ಬುಧವಾರ, ಡಿಸೆಂಬರ್ 2, 2015

ಅಳುವ ಈ ದಿಟ್ಟ ಹುಡುಗಿ ನಿಮ್ಮದೇ ಮನೆ ಮಗಳಾಗಿರಬಹುದು...

ಅದೊಂದು ಕಾಲೇಜ್ ವಾರ್ಷಿಕೋತ್ಸವ ಸಮಾರಂಭ. ಅಲ್ಲೊಬ್ಬ ಹುಡುಗಿ. ಹೆಸರು...? ಕೌಸಲ್ಯಾ, ಕೌಸರ್, ಕ್ಯಾಟ್ಲಿನ್   ಅಥವಾ ಇನ್ನಾವುದೋ ಒಂದು. ನಿಮಗಿಷ್ಟ ಬಂದ ಹೆಸರು ಇಟ್ಕೊಳ್ಳಿ. ಗೆಳತಿಯರ ಒತ್ತಡ ತಾಳಲಾರದೆ ಮೊದಲ ಬಾರಿ ಸೀರೆ ಉಟ್ಟು, ತನ್ನ ಸ್ವಭಾವಕ್ಕೆ ಒಗ್ಗಿ ಬರದ ಹೈಹೀಲ್ಡ್ ಚಪ್ಪಲಿ ಮೆಟ್ಟಿದ್ದಳು. ಕೈಗೊಮ್ಮೆ, ಕಾಲಿಗೊಮ್ಮೆ ತೊಡರಿಕೊಳ್ಳುತ್ತಿದ್ದ ಸೀರೆಯನ್ನು ಮನಸ್ಸಲ್ಲೇ ಶಪಿಸುತ್ತಾ ಪದೇ ಪದೇ ತನ್ನ ಗೆಳತಿಯ ಬಳಿ "ಇದನ್ನು ಬಿಚ್ಚಿ ಹಾಕಿ ಚೂಡಿದಾರ್ ಹಾಕ್ಕೊಳ್ಳಾ?" ಅಂತ ಕೇಳುತ್ತಿದ್ದಳು.  ಅವಳ ಗೆಳತಿ ಅವಳಷ್ಟೇ ಮುನಿಯುತ್ತಾ "ಇದೊಂದಿನ ಅಡ್ಜಸ್ಟ್ ಮಾಡ್ಕೊಳ್ಳೇ ಮಾರಾಯ್ತಿ" ಅನ್ನುತ್ತಾ ಅವಳನ್ನು ಸುಮ್ಮನಿರಿಸಲು ಪ್ರಯತ್ನಿಸುತ್ತಿದ್ದಳು. ಅಷ್ಟರಲ್ಲಿ ಸಮಾರಂಭದ ಅತಿಥಿಗಳ ಪಟ್ಟಿಯಲ್ಲಿದ್ದ ಹಿರಿಯರೊಬ್ಬರು ವೇದಿಕೆ ಹತ್ತಲು ಕಷ್ಟಪಡುತ್ತಿದ್ದುದು ನಮ್ಮ ಕಥಾನಾಯಕಿಯ ಕಣ್ಣಿಗೆ ಬಿತ್ತು. ತಾನು ಸೀರೆ ಉಟ್ಟಿದ್ದೇನೆ ಅನ್ನುವುದನ್ನೂ ಮರೆತು ಆಕೆ ಸ್ಟೇಜ್ ಬಳಿ ಓಡಿ ಹೋಗಿ, ಅವರ ಕೈಹಿಡಿದು ವೇದಿಕೆ ಹತ್ತಿಸಿ ಖುರ್ಚಿಯಲ್ಲಿ ಕೂರಿಸಿದಳು. ಇನ್ನೇನು ವೇದಿಕೆ ಇಳಿಯಬೇಕು ಅನ್ನುವಷ್ಟರಲ್ಲಿ ಯಾಕೋ ಅವರಿಗೊಮ್ಮೆ ನಮಸ್ಕರಿಸಬೇಕು ಅನ್ನಿಸಿ ಮತ್ತೆ ಹಿಂದಿರುಗಿ ಬಂದು ಕೈ ಜೋಡಿಸಿದಳು. ಆ ಹಿರಿಯರು "ಹತ್ತು ಗಂಡು ಮಕ್ಕಳನ್ನು ಹೆತ್ತು ಸುಖವಾಗಿ ಬಾಳು ತಾಯಿ" ಅಂದರು. ಜೋಡಿಸಿದ್ದ ಕೈಯನ್ನು ಇಳಿಸಿ " ಯಾಕೆ ಅಂಕಲ್, ಹೆಣ್ಣು ಮಗೂನ ಹೆತ್ರೆ ಸುಖವಾಗಿರೋಕೆ ಆಗಲ್ವಾ?" ಅಂತ ಪ್ರಶ್ನಿಸಿದಳು. ಒಮ್ಮೆ ಗಲಿಬಿಲಿಗೊಂಡ ಅವರು "ನೀನು ಸ್ತ್ರೀವಾದಿಯಾ?" ಅಂತ ಮತ್ತೆ ಪ್ರಶ್ನಿಸಿದರು. ಇವಳು " ಇಲ್ಲ, ನಾನು ಮಾನವತಾವಾದಿ" ಅಂತಂದು ಸ್ಟೇಜ್ ಇಳಿದಳು. ಅವಳ ದಿಟ್ಟತೆಗೆ, ಹೆಣ್ಣಿಂದ ಅಸುಖ ಅನ್ನುವ ವಿವೇಚನಾರಹಿತ ಯೋಚನೆಯ ಹಿಂದಿರುವ ಮನಸ್ಥಿತಿಯ ಬಗ್ಗೆ ಅವಳಿಗಿರುವ ಸೂಕ್ಷ್ಮ ಅಸಹನೆಗೆ ಅವತ್ತು ಇಡೀ ವೇದಿಕೆ ತಲೆದೂಗಿತ್ತು.

ಹೀಗಿದ್ದ ಆ ಹುಡುಗಿ ಒಂದಿನ, ಕಾಲೇಜ್ ಪಕ್ಕದಲ್ಲಿರುವ ಕಾಲು ದಾರಿಯಲ್ಲಿ ನಡೆದು ಬರುವ ಜೂನಿಯರ್ ಹುಡುಗಿಯೊಬ್ಬಳನ್ನು ಚುಡಾಯಿಸಿದ ಅನ್ನುವ ಕಾರಣಕ್ಕಾಗಿ ಸ್ಟುಡೆಂಟ್ ಸೆಕ್ರೆಟರಿಗೆ ಇಡೀ ಕಾಲೇಜಿನ ಮುಂದೆ ಚೆನ್ನಾಗಿ ಝಾಡಿಸಿದಳು. ಆ ಹುಡುಗನೋ...? ಅವಕಾಶ ಸಿಕ್ಕಾಗೆಲ್ಲಾ ಪರಮ ಸಂಭಾವಿತನಂತೆ ಫೋಸ್ ಕೊಡುತ್ತಾ, ಆತ್ಮರತಿಗಾಗಿ ಒಂದಿಷ್ಟು ಹುಡುಗರ ಗ್ಯಾಂಗ್ ಕಟ್ಟಿಕೊಂಡು, ತನ್ನಲ್ಲಿ ಇಲ್ಲದಿರುವ ಗುಣಗಳು ಇದೆಯೆಂದು ಮತ್ತೊಬ್ಬರನ್ನು ನಂಬಿಸುತ್ತಾ ಕಾಲ ಕಳೆಯುತ್ತಿದ್ದ ಧೂರ್ತ. ಹೈಸ್ಕೂಲಿನಿಂದಲೂ ಅವನದೇ ಶಾಲೆಯಲ್ಲಿ ಓದಿದ ಆ ಹುಡುಗಿಗೆ ಅವನ ಧೂರ್ತತನದ ಬಗ್ಗೆ ಚೆನ್ನಾಗಿ ಗೊತ್ತಿದ್ದುದರಿಂದ ಆಕೆ ಇವಳನ್ನು ತಡೆಯಲು ತುಂಬಾ ಪ್ರಯತ್ನಪಟ್ಟಳು. ಆದ್ರೆ ನಮ್ಮ ಈ ಕಥಾನಾಯಕಿ ಅದ್ಯಾವುದನ್ನೂ ಲೆಕ್ಕಿಸದೆ ಎಲ್ಲರ ಮುಂದೆ ಅವನ ಮುಖದ ನೀರಿಳಿಸಿದ್ದಳು. ಆತನೂ ಅಷ್ಟೆ, ತಪ್ಪು ಒಪ್ಪಿಕೊಳ್ಳುವವನಂತೆ ತಲೆ ತಗ್ಗಿಸಿ "sorry sister" ಅಂದು ತನ್ನ ಬೈಕ್ ಸ್ಟಾರ್ಟ್ ಮಾಡಿ ಮನೆಗೆ ಮರಳಿದ್ದ. ಅಲ್ಲಿಗೆ ಎಲ್ಲವೂ ಮುಗಿಯಿತೆಂದು ಎಲ್ಲರೂ ಭಾವಿಸಿದ್ದರು.

ಆದ್ರೆ ಅದು ಅಷ್ಟಕ್ಕೆ ಮುಗಿದಿರಲಿಲ್ಲ. ಮರುದಿನ ಆಕೆ ಕಾಲೇಜಿಗೆ ಬರುವ ಹೊತ್ತಿಗೆ, ಬ್ಲ್ಯಾಕ್ ಬೋರ್ಡ್, ಟಾಯ್ಲೆಟ್ ಗೋಡೆ, ಪ್ರಯೋಗಾಲಯ, ಕ್ಯಾಂಪಸ್ ನ ಮರಗಳು, ಕ್ಲಾಸ್ ರೂಮ್ ಕಾರ್ನರ್ ಅಂತ ಸಿಕ್ಕ ಸಿಕ್ಕಲ್ಲೆಲ್ಲಾ ಅವಳ ಬಗ್ಗೆ, ಅವಳ ನಡತೆಯ ಬಗ್ಗೆ, ಅವಳಿಗೂ ಅವಳ ಮೆಚ್ಚಿನ ಸರ್ ಗೂ ಇಲ್ಲದ ಸಂಬಂಧ ಕಲ್ಪಿಸಿ ಅಸಹ್ಯವಾಗಿ ಯಾರೋ ಗೀಚಿ ಬಿಟ್ಟಿದ್ದರು. ಹಿಂದಿನ ದಿನ ನಡೆದುದರ ಪರಿಣಾಮವಿದು ಅನ್ನುವುದು ಅರ್ಥವಾಗಲು ಆಕೆಗೆ ಹೆಚ್ಚು ಸಮಯವೇನೂ ಹಿಡಿಯಲಿಲ್ಲ. ಆದ್ರೆ ಇಂಥವರದೇ ಕೆಲಸವೆಂದು ಬೊಟ್ಟು ಮಾಡಿ ತೋರಿಸಲು ಆಕೆಯ ಬಳಿ ಯಾವುದೇ ಸಾಕ್ಷಿಗಳಿರಲಿಲ್ಲ.

ಇಷ್ಟಾದರೂ ಆಕೆ ಧೃತಿಗೆಡಲಿಲ್ಲ. ಎಲ್ಲಾ ಮುಗಿದೇ ಹೋಯಿತು ಎಂಬಂತೆ ಅಳುತ್ತಾ ಕೂರಲಿಲ್ಲ. ಇಷ್ಟೆಲ್ಲಾ ಆಗಿದ್ದು ನನ್ನಿಂದಲೇ ಅಂತ ಅಳುತ್ತಿದ್ದ ಜೂನಿಯರ್ ಹುಡುಗಿಯ ಬಳಿ ಹೋಗಿ "ಬರ್ದಿರೋದು ನನ್ನ ಬಗ್ಗೆ, ನಾನೇ ಆರಾಮವಾಗಿರುವಾಗ ನೀನೇಕೆ ಸುಮ್ಮನೆ ತಪ್ಪೆಲ್ಲಾ ನಿನ್ನದು ಅನ್ನುವಂತೆ ಅಳ್ತಿದ್ದಿಯಾ? Be a brave girl" ಅಂದು ಬೆನ್ನು ತಟ್ಟಿ ಎದ್ದು ಹೋಗಿ ಪ್ರತಿ ಗೋಡೆ, ಕಾರ್ನರ್, ಮರಗಳ ಮೇಲಿದ್ದ ಬರಹಗಳನ್ನು ಒಂದಕ್ಷರಾನೂ ಬಿಡದೆ ಓದಿ, ಏನೂ ಆಗೇ ಇಲ್ಲವೆಂಬಂತೆ ನಸುನಗುತ್ತಾ ಕ್ಲಾಸಿಗೆ ನಡೆದುಬಂದಳು. ಸದಾ ಆತ್ಮವಿಶ್ವಾಸದಿಂದಿರುವ ಈ ಹುಡುಗಿಯ ಕಣ್ಣಲ್ಲಿ ಇವತ್ತಾದರೂ ಹನಿ ಜಿನುಗಿರಬಹುದಾ ಅಂತ ಅವಲೋಕಿಸಿದರೆ, ಊಹೂಂ, ಅಲ್ಲಿ ನೀರ ಪಸೆಯೂ ಇರಲಿಲ್ಲ. ಅವಳು ಎಂದಿಗಿಂತಲೂ ತುಸು ಹೆಚ್ಚೇ ಅನ್ನುವಷ್ಟು ದೃಢವಾಗಿದ್ದಳು.

ಅಷ್ಟೇ ಅಲ್ಲ, ಬ್ರೇಕ್ ಆಗುತ್ತಿದ್ದಂತೆ ಸ್ಟಾಫ್ ರೂಮಿಗೆ ಹೋಗಿ, ತಲೆ ಮೇಲೆ ಕೈ ಹೊತ್ತು ಕುಳಿತ ತನ್ನ ಉಪನ್ಯಾಸಕರನ್ನು ಕುರಿತು " ಯಾರೋ ಅವಿವೇಕಿಗಳು ಏನೋ ಗೀಚಿದ್ರು ಅಂತ ನೀವ್ಯಾಕೆ ಸರ್ ತಲೆಕೆಡಿಸ್ಕೋತೀರಾ? ಅವ್ರೆಲ್ಲಾ ಮುಂದೆ ನಿಂತು ಹೋರಾಡೋಕೆ ಧೈರ್ಯವಿಲ್ಲದ ಹೇಡಿಗಳು. ಅಂಥವರಿಗೆ ನಾವ್ಯಾಕೆ ಬೆಲೆ ಕೊಡ್ಬೇಕು?" ಅಂದಳು. ತನ್ನ ಇಮೇಜ್ಗಿಂತಲೂ ಅವಳೇನು ಮಾಡಿಕೊಳ್ಳುತ್ತಾಳೋ ಅಂತ ಹೆದರಿದ್ದ ಅವರು ಇವಳ ಮಾತು ಕೇಳಿ "ನಿಂಗೇನೂ ಅನ್ನಿಸುವುದೇ ಇಲ್ವಾ? ಸಮಾಜ ನಿನ್ನ ಬಗ್ಗೆ ಏನೇನೋ ಮಾತಾಡಿಬಿಡುತ್ತೆ ಅಂತ ಭಯವಾಗುವುದಿಲ್ವಾ?" ಅಂತ ಕೇಳಿದರು. ಅವಳು "ನನ್ನ ಆತ್ಮಶುದ್ಧಿಯ ಬಗ್ಗೆ ನಂಗೆ ಅನುಮಾನಗಳೇ ಇಲ್ಲದಿರುವಾಗ ಯಾರೋ ಏನೋ ಅಂದ ಮಾತ್ರಕ್ಕೆ ನಾನೇಕೆ ಭಯಪಟ್ಟುಕೊಳ್ಳಬೇಕು? ನಂಗೆ ಯಾಕಾದ್ರೂ ಏನೇನೋ ಅನ್ನಿಸಬೇಕು?" ಅಂತ ಮರು ಪ್ರಶ್ನಿಸಿದಳು. ಮತ್ತು ಆ ಮೂಲಕವೇ ತಾನೇನೂ ಮಾಡಿಕೊಳ್ಳುವುದಿಲ್ಲ ಅಲ್ಲಿದ್ದ ಎಲ್ಲರಿಗೂ ಪರೋಕ್ಷವಾಗಿ ತಿಳಿಸಿ ಹೊರಬಂದಳು.

ಇತ್ತ, ಇನ್ನೇನು ಅಳುತ್ತಾಳೆ, ರಂಪ ಮಾಡುತ್ತಾಳೆ, ’ನನ್ನಿಂದ ತಪ್ಪಾಯ್ತು, ಕ್ಷಮಿಸಿ’ ಅಂತ ನಮ್ಮ ಮುಂದೆ ನಿಂತು ಗೋಗರೆಯುತ್ತಾಳೆ, ಗೋಡೆಯ ಮೇಲಿನ ಅಷ್ಟೂ ಬರಹಗಳನ್ನು ಅಳಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಾಳೆ ಅಂತೆಲ್ಲಾ ಮನಸ್ಸಲ್ಲೇ ಮಂಡಿಗೆ ಮೆಲ್ಲುತ್ತಿದ್ದವರಿಗೆ, ಹಾಗೇನೂ ಆಗದೆ, ಆಕೆ ಆ ಘಟನೆಗೂ ನನಗೂ ಸಂಬಧವೇ ಇಲ್ಲ ಅನ್ನುವಂತೆ ನಡೆದುಕೊಂಡದ್ದು ನುಂಗಲಾರದ ತುತ್ತಾಗಿತ್ತು. ಅವಳ ರೇಗಿಸಬೇಕೆಂದುಕೊಂಡಿದ್ದ, ತಮ್ಮ ಅಹಂಕಾರದ ಮುಂದೆ ಅವಳನ್ನು ಮಂಡಿಯೂರಿಸಬೇಕೆಂದು ಕೊಂಡಿದ್ದ, ಇನ್ನೆಂದೂ ಅವಳು ನಮ್ಮನ್ನು ಪ್ರಶ್ನಿಸಿದಂತೆ ಮಾಡಬೇಕು ಅಂದುಕೊಂಡಿದ್ದ ಯಾವ ಅವಕಾಶಗಳನ್ನು ಆಕೆ ಅವರಿಗೆ ಒದಗಿಸಿರಲಿಲ್ಲ. ಅತ್ಯಂತ ಪ್ರಬುದ್ಧವಾಗಿ ಪರಿಸ್ಥಿತಿಯನ್ನು ನಿರ್ವಹಿಸಿದ ಅವಳು ’ನಿಮ್ಮ ಅಹಂಕಾರಕ್ಕೆ ತಲೆಬಾಗುವಷ್ಟು ದುರ್ಬಲ ವ್ಯಕ್ತಿತ್ವವಲ್ಲ ನನ್ನದು’ ಅನ್ನುವ ಸಂದೇಶವನ್ನು ತನ್ನ ಉದಾಸೀನತೆಯ ಮೂಲಕವೇ ರವಾನಿಸಿದ್ದಳು.

ಆದ್ರೆ ಇನ್ನೇನು ಅವತ್ತಿನ ಕೊನೆಯ ಅವಧಿ ಮುಗಿಯಲು ಹತ್ತು ನಿಮಿಷಗಳಿವೆ ಅನ್ನುವಾಗ ಕಾಲೇಜ್ ಮ್ಯಾನೇಜರ್ ಅವಳನ್ನು ತನ್ನ ಛೇಂಬರ್ ಗೆ ಕರೆಸಿಕೊಂಡು "ನೋಡಮ್ಮಾ, ಪೊಲೀಸ್, ಕೇಸು, ಕೋರ್ಟ್, ಕಛೇರಿ ಅಂತೆಲ್ಲಾ ಹೋದ್ರೆ ಕಾಲೇಜಿನ ಪ್ರತಿಷ್ಠೆಗೆ ಕುಂದು. ಹಾಗಾಗಿ ಈ ಪ್ರಕರಣ ಠಾಣೆ ಮೆಟ್ಟಿಲು ಹತ್ತುವುದು ಬೇಡ. ನಾವೇ ಆಂತರಿಕ ತನಿಖೆ ಮಾಡಿ ತಪ್ಪಿತಸ್ಥರನ್ನು ಡಿಬಾರ್ ಮಾಡುತ್ತೇವೆ" ಅಂತ ಅವಳು ಠಾಣೆಯ ಮೆಟ್ಟಿಲು ಹತ್ತಬಾರದೆಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಕಾಲೇಜಿನ ಪ್ರತಿಷ್ಠೆಗೋಸ್ಕರ ಒಬ್ಬ ಹೆಣ್ಣಿನ , ಅದೂ ತನ್ನದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಮಾನವನ್ನೂ ಪಣಕ್ಕಿಡಲು ಸಿದ್ಧವಿರುವ ಅವರ ವ್ಯಾಪಾರೀ ಮನೋವೃತ್ತಿಯ ಬಗ್ಗೆ ಹೊಟ್ಟೆಯಾಳದಿಂದ ಎದ್ದು ಬಂದ ಅಸಹ್ಯವನ್ನು ಸಾಧ್ಯವಾದಷ್ಟು ಅದುಮಿಡಲು ಪ್ರಯತ್ನಿಸುತ್ತಾ " ಆಂತರಿಕ ತನಿಖೆಗಳೆಂಬ ನಾಟಕಗಳೇ ಬೇಡ ಸರ್. ನನ್ನ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಮೂಲಕ ಅವರನ್ನು ಪ್ರಶ್ನಿಸುವ ಮನಸ್ಥಿತಿ ಇರುವವರೇ ಇಲ್ಲವಾಗಬೇಕು ಅನ್ನುವುದೇ ಅವರ ಉದ್ದೇಶವಾಗಿತ್ತು. ಅದೇ ಅವರಿಂದ ಸಾಧ್ಯವಾಗಿಲ್ಲ ಅಂದಮೇಲೆ ನಾನೇಕೆ ಹೊಲಸನ್ನು ಮೈಮೇಲೆ ಎರಚಿಕೊಳ್ಳುವ ಅಸಹ್ಯ ಮಾಡಿಕೊಳ್ಳಲಿ? ಆದ್ರೆ ಸರ್, ಹೀಗೆ ಹೆಣ್ಣೊಬ್ಬಳ ನಡತೆಯ ಬಗ್ಗೆ ಹೀಗೆಲ್ಲಾ ಗೀಚಿ ತಮ್ಮ ಮನಸ್ಸಿನ ವಿಕೃತಿ ಹೊರಹಾಕಿದವರ ಬಗ್ಗೆ ಒಂದು ಮಾತೂ ಆಡದೆ ಕಾಲೇಜಿನ ಪ್ರತಿಷ್ಠೆ ಅಂತ ನನಗೇ ಎಚ್ಚರಿಕೆ ನೀಡುತ್ತಿದ್ದೀರಲ್ಲಾ? ಒಂದು ವೇಳೆ ಇದೇ ರೀತಿ ನಿಮ್ಮ ಮನೆಯಲ್ಲೊಬ್ಬರ ಬಗ್ಗೆ ಹೀಗೆ ಯಾರೋ ಸಾರ್ವಜನಿಕವಾಗಿ ಕೆಸರೆರೆಚಿದರೆ ಆಗಲೂ ನೀವು ಇಷ್ಟೇ ನಿಷ್ಠುರವಾಗಿ ಮಾತಾಡುತ್ತಿದ್ದಿರಾ?" ಎಂದು ಪ್ರಶ್ನಿಸಿ ಅವರ ಛೇಂಬರ್ ನಿಂದ ಹೊರಗಡಿಯಿಟ್ಟಳು.

ಹಾಗೆ ಬಂದವಳು ಕಾಲೇಜು ನಿರ್ಮಾನುಷ್ಯವಾಗಿದೆ ಅನ್ನುವುದನ್ನು ಖಚಿತಪಡಿಸಿಕೊಂಡು ಅಲ್ಲೇ ಇದ್ದ ಲೇಡೀಸ್ ರೂಮ್ ಹೊಕ್ಕು ಒಳಗಿಂದ ಅಗುಳಿ ಹಾಕಿ ಬೋರಿಟ್ಟು ಅಳತೊಡಗಿದಳು. ಬೆಳಗ್ಗಿನಿಂದ ತಡೆಹಿಡಿದುಕೊಂಡಿದ್ದ ಕಣ್ಣೀರು ಬಿರುಸು ಭರಿಸಲಾಗದೆ ಇನ್ನು ಸಾಧ್ಯವೇ ಇಲ್ಲ ಎಂಬಂತೆ ಎರಡೂ ಕಣ್ಣುಗಳಿಂದ ದಳದಳನೆ ಉರುಳತೊಡಗಿತು. ಇಡೀ ಕಾಲೇಜಲ್ಲಿ brave girl ಅಂತ ಅನ್ನಿಸಿಕೊಂಡವಳು ’ತನ್ನನ್ನು ಸಾಂತ್ವನಿಸಲು ಹೆಗಲೊಂದು ಇರುತ್ತಿದ್ದರೆ...?’ ಅಂತ ಒಂಟಿಯಾಗಿ ಹಂಬಲಿಸತೊಡಗಿದಳು. ’ಇಷ್ಟು ದೊಡ್ಡ ಪ್ರಪಂಚದಲ್ಲಿ ನಾನು ಎಷ್ಟೊಂದು ಒಂಟಿ, ಕೆಲವರ ಪಾಲಿಗೆ ನಾನು "ಅವಳಾ? ಸಹಿಸ್ಕೋತಾಳೆ ಬಿಡು" ಅನ್ನುವ ನಿರ್ಲಕ್ಷ್ಯ, ಇನ್ನು ಕೆಲವರ ಪಾಲಿಗೆ "ಎಲ್ಲವನ್ನೂ ಎದುರಿಸುವ ಧೈರ್ಯ ದೇವರು ಅವಳಿಗೆ ನೀಡಿದ್ದಾನೆ, ನಮಗೇಕೆ ಅವಳ ಉಸಾಬರಿ?" ಅನ್ನುವ ಮತ್ಸರ. ಆದ್ರೆ ನನಗೇನು ಬೇಕು ಅನ್ನುವುದನ್ನು ಕೇಳುವ ಒಂದು ಜೀವವೂ ನನ್ನ ಜೊತೆಗಿಲ್ಲ. ಅಳಬೇಕೆನಿಸಿದಾಗೆಲ್ಲಾ ಅಳಲಾಗದ, ಏನೇ ಆದರೂ ಏನೂ ಆಗಿಲ್ಲವಂಬತೇ ಇರಬೇಕಾದ ನನ್ನ ಅಸಹಾಯಕತೆ, ಧೈರ್ಯ, ಸ್ಥೈರ್ಯ, ಬುದ್ಧಿವಂತಿಕೆಗಳಂತಹ ದೊಡ್ಡ ದೊಡ್ದ ಮಾತುಗಳಾಚೆ ನಾನೂ ಮನುಷ್ಯಳೇ, ಎಲ್ಲರಂತೆ ನನಗೂ ನೋವಾಗುತ್ತದೆ, ನನ್ನೊಳಗೂ ವಿಷಾದಗಳಿವೆ ಅನ್ನುವ ಸತ್ಯ ಯಾರೂ ಅರ್ಥಮಾಡಿಕೊಳ್ಳುವುದೇ ಇಲ್ಲ’ ಅಂತೆಲ್ಲಾ ಅವಳಿಗೆ ಅನ್ನಿಸತೊಡಗಿತು. ಮರುಕ್ಷಣ, ’ಹೀಗೆಲ್ಲಾ ಒಂಟಿಯಾಗಿ ಕೂತು ಅತ್ತರೆ ನನ್ನೆಲ್ಲಾ ಸಮಸ್ಯೆಗಳು ಬಗೆಹರಿಯುತ್ತಾ? ಹೀಗೆ ಆತ್ಮವಿಶ್ವಾಸ ಕಳ್ಕೊಂಡು ಮೂಲೆ ಸೇರಿ ಅತ್ರೆ ನಗುವವರ ಮುಂದೆ ಎಡವಿ ಬಿದ್ದಂತಾಗುದಿಲ್ಲವೇ? ಇಷ್ಟಕ್ಕೂ ನಾನು ತಪ್ಪು ಮಾಡಿಲ್ಲ ಅಂದಮೇಲೆ ಅಳುವುದಾದರೂ ಯಾಕೆ? ಕೇವಲ ಗೋಡೆಯ ಮೇಲಿನ ಬರಹ ನನ್ನ ಸ್ಥಿರತೆಯನ್ನೇ ಕದಡಿ ಹಾಕುವಷ್ಟು ಶಕ್ತಿಯುತವಾಗಿದೆಯೇ?  ಅಂದ್ರೆ ಸಣ್ಣದೊಂದು ಸವಾಲನ್ನು ಎದುರಿಸಲಾರದಷ್ಟು ನನ್ನ ಆಂತರ್ಯ ಬಲಹೀನವಾಗಿದೆಯಾ? ಅಥವಾ ಇವತ್ತಿನ ಘಟನೆಯ negative waves  ನನ್ನ ಮೇಲೆ ಈ ರೀತಿ ಪ್ರಭಾವ ಬೀರುತ್ತಿದೆಯೇ? ಇಲ್ಲ, ಹಾಗಾಗಬಿಡಕೂಡದು, ಯಾವ ಕಾರಣಕ್ಕೂ ನನ್ನ ವ್ಯಕ್ತಿತ್ವ ದುರ್ಬಲವಾಗಬಾರದು’ ಅಂತಂದುಕೊಂಡು ಕಣ್ಣೀರು ಒರೆಸಿ ಮತ್ತೆ ಹಳೆ ಆತ್ಮವಿಶ್ವಾಸದಿಂದ ಕೋಣೆಯಿಂದ ಹೊರಬಂದಳು. ಕ್ಲಾಸ್ ರೂಮಿಗೆ ಹೋಗಿ ತನ್ನ ಬ್ಯಾಗ್ ಎತ್ತಿಕೊಂಡು, ಗೋಡೆ ಬರಹಗಳನ್ನು ಅಳಿಸಲು ಪೈಂಟರ್ ಗಳಿಗೆ ನಿರ್ದೇಶನ ನೀಡುತ್ತಿದ್ದ ಕಾಲೇಜ್ ಕ್ಲರ್ಕ್ ಬಳಿ ಹೋಗಿ "ಅಣ್ಣಾ, ಅರ್ಜೆಂಟೇನೂ ಇಲ್ಲ, ನಿಧಾನಕ್ಕೆ ಮಾಡಿ ಸಾಕು. ತುಂಬಾ ಹೊತ್ತಾಯ್ತು. ನಿಮ್ಮನೆಯಲ್ಲಿ ನಿಮಗೋಸ್ಕರ ಕಾಯುವವವರನ್ನು ಇನ್ನೂ ಕಾಯಿಸಬೇಡಿ. ಮನೆಗೆ ಹೋಗಿ" ಅಂತಂದು ಮುಗಳ್ನಗೆ ಬೀರಿ ಅಲ್ಲಿಂದ ಹೊರಟು ಹೋದಳು.  

Now, my dear readers.... ಇಷ್ಟು ಓದಿಯಾದ ಮೇಲೆ ನಿಮ್ಮಲ್ಲಿ ಕೆಲವರಿಗಾದರೂ 'ಅರೆ! ಆ ಹುಡುಗಿಯಂಥವರು ಇಲ್ಲೇ ಎಲ್ಲೋ ಇದ್ದಾರಲ್ಲಾ' ಅಂತನ್ನಿಸಿರಬಹುದು. ಹಾಗೆ ಅನ್ನಿಸಿದ್ದೇ ಆದಲ್ಲಿ ಬನ್ನಿ, ಒಂದೆರಡು ನಿಮಿಷ ಕೂತು ಮಾತಾಡೋಣ, ಜೊತೆಗೆ ಒಂದು ಕಪ್ ಟೀ/ಕಾಫಿ ಇರಲಿ ಅಂತಂದರೂ ನನ್ನದೇನೂ ಅಭ್ಯಂತರವಿಲ್ಲ.

ನಿಜ ನಮ್ಮ, ನಿಮ್ಮೆಲ್ಲರ ನಡುವೆ 'ದಿಟ್ಟೆ' ಅಂತನ್ನಿಸಿಕೊಂಡು ಬದುಕುತ್ತಿರುವ ಹುಡುಗಿಯರಿರುತ್ತಾರೆ . ತಾನುಂಟು, ಮೂರು ಲೋಕವುಂಟು ಎಂಬಂತಿರುತ್ತಾರೆ ಅವರು. ತುಂಬಾ ದೂರವೇನೂ ಹೋಗಬೇಕಿಲ್ಲ, 'ಆಕೆ' ನಮ್ಮದೇ ಮನೆ ಮಗಳಾಗಿರಬಹುದು, ನಮ್ಮ ಸ್ನೇಹಿತನ/ತೆಯ ತಂಗಿಯೋ ಅಕ್ಕನೋ ಆಗಿರಬಹುದು, ನಮ್ಮ ಕಣ್ಣೆದುರಲ್ಲೇ ಬೆಳೆದ ಪಕ್ಕದ ಮನೆಯ ಪುಟಾಣಿಯಾಗಿರಬಹುದು ಇಲ್ಲ ನಮ್ಮ ಪತ್ನಿಯೋ,ಗೆಳತಿಯೋ, ಪ್ರೇಯಸಿಯೋ, ನಾದಿನಿಯೋ, ಅತ್ತಿಗೆಯೋ, ಅಮ್ಮನೋ,  ಸಂಬಂಧಿಕಳೋ ಆಗಿರಬಹುದು. ಆಕೆ ಎಲ್ಲವನ್ನೂ, ಎಲ್ಲರನ್ನೂ ಎದುರಿಸುತ್ತಾಳೆ, ಸಹಿಸಿಕೊಳ್ಳುತ್ತಾಳೆ ಅಂದ್ರೆ ಅವಳಿಗೆ ಭಾವನೆಗಳೇ ಇಲ್ಲ, ನೋವಾಗುವುದೇ ಇಲ್ಲ ಎಂದರ್ಥವಲ್ಲ. ಬದಲಾಗಿ ಆಕೆ ನೋವಲ್ಲೂ ನಗುತ್ತಾಳೆ,  ತಾನಗಾಗುವ ನೋವು ತನ್ನವರ ಕಣ್ಣಲ್ಲಿ ನೀರು ತರಿಸಬಾರದು ಎಂದು ತನ್ನ ನೋವನ್ನು ಬಚ್ಚಿಟ್ಟುಕೊಳ್ಳುತ್ತಾಳೆ ಎಂದರ್ಥ. ಎಂತಹ ಧೀಶಕ್ತಿ ಇರುವ ಹುಡುಗಿಯಾದರೂ ಕೆಲವೊಮ್ಮೆ ಮತ್ತೊಬ್ಬರ ಆಸರೆಗಾಗಿ ಕೈ ಚಾಚುತ್ತಾಳೆ, ಒಂದು ಪುಟ್ಟ ಕಂಫರ್ಟ್ ಗಾಗಿ ಹಂಬಲಿಸುತ್ತಾಳೆ. ಆಗ 'ನಿನ್ನ ಯೂಸ್ಲೆಸ್ ಧೈರ್ಯ ಈಗೆಲ್ಲಿ ಹೋಯಿತು?' ಅಂತ ಹಂಗಿಸದಿರೋಣ. ಅವಳ ಮನಸ್ಥಿತಿಯನ್ನು ಅರ್ಥಮಾಡ್ಕೊಂಡು ಅವಳು ಬಯಸುವ ಆಸರೆ, ಕಂಫರ್ಟ್ ಕೊಡಲು ಪ್ರಯತ್ನಿಸೋಣ, ಅದು ಸಾಧ್ಯವಾಗದಿದ್ದರೆ ಅವಳನ್ನು ಅವಳಷ್ಟಕ್ಕೆ ಬಿಟ್ಟುಬಿಡುವ. ತನ್ನನ್ನು ತಾನೇ ಸಂಭಾಳಿಸಿಕೊಳ್ಳುತ್ತಾಳವಳು. ಅದು ಬಿಟ್ಟು ಹಂಗಿಸಿ, ರೇಗಿಸಿ 'ಅವಳತನ'ದ ಹತ್ಯೆ ಮಾಡಹೊರಡುವುದು ಬೇಡ. ಹಾಂ! ಕೊನೆಯದಾಗಿ ಮತ್ತೊಂದು ಮಾತು, ನಮ್ಮ ನಡುವೆ ಇರುವ ಇಂತಹ 'ದಿಟ್ಟ ಹುಡುಗಿ'ಯರು ಕಣ್ಣೆದುರಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಹೊರಟರೆ 'ನಿನಗೇಕೆ ಊರ ಉಸಾಬರಿ' ಅಂತಂದು ಅವಳ ಸದುದ್ದೇಶದ ಪ್ರಯತ್ನಕ್ಕೆ ತಣ್ಣೀರೆರಚಿ ಅವಳ ಆತ್ಮಾರ್ಥತೆಯ ಭಂಜಕರಾಗದಿರೋಣ

ಸೋಮವಾರ, ಅಕ್ಟೋಬರ್ 26, 2015

"ಹುಡುಗರೇ ಹೀಗೆ...." ಅನ್ನುವ ನಿರ್ಧಾರಕ್ಕೆ ಬರುವ ಮುನ್ನ



 "ನೀವು ಹುಡುಗರೇ ಹೀಗೆ, ಒಪ್ಪಿಕೊಳ್ಳುವವರೆಗೂ ನಮ್ಮ ಹಿಂದೆ ಮುಂದೆ ಸುತ್ತುತ್ತಾ, ನೀನೆ ಪ್ರಾಣ, ನೀನೇ ಜೀವ, ನೀನಿಲ್ಲದೆ ಬದುಕಲಾರೆ, ನಿನಗೋಸ್ಕರ ಸೂರ್ಯ, ಚಂದ್ರರನ್ನೂ ಕೈಲಿ ಹಿಡಿದು ತರಬಲ್ಲೆ, ಹರಿಯೋ ನದಿಯನ್ನು ನಿಲ್ಲಿಸಬಲ್ಲೆ, ನೀನು ಸಂಗಾತಿಯಾದರೆ ಒಂದಿಷ್ಟು ದಿನಗಳಾದರೂ ಹೆಚ್ಚಿಗೆ ಬದುಕಬಲ್ಲೆ. ಒಪ್ಪಿಕೋ ಹುಡುಗಿ ಅಂತೆಲ್ಲಾ ನಮ್ಮನ್ನು ಮರುಳು ಮಾಡುತ್ತೀರಿ. ಒಮ್ಮೆ ಒಪ್ಪಿಕೊಂಡರೋ...? ಮುಗಿಯಿತು.  Taken for granted  ಅನ್ನೋ ರೀತಿ ವರ್ತಿಸತೊಡಗುತ್ತೀರಿ. ಹಿಂದೆ ಮಾಡಿದ್ದ ಆಣೆ-ಪ್ರಮಾಣ, ನಡುರಾತ್ರಿಯ ಗೋಗರೆತಗಳು, ಸಿಹಿ ಮುಂಜಾನೆಯ ಶುಭಾಶಯಗಳು, ಮುಸ್ಸಂಜೆಯ ಕಾಳಜಿಗಳು ಎಲ್ಲಾ ಮಾಯವಾಗಿಬಿಡುತ್ತದೆ. ’ಅವಳಾ..?’ ಅನ್ನುವ ನಿರ್ಲಕ್ಷ್ಯ ಜೊತೆಯಾಗಿಬಿಡುತ್ತದೆ. ಗೆಳೆಯ ಅಂತಲೋ,  cousine brother  ಅಂತಲೋ ಇನ್ನೊಬ್ಬ ಹುಡುಗನ ಜೊತೆ ಮಾತಾಡಿದರಂತೂ ಮುಗಿದೇ ಹೋಯಿತು, ಅಕಾರಣ ನಮ್ಮ ಕ್ಯಾರಕ್ಟರನ್ನೇ ಸಂಶಯಿಸುತ್ತೀರಿ. ಅಲ್ಲಿಗೆ ನಿಮ್ಮ ಮೇಲೆ ನಾವು ಹುಡುಗಿಯರು ಅಮಾಯಕವಾಗಿ ಇಟ್ಟ ನಂಬುಗೆ, ಪ್ರೀತಿ ಬಿರುಕುಬಿಡುತ್ತದೆ. ನಿಮ್ಮನ್ನು ನಂಬಿದ್ದ ನಮ್ಮ ಮೂರ್ಖತನದ ಬಗ್ಗೆ ನಮಗೇ ಅಸಹ್ಯ ಹುಟ್ಟಿ ಬಿಡುತ್ತದೆ. ಅಲ್ಲಿಂದಾಚೆ ಬದುಕು ನೀರಸ ಅನಿಸತೊಡಗೊತ್ತದೆ" ಅಂತೆಲ್ಲಾ ನಾವು ಹುಡುಗಿಯರು ಆಗಾಗ ಹುಡುಗರ ಮೇಲೆ, ಅವರ ಪ್ರೀತಿಯ ಮೇಲೆ ಆರೋಪಗಳ ದೊಡ್ಡ ಪಟ್ಟಿಯನ್ನೇ ಹೊರಿಸುತ್ತಿರುತ್ತೇವೆ.

ಅದ್ರೆ ನಿಜಕ್ಕೂ ಹುಡುಗರು ಪ್ರೀತಿ ಒಪ್ಪಿಕೊಳ್ಳುವವರೆಗೆ ಒಂದು ರೀತಿ, ಆಮೇಲೆ ಒಂದು ರೀತಿ ಇರುತ್ತಾರಾ? ವಿನಾಕಾರಣ ಪ್ರೀತಿಸಿದವಳನ್ನು ಸಂಶಯಿಸತೊಡಗುತ್ತಾರಾ?  ಪ್ರೀತಿ, ನಂಬಿಕೆ ಬಿರುಕು  ಬಿಡಲು ಹುಡುಗರು ಮಾತ್ರ ಕಾರಣವಾ? ನಾವು ಹುಡುಗಿಯರು ನಿಜಕ್ಕೂ  ಹೇಳಿಕೊಳ್ಳುವಷ್ಟು ಅಮಾಯಕರಾ? ನಾವೆಂದೂ ಕೃತಿಮರಾಗುವುದೇ ಇಲ್ಲವೇ? ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ಈ ಎಲ್ಲಾ ಪ್ರಶ್ನೆಗಳ ಉತ್ತರ ’ಅಲ್ಲ’ ಅನ್ನುವುದೇ ಆಗಿರುತ್ತದೆ.

ಬದುಕು ಬಾಲ್ಯದಿಂದ ಹರಯಕ್ಕೆ ಮಗ್ಗುಲು ಬದಲಿಸಿದಾಗ ಪ್ರತಿ ಹುಡುಗನ ಎದೆಯಲ್ಲೂ ಹೂವರಳುತ್ತದೆ, ಕೋಗಿಲೆ ಹಾಡತೊಡಗುತ್ತದೆ, ಬಣ್ಣಬಣ್ಣದ ಕನಸುಗಳು ಗಾಳಿಪಟವಾಡತೊಡಗುತ್ತವೆ. ಅವನೆದೆಯ ಅಷ್ಟೂ ತಲ್ಲಣಗಳಿಗೆ ಮುಕುಟವಿಟ್ಟಂತೆ,  ಸಂಜೆಯ ವಾಕ್ ಗೆ, ನೀರವ ರಾತ್ರಿಯ ಪಿಸುಮಾತುಗಳಿಗೆ, ಬಿರುಮಳೆಯಲ್ಲಿ ಒಂಟಿ ಕೊಡೆಯಡಿ ನಡೆಯೋಕೆ, ನಿದ್ರೆಯಿಂದ ಏಳುವ ಮುನ್ನವೇ  Good morning  ಹೇಳೋಕೆ,  photo ನೋಡ್ಕೊಂಡು miss you ಕಣೇ ಅನ್ನೋಕೆ, ಅಂಗೈಯಲ್ಲಿ ಅಂಗೈಯನ್ನಿಟ್ಟು ಕನಸು ಕಾಣೋಕೆ,  ಪರಸ್ಪರರ ಕಣ್ಣೋಟದಲ್ಲೇ ಕಳೆದುಹೋಗೋಕೆ, ಗೆಳೆಯರ ಮುಂದೆ ನನ್ನ ಹುಡುಗಿ ಕಣೋ ಅಂತ ಬೀಗೋಕೆ  ಅವಳು ಜೊತೆಗಿರಬೇಕು ಮತ್ತು ಹಾಗೆಲ್ಲಾ ಅವಳು ಜೊತೆಗಿರಬೇಕಾದರೆ ಅವಳ ಮುಂದೆ ನಿಂತು  I Love You   ಅಂದುಬಿಡಬೇಕು ಅಂತ ಅವನ ಮನಸಿನ ಸಹಸ್ರ ಝೇಂಕಾರದ ವೀಣೆ ಮಿಡಿಯತೊಡಗುತ್ತದೆ.

ಹಾಗಾದಾಗಲೆ ಇಡೀ ಕಾಲೇಜಲ್ಲೇ ಧೈರ್ಯವಂತ ಅನ್ನಿಸಿಕೊಂಡ ಹುಡುಗ ಅವಳೆದುರು ನಿಂತು ಮಾತಿಗೆ ತಡಬಡಾಯಿಸುವುದು, ಮಾತಿನ ಮಲ್ಲ ಅನ್ನಿಸಿಕೊಂಡವನು ಬೆಬ್ಬೆಬ್ಬೆ ಅನ್ನುವುದು, ವಿಪರೀತ ಮೌನಿ ಅನ್ನಿಸಿಕೊಂಡವನು ಮಾತು ಶುರುಹಚ್ಚಿಕೊಳ್ಳುವುದು, ಪರಮ ವಾಸ್ತವವಾದಿ ಭಾವುಕನಾಗುವುದು, ಭಾವುಕ ತತ್ವಜ್ಞಾನಿಯಾಗುವುದು. ಹುಡುಗಿ ಒಪ್ಪಿಕೊಂಡು ಬಿಡಲಿ ಅಂತ ಸೂರ್ಯ, ಚಂದ್ರ, ನದಿ, ಆಕಾಶ, ನಕ್ಷತ್ರ ಅಂತೆಲ್ಲಾ ಅಂಗೈಯಲ್ಲೆ ಅರಮನೆ ತೋರಿಸುತ್ತಾನೆ. ಕೊನೆಗೊಮ್ಮೆ ಹುಡುಗಿ ಒಪ್ಪಿಬಿಟ್ಟರೆ ಸ್ವರ್ಗಕ್ಕೆ ಮೂರು ಅಲ್ಲಲ್ಲಾ ಒಂದೇ ಗೇಣು ಅನ್ನುವಂತೆ ಸಂಭ್ರಮಿಸುತ್ತಾನೆ.

ಇಷ್ಟಾದಮೇಲೆ...? "ಇಷ್ಟಾದಮೇಲಾ? ಜೊತೆಗೊಂದು ಸೆಲ್ಫಿ ತಗೊಂಡು, ಅದನ್ನು ಪ್ರೊಫೈಲ್  ಪಿಕ್ಚರ್ ಗೆ ಹಾಕಿ,  'Love U Forever Baby '  ಅಂತ ಸ್ಟೇಟಸ್ ಬರ್ಕೊಂಡು, ನಾಲ್ಕು ಗೆಳೆಯರಿಗೆ ಪಾರ್ಟಿ ಕೊಡಿಸುತ್ತಾನೆ. ಅಲ್ಲಿಗೆ ಅವನ ಸಂಭ್ರಮ ಮುಗಿಯುತ್ತದೆ. ಆಮೇಲೆ ನಮ್ಮೆಡೆಗೆ ಅವನಿಗಿರುವುದು ಒಂದು ದಿವ್ಯ ನಿರ್ಲಕ್ಷ್ಯ ಮಾತ್ರ. ಅವನ ಪ್ರೀತಿ ಒಪ್ಪಿಕೊಂಡ ತಪ್ಪಿಗೆ ಆಗಾಗ ಮೊಬೈಲ್ ಪರೀಕ್ಷಿಸುತ್ತಾ ಅವನ ಕರೆ, ಮೆಸೇಜ್ ಗಳಿಗಾಗಿ ಕಾಯುತ್ತಾ ಕೂರಬೇಕು. ಆದ್ರೆ ನಮ್ಮ ಪ್ರೀತಿ, ಅವನೆಡೆಗಿನ ತುಡಿತ ಅವನಿಗೆಲ್ಲಿ ಅರ್ಥ ಆಗಬೇಕು? ಅವನು ಅವನದೇ ಪ್ರಪಂಚದಲ್ಲಿ ಮುಳುಗಿ ನಮ್ಮ ಇರವನ್ನೇ ಸಂಪೂರ್ಣವಾಗಿ ಮರೆತುಬಿಡುತ್ತಾನೆ" ಅಂತನ್ನುತ್ತಾ ಮಗುಮ್ಮಾಗುತ್ತಾರೆ ಹುಡುಗಿಯರು. ಆದ್ರೆ ವಾಸ್ತವ ಹಾಗಿರುವುದಿಲ್ಲ. ಅವನಿಗೆ ಅವನದೇ ಆದ ಜವಾಬ್ದಾರಿಗಳಿರುತ್ತವೆ. ತಮ್ಮನ ಓದು, ತಂಗಿ ಮದುವೆ, ಅಪ್ಪನ ವ್ಯಾಪಾರ, ವರದಕ್ಷಿಣೆ ಕಾರಣದಿಂದ ಗಂಡನ ಮನೆ ಬಿಟ್ಟು ಬಂದಿರುವ ಅಕ್ಕನ ಬದುಕು, ಅಮ್ಮನ ಆಸ್ಪತ್ರೆ ವಾಸ ಅಥವಾ ಗೆಳೆಯನ ಸಾಲ ಅಂತ ಅವನು ನೂರಾರು ಕಡೆ ಕಮಿಟ್ ಆಗಿರುತ್ತಾನೆ. ಇವೆಲ್ಲದರ ಮಧ್ಯೆ ಅವಳನ್ನು ಮನಸ್ವೀ ಪ್ರೀತಿಸಿರುತ್ತಾನೆ, ಅವಳು ಒಪ್ಪಿಕೊಳ್ಳುವವರೆಗೂ ಅವಳ ಹಿಂದೆ ಮುಂದೆ ಸುತ್ತುತ್ತಿರುತ್ತಾನೆ, ಕೊನೆಗೊಂದು ದಿನ ಅವಳನ್ನು ಒಪ್ಪಿಸಿಯೂ ಬಿಡುತ್ತಾನೆ. ಆಮೇಲೆ ಅವಳು ಒಪ್ಪಿದಳಲ್ಲಾ ಅನ್ನುವ ನಿರಾಳತೆ ಅವನನ್ನು ಆವರಿಸುತ್ತದೆ. ಆ ನಿರಾಳತೆಯನ್ನೇ ನಾವು ಹುಡುಗಿಯರು ’ನಿರ್ಲಕ್ಷ್ಯ’ ಅನ್ನುವುದು.

ತನ್ನ ಕಮಿಟ್ಮೆಂಟ್ ಗಳ ಮಧ್ಯೆಯೂ ಅವಳಿಗಾಗಿ ಸಮಯ ಮುಡಿಪಿಡುವ ಅವನ ಪ್ರೀತಿ,  ತನ್ನೆಲ್ಲಾ ಜವಾಬ್ದಾರಿಗಳ ಮಧ್ಯೆಯೂ ಕೆಲವು ಖಾಸಗಿ ಕ್ಷಣಗಳನ್ನು ಅವಳಿಗೋಸ್ಕರ ಆಸ್ಥೆಯಿಂದ ಎತ್ತಿಡುವ ಅವನ ಒಲವು, ಅವಳಿನ್ನೂ ಉಂಡಿದ್ದಾಳೋ ಇಲ್ಲವೋ ಅನ್ನುವ ಯೋಚನೆಯಲ್ಲೇ ಮಧ್ಯಾಹ್ನದ ಊಟವನ್ನು ಅರ್ಧಕ್ಕೇ ನಿಲ್ಲಿಸಿ ಎದ್ದುಬಿಡುವ ಅವನ ತಲ್ಲಣ, ಅವಳ ತಿಂಗಳ ನೋವಿಗೆ ಕಣ್ಣೀರಾಗುವ ಅವನ ಮಮತೆ, ತನ್ನ ಪ್ರತಿ ಪ್ರಾರ್ಥನೆಯಲ್ಲೂ ’ಅವಳಿಗೇನೂ ಆಗದಿರಲಿ’ ಅಂತ ವಿಶೇಷವಾಗಿ ಬೇಡಿಕೊಳ್ಳುವ ಅವನ ತುಡಿತ... ಯಾವುದೂ ಅವಳಿಗರ್ಥವಾಗುವುದೇ ಇಲ್ಲ ಅಥವಾ ಅರ್ಥವಾದರೂ ಅವನಿನ್ನೂ ತನ್ನ ಹಿಂದೆ ಮುಂದೆ ಸುತ್ತುತ್ತಲೇ ಇರಬೇಕು ಅನ್ನುವ ಅಹಮಿಕೆಯಲ್ಲಿ ಅವನ ಎಲ್ಲಾ ನವಿರು ಭಾವಗಳು ಅರ್ಥ ಕಳೆದುಕೊಳ್ಳುವಂತೆ ಮಾಡುತ್ತಾಳೆ.

ಇನ್ನು, ವಿನಾಕಾರಣ ನನ್ನನ್ನು ಸಂಶಯಿಸುತ್ತಾನೆ ಅಂತ ಪದೇ ಪದೇ ದೂರುವ ಹುಡುಗಿ ತಾನು ಬೇಕೆಂದೇ, ಅವನಿಗೆ ಅಸೊಯೆಯಾಗಲಿ ಎಂದೇ ಇನ್ನೊಬ್ಬ ಹುಡುಗನ ಜೊತೆ  ಅಗತ್ಯಕ್ಕಿಂತ ಹೆಚ್ಚು ಸಲಿಗೆಯಿಂದ ನಡೆದುಕೊಳ್ಳುವ ಬಗ್ಗೆ ಒಂದು ಮಾತೂ ಆಡುವುದಿಲ್ಲ. ಅವಳು ಅಂದುಕೊಂಡಂತೆ ಆತನಿಗೆ ಅಸೊಯೆ ಆದರೆ ಅಥವಾ ಇನ್ನಾವುದೋ ಅಂತದೇ ಭಾವ ಕಾಡಿದರೆ ಅವಳವನಿಗೆ 'ವಿಪರೀತ ಪೊಸಸಿವ್' ಅನ್ನುವ ಪಟ್ಟ ಕಟ್ಟುತ್ತಾಳೆ. ಹೋಗಲಿ ಬಿಡಿ, ಅವಳು ಇನ್ನೊಬ್ಬ ಹುಡುಗನ ಜೊತೆ ಮಾತಾಡಿದರೆ ಗಂಟೇನು ಹೋಗುತ್ತೆ ಅಂದುಕೊಂಡು ಅವನೇನಾದರೂ ಸುಮ್ಮನಿದ್ದುಬಿಟ್ಟರೆ  ತನ್ನ ಬಗ್ಗೆ ಅವನಿಗೆ ಕಾಳಜಿಯೇ ಇಲ್ಲ ಎಂದು ಮತ್ತೆ ದೂರುತ್ತಾಳೆ.

ಇಷ್ಟಕ್ಕೂ ಆತ ಅವಳನ್ನು ಸಂಶಯಿಸತೊಡಗುವುದಾದರೂ ಯಾವಾಗ? ತನ್ನ ಗೆಳೆಯರ ಪ್ರೀತಿಯ ಮೆಲ್ಲುಸಿರುಗಳು ಹಾಡಿರುವ ಸವಿಗಾನಗಳನ್ನೂ, ಈಗ ಮೂರನೆಯವರ ಪ್ರವೇಶದಿಂದ ಅದೇ ಪ್ರೀತಿ ಬಿಡುತ್ತಿರುವ ನಿಟ್ಟುಸಿರುಗಳನ್ನೂ ಕೇಳಿರುವ ಅವನಿಗೆ ಎಲ್ಲಿ ನನ್ನ ಪ್ರೀತಿಯೂ ಹಾಗೆಯೇ ಆಗುಬಿಡುತ್ತದೋ ಅನ್ನುವ ಭಯ ಕಾಡಲು ಶುರುವಾಗುತ್ತದೆ. "ಹಿಮಗರ್ಭದಲ್ಲಿ ಹುಟ್ಟಿ ಅದೆಷ್ಟೇ ತಿರುವು-ಮುರುವು, ಬೆಟ್ಟ-ಗುಡ್ಡ, ಊರು-ಗಲ್ಲಿ, ಕಾನನಗಳನ್ನು ಬಳಸಿ ಹರಿದರೂ ಪರಿಶುದ್ಧವಾಗೇ ಇರುವ ಗಂಗೆಯಂತಹ ಪ್ರೀತಿ ಕಣೋ ನನ್ನದು" ಅಂತಂದಿದ್ದ ಹುಡುಗಿಯೇ ಎಲ್ಲಿ ಕೈಬಿಟ್ಟು ಹೋಗುತ್ತಾಳೋ ಅಂತ ದಿಗಿಲಿಗೆ ಬೀಳುತ್ತಾನೆ. ಅವಳಿಲ್ಲದೆ ಹೇಗೆ ಬದುಕಿರಲಿ ಅಂತ ಹಳಹಳಿಸತೊಡಗುತ್ತಾನೆ. ಸಂಶಯ ಅನ್ನುವ ಅಭದ್ರತಾ ಭಾವ ಗರ್ಭತಾಳುವುದೇ ಆ ದಿಗಿಲು ಮತ್ತು ಹಳಹಳಿಕೆಗಳಲ್ಲಿ.

ಆಗೇನಾದರೂ ಹುಡುಗಿ "ನಿನ್ನೆಡೆಗೆ, ನಿನ್ನ ಪ್ರೀತಿಯೆಡೆಗೆ ನನಗಿರುವ ಅಪಾರ ಬದ್ಧತೆಯನ್ನು ಯಕಶ್ಚಿತ್ ಮೂರನೆಯವನೊಬ್ಬ ಕದಲಿಸಲಾರ. ನಿನ್ನೆಲ್ಲಾ ಜವಾಬ್ದಾರಿಗಳನ್ನು, commitmentಗಳನ್ನು ಅರಿತುಕೊಂಡೇ ನಿನ್ನ ಜೊತೆ ಹೆಜ್ಜೆ ಹಾಕುತ್ತಿದ್ದೇನೆ. ನಾನು ನಿನ್ನವಳು ಅನ್ನುವ ಭರವಸೆ ಒಂದಿರಲಿ ಸಾಕು" ಅಂತ ಆತ್ಮೀಯತೆಯಿಂದ ಅವನಿಗೆ ಭರವಸೆಯಿತ್ತು ಬಿಟ್ಟರೆ ಸಾಕು ಅವನೆಲ್ಲಾ ಅನುಮಾನಗಳು ಕೊಚ್ಚಿಹೋಗಿಬಿಡುತ್ತವೆ. ಅಷ್ಟೇ ಅಲ್ಲ ಅವಳನ್ನು ಅವನು ಮತ್ತಷ್ಟು ಸಾಂದ್ರವಾಗಿ ಪ್ರೀತಿಸತೊಡಗುತ್ತಾನೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಹುಡುಗಿ 'ನಾನೇಕೆ ಇದನ್ನೆಲ್ಲಾ ಅವನಿಗೆ ವಿವರಿಸಲಿ' ಅನ್ನುವ ಹಮ್ಮಿನಲ್ಲಿ ಇದ್ದುಬಿಡುತ್ತಾಳೆ. ಅತ್ತ ಪ್ರತಿಕ್ಷಣ ಅಭದ್ರತಾ ಭಾವದಿಂದ ನರಳುವ ಅವನು ಅವಳಿಗೆ ಬೇಲಿ ಕಟ್ಟತೊಡಗುತ್ತಾನೆ, ಅವಳು ಆ ಬೇಲಿ ಹಾರಿ ಹೋಗಬಯಸುತ್ತಾಳೆ. ಪ್ರೀತಿ ವಿಲವಿಲ ಒದ್ದಾಡತೊಡಗುತ್ತದೆ.

ಹಾಗಾಗಬಾರದು ಅಂತಿದ್ದರೆ, ವಿಫಲ ಪ್ರೇಮದ ಆಳಗಾಯ ಬದುಕಿಡೀ ಮಗ್ಗುಲ ಮುಳ್ಳಾಗಿ ಕಾಡಬಾರದು ಅಂತಿದ್ದರೆ, ಇಬ್ಬರೂ ಜೊತೆಗೂಡಿ ಕಂಡ ಮಧುರ ಕನಸುಗಳು ಕಣ್ಣೆದುರೇ ಚಲ್ಲಾಪಿಲ್ಲಿಯಾಗಿ ಹೋಗಬಾರದು ಅಂತಿದ್ದರೆ, ಹುಡುಗಿಯರೇ  "ಹುಡುಗರೇ ಹೀಗೆ..." ಅನ್ನುವ ತಪ್ಪು ನಿರ್ಧಾರಕ್ಕೆ ಬರುವ ಮುನ್ನ ತಣ್ಣಗೆ ಕೂತು ಒಂದಿಷ್ಟಾದರೂ ಯೋಚಿಸಿ ಪ್ಲೀಸ್.






ಸೋಮವಾರ, ಸೆಪ್ಟೆಂಬರ್ 7, 2015

ಅವನು, ಅವಳು ಮತ್ತು ನಾಗರಪಂಚಮಿ



ಶ್ರಾವಣ ಮಾಸ, ಅದರ ಬೆನ್ನ ಹಿಂದೆಯೇ ಓಡೋಡಿ ಬರುವ ನಾಗರಪಂಚಮಿ ಅಂದಾಗೆಲ್ಲಾ ನನಗೆ ಪಕ್ಕನೆ ನೆನಪಾಗುವುದು ಹೈಸ್ಕೂಲ್ ದಿನಗಳು. ಒಮ್ಮೆ ಬಂದು ನಿಂತು ಹೋಗುವ,  ಕೆಲ ಹೊತ್ತು ಬಿಟ್ಟು ಮತ್ತೆ ಬರುವ ಚಿಟಿಪಿಟಿ ಮಳೆಯಲ್ಲಿ ನೆನೆಯುವಾಗೆಲ್ಲಾ ಆ ದಿನಗಳ ನೆನಪಿನ ಹುಡಿಗಳು ಮನಸಿಗೆ ಅಂಟಿಕೊಂಡು ಬಿಡುತ್ತವೆ. ಅದೊಂಥರಾ ಅತ್ತ ಯೌವ್ವನವೂ ಅಲ್ಲದ, ಇತ್ತ ಬಾಲ್ಯವೂ ಅಲ್ಲದ ವಿಚಿತ್ರ ವಯಸ್ಸು. ಸುಮ್ಮನೆ ಅರಳಿರುವ ನೈದಿಲೆಯ ಮಾತಾಡಿಸಲು ಯತ್ನಿಸುವುದು, ಕೆಸುವಿನ ಎಲೆಯ ಮೇಲೆ ನಿಂತ ನೀರ ಹನಿಯಲಿ ಸೂರ್ಯನ ಪ್ರತಿಬಿಂಬ ಮೂಡಿಸಲು ಪ್ರಯತ್ನಿಸುವುದು, ಬೇಲಿ ಮೇಲೆ ಕುಳಿತ ದುಂಬಿಯ ಹಿಡಿಯಲಾಗದು ಅನ್ನುವುದು ಗೊತ್ತಿದ್ದರೂ ಅದರ ಹಿಂದೆ ಹೋಗಿ ಎಡವಿ ಬೀಳುವುದು, ಬಿಸಿಲು-ಮಳೆಯ ನಂತರ ಮೂಡಿದ ತೆಳು ಮೋಡ ಇನ್ನೇನು ಕಥೆ ಹೇಳುತ್ತದೆಂದು ಕಾಯುತ್ತಾ ಕೂರುವುದು, ಕಾಣದ ಕಡಲಿನ ಇನ್ನೊಂದು ತೀರಕ್ಕಾಗಿ ಹಂಬಲಿಸುವುದು, ಹುಡುಗಿಯರು ಉದ್ದ ಲಂಗಕ್ಕಾಗಿ ಮನೆಯಲ್ಲಿ ಜಗಳ ಮಾಡುವುದು,  ಅಪ್ಪ ಶೇವ್ ಮಾಡಿ ಅಲ್ಲೇ ಬಿಟ್ಟು ಹೋದ ಶೇವಿಂಗ್ ಕಿಟ್ ತಗೊಂಡು ಇಲ್ಲದ ಮೀಸೆಯನ್ನು ಶೇವ್ ಮಾಡೋಕೆ ಹೋಗಿ ಹುಡುಗರು ಗಾಯ ಮಾಡ್ಕೊಳ್ಳುವುದು ಎಲ್ಲಾ ಆ ವಯಸ್ಸಲ್ಲೇ.

ಅಂತಹ ಎಡೆಬಿಡಂಗಿ ವಯಸ್ಸಲ್ಲಿ ನನಗೊಬ್ಬಳು ಜೀವದ ಗೆಳತಿ ಇದ್ದಳು. ಮಾತಲ್ಲೇ ಮುದ್ದು ಬರಿಸೋ ಹುಡುಗಿ. ಎಷ್ಟೆಂದರೆ  " ರಾಕೆಟ್ ಹೇಗೆ ಚಲಿಸುತ್ತದೆ?" ಅನ್ನುವ ಭೌತವಿಜ್ಞಾನ ಸರ್ ಪ್ರಶ್ನೆಗೆ "ಸೊಂಯ್ಯನೆ ಹೋಗುತ್ತದೆ ಸಾರ್" ಅನ್ನುವಷ್ಟು ಮುದ್ದು. ಕೃಷ್ಣನ ಮೀರಾ ಇದ್ದಳಲ್ಲಾ, ಅವಳಿಗಿಂತಲೂ ಚೆಂದಗೆ ಹಾಡುತ್ತಿದ್ದಳು. ಅವಳು "ಹೂವೆ ಹೂವೆ ನಿನ್ನೀ ಚೆಲುವಿಗೆ ಕಾರಣರಾರೆ...." ಅಂತ ಹಾಡುತ್ತಿದ್ದರೆ ನಾವೆಲ್ಲಾ ಥೇಟ್ ದುಂಬಿಗಳಂತೆ ಅವಳ ಸುತ್ತ ನೆರೆಯುತ್ತಿದ್ದೆವು. ನಾವಷ್ಟೇ ಅಲ್ಲ, ಅವಳ, ಅವಳ ಹಾಡಿನ  ಅಭಿಮಾನಿ ಬಳಗದಲ್ಲಿ ಒಂದಿಷ್ಟು ಹುಡುಗರೂ ಇದ್ದರು. ಅಭಿಮಾನ ಇದ್ದಮೇಲೆ, ಅದು ಪ್ರೀತಿಯಾಗುವುದೇನೂ ಅಸಂಭವವಲ್ಲವಲ್ಲಾ? ಒಂದಿಬ್ಬರು ಹುಡುಗರು ತಮ್ಮ ಪ್ರೀತಿಯ ಬಗ್ಗೆ ಹೇಳಿಯೂ ಬಿಟ್ಟರು.  ಆದ್ರೆ ಅವಳಿಗೋ..? ಶಾಲೆಯ ಅಷ್ಟೂ ಹುಡುಗರನ್ನು ಬಿಟ್ಟು ಸ್ಕೂಲ್ ಪಕ್ಕದಲ್ಲಿದ್ದ ಕಿರಾಣಿ ಅಂಗಡಿ ಹುಡುಗನ ಮೇಲೆ ಒಂದು ಹೊತ್ತಲ್ಲದ ಹೊತ್ತಿನಲ್ಲಿ ಪ್ರೀತಿ ಆಯ್ತು. ವಾರಗಟ್ಟಲೆ ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡಿ ಒಂದು ಶುಭಮುಹೂರ್ತದಲ್ಲಿ ಅವನ ಮುಂದೆ ನಿಂತು "ಗೆಳೆಯಾ ಒಂದು ಕೇಳ್ತೀನಿ ಇಲ್ಲ ಅನ್ದೆ ಕೊಡ್ತೀಯಾ?" ಅಂತ ತನ್ನ ಪ್ರೀತಿ ನಿವೇದಿಸಿಯೇ ಬಿಟ್ಟಳು.

ಇವಳಂತಹುದೇ ಭಾವ ಅವನಿಗೂ ಇತ್ತಾ? ಸರಸಕ್ಕೆ, ವಿರಸಕ್ಕೆ, ಹುಸಿಮುನಿಸಿಗೆ ನನಗೂ ಒಬ್ಬ ಸಂಗಾತಿ ಬೇಕು ಅಂತ ಅವನಿಗೂ ಆ ಕ್ಷಣದಲ್ಲಿ ಅನಿಸಿತ್ತಾ? ಇವಳ ಹಾಡಿಗೆ, ಮುದ್ದಿಗೆ ಅವನು ಮನಸೋತನಾ? ಅಥವಾ ಅವನ ಮನಸ್ಸಲ್ಲಾಗ ಕೇವಲ ಗೊಂದಲಗಳಿದ್ದವೋ? ಗೊತ್ತಿಲ್ಲ. ಆದ್ರೆ ಅವನು "ಹೂಂ" ಅಂದದ್ದಂತೂ ಹೌದು. ಆ ಕ್ಷಣದಿಂದಲೇ ಇವಳು ಪೂರ್ತಿ ಬದಲಾಗಿ ಬಿಟ್ಳು. ಎಲ್ಲಿಂದಲೋ ಒಂದು ಪುಟ್ಟ ಕನ್ನಡಿ ಬಂದು ಅವಳ ಬ್ಯಾಗ್ ಸೇರಿತು. ಶಾಲೆ ಬಿಡುತ್ತಿದ್ದಂತೆ ಕನ್ನಡಿ ನೋಡಿ, ಕಾಡಿಗೆ ತೀಡಿ, ಸಣ್ಣಗೆ ಪೌಡರ್ ಹಚ್ಕೊಂಡು ಲಗುಬಗೆಯಿಂದ ಹೊರಡುತ್ತಿದ್ದಳು. ’ಅವನ ಬಗ್ಗೆ ನನಗೊಂದು ಕವಿತೆ ಬರೆದುಕೊಡೇ’ ಎಂದು ನನ್ನ ಪೀಡಿಸುತ್ತಿದ್ದಳು. ಹೂವಿನ ಹಾಡು ಹಾಡುತ್ತಿದ್ದ ಅವಳ ಹಾಡಿನ ಪೂರ್ತಿ ಈಗ ಅವನದೇ ನೆನಪು, ಅವನದೇ ಧ್ಯಾನ.

ಇಂತಿದ್ದ ಅವಳು ಅದೊಂದು ದಿನ ಶಾಲೆ ಬಿಟ್ಟಾಗ ನನ್ನ ಕೈ ಹಿಡಿದೆಳೆದು ಪಕ್ಕಕ್ಕೆ ಕರೆದೊಯ್ದು ಮುಖವನ್ನೆಲ್ಲಾ ಕೆಂಪು ಮಾಡ್ಕೊಂಡು ಗುಟ್ಟಲ್ಲಿ "ನಾಳೆ ನಾಗರಪಂಚಮಿ ಅಲ್ವಾ? ಸೀರೆ ಉಟ್ಕೊಂಡು ನಾಗನ ಕಟ್ಟೆಗೆ ಹೋಗೋಕಿದೆ. ಅವನೂ ಬರ್ತಾನೆ ಅಂದಿದ್ದಾನೆ. ನಾಗನಿಗೆ ಹಾಲು ಎರೆಯುವಾಗ ಅವನೇನಾದ್ರೂ ನನ್ನ ಕೈ ಹಿಡಿದ್ರೆ ನಿಂಗೇ ಮೊದ್ಲು ಹೇಳ್ತೇನಾಯ್ತಾ" ಅಂತಂದು ಕಣ್ಣುಹೊಡೆದಿದ್ಳು. ನಾನು "ಇದ್ಯಾಕೋ ಚೂರು ಅತಿ ಆಗ್ಲಿಲ್ವಾ?" ಅಂದೆ. ಅವಳು ಎಂದಿನಂತೆ ಮುದ್ದುಮುದ್ದಾಗಿ "ಲೆನಿನ್ ನ ಭೂತ ಹಿಡ್ದಿರೋ ನಿಂಗೆ ಇದೆಲ್ಲಾ ಎಲ್ಲಿ ಅರ್ಥ ಆಗುತ್ತೆ, ಹೋಗೇ " ಎಂದು ನನ್ನ ಮೂತಿ ತಿರುವಿ ಎದ್ದು ಹೋಗಿದ್ದಳು.

ಮರುದಿನ, ಬೆಳ್ಬೆಳಗ್ಗೆ ಯಾವುದೋ ಕಾಯಿನ್ ಬೂತಿಂದ ಫೋನ್ ಮಾಡಿ "ಸೀರೆ ಉಟ್ಟಿದ್ದೇನೆ, ಎಲ್ಲಿ ಜಾರಿ ಬೀಳುತ್ತೋ ಅಂತ ಭಯ ಆಗ್ತಿದೆ, ಆ ಕೋತಿ ಇನ್ನೂ ಬಂದಿಲ್ಲ" ಅಂದ್ಳು. ನನ್ನ ಪಕ್ಕದಲ್ಲೇ ಅಮ್ಮ ಇದ್ದಿದ್ದರಿಂದ ಹೆಚ್ಚೇನೂ ಮಾತಾಡದೇ "ಹಾಂಹೂಂ" ಎಂದಷ್ಟೇ ಹೇಳಿ ಫೋನ್ ಕಟ್ ಮಾಡಿದ್ದೆ. ಅದು ಈಗಿನಂತೆ ಮನೆಗೆ ನಾಲ್ಕು-ಐದರಂತೆ ಮೊಬೈಲ್ ಇದ್ದ ಕಾಲವಲ್ಲ. ನಡುಮನೆಯಲ್ಲಿರುತ್ತಿದ್ದ ಲ್ಯಾಂಡ್ ಫೋನೇ ನಮ್ಮೆಲ್ಲಾ ಸಂವಹನಗಳಿಗೆ ಮಾಧ್ಯಮವಾಗಿತ್ತು. ಪ್ರೈವೆಸಿ ಅನ್ನುವುದನ್ನು ಕನಸಲ್ಲೂ ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹೀಗಿದ್ದರೂ ಮನಸ್ಸು  ಅವಳ ಸುತ್ತಲೇ ಗಿರಕಿ ಹೊಡೆಯುತ್ತಿತ್ತು, ಯಾವಾಗೊಮ್ಮೆ ಬೆಳಕು ಹರಿಯುವುದಿಲ್ಲ, ಅವಳನ್ನು ಮಾತಾಡಿಸುವುದಿಲ್ಲ ಅಂತ ಕಾತರಿಸುತಿತ್ತು.    

ಅಂತೂ ಇಂತೂ ಬೆಳಗಾಯ್ತು, ಸ್ಪೆಷಲ್ ಕ್ಲಾಸಿನ ಸುಳ್ಳು ನೆಪ ಹೇಳಿ ಯಾವತ್ತಿಗಿಂತ ಬೇಗ ಮನೆಯಿಂದ ಶಾಲೆಗೆಂದು ಹೊರಟಿದ್ದೂ ಆಯ್ತು. ದಾರಿಯುದ್ದಕ್ಕೂ ಅವಳ ಸಂಭ್ರಮವನ್ನು ಕಲ್ಪಿಸಿಕೊಂಡೇ ಶಾಲೆಗೆ ತಲುಪಿದೆ, ಆದ್ರೆ ನನ್ನೆಲ್ಲಾ ನಿರೀಕ್ಷೆಗಳನ್ನೂ ಮೀರಿ ಅವಳು ಕ್ಯಾಂಪಸ್ ನ ಮೂಲೆಯಲ್ಲಿದ್ದ ಒಂಟಿ ಮರದ ಕೆಳಗೆ ಕುಳಿತಿದ್ದಳು. ಕಣ್ಣ ಕಾಡಿಗೆ ಕದಡಿತ್ತು, ಕೆನ್ನೆಯ ತೇವ ಅವಳ ನೋವಿಗೆ ಸಾಕ್ಷಿಯೆಂಬಂತೆ ನಿಂತಿತ್ತು. ಹೆಗಲು ಮುಟ್ಟಿ "ಏನಾಯ್ತೇ?" ಅಂತ ಕೇಳಿದೆ. ಬಿಕ್ಕಿ ಬಿಕ್ಕಿ ಅಳತೊಡಗಿದಳು. ನನಗೋ ಗಾಬರಿ. "ನಿನ್ನೆ ಅವನು ಬರ್ಲೇ ಇಲ್ವಾ?" ಅಂತ ಮತ್ತೆ ಕೇಳಿದೆ. "ಅಪಶಕುನ ಮಾತಾಡ್ಬೇಡ. ನಾನು ಕರೆದ್ರೆ ಅವನು ಬರದೇ ಇರ್ತಾನಾ?" ಅಂದ್ಳು. "ಮತ್ತೇನಾಯ್ತು?" ಅಂದೆ. ಅವಳು ಬಿಕ್ಕುತ್ತಲೇ "ಬೆನ್ನ ತುಸು ಮೇಲೆ, ಕತ್ತಿನ ಇಳಿಜಾರಲ್ಲಿ ಅವನು ನನ್ನ ಹೆಸರಿನ ಹಚ್ಚೆ ಹಾಕಿಸ್ಕೊಂಡಿದ್ದಾನೆ. ಚರ್ಮ ಪೂರ್ತಿ ಕೆಂಪಗಾಗಿದೆ. ನೋವಿನಿಂದ ಎದ್ದು ನಡೆಯೋಕೂ ಅವನಿಗೆ ಆಗ್ತಿರ್ಲಿಲ್ಲ. ಆದ್ರೂ ಬಂದಿದ್ದ ಗೊತ್ತಾ?" ಅಂತಂದು ಮತ್ತೆ ಅಳು ಮುಂದುವರಿಸಿದಳು.

ಅವಳ ಹೆಗಲು ಬಳಸಿದ್ದ ನನ್ನ ಕೈ ತಟ್ಟನೆ ಕೆಳಗೆ ಬಿತ್ತು, ಅದುವರೆಗೆ ಪ್ರೀತಿ-ಪ್ರೇಮ ಅನ್ನುವುದೆಲ್ಲಾ ಹುಡುಗಿಯರ ಭಾವನೆಗಳ ಜೊತೆ ಚೆಲ್ಲಾಟವಾಡಲು ಹುಡುಗರು ನಡೆಸುವ ಭವ್ಯ ನಾಟಕವೆಂದೇ ತಿಳಿದಿದ್ದ ನನ್ನ ಕಲ್ಪನೆಗಳೆಲ್ಲವೂ ಕಳಚಿಬಿತ್ತು. ’ಪ್ರೀತಿ’ ಅನ್ನುವ ಎರಡೂವರೆ ಅಕ್ಷರದ ಭಾವಕ್ಕೆ ಇಷ್ಟೊಂದು ಗಾಢ ಶಕ್ತಿಯಿದೆಯಾ? ಕೇವಲ ಎರಡು ತಿಂಗಳ ಹಿಂದೆ ಪರಿಚಯವಾದ ಹುಡುಗಿಯ ಹೆಸರನ್ನು ಮೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವಷ್ಟು..? ಪ್ರೀತಿ ನೋವನ್ನೂ ಉತ್ಕಟವಾಗಿ ಪ್ರೀತಿಸುವುದನ್ನು ಕಲಿಸುತ್ತದಾ? ಇಷ್ಟೊಂದು ಅಗಾಧ ಬದ್ಧತೆಯನ್ನು ಎರಡು ಹೃದಯಗಳಲಿ ಉದ್ದೀಪನಗೊಳಿಸುತ್ತದಾ? ಇಲ್ಲವೆಂದರೆ ಅಷ್ಟೊಂದು ನೋವನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಇವಳ ಖುಷಿಗಾಗಿ ಅವನು ನೋವಲ್ಲೂ ನಗುತ್ತಾನೆ, ಅವನ ಕತ್ತಿನ ನೋವು ಇವಳ ಕೊರಳನ್ನುಬ್ಬಿಸುತ್ತದೆ, ಇವಳ ಹೆರಳ ಮಲ್ಲಿಗೆಯ ಕಂಪಿಗೆ ಅವನ ಸಂಭ್ರಮ ಜೋಕಾಲಿಯಾಡುತ್ತದೆ. ಏನಿದು ವಿಚಿತ್ರ? ಅನ್ನುವ ಪ್ರಶ್ನೆಗಳೆಲ್ಲಾ ಮೂಡಿ ಕೇಳಲೇಬೇಕು ಅಂದುಕೊಂಡಿದ್ದ "ಅವನು ನಿನ್ನೆ ನಿನ್ನ ಕೈ ಹಿಡಿದಿದ್ನಾ?" ಅನ್ನುವ ಪ್ರಶ್ನೆ ಗಂಟಲಲ್ಲೇ ಹುದುಗಿ ಹೋಯ್ತು. ಅವತ್ತು ಶಾಲೆ ಬಿಟ್ಟು ಮನೆಗೆ ಹೋಗುವಾಗ ಕಿರಾಣಿ ಅಂಗಡಿಯಲ್ಲಿ ಅವನನ್ನು ಮತ್ತೆ ನೋಡಿ ನಮ್ಮಿಬ್ಬರಿಗೂ ಅಚ್ಚರಿಯಾಯಿತು, ಜೊತೆಗೆ ಬದುಕಲ್ಲಿ ಮೊದಲ ಬಾರಿಗೆ ನನಗೆ ಪ್ರೀತಿಯ ಮೇಲೆ ತುಸು ನಂಬಿಕೆ ಮೂಡಿತು.

ಮುಂದಿನ ಮೂರು ವರ್ಷಗಳ ಕಾಲ ಇಬ್ಬರೂ ನಾಗರಪಂಚಮಿಯ ದಿನ ತಪ್ಪದೇ ಭೇಟಿಯಾಗುತ್ತಿದ್ದರು. ಅವನ ಹಚ್ಚೆಯ ನೋಡಿ ಇವಳು ಕಣ್ಣೀರುಗೆರೆಯುವುದು, ಅವನು ಅವಳನ್ನು ಹೆಗಲಿಗಾನಿಸಿ ಸಮಾಧಾನ ಪಡಿಸುವುದು, ನಾನು ಅವಳ ಫೋನ್ ಗಾಗಿ ಕಾಯುವುದು, ಅವಳು ನನಗೆ ಕರೆ ಮಾಡಿ ನಡೆದದ್ದನ್ನೆಲ್ಲಾ ಹೇಳುವುದು... ಹೀಗೆ ನಾಗರಪಂಚಮಿ ನಮ್ಮ ಮೂವರ ಬದುಕಲ್ಲೂ ಒಂದು ಮರೆಯಲಾರದ ಸಿಹಿ ನೆನಪಾಗಿ ಅಚ್ಚೊತ್ತಿಬಿಟ್ಟಿತ್ತು.

ಮುಂದೆ ಪಿ.ಯು.ಸಿ ಮುಗಿಸಿ ಮುಂದಕ್ಕೆ ಓದಲೆಂದು ಅವಳು ಪಟ್ಟಣ ಸೇರಿದಳು. ಅವನು ಊರಲ್ಲೇ ಉಳಿದ. ಇಬ್ಬರ ಬಂಧ ನಿಧಾನವಾಗಿ ಸಡಿಲವಾಗತೊಡಗಿತು. ಪ್ರೀತಿ ಇರಬೇಕಾದಲ್ಲಿ ಅಪನಂಬಿಕೆ ತಾಂಡವವಾಡತೊಡಗಿತು. ಎಲ್ಲ ಸಂಬಂಧಗಳನ್ನು ಮನೆಯಲ್ಲೇ ಬಿಟ್ಟು ದೂರದಲ್ಲಿ ಓದುತ್ತಿದ್ದ ಅವಳನ್ನು ಇವನು ವಿನಾಕಾರಣ ಸಂಶಯಿಸತೊಡಗಿದನಾ? ಅಥವಾ ಸಂಶಯಿಸುವಂತೆ ಅವಳೇ ನಡೆದುಕೊಂಡಳಾ?  ಗೊತ್ತಿಲ್ಲ, ಒಟ್ಟಿನಲ್ಲಿ ಅವನ ಕತ್ತಿನ ಹಚ್ಚೆ ಅರ್ಥ ಕಳೆದುಕೊಳ್ಳತೊಡಗಿತ್ತು, ಇವಳ ಹೆರಳ ಮಲ್ಲಿಗೆ ಬಾಡತೊಡಗಿತ್ತು. ಇಬ್ಬರ ನಡುವಿನ ಭಾಂದವ್ಯಕ್ಕೆ ಹೊಸ  ಭಾಷ್ಯ ಬರೆದ ನಾಗರಪಂಚಮಿಯಂದು ಊರಿಗೆ ಬರಲು  ರಜೆ ಇಲ್ಲವೆಂಬುವುದು ಅವಳ ನೆಪವಾದರೆ, ಅವಳಿಗೇ ಅಕ್ಕರೆ ಇಲ್ಲವೆಂದಾದರೆ ನಾನೇಕೆ ಅವಳ ನೋಡಲು ಹೋಗಲಿ ಅನ್ನುವ ಬಿಮ್ಮು ಇವನಿಗೆ ಮೊದಲಾಯಿತು. ಇತ್ತ ನಾನೂ ಕಾಲೇಜು, ಓದು, ಹೊಸ ಸ್ನೇಹ, ಅರಿಯದ ಪ್ರಪಂಚ ಎಂದು ನನ್ನದೇ ಬದುಕಿನಲ್ಲಿ ವ್ಯಸ್ತಳಾಗಿಬಿಟ್ಟೆ. ಕೈಗೊಂದು ಮೊಬೈಲೂ ಸಿಕ್ಕಿ ಲ್ಯಾಂಡ್ ಫೋನ್ ನೊಂದಿಗೆ ಇದ್ದ ಕರುಳಬಳ್ಳಿ ಸಂಬಂಧ ಕಡಿದು ಹೋಯಿತು. ಅದರ ಜೊತೆಜೊತೆಗೆ ಅವಳಿಗೂ ನನಗೂ ಇದ್ದ ಸಂಪರ್ಕವೂ ತಪ್ಪಿಹೋಯಿತು.

ಈಗ್ಗೆ ಒಂದಿಷ್ಟು ತಿಂಗಳಗಳಷ್ಟು ಹಿಂದೆ ಒಂದು ಮಾಗಿಯ ಚಳಿಯ ದಿವ್ಯ ಹೂಬಿಸಿಲಲ್ಲಿ, ನಾನು  ನಾನಾಗಿ ಉಳಿದಿಲ್ಲ, ಮುಖವಾಡಗಳ ಜಗತ್ತಲ್ಲಿ ಇನ್ನಾರದೋ ನೆರಳಂತೆ ಬದುಕುತ್ತಿದ್ದೇನೆ ಅನ್ನುವ ಅಸಹನೆಯಲ್ಲಿ ಅಸ್ತ್ರ ಒಲೆಯಂತೆ ಒಳಗೊಳಗೆ ಧುಮುಗುಟ್ಟುತ್ತಾ ನನ್ನ ಅಸ್ತಿತ್ವಕ್ಕಾಗಿ ತಡಕಾಡುತ್ತಿರುವಾಗ, ಅವಳು, ಅವನು ಮತ್ತು ನಾಗರಪಂಚಮಿ ಒಟ್ಟಿಗೆ ನೆನಪಾದವು. ಅದುವರೆಗೂ ಒಳಗೆಲ್ಲೋ ಸುಪ್ತವಾಗಿದ್ದ ಅವಳ ನೆನಪು ಬೆಂಬಿಡದೆ ಕಾಡತೊಡಗಿತು. ಫೇಸ್ಬುಕ್, ವಾಟ್ಸಪ್, ಟ್ವಿಟ್ಟರ್ ಅಂತೆಲ್ಲಾ ಇದ್ದ ಬದ್ದ ಸೋಶಿಯಲ್ ಮಿಡೀಯಾಗಳಲ್ಲಿ ಹುಡುಕಾಡಿ ಕೊನೆಗೂ ಅವಳ ನಂಬರ್ ಸಂಪಾದಿಸಿ ಫೋನ್ ಮಾಡಿ ಅವಳ ಧ್ವನಿ ಕೇಳಿಯಾದ ಮೇಲಷ್ಟೇ ನನ್ನೊಳಗೊಂದು ನಿರಾಳಭಾವ ಆವರಿಸಿದ್ದು.

ಈಗ ನಾನು ನಾನಾಗಿಯೇ ಉಳಿದಿದ್ದೇನೋ ಇಲ್ಲವೋ ಗೊತ್ತಿಲ್ಲ, ಆದ್ರೆ ಹಳೆ ಸ್ನೇಹ, ಪ್ರೀತಿ, ಮುದ್ದು, ಸಲಿಗೆ ನಮ್ಮಿಬ್ಬರ ಮಧ್ಯೆ ಮತ್ತೆ ನೆಲೆಗೊಂಡಿವೆ. ಆದ್ರೂ ಮಾತಿನ ಮಧ್ಯೆ ಅವನು, ಅವನ ಹಚ್ಚೆಯ ಪ್ರಸ್ತಾಪ ಬಂದಾಗೆಲ್ಲಾ ಇವಳು ಮಾತು ಮರೆಸುತ್ತಾಳೆ, ಮೌನದ ಮೊರೆ ಹೋಗುತ್ತಾಳೆ. ಹಳೆ ಸಂಬಂಧ ಬಿಟ್ಟು ಹೋದ ಬೆರಳುಗಳ ನಡುವಿನ ಅವಕಾಶವನ್ನು ಹೊಸ ಸಂಬಂಧ ಬೆಸೆದಿರುವಾಗ, ಹಳೆ ಕನಸು ಮುರುಟಿರುವಲ್ಲೇ ಹೊಸ ಕನಸು ಟಿಸಿಲೊಡೆದಿರುವಾಗ ಭೂತಕಾಲದ ಬಗ್ಗೆ ಹೆಚ್ಚು ನಾನೂ ಕೆದಕುವುದಿಲ್ಲ.

ಆದ್ರೆ ಮೊದಲ ನಾಗರಪಂಚಮಿಯಂದು ಇವಳು ಆಸೆ ಪಟ್ಟಂತೆ ಅವನು ಕೈ ಹಿಡಿದಿದ್ನಾ ಅನ್ನುವ ಕುತೂಹಲ ಮಾತ್ರ ಇನ್ನೂ ತಣಿದಿಲ್ಲ. ಹಲವು ಬಾರಿ ಕೇಳಲೇಬೇಕು ಅಂದುಕೊಂಡು ನಾಲಗೆ ತುದಿವರೆಗೆ ಬಂದ ಪ್ರಶ್ನೆಯನ್ನು ಹೇಳಲಾರದ ಯಾವುದೋ ಒಂದು ಮುಜುಗರಕ್ಕೆ ಸಿಲುಕಿ ಮತ್ತೆ ಗಂಟಲೊಳಕ್ಕೆ ತಳ್ಳಿದ್ದೇನೆ. ಮುಂದೆ ಯಾವತ್ತಾದ್ರೂ ಒಂದಿನ ಆ ಮುಜುಗರವನ್ನೂ ಮೀರಿ ನಾನು ಕೇಳಿ, ಅವಳು ನಿರ್ಬಿಢೆಯಿಂದ ಉತ್ತರಿಸಿದರೆ, ನಿಮ್ಗೂ ಹೇಳ್ತೀನಿ. ಆಯ್ತಾ?

ಬುಧವಾರ, ಆಗಸ್ಟ್ 26, 2015

ಮತ್ತೆ ಮತ್ತೆ ನೆನಪಾಗುವಿ ಶಾಕುಂತಲೆ...


ನಡು ಮಧ್ಯಾಹ್ನ ಹೊಸ್ತಿಲ
ಮೇಲೆ ಬಿಡುಬೀಸಾಗಿ ಚೆಲ್ಲಿ
ಬೆಳೆಯುವ ಮುನ್ನವೇ ಸಾಯುವ
ನೆರಳ ಕಂಡಾಗೆಲ್ಲಾ ನೀನು
ಮತ್ತೆ ಮತ್ತೆ ನೆನಾಪಾಗುವಿ
ಶಾಕುಂತಲೆ

ಕಾಳಿದಾಸನೇನೋ ನಿನ್ನ
ಬೆಟ್ಟದಷ್ಟಿದ್ದ ಸಹನೆಯ
ದುಶ್ಯಂತನೆಡೆಗೆ ನಿನಗಿದ್ದ
ಅಗಾಧ ಬದ್ಧತೆಯ ಬಗ್ಗೆ
ಪುಟವೆಣಿಸಲು ಬಾರದಷ್ಟು ಬರೆದ

ಆದರೆ ನನಗೇಕೋ ಅವನ
ಮಹಾಕಾವ್ಯದ ಪ್ರತಿ ಸಾಲಿನಲೂ
ನೆರಳು-ಬೆಳಕು, ಮರೆವು-ನೆನಪುಗಳ
ಅಟ್ಟಹಾಸದಲಿ
ಸಾಯದೇ ಬದುಕಿದ ನಿನ್ನ
ನಿಷ್ಪಾಪಿ ಆತ್ಮದ ಕೊನೆಯಿಲ್ಲದ
ಆರ್ತನಾದ ಮಾತ್ರ ಕೇಳಿಸುತಿದೆ

ನೆನಪೇ ಇಲ್ಲವೆಂದಿದ್ದವನ ತೋಳ ತೆಕ್ಕೆಯಲಿ
ನೀ ಮತ್ತೆ ಕರಗಿಹೋಗಬೇಕಾಗಿ ಬಂದಾಗ
ನಿನ್ನ ಸ್ವಾಭಿಮಾನ ಪ್ರತಿಭಟಿಸಿರಲಿಲ್ಲವೇ?
ಇಲ್ಲ ಪ್ರತಿಭಟನೆ ಭರಿಸಲಾರದೆ
ಕುದಿ ಕುದಿದು ಆರಿಹೋದ
ಅಪರಿಮಿತ ಕಂಬನಿಗಳಲಿ
ಅದ ನೀನೇ ಹೂತುಬಿಟ್ಟೆಯಾ?

ದುಶ್ಯಂತನ ಕಣ್ಣಲಿ ತೊನೆಯುತ್ತಿದ್ದ ಅಹಂಕಾರದಲಿ
ಉಂಗುರದ ಪ್ರತಿಬಿಂಬ ಕಂಡು
ನಿನಗೊಮ್ಮೆಯೂ ರೇಜಿಗೆ ಹುಟ್ಟಲೇ ಇಲ್ಲವೇ?
ಇಲ್ಲ ನೆರಳು ಬೆಳೆಯಬಾರದೆಂದು
ಝಾಡಿಸಿ ಒದೆಯುವಷ್ಟಿದ್ದ ರೇಜಿಗೆಯನೂ
ತಣ್ಣನೆಯ ನಗುವಿನಲಿ ಮರೆಸಿಟ್ಟೆಯಾ?

ಬೆಳಕು ಮಾಸುವ ಮುನ್ನ
ನೆರಳು ಕಳೆಯುವ ಮುನ್ನ
ನೆನಪು ಮರೆಯುವ ಮುನ್ನ
ಹೇಳು ಸಖೀ,
ಮತ್ತೆ ಎರಡನೇ ಬಾರಿ ದುಶ್ಯಂತ
ನಿನ್ನೆಡೆಗೆ ಕೈಚಾಚಿದ ನಂತರ
ನೀನೊಮ್ಮೆಯೂ ನಿಡುಸುಯ್ಯಲೇ ಇಲ್ಲವೇ?

ಭಾನುವಾರ, ಆಗಸ್ಟ್ 23, 2015

ಅವಳ ಒಳಗುದಿಗಳನ್ನೂ ಸ್ವಲ್ಪ ಅರ್ಥ ಮಾಡ್ಕೊಳ್ಳಿ ಪ್ಲೀಸ್...

ಆ ಕಡೆಯಿಂದ ಹುಡುಗ ಅಸಹನೆಯಿಂದ ಹೇಳುತ್ತಾನೆ "ಇಷ್ಟು ಹೊತ್ತು  ಯಾರ್ಜೊತೆ ಹರಟೆ ಹೊಡೆಯುತ್ತಿದ್ದೆ, ಆಗದಿಂದ ಫೋನ್ ವೈಟಿಂಗ್ ಬರ್ತಿತ್ತು..". ಈ ಕಡೆಯಿಂದ ಹುಡುಗಿ, ಎರಡೇ ಎರಡು ನಿಮಿಷ ವೈಟಿಂಗ್ ಇದ್ದುದಕ್ಕೆ ಈ ಪರಿ ಅನುಮಾನನಾ ಅಂತಂದುಕೊಳ್ಳುತ್ತಾ ಅದರ ದುಪ್ಪಟ್ಟು ಅಸಹನೆಯಿಂದ "ನಿನಗೇ ಗೊತ್ತಿಲ್ಲದೆ ನನಗೊಬ್ಬ ಬಾಯ್ ಫ್ರೆಂಡ್ ಇದ್ದಾನೆ ಅವನ್ಜೊತೆ ಮಾತಾಡುತ್ತಿದ್ದೆ" ಅನ್ನುತ್ತಾ ಫೋನ್ ಕುಕ್ಕುತ್ತಾಳೆ. ಹತ್ತು-ಹದಿನೈದು ನಿಮಿಷ ಕಳೆಯುವಷ್ಟರಲ್ಲಿ ಇಬ್ಬರಿಗೂ ತಮ್ಮ ತಮ್ಮ ತಪ್ಪಿನ ಅರಿವಾಗುತ್ತದೆ. ಅಥವಾ ಇಬ್ಬರಲ್ಲಿ ಒಬ್ಬರಿಗಾದರೂ ಆಗುತ್ತೆ. ಆ ಕಡೆಯಿಂದ ಅವನು ಅನುನಯಿಸಿಕೊಂಡು ಬರುತ್ತಾನೆ, ಅಥವಾ ಈ ಕಡೆಯಿಂದ ಇವಳು ಅನುನಯಿಸಿಕೊಂಡು ಹೋಗುತ್ತಾಳೆ. ಒಂದು ಸಾರಿ ಕಣೇ/ಣೋ ಗೆ ಮುನಿಸು ಮುಗಿದು ಮತ್ತೆ ಮೊದಲಿನಂತಾಗುತ್ತಾರೆ. ಆದರೆ ಸಂಬಂಧ ಅವರಿಗೇ ಗೊತ್ತಿಲ್ಲದಷ್ಟು ಸೂಕ್ಷ್ಮವಾಗಿ ಬಿರುಕುಬಿಡುತ್ತದೆ, ಅಥವಾ ಬಿರುಕಿಗೆ ಆರಂಭದ ಅಂಕಿತ ಹಾಕಿ ಬಿಡುತ್ತದೆ.

ಹರೆಯವೆಂಬುವುದೇ ಹಾಗೆ. ಕಳ್ಳ ಬೆಳದಿಂಗಳ ಹಾಗೆ ಸದ್ದೇ ಇಲ್ಲದೆ ಮನದ ಹೊಸ್ತಿಲೊಳಗೆ ಬಂದು ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡುಬಿಡುತ್ತದೆ. ಹಾಗೆ ಸದ್ದಿಲ್ಲದಂತೆ ಹರೆಯ ಬದುಕನ್ನು ಪ್ರವೇಶಿಸಿದಾಗಲೇ ಹರಟೆಗೆ, ಪಿಸುಮಾತಿಗೆ, ಸರಸಕ್ಕೆ, ವಿರಸಕ್ಕೆ, ಗುಟ್ಟುಗುಟ್ಟಾಗಿ ಸಾಂತ್ವನಿಸೋಕೆ, ಮುನಿಸಿಗೆ, ಹುಸಿಕೋಪಕ್ಕೆ, ಸುಳ್ಳೇ ಸುಳ್ಳು ನಾಚೋಕೆ, ನನಗವಳು/ನು ಅಂತ ಸಂಭ್ರಮಿಸೋಕೆ, ಖುಶಿಯಾದಾಗ ಹಂಚಿಕೊಳ್ಳೋದಕ್ಕೆ, ಬೇಜಾರಾದಾಗೆಲ್ಲಾ ಪರಸ್ಪರರನ್ನು ಸಂತೈಸೋಕೆ, ಸುಮ್ಮನೆ ಹೆಗಲಿಗೆ ತಲೆಯಾನಿಸಿ ಕುಳಿತು ಒಂದು ವಿವರಿಸಲಾಗದ ಸೆಕ್ಯೂರ್ ಫೀಲಿಂಗ್ ಅನುಭವಿಸೋಕೆ ಒಬ್ಬ/ಳು ಸಮಾನ ಮನಸ್ಕ ಜೊತೆಗಾತಿ ಬೇಕು ಅಂತ ಮನಸು ವರಾತ ಹಚ್ಚತೊಡಗುತ್ತದೆ. ಆಗಲೇ ಇಷ್ಟವಾದವರ ಮುಂದೆ ನಿಂತು ತಲೆ ತಗ್ಗಿಸಿ, ನೆಲ ಕೆರೆದುಕೊಳ್ಳುತ್ತಾ ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟು ಸೇರಿಸಿ" ಐ ಲವ್ ಯೂ" ಅಂದುಬಿಡುವುದು. ಅಥವಾ ಅವನು/ಳು ಆಫ್ ಲೈನ್ ಆದಮೇಲೆ "ಐ ಲವ್ ಯೂ" ಅಂತ ವಾಟ್ಸಾಪ್ ಮಾಡಿ ಬೆಳಗ್ಗಿನ ವರೆಗೂ ಅವಳು/ನು ಏನನ್ನುತ್ತಾಳೋ/ನೋ ಅನ್ನುವ ಪ್ರೀತಿ ತುಂಬಿದ ಕುತೂಹಲದಿಂದ ಜಾಗರಣೆ ಮಾಡುವುದು.

ಅವನೋ/ಳೋ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಅಧಿಕೃತವಾಗಿ ಅವರಿಬ್ಬರು ಪ್ರೇಮಿಗಳಾಗುತ್ತಾರೆ. ಅಂದರೆ ಒಬ್ಬರ ಬಗ್ಗೆ ಇನ್ನೊಬ್ಬರು ಎಗ್ಗಿಲ್ಲದೆ ಕನಸು ಕಾಣೋದು, ಕಣ್ಣಲ್ಲೇ ನೂರು ಮಾತಾಡುವುದು, ಮೌನವಾಗಿದ್ದುಕೊಂಡೇ ಸಂವಹನ ನಡೆಸೋದು, ಸಿಗರೇಟು ಬಿಡು ಅಂತ ಅವಳನ್ನೋದು, ನಾಳೆ ಕ್ರೀಂ ಕಲರ್ ಚೂಡಿದಾರೇ ಹಾಕ್ಕೊಂಡು ಬಾ ಅಂತ ಇವನನ್ನುವುದು ಎಲ್ಲಾ ಆರಂಭವಾಗುವುದು ಆ ಕ್ಷಣದಿಂದಲೇ.

ಇವಿಷ್ಟೂ ಆದ ನಂತರ ಹುಡುಗರು ಹೇಗಿರುತ್ತಾರೋ ಗೊತ್ತಿಲ್ಲ. ಆದ್ರೆ ಹುಡುಗಿಯಂತೂ ಅವತ್ತಿನಿಂದ ತನ್ನಷ್ಟಕ್ಕೆ ತಾನೇ ನಗತೊಡಗುತ್ತಾಳೆ, ದಿನಕ್ಕೆ ನೂರು ಬಾರಿ ’ಮಧುರಾ ಪಿಸುಮಾತಿಗೆ...’ ಹಾಡು ನೋಡುತ್ತಾಳೆ, ಒಬ್ಬಳೇ ಮಾತಾಡಿಕೊಳ್ಳುತ್ತಾಳೆ, "ಕಾಲೇಜಿಂದ ಬರೋಕೆ ಯಾಕೆ ಲೇಟ್ ಆಯ್ತು?" ಅಂತ ಅಮ್ಮ ಕೇಳಿದಾಗ "ಬಸ್ ಲೇಟಮ್ಮಾ" ಅಂತ ಸಲೀಸಾಗಿ ಸುಳ್ಳು ಹೇಳಲು ಕಲಿಯುತ್ತಾಳೆ, ಅವನು ಒಂದಿನ ಫೋನ್ ಮಾಡದಿದ್ರೆ ರಾತ್ರಿಯಿಡೀ ಅತ್ತು, ಬೆಳಗ್ಗೆ ಅಪ್ಪ "ಕಣ್ಣೇಕೆ ಕೆಂಪಾಗಿದೆ ಮಗಳೇ?" ಅಂತ ಕೇಳಿದಾಗ "ವಿಪರೀತ ತಲೆ ನೋವು ಅಪ್ಪಾ" ಎಂದು ಹೇಳಿ ಕಣ್ಣು ತಪ್ಪಿಸಿ ಓಡಾಡುವುದನ್ನು ಕಲಿಯುತ್ತಾಳೆ, ಕೆರೆಯ ಬದಿಯ ಕೆಸರು ಮಣ್ಣಿನಲ್ಲಿ ಉಗುರಿಂದ ಅವನೆಸರು ಗೀಚಿ ಅತ್ತಿತ್ತ ಯಾರೂ ಇಲ್ಲ ಅನ್ನುವುದನ್ನು ಸ್ಪಷ್ಟಪಡಿಸಿಕೊಂಡು ಮೆಲ್ಲನೆ ಮುತ್ತಿಟ್ಟು ತುಟಿಗಂಟಿದ ಕೆಸರು ಒರೆಸಿಕೊಳ್ಳುತ್ತಾಳೆ, ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರವನ್ನು ಅವನೇ ಅಂದುಕೊಂಡು ಸುಮ್ಮನೇ ನಾಚುತ್ತಾಳೆ, ಕಾಲು ದಾರಿಯಲ್ಲಿ ಹೆಜ್ಜೆ ಹಾಕುವಾಗೆಲ್ಲಾ ಅವನು ಜೊತೆಗಿದ್ದಾನೆಂದು ಭ್ರಮಿಸಿ ನಿಧಾನವಾಗಿ ಹೆಜ್ಜೆ ಎತ್ತಿಡುತ್ತಾಳೆ, ನನ್ನ ಪ್ರೀತಿಯ ವಿಷಯ ಮನೆಯಲ್ಲಿ ಗೊತ್ತಾದರೆ... ಎಂದು ಸುಳ್ಳೇ ಸುಳ್ಳು ಕಲ್ಪಿಸಿಕೊಂಡು ಹೆದರಿಕೊಳ್ಳುತ್ತಾಳೆ, ತುಸು ಹೊತ್ತು ಕಳೆದು ಅವನಿಗೆ ಕರೆ ಮಾಡಿ ತನ್ನ ಭಯದ ಬಗ್ಗೆ ಹೇಳಿ ಅಳುತ್ತಾಳೆ, ಅವನು ಹಾಗೆಲ್ಲಾ ಏನೂ ಅಗುವುದಿಲ್ಲವೆಂದು ಭವಿಷ್ಯ ಹೇಳುತ್ತಾನೆ, ಇವಳು ಅಷ್ಟಕ್ಕೇ ಸಮಾಧಾನ ಪಟ್ಟುಕೊಂಡು "ಐ ಲವ್ ಯೂ ಕಣೋ" ಅಂತಂದು ಫೋನ್ ಕಟ್ ಮಾಡುತ್ತಾಳೆ. 

ಇಷ್ಟೆಲ್ಲಾ ಆಗುವಾಗ ಆರು-ಏಳು ತಿಂಗಳು ಕಳೆದು ಬಿಟ್ಟಿರುತ್ತದೆ. ಆ ವೇಳೆಗಾಗುವಾಗಲೇ ಇವಳ ಪ್ರೀತಿಯ ವಾಸನೆ ಸ್ವಲ್ಪೇ ಸ್ವಲ್ಪ ಮನೆಯವರಿಗೆ ಬಡಿದಿರುತ್ತದೆ. ಅಕ್ಕ ಇಲ್ಲದ ಕಾರಣ ಸೃಷ್ಟಿಸಿಕೊಂಡು ಫೋನ್ ಕೇಳುತ್ತಾಳೆ. ಅಮ್ಮ ಸುಖಾ ಸುಮ್ಮನೆ, ಪ್ರೀತಿಸಿ ಮದುವೆಯಾಗಿ ಮುಂದೆ ಶರಂಪರ ಜಗಳವಾಡಿ ಡೈವೋರ್ಸ್ ಪಡೆದುಕೊಂಡಿರುವುದರ ಬಗ್ಗೆ ಮಾತಾಡತೊಡಗುತ್ತಾರೆ. ಅಪ್ಪ ನೂರು ಮಗನನ್ನಾದರೂ ನೆಮ್ಮದಿಯಿಂದ ಸಾಕಬಹುದು ಆದರೆ ಒಬ್ಬ ಮಗಳನ್ನು ಸಾಕುವುದು ಕಷ್ಟ ಅಂತ ಇವಳಿಗೆ ಕೇಳಬೇಕೆಂದೇ ಲೊಚಗುಟ್ಟತೊಡಗುತ್ತಾನೆ. ಅಲ್ಲಿಗೆ ಮನೆಯಲ್ಲೇನೋ ಏರು ಪೇರು ನಡೆದಿದೆ ಎಂದು ಅವಳಿಗೆ ಸ್ಪಷ್ಟವಾಗುತ್ತದೆ. ಮರುದಿನ ಕಾಲೇಜ್ ಗೆ ಹೋಗಿ ತನ್ನ ಹುಡುಗನಿಗೆ ’ಮನೆಯಲ್ಲಿ ಹೀಗೀಗಾಯ್ತು ಕಣೋ, ಇನ್ಮುಂದೆ ಹುಶಾರಾಗಿರೋಣ’ ಅನ್ನುತ್ತಾಳೆ.

"ಏನೂ ಆಗಲ್ಲ  ಚಿನ್ನಾ" ಅಂತ ಭವಿಷ್ಯ ನುಡಿದಿದ್ದ ಹುಡುಗನೇ ಈಗ "ನಿಂಗೆ ನಂಜೊತೆ ಮಾತಾಡೋಕೆ ಇಷ್ಟ ಇಲ್ಲ, ಅದ್ಕೆ ಹೀಗ್ಮಾಡ್ತಿದ್ದೀಯ" ಅಂದು ಬಿಡ್ತಾನೆ. ಅಲ್ಲಿಗೆ  ’ನನ್ ಹುಡುಗ ತುಂಬಾ ಸ್ಪೆಷಲ್, ಎಲ್ಲರಂತಲ್ಲ, ನನ್ನ ಅರ್ಥ ಮಾಡಿಕೊಳ್ಳುತ್ತಾನೆ’ ಅಂತೆಲ್ಲಾ ಅಂದುಕೊಂಡಿದ್ದ ಹುಡುಗಿಯ ಕನಸು ಚದುರಿ ಚೆಲ್ಲಾಪಿಲ್ಲಿಯಾಗುತ್ತದೆ. ಅತ್ತ ಮನೆಯವರು, ಇತ್ತ ಹುಡುಗ. ಮಧ್ಯೆ ಅಡಕತ್ತರಿಯಲ್ಲಿ ಸಿಲುಕಿದ್ದೇನೆ ಅನಿಸತೊಡಗುತ್ತದೆ. ಸ್ವಲ್ಪ ದುರ್ಬಲ ಮನಸ್ಸಿನವಳಾದರೆ ಆತ್ಮಹತ್ಯೆಯ ಯೋಚನೆಯೂ ಒಮ್ಮೆ ಸುಳಿದು ಹೋಗುತ್ತದೆ.

ತಾನು ಬದಲಾಗಿಲ್ಲ ಅಂತ ಹುಡುಗನಿಗೆ ಸಾಬೀತುಪಡಿಸಬೇಕು ಅನ್ನುವ ತಹತಹದಲ್ಲಿ, ಹಿಂದೆ ಮನೆಯವರಿಗೆ ಗೊತ್ತಾಗಬಾರದೆಂದು ತನಗೆ ತಾನೇ ವಿಧಿಸಿಕೊಂಡಿದ್ದ ಜಾಗರೂಕತೆಗಳನ್ನೆಲ್ಲಾ ಗೊತ್ತೇ ಆಗದಂತೆ ಗಾಳಿಗೆ ತೂರಿ ಬಿಡುತ್ತಾಳೆ. ಸ್ವಲ್ಪವೇ ಸ್ವಲ್ಪ ಅನುಮಾನಿಸಿದ್ದ ಮನೆಯವರು ಮೂರೂ ಹೊತ್ತು ಅವಳು ಫೋನ್ ನಲ್ಲಿ ಮಾತಾಡುವುದನ್ನು ಗಮನಿಸಿಯೂ ಗಮನಿಸದಂತಿದ್ದುಬಿಡುತ್ತಾರೆ. ಆದ್ರೆ ಈ ಹಂತದಲ್ಲಿ ಬೆಡ್ ರೂಮಿನ ಗೋಡೆಗಳಿಗೂ, ಬಾತ್ ರೂಮಿನ ಬಾಗಿಲುಗಳಿಗೂ ಕಿವಿಗಳು ಹುಟ್ಟಿ ಬಿಡುತ್ತವೆ. ಅಷ್ಟೊತ್ತಿಗೆ ಹಿತಮಿತ್ರರು ಯಾರೋ ಅವಳು ಅವನೊಂದಿಗೆ ಇರುವ ವಿಷಯವನ್ನು ದಾಖಲೆ ಸಮೇತ ತಂದೆ, ತಾಯಿಯ ಕಿವಿಗೆ ಹಾಕಿಬಿಟ್ಟಿರುತ್ತಾರೆ.

ಆಮೇಲೆ ಹುಡುಗಿ ಅನುಭವಿಸುವ ಯಾತನೆಗಳು ಅಷ್ಟಿಷ್ಟಲ್ಲ. ಅತ್ತ ಹುಡುಗನನ್ನೂ ಬಿಡಲಾಗದೆ ಇತ್ತ ಮನೆಯವರನ್ನೂ ಬಿಡಲಾಗದ ತ್ರಿಶಂಕು ನರಕ ಅವಳೆದುರು ಸೃಷ್ಟಿಯಾಗುತ್ತದೆ. ಅವನ ಜೊತೆ ಮಾತಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಇಮೋಷನಲ್ ಬ್ಲಾಕ್ ಮೇಲ್ ಮಾಡುವ ಅಮ್ಮ, ನನ್ನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಲೆಂದೇ ಹುಟ್ಟಿದವಳು ನೀನು ಅಂತ ದಿನಕ್ಕೆ ಹತ್ತು ಸಲ ಹೇಳುವ ಅಪ್ಪ, ಅಪ್ಪ-ಅಮ್ಮನ ಸಾವು ಬದುಕು ನಿನ್ನ ಕೈಯಲ್ಲಿದೆ ಅಂತ ಬೆದರಿಸುವ ಸಂಬಂಧಿಕರು, ಅವಳಿಗೀಗ ತನ್ನ ಅವಶ್ಯಕತೆಯಿದೆ, ಮನೆ ವಾತಾವರಣ ತಿಳಿಯಾಗುವವರೆಗೂ ಸಂಯಮದಿಂದ ಇರಬೇಕೆಂಬ ಕನಿಷ್ಠ ಪ್ರಜ್ಞೆ ಇಲ್ಲದ, ಕ್ಷಣ ಕ್ಷಣಕ್ಕೂ ಅನುಮಾನಿಸುವ ಹುಡುಗ. ಈ ತಾಕಲಾಟಗಳ ಮಧ್ಯೆಯೇ ಒಂದು ದುರ್ಬಲ ಕ್ಷಣದಲ್ಲಿ ಕೊನೆ ಪಕ್ಷ ಮನೆಯವರಾದರೂ ಖುಶಿಯಾಗಿರಲಿ ಅನ್ನುವ ಕಾಳಜಿಗೋ, ಅಸಹಾಯಕತೆಗೋ ತನ್ನತನವನ್ನು, ಖುಶಿಯನ್ನು, ತಾನು ಇಷ್ಟಪಟ್ಟು ಪ್ರೀತಿಸಿದ ಪ್ರೀತಿಯನ್ನು ಕೊಂದುಕೊಂಡು, 'ಅವನೆಂಬ' ಅವಳ ಅಗಾಧ ಕನಸಿಗೆ ಕೊಳ್ಳಿಯಿಟ್ಟು ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಲು ತಾನು ರೆಡಿ ಅಂದುಬಿಡುತ್ತಾಳೆ. ಇತ್ತ ಹೆತ್ತವರು ಅವಳ ಮನಸು ಮತ್ತೊಮ್ಮೆ ಬದಲಾಗುವ ಮುನ್ನ ಮದುವೆ ಮಾಡಿಬಿಡಬೇಕೆಂದು ತರಾತುರಿಯಲ್ಲಿ ಮದುವೆ ಮಾಡಿ ಮುಗಿಸಿ ಕೈ ತೊಳೆದು ಬಿಡುತ್ತಾರೆ.


  

 ಅತ್ತ ಹುಡುಗ, ಹಿಂದೊಮ್ಮೆ ಅವಳು ಯಾವುದೋ ಅಸಹನೆಯಿಂದ ಬಾಯ್ ಫ್ರೆಂಡ್ ಜೊತೆ ಮಾತಾಡುತ್ತಿದ್ದೆ ಅಂದಿರುವುದನ್ನೇ ನೆಪವಾಗಿಟ್ಟುಕೊಂಡು ಆ ಹುಡುಗನೇ ಇವನು ಅಂತ ಎಣ್ಣೆಗೂ ಸೀಗೆಕಾಯಿಗೂ ಇಲ್ಲದ ಸಂಬಂಧ ಕಲ್ಪಿಸಿ ಹಿಂದು ಮುಂದು ಯೋಚಿಸದೆ ಅವಳಿಗೆ ಖಳನಾಯಕಿಯ ಪಟ್ಟ ಕಟ್ಟಿಬಿಡುತ್ತಾನೆ. ಅದಕ್ಕೆ ಸಾಥ್ ನೀಡುವ ಅವನ ಫ್ರೆಂಡ್ಸ್ ಇನ್ನೊಂದಿಷ್ಟು ಉಪ್ಪು ಖಾರ ಹಚ್ಚಿ "ನಿನ್ನಂತಹ ಒಳ್ಳೆಯ ಹುಡುಗನಿಗೆ ಹೀಗೆ ಮೋಸ ಮಾಡಿದ ಅವಳಿಗೆ ಒಳ್ಳೆಯದಾಗಲ್ಲ" ಅಂತ ಹಿಡಿ ಶಾಪ ಹಾಕುತ್ತಾರೆ. ಅಲ್ಲಿಗೆ ಅವನ ಮನಸ್ಸಲ್ಲಿ ಅವಳ ಚಿತ್ರ ಪ್ರೀತಿ ಕೊಂದ ಕೊಲೆಗಾತಿಯೆಂದು ಶಾಶ್ವತವಾಗಿ ದಾಖಲಾಗಿ ಬಿಡುತ್ತದೆ. ಮೊಬೈಲ್ ಸ್ಕ್ರೀನ್ ನಲ್ಲಿ ’ಪ್ರೀತಿಯಲ್ಲಿ ಮೊದಲಿಗ ನಾನು, ಮೋಸಕ್ಕೆ ಕೊನೆಯವಳು ನೀನಾಗು’ ಅನ್ನುವ ವಾಲ್ ಪೇಪರ್ ರಾರಾಜಿಸತೊಡಗುತ್ತದೆ.

ಮದುವೆಗೆ ಮುನ್ನ ತಮ್ಮ ಅನುಮತಿಯಿಲ್ಲದೆ ಯಾರನ್ನೋ  ಪ್ರೀತಿಸಿದಳು ಅನ್ನುವ ಕಾರಣಕ್ಕೆ ಹೆತ್ತವರ ಪಾಲಿಗೂ ಅವಳು ಖಳನಾಯಕಿ, ಹೆತ್ತವರಿಗೆ ನೋವಾಗದಿರಲೆಂದು ಮದುವೆ ಮಾಡಿಕೊಂಡ ಕಾರಣಕ್ಕೆ ಹುಡುಗನ ಪಾಲಿಗೂ ಅವಳು ಖಳನಾಯಕಿ. ಆದ್ರೆ ನಿಜಕ್ಕೂ ಪ್ರೀತಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅವಳಿಗೂ ನೋವಿರುತ್ತದೆ. ಆದರೆ ಅದನ್ನವಳು ಬಹಿರಂಗವಾಗಿ ವ್ಯಕ್ತಪಡಿಸಲಾರಳು ಅಷ್ಟೆ. ಎಲ್ಲವನ್ನೂ ಮರೆತಿದ್ದೇನೆಂದು ಸೋಗು ಹಾಕಿದರೂ ಒಳಗೊಳಗೇ ಕೊರಗುತ್ತಿರುತ್ತಾಳೆ, ಕರಗುತ್ತಿರುತ್ತಾಳೆ. ’ತನ್ನವರು’ ಅಂತ ಸದಾ ತುಡಿಯುವ, ಕಾಳಜಿ ತೋರುವ, ಕನಿಕರಿಸುವ, ಪ್ರೀತಿಸುವ, ಒಲವ ಸುಧೆ ಹರಿಸುವ ಅವಳ ಒಳಗುದಿಗಳನ್ನೂ ಸ್ವಲ್ಪ ಅರ್ಥ ಮಾಡ್ಕೊಳ್ಳಿ ಪ್ಲೀಸ್...           

ಶನಿವಾರ, ಆಗಸ್ಟ್ 15, 2015

ಸ್ವಾತಂತ್ರ್ಯ



ಸ್ಟೇಜ್ ಹತ್ತಿ ಭಾಷಣ ಮಾಡಿ
ಪ್ರೈಝ್ ಗಿಟ್ಟಿಸಿ ನಗೆ ಬೀರಿ
ಹೆಮ್ಮೆಯಿಂದ ’ಜೈ ಹಿಂದ್’ ಅಂದ
ಬಾಲ್ಯದ ಸ್ವಾತಂತ್ರ್ಯವೇಕೋ
ನನ್ನ ಅಣಕಿಸುತ್ತಿದೆ ಇಂದು

ಮರ್ಯಾದಾ ಹತ್ಯೆಯ ಹೆಸರಲಿ
ಜೀವ ಕಳೆದುಕೊಂಡವರ
ಅಪರಿಮಿತ ನೋವುಗಳಲಿ
ಸ್ವಾತಂತ್ರ್ಯ ನಿಟ್ಟುಸಿರು ಬಿಡುತ್ತಿರುವಾಗ

ಕಾಮಪಿಪಾಸುಗಳ ಕರಾಳ ಹಸ್ತದಲಿ
ಮುರುಟಿಹೋದ ಕಂದಮ್ಮಗಳ
ಕಣ್ಣೀರ ಬೇಗೆಯಲಿ
ಸ್ವಾತಂತ್ರ್ಯ ಸದ್ದಿಲ್ಲದೆ ನಲುಗುತ್ತಿರುವಾಗ

ಸಾಲದ ಶೂಲದಲಿರುವ
ಬಡ ರೈತನ ಕರುಳಬೇನೆಯ
ಅಸಹನೀಯ ನಿರಾಸೆಯಲಿ
ಸ್ವಾತಂತ್ರ್ಯ ಆತ್ಮಹತ್ಯೆಗೆಯ್ಯುತಿರುವಾಗ

ದುರ್ಗಮ ಕೊಳ್ಳಗಳ
ಕಲ್ಲು ಕೋರೆಗಳಲಿ
ಜಗವರಿಯದ ಬಾಲಕಾರ್ಮಿಕರು
ರಕ್ತ ಸುರಿಸುತಿರುವಾಗ

ದಿನ ಬೆಳಗಾಗುತ್ತಿದ್ದಂತೆ
ಕಸದ ತೊಟ್ಟಿಯಲಿ
ಹಣ್ಣು ಹಸುಳೆಗಳು
ದಿಕ್ಕಿಲ್ಲದೆ ಕಣ್ಣು ಬಿಡುತ್ತಿರುವಾಗ

ಗಡಿಕಾಯ್ದು ಪ್ರಾಣ ತೆತ್ತ
ವೀರಯೋಧನ ಸಮಾಧಿಯ ಮೇಲೆ
ಅಧಿಕಾರಸ್ಥರು ಅಹಂಕಾರದ
ಠೇಂಕಾರ ಮೊಳಗಿಸುತಿರುವಾಗ

ಉಸಿರುಗಟ್ಟುವ ಭ್ರಷ್ಟಾಚಾರ
ಮೇರೆಮೀರಿರುವ ಅನಾಚರ
ನಜ್ಜುಗುಜ್ಜಾಗಿರುವ ಸಹಿಷ್ಣುತೆಯ
ನಡುವೆ ಸ್ವಾತಂತ್ರ್ಯ ತುಸು
ಉದಾರತೆಗಾಗಿ ಯಾಚಿಸುತಿರುವಾಗ

ಹೇಗೆ ಹೇಳಲಿ ನಾನು ನನ್ನದು
ಸರ್ವಸ್ವತಂತ್ರ ದೇಶವೆಂದು
ಹೇಗೆ ಆರೋಹಿಸಲಿ ನಾನು
ತ್ರಿವರ್ಣವನು ಮುಗಿಲೆತ್ತರಕೆ...?

ಸೋಮವಾರ, ಜುಲೈ 6, 2015

ಮರು ಹುಟ್ಟು

                                         

ಹುಚ್ಚು ರಭಸದಿ ಹರಿವ
ತಿಳಿ ಹಸಿರು ರಂಗಿನ
ಹೊಸ ನೀರ ತೊರೆಯ ಮೇಲೆ
ಮರುಹುಟ್ಟು ಪಡೆದಿದೆ
ಹುಟ್ಟಿನಾಸರೆಯಲಿ ಬದುಕೊಂದು

ಮೋಸ ವಂಚನೆಗಳ ಲಂಚ ರುಷುವತ್ತು
ಆಸ್ತಿ ಅಂತಸ್ತುಗಳ ಗತ್ತು ಗೈರತ್ತು
ಎಲ್ಲ ನಿರಾಶೆಗಳ ಮಿತಿಯ ಮೀರಿ
ಮನಸ ಮೂಲೆಯ ಮರದ ತುದಿಯಲಿ
ಟಿಸಿಲೊಡೆದಿದೆ ಹೊಸ ಕನಸೊಂದು

ತಿಳಿಗೊಳದೆದೆಯ ತಳಮಳದಲಿ
ನೂರು ತಲ್ಲಣವ ಬಚ್ಚಿಟ್ಟು
ಬಾಳ ಬಾಂದಳದಲಿ
ನೂರು ಭಾವಗಳ ಕಾಪಿಟ್ಟು
ಉದಿಸಿದೆ ಹೊಸ ಭರವಸೆಯೊಂದು

ಮೌನ ಕಣಿವೆಯಲಿ ಮಾತ ಮಂಟಪ ಕಟ್ಟಿ
ಬೇಸರಿಸದೆ ಹೊಳೆ ದಾಟಿಸಿ
ವಂಚನೆಯ ಸೋಂಕಿಲ್ಲದೆ
ಮುಖದ ಮೇಲೊಂದು ತಿಳಿ ನಗೆ
ಮೂಡಿಸುವವನ ಬದುಕು ಮುಳಗದಿರಲಿ