ಬುಧವಾರ, ಆಗಸ್ಟ್ 26, 2015

ಮತ್ತೆ ಮತ್ತೆ ನೆನಪಾಗುವಿ ಶಾಕುಂತಲೆ...


ನಡು ಮಧ್ಯಾಹ್ನ ಹೊಸ್ತಿಲ
ಮೇಲೆ ಬಿಡುಬೀಸಾಗಿ ಚೆಲ್ಲಿ
ಬೆಳೆಯುವ ಮುನ್ನವೇ ಸಾಯುವ
ನೆರಳ ಕಂಡಾಗೆಲ್ಲಾ ನೀನು
ಮತ್ತೆ ಮತ್ತೆ ನೆನಾಪಾಗುವಿ
ಶಾಕುಂತಲೆ

ಕಾಳಿದಾಸನೇನೋ ನಿನ್ನ
ಬೆಟ್ಟದಷ್ಟಿದ್ದ ಸಹನೆಯ
ದುಶ್ಯಂತನೆಡೆಗೆ ನಿನಗಿದ್ದ
ಅಗಾಧ ಬದ್ಧತೆಯ ಬಗ್ಗೆ
ಪುಟವೆಣಿಸಲು ಬಾರದಷ್ಟು ಬರೆದ

ಆದರೆ ನನಗೇಕೋ ಅವನ
ಮಹಾಕಾವ್ಯದ ಪ್ರತಿ ಸಾಲಿನಲೂ
ನೆರಳು-ಬೆಳಕು, ಮರೆವು-ನೆನಪುಗಳ
ಅಟ್ಟಹಾಸದಲಿ
ಸಾಯದೇ ಬದುಕಿದ ನಿನ್ನ
ನಿಷ್ಪಾಪಿ ಆತ್ಮದ ಕೊನೆಯಿಲ್ಲದ
ಆರ್ತನಾದ ಮಾತ್ರ ಕೇಳಿಸುತಿದೆ

ನೆನಪೇ ಇಲ್ಲವೆಂದಿದ್ದವನ ತೋಳ ತೆಕ್ಕೆಯಲಿ
ನೀ ಮತ್ತೆ ಕರಗಿಹೋಗಬೇಕಾಗಿ ಬಂದಾಗ
ನಿನ್ನ ಸ್ವಾಭಿಮಾನ ಪ್ರತಿಭಟಿಸಿರಲಿಲ್ಲವೇ?
ಇಲ್ಲ ಪ್ರತಿಭಟನೆ ಭರಿಸಲಾರದೆ
ಕುದಿ ಕುದಿದು ಆರಿಹೋದ
ಅಪರಿಮಿತ ಕಂಬನಿಗಳಲಿ
ಅದ ನೀನೇ ಹೂತುಬಿಟ್ಟೆಯಾ?

ದುಶ್ಯಂತನ ಕಣ್ಣಲಿ ತೊನೆಯುತ್ತಿದ್ದ ಅಹಂಕಾರದಲಿ
ಉಂಗುರದ ಪ್ರತಿಬಿಂಬ ಕಂಡು
ನಿನಗೊಮ್ಮೆಯೂ ರೇಜಿಗೆ ಹುಟ್ಟಲೇ ಇಲ್ಲವೇ?
ಇಲ್ಲ ನೆರಳು ಬೆಳೆಯಬಾರದೆಂದು
ಝಾಡಿಸಿ ಒದೆಯುವಷ್ಟಿದ್ದ ರೇಜಿಗೆಯನೂ
ತಣ್ಣನೆಯ ನಗುವಿನಲಿ ಮರೆಸಿಟ್ಟೆಯಾ?

ಬೆಳಕು ಮಾಸುವ ಮುನ್ನ
ನೆರಳು ಕಳೆಯುವ ಮುನ್ನ
ನೆನಪು ಮರೆಯುವ ಮುನ್ನ
ಹೇಳು ಸಖೀ,
ಮತ್ತೆ ಎರಡನೇ ಬಾರಿ ದುಶ್ಯಂತ
ನಿನ್ನೆಡೆಗೆ ಕೈಚಾಚಿದ ನಂತರ
ನೀನೊಮ್ಮೆಯೂ ನಿಡುಸುಯ್ಯಲೇ ಇಲ್ಲವೇ?

ಭಾನುವಾರ, ಆಗಸ್ಟ್ 23, 2015

ಅವಳ ಒಳಗುದಿಗಳನ್ನೂ ಸ್ವಲ್ಪ ಅರ್ಥ ಮಾಡ್ಕೊಳ್ಳಿ ಪ್ಲೀಸ್...

ಆ ಕಡೆಯಿಂದ ಹುಡುಗ ಅಸಹನೆಯಿಂದ ಹೇಳುತ್ತಾನೆ "ಇಷ್ಟು ಹೊತ್ತು  ಯಾರ್ಜೊತೆ ಹರಟೆ ಹೊಡೆಯುತ್ತಿದ್ದೆ, ಆಗದಿಂದ ಫೋನ್ ವೈಟಿಂಗ್ ಬರ್ತಿತ್ತು..". ಈ ಕಡೆಯಿಂದ ಹುಡುಗಿ, ಎರಡೇ ಎರಡು ನಿಮಿಷ ವೈಟಿಂಗ್ ಇದ್ದುದಕ್ಕೆ ಈ ಪರಿ ಅನುಮಾನನಾ ಅಂತಂದುಕೊಳ್ಳುತ್ತಾ ಅದರ ದುಪ್ಪಟ್ಟು ಅಸಹನೆಯಿಂದ "ನಿನಗೇ ಗೊತ್ತಿಲ್ಲದೆ ನನಗೊಬ್ಬ ಬಾಯ್ ಫ್ರೆಂಡ್ ಇದ್ದಾನೆ ಅವನ್ಜೊತೆ ಮಾತಾಡುತ್ತಿದ್ದೆ" ಅನ್ನುತ್ತಾ ಫೋನ್ ಕುಕ್ಕುತ್ತಾಳೆ. ಹತ್ತು-ಹದಿನೈದು ನಿಮಿಷ ಕಳೆಯುವಷ್ಟರಲ್ಲಿ ಇಬ್ಬರಿಗೂ ತಮ್ಮ ತಮ್ಮ ತಪ್ಪಿನ ಅರಿವಾಗುತ್ತದೆ. ಅಥವಾ ಇಬ್ಬರಲ್ಲಿ ಒಬ್ಬರಿಗಾದರೂ ಆಗುತ್ತೆ. ಆ ಕಡೆಯಿಂದ ಅವನು ಅನುನಯಿಸಿಕೊಂಡು ಬರುತ್ತಾನೆ, ಅಥವಾ ಈ ಕಡೆಯಿಂದ ಇವಳು ಅನುನಯಿಸಿಕೊಂಡು ಹೋಗುತ್ತಾಳೆ. ಒಂದು ಸಾರಿ ಕಣೇ/ಣೋ ಗೆ ಮುನಿಸು ಮುಗಿದು ಮತ್ತೆ ಮೊದಲಿನಂತಾಗುತ್ತಾರೆ. ಆದರೆ ಸಂಬಂಧ ಅವರಿಗೇ ಗೊತ್ತಿಲ್ಲದಷ್ಟು ಸೂಕ್ಷ್ಮವಾಗಿ ಬಿರುಕುಬಿಡುತ್ತದೆ, ಅಥವಾ ಬಿರುಕಿಗೆ ಆರಂಭದ ಅಂಕಿತ ಹಾಕಿ ಬಿಡುತ್ತದೆ.

ಹರೆಯವೆಂಬುವುದೇ ಹಾಗೆ. ಕಳ್ಳ ಬೆಳದಿಂಗಳ ಹಾಗೆ ಸದ್ದೇ ಇಲ್ಲದೆ ಮನದ ಹೊಸ್ತಿಲೊಳಗೆ ಬಂದು ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡುಬಿಡುತ್ತದೆ. ಹಾಗೆ ಸದ್ದಿಲ್ಲದಂತೆ ಹರೆಯ ಬದುಕನ್ನು ಪ್ರವೇಶಿಸಿದಾಗಲೇ ಹರಟೆಗೆ, ಪಿಸುಮಾತಿಗೆ, ಸರಸಕ್ಕೆ, ವಿರಸಕ್ಕೆ, ಗುಟ್ಟುಗುಟ್ಟಾಗಿ ಸಾಂತ್ವನಿಸೋಕೆ, ಮುನಿಸಿಗೆ, ಹುಸಿಕೋಪಕ್ಕೆ, ಸುಳ್ಳೇ ಸುಳ್ಳು ನಾಚೋಕೆ, ನನಗವಳು/ನು ಅಂತ ಸಂಭ್ರಮಿಸೋಕೆ, ಖುಶಿಯಾದಾಗ ಹಂಚಿಕೊಳ್ಳೋದಕ್ಕೆ, ಬೇಜಾರಾದಾಗೆಲ್ಲಾ ಪರಸ್ಪರರನ್ನು ಸಂತೈಸೋಕೆ, ಸುಮ್ಮನೆ ಹೆಗಲಿಗೆ ತಲೆಯಾನಿಸಿ ಕುಳಿತು ಒಂದು ವಿವರಿಸಲಾಗದ ಸೆಕ್ಯೂರ್ ಫೀಲಿಂಗ್ ಅನುಭವಿಸೋಕೆ ಒಬ್ಬ/ಳು ಸಮಾನ ಮನಸ್ಕ ಜೊತೆಗಾತಿ ಬೇಕು ಅಂತ ಮನಸು ವರಾತ ಹಚ್ಚತೊಡಗುತ್ತದೆ. ಆಗಲೇ ಇಷ್ಟವಾದವರ ಮುಂದೆ ನಿಂತು ತಲೆ ತಗ್ಗಿಸಿ, ನೆಲ ಕೆರೆದುಕೊಳ್ಳುತ್ತಾ ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟು ಸೇರಿಸಿ" ಐ ಲವ್ ಯೂ" ಅಂದುಬಿಡುವುದು. ಅಥವಾ ಅವನು/ಳು ಆಫ್ ಲೈನ್ ಆದಮೇಲೆ "ಐ ಲವ್ ಯೂ" ಅಂತ ವಾಟ್ಸಾಪ್ ಮಾಡಿ ಬೆಳಗ್ಗಿನ ವರೆಗೂ ಅವಳು/ನು ಏನನ್ನುತ್ತಾಳೋ/ನೋ ಅನ್ನುವ ಪ್ರೀತಿ ತುಂಬಿದ ಕುತೂಹಲದಿಂದ ಜಾಗರಣೆ ಮಾಡುವುದು.

ಅವನೋ/ಳೋ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಅಧಿಕೃತವಾಗಿ ಅವರಿಬ್ಬರು ಪ್ರೇಮಿಗಳಾಗುತ್ತಾರೆ. ಅಂದರೆ ಒಬ್ಬರ ಬಗ್ಗೆ ಇನ್ನೊಬ್ಬರು ಎಗ್ಗಿಲ್ಲದೆ ಕನಸು ಕಾಣೋದು, ಕಣ್ಣಲ್ಲೇ ನೂರು ಮಾತಾಡುವುದು, ಮೌನವಾಗಿದ್ದುಕೊಂಡೇ ಸಂವಹನ ನಡೆಸೋದು, ಸಿಗರೇಟು ಬಿಡು ಅಂತ ಅವಳನ್ನೋದು, ನಾಳೆ ಕ್ರೀಂ ಕಲರ್ ಚೂಡಿದಾರೇ ಹಾಕ್ಕೊಂಡು ಬಾ ಅಂತ ಇವನನ್ನುವುದು ಎಲ್ಲಾ ಆರಂಭವಾಗುವುದು ಆ ಕ್ಷಣದಿಂದಲೇ.

ಇವಿಷ್ಟೂ ಆದ ನಂತರ ಹುಡುಗರು ಹೇಗಿರುತ್ತಾರೋ ಗೊತ್ತಿಲ್ಲ. ಆದ್ರೆ ಹುಡುಗಿಯಂತೂ ಅವತ್ತಿನಿಂದ ತನ್ನಷ್ಟಕ್ಕೆ ತಾನೇ ನಗತೊಡಗುತ್ತಾಳೆ, ದಿನಕ್ಕೆ ನೂರು ಬಾರಿ ’ಮಧುರಾ ಪಿಸುಮಾತಿಗೆ...’ ಹಾಡು ನೋಡುತ್ತಾಳೆ, ಒಬ್ಬಳೇ ಮಾತಾಡಿಕೊಳ್ಳುತ್ತಾಳೆ, "ಕಾಲೇಜಿಂದ ಬರೋಕೆ ಯಾಕೆ ಲೇಟ್ ಆಯ್ತು?" ಅಂತ ಅಮ್ಮ ಕೇಳಿದಾಗ "ಬಸ್ ಲೇಟಮ್ಮಾ" ಅಂತ ಸಲೀಸಾಗಿ ಸುಳ್ಳು ಹೇಳಲು ಕಲಿಯುತ್ತಾಳೆ, ಅವನು ಒಂದಿನ ಫೋನ್ ಮಾಡದಿದ್ರೆ ರಾತ್ರಿಯಿಡೀ ಅತ್ತು, ಬೆಳಗ್ಗೆ ಅಪ್ಪ "ಕಣ್ಣೇಕೆ ಕೆಂಪಾಗಿದೆ ಮಗಳೇ?" ಅಂತ ಕೇಳಿದಾಗ "ವಿಪರೀತ ತಲೆ ನೋವು ಅಪ್ಪಾ" ಎಂದು ಹೇಳಿ ಕಣ್ಣು ತಪ್ಪಿಸಿ ಓಡಾಡುವುದನ್ನು ಕಲಿಯುತ್ತಾಳೆ, ಕೆರೆಯ ಬದಿಯ ಕೆಸರು ಮಣ್ಣಿನಲ್ಲಿ ಉಗುರಿಂದ ಅವನೆಸರು ಗೀಚಿ ಅತ್ತಿತ್ತ ಯಾರೂ ಇಲ್ಲ ಅನ್ನುವುದನ್ನು ಸ್ಪಷ್ಟಪಡಿಸಿಕೊಂಡು ಮೆಲ್ಲನೆ ಮುತ್ತಿಟ್ಟು ತುಟಿಗಂಟಿದ ಕೆಸರು ಒರೆಸಿಕೊಳ್ಳುತ್ತಾಳೆ, ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರವನ್ನು ಅವನೇ ಅಂದುಕೊಂಡು ಸುಮ್ಮನೇ ನಾಚುತ್ತಾಳೆ, ಕಾಲು ದಾರಿಯಲ್ಲಿ ಹೆಜ್ಜೆ ಹಾಕುವಾಗೆಲ್ಲಾ ಅವನು ಜೊತೆಗಿದ್ದಾನೆಂದು ಭ್ರಮಿಸಿ ನಿಧಾನವಾಗಿ ಹೆಜ್ಜೆ ಎತ್ತಿಡುತ್ತಾಳೆ, ನನ್ನ ಪ್ರೀತಿಯ ವಿಷಯ ಮನೆಯಲ್ಲಿ ಗೊತ್ತಾದರೆ... ಎಂದು ಸುಳ್ಳೇ ಸುಳ್ಳು ಕಲ್ಪಿಸಿಕೊಂಡು ಹೆದರಿಕೊಳ್ಳುತ್ತಾಳೆ, ತುಸು ಹೊತ್ತು ಕಳೆದು ಅವನಿಗೆ ಕರೆ ಮಾಡಿ ತನ್ನ ಭಯದ ಬಗ್ಗೆ ಹೇಳಿ ಅಳುತ್ತಾಳೆ, ಅವನು ಹಾಗೆಲ್ಲಾ ಏನೂ ಅಗುವುದಿಲ್ಲವೆಂದು ಭವಿಷ್ಯ ಹೇಳುತ್ತಾನೆ, ಇವಳು ಅಷ್ಟಕ್ಕೇ ಸಮಾಧಾನ ಪಟ್ಟುಕೊಂಡು "ಐ ಲವ್ ಯೂ ಕಣೋ" ಅಂತಂದು ಫೋನ್ ಕಟ್ ಮಾಡುತ್ತಾಳೆ. 

ಇಷ್ಟೆಲ್ಲಾ ಆಗುವಾಗ ಆರು-ಏಳು ತಿಂಗಳು ಕಳೆದು ಬಿಟ್ಟಿರುತ್ತದೆ. ಆ ವೇಳೆಗಾಗುವಾಗಲೇ ಇವಳ ಪ್ರೀತಿಯ ವಾಸನೆ ಸ್ವಲ್ಪೇ ಸ್ವಲ್ಪ ಮನೆಯವರಿಗೆ ಬಡಿದಿರುತ್ತದೆ. ಅಕ್ಕ ಇಲ್ಲದ ಕಾರಣ ಸೃಷ್ಟಿಸಿಕೊಂಡು ಫೋನ್ ಕೇಳುತ್ತಾಳೆ. ಅಮ್ಮ ಸುಖಾ ಸುಮ್ಮನೆ, ಪ್ರೀತಿಸಿ ಮದುವೆಯಾಗಿ ಮುಂದೆ ಶರಂಪರ ಜಗಳವಾಡಿ ಡೈವೋರ್ಸ್ ಪಡೆದುಕೊಂಡಿರುವುದರ ಬಗ್ಗೆ ಮಾತಾಡತೊಡಗುತ್ತಾರೆ. ಅಪ್ಪ ನೂರು ಮಗನನ್ನಾದರೂ ನೆಮ್ಮದಿಯಿಂದ ಸಾಕಬಹುದು ಆದರೆ ಒಬ್ಬ ಮಗಳನ್ನು ಸಾಕುವುದು ಕಷ್ಟ ಅಂತ ಇವಳಿಗೆ ಕೇಳಬೇಕೆಂದೇ ಲೊಚಗುಟ್ಟತೊಡಗುತ್ತಾನೆ. ಅಲ್ಲಿಗೆ ಮನೆಯಲ್ಲೇನೋ ಏರು ಪೇರು ನಡೆದಿದೆ ಎಂದು ಅವಳಿಗೆ ಸ್ಪಷ್ಟವಾಗುತ್ತದೆ. ಮರುದಿನ ಕಾಲೇಜ್ ಗೆ ಹೋಗಿ ತನ್ನ ಹುಡುಗನಿಗೆ ’ಮನೆಯಲ್ಲಿ ಹೀಗೀಗಾಯ್ತು ಕಣೋ, ಇನ್ಮುಂದೆ ಹುಶಾರಾಗಿರೋಣ’ ಅನ್ನುತ್ತಾಳೆ.

"ಏನೂ ಆಗಲ್ಲ  ಚಿನ್ನಾ" ಅಂತ ಭವಿಷ್ಯ ನುಡಿದಿದ್ದ ಹುಡುಗನೇ ಈಗ "ನಿಂಗೆ ನಂಜೊತೆ ಮಾತಾಡೋಕೆ ಇಷ್ಟ ಇಲ್ಲ, ಅದ್ಕೆ ಹೀಗ್ಮಾಡ್ತಿದ್ದೀಯ" ಅಂದು ಬಿಡ್ತಾನೆ. ಅಲ್ಲಿಗೆ  ’ನನ್ ಹುಡುಗ ತುಂಬಾ ಸ್ಪೆಷಲ್, ಎಲ್ಲರಂತಲ್ಲ, ನನ್ನ ಅರ್ಥ ಮಾಡಿಕೊಳ್ಳುತ್ತಾನೆ’ ಅಂತೆಲ್ಲಾ ಅಂದುಕೊಂಡಿದ್ದ ಹುಡುಗಿಯ ಕನಸು ಚದುರಿ ಚೆಲ್ಲಾಪಿಲ್ಲಿಯಾಗುತ್ತದೆ. ಅತ್ತ ಮನೆಯವರು, ಇತ್ತ ಹುಡುಗ. ಮಧ್ಯೆ ಅಡಕತ್ತರಿಯಲ್ಲಿ ಸಿಲುಕಿದ್ದೇನೆ ಅನಿಸತೊಡಗುತ್ತದೆ. ಸ್ವಲ್ಪ ದುರ್ಬಲ ಮನಸ್ಸಿನವಳಾದರೆ ಆತ್ಮಹತ್ಯೆಯ ಯೋಚನೆಯೂ ಒಮ್ಮೆ ಸುಳಿದು ಹೋಗುತ್ತದೆ.

ತಾನು ಬದಲಾಗಿಲ್ಲ ಅಂತ ಹುಡುಗನಿಗೆ ಸಾಬೀತುಪಡಿಸಬೇಕು ಅನ್ನುವ ತಹತಹದಲ್ಲಿ, ಹಿಂದೆ ಮನೆಯವರಿಗೆ ಗೊತ್ತಾಗಬಾರದೆಂದು ತನಗೆ ತಾನೇ ವಿಧಿಸಿಕೊಂಡಿದ್ದ ಜಾಗರೂಕತೆಗಳನ್ನೆಲ್ಲಾ ಗೊತ್ತೇ ಆಗದಂತೆ ಗಾಳಿಗೆ ತೂರಿ ಬಿಡುತ್ತಾಳೆ. ಸ್ವಲ್ಪವೇ ಸ್ವಲ್ಪ ಅನುಮಾನಿಸಿದ್ದ ಮನೆಯವರು ಮೂರೂ ಹೊತ್ತು ಅವಳು ಫೋನ್ ನಲ್ಲಿ ಮಾತಾಡುವುದನ್ನು ಗಮನಿಸಿಯೂ ಗಮನಿಸದಂತಿದ್ದುಬಿಡುತ್ತಾರೆ. ಆದ್ರೆ ಈ ಹಂತದಲ್ಲಿ ಬೆಡ್ ರೂಮಿನ ಗೋಡೆಗಳಿಗೂ, ಬಾತ್ ರೂಮಿನ ಬಾಗಿಲುಗಳಿಗೂ ಕಿವಿಗಳು ಹುಟ್ಟಿ ಬಿಡುತ್ತವೆ. ಅಷ್ಟೊತ್ತಿಗೆ ಹಿತಮಿತ್ರರು ಯಾರೋ ಅವಳು ಅವನೊಂದಿಗೆ ಇರುವ ವಿಷಯವನ್ನು ದಾಖಲೆ ಸಮೇತ ತಂದೆ, ತಾಯಿಯ ಕಿವಿಗೆ ಹಾಕಿಬಿಟ್ಟಿರುತ್ತಾರೆ.

ಆಮೇಲೆ ಹುಡುಗಿ ಅನುಭವಿಸುವ ಯಾತನೆಗಳು ಅಷ್ಟಿಷ್ಟಲ್ಲ. ಅತ್ತ ಹುಡುಗನನ್ನೂ ಬಿಡಲಾಗದೆ ಇತ್ತ ಮನೆಯವರನ್ನೂ ಬಿಡಲಾಗದ ತ್ರಿಶಂಕು ನರಕ ಅವಳೆದುರು ಸೃಷ್ಟಿಯಾಗುತ್ತದೆ. ಅವನ ಜೊತೆ ಮಾತಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಇಮೋಷನಲ್ ಬ್ಲಾಕ್ ಮೇಲ್ ಮಾಡುವ ಅಮ್ಮ, ನನ್ನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಲೆಂದೇ ಹುಟ್ಟಿದವಳು ನೀನು ಅಂತ ದಿನಕ್ಕೆ ಹತ್ತು ಸಲ ಹೇಳುವ ಅಪ್ಪ, ಅಪ್ಪ-ಅಮ್ಮನ ಸಾವು ಬದುಕು ನಿನ್ನ ಕೈಯಲ್ಲಿದೆ ಅಂತ ಬೆದರಿಸುವ ಸಂಬಂಧಿಕರು, ಅವಳಿಗೀಗ ತನ್ನ ಅವಶ್ಯಕತೆಯಿದೆ, ಮನೆ ವಾತಾವರಣ ತಿಳಿಯಾಗುವವರೆಗೂ ಸಂಯಮದಿಂದ ಇರಬೇಕೆಂಬ ಕನಿಷ್ಠ ಪ್ರಜ್ಞೆ ಇಲ್ಲದ, ಕ್ಷಣ ಕ್ಷಣಕ್ಕೂ ಅನುಮಾನಿಸುವ ಹುಡುಗ. ಈ ತಾಕಲಾಟಗಳ ಮಧ್ಯೆಯೇ ಒಂದು ದುರ್ಬಲ ಕ್ಷಣದಲ್ಲಿ ಕೊನೆ ಪಕ್ಷ ಮನೆಯವರಾದರೂ ಖುಶಿಯಾಗಿರಲಿ ಅನ್ನುವ ಕಾಳಜಿಗೋ, ಅಸಹಾಯಕತೆಗೋ ತನ್ನತನವನ್ನು, ಖುಶಿಯನ್ನು, ತಾನು ಇಷ್ಟಪಟ್ಟು ಪ್ರೀತಿಸಿದ ಪ್ರೀತಿಯನ್ನು ಕೊಂದುಕೊಂಡು, 'ಅವನೆಂಬ' ಅವಳ ಅಗಾಧ ಕನಸಿಗೆ ಕೊಳ್ಳಿಯಿಟ್ಟು ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಲು ತಾನು ರೆಡಿ ಅಂದುಬಿಡುತ್ತಾಳೆ. ಇತ್ತ ಹೆತ್ತವರು ಅವಳ ಮನಸು ಮತ್ತೊಮ್ಮೆ ಬದಲಾಗುವ ಮುನ್ನ ಮದುವೆ ಮಾಡಿಬಿಡಬೇಕೆಂದು ತರಾತುರಿಯಲ್ಲಿ ಮದುವೆ ಮಾಡಿ ಮುಗಿಸಿ ಕೈ ತೊಳೆದು ಬಿಡುತ್ತಾರೆ.


  

 ಅತ್ತ ಹುಡುಗ, ಹಿಂದೊಮ್ಮೆ ಅವಳು ಯಾವುದೋ ಅಸಹನೆಯಿಂದ ಬಾಯ್ ಫ್ರೆಂಡ್ ಜೊತೆ ಮಾತಾಡುತ್ತಿದ್ದೆ ಅಂದಿರುವುದನ್ನೇ ನೆಪವಾಗಿಟ್ಟುಕೊಂಡು ಆ ಹುಡುಗನೇ ಇವನು ಅಂತ ಎಣ್ಣೆಗೂ ಸೀಗೆಕಾಯಿಗೂ ಇಲ್ಲದ ಸಂಬಂಧ ಕಲ್ಪಿಸಿ ಹಿಂದು ಮುಂದು ಯೋಚಿಸದೆ ಅವಳಿಗೆ ಖಳನಾಯಕಿಯ ಪಟ್ಟ ಕಟ್ಟಿಬಿಡುತ್ತಾನೆ. ಅದಕ್ಕೆ ಸಾಥ್ ನೀಡುವ ಅವನ ಫ್ರೆಂಡ್ಸ್ ಇನ್ನೊಂದಿಷ್ಟು ಉಪ್ಪು ಖಾರ ಹಚ್ಚಿ "ನಿನ್ನಂತಹ ಒಳ್ಳೆಯ ಹುಡುಗನಿಗೆ ಹೀಗೆ ಮೋಸ ಮಾಡಿದ ಅವಳಿಗೆ ಒಳ್ಳೆಯದಾಗಲ್ಲ" ಅಂತ ಹಿಡಿ ಶಾಪ ಹಾಕುತ್ತಾರೆ. ಅಲ್ಲಿಗೆ ಅವನ ಮನಸ್ಸಲ್ಲಿ ಅವಳ ಚಿತ್ರ ಪ್ರೀತಿ ಕೊಂದ ಕೊಲೆಗಾತಿಯೆಂದು ಶಾಶ್ವತವಾಗಿ ದಾಖಲಾಗಿ ಬಿಡುತ್ತದೆ. ಮೊಬೈಲ್ ಸ್ಕ್ರೀನ್ ನಲ್ಲಿ ’ಪ್ರೀತಿಯಲ್ಲಿ ಮೊದಲಿಗ ನಾನು, ಮೋಸಕ್ಕೆ ಕೊನೆಯವಳು ನೀನಾಗು’ ಅನ್ನುವ ವಾಲ್ ಪೇಪರ್ ರಾರಾಜಿಸತೊಡಗುತ್ತದೆ.

ಮದುವೆಗೆ ಮುನ್ನ ತಮ್ಮ ಅನುಮತಿಯಿಲ್ಲದೆ ಯಾರನ್ನೋ  ಪ್ರೀತಿಸಿದಳು ಅನ್ನುವ ಕಾರಣಕ್ಕೆ ಹೆತ್ತವರ ಪಾಲಿಗೂ ಅವಳು ಖಳನಾಯಕಿ, ಹೆತ್ತವರಿಗೆ ನೋವಾಗದಿರಲೆಂದು ಮದುವೆ ಮಾಡಿಕೊಂಡ ಕಾರಣಕ್ಕೆ ಹುಡುಗನ ಪಾಲಿಗೂ ಅವಳು ಖಳನಾಯಕಿ. ಆದ್ರೆ ನಿಜಕ್ಕೂ ಪ್ರೀತಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅವಳಿಗೂ ನೋವಿರುತ್ತದೆ. ಆದರೆ ಅದನ್ನವಳು ಬಹಿರಂಗವಾಗಿ ವ್ಯಕ್ತಪಡಿಸಲಾರಳು ಅಷ್ಟೆ. ಎಲ್ಲವನ್ನೂ ಮರೆತಿದ್ದೇನೆಂದು ಸೋಗು ಹಾಕಿದರೂ ಒಳಗೊಳಗೇ ಕೊರಗುತ್ತಿರುತ್ತಾಳೆ, ಕರಗುತ್ತಿರುತ್ತಾಳೆ. ’ತನ್ನವರು’ ಅಂತ ಸದಾ ತುಡಿಯುವ, ಕಾಳಜಿ ತೋರುವ, ಕನಿಕರಿಸುವ, ಪ್ರೀತಿಸುವ, ಒಲವ ಸುಧೆ ಹರಿಸುವ ಅವಳ ಒಳಗುದಿಗಳನ್ನೂ ಸ್ವಲ್ಪ ಅರ್ಥ ಮಾಡ್ಕೊಳ್ಳಿ ಪ್ಲೀಸ್...           

ಶನಿವಾರ, ಆಗಸ್ಟ್ 15, 2015

ಸ್ವಾತಂತ್ರ್ಯ



ಸ್ಟೇಜ್ ಹತ್ತಿ ಭಾಷಣ ಮಾಡಿ
ಪ್ರೈಝ್ ಗಿಟ್ಟಿಸಿ ನಗೆ ಬೀರಿ
ಹೆಮ್ಮೆಯಿಂದ ’ಜೈ ಹಿಂದ್’ ಅಂದ
ಬಾಲ್ಯದ ಸ್ವಾತಂತ್ರ್ಯವೇಕೋ
ನನ್ನ ಅಣಕಿಸುತ್ತಿದೆ ಇಂದು

ಮರ್ಯಾದಾ ಹತ್ಯೆಯ ಹೆಸರಲಿ
ಜೀವ ಕಳೆದುಕೊಂಡವರ
ಅಪರಿಮಿತ ನೋವುಗಳಲಿ
ಸ್ವಾತಂತ್ರ್ಯ ನಿಟ್ಟುಸಿರು ಬಿಡುತ್ತಿರುವಾಗ

ಕಾಮಪಿಪಾಸುಗಳ ಕರಾಳ ಹಸ್ತದಲಿ
ಮುರುಟಿಹೋದ ಕಂದಮ್ಮಗಳ
ಕಣ್ಣೀರ ಬೇಗೆಯಲಿ
ಸ್ವಾತಂತ್ರ್ಯ ಸದ್ದಿಲ್ಲದೆ ನಲುಗುತ್ತಿರುವಾಗ

ಸಾಲದ ಶೂಲದಲಿರುವ
ಬಡ ರೈತನ ಕರುಳಬೇನೆಯ
ಅಸಹನೀಯ ನಿರಾಸೆಯಲಿ
ಸ್ವಾತಂತ್ರ್ಯ ಆತ್ಮಹತ್ಯೆಗೆಯ್ಯುತಿರುವಾಗ

ದುರ್ಗಮ ಕೊಳ್ಳಗಳ
ಕಲ್ಲು ಕೋರೆಗಳಲಿ
ಜಗವರಿಯದ ಬಾಲಕಾರ್ಮಿಕರು
ರಕ್ತ ಸುರಿಸುತಿರುವಾಗ

ದಿನ ಬೆಳಗಾಗುತ್ತಿದ್ದಂತೆ
ಕಸದ ತೊಟ್ಟಿಯಲಿ
ಹಣ್ಣು ಹಸುಳೆಗಳು
ದಿಕ್ಕಿಲ್ಲದೆ ಕಣ್ಣು ಬಿಡುತ್ತಿರುವಾಗ

ಗಡಿಕಾಯ್ದು ಪ್ರಾಣ ತೆತ್ತ
ವೀರಯೋಧನ ಸಮಾಧಿಯ ಮೇಲೆ
ಅಧಿಕಾರಸ್ಥರು ಅಹಂಕಾರದ
ಠೇಂಕಾರ ಮೊಳಗಿಸುತಿರುವಾಗ

ಉಸಿರುಗಟ್ಟುವ ಭ್ರಷ್ಟಾಚಾರ
ಮೇರೆಮೀರಿರುವ ಅನಾಚರ
ನಜ್ಜುಗುಜ್ಜಾಗಿರುವ ಸಹಿಷ್ಣುತೆಯ
ನಡುವೆ ಸ್ವಾತಂತ್ರ್ಯ ತುಸು
ಉದಾರತೆಗಾಗಿ ಯಾಚಿಸುತಿರುವಾಗ

ಹೇಗೆ ಹೇಳಲಿ ನಾನು ನನ್ನದು
ಸರ್ವಸ್ವತಂತ್ರ ದೇಶವೆಂದು
ಹೇಗೆ ಆರೋಹಿಸಲಿ ನಾನು
ತ್ರಿವರ್ಣವನು ಮುಗಿಲೆತ್ತರಕೆ...?

ಸೋಮವಾರ, ಜುಲೈ 6, 2015

ಮರು ಹುಟ್ಟು

                                         

ಹುಚ್ಚು ರಭಸದಿ ಹರಿವ
ತಿಳಿ ಹಸಿರು ರಂಗಿನ
ಹೊಸ ನೀರ ತೊರೆಯ ಮೇಲೆ
ಮರುಹುಟ್ಟು ಪಡೆದಿದೆ
ಹುಟ್ಟಿನಾಸರೆಯಲಿ ಬದುಕೊಂದು

ಮೋಸ ವಂಚನೆಗಳ ಲಂಚ ರುಷುವತ್ತು
ಆಸ್ತಿ ಅಂತಸ್ತುಗಳ ಗತ್ತು ಗೈರತ್ತು
ಎಲ್ಲ ನಿರಾಶೆಗಳ ಮಿತಿಯ ಮೀರಿ
ಮನಸ ಮೂಲೆಯ ಮರದ ತುದಿಯಲಿ
ಟಿಸಿಲೊಡೆದಿದೆ ಹೊಸ ಕನಸೊಂದು

ತಿಳಿಗೊಳದೆದೆಯ ತಳಮಳದಲಿ
ನೂರು ತಲ್ಲಣವ ಬಚ್ಚಿಟ್ಟು
ಬಾಳ ಬಾಂದಳದಲಿ
ನೂರು ಭಾವಗಳ ಕಾಪಿಟ್ಟು
ಉದಿಸಿದೆ ಹೊಸ ಭರವಸೆಯೊಂದು

ಮೌನ ಕಣಿವೆಯಲಿ ಮಾತ ಮಂಟಪ ಕಟ್ಟಿ
ಬೇಸರಿಸದೆ ಹೊಳೆ ದಾಟಿಸಿ
ವಂಚನೆಯ ಸೋಂಕಿಲ್ಲದೆ
ಮುಖದ ಮೇಲೊಂದು ತಿಳಿ ನಗೆ
ಮೂಡಿಸುವವನ ಬದುಕು ಮುಳಗದಿರಲಿ





ಭಾನುವಾರ, ಜೂನ್ 28, 2015

ಮೌನ ಕಣಿವೆಯಲಿ...

ಸಂಚಾರ 9


ನೋಡ ನೋಡುತ್ತಿದ್ದಂತೆಯೇ ಇಪ್ಪತ್ತಮೂರು ವರ್ಷಗಳು ಕಳೆದು ಹೋದವು. ಮುಖ್ಯ ಶಿಕ್ಷಕರಾಗಿದ್ದ ಮನೋಹರ್ ರಾವ್ ಅವರು ನಿವೃತ್ತರಾಗಿ ಅವರ ಸ್ಥಾನವನ್ನು ನಾನು ಅಲಂಕರಿಸಿದ್ದೆ. ಅವರು ನನಗೆ ಅಧಿಕಾರ ಬಿಟ್ಟುಕೊಡಲು ನಿರ್ಧರಿಸಿದಾಗ ನನ್ನಿಂದ ನಿಭಾಯಿಸಲು ಸಾಧ್ಯವಿಲ್ಲವೆಂದು ನಾನು ನಿರಾಕರಿಸಿದ್ದೆ. ನನ್ನೊಳಗೆ ಧೈರ್ಯ ತುಂಬಿ ಈ ಹುದ್ದೆಗೆ ನಾನೇ ಅರ್ಹಳೆಂದು ನನಗೇ ನಂಬಿಕೆ ಹುಟ್ಟಿಸಿದ್ದರು. ತೀರಾ ಅವರ ಖುರ್ಚಿಯಲ್ಲಿ ಕುಳಿತುಕೊಳ್ಳುವ ಮುನ್ನ ನಾನು ಪುಟ್ಟ ಮಗುವಿನಂತೆ ಅತ್ತಿದ್ದೆ. ಅವರು ಒಂದು ಮಾತೂ ಹೇಳದೆ ಸುಮ್ಮನೆ ತಲೆ ನೇವರಿಸಿದ್ದರು. ಯಾವ ಜನ್ಮದಲ್ಲಿ ನನ್ನ ತಂದೆಯಾಗಿದ್ದರೋ?

ಇನ್ನು ಅಂಬೆಗಾಲಿಕ್ಕುತ್ತಾ ಹಿಂದೆ ಮುಂದೆ ಸುತ್ತಾಡಿಕೊಂಡು ಬಿಸಿಲ ಬೇಗೆಯಂತಹಾ ನನ್ನ ಒಂಟಿ ಬದುಕಿಗೆ ತಣ್ಣೀರ ಸಿಂಚನದಂತಿದ್ದ ಮಗಳೀಗ ಪದವೀಧರೆ, ಉದ್ಯೋಗಸ್ತೆ. ಶಿಕ್ಷಣದ ಜೊತೆಗೆ ಎಲ್ಲೂ ರಾಜಿಯಾಗದೆ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಮಲ್ಟಿನ್ಯಾಷನಲ್ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿ ತನ್ನ ಕಾಲ ಮೇಲೆ ನಿಂತಿದ್ದಾಳೆ. ನನ್ನ ಬದುಕಿನ ಎಲ್ಲಾ ಅರೆಕೊರೆಗಳಿಗೆ, ಪ್ರಶ್ನೆಗಳಿಗೆ ಉತ್ತರವಾಗಿ ಅವಳೀಗ ನನಗೆ ಆಸರೆಯಾಗಿದ್ದಾಳೆ.

ಇನ್ನೇನಿದ್ದರೂ ಒಳ್ಳೆಯ ಕಡೆ ನೋಡಿ ಅವಳಿಗೊಂದು ಮದುವೆ ಮಾಡಿಬಿಟ್ಟರೆ ನನಗೆ ನೆಮ್ಮದಿ. ಆಮೇಲೆ ನಾನು ನನ್ನ ಉಳಿದ ಜೀವನವನ್ನು ಶಾಲೆಗಾಗಿ ಮುಡಿಪಿಡಬಹುದು ಅಂದುಕೊಳ್ಳುತ್ತಿರುವಾಗಲೇ ಒಂದು ದಿನ ಅವಳು ಒಬ್ಬ ಹುಡುಗನನ್ನು ತಂದು ನನ್ನ ಮುಂದೆ ನಿಲ್ಲಿಸಿ "ಅಮ್ಮಾ, ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಿದ್ದೇವೆ. ನೀನೊಪ್ಪಿಗೆ ಕೊಟ್ಟರೆ ಮದುವೆಯಾಗುತ್ತೇವೆ" ಅಂದಳು. ಒಮ್ಮೆ ಬೆಚ್ಚಿ ಬಿದ್ದೆ. ಪ್ರೀತಿ ಪ್ರೇಮ ಎಂದೆಲ್ಲಾ ಹೋದರೆ ಎಲ್ಲಿ ಅವಳ ಬದುಕೂ ನನ್ನಂತಾಗಿಬಿಡುತ್ತೋ ಅನ್ನುವ ಭಯ ಕಾಡಿತು.

ಆದರೆ ಹುಡುಗನ ಇತಿಹಾಸ ಕೆದಕಿದಾಗ ಅವನು, ನನ್ನ ಬದುಕಿಗೆ ಹೊಸ ಬೆಳಕನ್ನು ತೋರಿದ ಮನೋಹರ್ ರಾವ್ ಅವರ ಪುತ್ರ ಅನ್ನುವುದು ತಿಳಿಯಿತು. ಮುಂದೇನೂ ಯೋಚಿಸಬೇಕಾಗಿರಲಿಲ್ಲ. ಅಂತಹಾ ಹೆಂಗರುಳಿನ ಹಿರಿಯರ ಮನೆಗೆ ನನ್ನ ಮಗಳು ಸೊಸೆಯಾಗಿ ಹೋದರೆ ಸುಖವಾಗಿ ಇರುತ್ತಾಳೆ ಅಂದುಕೊಂಡು ನನ್ನ ಕಣ್ಣಿಂದ ಎರಡು ಹನಿ ಸಂತೋಷದ ಅಶ್ರುಧಾರೆ ಜಾರಿತು, ಅದು ನೆಲ ಸೇರದಂತೆ ಮಗಳು ಕೈಯೊಡ್ಡಿ ಕಣ್ಣಿಗೊತ್ತಿಕೊಂಡಳು.

ಮುಂದೆ ಎಲ್ಲವೂ ಸಲೀಸಾಗಿಯೇ ನಡೆದು ಹೋಯಿತು. ಮನೋಹರ್ ರವರ ಮನೆಗೆ ಹೋಗಿ ನಾನೆ ಮದುವೆಯ ಪ್ರಸ್ತಾಪವನ್ನಿಟ್ಟೆ. ಆ ಹಿರಿ ಜೀವ ಯಾವ ತಕರಾರೂ ಮಾಡದೆ, ವರ ದಕ್ಷಿಣೆ ವರೋಪಚಾರ ಎಂದು ಯಾವ ರಗಳೆಯನ್ನೂ ಮಾಡದೆ, ಜಾತಕ ಜ್ಯೋತಿಷ್ಯದ ಗೊಡವೆಯೇ ಬೇಡವೆಂದು ಮದುವೆಗೆ ಒಪ್ಪಿಕೊಂಡರು. ಮೊದಲು ರಿಜಿಸ್ಟ್ರಾರ್ ಆಫೀಸಿನಲ್ಲಿ ನಂತರ ದೇವಸ್ಥಾನದಲ್ಲಿ ಸರಳವಾಗಿ ಇಬ್ಬರ ಮದುವೆ ಕೆಲವೇ ಕೆಲವು ಹಿತೈಷಿಗಳ ಸಮ್ಮುಖದಲ್ಲಿ ನಡೆದು ಹೋಯಿತು. ತೀರಾ ಧಾರೆ ಎರೆದುಕೊಡುವ ಹೊತ್ತಿಗೆ  ಅವಳ ಅಪ್ಪನ ನೆನಪಾದುದನ್ನು ಬಿಟ್ಟರೆ, ಕಾವ್ಯಾಳಿಗೆ ಮಕ್ಕಳಾಗಿದ್ದರೆ ಅವಳ ಮಕ್ಕಳೂ ಈಗ ಮದುವೆಯ ವಯಸ್ಸಿಗೆ ಬಂದಿರುತ್ತಾರೆ ಅಂತ ಅನ್ನಿಸಿರುವುದನ್ನು ಬಿಟ್ಟರೆ ಇನ್ನೆಲ್ಲೂ ಅವರಿಬ್ಬರಿರದಿರುವುದು ಕೊರತೆಯಾಗಿ ಕಾಡಲೇ ಇಲ್ಲ.  ಮನೋಹರ್ ರವರಂತಹ ಶುದ್ಧಮನಸ್ಕರು ರಶ್ಮಿಗೆ ಅಪ್ಪ, ಮಾವ ಎರಡೂ ಆಗುತ್ತಿರುವಾಗ ವಂಚಕರು ನೆನಪಾಗುವುದಾದರೂ ಹೇಗೆ?

ಮಗಳಿಲ್ಲದ ಅಮ್ಮನ ಮನೆಯಲ್ಲಿ ನಾನೀಗ ಮತ್ತೆ ಒಂಟಿ. ಈ ಒಂಟಿತನದಲ್ಲಿ ಕಿತ್ತು ತಿನ್ನುವ, ಇಂಚಿಂಚಾಗಿ ಕೊಲ್ಲುವ ಕಹಿ ಘಟನೆಗಳ ಕರಿ ನೆರಳಿಲ್ಲ. ೨೩ ವರ್ಷಗಳ ಜೀವನದ ಅನನ್ಯ ಅನುಭವಗಳ ಸಾರ್ಥಕ್ಯವಿದೆ. ಒಮ್ಮೆ ಪಾತಾಳಕ್ಕಿಳಿಸಿ ಮತ್ತೊಮ್ಮೆ ಆಕಾಶದೆತ್ತರೆಕ್ಕೆ ಏರಿಸಿದ ಏರಿಳಿತಗಳ ಬಾಳಿನೆಡೆಗಿನ ಹೆಮ್ಮೆಯಿದೆ. ನಾನೀಗ ಮತ್ತೆ ಅಪ್ಪನ ಫೊಟೋದ ಮುಂದೆ ನಿಂತಿದ್ದೇನೆ. ನನ್ನೊಳಗಿನ ಮೌನ "ಅಪ್ಪಾ, ಕೊನೆಗೂ ನಿನ್ನ ಈ ಭೂಮಿ ತೂಕದ ಮಗಳ ಸಹನೆ ಗೆದ್ದಿತು" ಅಂತ ಪಿಸುಗುಡುತ್ತಿದೆ. ಬದುಕೀಗ ದಾಳಗಳನ್ನೆಲ್ಲಾ ಚೆಲ್ಲಿ, ಆಟ ನಿಲ್ಲಿಸಿ ನನ್ನೆಡೆಗೆ ಮುಗಳ್ನಗು ಬೀರುತ್ತಿದೆ.


                                                                                                                               (ಮುಗಿಯಿತು)                 

ಮೌನ ಕಣಿವೆಯಲಿ...

ಸಂಚಾರ 8



ನನ್ನ ಬದುಕಿನ ಯಾನ ಮತ್ತೆ ಹುಟ್ಟಿ ಬೆಳೆದ ಹಳ್ಳಿಯ ಕಡೆ ಹೊರಳಿತು. ಪುಟ್ಟ ಮಗುವನ್ನೆತ್ತಿಕೊಂಡು ಅಮ್ಮನಿಲ್ಲದ ತವರಿಗೆ ಮರಳಿದೆ. ನನ್ನ ಬದುಕಿನಂತೆಯೇ ಮನೆ ಪೂರ್ತಿ ಜೇಡರ ಬಲೆ ತುಂಬಿಕೊಂಡಿತ್ತು.  ನಾನು ಮಗುವಾಗಿದ್ದಾಗ ಅಪ್ಪ ನನಗೆಂದು ತಂದ ತೊಟ್ಟಿಲನ್ನು ಮೊದಲು ಸ್ವಚ್ಛಗೊಳಿಸಿ ಮಗಳನ್ನು ಮಲಗಿಸಿದೆ. ಬಿಟ್ಟು ಹೋಗಿ ಒಂದು ವರ್ಷವಾಗಿದ್ದರೂ ಈ ಮನೆಯ ಪ್ರತಿ ಇಂಚಲ್ಲೂ ಅಮ್ಮ, ಅಜ್ಜಿ, ಅಪ್ಪನ ನೆನಪುಗಳಿವೆ ಅನಿಸುತಿತ್ತು. ಧೂಳು ತುಂಬಿಕೊಂಡಿದ್ದ ಫೊಟೋ ಒರೆಸಿ ಅಪ್ಪನ ಮುಂದೆ ನಿಂತು "ಅಪ್ಪಾ, ಭೂಮಿಗೂ ಪಾಸಿಟಿವ್ ಮತ್ತು ನೆಗೆಟಿವ್ ಗಳೆಂಬ ಎರಡು ಅಂತ್ಯಗಳಿವೆ. ಜೀವಜಲ ಬಚ್ಚಿಟ್ಟುಕೊಂಡಿರುವ ಅದೇ ಭೂಮಿಯೆದೆಯೊಳಗೆ ಹಲವು ರೋಷಗಳ, ಅಸಹಾಯಕತೆಗಳ, ನೋವುಗಳ ಒಟ್ಟು ಮೊತ್ತವಾದ ಜ್ವಾಲಾಮುಖಿಯೂ ಇದೆ. ಒತ್ತಡ ಹೆಚ್ಚಾದರೆ ಭೂಮಿಯೂ ಸ್ಪೋಟಿಸಿಬಿಡುತ್ತಾಳೆ. ಇನ್ನು ಹುಲುಮಾನವರಾದ ನಾವು ಯಾವ ಲೆಕ್ಕ? ಆದ್ರೆ ನಿನ್ನ ಮಗಳು ಅಳಿಯನಿಗೆ ಈ ಸರಳ ಸತ್ಯ ಅರ್ಥ ಆಗಲೇ ಇಲ್ಲ. ಅಪ್ಪಾ, ನಿನ್ನ ಈ ಭೂಮಿ ತೂಕದ ಮಗಳು ಸ್ಪೋಟಿಸಬಾರದೆಂದು ಮನೆ ಬಿಟ್ಟು ಬಂದಿದ್ದಾಳೆ. ಆಶಿರ್ವಾದಿಸು." ಅಂದೆ. ಯಾಕೋ ಅಪ್ಪ, ಅಮ್ಮನ ಕಣ್ಣಲ್ಲೂ ತೆಳುವಾಗಿ ನೀರು ಓಲಾಡುತ್ತಿದೆ ಅನಿಸಿತು. ಬದುಕು ನಗುತ್ತಿತ್ತಾ...? ಗೊತ್ತಿಲ್ಲ.

ಜೇಡರ ಬಲೆ ತೆಗೆದು, ಧೂಳು ಒರೆಸಿ ಮನೆ ಸ್ವಚ್ಚವಾದ ಮೇಲೆ ಮನಸ್ಸಿಗೇನೋ ಸಮಾಧಾನ, ಯಾವುದೋ ಹೊಸ ಬೆಳಕು ಗಾಳಿ ಬಂದಂತಾಯಿತು. ಆದರೆ ಜೀವನ..? ಅದು ಬರಿ ಗಾಳಿ ಬೆಳಕಿಂದ ಸಾಗದಲ್ಲಾ? ವಿದ್ಯಾಭ್ಯಾಸ ಬೇರೆ ಪಿ.ಯು.ಸಿ ಗೆ ಮೊಟಕುಗೊಂಡಿತ್ತು. ಸ್ವಾಭಿಮಾನದ ಬದುಕಿಗಾಗಿ ಅಸಹ್ಯದ ಬದುಕನ್ನು ಬಿಟ್ಟು ಬಂದಾಗಿತ್ತು. ಮತ್ತೆ ಅದೇ ಹೊಲಸಿನೊಳಕ್ಕೆ ಕಾಲಿಡುವ ಯಾವ ಇರಾದೆಯೂ ನನಗಿರಲಿಲ್ಲ. ಆದ್ರೆ ಬದುಕಿಗೊಂದು ನೆಲೆ ಬೇಕಾಗಿತ್ತು. ತಾನು ಓದಿದ ಪ್ರಾಥಮಿಕ ಶಾಲೆಯಲ್ಲೇ ಶಿಕ್ಷಕಿಯಾಗಿ ಕೆಲಸ ಕೇಳಿಕೊಂಡು ಹೋದೆ. ನನ್ನ ಬದುಕಿನ ಏರಿಳಿತಗಳ ಬಗ್ಗೆ ತಿಳಿದಿದ್ದ ಮುಖ್ಯ ಶಿಕ್ಷಕ ಮನೋಹರ್ ರಾವ್ ಅವರು ಯಾವ ತಕರಾರೂ ಮಾಡದೆ ಕೆಲಸ ಕೊಟ್ಟರು. ಬದುಕಿಗೊಂದು ದಾರಿಯಾಯಿತು. ಬರುವ ಅಲ್ಪ ಸಂಬಳದಲ್ಲೇ ಮನೆಯನ್ನೂ ಸಂಭಾಳಿಸಿ ಮಗಳ ಭವಿಷ್ಯಕ್ಕಾಗಿ ಉಳಿತಾಯ ಮಾಡುತ್ತಿದ್ದೆ.

ಆದರೆ ಒಮ್ಮೊಮ್ಮೆ ಕಾಡುತ್ತಿದ್ದ ಒಂಟಿತನ, ಯಾರೂ ಇಲ್ಲದ ಅನಾಥಭಾವ, ಎಲ್ಲಾ ಶೂನ್ಯ ಅಂತ ಅನ್ನಿಸಿಬಿಡುವ ಖಾಲಿತನವನ್ನು ಎದುರಿಸಲಾಗದೆ ತತ್ತರಿಸಿಬಿಡುತ್ತಿದ್ದೆ. ಬೆಳೆಯುತ್ತಿದ್ದ ಮಗಳು "ಫ್ರೆಂಡ್ಸ್ ಗೆಲ್ಲಾ ಇರುವ ಅಪ್ಪ ನನಗೇಕಿಲ್ಲ?" ಎಂದು ಅಳುವಾಗೆಲ್ಲಾ ನನ್ನ ಬದುಕಿನ ಅಸಹಾಯಕತೆಯ ನೆನೆದು ಅಸಹನೀಯ ದುಃಖವಾಗುತ್ತಿತ್ತು. ಬರಬರುತ್ತಾ ಅದೇ ಜೀವನವಾಯ್ತು. ಒಂಟಿತನವೇ ಸಂಗಾತಿಯಾಯ್ತು. ನನಗಾಗಿ ಮಗಳು...ಮಗಳಿಗಾಗಿ ನಾನು ಅನ್ನುವುದೇ ಬದುಕಿನ ಸೂತ್ರವಾಯಿತು. ರಶ್ಮಿ ದೊಡ್ಡವಳಾಗುತ್ತಿದ್ದಂತೆ ನನ್ನ ಬದುಕಿನ ಹೋರಾಟವನ್ನೆಲ್ಲಾ ತಾನೇ ತಾನಾಗಿ ಅರ್ಥ ಮಾಡಿಕೊಂಡಳೋ ಎಂಬಂತೆ ಅಪ್ಪನ ಬಗ್ಗೆ ಕೇಳುವುದನ್ನೇ ನಿಲ್ಲಿಸಿಬಿಟ್ಟಳು. ಆ ಮಟ್ಟಿಗಿನ ಪರಿಪಕ್ವತೆ ಅವಳಲ್ಲಿರುವುದಕ್ಕೆ ಅದೆಷ್ಟು ಬಾರಿ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದೇನೋ ನನಗೇ ಗೊತ್ತಿಲ್ಲ.

ಈ ಮಧ್ಯೆ ಒಂದು ದಿನ ಮನೋಹರ್ ರಾವ್ ಅವರು ನನ್ನನ್ನು ಕಛೇರಿಗೆ ಕರೆಯಿಸಿ "ಮೂರು ವರ್ಷಗಳಲ್ಲಿ ನಮ್ಮ ಶಾಲೆಗೆ ಹೈಸ್ಕೂಲ್ ಸೆಕ್ಷನ್ ಸ್ಯಾಂಕ್ಷನ್ ಆಗಲಿದೆ. ಹೇಗೂ ನೀವು ಇದೇ ಶಾಲೆಯಲ್ಲಿ ಓದಿರುವವರು. ಖಾಸಗಿಯಾಗಿ ಪದವಿ ಕಟ್ಟಿ ಏಕೆ ಇಲ್ಲೇ ಹೈಸ್ಕೂಲ್ ಶಿಕ್ಷಕಿ ಮುಂದುವರಿಯಬಾರದು?" ಎಂದು ಪ್ರಶ್ನಿಸಿದರು. ಆ ಕ್ಷಣಕ್ಕೆ ಏನು ಹೇಳಬೇಕೆಂದು ತೋಚಲಿಲ್ಲ. ಒಂದೆರಡು ದಿನಗಳ ಸಮಾಯಾವಕಾಶ ಕೇಳಿದೆ. ಒಂದು ಕಡೆ ಕೆಲಸದ ಒತ್ತಡ, ಇನ್ನೊಂದೆಡೆ ಮಗಳ ಜವಾಬ್ದಾರಿ. ಇವೆರಡರ ಮಧ್ಯೆ ಓದೋಕೆ, ಬರೆಯೋಕೆ ನನ್ನಿಂದ ಸಾಧ್ಯಾನಾ ಅಂತೆಲ್ಲಾ ಅನಿಸುತ್ತಿತ್ತು.

ಆದರೆ ಆಗೊಮ್ಮೆ ಈಗೊಮ್ಮೆ ಕಾಡುವ ಒಂಟಿತನವನ್ನು, ಸೂಚನೆಯೇ ಇಲ್ಲದೆ ಧುತ್ತೆಂದು ಪ್ರತ್ಯಕ್ಷವಾಗಿಬಿಡುವ ಬೇಸರವನ್ನು, ಏಕಾಂತದಲ್ಲಿ ಹಿಂಡಿ ಹಿಪ್ಪೆ ಮಾಡಿಬಿಡುವ ಹಳೆ ನೆನಪುಗಳಿಂದ ಬಿಡುಗಡೆ ಪಡೆದುಕೊಳ್ಳಲು ನಿಂತು ಹೋಗಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸುವುದೋ ಸೂಕ್ತ ಮಾರ್ಗ ಎಂದು ತೋರಿದ ಕ್ಷಣವೇ ಖಾಸಗಿಯಾಗಿ ಪದವಿ ಕಟ್ಟಲು ನಿರ್ಧರಿಸಿದೆ.

ಅಲ್ಲಿಂದೀಚೆಗೆ ಬದುಕು ಬದಲಾಯಿತು. ರಶ್ಮಿಯ ವಿದ್ಯಾಭ್ಯಾಸದ ಜೊತೆ ಜೊತೆಗೆ ನನ್ನ ಓದೂ ಸಾಗುತ್ತಿತ್ತು. ಅವಳಿಗೆ ನಾನು, ನನಗೆ ಅವಳು ಪರಸ್ಪರ ಸಹಕರಿಸುತ್ತಿದ್ದೆವು. ಮನೆ, ಶಾಲೆ, ಅವಳ ಓದು, ನನ್ನ ಓದು ಅಂತೆಲ್ಲಾ ಹಿಂದಿನ ಬದುಕಿನೆಡೆಗೆ ತಿರುಗಿ ನೋಡಲೂ ಪುರುಸೊತ್ತಿಲ್ಲವೆಂಬಷ್ಟು ಇಂದಿನ ಬದುಕಿನಲ್ಲಿ ವ್ಯಸ್ತಳಾಗಿಬಿಟ್ಟೆ. ಮಗಳಾದರೂ ಅಷ್ಟೆ. ಬುದ್ಧಿವಂತೆ, ಎಂದೂ ನನ್ನ ಸಾಮರ್ಥ್ಯವನ್ನು ಮೀರಿದ ಬೇಡಿಕೆ ಇಟ್ಟವಳೇ ಅಲ್ಲ. ನನ್ನೆಲ್ಲಾ ಮಿತಿಗಳನ್ನು ಅರಿತುಕೊಂಡೇ ಎಲ್ಲೂ ನನಗೆ ನಿರಾಶೆಯಾಗದಂತೆ, ಹೊರೆಯಾಗದಂತೆ ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದಳು.

ಮೂರು ವರ್ಷ ಕಳೆಯುತ್ತಿದ್ದಂತೆ ನನ್ನ ಪದವಿ ಮುಗಿದು ಹೈಸ್ಕೂಲ್ ಶಿಕ್ಷಕಿಯಾಗಿ ಬಡ್ತಿ ಪಡೆದೆ. ವೈಯಕ್ತಿಕ ಬದುಕಿನ ದುಃಖ, ದುಮ್ಮಾನ, ನೋವುಗಳನ್ನು ಮೀರಿ ವೃತ್ತಿ ಜೀವನ ನನ್ನ ಕೈ ಹಿಡಿದಿತ್ತು. ಶಾಲೆಯ ವಿದ್ಯಾರ್ಥಿಗಳಂತೂ ನನ್ನ ತುಂಬಾ ಹಚ್ಚಿಕೊಂಡು ಬಿಟ್ಟಿದ್ದರು. ಈಗೀಗ ಹಳೆ ಬದುಕು, ಅದರ ನೋವು, ನನಗಾದ ಪ್ರಚ್ಛನ್ನ ಮೋಸ ಯಾವುದೂ ನೆನಪಾಗುತ್ತಲೇ ಇರಲಿಲ್ಲ.



                                                                                                                                                      (ಸಶೇಷ)




ಮೌನ ಕಣಿವೆಯಲಿ...

ಸಂಚಾರ  7



ಇನ್ನು ನನಗುಳಿದ್ದಿದ್ದುದು ಕಣ್ಣಾರೆ ಕಂಡಿರುವುದನ್ನು ಪರಾಂಬರಿಸುವ ಕೆಲಸವಷ್ಟೆ. ಆದರೆ ಇಂತಹ ಸೂಕ್ಷ್ಮ ವಿಚಾರವನ್ನು ಕಟ್ಟಿಕೊಂಡ ಗಂಡನಲ್ಲಿ, ಬೆನ್ನಿಗೆ ಬಿದ್ದ ತಂಗಿಯಲ್ಲಿ ಪ್ರಸ್ತಾಪಿಸುವುದಾದರೂ ಹೇಗೆ ಅನ್ನುವ ಗೊಂದಲವಿನ್ನೂ ಮುಗಿದಿರಲಿಲ್ಲ. ಒಂದೇ ಏಟಿಗೆ ಅಂತದ್ದೇನೂ ನಡೆದೇ ಇಲ್ಲ ಎಂದು ನಿರಾಕರಿಸಿ ಬಿಟ್ಟರೆ ಏನು ಮಾಡಲಿ ಅನ್ನುವ ಭಯ ಬೇರೆ ಕಾಡುತ್ತಿತ್ತು.

ಆದರೆ ಹಿಂದಿನ ದಿನ ಪೂರ್ತಿ ನನ್ನ ಕಣ್ಣು ತಪ್ಪಿಸಿ ಓಡಾಡುತ್ತಿದ್ದವರು ಅವತ್ತು ಯಾವ ಅಳುಕೂ ಇಲ್ಲವೆಂಬಂತೆ ಬಿಡುಬೀಸಾಗಿ ಸಲೀಸಾಗಿ ಓಡಾಡಿಕೊಂಡು ಸಹಜವಾಗಿದ್ದರು. ಬಹುಶಃ ವಂಚನೆಯ ಜಾಯಮಾನವೇ ಅಂತಹುದೇನೋ?  ಆರಂಭದಲ್ಲಿ ಕಾಡುವ ಅಳುಕು, ಹಿಂಜರಿಕೆಗಳು ಕೆಲ ಸಮಯ ಸಾಗುತ್ತಿದ್ದಂತೆ ಆತ್ಮದ್ರೋಹದ ಕರಿನೆರಳಿನ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತವೆಯೇನೋ? ಒಮ್ಮೆ ದೀರ್ಘ ಶ್ವಾಸ ಎಳೆದುಕೊಂಡು, ಅವರಿಬ್ಬರನ್ನು ಕೂರಿಸಿ ಆದಷ್ಟು ಶಾಂತವಾಗಿ ಅವರಿಬ್ಬರ ಸಂಬಂಧದ ಬಗ್ಗೆ ಕೇಳಿದೆ.

ಕಾವ್ಯಾಳೇ ಮೊದಲು ಮಾತು ಶುರುವಿಟ್ಟುಕೊಂಡಳು. "ಸರಿ ಅಕ್ಕಾ, ನಾವೇ ಇದನ್ನು ನಿನ್ನ ಬಳಿ ಚರ್ಚಿಸಬೇಕೆಂದಿದ್ದೆವು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆವು ಅಷ್ಟೆ. ಈಗ ನಿನಗೇ ಎಲ್ಲಾ ತಿಳಿದಿರುವಾಗ ಮುಚ್ಚು ಮರೆ ಮಾಡಲು ಎನೂ ಉಳಿದಿಲ್ಲ. ಹೌದು, ನಮ್ಮಿಂದ ತಪ್ಪಾಗಿದೆ. ನೀನು ಹೆರಿಗೆ, ಬಾಣಂತನ ಅಂತ ಒದ್ದಾಡುತ್ತಿರುವಾಗ ಒಂದು ದುರ್ಬಲ ಕ್ಷಣದಲ್ಲಿ ತಪ್ಪು ನಡೆದುಹೋಯಿತು. ನೀನು ಧೈರ್ಯಸ್ಥೆ, ನನಗಿಂತ ದೊಡ್ಡವಳು. ಪರಿಸ್ಥಿತಿಯನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿ. ಈಗ ನಡೆದುದರ ಬಗ್ಗೆ ವಿಚಾರ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು ಒಂದಿಷ್ಟು ಮನಸ್ತಾಪಗಳಿಗೆ ಕಾರಣವಾಗುತ್ತದೆಯೇ ಹೊರತು ಇನ್ನೇನೂ ಆಗುವುದಿಲ್ಲ. ಹಾಗಾಗಿ ಮುಂದೆ ಏನು ನಡೆಯಬೇಕು ಅನ್ನುವುದರ ಬಗ್ಗೆ ಯೋಚಿಸು. ನಾನಂತೂ ಭಾವನನ್ನೇ ಮದುವೆಯಾಗಬೇಕು ಅಂತ ತೀರ್ಮಾನಿಸಿದ್ದೇನೆ" ಅಂದಳು. ಗೊತ್ತಿದ್ದ ಸತ್ಯವೇ ಆದರೂ ತೀರಾ ಮುಖಕ್ಕೆ ರಾಚಿದಾಗ ತತ್ತರಿಸಿಬಿಟ್ಟೆ. ಬಹುಶಃ ಒಳ ಮನಸು ಹಿಂದಿನ ದಿನ ನಾ ಕಂಡದ್ದೆಲ್ಲ ಸುಳ್ಳಾಗಿರಲಿ ಅಂತ ಆಶಿಸುತ್ತಿತ್ತೇನೋ?

ಮುಂದೇನು ಅಂತ ಗಂಡನೆನಿಸಿಕೊಂಡವನ ಮುಖ ನೋಡಿದೆ. ಅವನು "ಆಗಬಾರದ್ದು ಆಗಿ ಹೋಗಿದೆ ನಿಜ, ಹಾಗಂತ ಈ ಪ್ರಪಂಚದಲ್ಲಿ ಯಾರೂ ಮಾಡದ ತಪ್ಪನ್ನೇನೂ ನಾ ಮಾಡಿಲ್ಲ. ಈ ವಿಚಾರಣೆಯೆಂಬ ನಾಟಕವೇ ಬೇಡ. ನೀನಿರುವ ಹಾಗೆಯೇ ಅವಳನ್ನೂ ಮದುವೆಯಾಗಿ ಬಿಡುತ್ತೇನೆ. ಹೇಗೂ ರಕ್ತ ಹಂಚಿಕೊಂಡು ಹುಟ್ಟಿದ ಸೋದರಿಯರು. ಸವತಿ ಮಾತ್ಸರ್ಯದ ಪ್ರಶ್ನೆಯೂ ಬರುವುದಿಲ್ಲ. ಇಬ್ಬರೂ ಚೆನ್ನಾಗಿ ಹೊಂದಿಕೊಂಡು ಹೋಗಬಹುದು" ಎಂದು ಮಾತೆಲ್ಲಾ ಮುಗಿಯಿತು ಎಂಬಂತೆ ಎದ್ದು ಆಫೀಸ್ ಗೆ ಹೋದರು. ಅವರ ಬೆನ್ನ ಹಿಂದೆಯೇ ಕಾವ್ಯ ಕಾಲೇಜ್ ಗೆಂದು ಹೊರಟು ಹೋದಳು.

ಮನೆ ಪೂರ್ತಿ ಸ್ಮಶಾನ ಮೌನ. ನಡು ಮನೆಯಲ್ಲಿ ಒಂಟಿ ಪಿಶಾಚಿಯಂತೆ ನಾನು. ಇನ್ನೊಂದು ಹೆಣ್ಣಿನ ಜೊತೆ, ಆಕೆ ತಂಗಿಯೇ ಆಗಿದ್ದರೂ ಸಹ ಗಂಡನನ್ನು ಹಂಚಿಕೊಳ್ಳುವ ಕಲ್ಪನೆಯೇ ನನಗೆ ಅಸಹ್ಯ ಅನಿಸುತಿತ್ತು. ಕಾವ್ಯಾಳ ಯಾವ ಪ್ರಾಕ್ಟಿಕಾಲಿಟಿಯ ಬಗ್ಗೆ ನನಗೆ ಹೆಮ್ಮೆ ಇತ್ತೋ ಅದೇ ಪ್ರಾಕ್ಟಿಕಾಲಿಟಿ ತನ್ನೆಲ್ಲಾ ಪರಿಧಿಯನ್ನು ಮೀರಿ ಇವತ್ತು ಅಕ್ಕನ ಬದುಕನ್ನು ಮೂರಾಬಟ್ಟೆಯಾಗಿಸುವಲ್ಲಿಗೆ ಬಂದು ನಿಂತಿತ್ತು.

ಸಂಜೆ ಗಂಡ ಆಫೀಸಿನಿಂದ, ಕಾವ್ಯ ಕಾಲೇಜಿನಿಂದ ಬರುವ ಮುನ್ನ ನಾನೊಂದು ನಿರ್ಧಾರಕ್ಕೆ ಬರಬೇಕಿತ್ತು. ಮೊದಲ ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆಯಾಗ ಹೊರಟ ಗಂಡನ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಬಹುದಿತ್ತೇನೋ? ಆದ್ರೆ ಕಾವ್ಯಾಳ ಬದುಕು ಅತಂತ್ರವಾಗಿ ಬಿಡುತ್ತಿತ್ತು. ಅಮ್ಮನ ಚಿತೆಗೆ ಬೆಂಕಿಯಿಡುವ ಮುನ್ನ ಅಜ್ಜಿ ಹೇಳಿದ ಮಾತು ಬೇರೆ ಕಿವಿಯಲ್ಲಿನ್ನೂ ಅನುರಣಿಸುತ್ತಿತ್ತು. ಹಾಗಂತ ಗಂಡನನ್ನು ಹಂಚಿಕೊಂಡು ಬದುಕಲೂ ನನ್ನಿಂದ ಸಾಧ್ಯ ಇರಲಿಲ್ಲ.

ಕೊನೆಗೆ ನಾನು ಸ್ವಾಭಿಮಾನದಿಂದ ಬದುಕಲು ಡೈವೋರ್ಸ್ ಒಂದೇ ಪರಿಹಾರ ಅಂದುಕೊಂಡು ಸಂಜೆ ಅವರಿಬ್ಬರು ಬಂದ ಬಳಿಕ ನನ್ನ ನಿರ್ಧಾರವನ್ನು ತಿಳಿಸಿದೆ. ಒಂದೆರಡು ದಿನ ಅತ್ತು ಕರೆದು ರಂಪ ಮಾಡಿ ಆಮೇಲೆ ಒಪ್ಪಿಕೊಳ್ಳುತ್ತೇನೆ ಅಂದುಕೊಂಡಿದ್ದರೋ ಏನೋ. ನನ್ನ ನಿರ್ಧಾರವನ್ನು ಕೇಳಿ ಇಬ್ಬರೂ ಅಪ್ರತಿಭರಾದರು. ಗಂಡನೆನೆಸಿಕೊಂಡವನಂತೂ ಸಮಾಜದಲ್ಲಿ ಒಂಟಿ ಹೆಣ್ಣು ಬದುಕುವುದರಲ್ಲಿರುವ ಕಷ್ಟವನ್ನು ಪರಿ ಪರಿಯಾಗಿ ವಿವರಿಸಲೆತ್ನಿಸಿದರು. ಇಬ್ಬರಲ್ಲಿ ಒಬ್ಬರನ್ನು ಆಯ್ದುಕೊಳ್ಳಿ ಅನ್ನುವ ನನ್ನ ಅಚಲ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟ ಧ್ವನಿಯಲ್ಲಿ ಹೇಳಿಬಿಟ್ಟೆ. ಅದೇನು ಚಿಂತನ ಮಂಥನ ನಡೆಸಿದರೋ ಗೊತ್ತಿಲ್ಲ, ಕೊನೆಗೂ ಅವಳ ಮೇಲಿನ ಮೋಹವೇ ಗೆದ್ದು ನನ್ನ ತೊರೆಯುವ ನಿರ್ಧಾರಕ್ಕೆ ಅವರೂ ಬಂದುಬಿಟ್ಟರು.

ಮೂರು ತಿಂಗಳುಗಳಲ್ಲಿ ವಿಚ್ಛೇದನ ಪ್ರಕ್ರಿಯೆಗಳೆಲ್ಲಾ ವಿಧಿವತ್ತಾಗಿ ನಡೆದು ಮೂರು ವರ್ಷಗಳ ದಾಂಪತ್ಯ ಜೀವನ ನಾಲ್ಕಾರು ಕಾಗದ ಪತ್ರಗಳಿಗೆ ಸಹಿ ಹಾಕುವಷ್ಟರಲ್ಲಿ ಮುಗಿದು ಹೋಯಿತು. ಗಂಟು ಮೂಟೆ ಕಟ್ಟಿಕೊಂಡು ಮಗಳೊಂದಿಗೆ ಮನೆ ಬಿಟ್ಟೆ. ತೀರಾ ಹೊರಡುವ ಮುನ್ನ ಕಾವ್ಯಾಳ ಮುಂದಲೆ ನೇವರಿಸಿ "ಚೆನ್ನಾಗಿರು" ಎಂದಷ್ಟೇ ಹೇಳಿ ಹೊರಗಡಿಯಿಟ್ಟಿದ್ದೆ. ಅವಳ ಕಣ್ಣುಗಳಲ್ಲಿ ಮತ್ತದೇ ಪ್ರಾಕ್ಟಿಕಾಲಿಟಿ. ಬದುಕು ಈ ಬಾರಿ ಉರುಳಿಸಿದ ದಾಳಕ್ಕೆ ನಾ ಪಾತಾಳಕ್ಕಿಳಿದುಬಿಟ್ಟಿದ್ದೆ.


(ಸಶೇಷ)