ಮಂಗಳವಾರ, ಮೇ 28, 2019

ಪುಟ್ಟ ಪುಟ್ಟ ಕಥೆಗಳು

1.ಸ್ವರ್ಗದ ಹಾದಿ

'ಸ್ವರ್ಗದ ಹಾದಿ' ಪಾಠ ಮಾಡುತ್ತಿದ್ದ ಉಸ್ತಾದರು ಬಾಗಿಲ ಬಳಿ ಸಣ್ಣ ಸದ್ದು ಕೇಳಿದಂತಾಗಿ ತಿರುಗಿ ನೋಡಿದರು. ಏದುಸಿರು ಬಿಡುತ್ತಾ ಅವರದೇ ವಿದ್ಯಾರ್ಥಿ 'ಒಳಗೆ ಬರಲೇ' ಎಂಬಂತೆ ದೈನ್ಯವಾಗಿ ನೋಡುತ್ತಿದ್ದ. ಉಸ್ತಾದರ ಕಣ್ಣು ಗೋಡೆ ಗಡಿಯಾರದತ್ತ ಚಲಿಸಿತು. ಈಗಾಗಲೇ ಹದಿನೈದು ನಿಮಿಷ ತಡ ಆಗಿದೆ. ಈ ಹುಡುಗ ಕಳೆದ ಒಂದು ವಾರದಿಂದಲೂ ತಡವಾಗಿಯೇ ಬರ್ತಿದ್ದಾನೆ. ನಾಳೆ ಮಹತ್ವದ ತರಗತಿಯಿದೆ, ಸಮಯಕ್ಕೆ ಸರಿಯಾಗಿ ತಲುಪಲೇಬೇಕೆಂದು‌ ನಿನ್ನೆಯೇ ಹೇಳಿದ್ದರು. ಹಾಗಿದ್ದೂ ಇವತ್ತು ತಡವಾಗಿಯೇ ಬಂದಿದ್ದಾನೆ ಅಂದರೆ ಎಷ್ಟು ಅಹಂಕಾರವಿರಬೇಕು ಇವನಿಗೆ. ಕೈ ಟೇಬಲ್ ಮೇಲಿದ್ದ ಬೆತ್ತದತ್ತ ಚಲಿಸಿತು. ಅವನನ್ನು ಒಳಗೆ ಕರೆದು ಎರಡೇಟು ಹೊಡೆದು "ಯಾಕೆ ಲೇಟ್? 'ಸ್ವರ್ಗದ ಹಾದಿಯ' ಪಾಠ ತಪ್ಪಿಸಿಕೊಂಡಿಯಲ್ಲಾ? " ಗದರಿದರು. ಅವನು ಅಳುತ್ತಾ " ಬಚ್ಚಲು‌ ಮನೆಯಲ್ಲಿ‌ ಜಾರಿ ಬಿದ್ದು ಅಮ್ಮ ಹಾಸಿಗೆ ಹಿಡಿದಿದ್ದಾರೆ.  ಅವರಿಗೆ ನಮಾಜು ಮಾಡಲು ಉಝೂ ಮಾಡಿಸಿ ಬರುವಾಗ ತಡ ಆಯ್ತು". ಉಸ್ತಾದರಿಗೆ ಹಿಂದೊಮ್ಮೆ ತಾನೇ 'ಅಮ್ಮನ ಕಾಲಡಿಯಲ್ಲಿ ಸ್ವರ್ಗ' ಎಂದು ಪ್ರವಚನ ನೀಡಿದ್ದು ನೆನಪಾಯಿತು. ಹುಡುಗ ಅದಾಗಲೇ ಸ್ವರ್ಗದ ಹಾದಿಯಲ್ಲಿದ್ದ.


2. ದೀಪ ಪತಂಗ

ಸಣ್ಣಗೆ ಉರಿಯುತ್ತಿದ್ದ ದೀಪ  ಪತಂಗ ಹತ್ತಿರ ಬರುತ್ತಿದ್ದಂತೆ ಆರಿ ಹೋಯಿತು. ಗಾಳಿ ಬೀಸಿತೋ, ದೀಪಕ್ಕೇ ಉರಿಯಲು ಇಷ್ಟವಿರಲಿಲ್ಲವೋ ಅಥವಾ ತಾನು ಹತ್ತಿರವಾಗುವುದು ಇಷ್ಟವಿಲ್ಲವೋ ಒಂದು ಅರ್ಥವಾಗದ ಪತಂಗ ಪಥ ಬದಲಿಸಿ ಹಾರಿತು. ಮತ್ತೆ ಬಂದು ಮತ್ತೆ ದೀಪ ಹಚ್ಚಿದರು. ಪತಂಗ ಮರಳುತ್ತಿದ್ದಂತೆ ದೀಪ,
" ಅಲ್ಲೇ ನಿಲ್ಲು ಹತ್ತಿರ ಬರಬೇಡ"
"ಯಾಕೆ ಬರಬಾರದು?"
"ಸುಟ್ಟು ಹೋಗುವುದೇ‌ ಪ್ರೇಮವಲ್ಲ, ದೂರ ನಿಂತೇ ಪ್ರೇಮಿಸು"
"ಸುಟ್ಟುಕೊಳ್ಳಲಲ್ಲ, ನಿನ್ನ ಬೆಳಕ ಹೀರಿಕೊಂಡು ಅಹಂಕಾರ ತೊರೆಯಲು. ನಿನ್ನದೇ ಪುಟ್ಟ ಕಣವಾಗಲು" ಎಂದು ಹಾರಿ ಬಂದು ದೀಪದಲ್ಲಿ ಲೀನವಾಯಿತು.
ದೀಪವೇ ಪತಂಗವೀಗ.
ಪತಂಗವೇ ಬೆಳಕೀಗ.

3. ನೋವಿನ ಬದುಕು

ಬದುಕು ಮತ್ತು ನೋವು
ನಿನ್ನೆಯಷ್ಟೇ ನೋವುಂಡ ಬದುಕು ಕಡಲ ತೀರದಲ್ಲಿ ಸುಮ್ಮನೆ ಶತಪಥ ಹಾಕುತ್ತಿತ್ತು. ಪಾದ ಸೋಕಿ ಹೋಗುವ ಅಲೆಗಳು, ಬಾನಿಡೀ ಹೊಂಬಣ್ಣ ಹಂಚಿದ್ದ ಸೂರ್ಯ, ಬಾನಿಂದಲೇ ತುಸು ಬಣ್ಣ ಕಡ ಪಡೆದುಕೊಂಡು ಬಂಗಾರದಂತೆ ಹೊಳೆಯುತ್ತಿದ್ದ ಮರಳು ಯಾವುದೂ ಬೆಂದ ಬದುಕನ್ನು ಸಾಂತ್ವನಗೊಳಿಸುವಷ್ಟು ಶಕ್ತವಾಗಿರಲಿಲ್ಲ. ಎಲ್ಲಿಂದಲೋ ಧೂಳಿನಂತೆ ಮತ್ತೆ ತೂರಿ ಬಂದ ನೋವು ಬದುಕಿನ ಹೆಗಲು ಬಳಸಿ
"ನಿನಗೆ ನನ್ನ ಕಂಡರೆ ಅಸಹ್ಯವೇ?"
"ಏಕೆ ಅಸಹ್ಯಿಸಬೇಕು ನಿನ್ನ?"
"ಪ್ರತಿ ಬಾರಿ ನಿನ್ನನ್ನು ಭೇಟಿಯಾದಾಗೆಲ್ಲಾ ನಿನ್ನ ನೆಮ್ಮದಿಯನ್ನು ಕದಡಿ ಹಾಕುತ್ತೇನಲ್ಲಾ?"
"ಇಲ್ಲ ನೋವೇ, ನನಗೆ ಖುಶಿಗಿಂತಲೂ ನೀನೇ ಹೆಚ್ಚು ಇಷ್ಟ. ನೀನು ಪ್ರತಿ ಬಾರಿ ಬಂದು ಹೋಗುವಾಗಲೂ ನನ್ನನ್ನು ಮತ್ತಷ್ಟು ಬೇರಿಗಂಟಿಕೊಳ್ಳುವಂತೆ ಮಾಡುತ್ತಿ. ನಾನು ಬೇರಿನ ನಂಟು ಕಳೆದುಕೊಳ್ಳದೆ ಗಟ್ಟಿಯಾದದ್ದೇ ನಿನ್ನಿಂದ. ನೀನಿಲ್ಲದಿದ್ದರೆ ನಾನೆಂದೋ ಖಾಲಿಯಾಗಿಬಿಡುತ್ತಿದ್ದೆ. ಖಾಲಿಯಾಗುವುದೆಂದರೆ ಗೊತ್ತಲ್ಲಾ? ಉಳಿಯಲೂ ಅಳಿಯಲೂ ಏನೂ ಇಲ್ಲದಿರುವುದು".
ಕಡಲು ಒಂದು ಕ್ಷಣಕ್ಕೆ ಸ್ಥಬ್ಧವಾಯಿತಾ? ಗೊತ್ತಿಲ್ಲ, ನೋವು ಮಾತ್ರ ಬದುಕಿನ ಮುಂದೆ ಮಂಡಿಯೂರಿತು.

4. ಉಪವಾಸ

ಮದ್ರಸ ಬಿಟ್ಟು ಬಂದ ಮಗಳಿಗೆ ಹೊಟೇಲಿಂದ ತರಿಸಿದ ಎರಡು‌‌ ಇಡ್ಲಿ ಸಾಂಬಾರ್  ಕೊಟ್ಟ ಅಮ್ಮ‌ ಮತ್ತೆ ಮನೆಗೆಲಸದಲ್ಲಿ ಮುಳುಗಿ ಹೋದಳು. ಬೆಳಗ್ಗಿಂದಲೂ ಅಷ್ಟೇ, ಜೇಡನ ಬಲೆ ತೆಗೆದು , ಮನೆಯ ಮೂಲೆ ಮೂಲೆಯನ್ನು ಸ್ವಚ್ಛವಾಗಿ ಗುಡಿಸಿ, ಒರೆಸಿ ಥಳ ಥಳ ಹೊಳೆಯುವಂತೆ ಮಾಡುತ್ತಿದ್ದಾಳೆ. ಕಿಟಕಿ, ಬಾಗಿಲುಗಳ ಕರ್ಟನ್, ಸೋಫಾ ಕವರ್, ನೆಂಟರಿಗೆಂದೇ ತೆಗೆದಿಟ್ಟ ದಿಂಬು, ಬೆಡ್ಶೀಟ್ ಎಲ್ಲ ಒಗೆದು ಹಾಕಿದ್ದಳು. ಒಟ್ಟಿನಲ್ಲಿ ಇಡೀ ಮನೆಗೆ ಹೊಸ ಕಳೆ ಬಂದಿತ್ತು. ಕುತೂಹಲ ತಡೆಯಲಾಗದೆ ಮಗಳು "ಅಮ್ಮಾ ಮನೆಗೆ ಯಾರಾದ್ರೂ ಹೊಸ ನೆಂಟರು ಬರುತ್ತಿದ್ದಾರಾ?" ಎಂದು ಕೇಳಿದಳು.
"ಹುಂ ಮಗಳೇ, ಅಲ್ಲಾಹುವೇ ನೆಂಟರನ್ನು ಕಳುಹಿಸುತ್ತಿದ್ದಾನೆ. ಪವಿತ್ರ ಮಾಸ ರಂಜಾನ್ ಬರುತ್ತಿದೆ. ಉಪವಾಸದಲ್ಲಿನ ಒಂದು ಪುಣ್ಯ ಕಾರ್ಯಕ್ಕೆ ಅವನು ಎಪ್ಪತ್ತರಷ್ಟು ಪ್ರತಿಫಲ ಕೊಡುತ್ತಾನೆ. ಹೀಗಿರುವಾಗ ರಂಜಾನ್ ನನ್ನು ಸ್ವಾಗತಿಸದೇ ಇರಲಾದೀತೇ?"
"ಹೌದಾ ಅಮ್ಮಾ? ಎಪ್ಪತ್ತರಷ್ಟು ಪ್ರತಿಫಲಾನಾ? ಹಾಗಿದ್ದರೆ ಶಾಲೆಯಲ್ಲಿನ ನನ್ನ ಗೆಳತಿ ತುಂಬಾ ಪುಣ್ಯವಂತೆ. ಅವಳಪ್ಪ ತೀರಿ ಹೋದ ನಂತರ ವಾರದಲ್ಲಿ ನಾಲ್ಕು ದಿನ ಅವರಿಗೆ ಉಪವಾಸವಂತೆ" ಎಂದು ಮುಗ್ಧತೆಯಿಂದ ನಕ್ಕಳು.

5. ತೀರದ ದಾಹ

ತೀರದ ದಾಹದಿಂದ ಬಳಲುತ್ತಿದ್ದ ಮರಳನ್ನು ಗಾಳಿ ಕೇಳಿತು
" ಪಕ್ಕದಲ್ಲೇ ಸಮುದ್ರ ಇದ್ದರೂ ಇಷ್ಟು ದಾಹವೇ ನಿನಗೆ? ಬೊಗಸೆಯೊಡ್ಡಿದರೆ ಸಾಕು  ದಾಹವೂ ತೀರುವಷ್ಟು ನೀರಿದೆ".
"ತನ್ನ ಮೀರಿದವರಿಲ್ಲ ಎನ್ನುವ ಅಹಂಕಾರದಿಂದ ಭೋರ್ಗರೆವ ನೀರಿನಲ್ಲಿ ಪ್ರತಿಬಿಂಬವೇ ಮೂಡುತ್ತಿಲ್ಲ. ಇನ್ನು ದಾಹ ತೀರೀತೇ?" ತಣ್ಣಗೆ ಉತ್ತರಿಸಿತು ಮರಳು.

6. ಪ್ರತಿಬಿಂಬ

ಕನ್ನಡಿ ಮಾರುವ ಅಂಗಡಿಯಲ್ಲಿ ಅವಳು ಎಲ್ಲ ಕನ್ನಡಿಯ ಮುಂದೆ ನಿಂತು ಪ್ರತಿಬಿಂಬ ನೋಡಿ ಪರೀಕ್ಷಿಸಿ ನಿರಾಸೆಯಿಂದ ಹೊರಡಲನುವಾದಳು. ಅಂಗಡಿಯವನು" ಏನು ಬೇಕಿತ್ತು ಮೇಡಂ?"
"ಒಡೆದು ಚೂರಾದರೂ ಒಡಕು ಬಿಂಬ ತೋರದ ಕನ್ನಡಿ ಬೇಕಿತ್ತು. ಇಲ್ಲಿ ಹುಡುಕಿದೆ, ಸಿಗಲಿಲ್ಲ." ಎಂದಳು ಅವಳು.
"ಇಲ್ಲಿ ಅಂತಲ್ಲ, ಎಲ್ಲೂ ಸಿಗದು. ಒಮ್ಮೆ ಅಂತರಂಗದಲ್ಲಿ ಹುಡುಕಿಕೊಳ್ಳಿ. ಸಿಗುವುದಿದ್ದರೆ ಅಲ್ಲೇ" ಎಂದ ಅಂಗಡಿಯವನು.

7. ಅಸ್ತಿತ್ವದ ಪ್ರಶ್ನೆ

"ಅಸ್ತಿತ್ವ ಕಳೆದುಕೊಳ್ಳುವುದೆಂದರೇನು?" ಮೋಡದ ಒಳಗಿಂದ ಭೂಮಿಗೆ ಬರಲು ಹೊರಟ ಎರಡು ಪುಟ್ಟ ಪುಟ್ಟ ಮಳೆ ಹನಿಗಳು ಮಾತಾಡಿಕೊಳ್ಳುತ್ತಿದ್ದವು. ಈಗಷ್ಟೇ ಬೀಸಿದ ಗಾಳಿಗೆ ಮೋಡದಿಂದ ತಪ್ಪಿಸಿಕೊಂಡ ದೊಡ್ಡ ಹನಿಯೊಂದು‌ ಭೂಮಿಯತ್ತ ಜಾರುತ್ತಾ "ಇದ್ದೂ ಇಲ್ಲದಂತಾಗುವುದೇ ಅಸ್ತಿತ್ವ ಕಳೆದುಕೊಳ್ಳುವುದು" ಅಂದಿತು. ಏನೂ ಅರ್ಥವಾಗದ ಪುಟ್ಟ ಹನಿಗಳು ಒಂದರ ಮುಖ ಇನ್ನೊಂದು ನೋಡುತ್ತಿರುವಂತೆಯೇ ಮತ್ತೆ ಗಾಳಿ ಬೀಸಿತು. ಅವರೆಡೂ ಜೊತೆಯಾಗಿ ಉದುರಿದವು. ದಾರಿಯಲ್ಲಿ ಗಾಳಿಗೂ, ಧೂಳಿಗೂ, ಗುಡುಗಿನ ಆರ್ಭಟಕ್ಕೂ ಹೆದರಿ ಕಣ್ಣು ಮುಚ್ಚಿದವು.ಕಣ್ಣು ಬಿಟ್ಟು ನೋಡಿದಾಗ ಎರಡೂ ಹನಿಗಳು ಸಾಗರ ಸೇರಿದ್ದವು. ಎತ್ತ ನೋಡಿದರತ್ತ ನೀರು. ತಮ್ಮ‌ ಮೈ ನೋಡಿಕೊಂಡವು, ಹನಿ ಯಾವುದು ಸಾಗರ ಯಾವುದು ಗೊತ್ತಾಗಲಿಲ್ಲ. ಅವೆರಡಕ್ಕೂ ಈಗ ಅಸ್ತಿತ್ವ ಕಳೆದುಕೊಳ್ಳುವುದೆಂದರೇನೆಂದು ಅರ್ಥವಾಗಿತ್ತು.

(2019 ಜೂನ್ ತಿಂಗಳ ತುಷಾರದಲ್ಲಿ ಪ್ರಕಟಿತ ಕಥೆಗಳು.)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ