ಶನಿವಾರ, ಆಗಸ್ಟ್ 15, 2015

ಸ್ವಾತಂತ್ರ್ಯ



ಸ್ಟೇಜ್ ಹತ್ತಿ ಭಾಷಣ ಮಾಡಿ
ಪ್ರೈಝ್ ಗಿಟ್ಟಿಸಿ ನಗೆ ಬೀರಿ
ಹೆಮ್ಮೆಯಿಂದ ’ಜೈ ಹಿಂದ್’ ಅಂದ
ಬಾಲ್ಯದ ಸ್ವಾತಂತ್ರ್ಯವೇಕೋ
ನನ್ನ ಅಣಕಿಸುತ್ತಿದೆ ಇಂದು

ಮರ್ಯಾದಾ ಹತ್ಯೆಯ ಹೆಸರಲಿ
ಜೀವ ಕಳೆದುಕೊಂಡವರ
ಅಪರಿಮಿತ ನೋವುಗಳಲಿ
ಸ್ವಾತಂತ್ರ್ಯ ನಿಟ್ಟುಸಿರು ಬಿಡುತ್ತಿರುವಾಗ

ಕಾಮಪಿಪಾಸುಗಳ ಕರಾಳ ಹಸ್ತದಲಿ
ಮುರುಟಿಹೋದ ಕಂದಮ್ಮಗಳ
ಕಣ್ಣೀರ ಬೇಗೆಯಲಿ
ಸ್ವಾತಂತ್ರ್ಯ ಸದ್ದಿಲ್ಲದೆ ನಲುಗುತ್ತಿರುವಾಗ

ಸಾಲದ ಶೂಲದಲಿರುವ
ಬಡ ರೈತನ ಕರುಳಬೇನೆಯ
ಅಸಹನೀಯ ನಿರಾಸೆಯಲಿ
ಸ್ವಾತಂತ್ರ್ಯ ಆತ್ಮಹತ್ಯೆಗೆಯ್ಯುತಿರುವಾಗ

ದುರ್ಗಮ ಕೊಳ್ಳಗಳ
ಕಲ್ಲು ಕೋರೆಗಳಲಿ
ಜಗವರಿಯದ ಬಾಲಕಾರ್ಮಿಕರು
ರಕ್ತ ಸುರಿಸುತಿರುವಾಗ

ದಿನ ಬೆಳಗಾಗುತ್ತಿದ್ದಂತೆ
ಕಸದ ತೊಟ್ಟಿಯಲಿ
ಹಣ್ಣು ಹಸುಳೆಗಳು
ದಿಕ್ಕಿಲ್ಲದೆ ಕಣ್ಣು ಬಿಡುತ್ತಿರುವಾಗ

ಗಡಿಕಾಯ್ದು ಪ್ರಾಣ ತೆತ್ತ
ವೀರಯೋಧನ ಸಮಾಧಿಯ ಮೇಲೆ
ಅಧಿಕಾರಸ್ಥರು ಅಹಂಕಾರದ
ಠೇಂಕಾರ ಮೊಳಗಿಸುತಿರುವಾಗ

ಉಸಿರುಗಟ್ಟುವ ಭ್ರಷ್ಟಾಚಾರ
ಮೇರೆಮೀರಿರುವ ಅನಾಚರ
ನಜ್ಜುಗುಜ್ಜಾಗಿರುವ ಸಹಿಷ್ಣುತೆಯ
ನಡುವೆ ಸ್ವಾತಂತ್ರ್ಯ ತುಸು
ಉದಾರತೆಗಾಗಿ ಯಾಚಿಸುತಿರುವಾಗ

ಹೇಗೆ ಹೇಳಲಿ ನಾನು ನನ್ನದು
ಸರ್ವಸ್ವತಂತ್ರ ದೇಶವೆಂದು
ಹೇಗೆ ಆರೋಹಿಸಲಿ ನಾನು
ತ್ರಿವರ್ಣವನು ಮುಗಿಲೆತ್ತರಕೆ...?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ