ಶನಿವಾರ, ಫೆಬ್ರವರಿ 24, 2018

ಕಮ್ಯೂನಿಸ್ಟರ ಕೇರಳ ಮತ್ತು ಒಂದು ಕೊಲೆ.

ಕಮ್ಯೂನಿಸ್ಟರ ಕೇರಳದಲ್ಲೂ ಹೀಗೆಲ್ಲಾ ನಡೆಯುತ್ತದಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವವರು ಒಮ್ಮೆ ಪಶ್ಚಿಮ ಬಂಗಾಳದತ್ತ ನೋಡುವುದು ಒಳಿತು. ಸಾಂಸ್ಕೃತಿಕವಾಗಿ, ಬೌದ್ಧಿಕವಾಗಿ ಇಡೀ ಭಾರತಕ್ಕಿಂತ ನಾಲ್ಕು ಹೆಜ್ಜೆ ಮುಂದಿದ್ದ ಬಂಗಾಳ ಇವತ್ತು ಪ್ರಗತಿಯ ಓಟದಲ್ಲಿ ಹಿಂದಿದೆ ಅಂದರೆ ಅದಕ್ಕೆ, ಮೂರು ದಶಕಗಳಷ್ಟು ಬಂಗಾಳವನ್ನು, ಬಂಗಾಳಿಗರನ್ನು ಆಳಿದ ಎಡಪಕ್ಷಗಳೇ ಕಾರಣ ಎಂದರೆ ಅತಿಶಯೋಕ್ತಿ ಆಗಲಾರದು. ಜನಪರ, ಜೀವಪರ, ಕಾರ್ಮಿಕ ಪರ, ಬಡವರ ಪರ ಎಂದು ರಾಜಕೀಯ ಮಾಡುವವರ ರಾಜಕಾರಣ ಎಷ್ಟು ಗಬ್ಬೆದ್ದು ಹೋಗಿದೆ, ಅಂತರಾಳದಲ್ಲಿ ಎಷ್ಟು ಕ್ರೌರ್ಯ ಮಡುಗಟ್ಟಿದೆ ಅನ್ನುವುದಕ್ಕೆ ಬಂಗಾಳ ಜೀವಂತ ಸಾಕ್ಷಿ.


ನಿನ್ನೆ ಕೇರಳದಲ್ಲಿ ನಡೆದ ಕೊಲೆಯ ಬಗ್ಗೆ ಮರುಗುವವರನ್ನು, ಕರುಣೆ ತೋರುವವರನ್ನು, ಮೊಸಳೆ ಕಣ್ಣೀರು ಸುರಿಸುವವರನ್ನು, ಈ ದೇಶದ ನಗರಗಳ ರಾಜ ರಸ್ತೆಯಲ್ಲಿ ಮಧ್ಯರಾತ್ರಿಯಲ್ಲೊಮ್ಮೆ ನಡೆದಾಡಿಸಬೇಕು. ಹೆಚ್ಚೇನೂ ದೂರ ಹೋಗಬೇಕಿಲ್ಲ, ಒಂದು ರಾತ್ರಿ ನಗರ ಕಣ್ಣುಮುಚ್ಚಿದ ಮೇಲೆ ನಮ್ಮ ಮಂಗಳೂರಿನ ರಸ್ತೆಯಲ್ಲೊಮ್ಮೆ ನಡೆದಾಡಿದರೆ ಸಾಕು, ಭಾರತದ ಬಡತನದ ವಿರಾಟ್ ದರ್ಶನವಾಗುತ್ತದೆ.


ರೋಡ್ ಡಿವೈಡರ್ ಗಳಲ್ಲಿ ಟೆಂಟ್ ಹಾಕಿದ ಕುಟಂಬ, ರಾತ್ರಿಯಾಗುತ್ತಲೇ ಬಸ್ ಸ್ಟಾಂಡ್ ಗಳನ್ನೇ ತಮ್ಮ ಮನೆಯಾಗಿಸುವ ಅನಿವಾರ್ಯಕ್ಕೆ ಸಿಲುಕಿರುವ ಕುಟುಂಬಗಳು, ಗಟಾರದ ಪಕ್ಕದಲ್ಲೇ ಅಡುಗೆ ಮಾಡಿಕೊಳ್ಳುವವರು, ಸ್ಲಂ ಅಲ್ಲದ ಸ್ಲಂ ಕುದ್ರೋಳಿಯ ರಾತ್ರಿ ಜಗತ್ತು, ಶೌಚಕ್ಕಾಗಿ ಕಡಲ ಕಿನಾರೆಯನ್ನೇ ಆಶ್ರಯಿಸಬೇಕಾದ ಮಹಿಳೆಯ ದಯನೀಯತೆ, ಪುಡಿಗಾಸಿಗಾಗಿ ಇಡೀ ದಿನ ದುಡಿದು ಆಕಾಶವನ್ನೇ ಸೂರಾಗಿಸಿದವರ ಅಸಹಾಯಕತೆಗಳೇ ಸಾಕು ಬುದ್ಧಿವಂತರ ಜಿಲ್ಲೆಯ ಬಡವರ ದಾರುಣತೆಯನ್ನು ಸಾರಲು.


ನಾವೇನೋ ಎ.ಸಿ ರೂಮಿನಲ್ಲಿ ಕೂತು, ದುಡಿದರೆ ಅವರ ಬಡತನವೂ ದೂರವಾಗುತ್ತದೆ ಎಂದು ವಿವೇಚನೆ ಮಾಡದೆ ಶರಾ ಬಿಡಬಹುದು. ಆದರೆ ಹಸಿವು ನೀಗಲು ದುಡಿತ ಒಂದೇ ಅಲ್ಲ ಒಂದಿಷ್ಟು ಬುದ್ಧಿವಂತಿಕೆಯೂ ಬೇಕಾಗುತ್ತದೆ ಅನ್ನುವುದನ್ನು ನಾವು ಪ್ರಜ್ಞಾಪೂರ್ವಕವಾಗಿ ಮರೆತು ಬಿಡುತ್ತೇವೆ. ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುವವರ ಮುಂದೆ ವಿದ್ಯೆಯ ಉಪಯುಕ್ತತೆಯನ್ನೂ, ಅದು ಮನುಷ್ಯನ ಮೂಲಭೂತ ಅವಶ್ಯಕ ಅನ್ನುವುದನ್ನೂ ವಿವರಿಸುತ್ತಾ ಅವರಿಗೆ ಮನಗಾಣಿಸುತ್ತೇವೆ ಅನ್ನುವುದೇ  ಒಂದು ದೊಡ್ಡ ವಿಡಂಬನೆ.


ರಾಜಕಾರಣಿಗಳೇ ಸೃಷ್ಟಿಸಿರುವ ನೂರಾರು ಸ್ಲಂಗಳು, ಉಳ್ಳವರ ಕೃಪಾಪೋಷಿತ ಪುಡಿ ರೌಡಿಗಳ ಗುಂಪು, ಸೆಲೆಬ್ರಿಟಿಗಳ ಅಹಂಕಾರ... ಇವೆಲ್ಲದರ ಮಧ್ಯೆ ಹಸಿವಿಗಾಗಿ ಜೀವ ತೆರುವ, ಅತ್ಯಂತ ದಾರುಣವಾಗಿ ಕೊಲೆಯಾಗಲ್ಪಡುವ 'ಮಧು'ವಿನಿಂತ ಹಸಿದವರು... ಕೂಗುಮಾರಿತನವನ್ನೇ ಪತ್ರಿಕೋದ್ಯಮ ಅಂತ ಬಿಂಬಿಸಿಕೊಳ್ಳುತ್ತಿರುವ ಈ ದೇಶದಲ್ಲಿ ಹಸಿವು ಬಡತನದ ಬಗ್ಗೆ ಒಂದು ಉಪಯುಕ್ತ ಚರ್ಚೆಯಾಗುತ್ತದೇನೋ ಅಂತ ಅಂದುಕೊಂಡರೆ ಅದೂ ಇಲ್ಲ. ಕೆಲವು ಅತಿ ಬುದ್ಧಿವಂತರು ಮಲ್ಯ, ನೀರವ್ ಮೋದಿಯ ಪಲಾಯನವನ್ನೂ ಮಧುವಿನ ಕೊಲೆಯನ್ನೂ ಸಮೀಕರಿಸುತ್ತಿದ್ದಾರೆ, ಆ ಮೂಲಕ ಗೊತ್ತಿದ್ದೋ ಗೊತ್ತಿಲ್ಲದೆಯೋ ಚರ್ಚೆಯ ದಿಕ್ಕನ್ನು ಸಂಪೂರ್ಣವಾಗಿ ತಪ್ಪಿಸುತ್ತಿದ್ದಾರೆ.


ಎಲ್ಲಿಯ ಮೋದಿ, ಎಲ್ಲಿ ಮಧು? ಎಲ್ಲಿಯ ಹಸಿವು, ಎಲ್ಲಿಯ ಐಶಾರಾಮಿ ಜೀವನ? ಎಲ್ಲಿಯ ಪೈಸೆ, ಎಲ್ಲಿಯ ಕೋಟಿಗಳ ಲೆಕ್ಕಾಚಾರ? ಮಧುವಿನಂತಹ ಬಡವ, ಹಸಿದವ ಸಾಯುತ್ತಿರುವಾಗ ಸೆಲ್ಫಿ ತೆಗೆದುಕೊಳ್ಳಲು ಪ್ರೇರೇಪಿಸಿದ ವ್ಯವಸ್ಥೆಯ ಕ್ರೌರ್ಯ, ವಿಕಾರತೆಗಳು ಚರ್ಚೆಯಾಗಬೇಕಾದಲ್ಲಿ ಬಡತನದ, ಹಸಿವಿನ ಕಲ್ಪನೆಯೂ ಇಲ್ಲದ  ಮಲ್ಯ, ಮೋದಿಗಳ ಅಹಂಕಾರದ ಜೊತೆ ಹೋಲಿಸಲಾಗುತ್ತಿರುವುದು ನಮ್ಮ ಬೌದ್ಧಿಕತೆಯ ದುರಂತ.


ಎಲ್ಲಕ್ಕಿಂತ ಹೆಚ್ಚಾಗಿ, ವ್ಯವಸ್ಥೆಯ ರಕ್ತ ಪಿಪಾಸತೆ, ಕ್ರೌರ್ಯತೆಯ ಬಗ್ಗೆ ತಿರುಗಿ ಬೀಳಾಬೇಕಾಗಿದ್ದ, ನಮ್ಮೊಳಗೆ ಒಂದು ಮುಗಿಯದ ಆಕ್ರೋಶವನ್ನು ಹುಟ್ಟು ಹಾಕಬೇಕಿದ್ದ ಘಟನೆಯೊಂದು ಬರಿಯ ಮರುಕ ಮತ್ತು ಕರುಣೆಯನ್ನು ಮಾತ್ರ ಉಕ್ಕಿಸುತ್ತದೆ ಅಂದರೆ ನಾವು ಪ್ರಜಾಪ್ರಭುತ್ವವನ್ನು ಅಷ್ಟರ ಮಟ್ಟಿಗೆ ದುರ್ಬಲಗೊಳಿಸುತ್ತಿದ್ದೇವೆ ಎಂದೇ ಅರ್ಥ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ