ಗುರುವಾರ, ಏಪ್ರಿಲ್ 30, 2015

ಚಂದ್ರಬಿಂಬ

ಅಮವಾಸ್ಯೆಯ ಕಾರ್ಗತ್ತಲ
ರಾತ್ರಿಯಲಿ ಕಣ್ಣಮುಚ್ಚಿ
ಹುಡುಕುತಿರುವೆ ಚಂದ್ರಬಿಂಬವ

ಹನಿ ನೀರಿಲ್ಲದ
ತರೆದ ಬಾವಿಯಾಳದ
ಸುತ್ತ ಬೆಳೆದ ಕಳ್ಳಿಯ ಮುಳ್ಳುಗಳಲಿ
ನಡುವೆ ಕಟ್ಟಿದ ಹಸಿರು ಪಾಚಿಯಲಿ

ಚಂದ್ರ ಬಿಂಬವಲ್ಲ
ಅದರೊಂದು ತುಂಡೂ ಕಾಣುತ್ತಿಲ್ಲ

ಗದರಿದರೂ ಬೆದರಿಸಿದರೂ
ಆರ್ದ್ರ ಮನಸು ಒಪ್ಪುತ್ತಿಲ್ಲ
ರೆಪ್ಪಯೊಳಗಿನ ಕನಸು ನಿಲ್ಲಿಸುತ್ತಿಲ್ಲ
ಕಡುಗಪ್ಪು ಕತ್ತಲಲಿ
ಬೆಳ್ಳಿಚಂದ್ರನ ಹುಡುಕೋ ಯತ್ನವ

ತೋಚುತ್ತಿಲ್ಲ ದಾರಿ ತಿಳಿಯುತ್ತಿಲ್ಲ
ಹೇಗೆ ಹೇಳಲಿ ಮನಸಿಗೆ
ಮುಷ್ಕರ ಹೂಡಿರೋ ಕನಸಿಗೆ
ಕಾರ್ಗತ್ತಲ ಅಮವಾಸ್ಯೆಯಂದು
ಚಂದ್ರ ಬರಲಾರನೆಂದು

ಬುಧವಾರ, ಏಪ್ರಿಲ್ 29, 2015

ಮೌನಗಳ ಹಾಡು ಮಧುರ...

'ಬಚ್ಚಿಕೋ ನಿನ್ನಲಿ ನಿನ್ನೆದೇ ಗೂಡಲಿ...' ಶ್ರೇಯಾ ಘೋಷಾಲ್ ಮತ್ತು ಆರ್.ಪಿ. ಪಟ್ನಾಯಕ್ ಹಾಡುತ್ತಿದ್ದರೆ ಮನಸು ಅಪಧಮನಿ, ಅಭಿದಮನಿಗಳ ಹೆಸರು ಗೊತ್ತಿಲ್ಲದ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ತನ್ನ ವಿಳಾಸವನ್ನು ತಾನೇ ಕಳೆದುಕೊಂಡು ಪ್ರೀತಿಯ ಚಿಪ್ಪಲಿ ಗೊತ್ತೇ ಆಗದಂತೆ ಸ್ವಾತಿ ಮುತ್ತಾಗಿಬಿಡುತ್ತೆ.

ಕೆಲವು ಹಾಡುಗಳೇ ಹಾಗೆ, ಕೇಳುತ್ತಿದ್ದಂತೆಯೇ ಮನದ ತುಂಬಾ ನೆನಪಿನ ಚಿತ್ತಾರವ ಬಿಡಿಸಿ ಬಿಡುತ್ತವೆ. ಮೌನವಾಗಿದ್ದಾಗ ಸುಮ್ಮನೆ ಕಾಡುವ, ಗುಂಪಲ್ಲಿದ್ದಾಗ ಹುಚ್ಚೆಬ್ಬಿಸುವ, ಸುರಿವ ಜಡಿ ಮಳೆಯಲಿ ವಿಚಿತ್ರ ಸುಖ ನೀಡುವ, ನಡುಗೋ ಚಳಿಯಲಿ ಬೆಚ್ಚಗಾಗಿಸುವ, ಸುಡು ಬಿಸಿಲಲ್ಲಿ ನೆರಳಾಗುವ ಈ ಹಾಡುಗಳದೊಂದು ವಿಚಿತ್ರ ಲೋಕವೇ ಸರಿ. ಹಾಡುಗಳ ಸಾಂಗತ್ಯದಲ್ಲಿ ನಾವೇ ರಾಗವಾದಾಗೆಲ್ಲಾ ಮನದ ಮ್ಯೂಸಿಕ್ ಪ್ಲೇಯರ್ನಲ್ಲಿ ಪದೇ ಪದೇ ನೆನಪಿನ ಗಝಲ್ ಗಳು ತಾನೇ ತಾನಾಗಿ ಪ್ಲೇ ಆಗುತ್ತಿರುತ್ತವೆ.

ಕಾಡೋ ಪ್ರತಿ ಹಾಡಿನ ಹಿಂದೆಯೂ ನೂರೊಂದು ನೆನಪುಗಳಿರುತ್ತವೆ. ಬ್ರೆಡ್ ನ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲೆ ಮತ್ತೊಂದು ಬ್ರೆಡ್ ಇಟ್ಟು ಅದಕ್ಕೊಂದು ಚೌಕಟ್ಟು ಹಾಕಿ ಇದು ನನಗಿಷ್ಟ ಅಂದಂತೆ ಒಂದೇ ಹಾಡನ್ನು ಪ್ರಸ್ತುತಪಡಿಸಿ ಇದೊಂದೇ ಗೀತೆ ನನ್ನ ಮೆಚ್ಚಿನ ಹಾಡು ಅನ್ನಲಾಗದು. ನನ್ನ ಪಾಲಿಗೆ ಹಾಡುಗಳೆಲ್ಲವೂ ಚೌಕಟ್ಟಿಲ್ಲದ ಚಿತ್ರಪಟುಗಳು. ಇಚ್ಛೆ ಬಂದಲ್ಲಿಂದ ಆರಂಭವಾಗಿ ತನ್ನಿಚ್ಛೆಯಂತೆಯೇ ಅಂತ್ಯವಾಗುವ ಸರ್ವಸ್ವತಂತ್ರ ಕಲಾಕೃತಿಗಳು.

ಒಂದೊಂದು ಹಾಡು ಕೇಳುವಾಗಲೂ ಒಂದೊಂದು ರೀತಿಯ ಭಾವಗಳು... ಹಾಡು ಕೇಳುತ್ತಾ ಸುಮ್ಮನೆ ಕಣ್ಣು ಮುಚ್ಚಿ ಆಸ್ವಾದಿಸುತ್ತಾ ನಡು ನಡುವೆ ಟೈಪಿಸುತ್ತಾ ಸಮಯದ ಪರಿವೆಯೇ ಇಲ್ಲದ ಲ್ಯಾಪ್ ಟಾಪ್ ಮಡಿಲಲ್ಲಿಟ್ಟುಕೊಂಡು ತಾಸುಗಟ್ಟಲೆ ಕುಳಿತಿದ್ದೇನೆ. ಹಾಡು ಕೇಳುತ್ತಾ ಕೇಳುತ್ತಾ ಅದರ ಬಗ್ಗೆಯೇ ಬರೆಯುವ ಸುಂದರ ಮತ್ತು ವಿಚಿತ್ರ ಪುಳಕ ಅನುಭವಿಸುತ್ತಿದ್ದೇನೆ ನಾನೀಗ.

ಇಹದ ಪರಿವೇ ಮರೆಸುವ ಈ ಹಾಡುಗಳ ಮೋಡಿಯಾದರೂ ಎಂತಹುದು... 'ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ...' ಸೋನು ನಿಗಂ ನ ಧ್ವನಿ ನನ್ನದೇ ಎದೆ ಬಡಿತವೆಂಬಂತೆ ಭಾಸವಾಗುತ್ತದೆ. ಪ್ರತಿ ಸಲಾನೂ ಈ ಹಾಡಿನ 'ಹೇ ಜೀವವೇ ಹೇಳಿಬಿಡು ನಿನಗೂ ಕೂಡ ಹೀಗೇನಾ ' ಅನ್ನುವ ಸಾಲು ಕೇಳುವಾಗೆಲ್ಲಾ ನನ್ನ ಅನುಮತಿಯಲ್ಲದೆ ನನ್ನ  ಅಂತರಂಗದ ಅಂತಃಪುರ ಪ್ರವೇಶಿಸಿದವನ ಕಣ್ಣಲ್ಲಿ ಕಣ್ಣ ನೆಟ್ಟು ಇದೇ ಸಾಲನ್ನು ಕೇಳಬೇಕೆನಿಸುತ್ತದೆ. ಮರುಕ್ಷಣವೇ ಉತ್ತರ ಗೊತ್ತಿದ್ದೂ ಗೊತ್ತಿದ್ದೂ ಕೇಳಬೇಕೆನಿಸುವ ನನ್ನ ಹುಚ್ಚುತನದ ಬಗ್ಗೆ ನನಗೇ ಮರುಕ ಹುಟ್ಟುತ್ತದೆ. ಇತ್ತೀಚೆಗೆ ನನ್ನ ಬಗ್ಗೆ ನನಗೇ ಮರುಕ ಹುಟ್ಟಿಸುವ ಮತ್ತೊಂದು ಹಾಡು 'ಎಲ್ಲೋ ಮಳೆಯಾಗಿದೆ ಇಂದು...'.

ಕುರುಚಲು ಗಡ್ಡದ ಅರ್ಜಿತ್ ಸಿಂಗ್ ನ 'ಹಮ್ ತೆರೆ ಬಿನ್ ಅಬ್ ರೆಹ್ ನಹಿ ಸಕ್ತೆ....' ಹಾಡು ಕೇಳುವಾಗೆಲ್ಲಾ ಮೈ ಮನ ಹಗುರಾಗಿ ಎಲ್ಲೋ ತೇಲಿದ ಅನುಭವ. ಇವನ ಹಾಡುಗಳೋ ಒಂದಕ್ಕಿಂತ ಒಂದು ಮಧುರ. ಅವನ ಗಡ್ಡದಷ್ಟೇ ಸುಂದರ. 'ತೆರೆ ಸಾಸೊ ಮೆ', 'ಮುಸ್ಕ್ರಾನೇ ಕೊ ವಜಹ್ ತುಮ್ ಹೋ', 'ತು ಹಿ ಹೆ ಆಶಿಕಿ' ... ಯಾವುದನ್ನೂ ಲಿಸ್ಟಿಂದ ಹೊರಗಿಡುವ ಹಾಗೆ ಇಲ್ಲ. ಗಾಯಕನಾರೆಂದೇ ಗೊತ್ತಿಲ್ಲದೆಯೂ ನನ್ನನ್ನು ವಿಪರೀತವಾಗಿ ಕಾಡುವ ಮತ್ತೊಂದು ಹಿಂದಿ ಹಾಡು 'ಕ್ಯೋಂಕಿ ಇತ್ನಾ ಪ್ಯಾರ್ ತುಮ್ಸೆ...' ನಿಜಕ್ಕೂ ಹೇಳು ಸಖ ನಿನ್ಮೇಲೆ ನನಗ್ಯಾಕೆ ಇಷ್ಟೊಂದು ಪ್ರೀತಿ?

ಲವ್ ಬ್ರೇಕ್ ಆದಾಗ ಶಿಶಿರ ಋತುವಿನ ಮಾಘ ಮಾಸದ ಬೆನ್ನು ಹುರಿಯನ್ನೂ ನಡುಗಿಸಿ ಬಿಡುವ ದಟ್ಟ ಚಳಿಯ ಮಧ್ಯ ರಾತ್ರಿ ಎದ್ದು ಅವನೇ ಕೊಡಿಸಿದ ತಿಳಿ ಆಕಾಶ ನೀಲಿ ಬಣ್ಣದ ಸ್ವೆಟರ್ ತೊಟ್ಟು ಇಯರ್ ಫೋನ್ ಸಿಕ್ಕಿಸಿ ಇನ್ನೆಂದೂ ಹೃದಯದ ಬಯಲಲಿ ಅವನ ಬಿಸಿಯುಸಿರ ತಂಗಾಳಿ ಬೀಸದೆಂಬ ಸತ್ಯವನ್ನು ಒಪ್ಪಿಕೊಳ್ಳಲು ಹರಸಾಹಸ ಮಾಡುತ್ತಾ ಮತ್ತೆ ಮತ್ತೆ ಕೇಳುತ್ತಿದ್ದ 'ಅರಿಞ್ಞಿರುನ್ನಿಲ್ಲ ಞಾನ್ ಇಙನೊರು ಸ್ನೇಹಂ...' ಹಾಡನ್ನು ಹೇಗೆ ಮರೆಯಲು ಸಾಧ್ಯ?

'ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ...' ಇದು ಪದಗಳ ಅರ್ಥ ಮಾತ್ರ ತಿಳಿದು ಭಾವ ಎಟುಕಲಾರದ ಬಾಲ್ಯದಲ್ಲಿ ಕೇಳಿ ಇಷ್ಟ ಪಟ್ಟು ನಿಜವೆಂದೇ ನಂಬಿ ಬೆಳ್ಳಿ ರಥದಲ್ಲಿ ಸೂರ್ಯ ಬರುವುದನ್ನು ನೋಡಬೇಕೆಂದು ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲೇ ನಿದ್ರೆ ಬಿಟ್ಟು ಏಳುವಂತೆ ಹಪಹಪಿಸುವಂತೆ ಮಾಡಿದ ಹಾಡು. ಇದನ್ನೇ ಎನ್ ಕ್ಯಾಶ್ ಮಾಡ್ಕೊಂಡ ಅಜ್ಜಿ ನಾವು ಲೇಟಾಗಿ ಎದ್ದಾಗೆಲ್ಲಾ ಇವತ್ತು ಸೂರ್ಯ ಬೆಳ್ಳಿ ರಥದಲ್ಲಿ ಬಂದಿದ್ದ ಅನ್ನುತ್ತಿದ್ದರು. ನಿರಾಶೆಯ ಕಡಲಲ್ಲಿ ಮುಳುಗುತ್ತಿದ್ದ ನಾವು ಇನ್ಯಾವತ್ತೂ ಲೇಟಾಗಿ ಏಳಲೇ ಬಾರದು ಅನ್ನುವಂತೆ ಹಠ ಹಿಡಿದು ಬೇಗ ಏಳುತ್ತಿದ್ದೆವು... ಬೇಗನೆ ಏಳುವ ಹವ್ಯಾಸ ಬೆಳೆಯಲೆಂದು ಅಜ್ಜಿ ಹೇಳುತ್ತಿದ್ದ ವಿವೇಚನಾಭರಿತ ಸುಳ್ಳು ನೆನಪಾಗುವಾಗೆಲ್ಲಾ ಈಗ ನಗು ಉಕ್ಕಿ ಬರುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಮೊಬೈಲ್ ಸ್ಕ್ರೀನಿನಲ್ಲಿ ಅಕ್ಷರಗಳು ಒಡಮೂಡಿ, ಆ ಅಕ್ಷರಗಳ ಮೂಲಕವೇ ವ್ಯಕ್ತಿತ್ವದ ದಿಗ್ದರ್ಶನವಾಗಿ ಮನದ ಸ್ಕ್ರೀನಿನಲ್ಲಿ ಸ್ಥಿರವಾಗಿ ನಿಂತವನ ನೆನಪಾಗುವಾಗೆಲ್ಲಾ ಮನಸು 'ನೀನೊಂದು ಮುಗಿಯದ ಮೌನ ನಾ ಹೇಗೆ ತಲುಪಲಿ ನಿನ್ನ...' ಹಾಡನ್ನು ಗುಣುಗುಣಿಸಿದರೆ ಹೃದಯ 'ಒಂದಾ ಎರಡಾ ಆಸೆ ನಂದು' ಹಾಡಿನ 'ಒಂದು ಸ್ಪರ್ಶ ಸಾಕಿನ್ನು ನೂರು ವರುಷ ಕಾಯುವೆನು' ಸಾಲನ್ನು ಪಿಸುಗುಟ್ಟುತ್ತದೆ.


ಲ್ಯಾಬಲ್ಲಿ ಜೊತೆಗೇ ಕೂತು 'ಅರಳುತಿರು ಜೀವದ ಗೆಳೆಯ...' ಹಾಡು ಪ್ಲೇ ಮಾಡಿ ಜೊತೆಗೆ ನನ್ನನ್ನು ಹಾಡಿಸಿ ಎಕ್ಸಾಕ್ಟಾಗಿ 'ಬೇಡ ಗೆಳೆಯ ನಂಟಿಗೆ ಹೆಸರು' ಅನ್ನುವಲ್ಲಿ ಹಾಡು ನಿಲ್ಲಿಸಿ "ಐ ಲವ್ ಯೂ ಚಿಟ್ಟೆ " ಅನ್ನುತ್ತಿದ್ದ ಜೀವದ ಗೆಳೆಯ, ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ಗಾಡ್ ಗಿಫ್ಟ್ ಅಣ್ಣ ಹಾಡಿದ 'ತಂಗಿ ನಿನ್ನ ಕಣ್ಣಲೊಂದು ಪುಟ್ಟ ಕನಸಿದೆ...'ಹಾಡು, ನನ್ನನ್ನು ರೇಗಿಸಲೆಂದೇ ಕಾಲೇಜ್ ಫ್ರೆಂಡ್ಸ್ ಹಾಡುತ್ತಿದ್ದ 'ಬಟರ್ ಫ್ಲೈ ಬಟರ್ ಫ್ಲೈ ಮೈ ಡಿಯರ್ ಬಟರ್ ಫ್ಲೈ' , ಅಮ್ಮನ ಫೇವರಿಟ್ 'ದೀವಾನಾ ಹುಯೀ ಬಾದಲ್...' ಎಲ್ಲವೂ ಸುಮಧುರ ಹಾಡುಗಳೇ, ಮಧುರ ನೆನಪುಗಳೇ... ಇಂತಹ ಹಾಡುಗಳ ಲೋಕದಲ್ಲಿ ಪಯಣಿಸುತ್ತಿದ್ದರೆ ಅದೊಂದು ಕೊನೆ ಮೊದಲಿಲ್ಲದ ಭಾವ ಯಾನವೇ ಸರಿ. ಆ ಯಾನದಲ್ಲಿ ಮುಳುಗುತ್ತಾ, ಏಳುತ್ತಾ, ತೇಲುತ್ತಾ, ಮೀಯುತ್ತಾ ಪುಳಕಿತರಾಗುತ್ತಾ ನಮ್ಮ ನಾವೇ ಮರೆತು ಕನಸುಗಳಿಗೆ ಸೇತುವೆ ಕಟ್ಟುತ್ತಾ ಇರಬೇಕು. ಆಗಷ್ಟೆ ಹಾಡು ಬರೆದ, ಸಂಗೀತ ಸಂಯೋಜಿಸಿದ, ಹಾಡಿದ ಕಲಾಕಾರನ ಕುಸುರಿಗೆ ಸಾರ್ಥಕ್ಯದ ರಂಗೇರಲು ಸಾಧ್ಯ.

ಮಂಗಳವಾರ, ಏಪ್ರಿಲ್ 28, 2015

ತೋಳಮೇಲಿನ ಮಚ್ಚೆ

ತೋಳಮೇಲಿನ ಮಚ್ಚೆಯ
ಪ್ರೀತಿಸಲು ಕಲಿತಿರುವೆ
ಹಸಿರುಗಟ್ಟಿದ ನೋವ ಕಲೆ
ಅಸಹನೀಯ ಅನಿಸುತ್ತಿಲ್ಲ ಈಗ

ಕತ್ತಲೆ ಹೊತ್ತು ತರುವ
ಬೆಳಕು ಮುದ ನೀಡುತ್ತಿದೆ
ಬೆಳಕ ಹಿ೦ದೆ ಬರುವ ಕತ್ತಲು
ಮತ್ತೆ ಭರವಸೆ ಮೂಡಿಸುತಿದೆ

ಬಾಳ ಹೊತ್ತಗೆಯಲಿ ಸರಿದು ಹೋದ
ಪುಟವ  ಸದ್ದಿಲ್ಲದೆ ತಿರುವಿದರೆ
ತುಟಿಯ೦ಚಲಿ ಮೆಲ್ಲನೆ
ನಸು ನಗೆಯೊಂದು ಹಾಯುತ್ತದೆ

ನಿರುತ್ಸಾಹವೆಂಬ ನಿರಾಕರಣೆಯ
ಅಡಿಗಡಿಗೆ ನಾ ತೋರಿದರೂ
ಸಹನೆಯ ಬಡಿಗೆಯಿಂದ ಬಡಿದು
ಗಟ್ಟಿಗೊಳಿಸಿದ ವಿಧಿಯೇ ನಿನಗೆ ಶರಣು

ಭಾನುವಾರ, ಏಪ್ರಿಲ್ 26, 2015

ಹೂವು ಅರಳುವ ಸಮಯ

ಹತ್ತು ವರ್ಷಗಳ ಹಿಂದೆ ಯಾವುದೋ ಮ್ಯಾಗಸಿನ್ ಒಂದರಲ್ಲಿ ಪೂಲನ್ ದೇವಿಯ ಜೀವನ ಚರಿತ್ರೆಯ ಸಣ್ಣ ತುಣುಕೊಂದನ್ನು ಓದಿ ತಲೆನೋವಿನ ನೆಪ ಹೇಳಿ ಕ್ಲಾಸಿಂದ ಹೊರಬಂದು ಬರೆದ ಬರಹ ಇದು. ಇವತ್ತು ಏನನ್ನೂ ಹುಡುಕುತ್ತಿರುವಾಗ ಇದು ಸಿಕ್ತು. ಒಂದಕ್ಷರವನ್ನೂ ಬದಲಾಯಿಸದೆ ಇದ್ದುದ್ದನ್ನು ಇದ್ದ ಹಾಗೆ ಇಲ್ಲಿ ಟೈಪಿಸಿದ್ದೇನೆ. ಸ್ತ್ರೀ ಪರ ಮತ್ತು ಬಂಡಾಯ ಸಾಹಿತ್ಯ ನನ್ಮೇಲೆ ತುಂಬಾ ಪ್ರಭಾವ ಬೀರಿದ್ದ ಕಾಲ ಅದು. ಒಂದು ಹಂತದಲ್ಲಿ ನಕ್ಸಲೈಟ್ ಆಗಿಬಿಡುವ ಅನಾಹುತಕಾರಿ ಆಲೋಚನೆಯನ್ನೂ ಮಾಡಿದ್ದೆ. ಓದುಗರೇ, ಹದಿನಾಲ್ಕರ ಹುಡುಗಿಯೊಬ್ಬಳ ಅಪಕ್ವ ನಿಲುವುಗಳು ಮತ್ತು ಅಸಂಬದ್ಧ ಬರಹ ಇದು. ದಯವಿಟ್ಟು ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಡಿ.

ಕೀಳಲ್ಪಡುವ ಹೂವಿನ ವೇದನೆ ಈಗಷ್ಟೇ ಅರಳುತ್ತಿರುವ ಮೊಗ್ಗಿಗೆ ತಿಳಿಯುವಂತಿದ್ದರೆ ಯಾವ ಮೊಗ್ಗೂ ಅರಳಲು ಬಯಸುತ್ತಲೇ ಇರಲಿಲ್ಲ. ಅರಳಿ ನಿಂತ ಹೂವಿನ ಸೌಂದರ್ಯ, ದುಂಬಿಯೊಂದಿಗೆ ನಡೆಸುತ್ತಿರುವ ಮೌನ ಸಂಭಾಷಣೆ, ಚಿಟ್ಟೆಯೊಂದಿಗಿನ ಮಧುರ ಸಾಂಗತ್ಯ, ಪ್ರತಿಯೊಬ್ಬರನ್ನೂ ತನ್ನ ಕಡೆಗೊಮ್ಮೆ ನೋಡಿಸುವ ಹೂವಿನ ಚುಂಬಕ ಶಕ್ತಿ ಎಲ್ಲವನ್ನೂ ಓರೆ ಕಣ್ಣಿನಿಂದಲೇ ಗಮನಿಸುವ ಮೊಗ್ಗು ತನಗೇ ಗೊತ್ತಿಲ್ಲದಂತೆ ಅರಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ.

ಮೊಗ್ಗೊಂದು ಮುಂಜಾನೆ ಅರಳಿದ ಮೇಲೆ, ಜಗತ್ತಿನ ಸಂಭ್ರಮವನ್ನೆಲ್ಲಾ ಕಣ್ಣಲ್ಲೇ ತುಂಬಿಸಿಕೊಂದ ಮೇಲೆ, ವಿಶ್ವ ಸೌಂದರ್ಯವನ್ನೆಲ್ಲಾ ತನ್ನಲ್ಲೇ ಅಡಗಿಸಿ ಬಿಮ್ಮನೆ ನಕ್ಕ ಮೇಲೆ ಮುಸ್ಸಂಜೆಯಲಿ ಬಾಡಲೇ ಬೇಕು, ಮತ್ತೊಂದು ಸೌಂದರ್ಯದ ಉದಯಕ್ಕೆ ಹಾದಿ ತೋರಲೇಬೇಕು, ಕಾರಣವಾಗಲೇಬೇಕು. ಇದು ಪ್ರಕೃತಿ ನಿಯಮ. ಬಾಡುತ್ತಿರುವ ಹೂವಿನ ಬಾಳಿಗೆ ಅಲ್ಲಿ ಸಾರ್ಥ್ಯಕವಿದ್ದರೆ, ಅರಳಬೇಕಿರುವ ಮೊಗ್ಗಿನ ಮನಸ್ಸಿಗೆ ಅಲ್ಲಿ ಸಂಭ್ರಮವಿರುತ್ತದೆ. ತುಂಬು ಜೀವನದ ಪ್ರತಿಕ್ಷಣವೂ ಹೇಳಲಾಗದಂತಹ, ನಿರೂಪಿಸಲಾಗದಂತಹ ಚೆಲುವಿನ ವ್ಯಾಖ್ಯೆ ಇರುತ್ತದೆ, ಬದುಕಿನ ಪೂರ್ತಿ ಜಗತ್ತಿಗೆಲ್ಲಾ ಖುಶಿ ಹಂಚಿದ ನೆಮ್ಮದಿ ಇರುತ್ತದೆ. ಇನ್ನೇನು ಬಾಡಿ ಧರಾಶಾಹಿಯಾಗುತ್ತೇನೆ ಎನ್ನುವಾಗಲೂ ವೇದನೆಯನ್ನೂ ಮೀರಿದ ಸಂತೃಪ್ತಿಯ ನಗೆ ಇರುತ್ತದೆ.

ಆದ್ರೆ ಪ್ರಕೃತಿ ನಿಯಮಕ್ಕೆ ತಲೆಬಾಗುವ ಮೊದಲೇ ಯಾರದೋ ಕಾಲಡಿಗೆ ಸಿಲುಕಿ ನಲುಗಿ ಹೋಗುವ ಅದೆಷ್ಟೋ ಸಾವಿರ ಹೂವುಗಳಿವೆ ಈ ಜಗತ್ತಿನಲ್ಲಿ. ದುಂಬಿಯೊಂದಿಗೆ ಸಂಭಾಷಿಸಲಾಗದ ನೋವು, ಚಿಟ್ಟೆಯ ಜೊತೆ ಬೆರೆಯಲಾಗದ ವೇದನೆ, ಗತ್ತಿನಿಂದ ಅರಳಿ ನಿಂತು ನಗಲಾಗದ ವಿಷಾದ ಎಲ್ಲವೂ ಆ ಹೂವಿನ ಒಡಲೊಳಗೆ ಬಚ್ಚಿಕೊಂಡಿರುತ್ತದೆ. ಇಷ್ಟಾಗಿಯೂ ಅರಳಲು, ನಗಲು ಪ್ರಯತ್ನಿಸಿದರೆ ಸಮಾಜದಲ್ಲಿರೋ ಕ್ರೌರ್ಯದ ಎಳೆಯೊಂದು ಸದ್ದಿಲ್ಲದೆ  ಸಾವಿನ ಷರಾ ಬರೆದುಬಿಡುತ್ತದೆ. ಮತ್ತೂ ಬದುಕುತ್ತೇನೆಂಬ ಹಠದೊಂದಿಗೆ, ಜೀವಿಸಲೇಬೇಕೆಂಬ ಜೀವಸೆಲೆಯೊಂದಿಗೆ ಬದುಕಲು ಪ್ರಯತ್ನಿಸಿದರೆ ಬಾಳಲು ಪ್ರಯತ್ನಿಸಿದರೆ ಅಲ್ಲೂ ಅವಮಾನ, ಅವಹೇಳನಗಳ ಭಾರ ಅರಳಬೇಕಾಗಿರುವ ಹೂವಿನ ಕವಚದಂತಿರುವ ಚಿಗುರೆಲೆಗಳನ್ನೇ ಜಗ್ಗಿಸಿಬಿಡುತ್ತದೆ. ಅಲ್ಲಿಗೆ ಸುಂದರ ಬದುಕಿನ ಕನಸಿನ ಕಲ್ಪನೆಯೊಂದರ ಸಮಾಪ್ತಿಯಾಗುತ್ತದೆ.

ಯಾವ ಕ್ರೌರ್ಯವು ಅರಳಬೇಕಾಗಿದ್ದ ಹೂವನ್ನು ಅರಳುವ ಮೊದಲೇ ಮುದುಡಿ ಹಾಕಿತೋ, ಯಾವ ಕ್ರೌರ್ಯವು ಅರಳಿದಮೇಲೂ ಸಂಭ್ರಮದಿಂದ ನಗಲು ಬಿಡಲಿಲ್ಲವೋ, ಯಾವ ಕ್ರೌರ್ಯವು ಅವಮಾನ, ಅವಹೇಳನಗಳ ಮೂಲಕ ಮತ್ತೆ ಮತ್ತೆ ತುಳಿಯಿತೋ ಅದೇ ಕ್ರೌರ್ಯದ ಮೇಲೆ ಅಂಥದೇ ಕ್ರೂರತೆಯನ್ನು ಸಾಧಿಸಬೇಕಾದರೆ ತನ್ನೆದೆಯೊಳಗೂ ಕ್ರೌರ್ಯವೊಂದು ಹುಟ್ಟಿಕೊಳ್ಳಬೇಕು ಅಂದುಕೊಳ್ಳುತ್ತದೆ ಅವಮಾನ, ಅವಹೇಳನಗಳ ಬೆಂಕಿಯಲ್ಲಿ ಬೆಂದ ಹೂವು. ತನ್ನ ಸಹಜ ಸ್ವಭಾವಕ್ಕೆ ವಿರುದ್ಧವಾಗಿ ತನ್ನೊಡಲೊಳಗೆ ಕ್ರೌರ್ಯವನ್ನು ಬೆಳೆಸಿಕೊಳ್ಳುತ್ತದೆ. ಸುತ್ತಲೂ ಕವಚದಂತೆ ಮುಳ್ಳುಗಳನ್ನು ಬೆಳೆಯಗೊಡತೊಡಗುತ್ತದೆ. ನಿಧಾನವಾಗಿ, ಅಷ್ಟೇ ದೃಢವಾಗಿ ಕೆಕ್ಕರಿಸಿ ನೋಡುತ್ತಿದ್ದ ಸಮಾಜವನ್ನೇ ಧಿಕ್ಕರಿಸಿ ಬದುಕುವಂತಹ ಭಂಡತನ ಬೆಳೆಸಿಕೊಳ್ಳುತ್ತದೆ. ಶೋಷಣೆಯಲ್ಲೇ ವಿಕೃತಾನಂದ ಪಡೆಯುತ್ತಿದ್ದ ಸಮಾಜವೂ ಬೆಚ್ಚಿಬಿದ್ದು ಈ ಬೆಳವಣಿಗೆಯನ್ನು ಒಪ್ಪಿಕೊಳ್ಳುತ್ತದೆ, ಸಹಿಸಿಕೊಳ್ಳುತ್ತದೆ, ಸಹಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹೂವಿನ ಕಣ್ಣುಗಳಲೂ ಕನಸುಗಳು ಸತ್ತು ಹೋಗಿ ಕ್ರೌರ್ಯ ಮತ್ತೆ ಸ್ಥಾನ ಪಡೆದುಕೊಳ್ಳುತ್ತದೆ. ದಿನ ಕಳೆದಂತೆ ಮನಸಿನ ಮೂಲೆಯಲ್ಲಿ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಅಂತ ಉಳಿದುಕೊಂಡಿದ್ದ ಸಹಜತೆಯೂ ಮಾಯವಾಗಿ ನೇವರಿಸ ಬಯಸುವ ಕೈಗಳಿಗೂ ಮೃದು, ಮಧುರ ಅನುಭವವಾಗದೆ ಅಪನಂಬಿಕೆಯ ಮುಳ್ಳುಗಳು ಚುಚ್ಚತೊಡಗುತ್ತವೆ. ಸಂಭ್ರಮ, ಸಂತೋಷವಿರಬೇಕಾದಲ್ಲಿ ಅಪನಂಬಿಕೆ, ಅಸಂತೃಪ್ತಿ, ಅಭದ್ರತೆಯ ಭಾವಗಳು ತಾಂಡವವಾಡತೊಡಗುತ್ತವೆ.

ಯಾರು ಕಾರಣರು ಇದಕ್ಕೆ? ಅರಳುವ ಮೊದಲೇ ಮುದುಡಿ ಹೋದ, ಸಂಭ್ರಮಿಸುವ ಮುನ್ನವೇ ಸಂತಾಪಕ್ಕೆಡೆಯಾದ, ನಗಲು ಪ್ರಯತ್ನಿಸಿ ಸೋತು ಹೋದ, ಅಪಮಾನಗಳ ಬೆಂಕಿಯಲ್ಲಿ ತನ್ನತನ ಕಳೆದುಕೊಂಡ ಮೊಗ್ಗಿನ ಬದುಕಿನ ವಿಷಾದ ಗೀತೆಗೆ ಧ್ವನಿಯಾಗುವವರಾರು? ಸಹಜತೆ ಕಳೆದುಕೊಂಡು ಸಮಾಜ ಘಾತುಕ ಶಕ್ತಿಯಾಗಿ ಬೆಳೆಯಲು ಕಾರಣವಾದ ಅದೇ ಸಮಾಜಕ್ಕೆ ಶಿಕ್ಷೆ ನಿರ್ಧರಿಸುವವರಾರು? ಶಿಕ್ಷೆ ನೀಡುವವರಾರು? ಅದಕ್ಕೂ ಮೀರಿದ ನೈತಿಕ ಪ್ರಶ್ನೆಯೆಂದರೆ, ಆ ಶಿಕ್ಷೆ ಅರಳಬೇಕಿದ್ದ ಹೂವಿನ ಕನಸುಗಳನ್ನು, ಯೌವ್ವನವನ್ನು, ಸಹಜತೆಯನ್ನು ಮರಳಿ ತಂದುಕೊಡಬಲ್ಲುದೇ? ಕಲ್ಲಾಗಿಸಿದ ಹೃದಯವನ್ನು ಮತ್ತೆ ಹೂವಾಗಿಸಬಹುದೇ? ಉತ್ತರವಿಲ್ಲ...

ಎಷ್ಟಾದರೂ "ನೊಂದ ಜೀವದ ನೋವ ನೋಯದವರೆತ್ತ ಬಲ್ಲರು...?"

ಬುಧವಾರ, ಏಪ್ರಿಲ್ 15, 2015

ಮರಳಿ ಮಣ್ಣಿಗೆ

ಅದು ೧೯೯೦. ದೇಶದೆಲ್ಲೆಡೆ ಧರ್ಮ-ಧರ್ಮಗಳ ಮಧ್ಯೆ ಸಾಮರಸ್ಯ ಮೂಡಿಸಿ ಆಂತರಿಕವಾಗಿ ದೇಶವನ್ನು ಬಲಿಷ್ಠಗೊಳಿಸುವ ಸಕಲ ಪ್ರಯತ್ನಗಳೂ ನಡೆಯುತ್ತಿದ್ದವಂತೆ. ಶಾಲಾ-ಕಾಲೇಜುಗಳಲ್ಲಿ ಪ್ರತಿಯೊಂದು ಧರ್ಮಗಳ ಮಧ್ಯೆ ಇರುವ ಸಾಮ್ಯತೆಯನ್ನು, ಸಮಾನ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು ವಿದ್ಯಾರ್ಥೀ ನೆಲೆಯಲ್ಲೇ ಪ್ರತಿಯೊಬ್ಬರನ್ನೂ ಪರಧರ್ಮ ಸಹಿಷ್ಣುಗಳನ್ನಾಗಿ ಮಾಡುವ ಒಂದು ಅದ್ಭುತ ಕಾರ್ಯಯೋಜನೆ ಜಾರಿಯಲ್ಲಿತ್ತಂತೆ. ಜೊತೆಗೆ ಆ ಹೊತ್ತಿಗಾಗುವಾಗಲೇ ವಿದ್ಯಾವಂತರ ಸಂಖ್ಯೆಯಲ್ಲಿ ಹೆಚ್ಚಳವಾಗಿ ಆ ಮೊದಲಿದ್ದ ಹಲವು ಕಂದಕಗಳು ಮಾಯವಾಗಿ ಮೂಲಭೂತವಾದಿತನವನ್ನು ಮೆಟ್ಟಿ ನಿಂತು ಎಲ್ಲರೊಳಗೊಂದಾಗುವ ಮನಸ್ಥಿತಿ ನಿಧಾನವಾಗಿ ಜನರ ಮಧ್ಯೆ ಬೆಳೆಯುತ್ತಿತ್ತಂತೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದ ಮಧ್ಯೆಯೇ ಇಡಿಯ ಕಾಶ್ಮೀರ ಒಂದು ವಿಲಕ್ಷಣ ಘಟನೆಗೆ ಸಾಕ್ಷಿಯಾಗಬೇಕಾಯಿತಂತೆ. ಅಚಾನಕ್ಕಾಗಿ ’ಕಾಶ್ಮೀರ ಕೇವಲ ನಮ್ಮದು, ಉಳಿದವರೆಲ್ಲರೂ ಇಲ್ಲಿಂದ ಹೊರ ಹೋಗಿ’ ಅನ್ನುವ ಬಲವಾದ ಕೂಗು ಕಣಿವೆಯಲ್ಲಿ ಪ್ರತಿಧ್ವನಿಸತೊಡಗಿದವಂತೆ. ಮಾತ್ರವಲ್ಲ ಇದನ್ನು ಒಪ್ಪದೆ ಅಲ್ಲೇ ಉಳಿಯಲು ಪ್ರಯತ್ನಿಸಿದವರ ಮೇಲೆ ಅವ್ಯಾಹತ ಅತ್ಯಾಚಾರ, ಅನಾಚಾರಗಳು ನಡೆದು ಬಲವಂತವಾಗಿ ಮತ್ತು ಅತ್ಯಂತ ಕ್ರೂರವಾಗಿ ಅವರೆಲ್ಲರನ್ನು ಅಲ್ಲಿಂದ ಹೊರದಬ್ಬಲಾಯಿತಂತೆ. 

ನನ್ನ ಬಾಲ್ಯದಲ್ಲಿ ಹಲವು ಬಾರಿ ನಾನು ಅಜ್ಜ-ಮಾವಂದಿರ ಗಂಭೀರ ಚರ್ಚೆಯ ಮಧ್ಯೆ ಕೇಳಲ್ಪಟ್ಟ ಕಥೆ ಇದು. ಇದಾಗಿ ಸರಿಸುಮಾರು ಇಪ್ಪತ್ತೈದು ವರ್ಷಗಳೇ ಕಳೆದುಹೋಗಿವೆ. ಅದೆಷ್ಟೋ ಮಿಲಿಯಗಟ್ಟಲೆ ಗ್ಯಾಲನ್ ನೀರು ಝೇಲಂ ನದಿಯಲ್ಲಿ ಹರಿದುಹೋಗಿದೆ. ಒಂದು ತಲೆಮಾರು ಸಂಪೂರ್ಣವಾಗಿ ಅಳಿದುಹೋಗಿದೆ. ಮತ್ತೊಂದು ತಲೆಮಾರು ತಪ್ಪು-ಒಪ್ಪುಗಳನ್ನು ನಿರ್ಧರಿಸುವಷ್ಟು ಪರಿಪಕ್ವವಾಗಿದೆ. ಇನ್ನೊಂದು ತಲೆಮಾರು  ಈಗಷ್ಟೇ ಕಣ್ಣು ಬಿಡುತ್ತಿದೆ. ಆವತ್ತು ನಮ್ಮ ಮನೆಯಲ್ಲಿ ಚರ್ಚೆಗೆ ನಾಂದಿ ಹಾಡಿದ್ದ ಅಜ್ಜನೂ ಈಗ ಬದುಕಿಲ್ಲ, ಆಗಿನ್ನೂ ಯುವಕರೇ ಆಗಿದ್ದ ಮಾವಂದಿರು ಈಗ ನಿವೃತ್ತಿಯ ಅಂಚಿನಲ್ಲಿ ಬಂದು ನಿಂತಿದ್ದಾರೆ, ಆ ಚರ್ಚೆಯನ್ನು ಕೇವಲ ಕಣ್ಣು ಪಿಳಿ-ಪಿಳಿ ಮಾಡುತ್ತಾ ನೋಡುತ್ತಿದ್ದ ನಾನೂ ಈಗ ಸ್ವತಂತ್ರವಾಗಿ ಒಂದಿಷ್ಟಾದರೂ ಅರ್ಥೈಸಿಕೊಳ್ಳುವಷ್ಟು ದೊಡ್ಡವಳಾಗಿದ್ದೇನೆ. ಈ  ಇಪ್ಪತ್ತೈದು ವರ್ಷಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಶ್ಮೀರಿ ಪಂಡಿತರ ಯಾತನಾದಾಯಕ ಬದುಕಿನ ಬಗ್ಗೆ ಅಲ್ಲೊಮ್ಮೆ ಇಲ್ಲೊಮ್ಮೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿತ್ತೇ ಹೊರತು ಅದೊಂದು ಮುಖ್ಯವಾಹಿನಿಯ ಚರ್ಚೆಯಾಗಿ, ಅವರಿಗೆ ನ್ಯಾಯ ಒದಗಿಸುವ ಮಾರ್ಗವಾಗಿ ಯಾವತ್ತೂ ಚರ್ಚೆ ಆಗಲೇ ಇಲ್ಲ. ಮಾನವ ಹಕ್ಕಿನ ಕುರಿತಾಗಿ ಮಾತಾಡುವ ಯಾವ ಬುದ್ಧಿ ಜೀವಿಗಳಿಗೂ ಕಾಶ್ಮೀರೀ ಪಂಡಿತರೂ ಮಾನವರೇ ಮತ್ತು ಅವರಿಗೂ ಹಕ್ಕುಗಳಿವೆ ಅನ್ನುವುದು ಅರ್ಥ ಆಗಲೇ ಇಲ್ಲ.

ಈಗ ದೇಶದಲ್ಲೆಡೆ ಮತ್ತೊಮ್ಮೆ ಕಾಶ್ಮೀರಿ ಪಂಡಿತರ ಬಗ್ಗೆ ಚರ್ಚೆಗಳಾಗುತ್ತಿವೆ. ಬಲವಂತವಾಗಿ ವಲಸೆ ಹೋದ ಕಾಶ್ಮೀರಿಗಳನ್ನು ಮತ್ತೆ ಕಾಶ್ಮೀರಕ್ಕೆ ಕರೆತರುವ ಕೇಂದ್ರ ಸರಕಾರದ ಮಹತ್ತರ ಯೋಚನೆ ಇಡೀ ದೇಶದೊಳಗೆ ಒಂದು ಹೊಸ ಸಂಚಲವನ್ನು ಹುಟ್ಟುಹಾಕಿದೆ. ಮೂರು ತಿಂಗಳ ಹಿಂದೆ ಕಾಶ್ಮೀರದಲ್ಲಿ ಚುನಾವಣೆ ಘೋಷಣೆಯಾದಗಲೇ ಇಂತಹ ಒಂದು ನಿರೀಕ್ಷೆ ಕಾಶ್ಮೀರಿಗಳಲ್ಲಿ ಗರಿಗೆದರಿತ್ತು, ಅದಕ್ಕೆ ಸರಿಯಾಗಿ ಅಧಿಕಾರಕ್ಕೆ ಬಂದರೆ ಕಾಶ್ಮೀರೀ ಪಂಡಿತರಿಗೆ  ಮತ್ತೆ ತಮ್ಮ ಮೂಲ ಸ್ಥಾನದಲ್ಲಿ ವಸತಿ ಕಲ್ಪಿಸಲಾಗುವುದು ಅನ್ನುವ ಆಶ್ವಾಸನೆಯನ್ನೂ ನೀಡಲಾಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಅವರನ್ನು ಗೌರಯುತವಾಗಿ ಕಾಶ್ಮೀರಕ್ಕೆ ಮತ್ತೆ ಕರೆ ತರುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ನಿಜಕ್ಕೂ ಇದು ಸರಕಾರದ ಒಂದು ಅತ್ಯುತ್ತಮ ನಿರ್ಧಾರ ಮತ್ತಿದು ಆಗಲೇ ಬೇಕಾದ ಕಾರ್ಯ. ಇಂತಹದೊಂದು ನಿರ್ಧಾರಕ್ಕೆ ಬರಲು ಅಖಂಡ ಇಪ್ಪತ್ತೈದು ವರ್ಷ ಕಾಯಬೇಕಾದ ಅನಿವಾರ್ಯತೆಯೇ ಇರಲಿಲ್ಲ. ತಮ್ಮದಲ್ಲದ ನೆಲದಲ್ಲಿ ತಮ್ಮದಲ್ಲದ ಬದುಕನ್ನು ಕಟ್ಟಿಕೊಳ್ಳಲು ಪಂಡಿತರು ಅದೆಷ್ಟು ಹೆಣಗಾಡಿರಬೇಕು ಅನ್ನುವ ಕಲ್ಪನೆಯೇ ನಮ್ಮನ್ನು ಅಧೀರರನ್ನಾಗಿಸುವಾಗ ನಮ್ಮನ್ನಾಳಿದವರಿಗೇಕೆ ಅವರ ನೋವು ಅರ್ಥವಾಗಿಲ್ಲ ಅನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಅಸಲಿಗೆ ೨೦೦೫ರಲ್ಲೇ ಇಂತಹುದೊಂದು ಪ್ರಯತ್ನ ನಡೆದಿತ್ತು. ಉದ್ಯೋಗದ ಆಮಿಷವೊಡ್ಡಿ ಕಾಶ್ಮೀರಿಗಳನ್ನು ಮತ್ತೆ ಮೂಲಸ್ಥಾನಕ್ಕೆ ಕರೆ ತರುವ ಬಗ್ಗೆ ಮಾತುಕಥೆಗಳು ನಡೆದಿತ್ತು. ಆಮೇಲೆ ಅದೇನಾಯ್ತೋ ಗೊತ್ತಿಲ್ಲ, ವೋಟ್ ಬ್ಯಾಂಕ್ ರಾಜಕಾರಣದ ಪ್ರಭಾವವೋ, ಇಚ್ಚಾ ಶಕ್ತಿಯ ಕೊರತೆಯೋ, ಅದು ಮಾತುಕಥೆಯ ಹಂತದಲ್ಲೇ ನಿಂತು ಹೋಯ್ತು. ಈಗ ಈಗಿನ ಸರಕಾರ ಮತ್ತೊಮ್ಮೆ ಅಂತಹುದೊಂದು ಇಚ್ಛಾಶಕ್ತಿ ತೋರುತ್ತಿದೆ. ಈಗಲಾದರೂ ಕಾಶ್ಮೀರಿಗಳ ಬವಣೆ ತೀರಿ ಮತ್ತೆ ಮೂಲಸ್ಥಾನಕ್ಕೆ ಬಂದು ನೆಮ್ಮದಿಯಿಂದ ನೆಲೆ ನಿಲ್ಲುವಂತಾಗಬಹುದೇ? ಆಗಲಿ ಅನ್ನುವುದೇ ನಮ್ಮ ಹಾರೈಕೆ.

ಆದರೆ ಇಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆಯೇನೆಂದರೆ, ನಿಜಕ್ಕೂ ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕವಾದ ವಸತಿ ಪ್ರದೇಶ ನಿರ್ಮಿಸುವ ಅಗತ್ಯವಿದೆಯೇ? ಅವರು ಕಾಶ್ಮೀರಕ್ಕೆ ಮತ್ತೆ ಹಿಂದಿರುಗಬೇಕು ನಿಜ, ತಮ್ಮ ಪೂರ್ವಿಕರು ನೆಲೆ ನಿಂತಿದ್ದ ಜಾಗದಲ್ಲಿ ಮತ್ತೆ ಅವರು ನೆಲೆಯೂರಬೇಕು ನಿಜ, ಆ ಮಣ್ಣಿನೊಂದಿಗೆ ಅವರಿಗಿರುವ ಭಾವುಕ ನಂಟು ಮತ್ತೊಮ್ಮೆ ಅವರನುಭವಕ್ಕೆ ದಕ್ಕಬೇಕು ನಿಜ. ಅವರಿಗೆ ಕೊಡಲೇಬೇಕಾದ ಪ್ಯಾಕೇಜ್ ಗಳನ್ನು, ಅನುದಾನಗಳನ್ನು ಅಗತ್ಯವಾಗಿ ಕೊಡಲೇ ಬೇಕು, ಅವರ ಬದುಕು ಅರಳಿಸಲು ಸರಕಾರ ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಲೇಬೇಕು, ಅವರೊಳಗೆ ಮನೆ ಮಾಡಿಕೊಂಡಿರುವ ಅಭದ್ರ ಭಾವನೆಯನ್ನು ಕೊನೆಗಾಣಿಸಿ ಸುರಕ್ಷಿತ ಭಾವನೆಯನ್ನು ಮೂಡಿಸಲೇಬೇಕು.  ಹಾಗಂತ ಅವರಿಗೋಸ್ಕರ ’ಪ್ರತ್ಯೇಕ ವಸತಿ’ ನಿರ್ಮಿಸಿ, ಉಳಿದೆಲ್ಲರಿಂದ ದೂರವಿಟ್ಟು ತಾವು ಪ್ರತ್ಯೇಕರು ಅನ್ನುವ ಭಾವನೆ ಮೂಡಿಸಬೇಕಾ? ಹಾಗೆ ಮಾಡಿದರೆ ಕಾಶ್ಮೀರದೊಳಗೆ ಮತ್ತೊಂದು ಕಾಶ್ಮೀರವನ್ನು ನಿರ್ಮಿಸಿದಂತಾಗುವುದಿಲ್ಲವೇ? ಈಗಾಗಲೇ ಹಿಂದು, ಮುಸ್ಲಿಂ, ಭಾರತಕ್ಕೆ ನಿಷ್ಠರು, ಪಾಕಿಸ್ತಾನೀ ಪರ ಇರುವವರು, ಆಜಾದಿಗಳು ಎಂದೆಲ್ಲಾ ಹರಿದು ಹಂಚಿ ಹೋಗಿರುವ ಕಾಶ್ಮೀರೀ ಮನಸ್ಸುಗಳ ಮಧ್ಯೆ ಈ ಮೂಲಕ ಮತ್ತಷ್ಟು ಒಡಕು ಮೂಡಿಸಿದಂತಾಗುವುದಿಲ್ಲವೇ?  ಹಲವು ಆಮಿಷಗಳಿಗೆ, ವಿಭ್ರಾಂತಿಗಳಿಗೆ ಒಳಗಾಗಿ ವಿವೇಚನಾ ಶಕ್ತಿಯನ್ನೇ ಕಳೆದುಕೊಂಡಿರುವ ಹಲವು ಯುವ ಮನಸ್ಸುಗಳನ್ನು ಮತ್ತಷ್ಟು ಕ್ಷುಬ್ಧವಾಗಿಸಲು ಪಕ್ಕದ ಪಾಕಿಸ್ತಾನಕ್ಕೋ, ನೆರೆಯ ಚೈನಾಕ್ಕೋ ನಾವೇ ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ? ಕೆಲವು ದಶಕಗಳ ಹಿಂದೆ ವರ್ಣಭೇದ ನೀತಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ದಕ್ಷಿಣ ಆಫ್ರಿಕಾದಲ್ಲಿ ಕರಿಯರಿಗೊಂದು, ಬಿಳಿಯರಿಗೊಂದು ಅಂತ ಪ್ರತ್ಯೇಕ ಕಾಲೊನಿಗಳು ಅಸ್ತಿತ್ವದಲ್ಲಿದ್ದವು, ಕರಿಯರು ಬಿಳಿಯರ ಕಾಲೊನಿಗಳತ್ತ ಕಣ್ಣು ಹಾಯಿಸುವುದೂ ತಪ್ಪು ಅನ್ನುವ ಬರ್ಬರತೆ ಇತ್ತು. ಕಾಶ್ಮೀರದಲ್ಲೂ ಮುಂದೆ ಈ ’ಪ್ರತ್ಯೇಕ ವಸತಿ ನಿಲಯ’ ಅನ್ನುವ ಕಲ್ಪನೆ ಇಂತಹ ಅವಿವೇಕಿತನಗಳಿಗೆ ದಾರಿ ಮಾಡಿಕೊಡಲಾರದು ಎಂದು ಹೇಗೆ ಹೇಳುವುದು? ಇಷ್ಟಕ್ಕೂ ಯು.ಜಿ.ಸಿ ನಡೆಸಿದ ಸಮೀಕ್ಷೆಯೊಂದರಲ್ಲಿ ಶೇಕಡಾ ಅರವತ್ತರಷ್ಟು ಸಂತ್ರಸ್ತ ಕಾಶ್ಮೀರಿ ಪಂಡಿತರು ತಾವು ಎಲ್ಲರದೊಂದಿಗೆ ಬದುಕಲು ಇಚ್ಛಿಸುತ್ತೇವೆ, ಕಾಶ್ಮೀರಕ್ಕೆ ಮರಳಲು ಅವಕಾಶವಿದ್ದರೆ ಸಾಕು, ಪ್ರತ್ಯೇಕವಾಗಿ ನೆಲೆಸುವ ಇಚ್ಛೆಯಿಲ್ಲ ಎಂದಿರುವಾಗ ನಮಗೇಕೆ ಅವರನ್ನು ಪ್ರತ್ಯೇಕವಾಗಿ ಇರಿಸುವ ಹಪಹಪಿ?          

ಶನಿವಾರ, ಏಪ್ರಿಲ್ 11, 2015

ಅಗಣಿತ ಕನಸು... ಅಪರಿಮಿತ ಭಾವ...

ಹರಡಿ ಕುಳಿತಿರುವೆ ಅಂಗಳದ ತುಂಬಾ
ಅಗಣಿತ ಕನಸುಗಳನು
ಅಪರಿಮಿತ ಭಾವಗಳನು
ಎಣಿಸಲಾಗುತ್ತಿಲ್ಲ ಬೆರಳ ತುದಿಯಲಿ
ಅಳೆಯಲಾಗುತ್ತಿಲ್ಲ ಕಣ್ಣ ಕೊನೆಯಲಿ

ನಡುವೆಯೊಂದು ಅಗ್ನಿಕುಂಡ ಉರಿಯುತಿದೆ
ಗಗನಕೆ ಕೆನ್ನಾಲೆ ಚಾಚುತಿದೆ
ಸುತ್ತ ಗರಿಗೆದರಿ ಹಾರುತಿವೆ
ಕೈ ಜಾರಿದ ಕನಸುಗಳು
ಕೈ ಬಿಟ್ಟುಹೋದ ಭಾವಗಳು

ಹಾರುತಿರೋ ಕನಸುಗಳ ಹಿಡಿದು
ಒಂದೊಂದಾಗಿ ಅರ್ಪಿಸಬೇಕಿದೆ
ನರ್ತಿಸುತಿಹ ಭಾವಗಳ ಬಡಿದು
ಬಿಡಿ ಬಿಡಿಯಾಗಿ ಸಮರ್ಪಿಸಬೇಕಿದೆ
ಕರುಣೆಯಿಲ್ಲದೆ ಉರಿವ ಬೆಂಕಿಯೊಡಲಿಗೆ

ಬಲುಹಠಮಾರಿ ಕನಸುಗಳಿವು
ಕೈಗೆ ಸಿಗಲಾರೆವೆಂಬಂತೆ
ಎತ್ತರೆತ್ತರಕೆ ಹಾರಿ
ಆಟ ಆಡಿಸಿ ಹೈರಾಣಗಿಸಿ
ಮತ್ತೆ ನನ್ನ ನೋಡಿ
ವಿಕಟಾಟ್ಟಹಾಸಗೈಯುತಿವೆ

ಅದರಪ್ಪನಂತಹ ಭಾವಗಳಿವು
ಹಿಡಿದೇಬಿಟ್ಟೆ ಅನ್ನುವಾಗೆಲ್ಲಾ
ಮುಷ್ಟಿಯೊಳಗಿಂದ ಹಾರಿಹೋಗಿ
ಗರ್ವದಿ ಮೆರೆದು
ಮತ್ತೆ ನನ್ನ ನೋಡಿ
ಪರಿಹಾಸ್ಯಗೈಯುತಿವೆ

ಕನಸುಗಳ ಕೈಗೂಡಿಸಲಾಗದ
ಭಾವಗಳ ಬದುಕಬಿಡಗೊಡಲಾಗದ
ಪರಮಹೇಡಿ ನಾನು
ಈಗ ಕನಸು-ಭಾವಗಳ ಸುಟ್ಟು
ಬಿಡಲೂ ಆಗದೆ ನನ್ನನೇ ದಹಿಸುತಿರುವೆ

ಹೈರಾಣಾದರೂ ಸೋತುಹೋದರೂ
ಬಿದ್ದರೂ ಕುಸಿದು
ಮತ್ತೆ ಏಳಲೇಬೇಕು
ಶಕ್ತಿ ಬಸಿದು
ಅಗ್ನಿಗಾಹುತಿ ಮಾಡಲೇಬೇಕು

ಮಾಡದಿರೆ ಏಳದಿರೆ
ನಾನೇ ಆಹುತಿಯಾಗುವೆ
ನನ್ನೊಳಗೆ ತಾಂಡವವಾಡುತಿರೋ
ಆಕ್ರೋಶವೆಂಬ ಅಗ್ನಿಗೆ
ಅಸಹಾಯಕತೆಯ ಕೆನ್ನಾಲೆಗೆ

ಕನಸುಗಳ ಕತ್ತು ಹಿಸುಕಿ
ಭಾವಗಳ ಉಸಿರುಗಟ್ಟಿಸಿ
ಅನುಕಂಪವಿಲ್ಲದೆ ಸುಟ್ಟುಹಾಕಿ
ಮತ್ತದೇ ಬೂದಿಯ ಮೆಟ್ಟಿ ನಿಂತು
ನಾನೀಗ ಬದುಕು ಕಟ್ಟಿಕೊಳ್ಳಲೇಬೇಕು
ಜೀವಂತ ಶವದಂತಾದರೂ...


ಮಂಗಳವಾರ, ಏಪ್ರಿಲ್ 7, 2015

ಸಾವಿರದೊಂದು ಸಂಬಂಧ ಸಾಯುತ್ತಿರುವಾಗ...

     ಸಂಬಂಧಗಳನ್ನು ಇನ್ನಿಲ್ಲದಂತೆ ಶಿಥಿಲಗೊಳಿಸುವ ಸಂಗತಿ ಯಾವುದು? ಕಳೆದ ಕೆಲ ದಿನಗಳಿಂದ ನನ್ನ ಬಹಳವಾಗಿ ಕಾಡುತ್ತಿರುವ ಪ್ರಶ್ನೆ ಇದು. ಇಂತಹುದೊಂದು ಪ್ರಶ್ನೆಯ ಸುಳಿಗೆ ಸಿಲುಕಿ ಗರಗರನೆ ತಿರುಗಿ ರಭಸದಿಂದ ದಡಕ್ಕೆ ಅಪ್ಪಳಿಸಿ ಎದ್ದು ನಿಲ್ಲುವ ಮುನ್ನ ಮತ್ತದೇ ಸುಳಿಗೆ ಸಿಲುಕಲು ಕಾರಣವಾದ ಅಂಶ, ಪ್ರೇರಣೆಯಾದ ಘಟನೆ ಯಾವುದು ಅನ್ನುವುದು ನನಗಿನ್ನೂ ಸ್ಪಷ್ಟವಾಗಿಲ್ಲ. ಆದರೆ ಮನಸ್ಸು ಕೂತಲ್ಲಿ, ನಿಂತಲ್ಲಿ, ಏನೇ ಕೆಲಸ ಮಾಡುತ್ತಿದ್ದರೂ, ಕೊನೆಗೆ ಪ್ರಾರ್ಥನೆಯಲ್ಲೂ ಇದೇ ಪ್ರಶ್ನೆಯ ಸುತ್ತ ಗಿರಕಿ ಹೊಡೆಯುತ್ತಿದೆ.

ನಿಜಕ್ಕೂ ಸಂಬಂಧಗಳ ಮಧ್ಯ ಇರುವ ಆಪ್ತತೆಯನ್ನು ತೊಡೆದು ಹಾಕುವ ಅಂಶ ಯಾವುದು? ನಂಬಿಕೆ ದ್ರೋಹವೇ? ವಿಶ್ವಾಸಘಾತಕತನವೇ? ಆಲಸಿತನವೇ? ಕಳೆದುಹೋಗಲಾರದೆಂಬ ನಿರ್ಲಕ್ಷ್ಯತನವೇ? ನಮ್ಮೊಳಗೆ ಕೋಟೆ ಕಟ್ಟಿರುವ ಅಹಮ್ಮೇ? ಸಂಬಂಧಗಳ ಗುರುತಿಸಲಾರದ ಮದವೇ? ನಮ್ಮ ಸಾಮರ್ಥ್ಯದ ಮೇಲಿನ ಅತಿಯಾದ ನಂಬಿಕೆಯೇ? ಎಲ್ಲವೂ ನನ್ನಿಂದಲೇ ಅನ್ನುವ ದುರಹಂಕಾರವೇ? ಅಥವಾ ಇವೆಲ್ಲಾ ಕಾರಣಗಳು ಒಟ್ಟು ಸೇರಿ ಸಂಬಂಧ ಬಂಧ ಕಳೆದುಕೊಳ್ಳುತ್ತಿದೆಯೇ? ಸ್ಪಷ್ಟವಾಗುತ್ತಿಲ್ಲ. ಏನನ್ನೂ ಜನರಲೈಸ್ ಮಾಡಿ ’ಇದಮಿತ್ಥಂ’ ಅನ್ನುವ ತೀರ್ಮಾನಕ್ಕೆ ಬರಲಾಗುತ್ತಿಲ್ಲ.

ಈ ಸಂಬಂಧಗಳು ಸಂಕೀರ್ಣವಾಗಿರುವುದಕ್ಕೇ ಹೀಗಾಗುತ್ತಿದೆಯಾ? ಅಥವಾ ಸರಳವಾಗಿದ್ದ ಸಂಬಂಧಗಳ ಒಳ ಹರಿವನ್ನು ಸಂಕೀರ್ಣಗೊಳಿಸಿರುವ ಮನುಷ್ಯ ಸ್ವಭಾವ ಈಗ, ಅದರ ಆಳದಲ್ಲಾಗುತ್ತಿರುವ ಸಾಂಸ್ಕೃತಿಕ ಪಲ್ಲಟಗಳನ್ನು ಅರ್ಥೈಸಿಕೊಳ್ಳುವಲ್ಲಿ ಸೋಲುತ್ತಿದೆಯೇ? ಅಥವಾ  ಮಿತಿ ಮೀರಿದ ಧಾವಂತ ಸಂಬಂಧಗಳನ್ನು  ಗೋಜಲಾಗಿಸಿರುವುದರಿಂದ ಅದರ ಅಂತರಾಳಕ್ಕಿಳಿದು ಮಥಿಸಿ ಸುಸ್ಪಷ್ಟ ಉತ್ತರ ಪಡೆಯಲು ಸಾಧ್ಯವಾಗುತ್ತಿಲ್ಲವೇ?  ಇದೂ ಅರ್ಥ ಆಗುತ್ತಿಲ್ಲ.

ಸಂಬಂಧಗಳ ನಡುವಿನ ಸಂದಿಗ್ಧತೆಯನ್ನು ಪರಿಹರಿಸ ಹೊರಟಾಗೆಲ್ಲಾ ಹೀಗೆ ಒಂದಿದ್ದ ಪ್ರಶ್ನೆ ನೂರಾಗುತ್ತದೆ, ನೂರು ಸಾವಿರವಾಗುತ್ತದೆ, ಉತ್ತರ ಅತಂತ್ರವಾಗುತ್ತದೆ. ಆದರೆ ಮೂಲದಲ್ಲೆಲ್ಲೋ ಸಂಬಂಧಗಳ ಕ್ಷಯಕ್ಕೆ ಅಪನಂಬಿಕೆಯೇ ಕಾರಣ ಅನಿಸುತ್ತದೆ. ಪ್ರೀತಿ ಇರದ ಕಡೆ ಹಲ್ಲು ಕಚ್ಚಿ ಕಷ್ಟಪಟ್ಟಾದರೂ  ಸಹಿಸಿ ಬದುಕಬಹುದೇನೋ ಆದರೆ ನಂಬಿಕೆ ಇಲ್ಲದೆಡೆ ಬದುಕುವುದೆಂದರೆ ಅದು ಮೈ ಪೂರ್ತಿ ಚೇಳು ಹತ್ತಿಸಿಕೊಂಡಂತೆ. ಯಾವಾಗ ಕುಟುಕಿಸಿಕೊಳ್ಳುತ್ತೇವೆಯೋ ಅನ್ನುವ ಅಭದ್ರತೆಯಲ್ಲೇ ಬದುಕಬೇಕಾಗುತ್ತದೆ.

ಇಷ್ಟಕ್ಕೂ ಈ ಅಪನಂಬಿಕೆ ಜನ್ಮ ತಳೆಯುವುದೆಲ್ಲಿ? ಅವು ಮನುಷ್ಯ ಮನಸ್ಸುಗಳನ್ನು ಸದಾ ಬೆಚ್ಚಗಿಡುವ ಆಪ್ತತೆಯನ್ನೇ ಜಾಳಾಗಿಸುವಷ್ಟು ಶಕ್ತವಾಗುವುದಾದರೂ ಹೇಗೆ? ಬಹುಶಃ ಕಾರಣವಿದ್ದೋ ಇಲ್ಲದೆಯೋ ಆಡುವ ಸುಳ್ಳುಗಳೇ ಅಪನಂಬಿಕೆಯ ತಳಪಾಯವೆನಿಸುತ್ತದೆ. ಯಾಕೆಂದರೆ ತಮ್ಮಾಪ್ತರು ಸಾದರಪಡಿಸುವ ವಿಷಯಗಳನ್ನು ಹಿಂದು ಮುಂದು ಯೋಚಿಸದೆ, ಯಾವ ತರ್ಕವನ್ನೂ ಮಾಡದೆ ಮನಸ್ಸು ಒಪ್ಪಿಕೊಂಡು ಬಿಡುತ್ತದೆ. ಯಾಕೆಂದರೆ ಅವರ ಮೇಲೆ, ಅವರ ಮಾತುಗಳ ಮೇಲೆ ಬೆಟ್ಟದಷ್ಟು ನಂಬಿಕೆಯಿರುತ್ತದೆ, ತಮ್ಮ ಮುಂದೆ ಎಂದೂ ಸುಳ್ಳು ಹೇಳಲಾರರು ಅನ್ನುವಷ್ಟು ಗಾಢ ಭರವಸೆಯಿರುತ್ತದೆ. ಎಲ್ಲಕಿಂತ ಹೆಚ್ಚಾಗಿ ಪ್ರೀತಿ, ವಾತ್ಸಲ್ಯ, ಒಲವು, ಸ್ನೇಹಗಳೆಂಬ ಅಮೃತ ಬಿಂದುಗಳು ಪರಸ್ಪರರನ್ನು ಬಂಧಿಸಿಟ್ಟಿರುತ್ತವೆ. ಆ ಬಂಧವೇ ಸುಳ್ಳಾಡಲಾರರು ಅನ್ನುವ ಅಪರಿಮಿತ ನಂಬಿಕೆಯನ್ನು ಹುಟ್ಟಿಸಿರುತ್ತದೆ. ಭವಿಷ್ಯದಲ್ಲಿ ಎಂದಾದರೂ ಮೂರನೆಯವರ ಮುಖಾಂತರ ಅದು ಸುಳ್ಳೆಂದು ತಿಳಿದು, ಪ್ರಮಾಣೀಕರಣವಾದರೆ ನಂಬಿಕೆಯ ಸೌಧ ಕುಸಿದು ಬೀಳುತ್ತದೆ, ಪ್ರಾಮಾಣಿಕತೆ ಪ್ರಶ್ನಿಸಲ್ಪಡುತ್ತದೆ, ಎರಡು ಮನಸ್ಸುಗಳ ಮಧ್ಯೆ ಅವ್ಯಕ್ತ ಅಪನಂಬಿಕೆ ತಾಂಡವವಾಡತೊಡಗುತ್ತದೆ.

ಅನರ್ಥ, ಅಪಾರ್ಥಕ್ಕೆ ಅವಕಾಶವಿಲ್ಲದಷ್ಟು ಗಟ್ಟಿಯಾಗಿರುವ ಸಂಬಂಧಗಳ ಮಧ್ಯೆಯೂ ಸುಳ್ಳೇಕೆ ನುಸುಳುತ್ತದೆ? ಕಾರಣ ಹಲವು. ಕೆಲವರು ಇತರರಿಗೆ ನೋವಾಗದಿರಲೆಂದು ಸುಳ್ಳು ಹೇಳುತ್ತಾರೆ, ಇನ್ನು ಕೆಲವರು ಮಾಡಿದ ತಪ್ಪನ್ನು ಮುಚ್ಚಿ ಹಾಕಲು, ಕೆಲವರು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲಾಗದೆ, ಇನ್ನು ಕೆಲವರು ಪಲಾಯನವಾದದ ನೆಪವಾಗಿ, ಕೆಲವರು ತಮ್ಮನ್ನು ತಾವೇ ಸಜ್ಜನರೆಂದೋ, ಸಂಭಾವಿತರೆಂದೋ ಬಿಂಬಿಸಿಕೊಳ್ಳಲು, ಇನ್ನು ಕೆಲವರು ತಮ್ಮಲ್ಲಿರದ ಸಾಮರ್ಥ್ಯವನ್ನು ಇದೆಯೆಂದು ಪ್ರಚುರ ಪಡಿಸಿಕೊಳ್ಳಲು, ಕೆಲವರು ಇನ್ನೊಬ್ಬರಲ್ಲಿ ಅಸೊಯೆ ಹುಟ್ಟಿಸಲು, ಇನ್ನು ಕೆಲವರು ಮೊದಲು ಹೇಳಿದ ಸುಳ್ಳನ್ನು ಸಮರ್ಥಿಸಿಕೊಳ್ಳಲು ಸುಳ್ಳು ಹೇಳುತ್ತಾರೆ. ಕೆಲವರು ಅಕಾರಣ ಸುಳ್ಳು ಹೇಳಿದರೆ, ಕೆಲವರದು ನಿರುಪದ್ರವಿ ಸುಳ್ಳುಗಳು, ಇನ್ನೂ ಕೆಲವರದು ಉಪದ್ರವೀ ಸುಳ್ಳುಗಳು. ಸುಳ್ಳಿನ ಹಿನ್ನೆಲೆ, ಕಾರಣ, ಉದ್ದೇಶ ಏನೇ ಆಗಿದ್ದರೂ ಅವು ದೀರ್ಘಾವಧಿಯಲ್ಲಿ ಸಂಬಂಧಗಳನ್ನು ಬಿಟ್ಟೂ ಬಿಡದೆ ಬಾಧಿಸುತ್ತವೆ ಅನ್ನುವುದು ಮಾತ್ರ ಸುಳ್ಳಲ್ಲ.

ಸುಳ್ಳೊಂದೇ ಸಂಬಂಧಗಳನ್ನು ಶಿಥಿಲಗೊಳಿಸುವುದು ಅನ್ನಲಾಗದದಿದ್ದರೂ, ಸುಳ್ಳೂ ಸಂಬಂಧಗಳ ಕ್ಷಯಕ್ಕೆ ಕಾರಣವಾಗುತ್ತದೆ ಅನ್ನುವುದು ಸತ್ಯ. ಸುಳ್ಳು ಹೇಳಲು ಪ್ರತಿನಿತ್ಯ ಕಾರಣಗಳನ್ನು ಹುಡುಕುವವರಿಗೆ ಹೇಳಿದ ಸುಳ್ಳನ್ನು ದಕ್ಕಿಸಿಕೊಂಡೇನು ಅನ್ನುವ ಆತ್ಮವಿಶ್ವಾಸವೂ ಇರುತ್ತದೆ. ಆದ್ರೆ ಅದು ಮನುಷ್ಯ ಬದುಕಲ್ಲಿ ಸೃಷ್ಟಿಸುವ ಸಂಕೀರ್ಣತೆಯ ಪ್ರಮಾಣ  ಅಗಾಧವಾದದ್ದು. ಸುಳ್ಳು ನೀಡುವ ಆತ್ಮವಿಶ್ವಾಸವೂ ಸುಳ್ಳೇ ಅನ್ನುವುದು ಅರಿವಾಗುವ ಹೊತ್ತಿಗೆ ಬದುಕು ಬೇರೊಂದು ಘಟ್ಟಕ್ಕೆ ತಲುಪಿಯಾಗಿರುತ್ತದೆ, ಸಂಬಂಧಗಳು ಸತ್ವ ಕಳೆದುಕೊಂಡಾಗಿರುತ್ತದೆ, ನಂಬಿಕೆ ಆತ್ಮಹತ್ಯೆ ಮಾಡಿಕೊಂಡಾಗಿರುತ್ತದೆ. ಮತ್ತೆ ಸಂಬಂಧ ಸುಧಾರಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಒಡೆದ ಕನ್ನಡಿಯಲ್ಲಿ ವಿರೂಪಗೊಳ್ಳದ ಬಿಂಬ ನೋಡಲು ಪ್ರಯತ್ನಿಸುವಷ್ಟೇ ವಿಫಲ ಯತ್ನವಾಗಿರುತ್ತದೆ.

ಇದರರ್ಥ ಯಾವತ್ತೂ ಸುಳ್ಳು ಹೇಳಲೇಬಾರದು ಅಥವಾ ಯಾವತ್ತೂ ಅಪ್ರಿಯ ಸತ್ಯಗಳನ್ನೇ ಹೇಳಬೇಕು ಎಂದಲ್ಲ. ಸಾಧ್ಯವಾದಷ್ಟು ಸುಳ್ಳನ್ನು ನಿವಾರಿಸಿಕೊಳ್ಳಬೇಕು, ಕನಿಷ್ಠಪಕ್ಷ ಅಕಾರಣ ಸುಳ್ಳು ಹೇಳುವುದನ್ನಾದರೂ ನಿಲ್ಲಿಸಿಬಿಡಬೇಕು. ಯಾಕೆಂದರೆ ನಮ್ಮ ಪ್ರೀತಿಸುವವರಿಗೆ ನಮ್ಮ ವ್ಯಕ್ತಿತ್ವವನ್ನು ಅರಿತುಕೊಳ್ಳುವ ಸ್ವೋಪಜ್ಞತೆ ಇರುತ್ತದೆ, ಸುಳ್ಳುಗಳ ಮೂಲಕ ವ್ಯಕ್ತಿತ್ವ ಪ್ರತಿಬಿಂಬಿಸುವ ಅಗತ್ಯತೆಯೇ ಬರುವುದಿಲ್ಲ ಮತ್ತು ನಮ್ಮ ಪ್ರೀತಿಸದವರಿಗೆ ನಮ್ಮ ವ್ಯಕ್ತಿತ್ವ ಹೇಗಿದ್ದರೂ ಅದು ಅಭಾದಿತ, ಹಾಗಾಗಿ ಅಲ್ಲೂ ಸುಳ್ಳುಗಳಿಂದ ನಮ್ಮನ್ನು ಸಮರ್ಥಿಸಿಕೊಳ್ಳಬೇಕಾಗಿಲ್ಲ.

ಈ ಜಗತ್ತಿನಲ್ಲಿ ಸಂಬಂಧಗಳ ಗೊಡವೆಯೇ ಬೇಕಿಲ್ಲ, ಪ್ರೀತಿಯ ಭರವಸೆ ಇಲ್ಲದೆಯೂ ಬದುಕಬಲ್ಲೆ, ನಂಬಿಕೆಯ ಶ್ರೀರಕ್ಷೆ ಇಲ್ಲದೆಯೂ ಜೀವನ ಸಾಗಿಸಬಲ್ಲೆ, ಈ ಪ್ರಪಂಚದೊಂದಿಗಿನ ನನ್ನ ಸಂಬಂಧವೇನಿದ್ದರೂ ಕೇವಲ ವ್ಯಾವಹಾರಿಕತೆ, ಅದಾರಚೆಗಿನ ಯಾವ ವಿಷಯಗಳೂ ನನ್ನ ಭಾದಿಸಲಾರವು ಅಂತಿದ್ದರೆ, ಸಂಬಂಧಗಳ, ಅದು ನೀಡುವ ಬೆಚ್ಚಗಿನ ಸುಭದ್ರ ಭಾವಗಳ ಹಂಗಿಲ್ಲದೆ ವಸ್ತುನಿಷ್ಠವಾಗಿ ಬದುಕಬಹುದು. ಆದರೆ ಸಕಲ ಜೀವಚರಗಳಲ್ಲೂ ಒಂದು ಗಮ್ಯ ಮತ್ತು ಅಗಮ್ಯ ಸಂಬಂಧಗಳನ್ನು ಹುಟ್ಟುಹಾಕುವ ಈ ಪ್ರಪಂಚವನ್ನು ಕೇವಲ ವಸ್ತುನಿಷ್ಠವಾಗಿ, ವೈಚಾರಿಕವಾಗಿ, ಒಂದು ಶುದ್ಧ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಮಾತ್ರ ನೋಡುವುದಾದರೆ, ಅಂತಿಮವಾಗಿ ಮನುಷ್ಯ ಸಂಪೂರ್ಣ ಅನಾಥನಾಗಿ, ಅವನಿಗೆ ತನ್ನದು ಎಂದು ಹೇಳಿಕೊಳ್ಳಲು ಒಂದು ಜೀವವೂ ಇಲ್ಲದಂತಾಗಿ, ಹಿಡಿ ಪ್ರೀತಿಗಾಗಿ, ತುಸು ನೆಮ್ಮದಿಗಾಗಿ, ದಿಶೆಯಿಲ್ಲದವನಾಗಿ ಬೆಂಗಾಡ ಬಯಲಲಿ ಹನಿ ನೀರಿಗಾಗಿ ಬರಿಗಾಲಲಿ ಪರಿತಪಿಸುತ್ತಿರುವವನ ಮನಸ್ಥಿತಿ ಪ್ರಾಪ್ತವಾಗುತ್ತದೆ. 





ಸೋಮವಾರ, ಏಪ್ರಿಲ್ 6, 2015

ಬರಿದಾದ ಭಾವ

ನನ್ನೊಳಗೆ ಹಿಂದೊಮ್ಮೆ
ಕನಸುಗಳ ಸಾಲು
ಪ್ರಸವಿಸಿದ್ದ ನಭೆಯಿಂದು
ನನ್ನ ನೋಡಿ ನಗುತಿದೆ

ಮನಸೊಳಗೆ ಒಂದೊಮ್ಮೆ
ಕುಳಿರ್ಗಾಳಿಯಾಗಿ ಬೀಸುತ್ತಿದ್ದ
ಸ್ವಚ್ಛಂದ ತಂಗಾಳಿಯಿಂದು
ನನ್ನ ನೋಡಿ ಅಣಕಿಸುತಿದೆ

ಹಿಂದೊಮ್ಮೆ ನನ್ನನು
ಭಾವಸಾಗರದಿ ಭೋರ್ಗರೆಸಿದ
ಶ್ರಾವಣದ ಮಳೆಯಿಂದು
ನನ್ನ ನೋಡಿ ವ್ಯಂಗವಾಡುತಿದೆ

ಕನಸೀಗ ಖಾಲಿಯಾಗಿದೆ
ಮನಸು ಭಾರವಾಗಿದೆ
ಭಾವ ಬರಿದಾಗಿದೆ
ಬದುಕು ಬರಡಾಗಿದೆ

ಭಾನುವಾರ, ಏಪ್ರಿಲ್ 5, 2015

ಸಂಬಂಧಗಳ ಸಹಜತೆಯನ್ನು ಉಳಿಸಿಕೊಳ್ಳುವ ನನ್ನ ಆಯ್ಕೆ

ಬೆತ್ತಲೆ ಬೆನ್ನು, ಓರೆ ನೋಟ, ಬಾಚದ ತಲೆ, ಮಾದಕ ಭಂಗಿ,  ಮುಕ್ತ ಕಾಮ, ಸಂಜೆ ಆರರ ನಂತರದ ಪಾರ್ಟಿ, ಅರೆಬರೆ ಬಟ್ಟೆ, ವಿವಸ್ತ್ರತೆ... ಸ್ತ್ರೀ-ಸ್ವಾತಂತ್ರ್ಯ, ಸ್ತ್ರೀ ವಿಮೋಚನೆ ಅಂದರೆ ಇಷ್ಟೇನಾ? ಒಂದು ವೇಳೆ ಪುರುಷರೂ ನನ್ನ ಆಯ್ಕೆಯ ಹೆಸರಲ್ಲಿ ವಿವಾಹೇತರ ಸಂಬಂಧಕ್ಕೆ ಹಾತೊರೆದು ಇದು ನನ್ನ ಬದುಕು, ನನ್ನಿಚ್ಛೆ ಅಂದರೆ ಈ ತಥಾಕಥಿತ ಸ್ತ್ರೀವಾದ ಅದನ್ನು ಮರು ಮಾತಿಲ್ಲದೆ ಒಪ್ಪಿಕೊಂಡು ಬಿಡುತ್ತದೆಯೇ? ಸಬಲೀಕರಣದ ವ್ಯಾಪ್ತಿ ಕೇವಲ ತೊಡುವ ಬಟ್ಟೆ, ವಿವಾಹಪೂರ್ವ ಅಥವಾ ವಿವಾಹೇತರ ಸಂಬಂಧಗಳಿಗಷ್ಟೇ ಸೀಮಿತವಾದ ಪರಿಕಲ್ಪನೆಯೇ? ಆಯ್ಕೆಯೊಂದೇ ಮಹಿಳೆಯನ್ನು ಸಬಲಗೊಳಿಸಬಲ್ಲುದೇ? ಸ್ವಾತಂತ್ರ್ಯಪೂರ್ವದಲ್ಲಿ ಇಂತಹ ಯಾವ ಆಯ್ಕೆಗಳೂ ಇಲ್ಲದೆ ರಾಣಿ ಚೆನ್ನಮ್ಮ, ಅಬ್ಬಕ್ಕ, ಲಕ್ಷ್ಮೀಬಾಯಿ, ಸಾಮಾನ್ಯ ವನಿತೆ ಓಬವ್ವ ಇವರೆಲ್ಲಾ ಪ್ರಚಂಡವಾಗಿ ಹೋರಾಡಲಿಲ್ಲವೇ? ತಾವು ನಂಬಿದ ಆದರ್ಶಗಳಿಗಾಗಿ ಬದುಕಲಿಲ್ಲವೇ? ಮೇಲಿನ ಒಬ್ಬಳೇ ಒಬ್ಬ ಮಹಿಳೆಯೂ ಸಂಬಂಧಗಳನ್ನೆಲ್ಲಾ ಧಿಕ್ಕರಿಸಿ ನಾನೇ ಸಮಷ್ಟಿ ಅಂದವರಲ್ಲ. ಅಂದರೆ ಅವರ್ಯಾರೂ ಸಬಲರಲ್ಲವೇ...? ದೀಪಿಕಾ ಪಡುಕೋಣೆಯವರ ’ಮೈ ಚಾಯ್ಸ್’ ವಿಡಿಯೋ ನೋಡಿದಾಗ ನನ್ನೊಳಗೆ ಮೂಡಿದ ಪ್ರಶ್ನೆಗಳಿವು.

ನಿಜಕ್ಕೂ ಆ ವಿಡಿಯೋದಲ್ಲಿ ಎತ್ತಿದ ಪ್ರಶ್ನೆಗಳು, ಚರ್ಚಿಸಿದ ವಿಷಯಗಳು ಸಮಂಜಸವಾಗಿಯೇ ಇವೆ. ಪ್ರತಿಯೊಂದು ಹೆಣ್ಣಿಗೂ ಅವಳದೇ ಆದ ಸ್ವಾತಂತ್ರ್ಯವಿದೆ, ಅವಳದೇ ಆದ ಆಯ್ಕೆ ಇರುತ್ತದೆ, ಅವಳದೇ ಆದ ವ್ಯಕ್ತಿತ್ವ ಇರುತ್ತದೆ. ಅದನ್ನು ಪುರುಷ ಸಮಾಜ ಅರ್ಥ ಮಾಡಿಕೊಳ್ಳಲೇಬೇಕು. ಆದರೆ ನಾನೇ ಸಮಷ್ಟಿ, ನಾನೇ ಅನಂತ, ನನಗಿಷ್ಟ ಬಂದಂತೆ ನಾನಿರುತ್ತೇನೆ, ಅದನ್ನು ಯಾರಿಗೂ ಪ್ರಶ್ನಿಸುವ ಅಧಿಕಾರವಿಲ್ಲ, ನಿನ್ನ ಸೋಲು ನನ್ನ ಗೆಲುವು ಅನ್ನುವುದೆಲ್ಲವೂ ಅತಿರೇಕಗಳಲ್ಲವೇ? ನಾನು ಪ್ರಶ್ನಾತೀತ, ನಾನೇ ಸರಿ ಅಂತೆಲ್ಲಾ ಅಂದುಕೊಳ್ಳುವುದು ಆಯ್ಕೆಯಾ ಅಥವಾ ಅಹಂಕಾರವಾ? ಎಲ್ಲವೂ ನನ್ನಿಚ್ಛೆಯಂತೆ ಅನ್ನುವುದು ಅರಜಾಕತೆಯನ್ನು ಸೃಷ್ಟಿಸುವುದಿಲ್ಲವೇ?

ಕೆಲವು ಶತಮಾನಗಳಷ್ಟು ಹಿಂದೆ ಕೇರಳದಲ್ಲಿ ಅಸಹ್ಯ, ಅಮಾನವೀಯ ಪದ್ಧತಿಯೊಂದಿತ್ತು. ಕೆಳಜಾತಿಯ ಮಹಿಳೆಯರು ಯಾರೂ ಸೊಂಟದ ಮೇಲೆ ಬಟ್ಟೆ ಧರಿಸುವಂತಿರಲಿಲ್ಲ. ಹಾಗೊಂದು ವೇಳೆ ಎಲ್ಲಾ ಕಟ್ಟುಪಾಡುಗಳನ್ನು ಧಿಕ್ಕರಿಸಿ ಬಟ್ಟೆ ತೊಟ್ಟುಕೊಂಡರೆ ಎಲ್ಲರೆದುರೇ ಅವರನ್ನು ಅತ್ಯಂತ ಕ್ರೂರವಾಗಿ ಅತ್ಯಾಚಾರವೆಸಗಲಾಗುತ್ತಿತ್ತು. ಸೂಕ್ಶ್ಮವಾಗಿ ಅವಲೋಕಿಸಿದರೆ ಬಟ್ಟೆ ತೊಡದಿರುವುದೇ ಸ್ವಾತಂತ್ರ್ಯ ಅನ್ನುವ ಮನಸ್ಥಿತಿಗೂ ಬಟ್ಟೆ ತೊಡಲು ಬಿಡಲಾರೆವು ಅನ್ನುವ ಪ್ರತಿಷ್ಟೆಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ ಅನಿಸುತ್ತದೆ.

ಇನ್ನು ಈ ವಿಡಿಯೋ ಕತ್ತಲೆ, ಬೆತ್ತಲೆಗಳನ್ನೇ ಸ್ವಾತಂತ್ರ್ಯದ ಸರಕಾಗಿಸುವ ಭರದಲ್ಲಿ ನಿಜಕ್ಕೂ ಮಹಿಳೆ ಸಬಲೆಯಾಗಬೇಕಾದ ಕ್ಷೇತ್ರಗಳನ್ನು ನಗಣ್ಯವಾಗಿಸಿದೆ ಅನ್ನುವುದು ನನ್ನ ಭಾವನೆ. ಪರದೆಯ ಹಿಂದಿನ ಕಣ್ಣೀರನ್ನು, ಬಿಚ್ಚಿಟ್ಟ ಅರಶಿನದ ಕೊಂಬಿನ ಹಿಂದಿನ ನೋವನ್ನು, ಯಾರದೋ ಬಲವಂತಕ್ಕೆ ಬಲಿಯಾಗಿ ಬಿಳಿ ವಸ್ತ್ರ ತೊಟ್ಟವರ ಅಸಹಾಯಕತೆಯನ್ನು ಆಯ್ಕೆಯಾಗಿಸುವಲ್ಲಿ ನಿಜಕ್ಕೂ ಈ ವಿಡಿಯೋ ಸೋತಿದೆ. ಅದೆಷ್ಟೋ ಹೆಣ್ಣು ಮಕ್ಕಳು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವ್ಯೇಶ್ಯಾ ಗೃಹವೆಂಬ ಕುಲುಮೆಯಲ್ಲಿ ನಿತ್ಯ ಸಾಯುತ್ತಾ ಬದುಕುತ್ತಿದ್ದಾರೆ, ಅದೆಷ್ಟೋ ಹೆಣ್ಣು ಮಕ್ಕಳು ಯಾರದೋ ದುಡ್ಡಿನ ದಾಹಕ್ಕೆ, ವರದಕ್ಷಿಣೆಯ ಪೆಡಂಭೂತಕ್ಕೆ ಪ್ರತಿನಿತ್ಯ ಬಲಿಯಾಗುತ್ತಿದ್ದಾರೆ, ಇನ್ನಷ್ಟೇ ಅರಳಬೇಕಿರುವ ಅದೆಷ್ಟೋ ಹೆಣ್ಣು ಮಕ್ಕಳು ಇನ್ಯಾರದೋ ವಿಕೃತ ವಾಂಛೆಗಳಿಗೆ ಆಹಾರವಾಗುತ್ತಿದ್ದಾರೆ, ಹಳ್ಳಿಗಾಡಿನ ಅದೆಷ್ಟೋ ಮಹಿಳೆಯರಿಗೆ ಈಗಲೂ ಬಹಿರ್ದೆಸೆಗೂ ಬಯಲನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ, ಅದೆಷ್ಟೋ ಕಟ್ಟಡ ಕಾರ್ಮಿಕೆಯರಿಗೆ ದಿನ ರಾತ್ರಿ ದುಡಿದರೂ ತನ್ನ ಮೂಲಭೂತ ಅವಶ್ಯಕತೆಗಳನ್ನೂ ಪೂರೈಸಿಕೊಳ್ಳಲಾಗದಷ್ಟು ಬಡತನವಿದೆ... ಇವ್ರ್ಯಾರನ್ನೂ ’ಮೈ ಚಾಯ್ಸ್’ ಪ್ರತಿನಿಧಿಸುವುದೇ ಇಲ್ಲ. ಅದೇನಿದ್ದರೂ ’ಆಯ್ಕೆ’ ನಗರದ ಸುಶಿಕ್ಷಿತ ಮಹಿಳೆಗೆ ಮಾತ್ರ ಸೀಮಿತ ಅನ್ನುವಂತಿದೆ.

ಒಬ್ಬ ಮಹಿಳೆಯ ಆರ್ಥಿಕ, ಬೌದ್ಧಿಕ, ಸಾಮಾಜಿಕ, ನ್ಯಾಯ ಸಮ್ಮತ ಬೇಡಿಕೆಯ ಬಗ್ಗೆ ಸೊಲ್ಲೆತ್ತದ, ಹಲವು ಕಷ್ಟಗಳ ನಡುವೆಯೂ ಬದುಕನ್ನು ತಮ್ಮದೇ ಆದ ನೆಲೆಗಟ್ಟಿನಲ್ಲಿ ನಡೆಸುತ್ತಾ ಒಂದಿಷ್ಟು ನೊಂದಿರೋ ಜೀವಗಳಿಗೆ ಸಾಂತ್ವನ ನೀಡುವ ನಿಜವಾದ ಸಬಲ ಮಹಿಳೆಯ ಬಗ್ಗೆ ಒಂದಕ್ಷರವೂ ಮಾತಾಡದ ವಿಡಿಯೋ ಕೇವಲ ’ನಾನು ಪ್ರಶ್ನಾತೀತ’ ಅನ್ನುವುದನ್ನೇ ಪರಮೋಚ್ಛ ಸ್ವಾತಂತ್ರ್ಯದ ಸಂಕೇತವೆಂಬಂತೆ ಬಿಂಬಿಸಿ ಸಬಲೀಕರಣದ ಪರಿಕಲ್ಪನೆಯನ್ನೇ ಜಾಳಾಗಿಸಿದೆ ಅನಿಸುತ್ತದೆ ನನಗೆ. ಇಲ್ಲ ಅದೇ ಆಯ್ಕೆ, ಅದೇ ಸಬಲೀಕರಣವೆನ್ನುವುದಾದರೆ... ನನ್ನ ಸುತ್ತಲಿನ ಪುರುಷ ಪ್ರಪಂಚ ಅಂದರೆ ನನ್ನ ಅಪ್ಪ, ಅಣ್ಣ, ಗೆಳೆಯರು, ಹಿತೈಷಿಗಳು ನನ್ನನ್ನು ನನ್ನಷ್ಟಕ್ಕೆ ಬಿಡದೇ, ನಾ ತಪ್ಪು ದಾರಿಯಲ್ಲಿ ನಡೆದಾಗೆಲ್ಲಾ ನಿಲ್ಲಿಸಿ ಬಿಡದೆ ಪ್ರಶ್ನಿಸುವುದನ್ನು ಒಪ್ಪಿಕೊಳ್ಳುವುದೇ ನನ್ನ ಆಯ್ಕೆಯಾಗಿರುತ್ತದೆ, ಅತಿರೇಕದ ಸಮಾನತೆಯ ವಿತಂಡ ವಾದಗಳ ಮಧ್ಯೆ ಸಂಬಂಧಗಳ ಸಹಜತೆಯನ್ನು ಉಳಿಸಿಕೊಳ್ಳುವುದೇ ನನ್ನಾಯ್ಕೆಯಾಗಿರುತ್ತದೆ, ನಾನು-ನನ್ನದು-ನನ್ನಿಂದಾಗಿ ನೀನು ಅನ್ನುವ ಅಹಂಕಾರವನ್ನು ಮೆಟ್ಟಿ ನಿಲ್ಲುವುದೇ ನನ್ನ ಆಯ್ಕೆಯಾಗಿರುತ್ತದೆ. ಸೋ ಕಾಲ್ಡ್ ಸ್ತ್ರೀವಾದ ಇದನ್ನು,  ಕೈಲಾಗದವರ ವಾದ, ಸ್ವಾತಂತ್ರ್ಯದ ಹಂಬಲವಿಲ್ಲದವರ ಮಾತು, ಅಶಕ್ತರ ನಡವಳಿಕೆ, ಅಬಲತೆಯ ಪ್ರತೀಕ ಎಂದೆಲ್ಲಾ ಅನ್ನುವುದಾದರೆ well, ನಾನೂ ಅಬಲೆಯೇ...