ಸೋಮವಾರ, ಏಪ್ರಿಲ್ 4, 2016

ಬದುಕು ಕಟ್ಟಿಕೊಟ್ಟ ಅವಳನ್ನು ಅವನೇಕೆ ದೂರ ಸರಿಸಿದ?

ಬಹುಶಃ ನಾವೆಲ್ಲರೂ ಸಿಂಡ್ರೆಲ್ಲಾ ಕಥೆ ಓದಿ/ಕೇಳಿ, ಅವಳಿಗಾಗಿ ಮರುಗುತ್ತಾ, ಅವಳ ಚಿಕ್ಕಮ್ಮನನ್ನು ನಖಶಿಖಾಂತ ದ್ವೇಷಿಸುತ್ತಾ ಬೆಳೆದವರೇ. ಮಲತಾಯಿಯೆಂದರೆ ಹೆಣ್ಣಿನ ರೂಪದ ರಾಕ್ಷಸಿ ಮತ್ತು ಒಳ್ಳೆಯತನಕ್ಕೆ ಕೊನೆಗಾದರೂ ಜಯ ಇದ್ದೇ ಇರುತ್ತದೆ ಅನ್ನುವ ಕಲ್ಪನೆ ಮೊಳಕೆಯೂಡೆಯಲು ಕಾರಣ ಸಿಂಡ್ರೆಲ್ಲಾ ಮತ್ತು ಅಂತಹ  happy ending fairy taleಗಳೇ. ಆದ್ರೆ ನಾನಿಲ್ಲಿ ನಿಮಗೆ ಹೇಳಹೊರಟಿರುವುದು ಸಿಂಡ್ರೆಲ್ಲಾ ಕಥೆಗೆ ತೀರಾ ವ್ಯತಿರಿಕ್ತವಾದ ಕಥೆ.

ನಮ್ಮೂರಿನ ಪಕ್ಕದ ಊರಿದೆಯಲ್ವಾ, ಅದರ ಪಕ್ಕದ ಊರಲ್ಲಿ ಜಾತಿಗಳ ಹಂಗಿಲ್ಲದೆ, ಅಂಧ ಧರ್ಮಾಭಿಮಾನವಿಲ್ಲದೆ, ಕೇವಲ ಮನುಷ್ಯತ್ವವನ್ನು ಮಾತ್ರ ಆದರಿಸುವ ಒಬ್ಬ ಅಪ್ಪಟ ಕರಾವಳಿ ಮಣ್ಣಿನ ಮಗನಿದ್ದಾರೆ. ಅವರ ಮನೆಯ ನಾಲ್ಕೂ ಸುತ್ತಲೂ ಭತ್ತದ ಗದ್ದೆ, ಗದ್ದೆಯ ಮಧ್ಯದಲ್ಲೊಂದು ಕೆರೆ, ತುಸು ಹಿಂದಕ್ಕೆ ಬಂದರೆ ಮನೆ ಹಿತ್ತಲಿಗೆ ಅಂಟಿಕೊಂಡಂತೆ ಕೊಟ್ಟಿಗೆ, ಅಲ್ಲಿ ಸಹಬಾಳ್ವೆ ನಡೆಸುವ ಆಡುಗಳು ಮತ್ತು ದನಗಳು, ಅದರ ಹೊರಗೆ ಗೂಟಕ್ಕೆ ಕಟ್ಟಿರುವ ಕಪ್ಪು ನಾಯಿ... ಆ ಮನೆಯಲ್ಲೊಬ್ಬ ಹಾಲುಮನಸ್ಸಿನ ಬೊಗಸೆ ಕಂಗಳ ಮುದ್ದು ರಾಜಕುಮಾರಿ. ಮನೆಯ ಅಟ್ಟದಲ್ಲಿಟ್ಟ ಭತ್ತದ ಮೂಟೆಗಳನ್ನು ಇಲಿಗಳು ತಿಂದು ಹಾಳುಮಾಡುತ್ತವೆ ಎಂದು ಅವಳಪ್ಪ ಇಲಿ ಬೋಣು ತಂದಿಟ್ರೆ ಮೂತಿ ಉದ್ದ ಮಾಡ್ಕೊಂಡು ಉಪವಾಸ ಸತ್ಯಾಗ್ರಹ ಮಾಡುವಷ್ಟು ಮುಗ್ಧೆ ಆಕೆ. ಇಲಿ ಬೋಣಿಂದ ನಿಂಗೇನಮ್ಮ ಕಷ್ಟ ಅಂತ ಕೇಳಿದ್ರೆ, ಆ ಬೋಣಲ್ಲೇನಾದ್ರೂ ಅಮ್ಮ ಇಲಿ ಸಿಕ್ಕಿಹಾಕಿಕೊಂಡು ಸತ್ತುಹೋದ್ರೆ ಮರಿ ಇಲಿಗಳೆಲ್ಲಾ ಅನಾಥವಾಗಿಬಿಡುತ್ತಲ್ಲಾ ಅನ್ನುತ್ತಿದ್ದಳವಳು.

ಹೀಗಿದ್ದ ನಮ್ಮ ರಾಜಕುಮಾರಿ ಇನ್ನೂ ಪದವಿ ಓದ್ತಿರ್‍ಬೇಕಾದ್ರೆ ದಸರೆ ರಜೆಗೆಂದು ಮೈಸೂರಲ್ಲಿದ್ದ ಗೆಳತಿ ಮನೆಗೆ ಹೋದ್ಳು. ಅಲ್ಲಿ ದಸರೆ ನೋಡಿದ್ಳೋ, ಬಿಟ್ಳೋ ಗೊತ್ತಿಲ್ಲ. ಆದ್ರೆ ಪಕ್ಕದ ಮನೆಯಲ್ಲಿದ್ದ ಹತ್ತು ವರ್ಷದ ತಾಯಿಯಿಲ್ಲದ ಮಗು ಅವಿನಾಶನನ್ನು ವಿಪರೀತ ಅನ್ನುವಷ್ಟು ಹಚ್ಚಿಕೊಂಡುಬಿಟ್ಳು.

ಅಲ್ಲಿಂದ ಊರಿಗೆ ಬಂದವ್ಳೇ, ತಾನು ಮದುವೆ ಅಂತ ಆಗುವುದಾದರೆ ಅವನಪ್ಪನನ್ನು ಮಾತ್ರ ಅಂತ ತನ್ನ ತೀರ್ಮಾನ ಹೇಳ್ಬಿಟ್ಳು. ಅಪ್ಪ-ಅಮ್ಮ ಅವಳನ್ನು ಎಷ್ಟೇ ಕೇಳಿಕೊಂಡರೂ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂತ ಖಡಾಖಂಡಿತವಾಗಿ ನಿಂತಳು. ಎಂದೂ ಬಯ್ಯದ ಅಪ್ಪ ಎರಡೇಟು ಹೊಡೆದು ಬುದ್ಧಿ ಹೇಳೋಕೆ ಪ್ರಯತ್ನಿಸಿದ್ರು, ಅಮ್ಮ ಕಣ್ಣೇರು ಹಾಕುತ್ತಾ ಮೂಲೆ ಸೇರಿದ್ರು. ಕೊನೆಗೆ ಅವಳ ಮೈಸೂರಿನ ಗೆಳತಿಯನ್ನು ಕರೆಸಿ ಬುದ್ಧಿ ಹೇಳಿಸಿದ್ದೂ ಆಯಿತು. ಊಹೂಂ, ಅವಳು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇರಲೇ ಇಲ್ಲ.

ನೀನೇನೇ ತಿಪ್ಪರಲಾಗ ಹಾಕಿದ್ರೂ ಈ ಮದುವೆಯನ್ನು ಒಪ್ಪಿಕೊಳ್ಳೋಕೆ ಸಾಧ್ಯಾನೇ ಇಲ್ಲ ಅಂತ ಅಪ್ಪನೂ ಖಡಾಖಂಡಿತವಾಗಿ ನಿಂತ್ರು. ನಮ್ಮ ರಾಜಕುಮಾರಿ ಆದರ್ಶದ ಅಮಲಲ್ಲೋ ಅಥವಾ ಆ ಮಗುವಿನ ಮೇಲಿನ ಅವಳ ಸಹಜ ಅಂತಃಕರಣದಿಂದಲೋ ಹೇಳದೆ ಕೇಳದೆ ಒಂದು ರಾತ್ರಿ ಮನೆಬಿಟ್ಟು ಹೊರಟು ಹೋದಳು. ಹದಿನಾರಂಕದ ಆ ಮನೆಯ ಪೂರ್ತಿ ಸ್ಮಶಾನ ಮೌನ, ಆಗೊಮ್ಮೆ ಈಗೊಮ್ಮೆ ಬಿಕ್ಕಳಿಸುವ ಶಬ್ಧವೊಂದನ್ನು ಬಿಟ್ಟರೆ ಅಲ್ಲಿ ಇನ್ನಾವ ಸದ್ದಿಗೂ ಜಾಗವೇ ಇರ್ಲಿಲ್ಲ. ತನ್ನ ಒಡತಿಯ ವಿದಾಯವನ್ನು ಸಹಿಸಲಾರದ ಆಡು, ದನಗಳೂ ’ಅಂಬಾ’ ಅನ್ನುವುದನ್ನೇ ಮರೆತುಬಿಟ್ಟವು.

ಆಯ್ತಲ್ಲಾ, ಮನೆ ಬಿಟ್ಟು ಹೋದ್ಳು ಅಂದ್ನಲ್ಲಾ, ಹಾಗೆ ಹೋದವಳು ತನ್ನ ಗೆಳತಿಯ ಮನೆಗೂ ಹೋಗದೆ, ಅವಿನಾಶನ ಮನೆಗೇ ಹೊಗಿ, ಅವನಪ್ಪನ ಬಳಿ "ನೋಡಿ, ನಾನು ಮನೆಬಿಟ್ಟು ಬಂದಿದ್ದೇನೆ, ನಾಳೆ ಬೆಳಗ್ಗೆ ಎಲ್ಲಾದರೂ ಸರಿ ನಮ್ಮ ಮದುವೆ ಆಗ್ಲೇಬೇಕು" ಅಂದಳು. ಅವರಿಗೆ ನಿಜಕ್ಕೂ ಇವಳ ಮದುವೆಯಾಗುವ ಮನಸ್ಸಿತ್ತೋ ಇಲ್ವೋ ಗೊತ್ತಿಲ್ಲ, ಮರುದಿನ ಬೆಳಗ್ಗೆ ಆಗುತ್ತಿದ್ದಂತೆ ದೇವಸ್ಥಾನವೊಂದರಲ್ಲಿ ಹಾರ ಬದಲಾಯಿಸಿಕೊಂಡರು. ಅಲ್ಲಿಗೆ ವಿದ್ಯುಕ್ತವಾಗಿ ಆಕೆ ಅವಿನಾಶನ ತಾಯಿಯಾಗಿಬಿಟ್ಳು, ಅಂದರೆ ನಮ್ಮ ಸಿಂಡ್ರೆಲ್ಲಾ ಕಥೆಯಲ್ಲಿರುವಂತೆ ಚಿಕ್ಕಮ್ಮನಾದಳು.

ಆದ್ರೆ ಸಿಂಡ್ರೆಲ್ಲಾಳ ಚಿಕ್ಕಮ್ಮನಂತೆ ಮಲತಾಯಿಯಾಗದೆ, ಮಮತಾಮಯಿಯಾದಳು. ಮದುವೆಯ ಮೊದಲ ರಾತ್ರಿಯೇ ಗಂಡನ ಬಳಿ ’ ಅವಿನಾಶ ತಾನೇ ತಾನಾಗಿ ತಮ್ಮನೋ/ತಂಗಿಯೋ ಬೇಕು ಅನ್ನುವವವರೆಗೂ ನಮಗೆ ಮಕ್ಕಳಾಗೋದೇ ಬೇಡ’ ಅಂದ್ಳು. ಅವರೂ ಒಪ್ಪಿಕೊಂಡರು. ಆದ್ರೆ ಯಾವುದೂ ಅಲ್ಲಿ ಅವಳಂದುಕೊಂಡಂತೆ ಇರಲಿಲ್ಲ. ತನ್ನ ತಾಯಿಯ ಸ್ಥಾನದಲ್ಲಿ ಇನ್ಯಾರೋ ಬಂದಿರುವುದನ್ನು ಸಹಿಸಿಕೊಳ್ಳಲು ಅವಿನಾಶ ಸಿದ್ಧನಿರಲಿಲ್ಲ. ಮೊದಮೊದಲು ಅವಳ ಜೊತೆ ಜಗಳವಾಡಲು ಪ್ರಯತ್ನಿಸುತ್ತಾ, ಅಸಹಕಾರ ಚಳವಳಿ ಮಾಡಿ, ತಂದೆಯ ಬಳಿ ಅವಳ ದೂರು ಹೇಳಿ ಮನೆಯಿಂದ ಓಡಿಸಲು ಪ್ರಯತ್ನಪಟ್ಟ. ಅದ್ಯಾವುದೂ ಫಲಕಾರಿಯಾಗಲಿಲ್ಲ ಅಂತಾದಮೇಲೆ ಒಂದುದಿನ ಮೈ ಪೂರ್ತಿ ಬಾಸುಂಡೆ ಬರುವ ಹಾಗೆ ತಾನೇ ಅಪ್ಪನ ಬೆಲ್ಟಲ್ಲಿ ಹೊಡೆದುಕೊಂಡು, ಅಪ್ಪ ಬಂದಾಗ ಇದೆಲ್ಲಾ ಅಮ್ಮನೇ ಮಾಡಿದ್ದು ಅಂತ ಕಣ್ಣೀರಿಟ್ಟ.

ಅವನ ಕಣ್ಣೀರಿಗೆ ಕರಗಿದ ಅಪ್ಪ, ಹಿಂದು ಮುಂದು ಯೋಚಿಸದೆ, ಅವಳನ್ನು ಚೆನ್ನಾಗಿ ದಬಾಯಿಸಿಬಿಟ್ಟ. ಅಷ್ಟೂ ಸಾಲದೆಂಬಂತೆ ಎರಡೇಟು ಹೊಡೆದೂಬಿಟ್ಟ. ಇನ್ನೇನು ಚಿಕ್ಕಮ್ಮ ಇದೆಲ್ಲಾ ನಾನೇ ಮಾಡಿದ್ದು ಅಂತ ಅಂದುಬಿಡುತ್ತಾಳೇನೋ ಅಂತ ಭಯಪಡುತ್ತಿರಬೇಕಾದರೆ ನಮ್ಮ ರಾಜಕುಮಾರಿ ಮನೆಬಿಟ್ಟು ಬಂದನಂತರ ಮೊದಲಸಲ ಅಪ್ಪ ಅಮ್ಮನನ್ನು ನೆನೆಸಿಕೊಂಡಳು. ಅದೆಷ್ಟು ಮುದ್ದಿನಿಂದ, ಪ್ರೀತಿಯಿಂದ ನನ್ನ ಬೆಳೆಸಿದ್ದರಲ್ಲಾ ಅಂದುಕೊಂಡಳು. ಅಪ್ಪ-ಅಮ್ಮನ ಪ್ರೀತಿ, ಮಮತೆ ವಾತ್ಸಲ್ಯ ನೆನಪಾಗುತ್ತಲೆ ಅವಿನಾಶನ ಬಗೆಗೆ ಅವಳಿಗಿದ್ದ ಪ್ರೀತಿ ಮತ್ತಷ್ಟು ಸಾಂದ್ರವಾಯಿತು. ಗಂಡ ಬಯ್ಯುತ್ತಿದ್ದರೂ ಅವಳು ಎಲ್ಲವನ್ನೂ ತುಟಿಕಚ್ಚಿ ಸಹಿಸಿಕೊಂಡಳು.

ಆ ರಾತ್ರಿ ಮೊದಲ ಬಾರಿ ಅವಳ ಬಗ್ಗೆ ಅವಿನಾಶನಿಗೆ ಕನಿಕರ ಮೂಡಿತು. ತಾನು ಅಂದುಕೊಂಡಷ್ಟು ಆಕೆ ಕೆಟ್ಟವಳಲ್ಲ ಅನಿಸತೊಡಗಿತು. ದಿನ ಕಳೆದಂತೆ ಅವನ ಹಠ, ಕೋಪ, ಸಿಟ್ಟು, ಸೆಡವು ಕಡಿಮೆಯಾಗುತ್ತಾ ಬಂತು. ಒಂದಿನ ಪೂರ್ತಿಯಾಗಿ ಅವನು ಅವಳನ್ನು ಅಮ್ಮನೆಂದು ಒಪ್ಪಿಕೊಂಡ. ತಾನು ಇದುವರೆಗೆ ಮಾಡಿದ ತಪ್ಪುಗಳನ್ನೆಲ್ಲಾ ಅವನೆದೇ ಭಾಷೆಯಲ್ಲಿ ಅಪ್ಪನೆದುರು ಒಪ್ಪಿಕೊಂಡು ಕ್ಷಮೆ ಕೇಳಿದ. ಅವಳ ಕಣ್ಣಂಚಲ್ಲಿ ತೆಳುವಾಗಿ ನೀರು ಹರಡಿಕೊಂಡು ಸಾರ್ಥಕಭಾವ ಸೆರೆಯಾಗತೊಡಗಿತು, ಇತ್ತ ಊರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರು ಹಗ್ಗ ಬಿಚ್ಚಿಸಿಕೊಂಡು ಅಮ್ಮನ ಕೆಚ್ಚಲಿಗೆ ಬಾಯಿಹಾಕಿತು.

ಇಷ್ಟಾಗುವಾಗಾಗಲೇ ಅವಳ ಅಪ್ಪ ಅಮ್ಮನಿಗೂ ಅವಳ ಮೇಲಿದ್ದ ಕೋಪ ಕರಗಿ ಅವಳನ್ನು ಯಾವಾಗೊಮ್ಮೆ ಕಾಣುತ್ತೇವೆಯೋ ಅನಿಸತೊಡಗಿತ್ತು. ಮಗ ತನ್ನನ್ನು ಅಮ್ಮನೆಂದು ಒಪ್ಪಿಕೊಂಡಮೇಲೆ ಇವಳಿಗೂ ಅಪ್ಪ-ಅಮ್ಮ, ಅವರ ಪ್ರೀತಿ, ತಾನು ಅವರಿಗೆ ಕೊಟ್ಟ ನೊವು ಬಹುವಾಗಿ ಕಾಡತೊಡಗಿತು. ಅಪರಾಧಿ ಪ್ರಜ್ಞೆ ಅವಳೊಳಗೆ ಬೆಳೆಯತೊಡಗಿದಂತೆ ಗಂಡನನ್ನೂ, ಮಗನನ್ನು ಕರೆದುಕೊಂಡು ಮತ್ತೆ ಊರಿಗೆ ಬಂದು ಅಪ್ಪನ ಮುಂದೆ ತಲೆ ಬಗ್ಗಿಸಿ ನಿಂತಳು. ಮೊದಮೊದಲು ಅಪ್ಪ ಬಿಗುಮಾನ ತೋರಿದರೂ, ಇಲ್ಲದ ಕೋಪವನ್ನು ಪ್ರದರ್ಶಿಸಿದರೂ, ಅವಳು ಬಂದು ಇನ್ನೂ ಪೂರ್ತಿ ಇಪ್ಪತ್ತನಾಲ್ಕು ತಾಸು ಕಳೆಯುವ ಮುನ್ನವೇ ಅವಳನ್ನು ಮತ್ತೆ ಒಪ್ಪಿಕೊಂಡರು. ಆಕೆ ತುಸು ಪ್ರೌಢವಾಗಿದ್ದಳು ಅನ್ನುವುದನ್ನು ಬಿಟ್ಟರೆ ಇನ್ನಾವ ಮಹತ್ತರ ಬದಲಾವಣೆಯೂ ಅವಳಲ್ಲಿ ಆಗಿರಲೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವಳ ಮುಗ್ಧತೆಯಿನ್ನೂ ಉಳಿದುಕೊಂಡಿತ್ತು.

ಅಪ್ಪ-ಅಮ್ಮನೂ ಒಪ್ಪಿಕೊಂಡಮೇಲೆ ಇನ್ನಾವ ನೋವೂ ಉಳಿದಿಲ್ಲ ಎಂಬಂತೆ ಅವಳು ತವರೂರಿನ ಇಂಚು ಇಂಚನ್ನೂ ಮಗನಿಗೆ ಪರಿಚಯಿಸಿದಳು, ಗೆಳತಿಯರ ಬಳಿ ಮೈಸೂರಿನ ಬಗ್ಗೆ ತುಸು ಹೆಚ್ಚೇ ಅನ್ನುವಷ್ಟು ಹೇಳಿಕೊಂಡಳು, ತಾನು ಕೈಯಾರೆ ಹುಲ್ಲು ತಿನ್ನಿಸುತ್ತಿದ್ದ ಆಡಿನ ಮರಿ ಅದೆಷ್ಟು ಬೇಗ ಬೆಳೆದು ದೊಡ್ಡದಾಗಿದೆಯಲ್ಲಾ ಎಂದು ಅಚ್ವರಿಪಟ್ಟಳು, ಮನೆಬಿಟ್ಟು ಹೋಗುವಾಗ ಇನ್ನೂ ಕಣ್ಣುಬಿಟ್ಟಿಲ್ಲದ ಕರುವಿಗೆ ಅದೆಷ್ಟು ಉದ್ದದ ಕೊಂಬು ಬೆಳೆದುಬಿಟ್ಟಿದೆಯಲ್ಲಾ ಎಂದು ಮುಟ್ಟಿ ಮುಟ್ಟಿ ನೋಡಿಕೊಂಡಳು, ಇಷ್ಟು ತಿಂಗಳುಗಳು ಕಳೆದರೂ ಮನೆಯ ನಾಯಿಗೆ ನನ್ನ ಪರಿಚಯ ಮರೆತು ಹೋಗಿಲ್ಲವಲ್ಲಾ ಎಂದು ಸಂತಸ ಪಟ್ಟಳು, ಬಾಗಿದ ಪೈರಿನ ಮಧ್ಯೆ ತಾನೂ ಓಡಿ, ಮಗನನ್ನೂ ಓಡಿಸಿ ದಣಿದಳು, ತಿಳಿನೀರ ಕೊಳದಲ್ಲಿ ಕಾಲು ಇಳಿಬಿಟ್ಟು ಮೀನುಗಳಿಂದ ಕಚ್ಚಿಸಿಕೊಂಡಳು. ಕೊನೆಗೊಂದು ದಿನ ಅಪ್ಪ ಅಮ್ಮನಿಗೆ ವಿದಾಯ ಹೇಳಿ ಮತ್ತೆ ಮೈಸೂರ ಬಸ್ ಹತ್ತಿ, ಕಣ್ಣು ಒರೆಸಿಕೊಳ್ಳುತ್ತಲೇ ಹುಟ್ಟಿದೂರಿಗೆ 'ಬಾಯ್' ಅಂದು ಕಿಟಕಿ ಪಕ್ಕದ ಸೀಟಿಗೆ ಒರಗಿ ಕೂತಳು. ಆ ಹದಿನಾರಂಕದ ಮನೆಯಲ್ಲಿ ಮತ್ತೆ ಸಂಭ್ರಮ, ನಗು ಮೊದಲಿಟ್ಟಿತು.

ಇಷ್ಟೇನಾ...? ಅನ್ನುತ್ತಿದ್ದೀರೇನೋ ನೀವು... ಇಷ್ಟೇ ಆಗಿದ್ದರೆ, ಖಂಡಿತಾ ಇದನ್ನು ಬರೆಯಬೇಕಿರಲಿಲ್ಲ. ಆ ನಂತರ ನಡೆದ ಘಟನೆಗಳು, ತಿರುವುಗಳು ಪದೇ ಪದೇ ಬದುಕಿನ ಅನೂಹ್ಯತೆಯನ್ನು ವಿಡಂಬಿಸುತ್ತಾ ಎಲ್ಲಕ್ಕೂ ಅತೀತವಾದ ಕೆಲವು ಪ್ರಶ್ನೆಗಳನ್ನು ಉಳಿಸಿರುವುದಕ್ಕೇ ಇದನ್ನು ಬರೆಯಬೇಕಾಯಿತು. ಬದುಕು ಕೆಲವೊಮ್ಮೆ ಎಂತಹ ಪ್ರಶ್ನೆ ಕೇಳಿಬಿಡುತ್ತದೆಂದರೆ ಯಾವ googleಗೂ ಉತ್ತರ ಕೊಡಲಾಗದೆ ಸ್ಥಬ್ಧವಾಗುತ್ತದೆ. ನಮ್ಮ ರಾಜಕುಮಾರಿಯ ಬದುಕಲ್ಲಿ ಆಗಿರುವುದೂ ಅದೇ.

ಅವಿನಾಶ ಬೆಳೆಯುತ್ತ ಬಂದಂತೆ ಅಮ್ಮನ ಬಗ್ಗೆ ಪ್ರೀತಿ, ಆದರ, ಅಭಿಮಾನ ಹೆಚ್ಚುತ್ತಾ ಹೋಯಿತು. ಅಮ್ಮನೆಂದರೆ ವಾತ್ಸಲ್ಯ, ಅಮ್ಮನೆಂದರೆ ಸಲುಗೆ... ಸ್ನಾನಕ್ಕೆ ಗೀಸರ್ ಆನ್ ಮಾಡುವಲ್ಲಿಂದ ಕಾಲೇಜ್ ಯುನಿಫಾರ್ಮ್‌ಗೆ ಇಸ್ತ್ರಿ ಹಾಕುವಲ್ಲಿಯವರೆಗೂ ಅಮ್ಮ ಅಮ್ಮ ಅಮ್ಮ... ತನ್ನ ಬದುಕಿಗೆ ಹಣತೆಯಾಗಿ ಬಂದವಳ ಕಣ್ಣಲ್ಲಿನ ಬೆಳಕು ಆರಬಾರದೆಂದು ಸದಾ ಶ್ರಮಿಸುತ್ತಿದ್ದ. ಹುಟ್ಟುತ್ತಲೇ ಜತೆಯಾಗಿದ್ದ ಅಪ್ಪನಿಗಿಂತಲೂ ಕೈ ಹಿಡಿದು ನಡೆಸಿದ ಅಮ್ಮನೇ ಅಚ್ಚುಮೆಚ್ಚೆನಿಸುತ್ತಿತ್ತವನಿಗೆ. ಅವಳಿಗೂ ಅಷ್ಟೆ, ಅವನ ಪ್ರೀತಿಯ ಪರಾಕಾಷ್ಠೆಯ ಮುಂದೆ ಇನ್ನೊಂದು ಮಗು ಬೇಕು ಅಂತ ಅನಿಸಲೇ ಇಲ್ಲ.

ತೆರೆದಿಟ್ಟ ಗಾಳಿಗೆ ಹಳೆಗಾಯ ಆರಿಹೋಗಿ ಬದುಕು ಪಕ್ವವಾಗುತ್ತಿತ್ತು. ಊರಲ್ಲಿ ಅಪ್ಪ ಅಮ್ಮನೂ ಮಗಳು ಸಂತೋಷವಾಗಿದ್ದಾಳಲ್ಲಾ ಅನ್ನುವ ಖುಶಿಯಲ್ಲಿ ಬದುಕುತ್ತಿದ್ದರು. ಹೀಗಿರುವಾಗ ಆ ಸಂತೋಷಕ್ಕೆಲ್ಲಾ ಕೊನೆ ಅನ್ನುವಂತೆ ಒಂದು ದಿನ ಅವಿನಾಶ ಅಮ್ಮನನ್ನು ಬೈಕಿನ ಹಿಂದೆ ಕೂರಿಸಿಕೊಂಡು ಯಾವುದೋ ಸಿಗ್ನಲ್ ಜಂಪ್ ಮಾಡುವಾಗ ಆಯ ತಪ್ಪಿ ಬಿದ್ದು ಬಿಟ್ಟ, ಹಿಂದಿಂದ ಬಂದ ಲಾರಿ ಅವನ ಮೇಲಿಂದ ಹಾದುಹೋಯಿತು. ಅಷ್ಟೇ, ಅವನು ಸ್ಥಳದಲ್ಲೇ ಪ್ರಾಣ ಬಿಟ್ಟ. ನಮ್ಮ ರಾಜಕುಮಾರಿಯ ಬದುಕು ಸ್ಥಬ್ಧವಾಯಿತು. ಮಾತಿಲ್ಲ, ಕಥೆಯಿಲ್ಲ, ಆಕೆ ಸಂಪೂರ್ಣವಾಗಿ ಮೌನವಾಗಿಬಿಟ್ಟಳು. ಮಾತು-ಕಥೆ ಬಿಡಿ, ಅವಿನಾಶನನ್ನು ಅಷ್ಟೊಂದು ಪ್ರೀತಿಸುತ್ತಿದ್ದವಳು ಅವನಿಗೋಸ್ಕರ ಒಂದು ಹನಿ ಕಣ್ಣೀರನ್ನೂ ಸುರಿಸಲಿಲ್ಲ. ಅವಳ ಗಂಡ ಅವನ ಚಿತಾಭಸ್ಮವನ್ನು ಅವಳ ಮುಂದೆ ಇಟ್ಟಾಗಲೂ ಆಕೆಯದೂ ಅದೇ ದಟ್ಟ ಮೌನ.

ಇತ್ತ ಊರಿಗೇ ಊರೇ ಅವಳಿಗೋಸ್ಕರ ಮರುಗಿತು. ಅವಳ ಅಪ್ಪ ಅಮ್ಮ ಮೈಸೂರಿಗೆ ಹೋಗಿ ಅವಳನ್ನು ಮಾತಾನಾಡಿಸಲು ಪ್ರಯತ್ನಪಟ್ಟರು. ಊಹೂಂ, ಅವಳು ಮೌನ ಮುರಿಯಲೇ ಇಲ್ಲ.

ಇಷ್ಟಕ್ಕಾದರೂ ಬದುಕಿನ ವೈಚಿತ್ರಗಳು ಮುಗಿಯಿತಾ ಅಂದುಕೊಂಡರೆ..? ಇಲ್ಲ, ಅದಿನ್ನೂ ಆರಂಭವಾಗಿತ್ತಷ್ಟೇ. ಅವಿನಾಶ ಸತ್ತ ನಂತರ ಅವಳು ಗಂಡನ ಮನೆಯಲ್ಲಿ ಆರು ತಿಂಗಳುಗಳಷ್ಟು ಇದ್ದಳಷ್ಟೇ, ಆಮೇಲೆ ಅದೇನಾಯ್ತೋ ಗೊತ್ತಿಲ್ಲ, ಒಂದಿನ ಊರಿಗೆ ಬಂದವನೇ, ಏನನ್ನೂ ಹೇಳದೆ, ಏನನ್ನೂ ಕೇಳದೆ ಅವಳನ್ನಿಲ್ಲೇ ಬಿಟ್ಟುಹೋದ. ಆ ಮನೆಯಲ್ಲಿ ಮತ್ತೆ ಸೂತಕದ ಛಾಯೆ.

ಊರವರು ಬಾಯಿಗೆ ಬಂದಂತೆ ಮಾತಾಡಿದರು, ಇವಳ ನಡತೆಯ ಬಗ್ಗೆ ಕೆಟ್ಟ ಕೆಟ್ಟದಾಗಿ ಹರಟೆಹೊಡೆಯತೊಡಗಿದರು, ಕೆಲವರಂತೂ ಅವಳಿಗೂ ಅವಿನಾಶನಿಗೂ ಇಲ್ಲದ ಸಂಬಂಧ ಕಟ್ಟಿ ತಮ್ಮ ವಿಕೃತಿಯನ್ನು ತೀರಿಸಿಕೊಂಡರು. ಇಷ್ಟಾದರೂ ಆಕೆ ಏನೂ ಮಾತಾಡಲೇ ಇಲ್ಲ. ಅವಳ ಮೌನದ ಕೋಟೆಯೊಳಗೆ ಯಾರಿಗೂ ಪ್ರವೇಶ ಕೊಡಲೇ ಇಲ್ಲ.

ಹೀಗಿರುವಾಗಲೇ ಒಂದು ದಿನ ಯಾರೋ ಅವಿನಾಶನ ಬಗ್ಗೆ ಮಾತನಾಡುತ್ತಾ ಅವನದು ಹೀನ ಜಾತಕ, ಅದಕ್ಕೇ ಹುಟ್ಟಿ ಕೆಲವರ್ಷಗಳಲ್ಲಿ ಹೆತ್ತಮ್ಮನನ್ನು ಕಳೆದುಕೊಂಡ, ಮತ್ತೂ ಕೆಲವರ್ಷಗಳಲ್ಲಿ ಬೆಳೆಸಿದ ಅಮ್ಮನ ಮಾತನ್ನೇ ಕಿತ್ತುಕೊಂಡ ಅಂದರು. ಅಷ್ಟೂ ತಿಂಗಳುಗಳಿಂದ ಮೌನಗೌರಿಯಾಗಿದ್ದ ನಮ್ಮ ರಾಜಕುಮಾರಿ ಸಿಡಿದುಬಿದ್ದಳು. ಅವಿನಾಶನ ಬಗ್ಗೆ ಕೆಟ್ಟದಾಗಿ ಒಂದೇ ಒಂದು ಮಾತಾಡಿದ್ರೂ ನಾನು ಸುಮ್ಮನಿರಲ್ಲ ಅಂದಳು, ಅಷ್ಟೂ ದಿನಗಳಿಂದ ಹಿಡಿದಿಟ್ಟುಕೊಂಡ ಅವಳ ಭಾವನೆಗಳೆಲ್ಲಾ ಕೋಡಿ ಕೋಡಿಯಾಗಿ ಹರಿಯತೊಡಗಿತು.

ಅಲ್ಲಿಂದಾಚೆ ಒಂದಿಷ್ಟು ಪದಗಳನ್ನು ಹೆಕ್ಕಿ ಮತ್ತೆ ಮಾತಾಡತೊಡಗಿದಳು. ಆದರೆ ಅವಳ ಹುಡುಗಾಟ, ತುಂಟಾಟ, ಮುದ್ದು, ಪ್ರಕೃತಿಯೊಂದಿನ ಒಡನಾಟ ಇವಕ್ಕೆಲ್ಲಾ ಶಾಶ್ವತ ಪೂರ್ಣವಿರಾಮ ಹಾಕಿಬಿಟ್ಟಳು. ಇವತ್ತಿಗೂ ಅಷ್ಟೆ, ಅವಳ ಗಂಡನ ಬಗ್ಗೆ ಪ್ರಶ್ನಿಸಿದಾಗೆಲ್ಲಾ ಆಕೆ, ಹಿಂದೊಮ್ಮೆ ತಾನು ದ್ವೇಷಿಸುತ್ತಿದ್ದ ಅದೇ ಇಲಿ ಬೋಣನ್ನು ಹಿಡಿದು ನಿರ್ಭಾವುಕವಾಗಿ ಅಟ್ಟ ಹತ್ತುತ್ತಾಳೆ, ಅಷ್ಟೆ.

ಆದ್ರೆ, ಎಲ್ಲರನ್ನೂ, ಎಲ್ಲವನ್ನೂ ಎದುರಿಸಿ ತನಗೆ ಬದುಕು ಕಟ್ಟಿಕೊಟ್ಟ ಅವಳನ್ನು ಅವನೇಕೆ ದೂರ ಸರಿಸಿದ...? ಈ ಕ್ಷಣದವರೆಗೂ ನನಗರ್ಥ ಆಗಿಲ್ಲ.

ಗುರುವಾರ, ಮಾರ್ಚ್ 31, 2016

ಈ ಆರ್ದ್ರ ಭಾವಕ್ಕೆ ಸಾವಿಲ್ಲ.

ಇನ್ನೂ ಒಂದು ಕೈ ಮುಸುಕು ಮುಸುಕು ಬಣ್ಣದ, ಅಕ್ಷರಗಳು ಮಬ್ಬಾಗಿರುವ ಪತ್ರಗಳ ಕಟ್ಟಿನ ಮೇಲಿದೆ. ಅಂಗೈ ಪೂರ್ತಿ ನವಿರು ನೆನಪಿನ ಹುಡಿ. ಮನಸ್ಸಿನ ತುಂಬಾ  nostalogia ಗಳ ಕಲರವ. ಮೆದುಳಿನ ಪದರು ಪದರುಗಳಲ್ಲೂ ಒಂದು ಕಾಲಘಟ್ಟದ ಸ್ಥೂಲ ಚಿತ್ರಣ ತಣ್ಣಗೆ ಕದಲುತ್ತಿದೆ. ಪ್ರಪಂಚದ ಅಷ್ಟೂ ಮಧುರ ಅನುಭೂತಿಗಳು ನನ್ನೊಳಗೆ ಆವಿರ್ಭವಿಸಿ ನಾನೆಲ್ಲೋ ಗಾಳಿಯಲ್ಲಿ ತುಂಬಾ ಹಗುರಾಗಿ ತೇಲುತ್ತಿದ್ದೇನೇನೋ ಅನ್ನುವ ಭಾವ. ಅದೆಷ್ಟು ಹೊತ್ತಿಂದ ಹೀಗೆ ಪತ್ರಗಳ ಮೇಲೆ ಕೈಯಿಟ್ಟು ಒಂದು ಅನಿವರ್ಚನೀಯತೆಯನ್ನು ಅನುಭವಿಸುತ್ತಿದ್ದೇನೋ ನನಗೇ ಗೊತ್ತಿಲ್ಲ.

ಪತ್ರಗಳಿಗೆ, ಕೈ ಬರಹಗಳಿಗಿರುವ ಅಸಲೀ ತಾಕತ್ತೇ ಅದು. ಅದೆಷ್ಟು ವರ್ಷ ಕಳೆದ ಮೇಲೆ ಓದಿಕೊಂಡರೂ ಅವು ನಮ್ಮಲ್ಲೊಂದು ಆರ್ದ್ರ, ಆಪ್ತ ಭಾವವನ್ನು ಹುಟ್ಟಿಸುತ್ತವೆ. ಪತ್ರ ಬರೆದವರು ಇಲ್ಲೆಲ್ಲೋ ಇದ್ದರೇನೋ ಅನ್ನುವ ಮಧುರ ಅನುಭೂತಿಯನ್ನು ಸೃಷ್ಟಿಸುತ್ತದೆ. ಯಾಕೆಂದರೆ ಪತ್ರ ಬರೆಯುವಾಗ ಬರೆಯುವವನ ಮನಸ್ಥಿತಿಯಲ್ಲಿ ಏನು ಬರೆಯಬೇಕು, ಹೇಗೆ ಬರೆಯಬೇಕು ಅನ್ನುವ ಸ್ಪಷ್ಟ ಕಲ್ಪನೆಗಳಿರುತ್ತವೆ. ಪತ್ರ ಬರೆಯುವುದಕ್ಕಾಗಿಯೇ ಆತ ಒಂದು ಸಿದ್ಧತೆಯನ್ನು ಮಾಡಿಕೊಂಡಿರುತ್ತಾನೆ. ಆ ಸಿದ್ಧತೆಯೇ ಪತ್ರದ ಆಪ್ತತೆಯನ್ನು ವರ್ಷಗಟ್ಟಲೆ ಕಾಪಿಟ್ಟುಕೊಳ್ಳುವುದು.

ಈಗ ನನ್ನ ಕೈಯಲ್ಲಿರುವ ಪತ್ರಗಳು ಸರಿ ಸುಮಾರು ಮೂವತ್ತು ವರ್ಷಗಳಷ್ಟು ಹಿಂದಿನವು ಅಂದರೆ  1984-85 ರ ಆಸುಪಾಸಿನವು. ಅವಿನ್ನೂ ಅಮ್ಮನ ತಾರುಣ್ಯದ ದಿನಗಳು, ಬಹುಶಃ ಆಗಷ್ಟೇ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟಿದ್ದರು. ’ಪ್ರೀತಿಯ ಮಗಳೇ’ ಅಂತ ಪ್ರಾರಂಭವಾಗುವ ಪತ್ರದ ಪೂರ್ತಿ ತುಂಬಿರುವುದು ಅಮ್ಮನೆಡೆಗೆ ಅಜ್ಜನಿಗಿರುವ ವಾತ್ಸಲ್ಯ ಮತ್ತು ಅಂತ:ಕರಣಗಳೇ. ಗಂಡನ ಮನೆಯಲ್ಲಿ ಹೇಗೆ ನಡ್ಕೊಳ್ಳಬೇಕು ಅಂತ ಎಲ್ಲೂ ನೇರವಾಗಿ ವಿವರಿಸದಿದ್ದರೂ ಪ್ರತಿ ಪತ್ರದ ಆಂತರ್ಯದಲ್ಲಿ ಸುತ್ತಿ ಬಳಸಿ ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಒಂದು ಪುಟ್ಟ ಸಂದೇಶ ಇದ್ದೇ ಇದೆ. ಅತ್ತೆ, ಮಾವ, ನಾದಿನಿಯರು, ಮೈದುನಂದಿರು, ಓರಗಿತ್ತಿ ಹೀಗೆ ತುಂಬಿದ ಸಂಸಾರಕ್ಕೆ ಸೊಸೆಯಾಗಿ ಹೋದ ಮಗಳ ನಡೆ-ನುಡಿಯಲ್ಲಿ ಇರಬೇಕಾದ ನಾಜೂಕುತನ, ಹೊಂದಾಣಿಕೆಯ ಬದುಕಲ್ಲಿರುವ ಖುಶಿ, ತವರು ಮನೆಯೆಂಬ comfort zone ನಿಂದ ಹೊರಬಂದಾಗಾಗುವ ಸಹಜ ಚಡಪಡಿಕೆಗಳನ್ನು ಮೀರುವ ಬಗೆ, ನಾಲ್ಕು-ಐದು ಸಾಲುಗಳ ಪುಟ್ಟ ಪುಟ್ಟ ಝೆನ್ ಕಥೆಗಳು... ಹೀಗೆ ಅಕ್ಷರಗಳಲ್ಲೇ ಜೀವ, ಜೀವನ ಎರಡೂ ತುಂಬಿ ಕಳಿಸಿದಂತಿವೆ ಈ ಪತ್ರಗಳು. ಇನ್ನು ಅಮ್ಮ ಮೊದಲ ಬಾರಿ ಗರ್ಭಧರಿಸಿದಾಗಿನ ಪತ್ರಗಳ ತೂಕವೇ ಬೇರೆ. ಅವು ಹಾಲು ಕುಡಿ ಎಂಬಲ್ಲಿಂದ ಒಳ್ಳೆಯ ಪುಸ್ತಕಗಳನ್ನು ಓದು ಅನ್ನುವವರೆಗಿನ ಅತೀವ ಕಾಳಜಿ, ಇನ್ನೂ ಹುಟ್ಟದ ಮಗುವಿನ ಬಗ್ಗೆ ಅಜ್ಜ ನೇಯ್ದಿರಬಹುದಾದ ಕನಸಿನ ಕುಲಾವಿ, ಗರ್ಭಿಣಿ ಎಂದು ಗೊತ್ತಾದಮೇಲೂ ನೀನು ತವರಿಗೆ ಬಂದಿಲ್ಲ ಅನ್ನುವ ಹುಸಿಮುನಿಸು, ಮೊದಲ ಮೊಮ್ಮಗುವಿನ ನಿರೀಕ್ಷೆಯಲ್ಲಿ ಮನೆಯಲ್ಲಿ ಆರಂಭವಾಗಿರುವ ಸಿದ್ಧತೆ, ಹೊಟ್ಟೆಯಲ್ಲೊಂದು ಜೀವವಿದೆ ಅನ್ನುವುದನ್ನು ನೆನಪಿಟ್ಟುಕೊಂಡು ಇನ್ನಾದರೂ ಹತ್ತುವುದು-ಇಳಿಯುವುದನ್ನು ಕಡಿಮೆ ಮಾಡು ಅನ್ನುವ ಗದರಿಕೆಗಳ ಜೀವಂತ ಪ್ರತಿನಿಧಿಯಂತಿದೆ. ಉಳಿದಂತೆ ಮಾವನಿಗೆ ಪ್ರಮೋಷನ್ ಸಿಕ್ಕಿರುವುದು, ಚಿಕ್ಕಮ್ಮ ಋತುಮತಿಯಾಗಿರುವುದು, ಮನೆಯ ಕಪ್ಪು ಬೆಕ್ಕು ನಾಲ್ಕು ಮರಿ ಹಾಕಿರುವುದು, ಕೊಟ್ಟಿಗೆಯ ಮೂಲೆಯಲ್ಲಿ ಕಟ್ಟುವ ದನದ ಕಾಲಿಗೆ ಊರಿನ ಪೋಲಿ ಹುಡುಗರು ಕಲ್ಲೆಸೆದಿರುವುದು, ಮನೆಯ ಹಂಚು ಬದಲಾಯಿಸಿದ್ದು, ಪೆನ್ಷನ್ ಐವತ್ತು ರೂಪಾಯಿಗಳಷ್ಟು ಏರಿಕೆಯಾಗಿರುವುದು, ಪಂಚಾಯತ್ ಚುನಾವಣೆಯಲ್ಲಿ ಶಿಕ್ಷಿತರು ಆರಿಸಿ ಬಂದದ್ದು, ಊರ ಲೈಬ್ರೆರಿಯಲ್ಲಿ ಹೊಸ ಪುಸ್ತಕ ಬಂದಿರುವುದು, ಇನ್ನೂ ಓದಬೇಕಾಗಿರುವ ಅಬ್ರಹಾಂ ಲಿಂಕನ್ ನ ಜೀವನ ಚರಿತ್ರೆ... ಹೀಗೆ ಅಲ್ಲಿ ಉಲ್ಲೇಖವಾಗದ ವಿಷಯಗಳೇ ಇಲ್ಲ ಅನ್ನಬಹುದೇನೋ! ಅವನ್ನೆಲ್ಲಾ ಓದಿ ಸುಮ್ಮನೆ ಕಣ್ಣು ಮುಚ್ಚಿ ಕುಳಿತಾಗ, ನಾನು ಒಮ್ಮೆಯೂ ನೋಡಿಲ್ಲದ, ನೊಡಲಾಗದ ಕಾಲಘಟ್ಟದಲ್ಲೊಮ್ಮೆ ತಿರುಗಿ ಬಂದಂತಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಹಿಡಿದಿಟ್ಟುಕೊಂಡದ್ದು ಆ ಪತ್ರಗಳಲ್ಲಿನ ಆಪ್ತತೆ ಮತ್ತು ಆರ್ದ್ರತೆ. ಅಸಂಘಟಿತ ಬದುಕು ಅದೆಷ್ಟು ಅರ್ಥಪೂರ್ಣವಾಗಿ ದಾಖಲಿಸಲ್ಪಟ್ಟಿದೆಯಲ್ಲಾ ಅನ್ನುವ ಅಚ್ಚರಿ. ಪತ್ರಗಳು ಬದುಕನ್ನು ಈ ಪರಿ ಬಂಧಿಸಿಟ್ಟ, ಪ್ರಭಾವಿಸಿದ್ದ ಕಾಲದಲ್ಲಿ ನಾನಿನ್ನೂ ಹುಟ್ಟಿರಲಿಲ್ಲವಲ್ಲಾ ಅನ್ನುವ ಪುಟ್ಟ ಅಸೊಯೆ.

ಎಲ್ಲಿ ಹೋಯ್ತು ಆ ಆತ್ಮೀಯತೆ? ಆರ್ದ್ರತೆ? ಸಲಿಗೆ? ಇನ್ನೇನು ಪತ್ರ ಬಂದೇ ಬಿಡುತ್ತದೆ ಅನ್ನುವ ಕಾತುರತೆ? ಅಂಚೆಯಣ್ಣನ ಸೈಕಲ್ ಗಂಟೆಯ ಸದ್ದು ಕೇಳಿಸಿದಾಗೆಲ್ಲಾ ಗೇಟಿನ ಬಳಿ ಓಡಿ ಹೋಗಿ "ಅಣ್ಣಾ, ಪತ್ರ ಇದೆಯಾ?" ಅಂತ ಕೇಳುವ ತನ್ನವರೆಡೆಗಿನ ನಿರ್ಮಲ ಕಾಳಜಿಗಳು? ಪತ್ರ ಬರೆಯುವಾಗಿನ ಪ್ರೀತಿ, ಸ್ನೇಹ, ಹಸಿ ಹಸಿ ಪ್ರೇಮ? ಪತ್ರ ತಲುಪಿದ ಕೂಡಲೇ ಆ ಕಡೆ ಇರುವವರು ಪಡಬಹುದಾದ ಸಂಭ್ರಮದ ರಮ್ಯ ಕಲ್ಪನೆ? ಕಲ್ಪನೆಗಳಿಗಷ್ಟೇ ದಕ್ಕಬಹುದಾದ ಅನೂಹ್ಯತೆ? ಇನ್‍ಲ್ಯಾಂಡ್ ಲೆಟರ್‌ನ ಸಂದುಗೊಂದುಗಳಲ್ಲೂ ಬರೆದು ಪತ್ರದ ಪೂರ್ತಿ ಅಕ್ಷರ ತುಂಬುವ ಖುಶಿ? ವರ್ಷಗಟ್ಟಲೆ ಉಳಿದುಕೊಳ್ಳುವ ಮಾಧುರ‍್ಯತೆ? ಪ್ರತಿ fullstopನ ನಂತರ ಹೊಸದಾಗಿ ಆರಂಭವಾಗುವ ವಾಕ್ಯಗಳಂತೆ ಹೊಸತನಗಳಿಗೆ ಬದುಕು ತೆರೆದುಕೊಳ್ಳುವ ಪ್ರಕ್ರಿಯೆ?

Phone, email, SMS, mobile, whtasapp...ಮುಂತಾದವುಗಳು ನಮ್ಮಿಂದ ಪತ್ರ ಬರೆಯುವ ಸಂಸ್ಕೃತಿಯನ್ನು ಕಿತ್ತುಕೊಂಡಿವೆ ಅಂತ ನಾವೇನೋ ಸುಲಭವಾಗಿ ಅನ್ನುತ್ತೇವೆ. ಆದ್ರೆ ಅವೆಲ್ಲಾ ನಮ್ಮ ಭಾವಶೂನ್ಯತೆಗಳನ್ನು ಮುಚ್ಚಿ ಹಾಕಲು ನಾವು ಮುಂದಿಡುವ ನೆಪಗಳಷ್ಟೆ. ಈ ಧಾವಂತದ ಜೀವನದಲ್ಲಿ ಎಲ್ಲರನ್ನೂ, ಎಲ್ಲವನ್ನೂ ಯಾಂತ್ರೀಕೃತವನ್ನಾಗಿಸಿದ ನಮ್ಮಲ್ಲೀಗ ಇಲ್ಲದಿರುವುದು, ಪತ್ರ ಬರೆಯಲು ಬೇಕಾಗಿರುವ ತನ್ಮಯತೆ, ಅದನ್ನು ತಲುಪಿಸುವಲ್ಲಿನ ತಾದಾತ್ಮ್ಯತೆ, ಪ್ರತಿಪತ್ರದ ನಿರೀಕ್ಷಣೆ ಬೇಡುವ ತಾಳ್ಮೆ... ಇವೇ ಮುಂತಾದ ಸಹಜ ಭಾವುಕ ಅಭಿವ್ಯಕ್ತಿಗಳು. ನಾವೀಗ ಕಳೆದುಕೊಂಡಿರುವುದು, ಪತ್ರಗಳ ಮುಖೇನ ಇದಿರುಗೊಳ್ಳುವ ಸಂಭ್ರಮದ ಗಳಿಗೆಗಳನ್ನು ಹಾಗೇ ಇಡಿಇಡಿಯಾಗಿ ಹೃದಯದೊಳಕ್ಕೆ ಇಳಿಸಿಕೊಳ್ಳುವ ಅನನ್ಯ ಕಲೆಗಾರಿಕೆಯನ್ನು. 

ಈಗಾಗಲೇ ಕಾಲದ ಹರಿವಿನೊಂದಿಗೆ ಟೆಲಿಗ್ರಾಂ ಕೊನೆಯುಸಿರೆಳೆದಿದೆ. ನಮ್ಮ ಅಜ್ಜ, ಅಜ್ಜಿ, ಅಪ್ಪ, ಅಮ್ಮನ ಜತೆಗೆ ಕರುಳುಬಳ್ಳಿಗಳಿರುವ ಪತ್ರವೂ ಇನ್ನೊಂದಿಷ್ಟು ವರ್ಷಗಳ ನಂತರ ಅಸುನೀಗದಿರಬಾರದೆಂದರೆ ಕನಿಷ್ಠಪಕ್ಷ ವರ್ಷಕ್ಕೊಂದೆರಡು ಬಾರಿಯಾದರೂ ನಮ್ಮಾಪ್ತರಿಗೆ ಪತ್ರ  ಬರೆಯುವ ಪ್ರಯತ್ನಮಾಡೋಣ. ಯಾರಿಗೆ ಗೊತ್ತು ಕಳೆದು ಹೋದ ಸಂಬಂಧಗಳ ಮಾಧುರ್ಯಗಳು ಮತ್ತೆ ದಕ್ಕಲೂಬಹುದು.

ಬುಧವಾರ, ಮಾರ್ಚ್ 30, 2016

ಕೊಚ್ಚುವ, ಕೊಲ್ಲುವ, ಸುಡುವ ಈ ಕಾಲದಲ್ಲೂ...

ಬದುಕು ಅಪ್ಪನಂತೆ. ತಲೆ ನೇವರಿಸಿ ಮುದ್ದು ಮಾಡದೆ, ಲಾಲಿ ಹಾಡುತ್ತಾ ತಟ್ಟಿ ಮಲಗಿಸದೆ, ತಬ್ಬಿ ಕಣ್ಣೀರಿಡದೆ, ಪ್ರೈಜ್ ತಗೊಂಡಾಗೆಲ್ಲಾ ಪ್ರಶಂಸಿಸದೆ, ಒಂದು ನಿರ್ದಿಷ್ಟ ಅಂತರ ಕಾಯ್ದುಕೊಂಡೇ ಪಾಠ ಕಲಿಸುತ್ತದೆ, ಅಪರಿಚಿತರನ್ನು ಪರಿಚಿತರನ್ನಾಗಿಸುತ್ತದೆ. ಅದು ಕ್ಷಣ ಹೊತ್ತಿದ್ದು, ಮತ್ತೆ ಮರೆಯುವಂತಹ ಪರಿಚವಲ್ಲ. ತೋಳಮೇಲಿನ ಮಚ್ಚೆಯಂತೆ ಜೀವನ ಪೂರ್ತಿ ಕಾಡುವ, ಕಾಡಿಸುವ, ಬಿಟ್ಟೂ ಬಿಡದೆ ನೆನಪಾಗಿ ಉಳಿಯುವಂತಹ ಪರಿಚಯಗಳು. ಬದುಕಿನ ಪರಿಚಯಗಳಿಗೆ ಕ್ರಮಸಂಖ್ಯೆ, ಪುಟ ಸಂಖ್ಯೆ, ಪರಿವಿಡಿ, ಮುನ್ನುಡಿ, ಶಬ್ದಾರ್ಥ, ಆಮೇಲೊಂದಿಷ್ಟು ಪ್ರಶ್ನೆಗಳು... ಊಹೂಂ, ಯಾವುವೂ ಇರುವುದಿಲ್ಲ. ಅದು ಆಕಸ್ಮಿಕವಾಗಿ ಯಾರನ್ನೋ ಪರಿಚಯಿಸಿ ಅಷ್ಟೇ ಅನಿರೀಕ್ಷಿತವಾಗಿ ಒಂದು ಸಣ್ಣ ಸುಳಿವೂ ಕೊಡದಂತೆ ನಮ್ಮ ಜೀವನದಿಂದ ನಿರ್ಗಮಿಸುವಂತೆ ಮಾಡಿಬಿಡುತ್ತದೆ. ಆದ್ರೆ ಬದುಕು ಪರಿಚಯಿಸುವ ಕೆಲ ಪರಿಚಯಗಳು ಕೆಲವೇ ಗಂಟೆ ಅಥವಾ ನಿಮಿಷಗಳದಾಗಿದ್ದರೂ ಅದು ಕಾಡುವ ಪರಿ, ಉಳಿಸುವ ನೆನಪುಗಳು ಅನಂತ, ಅಪರಿಮಿತ.

ನಾನೀಗ ನಿಮಗೆ ಹೇಳಹೊರಟಿರುವುದೂ ಅನೀರಿಕ್ಷಿತವಾಗಿ ಭೇಟಿಯಾಗಿ, ಒಂದಿಷ್ಟು ನೆನಪುಗಳನ್ನು ಉಳಿಸಿ , ಅಷ್ಟೇ ಅನಿರೀಕ್ಷಿತವಾಗಿ ಬದುಕಿಂದ ಎದ್ದು ಹೋದ ಹಿರಿಯರೊಬ್ಬರ ಕುರಿತು. ಅವು ಪದವಿ ತರಗತಿಯ ಮೊದಲ ದಿನಗಳು. ಒಂದಿಡೀ ಸೆಮಿಸ್ಟರ್ ಹೊಸ ಪ್ರಪಂಚ, ಹೊಸ ಸ್ನೇಹ, ಹೊಸ ಸಂಬಂಧ, ಆಟ, ಹುಡುಗಾಟ, ಕಾಡು ಹರಟೆಗಳಲ್ಲೇ ಕಳೆದುಹೋಗಿತ್ತು. ಪರೀಕ್ಷೆಗೆ ಇನ್ನೇನು ಎರಡು ದಿನಗಳು ಉಳಿದಿವೆ ಅನ್ನುವಷ್ಟಾಗುವಾಗಲೇ ಪ್ರಯೋಗಾಲಯದ ಕೆಲಸಗಳು ಇನ್ನೂ ಮುಗಿದಿಲ್ಲ, ಸಬ್ಮಿಟ್ ಮಾಡಬೇಕಾದ ರೆಕಾರ್ಡ್ ಇನ್ನೂ ಸಿದ್ಧವಾಗಿಲ್ಲ ಅನ್ನುವುದು ತಿಳಿದದ್ದು. ಪರೀಕ್ಷೆಗಳಿಗೆ ಕೂರಬೇಕೆಂದರೆ ರೆಕಾರ್ಡ್ ಸಬ್ಮಿಟ್ ಮಾಡಲೇಬೇಕಿತ್ತು. ಸರಿ, ನಮ್ಮ ನಮ್ಮಲ್ಲೇ ಕೆಲಸ ಹಂಚಿಕೊಂಡು, ಒಂದೇ ದಿನದಲ್ಲಿ ಎಲ್ಲಾ ಕೆಲ್ಸ ಮುಗಿಸಿ, ಬೈಡಿಂಗ್ ಗೆಂದು ಕೊಡಲೇಬೇಕೆಂದು, ಅವುಡುಗಚ್ಚಿ ಕುಳಿತು, ಇಲ್ಲದ ಗಂಭೀರತೆಯನ್ನು ನಮ್ಮೊಳಗೆ ಆವಾಹಿಸಿಕೊಂಡು, ಬಾರದ ಔಟ್ ಪುಟ್, ಎರರ್ ತೋರಿಸುವ ಪ್ರೋಗ್ರಾಂ ಗಳನ್ನು ಬಯ್ಯುತ್ತಾ, ಅಂತೂ ಇಂತೂ ರೆಕಾರ್ಡ್ ಕೆಲಸ ಮುಗಿಸಿ, ಬೈಂಡಿಂಗ್ ಗೆಂದು ಕೊಟ್ಟು ಲ್ಯಾಬಿಂದ ಹೊರಬರುವಾಗ ಸರಿಯಾಗಿ ಆರು ಗಂಟೆ.

ಕಾಲೇಜಿಂದ ನಮ್ಮೂರಿಗೆ ಬರಲು ಎರಡು ಬಸ್ ಗಳನ್ನು ಮಧ್ಯದಲ್ಲಿ ಬದಲಾಯಿಸಬೇಕಿತ್ತು. ಅದೇಕೋ ಅವತ್ತು ಒಂದು ಬಸ್ ಬೇಗನೇ ಬಂದು ನಾನು ಆರೂವರೆ ಆಗುವಷ್ಟರಲ್ಲಿ ಮತ್ತೊಂದು ಬಸ್ ಸ್ಟಾಂಡ್ ಗೆ ತಲುಪಿಬಿಟ್ಟೆ. ಆದ್ರೆ ಇನ್ನೊಂದು ಬಸ್ ಗಾಗಿ ಎಷ್ಟು ಕಾದರೂ ಬರಲೇ ಇಲ್ಲ. ಸಮಯ ಸುಮ್ಮನೆ ಓಡುತ್ತಲೇ ಇತ್ತು. ಕೈಲಿದ್ದ ಮೊಬೈಲ್ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗಿತ್ತು. ಅದು ಬೇರೆ ರಂಝಾನ್ ತಿಂಗಳು. ಇಫ್ತಾರ್ ಸಮಯಕ್ಕಾಗುವಾಗಾದರೂ ಮನೆ ತಪುಪದಿದ್ದರೆ ಅಮ್ಮ ಗಾಬರಿ ಬಿದ್ದು ಬಿಡುತ್ತಾರೆ. ಮೇಲಾಗಿ ನಮ್ಮೂರಿಂದ ನಮ್ಮ ಕಾಲೇಜ್ ಗೆ ಹೋಗುವವಳು ನಾನೊಬ್ಬಳೇ ಇದ್ದುದ್ದರಿಂದ ಇನ್ಯಾರಿಂದಾದರೂ ಕೇಳಿ ತಿಳ್ಕೊಳ್ಳುವುದೂ ಸಾಧ್ಯ ಇರ್ಲಿಲ್ಲ. ಬಸ್ ಬೇಗ ಬರ್ಲಿ ಅಂತ ಪ್ರಾರ್ಥಿಸುವುದನ್ನು ಬಿಟ್ರೆ ನನಗಿನ್ಯಾವ ದಾರಿಯೂ ಉಳಿದಿರ್ಲಿಲ್ಲ.

ಒಂದಿಷ್ಟು ಹೊತ್ತು ಕಾದನಂತರ ಬಸ್ ಬಂತು, ಹತ್ತಿ ಕುಳಿತು, ಒಂದು ಮೆಸೇಜ್ ಮಾಡುವಷ್ಟಾದರೂ ಚಾರ್ಜ್ ಉಳಿದಿದ್ದರೆ... ಅನ್ನುವ ಆಸೆಬುರುಕತನದಿಂದ ಮೊಬೈಲ್ ಆನ್ ಮಾಡೋಕೆ ಪ್ರಯತ್ನಿಸಿ, ಅದು ಆಗುವುದಿಲ್ಲ ಅನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿ, ಎನೂ ಮಾಡಲಾಗದ ಅಸಹಾಯಕತೆಯಲ್ಲಿ ಧುಮುಗುಡುತ್ತಾ ಇರಬೇಕಾದರೆ, ಬಸ್ ಹೊರಟೇಬಿಟ್ಟಿತು. ತುಸು ರಿಲಾಕ್ಸ್ ಅನ್ನಿಸಿ ಇನ್ನೇನು ಸೀಟಿಗೆ ಒರಗಬೇಕು ಅನುವಷ್ಟರಲ್ಲಿ, ಬಸ್ ಒಮ್ಮೆಲೇ ನಿಂತಂತಾಯಿತು. ಕಂಡಕ್ಟರ್ ಇಳಿದು ಚೆಕ್ ಮಾಡಿ ನನಗರ್ಥವಾಗದ ಯಾವುದೋ ತಾಂತ್ರಿಕ ದೋಷವಾಗಿದೆ ಅಂತ ಡ್ರೈವರ್ ಗಂದು, ಪ್ರಯಾಣಿಕರನ್ನು ಉದ್ದೇಶಿಸಿ, ಈ ಬಸ್ ಮುಂದೆ ಹೋಗುವುದಿಲ್ಲ, ಇನ್ನೊಂದು ಬಸ್ ವ್ಯವಸ್ಥೆ ಮಾಡಿಕೊಡುತ್ತೇವೆ, ಅಲ್ಲಿಯವರೆಗೆ ಕಾಯಲೇಬೇಕು ಅಂದರು.

ನನ್ನ ಪರಿಸ್ಥಿತಿಗೆ ನನ್ನನ್ನೇ ಹಳಿದುಕೊಳ್ಳುತ್ತಾ, ನಡೆದಾದರೂ ಮನೆಗೆ ತಲುಪಬಹುದಾ ಅಂದುಕೊಳ್ಳುತ್ತಾ ಬಸ್ಸಿಂದ ಇಳಿದು ನೋಡಿದ್ರೆ, ಊಹೂಂ ನಡೆದು ತಲುಪಲಾಗದಷ್ಟು ದೂರದಲ್ಲಿ ಬಸ್ ಕೆಟ್ಟು ನಿಂತಿತ್ತು. ಮತ್ತೊಂದಿಷ್ಟು ಹೊತ್ತು ಅಲ್ಲಿ ಸುಮ್ಮನೆ ಕಾಲಹರಣ ಮಾಡಿ, ಏನು ಮಾಡಬೇಕೆಂದು ತೋಚದೆ ಅತ್ತಿತ್ತ ನೋಡುತ್ತಿರಬೇಕಾದರೆ ಮತ್ತೊಂದು ಬಸ್ ಬಂತು.

ಇನ್ನಾದರೂ ಮನೆ ತಲುಪಬಹುದಲ್ಲಾ ಅಂತ ನಿರಾಳವಾಗಿ, ಬಸ್ ಹತ್ತಿ ಕುಳಿತುಕೊಳ್ಳುವಷ್ಟರಲ್ಲಿ ಮಕ್ಕದ ಮಸೀದಿಯಿಂದ ಬಾಂಗ್ ಕೇಳಿಸಿತು. ಮತ್ತೆ ಅಮ್ಮನ ನೆನಪಾಗಿ ದಿಗಿಲು ಕಾಡತೊಡಗಿತು. ಎರಡು ಸೆಕೆಂಡ್ ಮಾತಾಡುವಷ್ಟಾದರೂ ಚಾರ್ಜ್ ಉಳಿದಿದ್ದರೆ ಅನ್ನುವ ’ರೆ’ ಸಾಮ್ರಾಜ್ಯದಲ್ಲಿ ವಿಹರಿಸುತ್ತಾ ಅಕ್ಕ ಪಕ್ಕ ಕಣ್ಣಾಡಿಸಿದೆ. ನನ್ನ ಹೊರತುಪಡಿಸಿ, ಪ್ರಯಾಣಿಕರು ಅಂತ ಬಸ್ಸಲ್ಲಿದ್ದುದು ಐವರು ಮಾತ್ರ. ಒಬ್ಬರೂ ಪರಿಚಯಸ್ಥರಿರಲಿಲ್ಲ.

ಮಸೀದಿ ಮಿನಾರದಿಂದ ಬಾಂಗ್ ಮೊಳಗುತ್ತಿತ್ತು. ನೇಸರ ಅದಾಗಲೇ ಪೂರ್ತಿ ಮರೆಯಾಗಿಬಿಟ್ಟಿದ್ದ. ಹೊರಗಿನ ಮ್ಲಾನ ಮುಸ್ಸಂಜೆಯ ವಿಷಣ್ಣತೆ ನನ್ನೊಳಗೂ ಆವರಿಸುತ್ತಿದೆಯೇನೋ ಅನಿಸತೊಡಗಿತು. ಅಷ್ಟರಲ್ಲಿ "ಮನೆಗೆ ಕಾಲ್ ಮಾಡೋಕಿತ್ತಾ?" ಅನ್ನುವ ಪ್ರಶ್ನೆಯೊಂದಿಗೆ, ಕಣ್ಣಮುಂದೆ ಮೊಬೈಲ್ ಹಿಡಿದು ಹಿರಿಯೊಬ್ಬರು ನಿಂತಿದ್ದರು. ತಲೆ ಎತ್ತಿ ನೋಡಿದೆ, ಅರ್ಧ ತೋಳಿನ ಅಚ್ಛ ಬಿಳಿ ಶರ್ಟ್, ಅಷ್ಟೇ ಬಿಳುಪಾಗಿದ್ದ ಧೋತಿ, ಕೊರಳಲ್ಲೊಂದು ರುದ್ರಾಕ್ಷಿ (ಅಥವಾ ಅದು ರುದ್ರಾಕ್ಷಿಯೇ ಅಂತ ನಾನಂದುಕೊಂಡಿದ್ದೆ) ಸರ, ಕೂದಲ ತುದಿಯಿಂದ ಹುಬ್ಬುಗಳ ಮಧ್ಯಕ್ಕೆ ಎಳೆದ ಕೆಂಪು ನಾಮ, ಕಣ್ಣಲ್ಲಿ ಸಾತ್ವಿಕ ಕಳೆ... ನನಗಾಗ ಹೆಚ್ಚಿನದೇನನ್ನೂ ಯೋಚಿಸುವಷ್ಟು ಸಮಯ ಇರಲಿಲ್ಲ.

ಮೊಬೈಲ್ ಇಸ್ಕೊಂಡು ಅಮ್ಮನಿಗೊಂದು ಫೋನ್ ಮಾಡಿ "ರೆಕಾರ್ಡ್ ಆಗಿರ್ಲಿಲ್ಲ, ಹಾಗಾಗಿ ಕಾಲೇಜಿಂದ ಹೊರಡುವಾಗ ಸ್ವಲ್ಪ ಲೇಟಾಯ್ತು, ಈಗ ಬಸ್ಸಲ್ಲಿದ್ದೇನೆ, ಇನ್ನೇನು ಇಪ್ಪತೈದು ನಿಮಿಷಗಳಲ್ಲಿ ಮನೆ ತಲುಪಿಬಿಡುತ್ತೇನೆ" ಅಂತ ಒಂದೇ ಉಸಿರಿಗೆ ಹೇಳಿ ಕಾಲ್ ಕಟ್ ಮಾಡಿ ಆ ಹಿರಿಯರಿಗೆ ಒಂದು ಥ್ಯಾಂಕ್ಸ್ ನೊಂದಿಗೆ ಫೋನ್ ಮರಳಿಸಿದೆ. ಮನೆ ತಲುಪಿದ ಮೇಲೆ ಜವಾಬ್ದಾರಿಗಳ ಬಗ್ಗೆ ಅಮ್ಮ ನೀಡುವ ಉಪನ್ಯಾಸ ಕೇಳೋದಕ್ಕೆ ಅದಾಗಲೇ ನಾನು ಮಾನಸಿಕ ತಯಾರಿ ಮಾಡಿಕೊಳ್ಳತೊಡಗಲಾರಂಭಿಸಿಯಾಗಿತ್ತು.

ಮತ್ತೊಂದೆರಡು ನಿಮಿಷ ಕಳೆಯುವಷ್ಟರಲ್ಲಿ ಅದೇ ಹಿರಿಯರು ಎರಡು ಹೋಳು ಸೇಬು, ಒಂದು ಬಾಟಲಿ ನೀರು, ಮತ್ತೊಂದು ಖರ್ಜೂರದೊಂದಿಗೆ ಮತ್ತೆ ನನ್ನ ಮುಂದೆ ಬಂತು ನಿಂತು  "ಈಗಾಗ್ಲೆ ಬಾಂಗ್ ಆಗಿದೆ, ಇಫ್ತಾರ್ ಸಮಯವೂ ಆಗಿಹೋಗಿದೆ, ಬಹುಶಃ ನೀನೂ ಉಪವಾಸಿಗಳೇ, ಇವಿಷ್ಟನ್ನೂ ತೆಗೆದುಕೊಂಡು ಇವತ್ತಿನ ಇಫ್ತಾರನ್ನು ಪ್ಪೊರೈಸಿಬಿಡು" ಅಂದರು. ನನಗೆ ಒಂದು ಕಡೆ ಅಚ್ಚರಿ, ಇನ್ನೊಂದು ಕಡೆಯಿಂದ ಅನುಮಾನ ಕಾಡತೊಡಗಿತು. ತೆಗೆದುಕೊಳ್ಳಬೇಕೋ ಬೇಡವೋ ಅನ್ನುವ ಸಂಘರ್ಷದಲ್ಲಿ ನಾನಿದ್ದೆ. ನಿರಾಕರಿಸಿದರೆ ಅವರ ಹಿರಿಯತನವನ್ನು ಅಗೌರವಿಸಿದಂತಾಗುತ್ತದೆ, ಹಾಗಂತ ಸ್ವೀಕರಿಸೋಕೆ ಅವರೇನು ನನ್ನ ಪರಿಚಯಸ್ಥರಲ್ಲ.

ಏನು ಮಾಡಬೇಕೆಂದು ತೋಚದೆ ನಾನು ಸುಮ್ಮನೆ ಕುಳಿತೆ, ಅವರೇ ಮೊದಲು ಖರ್ಜೂರ ನನ್ನ ಕೈಗಿತ್ತು ತಿನ್ನು ಅಂದರು, ಏನೂ ಮಾಡಲಾಗದೆ ನಾನು ನಿಧಾನವಾಗಿ ಖರ್ಜೂರ ಬಾಯಿಗಿಟ್ಟೆ, ಮತ್ತೆ ಅವರೇ ನೀರನ್ನೂ, ಸೇಬನ್ನೂ ಕೊಟ್ಟು ಮುಖ ತಿರುಗಿಸಿ ಕೂತು ಬಿಟ್ಟರು. ಅಷ್ಟು ಹೊತ್ತಿಗಾಗುವಾಗ ಅವರ ಮೇಲೆ ನನಗಿದ್ದ ಅನುಮಾನಗಳು ನಿಧಾನವಾಗಿ ಕರಗಲಾರಂಭಿಸಿತ್ತು.

ಮತ್ತೆ ಬಾಟಲ್ ಅವರ ಕೈಗೆ ಮರಳಿಸುತ್ತಾ ನಾನು "ಥ್ಯಾಂಕ್ಯೂ ಅಂಕಲ್, ನಿಮ್ಮ ಉಪಯೋಗಕ್ಕೆ ಅಂತ ತಂದಿದ್ದುದನ್ನು ನನ್ಗೆ ಕೊಟ್ರಲ್ಲಾ, ನೀವು ಒಳ್ಳೆಯತನಕ್ಕೆ ಏನನ್ನಬೇಕೋ" ತಿಳಿಯುತ್ತಿಲ್ಲ ಅಂದೆ. ಅವರು "ಅಂತಹ ದೊಡ್ಡ ಮಾತೆಲ್ಲಾ ಬೇಡ, ಇದು ಒಳ್ಳೆಯತನವಲ್ಲ, ನನ್ನ ಮನಸ್ಸಮಾಧಾನಕ್ಕಾಗಿ ಮಾಡುತ್ತಿರುವ ಕೆಲಸವಷ್ಟೆ. ಸರಿಯಾಗಿ ಐದು ವರ್ಷಗಳ ಹಿಂದೆ ಇಂಥದ್ದೇ ಒಂದು ರಂಝಾನ್ ತಿಂಗಳಲ್ಲಿ ಎದೆಯುದ್ದಕ್ಕೆ ಬೆಳೆದಿದ್ದ ಮಗನನ್ನು ಒಂದು ಆಕ್ಸಿಡೆಂಟ್ ನಲ್ಲಿ ಕಳೆದುಕೊಂಡು ಬಿಟ್ಟೆ. ನನಗಾದ ನೋವು, ಸಂಕಟಗಳನ್ನೆಲ್ಲಾ ಮರೆಯಲು ಅವತ್ತಿಂದ ಪ್ರತಿ ವರ್ಷ ರಂಝಾನ್ ತಿಂಗಳಲ್ಲಿ ಮನೆಯಿಂದ ಹೊರಡುವಾಗೆಲ್ಲಾ ಒಂದು ಖರ್ಜೂರ, ಸೇಬು ಮತ್ತು ನೀರಿನ ಬಾಟಲಿನೊಂದಿಗೆ ಹೊರಡುತೊಡಗಿದೆ. ಹೀಗೆ ನಿನ್ನಂತೆ ಬಸ್ಸಲ್ಲಿ, ಬಸ್ ಸ್ಟ್ಯಾಂಡಲ್ಲಿ ಯಾವುಯಾವುದೋ ಕಾರಣಗಳಿಂದ ಬಾಕಿಯಾಗುವವರು ಸಿಕ್ಕರೆ ಕೊಟ್ಟುಬಿಡುತ್ತೇನೆ. ಇಫ್ತಾರ್ ಮುಗಿಸಿದ ತೃಪ್ತಿ ಅವರದಾದರೆ, ಅವರ ತೃಪ್ತಿಯಲ್ಲಿ ನಾನೂ ಪಾಲುದಾರನಾದೆನಲ್ಲಾ ಅನ್ನುವ ಖುಷಿ ನನಗೆ. ಸತ್ತು ಬೂದಿಯಾದ ಮಗನ ಆತ್ಮ ಅಲ್ಲೆಲ್ಲೋ ನಳನಳಿಸುತ್ತಿರುತ್ತದೆ ಅನ್ನುವ ನಂಬಿಕೆ ನನ್ನದು, ಅಷ್ಟೆ" ಅಂದು ಮತ್ತೆ ಮೌನವಾದರು.

ಪರಸ್ಪರರನ್ನು ಅನುಮಾನಿಸುವ, ಕೊಚ್ಚುವ, ಕೊಲ್ಲುವ, ಸುಡುವ, ನಡುಬೀದಿಯಲ್ಲಿ ಬೆತ್ತಲಾಗಿಸುವ, ಧರ್ಮದ ಹೆಸರಿನಲ್ಲಿ ರಕ್ತದೋಕುಳಿಯಾಡುವ ಈ ಕಾಲದಲ್ಲೂ ಮಾನವ ಸಹಜ ಬಾಂಧವ್ಯಗಳು, ವಿಶ್ವ ಮಾನವನಾಗಿ ಹುಟ್ಟುವ ಮನುಷ್ಯನ ಸಹಜ ಅನುಭೂತಿಗಳು, ಮಾನವನಿಷ್ಠ ಸಂವೇದನೆಗಳು ಇಂತಹವರ ಹೃದಯದಲ್ಲಿ ಇನ್ನೂ ಉಸಿರಾಡುತ್ತಿವೆಯಲ್ಲಾ ಅನಿಸಿತು. ’ಅಂಕಲ್, ನಿಮ್ಮ ಹೆಸರು, ಊರು?’ ಅಂತ ಒಮ್ಮೆ ಕೇಳಹೊರಟೆ, ಮರುಕ್ಷಣ ಮನಸ್ಸು ’ಒಳ್ಳೆಯತನಕ್ಕೆ ವಿಳಾಸವಿಲ್ಲ, ಅದು ಹೆಸರು, ಊರು, ಕೇರಿ, ವಿಶೇಷಣಗಳ ಹಂಗಿಲ್ಲದೆ ಅರಳಿ ಸುತ್ತ ಹಗುರ ಸುಗಂಧ ಹಬ್ಬುವ ಹೂವಿನಂತೆ’ ಅಂದಿತು. ಅಷ್ಟು ಹೊತ್ತಿಗಾಗುವಾಗಾಗಲೇ ನಾನು ಇಳಿಯುವ ಸ್ಟಾಪ್ ಬಂತು. ಅವರಿಗೆ ಕೈ ಬೀಸಿ ಇಳಿದು, ಕತ್ತಲಲ್ಲೇ ತಡವರಿಸುತ್ತಾ ಮನೆ ತಲುಪಿ ಕಾಲಿಂಗ್ ಬೆಲ್ ಒತ್ತಿದೆ. ಅಮ್ಮ ಬಾಗಿಲು ತೆರೆದು "ಇಫ್ತಾರ್ ರೆಡಿಮಾಡಿಟ್ಟಿದ್ದೇನೆ, ಹೋಗಿ ಉಪವಾಸ ತೊರೆದುಬಿಡು" ಎಂದರು. ನಾನು "ಆಗ್ಲೇ ಬಸ್ಸಲ್ಲಿ ತೊರೆದಾಯ್ತು" ಅಂದೆ. ಅಮ್ಮ "ಬಸ್ಸಲ್ಲಾ?" ಪ್ರಶ್ನಿಸಿದರು. "ಹೂಂ, ತಾಯಿ ಮನಸ್ಸಿನ ಹಿರಿಯೊಬ್ಬರು ಬದುಕಲ್ಲಿ ಎಂದೂ ಮರೆಯಲಾಗದಂತಹ ಇಫ್ತಾರ್ ಆಯೋಜಿಸಿದ್ದರು" ಎಂದು ಒಳಸರಿದೆ. ಅಮ್ಮ ನನ್ನ ನೋಡುತ್ತಾ ನಿಂತರು.

ಸುಮ್ಮನೆ....

ಮಂಗಳವಾರ, ಫೆಬ್ರವರಿ 23, 2016

ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ...

ಅತ್ತ ಉರಿಬಿಸಿಲೂ ಅಲ್ಲದ ಇತ್ತ ತೀವ್ರ ಚಳಿಯೂ ಅಲ್ಲದ ಫೆಬ್ರವರಿ ತಿಂಗಳು. ಅದ್ಯಾವುದೋ ಒಂದು ಮನೆಯ ಜೋಕಾಲಿಯಲ್ಲಿ ಜೀಕುತ್ತಾ ಆಗಾಗ ಕತ್ತುಹೊರಳಿಸಿ ದಾರಿಯತ್ತ ನೋಡುವ ಹೂ ಮನಸಿನ ಹುಡುಗಿ. ಅವಳ ಕಣ್ಣಿನ ಕಣ ಕಣದಲ್ಲೂ ಇನ್ನೂ ಬರಲಿಲ್ಲವೇಕೆ ಅನ್ನುವ ಪ್ರಶ್ನೆ. ಬಾನಂಚು ಕೆಂಪಾದಷ್ಟೂ ಅವಳೆದೆ ಢವಢವ. ಕೈಯಲ್ಲಿದ್ದ ಪುಸ್ತಕದೊಳಗಿನ ಪತ್ರ ಯಾಕೋ ಅಣಕವಾಡುತ್ತಿದೆ ಅಂತನಿಸಲಾರಂಭಿಸುತ್ತದೆ. ಅಷ್ಟರಲ್ಲೇ 'ಕಿರ್ರ್' ಎಂದು ಮನೆಯ ಗೇಟ್ ತೆರೆಯುವ ಸದ್ದು. ಅವನ ತಂಗಿಯೋ, ಪಕ್ಕದ ಮನೆಯವಳೋ ಪುಟ್ಟದೊಂದು ಪತ್ರ,  ಒಂದು ಗ್ರೀಟಿಂಗ್ ಕಾರ್ಡ್ ಮತ್ತೊಂದು ನಗುವ ಗುಲಾಬಿ ಹೂವು... ಆಚೀಚೆ ನೋಡಿ ಯಾರೂ ನೋಡುತ್ತಿಲ್ಲ ಎಂದು ಖಾತ್ರಿ ಪಡಿಸಿಕೊಂಡು ಇವಳ ಕೈಗಿತ್ತು,  ಇವಳ ಕೈಯಲ್ಲಿನ ಪತ್ರವನ್ನು ಮೆಲ್ಲನೆ ತನ್ನ ಕೈಗೆ ತೆಗೆದುಕೊಂಡು ಮಾಯವಾಗುತ್ತಾಳೆ.

ಇತ್ತ ಹುಡುಗಿ ಅದೇ ಜೋಕಾಲಿಯಲ್ಲಿ ಜೀಕುತ್ತಾ ಹೂವನ್ನು ಮುಡಿಯಲೋ ಬೇಡವೋ ಅನ್ನುವ ಕನ್‍ಫ್ಯೂಸನ್‍ನಲ್ಲಿ ತುಟಿಗೊತ್ತಿ ಮಡಿಲಲ್ಲಿಟ್ಟುಕೊಂಡು ಗ್ರೀಟಿಂಗ್ ಕಾರ್ಡ್‌ನ ಮೇಲೆ ಕೈಯಾಡಿಸುತ್ತಾಳೆ. ಅವನ ಜೊತೆ ಬಾಳಬೇಕೆಂಬ ಅವಳ ಅಷ್ಟೂ ಬಣ್ಣಬಣ್ಣದ ಕನಸುಗಳ ನುಣುಪು ಅಂಗೈ ಮೇಲೆ ನರ್ತಿಸಲಾರಂಭಿಸುತ್ತವೆ. ಪತ್ರ ಬಿಚ್ಚಿದರೆ ಮುಗಿದೇ ಹೋಯಿತು, ಎಳೆಯ ಪಾರಿಜಾತ ಹೂವಿನ ಎಸಳೊಂದು ನಾಚಿ ಕಣ್ಣುಮುಚ್ಚಿ ಧರೆಯ ತಬ್ಬಿಕೊಂಡಂತಹಾ ನಾಜೂಕು. ಜೋಕಾಲಿಯ ಜೋಡಿ ಹಗ್ಗಗಳು ಧನ್ಯೋಸ್ಮಿ!

ಅಲ್ಲಿ ಹತ್ತು ಗಾವುದ ದೂರದ ಆ ಮನೆಯಲ್ಲಿ ಹುಡುಗ ಶತಪಥ ಹಾಕುತ್ತಾನೆ. ಯಾರದೋ ದಾರಿ ಕಾಯುತ್ತಿರುವಂತೆ ನಿಮಿಷಕ್ಕೆ ಅರುವತ್ತು ಬಾರಿ ತಲೆ ಎತ್ತಿ ಸುತ್ತ ದಿಟ್ಟಿಸುತ್ತಾನೆ. ತಾನು ಕಳುಹಿಸಿದ ಉಡುಗೊರೆ ಎಲ್ಲಿ ದಪ್ಪ ಮೀಸೆಯ ಅವಳಣ್ಣನ ಕೈಗೆ ಸಿಕ್ಕಿಬಿಡುತ್ತದೋ ಎಂದು ಸುಳ್ಳೇ ಸುಳ್ಳು ಕಲ್ಪಿಸಿಕೊಂಡು ಭಯಪಟ್ಟುಕೊಳ್ಳುತ್ತಾನೆ. ಪಲ್ಸ್ ರೇಟ್ ಅವನಿಗೇ ಕೇಳಿಸುವಷ್ಟು ಏರುತ್ತದೆ. ಅಷ್ಟರಲ್ಲಿ ಅವಳ ಮನೆಗೆ ಹೋಗಿದ್ದ ತಂಗಿ ಓಡೋಡಿ ಬಂದು ಪತ್ರ ಕೈಗಿಟ್ಟು ಕಣ್ಣು ಹೊಡೆಯುತ್ತಾಳೆ. ಅವನಿಗೀಗ ತಂಗಿಯೇ ಮೇಘದೂತೆ. ಉಜ್ಜಯಿನಿಯಿಂದ ಸ್ವತಃ ಕಾಳಿದಾಸನೇ ಬರೆದ ಪ್ರೇಮ ಕಾವ್ಯ ಹೊತ್ತು ತಂದವಳು ಅನ್ನುವ ಭಾವ. ತಂಗಿ 'ಹುಷಾರಣ್ಣಾ' ಅಂದು ಒಳಸರಿಯುತ್ತಾಳೆ.

ಹುಡುಗ ಅವಳ ಅಂಗೈ ಬೆವರಿನಿಂದ ತುಸು ಒದ್ದೆಯಾದ ಪತ್ರದ ಮೇಲೊಂದು ಹೂಮುತ್ತನ್ನಿಟ್ಟು ಮೆಲ್ಲನೆ ಬಿಡಿಸುತ್ತಾನೆ. ಅವಳ ದುಂಡು ಅಕ್ಷರಗಳಲ್ಲಿ ಅವಳೇ ಮೈದಾಳಿದ್ದಾನೇನೋ ಅನ್ನುವಷ್ಟು ಮೈಮರೆಯುತ್ತಾನೆ. ಈ ಪತ್ರ ಮುಗಿಯದಿರಲಿ ಭಗವಂತಾ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಿರುತ್ತಾನೆ. ಆದರೂ ಪತ್ರ ಮುಗಿಯುತ್ತದೆ.  ಕೊನೆಯಲ್ಲಿ ಆಕೆ ಬರೆದ 'ಅಲ್ಲಿ ದೂರದಲ್ಲಿ ನಿಂತು ನನ್ನ ಕೋಣೆಯ ಕಿಟಕಿಯೆಡೆ ಇಣುಕುವ ಚಂದ್ರನನ್ನು ಕಿಟಕಿಯೊಳಗೆ ತೂರದಂತೆ ನಿರ್ಬಂಧಿಸಿದ್ದೇನೆ. ನಿನಗೆಂದು ಆಸ್ಥೆಯಿಂದ ಎತ್ತಿಟ್ಟ ಅಷ್ಟೂ ಪ್ರೀತಿಯಲ್ಲಿ ಅವನು ಪಾಲು ಕೇಳುತ್ತಾನೇನೋ ಅನ್ನುವ ಭಯ ನನಗೆ ' ಎನ್ನುವ ಸಾಲನ್ನು ನೂರು ಬಾರಿ ಓದುತ್ತಾನೆ. ಆ ರಾತ್ರಿಯಿಡೀ ಅವನೆದೆಯ ಕವಲುಗಳಲ್ಲಿ ಸಹಸ್ರ ಸಂಭ್ರಮ ಜೋಕಾಲಿಯಾಡುತ್ತದೆ. ಅಲ್ಲವಳ ಕದಪುಗಳನ್ನು ಅನುರಾಗವೊಂದು ಅವುಚಿಕೊಳ್ಳುತ್ತದೆ. ಪಾರಿಜಾತ ಸುಮ್ಮನೆ ನಗುತ್ತದೆ, ಚಂದ್ರನಿಗೂ ಹೊಟ್ಟೆಕಿಚ್ಚು.

ತುಂಬಾ ಹಿಂದೆ ಹೋಗಬೇಕಂತೇನಿಲ್ಲ. ಕೇವಲ ನಾಲ್ಕು - ಐದು ವರ್ಷಗಳ ಹಿಂದೆ ಫೆಬ್ರವರಿ ಹದಿನಾಲ್ಕೆಂದರೆ ಇಷ್ಟು ಮತ್ತು ಇಷ್ಟು ಮಾತ್ರ ಆಗಿತ್ತು.  ಪ್ರತೀ ಪ್ರೇಮಿಯೆದೆಯಲ್ಲೂ ಪರಿಜಾತ ಅರಳುತ್ತಿತ್ತು. ಪ್ರತೀ ಪ್ರೇಮಿಯ ಮನೆಯ ಜೋಕಾಲಿಗೂ ಜೀವ ಜಿಗಿತುಕೊಂಡು ಬಿಡುತ್ತಿತ್ತು. ಆಗೆಲ್ಲಾ ಇಷ್ಟೊಂದು ಅಪ್ಲಿಕೇಷನ್‍ಗಳ ಆಪ್ಶನ್ ಇರಲಿಲ್ಲ.  Happy Valentine's day ಅನ್ನುವ ಶುಷ್ಕ ಮೆಸೇಜ್‍ಗಳೂ ಇರಲಿಲ್ಲ.  ಗೂಗಲ್‍ನಲ್ಲಿ ಪ್ರೇಮಿಗಳ ದಿನದ ರೆಡಿಮೇಡ್ ಶುಭಾಶಯಗಳು ಬಿಕರಿಗೆ ಇರಲೇ ಇಲ್ಲ.  ಎಲ್ಲಕ್ಕಿಂತ ಹೆಚ್ಚಾಗಿ ಅದೆಲ್ಲಿಂದಲೋ ಕದ್ದು, ಕಾಪಿ ಮಾಡಿ ತನ್ನವರಿಗೆ ಶುಭಾಶಯ ಕೋರಬೇಕಾದ ದರಿದ್ರತನ ಯಾವ ಪ್ರೇಮಿಗೂ ಇರಲಿಲ್ಲ. ಸಾವಿರ ಶತಮಾನಗಳ ಇತಿಹಾಸ ಇರುವ ಈ ದೇಶದ ಸಂಸ್ಕೃತಿ ನಮ್ಮಿಂದ ರಕ್ಷಿಸಲ್ಪಡಬೇಕಾದಷ್ಟು ಜಾಳುಜಾಳಾಗಿಲ್ಲ ಅನ್ನುವ ಕನಿಷ್ಠ ಪ್ರಜ್ಞೆ ಇಲ್ಲದ ಬಲಪಂಥದವರೂ, ಅವರು ವಿರೋಧಿಸಿದ್ದೆನ್ನೆಲ್ಲಾ ಮಾಡಲೇಬೇಕು ಅನ್ನುವ ವಿಚಿತ್ರ ಮನಸ್ಥಿತಿ ಇರುವ ಎಡಪಂಥೀಯರೂ ಇರಲಿಲ್ಲ.

ಪ್ರೀತಿಯ ಆ ತಪನೆ, ದೂರದಲ್ಲಿದ್ದುಕೊಂಡೇ ಪಡುವ ಖುಶಿ, ಕಾಯುವಿಕೆ, ವಿರಹ, ಬೆಳದಿಂಗಳ ಕವಿತೆ... ಎಲ್ಲವನ್ನೂ 4G ಸ್ಪೀಡಿನ ಅಪ್ಲಿಕೇಷನ್‍ಗಳು ಕಸಿದುಕೊಂಡುಬಿಟ್ಟಿವೆ. ಅಲ್ಲೆಲ್ಲೋ ಫೇಸ್‍ಬುಕ್‍ನ ಯಾವುದೋ ಪೇಜ್‍ನಲ್ಲಿ ಅವನು ಅಪ್ಡೇಟ್ ಮಾಡಿದ ಸ್ಟೇಟಸ್‍ಗೆ ಇವಳು ಲೈಕ್ ಕೊಡುತ್ತಾಳೆ.  ರಾತ್ರಿ ಮೆಸೆಂಜರ್‍ನಲ್ಲಿ ಹಾಯ್, ಹಲೋದಿಂದ ಆರಂಭವಾಗಿ ಮಾತು ಪ್ರೀತಿಯವರೆಗೆ ಬಂದು ನಿಲ್ಲುತ್ತದೆ.  ಮರುದಿನ ಮತ್ತಿನ್ಯಾವುದೋ ಒಂದು ಕಾಫೀ ಡೇಯಲ್ಲಿ ಎದುರಾ-ಎದುರು ಕೂತು ಕೋಲ್ಡ್ ಕಾಫಿ ಹೀರುತ್ತಾರೆ. ಅಲ್ಲಿಂದೆದ್ದು ಮಲ್ಟಿಪ್ಲೆಕ್ಸ್‌ವೊಂದರಲ್ಲಿ ಸಿನಿಮಾ ನೋಡಿ, ಅಲ್ಲಿಂದ ಮತ್ಯಾವುದೋ ಮಾಲ್‍ಗೆ ಭೇಟಿಕೊಟ್ಟು ಬೇಕಾದ್ದು,  ಬೇಡವಾದ್ದು ಎಲ್ಲಾ ಕೊಂಡು, ನಮ್ಮಿಬ್ಬರ ಟೇಸ್ಟ್ ಎಷ್ಟು ಸೇಮ್ ಅಲ್ವಾ ಅಂತ ಸುಳ್ಳೇ ಸುಳ್ಳು ಸಂಭ್ರಮಿಸಿ ಮನೆಗೆ ಮರಳುತ್ತಾರೆ. ರಾತ್ರಿ 'I'm in love with you' ಎಂದು ವಾಟ್ಸಾಪ್ ಮಾಡಿ ಜೊತೆಗೊಂದು ಗುಲಾಬಿ ಹೂವಿನ ಚಿತ್ರ ಕಳುಹಿಸುತ್ತಾರೆ. ಅಲ್ಲಿಂದಾಚೆ ಇಬ್ಬರೂ ತಾವು ಅಮರ ಪ್ರೇಮಿಗಳೆಂಬ ಅಪ್ಪಟ ಸುಳ್ಳನ್ನು ಸತ್ಯಸ್ಯ ಸತ್ಯ ಎಂಬಂತೆ ನಂಬುತ್ತಾರೆ.

ಒಂದಿಷ್ಟು ದಿನಗಳ ವೀಕೆಂಡ್ ಪಾರ್ಟಿ, ಲಾಂಗ್ ಡ್ರೈವ್‍ಗಳ ನಂತರ 4G ಸ್ಪೀಡ್ ಕಳೆದುಕೊಳ್ಳುತ್ತದೆ. ಸಂಬಂಧದ ವೀಣೆಯ ತಂತಿ ಸಡಿಲವಾಗುತ್ತದೆ. ಅವಳ ಪೋಟೋಗೆ ಅದ್ಯಾರೋ ಕಮೆಂಟಿಸಿದ 'awesome ' ಅನ್ನುವ ಕಮೆಂಟ್ ಇವನ ತಲೆಕೆಡಿಸುತ್ತದೆ. ಇವನ ಸ್ಟೇಟಸ್‍ಗೆ ಮತ್ಯಾವುದೋ ಹುಡುಗಿ ಬರೆದ ಮಾರುದ್ದದ ಕಮೆಂಟ್ ಅವಳ ನಿದ್ದೆಗೆಡಿಸುತ್ತದೆ. ಅವನು ವಿಪರೀತ ಪೊಸ್ಸೆಸಿವ್ ಅಂತ ಇವಳಿಗೂ, ಇವಳು ಮಹಾನ್ ಜಗಳಗಂಟಿ ಅಂತ ಅವನಿಗೂ ಅನಿಸಲಾರಂಭಿಸುತ್ತದೆ. ರಿಲೇಷನ್‍ಶಿಪ್ ಸ್ಟೇಟಸ್, 'ಇನ್ ಕಾಂಪ್ಲಿಕೇಷನ್ ' ಎಂದು ಬದಲಾಗುತ್ತದೆ. ಬೆಂಕಿಗೆ ತುಪ್ಪ ಸುರಿಯುವ ಫ್ರೆಂಡ್ಸ್ ನಿನ್ನಾಯ್ಕೆಯೇ ಸರಿ ಇಲ್ಲ ಎಂದು ಪದೇ ಪದೇ ಕುಯ್ಯತೊಡಗುತ್ತಾರೆ. ಪ್ರೀತಿ ಹುಟ್ಟಿದ ಅದೇ ವಾಟ್ಸಾಪ್‍ನಲ್ಲಿ 'lets breakup ' ಅನ್ನುವ ಮೆಸೇಜ್ ರವಾನೆಯಾಗುತ್ತದೆ. ಸಡಿಲಾಗಿದ್ದ ವೀಣೆಯ ತಂತಿ ಖಿಲ್ಲನೆ ತುಂಡಾಗುತ್ತದೆ.

ಇಬ್ಬರೂ ಒಂದಿಷ್ಟು ದಿನಗಳ ಕಾಲ ಭಗ್ನ ಪ್ರೇಮದ ಸ್ಟೇಟಸ್ ಬರೆದುಕೊಂಡು, ಪರೋಕ್ಷವಾಗಿ ಒಬ್ಬರನೊಬ್ಬರು ಜರೆಯುತ್ತಾ, ಕೆಲವೊಮ್ಮೆ ತಾನು ಮೂವ್ ಆನ್ ಆಗಿದ್ದೇನೆಂದು ಮತ್ತೊಬ್ಬರನ್ನು ನಂಬಿಸಲು ಸರ್ಕಸ್ ಮಾಡುತ್ತಾ, ವಿರಹಿಗಳು ಅನ್ನುವ ಟ್ಯಾಗ್‍ಲೈನ್ ಹಚ್ಚಿಸಿಕೊಂಡು ಓಡಾಡುತ್ತಾರೆ. ಮತ್ತೊಂದಿಷ್ಟು ದಿನಗಳ ನಂತರ ಎಲ್ಲವೂ ಸರಿ ಹೋಗುತ್ತದೆ.  ಅಥವಾ ಸರಿ ಹೋಗಿದೆ ಅಂದುಕೊಂಡು ಸತ್ತಿರೋ ಬೇರಿಗೆ ಮತ್ತೆ ನೀರು ಹನಿಸಲು ಮುಂದಾಗುತ್ತಾರೆ. ಎರಡೂವರೆ ಅಕ್ಷರಗಳ ಪ್ರೀತಿ ಒದ್ದಾಡುತ್ತಿರುತ್ತದೆ, ಜೀವ ಸುಮ್ಮನೆ ನೋಯುತ್ತಿರುತ್ತದೆ, ಬದುಕು ಗೊತ್ತೇ ಆಗದಂತೆ ಒಣಗುತ್ತಿರುತ್ತದೆ, ನಿನ್ನೆಗಳು ನಾಳೆಗಳ ನಿರ್ಮಲತೆಯನ್ನು ಕಬಳಿಸುತ್ತದೆ

ಊಹೂಂ, ಹಾಗಾಗಬಾರದು ನೋಡಿ. ನಿನ್ನೆಯ ಪ್ರತಿ ಕ್ಷಣಗಳು ನಾಳೆಯ ಕನ್ನಡಿಯ ಸ್ಪಷ್ಟ ಪ್ರತಿಬಿಂಬವಾಗಬೇಕು, ಹೀರಿದ ಕಾಫಿಯ ಪ್ರತಿಯೊಂದು ಸಿಪ್ಪಿನಲ್ಲೂ ಪ್ರೀತಿ ನಳನಳಿಸುತ್ತಿರಬೇಕು, ಇಟ್ಟ ಪ್ರತಿ ಹೆಜ್ಜೆಯ ನೆನಪು ಜೀವನ ಪೂರ್ತಿ ನವಿರು ಪ್ರೇಮ ಕಾವ್ಯದಂತೆ ಬದುಕಿನ ಒನಪನ್ನು ಕಾಯುತ್ತಿರಬೇಕು, ಒಂದು ಹಗಲು ಕಳೆಯುವಷ್ಟರಲ್ಲಿ ಮಾಡಿದ ಜಗಳದ ಅಷ್ಟೂ ಕುರುಹುಗಳು ಅಳಿದು ಹೋಗಬೇಕು.  ಮತ್ತು ಹೀಗೆಲ್ಲಾ ಆಗಬೇಕೆಂದರೆ, ಪ್ರೀತಿಯಲ್ಲಿ ದುಡುಕಿರಬಾರದು. ಪರಸ್ಪರರ ಭಿನ್ನತೆಯನ್ನು ಒಪ್ಪಿಕೊಳ್ಳುವ ವಿಶಾಲ ಮನೋಭಾವವಿರಬೇಕು, ಸಹನೆ ಇರಬೇಕು.

ಇಷ್ಟಿದ್ದರೆ ಸಾಕು, 'ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ...' ಎಂದು ಪ್ರೀತಿ ಹಾಡತೊಡಗುತ್ತದೆ. ಮತ್ತೆ ಮತ್ತೆ ಮಳೆ ಹುಯ್ಯುತ್ತದೆ, ಜೀವ ಹಸಿರಾಗುತ್ತದೆ.

ಬುಧವಾರ, ಫೆಬ್ರವರಿ 10, 2016

ರತ್ನಕ್ಕಳ ಪರಿವಾಳದ ಕಥೆ ಮತ್ತು ರೋಹಿತ್ ವೇಮುಲ

ಅದಿನ್ನೂ ಅಕ್ಷರಗಳ ಪರಿಚಯವಾಗಿ ಪುಸ್ತಕ ಪ್ರಪಂಚದೊಳಗೆ ಸಣ್ಣದಾಗಿ ಕುತೂಹಲ ಬೆಳೆಸಿಕೊಳ್ಳುತ್ತಿದ್ದ ವಯಸ್ಸಷ್ಟೆ. ಬಾಲಮಂಗಳ, ಚಂದಮಾಮಗಳೇ ನಮ್ಮ ಪಾಲಿನ ಪವಿತ್ರ ಗ್ರಂಥಗಳಾಗ. ಕಥೆಗಳ ಅದ್ಭುತ ಲೋಕ ನಮ್ಮಿದಿರು ತೆರೆದುಕೊಳ್ಳುತ್ತಿದ್ದರೆ, ಎಲ್ಲೋ ದೂರದಲ್ಲಿ ನಮಗರಿಯದ ಪ್ರಪಂಚವೊಂದಿದೆ, ಅಲ್ಲಿ ಡಿಂಗ ಲಂಬೋದರ, ಪಕ್ರು , ಚಂದಮಾಮದ ಚೆಂದದ ರಾಜಕುಮಾರ, ಚಂಪಕದ ಪರಮಾದ್ಭುತ ಚಂಪಕ ವನವಿದೆ ಅನ್ನುವ ಕಲ್ಪನೆಗಳೆಲ್ಲಾ ಮೊಳಕೆಯೊಡೆಯುತ್ತಿದ್ದ ಕಾಲ.

ಅಂತಹ ಬದುಕು ನಿಧಾನವಾಗಿ ಹರಳುಗಟ್ಟುವ ಕಾಲದಲ್ಲಿ ನಮ್ಮನೆಗೆ ತೋಟದ ಕೆಲಸಕ್ಕೆಂದು ಬರುತ್ತಿದ್ದ ಅದ್ಭುತ ಮಹಿಳೆಯೇ ರತ್ನಕ್ಕ. ಆಕೆ ಎಲ್ಲರಂತೆ ವಾರದ ಎಲ್ಲಾ ದಿನ ಬರುತ್ತಿರಲಿಲ್ಲ, ಶನಿವಾರ ಗಂಟೆ ಏಳಾಗುತ್ತಿದ್ದಂತೆ ಹಿತ್ತಲ ಕಡೆ ಬಂದು 'ಅಕ್ಕಾ' ಎಂದು ಕೂಗುತ್ತಿದ್ದಳು. ಆಕೆ ಬಂದಳೆಂದರೆ, ಅಮ್ಮನಿಗೆ ವಿಪರೀತ ಸಂಭ್ರಮ. ತನ್ನನ್ನು ಹೊರತು ಪಡಿಸಿ ಇನ್ನೊಂದು ಹೆಣ್ಣು ಜೀವವಿಲ್ಲದ ಮನೆಯಲ್ಲಿ ಮತ್ತೊಂದು ಕೈಯ ಬಳೆಗಳ ಸದ್ದು ಆಲಿಸಬಹುದಲ್ವಾ ಅನ್ನುವ ಖುಶಿಯದು. ಆಕೆ ಶನಿವಾರ ಮನೆಗೆ ಬಂದರೆ ಮತ್ತೆ ಹೋಗುತ್ತಿದ್ದುದು ಭಾನುವಾರ ಮುಸ್ಸಂಜೆಯೇ. ಅಲ್ಲಿಯವರೆಗೆ ಅಮ್ಮನ ಮತ್ತು ರತ್ನಕ್ಕನ ಭರಪೂರ ಮಾತುಕತೆಗೆ ಮನೆಯ ಗೋಡೆ, ಬಾಗಿಲುಗಳೇ ಸಾಕ್ಷಿ.

ಆದರೆ ರತ್ನಕ್ಕ ಮಾತು ಶುರುವಿಟ್ಟುಕೊಳ್ಳುತ್ತಿದ್ದಂತೆ ಅಮ್ಮ ನನ್ನ ಕೈಗೊಂದು ಬಾಲಮಂಗಳವೋ ಇಲ್ಲ ಚಂದಮಾಮವನ್ನೋ ಕೊಟ್ಟು ಬಲವಂತವಾಗಿ ಸಾಗಹಾಕುತ್ತಿದ್ದರು. ಯಾಕೆಂದರೆ ಆಕೆ ಬಳಸುತ್ತಿದ್ದ ಕೆಲವು 'ಗೌರವ ಪೂರ್ವಕ' ಪದಗಳು ನನ್ನ ಕಿವಿಗೆ ಬಿದ್ದು, ನಾನದನ್ನು ಮತ್ತೆಲ್ಲಾದರೂ ಬಳಸಿಬಿಟ್ಟೇನು ಅನ್ನುವ ಹಿಂಜರಿಕೆ ಅಮ್ಮನಿಗಿತ್ತು. ಹಿಂದೊಮ್ಮೆ ಹಾಗೇ ಕೇಳಿಸಿಕೊಂಡ 'ವಿಶೇಷ ಪದ'ಗಳನ್ನು ನಾನು ಬಳಸಿ ಅಮ್ಮ ಅಜ್ಜನಿಂದ ಬೈಸಿಕೊಂಡಿದ್ದರು. ಆಮೇಲೆಲ್ಲಾ ಅಮ್ಮ ರತ್ನಕ್ಕನ ಜೊತೆ ಮಾತನಾಡಬೇಕಾದರೆ ನನ್ನ ದೂರ ಕಳುಹಿಸುತ್ತಿದ್ದರು.

ಆದರೆ ನನಗದೆಲ್ಲಾ ಅರ್ಥವಾಗುವ ವಯಸ್ಸಲ್ಲ. ನನಗೆ ರತ್ನಕ್ಕ ಎಂದರೆ ಆ ಕಾಲದಲ್ಲಿ ಅಲ್ಲಾವುದ್ದೀನನ ಅದ್ಭುತ ದೀಪದಂತೆ. ಮೊಗೆದಷ್ಟೂ ಮುಗಿಯದ ಜಾನಪದ ಕಥೆಗಳ ಸಂಗ್ರಹ. ಆಕೆ ಹಿತ್ತಲ ಬಾಗಿಲಲ್ಲಿ ನಿಂತು 'ಅಕ್ಕಾ' ಅನ್ನುತ್ತಿದ್ದಂತೆ ನಾನು 'ರತ್ತಕ್ಕಾ' ಅನ್ನುತ್ತಾ ಆಕೆಯೆಡೆ ಓಡುತ್ತಿದ್ದೆ. ಆಕೆ ನನ್ನನ್ನು ಮಡಿಲಲ್ಲಿ ಕೂರಿಸಿ 'ರತ್ತಕ್ಕ ಅಲ್ಲ, ರತ್ನಕ್ಕ. ಎಲ್ಲಿ ಹೇಳು ರ..ತ್...ನ...ಕ್ಕಾ' ಅನ್ನುತ್ತಿದ್ದರೆ, ನಾನು ಬಿಡಿಬಿಡಿಯಾಗಿ ರ ತ್ ನ ಕ್ಕ ಅಂದರೂ ಒಟ್ಟಿಗೆ ಹೇಳುವಾಗ ರತ್ತಕ್ಕನೇ ಆಗುತ್ತಿತ್ತು. ಆಗೆಲ್ಲಾ ಆಕೆ ಕೆನ್ನೆ ಹಿಂಡಿ ತಲೆ ಮೇಲೊಂದು ಮೊಟಕಿ ಸುಮ್ಮನೆ ನಗುತ್ತಿದ್ದಳು.

ತಲೆ ಬಾಚಿಸಿಕೊಳ್ಳುವುದೆಂದರೆ ಆಟ ಆಡುವ ಅಮೂಲ್ಯ ಸಮಯವನ್ನು ವ್ಯರ್ಥವಾಗಿ ಕಳೆಯುವುದು ಅಂತ ತುಂಬಾ ದೃಢವಾಗಿ ನಂಬಿದ್ದ ಸಮಯವದು. ಅಮ್ಮ ತಲೆಬಾಚಲು ಬಂದರೆ, ಬಾಚಣಿಗೆ ಮೊಂಡಾಗಿದೆ ಅಂತಲೋ, ಎಣ್ಣೆ ಜಾಸ್ತಿ ಆಯ್ತು (ಕೆಲವೊಮ್ಮೆ ಕಡಿಮೆ ಆಯ್ತು)ಅಂತಲೋ, ತಲೆ ನೋವಾಗುತ್ತಿದೆ ಅಂತಲೋ ನೂರೆಂಟು ಕಾರಣ ಹೇಳಿ ಅಮ್ಮನನ್ನು ಹೈರಾಣಾಗಿಸುತ್ತಿದ್ದೆ. ರತ್ನಕ್ಕ ಮನೆಯಲ್ಲಿದ್ದರೆ ಅಮ್ಮ ನನ್ನನ್ನು ಅವರ ಕೈಗೊಪ್ಪಿಸಿ ಹಾಯಾಗಿರುತ್ತಿದ್ದರು.

ಆಕೆ ನನ್ನನ್ನು ಪಕ್ಕ ಕೂರಿಸಿಕೊಂಡು ಕಥೆ ಹೇಳುತ್ತಾ ತಲೆ ಬಾಚುತ್ತಿದ್ದರು. ಮತ್ತು ಆ ಕಾರಣಕ್ಕಾಗಿಯೇ ನನಗವರು ತುಂಬಾ ಅದ್ಭುತ ಅಂತ ಅನ್ನಿಸಿಬಿಡುತ್ತಿದ್ದುದು. ಅವತ್ತವರು ನನಗೆ ಹೇಳಿದ ಕಥೆಗಳಲ್ಲಿ ಒಂದನ್ನು ಹೆಕ್ಕಿ ನಿಮಗೂ ಹೇಳುತ್ತೇನೆ ಕೇಳಿ.

ಒಂದೂರಲ್ಲಿ ಬಿಳಿ ಪಾರಿವಾಳಗಳ ಒಂದು ಪುಟ್ಟ ಹಿಂಡಿತ್ತಂತೆ. ಕತ್ತಿನ ಸುತ್ತ ನೀಲಿ ಗರಿಗಳಿದ್ದ, ಉದ್ದ ಬಾಲವಿದ್ದ ಪರಿವಾಳ ಆ ಹಿಂಡಿನ ನಾಯಕ. ಹಿಂಡಿನಲ್ಲಿದ್ದ ಪ್ರತಿ ಪಾರಿವಾಳಕ್ಕೂ ನಾಯಕನೆಂದರೆ ಅಪಾರ ಗೌರವ. ಹಾಗೆಯೇ ನೀಲಿಗರಿಗಳ ಪಾರಿವಾಳಕ್ಕೆ ಇತರ ಪರಿವಾಳಗಳೆಂದರೆ ಅಮೋಘ ಪ್ರೀತಿ. ಸ್ವಚ್ಛಂದವಾಗಿ ಹಾರಾಡುತ್ತಾ, ತಾವಿರುವಲ್ಲೆಲ್ಲಾ ಆ ಪರಿವಾಳಗಳು ಖುಶಿ ಹಂಚುತ್ತಿದ್ದವು.

ನಮ್ಮಂತಹ ಮನುಷ್ಯರು ಗೂಡಲ್ಲಿ ಬಂಧಿಸಿಟ್ಟ ಹಕ್ಕಿಗಳಿಗೆ ಸಾಂತ್ವನ ಹೇಳುತ್ತಾ, ರೆಕ್ಕೆ ಮುರಿದ ಹಕ್ಕಿಗಳಿಗೆ ಶುಶ್ರೂಶೆ ಮಾಡುತ್ತಾ, ಹಾರಲು ಮರೆತ ಹಕ್ಕಿಗಳಿಗೆ ಹಾರಲು ಕಲಿಸುತ್ತಾ ಯಾರನ್ನೂ ದ್ವೇಷಿಸದೆ, ಎಲ್ಲರನ್ನೂ ಪ್ರೀತಿಸುತ್ತಾ, ಒಂದೇ ಒಂದು ಕಾಳು ಆಹಾರ ಸಿಕ್ಕರೂ ಹಿಂಡಿನ ಎಲ್ಲಾ ಪರಿವಾಳಗಳಿಗೂ ಹಂಚಿ ತಿನ್ನುತ್ತಾ ಬದುಕುತ್ತಿದ್ದವು.

ಒಂದು ದಿನ ಆ ಹಿಂಡಿನ ಪರಿವಾಳವೊಂದು ಹಾಡುತ್ತಾ ಆಕಾಶದೆತ್ತರಕ್ಕೆ ಹಾರುತ್ತಿದ್ದಾಗ ನೆಲದಲ್ಲಿ ಬಿದ್ದು ಚಡಪಡಿಸುತ್ತಿದ್ದ ಹದ್ದೊಂದು ಅದರ ಕಣ್ಣಿಗೆ ಬಿತ್ತು. ತನ್ನ ಬಳಗವನ್ನೆಲ್ಲಾ ಕರೆದು ಅದಕ್ಕೆ ಚಿಕಿತ್ಸೆ ಆರಂಭಿಸಿಯೇ ಬಿಟ್ಟಿತು. ಒಂದು ಪಾರಿವಾಳ ಎಲ್ಲಿಂದಲೋ ಎಲೆಯನ್ನು ಹುಡುಕಿ ತಂದರೆ, ಮತ್ತೊಂದು ಅದನ್ನು ತನ್ನ ಕೊಕ್ಕಿನಲ್ಲೇ ಜಜ್ಜತೊಡಗಿತು. ಮಗದೊಂದು ಮತ್ತೆಲ್ಲಿಂದಲೋ ನೀರು ಹುಡುಕಿ ತಂತು, ಮತ್ತಿನ್ನೊಂದು ಹದ್ದಿನ ರೆಕ್ಕೆಗಳನ್ನು ಮೃದುವಾಗಿ ನೇವರಿಸತೊಡಗಿತು... ಹೀಗೆ ಎಲ್ಲಾ ಪರಿವಾಳಗಳು ಹದ್ದಿನ ಶುಶ್ರೂಶೆ ಮಾಡುತ್ತಿದ್ದರೆ, ನೀಲಿ ಗರಿಗಳ ನಾಯಕ ಪರಿವಾಳ ದೂರ ನಿಂತು ತನ್ನ ಪರಿವಾರದ ಒಳ್ಳೆಯತನವನ್ನು ಕಣ್ತುಂಬಿಕೊಳ್ಳುತ್ತಿತ್ತು.

ಹಾಗೂ ಹೀಗೂ ಹದ್ದು ಕಣ್ತೆರೆಯಿತು. ಪಾರಿವಾಳಗಳೆಲ್ಲಾ ಖುಶಿಯಿಂದ ಚಪ್ಪಾಳೆ ತಟ್ಟುತ್ತಾ ಮತ್ತೆ ಆಕಾಶಕ್ಕೇರಲು ರೆಕ್ಕೆ ಕೊಡವಿಕೊಂಡವು. ಅಷ್ಟರಲ್ಲಿ ಹದ್ದು, ನನ್ನ ಜೀವ ಉಳಿಸಿದ ನೀವುಗಳು ನನ್ನ ಪಾಲಿಗೆ ದೇವರಾದ್ರಿ. ಕಣ್ಣಿಗೊತ್ತಿಕೊಂಡು ನಿಮ್ಮ ಪೂಜಿಸೋಣ ಅಂದರೆ ನೀವದನ್ನು ಒಪ್ಪಲಾರಿರಿ. ಕೊನೆಪಕ್ಷ ನಿಮ್ಮ ಜೊತೆಗಾದರೂ ಇರಲು ಅವಕಾಶ ಕೊಡಿ ಅಂದಿತು.

ಪಾರಿವಾಳಗಳೆಲ್ಲಾ ನಾಯಕನ ತೀರ್ಮಾನವೇನು ಎಂಬಂತೆ ಅದರತ್ತ ನೋಡಿದವು. ಒಂದೆರಡು ಕ್ಷಣ ಯೋಚಿಸಿ ಸ್ವಲ್ಪ ಅನುಮಾನ ಮೂಡಿದರೂ, ಸ್ನೇಹ ಬಯಸಿ ಬಂದವರನ್ನು ದೂರ ತಳ್ಳಬಾರದು ಎಂದು ಜೊತೆಗಿರಲು ಒಪ್ಪಿಗೆ ಕೊಟ್ಟಿತು.

ಅಂದಿನಿಂದ ಬಿಳಿ ಪಾರಿವಾಳಗಳ ಹಿಂಡಿಗೆ ಹದ್ದೂ ಸೇರಿಕೊಂಡಿತು. ಕೆಲವೇ ದಿನಗಳಲ್ಲಿ ಎಲ್ಲರ ವಿಶ್ವಾಸವನ್ನು ಗಳಿಸಿಕೊಂಡಿತು. ಮೊದ ಮೊದಲು ಅನುಮಾನ ಪಟ್ಟರೂ ನಿಧಾನವಾಗಿ ನೀಲಿ ಗರಿಗಳ ಪಾರಿವಾಳಕ್ಕೂ  ಹದ್ದಿನ ಮೇಲೆ ನಂಬಿಕೆ ಮೂಡತೊಡಗಿತು.

ಇದನ್ನೇ ಕಾಯುತ್ತಿದ್ದಂತೆ ಹದ್ದು ಮೆಲ್ಲಮೆಲ್ಲನೆ ತನ್ನ ನೀಚತನ ತೋರಿಸಲಾರಂಭಿಸಿತು. ಮೊದಲಿಗೆ, ಒಗ್ಗಟ್ಟಿನಿಂದಿದ್ದ ಪರಿವಾಳಗಳ ಮಧ್ಯೆಯೇ ಒಡಕು ಮೂಡಿಸಿತು. ಖುಶಿ ಖುಶಿಯಾಗಿದ್ದ ಪಾರಿವಾಳಗಳ ಹಿಂಡನ್ನು ಎರಡು ಗುಂಪು ಮಾಡಿಬಿಟ್ಟು ಎರಡರ ನಡುವೆ ಕಿಚ್ಚು ಹಚ್ಚಿತು. ಒಂದಾಗಿದ್ದ ಪರಿವಾಳಗಳು ಕಿತ್ತಾಟ ಶುರುವಿಟ್ಟುಕೊಂಡವು. ದಿನೇದಿನೇ ಪಾರಿವಾಳಗಳ ನಡುವಿನ ಜಗಳ ಏರುತ್ತಾ ಹೋಯಿತು. ಇಷ್ಟಾದರೂ ಅವಕ್ಕೆ ತನ್ನ ನಾಯಕನ ಮೇಲಿದ್ದ ಗೌರವ, ನಂಬಿಕೆ ಕಡಿಮೆಯಾಗಿರಲಿಲ್ಲ.

ಇದನ್ನು ಸಹಿಸದ ಹದ್ದು, ಮೊದಲು ಆ ಪರಿವಾಳವನ್ನು ಮುಗಿಸಿಬಿಡಬೇಕು ಎಂದು ಯೋಚಿಸಿತು. ಮತ್ತು ಎರಡೂ ಗುಂಪುಗಳಿಂದ ಒಂದೊಂದು ಪಾರಿವಾಳವನ್ನು ಕೊಂದು ತಿಂದು, ಎರಡೂ ಗುಂಪುಗಳು ಪರಸ್ಪರ ಜಗಳವಾಡುವಂತೆ ಮಾಡಿತು. ಅಷ್ಟೇ ಅಲ್ಲ ತಿಂದ ಮುಳ್ಳುಗಳನ್ನು ಯಾರಿಗೂ ಗೊತ್ತಾಗದಂತೆ ಮಲಗಿದ್ದ ನಾಯಕನ ಕಾಲಡಿ ತಂದಿಟ್ಟಿತು.

ಆ ಪರಿವಾಳ ನಿದ್ದೆಯಿಂದ ಏಳುವಾಗ ತನ್ನ ಪ್ರೀತಿಯ ಪರಿವಾರ  ಭೀಕರವಾಗಿ ಜಗಳವಾಡುತ್ತಾ ಪರಸ್ಪರರನ್ನು ತನ್ನ ಕೊಕ್ಕಿನಿಂದ ತಿವಿಯುತ್ತಿದುದ್ದನ್ನು ನೋಡಿ ಜಗಳ ನಿಲ್ಲಿಸಬೇಕೆಂದು ಹೊರಟಿತು. ಅಷ್ಟರಲ್ಲಿ ಅದನ್ನು  ತಡೆದ ಹದ್ದು, ಈ ಜಗಳಕ್ಕೆಲ್ಲಾ ನೀವೇ ಕಾರಣ, ನೀವು ಪಾರಿವಾಳಗಳನ್ನು ಕೊಂದು ತಿಂದುದರಿಂದ ಅವು ಜಗಳವಾಡುತ್ತಿವೆ ಅಂದಿತು. ಆ ನೀಲಿ ಗರಿಯ ಪರಿವಾಳ ತಾನು ಯಾರನ್ನೂ ಕೊಂದಿಲ್ಲ ಅಂದಾಗ ಹದ್ದು ಕಾಲಡಿಯತ್ತ ತೋರಿಸಿ ಮತ್ತೆ ಈ ಎಲುಬುಗಳು ಇಲ್ಲಿಗೆ ಹೇಗೆ ಬಂತು ಎಂದು ಪ್ರಶ್ನಿಸಿತು.

ಆಗ ಪರಿವಾಳವೂ ಗೊಂದಲದಲ್ಲಿ ಬಿತ್ತು. ತಾನು ತಿಂದೇ ಇಲ್ಲ ಎಂದು ಗೊತ್ತಿದ್ದರೂ ಕಣ್ಣೆದುರಿನ ಸತ್ಯ ಮತ್ಯಾವುದೋ ಕಥೆಯನ್ನು ಹೇಳುತ್ತಿತ್ತು.  ಈ ಗೊಂದಲವನ್ನೇ ಉಪಯೋಗಿಸಿಕೊಂಡು ಹದ್ದು ಕೊನೆಗೂ ಅದು ತಾನೇ ಕೊಂದಿರುವುದು ಎಂದು ನಂಬುವಂತೆ ಮಾಡಿತು. ನಾನು ನಂಬಿದ, ಆಚರಿಸಿದ ತತ್ವ ಸಿದ್ಧಾಂತಗಳು ತನ್ನ ಕಣ್ಣೆದುರೇ ಚೆಲ್ಲಾಪಿಲ್ಲಿಯಾಗಿಬಿಟ್ಟಿತಲ್ಲಾ ಅನ್ನುವ ನೋವಲ್ಲಿ ಆ ಪರಿವಾಳ ಬೆಂಕಿಗೆ ಹಾರಿ ತನ್ನನ್ನು ತಾನೇ ಸುಟ್ಟುಕೊಂಡಿತು. ಇತ್ತ ಹದ್ದು ಉಳಿದ ಪಾರಿವಾಳಗಳ ಬಳಿ ಬಂದು ನಿಮ್ಮ ಕಲಹದಿಂದ ಮನನೊಂದು ಅದು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಮತ್ತೊಂದು ಕಥೆ ಕಟ್ಟಿತು. ತಮ್ಮ ನಾಯಕನನ್ನು ಅಷ್ಟೊಂದು ಪ್ರೀತಿಸುತ್ತಿದ್ದ ಪಾರಿವಾಳಗಳು ತಮ್ಮಿಂದಾಗಿ ಅದು ಆತ್ಮಹತ್ಯೆ ಮಾಡಿಕೊಂಡಿತಲ್ಲಾ ಅನ್ನುವ ನೋವಲ್ಲಿ ಒಂದೊಂದು ಪಾರಿವಾಳಗಳು ಒಂದೊಂದು ಕಡೆ ಚದುರಿ ಹೋಯಿತು. ಮತ್ತೆಂದೂ ಅವು ಖುಶಿ ಹಂಚಲೇ ಇಲ್ಲ, ರೆಕ್ಕೆ ಮುರಿದ ಹಕ್ಕಿಗಳಿಗೆ ಹಾರಲು ಕಲಿಸಲೇ ಇಲ್ಲ. ಇತ್ತ ಹದ್ದು ಮತ್ತೆಲ್ಲಾದರೂ ಅಂತಹ ಪಾರಿವಾಳಗಳ ಹಿಂಡು ಇದೆಯಾ ಎಂದು ಹುಡುಕುತ್ತಾ ಹಾರಿಹೋಯಿತು.

ಇಲ್ಲಿಗೆ ಕಥೆ ಮುಗಿಯುತ್ತದೆ. ಆದರೆ ಯಾಕೋ ನನಗೆ ರೋಹಿತ್‌ ವೇಮುಲ ನ ಆತ್ಮಹತ್ಯೆ ಮತ್ತು ಅದರ ನಂತರದ ಕುತ್ಸಿತ ಮನಸ್ಸುಗಳ ಪ್ರತಿಕ್ರಿಯೆಗಳನ್ನು ಗಮನಿಸುವಾಗ ರತ್ನಕ್ಕ ಹಾಗೂ ಆಕೆಯ ಬಿಳಿ ಪಾರಿವಾಳಗಳು ಮತ್ತು ಹದ್ದಿನ ಕಥೆ ನೆನಪಾಯಿತು. ನಿಮ್ಮೊಂದಿಗೂ ಹಂಚಿಕೊಳ್ಳಬೇಕೆನಿಸಿತು, ಅಷ್ಟೇ.

ಗುರುವಾರ, ಫೆಬ್ರವರಿ 4, 2016

ನಮ್ಮನ್ನು ಹೆಣ್ಣು-ಗಂಡು ಎಂದು ಗುರುತಿಸಿಕೊಳ್ಳುವ ಮುನ್ನ , ಬನ್ನಿ ನಾವು ಮನುಷ್ಯರಾಗೋಣ...

ಈಗ್ಗೆ ಎರಡು ದಿನಗಳ ಹಿಂದೆ, ಕಸಿನ್ ಸಿಸ್ಟರ್ ಮದುವೆಗೆ ಶಾಪಿಂಗ್ ಮಾಡಿದ ಡ್ರೆಸ್ ಗಳ ಮಣಭಾರದ ಬ್ಯಾಗನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಇನ್ನೂ ನರ್ಸರಿಯಲ್ಲಿ ಓದುತ್ತಿರುವ ಅಕ್ಕನ ಮಗಳ ಕೈಹಿಡಿದು, ರಣಬಿಸಿಲಲ್ಲಿ ಬೆವರುತ್ತಾ, ಬಾರದ ಮಳೆಗೆ ಮನಸ್ಸಲ್ಲೇ ಬೈಯ್ಯುತ್ತಾ, ತೂರಾಡುತ್ತಾ ಬಂದ ಸರಕಾರೀ ಬಸ್ ಗೆ ಹತ್ತಿ ಉಸ್ಸಪ್ಪಾ ಎಂದು ಕುಳಿತು ಮಡಿಲಲ್ಲಿ ಮಗುವನ್ನೂ ಕುಳ್ಳಿರಿಸಿ ಕಿಟಕಿ ಕಡೆ ಮುಖ ಮಾಡ್ಬೇಕು ಅನ್ನುವಷ್ಟರಲ್ಲಿ ಬಸ್ಸಿನ ಕೊನೆ ಸೀಟಲ್ಲಿ ಗಲಾಟೆ ಕೇಳಿಸಿತು.

ಕತ್ತು ತಿರುಗಿಸಿ ನೋಡಿದಾಗ ಸಭ್ಯರು ಅನ್ನಿಸಿಕೊಂಡಿರುವ, ನಾಗರಿಕರು ಅನ್ನಿಸಿಕೊಂಡಿರುವ, ಮುಖ್ಯವಾಹಿನಿಯ ಸತ್ಪ್ರಜೆಗಳು ಅನ್ನಿಸಿಕೊಂಡಿರುವ ಒಂದ್ಹತ್ತು ಜನರ ಗುಂಪು ಅಸಭ್ಯವಾಗಿ, ಅಶ್ಲೀಲವಾಗಿ ಕಿರುಚುತ್ತಿತ್ತು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಡಿಕ್ಷನರಿಯಲ್ಲಿ ಇಲ್ಲದ ಪದಗಳನ್ನೂ ಉಪಯೋಗಿಸಿ ಬಯ್ಯುತ್ತಾ, ಅವಹೇಳನ ಮಾಡುತ್ತಾ ಗಹಗಹಿಸಿ ನಗುತ್ತಿದ್ದರು.

ಆಗಿದ್ದಿಷ್ಟೆ... ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಗೆ ಭಿಕ್ಷೆ ಬೇಡಲೆಂದು, ತಮ್ಮ ವಿಚಿತ್ರ ಮ್ಯಾನರಿಸಂನಿಂದಲೇ ಹಣ ಕೇಳುವ, ಮುಖದ ಪೂರ್ತಿ ಕ್ರೀಂ ಪೌಡರ್ ಹಚ್ಚಿಕೊಂಡಿದ್ದ ಮಂಗಳ ಮುಖಿಯೊಬ್ಬರು  ಪ್ರವೇಶಿಸಿದ್ದರು. ಅಷ್ಟಕ್ಕೇ ನಮ್ಮ ನಾಗರಿಕ ಬಂಧುಗಳಲ್ಲಿದ್ದ ಮತ್ತೊಬ್ಬರನ್ನು ನೋಯಿಸುವ, ಹೀಯಾಳಿಸುವ, ನಿಂದಿಸುವ ಪೈಶಾಚಿಕ ಮನೋವೃತ್ತಿ ಕುರುಡು ಕುರುಡಾಗಿ ಕುಣಿಯಲಾರಂಭಿಸಿತ್ತು.



ಒಬ್ಬ ವ್ಯಕ್ತಿಯನ್ನು ಒಂದು ಸಣ್ಣ ಗುಂಪೇ ರೇಗಿಸುತ್ತಿದ್ದುದನ್ನು ನೋಡಿಯೂ ನನ್ನನ್ನೂ ಸೇರಿಸಿ ಇಡೀ ಬಸ್ಸು ಮೌನವಾಗಿತ್ತು. ಆದ್ರೆ ನನ್ನ ಮಡಿಲಲ್ಲಿದ್ದ ಮಗು ನನಗೆ ಮತ್ತಷ್ಟು ಆತುಕೊಂಡು "ದೀದಿ, ಆ ಆಂಟಿಗ್ ಎಂದಿಗ್ ಎಲ್ಲಾರುಂ ಪರೆಯಿಡೆ? ಆಂಟಿ ಎಂದ್ರೆ ತಪ್ಪಾಕಿಡ್?" (ಅಕ್ಕಾ, ಆ ಆಂಟಿಗ್ಯಾಕೆ ಎಲ್ರೂ ಬೈತಿದ್ದಾರೆ? ಆಂಟಿ ಏನು ತಪ್ಪು ಮಾಡಿದ್ದಾರೆ?) ಅಂತ ಕೇಳಿತು. ತಪ್ಪು ಮಾಡಿದವರಷ್ಟೇ ಬೈಸಿಕೊಳ್ಳಲು ಅರ್ಹರು ಅನ್ನುವ ಮಗುವಿಗಿದ್ದ ಸೂಕ್ಷ್ಮ ತಿಳುವಳಿಕೆಯ ಮುಂದೆ ಯಾಕೋ ನನ್ನ ಓದು, ಬರಹಗಳೆಲ್ಲವೂ ಜಾಳು ಜಾಳು ಅನಿಸಿತು.

ಗಾಢವಾಗಿ ಬಳಿದ ಲಿಪ್ಸ್ಟಿಕ್, ನಾಜೂಕಿಲ್ಲದ ನಡಿಗೆ, ತೋಳಿಲ್ಲದ ರವಿಕೆ, ಕೈಯಲ್ಲೊಂದು ಪುಟ್ಟ ವ್ಯಾನಿಟ್ ಬ್ಯಾಗ್, ಏನನ್ನೋ ಜಗಿಯುತ್ತಿರುವಂತೆ ಪ್ರತಿಕ್ಷಣ ಕದಲುವ ಕೆನ್ನೆ, ಕಣ್ಣಿನ ಪೂರ್ತಿ ತಿರಸ್ಕಾರದ ನೋವು... ಇವಿಷ್ಟನ್ನು ಅವಾಹಿಸಿಕೊಂಡಿರುವ ವ್ಯಕ್ತಿಯನ್ನು ಅದೆಲ್ಲೇ ಕಂಡರೂ ಮನಸ್ಸು ತಟ್ಟನೆ ಅವರು ಮಂಗಳಮುಖಿ ಅನ್ನುವ ನಿರ್ಧಾರಕ್ಕೆ ಬಂದುಬಿಡುತ್ತದೆ ಮತ್ತು ಬಹುತೇಕ ಸಂದರ್ಭಗಳಲ್ಲಿ ಅದು ನಿಜವೂ ಆಗಿರುತ್ತದೆ.

ಗಂಡು ಮತ್ತು ಹೆಣ್ಣು ಎಂಬ ಎರಡೇ ವ್ಯವಸ್ಥೆಗಳಿಗೆ ಒಗ್ಗಿಕೊಂಡು ಸಮಾಜವನ್ನು ರೂಪಿಸಿಕೊಂಡಿರುವ ನಾವು ಮಂಗಳಮುಖಿಯರ ಬಗ್ಗೆ ಮಾತನಾಡುವಾಗೆಲ್ಲಾ ಅವರ ಅಸಭ್ಯ ನಡವಳಿಕೆ,  ಕುಹುಕ ಮಾತು,  ಅಶ್ಲೀಲ ಹಾವಭಾವ, ಭಿಕ್ಷಾಟನೆಗಳ ಕುರಿತಾಗಿಯೇ ಹೆಚ್ಚು ಚರ್ಚಿಸುತ್ತೇವೆ. ಆದರೆ ಅವರ ಅಂತಹ ನಡವಳಿಕೆಗಳಿಗೆ ಕಾರಣಗಳೇನು ಅನ್ನುವುದನ್ನು ಮಾತ್ರ ನಮ್ಮ ನಾಗರಿಕ ಸಮಾಜ ಅರಿತುಕೊಳ್ಳುವ ಗೋಜಿಗೇ ಹೋಗುವುದಿಲ್ಲ.

ಬಹುತೇಕ ಮಂಗಳಮುಖಿಯರು ಗಂಡಾಗಿ ಹುಟ್ಟಿ ಹೆಣ್ಣಿನ ಸಂವೇದನೆಗಳನ್ನು ಹೊಂದಿರುವವರು. ತಾನು ಅತ್ತ ಗಂಡೂ ಅಲ್ಲ, ಇತ್ತ ಹೆಣ್ಣೂ ಅಲ್ಲ ಅನ್ನುವುದು ಸಂಪೂರ್ಣವಾಗಿ ಅರ್ಥವಾಗುವ ಹೊತ್ತಿಗಾಗುವಾಗಲೇ ಕುಟುಂಬ, ಸಮಾಜ ಅವರನ್ನು ತಮ್ಮಿಂದ ದೂರಮಾಡಿರುತ್ತದೆ. ಆ ಅವಮಾನ, ತಾತ್ಸಾರಗಳನ್ನು ಮೆಟ್ಟಿನಿಲ್ಲಲು ಒಂದು ಹಂತದವರೆಗಿನ ಕ್ರೌರ್ಯವನ್ನು ಅವರು ಮೈಗೂಡಿಸಲೂಬಹುದು. ಅದು ಅವರಿಗಾಗುತ್ತಿರುವ ಅನ್ಯಾಯದ ವಿರುದ್ಧದ  ಪ್ರತಿಭಟನೆಯೇ ಹೊರತು ಕ್ರೌರ್ಯವೆಸಗಲೇ ಬೇಕು ಅನ್ನುವ ಮನಸ್ಥಿತಿಯಿಂದ ಹುಟ್ಟಿದ ನಡವಳಿಕೆಯಲ್ಲ. ತೀರಾ ಇತ್ತೀಚಿನವರೆಗೂ ಸಾಮಾನ್ಯ ಮನುಷ್ಯರು ಅನುಭವಿಸುವ ಅಂದರೆ ವೋಟರ್ ಐಡಿ, ರೇಷನ್ ಕಾರ್ಡ್ ಗಳಂತಹ ಯಾವ ಸೌಲಭ್ಯಗಳೂ ಅನುಭವಿಸಲು ಅವರು ಅನರ್ಹರೆಂದೇ ಪರಿಗಣಿಸಲಾಗಿತ್ತು. ಅಷ್ಟೇಕೆ ಅವರನ್ನು ಮನುಷ್ಯರೆಂದು ಪರಿಗಣಿಸದ ಮನಸ್ಥಿತಿ ಇರುವ ಒಂದು ಬಹುದೊಡ್ಡ  ಸಮೂಹ ಈಗಲೂ ನಮ್ಮ ಮಧ್ಯೆ ಇದೆ.

ಹಾಗೆ ನೋಡುವುದಾದರೆ, ಮನುಷ್ಯನ ದೇಹ ರಚನೆಯೇ ಒಂದು ಅದ್ಭುತ. ಅದು ಯಾವ ಅನಾಟಮಿಗೂ, ಯಾರ ವಿಕಾಸವಾದಕ್ಕೂ ಸಂಪೂರ್ಣವಾಗಿ ದಕ್ಕದ ವಿಸ್ಮಯ. ವಿಜ್ಞಾನದ ಪ್ರಕಾರ ಶಕ್ತಿಗೆ ಕ್ಷಯವಿಲ್ಲ, ಅದು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತನೆ ಹೊಂದಬಹುದೇ ಹೊರತು ಸಂಪೂರ್ಣವಾಗಿ ಯಾವತ್ತೂ ನಾಶಹೊಂದಲಾರದು. ಹಾಗಿದ್ದರೆ ಏಕಾಣು ಬ್ಯಾಕ್ಟೀರಿಯಾ ಹಂತಹಂತವಾಗಿ ವಿಕಾಸವಾಗಿ, ಹಲವು ರೂಪಗಳನ್ನು ಪಡೆದು ಕೊನೆಗೆ ಈಗಿರುವ ಮಾನವ ರೂಪದಲ್ಲಿ ಬಂದು ನಿಂತು ವಿಕಾಸದ ಮಜಲು ಒಂದು ಹಂತಕ್ಕೆ ಪೂರ್ಣಗೊಂಡಿದೆ ಎಂದು ಪ್ರತಿಪಾದಿಸುವ ವಿಕಾಸವಾದದಲ್ಲಿ ಜೀವ ವಿಕಾಸಕ್ಕಿಂತ ಮೊದಲಿದ್ದ ಮೊದಲ ಆ ಏಕಾಣು ಬ್ಯಾಕ್ಟೀರಿಯಾಕ್ಕೆ ಸಾವು ಇರಲಿಲ್ಲವೇ? ಅನ್ನುವ ಪ್ರಶ್ನೆಗೆ ಉತ್ತರವಿಲ್ಲ.

ಹೀಗಿದ್ದರೂ ನಾವು ದೇಹ ರಚನೆಯ ಭಿನ್ನತೆಯನ್ನೇ ಆಧಾರವಾಗಿಟ್ಟುಕೊಂಡು ತಮ್ಮದಲ್ಲದ ತಪ್ಪಿಗಾಗಿ ಮಂಗಳಮುಖಿಯರನ್ನು ಅವಮಾನಿಸುವುದು, ತುಚ್ಛವಾಗಿ ಕಾಣುವುದು ಎಷ್ಟು ಸರಿ? ದೇಹರಚನೆಯಲ್ಲಿ ಭಿನ್ನತೆ ಇದ್ದ ಮಾತ್ರಕ್ಕೆ ಅವರು ಭಾವನೆಗಳೇ ಇಲ್ಲದ ಕಲ್ಲುಗಳು ಅಂತೇಕೆ ನಾವು ಭಾವಿಸಬೇಕು? ನಮ್ಮಂತೆಯೇ ಇಲ್ಲಿ ಅವರಿಗೂ ಬದುಕುವ ಹಕ್ಕಿದೆ ಅನ್ನುವುದನ್ನು ಯಾಕೆ ಅರ್ಥ ಮಾಡಿಕೊಳ್ಳಲಾರೆವು?

ಯಾಕೆಂದರೆ ’ಮುಟ್ಟದಿರುವುದು’ ಮತ್ತು ’ಮುಟ್ಟಿಸದಿರುವುದು’ ಶತಶತಮಾನಗಳಿಂದಲೂ ನಮ್ಮ ಜೀನ್ ಗಳಲ್ಲಿ ಹರಿದು ಬಂದು ಇನ್ನೂ ಅಸ್ತಿತ್ವ ಉಳಿಸಿಕೊಂಡಿರುವ ಒಂದು ವಿನಾಶಕಾರೀ ಬಹು ಅಣು ಬ್ಯಾಕ್ಟೀರಿಯಾ. ಅದೆಷ್ಟೇ ಪ್ರಗತಿಪರರು ಅನ್ನಿಸಿಕೊಂಡರೂ, ವೇದಿಕೆ ಕಟ್ಟಿ ಸಮಾನತೆ, ಸಹಬಾಳ್ವೆಗಳ ಬಗ್ಗೆ ಉರುಹೊಡೆದು ಭಾಷಣ ಮಾಡಿದರೂ ಆಳದಲ್ಲಿನ್ನೂ ನಾವು ಸಿಂಬಿ ಸುತ್ತಿ ಮಲಗಿರುವ ’ಉಚ್ಛ-ನೀಚ’ ಭಾವನೆಗಳ ಘಟಸರ್ಪವನ್ನು ಪೋಷಿಸುತ್ತಲೇ ಇದ್ದೇವೆ. ನಮ್ಮ ’ಉತ್ತಮಿಕೆ’ಯ ಅಹಂಗಳನ್ನು ತಣಿಸಲು ಮತ್ಯಾರನ್ನೋ ನೀಚರನ್ನಾಗಿಸಿ ಮಾನಸಿಕ ದಿವಾಳಿತನಕ್ಕೆ ಅಡಿಗಲ್ಲು ಹಾಕುತ್ತಾ ಭ್ರಮೆಗಳ ಮೇಲೆ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುತ್ತೇವೆ. ಸಾಮಾಜಿಕ ಜವಾಬ್ದಾರಿ, ಕಾಳಜಿಯ ಪ್ರಶ್ನೆ ಬಂದಾಗೆಲ್ಲಾ ಮತ್ತೊಬ್ಬರತ್ತ ಕೈ ತೋರಿಸಿ ನಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತೇವೆ. ಈ ನುಣುಚಿಕೊಳ್ಳುವಿಕೆಯಿಂದಾಗಿಯೇ ಎಲ್ಲರಿಗೂ ಸಮಬಾಳು, ಸಮಪಾಲು ಅನ್ನುವ ತತ್ವದಡಿ ಆರ್ದ್ರವಾಗಿ, ಹೃದ್ಯವಾಗಿ ರೂಪುಗೊಳ್ಳಬೇಕಾಗಿದ್ದ ಸಮಾಜದ ಪರಿಕಲ್ಪನೆ ಜಾಳುಜಾಳಾಗಿ ಕ್ರೌರ್ಯ, ಆಕ್ರಮಣಗಳೇ ವಿಜೃಂಭಿಸುತ್ತಿರುವುದು.

ತರತಮದ ಮೆಟ್ಟಿಲಮೇಲೆ ಮಂಗಳಮುಖಿಯರನ್ನೇ ಜಮಖಾನೆಯನ್ನಾಗಿಸಿ ನಿಂತು ನಮ್ಮನ್ನು ನಾವು ಹೆಣ್ಣು-ಗಂಡು ಎಂದು ಗುರುತಿಸುವ ಮುನ್ನ , ಬನ್ನಿ ನಾವು ಮನುಷ್ಯರಾಗೋಣ...

ಮಂಗಳವಾರ, ಜನವರಿ 12, 2016

ಸುನೀಲ ವಿಸ್ತರ ತರಂಗಶೋಭಿತ...

ಬಾನಂಚು ಕೆಂಪಾಗಿತ್ತು. ಸೂರ್ಯ ಇನ್ನೇನು ಪಡುವಣದಲ್ಲಿ ಕರಗೇ ಬಿಡುತ್ತೇನೆ ಅನ್ನುವ ಧಾವಂತದಲ್ಲಿ ಕಡಲಿನಾಳಕ್ಕೆ ಇಳಿಯುತ್ತಿದ್ದ. ಕಡಲ ಕಿನಾರೆಯಿಡೀ ಹೊಂಬಣ್ಣದಲ್ಲಿ ತೊಯ್ದು ಹೋಗಿತ್ತು. ದಾರಿ ಬದಿಯ ಹಸಿರು ಕಾಡಿನಲ್ಲೂ ಬಣ್ಣ ಓಕುಳಿಯಾಡಿತ್ತು. ಸೂರ್ಯ ಸಂಪೂರ್ಣವಾಗಿ ಮುಳುಗುವ ಮುನ್ನ ಕಿನಾರೆ ತಲುಪಿಬಿಡಬೇಕೆಂದು ನೇತ್ರಾ ಮಗುವಿನ ಕೈಯನ್ನು ಭದ್ರವಾಗಿ ತನ್ನ ಅಂಗೈಯಲ್ಲಿ ಮುಚ್ಚಿಟ್ಟು ಬೇಗ ಬೇಗ ನಡೆಯುತ್ತಿದ್ದಳು.

ಒಂದು ವಾರದಿಂದಲೂ ಮಗು ಒಂದೇ ಸಮನೆ ಸಮುದ್ರ ನೋಡಬೇಕೆಂದು ಹಠ ಹಿಡಿಯುತ್ತಿತ್ತು. ಏನೇ ಆದರೂ ಸರಿ, ಇವತ್ತು ಮಗುವಿನ ಆಸೆ ಪೂರೈಸಲೇಬೇಕೆಂದು ತನ್ನ ಕೆಲಸಗಳನ್ನೆಲ್ಲಾ ಬೇಗ ಬೇಗನೇ ಮುಗಿಸಿ ಉಳಿದ ಮಕ್ಕಳನ್ನು ಆಯಾ ಕೈಗೊಪ್ಪಿಸಿ ಸಂಜೆಯಾಗುತ್ತಿದ್ದಂತೆ ತೀರ ಹುಡುಕಿ ಬಂದಿದ್ದಳು ನೇತ್ರಾ. ಮಗು ಅಂತಲ್ಲ, ತನಗಾದರೂ ಅಷ್ಟೆ... ಕಡಲೆಂದರೆ, ಅದರ ವಿಸ್ತಾರವೆಂದರೆ ಏನೋ ಒಂದು ಆಕರ್ಷಣೆ. ತನಗೇ ಏಕೆ, ಬಹುಶಃ ಕರವಾಳಿಗರಿಗೆಲ್ಲರಿಗೂ ಈ ತುಡಿತ ಇರಬಹುದೆನೋ ಅಂತಂದುಕೊಳ್ಳುತ್ತಿದ್ದಾಗಲೇ ಅವರಿಬ್ಬರು ಕಡಲ ತೀರ ತಲುಪಿಯಾಗಿತ್ತು.

ಏಕಾಂತವನ್ನರಸುತ್ತಾ ಜನ ಜಂಗುಳಿಯಿಂದ ತುಸು ದೂರ ಹೋಗಿ, ಒಂಟಿ ಕಲ್ಲ ಮೇಲೆ ಕುಳಿತು, ಮಗುವನ್ನೂ ಮಡಿಲಲ್ಲಿ ಕೂರಿಸಿ ಕಡಲು, ಅದರ ಲಯಬದ್ಧ ಅಲೆಗಳ ಅಬ್ಬರ ವೀಕ್ಷಿಸತೊಡಗಿದಳು. ಎತ್ತ ನೋಡಿದರೂ ಜಲ ರಾಶಿ. ಕಡಲಿನ ಸೌಂದರ್ಯಕ್ಕೆ ಮುಕುಟವಿಟ್ಟಂತೆ ನೇಸರ ಹೊಂಬಣ್ಣವನ್ನು ಅದರ ಪೂರ್ತಿ ಚೆಲ್ಲಿ ನಿರಾಳವಾಗಿಬಿಟ್ಟಿದ್ದ. ಎಷ್ಟು ಚೆನ್ನಾಗಿದೆ ಪ್ರಕೃತಿ ಅಂದುಕೊಂಡಳು. ಅವಳ ಯೋಚನಾ ಸರಣಿಯನ್ನು ತುಂಡರಿಸುವಂತೆ ಮಗು "ಯಾಕಮ್ಮಾ ಕಡಲು ಇಷ್ಟೊಂದು ದೊಡ್ಡದಿದೆ?" ಅಂತ ಕೇಳಿತು. ನೇತ್ರಾ "ನಂಗೊತ್ತಿಲ್ಲ ಕಂದಾ" ಎಂದಳು. ಮಗು ಮತ್ತೆ ಕೇಳಿತು "ನಿಂಗೂ ಗೊತ್ತಿಲ್ವಾ?" ಇವಳು "ಉಹೂಂ" ಅಂದು ಮನಸ್ಸಲ್ಲೇ "ಕಡಲು ದೋಡ್ದದಾಗಿರುವುದಷ್ಟೇ ಅಲ್ಲ ಕಂದಾ, ನಮ್ಮ ಕಣ್ಣಿನ ದೃಷ್ಟಿ ಪರಿಧಿಯಾಚೆಗಿರುವುದನ್ನು ದಿಟ್ಟಿಸಲಾರದು, ಅದಕ್ಕೆ ಅದರ ವಿಸ್ತೀರ್ಣ ನಮಗೆ ದಕ್ಕುತ್ತಿಲ್ಲ. ಅದು ಅಮ್ಮನಂತೆ, ಎಷ್ಟು ಅರ್ಥ ಮಾಡಿಕೊಂಡೆ ಅಂದುಕೊಂಡರೂ ಅರ್ಥವಾಗದೇ ಉಳಿದುಬಿಡುವ ಅವಳ ಪ್ರೀತಿಯಂತೆ" ಅಂತ ಹೇಳಿಕೊಂಡಳು. ಮರುಕ್ಷಣ "ಸುನೀಲ ವಿಸ್ತರ ತರಂಗಶೋಭಿತ ಗಂಭೀರಾಂಬುಧಿ ತಾನಂತೆ, ಮುನ್ನೀರಂತೆ ಅಪಾರವಂತೆ" ಅನ್ನುವ ಶಿವರುದ್ರಪ್ಪನವರ ಕವನದ ಸಾಲು ಮನಸ್ಸಲ್ಲೊಮ್ಮೆ ಹಾದು ಹೊಯಿತು.

ತನ್ನ ಯೋಚನೆಗಳಿಂದ ಹೊರಬರಲೆಂಬತೆ ತಲೆ ಕೊಡವಿಕೊಂಡು ತುಸು ದೂರ ದೃಷ್ಟಿ ನೆಟ್ಟಾಗ ಬರಿ ಮರಳ ಮೇಲೆ ಹುಡುಗಿಯೊಬ್ಬಳು ಏನನ್ನೋ ಯೋಚಿಸುತ್ತಾ ಕುಳಿತಿರುವುದು ಕಾಣಿಸಿತು. ಹತ್ತು ವರ್ಷಗಳ ಹಿಂದೆ ನಾನೂ ಹೀಗೆ ಒಂಟಿಯಾಗಿ ಕೂತು ಕಡಲಿನ ಇನ್ನೊದು ತೀರಕ್ಕಾಗಿ ಎಷ್ಟೊಂದು ಹಂಬಲಿಸುತ್ತಿದ್ದೆನಲ್ಲಾ ಅನಿಸಿತು. ಮತ್ತಷ್ಟು ಸೂಕ್ಷ್ಮವಾಗಿ ದಿಟ್ಟಿಸಿದಾಗ ಆಕೆ ಮರಳ ಮೇಲೆ ಏನನ್ನೋ ಬರೆದು, ಅಳಿಸಿ, ಮತ್ತೆ ಬರೆಯುತ್ತಿದ್ದಂತೆ ತೋರಿತು. ಕಣ್ಣಂಚಲ್ಲಿ ತೆಳುವಾಗಿ ನೀರು ಹರಡಿದ್ದರೂ ಹರಡಿರಬಹುದು ಅನಿಸಿತು. ಅಷ್ಟರಲ್ಲಿ ಮಗು ಅವಳ ಕೈ ಹಿಡಿದೆಳೆಯುತ್ತಾ "ಮರಳ ಮನೆ ಮಾಡುವುದನ್ನು ಕಲಿಸಿಕೊಡಮ್ಮಾ" ಅನ್ನತೊಡಗಿತು.

ಹೌದಲ್ವಾ! ಈ ಕಡಲ ತಡಿಯಲಿ ಅದೆಷ್ಟು ಬಾರಿ ನಾನು ಮರಳ ಮನೆಯ ಮಾಡಿ, ಅದಕ್ಕೊಂದು ಚೆಂದದ ಹೆಸರಿಟ್ಟು ಆಟ ಆಡಿದ್ದಿದೆ. ಈಗ ಮರಳು, ಮನೆ, ಅದಕ್ಕೊಂದು ಹೆಸರು ಯಾವುದೂ ಬೇಕೆನಿಸುವುದಿಲ್ಲ.ಹಿಂದೊಮ್ಮೆ ಖುಶಿ ಕೊಡುತ್ತಿದ್ದ ಯಾವ ಸಂಗತಿಗಳೂ ಈಗ ಖುಶಿ ಕೊಡುತ್ತಿಲ್ಲ, ಹಿಂದೆ ಅಳಿಸುತ್ತಿದ್ದ ಯಾವ ಸಂಗತಿಗಳೂ ಈಗ ಅಳಿಸುವುದೂ ಇಲ್ಲ. ಎಷ್ಟು ವಿಚಿತ್ರವಲ್ವಾ ಈ ಬದುಕು? ಅಂತೆಲ್ಲಾ ಅನಿಸುತ್ತಿದ್ದಂತೆ ಅವಳ ಮಡಿಲಿಂದ ಇಳಿದ ಮಗು ಮತ್ತೆ ಅವಳ ಕೈ ಹಿಡಿದೆಳೆಯತೊಡಗಿತು.

ಇವತ್ತೇಕೆ ನಾನು ಇಷ್ಟೊಂದು ನೆನಪುಗಳಲ್ಲಿ ಮುಳುಗಿ ಹೋಗುತ್ತಿದ್ದೇನೆ ಅಂದುಕೊಳ್ಳುತ್ತಲೇ ಅವಳು ಮಗಳನ್ನು ಹಿಂಬಾಲಿಸತೊಡಗಿದಳು. ಮಗು ಮೈಕೈಗೆಲ್ಲಾ ಮರಳು ಮೆತ್ತಿಕೊಂಡು ಮನೆ ಮಾಡುತ್ತಿದ್ದರೆ ನೇತ್ರಾಳ ಕಣ್ಣು ಮತ್ತೆ ಆ ಹುಡುಗಿಯತ್ತ ಹೊರಳಿತು. ಶೂನ್ಯದಲ್ಲಿ ಎಲ್ಲೋ ಕಳೆದುಹೋದಂತಿದ್ದಳವಳು. ಕಣ್ಣ ಚಕ್ರತೀರ್ತದಲ್ಲಿ ದುಖಃ ಮಡುಗಟ್ಟಿತ್ತು. ಮುಖದಲ್ಲಿ ಆಗೊಮ್ಮೆ, ಈಗೊಮ್ಮೆ ವ್ಯಕ್ತವಾಗುತ್ತಿದ್ದ ಭಾವ ಯಾವುದು? ನಿರಾಸೆಯೋ? ಬೇಸರವೋ? ಅಸಹಾಯಕತೆಯೋ? ನಿರ್ಧರಿಸಲಾಗಲಿಲ್ಲ.

ಆಡುತ್ತಿದ್ದ ಮಗುವನ್ನು ಅಲ್ಲೆ ಬಿಟ್ಟು ಅವಳ ಬಳಿ ಹೋಗಿ "ಯಾರು ನೀನು? ನಿನ್ನ ಹೆಸರೇನು? ಒಂಟಿಯಾಗಿ ಇಲ್ಲೇನು ಮಾಡುತ್ತಿದ್ದಿ?" ಅಂತ ಕೇಳಿದಳು. ಆಕೆ " ಮಾನ್ವಿ" ಅಂತಷ್ಟೇ ಹೇಳಿ, ಉಳಿದ ಪ್ರಶ್ನೆಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಅನ್ನುವ ಭಾವವನ್ನು ಮುಖದಲ್ಲೇ ವ್ಯಕ್ತಪಡಿಸಿ ಮತ್ತೆ ಶೂನ್ಯದಲ್ಲಿ ಕಳೆದುಹೋದಳು.

ಇನ್ನಿವಳನ್ನು ಮಾತಾಡಿಸಿ ಪ್ರಯೋಜನವಿಲ್ಲವೆಂದು ಅರಿತ ನೇತ್ರಾ ಅವಳ ಪಕ್ಕದಲ್ಲೇ ಕೂತು "ನಿನ್ನ ನೋಡುತ್ತಿದ್ದರೆ ಒಂದಿಷ್ಟು ವರ್ಷಗಳ ಹಿಂದಿನ ನನ್ನನ್ನೇ ನೋಡಿದಂತಾಗುತ್ತದೆ. ಹತ್ತು ವರ್ಷಗಳ ಹಿಂದೆ ನಿನ್ನಂತೆಯೇ ನಾನೂ ಮುಖದಲ್ಲಿ ಅಭೋದ ಕಳೆಹೊತ್ತು ಹೀಗೆಯೇ ಕಡಲ ಕಿನಾರೆಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದೆ. ಅಲೆಗಳ ರುದ್ರ ರಮಣೀಯತೆಯ ಮುಂದೆ ನನ್ನನ್ನು ನಾನೇ ಕಳೆದುಕೊಳ್ಳುತ್ತಿದ್ದೆ. ನನ್ನ ಕಣ್ಣುಗಳಲ್ಲಿ ಮೂಡುವ ಸಾವಿರದ ಕನಸುಗಳನ್ನು ಇದೇ ಕಡಲ ಮುಂದೆ ನಿಂತು ಹೇಳಿಕೊಳ್ಳುತ್ತಿದ್ದೆ. ನೀನೀಗ ಕೂತಿದ್ದಿಯಲ್ಲಾ ಅಲ್ಲೇ ಮರಳ ಮನೆ ಮಾಡಿ ಸಂಭ್ರಮಿಸುತ್ತಿದ್ದೆ" ಅಂದಳು. ಮಾನ್ವಿ ಅದಕ್ಕೆ ನಾನೀಗ ಎನ್ನು ಮಾಡಬೇಕು ಅನ್ನುವ ಭಾವದಲ್ಲಿ ಅವಳಿಂದ ತುಸು ದೂರ ಸರಿದು ಮತ್ತದೇ ಮರಳ ಮೇಲೆ ಕೂತಳು.

ನೇತ್ರಾ "ಹೆಜ್ಜೆ ಮೂಡದ ಹಾದಿಯಲ್ಲಿ ಅದೆಷ್ಟು ಗಾವುದ ದೂರ ನಡೆದರೂ ಪ್ರಯೋಜನವಿಲ್ಲ" ಅನ್ನುತ್ತಾ ಅವಳ ಬಳಿ ಹೋಗಿ "ನಿನ್ನ ಸಮಸ್ಯೆಯೇನೆಂದು ನನಗೊತ್ತಿಲ್ಲ, ಆದ್ರೆ ಖಂಡಿತಾ ನಿನ್ನ ದುಗುಡಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ" ಅಂದಳು. ಮಾನ್ವಿ ವ್ಯಂಗ್ಯವಾಗಿ "ಅರ್ಥ ಮಾಡ್ಕೊಂಡು ಆಮೇಲೇನು ಮಾಡ್ತೀರಿ?" ಅಂತ ಪ್ರಶ್ನಿಸಿದಳು. ಅವಳ ಪ್ರಶ್ನೆಯಲ್ಲಿದ್ದ ಅಮಾಯಕತೆಗೆ ಒಳಗೊಳಗೇ ನಗುತ್ತಾ ಮತ್ತಷ್ಟು ಅವಳ ಬಳಿ ಸರಿದು "ಏನೂ ಮಾಡಲ್ಲ" ಅಂದಳು. ಮಾನ್ವಿ "ನಾನಿಲ್ಲಿ ಸಾಯೋಕೆ ಬಂದಿದ್ದೇನೆ" ಅನ್ನುತ್ತಾ ಅವಳ ಪ್ರತಿಕ್ರಿಯೆಯೇನು ಎಂಬಂತೆ ಅವಳತ್ತ ದಿಟ್ಟಿಸಿದಳು. ಅದೇನೂ ದೊಡ್ಡ ಸಂಗತಿಯಲ್ಲವೆಂಬಂತೆ ನೇತ್ರಾ "ಹೌದಾ? ಸರಿ. ಸಾಯಬೇಕೆಂಬ ನಿರ್ಧಾರ ತಗೊಂಡಮೇಲೆ ಅದನ್ನು ಪ್ರಶ್ನಿಸುವ ಅಧಿಕಾರ ನನಗೆಲ್ಲಿದೆ? ಸಾಯುವಂತಹ ಕಷ್ಟ ನಿನಗೇನಿದೆಯೋ ಏನೋ? ಇಷ್ಟಕ್ಕೂ ಸಾಯಹೊರಟವರನ್ನು ತಡೆದು ಬದುಕಿಸುವ ಇರಾದೆಯೂ ನನಗಿಲ್ಲ" ಅಂತಂದು ಮೌನವಾದಳು.

ಮಾನ್ವಿ ತುಸು ಅಚ್ಚರಿಯಿಂದ "ಹಾಗಾದ್ರೆ ನಾನು ಸಾಯ್ಲಾ?" ಅಂತ ಮತ್ತೆ ಪ್ರಶ್ನಿಸಿದಳು. ನೇತ್ರಾ "ಹುಂ. ಸಾಯುವುದೇ ನಿನ್ನ ನಿರ್ಧಾರವೆಂದಮೇಲೆ ನಾನದನ್ನು ತಡೆಯೋದಿಲ್ಲ. ಆದ್ರೆ ಇಷ್ಟೊಂದು ಜನಜಂಗುಳಿ ಇರುವಾಗ ಸಮುದ್ರಕ್ಕೆ ಹಾರಿದ್ರೆ ಯಾರದ್ರೂ ನಿನ್ನ ಬದುಕಿಸಬಹುದು. ಅದಕ್ಕೇ ಈ ಕಿನಾರೆ ನಿರ್ಜನವಾಗುವವರೆಗೂ ನನ್ನ ಕಥೆ ಹೇಳುತ್ತೇನೆ. ಕೇಳುತ್ತಿಯಾ?" ಅಂತ ಮರು ಪ್ರಶ್ನಿಸಿದಳು. ಮಾನ್ವಿ ಸುಮ್ಮನೆ ತಲೆಯಾಡಿಸಿದಳು.

ನೇತ್ರಾ ಹೇಳತೊಡಗಿದಳು "ಇಲ್ಲಿಂದ ತುಂಬಾ ದೂರ ಇರುವ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿದವಳು ನಾನು. ಮನೆಗೆ ಮೊದಲನೇ ಮಗು. ಹುಟ್ಟಿ ಮೂರು ತಿಂಗಳಾಗುವಷ್ಟರಲ್ಲಿ ಅಪ್ಪ ತೆಂಗಿನ ಮರದಿಂದ ಬಿದ್ದು ಸತ್ತು ಹೋದ. ಅಪ್ಪ ಅಂದ್ರೆ ಏನು ಅನ್ನುವುದು ಅರ್ಥವಾಗುವ ಮೊದಲೇ ’ಅಪ್ಪನಿಲ್ಲದ ಮಗು’ ಅನ್ನುವ ಹಣೆಪಟ್ಟಿ ನನಗೆ ಅಂಟಿತ್ತು. ಅಪ್ಪ ಸತ್ಮೇಲೆ ನನ್ನ ಬೆಳೆಸಲು ಅಮ್ಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಆಗಷ್ಟೇ ಹೆರಿಗೆ, ಬಾಣಂತನ ಮುಗಿಸಿದ್ದ, ಮೈಯ ಹಸಿ ಇನ್ನೂ ಆರಿರದ ಅಮ್ಮ ನನ್ನನ್ನು ಬೆನ್ನಿಗೆ ಕಟ್ಟಿಕೊಂಡು ಅರ್ಧ ಮೈಲು ದೂರದ ಸಾಹುಕಾರರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳಂತೆ. ಅವರ ತೋಟದಲ್ಲಿ ಒಂದು ಮರದ ಕೆಳಗೆ ನನ್ನನ್ನು ಮಲಗಿಸಿ ಹನಿಗಣ್ಣಾಗುತ್ತಲೇ ಕೆಲಸ ಮಾಡುತ್ತಿದ್ದಳಂತೆ. ಬೆಚ್ಚನೆಯ ಮನೆಯಲ್ಲಿ ಹಾಲು ಚೀಪುತ್ತಾ ತೊಟ್ಟಿಲಲ್ಲಿ ಮಲಗಿರಬೇಕಾದ ಮಗು ತೋಟದ ಮಧ್ಯೆ ಹರಕಲು ಚಾಪೆಯಲ್ಲಿ ಬೆರಳು ಚೀಪುತ್ತಾ ಮಲಗಿರಬೇಕಾದರೆ ತಾಯಿ ಕರುಳಿಗೆ ಅದೆಷ್ಟು ಸಂಕಟವಾಗಿರಬಹುದು? ಈಗ ಅದೆಲ್ಲಾ ಯೋಚಿಸಲೂ ತುಂಬಾ ಕಷ್ಟವಾಗುತ್ತದೆ.

ಬುದ್ಧಿ ತಿಳಿದಾಗಿಂದಲೂ ಅಮ್ಮನ ನಗುವಿಗಿಂತಲೂ ಕಣ್ಣೀರನ್ನೇ ಹೆಚ್ಚು ಕಂಡವಳು ನಾನು. ನನಗೆ 4-5 ವರ್ಷವಾಗುತ್ತಿದ್ದಂತೆ ಅಮ್ಮ ನನ್ನನ್ನು ಮನೆಯಲ್ಲೇ ಬಿಟ್ಟು ಒಬ್ಬಳೇ ಕೆಲಸಕ್ಕೆ ಹೋಗತೊಡಗಿದಳು. ನಾನು ಹೊಸ ಬಟ್ಟೆ, ಆಟಿಕೆ ಅಂತ ಅಳುತ್ತಿದ್ದಾಗೆಲ್ಲಾ ಆಕೆ ಆಕಾಶ ನೋಡಿ ನನಗೇಕಪ್ಪಾ ಇಂತಹ ಶಿಕ್ಷೆ ಅಂತ ಕಣ್ಣೀರಾಗುತ್ತಿದ್ದುದು ನನಗೀಗಲೂ ಕಣ್ಣಿಗೆ ಕಟ್ಟಿದಂತಿದೆ.

ಅದೇನಾಯ್ತೋ ಗೊತ್ತಿಲ್ಲ, ಒಂದಿನ ಸಂಜೆ ಕೆಲಸದಿಂದ ಧುಮುಗುಟ್ಟುತ್ತಾ ಬಂದವಳೇ, ಗುಡಿಸಲು ಖಾಲಿ ಮಾಡಿ, ನನ್ನನ್ನೂ ಕಟ್ಟಿಕೊಂಡು ರಾತ್ರೋ ರಾತ್ರಿ ಊರು ಬಿಟ್ಟು ಈ  ಊರಿಗೆ ಬಂದ್ಳು. ತೀರಾ ಸಣ್ಣವಳಿದ್ದಾಗ ಈ ಬಗ್ಗೆ ಕೇಳಿದಾಗೆಲ್ಲಾ ಎರಡೇಟು ಹೊಡೆದು ನನ್ನ ಸುಮ್ಮನಾಗಿಸುತ್ತಿದ್ದಳು, ದೊಡ್ಡವಳಾದಮೇಲೆ ಪ್ರಶ್ನಿಸಿದಾಗೆಲ್ಲಾ ಆಕೆ ಸುಮ್ಮನೆ ಆಕಾಶ ದಿಟ್ಟಿಸುತ್ತಾ ಮಾತು ಮರೆಸುತ್ತಿದ್ದಳು. ಇವತ್ತಿಗೂ ನನಗೆ ಅವಳೇಕೆ ಊರು ಬಿಟ್ಟು ಬಂದಳು, ಬರುವಂಥದ್ದು ಅಲ್ಲೇನಾಯ್ತು ಅನ್ನುವುದು ಗೊತ್ತಿಲ್ಲ.

ಈ ಊರಿಗೆ ಬಂದಮೇಲೆ ಅಮ್ಮನಲ್ಲಾದ ಬಹುದೊಡ್ಡ ಬದಲಾವಣೆಯೆಂದರೆ ಅವಳ ಸಿಡುಕು. ಸದಾ ಎಲ್ಲರನ್ನೂ ನಗುನಗುತ್ತಲೇ ಮಾತಾಡಿಸುತ್ತಿದ್ದ, ಸಹನೆಯ ಅಪರಾವತಾರ ಎಂಬಂತಿದ್ದ ಅಮ್ಮ ಇಲ್ಲಿ ಎಲ್ಲರ ಮೇಲೂ ರೇಗಾಡುತ್ತಿದ್ದಳು. ಅಕ್ಕ ಪಕ್ಕದ ಮನೆಯ ಯಾರ ಬಳಿಯೂ ಹೆಚ್ಚು ಮಾತಾಡುತ್ತಲೇ ಇರಲಿಲ್ಲ. ಎಲ್ಲರ ಮಧ್ಯೆ ಇದ್ದೂ ಆಕೆ ದ್ವೀಪದಂತಿದ್ದಳು. ಯಾಕಮ್ಮಾ ಹೀಗೆ ಅಂತ ಪ್ರಶ್ನಿಸಿದರೆ ನನ್ನ ಬರಸೆಳೆದು ತಬ್ಬಿಕೊಂಡು ಹೀಗಿದ್ದರೇ ಚೆನ್ನ, ಇಲ್ಲಾಂದ್ರೆ ಜನ ಹರ್ಕೊಂಡು ತಿನ್ತಾರೆ ಮಗಾ, ನೀನೂ ಹೀಗೆ ಇರ್ಬೇಕು ಅನ್ನುತ್ತಿದ್ದಳು. ನನಗೆ ಅವಳೇನು ಹೇಳುತ್ತಿದ್ದಾಳೆ ಅನ್ನುವುದು ಅರ್ಥವಾಗದೇ ಅವಳ ಮುಖವನ್ನೆ ದಿಟ್ತಿಸುತ್ತಾ ಕುಳಿತುಕೊಳ್ಳುತ್ತಿದ್ದೆ.

ಹೀಗಿದ್ದ ಅಮ್ಮ ಒಂದಿನ, ನನ್ನನ್ನು ಊರ ಹೊರಗಿದ್ದ ಸರಕಾರಿ ಶಾಲೆಗೆ ದಾಖಲು ಮಾಡಿ ಬಂದಿದ್ದಳು. ಬಹುಶಃ ಅವತ್ತವಳು ತುಸು ಭಾವುಕಳಾಗಿದ್ದಳು. ನಾನು ಶಾಲೆಯಲ್ಲಿ ಕೂರಲಾರೆ ಎಂದು ರಚ್ಚೆ ಹಿಡಿದಾಗ ಕಲೀಬೇಕು ಮಗಾ, ನನ್ನಂತಾಗಬಾರದು. ಒಂದು ಹೊತ್ತಿನ ತುತ್ತಿಗೆ ಇನ್ನೊಬ್ಬರ ಮುಂದೆ ಕೈ ಚಾಚುವಂತಾಗಬಾರದು ಅಂದಿದ್ದಳು. ನನಗವತ್ತು ಅವಳ ಮಾತು ಎಷ್ಟರ ಮಟ್ಟಿಗೆ ಅರ್ಥವಾಗಿತ್ತೋ ಗೊತ್ತಿಲ್ಲ ಆದ್ರೆ ಓದಿನ ವಿಷಯದಲ್ಲಿ ನಾನು ಅವಳಿಗೆಂದೂ ನಿರಾಶೆ ಮಾಡಿದವಳೇ ಅಲ್ಲ.

ದಿನ ಕಳೆಯುತ್ತಿದ್ದಂತೆ ಅಮ್ಮ ಈ ಊರಿನವಳೇ ಆಗಿ ಹೋದಳು. ಕೆಕ್ಕರಿಸಿ ನೋಡುತ್ತಿದ್ದ ಸಮಾಜವನ್ನೇ ಧಿಕ್ಕರಿಸುವಂತಹ ಭಂಡತನ ಬೆಳೆಸಿಕೊಂಡಳು. ಇತ್ತ ನಾನೂ ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡೆ. ಅವತ್ತವಳು ತನ್ನ ಎಂದಿನ ಸಿಡುಕನ್ನು ಬಿಟ್ಟು ಇಡೀ ಕೇರಿಗೆ ಸಿಹಿ ಹಂಚಿದ್ದಳು. ನಾನು ಹುಟ್ಟಿದಂದಿನಿಂದ ಅವತ್ತಿನವರೆಗೆ ಅವಳು ಮನಸ್ಪೂರ್ತಿಯಾಗಿ ನಕ್ಕಿರುವುದನ್ನು ಅದೇ ಮೊದಲ ಬಾರಿ ನೋಡಿದೆ; ಬಹುಶಃ ಕೊನೆಯ ಬಾರಿ ಕೂಡ.

ಆಯ್ತಲ್ಲಾ, ಕೆಲಸಕ್ಕೆ ಸೇರಿದೆ ಅಂದ್ನಲ್ಲಾ...? ಅವತ್ತಿಂದ ಆರಂಭವಾದದ್ದು ನನ್ನ ಬದುಕಿನ ವಿನಾಶ ಪರ್ವ. ತಾನು ದುಡಿಯುವವಳು ಅನ್ನುವ ಧಿಮಾಕು ಮೊದಲು ತಲೆಗೇರಿತು, ಅದರ ಬೆನ್ನಲ್ಲೇ ಅಮ್ಮ ಔಟ್ ಡೇಟೆಡ್ ಅನಿಸತೊಡಗಿದಳು. ಮೊಣಕಾಲವರೆಗೆ ಸೀರೆ ಎತ್ತಿಕಟ್ಟಿಕೊಳ್ಳುತ್ತಿದ್ದ ಅಮ್ಮನನ್ನು ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಪರಿಚಯಿಸುವುದೇ ಅವಮಾನ ಎಂದು ಅನ್ನಿಸಲಾರಂಭಿಸಿತು.

ಈ ಮಧ್ಯೆ ಸಹೋದ್ಯೋಗಿ ಒಬ್ಬರ ಜೊತೆಗಿದ್ದ ಪರಿಚಯ ಸ್ನೇಹವಾಯ್ತು, ಸ್ನೇಹ ಪ್ರೀತಿಯಾಯ್ತು. ಒಂದಿನ ಅಮ್ಮನ ಮುಂದೆ ಬಂದು ನಿಂತು ನಾವಿಬ್ಬರು ಮದುವೆ ಮಾಡಿಕೊಳ್ಳುತ್ತೇವೆ ಅಂದೆ. ಅಮ್ಮ ಬೇಡ ಅಂದ್ಳು, ಅತ್ಳು, ಕೈ ಮುಗಿದ್ಳು, ನನಗಿಂತ ವಯಸ್ಸಲ್ಲಿ ದೊಡ್ಡವಳು ಅನ್ನುವುದನ್ನೂ ಮರೆತು ಕಾಲಿಗೆ ಬಿದ್ದು ಬೇಡ್ಕೊಂಡ್ಳು. ನನಗೆ ಔಟ್ ಡೇಟೆಡ್ ಅಮ್ಮನ ಕೂಗು ಕೇಳಿಸಲೇ ಇಲ್ಲ.

ಒಂದು ದೇವಸ್ಥಾನದಲ್ಲಿ ನಾವಿಬ್ಬರೂ ಮದುವೆಯಾಗಿ ಅಮ್ಮನ ಮುಂದೆ ಬಂದು ನಿಂತೆವು. ಅಮ್ಮ ಗತ್ಯಂತರವಿಲ್ಲದೆ ನಮ್ಮನ್ನು ಒಪ್ಪಿಕೊಂಡಳು ಅಥವಾ ಹಾಗೆ ನಟಿಸಿ ಮನಸ್ಸಲ್ಲೇ ಕೊರಗುತ್ತಿದ್ದಳು. ಅದೇ ಕೊರಗಲ್ಲಿ ಹಾಸಿಗೆ ಹಿಡಿದಳು. ನನಗೆ ಅವಳ ಬಗ್ಗೆ ಅಸಡ್ಡೆ ಬೆಳೆಯತೊಡಗಿತು.  ಮತ್ತೊಂದಿಷ್ಟು ದಿನಗಳು ಕಳೆದ ಮೇಲೆ ಅವಳಿಗೆ ಪಾರ್ಶ್ವವಾಯು ಬಡಿಯಿತು. ಆಗಂತೂ  ಅವಳು ಮಾತು, ಕಥೆ, ಸಿಡುಕು ಏನೂ ಇಲ್ಲದೆ ಜೀವಚ್ಛಯವಾಗಿ ಹಾಸಿಗೆಯಲ್ಲೇ ಇರತೊಡಗಿದಳು. ಒಂದು ಅಗುಳು ಗಂಟಲೊಳಗೆ ಇಳಿಯಬೇಕಿದ್ದರೂ ನನ್ನ ನೆರವು ಅವಳಿಗೆ ಬೇಕಿತ್ತು.

ನಾನು ಅವಳಿಗಾಗಿ ಮರುಕ ಪಡಲಿಲ್ಲ, ಕರುಣೆ ತೋರಲಿಲ್ಲ, ಮಗುವಂತೆ ನೋಡಿಕೊಳ್ಳಲಿಲ್ಲ, ಬದಲಾಗಿ ಅಸಹ್ಯಿಸತೊಡಗಿದೆ. ನನ್ನ ಸುಖ ಬದುಕಿಗೆ ಅವಳು ಅಡ್ದಿ ಎಂದು ಅವಳನ್ನು ಮೂದಲಿಸತೊಡಗಿದೆ. ಕೊನೆಗೊಂದಿನ, ಒಂದೊಮ್ಮೆ ನನಗೆ ಗಂಜಿ ಕುಡಿಸಿ ತಾನು ಅರೆಹೊಟ್ಟೆಯಲ್ಲಿರುತ್ತಿದ್ದ ಅಮ್ಮನನ್ನು, ನಾನು ಓದಿ ಮುಗಿಸುವವರೆಗೂ ಚಿಮಿಣಿ ದೀಪಕ್ಕೆ ಎಣ್ಣೆ ಹೊಯ್ಯುತ್ತಲೇ ರಾತ್ರಿ ಬೆಳಗಾಗಿಸುತ್ತಿದ್ದ ಅಮ್ಮನನ್ನು, ನನಗೋಸ್ಕರ ತನ್ನ ಗಂಡ ಬಾಳಿದ್ದ ಊರನ್ನೇ ಬಿಟ್ಟು ಬಂದ ಅಮ್ಮನನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬಂದೆ. ದಾರಿಯುದ್ದಕ್ಕೂ ನಾನವಳಿಗೆ ಅವಳನ್ನಲ್ಲಿ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅನ್ನುವುದನ್ನು ವಿವರಿಸುತ್ತಲೇ ಹೋದೆ. ಅವಳ ಕಣ್ಣುಗಳು ನಿರ್ಭಾವುಕವಾಗಿದ್ದವು.

ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಿದ ಮೇಲೆ ಮನೆಯಲ್ಲಿ ನಾನು ಮತ್ತು ನನ್ನ ಗಂಡ ಇಬ್ಬರೇ. ಆ ಬದುಕು ತುಂಬಾ ಚೆನ್ನಾಗಿತ್ತು. ಸ್ವರ್ಗಕ್ಕೆ ಮೂರೇ ಗೇಣು ಅಂತಾರಲ್ವಾ ಹಾಗಿತ್ತು. ಕೈ ತುಂಬಾ ಕೆಲಸ, ಗಂಡನ ಸಾನಿಧ್ಯ ನನಗೆ ಹಿಂದೆಂದೂ ಕಂಡರಿಯದಂತಹ ಖುಶಿ ನೀಡಿತ್ತು. ಆ ಖುಶಿ ಹಳೆ ಬದುಕನ್ನೂ, ಅದರಲ್ಲಿ ಅಮ್ಮನನ್ನೂ ಸಂಪೂರ್ಣವಾಗಿ ಮರೆಸಿತ್ತು.

ಆದ್ರೆ ಅಮ್ಮನೊಂದಿಗೆ ನಾನು ನಡೆದುಕೊಂಡ ರೀತಿಗೆ, ಕೇವಲ ನನ್ನ ಆಸರೆಯನ್ನಷ್ಟೇ ಬಯಸಿದ್ದ ಅವಳನ್ನು ವೃದ್ಧಾಶ್ರಮಕ್ಕೆ ಅಟ್ಟಿದ ಕ್ರೌರ್ಯಕ್ಕೆ ನಾನು ಒಂದಲ್ಲ ಒಂದು ದಿನ ಕಂದಾಯ ಕಟ್ಟಲೇಬೇಕಿತ್ತು. ಬದುಕು ನಿರ್ದಯವಾಗಿ ನನ್ನಿಂದ ಕಂದಾಯ ಕಟ್ಟಿಸಿಯೇಬಿಟ್ಟಿತು. ಅಮ್ಮನಿಲ್ಲದ ಬದುಕು ಸುಂದರ ಅನ್ನಿಸುತ್ತಿದ್ದಂತೆಯೇ ಅತ್ತ ಗಂಡನ ನಡವಳಿಕೆ ನಿಧಾನವಾಗಿ ಬದಲಾಗತೊಡಗಿತು. ಗೆಳೆಯರು, ಪಾರ್ಟಿ ಅಂತ ಮನೆಯಿಂದ ಹೆಚ್ಚು ಹೊರಗೇ ಇರತೊಡಗಿದ. ತಡರಾತ್ರಿ ಮನೆಗೆ ಬರುವುದು, ವಿಪರೀತ ಕುಡಿಯುವುದು ಎಲ್ಲಾ ಶುರು ಹಚ್ಚಿಕೊಂಡ. ಪ್ರಶ್ನಿಸಹೋದರೆ ಎಲ್ಲಾ ನಿನ್ನಿಂದಲೇ ಅನ್ನುತ್ತಿದ್ದ. ಕಣ್ಣೀರು ನನ್ನ ನಿತ್ಯ ಸಂಗಾತಿಯಾಯ್ತು. ಆದ್ರೆ ಮಾನ್ವಿ, ಆಗ್ಲೂ ನಂಗೆ ಅಮ್ಮ ನೆನಪಾಗ್ಲೇ ಇಲ್ಲ ನೋಡು.

ಈ ಮಧ್ಯೆ ಒಂದು ಮುಂಜಾನೆ ತಲೆಸುತ್ತು, ವಾಂತಿಯಾಗಿ ಒಂದು ಹೆಜ್ಜೆಯೂ ಮುಂದಿಡಲಾರದಷ್ಟು ನಿಶ್ಯಕ್ತಿಯಾಯಿತು. ಮನೆಯಲ್ಲಿ ನನ್ನ ಬಿಟ್ಟು ಮನುಷ್ಯರು ಅಂತ ಯಾರೂ ಇರ್ಲಿಲ್ಲ. ಹೇಗೂ ಕಷ್ಟಪಟ್ಟು ಪಕ್ಕದ ಮನೆಯಲ್ಲಿದ್ದ ಡಾಕ್ಟರ್ ಅನ್ನು ಮನೆಗೆ ಕರೆಸಿದೆ, ನನ್ನ ಪರೀಕ್ಷಿಸಿದ ಅವರು ನಾನು ಅಮ್ಮನಾಗುತ್ತಿದ್ದೇನೆ ಅಂದ್ರು. ನಾನು ನನ್ನ ನಿಶ್ಯಕ್ತಿಯನ್ನೂ ಮರೆತು ಗಂಡನಿಗೋಸ್ಕರ ಹಬ್ಬದಡುಗೆ ಮಾಡಿ ಮನೆಯ ತಲೆಬಾಗಿಲಲ್ಲಿ ಅವನಿಗೋಸ್ಕರ ಕಾಯತೊಡಗಿದೆ. ತುಂಬಾ ಒಳ್ಳೆಯ ಮೂಡಲ್ಲಿದ್ದ ಅವನು ಅವತ್ತು ನನಗೆ ಮತ್ತದೇ ಹಳೆ ಪ್ರೀತಿ ತೋರಿದ.

ಅಲ್ಲಿಂದಾಚೆ ಅವನ ಕುಡಿತ, ತಡರಾತ್ರಿಯ ಪಾರ್ಟಿಗಳಿಗೆ ಫುಲ್ ಸ್ಟಾಪ್ ಬಿತ್ತು. ಹೆಚ್ಚು ಹೆಚ್ಚು ಸಮಯ ನನ್ನ ಜೊತೆ ಕಳೆಯತೊಡಗಿದ. ಅವನ ಕಾಳಜಿ, ಪ್ರೀತಿ ನೋಡುವಾಗೆಲ್ಲಾ ಸಂತಸ ಮಗುವಿನ ಮೂಲಕ ಮತ್ತೆ ನನ್ನ ಬದುಕಿನೊಳಕ್ಕೆ ಕಾಲಿಟ್ಟಿದೆ ಅನಿಸುತ್ತಿತ್ತು. ನಾನು ಇನ್ನೂ ನೋಡೇ ಇಲ್ಲದ, ಕೈಗೆತ್ತಿಕೊಳ್ಳಲೇ ಇಲ್ಲದ ಮಗುವನ್ನು ಹೆಚ್ಚು ಹೆಚ್ಚು ಪ್ರೀತಿಸತೊಡಗಿದೆ. ಆಗಲೂ ಅಷ್ಟೆ ಅಮ್ಮನೂ ನನ್ನನ್ನು ಹೀಗೆ ಪ್ರೀತಿಸಿರಬಹುದು ಅಂತ ಒಮ್ಮೆಯೂ ಅನಿಸಲೇ ಇಲ್ಲ.

ಒಂದು ಮುಸ್ಸಂಜೆ ಇದೇ ರೀತಿ ಕಡಲತಡಿಯಲಿ ಅಲೆಗಳಿಂದ ಕಾಲು ಸೋಕಿಸಿಕೊಳ್ಳುತ್ತಾ ಅವನೆದೆಗೆ ಒರಗಿ ಕೂತು ಭವಿಷ್ಯದ ಕನಸು ಕಾಣುತ್ತಿದ್ದಾಗ ಅವನು, ನಾಳೆ ನಾವು ಬೇರೆ ಡಾಕ್ಟರ್ ಬಳಿ ಹೋಗಿ ಬರೋಣ, ಮಗುವಿನ ಬೆಳವಣಿಗೆಯ ಬಗ್ಗೆ ಒಬ್ಬರಿಗಿಂತ ಹೆಚ್ಚು ವೈದ್ಯರಿಂದ ಖಚಿತ ಪಡಿಸಿಕೊಂಡರೆ ಒಳ್ಳೆಯದಲ್ವಾ ಅಂದ. ಅವನ ಮಾತಿನಲ್ಲಿದ್ದ ಕಾಳಜಿಗೆ, ಮಗುವಿನ ಮೇಲಿನ ಪ್ರೀತಿಗೆ ಪರವಶಳಾಗಿ ನಾನು ಹೂಂಗುಟ್ಟಿದೆ. ಆ ಕ್ಷಣದಲ್ಲಿ ನನಗೇನನಿಸಿತೋ ಏನೋ, ನನ್ನ ಸಂಸಾರವನ್ನು ಹೀಗೆ ಉಳಿಸು ದೇವರೇ ಎಂದು ಕಣ್ಣುಮುಚ್ಚಿದೆ. ಆದ್ರೆ ಅಸ್ತು ಅನ್ನೋಕೆ ಅಲ್ಲಿ ಯಾವ ಅಶ್ವಿನಿ ದೇವತೆಗಳೂ ಇರಲಿಲ್ಲ.

ಮರುದಿನ ಲಗುಬಗೆಯಿಂದ ಸಿದ್ಧಳಾಗಿ ಅವನ ಜೊತೆ ಹೊರಟು ಆಸ್ಪತ್ರೆ ತಲುಪಿದೆ. ನನ್ನನ್ನು ಸ್ಕಾನಿಂಗಿಗೆಂದು ಒಳ ಕರೆದರು. ಮತ್ತೇನಾಯ್ತೋ ನನಗೊಂದೂ ಗೊತ್ತಿಲ್ಲ. ಕಣ್ಣುಬಿಟ್ಟು ನೋಡುವಾಗ ನಾನು ಮನೆಯಲ್ಲಿದ್ದೆ. ಸ್ಕಾನಿಂಗ್ ಮುಗಿಸಿ ನಿತ್ರಾಣಳಾದವಳನ್ನು ಗಂಡನೇ ಮನೆಗೆ ಕರೆತಂದು ಮಲಗಿಸಿರಬಹುದು ಅಂದುಕೊಂಡೆ. ಎದ್ದು ನಿಲ್ಲಲು ಪ್ರಯತ್ನಿಸಿದೆ. ಊಹೂಂ ಆಗಲೇ ಇಲ್ಲ. ಕಿಬ್ಬೊಟ್ಟೆಯಾಳದಿಂದ ಎದ್ದು ಬರುತ್ತಿದ್ದ ಯಾವುದೋ ಸಂಕಟವೊಂದು ಇಡೀ ದೇಹವನ್ನು ವ್ಯಾಪಿಸಿದೆ ಅನಿಸುತ್ತಿತ್ತು. ಸೊಂಟ ಇನ್ನೇನು ಬಿದ್ದೇ ಹೋಗುತ್ತದೆ ಅನ್ನುವಷ್ಟು ನೋವಾಗುತ್ತಿತ್ತು. ನೀರಿಗೆ ಗ್ಲೂಕೋಸ್ ಬೆರೆಸಿ ಕುಡಿಯೋಣ ಅಂತ ಅಂದುಕೊಂಡು ಮತ್ತೆ ಎದ್ದು ನಿಲ್ಲಲು ಪ್ರಯತ್ನಿಸಿದೆ. ಆದ್ರೆ ಎದ್ದು ನಿಲ್ಲಲಾಗಲೇ ಇಲ್ಲ. ದಿನಪೂರ್ತಿ ಮಲಗಲೂ ಆಗದೆ, ಏಳಲೂ ಆಗದೆ ಒದ್ದಾಡಿದೆ.

ಮರುದಿನ ಬೆಳಗ್ಗೆಯೂ ಅದೇ ಸ್ಥಿತಿ ಮುಂದುವರೆದಾಗ ಇನ್ನು ಸುಮ್ಮನಿದ್ದರೆ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾದೀತು ಅಂದುಕೊಂಡು ಕಷ್ಟಪಟ್ಟು ಎದ್ದು ಮತ್ತದೇ ಡಾಕ್ಟರ್ ಮನೆಗೆ ಎಡತಾಕಿದೆ. ನನ್ನನ್ನು ಕೂಲಕುಂಶವಾಗಿ ಪರೀಕ್ಷಿಸಿದ ಅವರು, ಇನ್ನೂ ಸರಿಯಾಗಿ ಬೆಳೆದೇ ಇಲ್ಲದ ಮಗುವನ್ನು ಹೊಟ್ಟೆಯಲ್ಲೇ ಸಾಯಿಸಿಬಿಡುವ ನಿಮ್ಮಂತವರು ಹೆಣ್ಣು ಅಂತ ಕರೆಸಿಕೊಳ್ಳುವುದಾದರೂ ಯಾಕೆ? ತಾಯ್ತನ, ಅದರ ಅನುಭೂತಿ ಏನು ಅನ್ನುವುದಾದರೂ ಗೊತ್ತಿದೆಯಾ ನಿಮಗೆ...? ಅಂತೆಲ್ಲಾ ಹೇಳುತ್ತಲೇ ಹೋದರು. ಮುಂದಿನದೊಂದೂ ನನಗೆ ಅರ್ಥವಾಗಲೇ ಇಲ್ಲ. ನನ್ನ ಹೊಟ್ಟೆಯಲ್ಲಿ ಮಗು ಇಲ್ಲ ಅನ್ನುವುದನ್ನು ಅರಗಿಸಿಕೊಳ್ಳಲಾಗದೇ ನಾನು ತಡವರಿಸುತ್ತಲೇ ಡಾಕ್ಟ್ರೇ ಪ್ಲೀಸ್ ಮತ್ತೊಮ್ಮೆ ಸರಿಯಾಗಿ ಪರೀಕ್ಷಿಸಿ ನೋಡಿ ಅಂತ ಅಂಗಲಾಚಿದೆ. ಅವರಿಗೂ ಎಲ್ಲೋ ಏನೋ ತಪ್ಪಾಗಿದೆ ಅಂತ ಅನಿಸಿತೋ ಏನೋ. ಮತ್ತೊಮ್ಮೆ ಪರೀಕ್ಷಿಸಿ ಅಬಾರ್ಷನ್ ಆಗಿದೆ ಅನ್ನುವ ಸತ್ಯವನ್ನು ದೃಢೀಕರಿಸಿದರು.

ಇದ್ದ ಬದ್ದ ಶಕ್ತಿಯನ್ನೆಲ್ಲಾ ಬಸಿದು ಆಟೋ ಹತ್ತಿ ಆಫೀಸಿಗೆ ಹೋದೆ. ಅಲ್ಲಿ ಅವನಿರಲಿಲ್ಲ. ಎರಡು ವಾರಗಳ ರಜೆ ಹಾಕಿ ಊರಿಗೆ ಹೋಗಿದ್ದಾನೆಂದು ಬಾಸ್ ತಿಳಿಸಿದರು. ಅಲ್ಲಿಂದ ಅವನ ಮನೆಯ ವಿಳಾಸ ತೆಗೆದು ಅವನನ್ನು ಹುಡುಕುತ್ತಾ ಹೊರಟೆ. ನಿಂಗೊತ್ತಾ ಮಾನ್ವಿ? ತಾಳಿ ಕಟ್ಟಿಸಿಕೊಳ್ಳುವಾಗಲೂ ನಿನ್ನ ಮನೆ ಎಲ್ಲಿ ಎಂದು ನಾನವನನ್ನು ಕೇಳಿರಲಿಲ್ಲ. ಅಂತೂ ಇಂತು ಸೂರ್ಯ ನೆತ್ತಿಗೇರುವ ಹೊತ್ತಿಗೆ ಅವನ ಮನೆ ಹುಡುಕಿ ಬಾಗಿಲಲ್ಲಿ ನಿಂತು ಕಾಲಿಂಗ್ ಬೆಲ್ ಒತ್ತಿದೆ . ಅವನೇ ಬಂದು ಬಾಗಿಲು ತೆರೆದ. ನಾನು ರೋಷದಿಂದ ನನಗೇಕೆ ಅಬಾರ್ಷನ್ ಮಾಡಿಸಿದೆ ಅಂತ ಕೇಳಬೇಕೆನ್ನುವಷ್ಟರಲ್ಲಿ ಮನೆಯೊಳಗಿಂದ ಮಹಿಳೆಯೊಬ್ಬರು ನಡೆದು ಬಂದರು.

ನನ್ನ ಸಂಸಾರದ ಗುಟ್ಟು ಅವರೆದುರು ರಟ್ಟಾಗುವುದು ಬೇಡವೆಂದು ಸುಮ್ಮನಾದೆ. ಅವನು ಬಾ ನೇತ್ರಾ ಅಂತ ನನ್ನ ಒಳ ಕರೆದ. ನಾನು ಒಳಹೋಗಿ ಕೂತೆ. ಆ ಮಹಿಳೆಗೆ ನನ್ನನ್ನವನು, ಇವಳು ನೇತ್ರಾ ನನ್ನ ಕೊಲೀಗ್ ಅಂತ ಪರಿಚಯಿಸಿದ. ನಂತರ ನನ್ನ ಕಡೆಗೆ ತಿರುಗಿ ಈಕೆ ನನ್ನ ಅರ್ಧಾಂಗಿ, ಮದುವೆ ಆಗಿ ಮೂರು ವರ್ಷ ಆಯ್ತು ಅಂತ ಅವರನ್ನು ಪರಿಚಯಿಸಿದ.

ಕ್ಷಣ ಹೊತ್ತು ನನ್ನ ಕಣ್ಣೆದುರು ನಡೆಯುತ್ತಿರುವುದು ಏನೆಂದೇ ನನಗರ್ಥ ಆಗಲಿಲ್ಲ. ಯಾರ ಮುಂದೆ ನಾನು ನನ್ನ ಸಂಸಾರದ ಗುಟ್ಟು ರಟ್ಟಾಗಬಾರದೆಂದು ಸುಮ್ಮನಿದ್ದೆನೋ ಅವರು ನನ್ನ ಗಂಡನ ಅಧಿಕೃತ ಪತ್ನಿಯಾಗಿದ್ದರು. ನನ್ನ ಗಂಡ ನನ್ನನ್ನು ಮದುವೆಯಾಗುವುದಕ್ಕಿಂತ ಮೂರು ವರ್ಷಗಳಷ್ಟು ಹಿಂದೆಯೇ ಅವರನ್ನು ಮದುವೆಯಾಗಿದ್ದ. ಕಾನೂನಿನ ಪ್ರಕಾರ ನನ್ನ ಮದುವೆ ಊರ್ಜಿತವೇ ಅಲ್ಲ. ಮೇಲಾಗಿ ಅವನ ಮೇಲಿನ ಹುಚ್ಚು ಪ್ರೀತಿಯಿಂದ ಅಮ್ಮನನ್ನೂ ಕರೆಯದೆ, ಸಹೋದ್ಯೋಗಿಗಳಿಗೂ ತಿಳಿಸದೆ ದೇವಸ್ಥಾನದಲ್ಲಿ ತಾಳಿ ಕಟ್ಟಿಸಿಕೊಂಡಿದ್ದೆ. ದೇವರೇನೂ ಕೋರ್ಟಿಗೆ ಬಂದು ಸಾಕ್ಷಿ ಹೇಳುವುದಿಲ್ಲವಲ್ಲಾ?  ಮದುವೆಯಾಗಿದೆ ಅನ್ನುವುದಕ್ಕೆ ನನ್ನ ಬಳಿ ಯಾವ ಸಾಕ್ಷಿಯೂ ಇರಲಿಲ್ಲ. ಹೊಟ್ಟೆಯಲ್ಲಿ ಮಗು ಇದ್ದಿದ್ದರೆ ಮುಂದೆಂದಾದರೂ ಸಾಬೀತುಪಡಿಸಬಹುದಿತ್ತೇನೋ? ಆದ್ರೆ ನಾನು ಪಾಪಿ ನೋಡು ಮಗುವನ್ನೂ ಉಳಿಸಿಕೊಳ್ಳಲಾಗಲಿಲ್ಲ ನನಗೆ" ಎಂದು ಹೇಳಿ ನೇತ್ರಾ ಮಾತು ನಿಲ್ಲಿಸಿದಳು.

ಸಾಯಲೆಂದು ತಾನು ಬಂದವಳು ಅನ್ನುವುದನ್ನೇ ಮರೆತು ತದೇಕಚಿತ್ತಳಾಗಿ ಅವಳ ಮಾತುಗಳನ್ನೇ ಕೇಳುತ್ತಿದ್ದ ಮಾನ್ವಿಯ ನಾಲಗೆಯಿಂದ "ಮುಂದೇನು ಮಾಡಿದ್ರ್ರಿ?" ಅನ್ನುವ ಪ್ರಶ್ನೆ ಅನಾಯಾಚಿತವಾಗಿ ಹೊರಬಿತ್ತು. ನೇತ್ರಾ "ಮಾಡುವುದೇನು? ನನ್ನ ಮುಂದಿದ್ದ ಬಾಗಿಲುಗಳೆಲ್ಲವೂ ಮುಚ್ಚಿಬಿಟ್ಟಿದ್ದವು. ನಾನು ಬೆಳಕಿಗೋಸ್ಕರ ಕಿಟಕಿಯ ಕಡೆ ಮುಖ ಮಾಡಲೇಬೇಕಿತ್ತು. ಆಗ ನೆನಪಾದ್ಳು ನೋಡು,
'ಅಮ್ಮ'

ನನ್ನ ಬದುಕಿಂದ ನಾನು ಯಾರನ್ನು ನಿಷ್ಕರುಣೆಯಿಂದ ಅಳಿಸಿಹಾಕಿದ್ದೆನೋ, ಯಾರ ಬಗ್ಗೆ ನಾನು ಅಸಹ್ಯಪಟ್ಟುಕೊಳ್ಳುತ್ತಿದ್ದೆನೋ, ಯಾರನ್ನು ನಾನು, ನನಗೂ ನನ್ನ ಸುಖಕ್ಕೂ ಇರುವ ಅಡ್ಡಿ ಅಂದುಕೊಂಡಿದ್ದೆನೋ ಅದೇ ಅಮ್ಮ ನೆನಪಾದ್ಳು. ಅವನೆಡೆಗೊಂದು ನಿರ್ಭಾವುಕ ನೋಟ ಬೀರಿ ಅಲ್ಲಿಂದ ಹೊರಬಂದು ಅಮ್ಮನಿದ್ದ ಆಶ್ರಮದ ಬಳಿ ಓಡಿದೆ. ಅಮ್ಮನನ್ನು ಹೇಗೆ ಎದುರಿಸಲಿ ಅನ್ನುವ ತಲ್ಲಣಗಳನ್ನೆಲ್ಲಾ ಅವಿತಿಟ್ಟು ಆಶ್ರಮದ ಬಾಗಿಲಲ್ಲಿ ನಿಂತು ’ಅಮ್ಮಾ’ ಎಂದು ಚೀರಿ ಕಣ್ಣುಮುಚ್ಚಿದೆ. ಒಳಗಿಂದ ಹಿರಿಜೀವವೊಂದು ಭಾರವಾದ ಹೆಜ್ಜೆ ಇಟ್ಟುಕೊಂಡು ನನ್ನೆಡೆಗೆ ಬರುತ್ತಿರುವುದು ಒಳಗಣ್ಣಿಗೆ ಸ್ಪಷ್ಟವಾಗಿ ಗೋಚರವಾಗುತ್ತಿತ್ತು.

ಆದ್ರೆ ಆಕೆ ನನ್ನಮ್ಮ ಆಗಿರ್ಲಿಲ್ಲ. ನಿಮ್ಮಮ್ಮ ಸತ್ತು ಹೋಗಿ ಎರಡು ವಾರಗಳಾಯ್ತು, ನಿಮ್ಮನ್ನು ಸಂಪರ್ಕಿಸಲು ತುಂಬಾ ಪ್ರಯತ್ನಪಟ್ವಿ, ಆದ್ರೆ ನೀವು ನಮ್ಮ ಕರೆ ಸ್ವೀಕರಿಸಲೇ ಇಲ್ಲ. ಕೊನೆಗೆ ಅನಾಥ ಶವವೆಂದು ನಾವೇ ಸಂಸ್ಕಾರ ಮಾಡಿಬಿಟ್ಟೆವು ಅನ್ನುವ ಮಾತುಕೇಳಿ ನಾನು ಕಣ್ತೆರೆದೆ. ಆಶ್ರಮದ ಹಿರಿಯ ಪರಿಚಾರಿಕೆಯೊಬ್ಬರು ನನ್ಮುಂದೆ ನಿಂತಿದ್ದರು. ನಾನು ಆರ್ದ್ರಳಾಗಿ ಅವರತ್ತ ನೋಡಿದೆ. ಅವರ ಕಣ್ಣುಗಳಲ್ಲಿದ್ದುದು ನನ್ನೆಡೆಗೆ ಬರಿ ತಿರಸ್ಕಾರ ಮಾತ್ರ. ಅವತ್ತಿನ ದಿನ ನಾನು ಡಾಕ್ಟರ್, ಗಂಡ ಮತ್ತು ಪರಿಚಾರಿಕೆ ಎಂದು ಮೂವರಿಂದ ತಿರಸ್ಕೃತಳಾಗಿದ್ದೆ. ಬದುಕಲ್ಲಿ ಮೊದಲ ಬಾರಿ ತಿರಸ್ಕಾರದ ನೋವನ್ನು ಅನುಭವಿಸಿದೆ. ಆದರೆ ಆ ನೋವಿಗಿಂತಲೂ ಹೆಚ್ಚಾಗಿ ನನ್ನನ್ನು ಪಾಪಪ್ರಜ್ಞೆ ಕಾಡತೊಡಗಿತು. ಬದುಕಲು ನನಗೆ ಇನ್ನಾವ ಕಾರಣಗಳೂ ಉಳಿದಿಲ್ಲ ಅನ್ನುವ ಭಾವನೆಯಲ್ಲಿ ಮತ್ತಿದೇ ಕಡಲ ತೀರಕ್ಕೆ ಬಂದೆ" ಅನ್ನುತ್ತಾ ಮತ್ತೆ ಮಾತು ನಿಲ್ಲಿಸಿದಳು.

ಅವಳು "ಮುಂದೇನು?" ಅನ್ನುವಂತೆ ನೇತ್ರಾಳ ಮುಖ ನೋಡಿದಳು. "ಒಮ್ಮೆ ಇಲ್ಲಿ ತಲುಪಿದೆ ನೋಡು, ಈ ಕಡಲು, ಇದರ ವಿಶಾಲತೆ ನನಗೆ ಬದುಕು ಇನ್ನೂ ಮುಗಿದಿಲ್ಲ ಅನ್ನುವ ಅಭಯ ನೀಡುತ್ತಿದೆ ಅನಿಸಿತು. ಅಮ್ಮ ಇಲ್ಲೇ ಎಲ್ಲೋ ಇದ್ದಾಳೆ ಅನ್ನುವ ಭಾವ ಕಾಡತೊಡಗಿತು. ತೀರದ ಪೂರ್ತಿ ನಡೆದೆ. ಚಪ್ಪಲಿ ಬಿಚ್ಚಿಟ್ಟು ಕಡಲಿನೊಳಕ್ಕೆ ಇಳಿದು ಮೂರು ಬಾರಿ ಮುಳುಗು ಹಾಕಿ ಮೇಲೆದ್ದೆ. ನನ್ನೊಳಗಿನ ದುಗುಡಗಳನ್ನೆಲ್ಲಾ ಕಡಲು ತೊಡೆದು ಹಾಕಿದಂತಾಯಿತು. ಇಲ್ಲಿಂದ ನೇರ ಮನೆಗೆ ನಡೆದು ಒಪ್ಪವಾಗಿ ಕೂತು ಕೆಲಸ ಮಾಡುತ್ತಿದ್ದ ಕಛೇರಿಗೆ ರಾಜೀನಾಮೆ ಪತ್ರ ಬರೆದೆ. ನನಗೆ ನಿಜಕ್ಕೂ ಅವನಿಂದ ದೂರ ಹೋಗಬೇಕು ಅಂತಿರಲಿಲ್ಲ, ಆದ್ರೆ ಅವನ ನೆನಪುಗಳಿಂದ ದೂರ ಹೋಗ್ಲೇಬೇಕಿತ್ತು. ಅವನೊಂದಿಗಿನ ನನ್ನ ಬದುಕಲ್ಲಿದ್ದ ಕತ್ತಲೆಯನ್ನು ಓಡಿಸಲೇಬೇಕೆಂಬ ಜಿದ್ದಿಗೆ ಬಿದ್ದವಳಂತೆ ಮನೆಯಿಡೀ ದೀಪ ಹಚ್ಚಿ, ಆ ಬೆಳಕಲ್ಲಿ ಅದೆಲ್ಲೋ ಧೂಳು ತುಂಬಿ ಇದ್ದ ಅಮ್ಮನ ಫೋಟೋವನ್ನು ತಂದು ಎದುರಿಗಿಟ್ಟು ಸುಮ್ಮನೆ ನೋಡುತ್ತಾ ಕುಳಿತೆ.

ಅಲ್ಲಿಂದಾಚೆ ಪ್ರತಿ ರಾತ್ರಿ ಮಲಗುವ ಮುನ್ನ ’ನನಗಿವತ್ತು ಅವನು ಒಮ್ಮೆಯೂ ನೆನಪಾಗಲೇ ಇಲ್ಲ’ ಅನ್ನುವ ಅತಿ ಚಿಕ್ಕ ಸುಳ್ಳನ್ನು ನನಗೆ ನಾನೇ ಹೇಳಿಕೊಂಡು ಮಲಗಲಾರಂಭಿಸಿದೆ. ಆರು-ಏಳು ತಿಂಗಳುಗಳು ಕಳೆಯುವಷ್ಟರಲ್ಲಿ ಆ ಸುಳ್ಳೇ ಸತ್ಯ ಆಯ್ತು. ಕಿತ್ತು ತಿನ್ನುವ ಹಳೆ ನೆನಪುಗಳಿಂದ ನಿಧಾನವಾಗಿ ಬಿಡುಗಡೆ ಪಡೆದುಕೊಂಡೆ. ಅಷ್ಟು ಹೊತ್ತಿಗಾಗುವಾಗಲೇ ಬೇರೊಂದು ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡುಬಿಟ್ಟಿದ್ದೆ. ಮೈಯಲ್ಲಿ ದುಡಿಯುವ ಕಸುವು, ಕೈಯಲ್ಲಿ ಕೆಲಸ, ಬದುಕಲ್ಲಿ ಅಮ್ಮ ಕೊಟ್ಟ ವಿದ್ಯೆ... ಇಷ್ಟಿರುವಾಗ ಅವನಾದರೂ ಯಾಕೆ ನೆನಪಾಗಬೇಕು?" ಅಂತ ಪ್ರಶ್ನಿಸಿ ಹೊರಡಲೆಂದು ಎದ್ದು ನಿಂತಳು ನೇತ್ರಾ. ಅವಳ ಮಾತುಗಳಲ್ಲಿ ನೀನೀಗ ಮಾಡಬಹುದಾಗಿರುವುದಾದರೂ ಇಷ್ಟೇ ಅನ್ನುವ ಭಾವ ಎದ್ದು ಕಾಣುತ್ತಿತ್ತು.

ಹೊರಟವಳನ್ನು ತಡೆದು ನಿಲ್ಲಿಸಿದ ಮಾನ್ವಿ "ಹಾಗಾದ್ರೆ ಹಳೆ ಪ್ರೀತಿಯನ್ನು ಮರೆತು ಬೇರೆ ಮದುವೆ ಆದ್ರಾ? ಅವನು ಮಾಡಿದ್ದು ಮೋಸವೇ ಆಗಿದ್ದರೂ ಅಷ್ಟೊಂದು ಸುಲಭವಾಗಿ ಇನ್ನೊಬ್ಬನ ಜೊತೆ ಹೇಗೆ ಬದುಕು ಹಂಚಿಕೊಂಡಿರಿ?" ಅಂತ ಪ್ರಶ್ನಿಸಿದಳು. "ಅವನನ್ನು ಮರೆತದ್ದೇನೋ ನಿಜ, ಆದ್ರೆ ಇನ್ನೊಂದು ಮದುವೆಯಾಗಬೇಕು ಅಂತ ನನಗೆ ಅನ್ನಿಸಲೇ ಇಲ್ಲ. ಅಮ್ಮನನ್ನು ಬೀದಿಪಾಲು ಮಾಡಿದ್ನಲ್ಲಾ, ಅದಕ್ಕೆ ಪ್ರಾಯಶ್ಚಿತ್ತ ಬೇರೆ ಮಾಡ್ಕೊಳ್ಬೇಕಿತ್ತು. ಮೇಲಾಗಿ ನನ್ನೊಳಗೆ ಪ್ರತಿಷ್ಠಾನವಾಗಿದ್ದ ಪ್ರೀತಿಯನ್ನು ಮರೆಯಲು ಯತ್ನಿಸಿದ್ದ ಆ ಆರು ತಿಂಗಳುಗಳಿವೆಯಲ್ಲಾ, ಆ ಅವಧಿಯಲ್ಲಿ ನನಗೆ ’ಈ ಕ್ಷಣದಲ್ಲಿ ಇಲ್ಲೊಂದು ಪ್ರೀತಿ ಕಣ್ಣು ಬಿಡುವಾಗ ಈ ಜಗತ್ತಿನ ಇನ್ನಾವುದೋ ಒಂದು ಮೂಲೆಯಲ್ಲಿ ಹುಡುಗಿಯೊಬ್ಬಳು ಬಟಾಬಯಲಲ್ಲಿ ತನಗಾದ ಮೋಸಕ್ಕಾಗಿ ತತ್ತರಿಸುತ್ತಿರುತ್ತಾಳೆ, ಇದೇ ಕಡಲಿನ ಮತ್ಯಾವುದೋ ಒಂದು ತೀರದಲ್ಲಿ ಹುಡುಗಿಯೊಬ್ಬಳು ಹೆಣೆದ ವಂಚನೆಯ ಜಾಲದಲ್ಲಿ ಹುಡುಗನೊಬ್ಬ ವಿಲ ವಿಲ ಒದ್ದಾಡುತ್ತಿರುತ್ತಾನೆ, ಇಲ್ಲಿ ಹುಟ್ಟಿದ ಪ್ರೀತಿಯ ಆತ್ಮ ಅದೆಲ್ಲೋ ಮಗ್ಗುಲು ಬದಲಿಸುತ್ತಿರುತ್ತದೆ’ ಅನ್ನುವುದು ತುಂಬಾ ಸ್ಪಷ್ಟವಾಗಿ ಅರ್ಥವಾಗಿಹೋಗಿತ್ತು. ಹಾಗಾಗಿ ಮತ್ತೊಮ್ಮೆ ಇನ್ನೊಂದು ಸಂಬಂಧದೆಡೆಗೆ ಕೈ ಚಾಚಬೇಕು ಅಂತ ಅನಿಸಲೇ ಇಲ್ಲ" ಅಂದಳು ನೇತ್ರಾ. "ಹಾಗಾದ್ರೆ ಈ ಮಗು?" ಅವಳ ಗೊಂದಲಗಳಿನ್ನೂ ಮುಗಿದಿರಲಿಲ್ಲ.

"ಇದಾ? ಇಡೀ ಮನೆಯಲ್ಲಿ ಹಣತೆ ಹಚ್ಚಿ ಕುಳಿತುಕೊಂಡೆ ಅಂದೆನಲ್ಲಾ, ಅವತ್ತೇ ರಾತ್ರಿ ಈ ಮನೆಯಲ್ಲೇ ನಾನು ಅಮ್ಮನಾಗಬೇಕು ಅನ್ನುವ ನಿರ್ಧಾರಕ್ಕೆ ಬಂದೆ. ಅಲ್ಲಿಂದಾಚೆ, ಸ್ವಂತ ತಾಯಿಯಿಂದ, ಸಮಾಜದಿಂದ ತಿರಸ್ಕೃತರಾಗಿ ಕಸದ ತೂಟಿಯಲ್ಲಿ, ಬೀದಿಬದಿಯಲ್ಲಿ, ಚರಂಡಿಗಳಲ್ಲಿ, ಹೊಳೆ ಸಂದಿಗಳಲ್ಲಿ ಕಣ್ಣು ಬಿಡುತ್ತಿರುವ ಹಾಲುಗಲ್ಲದ ಹಸುಳೆಗಳನ್ನು ಮನೆಗೆ ಕರೆತಂದು ಸಾಕತೊಡಗಿದೆ. ಮಕ್ಕಳಿಲ್ಲದ ನನಗೆ ಅವರೇ ಮಕ್ಕಳು, ತಾಯಿಯಿಲ್ಲದ ಅವರಿಗೆ ನಾನೇ ತಾಯಿ. ನಾನು ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ನೋಡಿಕೊಳ್ಳಲೆಂದು ನಿಸ್ಪೃಹ ಮನಸ್ಸಿನ ಇಬ್ಬರು ಆಯಾಗಳನ್ನು ಗೊತ್ತು ಮಾಡಿದ್ದೇನೆ, ಅವರು ನನಗಿಂತಲೂ ಚೆನ್ನಾಗಿ ಅವರನ್ನು ನೋಡಿಕೊಳ್ಳುತ್ತಾರೆ. ಈ ಮಗುವಿನಂತಹ ಇನ್ನೂ ಹನ್ನೆರಡು ಮಕ್ಕಳು ನಮ್ಮ ಮನೆಯನ್ನೀಗ ನಂದಗೋಕುಲವನ್ನಾಗಿಸಿದ್ದಾರೆ. ಆ ಮಕ್ಕಳ ಮುಗ್ಧ ಕಣ್ಣುಗಳಲ್ಲಿ, ಪುಟ್ಟ ಪುಟ್ಟ ಪಾದಗಳಲ್ಲಿ, ಇನ್ನೂ ಹಸಿ ಆರಿರದ ಅಂಗೈಗಳಲ್ಲಿ ಅಮ್ಮನನ್ನು ಕಾಣುತ್ತೇನೆ. ಅವರೆಲ್ಲಾ ನನ್ನ ತಬ್ಬಿಕೊಂಡು ಅಮ್ಮಾ ಎಂದು ಕರೆವಾಗ, ರಾತ್ರಿ ಕಥೆ ಹೇಳೆಂದು ಪೀಡಿಸುವಾಗ, ಗುಮ್ಮ ಬಂದ ಎಂದು ನನ್ನ ಮಡಿಲಲ್ಲಿ ಮುಖ ಮುಚ್ಚಿಕೊಳ್ಳುವಾಗೆಲ್ಲಾ ಅಮ್ಮನೇ ಎದ್ದು ಬಂದು ನನ್ನ ತಲೆ ನೇವರಿಸಿದಂತಾಗುತ್ತದೆ" ಅಂತಂದು ನೇತ್ರಾ ಮಗುವಿನ ಕೈ ಹಿಡಿದು ಹೇಳಾಬೇಕಾದ್ದನ್ನೆಲ್ಲಾ ಹೇಳಿದ್ದೇನೆ ಅನ್ನುವ ಭಾವದಲ್ಲಿ "ನಾವಿನ್ನು ಹೊರಡುತ್ತೇವೆ, ಸಾಯುವ ಕೊನೆ ಕ್ಷಣದಲ್ಲಿ ನನ್ನ ಬದುಕಿನ ಕಥೆ ಕೇಳುವಂತಹ ಸಹನೆಯನ್ನು ತೋರಿದ್ದಿಯಲ್ಲಾ, ನಿನಗೆ ನಾನೆಂದೂ ಋಣಿಯಾಗಿರುತ್ತೇನೆ. ನೀನೀಗ ನಿಶ್ಚಿಂತೆಯಿಂದ ಸಾಯಬಹುದು" ಅಂದು ಕಡಲಿಂದ ದೂರ ದೂರ ನಡೆಯತೊಡಗಿದಳು.

ಹಿಂದಿನಿಂದ ತುಸು ಉದ್ವೇಗ ತುಂಬಿದ  "ಒಂದ್ನಿಮಿಷ" ಅನ್ನುವ ಮಾತು ಕೇಳಿತು. ತನಗಿದೇ ಬೇಕಾಗಿತ್ತೇನೋ ಅನ್ನುವಂತೆ ನೇತ್ರಾ ತನ್ನ ನಡಿಗೆಯನ್ನು ನಿಧಾನಗೊಳಿಸಿದಳು. ಓಡುತ್ತಾ ಬಂದ ಮಾನ್ವಿ ಅವಳನ್ನು ತಬ್ಬಿಕೊಂಡು "ನಾನು ಸಾಯುವುದಿಲ್ಲ, ಬದುಕುತ್ತೇನೆ, ಅದೂ ನನ್ನ ತಿರಸ್ಕರಿಸಿದವನ ಮುಂದೆ ತಲೆ ಎತ್ತಿ ಬದುಕುತ್ತೇನೆ " ಅಂತಂದು ಒಂದು ಕ್ಷಣ ತಡೆದು "ಈ ಮಕ್ಕಳಿಗೆಲ್ಲಾ ಅಮ್ಮನಾಗಿರುವ ನೀವು ನನಗೆ ಅಕ್ಕ ಆಗಲಾರಿರಾ?" ಎಂದು ಕೇಳಿದಳು. ನೇತ್ರಾ ಆಗಲಿ ಎಂಬಂತೆ ಅವಳ ಬರಸೆಳೆದು ಅಪ್ಪಿ ತಲೆನೇವರಿಸಿದಳು. ದೂರದಲ್ಲೆಲ್ಲೋ ಶಕುನದ ಹಕ್ಕಿ ಶುಭಂ ಹಾಡಿತು.

(ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿತ)