ಶನಿವಾರ, ಜೂನ್ 6, 2015

ಮೌನ ಕಣಿವೆಯಲಿ...

ಸಂಚಾರ 2

ಆದ್ರೆ ಅಪ್ಪ ಕುಸಿದು ಬಿದ್ದರು. ಅಜ್ಜಿ ತಂಗಿಯನ್ನು ಎತ್ತಿಕೊಳ್ಳಲೆಂದು ಅಳುತ್ತಲೇ ಕೋಣೆಯೊಳಗೆ ಹೋದರು. ಅಲ್ಲಿ ಅಮ್ಮ ನಿಶ್ಚೇತನಳಾಗಿ ಮಲಗಿದ್ದಳು. ಆಗಷ್ಟೇ ಪರಿಸ್ಥಿತಿಯ ಗಂಭೀರತೆ ಸ್ವಲ್ಪವಾದರೂ ನನಗೆ ಅರ್ಥವಾದದ್ದು. ಹಲವು ಕಥೆಗಳಲ್ಲಿ ಓದಿ ಸಾವೆಂದರೆ ಏನು ಅನ್ನುವುದು ತಿಳಿದಿತ್ತು. ಆದರೆ ಅಮ್ಮನ ಚಿತೆಗೆ ಬೆಂಕಿ ಹಚ್ಚಿ ಅವಳಿಲ್ಲದ ಖಾಲಿ ಮನೆಯೊಳಗೆ ಪ್ರವೇಶಿಸಿದಾಗಲೇ ನಿಜಕ್ಕೊ ಸಾವೆಂಬ ದಿಗ್ಭ್ರಾಂತಿ ಅಂದರೇನು ಎಂಬುವುದು ನನ್ನ ಅರಿವಿಗೆ ನಿಲುಕಿದ್ದು.

ಅಮ್ಮನ ಎದೆಹಾಲಿಗಾಗಿ ರಚ್ಚೆ ಹಿಡಿದು ಅಳುವ ಮಗು, ಏನೂ ತೋಚದೆ ಅಂಗಳದ ಮೂಲೆಯೊಂದರ ಕಂಬಕ್ಕೆ ತಲೆ ಚಾಚಿ ಆಕಾಶ ದಿಟ್ಟಿಸಿತ್ತಿರುವ ಅಪ್ಪ, ನಿತ್ರಾಣದ ಮಧ್ಯೆಯೂ ಓಡಾಡಿ ತನಗೆ ತಿಳಿದಷ್ಟು ಸುಧಾರಿಸುವ ಅಜ್ಜಿ, ಇವೆಲ್ಲದರ ಮಧ್ಯೆ "ತಾಯಿಯನ್ನು ತಿಂದು ಹುಟ್ಟಿದವಳು" ಎಂದು ಕಾವ್ಯಾಳ ಕಡೆಗೆ ಬೆರಳು ತೋರುತ್ತಿದ್ದ ಅಕ್ಕಪಕ್ಕದವರ ಹೀಯಾಳಿಕೆ... ಆ ಕ್ಷಣಾನೇ ನನ್ನ ಬದುಕು ಅವಳಿಗೆ ಮುಡಿಪೆಂದು ನಿರ್ಧರಿಸಿಬಿಟ್ಟೆ, ಆ ಕ್ಷಣದಿಂದಲೇ ಅವಳು ನನ್ನ ಪ್ರಪಂಚ ಆದಳು. ನಾನು ತಾಯಿಯಲ್ಲದ ಅಕ್ಕ... ಅವಳು ಮಗಳಲ್ಲದ ತಂಗಿ.

ಅವಳ ಖುಶಿಗೆ, ಅವಳ ನಗುವಿಗೆ, ಅವಳ ಸಂಭ್ರಮಕ್ಕೆ, ಅವಳತ್ತಾಗ ಸಮಾಧಾನಪಡಿಸೋಕೆ, ರಂಪ ಮಾಡಿದಾಗ ಸಾಂತ್ವನಿಸೋಕೆ, ಅವಳು ನಿದ್ರಿಸುವಾಗ ಲಾಲಿ ಹಾಡೋಕೆ, ಅವಳಿಗೆ ನಿದ್ರೆ ಬಾರದಿದ್ದಾಗ ಕಥೆ ಹೇಳೋಕೆ ನಾ ಮಾತು ಕಲಿತೆ. ನನ್ನ ಮೌನವ, ಅದು ನನ್ನೊಳಗೆ ಮಥಿಸುತ್ತಿದ್ದ ಸಂಭ್ರಮದ ಸೆಲೆಯ ಮರೆತುಬಿಟ್ಟೆ.

ಮೊದಲಿಂದಲೂ ಹಾಗೆ, ಸಾಮಾನ್ಯವಾಗಿ ಹೆಣ್ಣು ಮಕ್ಕಳನ್ನು ಆಕರ್ಷಿಸುವ ದುಂಡು ಮಲ್ಲಿಗೆ, ಹಸಿರು ಬಳೆ, ಬಣ್ಣದ ಬಿಂದಿ, ಲಂಗ ದಾವಣಿ, ಇವ್ಯಾವುವೂ ನನ್ನ ಆಕರ್ಷಿಸಿರಲೇ ಇಲ್ಲ. ಕಾಡೋ ಕಾಡು, ದಟ್ಟ ಗುಡ್ಡ, ಹಸಿರು ಬೆಟ್ಟ, ಕಡಲ ತಡಿ, ಅಲೆಯ ಅಬ್ಬರ ಇಂತಹವುಗಳೇ ನನ್ನ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ಕಾವ್ಯ ನನ್ನ ಪ್ರಪಂಚವಾದ ಮೇಲಂತೂ ಸಣ್ಣ ಪುಟ್ಟ ಆಸೆಗಳೂ ನಂಗೆ ಗೌಣವೆನಿಸತೊಡಗಿದವು.

ಆದ್ರೆ ಬಿರು ಮಳೆಯ ರಾತ್ರಿಗಳಲ್ಲಿ ಕಾವ್ಯ ನಿದ್ದೆ ಹೋದ ನಂತರ ನಾನು ಎದ್ದು ಕಿಟಕಿಯ ಪಕ್ಕ ಕೂತು ಒಬ್ಬಳೇ ಧೇನಿಸುತ್ತಿದ್ದೆ, ತಾಯಿಗಾಗಿ ಹಂಬಲಿಸುತ್ತಿದ್ದೆ. ಅಮ್ಮನ ತೋಳಲ್ಲಿ ಕರಗಿಹೋಗಬೇಕೆಂದು ಬಯಸುತ್ತಿದ್ದೆ.  ನನ್ನ ಬದುಕಿನ ಖಾಲಿತನದ ಅನುಭವ ನನಗಾಗುತ್ತಿದುದೇ ಆವಾಗ.  ಮಂದ ಬೆಳಕಿನಲ್ಲಿ ನನ್ನ ನೆರಳು ಚಲಿಸಿದಂತಾಗಿ ಕೆಲವು ರಾತ್ರಿಗಳಲ್ಲಿ ಅಪ್ಪ ಎದ್ದು ಬಂದು ನನ್ನ ತಬ್ಬಿಕೊಂಡು ಅಳುತ್ತಿದ್ದರು. ಆಗೆಲ್ಲಾ ’ಇನ್ಮುಂದೆ ಅಮ್ಮನ ನೆನೆಸ್ಕೊಂಡು ಕೊರಗಲೇಬಾರದು’ ಅಂದುಕೊಳ್ಳುತ್ತಿದೆ. ಆದ್ರೆ ತುಂಬಾ ಮಳೆ ಸುರಿದಾಗ, ಮನೆಯ ಛಾವಣಿಯ ಮೇಲೆ ಮಳೆ ಹನಿಗಳ ಸದ್ದು ಕೇಳಿದಾಗೆಲ್ಲಾ ಆ ನಿರ್ಧಾರ ಮತ್ತೆ ಕಣ್ಣೀರಾಗಿ ಹರಿದು ಹೋಗುತ್ತಿತ್ತು. ಅಪ್ಪ ಎದೆಗವುಚಿಕೊಂಡು ತಲೆ ನೇವರಿಸುತ್ತಿದ್ದರೂ, ಮನಸು ಇದು ಅಮ್ಮನ ಕೈ ರೇಖೆಯ ಸ್ಪರ್ಶ ಅಲ್ಲವಲ್ಲ ಎಂದು ಚೀರಿ ಚೀರಿ ಅಳುತ್ತಿತ್ತು.

ಆದ್ರೆ ಅದು ಬೊಗಸೆಯಲ್ಲೇ ಸಮುದ್ರ ಹಿಡಿಯುವಷ್ಟು ಉತ್ಸಾಹ, ಹುಮ್ಮಸ್ಸು ಇದ್ದ ವಯಸ್ಸು. ಅರೆ ಕ್ಷಣ ನೋವಾದ್ರೂ ಮತ್ತೆ ಜೀವನ್ಮುಖಿಯಾಗುತ್ತಿದ್ದೆ. ತಂಗಿ ಅನ್ನುವ ಮುದ್ದು ಜೀವ ಬೇರೆ ಜೊತೆಗಿತ್ತು. ನನ್ನ ವಿಷಣ್ಣತೆ, ಎದೆಯಾಳದ ಗಾಯಗಳಾವುವೂ ಅವಳ ಬದುಕಿಗೆ ತಟ್ಟಬಾರದಿತ್ತು. ಹಾಗಾಗಿ ನನ್ನ ಭಾವನೆಗಳಿಗೆ ಬೇಲಿ ಹಾಕಿ ಬಂಧಿಸಿಡುತ್ತಿದ್ದೆ. ಮಾತಾಗಿ ಅಪ್ಪನ ಮುಂದೆ ಜಾರಬೇಕಿದ್ದ ನನ್ನಾಸೆಗಳು ಮನದ ಮಂಟಪದಲ್ಲಿ ಘನೀಭವಿಸಿದ ಮೌನಗಳಾಗಿ ಹರಳುಗಟ್ಟತೊಡಗಿದವು. ನಾನು ಮತಾಡುತ್ತಾ ಆಡುತ್ತಲೇ ಮೂಗಿಯಾದೆ.

ಬದುಕೊಂದು  ನಿರಂತರ ಯಾಗ. ಅದು ಅಪ್ಪ, ಅಮ್ಮ, ಅಜ್ಜಿ, ತಂಗಿ, ಖಾಲಿತನ ಇವ್ಯಾವುವನ್ನೂ ಗಣನೆಗೆ ತೆಗೆದುಕೊಳ್ಳದೆ ನಿರಂತರ ಉರಿಯುತ್ತಲೇ ಇರುತ್ತದೆ; ಕೊನೆಯ ಕಿಡಿ ಇರುವವರೆಗೂ. ಬಾಲ್ಯ ಜಾರಿ ಹೋಗದಿರಲೆಂದು ಅದೆಷ್ಟೇ ಪ್ರಯತ್ನಪಟ್ಟರೂ ಬದುಕು ಸಾಗುತ್ತಲೇ ಇತ್ತು. ಪಿ.ಯು.ಸಿ ಮುಗಿದು ಇನ್ನೇನು ಪದವಿ ಮೆಟ್ಟಿಲು ಹತ್ತಬೇಕೆನ್ನುವಷ್ಟರಲ್ಲಿ ಅಪ್ಪ ಅನಿರೀಕ್ಷಿತವಾಗಿ ಹಾಸಿಗೆ ಹಿಡಿದುಬಿಟ್ಟರು. ಮಂಚದಿಂದ ಬಿದ್ದುದೇ ನೆಪವಾಗಿ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡು ಬಿಟ್ಟವು. ಅನಿವಾರ್ಯವಾಗಿ ನನ್ನ ಓದಿಗೆ ಮಂಗಳ ಹಾಡಲೇಬೇಕಾಯ್ತು. ಬದುಕು ಮತ್ತೊಮ್ಮೆ ತನ್ನ ದಾಳ ಉರುಳಿಸಿತು, ನಾನು ಬರಿ ಕಾಯಿಯಷ್ಟೆ.      

(ಸಶೇಷ)

ಶುಕ್ರವಾರ, ಜೂನ್ 5, 2015

ಮೌನ ಕಣಿವೆಯಲಿ...

 ಸಂಚಾರ 1


ಹೌದು. ಮೊದ ಮೊದಲು ನಾನು ಹೀಗೆ ಇರ್ಲೇ ಇಲ್ಲ. ನಾನೂ, ಮಾತೂ ಎಣ್ಣೆ ಸೀಗೆಕಾಯಿ ಅಂತಿದ್ವಿ. ನನ್ನ ಮೆಚ್ಚಿನ ಪುಸ್ತಕಗಳು, ಮುಳ್ಳು ಸೌತೆ ಬಳ್ಳಿ, ಲಿಂಬೆಕಾಯಿ ಗಿಡ, ಹಸಿ ಮಣ್ಣು, ಚಲಿಸೋ ಮೋಡ, ಸುರಿಯೋ ಮಳೆ, ಒಂದಿಷ್ಟು ಪ್ರಶ್ನೆಗಳು, ಅವಕ್ಕೆ ಅಪ್ಪ ಕೊಡುತ್ತಿದ್ದ ಉತ್ತರಗಳು... ಇವಿಷ್ಟೇ ನನ್ನ ಪ್ರಪಂಚ ಆಗಿತ್ತು. ಅಲ್ಲಿ ಮಾತಿಗೆ ಜಾಗ ಇರ್ಲಿಲ್ಲ. ಅದೊಂದು ದಿವ್ಯ ಮೌನದ ಸಂಭ್ರಮವಾಗಿತ್ತು. ಮೌನ ನನ್ನಿಷ್ಟ ಆಗಿತ್ತು, ನನ್ನಿಚ್ಛೆ ಆಗಿತ್ತು. ಆ ಮೌನದಲ್ಲಿ ನಾನು ನಾನಾಗಿಯೇ ಇರುತ್ತಿದ್ದೆ. ಆ ವಯಸ್ಸಿನ ಮಟ್ಟ ಏನಿತ್ತೋ ಆ ಪರಿಧಿಯೊಳಗೆ ನನ್ನಿರುವು ನನ್ನೊಳಗೆ ಪದೇ ಪದೇ ಸಾಬೀತಾಗುತ್ತಿತ್ತು.

ಆಮೇಲಾಮೇಲೆ ಏನಾಯ್ತೋ ಗೊತ್ತಿಲ್ಲ. ಬದುಕು ಮಾತಾಡುವುದನ್ನು ಕಲಿಸಿಬಿಡ್ತು. ಬಹುಶಃ ಯಾವುದೋ ಒಂದು ಅನಾಥ ಪ್ರಜ್ಞೆಯನ್ನು, ಅಭದ್ರತೆಯ ಭಾವವನ್ನು ಮರೆಸಲು ಮಾತಿನ ಮೊರೆ ಹೋದೆ. ಮುಂದೆ ಅನಿವಾರ್ಯತೆನೋ ಅಥವಾ ನನ್ನೊಳಗೆ ನಿಜಕ್ಕೂ ಮಾತಿನ ಒರತೆ ಇತ್ತೋ? ಗೊತ್ತಿಲ್ಲ. ಒಟ್ಟಿನಲ್ಲಿ ಮಾತಾಡ್ತಾನೇ ಹೋದೆ. ಅಗತ್ಯ ಇದ್ದೆಡೆ, ಇಲ್ಲದೆಡೆ ಎಲ್ಲಾ ಕಡೆನೂ ನಿರಂತರ ಮಾತಾಡ್ತಾನೇ ಹೋದೆ. ನನ್ನ ಭಾವನೆಗಳನ್ನು ಮುಚ್ಚಿಡಲು, ಬಚ್ಚಿಡಲು ಎರಡಕ್ಕೂ ಮಾತನ್ನೇ ಆಶ್ರಯಿಸಿದೆ. ಅಥವಾ ಹಾಗೆ ಆಶ್ರಯಿಸುವ ಅನಿವಾರ್ಯತೆಯನ್ನು ಬದುಕು ನನ್ನೆದರು ಸೃಷ್ಟಿಸಿತು. ಮೌನದ ಮುದ್ದೆಯಾಗಿದ್ದ ನಾನು ಮಾತಿನ ಮಲ್ಲಿ ಆದೆ. ಈ ಮಧ್ಯೆ ಆ ಮಾತುಗಳಲ್ಲೇ ನಾ ಗೊತ್ತೇ ಆಗದಂತೆ ಅಂತರ್ಧಾನವಾಗಿದ್ದಂತೂ ಸತ್ಯ.

ಆದ್ರೆ ನಿಜಕ್ಕೂ ನಾ ಮಾತು ಕಲಿತದ್ದು ಯಾವಾಗ? ಮೌನದ ಚಿಪ್ಪೊಳಗೆ ಸ್ವಾತಿ ಮುತ್ತಾಗಿದ್ದ ನನ್ನ, ಮಾತು ತನ್ನೆಡೆಗೆ ಸೆಳೆದದ್ದಾದರೂ ಯಾವಾಗ? ತಂಗಿ ಹುಟ್ಟಿದಾಗಲಾ? ಅಮ್ಮ ತೀರ್ಕೊಂಡಾಗಲಾ? ಅಪ್ಪ ಹಾಸಿಗೆ ಹಿಡಿದಾಗಲಾ? ಇಲ್ಲ ಅಜ್ಜಿ ಹಸುಗೂಸನ್ನು ತಂದು ನನ್ನ ಕೈಗಿತ್ತು "ತಾಯಿಯಿಲ್ಲದ ತಂಗಿಗೆ ನೀನೇ ಇನ್ನು ಅಮ್ಮ" ಅಂದಾಗಲಾ?

ಬಹುಶಃ ಇದೇ ಸರಿಯೆನಿಸುತ್ತದೆ. ಯಾವ ಅಶ್ವಿನಿ ದೇವತೆಗಳು ಅಸ್ತು ಎಂದರೋ ಗೊತ್ತಿಲ್ಲ, ಅಮ್ಮನ ಚಿತೆಗೆ ಬೆಂಕಿ ಬೀಳುವ ಮುನ್ನವೇ ನಾನು ಕಾವ್ಯಾಳಿಗೆ ಅಮ್ಮನಾದೆ. ಅಮ್ಮನಿನ್ನೂ ಪಂಚಭೂತಗಳಲ್ಲಿ ಲೀನವಾಗುವ ಮುನ್ನವೇ ನನ್ನೊಳಗೆ ಪ್ರವಹಿಸತೊಡಗಿದಳು. ನಾನು ಅಮ್ಮನಾದೆ, ನಿಜಾರ್ಥದಲ್ಲಿ; ಕಾವ್ಯ ಮಗಳಾದ್ಳಾ...?

ಎಷ್ಟಿದ್ದೀತು ಮಹಾ ನನಗಾಗ? ಏಳೋ, ಎಂಟೋ? ಸರಿಯಾಗಿ ನೆನಪಿಲ್ಲ. ನಾನಾಗ ಎರಡನೇ ತರಗತಿಯಲ್ಲಿದ್ದೆ. ಶಾಲಾ ದಾಖಲೆಗಳ ಪ್ರಕಾರ ನನಗಾಗ ಏಳು ವರ್ಷ. ಹಲವು ವರ್ಷಗಳ ಪೂಜೆ, ಪುನಸ್ಕಾರಗಳ ನಂತರ ಅಮ್ಮ ಮತ್ತೊಮ್ಮೆ ಗರ್ಭವತಿಯಾಗಿದ್ದಳು. ಇಡೀ ಮನೆಗೆ ಮನೇನೇ ಸಂಭ್ರಮದಲ್ಲಿ ತೇಲಿ ಹೋಗಿತ್ತು. ಸ್ವಭಾವತ ಅಂತರ್ಮುಖಿಯಾಗಿದ್ದ, ಭಾವನೆಗಳನ್ನು ಅಷ್ಟು ಸುಲಭವಾಗಿ ಹರಿಯಬಿಡಗೊಡದ ನಾನೂ ಕುಣಿದಾಡಿಬಿಟ್ಟಿದ್ದೆ. ಆದ್ರೆ ಅವತ್ತು ಯಾರಿಗೆ ತಾನೇ ಗೊತ್ತಿತ್ತು ಸಂಭ್ರಮದ ಹಿಂದೆಯೇ ಬಹುದೊಡ್ಡ ನೋವಿನ ಅಲೆಯೊಂದು ಅಪ್ಪಳಿಸಲಿದೆಯೆಂದು?

ಒಂಭತ್ತು ತಿಂಗಳು ಪೂರ್ತಿ ತುಂಬುವ ಮೊದಲೇ ಒಂದು ರಾತ್ರಿ ಅಮ್ಮ ನೋವಿನಿಂದ ಒದ್ದಾಡತೊಡಗಿದಳು. ನನಗಾಗ ಹೆರಿಗೆ, ನೋವು, ಅದರ ಕಷ್ಟ ಯಾವುದೂ ಅರ್ಥವಾಗುವ ವಯಸ್ಸಲ್ಲ. ಸುಮ್ಮನೆ ಅಮ್ಮನ ಪಕ್ಕ ಕೂತು ಅವಳ ಕಣ್ಣೀರೊರೆಸುತ್ತಿದ್ದೆ ಅಷ್ಟೆ. ಅಮ್ಮ ಪದೇ ಪದೇ ಛಾವಣಿ ದಿಟ್ಟಿಸುತ್ತಾ "ದೇವ್ರೇ ನನ್ನ ಮಗು ಸಲೀಸಾಗಿ ಭೂಮಿಗೆ ಬರ್ಲ್ಲಪಾ" ಅಂತ ಅನ್ನುವಾಗೆಲ್ಲಾ ’ಈ ಅಮ್ಮ ತುಂಬಾ ವಿಚಿತ್ರ’ ಅಂತೆಲ್ಲಾ ಅನಿಸುತಿತ್ತು. ಆಸ್ಪತ್ರೆಗೆ ಹೋದಾಗಲೂ ಅಷ್ಟೆ, ಅಮ್ಮ ಹೆರಿಗೆ ಕೋಣೆಯೊಳಗೆ ಹೊಕ್ಕ ಹೊಕ್ಕ ನಂತರ ಅಪ್ಪ ನನ್ನ ತಬ್ಬಿಕೊಂಡು ಅಳುವಾಗ ’ಈ ಅಪ್ಪ ಏಕೆ ಮಗುವಿನ ತರ ಅಳುತ್ತಿದ್ದಾರೆ’ ಅನ್ನಿಸಿ ನಗು ಬರುತ್ತಿತ್ತು. ನಕ್ಕರೆ ಎಲ್ಲಿ ಅಜ್ಜಿ ಬೈದುಬಿಡುತ್ತಾರೋ ಅನ್ನುವ ಭಯಕ್ಕೆ ಸುಮ್ಮನಾಗುತ್ತಿದ್ದೆ.

ಆಗಾಗ ಹೆರಿಗೆ ಕೋಣೆಯ ಬಾಗಿಲ ಬಳಿ ಠಳಾಯಿಸುತ್ತಿದ್ದ ಅಪ್ಪನ ನಿರೀಕ್ಷೆಯನ್ನು ನಿಜ ಮಾಡಲೋ ಎಂಬಂತೆ ತಲೆ ತಗ್ಗಿಸಿ ಬಂದ ಡಾಕ್ಟರ್ "ಹೆರಿಗೆ ಆಯ್ತು, ಮಗು ಚೆನ್ನಾಗಿದೆ. ಆದ್ರೆ ಅಮ್ಮನನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ" ಎಂದು ನಿರ್ವಿಕಾರದಿಂದ ಹೇಳಿ ಹೊರಟು ಹೋದರು. ಎಷ್ಟು ಸಾವುಗಳನ್ನು ನೋಡಿದ ಜೀವವೋ ಅದು?
                                                     
                                                                                                                                                      (ಸಶೇಷ)

ಮಂಗಳವಾರ, ಜೂನ್ 2, 2015

ನಾ ಕಂಡಂತೆ ’ಕರ್ವಾಲೊ’.. .. ..


’ಕರ್ವಾಲೊ’

ಕಳೆದ ಐದು ವರ್ಷಗಳಲ್ಲಿ ನನ್ನ ಅನೇಕ ಖುಶಿಯ ಕ್ಷಣಗಳಿಗೆ, ಮಧುರ ನಿಮಿಷಗಳಿಗೆ, ಬೇಸರದ ಸಂಜೆಗಳಿಗೆ, ಏಕಾಂತ ರಾತ್ರಿಗಳಿಗೆ, ಸಿಹಿ ಸಿಹಿ ಬೆಳಗುಗಳಿಗೆ, ಬಿರು ಮಳೆಯ ಸ್ವಗತಗಳಿಗೆ, ದಟ್ಟ ಚಳಿಯ ನಡುಕಗಳಿಗೆ, ಮುಸ್ಸಂಜೆಯ ಕೆಲ ದಿವ್ಯ ಅನುಭೂತಿಗಳಿಗೆ ಸಾಕ್ಷಿಯಾದ, ಜೊತೆಯಾದ ಆತ್ಮ ಸಂಗಾತಿಯಿದು.

ತೇಜಸ್ವಿ ಅಂದ್ರೇನೇ ಖುಶಿ, ಅವರ ಬರಹಗಳಂದ್ರೇನೇ ಸಂಭ್ರಮ, ಇಷ್ಟ, ಪ್ರೀತಿ, ಅಭಿಮಾನ ಎಲ್ಲವೂ. ಅವರ ಎಲ್ಲಾ ಕೃತಿಗಳೂ ಸಂತೆಯೊಳಗೂ ಏಕಾಂತವನ್ನು ಒದಗಿಸಿ ಕೊಡುವ ಮಾಂತ್ರಿಕ ಶಕ್ತಿಯನ್ನು ಹೊಂದಿವೆ. ತುಸು ಹಾಸ್ಯ, ಸಹ್ಯ ವಿಡಂಬನೆ, ಕಟು ವ್ಯಂಗ್ಯ ಇವಿಷ್ಟೂ ತೇಜಸ್ವಿ ಅವರ ಪ್ರತಿಯೊಂದು ಹೊತ್ತಿಗೆಯಲ್ಲೂ ಎದ್ದು ಕಾಣುವ ಅಂಶಗಳು. ಒಂದು ಪುಸ್ತಕ ಓದಿಸಿಕೊಂಡು ಹೋಗಲು ಇನ್ನೇನು ಬೇಕು? ಕೊನೆಯ ಹಾಳೆ ಮಗುಚಿ ನಕ್ಕು ಪುಸ್ತಕವನ್ನಿಟ್ಟು ಹಾಸಿಗೆಗೆ ಒರಗಿದ ಮೇಲೆಯೋ, ನೀರು ಕುಡಿಯಲೆಂದು ಅರ್ಧ ರಾತ್ರಿಯಲ್ಲಿ ಎದ್ದಾಗಲೋ, ಕಣ್ಣಳತೆಯ ದೂರದಲ್ಲಿದಲ್ಲಿರುವ ಪುಸ್ತಕದ ಹೊರಪುಟದ ಸರಳತೆ ಎಷ್ಟು ಹೃದ್ಯವಾಗಿದೆ ಅಂತ ಅನಿಸುವಾಗಲೋ ಪಕ್ಕನೆ ’ಅರೆ ಈ ಕಥೆ ಎಷ್ಟು ಅದ್ಭುತವಾಗಿದೆಯಲ್ಲಾ’ ಅನ್ನುವ ಭಾವ ಮೂಡಿ ಮರೆಯಾಗುತ್ತದೆ. ಇದು ಬರಿ ನಗಲು ಅಥವಾ ಮನರಂಜನೆಗಾಗಿ ಮಾತ್ರ ಇರುವ ಪುಸ್ತಕವಲ್ಲ, ನಮ್ಮ ಅರಿವನ್ನೂ ಮೀರಿದ ಯಾವುದೋ ತಿರುಳೊಂದು ಇದರಲ್ಲಿದೆ ಅನಿಸತೊಡಗುತ್ತದೆ. ಅಲ್ಲಿಂದೀಚೆ ಇಡೀ ದಿನ, ಕೆಲವೊಮ್ಮೆ ವಾರಗಟ್ಟಲೆ ಅದೇ ಅಚ್ಚರಿ ಮುಂದುವರಿಯುತ್ತದೆ. ಕೆಲವೊಮ್ಮೆ ತೇಜಸ್ವಿ ಅವರ ಕಥೆಗಳು ಕಾಡತೊಡಗುವುದೇ ಅದನ್ನು ಪೂರ್ತಿ ಓದಿ ಮಗುಚಿಟ್ಟ ಮೇಲೇಯೇ ಅಂತ ಅನಿಸುವುದೂ ಇದೆ.

  ಅದರಲ್ಲೂ ’ಕರ್ವಾಲೋ’ ಅಂತೂ ನನ್ನ ಭಾವಕೊಶದ ಪ್ರತಿಯೊಂದು ಜೀವತಂತುಗಳಲ್ಲೂ ಅಚ್ಚರಿಯ, ಅನನ್ಯತೆಯ ಭಾವ ತರಂಗಗಳನು ಎಬ್ಬಿಸುವ ಮಾಂತ್ರಿಕ ಹೊತ್ತಿಗೆ. ಬಹುಶಃ ರಾಷ್ಟ್ರಕವಿ ಪುತ್ರ ಅನ್ನುವ ದಂತ ಗೋಪುರದ ಹಂಗನು ತೊರೆದು ಮೂಡಿಗೆರೆಯ ದಟ್ಟ ಕಾಡಿನ ಮಧ್ಯೆ ಪದ್ಮಾಸನ ಹಾಕಿ ಕುಳಿತುಕೊಂಡಂತೆ ಅಲ್ಲಿನ ಪ್ರತಿಯೊಂದು ಜೀವಚರಗಳ ಜೊತೆಗೂ ಅವರು ನಡೆಸಿದ ಮೌನ ಸಂಭಾಷಣೆಯ ಫಲಶ್ರುತಿಗಳೇ ಈ ಮೇರು ಕೃತಿಗಳು ಅಂತನ್ನಿಸುತ್ತದೆ ಕೆಲವೊಮ್ಮೆ ನನಗೆ.

ಹತ್ತು ವರ್ಷಗಳ ಹಿಂದೆ ಹೈಸ್ಕೂಲ್ ಹುಡುಗಿಯಾಗಿದ್ದಾಗ ಮೊದಲ ಬಾರಿ ಕರ್ವಾಲೋ ಓದಿ ಮುಗಿಸಿದಾಗ ನನ್ನಲ್ಲಿ ಉದಿಸಿದ ಅದೇ ಅಚ್ಚರಿಯ ಭಾವ, ಎತ್ತಿದ ಪ್ರಶ್ನೆಗಳು,  ಎಸೆದ ಸವಾಲುಗಳು ಪ್ರತಿ ಬಾರಿಯೂ ಪುನರಾವರ್ತನೆಯಾಗುತ್ತವೆ; ಒಂದಿಷ್ಟು ಹೊಸ ಅಚ್ಚರಿಗಳೊಂದಿಗೆ, ಹೊಸ ಪ್ರಶ್ನೆಗಳೊಂದಿಗೆ, ಹೊಸ ಸವಾಲುಗಳೊಂದಿಗೆ.

’ಕರ್ವಾಲೋ’ ಒಂದು ವಿಸ್ಮಯ, ಒಂದು ಅದ್ಭುತ. ಅಲ್ಲಿ ಬರುವ ಪ್ರತಿಯೊಂದು ಪಾತ್ರಗಳೂ ಜೀವ ತಳೆಯುತ್ತವೆ, ಜೀವಂತಿಕೆ ಸ್ಪುರಿಸುತ್ತವೆ. ಜೇನು ಸೊಸೈಟಿಯಿಂದ ಜೇನು ತರುವಲ್ಲಿಂದ ಆರಂಭವಾಗುವ ಕಥೆ,  ಭತ್ತದ ಗದ್ದೆಯನ್ನು ಭಾದಿಸುವ ಹುಳುವಿನ ನಿವಾರಣೆಗೋಸ್ಕರ ಪ್ರಕೃತಿ ವಿಜ್ಞಾನಿ ಕರ್ವಾಲೋ ಅವರನ್ನು ಭೇಟಿಯಾಗುವುದರಿಂದ ಮುಂದುವರಿದು ಅಜ್ಞಾತ ಲೋಕವೊಂದರ ಅಪರೂಪದ ಜೀವಿಯೊಂದನು ಪತ್ತೆ ಹಚ್ಚುವಲ್ಲಿ ಕೊನೆಯಾಗುತ್ತದೆ. ಅಲ್ಲಿ ಮನುಷ್ಯ ಕೇವಲ ಮನುಷ್ಯನಾಗುತ್ತಾನೆ. ಮೂಕ ಜೀವಿಗಳ ಜೊತೆ ಬೆರೆತು ತನ್ನ ಮಾತು ಕಳೆದುಕೊಳ್ಳುತ್ತಾನೆ, ಮನುಷ್ಯತ್ವ ಹುಡುಕಿಕೊಳ್ಳುತ್ತಾನೆ. ಅಲ್ಲಿ ಪ್ರಕೃತಿ ಮಾತೆಯಾಗುತ್ತಾಳೆ, ಓತಿ ಕಾಲಕ್ಕೊಂದು ಸವಾಲಾಗುತ್ತದೆ, ವಿಜ್ಞಾನ ತಬ್ಬಿಬ್ಬಾಗುತ್ತದೆ. ಸ್ವಾರ್ಥ ಪೂರಿತ ಮನುಷ್ಯ ಪ್ರಪಂಚ ತೀರಾ ನಿಕೃಷ್ಟವಾಗಿ ಕಾಣುವ ’ಮಂದಣ್ಣ’ನಂತಹ ಸಾಮಾನ್ಯರಲ್ಲಿ ಅತಿ ಸಾಮಾನ್ಯನು ಮಹಾನ್ ಜ್ಞಾನಿಯಾಗುತ್ತಾನೆ. ಪ್ರಾಪಂಚಿಕ ಜ್ಞಾನದ ಲವಲೇಶವೂ ಇಲ್ಲದ ವಿಜ್ಞಾನಿ ಕರ್ವಾಲೋ ಮಂದಣ್ಣನ ಹಿಂದೆ ಬಿದ್ದಿರುವುದನ್ನು ಸಮಾಜ ಛೇಡಿಸುತ್ತದೆ, ಅವಮಾನಿಸುತ್ತದೆ, ಅಸಹ್ಯಪಟ್ಟುಕೊಳ್ಳುತ್ತದೆ. ಆದರೆ ಮಂದಣ್ಣನಿಗಿರುವ ಪ್ರಕೃತಿ ಜ್ಞಾನದ ಅರಿವಿದ್ದ ಕರ್ವಾಲೋ ಕೋರ್ಟ್, ಪೊಲೀಸ್ ಸ್ಟೇಷನ್ ಎಂದು ಅಲೆಯಬೇಕಾಗಿ ಬಂದರೂ ಅವನ ಸಖ್ಯ ಬಿಡುವುದಿಲ್ಲ. ಎಲ್ಲೋ ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ಮಾತ್ರ ಇವೆ ಎಂದು ತಿಳಿದಿದ್ದ ಮೌಮೌ ಜೇನ್ನೊಣಗಳು ಮೂಡಿಗೆರೆಯ ಕಾಡಿನಲ್ಲೂ ಇವೆ ಎಂದು ತಿಳಿದು ಅಚ್ಚರಿಗೊಳಗಾಗುತ್ತಾರೆ.

ಕಥೆಯ ಮುಖ್ಯ ಪಾತ್ರವಾದ ಮಂದಣ್ಣ ತನಗೆಂಥಾ ಅದ್ಭುತ ಜ್ಞಾನವಿದೆ ಅನ್ನುವುದನ್ನೂ ತಿಳಿಯದ ಮುಗ್ಧ. ಅವನ ಲಿಮಿಟೆಡ್ ಪ್ರಪಂಚದಲ್ಲಿ ಮದುವೆಯೇ ಸರ್ವೋಚ್ಛ ಗುರಿಯಾಗಿತ್ತು. ಅದನ್ನು ಈಡೇರಿಸದೆ ಯಾವ ಸಂಶೋಧನೆಯೂ ಸಾಧ್ಯವಿಲ್ಲ ಅನ್ನುವುದನ್ನು ಅರಿತು ವಿಜ್ಞಾನಿ ಕರ್ವಾಲೋ ಮೂಡಿಗೆರೆಯ ಪ್ರತಿಷ್ಟಿತರು ಅನ್ನಿಸಿಕೊಂಡವರ ವಿರೋಧವನ್ನೂ ಲೆಕ್ಕಿಸದೆ ತಾವೇ ಮುಂದೆ ನಿಂತು ಅವನ ಮದುವೆ ಮಾಡಿಸುತ್ತಾರೆ. ಆ ಮದುವೆಗೆ ನಿರೂಪಕನಾದಿಯಾಗಿ ಕಥೆಯ ಎಲ್ಲಾ ಪಾತ್ರಗಳೂ ಸಾಥ್ ನೀಡುತ್ತವೆ. ಮದುವೆ, ಮದುವೆ ಮನೆಯಲ್ಲಾಗುವ ಫಜೀತಿಗಳನ್ನೆಲ್ಲಾ ಓದುವಾಗ ಒಮ್ಮೆ ನಗು ಉಕ್ಕಿ ಬಂದರೂ ಪುಸ್ತಕ ಮಡಿಚಿಟ್ಟ ಮೇಲೆ ಎರಡು ಮನೆಗಳು, ಮನಗಳು ಒಂದಾಗುವ ಸಂದರ್ಭದಲ್ಲೂ ಅದೆಷ್ಟು ರಾಜಕೀಯ ನಡೆಯುತ್ತದಲ್ಲಾ ಅನ್ನಿಸಿ ವಿಷಾದವೆನಿಸುತ್ತದೆ.

ಒಂದಿಷ್ಟು ಫಜೀತಿ, ಪೀಕಲಾಟ, ಅನುಮಾನಗಳ ಮಧ್ಯೆಯೇ ಮದುವೆ ಸಾಂಗವಾಗಿ ನೆರವೇರುತ್ತದೆ. ಅದಾದಮೇಲೆ ಕಥೆಯ ಮಧ್ಯದಲ್ಲಿ ಕಳ್ಳಭಟ್ಟಿ ತಯಾರಿಕೆಯ ವಿಷಯದಲ್ಲಿ ಮಂದಣ್ಣನ ಬಂಧನವಾಗುತ್ತದೆ. ಮತ್ತೊಂದಿಷ್ಟು ಪೀಕಲಾಟಗಳು, ರಾಜಕೀಯ ದೊಂಬರಾಟಗಳು, ತಣ್ಣಗೆ ಪ್ರಕಟವಾಗುವ ಜಾತಿ ಕ್ರೌರ್ಯ ಇವೆಲ್ಲಾ ಒಳಗಿಂದೊಳಗೇ ಹೊಗೆಯಾಡಿ ಕೊನೆಗೂ ಅವನ ಬಿಡುಗಡೆಯಾಗುತ್ತದೆ.

ಅಲ್ಲಿಂದೀಚೆಗೆ ಶುರುವಾಗುವುದೇ ಸೃಷ್ಟಿಯ ರಹಸ್ಯವನ್ನರಿಯುವ ಮಹಾಯಾನ. ಮಂದಣ್ಣ, ಕರ್ವಾಲೋ, ನಿರೂಪಕ, ಕರಿಯಪ್ಪ, ಪ್ಯಾರ,  ಪ್ರಭಾಕರ, ಎಂಗ್ಟ ನಿರೂಪಕನ ನಾಯಿ ಕಿವಿ... ಹೀಗೆ ಇವರನ್ನೆಲ್ಲಾ ಒಳಗೊಂಡ ತಂಡವೊಂದು ಎತ್ತಿನ ಗಾಡಿಯಲ್ಲಿ ಈಚಲು ಬಯಲಿನ ಮೂಲಕ ಯುಗಾಂತರಗಳ ಹಿಂದಕ್ಕೆ ಪ್ರಾಯಾಣಿಸುತ್ತದೆ. ಇವರ ಪೈಕಿ ನಿರೂಪಕ, ಕರ್ವಾಲೋ, ಪ್ರಭಾಕರ ಈ ಮೂವರನ್ನು ಹೊರತು ಪಡಿಸಿ ಉಳಿದವರು ತಾವೇನನ್ನು ಹುಡುಕಲು ಹೋಗುತ್ತಿದ್ದೇವೆ ಅನ್ನುವುದನ್ನೂ ತಿಳಿಯದಷ್ಟು ಮುಗ್ಧರು. ಇವರ ಜೊತೆ ಜೊತೆಗೆ ಓದುಗರಾದ ನಾವೂ ಇನ್ನೇನು ನಡೆಯಲಿದೆ ಅನ್ನುವ ಕುತೂಹಲದಿಂದ ಸಹಪ್ರಯಾಣಿಕರಂತೆ ಅವರ ಹೆಗಲು ಬಳಸಿ ಈಚಲು ಬಯಲಿನ ಅಗಾಧತೆಯೊಳಗೆ ಕಳೆದುಹೋಗುತ್ತೇವೆ.

ಪ್ರಯಾಣದ ಜೊತೆ ಜೊತೆಗೆ ಕಾಡಿನ ಸೌಂದರ್ಯ, ಅಗಾಧತೆ, ನೀರವ ಮೌನ, ಬೆಚ್ಚಿ ಬೀಳಿಸುವ ದಟ್ಟತೆ, ಕರಿಯಪ್ಪನ ಬಿರಿಯಾನಿ ಪ್ರೀತಿ, ಪ್ಯಾರನ ಅವಿವೇಕತನ ಅನಾವರಣವಾಗುತ್ತಾ ಹೋಗುತ್ತದೆ. ಹಾರುವ ಓತಿ ಹೀಗೆಯೇ ಇರುತ್ತದೆ ಅನ್ನುವ ಸ್ಪಷ್ಟ ಕಲ್ಪನೆಯನ್ನು ಓದುಗರಿಗೆ ಕಟ್ಟಿಕೊಡುವಷ್ಟು ಶಕ್ತಿಯುತ ಮತ್ತು ಸತ್ವಪೂರ್ಣ ಸರಳ ಭಾಷೆಯ ಪ್ರಯೋಗವು ಓದುಗರಲ್ಲಿ ಮತ್ತಷ್ಟು ರೋಚಕತೆಯನ್ನುಂಟು ಮಾಡುತ್ತದೆ.

ಅಂತೂ ಇಂತು ಹಾರುವ ಓತಿ ನಿರೂಪಕರ ಕಣ್ಣಿಗೆ ಬಿದ್ದು, ಎಂಗ್ಟ ಮತ್ತು ಕರಿಯ ಮರ ಹತ್ತಿ ಅದನ್ನು ಹಿಡಿದಾಗ ಓದುಗರ ಮನವೂ, ’ಅಬ್ಬಾ! ಕೊನೆಗೂ ಸಿಕ್ಕಿತಲ್ಲಾ’ ಅಂತ ನಿಟ್ಟುಸಿರು ಬಿಟ್ಟು ಸೃಷ್ಟಿಯ ರಹಸ್ಯ ಇನ್ನೇನು ತಿಳಿದೇಬಿಟ್ಟಿತು ಅನ್ನುವಷ್ಟರಲ್ಲಿ ಓತಿ ದಿಗಂತದತ್ತ ಹಾರಿ ಮರೆಯಾಗುತ್ತದೆ. ’ಛೆ, ಹೀಗಾಗಬಾರದಿತ್ತು’ ಅಂತ ಓದುಗ ಅಂದುಕೊಳ್ಳುತ್ತಿರುವಾಗಲೇ ಆ ಓತಿಯನ್ನು ಹಿಡಿಯಲು ಹರಸಾಹಸಪಟ್ಟು ಇನ್ನೇನು ಕೈಗೆ ಸಿಕ್ಕೇ ಬಿಡುತ್ತದೆ ಅನ್ನುವಷ್ಟರಲ್ಲಿ ಕೈ ಜಾರಿ ಹೋದ ಓತಿಯ ಬಗ್ಗೆ ಕರ್ವಾಲೋ ನಿರಾಸೆ ಪಟ್ಟುಕೊಳ್ಳುತ್ತಾರೇನೋ ಅಂದುಕೊಳ್ಳುವಷ್ಟರಲ್ಲಿ ಅವರು ನಮ್ಮೆಲ್ಲಾ ನಿರೀಕ್ಷೆಗಳನ್ನು ಮೀರಿ ಒಬ್ಬ ಅಪ್ಪಟ ತತ್ವಜ್ಞಾನಿಯಂತೆ "ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ" ಅಂದುಬಿಡುತ್ತಾರೆ.

ಅಲ್ಲಿಗೆ ಕಥೆ ಮುಗಿಯುತ್ತದೆ. ಆದರೆ ಅದು ಉಳಿಸುಹೋಗುವ ಅನನ್ಯತೆಯ ಭಾವ ತಿಂಗಳುಗಟ್ಟಲೆ ಹಾಗೇ ಉಳಿದುಬಿಡುತ್ತದೆ. ಬಹುತೇಕ ಐದನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗೂ ಜೀವಶಾಸ್ತ್ರ ಪುಸ್ತಕವನ್ನು ತಲೆಕೆಳಗು ಮಾಡಿ ಓದಿದಾಗಲೂ ಅರ್ಥವಾಗದ ಡಾರ್ವಿನ್ ನ ’ವಿಕಾಸವಾದ’ವನ್ನು ಕರ್ವಾಲೋ ಮೂಲಕ ತೇಜಸ್ವಿಯವರು ಎಷ್ಟು ಸುಲಭವಾಗಿ, ಸಹಜವಾಗಿ ಅರ್ಥ ಮಾಡಿಸಿದರಲ್ಲಾ ಅನ್ನುವ ಅಚ್ಚರಿ ಪದೇ ಪದೇ ಕಾಡತೊಡಗುತ್ತದೆ. ಹಲವು ಅಂಕಿ ಅಂಶ, ಎಣಿಸಲು ಬಾರದಿರುವಷ್ಟು ಗೋಜಲಾಗಿರುವ ಲೆಕ್ಕ, ಅರ್ಥವೇ ಆಗದ ಪದಗಳು ಇವೆಲ್ಲಾ ಸೇರಿ ಒಂದು ಅಪ್ಪಟ ಗಂಭೀರ ವೈಜ್ಞಾನಿಕ ಕೃತಿಯಾಗಬೇಕಿದ್ದ ಪುಸ್ತಕವೊಂದು ತೇಜಸ್ವಿಯವರ ಕೈಯಲ್ಲಿ ಪತ್ತೇದಾರಿ ಕಥೆಯಾಗಿ, ಜನರ ಮನಸ್ಸಿಗೆ ಆಪ್ತವಾಗಿ ಅರಳುವ ಪ್ರಕ್ರಿಯೆಯೇ ಒಂದು ಅದ್ಭುತ.

೧೯೮೦ರಲ್ಲಿ ಮೊದಲ ಬಾರಿ ಬಿಡುಗಡೆಯಾದ ಈ ಕೃತಿ ಇದುವರೆಗೆ ಸರಿಸುಮಾರು ೩೫ ಪ್ರಕಟಣೆಗಳನ್ನು ಕಂಡಿದೆ. ಪಕ್ಕದ ಮಲಯಾಳಂ, ಮರಾಠಿ, ರಾಷ್ಟ್ರಭಾಷೆ ಹಿಂದಿ, ಇಂಗ್ಲಿಷ್, ದೂರದ ಜಪಾನೀ ಮುಂತಾದ ಭಾಷೆಗಳಿಗೆ ಅನುವಾದಗೊಂಡಿದೆ. ಅದು ಕಂಡಿರುವ ಪ್ರಕಟಣೆಗಳೇ, ಅನುವಾದಗಳೇ ’ಕರ್ವಾಲೋ’ದ ಜನಪ್ರಿಯತೆಯನ್ನು, ಅನನ್ಯತೆಯನ್ನು ಪ್ರಶ್ನೆಗಳಿಗೆ ಎಡೆಯಿಲ್ಲದಂತೆ ಸಾಬೀತುಪಡಿಸಿವೆ. ಆದರೆ ’ಕರ್ವಾಲೋ’ ಈ ಅಂಕಿ ಅಂಶಗಳ ಆಚೆಗೂ ಇಷ್ಟ ಆಗುವುದು ತೇಜಸ್ವಿಯವರ ಸರಳ ನಿರೂಪಣೆಯಿಂದ ಮತ್ತು ಹೃದ್ಯ ಭಾಷೆಯಿಂದಾಗಿ. ನಿಜಕ್ಕೂ ’ಕರ್ವಾಲೋ’ ಮತ್ತು ತೇಜಸ್ವಿ ಕನ್ನಡ ಸಾಹಿತ್ಯ ಲೋಕದ ಬಹುದೊಡ್ಡ ಅಚ್ಚರಿಯೇ ಸರಿ.         

ಮಂಗಳವಾರ, ಮೇ 19, 2015

ಯಾರು ಹಿತವರು ಜಗಕೆ...?

ಬೀದಿ ಬದಿಯ ವೇಶ್ಯೆ ನಾನು
ದೇಹ ಮಾರಿಕೊಳ್ಳುವವಳು
ನೀನೋ...?
ನನ್ನ ಗಿರಾಕಿ
ಉಂಡು ಕಾಸೆಸೆಯೋ ಭಿಕಾರಿ

ಮುಖವಾಡವಿಲ್ಲ ನನಗೆ
ನನ್ನದು ತೋಳಿಲ್ಲದ ಕಪ್ಪು ರವಿಕೆ
ನಿನ್ನದೋ...?
ಸೌಜನ್ಯದ ಸುಸಂಕೃತ ಕವಚದ
ಹಿಂದಿನ ಕಪ್ಪು ಹೃದಯ

ನನ್ನ ಮನಕಿರುವುದು ಒಪ್ಪೊತ್ತಿನ ಅನ್ನದ
ಹೆತ್ತಬ್ಬೆಯ ದೇಹದ ಕೀವಿನ ಚಿಂತೆ
ನಿನ್ನ ಮನಸೋ...?
ತಿರುಳಿಲ್ಲದ ಜೊಳ್ಳು ಶಬ್ಧಗಳ
ಅಸಂಖ್ಯ ವ್ರಣಗಳ ಸಂತೆ

ಸತ್ತ ಮನಸಿನ ಒಡೆಯರಿಗೆ ಬಿಕರಿಯಾದಾಗಲೇ
ನನ್ನ ದೇಹ ಸತ್ತು ಹೋಯ್ತು
ನಿನ್ನ ಆತ್ಮವೋ...?
ಪ್ರತಿ ರಾತ್ರಿ ಸಾಯುತ್ತಲೇ ಇದೆ
ನನ್ನ ಹರಕು ಚಾಪೆಯ ಮಡಿಕೆಗಳಲಿ

ವಂಚನೆಯ ಹಂಗಿಲ್ಲದೆ ಸತ್ತು ಬದುಕುತಿರುವ ನಾನು
ಸುಭಗತನದ ಸೋಗಿನಲಿ ಬದುಕಿಯೂ ಸತ್ತಂತಿರುವ ನೀನು
ಮಧ್ಯೆ ಈ ನಿಷ್ಪಾಪಿ ಲೇಖನಿ
ಹೇಳು...
ಯಾರು ಹಿತವರು ಜಗಕೆ?

ಶನಿವಾರ, ಮೇ 2, 2015

ಅರ್ಥ

ಕಡುಗಪ್ಪ ಕಾರ್ಗತ್ತಲ ಕಾಂತಾರದಿಡೆಯಲಿ
ತಲೆ ಎತ್ತಿ ನಿಂತ ಕರಿಕಲ್ಲು
ಪಕ್ಕದಲ್ಲೊಂದು ಹೆಸರಿಲ್ಲದ ಮರ
ತಣ್ಣಗೆ ಜುಳುಜುಳು ಹರಿವ ತೊರೆ

ನೋಡನೋಡುತ್ತಿದ್ದಂತೆಯೇ;
ಬಂಡೆಯಾಳದಲಿ ಬೇರು ಬಿಟ್ಟ ಮರ
ಬಂಡೆಯೆದೆಯ ಸೀಳಿ ಇಬ್ಭಾಗವಾಗಿಸಿತು
ಅದುರಿಬಿದ್ದ ಭೂಮಿಯೊಮ್ಮೆ ಕಂಪಿಸಿತು
ಟೊಳ್ಳಾದ ಇಳೆಯೆಡೆಯಲಿ ಹರಡಿಕೊಂಡ
ಬೇರಿನ ಸುತ್ತ ಗೆದ್ದಲು ಹತ್ತಿತು
ಸೇರಿಕೊಂಡಿತು ಸರ್ಪವೊಂದು ಹುತ್ತದೊಳು
ಅದರ ರೋಷಾವೇಶದ ಪೂತ್ಕಾರಕೆ
ವಿಷಯುಕ್ತವಾಯಿತು ಪ್ರಶಾಂತ ವಾರಿಯೂ

ಅರಳಿತೊಂದು ರೋಜಾ ಹೂವು
ಅದ ಕುಡಿದ ಗಿಡದ ಶಿರದೊಳು
ನೇತ್ಯಾತ್ಮಕ ಪರಿಸರದೆಡೆಯಲೂ
ಇತ್ಯಾತ್ಮಕ ಭಾವವರಳಿದ
ಖುಶಿಯಲಿ ಮೇರೆ ಮೀರಿ
ಅದರ ಸುಕೋಮಲ ಮೈದಡವಿ
ಅಸಹಜ, ಅಸ್ವಾಭಾವಿಕ ಭೀಕರತೆಗೆ
ಬೆಚ್ಚಿ ಕೈ ಹಿಂದೆಗೆದೆ ರಭಸದಿ
ಹೂವಿಗೆ ಮುಳ್ಳೇ ಇರಲಿಲ್ಲ!

ಮೈ ಪೂರ್ತಿ ಬೆವರು
ಗದ್ಗದಿತ ಕಂಠ
ಢವಗುಡುವ ಹೃದಯ
ಧಿಗ್ಗನೆ ಎದ್ದು ಕೂತೆ
ಕಾಡಿದ ಕಾಡಿಲ್ಲ! ಸಂಪೂರ್ಣ ತಿಮಿರ

ಸ್ವಪ್ನ ಸಾಮ್ರಾಜ್ಯದೊಳು ಇದೆಂಥಾ
ಬಿರುಭೀಕರ ಭಯಾನಕತೆಯೆಂದು
ಕನಸ ಅರ್ಥ ತಿಳಿಸುವ ಹೊತ್ತಿಗೆಯ
ಪುಟವ ಪಟಪಟನೆ ತಿರುವಿದೆ
ಕನಸು ಮರೆಯುವ ಮುನ್ನ

ಮಸ್ತಕದಿ ಅಚ್ಚೊತಿದ ಕನಸಿಗೆ
ಪುಸ್ತಕದಿ ಅರ್ಥವಿರಲಿಲ್ಲ
ಅರ್ಥವಿದ್ದೀತೇ ಬದುಕ ಗ್ರಂಥದಲ್ಲಾದರೂ...?
ಕಾಯುತಿರುವೆ ಕಾತರದಿ
ಅರ್ಥ ತಿಳಿಯಲು...
ಕನಸ ಭೇದಿಸಲು...



ಅಜ್ಜನೆಂಬ ಹೀರೋ

ಈ ಸಿನೆಮಾ ಮ೦ದಿ, ಅವರ ಡೈಲಾಗ್ಸ್, ಅವರ ಆ೦ಗಿಕ ಭಾಷೆ, ತೀರಾ ಅವಾಸ್ತವ ಅನ್ನಿಸುವಷ್ಟಿರುವ ಮಟ್ಟಿಗಿನ ಒಳ್ಳೆಯತನ, ತೆರೆ ಮೇಲಿನ ವಿಜ್ರ೦ಭಣೆ ಇವ್ಯಾವತ್ತೂ ನನಗೆ ಹೀರೋಯಿಸ೦ ಅನ್ನಿಸಲೇ ಇಲ್ಲ. ನನ್ನ ಪ್ರಪ೦ಚವನ್ನು ಸಿನಿಮಾದವರು ಆಳೋದು ಬಿಡಿ, ಅದರೊಳಗೆ ಅವರು ಕಾಲೂ ಇಟ್ಟಿಲ್ಲ.

ನನ್ನ ಬದುಕಿನ ಹೀರೋ ನ ಬಗ್ಗೆ ಬರೆಯಬೇಕೆಂದಾಗೆಲ್ಲ ನನ್ನ ಅಕ್ಷರಗಳಲ್ಲಿ ಮೂಡುವುದು ಅಪ್ಪನ೦ತಿದ್ದ ಅಜ್ಜ. Infact , ನನ್ನಜ್ಜ ನ೦ಗೆ ಬರಿ ಅಪ್ಪ ಮಾತ್ರ ಆಗಿರಲಿಲ್ಲ. ಎಲ್ಲರ ಬದುಕಲ್ಲಿ ಅಮ್ಮ ಮೊದಲ ಗುರು ಅದರೆ ನನ್ನ ಬದುಕಲ್ಲಿ ಅಜ್ಜನೇ ಮೊದಲ ಗುರು, ಮೊದಲ ಅಪ್ಪ, ಮೊದಲ ಅಮ್ಮ, ಮೊದಲ ಗೆಳೆಯ, ಮೊದಲ ಸ೦ಗಾತಿ ಎಲ್ಲವೂ ಆಗಿದ್ದರು. 

ಎಪ್ಪತ್ತರ ಇಳಿವಯಸ್ಸಲ್ಲೂ ದಿನವಿಡೀ ಕೆಲಸ ಮಾಡುತ್ತಿದ್ದ, ಪ್ರತಿಯೊ೦ದನ್ನೂ ಮೊದಲ ಬಾರಿ ಎ೦ಬ೦ತೆ ಗಮನವಿಟ್ಟು ಓದುತ್ತಿದ್ದ, ಪ್ರತಿದಿನ ಹೊಸತನಕ್ಕಾಗಿ ತುಡಿಯುತ್ತಿದ್ದ, ನನ್ನ ಬಾಲಸಹಜ ಸಾವಿರ ಪ್ರಶ್ನೆಗಳಿಗೆ ಸಮಾಧಾನದಿ೦ದ ಉತ್ತರಿಸುತ್ತಿದ್ದ, ಕೊನೆಗಾಲದಲ್ಲಿ ಫ್ರೆ೦ಚ್-ಇ೦ಗ್ಲಿಷ್  ಪುಸ್ತಕ ತರಿಸಿ ಫ್ರೆ೦ಚ್ ಕಲಿಯಲು ಯತ್ನಿಸಿದ್ದ ಅಜ್ಜನೆ೦ಬ ಅಬ್ಬ ನನಗಿವತ್ತೂ ಒ೦ದು ದೊಡ್ಡ ಆಶ್ಚರ್ಯಸೂಚಕ ಚಿಹ್ನೆಯೇ!


10  ವರ್ಷವಿರುವಾಗಲೇ ತನ್ನ ಅಪ್ಪನನ್ನು ಕಳೆದುಕೊ೦ಡ ಅಜ್ಜ ರಾತ್ರಿ ವೇಳೆ ಬಟ್ಟೆಯ೦ಗಡಿಯಲ್ಲಿ ಕೆಲಸ ಮಾಡುತ್ತಾ ಓದಿ ಅವತ್ತಿನ ಕಾಲಕ್ಕೆ ಭಾರಿ ಅನ್ನುವ೦ತಿದ್ದ T.Ch  ಮಾಡಿ 17 ವರ್ಷವಾಗುವಷ್ಟರಲ್ಲೇ ಸ೦ಸಾರದ ಹೊಣೆ ಹೊತ್ತಿದ್ದರ೦ತೆ. ಬಹುಶಃ ಬಟ್ಟೆಗಳ ಮಡಿಕೆಗಳೆಡೆಯಲ್ಲಿ ಕುಳಿತಿರುತ್ತಿದ್ದ ಧೂಳುಗಳೇ ಅವರಿಗೆ ಬದುಕಿನ ಪಾಠ ಕಲಿಸಿತ್ತೋ ಏನೋ?

ನನ್ನಜ್ಜ ಬೆಳಗ್ಗಿನ ಜಾವ 3 ಗ೦ಟೆಗೇ ಎದ್ದು ನಮಾಜು ಮಾಡುತ್ತಿದ್ದ, ಅಸ್ಖಲಿತವಾಗಿ 6 ಭಾಷೆ ಮಾತಾಡುತ್ತಿದ್ದ, ಅದರಲ್ಲೂ ಅರಬ್ಬೀ ಭಾಷೆಯ ಸ೦ಪೂರ್ಣ ಪಾ೦ಡಿತ್ಯವಿದ್ದ ಒಬ್ಬ ಕರ್ಮಠ ಮುಸ್ಲಿಮ್. ಆದರೆ ಅವರ ಕರ್ಮಠತ್ವ, ಅವರ ಅರಬ್ಬೀ ಪಾ೦ಡಿತ್ಯ ಇನ್ನೊಬ್ಬರ ನ೦ಬಿಕೆಯನ್ನು ನೋಯಿಸುವ೦ತಿರಲಿಲ್ಲ, ಲೌಕಿಕ ಶಿಕ್ಷಣವನ್ನು ವಿರೋಧಿಸುತ್ತಿರಲಿಲ್ಲ. ಶಾಲಾ ಶಿಕ್ಷಣ ಪಡೆದುಕೊಳ್ಳುವುದೇ ಅಪರಾಧ ಎ೦ದು ಭಾವಿಸಿದ್ದ ಮುಸ್ಲಿಮ್ ಸಮಾಜದಲ್ಲಿ ಅವರವತ್ತು ಎಲ್ಲಾ ಮಕ್ಕಳಿಗೂ ಶಿಕ್ಷಣ ಕೊಡಿಸಿ ಆ ಮೂಲಕ ಒ೦ದು ಹೊಸ ಕ್ರಾ೦ತಿಯನ್ನೇ ಮಾಡಿದರು, ಜೊತೆಗೆ ಒ೦ದಿಡೀ ಸಮುದಾಯದ, ಧರ್ಮಗುರುಗಳ ಕೆ೦ಗಣ್ಣಿಗೆ ಗುರಿಯಾದರು.  ಅರಬ್ಬಿ ಭಾಷೆ ಗೊತ್ತಿದ್ದ ನನ್ನಜ್ಜ ಯಾವ ಮಕ್ಕಳನ್ನೂ ಮದ್ರಸಕ್ಕೆ ಕಳುಹಿಸಲೇ ಇಲ್ಲ, ಬದಲಾಗಿ ತಾವೇ ಪಟ್ಟಾಗಿ ಕೂತು ಮಕ್ಕಳಿಗೆ ಧಾರ್ಮಿಕ ಪಾಠ ಹೇಳಿಕೊಟ್ಟರು, ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕು ಅನ್ನುವುದನ್ನೂ ಒಬ್ಬ ಅಪ್ಪಟ ಗೆಳೆಯನ೦ತೆ ತಿಳಿಸಿಕೊಟ್ಟರ೦ತೆ. ಒ೦ದು ಹೊತ್ತಿನ ಊಟ ಬಿಟ್ಟಾದರೂ ಸರಿ ವಾರಕ್ಕೊ೦ದು ಪುಸ್ತಕ ಮನೆಗೆ ಬರಲೇಬೇಕೆ೦ದು ಅಲಿಖಿತ ನಿಯಮ ಮಾಡಿಬಿಟ್ಟರ೦ತೆ. ಕೇವಲ ಏಳನೇ ತರಗತಿ ಓದಿರುವ ನನ್ನಮ್ಮನಲ್ಲಿ ಇವತ್ತು ಜ್ಞಾನ ಭ೦ಡಾರವೇ ಇದೆ ಎ೦ದಾದರೆ, ಬದುಕಲ್ಲಿ ಎದುರಾಗುವ ಪ್ರತೀ ಸಮಸ್ಯೆಗಳನ್ನೂ ವಿಶ್ಲೇಷಣಾತ್ಮಕವಾಗಿ ಎದುರಿಸುವ ಛಲ ಇದೆಯೆ೦ದಾದರೆ ಅದಕ್ಕೆ ಅಜ್ಜ ಮತ್ತವರು ಓದಿಸಿದ ಪುಸ್ತಕಗಳೇ ಕಾರಣ. ಅಷ್ಟೇಕೆ ಎರಡನೇ ಕ್ಲಾಸ್ ನಲ್ಲಿರುವಾಗಲೇ ನನ್ನಿ೦ದ  ಕಾದ೦ಬರಿಯೊಂದನ್ನು ಓದಿಸಿ, ಅದನ್ನು ಮತ್ತೆ ಅವರಿಗೇ ನಾನು ಕಥೆಯಾಗಿ ಹೇಳಬೇಕಿತ್ತು. ಆ ಮೂಲಕ ನನ್ನ ಉಚ್ಛಾರ ದೋಷವನ್ನು ಸರಿ ಪಡಿಸುವುದರ ಜೊತೆ ಜೊತೆಗೆ ಪುಸ್ತಕಗಳ ಕೈ ಹಿಡಿದು ಬದುಕು ಸಾಗಿಸುವುದನ್ನು ಹೇಳಿ ಕೊಟ್ಟರು.

ನಾನಾಗ ಮೂರನೇ ತರಗತಿಯಲ್ಲಿದ್ದೆ, ಕ್ಲಾಸ್ ಟೀಚರ್ ’ಪರಿಸರ ಸ೦ರಕ್ಷಣೆ’ ಬಗ್ಗೆ ಪ್ರಬ೦ಧ ಬರೆದುಕೊ೦ಡು ಬರಲು ಹೇಳಿದ್ದರು. ನಾನೋ ನಿವೃತ್ತ ಶಿಕ್ಷಕರೊಬ್ಬರು ಮನೆಯಲ್ಲಿರುವಾಗ ಪ್ರಬ೦ಧ ಬರೆಯೋಕೆ ಏನಾಗಬೇಕು ಅನ್ನುವ ಧೈರ್ಯದಲ್ಲೇ ಮನೆಗೆ ಬ೦ದು, ಪೆನ್ಸಿಲ್-ಪುಸ್ತಕ ಅಜ್ಜನ ಕೈಗಿಟ್ಟು ಬರೆಯೋಕೆ ಹೇಳಿದ್ದೆ. ಅವರು ೪ ಪಾಯಿ೦ಟ್ ಬರೆದುಕೊಟ್ಟು ನೀನೇ ಬರಿ ಅ೦ತ೦ದು ಒ೦ದು ಕ್ಷಣವೂ ಅಲ್ಲಿ ನಿಲ್ಲದೆ ತಮ್ಮ ಎ೦ದಿನ ವಾಯುವಿಹಾರಕ್ಕೆ ಹೊರಟು ಹೋಗಿದ್ದರು. ನನಗವತ್ತು ಅವರ ಮೇಲೆ ಕೆಟ್ಟ ಕೋಪ ಬ೦ದಿತ್ತು. ಆದರೆ ಇವತ್ತದರ ಮಹತ್ವ ಅರ್ಥ ಆಗುತ್ತಿದೆ. ಮೊದಲನೇ ಬಾರಿ ಇ೦ಟರ್ ಸ್ಕೂಲ್ ಭಾಷಣ ಸ್ಪರ್ಧೆಯಲ್ಲಿ ನನಗೆ ಬಹುಮಾನ ಬ೦ದಾಗ ಮನೆಯವರೆಲ್ಲರೂ ನನ್ನ ಗೆಲುವನ್ನು ಸ೦ಭ್ರಮಿಸುತ್ತಿರುವಾಗ ಅಜ್ಜ ದೂರದಲ್ಲಿ ನಿ೦ತು  ನನ್ನ ತಪ್ಪುಗಳ ಪಟ್ಟಿ ಮಾಡುತ್ತಿದ್ದರು. ನನಗವತ್ತು ಅವರು ನನ್ನ ಗೆಲುವನ್ನು ಸಂಭ್ರಮಿಸದ ಒಬ್ಬ ’ವಿಚಿತ್ರ ವ್ಯಕ್ತಿ’ಯಾಗಿ ಕಾಣಿಸಿದ್ದರು. ಆದರೆ ಈ ಕ್ಷಣದಲ್ಲಿ ಹಿ೦ದಿರುಗಿ ನೋಡಿದಾಗ ನಾನ೦ದು ಅವರು ಮಾಡಿದ ತಪ್ಪುಗಳ ಪಟ್ಟಿಯತ್ತ ನನ್ನ ಗೆಲುವಿನ ’ಅಹಂ’ ನ್ನು ಬಿಟ್ಟು ಒ೦ದೇ ಒಂದು ಸಲ ನೋಡಿದ್ದರೂ ಮು೦ದೆ  ಜೀವನದಲ್ಲಿ ಅವರಿಲ್ಲದಿದ್ದಾಗ ಆದ ತಪ್ಪುಗಳನ್ನು ತಡೆಯಲಾಗದಿದ್ದರೂ  ಕೊನೇ ಪಕ್ಷ ಸರಿಪಡಿಸುವ ಪ್ರಯತ್ನವನ್ನಾದರೂ ಮಾಡುತ್ತಿದ್ದೆ ಅನಿಸುತ್ತಿದೆ.

    ಆದರೆ ವಿನಮ್ರವಾಗಿ ನನ್ನ ತಪ್ಪುಗಳನ್ನು ಅವರ ಮು೦ದೆ ಒಪ್ಪಿಕೊಳ್ಳಲು, ನನ್ನ ಅನಿಸಿಕೆಯನ್ನು ಪ್ರಾಮಾಣಿಕವಾಗಿ ಅವರ ಮು೦ದೆ ಇಡಲು ಅವರೇ ಇಲ್ಲ. ಭೌತಿಕವಾಗಿ ಅವರನ್ನು ಕಳೆದುಕೊ೦ಡು ಬರೋಬ್ಬರಿ 16 ವರ್ಷಗಳೇ ಕಳೆದುಹೋಗಿವೆ. ಆದರೆ ಇವತ್ತಿಗೂ ಅವರು ದಿನದ ಯಾವುದೋ ಒ೦ದು ಕ್ಷಣದಲ್ಲಿ, ಜೀವನದ ಯಾವುದೋ ಒ೦ದು ತಿರುವಿನಲ್ಲಿ, ಗೆಲುವಿನ ಒ೦ದು ಸಣ್ಣ ಸ೦ಭ್ರಮದಲ್ಲಿ, ಅನಿರೀಕ್ಷಿತ ಸೋಲಿನ ನೋವಿನಲ್ಲಿ ನೆನಪಾಗಿ, ಸತ್ಯವಾಗಿ, ಪ್ರಶ್ನೆಯಾಗಿ, ಉತ್ತರವಾಗಿ, ಅಚ್ಚರಿಯಾಗಿ, ಬದುಕಾಗಿ, ಪಾಠವಾಗಿ ಕಾಡುತ್ತಾರೆ. ಅವರು ಇನ್ನೂ ನನ್ನ ಬೆನ್ನ ಹಿ೦ದೆ ನಿ೦ತು ನನ್ನನ್ನು ಗಮನಿಸುತ್ತಿದ್ದಾರೆ ಅನ್ನುವ ಭಾವನೆಯೇ ನನ್ನನ್ನು ಹಲವು ತಪ್ಪುಗಳಿ೦ದ ದೂರವಿಟ್ಟಿವೆ, ಇನ್ಯಾರದೋ ಬದುಕು ನನ್ನಿ೦ದಾಗಿ ಹಾಳಾಗುತ್ತಿದೆ ಎ೦ದನ್ನಿಸಿದಾಗೆಲ್ಲಾ ಒ೦ದು ಹೆಜ್ಜೆಯೂ ಮು೦ದಿಡಲಾರದ೦ತೆ ತಡೆದಿವೆ. ಆದರೂ ನಾನ್ಯವತ್ತೂ ಅವರ೦ತೆ ಆಗಲು, ಅವರ ಬದುಕನ್ನು ಬದುಕಲು ಪ್ರಯತ್ನಿಸಲೇ ಇಲ್ಲ ಅಥವಾ ಅವರು ಯಾವತ್ತೂ ನನ್ನ ರೋಲ್ ಮಾಡೆಲ್ ಆಗಲೇ ಇಲ್ಲ. ಬಹುಶಃ ಅವರಿಗಿದ್ದ ಜ್ಞಾನ, ಪಾ೦ಡಿತ್ಯ, ವಿವೇಕ ಮತ್ತು ಪಕ್ವತೆಯ ಸನಿಹಕ್ಕೂ ತಲುಪಲು ನನ್ನಿ೦ದ ಸಾಧ್ಯ ಇಲ್ಲ ಅನ್ನುವ ಸತ್ಯವೇ ನನ್ನನ್ನು ಅವರ೦ತೆ ಆಗಲು, ಅವರ ಬದುಕನ್ನು ಬದುಕಲು ಪ್ರಯತ್ನಿಸುವುದರಿ೦ದ ದೂರವಿಟ್ಟಿರಬೇಕು ಮತ್ತು ಇದೇ ಕಾರಣಕ್ಕೆ ಅವರು ನನಗ್ಯಾವತ್ತೂ ರೋಲ್ ಮಾಡೆಲ್ ಆಗಿಲ್ಲದಾಗಿರಬಹುದು. ಮು೦ದೆ ಯಾವತ್ತಾದರೂ ಆಗಬಹುದೋ...? ಗೊತ್ತಿಲ್ಲ... ಕಾಲವೇ ಅದನ್ನು ನಿರ್ಣಯಿಸಲಿ ಬಿಡಿ...