ಇಳಿ ಸಂಜೆಯ ಹೊತ್ತು.
ಹೊಂಗೆ ಮರದಡಿಯಲ್ಲಿ ಕೂತ ಯುವ ಕವಿ ಪದ್ಯ ಬರೆಯುತ್ತಿದ್ದ. ಅವನ ಕವಿತೆಯ ಪೂರ್ತಿ, ಇಂದು ಮುಂಜಾನೆ
ಅಕಸ್ಮಾತ್ತಾಗಿ ಚಿಟ್ಟೆಯನ್ನು ಕೊಂದ ಹಳಹಳಿಕೆಗಳೇತುಂಬಿದ್ದವು. ಒಂದು ಸುದೀರ್ಘ
ಪಶ್ಚಾತ್ತಾಪವದು. ಪೂರ್ತಿ ಬರೆದಾದ ಮೇಲೆ ಒಂದು ಕ್ಷಣ ಕಣ್ಣುಮುಚ್ಚಿ ನಿಡಿದಾದ ಉಸಿರೆಳೆದುಕೊಂಡು
ಮತ್ತೆ ಕಣ್ಣು ತೆರೆದು ಈಗಷ್ಟೇ ಬರೆದ ಕವಿತೆ ಓದಿ
ತೃಪ್ತಿಯಿಂದ ಎದ್ದು ನಿಂತ. ಅವನ ಧ್ವನಿಯ ತುಂಬ ಪ್ರಾಯಶ್ಚಿತ್ತದಭಾವವಿತ್ತು. ಕವಿತೆ ಕೇಳಿದ
ಕಂಬಳಿ ಹುಳವೊಂದು ಇಷ್ಟು ಪಶ್ಚಾತ್ತಾಪ ಪಡುವ ಅವನನ್ನೊಮ್ಮೆ ನೋಡಬೇಕು ಎಂದು ಎಲೆಯ ಮರೆಯಿಂದ
ಮೆಲ್ಲನೆ ಹೊರಗಿಣುಕಿತು. ಕೂಡಲೇ ಮರ, "ಮನುಷ್ಯರಿಗೆ ಚಿಟ್ಟೆಯನ್ನು ಕೊಂದಾಗ ಕಾಡುವ ಪಾಪಪ್ರಜ್ಞೆ ಕಂಬಳಿ
ಹುಳವನ್ನು ಕೊಂದಾಗ ಕಾಡದು ಮಗೂ" ಎಂದಿತು. ಈ ಮರಕ್ಕೇನೂ ಈರ್ಷ್ಯೆ ಇರಬೇಕು ಅಂದುಕೊಂಡ
ಕಂಬಳಿ ಹುಳ ಅವನನ್ನು ನೋಡಲೆಂದು ಮತ್ತಷ್ಟು ಬಾಗಿತು. ಹಾಗೆ ಬಾಗುತ್ತಲೇ ಅವನ ಹೆಗಲ ಮೇಲೆ
ಬಿತ್ತು. ಬಲಗೈಯಲ್ಲಿ ಕವಿತೆಯ ಹಾಳೆ ಹಿಡಿದುಕೊಂಡ ಕವಿ
ಎಡಗೈಯಲ್ಲಿ ಹುಳವನ್ನು ಕೊಡವಿ ಕಾಲಲ್ಲಿ ಕಿವುಚಿ ಮುಂದೆ ಹೋದ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ