ಅನುಮಾನ ಅವಮಾನಗಳ ಬೆಂಕಿಯಲಿ
ಬೇಯುವಾಗೆಲ್ಲಾ ಈ ಬದುಕು
ಸಾಕೆಂದು ನಿಡುಸುಯ್ಯತ್ತಿರುತ್ತೇನೆ
ಮುರಿದ ಕನಸುಗಳ
ಇಟ್ಟಿಗೆಯಾಗಿಸಿ ಬದುಕ
ಕಟ್ಟಿಕೊಳ್ಳುವ ಚೈತನ್ಯ ಇಲ್ಲವೆಂದಲ್ಲ
ಹಾಗೆ ಕಟ್ಟಿಕೊಳ್ಳಹೊರಟಾಗೆಲ್ಲಾ
ಗೋರಿಯ ಬಗೆದು
ಅರಮನೆ ಕಟ್ಟುತ್ತಿರುವೆ
ಅನ್ನುವ ತಾಕಲಾಟಕ್ಕೆ ಬಿದ್ದು ಬಿಡುತ್ತೇನೆ
ಮತ್ತೆ ಮುರಿದ ಸಂಬಂಧಗಳು
ಕಾಡತೊಡಗುತ್ತವೆ
ಹಗಲಲ್ಲೂ ದುಃಸ್ವಪ್ನ
ಕಂಡಂತಾಗಿ ಬೆಚ್ಚಿ ಬೀಳುತ್ತೇನೆ
ಈಗೀಗ ಅಮ್ಮಂದಿರ ಎದೆಯಿಂದಲೂ
ಒಡೆದ ಹಾಲು ಒಸರುತ್ತದೇನೋ
ಅನ್ನಿಸಿ ದಿಗಿಲುಗೊಳ್ಳುತ್ತೇನೆ
ಆಗೆಲ್ಲಾ ನೀನು ಬೆಂಬಿಡದೆ ಕಾಡುತ್ತಿ ಅಹಲ್ಯೆ
ಅದೆಷ್ಟು ಋತುಗಳ
ಕಲ್ಲಾಗಿ ಕಳೆದುಬಿಟ್ಟೆಯಲ್ಲಾ
ರಾಮ ಪಾದ ಸ್ಪರ್ಶವಾಗುವವರೆಗೂ
ನಿನ್ನೆದೆಯ ಕಲ್ಲು ಮಾಡಿಕೊಂಡ
ವಿದ್ಯೆಯ ನನಗೂ ದಯಪಾಲಿಸು
ಒಂದಿಷ್ಟು ದಿನ ಬದುಕಬೇಕಿದೆ
ನನ್ನೆದೆಯ ಆಕ್ರೋಶ ನಿರಾಶೆಗಳನ್ನೆಲ್ಲಾ
ಮರೆತಂತೆ ನಟಿಸಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ