ಬುಧವಾರ, ಜೂನ್ 15, 2016

ಸಂತೆ

ಹೀಗೆ,
ಸಂತೆಯಲ್ಲಿ, ಗದ್ದಲದಲ್ಲಿ
ಕಳೆದುಹೋದಾಗೆಲ್ಲಾ
ನಿಶಬ್ಧ ತಾಕುತ್ತಿರುತ್ತದೆ
ಭಾವಬಿಗಿತಗಳಿಗೆಲ್ಲಾ ಸ್ಪಷ್ಟ ಹರಿವು

ನಿನ್ನೆ ಕೇಳಿದ್ದು
ಮೊನ್ನೆ ಕಂಡಿದ್ದು
ಇಂದಿಲ್ಲೇ ದಕ್ಕಿದ್ದು
ಮುಗಿಯದ ಕಥೆಗಳಿಗೆಲ್ಲಾ
ಒಂದು ಸಣ್ಣ ತಿರುವು

ಗೋರಿಯ ನೆತ್ತಿಯೊಳಗಿಂದಲೂ
ಉಕ್ಕುವ ಕೊನೆಯಿಲ್ಲದ
ಯಥೇಚ್ಛ ಜೀವನಪ್ರೀತಿ
ಒಂದಿಷ್ಟು ಅಚ್ಚರಿ ಬೆರಗುಗಳಿಗೆ
ಕಾರಣವಾಗುತ್ತದೆ

ಯಾವ ಮೂಲದಿಂದ ಜೀವ ಜೀಕುತ್ತದೋ
ಯಾವ ಕೋನದಲ್ಲಿ ಪ್ರೀತಿ ಹರಿಯುತ್ತದೋ
ಯಾವ ನೆನಪುಗಳಿಗೆ ಎಷ್ಟು ಉಮ್ಮಳಿಕೆಯೋ
ಶಬ್ಧದ ಒಡಲಾಳದ ನಿಶಬ್ಧದಷ್ಟೇ
ಅಸಂಕಲ್ಪಿತ, ಅಯೋಮಯ.

ಶನಿವಾರ, ಜೂನ್ 11, 2016

ಮತ್ತೆ ನೋಡು...

ಅದೆಷ್ಟು ಬಾರಿ ಛಾಯಾಚಿತ್ರವ
ನೋಡಿ ನಿನ್ನ ನೀ ನೋಯಿಸಿಕೊಳ್ಳುತ್ತೀಯಾ?
ಬೇಡ ಬಿಟ್ಟು ಬಿಡು ಈ ದ್ವಂದ್ವವ
ಮತ್ತೆ ಮತ್ತೆ ಛಿದ್ರವಾಗುವ ಆಸೆಯೇತಕೆ?

ಸಲ್ಲದ ಆಸೆಯ ಸುಟ್ಟು
ಸುಮ್ಮನೆ ನಿರಮ್ಮಳವಾಗಿಬಿಡು
ಎಂದೂ ದಕ್ಕದ ನವ್ಯ ಕಾವ್ಯವ
ಅಂತರಗಕ್ಕಿಳಿಸುವ ಹುಕಿ ಏತಕೆ?

ಸ್ತಬ್ಧ ಕಾಳಿರುಳಿನ ದುರ್ಭರ
ಕ್ಷಣಗಳನು ಒಮ್ಮೆ ಭರಿಸಿಬಿಡು
ಕಣ್ಣ ಹನಿಯ ಇಂಗಿಸಿ
ಮಳೆ ಹನಿಸುವ ಹುಚ್ಚು ಕನಸೇತಕೆ?

ಕೂಡುವ ಮುನ್ನವೇ ಕವಲೊಡೆದ ನಿಸ್ತೇಜ
ಹಾದಿಯ ಒಂದುಗೂಡಿಸುವ ಹಂಬಲ ಬಿಡು
ಹರಿಯದ ನದಿಗೆ ವಿಶಾಲ ಶರಧಿಯ
ಸೇರುವ ಹುಸಿ ಕನವರಿಕೆಯೇತಕೆ?

ಕತ್ತಲ ಬೆರಳುಗಳು ಉತ್ಖನನ
ಮಾಡಿದರಷ್ಟೇ ಜಗಕೆ ಬೆಳಕು
ಕಂಬಳಿ ಹುಳವೂ ರೂಪಾಂತರಗೊಂಡು
ಪಟಪಟ ರೆಕ್ಕೆ ಬಡಿವ ಚಿಟ್ಟೆಯಾಗುತ್ತದೆ

ನೀನಾಗಲಾರೆ ಬಾನೆತ್ತರಕ್ಕೆಹಾರಲಾರೆ
ಅನ್ನೋ ನಿರಾಸೆಯ ಬಿಡು
ಭರವಸೆಯ ಬೆನ್ನು ಹತ್ತಿ
ಒಮ್ಮೆ ರೆಕ್ಕೆ ಕೊಡವಿಬಿಡು

ಮತ್ತೆ ನೋಡು,
ನೀನಾಕಾಶದಲ್ಲಿ, ಜಗ ನಿನ್ನ ಪದತಲದಲ್ಲಿ

ಶುಕ್ರವಾರ, ಜೂನ್ 10, 2016

ಹೀಗೇಕೆ ಮನಸ್ಸು ಬಿಸಿಲುಗುದುರೆಯ ಬೆನ್ನು ಹತ್ತುತ್ತದೆ?

ಅಂಕಣ ಬರೆಯಲು ಕುಳಿತರೆ ಅರ್ಧ ಬರೆದಿಟ್ಟ ಕಥೆ ಕೈ ಹಿಡಿದು ಜಗ್ಗುತ್ತದೆ, ನಿನ್ನೆ ರಾತ್ರಿಯ ಯಾವುದೋ ಒಂದು ಕ್ಷಣದಲ್ಲಿ ಮನಸ್ಸೊಳಗೆ ಮೂಡಿದ ಕವನದ ಸಾಲೊಂದು ಮತ್ತೆ ಪ್ರತಿಧ್ವನಿಸುತ್ತದೆ, ಇನ್ನೇನು ಅದನ್ನೇ ಕೈಗೆತ್ತಿಕೊಳ್ಳೋಣ ಅನ್ನುವಷ್ಟರಲ್ಲಿ ಮುಂದಿನ ತಿಂಗಳು ಬರ್ತ್‍ಡೇ ಆಚರಿಸಿಕೊಳ್ಳಲಿರುವ ಗೆಳತಿಗಾಗಿ ಸಿದ್ಧಪಡಿಸಬೇಕಿರುವ ಶುಭಾಶಯ ಪತ್ರ ನೆನಪಾಗುತ್ತದೆ, ತಟ್ಟನೆ ಸಮಾನ ಮನಸ್ಕ ಸ್ನೇಹಿತರೊಬ್ಬರು ನಿನ್ನ ಅಭಿಪ್ರಾಯ ತಿಳಿಸು ಎಂದು ಕಳುಹಿಸಿದ ಬರಹಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಅನ್ನುವ ವಿಚಾರ ನೆನಪಿಗೆ ಬರುತ್ತದೆ, ಅಷ್ಟರಲ್ಲೇ ಮನಸ್ಸು ಮತ್ತೆ, ಬರೆಯದ ಅಂಕಣದ ಕಡೆಗೇ ವಾಲುತ್ತದೆ.

ಹೀಗೇಕೆ ಮನಸ್ಸು ಕೆಲವೊಮ್ಮೆ ಬಿಸಿಲುಗುದುರೆಯ ಬೆನ್ನು ಹತ್ತುತ್ತದೆ? ಎಲ್ಲಾ ಕೆಲಸಗಳನ್ನೂ ಮಾಡಲೆಂದು ಹೊರಟು ಏನನ್ನೂ ಮಾಡಲಾಗದೆ ಕೈ ಚೆಲ್ಲಿ ಕುಳಿತುಕೊಳುತ್ತದೆ? ಕಣ್ಣೆದುರಿಗಿನ ಗುರಿ ನಿಚ್ಚಳವಾಗಿದ್ದರೂ ಅದರತ್ತ ತಲುಪಲಾಗದೆ ಒದ್ದಾಡಿಬಿಡುತ್ತದೆ?  ಸೇರಬೇಕಾದ ಗಮ್ಯಕ್ಕಿಂತ ಒಂದೇ ಹೆಜ್ಜೆ ಹಿಂದಿದ್ದರೂ ಯಾಕೆ ಮುಂದಡಿಯಿಡದೆ ಸುಮ್ಮನಿರುತ್ತದೆ? ಕೈಯಳತೆಯಲ್ಲೇ ಇರುವ ಇರಾದೆಯನ್ನು ಪೂರೈಸಲಾಗದೆ ಕೈ ಕಟ್ಟಿ ಕುಳಿತುಕೊಳ್ಳುತ್ತದೆ?

ಇದು ಕೇವಲ ಬರವಣಿಗೆಯೊಂದಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಎಲ್ಲರ ಬದುಕಿನ ಪ್ರತಿ ಆಯಾಮದಲ್ಲೂ ಮನಸ್ಸು ಇಂತಹದ್ದೊಂದು ಎಡೆಬಿಡಂಗಿ ಸ್ಥಿತಿಗೆ ಇಳಿದುಬಿಡುತ್ತದೆ. ನಾಳೆ ಗಣಿತ ಪರೀಕ್ಷೆ ಇಟ್ಟುಕೊಂಡು , ಇವತ್ತು ವಿಜ್ಞಾನದ ಮೇಲೆ ಒಂದು, ಇಂಗ್ಲಿಷಿನ ಮೇಲೆ ಮತ್ತೊಂದು ಕೈ ಇಟ್ಟು ಯಾವುದನ್ನೂ ಓದಲಾಗದ ಎಸ್.ಎಸ್.ಎಲ್.ಸಿ ಹುಡುಗನ ಮನಸ್ಥಿತಿಯಲ್ಲೂ, ಮಧ್ಯಾಹ್ನದ ಅಡುಗೆಗಿನ್ನೂ ತರಕಾರಿ ಕತ್ತರಿಸದೆ, ರಾತ್ರಿ ಊಟಕ್ಕೆ, ನಾಳೆ ಬೆಳಗ್ಗಿನ ತಿಂಡಿಗೆ ಏನು ಮಾಡಲಿ ಎಂದು ಚಿಂತಿಸುತ್ತಿರುವ ಗೃಹಣಿಯ ಮನಸ್ಥಿತಿಯಲ್ಲೂ, ಇನ್ನೆರಡು ದಿನಕ್ಕೆ ಒಪ್ಪಿಸಲೇಬೇಕಾಗಿರುವ ಪ್ರೊಜೆಕ್ಟನ್ನು ಮುಂದಿಟ್ಟುಕೊಂಡು, ಮುಂದಿನ ವರ್ಷ ಕೈಗೆತ್ತಿಕೊಳ್ಳಬೇಕಾಗಿರುವ ಪ್ರೊಜೆಕ್ಟಿನ ಕೋಡ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಸಾಫ್ಟ್‌ವೇರ್ ಉದ್ಯೋಗಿಯ ಮನಸ್ಥಿತಿಯಲ್ಲೂ, ಈ ವಾರದ ಕೊನೆಗೆ ಸಿಲೆಬಸ್ ಮುಗಿಸಲೇಬೇಕಾಗಿರುವ ಒತ್ತಡದಲ್ಲಿದ್ದೂ, ಮುಂದಿನ ಸೆಮಿಸ್ಟರ್ ಬಗ್ಗೆ ಯೋಚಿಸತೊಡಗುವ ಲೆಕ್ಚರರ್ ಮನಸ್ಥಿತಿಯಲ್ಲೂ... ಮನೆ ಮಾಡಿಕೊಂಡಿರುವುದು ಇದೇ ಎಡೆಬಿಡಂಗಿತನ.

ನಾವು ಈ ಎಡೆಬಿಡಂಗಿತನಕ್ಕೆ, ಕ್ರಿಯೇಟಿವಿಟಿಯ ಒಂದು ಭಾಗ ಅಂತಲೋ, ಇಲ್ಲ ಓದುವ ಹುಮ್ಮಸ್ಸು ಅಂತಲೋ, ಜವಾಬ್ದಾರಿತನದ ಚರಮ ಸೀಮೆ ಅಂತಲೋ, ದೂರಾಲೋಚನೆ ಅಂತಲೋ, ಮುಂದಿನ ದಿನಗಳಿಗಾಗಿ ಮಾಡಿಕೊಳ್ಳುವ ದಿವ್ಯ ಸಿದ್ಧತೆ ಅಂತಲೋ ಬಗೆ ಬಗೆಯ ಸುಂದರ ಹೆಸರಿಟ್ಟುಕೊಂಡರೂ, ಅವೆಲ್ಲಾ ಶುದ್ಧ ಸುಳ್ಳು ಅನ್ನುವುದು ಮನಸ್ಸಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಯಾವ ಕ್ರಿಯೇಟಿವಿಟಿಯ ಭಾಗವಾಗಿಯೂ ಒಂದು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೊಂದರತ್ತ ಮನಸ್ಸು ಛಂಗನೆ ಹಾರಿಬಿಡುವುದಿಲ್ಲ ಅನ್ನುವುದು ತುಂಬಾ ಹಿಂದೆಯೇ ಸ್ಪಷ್ಟವಾಗಿ ಸಾಬೀತಾಗಿರುತ್ತದೆ. ಬದುಕಿನ ಯಾವ ಸಾಂಪ್ರದಾಯಿಕ, ಅಸಾಂಪ್ರದಾಯಿಕ ಮೂಲಗಳನ್ನು ಕೆದಕಿದರೂ ಅದು ಪಾಸಿಟಿವಿಟಿಯೆಂದು ಅನ್ನಿಸಿಕೊಳ್ಳುವುದೇ ಇಲ್ಲ.

ಇಷ್ಟಿದ್ದರೂ ಮನಸ್ಸು ಕೆಲವೊಮ್ಮೆ ಜಿದ್ದಿಗೆ ಬಿದ್ದಂತೆ ಮಾಡುತ್ತಿರೋ ಕೆಲಸದಿಂದ ತಪ್ಪಿಸಿಕೊಳ್ಳಲು, ವಿನಾಕಾರಣ ಮತ್ತೊಂದರತ್ತ ಹೊರಳಿಕೊಳ್ಳಲು ನೂರು ಕಳ್ಳ ನೆಪಗಳನ್ನು, ಅನಗತ್ಯದ ಕಾರಣಗಳನ್ನು, ಅನುಪಯುಕ್ತ ಸಬೂಬುಗಳನ್ನು, ಅಸಮಂಜಸ ನಿಮಿತ್ತಗಳನ್ನು ಒಡ್ಡುತ್ತವೆ. ಮತ್ತವುಗಳನ್ನು ತುಂಬಾ ಶಕ್ತಿಯುತವಾಗಿ ಸಮರ್ಥಿಸಿಕೊಳ್ಳುತ್ತದೆ ಕೂಡ.

ಹೀಗೆ ಮನಸ್ಸು ಕಳ್ಳ ನೆವಗಳಿಗೆ ಬಿದ್ದು ಮಾಡಬೇಕಿರುವ ಕೆಲಸದಿಂದ ತಪ್ಪಿಸಿಕೊಳ್ಳಲು, ಹೊತ್ತಿರುವ ಜವಾಬ್ದಾರಿಗಳಿಂದ ನುಣುಚಿಕೊಳ್ಳಲಾರಂಭಿಸಿದಾಗೆಲ್ಲಾ, ಅದರ ತಲೆ ಮೇಲೊಂದು ಮೊಟಕಿ, ಅಸಂಬದ್ಧ ರೇಜಿಗೆಗಳನ್ನು ಜಾಡಿಸಿ ಒದ್ದು, ಮನಸ್ಸನ್ನು ಮತ್ತೆ ಎಬ್ಬಿಸಿ ನಡೆದು, ನಡೆಯಿಸಬೇಕು. ದಣಿದರೆಷ್ಟೇ ಊಟ ರುಚಿಸುತ್ತದೆ ಅನ್ನುವ ಸತ್ಯವನ್ನು ಸಾದ್ಯಂತವಾಗಿ ಮನಗಾಣಿಸಬೇಕು. ಆಗ ಮನಸ್ಸು ಮತ್ತೆ ಪುಟಿದೇಳುತ್ತದೆ, ರೆಕ್ಕೆ ಕೊಡವಿಕೊಂಡು ಜಗದಗಲ ಹಾರುತ್ತದೆ.

ಗುರುವಾರ, ಮೇ 19, 2016

ಪದೇ ಪದೇ ಮನಸ್ಸಾಕ್ಷಿಯ ಮುಂದೆ ಮಂಡಿಯೂರುವಂತಾಗಬಾರದಲ್ಲವೇ?

ಅವೇನೂ ಅಂತಹ ತಲೆ ಹೋಗುವಂತಹಾ ತಪ್ಪುಗಳಾಗಿರುವುದಿಲ್ಲ. ಆ ಒಂದು ಸಣ್ಣ ಮಟ್ಟಿಗಿನ ವಂಚನೆಯಿಂದ ಯಾರ ಬದುಕೂ ಪೂರ್ತಿ ನಾಮಾವಶೇಷ ಆಗಿರುವುದಿಲ್ಲ. ಅದು ನಂಬಿಕೆ ದ್ರೋಹ ಅಂತಾಗಲೀ, ವಿಶ್ವಾಸಘಾತುಕತನ ಅಂತಾಗಲೀ ಎಲ್ಲೂ ದಾಖಲಾಗಿರುವುದೂ ಇಲ್ಲ. ಅಸಲಿಗೆ ಅಂತದ್ದೊಂದು ತಪ್ಪು ನಮ್ಮಿಂದ ಸಂಭವಿಸಿಬಿಟ್ಟಿದೆ ಅನ್ನುವುದು ನಮ್ಮಹೊರತು ಪಡಿಸಿ ಇನ್ಯಾರ ಅರಿವಿಗೂ ಬಂದಿರುವುದಿಲ್ಲ. ಅಷ್ಟರಮಟ್ಟಿಗಿನ ಕ್ಷುಲ್ಲಕ ತಪ್ಪದು. ಇಷ್ಟಾದರೂ ಬದುಕು, ಯಾವುದೋ ತಿರುವಿನಲ್ಲಿ ನಮ್ಮ ನಿಲ್ಲಿಸಿ ಬಿಟ್ಟು "ಹೀಗೇಕೆ ಮಾಡಿದೆ?" ಅಂತ ಕೇಳಿಯೇ ಕೇಳುತ್ತದೆ.

ತಪ್ಪಿಸಿಕೊಳ್ಳಲಾಗದ ಪ್ರಶ್ನೆಯದು. ಅಪ್ಪ ಪ್ರಶ್ನಿಸುವಾಗೆಲ್ಲಾ ಹಾರಿಕೆಯ ಉತ್ತರ ಕೊಡಬಹುದು, ಅಮ್ಮನ ಪ್ರಶ್ನೆಗಳಿಗೂ ಉತ್ತರಿಸಬಹುದು, ಆಪ್ತ ಸ್ನೇಹಿತರೆನಿಸಿಕೊಂದವರ ಕಣ್ಣನ್ನೂ ತಪ್ಪಿಸಿ ಓಡಾಡಬಹುದು, ಸಂಗಾತಿಗಳ ಪ್ರಶ್ನೆಗೂ ಸುಳ್ಳು ಉತ್ತರ ನೀಡಬಹುದು, ಗುರುಗಳೆನಿಸಿಕೊಂಡವರ ಪ್ರಶ್ನೆಗಳಿಗೂ ನಿರ್ಲಿಪ್ತರಾಗಿ ಇದ್ದುಬಿಡಬಹುದು. ಆದ್ರೆ ಬದುಕಿನ ಪ್ರಶ್ನೆಗಳಿಗೆ...? ಊಹೂಂ, ಅಲ್ಲಿ ಹಾರಿಕೆ, ಕಣ್ಣು ತಪ್ಪಿಸುವುದು, ಸಮಜಾಯಿಕೆ ನೀಡುವುದು, ನಿರ್ಲಿಪ್ತರಾಗುವುದು, ನಿರ್ಲಕ್ಷ್ಯತನ ಯಾವುದೂ ಉಪಯೋಗಕ್ಕೆ ಬರುವುದಿಲ್ಲ. ಅದು ಆಗಿರೋ ತಪ್ಪುಗಳಿಗೆ, ಮಾಡಿರೋ ಮೋಸಗಳಿಗೆ, ವಂಚನೆಗಳಿಗೆ ನೇರ ಮತ್ತು ಪ್ರಾಮಾಣಿಕ ಉತ್ತರ ಬಯಸುತ್ತದೆ. ಅದೆಷ್ಟೇ ಅಲವತ್ತುಕೊಂಡರೂ, ತಪ್ಪಿಸಿಕೊಂಡರೂ ಬದುಕಿನ ಪ್ರಶ್ನೆಗಳಿಗೆ ತಪ್ಪಿಲ್ಲದೆ, ತಪ್ಪಾಗದಂತೆ ಪ್ರಾಮಾಣಿಕವಾಗಿ ಉತ್ತರಿಸಲೇಬೇಕಾಗುತ್ತದೆ.

ತುಂಬು ನಂಬಿಕೆಯಿಂದ ಆಪ್ತರಾರೋ ಈ-ಮೈಲ್ ಪಾಸ್‍ವರ್ಡ್ ಕೊಟ್ಟಿರುತ್ತಾರೆ. ನಾವೆಂದೂ ಅವರ ಖಾಸಗೀ ಮೈಲ್‍ಗಳನ್ನು ಓದಲಾರೆವು ಅನ್ನುವ ವಿಶ್ವಾಸವದು. ಆದ್ರೆ ಯಾವುದೋ ಒಂದು ಕ್ಷಣದ ಪ್ರಲೋಭನೆಗೆ ಒಳಗಾಗಿ ಅವರ ಇನ್‍ಬಾಕ್ಸ್‌ನಲ್ಲಿ ಏನೇನಿದೆ ಎಂದು ತಡಕಾಡಿ ಬಿಡುತ್ತೇವೆ. ಅಲ್ಲಿ ನಮಗೆ ಬೇಕಾದ್ದು, ಬೇಡವಾದ್ದು ಏನೂ ಸಿಕ್ಕಿಲ್ಲ ಅಂದಮೇಲೆ ಸೈನ್‍ಔಟ್ ಮಾಡಿ ಸುಮ್ಮನಾಗುತ್ತೇವೆ. ಮೈಲ್ ತಡಕಾಡುತ್ತಿದ್ದ ಅಷ್ಟೂ ಹೊತ್ತು ಕಾಡದ ಆತ್ಮಸಾಕ್ಷಿ ಈಗ ಧುತ್ತೆಂದು ಪ್ರತ್ಯಕ್ಷವಾಗಿಬಿಡುತ್ತದೆ.

ಇದು ಕೇವಲ ಈ-ಮೈಲ್ ಪಾಸ್‍ವರ್ಡ್ ಅಂತಲ್ಲ. ಕೆಲವೊಮ್ಮೆ ನಿನಗೆ ಮಾತ್ರ ಗೊತ್ತಿರಲಿ ಅಂತ ಹೇಳಿದ ಅತ್ಯಾಪ್ತರ ಬದುಕಿನ ಗುಟ್ಟನ್ನು ಇನ್ಯಾರದೋ ಜೊತೆ ಹಂಚಿಕೊಳ್ಳುತ್ತೆವೆ. ತುಂಬಾ ಚೊಕ್ಕಟ ಅಂತನ್ನಿಸಿಕೊಂಡಿರುವ ಸಂಸಾರದ ಮಧ್ಯೆ ಇದ್ದೂ ಮತ್ತೊಂದು ನಿರುಪದ್ರವೀ ಸಂಬಂಧದೆಡೆ ಕೈ ಚಾಚುತ್ತೇವೆ, ಅದೂ ಸಂಸಾರದೊಳಗಿನವರಿಗೆ ಒಂದು ಚಿಕ್ಕ ಸುಳಿವೂ ಬಿಟ್ಟುಕೊಡದೆ. ಪ್ರಾಣ ಸ್ನೇಹಿತರು ಬಗಲ್ಲಲ್ಲಿರುವಾಗಲೇ ಅವರ ಬಗೆಗಿನ ಗೌಪ್ಯ ಸಂಗತಿಯನ್ನು ಮತ್ಯಾರಿಗೋ ತಲುಪಿಸಿರುತ್ತೇವೆ. ಜೀವಕ್ಕಿಂತ ಹೆಚ್ಚು ಪ್ರೀತಿಸೋ ಪ್ರೇಮಿಯ ಪಕ್ಕದಲ್ಲೇ ಕೂತು ಒಂದು ಅನುಪಯುಕ್ತ ಸುಳ್ಳು ಹೇಳಿರುತ್ತೇವೆ, ನಂಬಿಕೆಯ ಇನ್ನೊಂದು ಹೆಸರೇ ನಾವು ಅನ್ನುವಷ್ಟು ನಮ್ಮನ್ನು ನಂಬಿಕೊಂಡಿರುವ ಅಪ್ಪ-ಅಮ್ಮನನ್ನೇ ಸಣ್ಣದಾಗಿ ವಂಚಿಸಿರುತ್ತೇವೆ. ಹಾಗೆ ವಂಚಿಸುವಾಗ, ಸುಳ್ಳು ಹೇಳುವಾಗ, ತಪ್ಪು ಮಾಡುವಾಗೆಲ್ಲಾ ನಮಗೆ ಏನೂ ಅನಿಸಿರುವುದೂ ಇಲ್ಲ.

ಇಷ್ಟಕ್ಕೂ, ಇಂತಹ ಎಲ್ಲಾ ಸಂದರ್ಭಗಳಲ್ಲೂ ತಪ್ಪು ಮಾಡಬೇಕೆನ್ನುವ ಉದ್ದೇಶವಾಗಲಿ, ವಂಚಿಸುವ ಇರಾದೆಯಾಗಲೀ ಇರುವುದೇ ಇಲ್ಲ. ಆ ಕ್ಷಣಕ್ಕೆ ಮನಸ್ಸು ಅನಗ್ಯತದ ಆಸಕ್ತಿಗೆ, ಒಳಗೇನಿರಬಹುದು ಅನ್ನುವ ಚಪಲಕ್ಕೆ, ಅವರ ಬಗ್ಗೆ ನನಗಿಷ್ಟೆಲ್ಲಾ ಗೊತ್ತು ಅನ್ನುವುದನ್ನು ಮೂರನೆಯವರಿಗೆ ಗೊತ್ತು ಪಡಿಸಬೇಕು ಅನ್ನುವ ವಿಚಿತ್ರ ತೆವಲಿಗೆ, ಅಪ್ಪ-ಅಮ್ಮನಿಗಿಂತ ನಾವೇನು ಕಡಿಮೆ ತಿಳುವಳಿಕೆ ಇರುವವರಲ್ಲ ಅನ್ನುವ ಅಹಮ್ಮಿಗೆ ಬಿದ್ದು ಬಿಡುತ್ತದೆ. ಆಗಲೇ ಮನಸ್ಸು ಸಣ್ಣ ಪುಟ್ಟ ಎಲ್ಲೆ ಮೀರ ಬಯಸುವುದು.

ನಿಜ, ಅವೆಲ್ಲಾ ಗಹನವಾದ ತಪ್ಪುಗಳಾಗಿರುವುದಿಲ್ಲ, ಅಥವಾ ಆ ತಪ್ಪುಗಳಿಂದ ಯಾರ ಬದುಕೂ, ಯಾವ ಸಂಬಂಧಗಳೂ ಮೂರಾಬಟ್ಟೆಯಾಗಿರುವುದಿಲ್ಲ. ಆದರೆ, ಒಂದು ಸಣ್ಣ ಸುಳ್ಳಿನಿಂದ ಪ್ರಪಂಚವೇನೂ ಮುಳುಗಿ ಹೋಗುವುದಿಲ್ಲ ಅನ್ನುವುದು ಎಷ್ಟು ಸತ್ಯವೋ, ಒಂದು ಸಣ್ಣ ಸತ್ಯದಿಂದ ಮನುಷ್ಯನ ಮಾನಸ ಪ್ರಪಂಚ ವಿಸ್ತರಿಸುತ್ತಾ ಹೋಗುತ್ತದೆ ಅನ್ನುವುದೂ ಅಷ್ಟೇ ಸತ್ಯ. ಇಷ್ಟಕ್ಕೂ ಬದುಕಿಗೆ, ಮನಸ್ಸಾಕ್ಷಿಗೆ ಮುಖ್ಯವೆನಿಸುವುದು, ಪ್ರಶ್ನಿಸಬೇಕೆನಿಸುವುದು ತಪ್ಪುಗಳಷ್ಟನ್ನೇ ಹೊರತು ಅದರ ಗಹನತೆಯನ್ನಲ್ಲ.

ಬದುಕು ನಮ್ಮನ್ನೆಂದೂ ಪ್ರಶ್ನಿಸಲೇಬಾರದು, ಅಷ್ಟು ವ್ಯವಸ್ಥಿತವಾಗಿ, ಚೊಕ್ಕಟವಾಗಿ, ಅನ್ನದಲ್ಲಿ ಒಂದೇ ಒಂದು ಕಲ್ಲೂ ಸಿಗದಂತೆ ಬದುಕುತ್ತೇನೆ ಅಂದುಕೊಳ್ಳುವುದು, ಹಾಗೆಯೇ ಅವುಡುಗಚ್ಚಿ, ಪ್ರತಿಕ್ಷಣ ಪರಮ ಜಾಗರೂಕತೆಯಿಂದ ಬದುಕಲು ಪ್ರಯತ್ನಿಸುವುದು ಎರಡೂ ದೂರದಲ್ಲೆಲ್ಲೋ ಆಕಾಶ ಭೂಮಿಯನ್ನು ಸ್ಪರ್ಶಿಸುತ್ತದೆ ಎಂದು ಭಾವಿಸಿಕೊಳ್ಳುವಷ್ಟೇ ಅವಾಸ್ತವಿಕ. ಅಂತಹ ನಿರ್ಧಾರಗಳು ನಮ್ಮ ಬದುಕನ್ನು ಮತ್ತೊಂದು ಭ್ರಮಾದೀನ ಸ್ಥಿತಿಯಲ್ಲಿರಿಸುವುದನ್ನು ಹೊರತು ಪಡಿಸಿ ಇನ್ನೇನನ್ನೂ ಮಾಡದು. ಹಾಗೆಂದು, ಬದುಕಿನ ನ್ಯಾಯಯುತ ಪ್ರಶ್ನೆಗಳಿಗೆ ಉತ್ತರಿಸಲಾಗದೆ  ಪದೇ ಪದೇ ಮನಸ್ಸಾಕ್ಷಿಯ ಮುಂದೆ ತಲೆ ತಗ್ಗಿಸಿ ಮಂಡಿಯೂರುವ ಪರಿಸ್ಥಿತಿಯೂ ಎದುರಾಗಬಾರದು ಅಲ್ಲವೇ?

ಮಂಗಳವಾರ, ಮೇ 17, 2016

ಒಳ್ಳೆಯವರಾಗಿರುವುದು ಅಂದ್ರೇನು?

'ಅವನು/ಳು ತುಂಬಾ ಒಳ್ಳೆಯವನು/ಳು' ಅಂತೆಲ್ಲಾ ನಾವು ಯಾರದೋ ಬಗ್ಗೆ ಮಾತಾಡುತ್ತಿರುತ್ತೇವೆ. ಅಂತಹವರು, 'ದೇಹೀ' ಎಂದು ಕೈ ಚಾಚಿದ ಯಾರಿಗೂ ಯಾವತ್ತೂ ಇಲ್ಲ ಅನ್ನುವುದಿಲ್ಲ, ಒಂದೇ ಒಂದು ಕ್ಷಣಕ್ಕೂ ಯಾರ ಮೇಲೂ ಸಿಟ್ಟಾಗುವುದಿಲ್ಲ, ದ್ವೇಷ ಅನ್ನುವ ಭಾವನೆಯನ್ನೇ ತನ್ನತ್ತ ಸುಳಿಯಲೂ ಬಿಡುವುದಿಲ್ಲ‌, ಮಧ್ಯ ರಾತ್ರಿ ಎಬ್ಬಿಸಿ ಸಹಾಯ ಕೇಳಿದರೂ ಮುಖಕ್ಕೆ ತಣ್ಣೀರು ಚಿಮುಕಿಸಿ ಉಟ್ಟ ಬಟ್ಟೆಯಲ್ಲೇ ಸಹಾಯಕ್ಕೆಂದು ಧಾವಿಸುತ್ತಾರೆ, ತನ್ನಿಂದ ತಪ್ಪೇ ಆಗದಿದ್ದರೂ ಕೈ ಮುಗಿದು ಕ್ಷಮೆ ಕೇಳುತ್ತಾರೆ, ತನ್ನನ್ನು ನೋಯಿಸಿದವರನ್ನೂ ತುಂಬಾ ಸುಲಭವಾಗಿಯೇ ಕ್ಷಮಿಸುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರೆಲ್ಲಾ 'ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಪ್ರೀತಿಸುತ್ತಾರೆ' ಎಂಬಂತಿರುತ್ತಾರೆ ಅಥವಾ ಹಾಗಂದುಕೊಂಡು ತಮ್ಮನ್ನೇ ಮೋಸಮಾಡಿಕೊಳ್ಳುತ್ತಿರುತ್ತಾರೆ.

ಆದರೆ ನಿಜಕ್ಕೂ ಒಳ್ಳೆಯತನವೆಂದರೇನು? ಒಳ್ಳೆಯವರಾಗಿರುವುದು ಅಂದ್ರೇನು? ಒಳ್ಳೆಯತನದ ಅಳತೆಗೋಲುಗಳಾವುವು? ಒಳ್ಳೆಯದನ್ನೂ ಕೆಟ್ಟದನ್ನೂ ಅಳೆಯುವ ಮಾನದಂಡ ಯಾವುದು? ಈ ಯಾವ ಪ್ರಶ್ನೆಗಳಿಗೂ 'ಇದಮಿತ್ಥಂ' ಅನ್ನುವ ಯಾವ ಉತ್ತರವೂ ದೊರೆಯುವುದಿಲ್ಲ.

ಪ್ರತಿ ಬಾರಿ ಮನುಷ್ಯ ದೇವರಾಗಹೊರಟಾಗೆಲ್ಲಾ ಅವನ ಸಹಜತೆ ಕಳೆದುಕೊಳ್ಳುತ್ತಾನೆ. ಅರಿಷಡ್ವರ್ಗಗಳನ್ನು ಗೆಲ್ಲುತ್ತೇನೆ ಅನ್ನುವ ಅಹಂನಲ್ಲಿ, ಭ್ರಮೆಯಲ್ಲಿ ತನ್ನನ್ನು ತಾನೇ ಸೋಲಿಸಿಕೊಳ್ಳುತ್ತಿರುತ್ತಾನೆ. ಪ್ರತಿಕ್ಷಣವೂ ಸ್ಥಿತಪ್ರಜ್ಞನಾಗಿಯೇ ಇರುತ್ತೇನೆ ಅನ್ನುವ ಹುಂಬತನದಲ್ಲಿ ಆ ಕ್ಷಣದ ಅಚ್ಚರಿಗಳನ್ನು, ಆನಂದಗಳನ್ನು ತನಗರಿವಿಲ್ಲದೇ ಕಳೆದುಕೊಳ್ಳುತ್ತಿರುತ್ತಾನೆ.

ಪ್ರಪಂಚದ ದೃಷ್ಟಿಯಲ್ಲಿ ತೀರಾ 'ಒಳ್ಳೆಯವರು' ಅನ್ನಿಸಿಕೊಂಡವರು, 'ಯಾರ ಮನಸ್ಸನ್ನೂ ಒಂದು ಕ್ಷಣಕ್ಕೂ ನೋಯಿಸದವರು', 'ಸಮಚಿತ್ತರು' ಅಂತೆಲ್ಲಾ ಅನ್ನಿಸಿಕೊಂಡವರಿರುತ್ತಾರಲ್ಲಾ ಅಂತಹವರ ಅಂತರಂಗಕ್ಕೊಮ್ಮೆ ಇಳಿದು ನೋಡಬೇಕು. ಮೇಲೆ ಮೇಲೆ ಎಲ್ಲಾ ಸರಳವಾಗಿದೆ, ಸುಲಲಿತವಾಗಿದೆ ಎಂದೇ ಅನಿಸುತ್ತದೆ. ಗಳಿಸಿದ ಸ್ನೇಹ, ಪ್ರೀತಿ, ಉಳಿಸಿಕೊಂಡ ಸಂಬಂಧ, ಎಂದೂ ಕುಸಿದು ಹೋಗಲಾರರು ಅನ್ನುವಂತಹ ಗಟ್ಟಿ ವ್ಯಕ್ತಿತ್ವ, ಸುಲಭವಾಗಿ ಸೋಲದ ಆತ್ಮವಿಶ್ವಾಸ... ಇವೆಲ್ಲವನ್ನು ಮೀರಿಯೂ ಹೇಳಿಕೊಳ್ಳಲಾಗದ ಅಸಹಾಯಕತೆ, ಒಂದು ಪುಟ್ಟ ಅಭದ್ರತೆ, ಯಾವಾಗ ಏನಾಗುತ್ತದೋ ಅನ್ನುವ ಅನುಮಾನ, ಒಳ್ಳೆಯತನದ ಪೊರೆ ಎಲ್ಲಿ ಕಳಚಿಬೀಳುತ್ತದೋ ಅನ್ನುವ ದಿಗಿಲು ಸದಾ ಕಾಡುತ್ತಿರುತ್ತದೆ.

ಆ ದಿಗಿಲೇ, ಅನುಮಾನವೇ, ಅಭದ್ರತೆಯೇ, ಅಸಹಾಯಕತೆಯೇ ಬದುಕಿನ ಪುಟ್ಟ ಪುಟ್ಟ ಖುಶಿಗಳನ್ನು, ಕೆಲವು ಉತ್ಕಟ ಸಂಭ್ರಮಗಳನ್ನು ಅನುಭವಿಸಲು, ತುಂಟತನದ ಪರಮಸೀಮೆಗಳನ್ನು ತಡವುವಲ್ಲಿ ತೊಡರುಗಾಲಾಗುತ್ತದೆ. ಕೊನೆಗೊಂದು ದಿನ ಬದುಕಿನೊಂದಿಗಿನ ಬಯಕೆಗಳೆಲ್ಲಾ ಸತ್ತು ತೋರಿಕೆಯ ನಗುವಿನ ನೀರಸ ದಿನಚರಿಯಾಗಿಬಿಡುತ್ತದೆ ಜೀವನ.

ಹಾಗೆಂದ ಮಾತ್ರಕ್ಕೆ ಬದುಕು ಬರಿ ಸ್ವಾರ್ಥಭರಿತವಾಗಿರಬೇಕು, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬಾರದು, ತನ್ನ ಖುಶಿಯೊಂದೇ ಬದುಕಿನ ಪರಮ ಗುರಿಯಾಗಿರಬೇಕು ಎಂದಲ್ಲ. ಹೊರಡಲು ಇನ್ನೂ ಅರ್ಧ ಗಂಟೆ ಇರುವ ಬಸ್ಸಿನಲ್ಲಿ ಕೂತು ತೂಕಡಿಸುತ್ತಿರುವಾಗ ಕೋಲೂರುತ್ತಾ ಅದ್ಯಾವುದೋ ಮನಕಲುಕುವ ಹಾಡು ಹಾಡುತ್ತಾ ಭಿಕ್ಷೆಗೆ ಬಂದ ಅದ್ಭುತ ಕಂಠದ ಅಂಧನ ಮೈ ದಡವಿ ಮನೆಗೆ ಕರೆತಂದು ಅಕ್ಕರೆಯಿಂದ ಊಟ ಹಾಕಿ ಅವನಲ್ಲಿನ ಪ್ರತಿಭೆಗೆ, ಕಂಠಕ್ಕೆ ಒಂದು ವೇದಿಕೆ ಒದಗಿಸಿ ಅವನ ಬದುಕಿಗೆ ದಾರಿ ದೀಪವಾಗುವುದು ಒಳ್ಳೆಯತನ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಣ್ಣಿನ ಶಸ್ತ್ರಕ್ರಿಯೆ ಮಾಡಿಸಿ ಅವನಿಗೆ ದೃಷ್ಟಿ ಕೊಡಿಸುವುದೂ ಒಳ್ಳೆಯತನವೇ. ಆದರೆ ಬಸ್ ಸ್ಟಾಂಡಿನಲ್ಲಿ, ನಿಂತ ನಿಲುವಿನಲ್ಲೇ ತನ್ನದೇ ಒಂದು ಕಣ್ಣನ್ನು ಕಿತ್ತು ಅವನಿಗೆ ಕೊಡುವುದಿದೆಯಲ್ಲಾ ಅದು ಶುದ್ಧ ಅವಿವೇಕ ಮತ್ತು ಅತಿರೇಕ.

ಇಷ್ಟಕ್ಕೂ ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಪ್ರೀತಿಸಲು, ಪೊರೆಯಲು ದೇವನೊಬ್ಬನಿಂದ ಮಾತ್ರ ಸಾಧ್ಯ. ಈ ಸಣ್ಣ ಅರಿವನ್ನೂ ಮೀರಿ ಮನುಷ್ಯ ಮಾತ್ರನಾದವನೊಬ್ಬ ತಾನು ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಪ್ರೀತಿಸುತ್ತೇನೆ ಅನ್ನುತ್ತಿರುತ್ತಾನೆ, ಅಂದುಕೊಳ್ಳುತ್ತಿರುತ್ತಾನೆ ಅಂದರೆ ಅವನೊಬ್ಬ ಅಪ್ರಾಮಾಣಿಕ ಅಷ್ಟೇ.

ಮತ್ತು ಅಷ್ಟು ಮಾತ್ರ.

ಶನಿವಾರ, ಮೇ 14, 2016

ನಿರ್ಧಾರಕ್ಕೆ ಬರುವ ಮುನ್ನ ಒಂದಿಷ್ಟಾದರೂ ಯೋಚಿಸಿ.

ಬೆಳ್ಳಂಬೆಳಗ್ಗೆ ಎದ್ದು, ಕಣ್ಣುಜ್ಜಿಕೊಳ್ಳುತ್ತಾ ಮೊಬೈಲ್ ಸ್ಪರ್ಶಿಸಿದರೆ, ಇನ್‍ಬಾಕ್ಸ್ ಒಳಗೊಂದು ಮೆಸೇಜ್ ಬೆಚ್ಚನೆ ಕೂತಿತ್ತು. ತೆರೆದು ನೋಡಿದ್ರೆ, 'ಹುಡುಗನೊಬ್ಬ ಪ್ರೀತಿಸುತ್ತಿದ್ದರೆ ಅದು ಸಂಬಂಧಪಟ್ಟ ಹುಡುಗಿಯನ್ನು ಹೊರತು ಪಡಿಸಿ ಉಳಿದೆಲ್ಲರಿಗೂ ತಿಳಿದಿರುತ್ತದೆ. ಹಾಗೆಯೇ ಹುಡುಗಿಯೊಬ್ಬಳು ಪ್ರೀತಿಸುತ್ತಿದ್ದರೆ ಅದು ಅವಳೊಬ್ಬಳನ್ನು ಹೊರತುಪಡಿಸಿ ಇನ್ಯಾರಿಗೂ ತಿಳಿಯುವುದಿಲ್ಲ' ಅಂತಿತ್ತು. ಓದಿದಾಕ್ಷಣ ಫನ್ನಿ ಅಂತ ಅನ್ನಿಸಿದರೂ ತುಸು ಹೊತ್ತು ಕಳೆದ ನಂತರ, ಅರೆ ಹೌದಲ್ವಾ? ಅಂತ ಅನಿಸತೊಡಗಿತು.

ಹಲವು ಸಂದರ್ಭಗಳಲ್ಲಿ,  ಪಕ್ಕದ ಬೆಂಚಲ್ಲಿ ಕೂರೋ ಹುಡುಗಿಯೋ, ಇಲ್ಲ ಎದುರು ಮನೆ ಅಂಕಲ್ ಮಗಳೋ, ಅತ್ತಿಗೆಯ ತಂಗಿಯೋ, ತಂಗಿಯ ಗೆಳತಿ, ಸೋದರತ್ತೆಯ ದೊಡ್ಡಣ್ಣನ ಮಗಳು, ದಿನಾ ವಾಕಿಂಗ್‍ಗೆ ಜೊತೆಯಾಗೋ ಹುಡುಗಿ,  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಸಮಾನ ಅಭಿರುಚಿಯ ಹೆಣ್ಣು ಮಗಳು... ಮುಂತಾದವರೆಲ್ಲಾ ನಿಮ್ಮನ್ನು ಅಂದರೆ ಹುಡುಗರನ್ನು ತುಂಬಾ ಆತ್ಮೀಯವಾಗಿ ಮಾತಾಡಿಸುತ್ತಾರೆ, ಹತ್ತಿರವಿದ್ದರೆ ಹೆಗಲ ಮೇಲೊಂದು ಕೈ ಇಟ್ಟುಕೊಂಡೇ ಹರಟುತ್ತಾರೆ, ವಿಪರೀತ ಅನ್ನುವಷ್ಟು ಹಚ್ಚಿಕೊಳ್ಳುತ್ತಾರೆ.

ನೀವು ಮಧ್ಯ ರಾತ್ರಿ ಕರೆ ಮಾಡಿದರೂ ಅದನ್ನು ನಿದ್ದೆಗಣ್ಣಿನಲ್ಲೇ ಅಟೆಂಡ್ ಮಾಡುತ್ತಾರೆ, ನಂಗೊಂದು ಹೆಲ್ಪ್ ಆಗ್ಬೇಕಿತ್ತು ಕಣೇ ಅಂದ್ರೆ ತಮ್ಮ ಜೀವ ಒತ್ತೆ ಇಟ್ಟಾದರೂ ಸಹಾಯ ಮಾಡೋಕೆ ಸಿದ್ಧರಾಗುತ್ತಾರೆ, ನನ್ ಹುಡುಗಿ ನಂಗೆ ಮೋಸ ಮಾಡಿದ್ಳು ಕಣೇ ಅಂದ್ರೆ ನಿಮ್ಮ ಹತ್ತಿರ ಕೂತು ಹೋಗ್ಲಿ ಬಿಡೋ, ಅವಳಿಗೆ ನಿನ್ನ ಪಡಕೊಳ್ಳುವ ಯೋಗ್ಯತೆ ಇಲ್ಲ ಬಿಡು ಎಂದು ಸಮಾಧಾನಿಸುತ್ತಾಳೆ, ಯಾಕೋ ಕ್ಲಾಸ್ ಬೋರಾಗ್ತಿದೆ ಬಂಕ್ ಮಾಡ್ತೀನಿ ಅಂದ್ರೆ ನೀನಿಲ್ದಿರೋ ಕ್ಲಾಸಲ್ಲಿ ಕೂರೋಕೆ ನಂಗೂ ಬೋರ್, ನಾನು ಬರ್ತೀನಿ ಇರು ಅಂತಾಳೆ. ಅಪ್ಪಿತಪ್ಪಿ ಏನಾದ್ರೂ ’ಈ ಲೈಫ್ ಬೇಜಾರಾಗೋಗಿದೆ’ ಅಂತ ರಾತ್ರಿ ಮಲಗೋ ಮುನ್ನ ವಾಟ್ಸಾಪ್ ಸ್ಟೇಟಸ್ ಹಾಕೊಂಡ್ರೆ ಪ್ರಪಂಚಾನೇ ಅಲ್ಲೋಲಕಲ್ಲೋಲ ಆಯ್ತೇನೋ ಎಂಬಂತೆ ಆಕ್ಷಣಾನೇ ಕರೆ ಮಾಡಿ ಬೆಳಕು ಹರಿಯುವವರೆಗೂ ನಿಮ್ಮನ್ನು ಎಂಗೇಜಲ್ಲಿರಿಸುತ್ತಾಳೆ, ನೀವು ಕೇಳದೇನೇ ನಿಮ್ಮ ಅಸೈನ್‍ಮೆಂಟ್ ಬರೆದಿಡ್ತಾಳೆ, ಅಪ್ಪನ ಜೊತೆ ಶಾಪಿಂಗ್ ಹೋದ್ರೂ ಅಲ್ಲಿಂದಲೇ ಫೋನ್ ಹಚ್ಚಿ ಯಾವ ಕಲರ್ ಡ್ರೆಸ್ ತಗೋಬೇಕು ಹೇಳೋ ಅಂತ ನಿಮ್ಮ ತಲೆ ತಿನ್ನುತ್ತಾಳೆ, ಒಂದೇ ಒಂದು ದಿನ ಸಿಗದೇ ಇದ್ರೂ ಇಷ್ಟಗಲ ಕಣ್ಣರಳಿಸಿ ನಿನ್ನೆ ಎಲ್ಲಿ ಸಾಯೋಕೆ ಹೋಗಿದ್ದೆ ಅಂತ ಕೇಳ್ತಾಳೆ ಅಥವಾ ಮೂತಿನಾ ಇಷ್ಟುದ್ದ ಮಾಡ್ಕೊಂಡು ನಿನ್ನ ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಾ ಅಂತ ಪ್ರಶ್ನಿಸ್ತಾಳೆ. ನೀನಿಲ್ದೇ ನನ್ನ ಬದುಕು ಇನ್‍ಕಂಪ್ಲೀಟ್ ಕಣೋ ಎಂದು ಸಾವಿರ ಬಾರಿ ಹೇಳಿರುತ್ತಾಳೆ ಮತ್ತು ಹಾಗೆ ನಡ್ಕೊಂಡಿರುತ್ತಾಳೆ ಕೂಡ.

ಅದರೆ ಹುಡುಗರಾ, ನೀವಂದುಕೊಂಡಿರುವಂತೆ ಅದು ಪ್ರೀತಿಯಾಗಿರುವುದಿಲ್ಲ. ಅಲ್ಲಿ ನಿಮ್ಮನ್ನು ಜೀವನಸಂಗಾತಿಯಾಗಿ ಪಡೆದುಕೊಳ್ಳಬೇಕು ಅನ್ನುವ ಆಸೆ ಇರುವುದಿಲ್ಲ. ಅವಳು ನಿಮ್ಮನ್ನೆಂದೂ ಪ್ರೇಮಿಯಾಗಿ ಕಲ್ಪಿಸಿಕೊಂಡಿರುವುದಿಲ್ಲ. ಅಲ್ಲಿರುವುದು ಶುದ್ಧಾನುಶುದ್ಧ ಸ್ನೇಹ ಮಾತ್ರ. ಅವನು ನನ್ನ ಜೀವದ ಗೆಳೆಯ ಅನ್ನುವ ನಿಷ್ಕಳಂಕ ಭಾವ ಮಾತ್ರ. ನನ್ನ ಪ್ರತಿ ಸೋಲಲ್ಲೂ, ಪ್ರತಿ ಗೆಲುವಲ್ಲೂ ನನ್ನೀ ಗೆಳೆಯನಿರುತ್ತಾನೆ ಅನ್ನುವ ಭರವಸೆಯದು. ನನ್ನ ಪ್ರತೀ ನಲಿವನ್ನೂ, ಪ್ರತಿ ಸೋಲನ್ನೂ ಹಂಚಿಕೊಳ್ಳೋಕೆ ಒಂದು ಜೀವವಿದೆ ಅನ್ನುವ ನಂಬಿಕೆಯದು.

ನೀವು ನೊಂದಾಗ ಎಲ್ಲೇ ಇದ್ದರೂ ಓಡೋಡಿ ಬಂದು ನಿಮ್ಮನ್ನವಳು ಸಮಾಧಾನಿಸುತ್ತಾಳೆ ಅಂದರೆ ಅದು ಪ್ರೇಮವಲ್ಲ, ಅವಳ ಒಳ್ಳೆಯತನ. ಪ್ರತೀ ಹೆಣ್ಣು ಹುಟ್ತುತ್ತಲೇ ತಾಯಿಯಾಗಿಯೇ ಹುಟ್ಟುತ್ತಾಳಂತೆ. ಮಗಳಾಗಿ, ತಂಗಿಯಾಗಿ, ಅಕ್ಕನಾಗಿ, ಅತ್ತಿಗೆಯಾಗಿ, ಗೆಳತಿಯಾಗಿ ಕೊನೆಗೆ ಪ್ರೇಮಿಯಾಗಿ ಕೂಡ ಆಕೆ ನಿಭಾಯಿಸುವುದು, ನಿರ್ವಹಿಸುವುದು ತಾಯ್ತನದ ವಿವಿಧ ಮಜಲುಗಳನ್ನೇ, ವಿವಿಧ ಪದರುಗಳನ್ನೇ. ಇಲ್ಲೂ ಅಷ್ಟೆ, ನೀವು ನೊಂದಿದ್ದೀರಿ ಅಂದಾಕ್ಷಣ ಅವಳಲ್ಲಿ ಒಳಗೆಲ್ಲೋ ಸುಪ್ತವಾಗಿದ್ದ ತಾಯ್ತನ ಜಾಗೃತವಾಗುತ್ತದೆ. ಅದರಿಂದಾಗೇ ಆಕೆ ನಿಮ್ಮ ಬಳಿ ಓಡಿ ಬರುತ್ತಾಳೆ, ಎಷ್ಟು ಸಾಧ್ಯವೋ ಅಷ್ಟೂ ಕಂಫರ್ಟ್ ಫೀಲ್ ಕೊಡೋಕೆ ಪ್ರಯತ್ನಿಸುತ್ತಾಳೆ. ಹಾಗೆ ಕೊಡೋಕೆ ಆಗದೇ ಇದ್ದಾಗೆಲ್ಲಾ ತಾನು ಈ ಸಂಬಂಧವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೇನೋ ಅನ್ನುವ ತೊಳಲಾಟಕ್ಕೆ ಬಿದ್ದುಬಿಡುತ್ತಾಳೆ.

ಅದನ್ನೇ, ಆ ಒಳ್ಳೆಯತನವನ್ನೇ ನೀವು ಪ್ರೀತಿ ಅಂದುಕೊಳ್ಳುತ್ತೀರಿ. ನೀನಿಲ್ಲದೇ ನನ್ನ ಬದುಕು ಇನ್‍ಕಂಪ್ಲೀಟ್ ಕಣೋ ಅಂದಿರುವುದನ್ನೇ ಪ್ರೇಮದ ತೀವ್ರತೆಯೆಂದು ಪರಿಗಣಿಸುತ್ತೀರಿ. ಒಂದೇ ಒಂದು ಕ್ಷಣಕ್ಕೂ ಅದು ಆಕೆಯ ಸ್ನೆಹದ ಆಳ, ನಿರ್ಮಲತೆ ಅಂತ ನಿಮಗನಿಸುವುದೇ ಇಲ್ಲ. ಅವಳನ್ನು ಒಂದು ಮಾತೂ ಕೇಳದೇ, ನಿಮಗೆ ನೀವೇ ಪ್ರೀತಿಸುತ್ತಿರುವುದಕ್ಕೇ ಇಷ್ಟೊಂದು ಕಾಳಜಿ ತೋರುತ್ತಿದ್ದಾಳೆ ಎಂದು ನಿರ್ಧರಿಸಿಬಿಡುತ್ತೀರಿ.

ಸರಿ, ಹಾಗೆ ನಿರ್ಧರಿಸಿದ ಮೇಲಾದರೂ, ನಿಮ್ಮ ಅಷ್ಟೊಂದು ಹಚ್ಚಿಕೊಂಡ ಹುಡುಗಿಯ ಹತ್ತಿರ ಕೂತು, ಆತ್ಮೀಯತೆಯಿಂದ, ನನಗೇನೋ ನೀನು ನನ್ನ ಪ್ರೀತಿಸುತಿದ್ದಿ ಅನ್ನಿಸುತ್ತದೆ, ನೀನೇನು ಹೇಳುತ್ತಿ ಎಂದು ಕೇಳುವುದೋ, ಇಲ್ಲ ನಮ್ಮಿಬ್ಬರ ಸ್ನೇಹವನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೊಯ್ದು ಸಂಗಾತಿಗಳಾಗೋಣ ಅಂತಲೋ ಹೇಳುತ್ತೀರೇನೋ ಅಂದರೆ ಅದೂ ಇಲ್ಲ. ಹಾಗೇನೂ ಮಾಡದೆ, ಮುಂಜಾವಿನ್ನೂ ಕಣ್ಣುಬಿಡುವ ಮುನ್ನವೇ ಅವಳು ಕಳುಹಿಸಿದ್ದ  good morning  ಮೆಸೇಜನ್ನೋ ಅಥವಾ ಗೆಳತಿಯರ ಜೊತೆಗೆ ಟ್ರಿಪ್ ಹೋದಾಗ ಬಿಡುವು ಮಾಡಿಕೊಂಡು ಕಳುಹಿಸಿದ miss you  ಮೆಸೇಜನ್ನೋ ಆಧಾರವಾಗಿಟ್ಟುಕೊಂಡು, ಅವಳೊಬ್ಬಳನ್ನು ಹೊರತುಪಡಿಸಿ ಊರಿಡೀ ಅವಳು ನನ್ನ ಪ್ರೀತಿಸುತ್ತಿದ್ದಾಳೆ ಅಂತ ಡಂಗುರ ಸಾರಿಕೊಂಡು ಬರುತ್ತೀರಿ.

ಒಂದಿಷ್ಟು ದಿನಗಳ ಕಾಲ ನಿಮ್ಮ ಡಂಗುರ ಗುಟ್ಟಾಗಿಯೇ ಉಳಿದಿರುತ್ತದೆ. ಆಮೇಲೊಂದಿನ ಮೂರನೆಯವರ ಮೂಲಕ ಅದು ಅವಳ ಕಿವಿ ತಲುಪುತ್ತದೆ. ಮೊದಮೊದಲು ತಮಾಷೆ ಇರಬಹುದೇನೋ ಅಂದುಕೊಂಡು ಅವಳೂ ಸುಮ್ಮನಿರುತ್ತಾಳೆ. ಆಮೇಲೆ, ಇಲ್ಲವೇ ಇಲ್ಲ, ನಮ್ಮ ಸ್ನೇಹವನ್ನು ಕೆಡಿಸಲು ನೀವೆ ಇಲ್ಲಸಲ್ಲದ ಕಥೆ ಕಟ್ಟುತ್ತಿದ್ದೀರಿ ಎಂದು ವಾದಿಸುತ್ತಾಳೆ. ಮತ್ತೂ ಅವರು ಸುಮ್ಮನಾಗದಿದ್ದರೆ, ನನ್ ಫ್ರೆಂಡ್ ಹಾಗೆಲ್ಲಾ ಹೇಳಿರಲ್ಲ ಅನ್ನುವುದನ್ನು ಜಗತ್ತಿಗೇ ಸಾಬೀತು ಪಡಿಸಬೇಕು ಅನ್ನುವ ಹಠಕ್ಕೆ ಬಿದ್ದು ಬಿಡುತ್ತಾಳೆ. ಆಗಲೇ ಎಲ್ಲರೆದುರು ನಿಮ್ಮ ಕರೆದು, ಇವರೆಲ್ಲಾ ನಿನ್ನ ಬಗ್ಗೆ ಏನೇನೋ ಕಥೆ ಕಟ್ಟಿ ಹೇಳುತ್ತಿದ್ದಾರೆ, ಅವನ್ನೆಲ್ಲಾ ಒಮ್ಮೆ ನಿರಾಕರಿಸಿಬಿಡು ಅನ್ನುವುದು. ನೀವಾಗ ಅದನ್ನು ನಿರಾಕರಿಸಲಾಗದೆ, ಪೆಕರು ಪೆಕರಾಗಿ ಅವರಂದಿರುವುದೆಲ್ಲಾ ನಿಜ ಕಣೇ, ನೀನೂ ನನ್ನ ಪ್ರೀತಿಸುತ್ತಿದ್ದಿ ಅಂತ ನಾನಂದುಕೊಂಡಿದ್ದೆ ಎಂದು ಒಗರೊಗಾದ ಧ್ವನಿಯಲ್ಲಿ ಹೇಳಿ ತಲೆ ತಗ್ಗಿಸಿ ನಿಂತುಬಿಡುತ್ತೀರಿ.

ಅಲ್ಲಿಗೆ, ನಿಮ್ಮ ಮೇಲೆ, ಸ್ನೇಹದ ಮೇಲೆ, ಆಕೆಗಿದ್ದ ಅಖಂಡ ನಂಬಿಕೆ ಸಂಪೂರ್ಣ ಕುಸಿದುಬಿಡುತ್ತದೆ. ನೀವಾಕೆಯನ್ನು ಪ್ರೀತಿಸಿದಿರಿ ಅನ್ನುವುದಕ್ಕಿಂತಲೂ ಯಾರೋ ಮೂರನೆಯವರ ಮುಖಾಂತರ ಅದನ್ನುr ತಿಳಿದುಕೊಳ್ಳುವಂತಾಯಿತಲ್ಲಾ ಅನ್ನುವುದವಳನ್ನು ಹೆಚ್ಚು ಭಾದಿಸತೊಡಗುತ್ತದೆ. ಇವೆಲ್ಲದರ ತಾಯಿ ಬೇರು ಅಪನಂಬಿಕೆ ಅನಿಸತೊಡಗುತ್ತದೆ. ಯಾವ ಸಂಬಂಧವನ್ನು  ಕಣ್ಣರೆಪ್ಪೆಯೊಳಗಿತ್ತು ಕಾಯ್ದಿದ್ದಳೋ ಅದೇ ಸಂಬಂಧದಿಂದ ಹೊರಬರಲು ಮನಸು ಚಡಪಡಿಸತೊಡಗುತ್ತದೆ. ಅಲ್ಲಿಂದಾಚೆ ನೀವು ಎಷ್ಟೇ ವಿವರಣೆ ಕೊಟ್ಟರೂ, ಸಮಜಾಯಿಷಿ ನೀಡಿದರೂ ಅದನ್ನು ಅವಳು ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಳ್ಳುವುದು ಬಿಡಿ, ನಿಮ್ಮ ವಿವರಣೆಗಳನ್ನು, ಸಮಜಾಯಿಷಿಗಳನ್ನು ಕೇಳಿಸಿಕೊಳ್ಳಲೇ ತಯಾರಿರುವುದಿಲ್ಲ. ಪರಿಣಾಮ, ಮಧುರ ಸಂಬಂಧವೊಂದು ಅಕಾಲಕ್ಕೇ ಆತ್ಮಹತ್ಯೆ ಮಾಡಿಬಿಡುತ್ತದೆ.

ಹೀಗೆ, ಬದುಕಿನ ಹಲವು ಸಂಭ್ರಮದ ಘಳಿಗೆಗಳನ್ನು, ನೋವಿನ ಕ್ಷಣಗಳನ್ನು ಹಂಚಿಕೊಂt ಸಂಬಂಧವೊಂದು ಏಕಾಏಕಿ ಕೈಬಿಟ್ಟುಹೋಗುತ್ತದಲ್ಲಾ, ಅದನ್ನು ಭರಿಸುವುದು, ಆ ಕಳೆದುಕೊಂಡ ನೋವಿನೊಂದಿಗೇ ಜೀವನ ಪೂರ್ತಿ ಏಗುವುದು ಅಷ್ಟೊಂದು ಸುಲಭವಲ್ಲ. ಬದುಕಿನ ಪ್ರತಿ ಕ್ಷಣಾನೂ ಆ ಸಂಬಂಧದ ಮಧುರ ನೆನಪುಗಳು ಮತ್ತು ಅದು ಈಗ ಜೀವಂತವಾಗಿಲ್ಲ ಅನ್ನುವ ನಿರಾಸೆ ಕಾಡುತ್ತಲೇ ಇರುತ್ತದೆ. ಹಾಗಾಗಬಾರದು ಅಂತಿದ್ದರೆ,  ಸಂಬಂಧಗಳ ಬಗ್ಗೆ ಒಂದು ನಿರ್ಧಾರಕ್ಕೆ ಬರುವ ಮುನ್ನ, ನೂರು ಮಂದಿಯ ಮುಂದೆ ಒಂದು ಮಾತು ಆಡುವ ಮುನ್ನ ದಯವಿಟ್ಟು ಒಂದಿಷ್ಟಾದರೂ ಯೋಚಿಸಿ...

ಸಂಜೆ ಮುಗಿಲಿನ ಹಾಡು


ಎದೆಯ ಪಕ್ಕದಲಿ ಹರಿವ
ನದಿಯಲೀಗ ನೂರು ಪುಳಕ
ಸ್ವಪ್ನ ಲೋಕದ ಜರೂರತ್ತಿಗೆಲ್ಲಾ
ಸುಸ್ಪಷ್ಟ ಹಾಸುಗಲ್ಲು

ಎಲ್ಲೋ ಕಟ್ಟಿದ ಮೋಡ
ಇಲ್ಲಿ ಸುರಿದ ಮಳೆ
ಮತ್ತೆಲ್ಲೋ ಬೀಸಿದ ಗಾಳಿ
ಗರಿಕೆಯ ಗರ್ಭದಲ್ಲೂ ಖುಶಿಯ ಹೊನಲು

ಸಂಜೆ ಮುಗಿಲಿನ ಹಾಡಲೊಳಗೀಗ
ರಾಗ ತಾಳಗಳಾಚೆಗಿನ ಭಾವಸಂಭ್ರಮ
ಕೆನೆಗಟ್ಟಿದ ಹಾಲಿನ ಪ್ರತಿ ಕಣಕೂ
ಬಿದಿಗೆ ಚಂದ್ರಬಿಂಬದ ಬೆರಗು

ಬಂಡಾಯ ಪದ್ಯದಂತರಂಗದಲೂ
ನವಿರು ಪ್ರೇಮ ಸ್ಫುರಣೆ
ಪ್ರೀತಿ ಅಜರಾಮರ ಎಂದ ಕವಿಯೀಗ
ಹೊಸ ಪುಕ್ಕ ಕಟ್ಟಿಕೊಂಡ ಹಕ್ಕಿ

ನೆರಳು ನೀರಾಗುವ ಸುಸಮಯದಿ
ಕನಸುಗಳಿಗೆ ನವ ಜೀವ ಪ್ರಾಪ್ತಿ
ತೆರೆ ಮರೆಯ ಕವಿತೆಗೂ
ನವಿಲಾದ ಜಯೋತ್ಕರ್ಷ.