ಸೋಮವಾರ, ಜನವರಿ 11, 2016

ಬುದ್ಧನನ್ನರಸುತ್ತಾ...


ಸಾಲು ಸಾಲು ಬೋಧಿವೃಕ್ಷ
ನೆಟ್ಟಿದ್ದಾನಂತೆ ಬುದ್ಧ
ಅದೆಲ್ಲೋ ಸಾವಿರ ಗಾವುದ ದೂರ
ತಿಳಿಯದ ಹಾದಿ, ಅರಿಯದ ದಾರಿ
ಪಯಣದುದ್ದಕ್ಕೂ ಎಡರುತೊಡರುಗಳೇ

ನನಗೆ ಜ್ಞಾನೋದಯದ ಹಂಬಲವಿಲ್ಲ
ಬುದ್ಧನೇ ಅಂದಿದ್ದಾನಲ್ಲಾ
ಅತಿ ಆಸೆ ಸಲ್ಲದೆಂದು

ಅವನ ಸ್ನಿಗ್ಧ ನಗುವಿನಲಿ
ಅರೆ ನಿಮೀಲಿತ ಕಣ್ಣುಗಳಲಿ
ದಿವ್ಯ ಸ್ಥಿತಪ್ರಜ್ಞತೆಯಲಿ
ಒಮ್ಮೆ ಕಳೆದುಹೋಗಬೇಕಿದೆ ಅಷ್ಟೆ

ದಾರಿಗುಂಟ ಸಿಕ್ಕಿದ ಕಲ್ಲು
ಚುಚ್ಚಿದ ಮುಳ್ಳು
ಒಸರಿಸುತ್ತಲೇ ಇದೆ ಹನಿ ರಕ್ತವನು
ಒರೆಸಿಕೊಳ್ಳುವ ಗೋಜಿಗೂ ಹೋಗಿಲ್ಲ ನಾನು

ರಕ್ತ!!! ಅದು ಅವನ ತತ್ವ
ಧಿಕ್ಕರಿಸಿದಂತೆ ಅನ್ನುತ್ತೀರೇನೋ ನೀವು
ನನಗೊತ್ತಿಲ್ಲ
ತರ್ಕಿಸುವಷ್ಟು ಬುದ್ಧಿವಂತೆಯಲ್ಲ ನಾನು

ಹಿಂಸೆ-ಅಹಿಂಸೆ, ಆಸೆ-ನಿರಾಸೆ, ಮೋಹ-ನಿರ್ಮೋಹ
ತತ್ವ, ಪ್ರತಿಪಾದನೆಗಳಾವುವೂ ದಕ್ಕದು
ನನಗೆ ಬುದ್ಧನೆಂದರೆ
ಸ್ಥಿತಪ್ರಜ್ಞತೆ, ಸ್ನಿಗ್ಧತೆಯಷ್ಟೇ

ದಾರಿಯುದ್ದಕ್ಕೂ ಸಿಕ್ಕಿದ ವೇಷಧಾರಿ
ಬುದ್ಧರನ್ನೇ ಅಸಲಿಯೆಂದು ಭ್ರಮಿಸಿದ್ದಿದೆ
ಅವರ ಅಸಲಿಯತ್ತಿಗೆ ಸವಾಲಾಗಿ
ಇದ್ದೇ ಇದೆಯಲ್ಲ ಅವನ ನಕಲು
ಮಾಡಲಾಗದ ನಗು

ಅವನೆಟ್ಟ ಬೋಧಿವೃಕ್ಷದ ಸಾಲು
ಇನ್ನೇನು ಬೆರಳತುದಿಗೆಟುಕಿತು
ಅನ್ನುವಷ್ಟರಲ್ಲಿ ಮತ್ತದೇ ಹಳೆ
ಭ್ರಮೆಯ ಪುನರ್ಮಿಲನ

ಅವನ ಹುಡುಕಾಟದಲಿ
ಆನೆ ನಡೆಯದ್ದೂ ದಾರಿಯೇ
ಕನಸು ಕವಲೊಡೆದಿದ್ದೂ ದಾರಿಯೇ
ಅವನ ದಕ್ಕಿಸಿಕೊಳ್ಳಬೇಕೆಂದಿದ್ದರೆ
ನಡಿಗೆ ನವಿಲಾಗಬೇಕು
ಅರ್ಥ ಅರಸುತ್ತಾ
ಅವನೊಳಂದಾಗಬೇಕು

ಭಾನುವಾರ, ಜನವರಿ 10, 2016

ನಿನ್ನೆದೆಯ ಕಲ್ಲು ಮಾಡಿಕೊಂಡ ವಿದ್ಯೆಯ ನನಗೂ ದಯಪಾಲಿಸು


ಅನುಮಾನ ಅವಮಾನಗಳ ಬೆಂಕಿಯಲಿ
ಬೇಯುವಾಗೆಲ್ಲಾ ಈ ಬದುಕು
ಸಾಕೆಂದು ನಿಡುಸುಯ್ಯತ್ತಿರುತ್ತೇನೆ

ಮುರಿದ ಕನಸುಗಳ
ಇಟ್ಟಿಗೆಯಾಗಿಸಿ ಬದುಕ
ಕಟ್ಟಿಕೊಳ್ಳುವ ಚೈತನ್ಯ ಇಲ್ಲವೆಂದಲ್ಲ

ಹಾಗೆ ಕಟ್ಟಿಕೊಳ್ಳಹೊರಟಾಗೆಲ್ಲಾ
ಗೋರಿಯ ಬಗೆದು
ಅರಮನೆ ಕಟ್ಟುತ್ತಿರುವೆ
ಅನ್ನುವ ತಾಕಲಾಟಕ್ಕೆ ಬಿದ್ದು ಬಿಡುತ್ತೇನೆ

ಮತ್ತೆ ಮುರಿದ ಸಂಬಂಧಗಳು
ಕಾಡತೊಡಗುತ್ತವೆ
ಹಗಲಲ್ಲೂ ದುಃಸ್ವಪ್ನ
ಕಂಡಂತಾಗಿ ಬೆಚ್ಚಿ ಬೀಳುತ್ತೇನೆ

ಈಗೀಗ ಅಮ್ಮಂದಿರ ಎದೆಯಿಂದಲೂ
ಒಡೆದ ಹಾಲು ಒಸರುತ್ತದೇನೋ
ಅನ್ನಿಸಿ ದಿಗಿಲುಗೊಳ್ಳುತ್ತೇನೆ
ಆಗೆಲ್ಲಾ ನೀನು ಬೆಂಬಿಡದೆ ಕಾಡುತ್ತಿ ಅಹಲ್ಯೆ

ಅದೆಷ್ಟು ಋತುಗಳ
ಕಲ್ಲಾಗಿ ಕಳೆದುಬಿಟ್ಟೆಯಲ್ಲಾ
ರಾಮ ಪಾದ ಸ್ಪರ್ಶವಾಗುವವರೆಗೂ

ನಿನ್ನೆದೆಯ ಕಲ್ಲು ಮಾಡಿಕೊಂಡ
ವಿದ್ಯೆಯ ನನಗೂ ದಯಪಾಲಿಸು
ಒಂದಿಷ್ಟು ದಿನ ಬದುಕಬೇಕಿದೆ
ನನ್ನೆದೆಯ ಆಕ್ರೋಶ ನಿರಾಶೆಗಳನ್ನೆಲ್ಲಾ
ಮರೆತಂತೆ ನಟಿಸಿ

ಗುರುವಾರ, ಜನವರಿ 7, 2016

ಅಂದಹಾಗೆ, ನಿಮ್ಮ ನ್ಯೂ ಇಯರ್ ರೆಸಲ್ಯೂಷನ್ ಏನು?

ಇನ್ನು ಎರಡೇ ಎರಡು ದಿನಗಳು... 2016  ನಮ್ಮುಂದೆ ಓಡೋಡಿ ಬಂದು ಕುಳಿತುಕೊಂಡುಬಿಟ್ಟು ಏಳು ದಿನಗಳಷ್ಟೆ ಕಳೆದಿವೆ.. ನಾವೂ ಅಷ್ಟೇ ಮುಚ್ಚಟೆಯಿಂದ, ಹೊಸ ಹುಮ್ಮಸ್ಸಿನಿಂದ ಅದರ ಮೈದಡವಿ ಅಪ್ಪಿಕೊಂಡಿದ್ದೇವೆ,. ಕುಳಿತಲ್ಲಿಂದ ಅಮೂಲಾಗ್ರವಾಗಿ ಎಬ್ಬಿಸಿ ಬದುಕಿನೊಳಕ್ಕೆ ಬಿಟ್ಟುಕೊಂಡಿದ್ದೇವೆ. ಒಂದು ಚೆಂದದ ಮುಗಳ್ನಗೆಯೊಂದಿಗೆ ಅದರ ಹೆಗಲ ಮೇಲೆ ಕೈ ಹಾಕಿ ನಡೆಯಲು ಪ್ರಾರಂಭಿಸಿದ್ದೇವೆ.

ಆಮೇಲೆ...? ಒಂದೆರಡು ವಾರಗಳ ಕಾಲ ನಿಯಮಿತವಾಗಿ ಕೂತು ಶ್ರದ್ಧೆಯಿಂದ ಡೈರಿ ಬರೆಯುತ್ತೇವೆ. ಕೆಲವು ದಿನ ಸಹಿ ಹಾಕುವಾಗ, ನೋಟ್ಸ್ ಬರೆದಿಟ್ಟುಕೊಳ್ಳುವಾಗೆಲ್ಲಾ ದಿನಾಂಕ ಬರೆಯುವಲ್ಲಿ 2015  ಎಂದೇ ಬರೆದು, ಮತ್ತೆ ಅದನ್ನು ತಿದ್ದಿ 2016  ಮಾಡುತ್ತೇವೆ. ಮತ್ತೂ ಒಂದಿಷ್ಟು ದಿನಗಳವೆರೆಗೆ ಹೊಸ ವರ್ಷಕ್ಕೆಂದು ಮಾಡಿರೋ ಪ್ರತಿಜ್ಞೆಗಳನ್ನು ನೆನಪಿಟ್ಟುಕೊಂಡು ಅದರ ಪ್ರಕಾರವೇ ನಡೆಯುತ್ತೇವೆ. ಕೆಲ ದಿನಗಳು ಕಳೆದಂತೆ, ಜನವರಿ ಫೆಬ್ರವರಿಯಾದಂತೆ, ಡೈರಿ, ಪ್ರತಿಜ್ಞೆ ಎಲ್ಲಾ ಮರೆತು, ಎಲ್ಲಾ ವರ್ಷಗಳಂತೆ 2016  ಕೂಡ ಹಳತಾಗುತ್ತದೆ.

ಇರಲಿ, ನಾನಿಲ್ಲಿ ಪ್ರಸ್ತಾಪಿಸಹೊರಟಿದ್ದ ವಿಷಯ ಅದಲ್ಲವೇ ಅಲ್ಲ. ಹೊಸ ವರ್ಷದ ಆಚರಣೆಯ ಅಗತ್ಯತೆ, ಅನಿವಾರ್ಯತೆಗಳ ಬಗೆಗಿನ ವಾದ, ವಿಭಿನ್ನ ಖಂಡವೊಂದರ ಸಂಸ್ಕೃತಿಯನ್ನು ನಮ್ಮದಾಗಿಸಿಕೊಳ್ಳುತ್ತಿದ್ದೇವೆ ಅನ್ನುವ ತಕರಾರು, ತಡರಾತ್ರಿಯ ಪಾರ್ಟಿ, ಕುಡಿತ, ಸುಟ್ಟು ಹಾಕುವ ಮುದುಕನ ಪ್ರತಿಮೆ, Drink and Driveಗಳಂತಹ ಅತಿರೇಕದ ಅಸಂಬದ್ಧಗಳನ್ನು ಪಕ್ಕಕ್ಕಿಟ್ಟು, ಹೊಸ ವರ್ಷದ ಸ್ವಾಗತವನ್ನು ಧನಾತ್ಮಕವಾಗಿ ನೋಡಿದಾಗೆಲ್ಲಾ ಡಿಸೆಂಬರ್ 31ರ ರಾತ್ರಿ ಗೈಯಲ್ಪಡುವ ಶಪಥಗಳು ಹೆಚ್ಚು ಆಪ್ತವೆನಿಸುತ್ತದೆ.

ಅದೆಷ್ಟು ವೈವಿಧ್ಯತೆ ಇರುತ್ತದೆ ಈ ಹೊಸ ವರ್ಷದ ಶಪಥಗಳಲ್ಲಿ! ಹೊಸ ವರ್ಷದ ಆರಂಭದಿಂದಲೇ ಬೆಳಗ್ಗೆ ಐದು ಗಂಟೆಗೆ ಏಳುತ್ತೇನೆ, ಹಲ್ಲುಜ್ಜದೆ ಕಾಫಿ ಕುಡಿಯುವುದಿಲ್ಲ, ದಿನಾ ಅರ್ಧ ಗಂಟೆ ವಾಕಿಂಗ್ ಮಾಡ್ತೇನೆ, ಫ್ಯಾಮಿಲಿ ಜೊತೆ ಸಮಯ ಕಳೀತೇನೆ, ದಿನಪೂರ್ತಿ ಫೇಸ್ಬುಕ್ನಲ್ಲಿ ಮುಳುಗುವುದನ್ನು ನಿಲ್ಲಿಸ್ತೇನೆ, ದಿನಕ್ಕೆರಡೇ ಗಂಟೆ ವಾಟ್ಸಾಪ್ ಬಳಸುತ್ತೇನೆ..ಗಳಂತಹ ಪ್ರತಿಜ್ಞೆಗಳದು ಒಂದು ತೂಕವಾದರೆ, ಈ ವರ್ಷ ಹೆಚ್ಚು ಸಾಲ ಮಾಡ್ಕೊಳ್ಳುವುದಿಲ್ಲ, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮತ್ತು ಆತ್ಮ ಸಮರ್ಪಣೆಯಿಂದ ಮಾಡುತ್ತೇನೆ, ಜಂಕ್ ಫುಡ್ ತಿನ್ನುವುದನ್ನು ಕಡಿಮೆ ಮಾಡುತ್ತೇನೆ, ಸಿಗರೇಟ್ ಬಿಡುತ್ತೇನೆ, ಕುಡಿತ ನಿಲ್ಲಿಸುತ್ತೇನೆ, ಬಾಯ್ಫ್ರೆಂಡ್ ಗೆ ಸುಳ್ಳು ಹೇಳುವುದಿಲ್ಲ, ಗರ್ಲ್ ಫ್ರೆಂಡ್ಗೆ ನಿಯ್ಯತ್ತಾಗಿರುವುತ್ತೇನೆ, ಅಮ್ಮನನ್ನು ಯಾಮಾರಿಸುವುದಿಲ್ಲ, ಅಪ್ಪನ ಕಣ್ಣು ತಪ್ಪಿಸಿ ಓಡಾಡುವುದನ್ನು ಕಡಿಮೆ ಮಾಡುತ್ತೇನೆ, ಆಫೀಸ್ ಸಿಸ್ಟಮ್ನಲ್ಲಿ ಸಾಮಾಜಿಕ ಜಾಲತಾಣ ಓಪನ್ ಮಾಡಿ ಫ್ರೆಂಡ್ಸ್ ಜೊತೆ ಹರಟೆ ಕೊಚ್ಚುವುದಿಲ್ಲ...ಗಳಂತಹ ಪ್ರತಿಜ್ಞೆಗಳದೇ ಮತ್ತೊಂದು ತೂಕ.

ಇನ್ನು, ವಾರಕ್ಕೊಂದರಂತೆ ವರ್ಷಕ್ಕೆ ಕನಿಷ್ಟ 52 ಪುಸ್ತಕಗಳನ್ನಾದರೂ ಓದುತ್ತೇನೆ, ವರ್ಷ ಮುಗಿಯುವ ಮುನ್ನ ಇಬ್ಬರು ಸಾಹಿತಿಗಳನ್ನಾದರೂ ಭೇಟಿಯಾಗುತ್ತೇನೆ, ಪ್ರತಿ ದಿನ ಕನಿಷ್ಟ ಒಂದು ಪುಟದಷ್ಟಾದರೂ ಬರೆಯುತ್ತೇನೆ, ಹಾಗೆ ಬರೆಯಲು ಸಾಧ್ಯವಾಗದ ಮರುದಿನ ಎರಡು ಪುಟ ಬರೆಯುತ್ತೇನೆ... ಮುಂತಾದವುಗಳೆಲ್ಲಾ ಬರಹಗಾರರ, ಪುಸ್ತಕ ಪ್ರೇಮಿಗಳ ಬತ್ತಳಿಕೆಯಲ್ಲಿನ ಕೆಲ ಪ್ರತಿಜ್ಞೆಗಳು. ರಸ್ತೆಯಲ್ಲಿ ಕಸ ಹಾಕುವುದಿಲ್ಲ, ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಷ್ಟೇ ಸಹಜವಾಗಿ ನನ್ನ ಬೀದಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳುತ್ತೇನೆ, ಹಾಗೆ ಇಟ್ಟುಕೊಳ್ಳುವಂತೆ ಇತರರನ್ನೂ ಪ್ರೇರೇಪಿಸುತ್ತೇನೆ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದಿಲ್ಲ, ಇಬ್ಬರ ಜಗಳದ ಮಧ್ಯೆ ತುಪ್ಪ ಸುರಿಯೋಕೆ ಹೋಗುವುದಿಲ್ಲ, ಫೇಸ್ಬುಕ್ನ ಅನಗತ್ಯದ ಚರ್ಚೆಗಳಲ್ಲಿ ಭಕ್ತರ ಗುಂಪಿಗೂ ಸೇರದೆ, ರಾಯಲ್ ಫ್ಯಾಮಿಲಿಯ ಫಾಲೋವರ್ಸ್ಗಳ ವರ್ಗಕ್ಕೂ ಸೇರದೆ ತಟಸ್ಥವಾಗಿರುತ್ತೇನೆ, ಅದೆಷ್ಟೇ ದೂರದೂರಲ್ಲಿದ್ದರೂ, ಪಂಚಾಯತ್ ಚುನಾವಣೆ ಸಂದರ್ಭ ಊರಿಗೆ ಬಂದು ಮತ ಚಲಾಯಿಸುತ್ತೇನೆ ಮುಂತಾದ ಸಾಮಾಜಿಕ ಕಳಕಳಿಯ ಪ್ರತಿಜ್ಞೆ ಕೈಗೊಳ್ಳುವವರೂ ಇದ್ದಾರೆ.

ಆದರೆ, ವಿಚಿತ್ರ ಏನು ಗೊತ್ತಾ? ಹೀಗೆ ಡಿಸೆಂಬರ್31ರ ರಾತ್ರಿ ಮೇಣದ ಬತ್ತಿಯ ಬೆಳಕಿನ ಮುಂದೆ, ಕೈಯಲ್ಲೊಂದು ಡೈರಿ ಮತ್ತು ಪೆನ್ ಹಿಡಿದು ಗಂಭೀರವಾಗಿ ಕೂತು ಅರಿಭಯಂಕರ ಪ್ರತಿಜ್ಞೆ ಮಾಡಿದ ಬಹುತೇಕರೆಲ್ಲಾ ಫೆಬ್ರವರಿ1ರ ಹೊತ್ತಿಗೆ ಅದನ್ನು ಮರೆತಿರುತ್ತಾರೆ. ಅಷ್ಟು ಹೊತ್ತಿಗೆ ಹೊಸವರ್ಷವೂ ಹಳತಾಗಿರುತ್ತದೆ ಮತ್ತು 31ರ ರಾತ್ರಿ ಯಾರಿಗೆಲ್ಲಾ ಕರೆ ಮಾಡಿ, ಮೆಸೇಜ್ ಮಾಡಿ ಅಥವಾ ಮುಂದೆ ಕೂರಿಸಿಕೊಂಡು  ನ್ಯೂ ಇಯರ್ ರೆಸಲ್ಯೂಷನ್ಸ್ ಬಗ್ಗೆ ಹೇಳಿಕೊಂಡಿರುತ್ತೇವೆಯೋ ಅವರೂ ನಮ್ಮ ರೆಸಲ್ಯೂಷನ್ಗಳನ್ನೂ ನಮಗದನ್ನು ನೆನಪಿಸಬೇಕಾಗಿರುವ ಅವರ ’ಪರಮ ಕರ್ತವ್ಯ’ವನ್ನೂ ಮರೆತಿರುತ್ತಾರೆ.

ಅಲ್ಲಿಗೆ, ನಿರ್ಧಾರಗಳು, ಅವುಗಳ ಪಾಲನೆಗೆ ಇದ್ದ ಕಮಿಟ್ಮೆಂಟ್ಗಳೂ ಮಕಾಡೆ ಮಲಗುತ್ತವೆ. ಮತ್ತೆ ಅವು ನೆನಪಾಗಬೇಕಾದರೆ, ಮತ್ತೊಂದು ಡಿಸೆಂಬರ್ ಮೂವತ್ತೊಂದೋ ಇಲ್ಲ ಜನವರಿ ಒಂದೋ ನಮ್ಮ ಕಣ್ಣೆದುರು ಬರಬೇಕು. ಹಾಗೆಂದು ಹೊಸ ವರ್ಷದ ಸಂದರ್ಭಗಳಲ್ಲಿ ಮಾಡಿದ ಪ್ರತಿಜ್ಞೆಗಳನ್ನು ಯಾರೂ ಪಾಲಿಸುವುದೇ ಇಲ್ಲ ಅಂತಲ್ಲ. ಆದ್ರೆ ಜಾಗತಿಕ ಸಮೀಕ್ಷೆಯೊಂದರ ಪ್ರಕಾರ ಹಾಗೆ ಪಾಲಿಸುವವರು ಶೇಕಡ ಹತ್ತರಷ್ಟು ಮಾತ್ರ.

ನಿಜಕ್ಕೂ ಒಂದು ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಲು, ನಮ್ಮಲ್ಲಿರುವ ಕೆಟ್ಟತನವನ್ನು ಬಿಟ್ಟು ಬಿಡಲು, ಹಳೆ ಭ್ರಮೆಗಳಿಂದ ಹೊರಬರಲು, ಕೆಲವು ಕಹಿ ಘಟನೆಗಳನ್ನು ಮರೆಯಲು, ಹೊಸ ಬದುಕಿನ ನೀಲನಕ್ಷೆ ಸಿದ್ಧಪಡಿಸಲು ಹೊಸ ವರ್ಷ ಒಳ್ಳೆಯ ಸಂದರ್ಭವೇ. ಆದರೆ, ನಿರ್ಧಾರಗಳನ್ನು ಕೈಗೊಳ್ಳುವಾಗ ವಾಸ್ತವಿಕ ಮತ್ತು ಪೂರೈಸಲು ಸಾಧ್ಯವಿರುವಂತಹ ನಿರ್ಧಾರಗಳನ್ನು ಕೈಗೊಳ್ಳಬೇಕು. ಈಗಷ್ಟೇ ನೌಕರಿಗೆ ಸೇರಿಕೊಂಡವ, ವರ್ಷಾಂತ್ಯದಲ್ಲಿ ಐ.ಪಿ.ಎಲ್ ಟೀಂ ಒಂದನ್ನು ಖರೀದಿಸುತ್ತೇನೆ ಅನ್ನುವ ಶಪಥ ಮಾಡುವುದು, ನಿನ್ನೆಯಷ್ಟೇ ಕಬಡ್ಡಿಯ ಪಟ್ಟುಗಳನ್ನು ಕಲಿಯತೊಡಗಿದ ಹುಡುಗ ವರ್ಷ ಮುಗಿಯುವಷ್ಟರಲ್ಲಿ ಬೆಂಗಳೂರು ಬುಲ್ಸ್ ಟೀಮಿನ ಕ್ಯಾಪ್ಟನ್ ಆಗುತ್ತೇನೆ ಅನ್ನುವ ಪ್ರತಿಜ್ಞೆ ಕೈಗೊಳ್ಳುವುದು, ಈ ಕ್ಷಣದವರೆಗೂ ಉಸಿರಿನಂತೆ ಅಂಟಿಕೊಂಡಿರುವ ಸಿಗರೇಟ್ ಸೇದುವ ಚಟವನ್ನು ನಾಳೆ ಒಂದೇ ದಿನದಲ್ಲಿ ಸಂಪೂರ್ಣವಾಗಿ ನಿಲ್ಲಿಸುತ್ತೇನೆ ಅಂದುಕೊಳ್ಳುವುದು... ಮುಂತಾದವೆಲ್ಲಾ ತೀರಾ ಬಾಲಿಶ ಮತ್ತು ಅಸಂಭವ. ಹಾಗಾಗಿ ಅಂತಹ ಅಸಂಭವ ಮತ್ತು ಕಾರ್ಯ ಸಾಧ್ಯವಲ್ಲದ ನಿರ್ಧಾರಗಳನ್ನು ಕೈಗೊಂಡು, ಮುಂದೆ ಅದನ್ನು ಪೂರೈಸಲಾಗದೆ ಪ್ರತಿಜ್ಞೆಗಳ ಬಗ್ಗೆಯೇ ಸಿನಿಕತನ ಬೆಳೆಸಿಕೊಳ್ಳುವುದಕ್ಕಿಂತ ನಮ್ಮ ಸಾಮರ್ಥ್ಯಕ್ಕೆ ಕಾರ್ಯಸಾಧ್ಯವಾಗಬಲ್ಲ ಶಪಥ ಮಾಡೋಣ ಮತ್ತದನ್ನು ಪೂರೈಸೋಣ.

ಅಂದ್ಹಾಗೆ, ಹೈಸ್ಕೂಲ್ ಓದುತ್ತಿದ್ದಾಗಿನ ಎಲ್ಲಾ ಗೆಳತಿಯರನ್ನು, ಕಾಟಕೊಡುತ್ತಿದ್ದ ಸೀನಿಯರ್ ಹುಡುಗಿಯರನ್ನು, ಲೆಕ್ಕ ಹೇಳಿಸಿಕೊಳ್ಳುತ್ತಿದ್ದ ಜೂನಿಯರ್ ಹುಡುಗಿಯರನ್ನು, ಮತ್ತೊಂದಿಬ್ಬರು ಕ್ಲಾಸ್ಮೇಟ್ ಹುಡುಗರನ್ನೂ ಭೇಟಿಯಾಗಿ, ಜೀವನಪೂರ್ತಿ ನೆನಪಿಸಿಕೊಳ್ಳಲು ನೂರಾರು ಸಿಹಿ ನೆನಪುಗಳನ್ನು ಒದಗಿಸಿಕೊಟ್ಟ ಅವರಿಗೊಂದು ಚೆಂದದ ತ್ಯಾಂಕ್ಸ್ ಹೇಳಿ, ದೂರ ಆಗಿರುವ ಸಂಬಂಧಗಳನ್ನು ಮತ್ತೆ ಹತ್ತಿರವಾಗಿಸುವುದು ನನ್ನ ಈ ವರ್ಷದ ರೆಸಲ್ಯೂಷನ್. ಮತ್ತೆ ನಿಮ್ಮದು...?

ಶುಕ್ರವಾರ, ಜನವರಿ 1, 2016

ಬದುಕು ಅರಳುವುದು ಸೋಲು ಗೆಲುವುಗಳಾಚೆಗಿನ ಮನುಷ್ಯ ಸಂವೇದನೆಗಳಲ್ಲಿ ಮಾತ್ರ. ಅಲ್ಲವೇ?

ಕೆಲವರಿರುತ್ತಾರೆ...
ಸೋಲು ಅನ್ನುವುದು ಅವರನ್ನು ಕಿರುಬೆರಳಿನಿಂದಲೂ ಸೋಕಿರುವುದಿಲ್ಲ. ಆಟ, ಪಾಠ, ಗೆಳೆತನ, ಪ್ರೇಮ, ಸಂಬಂಧ, ಉದ್ಯೋಗ, ಯಶಸ್ಸು ಹೀಗೆ ಯಾವ ದಿಕ್ಕಿನಿಂದ ನೋಡಿದರೂ ಅವರು ಸೋತ ಉದಾಹರಣೆಗಳೇ ಸಿಗುವುದಿಲ್ಲ. ಏನನ್ನೇ ಆಯ್ಕೆ ಮಾಡಿಕೊಳ್ಳುವುದಾದರೂ, ಏನೇ ಕೆಲಸ ಕೈಗೆತ್ತಿಕೊಳ್ಳುವುದಾದರೂ ನೂರು ಬಾರಿ ಯೋಚಿಸಿ, ಅಳೆದೂ ತೂಗಿಯೇ ಮುಂದಡಿಯಿಡುತ್ತಾರೆ. ದಿನ ಬೆಳಗಾಗೆದ್ದು ಓದುವ ದಿನಪತ್ರಿಕೆಯಿಂದ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವವರೆಗೂ ಅವರ ಆಯ್ಕೆಗಳೆಲ್ಲವೂ ಒಂದು ಪರ್ಫೆಕ್ಟ್ ಸರಳರೇಖೆಯಲ್ಲೇ ಇರುತ್ತದೆ.

ಎಷ್ಟು ಚೆನ್ನಾಗಿರುತ್ತಲ್ವಾ ಅವರ ಬದುಕು? ನಮ್ಮನ್ನು ಭಾದಿಸುವ ಯಾವ ಸಂಗತಿಗಳೂ ಅವರನ್ನು ಭಾದಿಸಲಾರವು. ಸೋಲು ಸನಿಹಕ್ಕೂ ಸುಳಿಯುವುದಿಲ್ಲ ಅಂದಮೇಲೆ ಸೋಲಿನ ನಿರಾಶೆಗಳಿಗೆ, ವೈಫಲ್ಯದ ನೋವುಗಳಿಗೆ ಜಾಗವೇ ಇರುವುದಿಲ್ಲ. ಮುರಿದು ಬಿದ್ದ ಕನಸುಗಳು ಪದೇ ಪದೇ ಕಾಡುವಾಗ ಆಗೋ ಚಡಪಡಿಕೆಗಳಾಗಲೀ, ಜೀವನ ಪೂರ್ತಿ ಜೊತೆಗಿರುತ್ತೆ ಅಂತ ಅಂದುಕೊಂಡಿದ್ದ ಸಂಬಂಧವೊಂದು ಕಣ್ಣಮುಂದೆಯೇ ಕೈತಪ್ಪಿ ಹೋದ ಅಸಹಾಯಕತೆಯನ್ನಾಗಲೀ ಜೀವನ ಪೂರ್ತಿ ಅನುಭವಿಸಬೇಕಾದ ಯಾವ ದರ್ದೂ ಅವರಿಗಿರುವುದಿಲ್ಲ.



ಹಾಗಂತ ನಾವಂದುಕೊಳ್ಳುತ್ತೇವೆ. ಆದ್ರೆ ನಿಜಕ್ಕೂ ಅಂತಹ ’ಗೆಲುವಿನ ಸರದಾರರ’ ಬದುಕು ನಾವಂದುಕೊಂಡಿರುವಷ್ಟು ಸುಂದವಾಗಿರುತ್ತದಾ? ಸುಖವಾಗಿರುತ್ತದಾ? ಸಂತಸ ಮಾತ್ರ ತುಳುಕಾಡುತ್ತಿರುತ್ತದಾ? ನೋವು ಅಲ್ಲಿ ಕಾಲಿಡುವುದೇ ಇಲ್ವಾ?

ಕೇವಲ ಗೆಲುವಿಗಾಗಿ ಬದುಕುತ್ತಿರುತ್ತೇನೆ ಅಂತ ಭಾವಿಸಿಕೊಂಡವರು ಪ್ರತಿ ಕ್ಷಣ ಸೋಲಿನ ಭಯದಲ್ಲಿ ನರಳುತ್ತಿರುತ್ತಾರೆ. ಎತ್ತಲಿಂದ ಸೋಲು ಮೇಲೆರಗಿ ಬರಬಹುದೆಂದು ಸದಾ ಜಾಗೃತ ಸ್ಥಿತಿಯಲ್ಲಿರುತ್ತಾರೆ. ಒಂದು ಗೆಲುವು ದಕ್ಕಿಸಿಕೊಂಡ ಮರು ಕ್ಷಣದಲ್ಲಿ ಮತ್ತೊಂದು ಗೆಲುವಿಗಾಗಿ ಹಪಹಪಿಸತೊಡಗುತ್ತಾರೆ, ಯೋಜನೆ ರೂಪಿಸತೊಡಗುತ್ತಾರೆ. ದಕ್ಕಿಸಿಕೊಂಡ ಗೆಲುವನ್ನು ಸಣ್ಣದಾಗಿಯೇ ಆದರೂ ಸಂಭ್ರಮಿಸಿಕೊಳ್ಳಲು ಅವರ ಬಳಿ ಸಮಯವೇ ಇರುವುದಿಲ್ಲ, ಇದ್ದರೂ ಮತ್ತೊಂದು ಗೆಲುವಿನೆಡೆಗಿನ ತುಡಿತ, ’ಸೋತು ಬಿಟ್ಟೇನು’ ಅನ್ನುವ ಭಯ ಆ ಸಂಭ್ರಮವನ್ನು ಬುಡ ಸಮೇತ ಕಿತ್ತೊಗೆದಿರುತ್ತದೆ. ಒಟ್ಟಿನಲ್ಲಿ ಅವರು ’ಹೀಗೆಯೇ’ ಬದುಕಬೇಕು, ಬದುಕುತ್ತೇನೆ ಅನ್ನುವ ಸೂತ್ರಕ್ಕೆ ತಮ್ಮನ್ನು ತಾವೇ ಬಂಧಿಸಿಕೊಂಡು ಅವುಡುಗಚ್ಚಿ ಬದುಕುತ್ತಿರುತ್ತಾರೆ. ಯಂತ್ರದ ಚಕ್ರದಂತೆ ಒಂದು ಸಿದ್ಧ ಸೂತ್ರಕ್ಕೆ ಒಳಪಟ್ಟು ಅವರು ಬದುಕು ಸದಾ ತಿರುಗುತ್ತಲೇ ಇರುತ್ತದೆ. ಪ್ರತಿ ದಿನ ಅದೇ ಯಂತ್ರ, ಅದೇ ಚಕ್ರ! ಗೆಲುವೊಂದನ್ನು ಬಿಟ್ಟು ಪ್ರಪಂಚದ ಯಾವ ಸಂಗತಿಗಳೂ ಅಲ್ಲಿ ಮುಖ್ಯವೆನಿಸುವುದೇ ಇಲ್ಲ.

ಒಮ್ಮೆ ಸೂತ್ರ ತಪ್ಪಿ ಚಕ್ರ ನಿಂತು ಬಿಟ್ಟರೋ...? ಅಲ್ಲಿಗೆ ಎಲ್ಲವೂ ಮುಗಿಯುತ್ತದೆ. ಬದುಕು ಸ್ಥಬ್ಧವಾಗಿಬಿಡುತ್ತದೆ. ನಿಂತಿರೋ ಚಕ್ರವನ್ನು ಮತ್ತೆ ತಿರುಗಿಸುವ, ಸೋತಲ್ಲಿಂದಲೇ ಎದ್ದು ಬದುಕು ಕಟ್ಟಿಕೊಳ್ಳುವ ಯಾವ ಚೈತನ್ಯವೂ ಉಳಿದಿರುವುದಿಲ್ಲ. ಪದೇ ಪದೇ ಸೋಲುವವರು, ಸೋತು ಗೆಲ್ಲುವವರು ಸೋಲನ್ನು ನಿಭಾಯಿಸುವುದು, ಎದುರಿಸುವುದು ಹೇಗೆ ಎಂಬುದನ್ನು ಕಲಿತಿರುತ್ತಾರೆ, ಅಥವಾ ಬದುಕು ಸದ್ದಿಲ್ಲದಂತೆ ಅಂಥದ್ದೊಂದು ಪಾಠವನ್ನು ಕಲಿಸಿರುತ್ತದೆ. ಆದ್ರೆ ಈ ಸೋಲಿಗೆ ಎಂದೂ ಮುಖಾಮುಖಿಯಾಗದವರಿರುತ್ತಾರಲ್ಲಾ, ಅವರು ಸೋತು ಬಿಟ್ಟರೆ ಮುಗಿಯಿತು, ಮತ್ತೆಂದೂ ಗೆಲ್ಲಲಾರೆ ಅನ್ನುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ನಿರಂತರ ಗೆಲುವು ಹಂತ ಹಂತವಾಗಿ ಅವರೊಳಗೆ ರೂಪಿಸಿದ ದಾರ್ಷ್ಟ್ಯವನ್ನು ಸೋಲು ಒಮ್ಮೆಲೇ ಕೆಡವಿಬಿಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸೋಲನ್ನು ಅವಮಾನ ಅಂದುಕೊಂಡು ಆ ಸೋಲಿಗೆ ಇಲ್ಲದ ಕಾರಣಗಳನ್ನೂ, ಸಮಜಾಯಿಷಿಗಳನ್ನೂ ಕೊಟ್ಟುಕೊಳ್ಳುತ್ತಾ ತಮಗೆ ತಾವೇ ವಂಚನೆ ಮಾಡಿಕೊಳ್ಳಲಾರಂಭಿಸುತ್ತಾರೆ, ಅಸಲಿಗೆ ನಾನು ಸೋತೆ ಇಲ್ಲ ಅನ್ನುವ ಭ್ರಮೆಯಲ್ಲಿ ಬದಕತೊಡಗುತ್ತಾರೆ. ಅಲ್ಲಿಗೆ ಮುಂದೆಂದಾದರೂ ತೆರೆದುಕೊಳ್ಳಬಹುದಾಗಿದ್ದ ಗೆಲುವಿನ ಬಾಗಿಲು ಶಾಶ್ವತವಾಗಿ ಮುಚ್ಚಿಹೋಗುತ್ತದೆ.

ನಿಜ. ಪದೇ ಪದೇ ಸೋಲುವುದು, ದೈವೇಚ್ಛೆ, ವಿಧಿ, ಹಣೆಬರಹ ಎಂದೆಲ್ಲಾ ನಮ್ಮ ವ್ಯಾಪ್ತಿ ಮೀರಿದ ಸಂಗತಿಗಳ ಹೆಸರಲ್ಲಿ ಗೆಲುವಿಗಾಗಿ ಪ್ರಯತ್ನಿಸದೆ ಇರುವುದು ಖಂಡಿತಾ ಪಲಾಯನವಾದವೇ. ಹಾಗಂತ ಕೇವಲ ಗೆಲುವಿಗಾಗಿ ಬದುಕುತ್ತೇನೆ ಅಂತ ನಿರ್ಧರಿಸುವುದು ಎಷ್ಟು ಸರಿ? ಎಷ್ಟು ಸಂಭವನೀಯ? ಬದುಕೆಂದಮೇಲೆ ಗೆಲುವೂ ಬರಬೇಕು, ಸೋಲೂ ಇರಬೇಕು. ಸೋಲಿನ ನಿರಾಶೆಗಳು, ವೈಫಲ್ಯದ ನೋವುಗಳಿಲ್ಲದ ಬದುಕಿನಲ್ಲಿ ಗೆಲುವಿನ ಸಂಭ್ರಮವೂ, ಸಾಫಲ್ಯತೆಯ ಸಾರ್ಥಕ ಭಾವವೂ ಇರಲಾರವು. ಗೆಲುವಿನ ಖುಶಿ, ಸಾಫಲ್ಯತೆಯ ತೃಪ್ತಿ ಇರದ ಬದುಕಿನಲ್ಲಿ ಸೋಲು ಹುಟ್ಟು ಹಾಕುವ ಗೆಲ್ಲಬೇಕೆಂಬ ಹಠವೂ, ವೈಫಲ್ಯದ ಗರ್ಭದಿಂದ ಜನ್ಮ ತಾಳುವ ಸಫಲತೆಯ ಬಗೆಗಿನ ಹಂಬಲವೂ ಇರಲಾರವು.

ಇಷ್ಟಕ್ಕೂ ಬದುಕು ಆಡಂಬರ, ಹುಸಿ ತೋರಿಕೆ, ಒಣ ಅಹಂ, ಡಂಬಾಚಾರಗಳ ಹಂಗಿಲ್ಲದೆ ಸರಳವಾಗಿ ಅರಳುವುದು, ಅರಳುವ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು, ಈ ಸೋಲು ಗೆಲುವುಗಳ ಲೆಕ್ಕಾಚಾರಗಳಾಚೆಗಿನ ಅಪ್ಪಟ ಮನುಷ್ಯ ಸಂವೇದನೆಗಳಲ್ಲಿ ಮಾತ್ರ. ಅಲ್ಲವೇ?

ಬುಧವಾರ, ಡಿಸೆಂಬರ್ 30, 2015

ಕಾರಣವಿಲ್ಲದ ಈ ಇಷ್ಟವಾಗದಿರುವಿಕೆಗೆ ಏನು ಕಾರಣ?

ಕೆಲವೊಮ್ಮೆ ನಾವು ನೀವೆಲ್ಲರೂ ಕರಾರುವಕ್ಕಾಗಿ ಹೀಗೇ ಆಡಿಬಿಡುತ್ತೇವೆ...

ಪಂದ್ಯ ಮುಗಿಯಲು ಒಂದೇ ಒಂದು ಓವರ್ ಬಾಕಿ ಇರುತ್ತದೆ. ನಮ್ಮವರ ಗೆಲುವಿಗೆ ಬೇಕಾಗಿರುವುದು 8 ರನ್. ಎದುರಾಳಿ ಬೌಲರ್ ಡೇಲ್ ಸ್ಟೈನ್. ಕ್ರೀಸಲ್ಲಿರುವುದು ಕ್ಯಾಪ್ಟನ್ ಕೂಲ್, ಮತ್ತೊಂದು ಕಡೆ ಆರ್.ಅಶ್ವಿನ್. ಮೊದಲ ಬಾಲ್ ಗೆ ಎರಡು ರನ್. ಈಗುಳಿದಿರುವುದು ಐದೇ ಬಾಲ್. ಎರಡನೇ ಬಾಲ್ ವೇಸ್ಟ್ ಆಯ್ತು, ನೋಡ ನೋಡುತ್ತಿದ್ದಂತೆಯೇ ಮೂರನೆಯದೂ ವೇಸ್ಟ್. ತುದಿ ಬೆರಳಲ್ಲಿ ನೆಲ ಕೆರೆಯುತ್ತಾ ಒಂದು ಸಣ್ಣ ಅಸಹನೆ ಮತ್ತು ಚಡಪಡಿಕೆಯೊಂದಿಗೆ ಖುರ್ಚಿಗಂಟಿಕೊಂಡು ಕುಳಿತ ನಾವು ಒಮ್ಮೆ ಸಣ್ಣಗೆ ಕದಲುತ್ತೇವೆ. ನಾಲ್ಕನೆಯದೂ ವೇಸ್ಟ್. ಈಗ ಎರಡು ಬಾಲ್ ಗಳಲ್ಲಿ 6 ರನ್ ಬೇಕೇ ಬೇಕು. ಅಸಹನೆ ಸಿಡಿಮಿಡಿಗೆ ತಿರುಗುತ್ತದೆ. ಐದನೇ ಬಾಲ್ ಗೆ ಧೋನಿ ಬ್ಯಾಟನ್ನು ಗರಗರನೇ ತಿರುಗಿಸುತ್ತಾ ಹೆಲಿಕಾಫ್ಟರ್ ಶಾಟ್ ನೊಂದಿಗೆ ಬಾಲನ್ನು ಬೌಂಡರಿ ಗೆರೆಯಾಚೆ ದಾಟಿಸಿಬಿಡುತ್ತಾನೆ. ಅಂಪೈರ್ ಸಿಕ್ಸರ್ ಎಂದು ಕೈ ಎತ್ತುತ್ತಿದ್ದಂತೆ ಗೆಲುವು ಅಧಿಕೃತವಾಗಿ ಘೋಷಣೆಯಾಗಿಬಿಡುತ್ತದೆ. ಮನಸ್ಸು ’Waw! What a shot’ ಅಂತ ಉದ್ಗರಿಸುತ್ತದೆ. ಮರುಕ್ಷಣಾನೇ ’ಇದರಪ್ಪನಂತಹ ಸಿಕ್ಸರ್ ನಮ್ಮ ಗಂಗೂಲಿ ಬಾರಿಸುತ್ತಿರಲಿಲ್ಲವೇ? ಬಾಲ್ ಸ್ಟೇಡಿಯಂ ದಾಟಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಗಾಜಿಗೆ ಬಡಿದು ಗಾಜು ಪುಡಿಯಾಗುತ್ತಿತ್ತು ಅನ್ನುವುದೇನು ಸಾಮಾನ್ಯ ವಿಷಯವೇ? ಇಷ್ಟಕ್ಕೂ ಗ್ಲೆನ್ ಮೆಕ್ ಗ್ರಾಥ್ ನಂತಹ ಬೌಲರ್ ಗಳಾಗಲೀ, ಜಾಂಟಿ ರೋಡ್ಸ್ ನಂತಹ ಫೀಲ್ಡರ್ ಗಳಾಗಲೀ ಈಗೆಲ್ಲಿದ್ದಾರೆ? ಸಮರ್ಥ ಎದುರಾಳಿಗಳಿಲ್ಲದಿದ್ದರೆ ಒಂದಲ್ಲ ಎಲ್ಲಾ ಮ್ಯಾಚ್ ಗಳನ್ನು ಗೆದ್ದು ಬಿಡಬಹುದು’ ಅಂತ ವಿತಂಡವಾದ ಮಾಡಿ ಮೊದಲು ಉದ್ಗರಿಸಿದ್ದ ಉದ್ಗಾರವನ್ನೇ ನಿವಾಳಿಸಿ ಎಸೆದು ಬಿಡುತ್ತದೆ.

ಪೂರ್ವಾಗ್ರಹಗಳನ್ನು ಬಿಟ್ಟು ಅವಲೋಕಿಸಿದರೆ ಮೆಕ್ ಗ್ರಾಥ್ ಗೂ ಡೇಲ್ ಸ್ಟೈನ್ ಗೂ ಮತ್ತು ಜಾಂಟಿ ರೋಡ್ಸ್ ಗೂ ಮೈಕಲ್ ಕ್ಲರ್ಕ್ ಗೂ ಅಂತಹ ವ್ಯತ್ಯಾಸವೇನೂ ಇಲ್ಲ ಅನ್ನುವುದು ವೇದ್ಯವಾಗುತ್ತದೆ. ಪವರ್ ಪ್ಲೇ ಐದು ಓವರ್ ಗಳಷ್ಟು ಹೆಚ್ಚಿದೆ ಅನ್ನುವುದನ್ನು ಬಿಟ್ಟರೆ ಆಟದ ನಿಯಮಗಳಲ್ಲೂ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಮತ್ತದು ತುಂಬಾ ಸ್ಪಷ್ಟವಾಗಿ ಮನಸಿಗೂ ಗೊತ್ತಿರುತ್ತದೆ. ಆದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಿರುವುದಿಲ್ಲ. ರಾಶಿ ರಾಶಿ ಸಾಕ್ಷಿಗಳನ್ನು ತಂದು ಕಣ್ಣೆದುರು ಗುಡ್ಡೆ ಹಾಕಿದರೂ ಅದರತ್ತ ಒಮ್ಮೆಯೂ ದೃಷ್ಟಿ ಹರಿಸದೆ ’ಅವನೇನು ಮಹಾ?’ ಅನ್ನುವ ವಾದಕ್ಕೆ ಜೋತುಬಿದ್ದು ಬಿಡುತ್ತದೆ.

ಹಾಗಂತ ಅವನ ಬಗ್ಗೆ ದ್ವೇಷವೇನೂ ಇರುವುದಿಲ್ಲ. ಆಳದಲ್ಲೆಲ್ಲೋ ಅಭಿಮಾನ ಬೆರೆತ ಹೆಮ್ಮೆಯೂ ಇರಬಹುದು. ಆದರೆ ಅದನ್ನೆಂದೂ ನಾವು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಅದು ಒಂಥರಾ ಪ್ರೀತಿಗೂ-ದ್ವೇಷಕ್ಕೂ ಮೀರಿದ ಭಾವ. ಅವನಿಂದ ನಮಗೆ ಯಾವ ತೊಂದರೆಯೂ ಆಗಿರುವುದಿಲ್ಲ, ಅಥವಾ ನಮ್ಮಿಂದ ಅವರೇನೂ ಕಿತ್ತುಕೊಂಡಿರುವುದೂ ಇಲ್ಲ. ಕೆಲವೊಮ್ಮೆ ನಮ್ಮ ಅಸ್ತಿತ್ವದ ಅರಿವೂ ಅವರಿಗಿರುವುದಿಲ್ಲ. ಇಷ್ಟಿದ್ದರೂ ಅವರು ನಮಗಿಷ್ಟವಲ್ಲ. ಯಾಕೆ? ಗೊತ್ತಿಲ್ಲ.

ಇದು ಕೇವಲ ಒಬ್ಬ ಧೋನಿ ಮತ್ತೊಬ್ಬ ಸೌರವ್ ಮಾತ್ರ ಅಂತಲ್ಲ. ಅಮೀರ್-ಶಾರುಖ್, ಪೇಸ್-ಭೂಪತಿ,  ಸೈನಾ-ಜ್ವಾಲಾ, ಫೆಡರರ್- ನಡಾಲ್, ಮೆಸ್ಸಿ-ಡೊನಾಲ್ಡೋ, ಧ್ಯಾನ್ ಚಂದ್- ಬಲ್ಬೀರ್ ಸಿಂಗ್, ತೇಜಸ್ವಿ-ಲಂಕೇಶ್, ಕುವೆಂಪು-ಬೇಂದ್ರೆ, ಆರ್ಯಭಟ- ಬ್ರಹ್ಮಗುಪ್ತ, ಸ್ಟಾಲಿನ್-ಲೆನಿನ್ ಹೀಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೈತ್ಯ ಸಾಧನೆ ಮಾಡಿದ ಇಬ್ಬರಲ್ಲಿ ಒಬ್ಬರನ್ನು  ಮನಸ್ಸು ಮುಕ್ತವಾಗಿ ಇಷ್ಟಪಡುತ್ತದೆ, for no reason. ಮತ್ತೊಬ್ಬರನ್ನು ಅದೇನೇ ಆದರೂ ಇಷ್ಟಪಡುವುದಿಲ್ಲ, once again for no reason. ಇಲ್ಲಿ ವೃತ್ತಿ, ಹೆಸರು ಬೇರೆ ಬೇರೆಯಾಗಿರಬಹುದಷ್ಟೆ, ಆದರೆ ನಮ್ಮ ಅರ್ಥೈಸುವಿಕೆವೆಯ ಪರಿಧಿಯ ಆಚೆಗಿರುವ ಮನಸಿನ ವ್ಯಾಪಾರ ಒಂದೇ ತರ.

ಈ ವೈರುಧ್ಯ ಇಷ್ಟಕ್ಕೇ ಸೀಮಿತವಲ್ಲ. ಗಮನಿಸಿ ನೋಡಿ, ಕೆಲವೊಮ್ಮೆ ನೀವು ಕಾಲೇಜಲ್ಲೋ, ಪಾರ್ಕಲ್ಲೋ, ಆಫೀಸಲ್ಲೋ ಅಥವಾ ಯಾವುದೋ ಹೋಟೆಲಲ್ಲೋ ಗೆಳೆಯನ ಜೊತೆ ಹರಟೆ ಹೊಡೆಯುತ್ತಲೋ, ಹಲವು ದಿನಗಳಿಂದ ಎದೆಯೊಳಗೆ ಬಚ್ಚಿಟ್ಟುಕೊಂದ ನೋವನ್ನು ಹಂಚಿ ಹಗುರಾಗುತ್ತಲೋ ಇರುತ್ತೀರಿ. ತೀರಾ ಅನಿರೀಕ್ಷಿತವಾಗಿ ಅಪರಿಚಿತನೊಬ್ಬ ಅಲ್ಲಿಗೆ ಬರುತ್ತಾನೆ. ಆತ ನಿಮ್ಮ ಗೆಳೆಯನ ಗೆಳೆಯನೋ, ಸಂಬಂಧಿಯೋ, ಅಣ್ಣನೋ, ತಮ್ಮನೋ, ಭಾವನೋ, ಸಹೋದ್ಯೋಗಿಯೋ ಆಗಿರುತ್ತಾನೆ. ಒಂದೆರಡು ನಿಮಿಷಗಳ ಮಟ್ಟಿಗೆ ನಿಮ್ಮ ಗೆಳೆಯನ ಜೊತೆ ಮಾತನಾಡಿ ಆತ ಹೊರಟು ಹೋಗುತ್ತಾನೆ. ಅದ್ಯಾಕೋ ಗೊತ್ತಿಲ್ಲ, ನಿಮ್ಮಲ್ಲೊಂದು ಸಣ್ಣದಾದ
ಅಸಹನೆ ಹುಟ್ಟಿಕೊಳ್ಳುತ್ತದೆ, ವಿನಾಕಾರಣ ಅವನ ಬಗ್ಗೆ ಒಂದು ತಾತ್ಸಾರ ಮೊಳಕೆಯೊಡೆಯುತ್ತದೆ. ಅವನ ಬಗ್ಗೆ ನಿಮಗೇನೂ ದ್ವೇಷವಿರುವುದಿಲ್ಲ, ಯಾವ ದಿಕ್ಕಿನಿಂದ ನೋಡಿದರೂ ನಿಮಗೂ ಅವನಿಗೂ ಯಾವ ಬಾದರಾಯಣ ಸಂಬಂಧವೂ ಇರುವುದಿಲ್ಲ.  ಅಸಲಿಗೆ ಹಿಂದೆಂದೂ ಅವನನ್ನು ನೀವು ನೋಡಿಯೇ ಇರುವುದಿಲ್ಲ ಮತ್ತು ಮುಂದೆಂದೂ ಅವನನ್ನು ಮತ್ತೆ ಭೇಟಿಯಾಗಬೇಕಾದ ಸಂಭವವೂ ಬರುವುದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅವನ ನಡೆ-ನುಡಿ, ಭಾಷೆ-ಭಾವನೆ, ರೀತಿ ರಿವಾಜುಗಳಲ್ಲಿ ಒಂದಿನಿತೂ ತಪ್ಪು ಕಂಡುಹಿಡಿಯಲಾರಿರಿ. ಇಷ್ಟಿದ್ದರೂ ಆತ ನಿಮ್ಮೊಳಗೆ ಒಂದು ಅಸಹನೆ, ತಿರಸ್ಕಾರ, ತಾತ್ಸಾರ, ಅವ್ಯಕ್ತ ಕಿರಿಕಿರಿಯನ್ನು ಹುಟ್ಟುಹಾಕುತ್ತಾನೆ.

ಕಾರಣವಿಲ್ಲದ ಈ ’ಇಷ್ಟವಾಗದಿರುವಿಕೆಗೆ’ science ಇನ್ನೂ ಸರಿಯಾದ ವ್ಯಾಖ್ಯೆ ಕೊಟ್ಟಿಲ್ಲ, ಸಿಗ್ಮಂಡ್ ಫ್ರಾಯ್ಡ್ ನಂತಹ ಮಹಾ ಮನಶಾಸ್ತ್ರಜ್ಞರಿಗೂ ಈ ವಿಕರ್ಷಣೆಗಿರುವ ಅಸಲಿ ಕಾರಣ ಕಂಡುಹಿಡಿಯಲಾಗಿಲ್ಲ, ನ್ಯಾನೋ ಟೆಕ್ನಾಲಜಿಗೂ ನಿಲುಕದ ಸಂಗತಿಯಿದು. ಇಂಗ್ಲಿಷ್ ಬಲ್ಲ ಕೆಲವರು ಇದನ್ನು body chemistry ಅನ್ನುತ್ತಾರೆ. ಹಾಗಂತ Biologyಯಲ್ಲೋ, Chemistryಯಲ್ಲೋ ಈ ವೈಪರೀತ್ಯಕ್ಕೆ ಕಾರಣ ಹುಡುಕಹೋದರೆ ಅಲ್ಲಿಯೂ ನಿರಾಶೆಯ ಹೊರತು ಇನ್ನೇನೂ ದಕ್ಕದು.  ಕೆಲವು ಅತಿ ಬುದ್ಧಿವಂತರು ಜನ್ಮ ಜನ್ಮಾಂತರಗಳಷ್ಟು ಹಿಂದಕ್ಕೆ ಚಲಿಸಿ ಹಿಂದಿನ ಯಾವುದೋ ಒಂದು ಜನ್ಮದಲ್ಲಿ ಇಬ್ಬರ ಮಧ್ಯೆ ಇದ್ದ ಶತ್ರುತ್ವ ಹೀಗೆ ಪ್ರಕಟವಾಗಿದೆ ಅನ್ನುತ್ತಾರೆ. ಆದ್ರೆ ನಿಜಕ್ಕೂ ಮನಸ್ಸಿನ ಈ ವಿರೋಧಾಭಾಸಕ್ಕೆ ಕಾರಣವೇನು? ಅದು ಸುಪ್ತ ಮನಸ್ಸಿನ ವಿಹ್ವಲತೆಯೇ? ಒಳಗೆಲ್ಲೋ ಬೀಡು ಬಿಟ್ಟಿರುವ ಅಭದ್ರತಾ ಭಾವನೆಯ ಇನ್ನೊಂದು ರೂಪವೇ? ಅಥವಾ ಮತ್ಸರವೇ? ಅಥವಾ ಇವೆಲ್ಲವೂ ಒಟ್ಟುಗೂಡಿದ ಒಂದು ಸ್ಥಿತಿಯೇ? ನನಗೊತ್ತಿಲ್ಲ.

ನಿಮಗೇನಾದರೂ ಗೊತ್ತಿದ್ದರೆ ನನಗೂ ಹೇಳಿಬಿಡಿ...

ಬುಧವಾರ, ಡಿಸೆಂಬರ್ 2, 2015

ಅಳುವ ಈ ದಿಟ್ಟ ಹುಡುಗಿ ನಿಮ್ಮದೇ ಮನೆ ಮಗಳಾಗಿರಬಹುದು...

ಅದೊಂದು ಕಾಲೇಜ್ ವಾರ್ಷಿಕೋತ್ಸವ ಸಮಾರಂಭ. ಅಲ್ಲೊಬ್ಬ ಹುಡುಗಿ. ಹೆಸರು...? ಕೌಸಲ್ಯಾ, ಕೌಸರ್, ಕ್ಯಾಟ್ಲಿನ್   ಅಥವಾ ಇನ್ನಾವುದೋ ಒಂದು. ನಿಮಗಿಷ್ಟ ಬಂದ ಹೆಸರು ಇಟ್ಕೊಳ್ಳಿ. ಗೆಳತಿಯರ ಒತ್ತಡ ತಾಳಲಾರದೆ ಮೊದಲ ಬಾರಿ ಸೀರೆ ಉಟ್ಟು, ತನ್ನ ಸ್ವಭಾವಕ್ಕೆ ಒಗ್ಗಿ ಬರದ ಹೈಹೀಲ್ಡ್ ಚಪ್ಪಲಿ ಮೆಟ್ಟಿದ್ದಳು. ಕೈಗೊಮ್ಮೆ, ಕಾಲಿಗೊಮ್ಮೆ ತೊಡರಿಕೊಳ್ಳುತ್ತಿದ್ದ ಸೀರೆಯನ್ನು ಮನಸ್ಸಲ್ಲೇ ಶಪಿಸುತ್ತಾ ಪದೇ ಪದೇ ತನ್ನ ಗೆಳತಿಯ ಬಳಿ "ಇದನ್ನು ಬಿಚ್ಚಿ ಹಾಕಿ ಚೂಡಿದಾರ್ ಹಾಕ್ಕೊಳ್ಳಾ?" ಅಂತ ಕೇಳುತ್ತಿದ್ದಳು.  ಅವಳ ಗೆಳತಿ ಅವಳಷ್ಟೇ ಮುನಿಯುತ್ತಾ "ಇದೊಂದಿನ ಅಡ್ಜಸ್ಟ್ ಮಾಡ್ಕೊಳ್ಳೇ ಮಾರಾಯ್ತಿ" ಅನ್ನುತ್ತಾ ಅವಳನ್ನು ಸುಮ್ಮನಿರಿಸಲು ಪ್ರಯತ್ನಿಸುತ್ತಿದ್ದಳು. ಅಷ್ಟರಲ್ಲಿ ಸಮಾರಂಭದ ಅತಿಥಿಗಳ ಪಟ್ಟಿಯಲ್ಲಿದ್ದ ಹಿರಿಯರೊಬ್ಬರು ವೇದಿಕೆ ಹತ್ತಲು ಕಷ್ಟಪಡುತ್ತಿದ್ದುದು ನಮ್ಮ ಕಥಾನಾಯಕಿಯ ಕಣ್ಣಿಗೆ ಬಿತ್ತು. ತಾನು ಸೀರೆ ಉಟ್ಟಿದ್ದೇನೆ ಅನ್ನುವುದನ್ನೂ ಮರೆತು ಆಕೆ ಸ್ಟೇಜ್ ಬಳಿ ಓಡಿ ಹೋಗಿ, ಅವರ ಕೈಹಿಡಿದು ವೇದಿಕೆ ಹತ್ತಿಸಿ ಖುರ್ಚಿಯಲ್ಲಿ ಕೂರಿಸಿದಳು. ಇನ್ನೇನು ವೇದಿಕೆ ಇಳಿಯಬೇಕು ಅನ್ನುವಷ್ಟರಲ್ಲಿ ಯಾಕೋ ಅವರಿಗೊಮ್ಮೆ ನಮಸ್ಕರಿಸಬೇಕು ಅನ್ನಿಸಿ ಮತ್ತೆ ಹಿಂದಿರುಗಿ ಬಂದು ಕೈ ಜೋಡಿಸಿದಳು. ಆ ಹಿರಿಯರು "ಹತ್ತು ಗಂಡು ಮಕ್ಕಳನ್ನು ಹೆತ್ತು ಸುಖವಾಗಿ ಬಾಳು ತಾಯಿ" ಅಂದರು. ಜೋಡಿಸಿದ್ದ ಕೈಯನ್ನು ಇಳಿಸಿ " ಯಾಕೆ ಅಂಕಲ್, ಹೆಣ್ಣು ಮಗೂನ ಹೆತ್ರೆ ಸುಖವಾಗಿರೋಕೆ ಆಗಲ್ವಾ?" ಅಂತ ಪ್ರಶ್ನಿಸಿದಳು. ಒಮ್ಮೆ ಗಲಿಬಿಲಿಗೊಂಡ ಅವರು "ನೀನು ಸ್ತ್ರೀವಾದಿಯಾ?" ಅಂತ ಮತ್ತೆ ಪ್ರಶ್ನಿಸಿದರು. ಇವಳು " ಇಲ್ಲ, ನಾನು ಮಾನವತಾವಾದಿ" ಅಂತಂದು ಸ್ಟೇಜ್ ಇಳಿದಳು. ಅವಳ ದಿಟ್ಟತೆಗೆ, ಹೆಣ್ಣಿಂದ ಅಸುಖ ಅನ್ನುವ ವಿವೇಚನಾರಹಿತ ಯೋಚನೆಯ ಹಿಂದಿರುವ ಮನಸ್ಥಿತಿಯ ಬಗ್ಗೆ ಅವಳಿಗಿರುವ ಸೂಕ್ಷ್ಮ ಅಸಹನೆಗೆ ಅವತ್ತು ಇಡೀ ವೇದಿಕೆ ತಲೆದೂಗಿತ್ತು.

ಹೀಗಿದ್ದ ಆ ಹುಡುಗಿ ಒಂದಿನ, ಕಾಲೇಜ್ ಪಕ್ಕದಲ್ಲಿರುವ ಕಾಲು ದಾರಿಯಲ್ಲಿ ನಡೆದು ಬರುವ ಜೂನಿಯರ್ ಹುಡುಗಿಯೊಬ್ಬಳನ್ನು ಚುಡಾಯಿಸಿದ ಅನ್ನುವ ಕಾರಣಕ್ಕಾಗಿ ಸ್ಟುಡೆಂಟ್ ಸೆಕ್ರೆಟರಿಗೆ ಇಡೀ ಕಾಲೇಜಿನ ಮುಂದೆ ಚೆನ್ನಾಗಿ ಝಾಡಿಸಿದಳು. ಆ ಹುಡುಗನೋ...? ಅವಕಾಶ ಸಿಕ್ಕಾಗೆಲ್ಲಾ ಪರಮ ಸಂಭಾವಿತನಂತೆ ಫೋಸ್ ಕೊಡುತ್ತಾ, ಆತ್ಮರತಿಗಾಗಿ ಒಂದಿಷ್ಟು ಹುಡುಗರ ಗ್ಯಾಂಗ್ ಕಟ್ಟಿಕೊಂಡು, ತನ್ನಲ್ಲಿ ಇಲ್ಲದಿರುವ ಗುಣಗಳು ಇದೆಯೆಂದು ಮತ್ತೊಬ್ಬರನ್ನು ನಂಬಿಸುತ್ತಾ ಕಾಲ ಕಳೆಯುತ್ತಿದ್ದ ಧೂರ್ತ. ಹೈಸ್ಕೂಲಿನಿಂದಲೂ ಅವನದೇ ಶಾಲೆಯಲ್ಲಿ ಓದಿದ ಆ ಹುಡುಗಿಗೆ ಅವನ ಧೂರ್ತತನದ ಬಗ್ಗೆ ಚೆನ್ನಾಗಿ ಗೊತ್ತಿದ್ದುದರಿಂದ ಆಕೆ ಇವಳನ್ನು ತಡೆಯಲು ತುಂಬಾ ಪ್ರಯತ್ನಪಟ್ಟಳು. ಆದ್ರೆ ನಮ್ಮ ಈ ಕಥಾನಾಯಕಿ ಅದ್ಯಾವುದನ್ನೂ ಲೆಕ್ಕಿಸದೆ ಎಲ್ಲರ ಮುಂದೆ ಅವನ ಮುಖದ ನೀರಿಳಿಸಿದ್ದಳು. ಆತನೂ ಅಷ್ಟೆ, ತಪ್ಪು ಒಪ್ಪಿಕೊಳ್ಳುವವನಂತೆ ತಲೆ ತಗ್ಗಿಸಿ "sorry sister" ಅಂದು ತನ್ನ ಬೈಕ್ ಸ್ಟಾರ್ಟ್ ಮಾಡಿ ಮನೆಗೆ ಮರಳಿದ್ದ. ಅಲ್ಲಿಗೆ ಎಲ್ಲವೂ ಮುಗಿಯಿತೆಂದು ಎಲ್ಲರೂ ಭಾವಿಸಿದ್ದರು.

ಆದ್ರೆ ಅದು ಅಷ್ಟಕ್ಕೆ ಮುಗಿದಿರಲಿಲ್ಲ. ಮರುದಿನ ಆಕೆ ಕಾಲೇಜಿಗೆ ಬರುವ ಹೊತ್ತಿಗೆ, ಬ್ಲ್ಯಾಕ್ ಬೋರ್ಡ್, ಟಾಯ್ಲೆಟ್ ಗೋಡೆ, ಪ್ರಯೋಗಾಲಯ, ಕ್ಯಾಂಪಸ್ ನ ಮರಗಳು, ಕ್ಲಾಸ್ ರೂಮ್ ಕಾರ್ನರ್ ಅಂತ ಸಿಕ್ಕ ಸಿಕ್ಕಲ್ಲೆಲ್ಲಾ ಅವಳ ಬಗ್ಗೆ, ಅವಳ ನಡತೆಯ ಬಗ್ಗೆ, ಅವಳಿಗೂ ಅವಳ ಮೆಚ್ಚಿನ ಸರ್ ಗೂ ಇಲ್ಲದ ಸಂಬಂಧ ಕಲ್ಪಿಸಿ ಅಸಹ್ಯವಾಗಿ ಯಾರೋ ಗೀಚಿ ಬಿಟ್ಟಿದ್ದರು. ಹಿಂದಿನ ದಿನ ನಡೆದುದರ ಪರಿಣಾಮವಿದು ಅನ್ನುವುದು ಅರ್ಥವಾಗಲು ಆಕೆಗೆ ಹೆಚ್ಚು ಸಮಯವೇನೂ ಹಿಡಿಯಲಿಲ್ಲ. ಆದ್ರೆ ಇಂಥವರದೇ ಕೆಲಸವೆಂದು ಬೊಟ್ಟು ಮಾಡಿ ತೋರಿಸಲು ಆಕೆಯ ಬಳಿ ಯಾವುದೇ ಸಾಕ್ಷಿಗಳಿರಲಿಲ್ಲ.

ಇಷ್ಟಾದರೂ ಆಕೆ ಧೃತಿಗೆಡಲಿಲ್ಲ. ಎಲ್ಲಾ ಮುಗಿದೇ ಹೋಯಿತು ಎಂಬಂತೆ ಅಳುತ್ತಾ ಕೂರಲಿಲ್ಲ. ಇಷ್ಟೆಲ್ಲಾ ಆಗಿದ್ದು ನನ್ನಿಂದಲೇ ಅಂತ ಅಳುತ್ತಿದ್ದ ಜೂನಿಯರ್ ಹುಡುಗಿಯ ಬಳಿ ಹೋಗಿ "ಬರ್ದಿರೋದು ನನ್ನ ಬಗ್ಗೆ, ನಾನೇ ಆರಾಮವಾಗಿರುವಾಗ ನೀನೇಕೆ ಸುಮ್ಮನೆ ತಪ್ಪೆಲ್ಲಾ ನಿನ್ನದು ಅನ್ನುವಂತೆ ಅಳ್ತಿದ್ದಿಯಾ? Be a brave girl" ಅಂದು ಬೆನ್ನು ತಟ್ಟಿ ಎದ್ದು ಹೋಗಿ ಪ್ರತಿ ಗೋಡೆ, ಕಾರ್ನರ್, ಮರಗಳ ಮೇಲಿದ್ದ ಬರಹಗಳನ್ನು ಒಂದಕ್ಷರಾನೂ ಬಿಡದೆ ಓದಿ, ಏನೂ ಆಗೇ ಇಲ್ಲವೆಂಬಂತೆ ನಸುನಗುತ್ತಾ ಕ್ಲಾಸಿಗೆ ನಡೆದುಬಂದಳು. ಸದಾ ಆತ್ಮವಿಶ್ವಾಸದಿಂದಿರುವ ಈ ಹುಡುಗಿಯ ಕಣ್ಣಲ್ಲಿ ಇವತ್ತಾದರೂ ಹನಿ ಜಿನುಗಿರಬಹುದಾ ಅಂತ ಅವಲೋಕಿಸಿದರೆ, ಊಹೂಂ, ಅಲ್ಲಿ ನೀರ ಪಸೆಯೂ ಇರಲಿಲ್ಲ. ಅವಳು ಎಂದಿಗಿಂತಲೂ ತುಸು ಹೆಚ್ಚೇ ಅನ್ನುವಷ್ಟು ದೃಢವಾಗಿದ್ದಳು.

ಅಷ್ಟೇ ಅಲ್ಲ, ಬ್ರೇಕ್ ಆಗುತ್ತಿದ್ದಂತೆ ಸ್ಟಾಫ್ ರೂಮಿಗೆ ಹೋಗಿ, ತಲೆ ಮೇಲೆ ಕೈ ಹೊತ್ತು ಕುಳಿತ ತನ್ನ ಉಪನ್ಯಾಸಕರನ್ನು ಕುರಿತು " ಯಾರೋ ಅವಿವೇಕಿಗಳು ಏನೋ ಗೀಚಿದ್ರು ಅಂತ ನೀವ್ಯಾಕೆ ಸರ್ ತಲೆಕೆಡಿಸ್ಕೋತೀರಾ? ಅವ್ರೆಲ್ಲಾ ಮುಂದೆ ನಿಂತು ಹೋರಾಡೋಕೆ ಧೈರ್ಯವಿಲ್ಲದ ಹೇಡಿಗಳು. ಅಂಥವರಿಗೆ ನಾವ್ಯಾಕೆ ಬೆಲೆ ಕೊಡ್ಬೇಕು?" ಅಂದಳು. ತನ್ನ ಇಮೇಜ್ಗಿಂತಲೂ ಅವಳೇನು ಮಾಡಿಕೊಳ್ಳುತ್ತಾಳೋ ಅಂತ ಹೆದರಿದ್ದ ಅವರು ಇವಳ ಮಾತು ಕೇಳಿ "ನಿಂಗೇನೂ ಅನ್ನಿಸುವುದೇ ಇಲ್ವಾ? ಸಮಾಜ ನಿನ್ನ ಬಗ್ಗೆ ಏನೇನೋ ಮಾತಾಡಿಬಿಡುತ್ತೆ ಅಂತ ಭಯವಾಗುವುದಿಲ್ವಾ?" ಅಂತ ಕೇಳಿದರು. ಅವಳು "ನನ್ನ ಆತ್ಮಶುದ್ಧಿಯ ಬಗ್ಗೆ ನಂಗೆ ಅನುಮಾನಗಳೇ ಇಲ್ಲದಿರುವಾಗ ಯಾರೋ ಏನೋ ಅಂದ ಮಾತ್ರಕ್ಕೆ ನಾನೇಕೆ ಭಯಪಟ್ಟುಕೊಳ್ಳಬೇಕು? ನಂಗೆ ಯಾಕಾದ್ರೂ ಏನೇನೋ ಅನ್ನಿಸಬೇಕು?" ಅಂತ ಮರು ಪ್ರಶ್ನಿಸಿದಳು. ಮತ್ತು ಆ ಮೂಲಕವೇ ತಾನೇನೂ ಮಾಡಿಕೊಳ್ಳುವುದಿಲ್ಲ ಅಲ್ಲಿದ್ದ ಎಲ್ಲರಿಗೂ ಪರೋಕ್ಷವಾಗಿ ತಿಳಿಸಿ ಹೊರಬಂದಳು.

ಇತ್ತ, ಇನ್ನೇನು ಅಳುತ್ತಾಳೆ, ರಂಪ ಮಾಡುತ್ತಾಳೆ, ’ನನ್ನಿಂದ ತಪ್ಪಾಯ್ತು, ಕ್ಷಮಿಸಿ’ ಅಂತ ನಮ್ಮ ಮುಂದೆ ನಿಂತು ಗೋಗರೆಯುತ್ತಾಳೆ, ಗೋಡೆಯ ಮೇಲಿನ ಅಷ್ಟೂ ಬರಹಗಳನ್ನು ಅಳಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಾಳೆ ಅಂತೆಲ್ಲಾ ಮನಸ್ಸಲ್ಲೇ ಮಂಡಿಗೆ ಮೆಲ್ಲುತ್ತಿದ್ದವರಿಗೆ, ಹಾಗೇನೂ ಆಗದೆ, ಆಕೆ ಆ ಘಟನೆಗೂ ನನಗೂ ಸಂಬಧವೇ ಇಲ್ಲ ಅನ್ನುವಂತೆ ನಡೆದುಕೊಂಡದ್ದು ನುಂಗಲಾರದ ತುತ್ತಾಗಿತ್ತು. ಅವಳ ರೇಗಿಸಬೇಕೆಂದುಕೊಂಡಿದ್ದ, ತಮ್ಮ ಅಹಂಕಾರದ ಮುಂದೆ ಅವಳನ್ನು ಮಂಡಿಯೂರಿಸಬೇಕೆಂದು ಕೊಂಡಿದ್ದ, ಇನ್ನೆಂದೂ ಅವಳು ನಮ್ಮನ್ನು ಪ್ರಶ್ನಿಸಿದಂತೆ ಮಾಡಬೇಕು ಅಂದುಕೊಂಡಿದ್ದ ಯಾವ ಅವಕಾಶಗಳನ್ನು ಆಕೆ ಅವರಿಗೆ ಒದಗಿಸಿರಲಿಲ್ಲ. ಅತ್ಯಂತ ಪ್ರಬುದ್ಧವಾಗಿ ಪರಿಸ್ಥಿತಿಯನ್ನು ನಿರ್ವಹಿಸಿದ ಅವಳು ’ನಿಮ್ಮ ಅಹಂಕಾರಕ್ಕೆ ತಲೆಬಾಗುವಷ್ಟು ದುರ್ಬಲ ವ್ಯಕ್ತಿತ್ವವಲ್ಲ ನನ್ನದು’ ಅನ್ನುವ ಸಂದೇಶವನ್ನು ತನ್ನ ಉದಾಸೀನತೆಯ ಮೂಲಕವೇ ರವಾನಿಸಿದ್ದಳು.

ಆದ್ರೆ ಇನ್ನೇನು ಅವತ್ತಿನ ಕೊನೆಯ ಅವಧಿ ಮುಗಿಯಲು ಹತ್ತು ನಿಮಿಷಗಳಿವೆ ಅನ್ನುವಾಗ ಕಾಲೇಜ್ ಮ್ಯಾನೇಜರ್ ಅವಳನ್ನು ತನ್ನ ಛೇಂಬರ್ ಗೆ ಕರೆಸಿಕೊಂಡು "ನೋಡಮ್ಮಾ, ಪೊಲೀಸ್, ಕೇಸು, ಕೋರ್ಟ್, ಕಛೇರಿ ಅಂತೆಲ್ಲಾ ಹೋದ್ರೆ ಕಾಲೇಜಿನ ಪ್ರತಿಷ್ಠೆಗೆ ಕುಂದು. ಹಾಗಾಗಿ ಈ ಪ್ರಕರಣ ಠಾಣೆ ಮೆಟ್ಟಿಲು ಹತ್ತುವುದು ಬೇಡ. ನಾವೇ ಆಂತರಿಕ ತನಿಖೆ ಮಾಡಿ ತಪ್ಪಿತಸ್ಥರನ್ನು ಡಿಬಾರ್ ಮಾಡುತ್ತೇವೆ" ಅಂತ ಅವಳು ಠಾಣೆಯ ಮೆಟ್ಟಿಲು ಹತ್ತಬಾರದೆಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಕಾಲೇಜಿನ ಪ್ರತಿಷ್ಠೆಗೋಸ್ಕರ ಒಬ್ಬ ಹೆಣ್ಣಿನ , ಅದೂ ತನ್ನದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಮಾನವನ್ನೂ ಪಣಕ್ಕಿಡಲು ಸಿದ್ಧವಿರುವ ಅವರ ವ್ಯಾಪಾರೀ ಮನೋವೃತ್ತಿಯ ಬಗ್ಗೆ ಹೊಟ್ಟೆಯಾಳದಿಂದ ಎದ್ದು ಬಂದ ಅಸಹ್ಯವನ್ನು ಸಾಧ್ಯವಾದಷ್ಟು ಅದುಮಿಡಲು ಪ್ರಯತ್ನಿಸುತ್ತಾ " ಆಂತರಿಕ ತನಿಖೆಗಳೆಂಬ ನಾಟಕಗಳೇ ಬೇಡ ಸರ್. ನನ್ನ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಮೂಲಕ ಅವರನ್ನು ಪ್ರಶ್ನಿಸುವ ಮನಸ್ಥಿತಿ ಇರುವವರೇ ಇಲ್ಲವಾಗಬೇಕು ಅನ್ನುವುದೇ ಅವರ ಉದ್ದೇಶವಾಗಿತ್ತು. ಅದೇ ಅವರಿಂದ ಸಾಧ್ಯವಾಗಿಲ್ಲ ಅಂದಮೇಲೆ ನಾನೇಕೆ ಹೊಲಸನ್ನು ಮೈಮೇಲೆ ಎರಚಿಕೊಳ್ಳುವ ಅಸಹ್ಯ ಮಾಡಿಕೊಳ್ಳಲಿ? ಆದ್ರೆ ಸರ್, ಹೀಗೆ ಹೆಣ್ಣೊಬ್ಬಳ ನಡತೆಯ ಬಗ್ಗೆ ಹೀಗೆಲ್ಲಾ ಗೀಚಿ ತಮ್ಮ ಮನಸ್ಸಿನ ವಿಕೃತಿ ಹೊರಹಾಕಿದವರ ಬಗ್ಗೆ ಒಂದು ಮಾತೂ ಆಡದೆ ಕಾಲೇಜಿನ ಪ್ರತಿಷ್ಠೆ ಅಂತ ನನಗೇ ಎಚ್ಚರಿಕೆ ನೀಡುತ್ತಿದ್ದೀರಲ್ಲಾ? ಒಂದು ವೇಳೆ ಇದೇ ರೀತಿ ನಿಮ್ಮ ಮನೆಯಲ್ಲೊಬ್ಬರ ಬಗ್ಗೆ ಹೀಗೆ ಯಾರೋ ಸಾರ್ವಜನಿಕವಾಗಿ ಕೆಸರೆರೆಚಿದರೆ ಆಗಲೂ ನೀವು ಇಷ್ಟೇ ನಿಷ್ಠುರವಾಗಿ ಮಾತಾಡುತ್ತಿದ್ದಿರಾ?" ಎಂದು ಪ್ರಶ್ನಿಸಿ ಅವರ ಛೇಂಬರ್ ನಿಂದ ಹೊರಗಡಿಯಿಟ್ಟಳು.

ಹಾಗೆ ಬಂದವಳು ಕಾಲೇಜು ನಿರ್ಮಾನುಷ್ಯವಾಗಿದೆ ಅನ್ನುವುದನ್ನು ಖಚಿತಪಡಿಸಿಕೊಂಡು ಅಲ್ಲೇ ಇದ್ದ ಲೇಡೀಸ್ ರೂಮ್ ಹೊಕ್ಕು ಒಳಗಿಂದ ಅಗುಳಿ ಹಾಕಿ ಬೋರಿಟ್ಟು ಅಳತೊಡಗಿದಳು. ಬೆಳಗ್ಗಿನಿಂದ ತಡೆಹಿಡಿದುಕೊಂಡಿದ್ದ ಕಣ್ಣೀರು ಬಿರುಸು ಭರಿಸಲಾಗದೆ ಇನ್ನು ಸಾಧ್ಯವೇ ಇಲ್ಲ ಎಂಬಂತೆ ಎರಡೂ ಕಣ್ಣುಗಳಿಂದ ದಳದಳನೆ ಉರುಳತೊಡಗಿತು. ಇಡೀ ಕಾಲೇಜಲ್ಲಿ brave girl ಅಂತ ಅನ್ನಿಸಿಕೊಂಡವಳು ’ತನ್ನನ್ನು ಸಾಂತ್ವನಿಸಲು ಹೆಗಲೊಂದು ಇರುತ್ತಿದ್ದರೆ...?’ ಅಂತ ಒಂಟಿಯಾಗಿ ಹಂಬಲಿಸತೊಡಗಿದಳು. ’ಇಷ್ಟು ದೊಡ್ಡ ಪ್ರಪಂಚದಲ್ಲಿ ನಾನು ಎಷ್ಟೊಂದು ಒಂಟಿ, ಕೆಲವರ ಪಾಲಿಗೆ ನಾನು "ಅವಳಾ? ಸಹಿಸ್ಕೋತಾಳೆ ಬಿಡು" ಅನ್ನುವ ನಿರ್ಲಕ್ಷ್ಯ, ಇನ್ನು ಕೆಲವರ ಪಾಲಿಗೆ "ಎಲ್ಲವನ್ನೂ ಎದುರಿಸುವ ಧೈರ್ಯ ದೇವರು ಅವಳಿಗೆ ನೀಡಿದ್ದಾನೆ, ನಮಗೇಕೆ ಅವಳ ಉಸಾಬರಿ?" ಅನ್ನುವ ಮತ್ಸರ. ಆದ್ರೆ ನನಗೇನು ಬೇಕು ಅನ್ನುವುದನ್ನು ಕೇಳುವ ಒಂದು ಜೀವವೂ ನನ್ನ ಜೊತೆಗಿಲ್ಲ. ಅಳಬೇಕೆನಿಸಿದಾಗೆಲ್ಲಾ ಅಳಲಾಗದ, ಏನೇ ಆದರೂ ಏನೂ ಆಗಿಲ್ಲವಂಬತೇ ಇರಬೇಕಾದ ನನ್ನ ಅಸಹಾಯಕತೆ, ಧೈರ್ಯ, ಸ್ಥೈರ್ಯ, ಬುದ್ಧಿವಂತಿಕೆಗಳಂತಹ ದೊಡ್ಡ ದೊಡ್ದ ಮಾತುಗಳಾಚೆ ನಾನೂ ಮನುಷ್ಯಳೇ, ಎಲ್ಲರಂತೆ ನನಗೂ ನೋವಾಗುತ್ತದೆ, ನನ್ನೊಳಗೂ ವಿಷಾದಗಳಿವೆ ಅನ್ನುವ ಸತ್ಯ ಯಾರೂ ಅರ್ಥಮಾಡಿಕೊಳ್ಳುವುದೇ ಇಲ್ಲ’ ಅಂತೆಲ್ಲಾ ಅವಳಿಗೆ ಅನ್ನಿಸತೊಡಗಿತು. ಮರುಕ್ಷಣ, ’ಹೀಗೆಲ್ಲಾ ಒಂಟಿಯಾಗಿ ಕೂತು ಅತ್ತರೆ ನನ್ನೆಲ್ಲಾ ಸಮಸ್ಯೆಗಳು ಬಗೆಹರಿಯುತ್ತಾ? ಹೀಗೆ ಆತ್ಮವಿಶ್ವಾಸ ಕಳ್ಕೊಂಡು ಮೂಲೆ ಸೇರಿ ಅತ್ರೆ ನಗುವವರ ಮುಂದೆ ಎಡವಿ ಬಿದ್ದಂತಾಗುದಿಲ್ಲವೇ? ಇಷ್ಟಕ್ಕೂ ನಾನು ತಪ್ಪು ಮಾಡಿಲ್ಲ ಅಂದಮೇಲೆ ಅಳುವುದಾದರೂ ಯಾಕೆ? ಕೇವಲ ಗೋಡೆಯ ಮೇಲಿನ ಬರಹ ನನ್ನ ಸ್ಥಿರತೆಯನ್ನೇ ಕದಡಿ ಹಾಕುವಷ್ಟು ಶಕ್ತಿಯುತವಾಗಿದೆಯೇ?  ಅಂದ್ರೆ ಸಣ್ಣದೊಂದು ಸವಾಲನ್ನು ಎದುರಿಸಲಾರದಷ್ಟು ನನ್ನ ಆಂತರ್ಯ ಬಲಹೀನವಾಗಿದೆಯಾ? ಅಥವಾ ಇವತ್ತಿನ ಘಟನೆಯ negative waves  ನನ್ನ ಮೇಲೆ ಈ ರೀತಿ ಪ್ರಭಾವ ಬೀರುತ್ತಿದೆಯೇ? ಇಲ್ಲ, ಹಾಗಾಗಬಿಡಕೂಡದು, ಯಾವ ಕಾರಣಕ್ಕೂ ನನ್ನ ವ್ಯಕ್ತಿತ್ವ ದುರ್ಬಲವಾಗಬಾರದು’ ಅಂತಂದುಕೊಂಡು ಕಣ್ಣೀರು ಒರೆಸಿ ಮತ್ತೆ ಹಳೆ ಆತ್ಮವಿಶ್ವಾಸದಿಂದ ಕೋಣೆಯಿಂದ ಹೊರಬಂದಳು. ಕ್ಲಾಸ್ ರೂಮಿಗೆ ಹೋಗಿ ತನ್ನ ಬ್ಯಾಗ್ ಎತ್ತಿಕೊಂಡು, ಗೋಡೆ ಬರಹಗಳನ್ನು ಅಳಿಸಲು ಪೈಂಟರ್ ಗಳಿಗೆ ನಿರ್ದೇಶನ ನೀಡುತ್ತಿದ್ದ ಕಾಲೇಜ್ ಕ್ಲರ್ಕ್ ಬಳಿ ಹೋಗಿ "ಅಣ್ಣಾ, ಅರ್ಜೆಂಟೇನೂ ಇಲ್ಲ, ನಿಧಾನಕ್ಕೆ ಮಾಡಿ ಸಾಕು. ತುಂಬಾ ಹೊತ್ತಾಯ್ತು. ನಿಮ್ಮನೆಯಲ್ಲಿ ನಿಮಗೋಸ್ಕರ ಕಾಯುವವವರನ್ನು ಇನ್ನೂ ಕಾಯಿಸಬೇಡಿ. ಮನೆಗೆ ಹೋಗಿ" ಅಂತಂದು ಮುಗಳ್ನಗೆ ಬೀರಿ ಅಲ್ಲಿಂದ ಹೊರಟು ಹೋದಳು.  

Now, my dear readers.... ಇಷ್ಟು ಓದಿಯಾದ ಮೇಲೆ ನಿಮ್ಮಲ್ಲಿ ಕೆಲವರಿಗಾದರೂ 'ಅರೆ! ಆ ಹುಡುಗಿಯಂಥವರು ಇಲ್ಲೇ ಎಲ್ಲೋ ಇದ್ದಾರಲ್ಲಾ' ಅಂತನ್ನಿಸಿರಬಹುದು. ಹಾಗೆ ಅನ್ನಿಸಿದ್ದೇ ಆದಲ್ಲಿ ಬನ್ನಿ, ಒಂದೆರಡು ನಿಮಿಷ ಕೂತು ಮಾತಾಡೋಣ, ಜೊತೆಗೆ ಒಂದು ಕಪ್ ಟೀ/ಕಾಫಿ ಇರಲಿ ಅಂತಂದರೂ ನನ್ನದೇನೂ ಅಭ್ಯಂತರವಿಲ್ಲ.

ನಿಜ ನಮ್ಮ, ನಿಮ್ಮೆಲ್ಲರ ನಡುವೆ 'ದಿಟ್ಟೆ' ಅಂತನ್ನಿಸಿಕೊಂಡು ಬದುಕುತ್ತಿರುವ ಹುಡುಗಿಯರಿರುತ್ತಾರೆ . ತಾನುಂಟು, ಮೂರು ಲೋಕವುಂಟು ಎಂಬಂತಿರುತ್ತಾರೆ ಅವರು. ತುಂಬಾ ದೂರವೇನೂ ಹೋಗಬೇಕಿಲ್ಲ, 'ಆಕೆ' ನಮ್ಮದೇ ಮನೆ ಮಗಳಾಗಿರಬಹುದು, ನಮ್ಮ ಸ್ನೇಹಿತನ/ತೆಯ ತಂಗಿಯೋ ಅಕ್ಕನೋ ಆಗಿರಬಹುದು, ನಮ್ಮ ಕಣ್ಣೆದುರಲ್ಲೇ ಬೆಳೆದ ಪಕ್ಕದ ಮನೆಯ ಪುಟಾಣಿಯಾಗಿರಬಹುದು ಇಲ್ಲ ನಮ್ಮ ಪತ್ನಿಯೋ,ಗೆಳತಿಯೋ, ಪ್ರೇಯಸಿಯೋ, ನಾದಿನಿಯೋ, ಅತ್ತಿಗೆಯೋ, ಅಮ್ಮನೋ,  ಸಂಬಂಧಿಕಳೋ ಆಗಿರಬಹುದು. ಆಕೆ ಎಲ್ಲವನ್ನೂ, ಎಲ್ಲರನ್ನೂ ಎದುರಿಸುತ್ತಾಳೆ, ಸಹಿಸಿಕೊಳ್ಳುತ್ತಾಳೆ ಅಂದ್ರೆ ಅವಳಿಗೆ ಭಾವನೆಗಳೇ ಇಲ್ಲ, ನೋವಾಗುವುದೇ ಇಲ್ಲ ಎಂದರ್ಥವಲ್ಲ. ಬದಲಾಗಿ ಆಕೆ ನೋವಲ್ಲೂ ನಗುತ್ತಾಳೆ,  ತಾನಗಾಗುವ ನೋವು ತನ್ನವರ ಕಣ್ಣಲ್ಲಿ ನೀರು ತರಿಸಬಾರದು ಎಂದು ತನ್ನ ನೋವನ್ನು ಬಚ್ಚಿಟ್ಟುಕೊಳ್ಳುತ್ತಾಳೆ ಎಂದರ್ಥ. ಎಂತಹ ಧೀಶಕ್ತಿ ಇರುವ ಹುಡುಗಿಯಾದರೂ ಕೆಲವೊಮ್ಮೆ ಮತ್ತೊಬ್ಬರ ಆಸರೆಗಾಗಿ ಕೈ ಚಾಚುತ್ತಾಳೆ, ಒಂದು ಪುಟ್ಟ ಕಂಫರ್ಟ್ ಗಾಗಿ ಹಂಬಲಿಸುತ್ತಾಳೆ. ಆಗ 'ನಿನ್ನ ಯೂಸ್ಲೆಸ್ ಧೈರ್ಯ ಈಗೆಲ್ಲಿ ಹೋಯಿತು?' ಅಂತ ಹಂಗಿಸದಿರೋಣ. ಅವಳ ಮನಸ್ಥಿತಿಯನ್ನು ಅರ್ಥಮಾಡ್ಕೊಂಡು ಅವಳು ಬಯಸುವ ಆಸರೆ, ಕಂಫರ್ಟ್ ಕೊಡಲು ಪ್ರಯತ್ನಿಸೋಣ, ಅದು ಸಾಧ್ಯವಾಗದಿದ್ದರೆ ಅವಳನ್ನು ಅವಳಷ್ಟಕ್ಕೆ ಬಿಟ್ಟುಬಿಡುವ. ತನ್ನನ್ನು ತಾನೇ ಸಂಭಾಳಿಸಿಕೊಳ್ಳುತ್ತಾಳವಳು. ಅದು ಬಿಟ್ಟು ಹಂಗಿಸಿ, ರೇಗಿಸಿ 'ಅವಳತನ'ದ ಹತ್ಯೆ ಮಾಡಹೊರಡುವುದು ಬೇಡ. ಹಾಂ! ಕೊನೆಯದಾಗಿ ಮತ್ತೊಂದು ಮಾತು, ನಮ್ಮ ನಡುವೆ ಇರುವ ಇಂತಹ 'ದಿಟ್ಟ ಹುಡುಗಿ'ಯರು ಕಣ್ಣೆದುರಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಹೊರಟರೆ 'ನಿನಗೇಕೆ ಊರ ಉಸಾಬರಿ' ಅಂತಂದು ಅವಳ ಸದುದ್ದೇಶದ ಪ್ರಯತ್ನಕ್ಕೆ ತಣ್ಣೀರೆರಚಿ ಅವಳ ಆತ್ಮಾರ್ಥತೆಯ ಭಂಜಕರಾಗದಿರೋಣ

ಸೋಮವಾರ, ಅಕ್ಟೋಬರ್ 26, 2015

"ಹುಡುಗರೇ ಹೀಗೆ...." ಅನ್ನುವ ನಿರ್ಧಾರಕ್ಕೆ ಬರುವ ಮುನ್ನ



 "ನೀವು ಹುಡುಗರೇ ಹೀಗೆ, ಒಪ್ಪಿಕೊಳ್ಳುವವರೆಗೂ ನಮ್ಮ ಹಿಂದೆ ಮುಂದೆ ಸುತ್ತುತ್ತಾ, ನೀನೆ ಪ್ರಾಣ, ನೀನೇ ಜೀವ, ನೀನಿಲ್ಲದೆ ಬದುಕಲಾರೆ, ನಿನಗೋಸ್ಕರ ಸೂರ್ಯ, ಚಂದ್ರರನ್ನೂ ಕೈಲಿ ಹಿಡಿದು ತರಬಲ್ಲೆ, ಹರಿಯೋ ನದಿಯನ್ನು ನಿಲ್ಲಿಸಬಲ್ಲೆ, ನೀನು ಸಂಗಾತಿಯಾದರೆ ಒಂದಿಷ್ಟು ದಿನಗಳಾದರೂ ಹೆಚ್ಚಿಗೆ ಬದುಕಬಲ್ಲೆ. ಒಪ್ಪಿಕೋ ಹುಡುಗಿ ಅಂತೆಲ್ಲಾ ನಮ್ಮನ್ನು ಮರುಳು ಮಾಡುತ್ತೀರಿ. ಒಮ್ಮೆ ಒಪ್ಪಿಕೊಂಡರೋ...? ಮುಗಿಯಿತು.  Taken for granted  ಅನ್ನೋ ರೀತಿ ವರ್ತಿಸತೊಡಗುತ್ತೀರಿ. ಹಿಂದೆ ಮಾಡಿದ್ದ ಆಣೆ-ಪ್ರಮಾಣ, ನಡುರಾತ್ರಿಯ ಗೋಗರೆತಗಳು, ಸಿಹಿ ಮುಂಜಾನೆಯ ಶುಭಾಶಯಗಳು, ಮುಸ್ಸಂಜೆಯ ಕಾಳಜಿಗಳು ಎಲ್ಲಾ ಮಾಯವಾಗಿಬಿಡುತ್ತದೆ. ’ಅವಳಾ..?’ ಅನ್ನುವ ನಿರ್ಲಕ್ಷ್ಯ ಜೊತೆಯಾಗಿಬಿಡುತ್ತದೆ. ಗೆಳೆಯ ಅಂತಲೋ,  cousine brother  ಅಂತಲೋ ಇನ್ನೊಬ್ಬ ಹುಡುಗನ ಜೊತೆ ಮಾತಾಡಿದರಂತೂ ಮುಗಿದೇ ಹೋಯಿತು, ಅಕಾರಣ ನಮ್ಮ ಕ್ಯಾರಕ್ಟರನ್ನೇ ಸಂಶಯಿಸುತ್ತೀರಿ. ಅಲ್ಲಿಗೆ ನಿಮ್ಮ ಮೇಲೆ ನಾವು ಹುಡುಗಿಯರು ಅಮಾಯಕವಾಗಿ ಇಟ್ಟ ನಂಬುಗೆ, ಪ್ರೀತಿ ಬಿರುಕುಬಿಡುತ್ತದೆ. ನಿಮ್ಮನ್ನು ನಂಬಿದ್ದ ನಮ್ಮ ಮೂರ್ಖತನದ ಬಗ್ಗೆ ನಮಗೇ ಅಸಹ್ಯ ಹುಟ್ಟಿ ಬಿಡುತ್ತದೆ. ಅಲ್ಲಿಂದಾಚೆ ಬದುಕು ನೀರಸ ಅನಿಸತೊಡಗೊತ್ತದೆ" ಅಂತೆಲ್ಲಾ ನಾವು ಹುಡುಗಿಯರು ಆಗಾಗ ಹುಡುಗರ ಮೇಲೆ, ಅವರ ಪ್ರೀತಿಯ ಮೇಲೆ ಆರೋಪಗಳ ದೊಡ್ಡ ಪಟ್ಟಿಯನ್ನೇ ಹೊರಿಸುತ್ತಿರುತ್ತೇವೆ.

ಅದ್ರೆ ನಿಜಕ್ಕೂ ಹುಡುಗರು ಪ್ರೀತಿ ಒಪ್ಪಿಕೊಳ್ಳುವವರೆಗೆ ಒಂದು ರೀತಿ, ಆಮೇಲೆ ಒಂದು ರೀತಿ ಇರುತ್ತಾರಾ? ವಿನಾಕಾರಣ ಪ್ರೀತಿಸಿದವಳನ್ನು ಸಂಶಯಿಸತೊಡಗುತ್ತಾರಾ?  ಪ್ರೀತಿ, ನಂಬಿಕೆ ಬಿರುಕು  ಬಿಡಲು ಹುಡುಗರು ಮಾತ್ರ ಕಾರಣವಾ? ನಾವು ಹುಡುಗಿಯರು ನಿಜಕ್ಕೂ  ಹೇಳಿಕೊಳ್ಳುವಷ್ಟು ಅಮಾಯಕರಾ? ನಾವೆಂದೂ ಕೃತಿಮರಾಗುವುದೇ ಇಲ್ಲವೇ? ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ಈ ಎಲ್ಲಾ ಪ್ರಶ್ನೆಗಳ ಉತ್ತರ ’ಅಲ್ಲ’ ಅನ್ನುವುದೇ ಆಗಿರುತ್ತದೆ.

ಬದುಕು ಬಾಲ್ಯದಿಂದ ಹರಯಕ್ಕೆ ಮಗ್ಗುಲು ಬದಲಿಸಿದಾಗ ಪ್ರತಿ ಹುಡುಗನ ಎದೆಯಲ್ಲೂ ಹೂವರಳುತ್ತದೆ, ಕೋಗಿಲೆ ಹಾಡತೊಡಗುತ್ತದೆ, ಬಣ್ಣಬಣ್ಣದ ಕನಸುಗಳು ಗಾಳಿಪಟವಾಡತೊಡಗುತ್ತವೆ. ಅವನೆದೆಯ ಅಷ್ಟೂ ತಲ್ಲಣಗಳಿಗೆ ಮುಕುಟವಿಟ್ಟಂತೆ,  ಸಂಜೆಯ ವಾಕ್ ಗೆ, ನೀರವ ರಾತ್ರಿಯ ಪಿಸುಮಾತುಗಳಿಗೆ, ಬಿರುಮಳೆಯಲ್ಲಿ ಒಂಟಿ ಕೊಡೆಯಡಿ ನಡೆಯೋಕೆ, ನಿದ್ರೆಯಿಂದ ಏಳುವ ಮುನ್ನವೇ  Good morning  ಹೇಳೋಕೆ,  photo ನೋಡ್ಕೊಂಡು miss you ಕಣೇ ಅನ್ನೋಕೆ, ಅಂಗೈಯಲ್ಲಿ ಅಂಗೈಯನ್ನಿಟ್ಟು ಕನಸು ಕಾಣೋಕೆ,  ಪರಸ್ಪರರ ಕಣ್ಣೋಟದಲ್ಲೇ ಕಳೆದುಹೋಗೋಕೆ, ಗೆಳೆಯರ ಮುಂದೆ ನನ್ನ ಹುಡುಗಿ ಕಣೋ ಅಂತ ಬೀಗೋಕೆ  ಅವಳು ಜೊತೆಗಿರಬೇಕು ಮತ್ತು ಹಾಗೆಲ್ಲಾ ಅವಳು ಜೊತೆಗಿರಬೇಕಾದರೆ ಅವಳ ಮುಂದೆ ನಿಂತು  I Love You   ಅಂದುಬಿಡಬೇಕು ಅಂತ ಅವನ ಮನಸಿನ ಸಹಸ್ರ ಝೇಂಕಾರದ ವೀಣೆ ಮಿಡಿಯತೊಡಗುತ್ತದೆ.

ಹಾಗಾದಾಗಲೆ ಇಡೀ ಕಾಲೇಜಲ್ಲೇ ಧೈರ್ಯವಂತ ಅನ್ನಿಸಿಕೊಂಡ ಹುಡುಗ ಅವಳೆದುರು ನಿಂತು ಮಾತಿಗೆ ತಡಬಡಾಯಿಸುವುದು, ಮಾತಿನ ಮಲ್ಲ ಅನ್ನಿಸಿಕೊಂಡವನು ಬೆಬ್ಬೆಬ್ಬೆ ಅನ್ನುವುದು, ವಿಪರೀತ ಮೌನಿ ಅನ್ನಿಸಿಕೊಂಡವನು ಮಾತು ಶುರುಹಚ್ಚಿಕೊಳ್ಳುವುದು, ಪರಮ ವಾಸ್ತವವಾದಿ ಭಾವುಕನಾಗುವುದು, ಭಾವುಕ ತತ್ವಜ್ಞಾನಿಯಾಗುವುದು. ಹುಡುಗಿ ಒಪ್ಪಿಕೊಂಡು ಬಿಡಲಿ ಅಂತ ಸೂರ್ಯ, ಚಂದ್ರ, ನದಿ, ಆಕಾಶ, ನಕ್ಷತ್ರ ಅಂತೆಲ್ಲಾ ಅಂಗೈಯಲ್ಲೆ ಅರಮನೆ ತೋರಿಸುತ್ತಾನೆ. ಕೊನೆಗೊಮ್ಮೆ ಹುಡುಗಿ ಒಪ್ಪಿಬಿಟ್ಟರೆ ಸ್ವರ್ಗಕ್ಕೆ ಮೂರು ಅಲ್ಲಲ್ಲಾ ಒಂದೇ ಗೇಣು ಅನ್ನುವಂತೆ ಸಂಭ್ರಮಿಸುತ್ತಾನೆ.

ಇಷ್ಟಾದಮೇಲೆ...? "ಇಷ್ಟಾದಮೇಲಾ? ಜೊತೆಗೊಂದು ಸೆಲ್ಫಿ ತಗೊಂಡು, ಅದನ್ನು ಪ್ರೊಫೈಲ್  ಪಿಕ್ಚರ್ ಗೆ ಹಾಕಿ,  'Love U Forever Baby '  ಅಂತ ಸ್ಟೇಟಸ್ ಬರ್ಕೊಂಡು, ನಾಲ್ಕು ಗೆಳೆಯರಿಗೆ ಪಾರ್ಟಿ ಕೊಡಿಸುತ್ತಾನೆ. ಅಲ್ಲಿಗೆ ಅವನ ಸಂಭ್ರಮ ಮುಗಿಯುತ್ತದೆ. ಆಮೇಲೆ ನಮ್ಮೆಡೆಗೆ ಅವನಿಗಿರುವುದು ಒಂದು ದಿವ್ಯ ನಿರ್ಲಕ್ಷ್ಯ ಮಾತ್ರ. ಅವನ ಪ್ರೀತಿ ಒಪ್ಪಿಕೊಂಡ ತಪ್ಪಿಗೆ ಆಗಾಗ ಮೊಬೈಲ್ ಪರೀಕ್ಷಿಸುತ್ತಾ ಅವನ ಕರೆ, ಮೆಸೇಜ್ ಗಳಿಗಾಗಿ ಕಾಯುತ್ತಾ ಕೂರಬೇಕು. ಆದ್ರೆ ನಮ್ಮ ಪ್ರೀತಿ, ಅವನೆಡೆಗಿನ ತುಡಿತ ಅವನಿಗೆಲ್ಲಿ ಅರ್ಥ ಆಗಬೇಕು? ಅವನು ಅವನದೇ ಪ್ರಪಂಚದಲ್ಲಿ ಮುಳುಗಿ ನಮ್ಮ ಇರವನ್ನೇ ಸಂಪೂರ್ಣವಾಗಿ ಮರೆತುಬಿಡುತ್ತಾನೆ" ಅಂತನ್ನುತ್ತಾ ಮಗುಮ್ಮಾಗುತ್ತಾರೆ ಹುಡುಗಿಯರು. ಆದ್ರೆ ವಾಸ್ತವ ಹಾಗಿರುವುದಿಲ್ಲ. ಅವನಿಗೆ ಅವನದೇ ಆದ ಜವಾಬ್ದಾರಿಗಳಿರುತ್ತವೆ. ತಮ್ಮನ ಓದು, ತಂಗಿ ಮದುವೆ, ಅಪ್ಪನ ವ್ಯಾಪಾರ, ವರದಕ್ಷಿಣೆ ಕಾರಣದಿಂದ ಗಂಡನ ಮನೆ ಬಿಟ್ಟು ಬಂದಿರುವ ಅಕ್ಕನ ಬದುಕು, ಅಮ್ಮನ ಆಸ್ಪತ್ರೆ ವಾಸ ಅಥವಾ ಗೆಳೆಯನ ಸಾಲ ಅಂತ ಅವನು ನೂರಾರು ಕಡೆ ಕಮಿಟ್ ಆಗಿರುತ್ತಾನೆ. ಇವೆಲ್ಲದರ ಮಧ್ಯೆ ಅವಳನ್ನು ಮನಸ್ವೀ ಪ್ರೀತಿಸಿರುತ್ತಾನೆ, ಅವಳು ಒಪ್ಪಿಕೊಳ್ಳುವವರೆಗೂ ಅವಳ ಹಿಂದೆ ಮುಂದೆ ಸುತ್ತುತ್ತಿರುತ್ತಾನೆ, ಕೊನೆಗೊಂದು ದಿನ ಅವಳನ್ನು ಒಪ್ಪಿಸಿಯೂ ಬಿಡುತ್ತಾನೆ. ಆಮೇಲೆ ಅವಳು ಒಪ್ಪಿದಳಲ್ಲಾ ಅನ್ನುವ ನಿರಾಳತೆ ಅವನನ್ನು ಆವರಿಸುತ್ತದೆ. ಆ ನಿರಾಳತೆಯನ್ನೇ ನಾವು ಹುಡುಗಿಯರು ’ನಿರ್ಲಕ್ಷ್ಯ’ ಅನ್ನುವುದು.

ತನ್ನ ಕಮಿಟ್ಮೆಂಟ್ ಗಳ ಮಧ್ಯೆಯೂ ಅವಳಿಗಾಗಿ ಸಮಯ ಮುಡಿಪಿಡುವ ಅವನ ಪ್ರೀತಿ,  ತನ್ನೆಲ್ಲಾ ಜವಾಬ್ದಾರಿಗಳ ಮಧ್ಯೆಯೂ ಕೆಲವು ಖಾಸಗಿ ಕ್ಷಣಗಳನ್ನು ಅವಳಿಗೋಸ್ಕರ ಆಸ್ಥೆಯಿಂದ ಎತ್ತಿಡುವ ಅವನ ಒಲವು, ಅವಳಿನ್ನೂ ಉಂಡಿದ್ದಾಳೋ ಇಲ್ಲವೋ ಅನ್ನುವ ಯೋಚನೆಯಲ್ಲೇ ಮಧ್ಯಾಹ್ನದ ಊಟವನ್ನು ಅರ್ಧಕ್ಕೇ ನಿಲ್ಲಿಸಿ ಎದ್ದುಬಿಡುವ ಅವನ ತಲ್ಲಣ, ಅವಳ ತಿಂಗಳ ನೋವಿಗೆ ಕಣ್ಣೀರಾಗುವ ಅವನ ಮಮತೆ, ತನ್ನ ಪ್ರತಿ ಪ್ರಾರ್ಥನೆಯಲ್ಲೂ ’ಅವಳಿಗೇನೂ ಆಗದಿರಲಿ’ ಅಂತ ವಿಶೇಷವಾಗಿ ಬೇಡಿಕೊಳ್ಳುವ ಅವನ ತುಡಿತ... ಯಾವುದೂ ಅವಳಿಗರ್ಥವಾಗುವುದೇ ಇಲ್ಲ ಅಥವಾ ಅರ್ಥವಾದರೂ ಅವನಿನ್ನೂ ತನ್ನ ಹಿಂದೆ ಮುಂದೆ ಸುತ್ತುತ್ತಲೇ ಇರಬೇಕು ಅನ್ನುವ ಅಹಮಿಕೆಯಲ್ಲಿ ಅವನ ಎಲ್ಲಾ ನವಿರು ಭಾವಗಳು ಅರ್ಥ ಕಳೆದುಕೊಳ್ಳುವಂತೆ ಮಾಡುತ್ತಾಳೆ.

ಇನ್ನು, ವಿನಾಕಾರಣ ನನ್ನನ್ನು ಸಂಶಯಿಸುತ್ತಾನೆ ಅಂತ ಪದೇ ಪದೇ ದೂರುವ ಹುಡುಗಿ ತಾನು ಬೇಕೆಂದೇ, ಅವನಿಗೆ ಅಸೊಯೆಯಾಗಲಿ ಎಂದೇ ಇನ್ನೊಬ್ಬ ಹುಡುಗನ ಜೊತೆ  ಅಗತ್ಯಕ್ಕಿಂತ ಹೆಚ್ಚು ಸಲಿಗೆಯಿಂದ ನಡೆದುಕೊಳ್ಳುವ ಬಗ್ಗೆ ಒಂದು ಮಾತೂ ಆಡುವುದಿಲ್ಲ. ಅವಳು ಅಂದುಕೊಂಡಂತೆ ಆತನಿಗೆ ಅಸೊಯೆ ಆದರೆ ಅಥವಾ ಇನ್ನಾವುದೋ ಅಂತದೇ ಭಾವ ಕಾಡಿದರೆ ಅವಳವನಿಗೆ 'ವಿಪರೀತ ಪೊಸಸಿವ್' ಅನ್ನುವ ಪಟ್ಟ ಕಟ್ಟುತ್ತಾಳೆ. ಹೋಗಲಿ ಬಿಡಿ, ಅವಳು ಇನ್ನೊಬ್ಬ ಹುಡುಗನ ಜೊತೆ ಮಾತಾಡಿದರೆ ಗಂಟೇನು ಹೋಗುತ್ತೆ ಅಂದುಕೊಂಡು ಅವನೇನಾದರೂ ಸುಮ್ಮನಿದ್ದುಬಿಟ್ಟರೆ  ತನ್ನ ಬಗ್ಗೆ ಅವನಿಗೆ ಕಾಳಜಿಯೇ ಇಲ್ಲ ಎಂದು ಮತ್ತೆ ದೂರುತ್ತಾಳೆ.

ಇಷ್ಟಕ್ಕೂ ಆತ ಅವಳನ್ನು ಸಂಶಯಿಸತೊಡಗುವುದಾದರೂ ಯಾವಾಗ? ತನ್ನ ಗೆಳೆಯರ ಪ್ರೀತಿಯ ಮೆಲ್ಲುಸಿರುಗಳು ಹಾಡಿರುವ ಸವಿಗಾನಗಳನ್ನೂ, ಈಗ ಮೂರನೆಯವರ ಪ್ರವೇಶದಿಂದ ಅದೇ ಪ್ರೀತಿ ಬಿಡುತ್ತಿರುವ ನಿಟ್ಟುಸಿರುಗಳನ್ನೂ ಕೇಳಿರುವ ಅವನಿಗೆ ಎಲ್ಲಿ ನನ್ನ ಪ್ರೀತಿಯೂ ಹಾಗೆಯೇ ಆಗುಬಿಡುತ್ತದೋ ಅನ್ನುವ ಭಯ ಕಾಡಲು ಶುರುವಾಗುತ್ತದೆ. "ಹಿಮಗರ್ಭದಲ್ಲಿ ಹುಟ್ಟಿ ಅದೆಷ್ಟೇ ತಿರುವು-ಮುರುವು, ಬೆಟ್ಟ-ಗುಡ್ಡ, ಊರು-ಗಲ್ಲಿ, ಕಾನನಗಳನ್ನು ಬಳಸಿ ಹರಿದರೂ ಪರಿಶುದ್ಧವಾಗೇ ಇರುವ ಗಂಗೆಯಂತಹ ಪ್ರೀತಿ ಕಣೋ ನನ್ನದು" ಅಂತಂದಿದ್ದ ಹುಡುಗಿಯೇ ಎಲ್ಲಿ ಕೈಬಿಟ್ಟು ಹೋಗುತ್ತಾಳೋ ಅಂತ ದಿಗಿಲಿಗೆ ಬೀಳುತ್ತಾನೆ. ಅವಳಿಲ್ಲದೆ ಹೇಗೆ ಬದುಕಿರಲಿ ಅಂತ ಹಳಹಳಿಸತೊಡಗುತ್ತಾನೆ. ಸಂಶಯ ಅನ್ನುವ ಅಭದ್ರತಾ ಭಾವ ಗರ್ಭತಾಳುವುದೇ ಆ ದಿಗಿಲು ಮತ್ತು ಹಳಹಳಿಕೆಗಳಲ್ಲಿ.

ಆಗೇನಾದರೂ ಹುಡುಗಿ "ನಿನ್ನೆಡೆಗೆ, ನಿನ್ನ ಪ್ರೀತಿಯೆಡೆಗೆ ನನಗಿರುವ ಅಪಾರ ಬದ್ಧತೆಯನ್ನು ಯಕಶ್ಚಿತ್ ಮೂರನೆಯವನೊಬ್ಬ ಕದಲಿಸಲಾರ. ನಿನ್ನೆಲ್ಲಾ ಜವಾಬ್ದಾರಿಗಳನ್ನು, commitmentಗಳನ್ನು ಅರಿತುಕೊಂಡೇ ನಿನ್ನ ಜೊತೆ ಹೆಜ್ಜೆ ಹಾಕುತ್ತಿದ್ದೇನೆ. ನಾನು ನಿನ್ನವಳು ಅನ್ನುವ ಭರವಸೆ ಒಂದಿರಲಿ ಸಾಕು" ಅಂತ ಆತ್ಮೀಯತೆಯಿಂದ ಅವನಿಗೆ ಭರವಸೆಯಿತ್ತು ಬಿಟ್ಟರೆ ಸಾಕು ಅವನೆಲ್ಲಾ ಅನುಮಾನಗಳು ಕೊಚ್ಚಿಹೋಗಿಬಿಡುತ್ತವೆ. ಅಷ್ಟೇ ಅಲ್ಲ ಅವಳನ್ನು ಅವನು ಮತ್ತಷ್ಟು ಸಾಂದ್ರವಾಗಿ ಪ್ರೀತಿಸತೊಡಗುತ್ತಾನೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಹುಡುಗಿ 'ನಾನೇಕೆ ಇದನ್ನೆಲ್ಲಾ ಅವನಿಗೆ ವಿವರಿಸಲಿ' ಅನ್ನುವ ಹಮ್ಮಿನಲ್ಲಿ ಇದ್ದುಬಿಡುತ್ತಾಳೆ. ಅತ್ತ ಪ್ರತಿಕ್ಷಣ ಅಭದ್ರತಾ ಭಾವದಿಂದ ನರಳುವ ಅವನು ಅವಳಿಗೆ ಬೇಲಿ ಕಟ್ಟತೊಡಗುತ್ತಾನೆ, ಅವಳು ಆ ಬೇಲಿ ಹಾರಿ ಹೋಗಬಯಸುತ್ತಾಳೆ. ಪ್ರೀತಿ ವಿಲವಿಲ ಒದ್ದಾಡತೊಡಗುತ್ತದೆ.

ಹಾಗಾಗಬಾರದು ಅಂತಿದ್ದರೆ, ವಿಫಲ ಪ್ರೇಮದ ಆಳಗಾಯ ಬದುಕಿಡೀ ಮಗ್ಗುಲ ಮುಳ್ಳಾಗಿ ಕಾಡಬಾರದು ಅಂತಿದ್ದರೆ, ಇಬ್ಬರೂ ಜೊತೆಗೂಡಿ ಕಂಡ ಮಧುರ ಕನಸುಗಳು ಕಣ್ಣೆದುರೇ ಚಲ್ಲಾಪಿಲ್ಲಿಯಾಗಿ ಹೋಗಬಾರದು ಅಂತಿದ್ದರೆ, ಹುಡುಗಿಯರೇ  "ಹುಡುಗರೇ ಹೀಗೆ..." ಅನ್ನುವ ತಪ್ಪು ನಿರ್ಧಾರಕ್ಕೆ ಬರುವ ಮುನ್ನ ತಣ್ಣಗೆ ಕೂತು ಒಂದಿಷ್ಟಾದರೂ ಯೋಚಿಸಿ ಪ್ಲೀಸ್.