ಬುಧವಾರ, ಫೆಬ್ರವರಿ 28, 2018

ಆದಿತ್ಯನಾಥರ ಉ.ಪ್ರ ಮತ್ತು ಮತ್ತೊಂದು ಕೊಲೆ.

ಸತ್ತಿರೋ ಶ್ರೀದೇವಿಯವರನ್ನು ಮತ್ತೆ ಮತ್ತೆ ಅತಿರಂಜಕವಾಗಿ ಸಾಯಿಸ್ತಿರುವ ಈ ದೇಶದ ಎಲ್ಲಾ ಮಾಧ್ಯಮಗಳಿಗೂ (ಈ ಪ್ರಕರಣದಲ್ಲಿ ದುಬೈ ಮಾಧ್ಯಮಗಳಿಗೂ) ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಾ ಒಂದು ಘಟನೆಯ ಬಗ್ಗೆ ಮಾತಾಡಬೇಕಿದೆ ನನಗೆ.

ಮೊನ್ನೆ ಫೆಬ್ರವರಿ 22ರಂದು ಕಮ್ಯೂನಿಸ್ಟರ ಕೇರಳದಲ್ಲಿ ಮಧು ಎಂಬ ಆದಿವಾಸಿ ಯುವಕನೊಬ್ಬ ಹಸಿವಿನ ಕಾರಣದಿಂದ ಅಕ್ಕಿ ಕದ್ದದ್ದಕ್ಕಾಗಿ ಕೊಲೆಯಾಗಿ ಹೋದ್ನಲ್ಲಾ ಅದೇ ದಿನ ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದ ಉನ್ನಾವೋದಲ್ಲಿ ಹದಿನೆಂಟರ ಹುಡುಗಿಯೊಬ್ಬಳು ಬೆಂಕಿಯಲ್ಲಿ ಬೆಂದು ಕರಕಲಾಗಿ ಹೋದಳು.

ತರಕಾರಿ ತರಲೆಂದು ಮಾರ್ಕೆಟ್ ಗೆ ಹೋದ ಹುಡುಗಿಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಜೀವಂತ ಸುಟ್ಟರು ಕೊಲೆಗಾರರು. ಜೀವ ಉಳಿಸಿಕೊಳ್ಳಲು ಓಡಿದ ಅವಳು ಒಂದಿಷ್ಟು ದೂರ ಓಡುವಷ್ಟರಲ್ಲಿ ಸುಟ್ಟು ಕರಕಲಾಗಿ ಬಿಟ್ಟಳು. ಈವತ್ತಿನವರೆಗೂ ಆ ಭೀಕರ ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

ದಿನ ಪತ್ರಿಕೆ ಓದುವ, ನ್ಯೂಸ್ ಚಾನೆಲ್ ನೋಡುವ ನಮ್ಮಲ್ಲಿ ಎಷ್ಟು ಮಂದಿಗೆ ಈ ಘಟನೆಯ ಬಗ್ಗೆ ಗೊತ್ತಿದೆ? ಮಧುವಿನ ಸಾವು ದಿನಪತ್ರಿಕೆಗಳ ಮುಖಪುಟ ಸುದ್ದಿಯಾಯಿತು, ನ್ಯೂಸ್ ಚಾನಲ್ ಗಳ ಪ್ರೈಮ್ ಟೈಮ್ ನ್ಯೂಸ್ ಆಯ್ತು. ಆದರೆ ಬಾಳಬೇಕಿದ್ದ, ಬದುಕಬೇಕಿದ್ದ ಆ ಹುಡುಗಿಯ ಜೀವಂತ ದಹನ ಪತ್ರಿಕೆಗಳಲ್ಲಿ ಕಣ್ಣಿಗೆ ಕಾಣದಂತೆ ಒಂದು ಮೂಲೆಯಲ್ಲಿ ಪ್ರಕಟವಾಯಿತು.

ಎರಡೂ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಗಳು. ಎರಡರಲ್ಲೂ ಜೀವ ಕಳೆದುಕೊಂಡದ್ದು ಈ ದೇಶದ ಭವಿಷ್ಯವಾಗಿರುವ ಎರಡು ಯುವ ಜೀವಗಳು. ಎರಡೂ ಪ್ರಕರಣಗಳಲ್ಲಿ ಕಳೆದುಕೊಂಡಿರುವುದು ಎರಡು ಅಮೂಲ್ಯ ಜೀವಗಳನ್ನು. ಎಲ್ಲಕ್ಕಿಂತ ಮುಖ್ಯವಾಗಿ ಎರಡೂ ಕಡೆ ಕೊಲ್ಲಲ್ಪಟ್ಟವರು ಮನುಷ್ಯರು.

ಹಾಗಾಗಿಯೇ ಎರಡೂ ಸಂಗತಿಗಳು ಸಮಾನವಾಗಿ ಚರ್ಚೆಯಾಗಬೇಕಿತ್ತು, ಖಂಡಿಸಲ್ಪಡಬೇಕಿತ್ತು, ಪ್ರಶ್ನಿಸಲ್ಪಡಬೇಕಿತ್ತು. ಆದರೆ ಹಾಗಾಗಲಿಲ್ಲ, ಕೇರಳದ ಘಟನೆಗೆ ಸಿಕ್ಕ ಪ್ರಾಮುಖ್ಯತೆ ಉನ್ನಾವೋದ ಘಟನೆಗೆ ಸಿಗಲಿಲ್ಲ.

ಯಾಕೆ ಹೀಗಾಯ್ತು? ದಿನಂಪ್ರತಿ ಅತ್ಯಾಚಾರದ, ಹೆಣ್ಣಿನ ಮೇಲಿನ ಕೊಲೆಯ, ದೌರ್ಜನ್ಯದ ಸುದ್ದಿ ಓದುತ್ತಿರುವ, ಕೇಳುತ್ತಿರುವ, ನೋಡುತ್ತಿರುವ ನಮಗೆ ಇದೊಂದು ತೀರಾ ಕ್ಷುಲ್ಲಕ ವಿಷಯ ಅಂತನಿಸಿತಾ? ಅಥವಾ ಹೆಣ್ಣೊಬ್ಬಳ ಕೊಲೆ ಅದೂ ಹಾಡು ಹಗಲೇ ಬೆಂಕಿ ಹಚ್ಚಿ ಸುಟ್ಟು ಕರಕಲಾಗಿಸಿದ್ದು ಸುದ್ದಿಯೇ ಅಲ್ಲವಾಯಿತೇ? ಅಥವಾ ಕೊಲೆಗಳಿಗೂ ಲಿಂಗ ಭಿನ್ನತೆಯಿದೆಯೇ? ಅಥವಾ ರಾಜಕೀಯ ಕಾರಣಗಳಿಗಾಗಿ ಅದು ಸುದ್ದಿಯಾಗದೇ ಹೋಯಿತೇ? ಒಂದು ಪ್ರಾಮಾಣಿಕ ಆತ್ಮವಿಮರ್ಶೆ ಮಾಡಿಕೊಳ್ಳೋಣ.

ಅಭಿಪ್ರಾಯ ಉತ್ಪಾದನೆ ಎಂಬ ನವವ್ಯಾಪಾರಕ್ಕೆ ನಾವು ನಮಗೇ ಗೊತ್ತಿಲ್ಲದಂತೆ ಬಲಿಯಾಗುತ್ತಿದ್ದೇವಾ? ನಮ್ಮ ಸಂವೇದನೆಗಳು, ಸೂಕ್ಷ್ಮತೆಗಳು, ನಿಲುವುಗಳು ಆಯಾಯ ಪ್ರದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳನ್ನು ಅವಲಂಬಿಸಿ ರೂಪುಗೊಳ್ಳುತ್ತಿವೆಯಾ? ನಮ್ಮ ಪ್ರತಿಕ್ರಿಯೆಗಳು ಲಿಂಗಾಧಾರಿತವಾಗುತ್ತಿವೆಯಾ?ಧರ್ಮ, ಜಾತಿ, ಮತ,  ಸಿದ್ಧಾಂತಗಳಾಚೆಗಿನ‌ ಮಾನವೀಯತೆಯನ್ನು ನಾವೆಂದೂ ನಮ್ಮದಾಗಿಸಿಕೊಳ್ಳಲಾರೆವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ