಆತ್ಮಾರ್ಥತೆಯ ಭಂಜಕರಾಗದಿರೋಣ

ಸೋಮವಾರ, ಅಕ್ಟೋಬರ್ 26, 2015

"ಹುಡುಗರೇ ಹೀಗೆ...." ಅನ್ನುವ ನಿರ್ಧಾರಕ್ಕೆ ಬರುವ ಮುನ್ನ



 "ನೀವು ಹುಡುಗರೇ ಹೀಗೆ, ಒಪ್ಪಿಕೊಳ್ಳುವವರೆಗೂ ನಮ್ಮ ಹಿಂದೆ ಮುಂದೆ ಸುತ್ತುತ್ತಾ, ನೀನೆ ಪ್ರಾಣ, ನೀನೇ ಜೀವ, ನೀನಿಲ್ಲದೆ ಬದುಕಲಾರೆ, ನಿನಗೋಸ್ಕರ ಸೂರ್ಯ, ಚಂದ್ರರನ್ನೂ ಕೈಲಿ ಹಿಡಿದು ತರಬಲ್ಲೆ, ಹರಿಯೋ ನದಿಯನ್ನು ನಿಲ್ಲಿಸಬಲ್ಲೆ, ನೀನು ಸಂಗಾತಿಯಾದರೆ ಒಂದಿಷ್ಟು ದಿನಗಳಾದರೂ ಹೆಚ್ಚಿಗೆ ಬದುಕಬಲ್ಲೆ. ಒಪ್ಪಿಕೋ ಹುಡುಗಿ ಅಂತೆಲ್ಲಾ ನಮ್ಮನ್ನು ಮರುಳು ಮಾಡುತ್ತೀರಿ. ಒಮ್ಮೆ ಒಪ್ಪಿಕೊಂಡರೋ...? ಮುಗಿಯಿತು.  Taken for granted  ಅನ್ನೋ ರೀತಿ ವರ್ತಿಸತೊಡಗುತ್ತೀರಿ. ಹಿಂದೆ ಮಾಡಿದ್ದ ಆಣೆ-ಪ್ರಮಾಣ, ನಡುರಾತ್ರಿಯ ಗೋಗರೆತಗಳು, ಸಿಹಿ ಮುಂಜಾನೆಯ ಶುಭಾಶಯಗಳು, ಮುಸ್ಸಂಜೆಯ ಕಾಳಜಿಗಳು ಎಲ್ಲಾ ಮಾಯವಾಗಿಬಿಡುತ್ತದೆ. ’ಅವಳಾ..?’ ಅನ್ನುವ ನಿರ್ಲಕ್ಷ್ಯ ಜೊತೆಯಾಗಿಬಿಡುತ್ತದೆ. ಗೆಳೆಯ ಅಂತಲೋ,  cousine brother  ಅಂತಲೋ ಇನ್ನೊಬ್ಬ ಹುಡುಗನ ಜೊತೆ ಮಾತಾಡಿದರಂತೂ ಮುಗಿದೇ ಹೋಯಿತು, ಅಕಾರಣ ನಮ್ಮ ಕ್ಯಾರಕ್ಟರನ್ನೇ ಸಂಶಯಿಸುತ್ತೀರಿ. ಅಲ್ಲಿಗೆ ನಿಮ್ಮ ಮೇಲೆ ನಾವು ಹುಡುಗಿಯರು ಅಮಾಯಕವಾಗಿ ಇಟ್ಟ ನಂಬುಗೆ, ಪ್ರೀತಿ ಬಿರುಕುಬಿಡುತ್ತದೆ. ನಿಮ್ಮನ್ನು ನಂಬಿದ್ದ ನಮ್ಮ ಮೂರ್ಖತನದ ಬಗ್ಗೆ ನಮಗೇ ಅಸಹ್ಯ ಹುಟ್ಟಿ ಬಿಡುತ್ತದೆ. ಅಲ್ಲಿಂದಾಚೆ ಬದುಕು ನೀರಸ ಅನಿಸತೊಡಗೊತ್ತದೆ" ಅಂತೆಲ್ಲಾ ನಾವು ಹುಡುಗಿಯರು ಆಗಾಗ ಹುಡುಗರ ಮೇಲೆ, ಅವರ ಪ್ರೀತಿಯ ಮೇಲೆ ಆರೋಪಗಳ ದೊಡ್ಡ ಪಟ್ಟಿಯನ್ನೇ ಹೊರಿಸುತ್ತಿರುತ್ತೇವೆ.

ಅದ್ರೆ ನಿಜಕ್ಕೂ ಹುಡುಗರು ಪ್ರೀತಿ ಒಪ್ಪಿಕೊಳ್ಳುವವರೆಗೆ ಒಂದು ರೀತಿ, ಆಮೇಲೆ ಒಂದು ರೀತಿ ಇರುತ್ತಾರಾ? ವಿನಾಕಾರಣ ಪ್ರೀತಿಸಿದವಳನ್ನು ಸಂಶಯಿಸತೊಡಗುತ್ತಾರಾ?  ಪ್ರೀತಿ, ನಂಬಿಕೆ ಬಿರುಕು  ಬಿಡಲು ಹುಡುಗರು ಮಾತ್ರ ಕಾರಣವಾ? ನಾವು ಹುಡುಗಿಯರು ನಿಜಕ್ಕೂ  ಹೇಳಿಕೊಳ್ಳುವಷ್ಟು ಅಮಾಯಕರಾ? ನಾವೆಂದೂ ಕೃತಿಮರಾಗುವುದೇ ಇಲ್ಲವೇ? ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ಈ ಎಲ್ಲಾ ಪ್ರಶ್ನೆಗಳ ಉತ್ತರ ’ಅಲ್ಲ’ ಅನ್ನುವುದೇ ಆಗಿರುತ್ತದೆ.

ಬದುಕು ಬಾಲ್ಯದಿಂದ ಹರಯಕ್ಕೆ ಮಗ್ಗುಲು ಬದಲಿಸಿದಾಗ ಪ್ರತಿ ಹುಡುಗನ ಎದೆಯಲ್ಲೂ ಹೂವರಳುತ್ತದೆ, ಕೋಗಿಲೆ ಹಾಡತೊಡಗುತ್ತದೆ, ಬಣ್ಣಬಣ್ಣದ ಕನಸುಗಳು ಗಾಳಿಪಟವಾಡತೊಡಗುತ್ತವೆ. ಅವನೆದೆಯ ಅಷ್ಟೂ ತಲ್ಲಣಗಳಿಗೆ ಮುಕುಟವಿಟ್ಟಂತೆ,  ಸಂಜೆಯ ವಾಕ್ ಗೆ, ನೀರವ ರಾತ್ರಿಯ ಪಿಸುಮಾತುಗಳಿಗೆ, ಬಿರುಮಳೆಯಲ್ಲಿ ಒಂಟಿ ಕೊಡೆಯಡಿ ನಡೆಯೋಕೆ, ನಿದ್ರೆಯಿಂದ ಏಳುವ ಮುನ್ನವೇ  Good morning  ಹೇಳೋಕೆ,  photo ನೋಡ್ಕೊಂಡು miss you ಕಣೇ ಅನ್ನೋಕೆ, ಅಂಗೈಯಲ್ಲಿ ಅಂಗೈಯನ್ನಿಟ್ಟು ಕನಸು ಕಾಣೋಕೆ,  ಪರಸ್ಪರರ ಕಣ್ಣೋಟದಲ್ಲೇ ಕಳೆದುಹೋಗೋಕೆ, ಗೆಳೆಯರ ಮುಂದೆ ನನ್ನ ಹುಡುಗಿ ಕಣೋ ಅಂತ ಬೀಗೋಕೆ  ಅವಳು ಜೊತೆಗಿರಬೇಕು ಮತ್ತು ಹಾಗೆಲ್ಲಾ ಅವಳು ಜೊತೆಗಿರಬೇಕಾದರೆ ಅವಳ ಮುಂದೆ ನಿಂತು  I Love You   ಅಂದುಬಿಡಬೇಕು ಅಂತ ಅವನ ಮನಸಿನ ಸಹಸ್ರ ಝೇಂಕಾರದ ವೀಣೆ ಮಿಡಿಯತೊಡಗುತ್ತದೆ.

ಹಾಗಾದಾಗಲೆ ಇಡೀ ಕಾಲೇಜಲ್ಲೇ ಧೈರ್ಯವಂತ ಅನ್ನಿಸಿಕೊಂಡ ಹುಡುಗ ಅವಳೆದುರು ನಿಂತು ಮಾತಿಗೆ ತಡಬಡಾಯಿಸುವುದು, ಮಾತಿನ ಮಲ್ಲ ಅನ್ನಿಸಿಕೊಂಡವನು ಬೆಬ್ಬೆಬ್ಬೆ ಅನ್ನುವುದು, ವಿಪರೀತ ಮೌನಿ ಅನ್ನಿಸಿಕೊಂಡವನು ಮಾತು ಶುರುಹಚ್ಚಿಕೊಳ್ಳುವುದು, ಪರಮ ವಾಸ್ತವವಾದಿ ಭಾವುಕನಾಗುವುದು, ಭಾವುಕ ತತ್ವಜ್ಞಾನಿಯಾಗುವುದು. ಹುಡುಗಿ ಒಪ್ಪಿಕೊಂಡು ಬಿಡಲಿ ಅಂತ ಸೂರ್ಯ, ಚಂದ್ರ, ನದಿ, ಆಕಾಶ, ನಕ್ಷತ್ರ ಅಂತೆಲ್ಲಾ ಅಂಗೈಯಲ್ಲೆ ಅರಮನೆ ತೋರಿಸುತ್ತಾನೆ. ಕೊನೆಗೊಮ್ಮೆ ಹುಡುಗಿ ಒಪ್ಪಿಬಿಟ್ಟರೆ ಸ್ವರ್ಗಕ್ಕೆ ಮೂರು ಅಲ್ಲಲ್ಲಾ ಒಂದೇ ಗೇಣು ಅನ್ನುವಂತೆ ಸಂಭ್ರಮಿಸುತ್ತಾನೆ.

ಇಷ್ಟಾದಮೇಲೆ...? "ಇಷ್ಟಾದಮೇಲಾ? ಜೊತೆಗೊಂದು ಸೆಲ್ಫಿ ತಗೊಂಡು, ಅದನ್ನು ಪ್ರೊಫೈಲ್  ಪಿಕ್ಚರ್ ಗೆ ಹಾಕಿ,  'Love U Forever Baby '  ಅಂತ ಸ್ಟೇಟಸ್ ಬರ್ಕೊಂಡು, ನಾಲ್ಕು ಗೆಳೆಯರಿಗೆ ಪಾರ್ಟಿ ಕೊಡಿಸುತ್ತಾನೆ. ಅಲ್ಲಿಗೆ ಅವನ ಸಂಭ್ರಮ ಮುಗಿಯುತ್ತದೆ. ಆಮೇಲೆ ನಮ್ಮೆಡೆಗೆ ಅವನಿಗಿರುವುದು ಒಂದು ದಿವ್ಯ ನಿರ್ಲಕ್ಷ್ಯ ಮಾತ್ರ. ಅವನ ಪ್ರೀತಿ ಒಪ್ಪಿಕೊಂಡ ತಪ್ಪಿಗೆ ಆಗಾಗ ಮೊಬೈಲ್ ಪರೀಕ್ಷಿಸುತ್ತಾ ಅವನ ಕರೆ, ಮೆಸೇಜ್ ಗಳಿಗಾಗಿ ಕಾಯುತ್ತಾ ಕೂರಬೇಕು. ಆದ್ರೆ ನಮ್ಮ ಪ್ರೀತಿ, ಅವನೆಡೆಗಿನ ತುಡಿತ ಅವನಿಗೆಲ್ಲಿ ಅರ್ಥ ಆಗಬೇಕು? ಅವನು ಅವನದೇ ಪ್ರಪಂಚದಲ್ಲಿ ಮುಳುಗಿ ನಮ್ಮ ಇರವನ್ನೇ ಸಂಪೂರ್ಣವಾಗಿ ಮರೆತುಬಿಡುತ್ತಾನೆ" ಅಂತನ್ನುತ್ತಾ ಮಗುಮ್ಮಾಗುತ್ತಾರೆ ಹುಡುಗಿಯರು. ಆದ್ರೆ ವಾಸ್ತವ ಹಾಗಿರುವುದಿಲ್ಲ. ಅವನಿಗೆ ಅವನದೇ ಆದ ಜವಾಬ್ದಾರಿಗಳಿರುತ್ತವೆ. ತಮ್ಮನ ಓದು, ತಂಗಿ ಮದುವೆ, ಅಪ್ಪನ ವ್ಯಾಪಾರ, ವರದಕ್ಷಿಣೆ ಕಾರಣದಿಂದ ಗಂಡನ ಮನೆ ಬಿಟ್ಟು ಬಂದಿರುವ ಅಕ್ಕನ ಬದುಕು, ಅಮ್ಮನ ಆಸ್ಪತ್ರೆ ವಾಸ ಅಥವಾ ಗೆಳೆಯನ ಸಾಲ ಅಂತ ಅವನು ನೂರಾರು ಕಡೆ ಕಮಿಟ್ ಆಗಿರುತ್ತಾನೆ. ಇವೆಲ್ಲದರ ಮಧ್ಯೆ ಅವಳನ್ನು ಮನಸ್ವೀ ಪ್ರೀತಿಸಿರುತ್ತಾನೆ, ಅವಳು ಒಪ್ಪಿಕೊಳ್ಳುವವರೆಗೂ ಅವಳ ಹಿಂದೆ ಮುಂದೆ ಸುತ್ತುತ್ತಿರುತ್ತಾನೆ, ಕೊನೆಗೊಂದು ದಿನ ಅವಳನ್ನು ಒಪ್ಪಿಸಿಯೂ ಬಿಡುತ್ತಾನೆ. ಆಮೇಲೆ ಅವಳು ಒಪ್ಪಿದಳಲ್ಲಾ ಅನ್ನುವ ನಿರಾಳತೆ ಅವನನ್ನು ಆವರಿಸುತ್ತದೆ. ಆ ನಿರಾಳತೆಯನ್ನೇ ನಾವು ಹುಡುಗಿಯರು ’ನಿರ್ಲಕ್ಷ್ಯ’ ಅನ್ನುವುದು.

ತನ್ನ ಕಮಿಟ್ಮೆಂಟ್ ಗಳ ಮಧ್ಯೆಯೂ ಅವಳಿಗಾಗಿ ಸಮಯ ಮುಡಿಪಿಡುವ ಅವನ ಪ್ರೀತಿ,  ತನ್ನೆಲ್ಲಾ ಜವಾಬ್ದಾರಿಗಳ ಮಧ್ಯೆಯೂ ಕೆಲವು ಖಾಸಗಿ ಕ್ಷಣಗಳನ್ನು ಅವಳಿಗೋಸ್ಕರ ಆಸ್ಥೆಯಿಂದ ಎತ್ತಿಡುವ ಅವನ ಒಲವು, ಅವಳಿನ್ನೂ ಉಂಡಿದ್ದಾಳೋ ಇಲ್ಲವೋ ಅನ್ನುವ ಯೋಚನೆಯಲ್ಲೇ ಮಧ್ಯಾಹ್ನದ ಊಟವನ್ನು ಅರ್ಧಕ್ಕೇ ನಿಲ್ಲಿಸಿ ಎದ್ದುಬಿಡುವ ಅವನ ತಲ್ಲಣ, ಅವಳ ತಿಂಗಳ ನೋವಿಗೆ ಕಣ್ಣೀರಾಗುವ ಅವನ ಮಮತೆ, ತನ್ನ ಪ್ರತಿ ಪ್ರಾರ್ಥನೆಯಲ್ಲೂ ’ಅವಳಿಗೇನೂ ಆಗದಿರಲಿ’ ಅಂತ ವಿಶೇಷವಾಗಿ ಬೇಡಿಕೊಳ್ಳುವ ಅವನ ತುಡಿತ... ಯಾವುದೂ ಅವಳಿಗರ್ಥವಾಗುವುದೇ ಇಲ್ಲ ಅಥವಾ ಅರ್ಥವಾದರೂ ಅವನಿನ್ನೂ ತನ್ನ ಹಿಂದೆ ಮುಂದೆ ಸುತ್ತುತ್ತಲೇ ಇರಬೇಕು ಅನ್ನುವ ಅಹಮಿಕೆಯಲ್ಲಿ ಅವನ ಎಲ್ಲಾ ನವಿರು ಭಾವಗಳು ಅರ್ಥ ಕಳೆದುಕೊಳ್ಳುವಂತೆ ಮಾಡುತ್ತಾಳೆ.

ಇನ್ನು, ವಿನಾಕಾರಣ ನನ್ನನ್ನು ಸಂಶಯಿಸುತ್ತಾನೆ ಅಂತ ಪದೇ ಪದೇ ದೂರುವ ಹುಡುಗಿ ತಾನು ಬೇಕೆಂದೇ, ಅವನಿಗೆ ಅಸೊಯೆಯಾಗಲಿ ಎಂದೇ ಇನ್ನೊಬ್ಬ ಹುಡುಗನ ಜೊತೆ  ಅಗತ್ಯಕ್ಕಿಂತ ಹೆಚ್ಚು ಸಲಿಗೆಯಿಂದ ನಡೆದುಕೊಳ್ಳುವ ಬಗ್ಗೆ ಒಂದು ಮಾತೂ ಆಡುವುದಿಲ್ಲ. ಅವಳು ಅಂದುಕೊಂಡಂತೆ ಆತನಿಗೆ ಅಸೊಯೆ ಆದರೆ ಅಥವಾ ಇನ್ನಾವುದೋ ಅಂತದೇ ಭಾವ ಕಾಡಿದರೆ ಅವಳವನಿಗೆ 'ವಿಪರೀತ ಪೊಸಸಿವ್' ಅನ್ನುವ ಪಟ್ಟ ಕಟ್ಟುತ್ತಾಳೆ. ಹೋಗಲಿ ಬಿಡಿ, ಅವಳು ಇನ್ನೊಬ್ಬ ಹುಡುಗನ ಜೊತೆ ಮಾತಾಡಿದರೆ ಗಂಟೇನು ಹೋಗುತ್ತೆ ಅಂದುಕೊಂಡು ಅವನೇನಾದರೂ ಸುಮ್ಮನಿದ್ದುಬಿಟ್ಟರೆ  ತನ್ನ ಬಗ್ಗೆ ಅವನಿಗೆ ಕಾಳಜಿಯೇ ಇಲ್ಲ ಎಂದು ಮತ್ತೆ ದೂರುತ್ತಾಳೆ.

ಇಷ್ಟಕ್ಕೂ ಆತ ಅವಳನ್ನು ಸಂಶಯಿಸತೊಡಗುವುದಾದರೂ ಯಾವಾಗ? ತನ್ನ ಗೆಳೆಯರ ಪ್ರೀತಿಯ ಮೆಲ್ಲುಸಿರುಗಳು ಹಾಡಿರುವ ಸವಿಗಾನಗಳನ್ನೂ, ಈಗ ಮೂರನೆಯವರ ಪ್ರವೇಶದಿಂದ ಅದೇ ಪ್ರೀತಿ ಬಿಡುತ್ತಿರುವ ನಿಟ್ಟುಸಿರುಗಳನ್ನೂ ಕೇಳಿರುವ ಅವನಿಗೆ ಎಲ್ಲಿ ನನ್ನ ಪ್ರೀತಿಯೂ ಹಾಗೆಯೇ ಆಗುಬಿಡುತ್ತದೋ ಅನ್ನುವ ಭಯ ಕಾಡಲು ಶುರುವಾಗುತ್ತದೆ. "ಹಿಮಗರ್ಭದಲ್ಲಿ ಹುಟ್ಟಿ ಅದೆಷ್ಟೇ ತಿರುವು-ಮುರುವು, ಬೆಟ್ಟ-ಗುಡ್ಡ, ಊರು-ಗಲ್ಲಿ, ಕಾನನಗಳನ್ನು ಬಳಸಿ ಹರಿದರೂ ಪರಿಶುದ್ಧವಾಗೇ ಇರುವ ಗಂಗೆಯಂತಹ ಪ್ರೀತಿ ಕಣೋ ನನ್ನದು" ಅಂತಂದಿದ್ದ ಹುಡುಗಿಯೇ ಎಲ್ಲಿ ಕೈಬಿಟ್ಟು ಹೋಗುತ್ತಾಳೋ ಅಂತ ದಿಗಿಲಿಗೆ ಬೀಳುತ್ತಾನೆ. ಅವಳಿಲ್ಲದೆ ಹೇಗೆ ಬದುಕಿರಲಿ ಅಂತ ಹಳಹಳಿಸತೊಡಗುತ್ತಾನೆ. ಸಂಶಯ ಅನ್ನುವ ಅಭದ್ರತಾ ಭಾವ ಗರ್ಭತಾಳುವುದೇ ಆ ದಿಗಿಲು ಮತ್ತು ಹಳಹಳಿಕೆಗಳಲ್ಲಿ.

ಆಗೇನಾದರೂ ಹುಡುಗಿ "ನಿನ್ನೆಡೆಗೆ, ನಿನ್ನ ಪ್ರೀತಿಯೆಡೆಗೆ ನನಗಿರುವ ಅಪಾರ ಬದ್ಧತೆಯನ್ನು ಯಕಶ್ಚಿತ್ ಮೂರನೆಯವನೊಬ್ಬ ಕದಲಿಸಲಾರ. ನಿನ್ನೆಲ್ಲಾ ಜವಾಬ್ದಾರಿಗಳನ್ನು, commitmentಗಳನ್ನು ಅರಿತುಕೊಂಡೇ ನಿನ್ನ ಜೊತೆ ಹೆಜ್ಜೆ ಹಾಕುತ್ತಿದ್ದೇನೆ. ನಾನು ನಿನ್ನವಳು ಅನ್ನುವ ಭರವಸೆ ಒಂದಿರಲಿ ಸಾಕು" ಅಂತ ಆತ್ಮೀಯತೆಯಿಂದ ಅವನಿಗೆ ಭರವಸೆಯಿತ್ತು ಬಿಟ್ಟರೆ ಸಾಕು ಅವನೆಲ್ಲಾ ಅನುಮಾನಗಳು ಕೊಚ್ಚಿಹೋಗಿಬಿಡುತ್ತವೆ. ಅಷ್ಟೇ ಅಲ್ಲ ಅವಳನ್ನು ಅವನು ಮತ್ತಷ್ಟು ಸಾಂದ್ರವಾಗಿ ಪ್ರೀತಿಸತೊಡಗುತ್ತಾನೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಹುಡುಗಿ 'ನಾನೇಕೆ ಇದನ್ನೆಲ್ಲಾ ಅವನಿಗೆ ವಿವರಿಸಲಿ' ಅನ್ನುವ ಹಮ್ಮಿನಲ್ಲಿ ಇದ್ದುಬಿಡುತ್ತಾಳೆ. ಅತ್ತ ಪ್ರತಿಕ್ಷಣ ಅಭದ್ರತಾ ಭಾವದಿಂದ ನರಳುವ ಅವನು ಅವಳಿಗೆ ಬೇಲಿ ಕಟ್ಟತೊಡಗುತ್ತಾನೆ, ಅವಳು ಆ ಬೇಲಿ ಹಾರಿ ಹೋಗಬಯಸುತ್ತಾಳೆ. ಪ್ರೀತಿ ವಿಲವಿಲ ಒದ್ದಾಡತೊಡಗುತ್ತದೆ.

ಹಾಗಾಗಬಾರದು ಅಂತಿದ್ದರೆ, ವಿಫಲ ಪ್ರೇಮದ ಆಳಗಾಯ ಬದುಕಿಡೀ ಮಗ್ಗುಲ ಮುಳ್ಳಾಗಿ ಕಾಡಬಾರದು ಅಂತಿದ್ದರೆ, ಇಬ್ಬರೂ ಜೊತೆಗೂಡಿ ಕಂಡ ಮಧುರ ಕನಸುಗಳು ಕಣ್ಣೆದುರೇ ಚಲ್ಲಾಪಿಲ್ಲಿಯಾಗಿ ಹೋಗಬಾರದು ಅಂತಿದ್ದರೆ, ಹುಡುಗಿಯರೇ  "ಹುಡುಗರೇ ಹೀಗೆ..." ಅನ್ನುವ ತಪ್ಪು ನಿರ್ಧಾರಕ್ಕೆ ಬರುವ ಮುನ್ನ ತಣ್ಣಗೆ ಕೂತು ಒಂದಿಷ್ಟಾದರೂ ಯೋಚಿಸಿ ಪ್ಲೀಸ್.






ಸೋಮವಾರ, ಸೆಪ್ಟೆಂಬರ್ 7, 2015

ಅವನು, ಅವಳು ಮತ್ತು ನಾಗರಪಂಚಮಿ



ಶ್ರಾವಣ ಮಾಸ, ಅದರ ಬೆನ್ನ ಹಿಂದೆಯೇ ಓಡೋಡಿ ಬರುವ ನಾಗರಪಂಚಮಿ ಅಂದಾಗೆಲ್ಲಾ ನನಗೆ ಪಕ್ಕನೆ ನೆನಪಾಗುವುದು ಹೈಸ್ಕೂಲ್ ದಿನಗಳು. ಒಮ್ಮೆ ಬಂದು ನಿಂತು ಹೋಗುವ,  ಕೆಲ ಹೊತ್ತು ಬಿಟ್ಟು ಮತ್ತೆ ಬರುವ ಚಿಟಿಪಿಟಿ ಮಳೆಯಲ್ಲಿ ನೆನೆಯುವಾಗೆಲ್ಲಾ ಆ ದಿನಗಳ ನೆನಪಿನ ಹುಡಿಗಳು ಮನಸಿಗೆ ಅಂಟಿಕೊಂಡು ಬಿಡುತ್ತವೆ. ಅದೊಂಥರಾ ಅತ್ತ ಯೌವ್ವನವೂ ಅಲ್ಲದ, ಇತ್ತ ಬಾಲ್ಯವೂ ಅಲ್ಲದ ವಿಚಿತ್ರ ವಯಸ್ಸು. ಸುಮ್ಮನೆ ಅರಳಿರುವ ನೈದಿಲೆಯ ಮಾತಾಡಿಸಲು ಯತ್ನಿಸುವುದು, ಕೆಸುವಿನ ಎಲೆಯ ಮೇಲೆ ನಿಂತ ನೀರ ಹನಿಯಲಿ ಸೂರ್ಯನ ಪ್ರತಿಬಿಂಬ ಮೂಡಿಸಲು ಪ್ರಯತ್ನಿಸುವುದು, ಬೇಲಿ ಮೇಲೆ ಕುಳಿತ ದುಂಬಿಯ ಹಿಡಿಯಲಾಗದು ಅನ್ನುವುದು ಗೊತ್ತಿದ್ದರೂ ಅದರ ಹಿಂದೆ ಹೋಗಿ ಎಡವಿ ಬೀಳುವುದು, ಬಿಸಿಲು-ಮಳೆಯ ನಂತರ ಮೂಡಿದ ತೆಳು ಮೋಡ ಇನ್ನೇನು ಕಥೆ ಹೇಳುತ್ತದೆಂದು ಕಾಯುತ್ತಾ ಕೂರುವುದು, ಕಾಣದ ಕಡಲಿನ ಇನ್ನೊಂದು ತೀರಕ್ಕಾಗಿ ಹಂಬಲಿಸುವುದು, ಹುಡುಗಿಯರು ಉದ್ದ ಲಂಗಕ್ಕಾಗಿ ಮನೆಯಲ್ಲಿ ಜಗಳ ಮಾಡುವುದು,  ಅಪ್ಪ ಶೇವ್ ಮಾಡಿ ಅಲ್ಲೇ ಬಿಟ್ಟು ಹೋದ ಶೇವಿಂಗ್ ಕಿಟ್ ತಗೊಂಡು ಇಲ್ಲದ ಮೀಸೆಯನ್ನು ಶೇವ್ ಮಾಡೋಕೆ ಹೋಗಿ ಹುಡುಗರು ಗಾಯ ಮಾಡ್ಕೊಳ್ಳುವುದು ಎಲ್ಲಾ ಆ ವಯಸ್ಸಲ್ಲೇ.

ಅಂತಹ ಎಡೆಬಿಡಂಗಿ ವಯಸ್ಸಲ್ಲಿ ನನಗೊಬ್ಬಳು ಜೀವದ ಗೆಳತಿ ಇದ್ದಳು. ಮಾತಲ್ಲೇ ಮುದ್ದು ಬರಿಸೋ ಹುಡುಗಿ. ಎಷ್ಟೆಂದರೆ  " ರಾಕೆಟ್ ಹೇಗೆ ಚಲಿಸುತ್ತದೆ?" ಅನ್ನುವ ಭೌತವಿಜ್ಞಾನ ಸರ್ ಪ್ರಶ್ನೆಗೆ "ಸೊಂಯ್ಯನೆ ಹೋಗುತ್ತದೆ ಸಾರ್" ಅನ್ನುವಷ್ಟು ಮುದ್ದು. ಕೃಷ್ಣನ ಮೀರಾ ಇದ್ದಳಲ್ಲಾ, ಅವಳಿಗಿಂತಲೂ ಚೆಂದಗೆ ಹಾಡುತ್ತಿದ್ದಳು. ಅವಳು "ಹೂವೆ ಹೂವೆ ನಿನ್ನೀ ಚೆಲುವಿಗೆ ಕಾರಣರಾರೆ...." ಅಂತ ಹಾಡುತ್ತಿದ್ದರೆ ನಾವೆಲ್ಲಾ ಥೇಟ್ ದುಂಬಿಗಳಂತೆ ಅವಳ ಸುತ್ತ ನೆರೆಯುತ್ತಿದ್ದೆವು. ನಾವಷ್ಟೇ ಅಲ್ಲ, ಅವಳ, ಅವಳ ಹಾಡಿನ  ಅಭಿಮಾನಿ ಬಳಗದಲ್ಲಿ ಒಂದಿಷ್ಟು ಹುಡುಗರೂ ಇದ್ದರು. ಅಭಿಮಾನ ಇದ್ದಮೇಲೆ, ಅದು ಪ್ರೀತಿಯಾಗುವುದೇನೂ ಅಸಂಭವವಲ್ಲವಲ್ಲಾ? ಒಂದಿಬ್ಬರು ಹುಡುಗರು ತಮ್ಮ ಪ್ರೀತಿಯ ಬಗ್ಗೆ ಹೇಳಿಯೂ ಬಿಟ್ಟರು.  ಆದ್ರೆ ಅವಳಿಗೋ..? ಶಾಲೆಯ ಅಷ್ಟೂ ಹುಡುಗರನ್ನು ಬಿಟ್ಟು ಸ್ಕೂಲ್ ಪಕ್ಕದಲ್ಲಿದ್ದ ಕಿರಾಣಿ ಅಂಗಡಿ ಹುಡುಗನ ಮೇಲೆ ಒಂದು ಹೊತ್ತಲ್ಲದ ಹೊತ್ತಿನಲ್ಲಿ ಪ್ರೀತಿ ಆಯ್ತು. ವಾರಗಟ್ಟಲೆ ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡಿ ಒಂದು ಶುಭಮುಹೂರ್ತದಲ್ಲಿ ಅವನ ಮುಂದೆ ನಿಂತು "ಗೆಳೆಯಾ ಒಂದು ಕೇಳ್ತೀನಿ ಇಲ್ಲ ಅನ್ದೆ ಕೊಡ್ತೀಯಾ?" ಅಂತ ತನ್ನ ಪ್ರೀತಿ ನಿವೇದಿಸಿಯೇ ಬಿಟ್ಟಳು.

ಇವಳಂತಹುದೇ ಭಾವ ಅವನಿಗೂ ಇತ್ತಾ? ಸರಸಕ್ಕೆ, ವಿರಸಕ್ಕೆ, ಹುಸಿಮುನಿಸಿಗೆ ನನಗೂ ಒಬ್ಬ ಸಂಗಾತಿ ಬೇಕು ಅಂತ ಅವನಿಗೂ ಆ ಕ್ಷಣದಲ್ಲಿ ಅನಿಸಿತ್ತಾ? ಇವಳ ಹಾಡಿಗೆ, ಮುದ್ದಿಗೆ ಅವನು ಮನಸೋತನಾ? ಅಥವಾ ಅವನ ಮನಸ್ಸಲ್ಲಾಗ ಕೇವಲ ಗೊಂದಲಗಳಿದ್ದವೋ? ಗೊತ್ತಿಲ್ಲ. ಆದ್ರೆ ಅವನು "ಹೂಂ" ಅಂದದ್ದಂತೂ ಹೌದು. ಆ ಕ್ಷಣದಿಂದಲೇ ಇವಳು ಪೂರ್ತಿ ಬದಲಾಗಿ ಬಿಟ್ಳು. ಎಲ್ಲಿಂದಲೋ ಒಂದು ಪುಟ್ಟ ಕನ್ನಡಿ ಬಂದು ಅವಳ ಬ್ಯಾಗ್ ಸೇರಿತು. ಶಾಲೆ ಬಿಡುತ್ತಿದ್ದಂತೆ ಕನ್ನಡಿ ನೋಡಿ, ಕಾಡಿಗೆ ತೀಡಿ, ಸಣ್ಣಗೆ ಪೌಡರ್ ಹಚ್ಕೊಂಡು ಲಗುಬಗೆಯಿಂದ ಹೊರಡುತ್ತಿದ್ದಳು. ’ಅವನ ಬಗ್ಗೆ ನನಗೊಂದು ಕವಿತೆ ಬರೆದುಕೊಡೇ’ ಎಂದು ನನ್ನ ಪೀಡಿಸುತ್ತಿದ್ದಳು. ಹೂವಿನ ಹಾಡು ಹಾಡುತ್ತಿದ್ದ ಅವಳ ಹಾಡಿನ ಪೂರ್ತಿ ಈಗ ಅವನದೇ ನೆನಪು, ಅವನದೇ ಧ್ಯಾನ.

ಇಂತಿದ್ದ ಅವಳು ಅದೊಂದು ದಿನ ಶಾಲೆ ಬಿಟ್ಟಾಗ ನನ್ನ ಕೈ ಹಿಡಿದೆಳೆದು ಪಕ್ಕಕ್ಕೆ ಕರೆದೊಯ್ದು ಮುಖವನ್ನೆಲ್ಲಾ ಕೆಂಪು ಮಾಡ್ಕೊಂಡು ಗುಟ್ಟಲ್ಲಿ "ನಾಳೆ ನಾಗರಪಂಚಮಿ ಅಲ್ವಾ? ಸೀರೆ ಉಟ್ಕೊಂಡು ನಾಗನ ಕಟ್ಟೆಗೆ ಹೋಗೋಕಿದೆ. ಅವನೂ ಬರ್ತಾನೆ ಅಂದಿದ್ದಾನೆ. ನಾಗನಿಗೆ ಹಾಲು ಎರೆಯುವಾಗ ಅವನೇನಾದ್ರೂ ನನ್ನ ಕೈ ಹಿಡಿದ್ರೆ ನಿಂಗೇ ಮೊದ್ಲು ಹೇಳ್ತೇನಾಯ್ತಾ" ಅಂತಂದು ಕಣ್ಣುಹೊಡೆದಿದ್ಳು. ನಾನು "ಇದ್ಯಾಕೋ ಚೂರು ಅತಿ ಆಗ್ಲಿಲ್ವಾ?" ಅಂದೆ. ಅವಳು ಎಂದಿನಂತೆ ಮುದ್ದುಮುದ್ದಾಗಿ "ಲೆನಿನ್ ನ ಭೂತ ಹಿಡ್ದಿರೋ ನಿಂಗೆ ಇದೆಲ್ಲಾ ಎಲ್ಲಿ ಅರ್ಥ ಆಗುತ್ತೆ, ಹೋಗೇ " ಎಂದು ನನ್ನ ಮೂತಿ ತಿರುವಿ ಎದ್ದು ಹೋಗಿದ್ದಳು.

ಮರುದಿನ, ಬೆಳ್ಬೆಳಗ್ಗೆ ಯಾವುದೋ ಕಾಯಿನ್ ಬೂತಿಂದ ಫೋನ್ ಮಾಡಿ "ಸೀರೆ ಉಟ್ಟಿದ್ದೇನೆ, ಎಲ್ಲಿ ಜಾರಿ ಬೀಳುತ್ತೋ ಅಂತ ಭಯ ಆಗ್ತಿದೆ, ಆ ಕೋತಿ ಇನ್ನೂ ಬಂದಿಲ್ಲ" ಅಂದ್ಳು. ನನ್ನ ಪಕ್ಕದಲ್ಲೇ ಅಮ್ಮ ಇದ್ದಿದ್ದರಿಂದ ಹೆಚ್ಚೇನೂ ಮಾತಾಡದೇ "ಹಾಂಹೂಂ" ಎಂದಷ್ಟೇ ಹೇಳಿ ಫೋನ್ ಕಟ್ ಮಾಡಿದ್ದೆ. ಅದು ಈಗಿನಂತೆ ಮನೆಗೆ ನಾಲ್ಕು-ಐದರಂತೆ ಮೊಬೈಲ್ ಇದ್ದ ಕಾಲವಲ್ಲ. ನಡುಮನೆಯಲ್ಲಿರುತ್ತಿದ್ದ ಲ್ಯಾಂಡ್ ಫೋನೇ ನಮ್ಮೆಲ್ಲಾ ಸಂವಹನಗಳಿಗೆ ಮಾಧ್ಯಮವಾಗಿತ್ತು. ಪ್ರೈವೆಸಿ ಅನ್ನುವುದನ್ನು ಕನಸಲ್ಲೂ ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹೀಗಿದ್ದರೂ ಮನಸ್ಸು  ಅವಳ ಸುತ್ತಲೇ ಗಿರಕಿ ಹೊಡೆಯುತ್ತಿತ್ತು, ಯಾವಾಗೊಮ್ಮೆ ಬೆಳಕು ಹರಿಯುವುದಿಲ್ಲ, ಅವಳನ್ನು ಮಾತಾಡಿಸುವುದಿಲ್ಲ ಅಂತ ಕಾತರಿಸುತಿತ್ತು.    

ಅಂತೂ ಇಂತೂ ಬೆಳಗಾಯ್ತು, ಸ್ಪೆಷಲ್ ಕ್ಲಾಸಿನ ಸುಳ್ಳು ನೆಪ ಹೇಳಿ ಯಾವತ್ತಿಗಿಂತ ಬೇಗ ಮನೆಯಿಂದ ಶಾಲೆಗೆಂದು ಹೊರಟಿದ್ದೂ ಆಯ್ತು. ದಾರಿಯುದ್ದಕ್ಕೂ ಅವಳ ಸಂಭ್ರಮವನ್ನು ಕಲ್ಪಿಸಿಕೊಂಡೇ ಶಾಲೆಗೆ ತಲುಪಿದೆ, ಆದ್ರೆ ನನ್ನೆಲ್ಲಾ ನಿರೀಕ್ಷೆಗಳನ್ನೂ ಮೀರಿ ಅವಳು ಕ್ಯಾಂಪಸ್ ನ ಮೂಲೆಯಲ್ಲಿದ್ದ ಒಂಟಿ ಮರದ ಕೆಳಗೆ ಕುಳಿತಿದ್ದಳು. ಕಣ್ಣ ಕಾಡಿಗೆ ಕದಡಿತ್ತು, ಕೆನ್ನೆಯ ತೇವ ಅವಳ ನೋವಿಗೆ ಸಾಕ್ಷಿಯೆಂಬಂತೆ ನಿಂತಿತ್ತು. ಹೆಗಲು ಮುಟ್ಟಿ "ಏನಾಯ್ತೇ?" ಅಂತ ಕೇಳಿದೆ. ಬಿಕ್ಕಿ ಬಿಕ್ಕಿ ಅಳತೊಡಗಿದಳು. ನನಗೋ ಗಾಬರಿ. "ನಿನ್ನೆ ಅವನು ಬರ್ಲೇ ಇಲ್ವಾ?" ಅಂತ ಮತ್ತೆ ಕೇಳಿದೆ. "ಅಪಶಕುನ ಮಾತಾಡ್ಬೇಡ. ನಾನು ಕರೆದ್ರೆ ಅವನು ಬರದೇ ಇರ್ತಾನಾ?" ಅಂದ್ಳು. "ಮತ್ತೇನಾಯ್ತು?" ಅಂದೆ. ಅವಳು ಬಿಕ್ಕುತ್ತಲೇ "ಬೆನ್ನ ತುಸು ಮೇಲೆ, ಕತ್ತಿನ ಇಳಿಜಾರಲ್ಲಿ ಅವನು ನನ್ನ ಹೆಸರಿನ ಹಚ್ಚೆ ಹಾಕಿಸ್ಕೊಂಡಿದ್ದಾನೆ. ಚರ್ಮ ಪೂರ್ತಿ ಕೆಂಪಗಾಗಿದೆ. ನೋವಿನಿಂದ ಎದ್ದು ನಡೆಯೋಕೂ ಅವನಿಗೆ ಆಗ್ತಿರ್ಲಿಲ್ಲ. ಆದ್ರೂ ಬಂದಿದ್ದ ಗೊತ್ತಾ?" ಅಂತಂದು ಮತ್ತೆ ಅಳು ಮುಂದುವರಿಸಿದಳು.

ಅವಳ ಹೆಗಲು ಬಳಸಿದ್ದ ನನ್ನ ಕೈ ತಟ್ಟನೆ ಕೆಳಗೆ ಬಿತ್ತು, ಅದುವರೆಗೆ ಪ್ರೀತಿ-ಪ್ರೇಮ ಅನ್ನುವುದೆಲ್ಲಾ ಹುಡುಗಿಯರ ಭಾವನೆಗಳ ಜೊತೆ ಚೆಲ್ಲಾಟವಾಡಲು ಹುಡುಗರು ನಡೆಸುವ ಭವ್ಯ ನಾಟಕವೆಂದೇ ತಿಳಿದಿದ್ದ ನನ್ನ ಕಲ್ಪನೆಗಳೆಲ್ಲವೂ ಕಳಚಿಬಿತ್ತು. ’ಪ್ರೀತಿ’ ಅನ್ನುವ ಎರಡೂವರೆ ಅಕ್ಷರದ ಭಾವಕ್ಕೆ ಇಷ್ಟೊಂದು ಗಾಢ ಶಕ್ತಿಯಿದೆಯಾ? ಕೇವಲ ಎರಡು ತಿಂಗಳ ಹಿಂದೆ ಪರಿಚಯವಾದ ಹುಡುಗಿಯ ಹೆಸರನ್ನು ಮೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವಷ್ಟು..? ಪ್ರೀತಿ ನೋವನ್ನೂ ಉತ್ಕಟವಾಗಿ ಪ್ರೀತಿಸುವುದನ್ನು ಕಲಿಸುತ್ತದಾ? ಇಷ್ಟೊಂದು ಅಗಾಧ ಬದ್ಧತೆಯನ್ನು ಎರಡು ಹೃದಯಗಳಲಿ ಉದ್ದೀಪನಗೊಳಿಸುತ್ತದಾ? ಇಲ್ಲವೆಂದರೆ ಅಷ್ಟೊಂದು ನೋವನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಇವಳ ಖುಷಿಗಾಗಿ ಅವನು ನೋವಲ್ಲೂ ನಗುತ್ತಾನೆ, ಅವನ ಕತ್ತಿನ ನೋವು ಇವಳ ಕೊರಳನ್ನುಬ್ಬಿಸುತ್ತದೆ, ಇವಳ ಹೆರಳ ಮಲ್ಲಿಗೆಯ ಕಂಪಿಗೆ ಅವನ ಸಂಭ್ರಮ ಜೋಕಾಲಿಯಾಡುತ್ತದೆ. ಏನಿದು ವಿಚಿತ್ರ? ಅನ್ನುವ ಪ್ರಶ್ನೆಗಳೆಲ್ಲಾ ಮೂಡಿ ಕೇಳಲೇಬೇಕು ಅಂದುಕೊಂಡಿದ್ದ "ಅವನು ನಿನ್ನೆ ನಿನ್ನ ಕೈ ಹಿಡಿದಿದ್ನಾ?" ಅನ್ನುವ ಪ್ರಶ್ನೆ ಗಂಟಲಲ್ಲೇ ಹುದುಗಿ ಹೋಯ್ತು. ಅವತ್ತು ಶಾಲೆ ಬಿಟ್ಟು ಮನೆಗೆ ಹೋಗುವಾಗ ಕಿರಾಣಿ ಅಂಗಡಿಯಲ್ಲಿ ಅವನನ್ನು ಮತ್ತೆ ನೋಡಿ ನಮ್ಮಿಬ್ಬರಿಗೂ ಅಚ್ಚರಿಯಾಯಿತು, ಜೊತೆಗೆ ಬದುಕಲ್ಲಿ ಮೊದಲ ಬಾರಿಗೆ ನನಗೆ ಪ್ರೀತಿಯ ಮೇಲೆ ತುಸು ನಂಬಿಕೆ ಮೂಡಿತು.

ಮುಂದಿನ ಮೂರು ವರ್ಷಗಳ ಕಾಲ ಇಬ್ಬರೂ ನಾಗರಪಂಚಮಿಯ ದಿನ ತಪ್ಪದೇ ಭೇಟಿಯಾಗುತ್ತಿದ್ದರು. ಅವನ ಹಚ್ಚೆಯ ನೋಡಿ ಇವಳು ಕಣ್ಣೀರುಗೆರೆಯುವುದು, ಅವನು ಅವಳನ್ನು ಹೆಗಲಿಗಾನಿಸಿ ಸಮಾಧಾನ ಪಡಿಸುವುದು, ನಾನು ಅವಳ ಫೋನ್ ಗಾಗಿ ಕಾಯುವುದು, ಅವಳು ನನಗೆ ಕರೆ ಮಾಡಿ ನಡೆದದ್ದನ್ನೆಲ್ಲಾ ಹೇಳುವುದು... ಹೀಗೆ ನಾಗರಪಂಚಮಿ ನಮ್ಮ ಮೂವರ ಬದುಕಲ್ಲೂ ಒಂದು ಮರೆಯಲಾರದ ಸಿಹಿ ನೆನಪಾಗಿ ಅಚ್ಚೊತ್ತಿಬಿಟ್ಟಿತ್ತು.

ಮುಂದೆ ಪಿ.ಯು.ಸಿ ಮುಗಿಸಿ ಮುಂದಕ್ಕೆ ಓದಲೆಂದು ಅವಳು ಪಟ್ಟಣ ಸೇರಿದಳು. ಅವನು ಊರಲ್ಲೇ ಉಳಿದ. ಇಬ್ಬರ ಬಂಧ ನಿಧಾನವಾಗಿ ಸಡಿಲವಾಗತೊಡಗಿತು. ಪ್ರೀತಿ ಇರಬೇಕಾದಲ್ಲಿ ಅಪನಂಬಿಕೆ ತಾಂಡವವಾಡತೊಡಗಿತು. ಎಲ್ಲ ಸಂಬಂಧಗಳನ್ನು ಮನೆಯಲ್ಲೇ ಬಿಟ್ಟು ದೂರದಲ್ಲಿ ಓದುತ್ತಿದ್ದ ಅವಳನ್ನು ಇವನು ವಿನಾಕಾರಣ ಸಂಶಯಿಸತೊಡಗಿದನಾ? ಅಥವಾ ಸಂಶಯಿಸುವಂತೆ ಅವಳೇ ನಡೆದುಕೊಂಡಳಾ?  ಗೊತ್ತಿಲ್ಲ, ಒಟ್ಟಿನಲ್ಲಿ ಅವನ ಕತ್ತಿನ ಹಚ್ಚೆ ಅರ್ಥ ಕಳೆದುಕೊಳ್ಳತೊಡಗಿತ್ತು, ಇವಳ ಹೆರಳ ಮಲ್ಲಿಗೆ ಬಾಡತೊಡಗಿತ್ತು. ಇಬ್ಬರ ನಡುವಿನ ಭಾಂದವ್ಯಕ್ಕೆ ಹೊಸ  ಭಾಷ್ಯ ಬರೆದ ನಾಗರಪಂಚಮಿಯಂದು ಊರಿಗೆ ಬರಲು  ರಜೆ ಇಲ್ಲವೆಂಬುವುದು ಅವಳ ನೆಪವಾದರೆ, ಅವಳಿಗೇ ಅಕ್ಕರೆ ಇಲ್ಲವೆಂದಾದರೆ ನಾನೇಕೆ ಅವಳ ನೋಡಲು ಹೋಗಲಿ ಅನ್ನುವ ಬಿಮ್ಮು ಇವನಿಗೆ ಮೊದಲಾಯಿತು. ಇತ್ತ ನಾನೂ ಕಾಲೇಜು, ಓದು, ಹೊಸ ಸ್ನೇಹ, ಅರಿಯದ ಪ್ರಪಂಚ ಎಂದು ನನ್ನದೇ ಬದುಕಿನಲ್ಲಿ ವ್ಯಸ್ತಳಾಗಿಬಿಟ್ಟೆ. ಕೈಗೊಂದು ಮೊಬೈಲೂ ಸಿಕ್ಕಿ ಲ್ಯಾಂಡ್ ಫೋನ್ ನೊಂದಿಗೆ ಇದ್ದ ಕರುಳಬಳ್ಳಿ ಸಂಬಂಧ ಕಡಿದು ಹೋಯಿತು. ಅದರ ಜೊತೆಜೊತೆಗೆ ಅವಳಿಗೂ ನನಗೂ ಇದ್ದ ಸಂಪರ್ಕವೂ ತಪ್ಪಿಹೋಯಿತು.

ಈಗ್ಗೆ ಒಂದಿಷ್ಟು ತಿಂಗಳಗಳಷ್ಟು ಹಿಂದೆ ಒಂದು ಮಾಗಿಯ ಚಳಿಯ ದಿವ್ಯ ಹೂಬಿಸಿಲಲ್ಲಿ, ನಾನು  ನಾನಾಗಿ ಉಳಿದಿಲ್ಲ, ಮುಖವಾಡಗಳ ಜಗತ್ತಲ್ಲಿ ಇನ್ನಾರದೋ ನೆರಳಂತೆ ಬದುಕುತ್ತಿದ್ದೇನೆ ಅನ್ನುವ ಅಸಹನೆಯಲ್ಲಿ ಅಸ್ತ್ರ ಒಲೆಯಂತೆ ಒಳಗೊಳಗೆ ಧುಮುಗುಟ್ಟುತ್ತಾ ನನ್ನ ಅಸ್ತಿತ್ವಕ್ಕಾಗಿ ತಡಕಾಡುತ್ತಿರುವಾಗ, ಅವಳು, ಅವನು ಮತ್ತು ನಾಗರಪಂಚಮಿ ಒಟ್ಟಿಗೆ ನೆನಪಾದವು. ಅದುವರೆಗೂ ಒಳಗೆಲ್ಲೋ ಸುಪ್ತವಾಗಿದ್ದ ಅವಳ ನೆನಪು ಬೆಂಬಿಡದೆ ಕಾಡತೊಡಗಿತು. ಫೇಸ್ಬುಕ್, ವಾಟ್ಸಪ್, ಟ್ವಿಟ್ಟರ್ ಅಂತೆಲ್ಲಾ ಇದ್ದ ಬದ್ದ ಸೋಶಿಯಲ್ ಮಿಡೀಯಾಗಳಲ್ಲಿ ಹುಡುಕಾಡಿ ಕೊನೆಗೂ ಅವಳ ನಂಬರ್ ಸಂಪಾದಿಸಿ ಫೋನ್ ಮಾಡಿ ಅವಳ ಧ್ವನಿ ಕೇಳಿಯಾದ ಮೇಲಷ್ಟೇ ನನ್ನೊಳಗೊಂದು ನಿರಾಳಭಾವ ಆವರಿಸಿದ್ದು.

ಈಗ ನಾನು ನಾನಾಗಿಯೇ ಉಳಿದಿದ್ದೇನೋ ಇಲ್ಲವೋ ಗೊತ್ತಿಲ್ಲ, ಆದ್ರೆ ಹಳೆ ಸ್ನೇಹ, ಪ್ರೀತಿ, ಮುದ್ದು, ಸಲಿಗೆ ನಮ್ಮಿಬ್ಬರ ಮಧ್ಯೆ ಮತ್ತೆ ನೆಲೆಗೊಂಡಿವೆ. ಆದ್ರೂ ಮಾತಿನ ಮಧ್ಯೆ ಅವನು, ಅವನ ಹಚ್ಚೆಯ ಪ್ರಸ್ತಾಪ ಬಂದಾಗೆಲ್ಲಾ ಇವಳು ಮಾತು ಮರೆಸುತ್ತಾಳೆ, ಮೌನದ ಮೊರೆ ಹೋಗುತ್ತಾಳೆ. ಹಳೆ ಸಂಬಂಧ ಬಿಟ್ಟು ಹೋದ ಬೆರಳುಗಳ ನಡುವಿನ ಅವಕಾಶವನ್ನು ಹೊಸ ಸಂಬಂಧ ಬೆಸೆದಿರುವಾಗ, ಹಳೆ ಕನಸು ಮುರುಟಿರುವಲ್ಲೇ ಹೊಸ ಕನಸು ಟಿಸಿಲೊಡೆದಿರುವಾಗ ಭೂತಕಾಲದ ಬಗ್ಗೆ ಹೆಚ್ಚು ನಾನೂ ಕೆದಕುವುದಿಲ್ಲ.

ಆದ್ರೆ ಮೊದಲ ನಾಗರಪಂಚಮಿಯಂದು ಇವಳು ಆಸೆ ಪಟ್ಟಂತೆ ಅವನು ಕೈ ಹಿಡಿದಿದ್ನಾ ಅನ್ನುವ ಕುತೂಹಲ ಮಾತ್ರ ಇನ್ನೂ ತಣಿದಿಲ್ಲ. ಹಲವು ಬಾರಿ ಕೇಳಲೇಬೇಕು ಅಂದುಕೊಂಡು ನಾಲಗೆ ತುದಿವರೆಗೆ ಬಂದ ಪ್ರಶ್ನೆಯನ್ನು ಹೇಳಲಾರದ ಯಾವುದೋ ಒಂದು ಮುಜುಗರಕ್ಕೆ ಸಿಲುಕಿ ಮತ್ತೆ ಗಂಟಲೊಳಕ್ಕೆ ತಳ್ಳಿದ್ದೇನೆ. ಮುಂದೆ ಯಾವತ್ತಾದ್ರೂ ಒಂದಿನ ಆ ಮುಜುಗರವನ್ನೂ ಮೀರಿ ನಾನು ಕೇಳಿ, ಅವಳು ನಿರ್ಬಿಢೆಯಿಂದ ಉತ್ತರಿಸಿದರೆ, ನಿಮ್ಗೂ ಹೇಳ್ತೀನಿ. ಆಯ್ತಾ?

ಬುಧವಾರ, ಆಗಸ್ಟ್ 26, 2015

ಮತ್ತೆ ಮತ್ತೆ ನೆನಪಾಗುವಿ ಶಾಕುಂತಲೆ...


ನಡು ಮಧ್ಯಾಹ್ನ ಹೊಸ್ತಿಲ
ಮೇಲೆ ಬಿಡುಬೀಸಾಗಿ ಚೆಲ್ಲಿ
ಬೆಳೆಯುವ ಮುನ್ನವೇ ಸಾಯುವ
ನೆರಳ ಕಂಡಾಗೆಲ್ಲಾ ನೀನು
ಮತ್ತೆ ಮತ್ತೆ ನೆನಾಪಾಗುವಿ
ಶಾಕುಂತಲೆ

ಕಾಳಿದಾಸನೇನೋ ನಿನ್ನ
ಬೆಟ್ಟದಷ್ಟಿದ್ದ ಸಹನೆಯ
ದುಶ್ಯಂತನೆಡೆಗೆ ನಿನಗಿದ್ದ
ಅಗಾಧ ಬದ್ಧತೆಯ ಬಗ್ಗೆ
ಪುಟವೆಣಿಸಲು ಬಾರದಷ್ಟು ಬರೆದ

ಆದರೆ ನನಗೇಕೋ ಅವನ
ಮಹಾಕಾವ್ಯದ ಪ್ರತಿ ಸಾಲಿನಲೂ
ನೆರಳು-ಬೆಳಕು, ಮರೆವು-ನೆನಪುಗಳ
ಅಟ್ಟಹಾಸದಲಿ
ಸಾಯದೇ ಬದುಕಿದ ನಿನ್ನ
ನಿಷ್ಪಾಪಿ ಆತ್ಮದ ಕೊನೆಯಿಲ್ಲದ
ಆರ್ತನಾದ ಮಾತ್ರ ಕೇಳಿಸುತಿದೆ

ನೆನಪೇ ಇಲ್ಲವೆಂದಿದ್ದವನ ತೋಳ ತೆಕ್ಕೆಯಲಿ
ನೀ ಮತ್ತೆ ಕರಗಿಹೋಗಬೇಕಾಗಿ ಬಂದಾಗ
ನಿನ್ನ ಸ್ವಾಭಿಮಾನ ಪ್ರತಿಭಟಿಸಿರಲಿಲ್ಲವೇ?
ಇಲ್ಲ ಪ್ರತಿಭಟನೆ ಭರಿಸಲಾರದೆ
ಕುದಿ ಕುದಿದು ಆರಿಹೋದ
ಅಪರಿಮಿತ ಕಂಬನಿಗಳಲಿ
ಅದ ನೀನೇ ಹೂತುಬಿಟ್ಟೆಯಾ?

ದುಶ್ಯಂತನ ಕಣ್ಣಲಿ ತೊನೆಯುತ್ತಿದ್ದ ಅಹಂಕಾರದಲಿ
ಉಂಗುರದ ಪ್ರತಿಬಿಂಬ ಕಂಡು
ನಿನಗೊಮ್ಮೆಯೂ ರೇಜಿಗೆ ಹುಟ್ಟಲೇ ಇಲ್ಲವೇ?
ಇಲ್ಲ ನೆರಳು ಬೆಳೆಯಬಾರದೆಂದು
ಝಾಡಿಸಿ ಒದೆಯುವಷ್ಟಿದ್ದ ರೇಜಿಗೆಯನೂ
ತಣ್ಣನೆಯ ನಗುವಿನಲಿ ಮರೆಸಿಟ್ಟೆಯಾ?

ಬೆಳಕು ಮಾಸುವ ಮುನ್ನ
ನೆರಳು ಕಳೆಯುವ ಮುನ್ನ
ನೆನಪು ಮರೆಯುವ ಮುನ್ನ
ಹೇಳು ಸಖೀ,
ಮತ್ತೆ ಎರಡನೇ ಬಾರಿ ದುಶ್ಯಂತ
ನಿನ್ನೆಡೆಗೆ ಕೈಚಾಚಿದ ನಂತರ
ನೀನೊಮ್ಮೆಯೂ ನಿಡುಸುಯ್ಯಲೇ ಇಲ್ಲವೇ?

ಭಾನುವಾರ, ಆಗಸ್ಟ್ 23, 2015

ಅವಳ ಒಳಗುದಿಗಳನ್ನೂ ಸ್ವಲ್ಪ ಅರ್ಥ ಮಾಡ್ಕೊಳ್ಳಿ ಪ್ಲೀಸ್...

ಆ ಕಡೆಯಿಂದ ಹುಡುಗ ಅಸಹನೆಯಿಂದ ಹೇಳುತ್ತಾನೆ "ಇಷ್ಟು ಹೊತ್ತು  ಯಾರ್ಜೊತೆ ಹರಟೆ ಹೊಡೆಯುತ್ತಿದ್ದೆ, ಆಗದಿಂದ ಫೋನ್ ವೈಟಿಂಗ್ ಬರ್ತಿತ್ತು..". ಈ ಕಡೆಯಿಂದ ಹುಡುಗಿ, ಎರಡೇ ಎರಡು ನಿಮಿಷ ವೈಟಿಂಗ್ ಇದ್ದುದಕ್ಕೆ ಈ ಪರಿ ಅನುಮಾನನಾ ಅಂತಂದುಕೊಳ್ಳುತ್ತಾ ಅದರ ದುಪ್ಪಟ್ಟು ಅಸಹನೆಯಿಂದ "ನಿನಗೇ ಗೊತ್ತಿಲ್ಲದೆ ನನಗೊಬ್ಬ ಬಾಯ್ ಫ್ರೆಂಡ್ ಇದ್ದಾನೆ ಅವನ್ಜೊತೆ ಮಾತಾಡುತ್ತಿದ್ದೆ" ಅನ್ನುತ್ತಾ ಫೋನ್ ಕುಕ್ಕುತ್ತಾಳೆ. ಹತ್ತು-ಹದಿನೈದು ನಿಮಿಷ ಕಳೆಯುವಷ್ಟರಲ್ಲಿ ಇಬ್ಬರಿಗೂ ತಮ್ಮ ತಮ್ಮ ತಪ್ಪಿನ ಅರಿವಾಗುತ್ತದೆ. ಅಥವಾ ಇಬ್ಬರಲ್ಲಿ ಒಬ್ಬರಿಗಾದರೂ ಆಗುತ್ತೆ. ಆ ಕಡೆಯಿಂದ ಅವನು ಅನುನಯಿಸಿಕೊಂಡು ಬರುತ್ತಾನೆ, ಅಥವಾ ಈ ಕಡೆಯಿಂದ ಇವಳು ಅನುನಯಿಸಿಕೊಂಡು ಹೋಗುತ್ತಾಳೆ. ಒಂದು ಸಾರಿ ಕಣೇ/ಣೋ ಗೆ ಮುನಿಸು ಮುಗಿದು ಮತ್ತೆ ಮೊದಲಿನಂತಾಗುತ್ತಾರೆ. ಆದರೆ ಸಂಬಂಧ ಅವರಿಗೇ ಗೊತ್ತಿಲ್ಲದಷ್ಟು ಸೂಕ್ಷ್ಮವಾಗಿ ಬಿರುಕುಬಿಡುತ್ತದೆ, ಅಥವಾ ಬಿರುಕಿಗೆ ಆರಂಭದ ಅಂಕಿತ ಹಾಕಿ ಬಿಡುತ್ತದೆ.

ಹರೆಯವೆಂಬುವುದೇ ಹಾಗೆ. ಕಳ್ಳ ಬೆಳದಿಂಗಳ ಹಾಗೆ ಸದ್ದೇ ಇಲ್ಲದೆ ಮನದ ಹೊಸ್ತಿಲೊಳಗೆ ಬಂದು ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡುಬಿಡುತ್ತದೆ. ಹಾಗೆ ಸದ್ದಿಲ್ಲದಂತೆ ಹರೆಯ ಬದುಕನ್ನು ಪ್ರವೇಶಿಸಿದಾಗಲೇ ಹರಟೆಗೆ, ಪಿಸುಮಾತಿಗೆ, ಸರಸಕ್ಕೆ, ವಿರಸಕ್ಕೆ, ಗುಟ್ಟುಗುಟ್ಟಾಗಿ ಸಾಂತ್ವನಿಸೋಕೆ, ಮುನಿಸಿಗೆ, ಹುಸಿಕೋಪಕ್ಕೆ, ಸುಳ್ಳೇ ಸುಳ್ಳು ನಾಚೋಕೆ, ನನಗವಳು/ನು ಅಂತ ಸಂಭ್ರಮಿಸೋಕೆ, ಖುಶಿಯಾದಾಗ ಹಂಚಿಕೊಳ್ಳೋದಕ್ಕೆ, ಬೇಜಾರಾದಾಗೆಲ್ಲಾ ಪರಸ್ಪರರನ್ನು ಸಂತೈಸೋಕೆ, ಸುಮ್ಮನೆ ಹೆಗಲಿಗೆ ತಲೆಯಾನಿಸಿ ಕುಳಿತು ಒಂದು ವಿವರಿಸಲಾಗದ ಸೆಕ್ಯೂರ್ ಫೀಲಿಂಗ್ ಅನುಭವಿಸೋಕೆ ಒಬ್ಬ/ಳು ಸಮಾನ ಮನಸ್ಕ ಜೊತೆಗಾತಿ ಬೇಕು ಅಂತ ಮನಸು ವರಾತ ಹಚ್ಚತೊಡಗುತ್ತದೆ. ಆಗಲೇ ಇಷ್ಟವಾದವರ ಮುಂದೆ ನಿಂತು ತಲೆ ತಗ್ಗಿಸಿ, ನೆಲ ಕೆರೆದುಕೊಳ್ಳುತ್ತಾ ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟು ಸೇರಿಸಿ" ಐ ಲವ್ ಯೂ" ಅಂದುಬಿಡುವುದು. ಅಥವಾ ಅವನು/ಳು ಆಫ್ ಲೈನ್ ಆದಮೇಲೆ "ಐ ಲವ್ ಯೂ" ಅಂತ ವಾಟ್ಸಾಪ್ ಮಾಡಿ ಬೆಳಗ್ಗಿನ ವರೆಗೂ ಅವಳು/ನು ಏನನ್ನುತ್ತಾಳೋ/ನೋ ಅನ್ನುವ ಪ್ರೀತಿ ತುಂಬಿದ ಕುತೂಹಲದಿಂದ ಜಾಗರಣೆ ಮಾಡುವುದು.

ಅವನೋ/ಳೋ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಅಧಿಕೃತವಾಗಿ ಅವರಿಬ್ಬರು ಪ್ರೇಮಿಗಳಾಗುತ್ತಾರೆ. ಅಂದರೆ ಒಬ್ಬರ ಬಗ್ಗೆ ಇನ್ನೊಬ್ಬರು ಎಗ್ಗಿಲ್ಲದೆ ಕನಸು ಕಾಣೋದು, ಕಣ್ಣಲ್ಲೇ ನೂರು ಮಾತಾಡುವುದು, ಮೌನವಾಗಿದ್ದುಕೊಂಡೇ ಸಂವಹನ ನಡೆಸೋದು, ಸಿಗರೇಟು ಬಿಡು ಅಂತ ಅವಳನ್ನೋದು, ನಾಳೆ ಕ್ರೀಂ ಕಲರ್ ಚೂಡಿದಾರೇ ಹಾಕ್ಕೊಂಡು ಬಾ ಅಂತ ಇವನನ್ನುವುದು ಎಲ್ಲಾ ಆರಂಭವಾಗುವುದು ಆ ಕ್ಷಣದಿಂದಲೇ.

ಇವಿಷ್ಟೂ ಆದ ನಂತರ ಹುಡುಗರು ಹೇಗಿರುತ್ತಾರೋ ಗೊತ್ತಿಲ್ಲ. ಆದ್ರೆ ಹುಡುಗಿಯಂತೂ ಅವತ್ತಿನಿಂದ ತನ್ನಷ್ಟಕ್ಕೆ ತಾನೇ ನಗತೊಡಗುತ್ತಾಳೆ, ದಿನಕ್ಕೆ ನೂರು ಬಾರಿ ’ಮಧುರಾ ಪಿಸುಮಾತಿಗೆ...’ ಹಾಡು ನೋಡುತ್ತಾಳೆ, ಒಬ್ಬಳೇ ಮಾತಾಡಿಕೊಳ್ಳುತ್ತಾಳೆ, "ಕಾಲೇಜಿಂದ ಬರೋಕೆ ಯಾಕೆ ಲೇಟ್ ಆಯ್ತು?" ಅಂತ ಅಮ್ಮ ಕೇಳಿದಾಗ "ಬಸ್ ಲೇಟಮ್ಮಾ" ಅಂತ ಸಲೀಸಾಗಿ ಸುಳ್ಳು ಹೇಳಲು ಕಲಿಯುತ್ತಾಳೆ, ಅವನು ಒಂದಿನ ಫೋನ್ ಮಾಡದಿದ್ರೆ ರಾತ್ರಿಯಿಡೀ ಅತ್ತು, ಬೆಳಗ್ಗೆ ಅಪ್ಪ "ಕಣ್ಣೇಕೆ ಕೆಂಪಾಗಿದೆ ಮಗಳೇ?" ಅಂತ ಕೇಳಿದಾಗ "ವಿಪರೀತ ತಲೆ ನೋವು ಅಪ್ಪಾ" ಎಂದು ಹೇಳಿ ಕಣ್ಣು ತಪ್ಪಿಸಿ ಓಡಾಡುವುದನ್ನು ಕಲಿಯುತ್ತಾಳೆ, ಕೆರೆಯ ಬದಿಯ ಕೆಸರು ಮಣ್ಣಿನಲ್ಲಿ ಉಗುರಿಂದ ಅವನೆಸರು ಗೀಚಿ ಅತ್ತಿತ್ತ ಯಾರೂ ಇಲ್ಲ ಅನ್ನುವುದನ್ನು ಸ್ಪಷ್ಟಪಡಿಸಿಕೊಂಡು ಮೆಲ್ಲನೆ ಮುತ್ತಿಟ್ಟು ತುಟಿಗಂಟಿದ ಕೆಸರು ಒರೆಸಿಕೊಳ್ಳುತ್ತಾಳೆ, ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರವನ್ನು ಅವನೇ ಅಂದುಕೊಂಡು ಸುಮ್ಮನೇ ನಾಚುತ್ತಾಳೆ, ಕಾಲು ದಾರಿಯಲ್ಲಿ ಹೆಜ್ಜೆ ಹಾಕುವಾಗೆಲ್ಲಾ ಅವನು ಜೊತೆಗಿದ್ದಾನೆಂದು ಭ್ರಮಿಸಿ ನಿಧಾನವಾಗಿ ಹೆಜ್ಜೆ ಎತ್ತಿಡುತ್ತಾಳೆ, ನನ್ನ ಪ್ರೀತಿಯ ವಿಷಯ ಮನೆಯಲ್ಲಿ ಗೊತ್ತಾದರೆ... ಎಂದು ಸುಳ್ಳೇ ಸುಳ್ಳು ಕಲ್ಪಿಸಿಕೊಂಡು ಹೆದರಿಕೊಳ್ಳುತ್ತಾಳೆ, ತುಸು ಹೊತ್ತು ಕಳೆದು ಅವನಿಗೆ ಕರೆ ಮಾಡಿ ತನ್ನ ಭಯದ ಬಗ್ಗೆ ಹೇಳಿ ಅಳುತ್ತಾಳೆ, ಅವನು ಹಾಗೆಲ್ಲಾ ಏನೂ ಅಗುವುದಿಲ್ಲವೆಂದು ಭವಿಷ್ಯ ಹೇಳುತ್ತಾನೆ, ಇವಳು ಅಷ್ಟಕ್ಕೇ ಸಮಾಧಾನ ಪಟ್ಟುಕೊಂಡು "ಐ ಲವ್ ಯೂ ಕಣೋ" ಅಂತಂದು ಫೋನ್ ಕಟ್ ಮಾಡುತ್ತಾಳೆ. 

ಇಷ್ಟೆಲ್ಲಾ ಆಗುವಾಗ ಆರು-ಏಳು ತಿಂಗಳು ಕಳೆದು ಬಿಟ್ಟಿರುತ್ತದೆ. ಆ ವೇಳೆಗಾಗುವಾಗಲೇ ಇವಳ ಪ್ರೀತಿಯ ವಾಸನೆ ಸ್ವಲ್ಪೇ ಸ್ವಲ್ಪ ಮನೆಯವರಿಗೆ ಬಡಿದಿರುತ್ತದೆ. ಅಕ್ಕ ಇಲ್ಲದ ಕಾರಣ ಸೃಷ್ಟಿಸಿಕೊಂಡು ಫೋನ್ ಕೇಳುತ್ತಾಳೆ. ಅಮ್ಮ ಸುಖಾ ಸುಮ್ಮನೆ, ಪ್ರೀತಿಸಿ ಮದುವೆಯಾಗಿ ಮುಂದೆ ಶರಂಪರ ಜಗಳವಾಡಿ ಡೈವೋರ್ಸ್ ಪಡೆದುಕೊಂಡಿರುವುದರ ಬಗ್ಗೆ ಮಾತಾಡತೊಡಗುತ್ತಾರೆ. ಅಪ್ಪ ನೂರು ಮಗನನ್ನಾದರೂ ನೆಮ್ಮದಿಯಿಂದ ಸಾಕಬಹುದು ಆದರೆ ಒಬ್ಬ ಮಗಳನ್ನು ಸಾಕುವುದು ಕಷ್ಟ ಅಂತ ಇವಳಿಗೆ ಕೇಳಬೇಕೆಂದೇ ಲೊಚಗುಟ್ಟತೊಡಗುತ್ತಾನೆ. ಅಲ್ಲಿಗೆ ಮನೆಯಲ್ಲೇನೋ ಏರು ಪೇರು ನಡೆದಿದೆ ಎಂದು ಅವಳಿಗೆ ಸ್ಪಷ್ಟವಾಗುತ್ತದೆ. ಮರುದಿನ ಕಾಲೇಜ್ ಗೆ ಹೋಗಿ ತನ್ನ ಹುಡುಗನಿಗೆ ’ಮನೆಯಲ್ಲಿ ಹೀಗೀಗಾಯ್ತು ಕಣೋ, ಇನ್ಮುಂದೆ ಹುಶಾರಾಗಿರೋಣ’ ಅನ್ನುತ್ತಾಳೆ.

"ಏನೂ ಆಗಲ್ಲ  ಚಿನ್ನಾ" ಅಂತ ಭವಿಷ್ಯ ನುಡಿದಿದ್ದ ಹುಡುಗನೇ ಈಗ "ನಿಂಗೆ ನಂಜೊತೆ ಮಾತಾಡೋಕೆ ಇಷ್ಟ ಇಲ್ಲ, ಅದ್ಕೆ ಹೀಗ್ಮಾಡ್ತಿದ್ದೀಯ" ಅಂದು ಬಿಡ್ತಾನೆ. ಅಲ್ಲಿಗೆ  ’ನನ್ ಹುಡುಗ ತುಂಬಾ ಸ್ಪೆಷಲ್, ಎಲ್ಲರಂತಲ್ಲ, ನನ್ನ ಅರ್ಥ ಮಾಡಿಕೊಳ್ಳುತ್ತಾನೆ’ ಅಂತೆಲ್ಲಾ ಅಂದುಕೊಂಡಿದ್ದ ಹುಡುಗಿಯ ಕನಸು ಚದುರಿ ಚೆಲ್ಲಾಪಿಲ್ಲಿಯಾಗುತ್ತದೆ. ಅತ್ತ ಮನೆಯವರು, ಇತ್ತ ಹುಡುಗ. ಮಧ್ಯೆ ಅಡಕತ್ತರಿಯಲ್ಲಿ ಸಿಲುಕಿದ್ದೇನೆ ಅನಿಸತೊಡಗುತ್ತದೆ. ಸ್ವಲ್ಪ ದುರ್ಬಲ ಮನಸ್ಸಿನವಳಾದರೆ ಆತ್ಮಹತ್ಯೆಯ ಯೋಚನೆಯೂ ಒಮ್ಮೆ ಸುಳಿದು ಹೋಗುತ್ತದೆ.

ತಾನು ಬದಲಾಗಿಲ್ಲ ಅಂತ ಹುಡುಗನಿಗೆ ಸಾಬೀತುಪಡಿಸಬೇಕು ಅನ್ನುವ ತಹತಹದಲ್ಲಿ, ಹಿಂದೆ ಮನೆಯವರಿಗೆ ಗೊತ್ತಾಗಬಾರದೆಂದು ತನಗೆ ತಾನೇ ವಿಧಿಸಿಕೊಂಡಿದ್ದ ಜಾಗರೂಕತೆಗಳನ್ನೆಲ್ಲಾ ಗೊತ್ತೇ ಆಗದಂತೆ ಗಾಳಿಗೆ ತೂರಿ ಬಿಡುತ್ತಾಳೆ. ಸ್ವಲ್ಪವೇ ಸ್ವಲ್ಪ ಅನುಮಾನಿಸಿದ್ದ ಮನೆಯವರು ಮೂರೂ ಹೊತ್ತು ಅವಳು ಫೋನ್ ನಲ್ಲಿ ಮಾತಾಡುವುದನ್ನು ಗಮನಿಸಿಯೂ ಗಮನಿಸದಂತಿದ್ದುಬಿಡುತ್ತಾರೆ. ಆದ್ರೆ ಈ ಹಂತದಲ್ಲಿ ಬೆಡ್ ರೂಮಿನ ಗೋಡೆಗಳಿಗೂ, ಬಾತ್ ರೂಮಿನ ಬಾಗಿಲುಗಳಿಗೂ ಕಿವಿಗಳು ಹುಟ್ಟಿ ಬಿಡುತ್ತವೆ. ಅಷ್ಟೊತ್ತಿಗೆ ಹಿತಮಿತ್ರರು ಯಾರೋ ಅವಳು ಅವನೊಂದಿಗೆ ಇರುವ ವಿಷಯವನ್ನು ದಾಖಲೆ ಸಮೇತ ತಂದೆ, ತಾಯಿಯ ಕಿವಿಗೆ ಹಾಕಿಬಿಟ್ಟಿರುತ್ತಾರೆ.

ಆಮೇಲೆ ಹುಡುಗಿ ಅನುಭವಿಸುವ ಯಾತನೆಗಳು ಅಷ್ಟಿಷ್ಟಲ್ಲ. ಅತ್ತ ಹುಡುಗನನ್ನೂ ಬಿಡಲಾಗದೆ ಇತ್ತ ಮನೆಯವರನ್ನೂ ಬಿಡಲಾಗದ ತ್ರಿಶಂಕು ನರಕ ಅವಳೆದುರು ಸೃಷ್ಟಿಯಾಗುತ್ತದೆ. ಅವನ ಜೊತೆ ಮಾತಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಇಮೋಷನಲ್ ಬ್ಲಾಕ್ ಮೇಲ್ ಮಾಡುವ ಅಮ್ಮ, ನನ್ನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಲೆಂದೇ ಹುಟ್ಟಿದವಳು ನೀನು ಅಂತ ದಿನಕ್ಕೆ ಹತ್ತು ಸಲ ಹೇಳುವ ಅಪ್ಪ, ಅಪ್ಪ-ಅಮ್ಮನ ಸಾವು ಬದುಕು ನಿನ್ನ ಕೈಯಲ್ಲಿದೆ ಅಂತ ಬೆದರಿಸುವ ಸಂಬಂಧಿಕರು, ಅವಳಿಗೀಗ ತನ್ನ ಅವಶ್ಯಕತೆಯಿದೆ, ಮನೆ ವಾತಾವರಣ ತಿಳಿಯಾಗುವವರೆಗೂ ಸಂಯಮದಿಂದ ಇರಬೇಕೆಂಬ ಕನಿಷ್ಠ ಪ್ರಜ್ಞೆ ಇಲ್ಲದ, ಕ್ಷಣ ಕ್ಷಣಕ್ಕೂ ಅನುಮಾನಿಸುವ ಹುಡುಗ. ಈ ತಾಕಲಾಟಗಳ ಮಧ್ಯೆಯೇ ಒಂದು ದುರ್ಬಲ ಕ್ಷಣದಲ್ಲಿ ಕೊನೆ ಪಕ್ಷ ಮನೆಯವರಾದರೂ ಖುಶಿಯಾಗಿರಲಿ ಅನ್ನುವ ಕಾಳಜಿಗೋ, ಅಸಹಾಯಕತೆಗೋ ತನ್ನತನವನ್ನು, ಖುಶಿಯನ್ನು, ತಾನು ಇಷ್ಟಪಟ್ಟು ಪ್ರೀತಿಸಿದ ಪ್ರೀತಿಯನ್ನು ಕೊಂದುಕೊಂಡು, 'ಅವನೆಂಬ' ಅವಳ ಅಗಾಧ ಕನಸಿಗೆ ಕೊಳ್ಳಿಯಿಟ್ಟು ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಲು ತಾನು ರೆಡಿ ಅಂದುಬಿಡುತ್ತಾಳೆ. ಇತ್ತ ಹೆತ್ತವರು ಅವಳ ಮನಸು ಮತ್ತೊಮ್ಮೆ ಬದಲಾಗುವ ಮುನ್ನ ಮದುವೆ ಮಾಡಿಬಿಡಬೇಕೆಂದು ತರಾತುರಿಯಲ್ಲಿ ಮದುವೆ ಮಾಡಿ ಮುಗಿಸಿ ಕೈ ತೊಳೆದು ಬಿಡುತ್ತಾರೆ.


  

 ಅತ್ತ ಹುಡುಗ, ಹಿಂದೊಮ್ಮೆ ಅವಳು ಯಾವುದೋ ಅಸಹನೆಯಿಂದ ಬಾಯ್ ಫ್ರೆಂಡ್ ಜೊತೆ ಮಾತಾಡುತ್ತಿದ್ದೆ ಅಂದಿರುವುದನ್ನೇ ನೆಪವಾಗಿಟ್ಟುಕೊಂಡು ಆ ಹುಡುಗನೇ ಇವನು ಅಂತ ಎಣ್ಣೆಗೂ ಸೀಗೆಕಾಯಿಗೂ ಇಲ್ಲದ ಸಂಬಂಧ ಕಲ್ಪಿಸಿ ಹಿಂದು ಮುಂದು ಯೋಚಿಸದೆ ಅವಳಿಗೆ ಖಳನಾಯಕಿಯ ಪಟ್ಟ ಕಟ್ಟಿಬಿಡುತ್ತಾನೆ. ಅದಕ್ಕೆ ಸಾಥ್ ನೀಡುವ ಅವನ ಫ್ರೆಂಡ್ಸ್ ಇನ್ನೊಂದಿಷ್ಟು ಉಪ್ಪು ಖಾರ ಹಚ್ಚಿ "ನಿನ್ನಂತಹ ಒಳ್ಳೆಯ ಹುಡುಗನಿಗೆ ಹೀಗೆ ಮೋಸ ಮಾಡಿದ ಅವಳಿಗೆ ಒಳ್ಳೆಯದಾಗಲ್ಲ" ಅಂತ ಹಿಡಿ ಶಾಪ ಹಾಕುತ್ತಾರೆ. ಅಲ್ಲಿಗೆ ಅವನ ಮನಸ್ಸಲ್ಲಿ ಅವಳ ಚಿತ್ರ ಪ್ರೀತಿ ಕೊಂದ ಕೊಲೆಗಾತಿಯೆಂದು ಶಾಶ್ವತವಾಗಿ ದಾಖಲಾಗಿ ಬಿಡುತ್ತದೆ. ಮೊಬೈಲ್ ಸ್ಕ್ರೀನ್ ನಲ್ಲಿ ’ಪ್ರೀತಿಯಲ್ಲಿ ಮೊದಲಿಗ ನಾನು, ಮೋಸಕ್ಕೆ ಕೊನೆಯವಳು ನೀನಾಗು’ ಅನ್ನುವ ವಾಲ್ ಪೇಪರ್ ರಾರಾಜಿಸತೊಡಗುತ್ತದೆ.

ಮದುವೆಗೆ ಮುನ್ನ ತಮ್ಮ ಅನುಮತಿಯಿಲ್ಲದೆ ಯಾರನ್ನೋ  ಪ್ರೀತಿಸಿದಳು ಅನ್ನುವ ಕಾರಣಕ್ಕೆ ಹೆತ್ತವರ ಪಾಲಿಗೂ ಅವಳು ಖಳನಾಯಕಿ, ಹೆತ್ತವರಿಗೆ ನೋವಾಗದಿರಲೆಂದು ಮದುವೆ ಮಾಡಿಕೊಂಡ ಕಾರಣಕ್ಕೆ ಹುಡುಗನ ಪಾಲಿಗೂ ಅವಳು ಖಳನಾಯಕಿ. ಆದ್ರೆ ನಿಜಕ್ಕೂ ಪ್ರೀತಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅವಳಿಗೂ ನೋವಿರುತ್ತದೆ. ಆದರೆ ಅದನ್ನವಳು ಬಹಿರಂಗವಾಗಿ ವ್ಯಕ್ತಪಡಿಸಲಾರಳು ಅಷ್ಟೆ. ಎಲ್ಲವನ್ನೂ ಮರೆತಿದ್ದೇನೆಂದು ಸೋಗು ಹಾಕಿದರೂ ಒಳಗೊಳಗೇ ಕೊರಗುತ್ತಿರುತ್ತಾಳೆ, ಕರಗುತ್ತಿರುತ್ತಾಳೆ. ’ತನ್ನವರು’ ಅಂತ ಸದಾ ತುಡಿಯುವ, ಕಾಳಜಿ ತೋರುವ, ಕನಿಕರಿಸುವ, ಪ್ರೀತಿಸುವ, ಒಲವ ಸುಧೆ ಹರಿಸುವ ಅವಳ ಒಳಗುದಿಗಳನ್ನೂ ಸ್ವಲ್ಪ ಅರ್ಥ ಮಾಡ್ಕೊಳ್ಳಿ ಪ್ಲೀಸ್...           

ಶನಿವಾರ, ಆಗಸ್ಟ್ 15, 2015

ಸ್ವಾತಂತ್ರ್ಯ



ಸ್ಟೇಜ್ ಹತ್ತಿ ಭಾಷಣ ಮಾಡಿ
ಪ್ರೈಝ್ ಗಿಟ್ಟಿಸಿ ನಗೆ ಬೀರಿ
ಹೆಮ್ಮೆಯಿಂದ ’ಜೈ ಹಿಂದ್’ ಅಂದ
ಬಾಲ್ಯದ ಸ್ವಾತಂತ್ರ್ಯವೇಕೋ
ನನ್ನ ಅಣಕಿಸುತ್ತಿದೆ ಇಂದು

ಮರ್ಯಾದಾ ಹತ್ಯೆಯ ಹೆಸರಲಿ
ಜೀವ ಕಳೆದುಕೊಂಡವರ
ಅಪರಿಮಿತ ನೋವುಗಳಲಿ
ಸ್ವಾತಂತ್ರ್ಯ ನಿಟ್ಟುಸಿರು ಬಿಡುತ್ತಿರುವಾಗ

ಕಾಮಪಿಪಾಸುಗಳ ಕರಾಳ ಹಸ್ತದಲಿ
ಮುರುಟಿಹೋದ ಕಂದಮ್ಮಗಳ
ಕಣ್ಣೀರ ಬೇಗೆಯಲಿ
ಸ್ವಾತಂತ್ರ್ಯ ಸದ್ದಿಲ್ಲದೆ ನಲುಗುತ್ತಿರುವಾಗ

ಸಾಲದ ಶೂಲದಲಿರುವ
ಬಡ ರೈತನ ಕರುಳಬೇನೆಯ
ಅಸಹನೀಯ ನಿರಾಸೆಯಲಿ
ಸ್ವಾತಂತ್ರ್ಯ ಆತ್ಮಹತ್ಯೆಗೆಯ್ಯುತಿರುವಾಗ

ದುರ್ಗಮ ಕೊಳ್ಳಗಳ
ಕಲ್ಲು ಕೋರೆಗಳಲಿ
ಜಗವರಿಯದ ಬಾಲಕಾರ್ಮಿಕರು
ರಕ್ತ ಸುರಿಸುತಿರುವಾಗ

ದಿನ ಬೆಳಗಾಗುತ್ತಿದ್ದಂತೆ
ಕಸದ ತೊಟ್ಟಿಯಲಿ
ಹಣ್ಣು ಹಸುಳೆಗಳು
ದಿಕ್ಕಿಲ್ಲದೆ ಕಣ್ಣು ಬಿಡುತ್ತಿರುವಾಗ

ಗಡಿಕಾಯ್ದು ಪ್ರಾಣ ತೆತ್ತ
ವೀರಯೋಧನ ಸಮಾಧಿಯ ಮೇಲೆ
ಅಧಿಕಾರಸ್ಥರು ಅಹಂಕಾರದ
ಠೇಂಕಾರ ಮೊಳಗಿಸುತಿರುವಾಗ

ಉಸಿರುಗಟ್ಟುವ ಭ್ರಷ್ಟಾಚಾರ
ಮೇರೆಮೀರಿರುವ ಅನಾಚರ
ನಜ್ಜುಗುಜ್ಜಾಗಿರುವ ಸಹಿಷ್ಣುತೆಯ
ನಡುವೆ ಸ್ವಾತಂತ್ರ್ಯ ತುಸು
ಉದಾರತೆಗಾಗಿ ಯಾಚಿಸುತಿರುವಾಗ

ಹೇಗೆ ಹೇಳಲಿ ನಾನು ನನ್ನದು
ಸರ್ವಸ್ವತಂತ್ರ ದೇಶವೆಂದು
ಹೇಗೆ ಆರೋಹಿಸಲಿ ನಾನು
ತ್ರಿವರ್ಣವನು ಮುಗಿಲೆತ್ತರಕೆ...?

ಸೋಮವಾರ, ಜುಲೈ 6, 2015

ಮರು ಹುಟ್ಟು

                                         

ಹುಚ್ಚು ರಭಸದಿ ಹರಿವ
ತಿಳಿ ಹಸಿರು ರಂಗಿನ
ಹೊಸ ನೀರ ತೊರೆಯ ಮೇಲೆ
ಮರುಹುಟ್ಟು ಪಡೆದಿದೆ
ಹುಟ್ಟಿನಾಸರೆಯಲಿ ಬದುಕೊಂದು

ಮೋಸ ವಂಚನೆಗಳ ಲಂಚ ರುಷುವತ್ತು
ಆಸ್ತಿ ಅಂತಸ್ತುಗಳ ಗತ್ತು ಗೈರತ್ತು
ಎಲ್ಲ ನಿರಾಶೆಗಳ ಮಿತಿಯ ಮೀರಿ
ಮನಸ ಮೂಲೆಯ ಮರದ ತುದಿಯಲಿ
ಟಿಸಿಲೊಡೆದಿದೆ ಹೊಸ ಕನಸೊಂದು

ತಿಳಿಗೊಳದೆದೆಯ ತಳಮಳದಲಿ
ನೂರು ತಲ್ಲಣವ ಬಚ್ಚಿಟ್ಟು
ಬಾಳ ಬಾಂದಳದಲಿ
ನೂರು ಭಾವಗಳ ಕಾಪಿಟ್ಟು
ಉದಿಸಿದೆ ಹೊಸ ಭರವಸೆಯೊಂದು

ಮೌನ ಕಣಿವೆಯಲಿ ಮಾತ ಮಂಟಪ ಕಟ್ಟಿ
ಬೇಸರಿಸದೆ ಹೊಳೆ ದಾಟಿಸಿ
ವಂಚನೆಯ ಸೋಂಕಿಲ್ಲದೆ
ಮುಖದ ಮೇಲೊಂದು ತಿಳಿ ನಗೆ
ಮೂಡಿಸುವವನ ಬದುಕು ಮುಳಗದಿರಲಿ





ಭಾನುವಾರ, ಜೂನ್ 28, 2015

ಮೌನ ಕಣಿವೆಯಲಿ...

ಸಂಚಾರ 9


ನೋಡ ನೋಡುತ್ತಿದ್ದಂತೆಯೇ ಇಪ್ಪತ್ತಮೂರು ವರ್ಷಗಳು ಕಳೆದು ಹೋದವು. ಮುಖ್ಯ ಶಿಕ್ಷಕರಾಗಿದ್ದ ಮನೋಹರ್ ರಾವ್ ಅವರು ನಿವೃತ್ತರಾಗಿ ಅವರ ಸ್ಥಾನವನ್ನು ನಾನು ಅಲಂಕರಿಸಿದ್ದೆ. ಅವರು ನನಗೆ ಅಧಿಕಾರ ಬಿಟ್ಟುಕೊಡಲು ನಿರ್ಧರಿಸಿದಾಗ ನನ್ನಿಂದ ನಿಭಾಯಿಸಲು ಸಾಧ್ಯವಿಲ್ಲವೆಂದು ನಾನು ನಿರಾಕರಿಸಿದ್ದೆ. ನನ್ನೊಳಗೆ ಧೈರ್ಯ ತುಂಬಿ ಈ ಹುದ್ದೆಗೆ ನಾನೇ ಅರ್ಹಳೆಂದು ನನಗೇ ನಂಬಿಕೆ ಹುಟ್ಟಿಸಿದ್ದರು. ತೀರಾ ಅವರ ಖುರ್ಚಿಯಲ್ಲಿ ಕುಳಿತುಕೊಳ್ಳುವ ಮುನ್ನ ನಾನು ಪುಟ್ಟ ಮಗುವಿನಂತೆ ಅತ್ತಿದ್ದೆ. ಅವರು ಒಂದು ಮಾತೂ ಹೇಳದೆ ಸುಮ್ಮನೆ ತಲೆ ನೇವರಿಸಿದ್ದರು. ಯಾವ ಜನ್ಮದಲ್ಲಿ ನನ್ನ ತಂದೆಯಾಗಿದ್ದರೋ?

ಇನ್ನು ಅಂಬೆಗಾಲಿಕ್ಕುತ್ತಾ ಹಿಂದೆ ಮುಂದೆ ಸುತ್ತಾಡಿಕೊಂಡು ಬಿಸಿಲ ಬೇಗೆಯಂತಹಾ ನನ್ನ ಒಂಟಿ ಬದುಕಿಗೆ ತಣ್ಣೀರ ಸಿಂಚನದಂತಿದ್ದ ಮಗಳೀಗ ಪದವೀಧರೆ, ಉದ್ಯೋಗಸ್ತೆ. ಶಿಕ್ಷಣದ ಜೊತೆಗೆ ಎಲ್ಲೂ ರಾಜಿಯಾಗದೆ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಮಲ್ಟಿನ್ಯಾಷನಲ್ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿ ತನ್ನ ಕಾಲ ಮೇಲೆ ನಿಂತಿದ್ದಾಳೆ. ನನ್ನ ಬದುಕಿನ ಎಲ್ಲಾ ಅರೆಕೊರೆಗಳಿಗೆ, ಪ್ರಶ್ನೆಗಳಿಗೆ ಉತ್ತರವಾಗಿ ಅವಳೀಗ ನನಗೆ ಆಸರೆಯಾಗಿದ್ದಾಳೆ.

ಇನ್ನೇನಿದ್ದರೂ ಒಳ್ಳೆಯ ಕಡೆ ನೋಡಿ ಅವಳಿಗೊಂದು ಮದುವೆ ಮಾಡಿಬಿಟ್ಟರೆ ನನಗೆ ನೆಮ್ಮದಿ. ಆಮೇಲೆ ನಾನು ನನ್ನ ಉಳಿದ ಜೀವನವನ್ನು ಶಾಲೆಗಾಗಿ ಮುಡಿಪಿಡಬಹುದು ಅಂದುಕೊಳ್ಳುತ್ತಿರುವಾಗಲೇ ಒಂದು ದಿನ ಅವಳು ಒಬ್ಬ ಹುಡುಗನನ್ನು ತಂದು ನನ್ನ ಮುಂದೆ ನಿಲ್ಲಿಸಿ "ಅಮ್ಮಾ, ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಿದ್ದೇವೆ. ನೀನೊಪ್ಪಿಗೆ ಕೊಟ್ಟರೆ ಮದುವೆಯಾಗುತ್ತೇವೆ" ಅಂದಳು. ಒಮ್ಮೆ ಬೆಚ್ಚಿ ಬಿದ್ದೆ. ಪ್ರೀತಿ ಪ್ರೇಮ ಎಂದೆಲ್ಲಾ ಹೋದರೆ ಎಲ್ಲಿ ಅವಳ ಬದುಕೂ ನನ್ನಂತಾಗಿಬಿಡುತ್ತೋ ಅನ್ನುವ ಭಯ ಕಾಡಿತು.

ಆದರೆ ಹುಡುಗನ ಇತಿಹಾಸ ಕೆದಕಿದಾಗ ಅವನು, ನನ್ನ ಬದುಕಿಗೆ ಹೊಸ ಬೆಳಕನ್ನು ತೋರಿದ ಮನೋಹರ್ ರಾವ್ ಅವರ ಪುತ್ರ ಅನ್ನುವುದು ತಿಳಿಯಿತು. ಮುಂದೇನೂ ಯೋಚಿಸಬೇಕಾಗಿರಲಿಲ್ಲ. ಅಂತಹಾ ಹೆಂಗರುಳಿನ ಹಿರಿಯರ ಮನೆಗೆ ನನ್ನ ಮಗಳು ಸೊಸೆಯಾಗಿ ಹೋದರೆ ಸುಖವಾಗಿ ಇರುತ್ತಾಳೆ ಅಂದುಕೊಂಡು ನನ್ನ ಕಣ್ಣಿಂದ ಎರಡು ಹನಿ ಸಂತೋಷದ ಅಶ್ರುಧಾರೆ ಜಾರಿತು, ಅದು ನೆಲ ಸೇರದಂತೆ ಮಗಳು ಕೈಯೊಡ್ಡಿ ಕಣ್ಣಿಗೊತ್ತಿಕೊಂಡಳು.

ಮುಂದೆ ಎಲ್ಲವೂ ಸಲೀಸಾಗಿಯೇ ನಡೆದು ಹೋಯಿತು. ಮನೋಹರ್ ರವರ ಮನೆಗೆ ಹೋಗಿ ನಾನೆ ಮದುವೆಯ ಪ್ರಸ್ತಾಪವನ್ನಿಟ್ಟೆ. ಆ ಹಿರಿ ಜೀವ ಯಾವ ತಕರಾರೂ ಮಾಡದೆ, ವರ ದಕ್ಷಿಣೆ ವರೋಪಚಾರ ಎಂದು ಯಾವ ರಗಳೆಯನ್ನೂ ಮಾಡದೆ, ಜಾತಕ ಜ್ಯೋತಿಷ್ಯದ ಗೊಡವೆಯೇ ಬೇಡವೆಂದು ಮದುವೆಗೆ ಒಪ್ಪಿಕೊಂಡರು. ಮೊದಲು ರಿಜಿಸ್ಟ್ರಾರ್ ಆಫೀಸಿನಲ್ಲಿ ನಂತರ ದೇವಸ್ಥಾನದಲ್ಲಿ ಸರಳವಾಗಿ ಇಬ್ಬರ ಮದುವೆ ಕೆಲವೇ ಕೆಲವು ಹಿತೈಷಿಗಳ ಸಮ್ಮುಖದಲ್ಲಿ ನಡೆದು ಹೋಯಿತು. ತೀರಾ ಧಾರೆ ಎರೆದುಕೊಡುವ ಹೊತ್ತಿಗೆ  ಅವಳ ಅಪ್ಪನ ನೆನಪಾದುದನ್ನು ಬಿಟ್ಟರೆ, ಕಾವ್ಯಾಳಿಗೆ ಮಕ್ಕಳಾಗಿದ್ದರೆ ಅವಳ ಮಕ್ಕಳೂ ಈಗ ಮದುವೆಯ ವಯಸ್ಸಿಗೆ ಬಂದಿರುತ್ತಾರೆ ಅಂತ ಅನ್ನಿಸಿರುವುದನ್ನು ಬಿಟ್ಟರೆ ಇನ್ನೆಲ್ಲೂ ಅವರಿಬ್ಬರಿರದಿರುವುದು ಕೊರತೆಯಾಗಿ ಕಾಡಲೇ ಇಲ್ಲ.  ಮನೋಹರ್ ರವರಂತಹ ಶುದ್ಧಮನಸ್ಕರು ರಶ್ಮಿಗೆ ಅಪ್ಪ, ಮಾವ ಎರಡೂ ಆಗುತ್ತಿರುವಾಗ ವಂಚಕರು ನೆನಪಾಗುವುದಾದರೂ ಹೇಗೆ?

ಮಗಳಿಲ್ಲದ ಅಮ್ಮನ ಮನೆಯಲ್ಲಿ ನಾನೀಗ ಮತ್ತೆ ಒಂಟಿ. ಈ ಒಂಟಿತನದಲ್ಲಿ ಕಿತ್ತು ತಿನ್ನುವ, ಇಂಚಿಂಚಾಗಿ ಕೊಲ್ಲುವ ಕಹಿ ಘಟನೆಗಳ ಕರಿ ನೆರಳಿಲ್ಲ. ೨೩ ವರ್ಷಗಳ ಜೀವನದ ಅನನ್ಯ ಅನುಭವಗಳ ಸಾರ್ಥಕ್ಯವಿದೆ. ಒಮ್ಮೆ ಪಾತಾಳಕ್ಕಿಳಿಸಿ ಮತ್ತೊಮ್ಮೆ ಆಕಾಶದೆತ್ತರೆಕ್ಕೆ ಏರಿಸಿದ ಏರಿಳಿತಗಳ ಬಾಳಿನೆಡೆಗಿನ ಹೆಮ್ಮೆಯಿದೆ. ನಾನೀಗ ಮತ್ತೆ ಅಪ್ಪನ ಫೊಟೋದ ಮುಂದೆ ನಿಂತಿದ್ದೇನೆ. ನನ್ನೊಳಗಿನ ಮೌನ "ಅಪ್ಪಾ, ಕೊನೆಗೂ ನಿನ್ನ ಈ ಭೂಮಿ ತೂಕದ ಮಗಳ ಸಹನೆ ಗೆದ್ದಿತು" ಅಂತ ಪಿಸುಗುಡುತ್ತಿದೆ. ಬದುಕೀಗ ದಾಳಗಳನ್ನೆಲ್ಲಾ ಚೆಲ್ಲಿ, ಆಟ ನಿಲ್ಲಿಸಿ ನನ್ನೆಡೆಗೆ ಮುಗಳ್ನಗು ಬೀರುತ್ತಿದೆ.


                                                                                                                               (ಮುಗಿಯಿತು)                 

ಮೌನ ಕಣಿವೆಯಲಿ...

ಸಂಚಾರ 8



ನನ್ನ ಬದುಕಿನ ಯಾನ ಮತ್ತೆ ಹುಟ್ಟಿ ಬೆಳೆದ ಹಳ್ಳಿಯ ಕಡೆ ಹೊರಳಿತು. ಪುಟ್ಟ ಮಗುವನ್ನೆತ್ತಿಕೊಂಡು ಅಮ್ಮನಿಲ್ಲದ ತವರಿಗೆ ಮರಳಿದೆ. ನನ್ನ ಬದುಕಿನಂತೆಯೇ ಮನೆ ಪೂರ್ತಿ ಜೇಡರ ಬಲೆ ತುಂಬಿಕೊಂಡಿತ್ತು.  ನಾನು ಮಗುವಾಗಿದ್ದಾಗ ಅಪ್ಪ ನನಗೆಂದು ತಂದ ತೊಟ್ಟಿಲನ್ನು ಮೊದಲು ಸ್ವಚ್ಛಗೊಳಿಸಿ ಮಗಳನ್ನು ಮಲಗಿಸಿದೆ. ಬಿಟ್ಟು ಹೋಗಿ ಒಂದು ವರ್ಷವಾಗಿದ್ದರೂ ಈ ಮನೆಯ ಪ್ರತಿ ಇಂಚಲ್ಲೂ ಅಮ್ಮ, ಅಜ್ಜಿ, ಅಪ್ಪನ ನೆನಪುಗಳಿವೆ ಅನಿಸುತಿತ್ತು. ಧೂಳು ತುಂಬಿಕೊಂಡಿದ್ದ ಫೊಟೋ ಒರೆಸಿ ಅಪ್ಪನ ಮುಂದೆ ನಿಂತು "ಅಪ್ಪಾ, ಭೂಮಿಗೂ ಪಾಸಿಟಿವ್ ಮತ್ತು ನೆಗೆಟಿವ್ ಗಳೆಂಬ ಎರಡು ಅಂತ್ಯಗಳಿವೆ. ಜೀವಜಲ ಬಚ್ಚಿಟ್ಟುಕೊಂಡಿರುವ ಅದೇ ಭೂಮಿಯೆದೆಯೊಳಗೆ ಹಲವು ರೋಷಗಳ, ಅಸಹಾಯಕತೆಗಳ, ನೋವುಗಳ ಒಟ್ಟು ಮೊತ್ತವಾದ ಜ್ವಾಲಾಮುಖಿಯೂ ಇದೆ. ಒತ್ತಡ ಹೆಚ್ಚಾದರೆ ಭೂಮಿಯೂ ಸ್ಪೋಟಿಸಿಬಿಡುತ್ತಾಳೆ. ಇನ್ನು ಹುಲುಮಾನವರಾದ ನಾವು ಯಾವ ಲೆಕ್ಕ? ಆದ್ರೆ ನಿನ್ನ ಮಗಳು ಅಳಿಯನಿಗೆ ಈ ಸರಳ ಸತ್ಯ ಅರ್ಥ ಆಗಲೇ ಇಲ್ಲ. ಅಪ್ಪಾ, ನಿನ್ನ ಈ ಭೂಮಿ ತೂಕದ ಮಗಳು ಸ್ಪೋಟಿಸಬಾರದೆಂದು ಮನೆ ಬಿಟ್ಟು ಬಂದಿದ್ದಾಳೆ. ಆಶಿರ್ವಾದಿಸು." ಅಂದೆ. ಯಾಕೋ ಅಪ್ಪ, ಅಮ್ಮನ ಕಣ್ಣಲ್ಲೂ ತೆಳುವಾಗಿ ನೀರು ಓಲಾಡುತ್ತಿದೆ ಅನಿಸಿತು. ಬದುಕು ನಗುತ್ತಿತ್ತಾ...? ಗೊತ್ತಿಲ್ಲ.

ಜೇಡರ ಬಲೆ ತೆಗೆದು, ಧೂಳು ಒರೆಸಿ ಮನೆ ಸ್ವಚ್ಚವಾದ ಮೇಲೆ ಮನಸ್ಸಿಗೇನೋ ಸಮಾಧಾನ, ಯಾವುದೋ ಹೊಸ ಬೆಳಕು ಗಾಳಿ ಬಂದಂತಾಯಿತು. ಆದರೆ ಜೀವನ..? ಅದು ಬರಿ ಗಾಳಿ ಬೆಳಕಿಂದ ಸಾಗದಲ್ಲಾ? ವಿದ್ಯಾಭ್ಯಾಸ ಬೇರೆ ಪಿ.ಯು.ಸಿ ಗೆ ಮೊಟಕುಗೊಂಡಿತ್ತು. ಸ್ವಾಭಿಮಾನದ ಬದುಕಿಗಾಗಿ ಅಸಹ್ಯದ ಬದುಕನ್ನು ಬಿಟ್ಟು ಬಂದಾಗಿತ್ತು. ಮತ್ತೆ ಅದೇ ಹೊಲಸಿನೊಳಕ್ಕೆ ಕಾಲಿಡುವ ಯಾವ ಇರಾದೆಯೂ ನನಗಿರಲಿಲ್ಲ. ಆದ್ರೆ ಬದುಕಿಗೊಂದು ನೆಲೆ ಬೇಕಾಗಿತ್ತು. ತಾನು ಓದಿದ ಪ್ರಾಥಮಿಕ ಶಾಲೆಯಲ್ಲೇ ಶಿಕ್ಷಕಿಯಾಗಿ ಕೆಲಸ ಕೇಳಿಕೊಂಡು ಹೋದೆ. ನನ್ನ ಬದುಕಿನ ಏರಿಳಿತಗಳ ಬಗ್ಗೆ ತಿಳಿದಿದ್ದ ಮುಖ್ಯ ಶಿಕ್ಷಕ ಮನೋಹರ್ ರಾವ್ ಅವರು ಯಾವ ತಕರಾರೂ ಮಾಡದೆ ಕೆಲಸ ಕೊಟ್ಟರು. ಬದುಕಿಗೊಂದು ದಾರಿಯಾಯಿತು. ಬರುವ ಅಲ್ಪ ಸಂಬಳದಲ್ಲೇ ಮನೆಯನ್ನೂ ಸಂಭಾಳಿಸಿ ಮಗಳ ಭವಿಷ್ಯಕ್ಕಾಗಿ ಉಳಿತಾಯ ಮಾಡುತ್ತಿದ್ದೆ.

ಆದರೆ ಒಮ್ಮೊಮ್ಮೆ ಕಾಡುತ್ತಿದ್ದ ಒಂಟಿತನ, ಯಾರೂ ಇಲ್ಲದ ಅನಾಥಭಾವ, ಎಲ್ಲಾ ಶೂನ್ಯ ಅಂತ ಅನ್ನಿಸಿಬಿಡುವ ಖಾಲಿತನವನ್ನು ಎದುರಿಸಲಾಗದೆ ತತ್ತರಿಸಿಬಿಡುತ್ತಿದ್ದೆ. ಬೆಳೆಯುತ್ತಿದ್ದ ಮಗಳು "ಫ್ರೆಂಡ್ಸ್ ಗೆಲ್ಲಾ ಇರುವ ಅಪ್ಪ ನನಗೇಕಿಲ್ಲ?" ಎಂದು ಅಳುವಾಗೆಲ್ಲಾ ನನ್ನ ಬದುಕಿನ ಅಸಹಾಯಕತೆಯ ನೆನೆದು ಅಸಹನೀಯ ದುಃಖವಾಗುತ್ತಿತ್ತು. ಬರಬರುತ್ತಾ ಅದೇ ಜೀವನವಾಯ್ತು. ಒಂಟಿತನವೇ ಸಂಗಾತಿಯಾಯ್ತು. ನನಗಾಗಿ ಮಗಳು...ಮಗಳಿಗಾಗಿ ನಾನು ಅನ್ನುವುದೇ ಬದುಕಿನ ಸೂತ್ರವಾಯಿತು. ರಶ್ಮಿ ದೊಡ್ಡವಳಾಗುತ್ತಿದ್ದಂತೆ ನನ್ನ ಬದುಕಿನ ಹೋರಾಟವನ್ನೆಲ್ಲಾ ತಾನೇ ತಾನಾಗಿ ಅರ್ಥ ಮಾಡಿಕೊಂಡಳೋ ಎಂಬಂತೆ ಅಪ್ಪನ ಬಗ್ಗೆ ಕೇಳುವುದನ್ನೇ ನಿಲ್ಲಿಸಿಬಿಟ್ಟಳು. ಆ ಮಟ್ಟಿಗಿನ ಪರಿಪಕ್ವತೆ ಅವಳಲ್ಲಿರುವುದಕ್ಕೆ ಅದೆಷ್ಟು ಬಾರಿ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದೇನೋ ನನಗೇ ಗೊತ್ತಿಲ್ಲ.

ಈ ಮಧ್ಯೆ ಒಂದು ದಿನ ಮನೋಹರ್ ರಾವ್ ಅವರು ನನ್ನನ್ನು ಕಛೇರಿಗೆ ಕರೆಯಿಸಿ "ಮೂರು ವರ್ಷಗಳಲ್ಲಿ ನಮ್ಮ ಶಾಲೆಗೆ ಹೈಸ್ಕೂಲ್ ಸೆಕ್ಷನ್ ಸ್ಯಾಂಕ್ಷನ್ ಆಗಲಿದೆ. ಹೇಗೂ ನೀವು ಇದೇ ಶಾಲೆಯಲ್ಲಿ ಓದಿರುವವರು. ಖಾಸಗಿಯಾಗಿ ಪದವಿ ಕಟ್ಟಿ ಏಕೆ ಇಲ್ಲೇ ಹೈಸ್ಕೂಲ್ ಶಿಕ್ಷಕಿ ಮುಂದುವರಿಯಬಾರದು?" ಎಂದು ಪ್ರಶ್ನಿಸಿದರು. ಆ ಕ್ಷಣಕ್ಕೆ ಏನು ಹೇಳಬೇಕೆಂದು ತೋಚಲಿಲ್ಲ. ಒಂದೆರಡು ದಿನಗಳ ಸಮಾಯಾವಕಾಶ ಕೇಳಿದೆ. ಒಂದು ಕಡೆ ಕೆಲಸದ ಒತ್ತಡ, ಇನ್ನೊಂದೆಡೆ ಮಗಳ ಜವಾಬ್ದಾರಿ. ಇವೆರಡರ ಮಧ್ಯೆ ಓದೋಕೆ, ಬರೆಯೋಕೆ ನನ್ನಿಂದ ಸಾಧ್ಯಾನಾ ಅಂತೆಲ್ಲಾ ಅನಿಸುತ್ತಿತ್ತು.

ಆದರೆ ಆಗೊಮ್ಮೆ ಈಗೊಮ್ಮೆ ಕಾಡುವ ಒಂಟಿತನವನ್ನು, ಸೂಚನೆಯೇ ಇಲ್ಲದೆ ಧುತ್ತೆಂದು ಪ್ರತ್ಯಕ್ಷವಾಗಿಬಿಡುವ ಬೇಸರವನ್ನು, ಏಕಾಂತದಲ್ಲಿ ಹಿಂಡಿ ಹಿಪ್ಪೆ ಮಾಡಿಬಿಡುವ ಹಳೆ ನೆನಪುಗಳಿಂದ ಬಿಡುಗಡೆ ಪಡೆದುಕೊಳ್ಳಲು ನಿಂತು ಹೋಗಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸುವುದೋ ಸೂಕ್ತ ಮಾರ್ಗ ಎಂದು ತೋರಿದ ಕ್ಷಣವೇ ಖಾಸಗಿಯಾಗಿ ಪದವಿ ಕಟ್ಟಲು ನಿರ್ಧರಿಸಿದೆ.

ಅಲ್ಲಿಂದೀಚೆಗೆ ಬದುಕು ಬದಲಾಯಿತು. ರಶ್ಮಿಯ ವಿದ್ಯಾಭ್ಯಾಸದ ಜೊತೆ ಜೊತೆಗೆ ನನ್ನ ಓದೂ ಸಾಗುತ್ತಿತ್ತು. ಅವಳಿಗೆ ನಾನು, ನನಗೆ ಅವಳು ಪರಸ್ಪರ ಸಹಕರಿಸುತ್ತಿದ್ದೆವು. ಮನೆ, ಶಾಲೆ, ಅವಳ ಓದು, ನನ್ನ ಓದು ಅಂತೆಲ್ಲಾ ಹಿಂದಿನ ಬದುಕಿನೆಡೆಗೆ ತಿರುಗಿ ನೋಡಲೂ ಪುರುಸೊತ್ತಿಲ್ಲವೆಂಬಷ್ಟು ಇಂದಿನ ಬದುಕಿನಲ್ಲಿ ವ್ಯಸ್ತಳಾಗಿಬಿಟ್ಟೆ. ಮಗಳಾದರೂ ಅಷ್ಟೆ. ಬುದ್ಧಿವಂತೆ, ಎಂದೂ ನನ್ನ ಸಾಮರ್ಥ್ಯವನ್ನು ಮೀರಿದ ಬೇಡಿಕೆ ಇಟ್ಟವಳೇ ಅಲ್ಲ. ನನ್ನೆಲ್ಲಾ ಮಿತಿಗಳನ್ನು ಅರಿತುಕೊಂಡೇ ಎಲ್ಲೂ ನನಗೆ ನಿರಾಶೆಯಾಗದಂತೆ, ಹೊರೆಯಾಗದಂತೆ ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದಳು.

ಮೂರು ವರ್ಷ ಕಳೆಯುತ್ತಿದ್ದಂತೆ ನನ್ನ ಪದವಿ ಮುಗಿದು ಹೈಸ್ಕೂಲ್ ಶಿಕ್ಷಕಿಯಾಗಿ ಬಡ್ತಿ ಪಡೆದೆ. ವೈಯಕ್ತಿಕ ಬದುಕಿನ ದುಃಖ, ದುಮ್ಮಾನ, ನೋವುಗಳನ್ನು ಮೀರಿ ವೃತ್ತಿ ಜೀವನ ನನ್ನ ಕೈ ಹಿಡಿದಿತ್ತು. ಶಾಲೆಯ ವಿದ್ಯಾರ್ಥಿಗಳಂತೂ ನನ್ನ ತುಂಬಾ ಹಚ್ಚಿಕೊಂಡು ಬಿಟ್ಟಿದ್ದರು. ಈಗೀಗ ಹಳೆ ಬದುಕು, ಅದರ ನೋವು, ನನಗಾದ ಪ್ರಚ್ಛನ್ನ ಮೋಸ ಯಾವುದೂ ನೆನಪಾಗುತ್ತಲೇ ಇರಲಿಲ್ಲ.



                                                                                                                                                      (ಸಶೇಷ)




ಮೌನ ಕಣಿವೆಯಲಿ...

ಸಂಚಾರ  7



ಇನ್ನು ನನಗುಳಿದ್ದಿದ್ದುದು ಕಣ್ಣಾರೆ ಕಂಡಿರುವುದನ್ನು ಪರಾಂಬರಿಸುವ ಕೆಲಸವಷ್ಟೆ. ಆದರೆ ಇಂತಹ ಸೂಕ್ಷ್ಮ ವಿಚಾರವನ್ನು ಕಟ್ಟಿಕೊಂಡ ಗಂಡನಲ್ಲಿ, ಬೆನ್ನಿಗೆ ಬಿದ್ದ ತಂಗಿಯಲ್ಲಿ ಪ್ರಸ್ತಾಪಿಸುವುದಾದರೂ ಹೇಗೆ ಅನ್ನುವ ಗೊಂದಲವಿನ್ನೂ ಮುಗಿದಿರಲಿಲ್ಲ. ಒಂದೇ ಏಟಿಗೆ ಅಂತದ್ದೇನೂ ನಡೆದೇ ಇಲ್ಲ ಎಂದು ನಿರಾಕರಿಸಿ ಬಿಟ್ಟರೆ ಏನು ಮಾಡಲಿ ಅನ್ನುವ ಭಯ ಬೇರೆ ಕಾಡುತ್ತಿತ್ತು.

ಆದರೆ ಹಿಂದಿನ ದಿನ ಪೂರ್ತಿ ನನ್ನ ಕಣ್ಣು ತಪ್ಪಿಸಿ ಓಡಾಡುತ್ತಿದ್ದವರು ಅವತ್ತು ಯಾವ ಅಳುಕೂ ಇಲ್ಲವೆಂಬಂತೆ ಬಿಡುಬೀಸಾಗಿ ಸಲೀಸಾಗಿ ಓಡಾಡಿಕೊಂಡು ಸಹಜವಾಗಿದ್ದರು. ಬಹುಶಃ ವಂಚನೆಯ ಜಾಯಮಾನವೇ ಅಂತಹುದೇನೋ?  ಆರಂಭದಲ್ಲಿ ಕಾಡುವ ಅಳುಕು, ಹಿಂಜರಿಕೆಗಳು ಕೆಲ ಸಮಯ ಸಾಗುತ್ತಿದ್ದಂತೆ ಆತ್ಮದ್ರೋಹದ ಕರಿನೆರಳಿನ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತವೆಯೇನೋ? ಒಮ್ಮೆ ದೀರ್ಘ ಶ್ವಾಸ ಎಳೆದುಕೊಂಡು, ಅವರಿಬ್ಬರನ್ನು ಕೂರಿಸಿ ಆದಷ್ಟು ಶಾಂತವಾಗಿ ಅವರಿಬ್ಬರ ಸಂಬಂಧದ ಬಗ್ಗೆ ಕೇಳಿದೆ.

ಕಾವ್ಯಾಳೇ ಮೊದಲು ಮಾತು ಶುರುವಿಟ್ಟುಕೊಂಡಳು. "ಸರಿ ಅಕ್ಕಾ, ನಾವೇ ಇದನ್ನು ನಿನ್ನ ಬಳಿ ಚರ್ಚಿಸಬೇಕೆಂದಿದ್ದೆವು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆವು ಅಷ್ಟೆ. ಈಗ ನಿನಗೇ ಎಲ್ಲಾ ತಿಳಿದಿರುವಾಗ ಮುಚ್ಚು ಮರೆ ಮಾಡಲು ಎನೂ ಉಳಿದಿಲ್ಲ. ಹೌದು, ನಮ್ಮಿಂದ ತಪ್ಪಾಗಿದೆ. ನೀನು ಹೆರಿಗೆ, ಬಾಣಂತನ ಅಂತ ಒದ್ದಾಡುತ್ತಿರುವಾಗ ಒಂದು ದುರ್ಬಲ ಕ್ಷಣದಲ್ಲಿ ತಪ್ಪು ನಡೆದುಹೋಯಿತು. ನೀನು ಧೈರ್ಯಸ್ಥೆ, ನನಗಿಂತ ದೊಡ್ಡವಳು. ಪರಿಸ್ಥಿತಿಯನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿ. ಈಗ ನಡೆದುದರ ಬಗ್ಗೆ ವಿಚಾರ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು ಒಂದಿಷ್ಟು ಮನಸ್ತಾಪಗಳಿಗೆ ಕಾರಣವಾಗುತ್ತದೆಯೇ ಹೊರತು ಇನ್ನೇನೂ ಆಗುವುದಿಲ್ಲ. ಹಾಗಾಗಿ ಮುಂದೆ ಏನು ನಡೆಯಬೇಕು ಅನ್ನುವುದರ ಬಗ್ಗೆ ಯೋಚಿಸು. ನಾನಂತೂ ಭಾವನನ್ನೇ ಮದುವೆಯಾಗಬೇಕು ಅಂತ ತೀರ್ಮಾನಿಸಿದ್ದೇನೆ" ಅಂದಳು. ಗೊತ್ತಿದ್ದ ಸತ್ಯವೇ ಆದರೂ ತೀರಾ ಮುಖಕ್ಕೆ ರಾಚಿದಾಗ ತತ್ತರಿಸಿಬಿಟ್ಟೆ. ಬಹುಶಃ ಒಳ ಮನಸು ಹಿಂದಿನ ದಿನ ನಾ ಕಂಡದ್ದೆಲ್ಲ ಸುಳ್ಳಾಗಿರಲಿ ಅಂತ ಆಶಿಸುತ್ತಿತ್ತೇನೋ?

ಮುಂದೇನು ಅಂತ ಗಂಡನೆನಿಸಿಕೊಂಡವನ ಮುಖ ನೋಡಿದೆ. ಅವನು "ಆಗಬಾರದ್ದು ಆಗಿ ಹೋಗಿದೆ ನಿಜ, ಹಾಗಂತ ಈ ಪ್ರಪಂಚದಲ್ಲಿ ಯಾರೂ ಮಾಡದ ತಪ್ಪನ್ನೇನೂ ನಾ ಮಾಡಿಲ್ಲ. ಈ ವಿಚಾರಣೆಯೆಂಬ ನಾಟಕವೇ ಬೇಡ. ನೀನಿರುವ ಹಾಗೆಯೇ ಅವಳನ್ನೂ ಮದುವೆಯಾಗಿ ಬಿಡುತ್ತೇನೆ. ಹೇಗೂ ರಕ್ತ ಹಂಚಿಕೊಂಡು ಹುಟ್ಟಿದ ಸೋದರಿಯರು. ಸವತಿ ಮಾತ್ಸರ್ಯದ ಪ್ರಶ್ನೆಯೂ ಬರುವುದಿಲ್ಲ. ಇಬ್ಬರೂ ಚೆನ್ನಾಗಿ ಹೊಂದಿಕೊಂಡು ಹೋಗಬಹುದು" ಎಂದು ಮಾತೆಲ್ಲಾ ಮುಗಿಯಿತು ಎಂಬಂತೆ ಎದ್ದು ಆಫೀಸ್ ಗೆ ಹೋದರು. ಅವರ ಬೆನ್ನ ಹಿಂದೆಯೇ ಕಾವ್ಯ ಕಾಲೇಜ್ ಗೆಂದು ಹೊರಟು ಹೋದಳು.

ಮನೆ ಪೂರ್ತಿ ಸ್ಮಶಾನ ಮೌನ. ನಡು ಮನೆಯಲ್ಲಿ ಒಂಟಿ ಪಿಶಾಚಿಯಂತೆ ನಾನು. ಇನ್ನೊಂದು ಹೆಣ್ಣಿನ ಜೊತೆ, ಆಕೆ ತಂಗಿಯೇ ಆಗಿದ್ದರೂ ಸಹ ಗಂಡನನ್ನು ಹಂಚಿಕೊಳ್ಳುವ ಕಲ್ಪನೆಯೇ ನನಗೆ ಅಸಹ್ಯ ಅನಿಸುತಿತ್ತು. ಕಾವ್ಯಾಳ ಯಾವ ಪ್ರಾಕ್ಟಿಕಾಲಿಟಿಯ ಬಗ್ಗೆ ನನಗೆ ಹೆಮ್ಮೆ ಇತ್ತೋ ಅದೇ ಪ್ರಾಕ್ಟಿಕಾಲಿಟಿ ತನ್ನೆಲ್ಲಾ ಪರಿಧಿಯನ್ನು ಮೀರಿ ಇವತ್ತು ಅಕ್ಕನ ಬದುಕನ್ನು ಮೂರಾಬಟ್ಟೆಯಾಗಿಸುವಲ್ಲಿಗೆ ಬಂದು ನಿಂತಿತ್ತು.

ಸಂಜೆ ಗಂಡ ಆಫೀಸಿನಿಂದ, ಕಾವ್ಯ ಕಾಲೇಜಿನಿಂದ ಬರುವ ಮುನ್ನ ನಾನೊಂದು ನಿರ್ಧಾರಕ್ಕೆ ಬರಬೇಕಿತ್ತು. ಮೊದಲ ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆಯಾಗ ಹೊರಟ ಗಂಡನ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಬಹುದಿತ್ತೇನೋ? ಆದ್ರೆ ಕಾವ್ಯಾಳ ಬದುಕು ಅತಂತ್ರವಾಗಿ ಬಿಡುತ್ತಿತ್ತು. ಅಮ್ಮನ ಚಿತೆಗೆ ಬೆಂಕಿಯಿಡುವ ಮುನ್ನ ಅಜ್ಜಿ ಹೇಳಿದ ಮಾತು ಬೇರೆ ಕಿವಿಯಲ್ಲಿನ್ನೂ ಅನುರಣಿಸುತ್ತಿತ್ತು. ಹಾಗಂತ ಗಂಡನನ್ನು ಹಂಚಿಕೊಂಡು ಬದುಕಲೂ ನನ್ನಿಂದ ಸಾಧ್ಯ ಇರಲಿಲ್ಲ.

ಕೊನೆಗೆ ನಾನು ಸ್ವಾಭಿಮಾನದಿಂದ ಬದುಕಲು ಡೈವೋರ್ಸ್ ಒಂದೇ ಪರಿಹಾರ ಅಂದುಕೊಂಡು ಸಂಜೆ ಅವರಿಬ್ಬರು ಬಂದ ಬಳಿಕ ನನ್ನ ನಿರ್ಧಾರವನ್ನು ತಿಳಿಸಿದೆ. ಒಂದೆರಡು ದಿನ ಅತ್ತು ಕರೆದು ರಂಪ ಮಾಡಿ ಆಮೇಲೆ ಒಪ್ಪಿಕೊಳ್ಳುತ್ತೇನೆ ಅಂದುಕೊಂಡಿದ್ದರೋ ಏನೋ. ನನ್ನ ನಿರ್ಧಾರವನ್ನು ಕೇಳಿ ಇಬ್ಬರೂ ಅಪ್ರತಿಭರಾದರು. ಗಂಡನೆನೆಸಿಕೊಂಡವನಂತೂ ಸಮಾಜದಲ್ಲಿ ಒಂಟಿ ಹೆಣ್ಣು ಬದುಕುವುದರಲ್ಲಿರುವ ಕಷ್ಟವನ್ನು ಪರಿ ಪರಿಯಾಗಿ ವಿವರಿಸಲೆತ್ನಿಸಿದರು. ಇಬ್ಬರಲ್ಲಿ ಒಬ್ಬರನ್ನು ಆಯ್ದುಕೊಳ್ಳಿ ಅನ್ನುವ ನನ್ನ ಅಚಲ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟ ಧ್ವನಿಯಲ್ಲಿ ಹೇಳಿಬಿಟ್ಟೆ. ಅದೇನು ಚಿಂತನ ಮಂಥನ ನಡೆಸಿದರೋ ಗೊತ್ತಿಲ್ಲ, ಕೊನೆಗೂ ಅವಳ ಮೇಲಿನ ಮೋಹವೇ ಗೆದ್ದು ನನ್ನ ತೊರೆಯುವ ನಿರ್ಧಾರಕ್ಕೆ ಅವರೂ ಬಂದುಬಿಟ್ಟರು.

ಮೂರು ತಿಂಗಳುಗಳಲ್ಲಿ ವಿಚ್ಛೇದನ ಪ್ರಕ್ರಿಯೆಗಳೆಲ್ಲಾ ವಿಧಿವತ್ತಾಗಿ ನಡೆದು ಮೂರು ವರ್ಷಗಳ ದಾಂಪತ್ಯ ಜೀವನ ನಾಲ್ಕಾರು ಕಾಗದ ಪತ್ರಗಳಿಗೆ ಸಹಿ ಹಾಕುವಷ್ಟರಲ್ಲಿ ಮುಗಿದು ಹೋಯಿತು. ಗಂಟು ಮೂಟೆ ಕಟ್ಟಿಕೊಂಡು ಮಗಳೊಂದಿಗೆ ಮನೆ ಬಿಟ್ಟೆ. ತೀರಾ ಹೊರಡುವ ಮುನ್ನ ಕಾವ್ಯಾಳ ಮುಂದಲೆ ನೇವರಿಸಿ "ಚೆನ್ನಾಗಿರು" ಎಂದಷ್ಟೇ ಹೇಳಿ ಹೊರಗಡಿಯಿಟ್ಟಿದ್ದೆ. ಅವಳ ಕಣ್ಣುಗಳಲ್ಲಿ ಮತ್ತದೇ ಪ್ರಾಕ್ಟಿಕಾಲಿಟಿ. ಬದುಕು ಈ ಬಾರಿ ಉರುಳಿಸಿದ ದಾಳಕ್ಕೆ ನಾ ಪಾತಾಳಕ್ಕಿಳಿದುಬಿಟ್ಟಿದ್ದೆ.


(ಸಶೇಷ)   


ಸೋಮವಾರ, ಜೂನ್ 22, 2015

ಮೌನ ಕಣಿವೆಯಲಿ...

ಸಂಚಾರ 6



ಒಳಕೋಣೆಯಲ್ಲಿ ಕಾವ್ಯ ಇದ್ದಳು. ನನ್ನ ಗಂಡ ಅನ್ನಿಸಿಕೊಂಡವನಿದ್ದ. ಕಡಲು ಭೋರ್ಗರೆಯುತ್ತಿತ್ತು. ಮನೆಯ ಮೂಲೆ ಮೂಲೆಯೂ ವಿಕಟಾಟ್ಟಹಾಸದಿಂದ ನಗುತ್ತಿತ್ತು. ಗೋಡೆಯಲ್ಲಿ ನೇತಾಡುತ್ತಿದ್ದ ಅಪ್ಪ-ಅಮ್ಮನ ಫೊಟೋ ಯಾಕೋ ಮುಸುಕಾದಂತಿತ್ತು. ನಾ ಕುಸಿದು ಬಿದ್ದೆ. ಮಗಳು ಅಂದುಕೊಂಡಿದ್ದ ತಂಗಿ ಬಟಾಬಯಲಲ್ಲೇ ಮೋಸ ಮಾಡಿದ್ದಳು. ಪರಮ ಸಂಭಾವಿತನಂದುಕೊಂಡಿದ್ದ ಗಂಡ ನಿರ್ಲಿಪ್ತತೆಯ ಸೋಗಿನಲ್ಲೇ ನೀಚತನಕ್ಕಿಳಿದಿದ್ದ.

ಏನೂ ಮಾಡಲು ತೋಚದೆ ಕೋಣೆಯ ಕದವಿಕ್ಕಿ ಸುಮ್ಮನೆ ಮನೆಯ ಹೊಸ್ತಿಲಲ್ಲಿ ಬಂದು ಕುಳಿತುಕೊಂಡೆ. ಏನೋ ವಿಚಿತ್ರ ತಳಮಳ. ತೀರಾ ಎದೆಯೊಳಗೆ ಕೈ ಹಾಕಿ ಹೃದಯವನ್ನು ಹಿಂಡಿ ಮಧ್ಯ ರಸ್ತೆಯಲ್ಲಿ ಬಿಸುಟಿ ಹೋದಂತಹಾ ಯಾತನೆ. ತನ್ನ ಮದುವೆಯಲ್ಲಿ ಲಂಗ ದಾವಣಿ ತೊಟ್ಟು, ಮೋಟುದ್ದ ಕೂದಲನು ನನ್ನಿಂದಲೇ ಹೆಣೆಯಿಸಿ, ಮುಡಿ ತುಂಬಾ ಹೂವು ಮುಡಿದು, ಕೈ ಪೂರ್ತಿ ಮುಚ್ಚುವಷ್ಟು ಹಸಿರು ಗಾಜಿನ ಬಳೆ ತೊಟ್ಟು, ಭಾವನಿಗೆ ಆರತಿ ಎತ್ತಿ ಕುಂಕುಮ ಇಟ್ಟು, ನನ್ನ ಕೈ ಹಿಡಿದು ಎಳೆದುಕೊಂಡು ಹೋಗಿ ಅವರ ಪಕ್ಕ ನಿಲ್ಲಿಸಿ "ಅಕ್ಕಾ, ಎಂಥಾ ಜೋಡೀನೇ ನಿಮ್ಮದು, ನೂರ್ಕಾಲ ಹೀಗೇ ಇರಿ" ಎಂದು ಕಣ್ಣು ತುಂಬಿ ಹಾರೈಸಿದ ಕಾವ್ಯಾಳ ಚಿತ್ರಣವನ್ನು ಕಣ್ಣಮುಂದಕ್ಕೆ ತಂದುಕೊಳ್ಳಲು ಅದೆಷ್ಟೇ ಪ್ರಯತ್ನಪಟ್ಟರೂ ಮಂಚದ ಮೇಲೆ ಅವರಿಬ್ಬರಿದ್ದ ಚಿತ್ರ ಮನಸಿಂದ ಮರೆಯಾಗುತ್ತಲೇ ಇರಲಿಲ್ಲ.

ನಾ ತಲೆಗೆ ಕೈ ಹೊತ್ತು ಕುಳಿತ ಭಂಗಿಯೇ ರೂಮಿಂದ ಕಳ್ಳ ಹೆಜ್ಜೆಯಿಟ್ಟುಕೊಂಡು ಹೊರಗೆ ಬಂದ ಅವರಿಗೆ ನನಗೆಲ್ಲಾ ಅರ್ಥ ಆಗಿದೆ ಅನ್ನುವ ಸತ್ಯವನ್ನು ವಿದ್ಯುಕ್ತವಾಗಿ ತಿಳಿಸಿತ್ತು. ಸಂಜೆ ಸತ್ತು ಕತ್ತಲು ಹುಟ್ಟಿಕೊಂಡರೂ ನನಗಿನ್ನೂ ಮನೆಯೊಳಗೆ ಹೋಗಬೇಕು ಅಂತ ಅನಿಸಿರಲೇ ಇಲ್ಲ. ಕಾವ್ಯಾಳಿಗಾಗಲೀ, ಅವಳ ಭಾವನೆನಿಸಿಕೊಂಡವನಿಗಾಗಲೀ ನನ್ನ ಒಳಗೆ ಕರೆಯುವ, ಸಮಜಾಯಿಷಿ ನೀಡುವ ಯಾವ ಎದೆಗಾರಿಕೆಯೂ ಇರಲಿಲ್ಲ. ನಾನೇನು ಮಾತಾಡಿಬಿಡುತ್ತೇನೋ ಅನ್ನುವ ಭಯದಲ್ಲಿ ಇಬ್ಬರೂ ಕಣ್ಣು ತಪ್ಪಿಸಿಯೇ ಓಡಾಡುತ್ತಿದ್ದರು. ನನಗಾದರೂ ಅಷ್ಟೆ, ಅವರಿಬ್ಬರ ಮುಖ ನೋಡಲೂ ಅಸಹ್ಯವಾಗುತ್ತಿತ್ತು.

ಆದರೆ ಬದುಕೆಂದ ಮೇಲೆ ಕೆಲವೊಮ್ಮೆ ಹೊಲಸುಗಳ ಮೇಲೆ ಕಾಲೂರಿ ನಿಲ್ಲಲೇಬೇಕಾಗುತ್ತದೆ. ಇನ್ನೂ ಹೊಸ್ತಿಲ ಮೇಲೆ ಕುಳಿತರೆ ಮಗುವಿಗೆ ಥಂಡಿಯಾಗಬಹುದೆಂದು ಮಗುವನ್ನೆತ್ತಿಕೊಂಡು ಒಳನಡೆದೆ. ಇಬ್ಬರೂ ಕತ್ತು ತಿರುಗಿಸಿ, ತಲೆ ತಗ್ಗಿಸಿ ಕುಳಿತಿದ್ದರು. ಒಂದು ಮಾತೂ ಆಡದೆ ಅವರಿಬ್ಬರನ್ನು ದಾಟಿ ಒಳಗೆ ಹೋದೆ.

ಮುಂದೇನು ಅನ್ನುವುದು ನನಗೆ ಗೊತ್ತಿರಲಿಲ್ಲ. ಹಸಿವಿಂದ ಚೀರಾಡುತ್ತಿದ್ದ ಮಗುವಿಗೆ ಹಾಲುಣಿಸಿ ಹಾಸಿಗೆಯ ಮೇಲುರುಳಿ ಬಿಕ್ಕಿ ಬಿಕ್ಕಿ ಅಳತೊಡಗಿದೆ. ಅಮ್ಮ ಸತ್ತಂದಿನಿಂದ ಆ ಕ್ಷಣದವರೆಗೂ ಕಟ್ಟಿಕೊಂಡಿದ್ದ ಕಣ್ಣೀರ ಕೋಡಿ ದಂಡೆಯ ಸಮೇತ ಹರಿಯ ತೊಡಗಿತು. ನನ್ನ ಬದುಕೇಕೆ ಹೀಗೆ ಗಾಳಿಗೊಡ್ಡಿದ ಸೊಡರಿನಂತಾಯಿತು ಅಂತ ಮನಸು ಪದೇ ಪದೇ ಪ್ರಶ್ನಿಸತೊಡಗಿತು. ಬಾಲ್ಯದಲ್ಲಿ ಅಮ್ಮನನ್ನು ಕಳ್ಕೊಂಡೆ, ಅಮೇಲೆ ಅಜ್ಜಿ, ಅಮೇಲೆ ಅಪ್ಪ, ಈಗ ಗಂಡ  ತಂಗಿ ಇಬ್ಬರನ್ನೂ ಒಟ್ಟಿಗೆ ಕಳ್ಕೋತಿದ್ದೇನೆ... ಯಾಕೆ ಹೀಗಾಯ್ತು? ಯಾವ ತಪ್ಪಿಗೆ ಈ ಶಿಕ್ಷೆ? ಅಗ್ನಿಸಾಕ್ಷಿಯಾಗಿ ನೂರಾರು ಜನರ ಸಮ್ಮುಖದಲ್ಲಿ "ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ" ಎಂದು ತಾಳಿ ಕಟ್ಟಿದ ಕ್ಷಣಗಳಿಗೆ, ಮಾಡಿದ ಪ್ರತಿಜ್ಞೆಗಳಿಗೆ ಯಾವ ಅರ್ಥವೂ ಇಲ್ವಾ? ಅಥವಾ ಗಂಡಸು ಪ್ರಪಂಚದ ನೀತಿ, ನಿಯತ್ತು, ನಿಷ್ಠೆಗಳ ವ್ಯಾಲಿಡಿಟಿ ತೀರಾ ಸಣ್ಣದೇ? ಹಾಗಿದ್ದರೆ ಅಪ್ಪನೂ ಗಂಡಸೇ ಅಲ್ಲವೇ? ನಮ್ಮಿಬ್ಬರಿಗೋಸ್ಕರ ಎರಡನೇ ಮದುವೆಯನ್ನೂ ಮಾಡಿಕೊಳ್ಳದೆ ಅಷ್ಟು ವರ್ಷ ಬದುಕಿರಲಿಲ್ಲವೇ? ಮತ್ತೆ ನನ್ನ ಗಂಡ ಮಾತ್ರ ಯಾಕೆ ಹೀಗೆ ಮಾಡಿದ? ನನಗೇ ಯಾಕೆ ಮೋಸ ಆಯಿತು...? ಹೀಗೆ ಮೊಗೆದಷ್ಟೂ ಮುಗಿಯದ ಪ್ರಶ್ನೆಗಳು, ಗೊಂದಲಗಳು... ಕಣ್ಣು ಮುಚ್ಚಿ ನಿದ್ರಿಸಲು ಪ್ರಯತ್ನಿಸುತ್ತಿದ್ದರೂ ನಿದ್ರೆ ಮಾತ್ರ ದೂರ ನಿಂತು ಅಣಕಿಸಿ ನಗುತ್ತಿತ್ತೇ ಹೊರತು ಕಣ್ಣ ಬಳಿಯೂ ಸುಳಿಯುತ್ತಿರಲಿಲ್ಲ.

ಆದರೆ ನನ್ನ ಬದುಕಿನ ಬಗ್ಗೆ ನಾನೊಂದು ನಿರ್ಧಾರಕ್ಕೆ ಬರಲೇಬೇಕಿತ್ತು. ಕೊನೇ ಪಕ್ಷ ಮಗಳಿಗೋಸ್ಕರ ಆದರೂ ನಾ ಬದುಕಬೇಕಿತ್ತು, ಅವಳಿಗೊಂದು  ಅಭದ್ರತೆಯಿಲ್ಲದ ಬದುಕನ್ನು ಕಟ್ಟಿಕೊಡುವುದಕ್ಕಾದರೂ ನಾನು ಧೈರ್ಯ ತಂದುಕೊಳ್ಳಬೇಕಿತ್ತು. ರಾತ್ರಿ ಪೂರ್ತಿ ನಿದ್ರೆ ಇರದಿದ್ದರೂ ಎಂದಿನಂತೆ ಮುಂಜಾನೆ ಎದ್ದು ಅಂಗಳ ಸಾರಿಸಿ ರಂಗೋಲಿ ಇಟ್ಟು ಒಂದು ಕ್ಷಣ ಅದರ ಮುಂದೆ ನಿಂತು ’ನನ್ನ ಬದುಕಿನ ರಂಗವಲ್ಲಿಯ ಚುಕ್ಕಿಗಳೇಕೆ ಅದಲು ಬದಲಾಯ್ತು’ ಅಂತ ನಿಟ್ಟುಸಿರಿಟ್ಟು ಪಕ್ಕದ ಗಿಡದಲ್ಲಿದ್ದ ಹೂವನ್ನು ಕಿತ್ತು ದೇವರ ಮುಡಿಗೆ ಸಿಕ್ಕಿಸಿ ಕಣ್ಣು ಮುಚ್ಚಿ ’ಎಲ್ಲವನ್ನೂ ಎದುರಿಸುವ ಧೈರ್ಯ ಕೊಡು’ ಎಂದು ಕೈ ಮುಗಿದು ದೇವರ ಕೋಣೆಯಿಂದ ಹೊರ ಬಂದೆ.


                                                                                                                                                      (ಸಶೇಷ)

ಮೌನ ಕಣಿವೆಯಲಿ...

ಸಂಚಾರ 5



ಅಂತೂ ಹೆರಿಗೆ ಸುಸೂತ್ರವಾಗಿ ನಡೆದು ನಾನು ಅಧಿಕೃತವಾಗಿ ತಾಯಿಯಾದೆ. ನನ್ನ ಬದುಕಿನ ಎಲ್ಲಾ ಓರೆಕೋರೆಗಳ ನಡುವೆಯೂ ಮಗಳು ರಶ್ಮಿ ತೊಟ್ಟಿಲ ತುಂಬಾ ಅರಳಿಕೊಂಡಿದ್ದಳು. ತನ್ನ ಮುಗ್ಧ ಕಣ್ಣುಗಳಿಂದಲೇ ಪ್ರತಿಯೊಬ್ಬರನ್ನೂ ತನ್ನೆಡೆಗೆ ನೋಡಿಸುತ್ತಿದ್ದಳು. ನನ್ನೆದೆಯ ತಾಕಲಾಟಗಳು ಅಂತ್ಯವಾಗಿದ್ದವು. ಬದುಕು ಮತ್ತೆ ನೆಮ್ಮದಿಯ ಕಡಲು ಅನಿಸತೊಡಗಿತು. ನಾನು ಬಾಣಂತನಕ್ಕೆ ಅಣಿಯಾಗತೊಡಗಿದೆ. ಆಗೊಮ್ಮೆ ಈಗೊಮ್ಮೆ ಅಮ್ಮ ಇರಬೇಕಿತ್ತು ಅನಿಸುತ್ತಿದ್ದರೂ ಮಗಳ ನಗುವಿನ ಮುಂದೆ ಅವೆಲ್ಲಾ ಮರೆಯಾಗುತ್ತಿತ್ತು.

ಹೆರಿಗೆ, ಮಗು, ಬಾಣಂತನ ಅಂತೆಲ್ಲಾ ಕಾವ್ಯಾಳ ಕಡೆಗೆ ನನಗೆ ಗಮನ ಕೊಡಲಾಗಲಿಲ್ಲವೋ ಅಥವಾ ಹೊತ್ತು ಹೆತ್ತ ಸಂಭ್ರಮಕ್ಕೆ ನಿಜಕ್ಕೂ ನಾನವಳನ್ನು ಕಡೆಗಣಿಸಿದೆನಾ...? ಈ ಕ್ಷಣದಲ್ಲಿ ನಿಂತು ಒಮ್ಮೆ ಹಿಂದಿರುಗಿ ನೋಡಿದರೆ ಯಾವುದನ್ನೂ ಸ್ಪಷ್ಟವಾಗಿ ನಿರ್ಧರಿಸಲಾಗುತ್ತಿಲ್ಲ. ಆದ್ರೆ ಅವಳನ್ನು ಅನಾಥ ಭಾವ ಕಾಡಬಾರದೆಂದು ನಾ ಅನುಕ್ಷಣ ಪ್ರಯತ್ನಿಸಿದ್ದಂತೂ ಸತ್ಯ.

ಮಗುವಿನ ಅಳು, ನಗು, ಲಾಲನೆ, ಪೋಷಣೆಯಲ್ಲಿ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಗಂಡನದು ಎಂದಿನ ನಿರ್ಲಿಪ್ತತೆ. ಮಗು ರಶ್ಮಿಯನ್ನು ಪ್ರೀತಿಸುತ್ತಿದ್ದರಾದರೂ, ಆಗೊಮ್ಮೆ ಈಗೊಮ್ಮೆ ಮುದ್ದಿಸುತ್ತಿದ್ದರಾದರೂ ನನ್ನೆಡೆಗೆ ಅದೇ ದಿವ್ಯ ನಿರ್ಲಕ್ಷ್ಯ.

ನನಗದೆಲ್ಲಾ ಅಭ್ಯಾಸ ಆಗಿಬಿಟ್ಟಿದ್ದರಿಂದಲೋ ಏನೋ ಈಗೀಗ ಅವರ ನಿರ್ಲಿಪ್ತತೆ ನನ್ನ ಮನಸನ್ನು ಹಳ್ಳದೊಳಕ್ಕಿಳಿದು ಕೊಸರಾಡುವಂತೆ ಮಾಡುತ್ತಿರಲಿಲ್ಲ . ಆದ್ರೆ ನಿಜಕ್ಕೂ ನಂಗೆ ಆಶ್ಚರ್ಯ ಆದದ್ದು ಕಾವ್ಯಾಳ ವರ್ತನೆಯ ಬಗ್ಗೆ. ಎಂದೂ ಇಲ್ಲದ ಬದಲಾವಣೆಗಳು ಅವಳ ನಡವಳಿಕೆಯಲ್ಲಿ ಬಂದು ಬಿಟ್ಟಿದ್ದವು. ಸದಾ ಕಾಲೇಜ್, ಫ್ರೆಂಡ್ಸ್, ಮಾಲ್, ಶಾಪಿಂಗ್ ಎಂದು ಓಡಾಡುತ್ತಿದ್ದವಳು ಮನೆಯಲ್ಲೇ ಇರತೊಡಗಿದ್ದಳು. ಕೊನೆಗೂ ಬೇಜವಾಬ್ದಾರಿ ಬಿಟ್ಟು ಹೋಯ್ತಲ್ಲಾ ಅನ್ನುವ ಖುಶಿ ನನಗೆ. ಆದರೆ ಸದಾ ಯಾವುದೋ ಗುಂಗಿನಲ್ಲಿರುವುದು, ಏನೋ ಕೇಳಿದರೆ ಇನ್ನೇನೋ ಹೇಳುವುದು, ಮುಖದ ಮೇಲೆ ಲಾಸ್ಯವಾಡುವ ಯಾವುದೋ ಒಂದು ಸಂತೃಪ್ತಿಯ ಕಳೆ, ಎಂದೂ ಅಡುಗೆ ಮನೆಯ ಕಡೆಗೆ ಮನೆಗೆ ತಲೆ ಹಾಕದಿದ್ದವಳು ಸದಾ ಅಡುಗೆ ಮನೆಯಲ್ಲೇ ಇರುವುದರ ಮರ್ಮ ಒಂದಿಷ್ಟು ನನ್ನನ್ನು ಚಿಂತೆಗೀಡು ಮಾಡಿದರೂ ಬದಲಾದಳಲ್ಲ, ಅವಳ ಬದುಕನ್ನು ಅವಳೇ ಕೊಂಡೊಯ್ಯುವಷ್ಟು ಪ್ರಬುದ್ಧಳಾದಲಲ್ಲಾ ಅನ್ನುವ ಖುಶಿ ಆ ಚಿಂತೆಯನ್ನೂ ಮರೆಸಿಹಾಕಿತ್ತು.

ಅದೊಂದು ದಿನ ಮಗುವಿಗೆ ಮೂರು ತಿಂಗಳ ಚುಚ್ಚು ಮದ್ದು ಹಾಕಿಸಲು ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಗಡಿಯಿಟ್ಟೆ. ತೀರಾ ಚಪ್ಪಲಿ ಮೆಟ್ಟಿ ಹೊರಡುವ ಮುನ್ನ ಜೊತೆಗೆ ಬರುತ್ತಾರೇನೋ ಅನ್ನುವ ಸಣ್ಣ ನಿರೀಕ್ಷೆಯಲ್ಲಿ ಅವರತ್ತ ತಿರುಗಿ ನೋಡಿದೆ. ಇಲ್ಲ, ಮುಖದ ಮೇಲೆ ಅದೇ ನಿರ್ಲಿಪ್ತತೆ.

ಆದ್ರೆ ಅವತ್ತು ಬದುಕು ನನ್ಮೇಲೇಕೋ ಕರುಣೆ ತೋರಿದಂತಿತ್ತು. ಆಸ್ಪತ್ರೆಯಲ್ಲಿ ಕಾಯಬೇಕಾದ ಪ್ರಮೇಯವೇ ಬರಲಿಲ್ಲ. ಒಂದಿಬ್ಬರು ಮಹಿಳೆಯರು ಮಕ್ಕಳ ಚುಚ್ಚು ಮದ್ದಿಗೋಸ್ಕರ ಗಂಡಂದಿರ ಜೊತೆ ಬಂದಿದ್ದರು. ನನ್ನ ಸರದಿ ಬರುತ್ತಲೇ ಕೋಣೆಯ ಒಳಹೊಕ್ಕು ನರ್ಸ್ ಕೈಗೆ ಮಗುವನ್ನಿತ್ತೆ. ಆ ಎಳೆಮಗುವಿಗೆ ಚುಚ್ಚುವುದನ್ನು ನೋಡಲಾಗದೆ ಬಿಗಿಯಾಗಿ ಕಣ್ಣೂ ಮುಚ್ಚಿದೆ. ಮನಸು ’ಬದುಕಿನ ಚುಚ್ಚುವಿಕೆಯ ಪ್ರಾರಂಭ ಮಗಳೇ ಇದು’ ಎಂದುಸಿರಿತು.

ಅಲ್ಲಿಂದ ಆಟೋ ಹತ್ತಿ ಬಂದವಳು ಮನೆಯ ಗೇಟ್ ತೆರೆಯುತ್ತಿದ್ದಂತೆ ಅಂಗಳದಲ್ಲಿ ನಿಂತಿದ್ದ ನನ್ನವರ ಕಾರ್ ನನ್ನನ್ನು ಸ್ವಾಗತಿಸಿತ್ತು. ’ಅರೆ ಇವರಿನ್ನೂ ಆಫೀಸ್ ಗೆ ಹೋಗಿಲ್ಲವೇ’ ಅಂದುಕೊಳ್ಳುತ್ತಾ ಮನೆಯೊಳಗೆ ಕಾಲಿಟ್ಟೆ. ನನಗಾಗಿ ದಿಗ್ಭ್ರಾಂತಿಯೊಂದು ಕಾದು ಕುಳಿತಿತ್ತು.

 (ಸಶೇಷ)

ಶನಿವಾರ, ಜೂನ್ 20, 2015

ಮೌನ ಕಣಿವೆಯಲಿ...

ಸಂಚಾರ 4



ಅಂತೂ ಇಂತೂ ಒಂದು ದೃಢ ನಿರ್ಧಾರ ಮಾಡಿ ಮೂರು ಕಾಲ ಕೂಡುವ ಒಂದು ಮುಸ್ಸಂಜೆ ನಾ ಹುಟ್ಟಿದ, ಬೆಳೆದ, ಆಡಿದ, ನಲಿದ ಮನೆಗೂ, ಊರಿಗೂ ವಿದಾಯ ಹೇಳಿ ಬೆಂಗಳೂರಿನ ಗಾಡಿ ಹತ್ತಿದೆ. ಊರಿನ ಸರಹದ್ದು ಇನ್ನೇನು ದಾಟಬೇಕು ಅನ್ನುವಷ್ಟರಲ್ಲಿ ಅದೇನನಿಸಿತೋ ಏನೋ ಗೊತ್ತಿಲ್ಲ, ಕಾರಿಂದ ಇಳಿದು ಒಂದು ಹಿಡಿ ಮಣ್ಣು ತುಂಬಿಕೊಂಡು ಸೆರಗಿಗೆ ಕಟ್ಟಿ ಮತ್ತೆ ಕಾರು ಹತ್ತಿ ಕುಳಿತೆ. ಕಾವ್ಯ ಆತ್ಮೀಯತೆಯಿಂದ ಹಿತವಾಗಿ ಬೆನ್ನು ತಟ್ಟಿದಳು, ಯಾವ ಜನ್ಮದಲ್ಲಿ ಮಗಳಾಗಿದ್ದಳೋ ಇವಳು ಅನಿಸಿತು. ಹೊಟ್ಟೆಯೊಳಗಿನ ಮಗು ಒಮ್ಮೆ ಒದ್ದಾಡಿ ಸುಮ್ಮನಾದಂತಾಯಿತು.

ಬಾಲ್ಯದಿಂದಲೂ ಅಷ್ಟೆ, ಕಾವ್ಯ ಹಠಮಾರಿ, ಜಿದ್ದು ಹಿಡಿದು ತನ್ನ ಕಾರ್ಯ ಸಾಧಿಸಿಕೊಳ್ಳುತ್ತಿದ್ದಳು. ಯಾವತ್ತೂ  ಮನೆ ವಿಚಾರದಲ್ಲಿ ತಲೆ ಕೆಡಿಸಿಕೊಂಡವಳೇ ಅಲ್ಲ. ಅವಳಾಯ್ತು, ಅವಳ ಪಾಡಾಯ್ತು ಎಂಬಂತೆ ಇದ್ದಳು. ಅವಳ ಜಗತ್ತಿನಲ್ಲಿ ಮನೆಗೇನಿದ್ದರೂ ಎರಡನೇ ಸ್ಥಾನ. ಫ್ರೆಂಡ್ಸ್, ಪಾರ್ಟಿ ಅಂತ ಕಾಲ ಕಳೆದದ್ದೇ ಹೆಚ್ಚು. ಹಾಗಾಗಿಯೇ ಅಪ್ಪನ, ಅಜ್ಜಿಯ ಸಾವು ಅವಳನ್ನು ತುಂಬಾ ಬಾಧಿಸಿರಲಿಲ್ಲ. ಆಗೆಲ್ಲಾ ಬದುಕನ್ನು ತುಂಬಾ ಪ್ರಾಕ್ಟಿಕಲ್ ಆಗಿ ನೋಡುವ ಅವಳ ಬಗ್ಗೆ ಹೆಮ್ಮೆಯೆನಿಸುತ್ತಿತ್ತು.

ಬೆಂಗಳೂರಿಗೆ ಹೋದಮೇಲಾದರೂ ಅಷ್ಟೆ, ಹೊಸ ಕಾಲೇಜ್, ಫ್ರೆಂಡ್ಸ್ ಎಂದೆಲ್ಲಾ ಓಡಾಡಿಕೊಂದಿದ್ದಳೇ ಹೊರತು ಮನೆ ಕಡೆ ಒಮ್ಮೆಯೂ ಗಮನ ಕೊಟ್ಟವಳೇ ಅಲ್ಲ. ಅಪ್ಪನಿಲ್ಲದ ನೋವು ಅವಳನ್ನು ಕಾಡದಿರಲಿ ಅಂತ ನಾನೂ ಇದೆಲ್ಲಾ ಒಳ್ಳೆಯದಕ್ಕೇ ಅಂದುಕೊಂಡು ಸುಮ್ಮನಿದ್ದೆ, ಯಾವುದಕ್ಕೂ ಅವಳನ್ನು ಒತ್ತಾಯ ಪಡಿಸುತ್ತಿರಲಿಲ್ಲ. ಎಷ್ಟಾದರೂ ಹುಟ್ಟಿದಾರಭ್ಯದಿಂದಲೂ ನನಗೇ ಅಂಟಿಕೊಂಡ ಜೀವವಲ್ಲವೇ ಅದು?

ಸದಾ ನಿರ್ಲಪ್ತನಂತಿರುವ, ಯಾವ ವಿಷಯವನ್ನು ತುಂಬಾ ಹಚ್ಚಿಕೊಳ್ಳದ  ನನ್ನ ಗಂಡ ಅವಳ ಈ ನಡವಳಿಕೆಯನ್ನು ಮಾತ್ರ ವಿರೋಧಿಸುತ್ತಿದ್ದರು. "ತುಂಬು ಗರ್ಭಿಣಿ ಅಡುಗೆ ಮನೆಯಲ್ಲಿ ಒದ್ದಾಡುತ್ತಿರಬೇಕಾದರೆ ಅವಳ ತಂಗಿ ಅನಿಸಿಕೊಂಡವಳು ಹಾಲ್ ನಲ್ಲಿ ಕಾಲು ಚಾಚಿ ಕೂತು ಟಿ.ವಿ ನೋಡುವುದು ಅದೆಂಥಾ ನಿರ್ಭಾವುಕತೆ" ಎಂದು ಕಿಡಿಕಾರುತ್ತಿದ್ದರು. ನಾನು ಅವಳ ಪರವಹಿಸಿ ಮಾತಾಡಹೋದರೆ ನನಗೇ ದಬಾಯಿಸುತ್ತಿದ್ದರು. ಅವರ ಮಾತಲ್ಲೂ ಸತ್ಯವಿರುತ್ತಿದ್ದರಿಂದ ಅನಿವಾರ್ಯವಾಗಿ ನಾನೂ ಸುಮ್ಮನಾಗಬೇಕಾಗುತ್ತಿತ್ತು. ಬಸುರಿ ಬಯಕೆಯ ತೀರಿಸಲಾರದೆ ಅಮ್ಮನಿಲ್ಲದ ಕೊರತೆ ಬೇರೆ ಕಾಡುತ್ತಿತ್ತು, ಹಾಗಾಗಿ ಅವರು ಕಾವ್ಯಾಳಿಗೆ ಬಯ್ಯುತ್ತಿದ್ದಾಗಲೆಲ್ಲಾ ನಾನು ’ಅಮ್ಮನಿದ್ದಿದ್ದರೆ’ ಅನ್ನುವ ಪ್ರಶ್ನೆ ಹೊತ್ತುಕೊಂಡು ಸುಮ್ಮನೆ ಕುಳಿತುಬಿಡುತ್ತಿದ್ದೆ.

ಯಾರಿಗೂ ಕಾಯದ ಕಾಲ, ಎಲ್ಲಾ ಕೊರತೆಗಳನ್ನೂ ಮೀರಿ ನನ್ನನ್ನು ಹೆರಿಗೆಯ ದಿನದವರೆಗೆ ತಂದು ನಿಲ್ಲಿಸಿತ್ತು. ಪದೇ ಪದೇ ಕಾಡುತ್ತಿದ್ದ ಅಮ್ಮನ ನೆನಪು, ಅವಳ ಸಾವು, ಚೊಚ್ಚಲ ಹೆರಿಗೆಯ ಭಯ, ಅಂಟಿಯೂ ಅಂಟದಂತಿದ್ದ ಗಂಡನ ನಿರ್ಲಿಪ್ತತೆ, ತಂಗಿಯ ಬೇಜವಾಬ್ದಾರಿ ಎಲ್ಲಾ ಸೇರಿ ನನ್ನೊಳಗೊಂದು ಉದ್ವಿಗ್ನತೆಯನ್ನು ಹುಟ್ಟು ಹಾಕಿತ್ತು. ಆದ್ರೆ ಹೆರಲಿದ್ದೇನೆ ಅನ್ನುವ ಸಂಭ್ರಮ, ಹೊಟ್ಟೆಯೊಳಗೆ ಮಿಸುಕಾಡಿ ಮಧುರ ಅನುಭೂತಿ ಕೊಡುತ್ತಿದ್ದ ನನ್ನ ಕಂದ ಭೂಮಿಗೆ ಬಂದು ಬೆಚ್ಚನೆ ನನ್ನ ಮಡಿಲಲ್ಲಿರುತ್ತದೆ ಅನ್ನುವ ಕಲ್ಪನೆ ಆ ಉದ್ವಿಗ್ನತೆಯನ್ನೂ ಮೀರಿದ ಸಂತೃಪ್ತಿಯನ್ನು ಕೊಡುತ್ತಿತ್ತು. ಇಷ್ಟಕ್ಕೂ ಅಮ್ಮನ ಹೆರಿಗೆ ನಮ್ಮೆಲ್ಲರ ಬದುಕಲ್ಲಿ ಒಂದು ಸ್ಥಿತ್ಯಂತರಕ್ಕೆ ಕಾರಣವಾದರೆ ನನಗಾಗುವ ಹೆರಿಗೆ ಮತ್ತೊಂದು ಸ್ಥಿತ್ಯಂತರಕ್ಕೆ ಕಾರಣವಾಗುತ್ತದೆ ಅನ್ನುವುದನ್ನು ಅವತ್ತು ಯಾರು ತಾನೇ ಊಹಿಸಿದ್ದರು?

(ಸಶೇಷ)

ಮೌನ ಕಣಿವೆಯಲಿ...

ಸಂಚಾರ 3


ಆದ್ರೆ ಕಾವ್ಯಾಳ ಬದುಕು ನನ್ನಂತಾಗಬಾರದು, ಅದೆಷ್ಟೇ ಕಷ್ಟವಾದರೂ ಅವಳ ಓದು ಅರ್ಧಕ್ಕೇ ನಿಲ್ಲಬಾರದೆಂದು ಪಣ ತೊಟ್ಟೆ. ಈ ಮಧ್ಯೆ ಇಷ್ಟ ಇತ್ತೋ ಇಲ್ವೋ, ಮಾನಸಿಕವಾಗಿ ನಾನು ಸಂಸಾರ ನಡೆಸಲು ತಯಾರಾಗಿದ್ದೆನೋ ಇಲ್ವೋ, ನನಗೊಂದು ಮದುವೆ ಮಾಡಿ ಅಜ್ಜಿ ನನ್ನ ಮಡಿಲಲ್ಲೇ ಕಣ್ಣು ಮುಚ್ಚಿದರು. ತೀರಾ ಉಸಿರು ನಿಲ್ಲುವ ಒಂದೆರಡು ಕ್ಷಣಗಳ ಮುನ್ನ ನಡುವ ಕೈಗಳಿಂದಲೇ ನನ್ನ ಕೈ ಹಿಡಿದು "ಹುಡುಗು ಬುದ್ಧಿಯ ಕಾವ್ಯಾಳನ್ನು ದಡ ಸೇರಿಸುವ ಜವಾಬ್ದಾರಿ ನಿನ್ನದು ಮಗಳೇ" ಅಂತಂದಿದ್ದರು.

ನನ್ನ ಬದುಕಿನ ಹಲವು ’ಇಲ್ಲ’ಗಳ ಮಧ್ಯೆ ಬಹುದೊಡ್ಡ ’ಇದೆ’ಯಾಗಿ ನನ್ನವರು ನನ್ನ ಬದುಕನ್ನು ಪ್ರವೇಶಿಸಿದ್ದರು. ಅದುವರೆಗೂ ಬದುಕಲ್ಲಿ ಅನುಭವಿಸಿದ ಕಷ್ಟಗಳನ್ನು ಅವರ ಸಾನ್ನಿಧ್ಯದಲ್ಲಿ ನಾ ಮರೆಯತೊಡಗಿದೆ. ಅಪ್ಪನ ಪರಿಸ್ಥಿತಿಯ ಬಗ್ಗೆ ತಿಳಿದಿದ್ದ ನನ್ನ ಪತಿ ಅಪ್ಪನ ಜೊತೆಗೇ ಇರಲು ಅನುಮತಿ ಕೊಟ್ಟಿದ್ದರು. ತಿಂಗಳಿಗೆ ಎರಡು ಬಾರಿ, ಮೂರು ಬಾರಿ ಅವರೇ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಅಳಿಯ ಮನೆಗೆ ಬಂದಾಗೆಲ್ಲಾ ಅಪ್ಪ "ನನ್ನ ಮಗಳು ಭೂಮಿ ತೂಕದ ಹೆಣ್ಣು, ಅವಳಮ್ಮನೂ ಕಾವ್ಯಾಳನ್ನು ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳೋ ಗೊತ್ತಿಲ್ಲ, ಕಾವ್ಯಾಳಿಗೆ ಎಂದೂ ಅಮ್ಮನ ಕೊರತೆ ಕಾಡದೆ ಹಾಗೆ ನೋಡಿಕೊಂಡಿದ್ದೇ ಇವಳು" ಅಂತನ್ನುತ್ತಿದ್ದರು. ನಾನು ಸುಮ್ಮನೆ ತಲೆ ತಗ್ಗಿಸಿ ನಗುತ್ತಿದ್ದೆ.

ಎರಡು ವರ್ಷಗಳ ನಮ್ಮಿಬ್ಬರ ಮಧುರ ಸಾಂಗತ್ಯದ ಫಲವೆಂಬಂತೆ ನನ್ನ ಉದರದಲ್ಲಿ ಹೊಸ ಜೀವವೊಂದು ಕುಡಿಯೊಡೆದಿತ್ತು. ಹೊರದೆ, ಹೆರದೆ ಅಮ್ಮನಾಗಿದ್ದ ನನಗೆ ಹೊಟ್ಟೆಯೊಳಗೆ ಹೊಸ ಜೀವವೊಂದು ಮಿಸುಕಾಡುವಾಗೆಲ್ಲಾ ವಿಚಿತ್ರ ಅನುಭೂತಿ, ವಿಶೇಷ ಅನುಭವವಾಗುತ್ತಿತ್ತು. ಆದ್ರೆ ಅಮ್ಮನ ಮರಣದ ಬರ್ಬರತೆಯನ್ನು ನೆನೆಸಿಕೊಂಡು ಅಪ್ಪ, ಮಗಳ ಜೀವವೂ ಬಲಿಯಾದರೆ ಅನ್ನುವ ತೊಳಲಾಟದಲ್ಲೇ ಮತ್ತಷ್ಟು ಕುಸಿದರು.

ಅದೊಂದು ರಾತ್ರಿ ಕಾವ್ಯ ನನ್ನ ಬೊಗಸೆ ಹಿಡಿದೆತ್ತಿ "ಅಕ್ಕಾ, ನಿನಗೆ ಮಗುವಾದ ಮೇಲೆ ನನ್ನ ಮರೆಯಲ್ಲ ಅಲ್ವಾ?" ಅಂತ ಕಣ್ಣಪೂರ್ತಿ ಕಣ್ಣೀರು ತುಂಬಿ ಕೇಳಿದ್ದಳು. ನಾನು "ಹುಚ್ಚೀ, ಎಷ್ಟು ಮಕ್ಕಳಿಗೆ ನಾ ಜನ್ಮ ಕೂಟ್ಟರೂ ನನ್ನ ಮೊದಲ ಮಗಳು ನೀನೆ" ಎಂದು ಅಷ್ಟೇ ಕಕ್ಕುಲಾತಿಯಿಂದೆ ಹೇಳಿದ್ದೆ. ಆ ರಾತ್ರಿ ಕಾವ್ಯ ನನ್ನ ಮತ್ತಷ್ಟು ಬಿಗಿಯಾಗಿ ತಬ್ಬಿಕೊಂಡು ಮಲಗಿದ್ದಳು. ಯಾಕೋ ಗೊತ್ತಿಲ್ಲ, ಹೆಸರಿಲ್ಲದ ಪಕ್ಷಿಯೊಂದು ಕಿವಿಯ ಪಕ್ಕದಲ್ಲಿ ವಿಕಾರವಾಗಿ ಕೂಗಿದಂತೆ ಕನಸು ಬಿದ್ದು ಅಪರಾತ್ರಿಯಲ್ಲಿ ಎದ್ದು ಕೂತಿದ್ದೆ ನಾನು. ಮನಸ್ಸಿನ ಪೂರ್ತಿ ಗೊಂದಲ, ಒಂದು ಅವ್ಯಕ್ತ ನೋವು.

ಈ ಘಟನೆ ಮರೆಯುವ ಮುನ್ನವೇ ಒಂದು ಮುಂಜಾನೆ ಕಾಫಿ ಕೊಡಲೆಂದು ಅಪ್ಪನ ರೂಮಿಗೆ ಹೋಗಿ ಅವರನ್ನು ತಟ್ಟಿ ಎಬ್ಬಿಸಲೆಂದು ಕೈ ಹಿಡಿದು ಒಮ್ಮೆ ಬೆಚ್ಚಿ ಹಿಂದೆಗೆದ. ನನ್ನ ಅನುಮಾನ ಸುಳ್ಳಾಗಿರಲಿ ಎಂದು ಮನಸ್ಸಿನಲ್ಲಿ ಪ್ರಾರ್ಥಿಸುತ್ತಾ ಆರ್ತ್ರಳಾಗಿ ಅಪ್ಪನನ್ನು ಕರೆಯುತ್ತ ಮತ್ತೆ ಕೈ ಹಿಡಿದೆದೆಳೆದೆ. ದೇಹ ತಣ್ಣಗಾಗಿತ್ತು, ಜೀವ ಆದಾಗಲೇ ಹಾರಿ ಹೋಗಿತ್ತು. ಬದುಕು ನಿಷ್ಕರುಣೆಯಿಂದ ಮತ್ತೊಂದು ದಾಳ ಉರುಳಿಸಿತ್ತು, ನಾನು ಮತ್ತೆ ಒಂಟಿಯಾದೆ.

ಕಾಲೇಜು, ಪಾಠ, ಪ್ರವಚನ, ಪರೀಕ್ಷೆ ಅಂತೆಲ್ಲಾ ಬ್ಯುಸಿಯಾಗಿದ್ದ ಕಾವ್ಯಾಳಿಗೆ ಅಪ್ಪನ ಸಾವು ತೀರಾ ಅನ್ನುವಷ್ಟು ತಟ್ಟಲಿಲ್ಲವಾದರೂ ನಾನು ಒಳಗೊಳಗೆ ಅಕ್ಷರಶಃ ಕುಸಿದು ಬಿಟ್ಟಿದ್ದೆ. ಮೇಲೆ ಮತ್ತದೇ ನಗುವಿನ ಮುಖವಾಡ, ಮಾತಿನ ಮೆರವಣಿಗೆ.

ನನ್ನ ಯಜಮಾನರು "ಹಳ್ಳಿಯಲ್ಲಿ ಇಬ್ಬರೇ ಇರುವುದು ಬೇಡ. ಆಫೀಸು-ಅಡುಗೆ ಅಂತ ನಾನೂ ಎರಡೆರಡು ಕಡೆ ಒದ್ದಾಡುವುದು ತಪ್ಪುತ್ತದೆ, ಕಾವ್ಯಾಳ ಮುಂದಿನ ಓದಿಗೂ ಸಹಾಯವಾಗುತ್ತದೆ. ಇಬ್ಬರೂ ಬೆಂಗಳೂರಿಗೆ ಬಂದು ಬಿಡಿ" ಅನ್ನತೊಡಗಿದರು . ಅಮ್ಮ, ಅಜ್ಜಿ, ಅಪ್ಪ ಬದುಕಿದ, ಮರಣಿಸಿದ ಈ ಮನೆಯನ್ನು ಬಿಟ್ಟು ಹೋಗಲು ನನ್ನ ಮನಸಿಗೆ ಕಷ್ಟವಾಗುತ್ತಿತ್ತು. ಈ ಮನೆ ಖಾಲಿ ಬೀಳುವುದನ್ನು ಕಲ್ಪಿಸಿಕೊಳ್ಳಲೂ ನನ್ನಿಂದಾಗುತ್ತಿರಲಿಲ್ಲ. ಆದ್ರೆ ಅವರ ಮಾತಿನಲ್ಲೂ ನ್ಯಾಯ ಇತ್ತು, ಕಾವ್ಯ ಬೇರೆ ಬೆಂಗಳೂರಿನ ಕಡೆ ಮುಖ ಮಾಡಲು, ಅಲ್ಲಿನ ಸರ್ವ ಸ್ವತಂತ್ರವನ್ನೂ ಅನುಭವಿಸಲು ತುದಿಗಾಲಲ್ಲಿ ನಿಂತಿದ್ದಳು.


( ಸಶೇಷ)

ಶನಿವಾರ, ಜೂನ್ 6, 2015

ಮೌನ ಕಣಿವೆಯಲಿ...

ಸಂಚಾರ 2

ಆದ್ರೆ ಅಪ್ಪ ಕುಸಿದು ಬಿದ್ದರು. ಅಜ್ಜಿ ತಂಗಿಯನ್ನು ಎತ್ತಿಕೊಳ್ಳಲೆಂದು ಅಳುತ್ತಲೇ ಕೋಣೆಯೊಳಗೆ ಹೋದರು. ಅಲ್ಲಿ ಅಮ್ಮ ನಿಶ್ಚೇತನಳಾಗಿ ಮಲಗಿದ್ದಳು. ಆಗಷ್ಟೇ ಪರಿಸ್ಥಿತಿಯ ಗಂಭೀರತೆ ಸ್ವಲ್ಪವಾದರೂ ನನಗೆ ಅರ್ಥವಾದದ್ದು. ಹಲವು ಕಥೆಗಳಲ್ಲಿ ಓದಿ ಸಾವೆಂದರೆ ಏನು ಅನ್ನುವುದು ತಿಳಿದಿತ್ತು. ಆದರೆ ಅಮ್ಮನ ಚಿತೆಗೆ ಬೆಂಕಿ ಹಚ್ಚಿ ಅವಳಿಲ್ಲದ ಖಾಲಿ ಮನೆಯೊಳಗೆ ಪ್ರವೇಶಿಸಿದಾಗಲೇ ನಿಜಕ್ಕೊ ಸಾವೆಂಬ ದಿಗ್ಭ್ರಾಂತಿ ಅಂದರೇನು ಎಂಬುವುದು ನನ್ನ ಅರಿವಿಗೆ ನಿಲುಕಿದ್ದು.

ಅಮ್ಮನ ಎದೆಹಾಲಿಗಾಗಿ ರಚ್ಚೆ ಹಿಡಿದು ಅಳುವ ಮಗು, ಏನೂ ತೋಚದೆ ಅಂಗಳದ ಮೂಲೆಯೊಂದರ ಕಂಬಕ್ಕೆ ತಲೆ ಚಾಚಿ ಆಕಾಶ ದಿಟ್ಟಿಸಿತ್ತಿರುವ ಅಪ್ಪ, ನಿತ್ರಾಣದ ಮಧ್ಯೆಯೂ ಓಡಾಡಿ ತನಗೆ ತಿಳಿದಷ್ಟು ಸುಧಾರಿಸುವ ಅಜ್ಜಿ, ಇವೆಲ್ಲದರ ಮಧ್ಯೆ "ತಾಯಿಯನ್ನು ತಿಂದು ಹುಟ್ಟಿದವಳು" ಎಂದು ಕಾವ್ಯಾಳ ಕಡೆಗೆ ಬೆರಳು ತೋರುತ್ತಿದ್ದ ಅಕ್ಕಪಕ್ಕದವರ ಹೀಯಾಳಿಕೆ... ಆ ಕ್ಷಣಾನೇ ನನ್ನ ಬದುಕು ಅವಳಿಗೆ ಮುಡಿಪೆಂದು ನಿರ್ಧರಿಸಿಬಿಟ್ಟೆ, ಆ ಕ್ಷಣದಿಂದಲೇ ಅವಳು ನನ್ನ ಪ್ರಪಂಚ ಆದಳು. ನಾನು ತಾಯಿಯಲ್ಲದ ಅಕ್ಕ... ಅವಳು ಮಗಳಲ್ಲದ ತಂಗಿ.

ಅವಳ ಖುಶಿಗೆ, ಅವಳ ನಗುವಿಗೆ, ಅವಳ ಸಂಭ್ರಮಕ್ಕೆ, ಅವಳತ್ತಾಗ ಸಮಾಧಾನಪಡಿಸೋಕೆ, ರಂಪ ಮಾಡಿದಾಗ ಸಾಂತ್ವನಿಸೋಕೆ, ಅವಳು ನಿದ್ರಿಸುವಾಗ ಲಾಲಿ ಹಾಡೋಕೆ, ಅವಳಿಗೆ ನಿದ್ರೆ ಬಾರದಿದ್ದಾಗ ಕಥೆ ಹೇಳೋಕೆ ನಾ ಮಾತು ಕಲಿತೆ. ನನ್ನ ಮೌನವ, ಅದು ನನ್ನೊಳಗೆ ಮಥಿಸುತ್ತಿದ್ದ ಸಂಭ್ರಮದ ಸೆಲೆಯ ಮರೆತುಬಿಟ್ಟೆ.

ಮೊದಲಿಂದಲೂ ಹಾಗೆ, ಸಾಮಾನ್ಯವಾಗಿ ಹೆಣ್ಣು ಮಕ್ಕಳನ್ನು ಆಕರ್ಷಿಸುವ ದುಂಡು ಮಲ್ಲಿಗೆ, ಹಸಿರು ಬಳೆ, ಬಣ್ಣದ ಬಿಂದಿ, ಲಂಗ ದಾವಣಿ, ಇವ್ಯಾವುವೂ ನನ್ನ ಆಕರ್ಷಿಸಿರಲೇ ಇಲ್ಲ. ಕಾಡೋ ಕಾಡು, ದಟ್ಟ ಗುಡ್ಡ, ಹಸಿರು ಬೆಟ್ಟ, ಕಡಲ ತಡಿ, ಅಲೆಯ ಅಬ್ಬರ ಇಂತಹವುಗಳೇ ನನ್ನ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ಕಾವ್ಯ ನನ್ನ ಪ್ರಪಂಚವಾದ ಮೇಲಂತೂ ಸಣ್ಣ ಪುಟ್ಟ ಆಸೆಗಳೂ ನಂಗೆ ಗೌಣವೆನಿಸತೊಡಗಿದವು.

ಆದ್ರೆ ಬಿರು ಮಳೆಯ ರಾತ್ರಿಗಳಲ್ಲಿ ಕಾವ್ಯ ನಿದ್ದೆ ಹೋದ ನಂತರ ನಾನು ಎದ್ದು ಕಿಟಕಿಯ ಪಕ್ಕ ಕೂತು ಒಬ್ಬಳೇ ಧೇನಿಸುತ್ತಿದ್ದೆ, ತಾಯಿಗಾಗಿ ಹಂಬಲಿಸುತ್ತಿದ್ದೆ. ಅಮ್ಮನ ತೋಳಲ್ಲಿ ಕರಗಿಹೋಗಬೇಕೆಂದು ಬಯಸುತ್ತಿದ್ದೆ.  ನನ್ನ ಬದುಕಿನ ಖಾಲಿತನದ ಅನುಭವ ನನಗಾಗುತ್ತಿದುದೇ ಆವಾಗ.  ಮಂದ ಬೆಳಕಿನಲ್ಲಿ ನನ್ನ ನೆರಳು ಚಲಿಸಿದಂತಾಗಿ ಕೆಲವು ರಾತ್ರಿಗಳಲ್ಲಿ ಅಪ್ಪ ಎದ್ದು ಬಂದು ನನ್ನ ತಬ್ಬಿಕೊಂಡು ಅಳುತ್ತಿದ್ದರು. ಆಗೆಲ್ಲಾ ’ಇನ್ಮುಂದೆ ಅಮ್ಮನ ನೆನೆಸ್ಕೊಂಡು ಕೊರಗಲೇಬಾರದು’ ಅಂದುಕೊಳ್ಳುತ್ತಿದೆ. ಆದ್ರೆ ತುಂಬಾ ಮಳೆ ಸುರಿದಾಗ, ಮನೆಯ ಛಾವಣಿಯ ಮೇಲೆ ಮಳೆ ಹನಿಗಳ ಸದ್ದು ಕೇಳಿದಾಗೆಲ್ಲಾ ಆ ನಿರ್ಧಾರ ಮತ್ತೆ ಕಣ್ಣೀರಾಗಿ ಹರಿದು ಹೋಗುತ್ತಿತ್ತು. ಅಪ್ಪ ಎದೆಗವುಚಿಕೊಂಡು ತಲೆ ನೇವರಿಸುತ್ತಿದ್ದರೂ, ಮನಸು ಇದು ಅಮ್ಮನ ಕೈ ರೇಖೆಯ ಸ್ಪರ್ಶ ಅಲ್ಲವಲ್ಲ ಎಂದು ಚೀರಿ ಚೀರಿ ಅಳುತ್ತಿತ್ತು.

ಆದ್ರೆ ಅದು ಬೊಗಸೆಯಲ್ಲೇ ಸಮುದ್ರ ಹಿಡಿಯುವಷ್ಟು ಉತ್ಸಾಹ, ಹುಮ್ಮಸ್ಸು ಇದ್ದ ವಯಸ್ಸು. ಅರೆ ಕ್ಷಣ ನೋವಾದ್ರೂ ಮತ್ತೆ ಜೀವನ್ಮುಖಿಯಾಗುತ್ತಿದ್ದೆ. ತಂಗಿ ಅನ್ನುವ ಮುದ್ದು ಜೀವ ಬೇರೆ ಜೊತೆಗಿತ್ತು. ನನ್ನ ವಿಷಣ್ಣತೆ, ಎದೆಯಾಳದ ಗಾಯಗಳಾವುವೂ ಅವಳ ಬದುಕಿಗೆ ತಟ್ಟಬಾರದಿತ್ತು. ಹಾಗಾಗಿ ನನ್ನ ಭಾವನೆಗಳಿಗೆ ಬೇಲಿ ಹಾಕಿ ಬಂಧಿಸಿಡುತ್ತಿದ್ದೆ. ಮಾತಾಗಿ ಅಪ್ಪನ ಮುಂದೆ ಜಾರಬೇಕಿದ್ದ ನನ್ನಾಸೆಗಳು ಮನದ ಮಂಟಪದಲ್ಲಿ ಘನೀಭವಿಸಿದ ಮೌನಗಳಾಗಿ ಹರಳುಗಟ್ಟತೊಡಗಿದವು. ನಾನು ಮತಾಡುತ್ತಾ ಆಡುತ್ತಲೇ ಮೂಗಿಯಾದೆ.

ಬದುಕೊಂದು  ನಿರಂತರ ಯಾಗ. ಅದು ಅಪ್ಪ, ಅಮ್ಮ, ಅಜ್ಜಿ, ತಂಗಿ, ಖಾಲಿತನ ಇವ್ಯಾವುವನ್ನೂ ಗಣನೆಗೆ ತೆಗೆದುಕೊಳ್ಳದೆ ನಿರಂತರ ಉರಿಯುತ್ತಲೇ ಇರುತ್ತದೆ; ಕೊನೆಯ ಕಿಡಿ ಇರುವವರೆಗೂ. ಬಾಲ್ಯ ಜಾರಿ ಹೋಗದಿರಲೆಂದು ಅದೆಷ್ಟೇ ಪ್ರಯತ್ನಪಟ್ಟರೂ ಬದುಕು ಸಾಗುತ್ತಲೇ ಇತ್ತು. ಪಿ.ಯು.ಸಿ ಮುಗಿದು ಇನ್ನೇನು ಪದವಿ ಮೆಟ್ಟಿಲು ಹತ್ತಬೇಕೆನ್ನುವಷ್ಟರಲ್ಲಿ ಅಪ್ಪ ಅನಿರೀಕ್ಷಿತವಾಗಿ ಹಾಸಿಗೆ ಹಿಡಿದುಬಿಟ್ಟರು. ಮಂಚದಿಂದ ಬಿದ್ದುದೇ ನೆಪವಾಗಿ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡು ಬಿಟ್ಟವು. ಅನಿವಾರ್ಯವಾಗಿ ನನ್ನ ಓದಿಗೆ ಮಂಗಳ ಹಾಡಲೇಬೇಕಾಯ್ತು. ಬದುಕು ಮತ್ತೊಮ್ಮೆ ತನ್ನ ದಾಳ ಉರುಳಿಸಿತು, ನಾನು ಬರಿ ಕಾಯಿಯಷ್ಟೆ.      

(ಸಶೇಷ)

ಶುಕ್ರವಾರ, ಜೂನ್ 5, 2015

ಮೌನ ಕಣಿವೆಯಲಿ...

 ಸಂಚಾರ 1


ಹೌದು. ಮೊದ ಮೊದಲು ನಾನು ಹೀಗೆ ಇರ್ಲೇ ಇಲ್ಲ. ನಾನೂ, ಮಾತೂ ಎಣ್ಣೆ ಸೀಗೆಕಾಯಿ ಅಂತಿದ್ವಿ. ನನ್ನ ಮೆಚ್ಚಿನ ಪುಸ್ತಕಗಳು, ಮುಳ್ಳು ಸೌತೆ ಬಳ್ಳಿ, ಲಿಂಬೆಕಾಯಿ ಗಿಡ, ಹಸಿ ಮಣ್ಣು, ಚಲಿಸೋ ಮೋಡ, ಸುರಿಯೋ ಮಳೆ, ಒಂದಿಷ್ಟು ಪ್ರಶ್ನೆಗಳು, ಅವಕ್ಕೆ ಅಪ್ಪ ಕೊಡುತ್ತಿದ್ದ ಉತ್ತರಗಳು... ಇವಿಷ್ಟೇ ನನ್ನ ಪ್ರಪಂಚ ಆಗಿತ್ತು. ಅಲ್ಲಿ ಮಾತಿಗೆ ಜಾಗ ಇರ್ಲಿಲ್ಲ. ಅದೊಂದು ದಿವ್ಯ ಮೌನದ ಸಂಭ್ರಮವಾಗಿತ್ತು. ಮೌನ ನನ್ನಿಷ್ಟ ಆಗಿತ್ತು, ನನ್ನಿಚ್ಛೆ ಆಗಿತ್ತು. ಆ ಮೌನದಲ್ಲಿ ನಾನು ನಾನಾಗಿಯೇ ಇರುತ್ತಿದ್ದೆ. ಆ ವಯಸ್ಸಿನ ಮಟ್ಟ ಏನಿತ್ತೋ ಆ ಪರಿಧಿಯೊಳಗೆ ನನ್ನಿರುವು ನನ್ನೊಳಗೆ ಪದೇ ಪದೇ ಸಾಬೀತಾಗುತ್ತಿತ್ತು.

ಆಮೇಲಾಮೇಲೆ ಏನಾಯ್ತೋ ಗೊತ್ತಿಲ್ಲ. ಬದುಕು ಮಾತಾಡುವುದನ್ನು ಕಲಿಸಿಬಿಡ್ತು. ಬಹುಶಃ ಯಾವುದೋ ಒಂದು ಅನಾಥ ಪ್ರಜ್ಞೆಯನ್ನು, ಅಭದ್ರತೆಯ ಭಾವವನ್ನು ಮರೆಸಲು ಮಾತಿನ ಮೊರೆ ಹೋದೆ. ಮುಂದೆ ಅನಿವಾರ್ಯತೆನೋ ಅಥವಾ ನನ್ನೊಳಗೆ ನಿಜಕ್ಕೂ ಮಾತಿನ ಒರತೆ ಇತ್ತೋ? ಗೊತ್ತಿಲ್ಲ. ಒಟ್ಟಿನಲ್ಲಿ ಮಾತಾಡ್ತಾನೇ ಹೋದೆ. ಅಗತ್ಯ ಇದ್ದೆಡೆ, ಇಲ್ಲದೆಡೆ ಎಲ್ಲಾ ಕಡೆನೂ ನಿರಂತರ ಮಾತಾಡ್ತಾನೇ ಹೋದೆ. ನನ್ನ ಭಾವನೆಗಳನ್ನು ಮುಚ್ಚಿಡಲು, ಬಚ್ಚಿಡಲು ಎರಡಕ್ಕೂ ಮಾತನ್ನೇ ಆಶ್ರಯಿಸಿದೆ. ಅಥವಾ ಹಾಗೆ ಆಶ್ರಯಿಸುವ ಅನಿವಾರ್ಯತೆಯನ್ನು ಬದುಕು ನನ್ನೆದರು ಸೃಷ್ಟಿಸಿತು. ಮೌನದ ಮುದ್ದೆಯಾಗಿದ್ದ ನಾನು ಮಾತಿನ ಮಲ್ಲಿ ಆದೆ. ಈ ಮಧ್ಯೆ ಆ ಮಾತುಗಳಲ್ಲೇ ನಾ ಗೊತ್ತೇ ಆಗದಂತೆ ಅಂತರ್ಧಾನವಾಗಿದ್ದಂತೂ ಸತ್ಯ.

ಆದ್ರೆ ನಿಜಕ್ಕೂ ನಾ ಮಾತು ಕಲಿತದ್ದು ಯಾವಾಗ? ಮೌನದ ಚಿಪ್ಪೊಳಗೆ ಸ್ವಾತಿ ಮುತ್ತಾಗಿದ್ದ ನನ್ನ, ಮಾತು ತನ್ನೆಡೆಗೆ ಸೆಳೆದದ್ದಾದರೂ ಯಾವಾಗ? ತಂಗಿ ಹುಟ್ಟಿದಾಗಲಾ? ಅಮ್ಮ ತೀರ್ಕೊಂಡಾಗಲಾ? ಅಪ್ಪ ಹಾಸಿಗೆ ಹಿಡಿದಾಗಲಾ? ಇಲ್ಲ ಅಜ್ಜಿ ಹಸುಗೂಸನ್ನು ತಂದು ನನ್ನ ಕೈಗಿತ್ತು "ತಾಯಿಯಿಲ್ಲದ ತಂಗಿಗೆ ನೀನೇ ಇನ್ನು ಅಮ್ಮ" ಅಂದಾಗಲಾ?

ಬಹುಶಃ ಇದೇ ಸರಿಯೆನಿಸುತ್ತದೆ. ಯಾವ ಅಶ್ವಿನಿ ದೇವತೆಗಳು ಅಸ್ತು ಎಂದರೋ ಗೊತ್ತಿಲ್ಲ, ಅಮ್ಮನ ಚಿತೆಗೆ ಬೆಂಕಿ ಬೀಳುವ ಮುನ್ನವೇ ನಾನು ಕಾವ್ಯಾಳಿಗೆ ಅಮ್ಮನಾದೆ. ಅಮ್ಮನಿನ್ನೂ ಪಂಚಭೂತಗಳಲ್ಲಿ ಲೀನವಾಗುವ ಮುನ್ನವೇ ನನ್ನೊಳಗೆ ಪ್ರವಹಿಸತೊಡಗಿದಳು. ನಾನು ಅಮ್ಮನಾದೆ, ನಿಜಾರ್ಥದಲ್ಲಿ; ಕಾವ್ಯ ಮಗಳಾದ್ಳಾ...?

ಎಷ್ಟಿದ್ದೀತು ಮಹಾ ನನಗಾಗ? ಏಳೋ, ಎಂಟೋ? ಸರಿಯಾಗಿ ನೆನಪಿಲ್ಲ. ನಾನಾಗ ಎರಡನೇ ತರಗತಿಯಲ್ಲಿದ್ದೆ. ಶಾಲಾ ದಾಖಲೆಗಳ ಪ್ರಕಾರ ನನಗಾಗ ಏಳು ವರ್ಷ. ಹಲವು ವರ್ಷಗಳ ಪೂಜೆ, ಪುನಸ್ಕಾರಗಳ ನಂತರ ಅಮ್ಮ ಮತ್ತೊಮ್ಮೆ ಗರ್ಭವತಿಯಾಗಿದ್ದಳು. ಇಡೀ ಮನೆಗೆ ಮನೇನೇ ಸಂಭ್ರಮದಲ್ಲಿ ತೇಲಿ ಹೋಗಿತ್ತು. ಸ್ವಭಾವತ ಅಂತರ್ಮುಖಿಯಾಗಿದ್ದ, ಭಾವನೆಗಳನ್ನು ಅಷ್ಟು ಸುಲಭವಾಗಿ ಹರಿಯಬಿಡಗೊಡದ ನಾನೂ ಕುಣಿದಾಡಿಬಿಟ್ಟಿದ್ದೆ. ಆದ್ರೆ ಅವತ್ತು ಯಾರಿಗೆ ತಾನೇ ಗೊತ್ತಿತ್ತು ಸಂಭ್ರಮದ ಹಿಂದೆಯೇ ಬಹುದೊಡ್ಡ ನೋವಿನ ಅಲೆಯೊಂದು ಅಪ್ಪಳಿಸಲಿದೆಯೆಂದು?

ಒಂಭತ್ತು ತಿಂಗಳು ಪೂರ್ತಿ ತುಂಬುವ ಮೊದಲೇ ಒಂದು ರಾತ್ರಿ ಅಮ್ಮ ನೋವಿನಿಂದ ಒದ್ದಾಡತೊಡಗಿದಳು. ನನಗಾಗ ಹೆರಿಗೆ, ನೋವು, ಅದರ ಕಷ್ಟ ಯಾವುದೂ ಅರ್ಥವಾಗುವ ವಯಸ್ಸಲ್ಲ. ಸುಮ್ಮನೆ ಅಮ್ಮನ ಪಕ್ಕ ಕೂತು ಅವಳ ಕಣ್ಣೀರೊರೆಸುತ್ತಿದ್ದೆ ಅಷ್ಟೆ. ಅಮ್ಮ ಪದೇ ಪದೇ ಛಾವಣಿ ದಿಟ್ಟಿಸುತ್ತಾ "ದೇವ್ರೇ ನನ್ನ ಮಗು ಸಲೀಸಾಗಿ ಭೂಮಿಗೆ ಬರ್ಲ್ಲಪಾ" ಅಂತ ಅನ್ನುವಾಗೆಲ್ಲಾ ’ಈ ಅಮ್ಮ ತುಂಬಾ ವಿಚಿತ್ರ’ ಅಂತೆಲ್ಲಾ ಅನಿಸುತಿತ್ತು. ಆಸ್ಪತ್ರೆಗೆ ಹೋದಾಗಲೂ ಅಷ್ಟೆ, ಅಮ್ಮ ಹೆರಿಗೆ ಕೋಣೆಯೊಳಗೆ ಹೊಕ್ಕ ಹೊಕ್ಕ ನಂತರ ಅಪ್ಪ ನನ್ನ ತಬ್ಬಿಕೊಂಡು ಅಳುವಾಗ ’ಈ ಅಪ್ಪ ಏಕೆ ಮಗುವಿನ ತರ ಅಳುತ್ತಿದ್ದಾರೆ’ ಅನ್ನಿಸಿ ನಗು ಬರುತ್ತಿತ್ತು. ನಕ್ಕರೆ ಎಲ್ಲಿ ಅಜ್ಜಿ ಬೈದುಬಿಡುತ್ತಾರೋ ಅನ್ನುವ ಭಯಕ್ಕೆ ಸುಮ್ಮನಾಗುತ್ತಿದ್ದೆ.

ಆಗಾಗ ಹೆರಿಗೆ ಕೋಣೆಯ ಬಾಗಿಲ ಬಳಿ ಠಳಾಯಿಸುತ್ತಿದ್ದ ಅಪ್ಪನ ನಿರೀಕ್ಷೆಯನ್ನು ನಿಜ ಮಾಡಲೋ ಎಂಬಂತೆ ತಲೆ ತಗ್ಗಿಸಿ ಬಂದ ಡಾಕ್ಟರ್ "ಹೆರಿಗೆ ಆಯ್ತು, ಮಗು ಚೆನ್ನಾಗಿದೆ. ಆದ್ರೆ ಅಮ್ಮನನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ" ಎಂದು ನಿರ್ವಿಕಾರದಿಂದ ಹೇಳಿ ಹೊರಟು ಹೋದರು. ಎಷ್ಟು ಸಾವುಗಳನ್ನು ನೋಡಿದ ಜೀವವೋ ಅದು?
                                                     
                                                                                                                                                      (ಸಶೇಷ)

ಮಂಗಳವಾರ, ಜೂನ್ 2, 2015

ನಾ ಕಂಡಂತೆ ’ಕರ್ವಾಲೊ’.. .. ..


’ಕರ್ವಾಲೊ’

ಕಳೆದ ಐದು ವರ್ಷಗಳಲ್ಲಿ ನನ್ನ ಅನೇಕ ಖುಶಿಯ ಕ್ಷಣಗಳಿಗೆ, ಮಧುರ ನಿಮಿಷಗಳಿಗೆ, ಬೇಸರದ ಸಂಜೆಗಳಿಗೆ, ಏಕಾಂತ ರಾತ್ರಿಗಳಿಗೆ, ಸಿಹಿ ಸಿಹಿ ಬೆಳಗುಗಳಿಗೆ, ಬಿರು ಮಳೆಯ ಸ್ವಗತಗಳಿಗೆ, ದಟ್ಟ ಚಳಿಯ ನಡುಕಗಳಿಗೆ, ಮುಸ್ಸಂಜೆಯ ಕೆಲ ದಿವ್ಯ ಅನುಭೂತಿಗಳಿಗೆ ಸಾಕ್ಷಿಯಾದ, ಜೊತೆಯಾದ ಆತ್ಮ ಸಂಗಾತಿಯಿದು.

ತೇಜಸ್ವಿ ಅಂದ್ರೇನೇ ಖುಶಿ, ಅವರ ಬರಹಗಳಂದ್ರೇನೇ ಸಂಭ್ರಮ, ಇಷ್ಟ, ಪ್ರೀತಿ, ಅಭಿಮಾನ ಎಲ್ಲವೂ. ಅವರ ಎಲ್ಲಾ ಕೃತಿಗಳೂ ಸಂತೆಯೊಳಗೂ ಏಕಾಂತವನ್ನು ಒದಗಿಸಿ ಕೊಡುವ ಮಾಂತ್ರಿಕ ಶಕ್ತಿಯನ್ನು ಹೊಂದಿವೆ. ತುಸು ಹಾಸ್ಯ, ಸಹ್ಯ ವಿಡಂಬನೆ, ಕಟು ವ್ಯಂಗ್ಯ ಇವಿಷ್ಟೂ ತೇಜಸ್ವಿ ಅವರ ಪ್ರತಿಯೊಂದು ಹೊತ್ತಿಗೆಯಲ್ಲೂ ಎದ್ದು ಕಾಣುವ ಅಂಶಗಳು. ಒಂದು ಪುಸ್ತಕ ಓದಿಸಿಕೊಂಡು ಹೋಗಲು ಇನ್ನೇನು ಬೇಕು? ಕೊನೆಯ ಹಾಳೆ ಮಗುಚಿ ನಕ್ಕು ಪುಸ್ತಕವನ್ನಿಟ್ಟು ಹಾಸಿಗೆಗೆ ಒರಗಿದ ಮೇಲೆಯೋ, ನೀರು ಕುಡಿಯಲೆಂದು ಅರ್ಧ ರಾತ್ರಿಯಲ್ಲಿ ಎದ್ದಾಗಲೋ, ಕಣ್ಣಳತೆಯ ದೂರದಲ್ಲಿದಲ್ಲಿರುವ ಪುಸ್ತಕದ ಹೊರಪುಟದ ಸರಳತೆ ಎಷ್ಟು ಹೃದ್ಯವಾಗಿದೆ ಅಂತ ಅನಿಸುವಾಗಲೋ ಪಕ್ಕನೆ ’ಅರೆ ಈ ಕಥೆ ಎಷ್ಟು ಅದ್ಭುತವಾಗಿದೆಯಲ್ಲಾ’ ಅನ್ನುವ ಭಾವ ಮೂಡಿ ಮರೆಯಾಗುತ್ತದೆ. ಇದು ಬರಿ ನಗಲು ಅಥವಾ ಮನರಂಜನೆಗಾಗಿ ಮಾತ್ರ ಇರುವ ಪುಸ್ತಕವಲ್ಲ, ನಮ್ಮ ಅರಿವನ್ನೂ ಮೀರಿದ ಯಾವುದೋ ತಿರುಳೊಂದು ಇದರಲ್ಲಿದೆ ಅನಿಸತೊಡಗುತ್ತದೆ. ಅಲ್ಲಿಂದೀಚೆ ಇಡೀ ದಿನ, ಕೆಲವೊಮ್ಮೆ ವಾರಗಟ್ಟಲೆ ಅದೇ ಅಚ್ಚರಿ ಮುಂದುವರಿಯುತ್ತದೆ. ಕೆಲವೊಮ್ಮೆ ತೇಜಸ್ವಿ ಅವರ ಕಥೆಗಳು ಕಾಡತೊಡಗುವುದೇ ಅದನ್ನು ಪೂರ್ತಿ ಓದಿ ಮಗುಚಿಟ್ಟ ಮೇಲೇಯೇ ಅಂತ ಅನಿಸುವುದೂ ಇದೆ.

  ಅದರಲ್ಲೂ ’ಕರ್ವಾಲೋ’ ಅಂತೂ ನನ್ನ ಭಾವಕೊಶದ ಪ್ರತಿಯೊಂದು ಜೀವತಂತುಗಳಲ್ಲೂ ಅಚ್ಚರಿಯ, ಅನನ್ಯತೆಯ ಭಾವ ತರಂಗಗಳನು ಎಬ್ಬಿಸುವ ಮಾಂತ್ರಿಕ ಹೊತ್ತಿಗೆ. ಬಹುಶಃ ರಾಷ್ಟ್ರಕವಿ ಪುತ್ರ ಅನ್ನುವ ದಂತ ಗೋಪುರದ ಹಂಗನು ತೊರೆದು ಮೂಡಿಗೆರೆಯ ದಟ್ಟ ಕಾಡಿನ ಮಧ್ಯೆ ಪದ್ಮಾಸನ ಹಾಕಿ ಕುಳಿತುಕೊಂಡಂತೆ ಅಲ್ಲಿನ ಪ್ರತಿಯೊಂದು ಜೀವಚರಗಳ ಜೊತೆಗೂ ಅವರು ನಡೆಸಿದ ಮೌನ ಸಂಭಾಷಣೆಯ ಫಲಶ್ರುತಿಗಳೇ ಈ ಮೇರು ಕೃತಿಗಳು ಅಂತನ್ನಿಸುತ್ತದೆ ಕೆಲವೊಮ್ಮೆ ನನಗೆ.

ಹತ್ತು ವರ್ಷಗಳ ಹಿಂದೆ ಹೈಸ್ಕೂಲ್ ಹುಡುಗಿಯಾಗಿದ್ದಾಗ ಮೊದಲ ಬಾರಿ ಕರ್ವಾಲೋ ಓದಿ ಮುಗಿಸಿದಾಗ ನನ್ನಲ್ಲಿ ಉದಿಸಿದ ಅದೇ ಅಚ್ಚರಿಯ ಭಾವ, ಎತ್ತಿದ ಪ್ರಶ್ನೆಗಳು,  ಎಸೆದ ಸವಾಲುಗಳು ಪ್ರತಿ ಬಾರಿಯೂ ಪುನರಾವರ್ತನೆಯಾಗುತ್ತವೆ; ಒಂದಿಷ್ಟು ಹೊಸ ಅಚ್ಚರಿಗಳೊಂದಿಗೆ, ಹೊಸ ಪ್ರಶ್ನೆಗಳೊಂದಿಗೆ, ಹೊಸ ಸವಾಲುಗಳೊಂದಿಗೆ.

’ಕರ್ವಾಲೋ’ ಒಂದು ವಿಸ್ಮಯ, ಒಂದು ಅದ್ಭುತ. ಅಲ್ಲಿ ಬರುವ ಪ್ರತಿಯೊಂದು ಪಾತ್ರಗಳೂ ಜೀವ ತಳೆಯುತ್ತವೆ, ಜೀವಂತಿಕೆ ಸ್ಪುರಿಸುತ್ತವೆ. ಜೇನು ಸೊಸೈಟಿಯಿಂದ ಜೇನು ತರುವಲ್ಲಿಂದ ಆರಂಭವಾಗುವ ಕಥೆ,  ಭತ್ತದ ಗದ್ದೆಯನ್ನು ಭಾದಿಸುವ ಹುಳುವಿನ ನಿವಾರಣೆಗೋಸ್ಕರ ಪ್ರಕೃತಿ ವಿಜ್ಞಾನಿ ಕರ್ವಾಲೋ ಅವರನ್ನು ಭೇಟಿಯಾಗುವುದರಿಂದ ಮುಂದುವರಿದು ಅಜ್ಞಾತ ಲೋಕವೊಂದರ ಅಪರೂಪದ ಜೀವಿಯೊಂದನು ಪತ್ತೆ ಹಚ್ಚುವಲ್ಲಿ ಕೊನೆಯಾಗುತ್ತದೆ. ಅಲ್ಲಿ ಮನುಷ್ಯ ಕೇವಲ ಮನುಷ್ಯನಾಗುತ್ತಾನೆ. ಮೂಕ ಜೀವಿಗಳ ಜೊತೆ ಬೆರೆತು ತನ್ನ ಮಾತು ಕಳೆದುಕೊಳ್ಳುತ್ತಾನೆ, ಮನುಷ್ಯತ್ವ ಹುಡುಕಿಕೊಳ್ಳುತ್ತಾನೆ. ಅಲ್ಲಿ ಪ್ರಕೃತಿ ಮಾತೆಯಾಗುತ್ತಾಳೆ, ಓತಿ ಕಾಲಕ್ಕೊಂದು ಸವಾಲಾಗುತ್ತದೆ, ವಿಜ್ಞಾನ ತಬ್ಬಿಬ್ಬಾಗುತ್ತದೆ. ಸ್ವಾರ್ಥ ಪೂರಿತ ಮನುಷ್ಯ ಪ್ರಪಂಚ ತೀರಾ ನಿಕೃಷ್ಟವಾಗಿ ಕಾಣುವ ’ಮಂದಣ್ಣ’ನಂತಹ ಸಾಮಾನ್ಯರಲ್ಲಿ ಅತಿ ಸಾಮಾನ್ಯನು ಮಹಾನ್ ಜ್ಞಾನಿಯಾಗುತ್ತಾನೆ. ಪ್ರಾಪಂಚಿಕ ಜ್ಞಾನದ ಲವಲೇಶವೂ ಇಲ್ಲದ ವಿಜ್ಞಾನಿ ಕರ್ವಾಲೋ ಮಂದಣ್ಣನ ಹಿಂದೆ ಬಿದ್ದಿರುವುದನ್ನು ಸಮಾಜ ಛೇಡಿಸುತ್ತದೆ, ಅವಮಾನಿಸುತ್ತದೆ, ಅಸಹ್ಯಪಟ್ಟುಕೊಳ್ಳುತ್ತದೆ. ಆದರೆ ಮಂದಣ್ಣನಿಗಿರುವ ಪ್ರಕೃತಿ ಜ್ಞಾನದ ಅರಿವಿದ್ದ ಕರ್ವಾಲೋ ಕೋರ್ಟ್, ಪೊಲೀಸ್ ಸ್ಟೇಷನ್ ಎಂದು ಅಲೆಯಬೇಕಾಗಿ ಬಂದರೂ ಅವನ ಸಖ್ಯ ಬಿಡುವುದಿಲ್ಲ. ಎಲ್ಲೋ ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ಮಾತ್ರ ಇವೆ ಎಂದು ತಿಳಿದಿದ್ದ ಮೌಮೌ ಜೇನ್ನೊಣಗಳು ಮೂಡಿಗೆರೆಯ ಕಾಡಿನಲ್ಲೂ ಇವೆ ಎಂದು ತಿಳಿದು ಅಚ್ಚರಿಗೊಳಗಾಗುತ್ತಾರೆ.

ಕಥೆಯ ಮುಖ್ಯ ಪಾತ್ರವಾದ ಮಂದಣ್ಣ ತನಗೆಂಥಾ ಅದ್ಭುತ ಜ್ಞಾನವಿದೆ ಅನ್ನುವುದನ್ನೂ ತಿಳಿಯದ ಮುಗ್ಧ. ಅವನ ಲಿಮಿಟೆಡ್ ಪ್ರಪಂಚದಲ್ಲಿ ಮದುವೆಯೇ ಸರ್ವೋಚ್ಛ ಗುರಿಯಾಗಿತ್ತು. ಅದನ್ನು ಈಡೇರಿಸದೆ ಯಾವ ಸಂಶೋಧನೆಯೂ ಸಾಧ್ಯವಿಲ್ಲ ಅನ್ನುವುದನ್ನು ಅರಿತು ವಿಜ್ಞಾನಿ ಕರ್ವಾಲೋ ಮೂಡಿಗೆರೆಯ ಪ್ರತಿಷ್ಟಿತರು ಅನ್ನಿಸಿಕೊಂಡವರ ವಿರೋಧವನ್ನೂ ಲೆಕ್ಕಿಸದೆ ತಾವೇ ಮುಂದೆ ನಿಂತು ಅವನ ಮದುವೆ ಮಾಡಿಸುತ್ತಾರೆ. ಆ ಮದುವೆಗೆ ನಿರೂಪಕನಾದಿಯಾಗಿ ಕಥೆಯ ಎಲ್ಲಾ ಪಾತ್ರಗಳೂ ಸಾಥ್ ನೀಡುತ್ತವೆ. ಮದುವೆ, ಮದುವೆ ಮನೆಯಲ್ಲಾಗುವ ಫಜೀತಿಗಳನ್ನೆಲ್ಲಾ ಓದುವಾಗ ಒಮ್ಮೆ ನಗು ಉಕ್ಕಿ ಬಂದರೂ ಪುಸ್ತಕ ಮಡಿಚಿಟ್ಟ ಮೇಲೆ ಎರಡು ಮನೆಗಳು, ಮನಗಳು ಒಂದಾಗುವ ಸಂದರ್ಭದಲ್ಲೂ ಅದೆಷ್ಟು ರಾಜಕೀಯ ನಡೆಯುತ್ತದಲ್ಲಾ ಅನ್ನಿಸಿ ವಿಷಾದವೆನಿಸುತ್ತದೆ.

ಒಂದಿಷ್ಟು ಫಜೀತಿ, ಪೀಕಲಾಟ, ಅನುಮಾನಗಳ ಮಧ್ಯೆಯೇ ಮದುವೆ ಸಾಂಗವಾಗಿ ನೆರವೇರುತ್ತದೆ. ಅದಾದಮೇಲೆ ಕಥೆಯ ಮಧ್ಯದಲ್ಲಿ ಕಳ್ಳಭಟ್ಟಿ ತಯಾರಿಕೆಯ ವಿಷಯದಲ್ಲಿ ಮಂದಣ್ಣನ ಬಂಧನವಾಗುತ್ತದೆ. ಮತ್ತೊಂದಿಷ್ಟು ಪೀಕಲಾಟಗಳು, ರಾಜಕೀಯ ದೊಂಬರಾಟಗಳು, ತಣ್ಣಗೆ ಪ್ರಕಟವಾಗುವ ಜಾತಿ ಕ್ರೌರ್ಯ ಇವೆಲ್ಲಾ ಒಳಗಿಂದೊಳಗೇ ಹೊಗೆಯಾಡಿ ಕೊನೆಗೂ ಅವನ ಬಿಡುಗಡೆಯಾಗುತ್ತದೆ.

ಅಲ್ಲಿಂದೀಚೆಗೆ ಶುರುವಾಗುವುದೇ ಸೃಷ್ಟಿಯ ರಹಸ್ಯವನ್ನರಿಯುವ ಮಹಾಯಾನ. ಮಂದಣ್ಣ, ಕರ್ವಾಲೋ, ನಿರೂಪಕ, ಕರಿಯಪ್ಪ, ಪ್ಯಾರ,  ಪ್ರಭಾಕರ, ಎಂಗ್ಟ ನಿರೂಪಕನ ನಾಯಿ ಕಿವಿ... ಹೀಗೆ ಇವರನ್ನೆಲ್ಲಾ ಒಳಗೊಂಡ ತಂಡವೊಂದು ಎತ್ತಿನ ಗಾಡಿಯಲ್ಲಿ ಈಚಲು ಬಯಲಿನ ಮೂಲಕ ಯುಗಾಂತರಗಳ ಹಿಂದಕ್ಕೆ ಪ್ರಾಯಾಣಿಸುತ್ತದೆ. ಇವರ ಪೈಕಿ ನಿರೂಪಕ, ಕರ್ವಾಲೋ, ಪ್ರಭಾಕರ ಈ ಮೂವರನ್ನು ಹೊರತು ಪಡಿಸಿ ಉಳಿದವರು ತಾವೇನನ್ನು ಹುಡುಕಲು ಹೋಗುತ್ತಿದ್ದೇವೆ ಅನ್ನುವುದನ್ನೂ ತಿಳಿಯದಷ್ಟು ಮುಗ್ಧರು. ಇವರ ಜೊತೆ ಜೊತೆಗೆ ಓದುಗರಾದ ನಾವೂ ಇನ್ನೇನು ನಡೆಯಲಿದೆ ಅನ್ನುವ ಕುತೂಹಲದಿಂದ ಸಹಪ್ರಯಾಣಿಕರಂತೆ ಅವರ ಹೆಗಲು ಬಳಸಿ ಈಚಲು ಬಯಲಿನ ಅಗಾಧತೆಯೊಳಗೆ ಕಳೆದುಹೋಗುತ್ತೇವೆ.

ಪ್ರಯಾಣದ ಜೊತೆ ಜೊತೆಗೆ ಕಾಡಿನ ಸೌಂದರ್ಯ, ಅಗಾಧತೆ, ನೀರವ ಮೌನ, ಬೆಚ್ಚಿ ಬೀಳಿಸುವ ದಟ್ಟತೆ, ಕರಿಯಪ್ಪನ ಬಿರಿಯಾನಿ ಪ್ರೀತಿ, ಪ್ಯಾರನ ಅವಿವೇಕತನ ಅನಾವರಣವಾಗುತ್ತಾ ಹೋಗುತ್ತದೆ. ಹಾರುವ ಓತಿ ಹೀಗೆಯೇ ಇರುತ್ತದೆ ಅನ್ನುವ ಸ್ಪಷ್ಟ ಕಲ್ಪನೆಯನ್ನು ಓದುಗರಿಗೆ ಕಟ್ಟಿಕೊಡುವಷ್ಟು ಶಕ್ತಿಯುತ ಮತ್ತು ಸತ್ವಪೂರ್ಣ ಸರಳ ಭಾಷೆಯ ಪ್ರಯೋಗವು ಓದುಗರಲ್ಲಿ ಮತ್ತಷ್ಟು ರೋಚಕತೆಯನ್ನುಂಟು ಮಾಡುತ್ತದೆ.

ಅಂತೂ ಇಂತು ಹಾರುವ ಓತಿ ನಿರೂಪಕರ ಕಣ್ಣಿಗೆ ಬಿದ್ದು, ಎಂಗ್ಟ ಮತ್ತು ಕರಿಯ ಮರ ಹತ್ತಿ ಅದನ್ನು ಹಿಡಿದಾಗ ಓದುಗರ ಮನವೂ, ’ಅಬ್ಬಾ! ಕೊನೆಗೂ ಸಿಕ್ಕಿತಲ್ಲಾ’ ಅಂತ ನಿಟ್ಟುಸಿರು ಬಿಟ್ಟು ಸೃಷ್ಟಿಯ ರಹಸ್ಯ ಇನ್ನೇನು ತಿಳಿದೇಬಿಟ್ಟಿತು ಅನ್ನುವಷ್ಟರಲ್ಲಿ ಓತಿ ದಿಗಂತದತ್ತ ಹಾರಿ ಮರೆಯಾಗುತ್ತದೆ. ’ಛೆ, ಹೀಗಾಗಬಾರದಿತ್ತು’ ಅಂತ ಓದುಗ ಅಂದುಕೊಳ್ಳುತ್ತಿರುವಾಗಲೇ ಆ ಓತಿಯನ್ನು ಹಿಡಿಯಲು ಹರಸಾಹಸಪಟ್ಟು ಇನ್ನೇನು ಕೈಗೆ ಸಿಕ್ಕೇ ಬಿಡುತ್ತದೆ ಅನ್ನುವಷ್ಟರಲ್ಲಿ ಕೈ ಜಾರಿ ಹೋದ ಓತಿಯ ಬಗ್ಗೆ ಕರ್ವಾಲೋ ನಿರಾಸೆ ಪಟ್ಟುಕೊಳ್ಳುತ್ತಾರೇನೋ ಅಂದುಕೊಳ್ಳುವಷ್ಟರಲ್ಲಿ ಅವರು ನಮ್ಮೆಲ್ಲಾ ನಿರೀಕ್ಷೆಗಳನ್ನು ಮೀರಿ ಒಬ್ಬ ಅಪ್ಪಟ ತತ್ವಜ್ಞಾನಿಯಂತೆ "ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ" ಅಂದುಬಿಡುತ್ತಾರೆ.

ಅಲ್ಲಿಗೆ ಕಥೆ ಮುಗಿಯುತ್ತದೆ. ಆದರೆ ಅದು ಉಳಿಸುಹೋಗುವ ಅನನ್ಯತೆಯ ಭಾವ ತಿಂಗಳುಗಟ್ಟಲೆ ಹಾಗೇ ಉಳಿದುಬಿಡುತ್ತದೆ. ಬಹುತೇಕ ಐದನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗೂ ಜೀವಶಾಸ್ತ್ರ ಪುಸ್ತಕವನ್ನು ತಲೆಕೆಳಗು ಮಾಡಿ ಓದಿದಾಗಲೂ ಅರ್ಥವಾಗದ ಡಾರ್ವಿನ್ ನ ’ವಿಕಾಸವಾದ’ವನ್ನು ಕರ್ವಾಲೋ ಮೂಲಕ ತೇಜಸ್ವಿಯವರು ಎಷ್ಟು ಸುಲಭವಾಗಿ, ಸಹಜವಾಗಿ ಅರ್ಥ ಮಾಡಿಸಿದರಲ್ಲಾ ಅನ್ನುವ ಅಚ್ಚರಿ ಪದೇ ಪದೇ ಕಾಡತೊಡಗುತ್ತದೆ. ಹಲವು ಅಂಕಿ ಅಂಶ, ಎಣಿಸಲು ಬಾರದಿರುವಷ್ಟು ಗೋಜಲಾಗಿರುವ ಲೆಕ್ಕ, ಅರ್ಥವೇ ಆಗದ ಪದಗಳು ಇವೆಲ್ಲಾ ಸೇರಿ ಒಂದು ಅಪ್ಪಟ ಗಂಭೀರ ವೈಜ್ಞಾನಿಕ ಕೃತಿಯಾಗಬೇಕಿದ್ದ ಪುಸ್ತಕವೊಂದು ತೇಜಸ್ವಿಯವರ ಕೈಯಲ್ಲಿ ಪತ್ತೇದಾರಿ ಕಥೆಯಾಗಿ, ಜನರ ಮನಸ್ಸಿಗೆ ಆಪ್ತವಾಗಿ ಅರಳುವ ಪ್ರಕ್ರಿಯೆಯೇ ಒಂದು ಅದ್ಭುತ.

೧೯೮೦ರಲ್ಲಿ ಮೊದಲ ಬಾರಿ ಬಿಡುಗಡೆಯಾದ ಈ ಕೃತಿ ಇದುವರೆಗೆ ಸರಿಸುಮಾರು ೩೫ ಪ್ರಕಟಣೆಗಳನ್ನು ಕಂಡಿದೆ. ಪಕ್ಕದ ಮಲಯಾಳಂ, ಮರಾಠಿ, ರಾಷ್ಟ್ರಭಾಷೆ ಹಿಂದಿ, ಇಂಗ್ಲಿಷ್, ದೂರದ ಜಪಾನೀ ಮುಂತಾದ ಭಾಷೆಗಳಿಗೆ ಅನುವಾದಗೊಂಡಿದೆ. ಅದು ಕಂಡಿರುವ ಪ್ರಕಟಣೆಗಳೇ, ಅನುವಾದಗಳೇ ’ಕರ್ವಾಲೋ’ದ ಜನಪ್ರಿಯತೆಯನ್ನು, ಅನನ್ಯತೆಯನ್ನು ಪ್ರಶ್ನೆಗಳಿಗೆ ಎಡೆಯಿಲ್ಲದಂತೆ ಸಾಬೀತುಪಡಿಸಿವೆ. ಆದರೆ ’ಕರ್ವಾಲೋ’ ಈ ಅಂಕಿ ಅಂಶಗಳ ಆಚೆಗೂ ಇಷ್ಟ ಆಗುವುದು ತೇಜಸ್ವಿಯವರ ಸರಳ ನಿರೂಪಣೆಯಿಂದ ಮತ್ತು ಹೃದ್ಯ ಭಾಷೆಯಿಂದಾಗಿ. ನಿಜಕ್ಕೂ ’ಕರ್ವಾಲೋ’ ಮತ್ತು ತೇಜಸ್ವಿ ಕನ್ನಡ ಸಾಹಿತ್ಯ ಲೋಕದ ಬಹುದೊಡ್ಡ ಅಚ್ಚರಿಯೇ ಸರಿ.