ಭಾನುವಾರ, ಜೂನ್ 28, 2015

ಮೌನ ಕಣಿವೆಯಲಿ...

ಸಂಚಾರ 9


ನೋಡ ನೋಡುತ್ತಿದ್ದಂತೆಯೇ ಇಪ್ಪತ್ತಮೂರು ವರ್ಷಗಳು ಕಳೆದು ಹೋದವು. ಮುಖ್ಯ ಶಿಕ್ಷಕರಾಗಿದ್ದ ಮನೋಹರ್ ರಾವ್ ಅವರು ನಿವೃತ್ತರಾಗಿ ಅವರ ಸ್ಥಾನವನ್ನು ನಾನು ಅಲಂಕರಿಸಿದ್ದೆ. ಅವರು ನನಗೆ ಅಧಿಕಾರ ಬಿಟ್ಟುಕೊಡಲು ನಿರ್ಧರಿಸಿದಾಗ ನನ್ನಿಂದ ನಿಭಾಯಿಸಲು ಸಾಧ್ಯವಿಲ್ಲವೆಂದು ನಾನು ನಿರಾಕರಿಸಿದ್ದೆ. ನನ್ನೊಳಗೆ ಧೈರ್ಯ ತುಂಬಿ ಈ ಹುದ್ದೆಗೆ ನಾನೇ ಅರ್ಹಳೆಂದು ನನಗೇ ನಂಬಿಕೆ ಹುಟ್ಟಿಸಿದ್ದರು. ತೀರಾ ಅವರ ಖುರ್ಚಿಯಲ್ಲಿ ಕುಳಿತುಕೊಳ್ಳುವ ಮುನ್ನ ನಾನು ಪುಟ್ಟ ಮಗುವಿನಂತೆ ಅತ್ತಿದ್ದೆ. ಅವರು ಒಂದು ಮಾತೂ ಹೇಳದೆ ಸುಮ್ಮನೆ ತಲೆ ನೇವರಿಸಿದ್ದರು. ಯಾವ ಜನ್ಮದಲ್ಲಿ ನನ್ನ ತಂದೆಯಾಗಿದ್ದರೋ?

ಇನ್ನು ಅಂಬೆಗಾಲಿಕ್ಕುತ್ತಾ ಹಿಂದೆ ಮುಂದೆ ಸುತ್ತಾಡಿಕೊಂಡು ಬಿಸಿಲ ಬೇಗೆಯಂತಹಾ ನನ್ನ ಒಂಟಿ ಬದುಕಿಗೆ ತಣ್ಣೀರ ಸಿಂಚನದಂತಿದ್ದ ಮಗಳೀಗ ಪದವೀಧರೆ, ಉದ್ಯೋಗಸ್ತೆ. ಶಿಕ್ಷಣದ ಜೊತೆಗೆ ಎಲ್ಲೂ ರಾಜಿಯಾಗದೆ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಮಲ್ಟಿನ್ಯಾಷನಲ್ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿ ತನ್ನ ಕಾಲ ಮೇಲೆ ನಿಂತಿದ್ದಾಳೆ. ನನ್ನ ಬದುಕಿನ ಎಲ್ಲಾ ಅರೆಕೊರೆಗಳಿಗೆ, ಪ್ರಶ್ನೆಗಳಿಗೆ ಉತ್ತರವಾಗಿ ಅವಳೀಗ ನನಗೆ ಆಸರೆಯಾಗಿದ್ದಾಳೆ.

ಇನ್ನೇನಿದ್ದರೂ ಒಳ್ಳೆಯ ಕಡೆ ನೋಡಿ ಅವಳಿಗೊಂದು ಮದುವೆ ಮಾಡಿಬಿಟ್ಟರೆ ನನಗೆ ನೆಮ್ಮದಿ. ಆಮೇಲೆ ನಾನು ನನ್ನ ಉಳಿದ ಜೀವನವನ್ನು ಶಾಲೆಗಾಗಿ ಮುಡಿಪಿಡಬಹುದು ಅಂದುಕೊಳ್ಳುತ್ತಿರುವಾಗಲೇ ಒಂದು ದಿನ ಅವಳು ಒಬ್ಬ ಹುಡುಗನನ್ನು ತಂದು ನನ್ನ ಮುಂದೆ ನಿಲ್ಲಿಸಿ "ಅಮ್ಮಾ, ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಿದ್ದೇವೆ. ನೀನೊಪ್ಪಿಗೆ ಕೊಟ್ಟರೆ ಮದುವೆಯಾಗುತ್ತೇವೆ" ಅಂದಳು. ಒಮ್ಮೆ ಬೆಚ್ಚಿ ಬಿದ್ದೆ. ಪ್ರೀತಿ ಪ್ರೇಮ ಎಂದೆಲ್ಲಾ ಹೋದರೆ ಎಲ್ಲಿ ಅವಳ ಬದುಕೂ ನನ್ನಂತಾಗಿಬಿಡುತ್ತೋ ಅನ್ನುವ ಭಯ ಕಾಡಿತು.

ಆದರೆ ಹುಡುಗನ ಇತಿಹಾಸ ಕೆದಕಿದಾಗ ಅವನು, ನನ್ನ ಬದುಕಿಗೆ ಹೊಸ ಬೆಳಕನ್ನು ತೋರಿದ ಮನೋಹರ್ ರಾವ್ ಅವರ ಪುತ್ರ ಅನ್ನುವುದು ತಿಳಿಯಿತು. ಮುಂದೇನೂ ಯೋಚಿಸಬೇಕಾಗಿರಲಿಲ್ಲ. ಅಂತಹಾ ಹೆಂಗರುಳಿನ ಹಿರಿಯರ ಮನೆಗೆ ನನ್ನ ಮಗಳು ಸೊಸೆಯಾಗಿ ಹೋದರೆ ಸುಖವಾಗಿ ಇರುತ್ತಾಳೆ ಅಂದುಕೊಂಡು ನನ್ನ ಕಣ್ಣಿಂದ ಎರಡು ಹನಿ ಸಂತೋಷದ ಅಶ್ರುಧಾರೆ ಜಾರಿತು, ಅದು ನೆಲ ಸೇರದಂತೆ ಮಗಳು ಕೈಯೊಡ್ಡಿ ಕಣ್ಣಿಗೊತ್ತಿಕೊಂಡಳು.

ಮುಂದೆ ಎಲ್ಲವೂ ಸಲೀಸಾಗಿಯೇ ನಡೆದು ಹೋಯಿತು. ಮನೋಹರ್ ರವರ ಮನೆಗೆ ಹೋಗಿ ನಾನೆ ಮದುವೆಯ ಪ್ರಸ್ತಾಪವನ್ನಿಟ್ಟೆ. ಆ ಹಿರಿ ಜೀವ ಯಾವ ತಕರಾರೂ ಮಾಡದೆ, ವರ ದಕ್ಷಿಣೆ ವರೋಪಚಾರ ಎಂದು ಯಾವ ರಗಳೆಯನ್ನೂ ಮಾಡದೆ, ಜಾತಕ ಜ್ಯೋತಿಷ್ಯದ ಗೊಡವೆಯೇ ಬೇಡವೆಂದು ಮದುವೆಗೆ ಒಪ್ಪಿಕೊಂಡರು. ಮೊದಲು ರಿಜಿಸ್ಟ್ರಾರ್ ಆಫೀಸಿನಲ್ಲಿ ನಂತರ ದೇವಸ್ಥಾನದಲ್ಲಿ ಸರಳವಾಗಿ ಇಬ್ಬರ ಮದುವೆ ಕೆಲವೇ ಕೆಲವು ಹಿತೈಷಿಗಳ ಸಮ್ಮುಖದಲ್ಲಿ ನಡೆದು ಹೋಯಿತು. ತೀರಾ ಧಾರೆ ಎರೆದುಕೊಡುವ ಹೊತ್ತಿಗೆ  ಅವಳ ಅಪ್ಪನ ನೆನಪಾದುದನ್ನು ಬಿಟ್ಟರೆ, ಕಾವ್ಯಾಳಿಗೆ ಮಕ್ಕಳಾಗಿದ್ದರೆ ಅವಳ ಮಕ್ಕಳೂ ಈಗ ಮದುವೆಯ ವಯಸ್ಸಿಗೆ ಬಂದಿರುತ್ತಾರೆ ಅಂತ ಅನ್ನಿಸಿರುವುದನ್ನು ಬಿಟ್ಟರೆ ಇನ್ನೆಲ್ಲೂ ಅವರಿಬ್ಬರಿರದಿರುವುದು ಕೊರತೆಯಾಗಿ ಕಾಡಲೇ ಇಲ್ಲ.  ಮನೋಹರ್ ರವರಂತಹ ಶುದ್ಧಮನಸ್ಕರು ರಶ್ಮಿಗೆ ಅಪ್ಪ, ಮಾವ ಎರಡೂ ಆಗುತ್ತಿರುವಾಗ ವಂಚಕರು ನೆನಪಾಗುವುದಾದರೂ ಹೇಗೆ?

ಮಗಳಿಲ್ಲದ ಅಮ್ಮನ ಮನೆಯಲ್ಲಿ ನಾನೀಗ ಮತ್ತೆ ಒಂಟಿ. ಈ ಒಂಟಿತನದಲ್ಲಿ ಕಿತ್ತು ತಿನ್ನುವ, ಇಂಚಿಂಚಾಗಿ ಕೊಲ್ಲುವ ಕಹಿ ಘಟನೆಗಳ ಕರಿ ನೆರಳಿಲ್ಲ. ೨೩ ವರ್ಷಗಳ ಜೀವನದ ಅನನ್ಯ ಅನುಭವಗಳ ಸಾರ್ಥಕ್ಯವಿದೆ. ಒಮ್ಮೆ ಪಾತಾಳಕ್ಕಿಳಿಸಿ ಮತ್ತೊಮ್ಮೆ ಆಕಾಶದೆತ್ತರೆಕ್ಕೆ ಏರಿಸಿದ ಏರಿಳಿತಗಳ ಬಾಳಿನೆಡೆಗಿನ ಹೆಮ್ಮೆಯಿದೆ. ನಾನೀಗ ಮತ್ತೆ ಅಪ್ಪನ ಫೊಟೋದ ಮುಂದೆ ನಿಂತಿದ್ದೇನೆ. ನನ್ನೊಳಗಿನ ಮೌನ "ಅಪ್ಪಾ, ಕೊನೆಗೂ ನಿನ್ನ ಈ ಭೂಮಿ ತೂಕದ ಮಗಳ ಸಹನೆ ಗೆದ್ದಿತು" ಅಂತ ಪಿಸುಗುಡುತ್ತಿದೆ. ಬದುಕೀಗ ದಾಳಗಳನ್ನೆಲ್ಲಾ ಚೆಲ್ಲಿ, ಆಟ ನಿಲ್ಲಿಸಿ ನನ್ನೆಡೆಗೆ ಮುಗಳ್ನಗು ಬೀರುತ್ತಿದೆ.


                                                                                                                               (ಮುಗಿಯಿತು)                 

ಮೌನ ಕಣಿವೆಯಲಿ...

ಸಂಚಾರ 8



ನನ್ನ ಬದುಕಿನ ಯಾನ ಮತ್ತೆ ಹುಟ್ಟಿ ಬೆಳೆದ ಹಳ್ಳಿಯ ಕಡೆ ಹೊರಳಿತು. ಪುಟ್ಟ ಮಗುವನ್ನೆತ್ತಿಕೊಂಡು ಅಮ್ಮನಿಲ್ಲದ ತವರಿಗೆ ಮರಳಿದೆ. ನನ್ನ ಬದುಕಿನಂತೆಯೇ ಮನೆ ಪೂರ್ತಿ ಜೇಡರ ಬಲೆ ತುಂಬಿಕೊಂಡಿತ್ತು.  ನಾನು ಮಗುವಾಗಿದ್ದಾಗ ಅಪ್ಪ ನನಗೆಂದು ತಂದ ತೊಟ್ಟಿಲನ್ನು ಮೊದಲು ಸ್ವಚ್ಛಗೊಳಿಸಿ ಮಗಳನ್ನು ಮಲಗಿಸಿದೆ. ಬಿಟ್ಟು ಹೋಗಿ ಒಂದು ವರ್ಷವಾಗಿದ್ದರೂ ಈ ಮನೆಯ ಪ್ರತಿ ಇಂಚಲ್ಲೂ ಅಮ್ಮ, ಅಜ್ಜಿ, ಅಪ್ಪನ ನೆನಪುಗಳಿವೆ ಅನಿಸುತಿತ್ತು. ಧೂಳು ತುಂಬಿಕೊಂಡಿದ್ದ ಫೊಟೋ ಒರೆಸಿ ಅಪ್ಪನ ಮುಂದೆ ನಿಂತು "ಅಪ್ಪಾ, ಭೂಮಿಗೂ ಪಾಸಿಟಿವ್ ಮತ್ತು ನೆಗೆಟಿವ್ ಗಳೆಂಬ ಎರಡು ಅಂತ್ಯಗಳಿವೆ. ಜೀವಜಲ ಬಚ್ಚಿಟ್ಟುಕೊಂಡಿರುವ ಅದೇ ಭೂಮಿಯೆದೆಯೊಳಗೆ ಹಲವು ರೋಷಗಳ, ಅಸಹಾಯಕತೆಗಳ, ನೋವುಗಳ ಒಟ್ಟು ಮೊತ್ತವಾದ ಜ್ವಾಲಾಮುಖಿಯೂ ಇದೆ. ಒತ್ತಡ ಹೆಚ್ಚಾದರೆ ಭೂಮಿಯೂ ಸ್ಪೋಟಿಸಿಬಿಡುತ್ತಾಳೆ. ಇನ್ನು ಹುಲುಮಾನವರಾದ ನಾವು ಯಾವ ಲೆಕ್ಕ? ಆದ್ರೆ ನಿನ್ನ ಮಗಳು ಅಳಿಯನಿಗೆ ಈ ಸರಳ ಸತ್ಯ ಅರ್ಥ ಆಗಲೇ ಇಲ್ಲ. ಅಪ್ಪಾ, ನಿನ್ನ ಈ ಭೂಮಿ ತೂಕದ ಮಗಳು ಸ್ಪೋಟಿಸಬಾರದೆಂದು ಮನೆ ಬಿಟ್ಟು ಬಂದಿದ್ದಾಳೆ. ಆಶಿರ್ವಾದಿಸು." ಅಂದೆ. ಯಾಕೋ ಅಪ್ಪ, ಅಮ್ಮನ ಕಣ್ಣಲ್ಲೂ ತೆಳುವಾಗಿ ನೀರು ಓಲಾಡುತ್ತಿದೆ ಅನಿಸಿತು. ಬದುಕು ನಗುತ್ತಿತ್ತಾ...? ಗೊತ್ತಿಲ್ಲ.

ಜೇಡರ ಬಲೆ ತೆಗೆದು, ಧೂಳು ಒರೆಸಿ ಮನೆ ಸ್ವಚ್ಚವಾದ ಮೇಲೆ ಮನಸ್ಸಿಗೇನೋ ಸಮಾಧಾನ, ಯಾವುದೋ ಹೊಸ ಬೆಳಕು ಗಾಳಿ ಬಂದಂತಾಯಿತು. ಆದರೆ ಜೀವನ..? ಅದು ಬರಿ ಗಾಳಿ ಬೆಳಕಿಂದ ಸಾಗದಲ್ಲಾ? ವಿದ್ಯಾಭ್ಯಾಸ ಬೇರೆ ಪಿ.ಯು.ಸಿ ಗೆ ಮೊಟಕುಗೊಂಡಿತ್ತು. ಸ್ವಾಭಿಮಾನದ ಬದುಕಿಗಾಗಿ ಅಸಹ್ಯದ ಬದುಕನ್ನು ಬಿಟ್ಟು ಬಂದಾಗಿತ್ತು. ಮತ್ತೆ ಅದೇ ಹೊಲಸಿನೊಳಕ್ಕೆ ಕಾಲಿಡುವ ಯಾವ ಇರಾದೆಯೂ ನನಗಿರಲಿಲ್ಲ. ಆದ್ರೆ ಬದುಕಿಗೊಂದು ನೆಲೆ ಬೇಕಾಗಿತ್ತು. ತಾನು ಓದಿದ ಪ್ರಾಥಮಿಕ ಶಾಲೆಯಲ್ಲೇ ಶಿಕ್ಷಕಿಯಾಗಿ ಕೆಲಸ ಕೇಳಿಕೊಂಡು ಹೋದೆ. ನನ್ನ ಬದುಕಿನ ಏರಿಳಿತಗಳ ಬಗ್ಗೆ ತಿಳಿದಿದ್ದ ಮುಖ್ಯ ಶಿಕ್ಷಕ ಮನೋಹರ್ ರಾವ್ ಅವರು ಯಾವ ತಕರಾರೂ ಮಾಡದೆ ಕೆಲಸ ಕೊಟ್ಟರು. ಬದುಕಿಗೊಂದು ದಾರಿಯಾಯಿತು. ಬರುವ ಅಲ್ಪ ಸಂಬಳದಲ್ಲೇ ಮನೆಯನ್ನೂ ಸಂಭಾಳಿಸಿ ಮಗಳ ಭವಿಷ್ಯಕ್ಕಾಗಿ ಉಳಿತಾಯ ಮಾಡುತ್ತಿದ್ದೆ.

ಆದರೆ ಒಮ್ಮೊಮ್ಮೆ ಕಾಡುತ್ತಿದ್ದ ಒಂಟಿತನ, ಯಾರೂ ಇಲ್ಲದ ಅನಾಥಭಾವ, ಎಲ್ಲಾ ಶೂನ್ಯ ಅಂತ ಅನ್ನಿಸಿಬಿಡುವ ಖಾಲಿತನವನ್ನು ಎದುರಿಸಲಾಗದೆ ತತ್ತರಿಸಿಬಿಡುತ್ತಿದ್ದೆ. ಬೆಳೆಯುತ್ತಿದ್ದ ಮಗಳು "ಫ್ರೆಂಡ್ಸ್ ಗೆಲ್ಲಾ ಇರುವ ಅಪ್ಪ ನನಗೇಕಿಲ್ಲ?" ಎಂದು ಅಳುವಾಗೆಲ್ಲಾ ನನ್ನ ಬದುಕಿನ ಅಸಹಾಯಕತೆಯ ನೆನೆದು ಅಸಹನೀಯ ದುಃಖವಾಗುತ್ತಿತ್ತು. ಬರಬರುತ್ತಾ ಅದೇ ಜೀವನವಾಯ್ತು. ಒಂಟಿತನವೇ ಸಂಗಾತಿಯಾಯ್ತು. ನನಗಾಗಿ ಮಗಳು...ಮಗಳಿಗಾಗಿ ನಾನು ಅನ್ನುವುದೇ ಬದುಕಿನ ಸೂತ್ರವಾಯಿತು. ರಶ್ಮಿ ದೊಡ್ಡವಳಾಗುತ್ತಿದ್ದಂತೆ ನನ್ನ ಬದುಕಿನ ಹೋರಾಟವನ್ನೆಲ್ಲಾ ತಾನೇ ತಾನಾಗಿ ಅರ್ಥ ಮಾಡಿಕೊಂಡಳೋ ಎಂಬಂತೆ ಅಪ್ಪನ ಬಗ್ಗೆ ಕೇಳುವುದನ್ನೇ ನಿಲ್ಲಿಸಿಬಿಟ್ಟಳು. ಆ ಮಟ್ಟಿಗಿನ ಪರಿಪಕ್ವತೆ ಅವಳಲ್ಲಿರುವುದಕ್ಕೆ ಅದೆಷ್ಟು ಬಾರಿ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದೇನೋ ನನಗೇ ಗೊತ್ತಿಲ್ಲ.

ಈ ಮಧ್ಯೆ ಒಂದು ದಿನ ಮನೋಹರ್ ರಾವ್ ಅವರು ನನ್ನನ್ನು ಕಛೇರಿಗೆ ಕರೆಯಿಸಿ "ಮೂರು ವರ್ಷಗಳಲ್ಲಿ ನಮ್ಮ ಶಾಲೆಗೆ ಹೈಸ್ಕೂಲ್ ಸೆಕ್ಷನ್ ಸ್ಯಾಂಕ್ಷನ್ ಆಗಲಿದೆ. ಹೇಗೂ ನೀವು ಇದೇ ಶಾಲೆಯಲ್ಲಿ ಓದಿರುವವರು. ಖಾಸಗಿಯಾಗಿ ಪದವಿ ಕಟ್ಟಿ ಏಕೆ ಇಲ್ಲೇ ಹೈಸ್ಕೂಲ್ ಶಿಕ್ಷಕಿ ಮುಂದುವರಿಯಬಾರದು?" ಎಂದು ಪ್ರಶ್ನಿಸಿದರು. ಆ ಕ್ಷಣಕ್ಕೆ ಏನು ಹೇಳಬೇಕೆಂದು ತೋಚಲಿಲ್ಲ. ಒಂದೆರಡು ದಿನಗಳ ಸಮಾಯಾವಕಾಶ ಕೇಳಿದೆ. ಒಂದು ಕಡೆ ಕೆಲಸದ ಒತ್ತಡ, ಇನ್ನೊಂದೆಡೆ ಮಗಳ ಜವಾಬ್ದಾರಿ. ಇವೆರಡರ ಮಧ್ಯೆ ಓದೋಕೆ, ಬರೆಯೋಕೆ ನನ್ನಿಂದ ಸಾಧ್ಯಾನಾ ಅಂತೆಲ್ಲಾ ಅನಿಸುತ್ತಿತ್ತು.

ಆದರೆ ಆಗೊಮ್ಮೆ ಈಗೊಮ್ಮೆ ಕಾಡುವ ಒಂಟಿತನವನ್ನು, ಸೂಚನೆಯೇ ಇಲ್ಲದೆ ಧುತ್ತೆಂದು ಪ್ರತ್ಯಕ್ಷವಾಗಿಬಿಡುವ ಬೇಸರವನ್ನು, ಏಕಾಂತದಲ್ಲಿ ಹಿಂಡಿ ಹಿಪ್ಪೆ ಮಾಡಿಬಿಡುವ ಹಳೆ ನೆನಪುಗಳಿಂದ ಬಿಡುಗಡೆ ಪಡೆದುಕೊಳ್ಳಲು ನಿಂತು ಹೋಗಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸುವುದೋ ಸೂಕ್ತ ಮಾರ್ಗ ಎಂದು ತೋರಿದ ಕ್ಷಣವೇ ಖಾಸಗಿಯಾಗಿ ಪದವಿ ಕಟ್ಟಲು ನಿರ್ಧರಿಸಿದೆ.

ಅಲ್ಲಿಂದೀಚೆಗೆ ಬದುಕು ಬದಲಾಯಿತು. ರಶ್ಮಿಯ ವಿದ್ಯಾಭ್ಯಾಸದ ಜೊತೆ ಜೊತೆಗೆ ನನ್ನ ಓದೂ ಸಾಗುತ್ತಿತ್ತು. ಅವಳಿಗೆ ನಾನು, ನನಗೆ ಅವಳು ಪರಸ್ಪರ ಸಹಕರಿಸುತ್ತಿದ್ದೆವು. ಮನೆ, ಶಾಲೆ, ಅವಳ ಓದು, ನನ್ನ ಓದು ಅಂತೆಲ್ಲಾ ಹಿಂದಿನ ಬದುಕಿನೆಡೆಗೆ ತಿರುಗಿ ನೋಡಲೂ ಪುರುಸೊತ್ತಿಲ್ಲವೆಂಬಷ್ಟು ಇಂದಿನ ಬದುಕಿನಲ್ಲಿ ವ್ಯಸ್ತಳಾಗಿಬಿಟ್ಟೆ. ಮಗಳಾದರೂ ಅಷ್ಟೆ. ಬುದ್ಧಿವಂತೆ, ಎಂದೂ ನನ್ನ ಸಾಮರ್ಥ್ಯವನ್ನು ಮೀರಿದ ಬೇಡಿಕೆ ಇಟ್ಟವಳೇ ಅಲ್ಲ. ನನ್ನೆಲ್ಲಾ ಮಿತಿಗಳನ್ನು ಅರಿತುಕೊಂಡೇ ಎಲ್ಲೂ ನನಗೆ ನಿರಾಶೆಯಾಗದಂತೆ, ಹೊರೆಯಾಗದಂತೆ ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದಳು.

ಮೂರು ವರ್ಷ ಕಳೆಯುತ್ತಿದ್ದಂತೆ ನನ್ನ ಪದವಿ ಮುಗಿದು ಹೈಸ್ಕೂಲ್ ಶಿಕ್ಷಕಿಯಾಗಿ ಬಡ್ತಿ ಪಡೆದೆ. ವೈಯಕ್ತಿಕ ಬದುಕಿನ ದುಃಖ, ದುಮ್ಮಾನ, ನೋವುಗಳನ್ನು ಮೀರಿ ವೃತ್ತಿ ಜೀವನ ನನ್ನ ಕೈ ಹಿಡಿದಿತ್ತು. ಶಾಲೆಯ ವಿದ್ಯಾರ್ಥಿಗಳಂತೂ ನನ್ನ ತುಂಬಾ ಹಚ್ಚಿಕೊಂಡು ಬಿಟ್ಟಿದ್ದರು. ಈಗೀಗ ಹಳೆ ಬದುಕು, ಅದರ ನೋವು, ನನಗಾದ ಪ್ರಚ್ಛನ್ನ ಮೋಸ ಯಾವುದೂ ನೆನಪಾಗುತ್ತಲೇ ಇರಲಿಲ್ಲ.



                                                                                                                                                      (ಸಶೇಷ)




ಮೌನ ಕಣಿವೆಯಲಿ...

ಸಂಚಾರ  7



ಇನ್ನು ನನಗುಳಿದ್ದಿದ್ದುದು ಕಣ್ಣಾರೆ ಕಂಡಿರುವುದನ್ನು ಪರಾಂಬರಿಸುವ ಕೆಲಸವಷ್ಟೆ. ಆದರೆ ಇಂತಹ ಸೂಕ್ಷ್ಮ ವಿಚಾರವನ್ನು ಕಟ್ಟಿಕೊಂಡ ಗಂಡನಲ್ಲಿ, ಬೆನ್ನಿಗೆ ಬಿದ್ದ ತಂಗಿಯಲ್ಲಿ ಪ್ರಸ್ತಾಪಿಸುವುದಾದರೂ ಹೇಗೆ ಅನ್ನುವ ಗೊಂದಲವಿನ್ನೂ ಮುಗಿದಿರಲಿಲ್ಲ. ಒಂದೇ ಏಟಿಗೆ ಅಂತದ್ದೇನೂ ನಡೆದೇ ಇಲ್ಲ ಎಂದು ನಿರಾಕರಿಸಿ ಬಿಟ್ಟರೆ ಏನು ಮಾಡಲಿ ಅನ್ನುವ ಭಯ ಬೇರೆ ಕಾಡುತ್ತಿತ್ತು.

ಆದರೆ ಹಿಂದಿನ ದಿನ ಪೂರ್ತಿ ನನ್ನ ಕಣ್ಣು ತಪ್ಪಿಸಿ ಓಡಾಡುತ್ತಿದ್ದವರು ಅವತ್ತು ಯಾವ ಅಳುಕೂ ಇಲ್ಲವೆಂಬಂತೆ ಬಿಡುಬೀಸಾಗಿ ಸಲೀಸಾಗಿ ಓಡಾಡಿಕೊಂಡು ಸಹಜವಾಗಿದ್ದರು. ಬಹುಶಃ ವಂಚನೆಯ ಜಾಯಮಾನವೇ ಅಂತಹುದೇನೋ?  ಆರಂಭದಲ್ಲಿ ಕಾಡುವ ಅಳುಕು, ಹಿಂಜರಿಕೆಗಳು ಕೆಲ ಸಮಯ ಸಾಗುತ್ತಿದ್ದಂತೆ ಆತ್ಮದ್ರೋಹದ ಕರಿನೆರಳಿನ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತವೆಯೇನೋ? ಒಮ್ಮೆ ದೀರ್ಘ ಶ್ವಾಸ ಎಳೆದುಕೊಂಡು, ಅವರಿಬ್ಬರನ್ನು ಕೂರಿಸಿ ಆದಷ್ಟು ಶಾಂತವಾಗಿ ಅವರಿಬ್ಬರ ಸಂಬಂಧದ ಬಗ್ಗೆ ಕೇಳಿದೆ.

ಕಾವ್ಯಾಳೇ ಮೊದಲು ಮಾತು ಶುರುವಿಟ್ಟುಕೊಂಡಳು. "ಸರಿ ಅಕ್ಕಾ, ನಾವೇ ಇದನ್ನು ನಿನ್ನ ಬಳಿ ಚರ್ಚಿಸಬೇಕೆಂದಿದ್ದೆವು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆವು ಅಷ್ಟೆ. ಈಗ ನಿನಗೇ ಎಲ್ಲಾ ತಿಳಿದಿರುವಾಗ ಮುಚ್ಚು ಮರೆ ಮಾಡಲು ಎನೂ ಉಳಿದಿಲ್ಲ. ಹೌದು, ನಮ್ಮಿಂದ ತಪ್ಪಾಗಿದೆ. ನೀನು ಹೆರಿಗೆ, ಬಾಣಂತನ ಅಂತ ಒದ್ದಾಡುತ್ತಿರುವಾಗ ಒಂದು ದುರ್ಬಲ ಕ್ಷಣದಲ್ಲಿ ತಪ್ಪು ನಡೆದುಹೋಯಿತು. ನೀನು ಧೈರ್ಯಸ್ಥೆ, ನನಗಿಂತ ದೊಡ್ಡವಳು. ಪರಿಸ್ಥಿತಿಯನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿ. ಈಗ ನಡೆದುದರ ಬಗ್ಗೆ ವಿಚಾರ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು ಒಂದಿಷ್ಟು ಮನಸ್ತಾಪಗಳಿಗೆ ಕಾರಣವಾಗುತ್ತದೆಯೇ ಹೊರತು ಇನ್ನೇನೂ ಆಗುವುದಿಲ್ಲ. ಹಾಗಾಗಿ ಮುಂದೆ ಏನು ನಡೆಯಬೇಕು ಅನ್ನುವುದರ ಬಗ್ಗೆ ಯೋಚಿಸು. ನಾನಂತೂ ಭಾವನನ್ನೇ ಮದುವೆಯಾಗಬೇಕು ಅಂತ ತೀರ್ಮಾನಿಸಿದ್ದೇನೆ" ಅಂದಳು. ಗೊತ್ತಿದ್ದ ಸತ್ಯವೇ ಆದರೂ ತೀರಾ ಮುಖಕ್ಕೆ ರಾಚಿದಾಗ ತತ್ತರಿಸಿಬಿಟ್ಟೆ. ಬಹುಶಃ ಒಳ ಮನಸು ಹಿಂದಿನ ದಿನ ನಾ ಕಂಡದ್ದೆಲ್ಲ ಸುಳ್ಳಾಗಿರಲಿ ಅಂತ ಆಶಿಸುತ್ತಿತ್ತೇನೋ?

ಮುಂದೇನು ಅಂತ ಗಂಡನೆನಿಸಿಕೊಂಡವನ ಮುಖ ನೋಡಿದೆ. ಅವನು "ಆಗಬಾರದ್ದು ಆಗಿ ಹೋಗಿದೆ ನಿಜ, ಹಾಗಂತ ಈ ಪ್ರಪಂಚದಲ್ಲಿ ಯಾರೂ ಮಾಡದ ತಪ್ಪನ್ನೇನೂ ನಾ ಮಾಡಿಲ್ಲ. ಈ ವಿಚಾರಣೆಯೆಂಬ ನಾಟಕವೇ ಬೇಡ. ನೀನಿರುವ ಹಾಗೆಯೇ ಅವಳನ್ನೂ ಮದುವೆಯಾಗಿ ಬಿಡುತ್ತೇನೆ. ಹೇಗೂ ರಕ್ತ ಹಂಚಿಕೊಂಡು ಹುಟ್ಟಿದ ಸೋದರಿಯರು. ಸವತಿ ಮಾತ್ಸರ್ಯದ ಪ್ರಶ್ನೆಯೂ ಬರುವುದಿಲ್ಲ. ಇಬ್ಬರೂ ಚೆನ್ನಾಗಿ ಹೊಂದಿಕೊಂಡು ಹೋಗಬಹುದು" ಎಂದು ಮಾತೆಲ್ಲಾ ಮುಗಿಯಿತು ಎಂಬಂತೆ ಎದ್ದು ಆಫೀಸ್ ಗೆ ಹೋದರು. ಅವರ ಬೆನ್ನ ಹಿಂದೆಯೇ ಕಾವ್ಯ ಕಾಲೇಜ್ ಗೆಂದು ಹೊರಟು ಹೋದಳು.

ಮನೆ ಪೂರ್ತಿ ಸ್ಮಶಾನ ಮೌನ. ನಡು ಮನೆಯಲ್ಲಿ ಒಂಟಿ ಪಿಶಾಚಿಯಂತೆ ನಾನು. ಇನ್ನೊಂದು ಹೆಣ್ಣಿನ ಜೊತೆ, ಆಕೆ ತಂಗಿಯೇ ಆಗಿದ್ದರೂ ಸಹ ಗಂಡನನ್ನು ಹಂಚಿಕೊಳ್ಳುವ ಕಲ್ಪನೆಯೇ ನನಗೆ ಅಸಹ್ಯ ಅನಿಸುತಿತ್ತು. ಕಾವ್ಯಾಳ ಯಾವ ಪ್ರಾಕ್ಟಿಕಾಲಿಟಿಯ ಬಗ್ಗೆ ನನಗೆ ಹೆಮ್ಮೆ ಇತ್ತೋ ಅದೇ ಪ್ರಾಕ್ಟಿಕಾಲಿಟಿ ತನ್ನೆಲ್ಲಾ ಪರಿಧಿಯನ್ನು ಮೀರಿ ಇವತ್ತು ಅಕ್ಕನ ಬದುಕನ್ನು ಮೂರಾಬಟ್ಟೆಯಾಗಿಸುವಲ್ಲಿಗೆ ಬಂದು ನಿಂತಿತ್ತು.

ಸಂಜೆ ಗಂಡ ಆಫೀಸಿನಿಂದ, ಕಾವ್ಯ ಕಾಲೇಜಿನಿಂದ ಬರುವ ಮುನ್ನ ನಾನೊಂದು ನಿರ್ಧಾರಕ್ಕೆ ಬರಬೇಕಿತ್ತು. ಮೊದಲ ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆಯಾಗ ಹೊರಟ ಗಂಡನ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಬಹುದಿತ್ತೇನೋ? ಆದ್ರೆ ಕಾವ್ಯಾಳ ಬದುಕು ಅತಂತ್ರವಾಗಿ ಬಿಡುತ್ತಿತ್ತು. ಅಮ್ಮನ ಚಿತೆಗೆ ಬೆಂಕಿಯಿಡುವ ಮುನ್ನ ಅಜ್ಜಿ ಹೇಳಿದ ಮಾತು ಬೇರೆ ಕಿವಿಯಲ್ಲಿನ್ನೂ ಅನುರಣಿಸುತ್ತಿತ್ತು. ಹಾಗಂತ ಗಂಡನನ್ನು ಹಂಚಿಕೊಂಡು ಬದುಕಲೂ ನನ್ನಿಂದ ಸಾಧ್ಯ ಇರಲಿಲ್ಲ.

ಕೊನೆಗೆ ನಾನು ಸ್ವಾಭಿಮಾನದಿಂದ ಬದುಕಲು ಡೈವೋರ್ಸ್ ಒಂದೇ ಪರಿಹಾರ ಅಂದುಕೊಂಡು ಸಂಜೆ ಅವರಿಬ್ಬರು ಬಂದ ಬಳಿಕ ನನ್ನ ನಿರ್ಧಾರವನ್ನು ತಿಳಿಸಿದೆ. ಒಂದೆರಡು ದಿನ ಅತ್ತು ಕರೆದು ರಂಪ ಮಾಡಿ ಆಮೇಲೆ ಒಪ್ಪಿಕೊಳ್ಳುತ್ತೇನೆ ಅಂದುಕೊಂಡಿದ್ದರೋ ಏನೋ. ನನ್ನ ನಿರ್ಧಾರವನ್ನು ಕೇಳಿ ಇಬ್ಬರೂ ಅಪ್ರತಿಭರಾದರು. ಗಂಡನೆನೆಸಿಕೊಂಡವನಂತೂ ಸಮಾಜದಲ್ಲಿ ಒಂಟಿ ಹೆಣ್ಣು ಬದುಕುವುದರಲ್ಲಿರುವ ಕಷ್ಟವನ್ನು ಪರಿ ಪರಿಯಾಗಿ ವಿವರಿಸಲೆತ್ನಿಸಿದರು. ಇಬ್ಬರಲ್ಲಿ ಒಬ್ಬರನ್ನು ಆಯ್ದುಕೊಳ್ಳಿ ಅನ್ನುವ ನನ್ನ ಅಚಲ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟ ಧ್ವನಿಯಲ್ಲಿ ಹೇಳಿಬಿಟ್ಟೆ. ಅದೇನು ಚಿಂತನ ಮಂಥನ ನಡೆಸಿದರೋ ಗೊತ್ತಿಲ್ಲ, ಕೊನೆಗೂ ಅವಳ ಮೇಲಿನ ಮೋಹವೇ ಗೆದ್ದು ನನ್ನ ತೊರೆಯುವ ನಿರ್ಧಾರಕ್ಕೆ ಅವರೂ ಬಂದುಬಿಟ್ಟರು.

ಮೂರು ತಿಂಗಳುಗಳಲ್ಲಿ ವಿಚ್ಛೇದನ ಪ್ರಕ್ರಿಯೆಗಳೆಲ್ಲಾ ವಿಧಿವತ್ತಾಗಿ ನಡೆದು ಮೂರು ವರ್ಷಗಳ ದಾಂಪತ್ಯ ಜೀವನ ನಾಲ್ಕಾರು ಕಾಗದ ಪತ್ರಗಳಿಗೆ ಸಹಿ ಹಾಕುವಷ್ಟರಲ್ಲಿ ಮುಗಿದು ಹೋಯಿತು. ಗಂಟು ಮೂಟೆ ಕಟ್ಟಿಕೊಂಡು ಮಗಳೊಂದಿಗೆ ಮನೆ ಬಿಟ್ಟೆ. ತೀರಾ ಹೊರಡುವ ಮುನ್ನ ಕಾವ್ಯಾಳ ಮುಂದಲೆ ನೇವರಿಸಿ "ಚೆನ್ನಾಗಿರು" ಎಂದಷ್ಟೇ ಹೇಳಿ ಹೊರಗಡಿಯಿಟ್ಟಿದ್ದೆ. ಅವಳ ಕಣ್ಣುಗಳಲ್ಲಿ ಮತ್ತದೇ ಪ್ರಾಕ್ಟಿಕಾಲಿಟಿ. ಬದುಕು ಈ ಬಾರಿ ಉರುಳಿಸಿದ ದಾಳಕ್ಕೆ ನಾ ಪಾತಾಳಕ್ಕಿಳಿದುಬಿಟ್ಟಿದ್ದೆ.


(ಸಶೇಷ)   


ಸೋಮವಾರ, ಜೂನ್ 22, 2015

ಮೌನ ಕಣಿವೆಯಲಿ...

ಸಂಚಾರ 6



ಒಳಕೋಣೆಯಲ್ಲಿ ಕಾವ್ಯ ಇದ್ದಳು. ನನ್ನ ಗಂಡ ಅನ್ನಿಸಿಕೊಂಡವನಿದ್ದ. ಕಡಲು ಭೋರ್ಗರೆಯುತ್ತಿತ್ತು. ಮನೆಯ ಮೂಲೆ ಮೂಲೆಯೂ ವಿಕಟಾಟ್ಟಹಾಸದಿಂದ ನಗುತ್ತಿತ್ತು. ಗೋಡೆಯಲ್ಲಿ ನೇತಾಡುತ್ತಿದ್ದ ಅಪ್ಪ-ಅಮ್ಮನ ಫೊಟೋ ಯಾಕೋ ಮುಸುಕಾದಂತಿತ್ತು. ನಾ ಕುಸಿದು ಬಿದ್ದೆ. ಮಗಳು ಅಂದುಕೊಂಡಿದ್ದ ತಂಗಿ ಬಟಾಬಯಲಲ್ಲೇ ಮೋಸ ಮಾಡಿದ್ದಳು. ಪರಮ ಸಂಭಾವಿತನಂದುಕೊಂಡಿದ್ದ ಗಂಡ ನಿರ್ಲಿಪ್ತತೆಯ ಸೋಗಿನಲ್ಲೇ ನೀಚತನಕ್ಕಿಳಿದಿದ್ದ.

ಏನೂ ಮಾಡಲು ತೋಚದೆ ಕೋಣೆಯ ಕದವಿಕ್ಕಿ ಸುಮ್ಮನೆ ಮನೆಯ ಹೊಸ್ತಿಲಲ್ಲಿ ಬಂದು ಕುಳಿತುಕೊಂಡೆ. ಏನೋ ವಿಚಿತ್ರ ತಳಮಳ. ತೀರಾ ಎದೆಯೊಳಗೆ ಕೈ ಹಾಕಿ ಹೃದಯವನ್ನು ಹಿಂಡಿ ಮಧ್ಯ ರಸ್ತೆಯಲ್ಲಿ ಬಿಸುಟಿ ಹೋದಂತಹಾ ಯಾತನೆ. ತನ್ನ ಮದುವೆಯಲ್ಲಿ ಲಂಗ ದಾವಣಿ ತೊಟ್ಟು, ಮೋಟುದ್ದ ಕೂದಲನು ನನ್ನಿಂದಲೇ ಹೆಣೆಯಿಸಿ, ಮುಡಿ ತುಂಬಾ ಹೂವು ಮುಡಿದು, ಕೈ ಪೂರ್ತಿ ಮುಚ್ಚುವಷ್ಟು ಹಸಿರು ಗಾಜಿನ ಬಳೆ ತೊಟ್ಟು, ಭಾವನಿಗೆ ಆರತಿ ಎತ್ತಿ ಕುಂಕುಮ ಇಟ್ಟು, ನನ್ನ ಕೈ ಹಿಡಿದು ಎಳೆದುಕೊಂಡು ಹೋಗಿ ಅವರ ಪಕ್ಕ ನಿಲ್ಲಿಸಿ "ಅಕ್ಕಾ, ಎಂಥಾ ಜೋಡೀನೇ ನಿಮ್ಮದು, ನೂರ್ಕಾಲ ಹೀಗೇ ಇರಿ" ಎಂದು ಕಣ್ಣು ತುಂಬಿ ಹಾರೈಸಿದ ಕಾವ್ಯಾಳ ಚಿತ್ರಣವನ್ನು ಕಣ್ಣಮುಂದಕ್ಕೆ ತಂದುಕೊಳ್ಳಲು ಅದೆಷ್ಟೇ ಪ್ರಯತ್ನಪಟ್ಟರೂ ಮಂಚದ ಮೇಲೆ ಅವರಿಬ್ಬರಿದ್ದ ಚಿತ್ರ ಮನಸಿಂದ ಮರೆಯಾಗುತ್ತಲೇ ಇರಲಿಲ್ಲ.

ನಾ ತಲೆಗೆ ಕೈ ಹೊತ್ತು ಕುಳಿತ ಭಂಗಿಯೇ ರೂಮಿಂದ ಕಳ್ಳ ಹೆಜ್ಜೆಯಿಟ್ಟುಕೊಂಡು ಹೊರಗೆ ಬಂದ ಅವರಿಗೆ ನನಗೆಲ್ಲಾ ಅರ್ಥ ಆಗಿದೆ ಅನ್ನುವ ಸತ್ಯವನ್ನು ವಿದ್ಯುಕ್ತವಾಗಿ ತಿಳಿಸಿತ್ತು. ಸಂಜೆ ಸತ್ತು ಕತ್ತಲು ಹುಟ್ಟಿಕೊಂಡರೂ ನನಗಿನ್ನೂ ಮನೆಯೊಳಗೆ ಹೋಗಬೇಕು ಅಂತ ಅನಿಸಿರಲೇ ಇಲ್ಲ. ಕಾವ್ಯಾಳಿಗಾಗಲೀ, ಅವಳ ಭಾವನೆನಿಸಿಕೊಂಡವನಿಗಾಗಲೀ ನನ್ನ ಒಳಗೆ ಕರೆಯುವ, ಸಮಜಾಯಿಷಿ ನೀಡುವ ಯಾವ ಎದೆಗಾರಿಕೆಯೂ ಇರಲಿಲ್ಲ. ನಾನೇನು ಮಾತಾಡಿಬಿಡುತ್ತೇನೋ ಅನ್ನುವ ಭಯದಲ್ಲಿ ಇಬ್ಬರೂ ಕಣ್ಣು ತಪ್ಪಿಸಿಯೇ ಓಡಾಡುತ್ತಿದ್ದರು. ನನಗಾದರೂ ಅಷ್ಟೆ, ಅವರಿಬ್ಬರ ಮುಖ ನೋಡಲೂ ಅಸಹ್ಯವಾಗುತ್ತಿತ್ತು.

ಆದರೆ ಬದುಕೆಂದ ಮೇಲೆ ಕೆಲವೊಮ್ಮೆ ಹೊಲಸುಗಳ ಮೇಲೆ ಕಾಲೂರಿ ನಿಲ್ಲಲೇಬೇಕಾಗುತ್ತದೆ. ಇನ್ನೂ ಹೊಸ್ತಿಲ ಮೇಲೆ ಕುಳಿತರೆ ಮಗುವಿಗೆ ಥಂಡಿಯಾಗಬಹುದೆಂದು ಮಗುವನ್ನೆತ್ತಿಕೊಂಡು ಒಳನಡೆದೆ. ಇಬ್ಬರೂ ಕತ್ತು ತಿರುಗಿಸಿ, ತಲೆ ತಗ್ಗಿಸಿ ಕುಳಿತಿದ್ದರು. ಒಂದು ಮಾತೂ ಆಡದೆ ಅವರಿಬ್ಬರನ್ನು ದಾಟಿ ಒಳಗೆ ಹೋದೆ.

ಮುಂದೇನು ಅನ್ನುವುದು ನನಗೆ ಗೊತ್ತಿರಲಿಲ್ಲ. ಹಸಿವಿಂದ ಚೀರಾಡುತ್ತಿದ್ದ ಮಗುವಿಗೆ ಹಾಲುಣಿಸಿ ಹಾಸಿಗೆಯ ಮೇಲುರುಳಿ ಬಿಕ್ಕಿ ಬಿಕ್ಕಿ ಅಳತೊಡಗಿದೆ. ಅಮ್ಮ ಸತ್ತಂದಿನಿಂದ ಆ ಕ್ಷಣದವರೆಗೂ ಕಟ್ಟಿಕೊಂಡಿದ್ದ ಕಣ್ಣೀರ ಕೋಡಿ ದಂಡೆಯ ಸಮೇತ ಹರಿಯ ತೊಡಗಿತು. ನನ್ನ ಬದುಕೇಕೆ ಹೀಗೆ ಗಾಳಿಗೊಡ್ಡಿದ ಸೊಡರಿನಂತಾಯಿತು ಅಂತ ಮನಸು ಪದೇ ಪದೇ ಪ್ರಶ್ನಿಸತೊಡಗಿತು. ಬಾಲ್ಯದಲ್ಲಿ ಅಮ್ಮನನ್ನು ಕಳ್ಕೊಂಡೆ, ಅಮೇಲೆ ಅಜ್ಜಿ, ಅಮೇಲೆ ಅಪ್ಪ, ಈಗ ಗಂಡ  ತಂಗಿ ಇಬ್ಬರನ್ನೂ ಒಟ್ಟಿಗೆ ಕಳ್ಕೋತಿದ್ದೇನೆ... ಯಾಕೆ ಹೀಗಾಯ್ತು? ಯಾವ ತಪ್ಪಿಗೆ ಈ ಶಿಕ್ಷೆ? ಅಗ್ನಿಸಾಕ್ಷಿಯಾಗಿ ನೂರಾರು ಜನರ ಸಮ್ಮುಖದಲ್ಲಿ "ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ" ಎಂದು ತಾಳಿ ಕಟ್ಟಿದ ಕ್ಷಣಗಳಿಗೆ, ಮಾಡಿದ ಪ್ರತಿಜ್ಞೆಗಳಿಗೆ ಯಾವ ಅರ್ಥವೂ ಇಲ್ವಾ? ಅಥವಾ ಗಂಡಸು ಪ್ರಪಂಚದ ನೀತಿ, ನಿಯತ್ತು, ನಿಷ್ಠೆಗಳ ವ್ಯಾಲಿಡಿಟಿ ತೀರಾ ಸಣ್ಣದೇ? ಹಾಗಿದ್ದರೆ ಅಪ್ಪನೂ ಗಂಡಸೇ ಅಲ್ಲವೇ? ನಮ್ಮಿಬ್ಬರಿಗೋಸ್ಕರ ಎರಡನೇ ಮದುವೆಯನ್ನೂ ಮಾಡಿಕೊಳ್ಳದೆ ಅಷ್ಟು ವರ್ಷ ಬದುಕಿರಲಿಲ್ಲವೇ? ಮತ್ತೆ ನನ್ನ ಗಂಡ ಮಾತ್ರ ಯಾಕೆ ಹೀಗೆ ಮಾಡಿದ? ನನಗೇ ಯಾಕೆ ಮೋಸ ಆಯಿತು...? ಹೀಗೆ ಮೊಗೆದಷ್ಟೂ ಮುಗಿಯದ ಪ್ರಶ್ನೆಗಳು, ಗೊಂದಲಗಳು... ಕಣ್ಣು ಮುಚ್ಚಿ ನಿದ್ರಿಸಲು ಪ್ರಯತ್ನಿಸುತ್ತಿದ್ದರೂ ನಿದ್ರೆ ಮಾತ್ರ ದೂರ ನಿಂತು ಅಣಕಿಸಿ ನಗುತ್ತಿತ್ತೇ ಹೊರತು ಕಣ್ಣ ಬಳಿಯೂ ಸುಳಿಯುತ್ತಿರಲಿಲ್ಲ.

ಆದರೆ ನನ್ನ ಬದುಕಿನ ಬಗ್ಗೆ ನಾನೊಂದು ನಿರ್ಧಾರಕ್ಕೆ ಬರಲೇಬೇಕಿತ್ತು. ಕೊನೇ ಪಕ್ಷ ಮಗಳಿಗೋಸ್ಕರ ಆದರೂ ನಾ ಬದುಕಬೇಕಿತ್ತು, ಅವಳಿಗೊಂದು  ಅಭದ್ರತೆಯಿಲ್ಲದ ಬದುಕನ್ನು ಕಟ್ಟಿಕೊಡುವುದಕ್ಕಾದರೂ ನಾನು ಧೈರ್ಯ ತಂದುಕೊಳ್ಳಬೇಕಿತ್ತು. ರಾತ್ರಿ ಪೂರ್ತಿ ನಿದ್ರೆ ಇರದಿದ್ದರೂ ಎಂದಿನಂತೆ ಮುಂಜಾನೆ ಎದ್ದು ಅಂಗಳ ಸಾರಿಸಿ ರಂಗೋಲಿ ಇಟ್ಟು ಒಂದು ಕ್ಷಣ ಅದರ ಮುಂದೆ ನಿಂತು ’ನನ್ನ ಬದುಕಿನ ರಂಗವಲ್ಲಿಯ ಚುಕ್ಕಿಗಳೇಕೆ ಅದಲು ಬದಲಾಯ್ತು’ ಅಂತ ನಿಟ್ಟುಸಿರಿಟ್ಟು ಪಕ್ಕದ ಗಿಡದಲ್ಲಿದ್ದ ಹೂವನ್ನು ಕಿತ್ತು ದೇವರ ಮುಡಿಗೆ ಸಿಕ್ಕಿಸಿ ಕಣ್ಣು ಮುಚ್ಚಿ ’ಎಲ್ಲವನ್ನೂ ಎದುರಿಸುವ ಧೈರ್ಯ ಕೊಡು’ ಎಂದು ಕೈ ಮುಗಿದು ದೇವರ ಕೋಣೆಯಿಂದ ಹೊರ ಬಂದೆ.


                                                                                                                                                      (ಸಶೇಷ)

ಮೌನ ಕಣಿವೆಯಲಿ...

ಸಂಚಾರ 5



ಅಂತೂ ಹೆರಿಗೆ ಸುಸೂತ್ರವಾಗಿ ನಡೆದು ನಾನು ಅಧಿಕೃತವಾಗಿ ತಾಯಿಯಾದೆ. ನನ್ನ ಬದುಕಿನ ಎಲ್ಲಾ ಓರೆಕೋರೆಗಳ ನಡುವೆಯೂ ಮಗಳು ರಶ್ಮಿ ತೊಟ್ಟಿಲ ತುಂಬಾ ಅರಳಿಕೊಂಡಿದ್ದಳು. ತನ್ನ ಮುಗ್ಧ ಕಣ್ಣುಗಳಿಂದಲೇ ಪ್ರತಿಯೊಬ್ಬರನ್ನೂ ತನ್ನೆಡೆಗೆ ನೋಡಿಸುತ್ತಿದ್ದಳು. ನನ್ನೆದೆಯ ತಾಕಲಾಟಗಳು ಅಂತ್ಯವಾಗಿದ್ದವು. ಬದುಕು ಮತ್ತೆ ನೆಮ್ಮದಿಯ ಕಡಲು ಅನಿಸತೊಡಗಿತು. ನಾನು ಬಾಣಂತನಕ್ಕೆ ಅಣಿಯಾಗತೊಡಗಿದೆ. ಆಗೊಮ್ಮೆ ಈಗೊಮ್ಮೆ ಅಮ್ಮ ಇರಬೇಕಿತ್ತು ಅನಿಸುತ್ತಿದ್ದರೂ ಮಗಳ ನಗುವಿನ ಮುಂದೆ ಅವೆಲ್ಲಾ ಮರೆಯಾಗುತ್ತಿತ್ತು.

ಹೆರಿಗೆ, ಮಗು, ಬಾಣಂತನ ಅಂತೆಲ್ಲಾ ಕಾವ್ಯಾಳ ಕಡೆಗೆ ನನಗೆ ಗಮನ ಕೊಡಲಾಗಲಿಲ್ಲವೋ ಅಥವಾ ಹೊತ್ತು ಹೆತ್ತ ಸಂಭ್ರಮಕ್ಕೆ ನಿಜಕ್ಕೂ ನಾನವಳನ್ನು ಕಡೆಗಣಿಸಿದೆನಾ...? ಈ ಕ್ಷಣದಲ್ಲಿ ನಿಂತು ಒಮ್ಮೆ ಹಿಂದಿರುಗಿ ನೋಡಿದರೆ ಯಾವುದನ್ನೂ ಸ್ಪಷ್ಟವಾಗಿ ನಿರ್ಧರಿಸಲಾಗುತ್ತಿಲ್ಲ. ಆದ್ರೆ ಅವಳನ್ನು ಅನಾಥ ಭಾವ ಕಾಡಬಾರದೆಂದು ನಾ ಅನುಕ್ಷಣ ಪ್ರಯತ್ನಿಸಿದ್ದಂತೂ ಸತ್ಯ.

ಮಗುವಿನ ಅಳು, ನಗು, ಲಾಲನೆ, ಪೋಷಣೆಯಲ್ಲಿ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಗಂಡನದು ಎಂದಿನ ನಿರ್ಲಿಪ್ತತೆ. ಮಗು ರಶ್ಮಿಯನ್ನು ಪ್ರೀತಿಸುತ್ತಿದ್ದರಾದರೂ, ಆಗೊಮ್ಮೆ ಈಗೊಮ್ಮೆ ಮುದ್ದಿಸುತ್ತಿದ್ದರಾದರೂ ನನ್ನೆಡೆಗೆ ಅದೇ ದಿವ್ಯ ನಿರ್ಲಕ್ಷ್ಯ.

ನನಗದೆಲ್ಲಾ ಅಭ್ಯಾಸ ಆಗಿಬಿಟ್ಟಿದ್ದರಿಂದಲೋ ಏನೋ ಈಗೀಗ ಅವರ ನಿರ್ಲಿಪ್ತತೆ ನನ್ನ ಮನಸನ್ನು ಹಳ್ಳದೊಳಕ್ಕಿಳಿದು ಕೊಸರಾಡುವಂತೆ ಮಾಡುತ್ತಿರಲಿಲ್ಲ . ಆದ್ರೆ ನಿಜಕ್ಕೂ ನಂಗೆ ಆಶ್ಚರ್ಯ ಆದದ್ದು ಕಾವ್ಯಾಳ ವರ್ತನೆಯ ಬಗ್ಗೆ. ಎಂದೂ ಇಲ್ಲದ ಬದಲಾವಣೆಗಳು ಅವಳ ನಡವಳಿಕೆಯಲ್ಲಿ ಬಂದು ಬಿಟ್ಟಿದ್ದವು. ಸದಾ ಕಾಲೇಜ್, ಫ್ರೆಂಡ್ಸ್, ಮಾಲ್, ಶಾಪಿಂಗ್ ಎಂದು ಓಡಾಡುತ್ತಿದ್ದವಳು ಮನೆಯಲ್ಲೇ ಇರತೊಡಗಿದ್ದಳು. ಕೊನೆಗೂ ಬೇಜವಾಬ್ದಾರಿ ಬಿಟ್ಟು ಹೋಯ್ತಲ್ಲಾ ಅನ್ನುವ ಖುಶಿ ನನಗೆ. ಆದರೆ ಸದಾ ಯಾವುದೋ ಗುಂಗಿನಲ್ಲಿರುವುದು, ಏನೋ ಕೇಳಿದರೆ ಇನ್ನೇನೋ ಹೇಳುವುದು, ಮುಖದ ಮೇಲೆ ಲಾಸ್ಯವಾಡುವ ಯಾವುದೋ ಒಂದು ಸಂತೃಪ್ತಿಯ ಕಳೆ, ಎಂದೂ ಅಡುಗೆ ಮನೆಯ ಕಡೆಗೆ ಮನೆಗೆ ತಲೆ ಹಾಕದಿದ್ದವಳು ಸದಾ ಅಡುಗೆ ಮನೆಯಲ್ಲೇ ಇರುವುದರ ಮರ್ಮ ಒಂದಿಷ್ಟು ನನ್ನನ್ನು ಚಿಂತೆಗೀಡು ಮಾಡಿದರೂ ಬದಲಾದಳಲ್ಲ, ಅವಳ ಬದುಕನ್ನು ಅವಳೇ ಕೊಂಡೊಯ್ಯುವಷ್ಟು ಪ್ರಬುದ್ಧಳಾದಲಲ್ಲಾ ಅನ್ನುವ ಖುಶಿ ಆ ಚಿಂತೆಯನ್ನೂ ಮರೆಸಿಹಾಕಿತ್ತು.

ಅದೊಂದು ದಿನ ಮಗುವಿಗೆ ಮೂರು ತಿಂಗಳ ಚುಚ್ಚು ಮದ್ದು ಹಾಕಿಸಲು ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಗಡಿಯಿಟ್ಟೆ. ತೀರಾ ಚಪ್ಪಲಿ ಮೆಟ್ಟಿ ಹೊರಡುವ ಮುನ್ನ ಜೊತೆಗೆ ಬರುತ್ತಾರೇನೋ ಅನ್ನುವ ಸಣ್ಣ ನಿರೀಕ್ಷೆಯಲ್ಲಿ ಅವರತ್ತ ತಿರುಗಿ ನೋಡಿದೆ. ಇಲ್ಲ, ಮುಖದ ಮೇಲೆ ಅದೇ ನಿರ್ಲಿಪ್ತತೆ.

ಆದ್ರೆ ಅವತ್ತು ಬದುಕು ನನ್ಮೇಲೇಕೋ ಕರುಣೆ ತೋರಿದಂತಿತ್ತು. ಆಸ್ಪತ್ರೆಯಲ್ಲಿ ಕಾಯಬೇಕಾದ ಪ್ರಮೇಯವೇ ಬರಲಿಲ್ಲ. ಒಂದಿಬ್ಬರು ಮಹಿಳೆಯರು ಮಕ್ಕಳ ಚುಚ್ಚು ಮದ್ದಿಗೋಸ್ಕರ ಗಂಡಂದಿರ ಜೊತೆ ಬಂದಿದ್ದರು. ನನ್ನ ಸರದಿ ಬರುತ್ತಲೇ ಕೋಣೆಯ ಒಳಹೊಕ್ಕು ನರ್ಸ್ ಕೈಗೆ ಮಗುವನ್ನಿತ್ತೆ. ಆ ಎಳೆಮಗುವಿಗೆ ಚುಚ್ಚುವುದನ್ನು ನೋಡಲಾಗದೆ ಬಿಗಿಯಾಗಿ ಕಣ್ಣೂ ಮುಚ್ಚಿದೆ. ಮನಸು ’ಬದುಕಿನ ಚುಚ್ಚುವಿಕೆಯ ಪ್ರಾರಂಭ ಮಗಳೇ ಇದು’ ಎಂದುಸಿರಿತು.

ಅಲ್ಲಿಂದ ಆಟೋ ಹತ್ತಿ ಬಂದವಳು ಮನೆಯ ಗೇಟ್ ತೆರೆಯುತ್ತಿದ್ದಂತೆ ಅಂಗಳದಲ್ಲಿ ನಿಂತಿದ್ದ ನನ್ನವರ ಕಾರ್ ನನ್ನನ್ನು ಸ್ವಾಗತಿಸಿತ್ತು. ’ಅರೆ ಇವರಿನ್ನೂ ಆಫೀಸ್ ಗೆ ಹೋಗಿಲ್ಲವೇ’ ಅಂದುಕೊಳ್ಳುತ್ತಾ ಮನೆಯೊಳಗೆ ಕಾಲಿಟ್ಟೆ. ನನಗಾಗಿ ದಿಗ್ಭ್ರಾಂತಿಯೊಂದು ಕಾದು ಕುಳಿತಿತ್ತು.

 (ಸಶೇಷ)

ಶನಿವಾರ, ಜೂನ್ 20, 2015

ಮೌನ ಕಣಿವೆಯಲಿ...

ಸಂಚಾರ 4



ಅಂತೂ ಇಂತೂ ಒಂದು ದೃಢ ನಿರ್ಧಾರ ಮಾಡಿ ಮೂರು ಕಾಲ ಕೂಡುವ ಒಂದು ಮುಸ್ಸಂಜೆ ನಾ ಹುಟ್ಟಿದ, ಬೆಳೆದ, ಆಡಿದ, ನಲಿದ ಮನೆಗೂ, ಊರಿಗೂ ವಿದಾಯ ಹೇಳಿ ಬೆಂಗಳೂರಿನ ಗಾಡಿ ಹತ್ತಿದೆ. ಊರಿನ ಸರಹದ್ದು ಇನ್ನೇನು ದಾಟಬೇಕು ಅನ್ನುವಷ್ಟರಲ್ಲಿ ಅದೇನನಿಸಿತೋ ಏನೋ ಗೊತ್ತಿಲ್ಲ, ಕಾರಿಂದ ಇಳಿದು ಒಂದು ಹಿಡಿ ಮಣ್ಣು ತುಂಬಿಕೊಂಡು ಸೆರಗಿಗೆ ಕಟ್ಟಿ ಮತ್ತೆ ಕಾರು ಹತ್ತಿ ಕುಳಿತೆ. ಕಾವ್ಯ ಆತ್ಮೀಯತೆಯಿಂದ ಹಿತವಾಗಿ ಬೆನ್ನು ತಟ್ಟಿದಳು, ಯಾವ ಜನ್ಮದಲ್ಲಿ ಮಗಳಾಗಿದ್ದಳೋ ಇವಳು ಅನಿಸಿತು. ಹೊಟ್ಟೆಯೊಳಗಿನ ಮಗು ಒಮ್ಮೆ ಒದ್ದಾಡಿ ಸುಮ್ಮನಾದಂತಾಯಿತು.

ಬಾಲ್ಯದಿಂದಲೂ ಅಷ್ಟೆ, ಕಾವ್ಯ ಹಠಮಾರಿ, ಜಿದ್ದು ಹಿಡಿದು ತನ್ನ ಕಾರ್ಯ ಸಾಧಿಸಿಕೊಳ್ಳುತ್ತಿದ್ದಳು. ಯಾವತ್ತೂ  ಮನೆ ವಿಚಾರದಲ್ಲಿ ತಲೆ ಕೆಡಿಸಿಕೊಂಡವಳೇ ಅಲ್ಲ. ಅವಳಾಯ್ತು, ಅವಳ ಪಾಡಾಯ್ತು ಎಂಬಂತೆ ಇದ್ದಳು. ಅವಳ ಜಗತ್ತಿನಲ್ಲಿ ಮನೆಗೇನಿದ್ದರೂ ಎರಡನೇ ಸ್ಥಾನ. ಫ್ರೆಂಡ್ಸ್, ಪಾರ್ಟಿ ಅಂತ ಕಾಲ ಕಳೆದದ್ದೇ ಹೆಚ್ಚು. ಹಾಗಾಗಿಯೇ ಅಪ್ಪನ, ಅಜ್ಜಿಯ ಸಾವು ಅವಳನ್ನು ತುಂಬಾ ಬಾಧಿಸಿರಲಿಲ್ಲ. ಆಗೆಲ್ಲಾ ಬದುಕನ್ನು ತುಂಬಾ ಪ್ರಾಕ್ಟಿಕಲ್ ಆಗಿ ನೋಡುವ ಅವಳ ಬಗ್ಗೆ ಹೆಮ್ಮೆಯೆನಿಸುತ್ತಿತ್ತು.

ಬೆಂಗಳೂರಿಗೆ ಹೋದಮೇಲಾದರೂ ಅಷ್ಟೆ, ಹೊಸ ಕಾಲೇಜ್, ಫ್ರೆಂಡ್ಸ್ ಎಂದೆಲ್ಲಾ ಓಡಾಡಿಕೊಂದಿದ್ದಳೇ ಹೊರತು ಮನೆ ಕಡೆ ಒಮ್ಮೆಯೂ ಗಮನ ಕೊಟ್ಟವಳೇ ಅಲ್ಲ. ಅಪ್ಪನಿಲ್ಲದ ನೋವು ಅವಳನ್ನು ಕಾಡದಿರಲಿ ಅಂತ ನಾನೂ ಇದೆಲ್ಲಾ ಒಳ್ಳೆಯದಕ್ಕೇ ಅಂದುಕೊಂಡು ಸುಮ್ಮನಿದ್ದೆ, ಯಾವುದಕ್ಕೂ ಅವಳನ್ನು ಒತ್ತಾಯ ಪಡಿಸುತ್ತಿರಲಿಲ್ಲ. ಎಷ್ಟಾದರೂ ಹುಟ್ಟಿದಾರಭ್ಯದಿಂದಲೂ ನನಗೇ ಅಂಟಿಕೊಂಡ ಜೀವವಲ್ಲವೇ ಅದು?

ಸದಾ ನಿರ್ಲಪ್ತನಂತಿರುವ, ಯಾವ ವಿಷಯವನ್ನು ತುಂಬಾ ಹಚ್ಚಿಕೊಳ್ಳದ  ನನ್ನ ಗಂಡ ಅವಳ ಈ ನಡವಳಿಕೆಯನ್ನು ಮಾತ್ರ ವಿರೋಧಿಸುತ್ತಿದ್ದರು. "ತುಂಬು ಗರ್ಭಿಣಿ ಅಡುಗೆ ಮನೆಯಲ್ಲಿ ಒದ್ದಾಡುತ್ತಿರಬೇಕಾದರೆ ಅವಳ ತಂಗಿ ಅನಿಸಿಕೊಂಡವಳು ಹಾಲ್ ನಲ್ಲಿ ಕಾಲು ಚಾಚಿ ಕೂತು ಟಿ.ವಿ ನೋಡುವುದು ಅದೆಂಥಾ ನಿರ್ಭಾವುಕತೆ" ಎಂದು ಕಿಡಿಕಾರುತ್ತಿದ್ದರು. ನಾನು ಅವಳ ಪರವಹಿಸಿ ಮಾತಾಡಹೋದರೆ ನನಗೇ ದಬಾಯಿಸುತ್ತಿದ್ದರು. ಅವರ ಮಾತಲ್ಲೂ ಸತ್ಯವಿರುತ್ತಿದ್ದರಿಂದ ಅನಿವಾರ್ಯವಾಗಿ ನಾನೂ ಸುಮ್ಮನಾಗಬೇಕಾಗುತ್ತಿತ್ತು. ಬಸುರಿ ಬಯಕೆಯ ತೀರಿಸಲಾರದೆ ಅಮ್ಮನಿಲ್ಲದ ಕೊರತೆ ಬೇರೆ ಕಾಡುತ್ತಿತ್ತು, ಹಾಗಾಗಿ ಅವರು ಕಾವ್ಯಾಳಿಗೆ ಬಯ್ಯುತ್ತಿದ್ದಾಗಲೆಲ್ಲಾ ನಾನು ’ಅಮ್ಮನಿದ್ದಿದ್ದರೆ’ ಅನ್ನುವ ಪ್ರಶ್ನೆ ಹೊತ್ತುಕೊಂಡು ಸುಮ್ಮನೆ ಕುಳಿತುಬಿಡುತ್ತಿದ್ದೆ.

ಯಾರಿಗೂ ಕಾಯದ ಕಾಲ, ಎಲ್ಲಾ ಕೊರತೆಗಳನ್ನೂ ಮೀರಿ ನನ್ನನ್ನು ಹೆರಿಗೆಯ ದಿನದವರೆಗೆ ತಂದು ನಿಲ್ಲಿಸಿತ್ತು. ಪದೇ ಪದೇ ಕಾಡುತ್ತಿದ್ದ ಅಮ್ಮನ ನೆನಪು, ಅವಳ ಸಾವು, ಚೊಚ್ಚಲ ಹೆರಿಗೆಯ ಭಯ, ಅಂಟಿಯೂ ಅಂಟದಂತಿದ್ದ ಗಂಡನ ನಿರ್ಲಿಪ್ತತೆ, ತಂಗಿಯ ಬೇಜವಾಬ್ದಾರಿ ಎಲ್ಲಾ ಸೇರಿ ನನ್ನೊಳಗೊಂದು ಉದ್ವಿಗ್ನತೆಯನ್ನು ಹುಟ್ಟು ಹಾಕಿತ್ತು. ಆದ್ರೆ ಹೆರಲಿದ್ದೇನೆ ಅನ್ನುವ ಸಂಭ್ರಮ, ಹೊಟ್ಟೆಯೊಳಗೆ ಮಿಸುಕಾಡಿ ಮಧುರ ಅನುಭೂತಿ ಕೊಡುತ್ತಿದ್ದ ನನ್ನ ಕಂದ ಭೂಮಿಗೆ ಬಂದು ಬೆಚ್ಚನೆ ನನ್ನ ಮಡಿಲಲ್ಲಿರುತ್ತದೆ ಅನ್ನುವ ಕಲ್ಪನೆ ಆ ಉದ್ವಿಗ್ನತೆಯನ್ನೂ ಮೀರಿದ ಸಂತೃಪ್ತಿಯನ್ನು ಕೊಡುತ್ತಿತ್ತು. ಇಷ್ಟಕ್ಕೂ ಅಮ್ಮನ ಹೆರಿಗೆ ನಮ್ಮೆಲ್ಲರ ಬದುಕಲ್ಲಿ ಒಂದು ಸ್ಥಿತ್ಯಂತರಕ್ಕೆ ಕಾರಣವಾದರೆ ನನಗಾಗುವ ಹೆರಿಗೆ ಮತ್ತೊಂದು ಸ್ಥಿತ್ಯಂತರಕ್ಕೆ ಕಾರಣವಾಗುತ್ತದೆ ಅನ್ನುವುದನ್ನು ಅವತ್ತು ಯಾರು ತಾನೇ ಊಹಿಸಿದ್ದರು?

(ಸಶೇಷ)

ಮೌನ ಕಣಿವೆಯಲಿ...

ಸಂಚಾರ 3


ಆದ್ರೆ ಕಾವ್ಯಾಳ ಬದುಕು ನನ್ನಂತಾಗಬಾರದು, ಅದೆಷ್ಟೇ ಕಷ್ಟವಾದರೂ ಅವಳ ಓದು ಅರ್ಧಕ್ಕೇ ನಿಲ್ಲಬಾರದೆಂದು ಪಣ ತೊಟ್ಟೆ. ಈ ಮಧ್ಯೆ ಇಷ್ಟ ಇತ್ತೋ ಇಲ್ವೋ, ಮಾನಸಿಕವಾಗಿ ನಾನು ಸಂಸಾರ ನಡೆಸಲು ತಯಾರಾಗಿದ್ದೆನೋ ಇಲ್ವೋ, ನನಗೊಂದು ಮದುವೆ ಮಾಡಿ ಅಜ್ಜಿ ನನ್ನ ಮಡಿಲಲ್ಲೇ ಕಣ್ಣು ಮುಚ್ಚಿದರು. ತೀರಾ ಉಸಿರು ನಿಲ್ಲುವ ಒಂದೆರಡು ಕ್ಷಣಗಳ ಮುನ್ನ ನಡುವ ಕೈಗಳಿಂದಲೇ ನನ್ನ ಕೈ ಹಿಡಿದು "ಹುಡುಗು ಬುದ್ಧಿಯ ಕಾವ್ಯಾಳನ್ನು ದಡ ಸೇರಿಸುವ ಜವಾಬ್ದಾರಿ ನಿನ್ನದು ಮಗಳೇ" ಅಂತಂದಿದ್ದರು.

ನನ್ನ ಬದುಕಿನ ಹಲವು ’ಇಲ್ಲ’ಗಳ ಮಧ್ಯೆ ಬಹುದೊಡ್ಡ ’ಇದೆ’ಯಾಗಿ ನನ್ನವರು ನನ್ನ ಬದುಕನ್ನು ಪ್ರವೇಶಿಸಿದ್ದರು. ಅದುವರೆಗೂ ಬದುಕಲ್ಲಿ ಅನುಭವಿಸಿದ ಕಷ್ಟಗಳನ್ನು ಅವರ ಸಾನ್ನಿಧ್ಯದಲ್ಲಿ ನಾ ಮರೆಯತೊಡಗಿದೆ. ಅಪ್ಪನ ಪರಿಸ್ಥಿತಿಯ ಬಗ್ಗೆ ತಿಳಿದಿದ್ದ ನನ್ನ ಪತಿ ಅಪ್ಪನ ಜೊತೆಗೇ ಇರಲು ಅನುಮತಿ ಕೊಟ್ಟಿದ್ದರು. ತಿಂಗಳಿಗೆ ಎರಡು ಬಾರಿ, ಮೂರು ಬಾರಿ ಅವರೇ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಅಳಿಯ ಮನೆಗೆ ಬಂದಾಗೆಲ್ಲಾ ಅಪ್ಪ "ನನ್ನ ಮಗಳು ಭೂಮಿ ತೂಕದ ಹೆಣ್ಣು, ಅವಳಮ್ಮನೂ ಕಾವ್ಯಾಳನ್ನು ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳೋ ಗೊತ್ತಿಲ್ಲ, ಕಾವ್ಯಾಳಿಗೆ ಎಂದೂ ಅಮ್ಮನ ಕೊರತೆ ಕಾಡದೆ ಹಾಗೆ ನೋಡಿಕೊಂಡಿದ್ದೇ ಇವಳು" ಅಂತನ್ನುತ್ತಿದ್ದರು. ನಾನು ಸುಮ್ಮನೆ ತಲೆ ತಗ್ಗಿಸಿ ನಗುತ್ತಿದ್ದೆ.

ಎರಡು ವರ್ಷಗಳ ನಮ್ಮಿಬ್ಬರ ಮಧುರ ಸಾಂಗತ್ಯದ ಫಲವೆಂಬಂತೆ ನನ್ನ ಉದರದಲ್ಲಿ ಹೊಸ ಜೀವವೊಂದು ಕುಡಿಯೊಡೆದಿತ್ತು. ಹೊರದೆ, ಹೆರದೆ ಅಮ್ಮನಾಗಿದ್ದ ನನಗೆ ಹೊಟ್ಟೆಯೊಳಗೆ ಹೊಸ ಜೀವವೊಂದು ಮಿಸುಕಾಡುವಾಗೆಲ್ಲಾ ವಿಚಿತ್ರ ಅನುಭೂತಿ, ವಿಶೇಷ ಅನುಭವವಾಗುತ್ತಿತ್ತು. ಆದ್ರೆ ಅಮ್ಮನ ಮರಣದ ಬರ್ಬರತೆಯನ್ನು ನೆನೆಸಿಕೊಂಡು ಅಪ್ಪ, ಮಗಳ ಜೀವವೂ ಬಲಿಯಾದರೆ ಅನ್ನುವ ತೊಳಲಾಟದಲ್ಲೇ ಮತ್ತಷ್ಟು ಕುಸಿದರು.

ಅದೊಂದು ರಾತ್ರಿ ಕಾವ್ಯ ನನ್ನ ಬೊಗಸೆ ಹಿಡಿದೆತ್ತಿ "ಅಕ್ಕಾ, ನಿನಗೆ ಮಗುವಾದ ಮೇಲೆ ನನ್ನ ಮರೆಯಲ್ಲ ಅಲ್ವಾ?" ಅಂತ ಕಣ್ಣಪೂರ್ತಿ ಕಣ್ಣೀರು ತುಂಬಿ ಕೇಳಿದ್ದಳು. ನಾನು "ಹುಚ್ಚೀ, ಎಷ್ಟು ಮಕ್ಕಳಿಗೆ ನಾ ಜನ್ಮ ಕೂಟ್ಟರೂ ನನ್ನ ಮೊದಲ ಮಗಳು ನೀನೆ" ಎಂದು ಅಷ್ಟೇ ಕಕ್ಕುಲಾತಿಯಿಂದೆ ಹೇಳಿದ್ದೆ. ಆ ರಾತ್ರಿ ಕಾವ್ಯ ನನ್ನ ಮತ್ತಷ್ಟು ಬಿಗಿಯಾಗಿ ತಬ್ಬಿಕೊಂಡು ಮಲಗಿದ್ದಳು. ಯಾಕೋ ಗೊತ್ತಿಲ್ಲ, ಹೆಸರಿಲ್ಲದ ಪಕ್ಷಿಯೊಂದು ಕಿವಿಯ ಪಕ್ಕದಲ್ಲಿ ವಿಕಾರವಾಗಿ ಕೂಗಿದಂತೆ ಕನಸು ಬಿದ್ದು ಅಪರಾತ್ರಿಯಲ್ಲಿ ಎದ್ದು ಕೂತಿದ್ದೆ ನಾನು. ಮನಸ್ಸಿನ ಪೂರ್ತಿ ಗೊಂದಲ, ಒಂದು ಅವ್ಯಕ್ತ ನೋವು.

ಈ ಘಟನೆ ಮರೆಯುವ ಮುನ್ನವೇ ಒಂದು ಮುಂಜಾನೆ ಕಾಫಿ ಕೊಡಲೆಂದು ಅಪ್ಪನ ರೂಮಿಗೆ ಹೋಗಿ ಅವರನ್ನು ತಟ್ಟಿ ಎಬ್ಬಿಸಲೆಂದು ಕೈ ಹಿಡಿದು ಒಮ್ಮೆ ಬೆಚ್ಚಿ ಹಿಂದೆಗೆದ. ನನ್ನ ಅನುಮಾನ ಸುಳ್ಳಾಗಿರಲಿ ಎಂದು ಮನಸ್ಸಿನಲ್ಲಿ ಪ್ರಾರ್ಥಿಸುತ್ತಾ ಆರ್ತ್ರಳಾಗಿ ಅಪ್ಪನನ್ನು ಕರೆಯುತ್ತ ಮತ್ತೆ ಕೈ ಹಿಡಿದೆದೆಳೆದೆ. ದೇಹ ತಣ್ಣಗಾಗಿತ್ತು, ಜೀವ ಆದಾಗಲೇ ಹಾರಿ ಹೋಗಿತ್ತು. ಬದುಕು ನಿಷ್ಕರುಣೆಯಿಂದ ಮತ್ತೊಂದು ದಾಳ ಉರುಳಿಸಿತ್ತು, ನಾನು ಮತ್ತೆ ಒಂಟಿಯಾದೆ.

ಕಾಲೇಜು, ಪಾಠ, ಪ್ರವಚನ, ಪರೀಕ್ಷೆ ಅಂತೆಲ್ಲಾ ಬ್ಯುಸಿಯಾಗಿದ್ದ ಕಾವ್ಯಾಳಿಗೆ ಅಪ್ಪನ ಸಾವು ತೀರಾ ಅನ್ನುವಷ್ಟು ತಟ್ಟಲಿಲ್ಲವಾದರೂ ನಾನು ಒಳಗೊಳಗೆ ಅಕ್ಷರಶಃ ಕುಸಿದು ಬಿಟ್ಟಿದ್ದೆ. ಮೇಲೆ ಮತ್ತದೇ ನಗುವಿನ ಮುಖವಾಡ, ಮಾತಿನ ಮೆರವಣಿಗೆ.

ನನ್ನ ಯಜಮಾನರು "ಹಳ್ಳಿಯಲ್ಲಿ ಇಬ್ಬರೇ ಇರುವುದು ಬೇಡ. ಆಫೀಸು-ಅಡುಗೆ ಅಂತ ನಾನೂ ಎರಡೆರಡು ಕಡೆ ಒದ್ದಾಡುವುದು ತಪ್ಪುತ್ತದೆ, ಕಾವ್ಯಾಳ ಮುಂದಿನ ಓದಿಗೂ ಸಹಾಯವಾಗುತ್ತದೆ. ಇಬ್ಬರೂ ಬೆಂಗಳೂರಿಗೆ ಬಂದು ಬಿಡಿ" ಅನ್ನತೊಡಗಿದರು . ಅಮ್ಮ, ಅಜ್ಜಿ, ಅಪ್ಪ ಬದುಕಿದ, ಮರಣಿಸಿದ ಈ ಮನೆಯನ್ನು ಬಿಟ್ಟು ಹೋಗಲು ನನ್ನ ಮನಸಿಗೆ ಕಷ್ಟವಾಗುತ್ತಿತ್ತು. ಈ ಮನೆ ಖಾಲಿ ಬೀಳುವುದನ್ನು ಕಲ್ಪಿಸಿಕೊಳ್ಳಲೂ ನನ್ನಿಂದಾಗುತ್ತಿರಲಿಲ್ಲ. ಆದ್ರೆ ಅವರ ಮಾತಿನಲ್ಲೂ ನ್ಯಾಯ ಇತ್ತು, ಕಾವ್ಯ ಬೇರೆ ಬೆಂಗಳೂರಿನ ಕಡೆ ಮುಖ ಮಾಡಲು, ಅಲ್ಲಿನ ಸರ್ವ ಸ್ವತಂತ್ರವನ್ನೂ ಅನುಭವಿಸಲು ತುದಿಗಾಲಲ್ಲಿ ನಿಂತಿದ್ದಳು.


( ಸಶೇಷ)