ಸೋಮವಾರ, ಮಾರ್ಚ್ 30, 2015

ಓಣದ ನೆನಪು

"ಕನಸುಗಳು ಕಾಡುವುದು
ಆಸೆಗಳ ಮಡಿಲಿನಿ೦ದ
ನೆನಪುಗಳು ಮೂಡುವುದು
ವೇದನೆಗಳ ಒಡಲಿನಿ೦ದ
ಭಾವನೆಗಳು ಹಾಡುವುದು
ಆತ್ಮೀಯತೆಯ ಕಡಲಿನಿ೦ದ"

ಯಾವತ್ತೋ ಎಲ್ಲೋ ಓದಿದ ಸಾಲುಗಳಿವು, ಇವತ್ತ್ಯಾಕೋ ಇದ್ದಕ್ಕಿದ್ದ ಹಾಗೆ ನೆನಪಾಗಿ ಬಿಡ್ತು. ಅದೇನೋ "ನೆನಪಿನ ಸಾಲುಗಳು ಸಾಯೋ ತನಕ" ಅ೦ತಾರಲ್ವಾ ಹಾಗೇ ಆಗಿರ‍್ಬಹುದು ಅಲ್ವಾ? ಆದ್ರೂ ಹೀಗೇ ಸುಮ್ಮನೆ ಯೋಚಿಸ್ತಾ ಕೂತ್ರೆ ಈ ಸಾಲುಗಳಲ್ಲಿ ಎಷ್ಟೊ೦ದು ಸತ್ಯ ಇದೆ ಅ೦ತ ಅನ್ನಿಸುತ್ತೆ ಅಲ್ವಾ?

"ಆಸೆಯೇ ದುಃಖಕ್ಕೆ ಮೂಲ" ಅ೦ತ ಬುದ್ಧ ಹೇಳಿದ್ದಾನ೦ತೆ. ದೊಡ್ಡವರ ದೊಡ್ಡ ದೊಡ್ಡ ಮಾತುಗಳನ್ನೆಲ್ಲಾ ಬಿಟ್ಟು ಬರಿ ಜನ ಸಾಮಾನ್ಯರಾಗಿ ಅ೦ದ್ರೆ ನಾವು ನಾವಾಗಿಯೇ ಯೋಚಿಸಿ ನೋಡಿದರೆ ಆಸೆಗಳಿಲ್ಲದ ಬದುಕು ಒ೦ಥರಾ ನೀರಸ ಅನ್ನಿಸಿ ಬಿಡುತ್ತವೆ. ಹಾಗೆ ನೋಡಿದ್ರೆ ಆಸೆಗಳಿಲ್ಲದೆ ಕನಸುಗಳೇ ಹುಟ್ಟಲ್ಲ. ಕನಸುಗಳಿಲ್ದಿದ್ರೆ ಜೀವನಕ್ಕೆ ಅರ್ಥಾನೇ ಇರಲ್ಲ. ತೀರಾ ರವಿಚ೦ದ್ರನ್ ರೇ೦ಜ್ ಗೆ ಹೋಗಿ "ಬೆಳಕೇ ಇಲ್ಲದ ದಾರಿಯಲ್ಲಿ ನಾ ನಡೆದರೂ ಕನಸೇ ಇಲ್ಲದ ದಾರಿಯಲ್ಲಿ ನಾ ನಡೆಯಲಾರೆ" ಅ೦ತ ಹೇಳೋಕೆ ಆಗ್ದೇ ಇದ್ರೂ ಕನಸುಗಳಿಲ್ಲದ ದಾರಿಯಲ್ಲಿ ನಡೆಯೋದು ಒ೦ಚೂರು ಕಷ್ಟಾನೇ ಅಲ್ವಾ? ಕನಸುಗಳು ನಮ್ಮ ಇಡೀ ದಾರಿಗೆ ಸೂರ್ಯನ ತರ ಬೆಳಕು ಕೊಡದೇ ಇದ್ರೂ ಪ್ರತಿ ಹೆಜ್ಜೆಗೂ ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತವೆ.  ಯೋಚಿಸಿ ನೋಡಿ ದೂರದಲ್ಲೆಲ್ಲೋ ನಾವು ಕ೦ಡ ಕನಸು ನಮ್ಮನ್ನೇ ನೋಡಿ ನಗ್ತಾ ಬರಲ್ವಾ ಅ೦ತ ಆಮ೦ತ್ರಿಸುತ್ತಿದ್ದರೆ ದಾರಿಯಲ್ಲಿ ಎಷ್ಟೇ ಕಲ್ಲು ಮುಳ್ಳುಗಳಿದ್ರೂ ಅದನ್ನೆಲ್ಲಾ ದಾಟಿ ನಾವು ಮು೦ದೆ ಹೋಗಿಯೇ ಹೋಗ್ತೇವೆ. ಅದೇ ಕನಸುಗಳಿಲ್ಲದ ದಾರಿಯಲ್ಲಿ ಒ೦ದು ಸಣ್ಣ ತಡೆ ಬ೦ದು ಮುಗ್ಗರಿಸಿ ಬಿದ್ರೂ ಮತ್ತೆ ಮು೦ದುವರಿಯದೆ ಹಿ೦ದಿರುಗಿ ಬಿಡ್ತೇವೆ. ನಿಜ ತಾನೇ?

ಹಾಗೇ ಬಿದ್ದಾಗ ಆದ ನೋವು, ಅವಮಾನ, ಗಾಯ ಹಸಿ ಹಸಿ ಇರುವಾಗ ಪದೇ ಪದೇ ಕಾಡಿದ೦ತೆ ಗಾಯ ಮಾಗಿದ ಮೇಲೆ ಕಾಡಲ್ಲ. ಮತ್ತೆ ಅದೇ ನೋವು ನೆನಪಾಗ್ಬೇಕ೦ದ್ರೆ ಇನ್ನ್ಯಾವುದೋ ನೋವು ಮನಸ್ಸಿನೊಡಲಿನಿ೦ದ ಮೂಡಿ ಬರ‍್ಬೇಕು. ನೆನಪುಗಳ೦ದ್ರೆ ಒ೦ಥರಾ ಇರುವೆ ಸಾಲು ಇದ್ದ ಹಾಗೆ. ಒಮ್ಮೆ ಹೊರಟ್ರೆ ಸಾಲು ಸಾಲಾಗಿ ಹೋಗ್ತಾನೆ ಇರುತ್ತದೆ ವಾಸ್ತವ ಎಚ್ಚರಿಸುವ ವರೆಗೂ. ಹಳೆ ನೆನಪುಗಳು ಕೆಲವೊಮ್ಮೆ ಮುಖದ ಮೇಲೆ ತೆಳು ಹಾಸ್ಯ ಮೂಡಿಸಿದರೆ ಇನ್ನು ಕೆಲವೊಮ್ಮೆ ಯಾವುದೋ ವಿಷಾದ ಮೂಡಿಸುತ್ತದೆ. ನಿಮ್ಗೆಲ್ಲಾ ಗೊತ್ತಿರೋ ಹಾಗೆ ಯಾವುದೋ ಕಾಲದಲ್ಲಿ ತು೦ಬಾ ನಕ್ಕ ಘಟನೆ ಈಗ ನೆನಪಾಗಿ ಅ ಕ್ಷಣಗಳು ಇನ್ನ್ಯಾವತ್ತೂ ಬರಲ್ಲ ಅನ್ನುವ ವಾಸ್ತವ ಗೊತ್ತಾಗಿ ಕಣ್ಣ೦ಚು ತನ್ನ೦ತಾನೇ ಒದ್ದೆ ಆದ್ರೆ, ಏನೋ ಮಾಡೋಕೆ ಹೋಗಿ ಅದು ಇನ್ನೇನೋ ಆಗಿ ಯಾರಿ೦ದ್ಲೋ ಬಯಿಸ್ಕೊ೦ಡು ಅತ್ತದ್ದು ನೆನಪಾದ್ರೆ ಹಾಗೇ ಸುಮ್ನೆ ನಗು ಬರುತ್ತದೆ. ನೀವೇ ಹೇಳಿ ನೆನಪುಗಳು ಎಷ್ಟೊ೦ದು ಸ್ಟುಪಿಡ್ಸ್ ಅಲ್ವಾ?

ಅದೇ ತರ ಮನಸ್ಸಿಗೆ ತು೦ಬಾ ಹತ್ತಿರ ಆದವರು, ಜೀವಕ್ಕೆ ಜೀವ ಅ೦ತ ಅನ್ನಿಸಿಕೊ೦ಡವರು ತು೦ಬಾ ಆತ್ಮೀಯತೆಯಿ೦ದಿರುವಾಗೆಲ್ಲಾ ಭಾವನೆಗಳು ಗರಿ ಬಿಚ್ಚಿ ಹಾರುತ್ತವೆ. ಅದೇಕೋ ಈ ಭಾವನೆಗಳಿಗೂ ಆತ್ಮೀಯತೆಗೂ ಅದ್ಯಾವುದೋ ಅವಿನಾಭಾವ ಸ೦ಬ೦ಧ. ಒ೦ಥರಾ ವೀಣೆಯಯ೦ತೆ, ಒ೦ದು ತ೦ತಿ ಮೀಟಿದ್ರೆ ಮತ್ತೊ೦ದು ತನ್ನಿ೦ತಾನಾಗೇ ಸ೦ಗೀತ ನುಡಿಸುತ್ತದೆ. ಆತ್ಮೀಯತೆಯ ಗಡಿಯಾಚೆ ನಿ೦ತು ಭಾವನೆಗಳನ್ನು ಹೇಗೆ ನೋಡೋಕೆ ಆಗಲ್ವೋ ಹಾಗೆ ಭಾವನೆಗಳಿಲ್ದೇ ಇರುವ ಆತ್ಮೀಯತೆಯನ್ನು ಕಲ್ಪಿಸಿಕೊಳ್ಲಲೂ ಸಾಧ್ಯ ಇಲ್ಲ. ದೇವರು ಅದ್ಯಾಕೆ ಅವೆರಡರ ಮಧ್ಯೆ ಅ೦ತಹ ಸ೦ಬ೦ಧ ಕಲ್ಪಿಸಿದನೋ ಗೊತ್ತಿಲ್ಲ ಆದ್ರೆ ಅವೆರಡೂ ಒ೦ದಕ್ಕೊ೦ದು ಬೆಸೆದುಕೊ೦ಡಿದ್ರೆ ಮಾತ್ರ ಸ೦ಬ೦ಧಗಳಿಗೆ, ಅದರಲ್ಲಿರೋ ಆಪ್ತತೆಯ ಅರ್ಥ ಉಳಿಯೋಕೆ ಸಾಧ್ಯ ಅಲ್ವಾ?

    ಮತ್ತವೇ ಸಾಲುಗಳು,
                       ಕನಸುಗಳು ಕಾಡುವುದು
                       ಆಸೆಗಳ ಮಡಿಲಿನಿ೦ದ
                       ನೆನಪುಗಳು ಮೂಡುವುದು
                       ವೇದನೆಗಳ ಒಡಲಿನಿ೦ದ
                       ಭಾವನೆಗಳು ಹಾಡುವುದು
                       ಆತ್ಮೀಯತೆಯ ಕಡಲಿನಿ೦ದ....















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ